-ಹು.ಬಾ. ವಡ್ಡಟ್ಟಿ
ಗದಗ ತಾಲೊಕಿನ ಬಿಂಕದ ಕಟ್ಟಿಯಿಂದ ಮುಂಡರಗಿ ತಾಲೊಕಿನ ಶಿಂಗಟಾಲೊರು ವೀರಭದ್ರೇಶ್ವರ ದೇವಸ್ಧಾನದವರೆಗೆ ಹಬ್ಬಿರುವ ಕಪ್ಪತ್ತ ಗುಡ್ಡದ ಸಾಲು 64.ಕಿ.ಮಿ.ಉದ್ದ, 4 ರಿ0ದ 5 ಕಿ.ಮಿ. ಅಗಲ, ಹಾಗೂ 18000 ಹೆಕ್ಟೇರ್ ಪ್ರದೇಶದಲ್ಲಿ ಕಾಡು ವ್ಯಾಪಿಸಿದೆ. “ಎಪ್ಪತ್ತ ಗುಡ್ಡ ನೋಡುವದಕ್ಕಿಂತ ಕಪ್ಪತ್ತ ಗುಡ್ಡ ನೋಡಬೇಕು,” “ಸಸ್ಯಕಾಶಿ” ಎ0ಬ ವಿಶೇಷಣೆಯನ್ನು ಸಹ ಹೊಂದಿದೆ. “ಕಪ್ಪತ್ತ ಮಳೆಯೇ ಕಾರಿ ಮಳೆಯೇ,” ಎಂಬ ಮಳೆಯನ್ನು ಸ್ತುತಿಸುವ ಜಾನಪದ ಹಾಡುಗಳು ಕಪ್ಪತ್ತ ಗಿರಿಯು ಮಳೆಯನ್ನು ತರುತ್ತದೆ ಎನ್ನುವುದಾಗಿದೆ.
ಇಂತಹ ಸಸ್ಯ ಸಂಕುಲದ ಕಪ್ಪತ್ತ ಗುಡ್ಡವು ಅಪಾರವಾದ ಜೀವ ವೈವಿಧ್ಯವುಳ್ಳ ಔಷಧೀಯ ಸಸ್ಯವನ್ನು ಒಳಗೊಂಡಿದೆ. ಕನಿಷ್ಠ 1800 ರಷ್ಟು ಔಷಧೀಯ ಸಸ್ಯ ಪ್ರಬೇಧಗಳು ಈ ಬೆಟ್ಟ ಸಾಲಿನಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇ0ತಹ ವಿಶೇಷವಾದ ಸಸ್ಯ ರಾಶಿಯ ಕಪ್ಪತ್ತ ಗುಡ್ಡವು ಅಪಾರವಾದ ಖನಿಜ ಸಂಪತ್ತು ಹೊಂದಿದ್ದು, ಅದರಲ್ಲಿ ಬಹುಮುಖ್ಯವಾಗಿ ಕಬ್ಬಿಣದ ಅದಿರು, ಬಂಗಾರ ನಿಕ್ಷೇಪವು ಇದೆ. ಕಬ್ಬಿಣದ ಗಣಿಗಾರಿಕೆ 1970 ದಶಕದಲ್ಲಿಯೇ ಪ್ರಾರ0ಭವಾಗಿದ್ದರೂ, ಅದಕ್ಕಿಂತಲೂ ಮುಂಚಿತವಾಗಿ 1830ರ ದಶಕದಲ್ಲಿ ಬ್ರೀಟಿಷ ಭೂವಿಜ್ಞಾನಿ ನಿಲ್ಬೋಲ್ಟ್ ಎ0ಬುವನು ಬಂಗಾರದ ನಿಕ್ಷೇಪವಿರುವದನ್ನು ಪತ್ತೆ ಹಚ್ಚಿದ್ದರಿಂದಾಗಿ ಬ0ಗಾರದ ಗಣಿಗಾರಿಕೆಯು ಪ್ರಾರ0ಭಗೊಂಡಿತ್ತು. ನಷ್ಟದ ಪರಿಣಾಮವಾಗಿ ಆಗ ಆ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಅದರ ಕುರುಹುಗಳನ್ನು ಈಗಲು ನೋಡಬಹುದಾಗಿದೆ.
