Monthly Archives: September 2011

Anna_Hazare

ಅಣ್ಣಾ… ನಿನ್ನ ಉಪವಾಸ ಮಲಿನ ಮನಸ್ಸುಗಳನ್ನು ತಿಳಿಗೊಳಿಸಲಿ.

– ಚಿದಂಬರ ಬೈಕಂಪಾಡಿ

ಅಂದು ಬದುಕಿಗೆ ವಿದಾಯ ಹೇಳಲು ಕಾಗದ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಅಣ್ಣಾ ಹಜಾರೆ ಅನೇಕ ದಶಕಗಳಿಂದ ನಖ ಶಿಖಾಂತ ಹರಡಿಕೊಂಡಿರುವ ಭ್ರಷ್ಟಾಚಾರದ ಬೇರನ್ನು ಕೀಳಲು ಪಣತೊಟ್ಟದ್ದು ಐತಿಹಾಸಿಕ ಘಟನೆ. ಹದಿಮೂರು ದಿನಗಳ ಕಾಲ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿದ ಅಣ್ಣಾ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ, ಅಂಥ ಸಂಸತ್ತನ್ನೇ ನಡುಗಿಸಿದವರು ಅಣ್ಣಾ ಎಂದು ಅವರನ್ನು ಸುತ್ತುವರಿದಿದ್ದವರು ಬೆನ್ನುತಟ್ಟಿಕೊಳ್ಳಬಹುದು. ಸಂವಿಧಾನಿಕ ಸಂಸ್ಥೆಯ ಗಡಿದಾಟಿ ಹೋಗುವುದು ಕೂಡಾ ಐತಿಹಾಸಿಕ ಘಟನೆ, ಅಂಥ ಯತ್ನ ನಡೆದದ್ದು ಮಾತ್ರ ವಿಷಾದನೀಯ.

ಹಳ್ಳಿಗಾಡಿನ ಅಣ್ಣಾ ದಿಲ್ಲಿವಾಲಾಗಳು ತಡಬಡಾಯಿಸುವಂತೆ ಮಾಡಿದರು ನಿಜ, ಅಣ್ಣಾ ಅವರ ಹೋರಾಟಕ್ಕೆ ಮಂಡಿಯೂರಿದ ಸರ್ಕಾರ ಕೂಡಾ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. ಆದರೆ ಈ ದಾಖಲೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎನ್ನುವುದನ್ನು ಮರೆಯಬಾರದು. ಒಂದು ವಿಮಾನ ಅಪಹರಣ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಆಡಳಿತ ವ್ಯವಸ್ಥೆಯನ್ನು ಮಂಡಿಯೂರುವಂತೆ ಮಾಡುವ ಕ್ರಮಕ್ಕಿಂತ ಭಿನ್ನವಾದುದು ರಾಮಲೀಲಾ ಮೈದಾನದ ಸತ್ಯಾಗ್ರಹ ಎಂದು ಅನೇಕರಿಗೆ ಅನ್ನಿಸಿದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುಡಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಣ್ಣಾ ಅವರ ಸತ್ಯಾಗ್ರಹವನ್ನು ಕಟುವಾಗಿ ಟೀಕಿಸಿದ್ದು ಒಂದು ವರ್ಗವನ್ನು ಸಿಟ್ಟಿಗೇಳಿಸಿತು. ‘ಬೆವಕೂಫ್ ’ ಎನ್ನುವ ದಾಟಿಯಲ್ಲಿ ರಾಮಲೀಲಾ ಮೈದಾನದಿಂದ ಬುದ್ಧಿವಂತರು ಕಿರುಚಿಕೊಂಡಾಗ ಸ್ವತ: ಅಣ್ಣಾ ಅವರು ಕೇಳಿಸಿಕೊಂಡಿದ್ದರೆ ಕ್ಷಮೆಯಾಚಿಸುತ್ತಿದ್ದರೇನೋ ?. ಯಾಕೆಂದರೆ ಇಳಿವಯಸ್ಸಿನ ಅಣ್ಣಾ ಪ್ರಧಾನಿಯರ ಬಗ್ಗೆ ಆಡಿದ ಮಾತಿಗೆ ಮನನೊಂದುಕೊಂಡರು. ಸಂಸತ್ತಿನ ಹೊರಗಿರುವವರ ಹಟಮಾರಿತನದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಬೇಡಿಕೆಗಳು ಮಂಡನೆಯಾಗಲು ಅನುವಾಗುತ್ತದೆ ಎನ್ನುವ ರಾಹುಲ್ ಧ್ವನಿ ತಳ್ಳಿಹಾಕುವಂತಿಲ್ಲ.

ಭ್ರಷ್ಟಾಚಾರಿಗಳ ಕುತ್ತಿಗೆಗೆ ಕುಣಿಕೆ ಹಾಕಲು ಅಗತ್ಯವಾದ ಹಗ್ಗಹೊಸೆಯಲು ಸಂಸತ್ತು ಒಪ್ಪಿಕೊಂಡಿತು ನಿಜ, ಆದರೆ ಇಂಥ ಹಗ್ಗ ಹೊಸೆಯುವವರಲ್ಲಿ  ಲಾಲೂ, ಪಾಸ್ವಾನ್, ಅಮರ್ ಸಿಂಗ್ ಮುಂತಾದವರು ಕೈಜೋಡಿಸುತ್ತಾರೆ ಎಂದಾದಾಗ ಒಂದಷ್ಟು ಸಂಶಯಗಳು ಮೂಡುವುದು ಸಹಜ. ಯಾಕೆಂದರೆ ಇಂಥವರು ಬಿಳಿ ದಿರಿಸು ತೊಟ್ಟು ಹೊಳೆದರೂ ಅವರ ಮೈಮೇಲಿನ ಕಲೆಗಳು ಮಾತ್ರ ಮರೆಯಾಗುವುದಿಲ್ಲ. ಜನರ ನೆನಪುಗಳು ಬಹುಕಾಲ ಬಾಳುವಂಥವಲ್ಲ ಅಂದುಕೊಂಡರೂ ಇವರನ್ನು ಮೆತ್ತಿಕೊಂಡಿರುವ ಹಗರಣಗಳು ಮರೆತುಬಿಡುವಂಥವಲ್ಲ.

ಅಣ್ಣಾ ಟೀಮಿನ ಸಚ್ಚಾರಿತ್ರ್ಯರ ನಡುವೆಯೇ ಪ್ರಶ್ನಿಸಲು ಅರ್ಹರ ಮುಖಗಳಿರುವುದೂ ಸತ್ಯ. ಒಂದು ಕಾಲದಲ್ಲಿ ಜನರಿಂದ ಮೆಚ್ಚುಗೆ ಗಳಿಸಿದವರು ಸ್ವಯಂಸೇವೆಯ ಹೆಸರಲ್ಲಿ ಸುಂದರವಾದ ಬದುಕು ಸವೆಸಿದರೆ ಅದನ್ನು ಉದಾರವಾಗಿ ಕಾಣಲು ಸಾಧ್ಯವೇ?. ಭಾರತದ ಹಳ್ಳಿಯ ಜನರ ಜೋಲು ಮುಖ, ಕೊಳಚೆ, ಜೋಪಡಿಯ ಮುಗ್ಧ ಮಕ್ಕಳನ್ನು ಸಾಗರದಾಚೆ ತೋರಿಸಿ ಬದುಕುವ ಈ ನೆಲದ ಜೀವಗಳ ಬಗ್ಗೆ ಕನಿಕರ ಪಡಬೇಕಲ್ಲವೇ?.

ಇದೆಲ್ಲವನ್ನು ಬದಿಗಿಟ್ಟು ಅಣ್ಣಾ ಸೂತ್ರಗಳನ್ನು ಒಪ್ಪಿಕೊಂಡ ಮಾತ್ರಕ್ಕೇ ದೇಶ, ರಾಜ್ಯ, ಜಿಲ್ಲಾಮಟ್ಟದಲ್ಲಿಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಸುಕ್ಕುಗಳು ಬಿಡಿಸಿಕೊಳ್ಳುತ್ತವೆ ಎಂದಾಗಲೀ, ಹಳ್ಳಿಯ ಪಂಚಾಯಿತಿ ಕಚೇರಿಯ ಗುಮಾಸ್ತ ಮಿಸ್ಟರ್ ಕ್ಲೀನ್ ಆಗಿಬಿಡುತ್ತಾನೆ ಅಂದುಕೊಳ್ಳುವಂತಿಲ್ಲ. ಒಂದಷ್ಟು ಮಂದಿ ರಾಮಲೀಲಾ ಮೈದಾನದಲ್ಲಿ ಟಿವಿ ಕ್ಯಾಮರಾಗಳ ಮುಂದೆ ಪ್ರಮಾಣ ಮಾಡಿದ ಮಾತ್ರಕ್ಕೆ ಭ್ರಷ್ಟಾಚಾರ ಸಾರಾಸಗಟಾಗಿ ಅಳಿಸಿಹೋಗುತ್ತದೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

Anna_Hazare

Anna_Hazare

ಭೂಮಿ ನೋಂದಾವಣೆ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಗುಳಿತನ ಇಲ್ಲವೇ ಇಲ್ಲವೆಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ?. ಈ ಕಚೇರಿಗಳನ್ನು ಲಂಚಮುಕ್ತವನ್ನಾಗಿಸಲು ಕಾನೂನುಗಳಿಂದ ಸಾಧ್ಯವೇ ?. ಅಣ್ಣಾ ತಂಡ ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಲಂಚ ಯಾವ ಸ್ವರೂಪದಲ್ಲಿ ಸಂದಾಯವಾಗಬೇಕೋ ಸಂದಾಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಕಚೇರಿ, ಲೋಕೋಪಯೋಗಿ, ಕೃಷಿ, ಅರಣ್ಯ, ತೆರಿಗೆ, ಶಿಕ್ಷಣ ಹೀಗೆ ಸರ್ಕಾರದ ಕಚೇರಿಗಳು ಭ್ರಷ್ಟಾಚಾರದ ಕೊಂಪೆಗಳಾಗಿವೆ ಎಂದು ಹೆಸರು ಕೂಗಿ ಕರೆಯಬೇಕೇ?. ಲೋಕಾಯುಕ್ತ, ಲೋಕಪಾಲ ಅಥವಾ ಅಣ್ಣಾ ತಂಡದ್ದೇ ಕಾನೂನು ಬಂದರೂ ಭ್ರಷ್ಟ ಕೈಗಳು ಶುದ್ಧವಾಗುವುದಿಲ್ಲ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಮನಸ್ಸುಗಳು ಭ್ರಷ್ಟವಾಗಿಬಿಟ್ಟಿವೆ ಅನ್ನಿಸುವುದಿಲ್ಲವೇ?. ಕೈಗಳನ್ನು ನಿಯಂತ್ರಿಸುವ ಮನಸ್ಸುಗಳೇ ಮಲಿನವಾಗಿರುವುದರಿಂದ ಅಲ್ಲಿಂದ ರವಾನೆಯಾಗುವ ಸಂದೇಶಗಳೇನು?.

ಮುಗ್ಧ ಅಣ್ಣಾ ಕೊಟ್ಟ ಭ್ರಷ್ಟಾಚಾರ ನಿಯಂತ್ರಣ ಸಂದೇಶವನ್ನು ಅರ್ಥೈಸುವಲ್ಲೂ ಶಾಸಕಾಂಗದೊಳಗೆ ಕೆಲಸ ಮಾಡುವ ಕೆಲವು ಮನಸ್ಸುಗಳು ಎಡವಿದವು. ಸಂಸತ್ತನ್ನೇ ಹೈಜಾಕ್ ಮಾಡುವ ತಂತ್ರವೆಂದು ಟೀಕಿಸಿದ್ದು ಸ್ವಲ್ಪಮಟ್ಟಿಗೆ ಸತ್ಯಕ್ಕೆ ಹತ್ತಿರವಾದರೂ ಸಂಸತ್ತಿನೊಳಗೆ ನಡೆದುಕೊಳ್ಳುವ ನಡವಳಿಕೆಗಳೂ ಕೆಲವೊಮ್ಮೆ ಸಂಯಮದ, ನಡವಳಿಕೆಯ ಗೆರೆ ದಾಟಿರುವುದೂ ನಿಜ. ಓಟಿಗಾಗಿ ನೋಟು, ಚುನಾಯಿತ ಜನಪ್ರತಿನಿಧಿಗಳು ಕುದುರೆಗಳಂತೆ ಬಿಕರಿಯಾಗುವುದು, ಆಮಿಷಗಳಿಗೆ ಬಲಿಯಾಗಿ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪಕ್ಷಾಂತರ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಅನಿಷ್ಟವಾದುದು ಎಂದರೆ ಯಾರೂ ಸಿಟ್ಟಾಗಬೇಡಿ.

ಅಸಾಮಾನ್ಯ ಕಳ್ಳನನ್ನು ಹಿಡಿಯಲು ಕಳ್ಳನಿಂದ ಮಾತ್ರ ಸಾಧ್ಯ. ಅಸಾಮಾನ್ಯ ಕಳ್ಳನ ಕಳವಿನ ತಂತ್ರಗಳು ಸಾಮಾನ್ಯ ಕಳ್ಳನಿಗೆ ಮಾತ್ರ ಗೊತ್ತಿರಲು ಸಾಧ್ಯ ಹೊರತು ಕಳ್ಳನಲ್ಲದಿದ್ದವನಿಗೆ ಗೊತ್ತಿರಲು ಅಸಾಧ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಅಣ್ಣಾ ಹಜಾರೆ ಉಪವಾಸ ಮಾಡಿ ಮಸೂದೆ ಜಾರಿಗೆ ಒತ್ತಾಯಿಸಿದ್ದು ಇತಿಹಾಸದ ಒಂದು ಪುಟವಾಗಿ ಪ್ರಸ್ತುತವಾಗುತ್ತದೆ ನಿಜ, ಆದರೆ ಭ್ರಷ್ಟಾಚಾರ ಅಳಿಸಿ ಹಾಕುವುದು ಹಜಾರ್ ಅಣ್ಣಾಗಳು ಉಪವಾಸ ಮಾಡಿದ ಮಾತ್ರಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕಾಯಿದೆ-ಕಾನೂನುಗಳು ನೆಪವಾಗಬಹುದೇ ಹೊರತು ಪರಿಹಾರ ಕೊಡಲಾರವು. ಹಳ್ಳಿಯ ಸಾಮಾನ್ಯನಿಂದ ಹಿಡಿದು ದಿಲ್ಲಿಯ ಅಸಾಮಾನ್ಯನವರೆಗೆ; ಹಳ್ಳಿಯ ಪುಟ್ಟ ಪಂಚಾಯಿತಿಯಿಂದ ಸಂಸತ್ತಿನೊಳಗೆ ಕುಳಿತುಕೊಳ್ಳುವವರತನಕ; ಹಳ್ಳಿಯ ಮರದ ಕೆಳಗೆ ಕುಳಿತು ಕಾಲಕಳೆಯುವವರಿಂದ ಹಿಡಿದು ರಾಮಲೀಲಾ ಮೈದಾನದಲ್ಲಿ ನಿಂತು ಮಾತನಾಡಬಲ್ಲವರತನಕ ಮನಸ್ಸುಗಳು ತಿಳಿಯಾಗಬೇಕು. ಭ್ರಷ್ಟ ಕೈಗಳಿಗಿಂತಲೂ ಮಲಿನಗೊಂಡಿರುವ ಮನಸ್ಸುಗಳು ಅಪಾಯಕಾರಿ.

ಅಣ್ಣಾ ನಿರ್ಮಲ ಮನಸ್ಸಿನಿಂದ ಮಾಡಿದ ಉಪವಾಸದಿಂದ ಅವರ ದೇಹ ದಣಿಯಿತು, ಸರ್ಕಾರ ಮಣಿಯಿತು ನಿಜ. ಇದಿಷ್ಟೇ ಅಣ್ಣಾ ಅವರ ದೇಹದಂಡನೆಗೆ ಸಿಕ್ಕ ಪ್ರತಿಫಲ ಅಂದುಕೊಳ್ಳಬೇಕೇ?ಖಂಡಿತಕ್ಕೂ ಅಣ್ಣಾ ಮಾಡಿದ ಉಪವಾಸ ಸಾರ್ಥಕವಾಗಬೇಕಾದರೆ ಮಲಿನಗೊಂಡಿರುವ ಮನಸ್ಸುಗಳು ಪರಿಶುದ್ಧವಾಗಬೇಕು. ಅಂಥ ಮನಸ್ಸುಗಳು ಮೊಳಕೆಯೊಡೆಯಲು ರಾಮಲೀಲಾ ಮೈದಾನದಲ್ಲಿ ಅಣ್ಣಾ ಮಲಗಿ ಕಳೆದ ದಿನಗಳು ಪ್ರೇರಣೆಯಾಗಲಿ, ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)

ಕನ್ನಡ ಸಿನಿಮಾ: ಸಾಧ್ಯತೆ ಮತ್ತು ಸವಾಲುಗಳು

‘Cinema is the most beautiful
fraud in the world.’
 -Jean Luc Goddard

ನನ್ನ ಪ್ರಕಾರ ’ಓದುವಿಕೆ’ ಅಂದರೆ, ನಾಲ್ಕು ನೂರು ಪುಟಗಳ ಕಾದಂಬರಿಯೊಂದನ್ನು ಓದುಗನೊಬ್ಬ, ಲೇಖಕ ಆ ಕೃತಿ ಬರೆಯುವಾಗ ತೋರಿದ ನಿಷ್ಠೆ ಪ್ರಾಮಾಣಿಕತೆಗಳನ್ನು ಬದಿಗೊತ್ತಿ, ತನಗೆ ಸರಿಕಂಡ ಕ್ರಮಗಳಲ್ಲಿ ಗ್ರಹಿಸುತ್ತಾ ಹೋಗಿ, ಕಡೆಗೆ ಲೇಖಕನನ್ನು ಮೀರಿ ತನ್ನ ಓದಿನ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳುವ ರೀತಿ. ಇಲ್ಲಿ ಎಲ್ಲ ಲೇಖಕರಿಗೂ ಗಂಭೀರ ಕಾವ್ಯ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗದಿರಬಹುದು; ಆದರೆ ಯಾರೂ ಗಂಭೀರ ಓದುಗರಾಗಬಹುದು. ಸಿನಿಮಾದಲ್ಲಿ ಈ ಅವಕಾಶಗಳಿಲ್ಲ. ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯೊಂದನ್ನು ಓದುವಾಗ ಖರ್ಚು ಮಾಡಿದ ಒಂದು ಪಾಲಿನ ಶ್ರಮದಷ್ಟು ಸಿನಿಮಾ ಎಂಬ ಇನ್ಸ್‌ಟಂಟ್ ಫುಡ್ ಮೇಲೆ ಓದುಗನೊಬ್ಬ ಖರ್ಚು ಮಾಡಿದರೆ ಸಾಕು; ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯನ್ನು ಎರಡು, ಎರಡೂವರೆ ಗಂಟೆಗಳಲ್ಲಿ ತಿಂದು ಮುಗಿಸಬಹುದು! ಜೀರ್ಣಿಸಿಕೊಳ್ಳುವುದು ಆಮೇಲಿನ ಮಾತು.