ಕಬ್ಬಿಣ ಅದಿರಿನ ಅಕ್ರಮ ಗಣಿಕಾರಿಗೆಯು 2005ರ ನಂತರ ಚುರುಕುಗೊಂಡು, ಹಳೆಯ ಅದಿರಿನ ಗಣಿಗಾರಿಕೆಯ ಪ್ರದೇಶದಿಂದ ಹರಿದು ಬಂದ ಮಣ್ಣನ್ನು ಸಾಗಿಸುವ ನೆಪದಲ್ಲಿ ಅವ್ಯಾಹತವಾಗಿ ಕಪ್ಪತ್ತ ಗುಡ್ಡದ ಕಬ್ಬಿಣದ ಅದಿರನ್ನು ಲೂಟಿ ಹೊಡೆಯುವ ಅಕ್ರಮ ಕೆಲಸಕ್ಕೆ ರಾಜಕೀಯ ಪುಡಾರಿಗಳು ಕೈ ಹಚ್ಚಿರುವದು ಕಪ್ಪತ್ತ ಗುಡ್ಡದ ನಾಶಕ್ಕೆ ಕಾರಣವಾಗಿದೆ.
ಲಕ್ಷಾಂತರ ಟನ್ನ ಕಬ್ಬಿಣದ ಅದಿರಿನ ಮೇಲೆ ಕಣ್ಣು ಹಾಕಿರುವ ಅಕ್ರಮ ಗಣಿ ಲೂಟಿಕೋರರು ಪೋಸ್ಕೊ ಸ್ಟೀಲ್ ಕಂಪನಿಯನ್ನು ಈ ಭಾಗದಲ್ಲಿ ಸ್ಧಾಪಿಸಿ ಕಪ್ಪತ್ತ ಗುಡ್ಡವನ್ನು ಸರ್ವನಾಶ ಮಾಡುವ ತಂತ್ರವನ್ನು ಹೆಣೆದು ಅದಕ್ಕೆ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದೆ.
ಜೀವ ವೈವಿಧ್ಯತೆಯ ಸಸ್ಯಸಂಕುಲ, ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿರುವ ಅದಿರಿನ ನಿಕ್ಷೇಪವನ್ನು ಅಭಿವೃದ್ದಿ ನೆಪದಲ್ಲಿ ಲೂಟಿ ಮಾಡಲು ಹೊರಟಿರುವ ಅಭಿವೃದ್ದಿಯ ಹರಿಕಾರರು ಪೋಸ್ಕೊ ಸ್ಟೀಲ್ ಈ ಭಾಗಕ್ಕೆ ಬರುವುದರಿಂದ ಗುಡ್ಡಕ್ಕೆ ಯಾವದೇ ಧಕ್ಕೆಯಾಗುವದಿಲ್ಲವೆಂದು ಸುಳ್ಳಿನಮಾತು ಹೇಳುವುದು ಎಷ್ಟುರ ಮಟ್ಟಿಗೆ ಸರಿ? ಹಾಗಾದರೇ ಪೋಸ್ಕೊಗೆ ಕಬ್ಬಿಣದ ಅದಿರನ್ನು ಎಲ್ಲಿ0ದ ತ0ದು ಸ್ಟೀಲ್ ಉತ್ಪಾದನೆ ಮಾಡುವ ಹುನ್ನಾರ ನಡೆಸಿದ್ದಾರೆ ಎನ್ನುವ ಒಳಗುಟ್ಟನ್ನು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಬಾಯಿಬಿಡಲೇ ಇಲ್ಲಾ.
ಪೋಸ್ಕೊ ಸ್ಧಾಪನೆಯಾಗುತ್ತಿದ್ದ ಹಳ್ಳಿಗುಡಿಯಿಂದ ಕಪ್ಪತ್ತ ಗುಡ್ಡದ ಅಂತರ ಬರೀ 10ಕಿ ಮೀ ಆಗುತ್ತಿತ್ತು. ಪೋಸೊ ಉಗುಳಲಿದ್ದ ವಿಷಕಾರಿ ಹೊಗೆಯು ಕಪ್ಪತ್ತ ಗುಡ್ಡದ ಔಷಧೀಯ ಸಸ್ಯಗಳ ಮೇಲೆ ದುಷ್ಪರಿಣಾಮ ಬೀರುವದಿಲ್ಲವೆನ್ನುವದು ಯಾವ ಗ್ಯಾರಂಟಿ? ಸೂಕ್ಷ್ಮ ಸಸ್ಯಸಂಕುಲವು ನಾಶ ಹೊಂದಿದರೆ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ. ಪರಿಸರ ಸಂರಕ್ಷಣೆಯ ಅರಿವು ಇಲ್ಲದೆ ಬರೀ ಹಸಿರು ನೋಟುಗಳು ಮೇಲೆ ಕಣ್ಣಿಟ್ಟರೆ ಪರಿಸರ ಯಾವ ಲೆಕ್ಕ? ಎಲ್ಲವೂ ಬರೀ ಹಣದ ಲೆಕ್ಕಾಚಾರವಾಗುತ್ತದೆ.
(ಚಿತ್ರಗಳು: ಲೇಖಕರವು)