ಕನ್ನಡ ಸಿನಿಮಾಗಳ ಐವತ್ತು, ನೂರು ದಿನಗಳ ವಾಲ್ಪೋಸ್ಟರ್ಗಳನ್ನು ರಸ್ತೆಬದಿ ಕಂಡಾಗ ಮಾತ್ರ ಸಿನಿಮಾ ನೋಡುವ ಸಾಹಸಕ್ಕೆ ಕೈಹಾಕುವ ನನ್ನಂಥವರಿಗೆ ಕನ್ನಡ ಸಿನಿಮಾಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಯಾವ ಮೂಲೆಯಲ್ಲೂ ತಯಾರಾಗದ, ಮತ್ತಿನ್ನ್ಯಾರೂ ತಯಾರು ಮಾಡಲಿಕ್ಕಾಗದ ಕಳಪೆ ದರ್ಜೆ ಸಿನಿಮಾಗಳು; ಮನುಷ್ಯರು ನೋಡಲಿಕ್ಕಾಗದ ಸಿನಿಮಾಗಳು; ಪ್ರೇಕ್ಷಕರನ್ನು ಲೆಕ್ಕಕ್ಕಿಡದೆ ಕೇವಲ ಪ್ರಶಸ್ತಿಗಾಗಿ ತಯಾರಾಗುವ ಸಿನಿಮಾಗಳು; ಸಿನಿಮಾದ ಅಸಲಿ ಗಂಧಗಾಳಿ ಗೊತ್ತಿಲ್ಲದವರು ನಿರ್ದೇಶಿಸುವ ಸಿನಿಮಾಗಳು; ತಯಾರಿಕೆಗೆ ಬೇಕಾದ ಕನಿಷ್ಠ ಪ್ರಾಥಮಿಕ ವ್ಯಾಕರಣ ಗೊತ್ತಿಲ್ಲದವರು ನಿರ್ಮಿಸುವ ಸಿನಿಮಾಗಳು; ಗಲ್ಲು ಶಿಕ್ಷೆಗೆ ಒಳಪಟ್ಟ ಕೈದಿಯೊಬ್ಬ ಈ ಸಿನಿಮಾಗಳಿಗಿಂತ ಗಲ್ಲು ಶಿಕ್ಷೆಯೇ ವಾಸಿ ಎನಿಸುವಂತೆ ಮಾಡಿದ ಸಿನಿಮಾಗಳು… ಇಲ್ಲಿ, ಅಂದರೆ ಅಖಂಡ ಕರ್ನಾಟಕ ರಾಜ್ಯದ ಕನ್ನಡ ಭಾಷೆಯಲ್ಲಿ ಮಾತ್ರ ರೂಪುಗೊಳ್ಳುತ್ತವೆ ಎಂಬುದು ನನ್ನ ಗ್ರಹಿಕೆ. ಈ ಬಗೆಯ ಸಿನಿಮಾಗಳನ್ನು ನೋಡಲು ಬರೀ ಕಣ್ಣಿದ್ದರೆ ಸಾಲದು; ನೋಡುವ ಎದೆಗಾರಿಕೆಯೂ ಬೇಕು!

ಕಮರ್ಷಿಯಲ್ / ಕಲಾತ್ಮಕ ಅನ್ನದೆ ಅತಿ ಕಡಿಮೆ ಒಳ್ಳೆಯ ಚಿತ್ರಗಳನ್ನು ಅತಿ ಕೆಟ್ಟ ಮತ್ತು ಭೀಕರ ಪರಿಣಾಮಗಳೊಂದಿಗೆ ತಯಾರಿಸುವ ಖ್ಯಾತಿ ಸದ್ಯಕ್ಕೀಗ ಕನ್ನಡ ಚಿತ್ರರಂಗಕ್ಕಿದೆ. ನೆರೆಯ ತಮಿಳು, ತೆಲುಗು, ಮಲಯಾಳಂ ಚಿತ್ರೋದ್ಯಮಗಳು ಕಾಲಕಾಲಕ್ಕೆ ಸಿನಿಮಾದ ಕಥೆ, ಚಿತ್ರಕಥೆ, ವಸ್ತು, ನಿರೂಪಣೆ, ತಂತ್ರಗಾರಿಕೆಯನ್ನು ಅಪ್‌ಡೇಟ್ ಮಾಡಿಕೊಂಡು ಹೋಗುತ್ತಿರುವಾಗ, ಇಲ್ಲಿನವರು -ಅಂದರೆ ಗಾಂಧಿನಗರದ ಇಂಗುಮರ್ರು ಬರ್ಗ್‌ಮನ್ನುಗಳು, ಅಕಿರೋ ಕುರ್ರಸೋವಾಗಳು- ತಮಿಳು ತೆಲುಗು ಮಲಯಾಳಂನವರ ಎಂಜಲನ್ನು ಪವಿತ್ರ ತೀರ್ಥ ಪ್ರಸಾದಗಳಂತೆ ಸ್ವೀಕರಿಸುತ್ತಿರುವ ದೃಶ್ಯಗಳನ್ನು ನೋಡಲು 70 ಎಂ.ಎಂ ಪರದೆಯೇ ಬೇಕಿಲ್ಲ.

ಕನ್ನಡ ಸಿನಿಮಾದ ಸದ್ಯದ ಸಾಧ್ಯತೆ ಸವಾಲುಗಳ ಕುರಿತು ಹೇಳುವಾಗ, ಮೇಲಿನ ಮಾತುಗಳನ್ನು ಕನ್ನಡ ಸಿನಿಮಾ ರಂಗ ವರ್ತಮಾನದಲ್ಲಿ ತಲುಪಿರುವ ಹೀನಾಯ ಸ್ಥಿತಿಗೆ ಪೀಠಿಕೆಯಾಗಿ ಹೇಳಬೇಕಾಯಿತು. ಜಾಗತಿಕ ಸಿನಿಮಾ ರಂಗದಲ್ಲಿ ದೊಡ್ಡ ಮಾರುಕಟ್ಟೆಯೇನೂ ಕನ್ನಡ ಚಿತ್ರಗಳಿಗಿಲ್ಲ. ಕೋಲಾರ, ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲಿ ಬಿಟ್ಟಿ ತೋರಿಸಿದರೂ ಜನ ಅತ್ತ ಕಡೆ ತಲೆ ಹಾಕುವುದಿಲ್ಲ. ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಗಾಂಧಿನಗರದ ಖಾಲಿ ತಲೆಗಳಿಗೆ ಪುರುಸೊತ್ತಿಲ್ಲ. ರೈತರಿಗೆ, ಶ್ರಮಿಕ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ ಸಿಗದ ಸಬ್ಸಿಡಿಗಳು, ಸವಲತ್ತುಗಳು ಈ ಸಿನಿಮಾದವರಿಗೆ ಸಿಗುತ್ತಿವೆ. ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಯನ್ನು ನಾವು ಸಿನಿಮಾಗಳ ಮೂಲಕ ಎತ್ತಿಹಿಡಿಯುತ್ತಿದ್ದೇವೆ ಎಂದು ಸರ್ಕಾರದ ಸಬ್ಸಿಡಿಗೆ ಅರ್ಜಿ ಹಾಕುವ ಇವರ ಸಿನಿಮಾಗಳನ್ನು ಒಮ್ಮೆ ನೋಡಿದರೆ ಸಾಕು; ಕನ್ನಡ ಭಾಷೆಯನ್ನು, ಪ್ರೇಕ್ಷಕರ ಅಭಿರುಚಿಯನ್ನು ಹೇಗೆಲ್ಲ ಕಲುಷಿತಗೊಳಿಸಬಹುದೆಂಬ ವಿಧಾನಗಳು ಹೊಳೆಯುತ್ತವೆ.

**
ಗಡಿ ಪ್ರದೇಶದಲ್ಲಿರುವ ಜನ ಏಕಕಾಲಕ್ಕೆ ಎರಡು ಭಾಷೆಗಳ ಮೇಲೆ ಹಿಡಿತ ಹೊಂದಿರುತ್ತಾರೆ ಎಂಬ ಕನಿಷ್ಠ ಅರಿವು ಗಾಂಧಿನಗರದ ಬಣ್ಣದ ಜನರಿಗೆ ಇದ್ದಂತಿಲ್ಲ. ಗಾಂಧಿನಗರವಿರಲಿ, ಸರ್ಕಾರವೇ ಎರಡು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಜನರನ್ನು ಪ್ರತಿಭೆಯ ಮಾನದಂಡಗಳಿಂದ ಗುರುತಿಸುವ ಬದಲು ಅದು ಆ ಜನರ ಅಸಹಾಯಕತೆ ಎನ್ನುವಂತೆ ನೋಡುತ್ತಿದೆ. ಈ ಭಾಗದ ಜನರ ನಿಜವಾದ ಸಂಕಟಗಳನ್ನು ಪ್ರತಿನಿಧಿಸುವಂತಹ ಸಿನಿಮಾಗಳಿಗೆ ಗಾಂಧಿನಗರದ ಜನ ಯಾವತ್ತೂ ಕೈಹಾಕಲಾರರು. ಇಂತಹ ಕಡೆಗಳಲ್ಲಿ ಕನ್ನಡ ಚಲನಚಿತ್ರಗಳ ಸಮಾಧಿಯ ಮೇಲೆ ತಮಿಳು, ತೆಲುಗು ಚಿತ್ರಗಳು ಪ್ರಚಂಡ ಜಯಭೇರಿ ಭಾರಿಸುತ್ತವೆ. ಇಲ್ಲಿ ಜಯಭೇರಿ ಅಂದ ಮಾತ್ರಕ್ಕೆ ತಮಿಳು, ತೆಲುಗು ಸಿನಿಮಾಗಳು ಇಲ್ಲಿನವರ ಕಷ್ಟಗಳಿಗೆ ಸ್ಪಂದಿಸುವಂತಹ ಸಿನಿಮಾಗಳನ್ನು ಕೊಡುತ್ತಿವೆ ಎಂದರ್ಥವಲ್ಲ. ಸಿನಿಮಾದಿಂದ ಪಕ್ಕಾ ಮನರಂಜನೆಯನ್ನು ಮಾತ್ರ ನಿರೀಕ್ಷಿಸುವ ಜನರಿಗೆ ನೀವು ಗೋಳನ್ನು ಪ್ರತಿನಿಧಿಸುವ, ಹಿಂಸೆಯನ್ನು ವೈಭವಿಕರಿಸುವ, ಸವಕಲು, ತೆಳು ಕಥೆಗಳನ್ನಿಟ್ಟು ಇದೇ ಸಿನಿಮಾ ಎಂದು ಹೇಳಹೋದರೆ ಅದನ್ನು ಸಿನಿಮಾದ ಕ್ರಮಗಳಲ್ಲಿ ಯಾರೂ ನೋಡುವುದಿಲ್ಲ. ಹೀಗಾಗಿಯೇ ಇಲ್ಲಿ ತರ್ಕಕ್ಕಿಂತ ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ ತಮಿಳು, ತೆಲುಗು ಚಿತ್ರಗಳು ಕನ್ನಡವನ್ನು ಹಿಂದಿಕ್ಕಿ ಸದಾ ಗೆಲುವನ್ನು ಕಾಣುತ್ತವೆ.

ಕನ್ನಡದಲ್ಲಿ ತಯಾರಾಗುವ ಕಮರ್ಷಿಯಲ್ ಮತ್ತು ಕಲಾತ್ಮಕ ಎಂಬ ಲೇಬಲ್‌ಗಳನ್ನು ಅಂಟಿಸಿಕೊಂಡ ಚಿತ್ರಗಳನ್ನು ಗಮನಿಸಿ. ಕಮರ್ಷಿಯಲ್ ಚಿತ್ರಗಳಲ್ಲಿ ವೇಗ ಇರುತ್ತದೆ ಅನ್ನುವುದನ್ನು ಬಿಟ್ಟರೆ ಸಿನಿಮಾದ ಉಳಿದ ಪ್ರಕಾರಗಳು ಆ ದೇವರಿಗೇ ಪ್ರೀತಿಯಾಗಬೇಕು. ಗಾಂಧಿನಗರದ ಸಿದ್ಧ ಮಾದರಿಯ ಚೌಕಟ್ಟಿನಲ್ಲಿಯೇ ರೂಪುಗೊಳ್ಳುವ ಈ ಕಮರ್ಷಿಯಲ್ ಚಿತ್ರಗಳನ್ನು ಎರಡೂವರೆ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಕೂತು ನೋಡುವುದು ಹಿಂಸೆ ಎನಿಸಿದರೆ, ಕಲಾತ್ಮಕ ಚಿತ್ರ ನೋಡುವವರು ಸಹನೆಯ ಮೂಟೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಕ್ಯಾಮೆರಾವನ್ನು ಬಸವನ ಹುಳುವಿನ ಹೆಗಲಮೇಲಿಟ್ಟು ಸಿನಿಮಾ ನಿರ್ಮಿಸುವ ಕಲಾತ್ಮಕ ಚಿತ್ರಗಳ ಭೂಪರು, “ನಾವು ಐದು ಕೋಟಿ ಕನ್ನಡಿಗರಿಗಿಂತ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ನೀಡುವ ಹತ್ತು ಜನ ಜ್ಯೂರಿಗಳ ಸಲುವಾಗಿ ಸಿನಿಮಾ ನಿರ್ಮಿಸುತ್ತಿದ್ದೇವೆ,” ಎಂದು ಮುಕ್ತವಾಗಿಯೇ ಹೇಳಿಕೊಳ್ಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಹೇಳಿ ಮುಗಿಸಬಹುದಾದ ಸಂಗತಿಯೊಂದನ್ನು ಕಲಾತ್ಮಕ ಚಿತ್ರದ ನಿರ್ದೇಶಕರು ಗಂಟೆಗಟ್ಟಲೆ ಹೇಳಬಯಸುತ್ತಾರೆ. ಹೇಗಿದ್ದರೂ ಈ ಸಿನಿಮಾಗಳನ್ನು ಜನ ನೋಡುವುದಿಲ್ಲವೆಂಬ ಧೈರ್ಯ ಈ ಬಗೆಯ ಸಿನಿಮಾ ನಿರ್ದೇಶಿಸುವವರಿಗಿದ್ದಂತಿದೆ.

ಎಪ್ಪತ್ತರ ದಶಕದಲ್ಲಿ ತೆರೆಕಂಡ “ಬಂಗಾರದ ಮನುಷ್ಯ” ಚಿತ್ರವನ್ನು ಅವಲೋಕಿಸೋಣ. ಆ ಚಿತ್ರದ ನಾಯಕನಟಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸತ್ತುಹೋಗುತ್ತಾಳೆ. ನಂತರದ ದೃಶ್ಯದಲ್ಲಿ ಚಟ್ಟಕಟ್ಟುವ ಮತ್ತು ಚಿತ್ರದ ನಾಯಕನು ದುಃಖಿತನಾಗಿರುವ ಸನ್ನಿವೇಶಗಳನ್ನು ತೋರಿಸಲಾಗುತ್ತದೆ. ತೀಕ್ಷ್ಣವಾಗಿ ಈ ಚಿತ್ರದ ಒಂದೊಂದು ದೃಶ್ಯವೂ ಒಂದಾದ ಮೇಲೊಂದರಂತೆ ವೇಗ ಪಡೆದುಕೊಳ್ಳುತ್ತದೆ. ಈಗಲೂ “ಬಂಗಾರದ ಮನುಷ್ಯ” ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ, ಕಲಾತ್ಮಕ ಆಶಯದಲ್ಲಿ ನೋಡಲು ಸಾಧ್ಯವಿದೆ. “ಬಂಗಾರದ ಮನುಷ್ಯ” ನಿರ್ದೇಶಿಸಿದ ಸಿದ್ಧಲಿಂಗಯ್ಯನವರು ಗ್ರಾಮ್ಯ ಬದುಕಿನ ಸಿಟ್ಟು, ಕ್ರೌರ್ಯ, ಸಂಕಟಗಳನ್ನು ಬಿಂಬಿಸುವ “ಭೂತಯ್ಯನ ಮಗ ಅಯ್ಯು”ವನ್ನು ನಿರ್ದೇಶಿಸಿದ್ದಾರೆ. ಕನ್ನಡದ ಮಟ್ಟಿಗೆ ಇವೆರಡು ಚಿತ್ರಗಳು ಇವತ್ತಿಗೂ ಕ್ಲಾಸಿಕ್ ಅನ್ನಿಸುತ್ತವೆ. ಕರ್ನಾಟಕದ ಒಟ್ಟು ಸಮಾಜದ ಮೇಲೆ ಈ ಎರಡು ಚಿತ್ರಗಳು ಉಂಟು ಮಾಡಿದಷ್ಟು ಪರಿಣಾಮವನ್ನು ಬೀರಲು ದುಡ್ಡಿನ ಮಳೆಯಲ್ಲಿ ಮಿಂದ ಇವತ್ತಿನ ’ಮುಂಗಾರು ಮಳೆ’, ’ದುನಿಯಾ’ ಚಿತ್ರಗಳಿಗೆ ಸಾಧ್ಯವಿಲ್ಲ.

ಎರಡು ವರ್ಷಗಳ ಹಿಂದೆ ತೆರೆಕಂಡ “ಮಾತಾಡ್ ಮಾತಾಡು ಮಲ್ಲಿಗೆ” ಚಿತ್ರವನ್ನು ತೆಗೆದುಕೊಳ್ಳಿ. ಬಿಡುಗಡೆಗೂ ಮುನ್ನ ಈ ಚಿತ್ರವನ್ನು ರೈತರ ಚಿತ್ರ, ರೈತರ ಪರ ಇರುವ ಚಿತ್ರವೆಂದು ಹೇಳಲಾಯ್ತು. ಹೆಂಗಸರಿಗೆ ಹೊಲಿಸಿಟ್ಟ ಬಟ್ಟೆಗಳನ್ನು ತೊಟ್ಟು ನಲಿದಾಡುವ ಈ ಚಿತ್ರದ ನಾಯಕನಟನನ್ನು “ಹೂವಯ್ಯ” ಎಂದು ಕರೆದು, ಆತನನ್ನು ರೈತ ಎಂದು ಬಿಂಬಿಸಲಾಯಿತು. ರೈತನನ್ನು ತೆರೆಯ ಮೇಲೆ ಹೇಗೆ ಕಾಣಿಸಬೇಕೆಂಬ ಸೂಕ್ಷ್ಮಗಳು ಈ ಚಿತ್ರದ ನಿರ್ದೇಶಕರಿಗಾಗಲಿ ಅಥವಾ ನಾಯಕನಟರಿಗಾಗಲಿ ಗೊತ್ತಿದ್ದಂತೆ ಕಾಣಲಿಲ್ಲ. ಈ ದೇಶದ ಅದ್ಯಾವ ರೈತ ಫ್ಯಾಷನ್ ಷೋಗೆ ಹೊರಟ ಕಮಂಗಿಯಂತೆ ಬಟ್ಟೆ ಧರಿಸಿಕೊಂಡಿರುತ್ತಾನೋ ಬಲ್ಲವರೇ ಹೇಳಬೇಕು! ಬದುಕು ಮತ್ತು ಸಿನಿಮಾದ ನಡುವಿನ ಅಂತರ ಗೊತ್ತಿಲ್ಲದವರು ಮಾತ್ರ ರೈತನ ಕತೆ ಹೇಳುತ್ತಾ, ರೈತನನ್ನು ಬಿಟ್ಟು ಮತ್ತೆಲ್ಲವನ್ನೂ ತೋರಿಸಬಲ್ಲರು. ಈ ಚಿತ್ರದ ನಾಯಕನಟ ರೈತನ ಯಾವ ಗುಣಗಳನ್ನೂ ತೆರೆಯ ಮೇಲೆ ತೆರೆದಿಡುವುದಿಲ್ಲ. ಇಂಥ ರೈತನನ್ನು ಮಹಾತ್ಮನನ್ನಾಗಿಸಲು ಹೊರಟ ನಿರ್ದೇಶಕರಿಗೆ ಈ ದೇಶದ ಸಾಮಾನ್ಯ ರೈತನ ಕಷ್ಟಸುಖ ಮನವರಿಕೆಯಾದ ನಿದರ್ಶನಗಳೇ ಚಿತ್ರದುದ್ದಕ್ಕೂ ದೊರೆಯದೆ, ಕನ್ನಡ ಸಿನಿಮಾಗಳ ಕತೆಯ ಗುಣಮಟ್ಟ ಎಷ್ಟು ಕಳಪೆ ದರ್ಜೆಯದು ಎಂಬುದಕ್ಕೆ ಈ ಚಿತ್ರ ದೊಡ್ಡ ಉದಾಹರಣೆಯಾಗಿ ನಿಂತಿದೆ.

**

ಡಾ.ರಾಜ್‌ಕುಮಾರ್, ಅಶ್ವಥ್, ಬಾಲಕೃಷ್ಣ, ನರಸಿಂಹರಾಜು ಮುಂತಾದವರ ಎದಿರು ಈಗಿನ ದರ್ಶನ್, ಸುದೀಪ್, ಉಪೇಂದ್ರ, ಮುರಳಿ, ದಿಗಂತ್, ಆದಿತ್ಯ ಮುಂತಾದ ನಟರನ್ನು ಯಾವ ಮಾನದಂಡದಿಂದ ನಟರೆಂದು ಕರೆಯಬೇಕೆಂಬುದೇ ದೊಡ್ಡ ಸಂಕಟವಾಗಿದೆ. ತಮಿಳಿನ ಗೌಂಡುಮಣಿ, ಸೆಂದಿಲ್, ವಡಿವೇಲ್, ವಿವೇಕ್; ತೆಲುಗಿನ ಬ್ರಹ್ಮಾನಂದಂ, ಅಲಿ, ಸುನೀಲ್, ವೇಣುಮಾಧವ್ ಮುಂತಾದ ಹಾಸ್ಯ ನಟರ ನೆರಳುಗಳಲ್ಲೇ ಕನ್ನಡದ ದೊಡ್ಡಣ್ಣ, ಟೆನ್ನಿಸ್‌ಕೃಷ್ಣ, ಸಾಧುಕೋಕಿಲ, ಕೋಮಲ್, ಶರಣ್ ಜೀವಿಸತೊಡಗಿರುವುದರಿಂದ, ಮೂಲ ಚಿತ್ರವನ್ನು ನೋಡಿದವರು ಅಕಸ್ಮಾತ್ ಕನ್ನಡ ಚಿತ್ರವನ್ನು ನೋಡಿದರೆ, ಮತ್ತಿನ್ನೆಂದೂ ಥೇಟರ್ ಕಡೆ ಕಾಲಿಡಲಾರರೇನೋ.

ಪಡೋಸನ್, ಬಾವರ್ಚಿ, ದೇವರ್‌ಮಗನ್, ಪೊರ್ಕಾಲಂ, ಆಟೋಗ್ರಾಫ್, ಕಾದಲ್‌ಕೊಂಡೇನ್, 7/ಜಿ ರೈನ್ಬೋ ಕಾಲೋನಿಯಂತಹ ಒಂದು ಕಾಲದ ಹಿಂದಿ, ತಮಿಳು, ತೆಲುಗಿನ ಯಶಸ್ವಿ ಚಿತ್ರಗಳು ಗಾಂಧಿನಗರದ ಪ್ರತಿಭೆಗಳ ಕೈಯಲ್ಲಿ ಹಠಾತ್ ತೀರಿಕೊಳ್ಳುತ್ತವೆ. ಮಣಿರತ್ನಂ ನಿರ್ದೇಶನದ ತಮಿಳಿನ “ದಳಪತಿ” ಚಿತ್ರವು ಕನ್ನಡಕ್ಕೆ “ಅಣ್ಣಾವ್ರು” ಎಂಬ ಹೆಸರಿನಲ್ಲಿ ರೀಮೇಕಾಯಿತು. ಆ ಚಿತ್ರ ನೋಡಿದ ನಟಿ ಸುಹಾಸಿನಿ, “ದಯವಿಟ್ಟು ಈ ಚಿತ್ರವನ್ನು ನನ್ನ ಗಂಡನಿಗೆ ತೋರಿಸಬೇಡಿ. ಆಗಾಗ ಎದೆನೋವಿನಿಂದ ನರಳುವ ಅವರು ಈ ಚಿತ್ರ ನೋಡಿದರೆ ಪ್ರಾಣ ಬಿಡುವುದು ಖಂಡಿತ,” ಎಂದು ಹೇಳಿದ್ದು ಕನ್ನಡದ ರೀಮೇಕ್ ಶೂರರ “ಪ್ರತಿಭಾನ್ವಿತ”ತನಕ್ಕೆ ಭಾಷ್ಯ ಬರೆದಂತಿದೆ. ತಮಿಳಿನ ಒಳ್ಳೆಯ ಸಿನಿಮಾಗಳೆಲ್ಲ ಕನ್ನಡಕ್ಕೆ ಬಂದು ತಿಥಿಯಾಗಿವೆ. ಇಲ್ಲಿನವರಿಗೆ ಕಾಪಿ ಹೊಡೆದರೂ ಪಾಸಾಗುವ ವಿದ್ಯೆ ಗೊತ್ತಿಲ್ಲ. ರೀಮೇಕ್ ಸಿನಿಮಾ ನಿರ್ಮಿಸುವಾಗಲೂ ಅದು ಮೂಲ ಚಿತ್ರದಷ್ಟೇ ಕಸುಬುದಾರಿಕೆಯನ್ನು ಬೇಡುತ್ತದೆ ಎಂಬ ಕಾಮನ್‌ಸೆನ್ಸ್ ಇಲ್ಲಿನವರಿಗೆ ಇಲ್ಲದಿರುವುದರಿಂದಲೇ, ರೀಮೇಕ್ ಸಿನಿಮಾಗಳು ಬಿಡುಗಡೆಯಾದ ಒಂದೇ ವಾರಕ್ಕೆ ಥೇಟರಿನಿಂದ ಖಾಲಿಯಾಗಿ ಒಂದೇ ತಿಂಗಳ ಅವಧಿಯಲ್ಲಿ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತವೆ.

ಸಿನಿಮಾದ ಕುರಿತು ಸ್ಪಷ್ಟ ತಿಳುವಳಿಕೆಯೇ ಇಲ್ಲದ ಜನ ಈಗ ಕನ್ನಡದಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ; ಬದುಕಿನಲ್ಲಿ ಅಡ್ಡದಾರಿ ಹಿಡಿದು ಗಳಿಸಿದ ದುಡ್ಡನ್ನೆಲ್ಲ ವ್ಯಯಿಸಲು ಇಲ್ಲಿ ಬಹಳ ಜನ ಕಾತರರಾಗಿ ನಿಂತಿದ್ದಾರೆ. ಇಂಥವರು ಕೂಡಿ ನಿರ್ಮಿಸಿದ ಒಂದೇ ಒಂದು ಕನ್ನಡ ಚಿತ್ರದತ್ತ ಕಣ್ಣು ಹಾಯಿಸಿದರೆ ಸಾಕು, ಈ ಜನ ತಮ್ಮ ಬದುಕಿನಲ್ಲಿ ಒಂದೊಳ್ಳೆ ಸಿನಿಮಾ ನೋಡಿರುವ ಸಾಧ್ಯತೆಯೇ ಇಲ್ಲ ಎಂಬುದು ತಿಳಿಯುತ್ತದೆ. ಈ ತರಹದ ಅಡ್ಡಕಸುಬಿ ಜನಕ್ಕೆ ಸಿನಿಮಾ ಅನ್ನುವುದು ತೆವಲಿನಂತೆ ಕಾಣುತ್ತಿದೆಯೇ ಹೊರತು ಅದು ಜನರ ನಾಡಿಯನ್ನು ಮಿಡಿಸಬಲ್ಲ ಮಾಧ್ಯಮ ಎಂದು ಅನ್ನಿಸಿಯೇ ಇರುವುದಿಲ್ಲ. ಗಾಂಧಿನಗರದ ಲೆಕ್ಕಾಚಾರಗಳು ಹೇಗಿರುತ್ತವೆಂದರೆ, ಪ್ರೇಕ್ಷಕನಿಂದ ನಲವತ್ತು ರೂಪಾಯಿ ಕಿತ್ತುಕೊಂಡು ಆತನಿಗೆ ಎಂಟಾಣೆಯ ಸಿನಿಮಾ ಮಾತ್ರ ತೋರಿಸಬೇಕು ಎನ್ನುವ ನಿಲುವು ಅನೇಕರಿಗೆ ಇರುವಂತಿದೆ. ಕೋಟಿ ವೆಚ್ಚದ ಬಜೆಟ್‌ನಲ್ಲಿ ತಯಾರಾಗುವ ಕನ್ನಡ ಚಿತ್ರಗಳು ತಂದುಕೊಡುವ ಲಾಭ ಆ ಚಿತ್ರದ ವಾಲ್‌ಪೋಸ್ಟರಿನ ಖರ್ಚನ್ನೂ ಹುಟ್ಟಿಸುವುದಿಲ್ಲ ಎಂಬ ಪರಿಸ್ಥಿತಿ ಈಗ ಉಂಟು.

ಕನ್ನಡ ಸಿನಿಮಾದ ನಿರ್ಮಾಪಕರನ್ನು ಆತ್ಮಹತ್ಯೆಯಿಂದ ಪಾರುಮಾಡುತ್ತಿರುವುದು ’ಬಿ’, ’ಸಿ’ ಸೆಂಟರಿನ ಪ್ರೇಕ್ಷಕರು ಮಾತ್ರ. ಅದರಲ್ಲೂ ಹೋಟೆಲ್ ಕಾರ್ಮಿಕರು, ದಿನಗೂಲಿ ನೌಕರರು, ಅವತ್ತು ದುಡಿದ ಹಣವನ್ನು ಅವತ್ತೇ ಖರ್ಚು ಮಾಡುವ ಶ್ರಮಿಕ ವರ್ಗದ ಜನ ಇವತ್ತು ಹೆಚ್ಚು ಕನ್ನಡ ಸಿನಿಮಾ ನೋಡಲು ಥೇಟರಿಗೆ ಬರುತ್ತಾರೆ. ನೆರೆಯ ತಮಿಳು, ತೆಲುಗು ಚಿತ್ರಗಳ ವೀಕ್ಷಕರಿಗಿಂತ ಕನ್ನಡ ಸಿನಿಮಾಗಳ ನೋಡುಗರು ಜಾಣರು. ಮನೆಮಂದಿಯಲ್ಲ ಕೂತು ನೋಡುವಂತಹ ಚಿತ್ರವನ್ನು ಸ್ವೀಕರಿಸಿದಷ್ಟೇ ಮನುಷ್ಯರು ನೋಡಲಿಕ್ಕಾಗದ ಚಿತ್ರಗಳನ್ನು ನಿರ್ದಯವಾಗಿ ತಿರಸ್ಕರಿಸಿದ್ದಾರೆ.

ನಮ್ಮ ಗಾಂಧಿನಗರದ ಜನರ ಕಣ್ಣಿಗೆ ಒರಿಜಿನಲ್ ಕನಸುಗಳು ಯಾವತ್ತೂ ಬೀಳುವುದಿಲ್ಲವೇನೋ!  ಕೊಂಡು ತರುವ ಬಾಡಿಗೆ ಕನಸುಗಳಿಗೆ ಹೇಗೆ ಬಣ್ಣ ಹಚ್ಚಬೇಕೆಂಬುದೂ ಇವರಿಗೆ ಮೊದಲೇ ಗೊತ್ತಿಲ್ಲ! ತಮ್ಮ ಮಿತಿಗಳು, ದೌರ್ಬಲ್ಯಗಳ ಅರಿವಿಲ್ಲದ ಈ ಗಾಂಧಿನಗರದ ಮಂದಿ, ಕತೆ ಕಟ್ಟುವ ಮುನ್ನವೇ ಚಿತ್ರದ ಹೀರೋ ಹೀರೋಯಿನ್‌ಗಳ ಕಾಲ್‌ಶೀಟ್‌ಗಾಗಿ ಚಪ್ಪಲಿ ಸವೆಸುತ್ತಾರೆ. ಇಂಥವರ ಚಿತ್ರಗಳ ಶೀರ್ಷಿಕೆ, ಮುಹೂರ್ತ, ಬಿಡುಗಡೆಯ ದಿನಾಂಕಗಳನ್ನು ನಿರ್ಧರಿಸುವವರು ದೈವಿಕ ತಲೆಹಿಡುಕರಾದ ಪೂಜಾರಿಗಳು ಹಾಗೂ ಶಾಸ್ತ್ರ ಬೊಗಳುವ ಶುನಕಗಳು.

ವೈದಿಕರು ಕಟ್ಟಪ್ಪಣೆ ಮಾಡಿದ ಘಳಿಗೆಯಲ್ಲಿ ಮುಹೂರ್ತ, ಎಡಿಟಿಂಗ್, ಬಿಡುಗಡೆ ಎಲ್ಲವನ್ನು ಮಾಡುವ ಗಾಂಧಿನಗರದ ಜನ, ಚಿತ್ರ ಮಕಾಡೆ ಮಲಗಿದಾಗ ಮಾತ್ರ ತಮ್ಮ ಚಿತ್ರಗಳ ಸೋಲಿಗೆ ಪತ್ರಿಕೆಗಳ ಕೆಟ್ಟ ವಿಮರ್ಶೆ, ಕ್ರಿಕೆಟ್, ಮಳೆ, ಕಾಲೇಜು ರಜೆ,  ಹಬ್ಬಹರಿದಿನಗಳು ಕಾರಣವೆಂದು ಬೊಬ್ಬಿಡುತ್ತಾರೆ. “ಗಂಡುಗಲಿ ಕುಮಾರರಾಮ” ಎಂಬ ದೊಡ್ಡ ಬಜೆಟ್‌ನ ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಥೇಟರ್‌ಗಳಿಂದ ಕಾಲುಕಿತ್ತಾಗ, ಗಾಂಧಿನಗರದ ಸಿನಿ ಪಂಡಿತರು ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಕುಮಾರರಾಮನಿಗೆ ಪೂಜೆ ಮಾಡದೆ ಶೂಟಿಂಗ್ ಆರಂಭಿಸಿದ್ದೇ ಸೋಲಿಗೆ ಕಾರಣ ಎಂದು ಷರಾ ಬರೆದರು. ಕನ್ನಡದಲ್ಲಿ ದೇವರ ಮಹಾತ್ಮೆಗಳನ್ನು ಹೇಳುವ ಚಿತ್ರಗಳನ್ನೇ ಪ್ರೇಕ್ಷಕರು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ ಎಂಬುದನ್ನು ಹೇಳಲು ಶ್ರೀಮಂಜುನಾಥ, ಮಣಿಕಂಠನ ಮಹಿಮೆ, ದುರ್ಗಾಶಕ್ತಿ, ಕೊಲ್ಲೂರು ಮೂಕಾಂಬಿಕೆ, ರೇಣುಕಾದೇವಿ ಮಹಾತ್ಮೆ… ಮುಂತಾದ ಮೂರನೇ ದರ್ಜೆ ಚಿತ್ರಗಳ ಪ್ರತ್ಯೇಕ ಪಟ್ಟಿಯನ್ನೇನೂ ಕೊಡಬೇಕಿಲ್ಲ ಎನಿಸುತ್ತದೆ.

**

ಇವತ್ತು ಇಪ್ಪತ್ತೈದು ಮೂವತ್ತು ಲಕ್ಷ ರೂಪಾಯಿಗಳಲ್ಲಿ ಸಿದ್ಧಗೊಳ್ಳುವ ಇರಾನ್ ದೇಶದ ಚಿತ್ರಗಳು ಜಗತ್ತಿನ ಗಮನ ಸೆಳೆಯುವಂತೆ, ಕೋಟಿ ಕೋಟಿ ಸುರಿದು ನಿರ್ಮಿಸುವ ಕನ್ನಡ ಚಿತ್ರಗಳಿಗೇಕೇ ಸಾಧ್ಯವಾಗುವುದಿಲ್ಲ ಎಂಬುದು ಬಗೆಹರಿಸಲಾಗದ ಒಗಟು. ಇರಾನಿನ ಮಜೀದ್ ಮಜೀದೀ, ಮೊಹ್ಸಿನ್ ಮಖ್‌ಮಲ್ಬಫ್‌ರಂತಹ ನಿರ್ದೇಶಕರು ಇಡೀ ಇರಾನ್ ದೇಶ ಹೆಮ್ಮೆಪಟ್ಟುಕೊಳ್ಳುವಂತಹ ಚಿತ್ರಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ.

ಮಖ್‌ಮಲ್ಬಫ್‌ರ ಇಡೀ ಕುಟುಂಬ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಮೀರಾ ಮಖ್ಮಲ್ಬಫ್, ತನ್ನ ತಂಗಿ ಹನಾಳೊಂದಿಗೆ ಕೂಡಿಕೊಂಡು ಆಫ್ಘಾನಿಸ್ತಾನದ ಖೊಮೆನಿಯ ಮೂಲಭೂತ ಕ್ರೌರ್ಯದಲ್ಲಿ ನರಳುತ್ತಿರುವ ಹೆಣ್ಣುಮಕ್ಕಳ ಸಂಕಟಗಳನ್ನು “At five in the afternoon” ಚಿತ್ರದಲ್ಲಿ ಯಥಾವತ್ತಾಗಿ ತೋರಿಸಿದ್ದಾಳೆ. “ಆಫ್ಘಾನಿಸ್ತಾನದ ಹೆಣ್ಣುಮಕ್ಕಳ ನೋವಿನ ಮುಂದೆ ನನ್ನ ಇರಾನ್ ದೇಶದ ಹೆಣ್ಣುಮಕ್ಕಳ ನೋವು, ನೋವೇ ಅನ್ನಿಸುವುದಿಲ್ಲ. ನನಗೆ ನನ್ನ ತಾಯ್ನೆಲದ ನೋವಿಗಿಂತ ಆಫ್ಘಾನದ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವು ದೊಡ್ಡದಾಗಿ ಕಾಣುವುದು. ಜಗತ್ತಿಗೆ ಇದನ್ನು ನಾನು ಮೊದಲು ಹೇಳಬೇಕು,” ಎನ್ನುವ ಸಮೀರಾ, ಇರಾನ್-ಇರಾಕ್ ದೇಶಗಳ ಗಡಿ ಕದನಗಳಿಂದ ಅಲ್ಲಿನ ಎಳೆಯ ಮಕ್ಕಳಿಗೆ ಶಾಲೆಯ ಹಾದಿಗಳು ದೂರವಾಗಿ ಇಪ್ಪತ್ತು ವರ್ಷ ದಾಟುವುದಕ್ಕೂ ಮುನ್ನವೇ ಅವರೆಲ್ಲ ಸೈನಿಕರ ಗುಂಡೇಟಿಗೆ ಬಲಿಯಾಗುವುದನ್ನು ತನ್ನ “ಬ್ಲಾಕ್‌‌ಬೋರ್ಡ್” ಚಿತ್ರದಲ್ಲಿ ಬೆಚ್ಚುವಂತೆ ಚಿತ್ರಿಸಿದ್ದಾಳೆ.

ಇರಾನ್ ದೇಶದವರು ಮಾಡುವ ಪ್ರಯೋಗ ಸಾಧ್ಯತೆಗಳನ್ನು ಎಲ್ಲ ಬಗೆಯ ಸಂಪನ್ಮೂಲ ಹೊಂದಿರುವ ಕನ್ನಡ ಸಿನಿಮಾ ರಂಗದಿಂದ ನಾವು ಯಾಕೆ ನಿರೀಕ್ಷಿಸಬಾರದು? ಇಲ್ಲಿ ಇನ್ನೂ ಒಂದು ಚರ್ಚಾಸ್ಪದ ಅಂಶವಿದೆ. ಕನ್ನಡದ ದೊಡ್ಡನಟರು ತಮ್ಮ ಗಂಡು ಮಕ್ಕಳನ್ನು ಸಿನಿಮಾ ರಂಗಕ್ಕೆ ತಂದು ಪರಿಚಯಿಸುವಾಗ ತೋರುವ ಸಂಭ್ರಮ, ಉತ್ಸಾಹಗಳನ್ನು ಹೆಣ್ಣುಮಕ್ಕಳ ಬಗ್ಗೆ ತೋರಿಸಿಲ್ಲ. ಸಿನಿಮಾ ರಂಗದಲ್ಲಿ ಹೆಣ್ಣನ್ನು ಇವತ್ತಿಗೂ ಯಾವ ದೃಷ್ಟಿಯಿಂದ ನೋಡಲಾಗುತ್ತಿದೆ ಎಂಬುದನ್ನು ಇದರಿಂದಲೇ ಅಂದಾಜಿಸಬಹುದು.

**

ಗಾಂಧಿನಗರದ ಜನ ನಿಜಕ್ಕೂ ಭ್ರಮಾಧೀನರು. ಭ್ರಮೆಗಳೊಂದಿಗೆ ಮೂಢನಂಬಿಕೆ ಸೇರಿಕೊಂಡು ನರಳುವ ರೋಗಿಷ್ಠರನ್ನು ನಾವು ಗಾಂಧಿನಗರದಲ್ಲಿ ಯಥೇಚ್ಛವಾಗಿ ಕಾಣಬಹುದು. ಅತಿ ಕಡಿಮೆ ಅವಧಿಯಲ್ಲಿ ಹಣ ಹೂಡಿ ಲಾಭ ಮಾಡಬಹುದು ಎಂದುಕೊಂಡಿರುವುದರಿಂದಲೇ ಈ ಕ್ಷೇತ್ರದಲ್ಲಿ ಸಭ್ಯರಿಗಿಂತ ವಂಚಕರು ಮತ್ತು ತೋಳ್ಬಲ ಉಳ್ಳ ಗೂಂಡಾಗಳ ಪ್ರಾಬಲ್ಯ ಹೆಚ್ಚುತ್ತಿದೆ.

ಈಚೆಗೆ ಕನ್ನಡದ ದೊಡ್ಡ ನಟರೊಬ್ಬರು, “ನನಗೆ ಕನ್ನಡ ಚಿತ್ರರಂಗದ ನಿರ್ಮಾಪಕರಿಂದ ಆದ ಚೆಕ್ ಬೌನ್ಸ್ ವಂಚನೆ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬೇಕಾದರೆ, ಬೌನ್ಸ್ ಆಗಿರುವ ಚೆಕ್‌ಗಳನ್ನು ಒಂದು ಲಾರಿಯಲ್ಲಿ ಸಾಗಿಸಬೇಕಾಗುತ್ತದೆ,” ಎಂದು ಹೇಳಿಕೊಂಡಿದ್ದರು. ಸಿನಿಮಾ ರಂಗದಲ್ಲಿ ವಂಚನೆಗಳು ತೀರಾ ಸಾಮಾನ್ಯ ಅನ್ನಿಸುವಂತೆ ದಿನನಿತ್ಯ ಘಟಿಸುತ್ತವೆ. ದೊಡ್ಡ ನಟನಟಿಯರಿಗಾದ ವಂಚನೆಗಳನ್ನು ಮಾತ್ರ ನಾವು ಪತ್ರಿಕೆಗಳಲ್ಲಿ ಓದಿಕೊಂಡು ಸುಮ್ಮನಾಗುತ್ತೇವೆ. ಚಿತ್ರರಂಗವನ್ನೇ ದಿನಪೂರ್ತಿ ನಂಬಿಕೊಂಡು ಬದುಕುತ್ತಿರುವ ಸಿನಿಮಾ ಕಾರ್ಮಿಕರು, ಅಂದರೆ ಲೈಟ್‌ಬಾಯ್‌ಗಳಿಂದ ಹಿಡಿದು ಸಹನಿರ್ದೇಶಕರು ಎದುರಿಸುವ ವಂಚನೆಯ ಪ್ರಮಾಣ ಹೆದರಿಕೆ ಹುಟ್ಟಿಸುವಂತಿದೆ. ಕನ್ನಡದ ದೊಡ್ಡ ನಟನಟಿಯರು ತಮ್ಮ ಪ್ರಭಾವಗಳನ್ನು ಬಳಸಿಕೊಂಡು ಹತ್ತು ಬರುವ ಕಡೆ ಆರೋ ಏಳೋ ಪಡೆದು ಸುಮ್ಮನಾಗುತ್ತಾರೆ. ಆದರೆ ಸಿನಿಮಾರಂಗದ ಕೂಲಿಕಾರ್ಮಿಕರನ್ನು ವಂಚಿಸುವುದು ತುಂಬ ಸುಲಭ. ಸದಾ ಅನಿಶ್ಚಿತ ಬದುಕು ಸಾಗಿಸುವ ಈ ಕೂಲಿಕಾರ್ಮಿಕರು ಬಂಡೇಳುವ ಗುಣವನ್ನು ತೋರಿಸಿದರೆ ಒಂದೋ ಉಪವಾಸ ಬೀಳಬೇಕಾಗುತ್ತದೆ; ಇಲ್ಲವೆಂದರೆ ಸಂಪೂರ್ಣವಾಗಿ ಚಿತ್ರರಂಗದಿಂದಲೇ ದೂರಾಗಬೇಕಾಗುತ್ತದೆ.

ಕನ್ನಡ ಚಿತ್ರರಂಗವನ್ನೇ ಬಲವಾಗಿ ನಂಬಿಕೊಂಡಿರುವ ಸಿನಿಮಾ ಕಾರ್ಮಿಕರ ರಕ್ಷಣೆಗೆಂದೇ ಇಲ್ಲಿ ಪ್ರಬಲವಾದ ಕಾಯ್ದೆಯೊಂದು ಇದುವರೆವಿಗೂ ರಚನೆಯಾಗಿಲ್ಲ. ಈ ಜನರ ಉಳಿವಿನ ಪ್ರಶ್ನೆಯನ್ನು ಕನ್ನಡದ ಯಾವೊಬ್ಬ ನಟರೂ ಈ ಕ್ಷಣದವರೆಗೂ ಸರ್ಕಾರದ ಗಮನಕ್ಕೆ ತಂದಿಲ್ಲ. ತಮ್ಮ ಪುಡಿ ಚಿತ್ರಗಳು ಐವತ್ತು, ನೂರು ದಿನಗಳ ಗಡಿ ದಾಟಿದಾಗ ಸಾವಿರ ಯುದ್ಧ ಗೆದ್ದುಬಂದ ಸಂಭ್ರಮದಲ್ಲಿ ವರ್ತಿಸುವ ಗಾಂಧಿನಗರದ ನಿರ್ಮಾಪಕರು, ತಮ್ಮ ಸಿನಿಮಾ ಐವತ್ತು ನೂರು ದಿನಗಳನ್ನು ಮುಟ್ಟಲು ಲೈಟ್‌ಬಾಯ್ ಕ್ಲಾಪ್‌ಬಾಯ್‌ಗಳಿಂದ ಮೊದಲ್ಗೊಂಡು ಎಲ್ಲರೂ ಕೊಟ್ಟಿರುವ ಕಾಣಿಕೆ ಬೆಲೆಯುಳ್ಳದ್ದು ಎಂಬ ತಿಳುವಳಿಕೆ ದಕ್ಕಿಸಿಕೊಂಡಿದ್ದರೆ, ಈ ಬಡಪಾಯಿಗಳು ತಮಗೆ ಸಿಗುವ ಅವಕಾಶಗಳಲ್ಲಿ ಇನ್ನೂ ಹೆಚ್ಚು ಉತ್ಸಾಹದಿಂದ ದುಡಿಯುತ್ತಿದ್ದರೇನೋ.

**

ಇಷ್ಟೆಲ್ಲದರ ನಡುವೆಯೂ ಕನ್ನಡ ಸಿನಿಮಾರಂಗಕ್ಕಿರುವ ಸಾಧ್ಯತೆ, ಸವಾಲುಗಳನ್ನು ಹೀಗೆ ಪಟ್ಟಿಮಾಡಿ ನೋಡಬಹುದು:

ಸಾಧ್ಯತೆಗಳು:

  1. ಭ್ರಮೆ ಮತ್ತು ಮೂಢನಂಬಿಕೆಗಳಿಂದ ಹೊರಬರದಿದ್ದರೆ ಕನ್ನಡ ಸಿನಿಮಾರಂಗ ಪತನವಾಗುವುದು ಖಚಿತ. ತಮ್ಮ ಮಿತಿ ಮತ್ತು ದೌರ್ಬಲ್ಯಗಳನ್ನು ಗಾಂಧಿನಗರದ ಜನ ಮೊದಲು ಅರಿತುಕೊಳ್ಳಬೇಕು. ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸಿದರೆ ಮತ್ತು ಎಂಥ ಕಳಪೆ ಚಿತ್ರಕ್ಕೂ ಡಿ.ಟಿ.ಎಸ್ ತಂತ್ರಜ್ಞಾನ ಅಳವಡಿಸಿಬಿಟ್ಟರೆ ಸಾಕು, ಸಿನಿಮಾ ಗೆದ್ದುಬಿಡುತ್ತದೆ ಎಂಬ ಹುಂಬ ವಿಶ್ವಾಸದಿಂದ ಈ ಜನ ಮೊದಲು ಹೊರಬರಬೇಕು.
  2. ಹೊರರಾಜ್ಯ ಮತ್ತು ವಿದೇಶಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ದಕ್ಕುವುದು ಹೇಗೂ ಕನಸಿನ ಮಾತು. ಮೊದಲು ಕರ್ನಾಟಕದ ಜನ ಒಪ್ಪುವಂತಹ ಸಿನಿಮಾ ನಿರ್ಮಿಸಿ, ಕಡಿಮೆ ಪ್ರವೇಶ ದರಗಳನ್ನಿಟ್ಟು ಜನರನ್ನು ಸೆಳೆಯಬೇಕು.
  3. ರಿಯಲ್ ಎಸ್ಟೇಟ್ ರಾಕ್ಷಸರನ್ನು, ಮೀಟರ್ ಬಡ್ಡಿ ದುಡ್ಡಿನ ಅಡ್ಡಕಸುಬಿ ಜನರನ್ನು ಗಾಂಧಿನಗರದ ಜನ ಇನ್ನಾದರೂ ದೂರವಿಡಲಿ.
  4. ಇಡೀ ಸಿನಿಮಾದ ಕಾರ್ಮಿಕರಿಗೆಲ್ಲ ಸಂಬಂಧಿಸಿದಂತೆ ಏಕರೂಪ ನೀತಿ ಸಂಹಿತೆಯೊಂದು ರಚನೆಯಾಗುವಂತೆ ಗಾಂಧಿನಗರದ ಜನ ಸರ್ಕಾರದ ಮೇಲೆ ಒತ್ತಡ ತರಬೇಕು.
  5. ವರ್ಷಕ್ಕೆ ಐವತ್ತಕ್ಕಿಂತ ಹೆಚ್ಚು ಚಿತ್ರಗಳ ನಿರ್ಮಾಣವಾಗದಂತೆ ನೀತಿಯೊಂದನ್ನು ರೂಪಿಸಬೇಕು. ಐವತ್ತರ ನಂತರ ಬರುವ ಸಿನಿಮಾಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡದಂತೆ, ಸರ್ಕಾರದ ಸಬ್ಸಿಡಿಗೆ ಅರ್ಜಿ ಹಾಕಲು ಅವಕಾಶವಾಗದಂತೆ ನಿಯಮಾವಳಿಯನ್ನು ಗಾಂಧಿನಗರದ ಜನ ಸರ್ಕಾರದ ಜತೆಗೂಡಿ ರೂಪಿಸಿದರೆ ಇಡೀ ಕನ್ನಡ ಸಿನಿಮಾರಂಗಕ್ಕೆ ಒಳಿತಾದೀತು.
  6. ಮಹಿಳಾ ನಟಿಯರನ್ನು ಮತ್ತು ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಜನರಿಗೆ ಕಾನೂನಿನ ಮೂಲಕ ಕ್ರಿಮಿನಲ್ ಸ್ವರೂಪದ ಶಿಕ್ಷೆಯಾಗುವಂತಹ, ಜೊತೆಗೆ ಅಂಥವರನ್ನು ಕನ್ನಡ ಸಿನಿಮಾರಂಗದಿಂದ ದೂರವಿಡುವಂತೆ ಕ್ರಮ ಜರುಗಿಸಬೇಕು.

ಸವಾಲುಗಳು:

  1. ಒಬ್ಬ ಕ್ರಿಕೆಟ್ ಪಟುವನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವಾಗ ಆತ ರಣಜಿಯಂತಹ ದೇಶೀಯ ಕ್ರಿಕೆಟ್ನಲ್ಲಿ ತೋರಿದ ಸಾಮಥ್ರ್ಯವನ್ನು ಪರಿಗಣಿಸುವಂತೆ ನೀನಾಸಂ, ರಂಗಾಯಣ ಮತ್ತು ಕಿರುತೆರೆಯ ಕಲಾವಿದರನ್ನು ಅವರ ಪ್ರತಿಭೆಯ ಆಧಾರದ ಮೇಲೆ ದೊಡ್ಡ ತೆರೆಗೆ ದಾಟಿಸಲು ಇರುವ ಅಡ್ಡಿಗಳೇನು?
  2. ಗಾಂಧಿನಗರದ ಒಳಜಗಳಗಳು ಬೀದಿಗೆ ಬಂದು ಹರಾಜಾಗುತ್ತಿವೆ. ಗಾಂಧಿನಗರದ ಈ ಸಿನಿಮಾ ಜನರನ್ನು ನಿಯಂತ್ರಿಸುವ ಶಿಸ್ತುಸಮಿತಿ ದಲ್ಲಾಳಿಯಂತೆ ವರ್ತಿಸುತ್ತಿರುವುದೇ ಅಲ್ಲಿನ ಸಣ್ಣಪುಟ್ಟ ತಂಟೆ ತಕರಾರುಗಳು ದೊಡ್ಡ ವಿವಾದಗಳಂತೆ ಕಾಣಿಸಿಕೊಳ್ಳಲು ಕಾರಣ. ಇವನ್ನೆಲ್ಲ ನಿಯಂತ್ರಿಸಲು ಗಾಂಧಿನಗರಕ್ಕೆ ಮಿಲಿಟರಿ ಸೈನ್ಯ ಬರಬೇಕೇ?
  3. ಪರಭಾಷಾ ಚಿತ್ರಗಳನ್ನು ಹಂಚಿಕೆದಾರರು ಬಿಡುಗಡೆಯಾದ ಏಳು ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ಅಲಿಖಿತ ಶಾಸನವೊಂದು ಜಾರಿಗೆ ಬಂತು, ನಂತರ ಅದು ಮೂರು ವಾರಗಳಿಗೆ ಇಳಿಯಿತು. ಈಗ ಬಿಡುಗಡೆಯಾದ ದಿನವೇ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳು ರಾರಾಜಿಸುತ್ತಿವೆ. ಇಚ್ಛಾಶಕ್ತಿಯ ಕೊರತೆ ಇರುವ ಕನ್ನಡ ಚಿತ್ರರಂಗದವರಿಗೆ ಏನು ಹೇಳುವುದು?
  4. ರೀಮೇಕ್ ಚಿತ್ರಗಳಿಗೆ, ಅರ್ಧಂಬರ್ಧ ಕದ್ದು ಮಾಡಿದ ಚಿತ್ರಗಳಿಗೆ, ಶೇಕಡ 90ರಷ್ಟು ಕನ್ನಡದ ಕಲಾವಿದರನ್ನು ಬಳಸಿಕೊಳ್ಳದ ಚಿತ್ರಗಳಿಗೆ, ಕನ್ನಡ ಭಾಷೆಯನ್ನು ವಿಕೃತಗೊಳಿಸುವ ಚಿತ್ರಗಳಿಗೆ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ಹೇಳಲು ಸರ್ಕಾರಕ್ಕೇಕೆ ಸಾಧ್ಯವಾಗುತ್ತಿಲ್ಲ?
  5. ಸೃಜನಶೀಲ ಮತ್ತು ಸದಭಿರುಚಿಯ ಚಿತ್ರಗಳಿಗೆ ಮಾತ್ರ ಸಂಪೂರ್ಣ ತರಿಗೆ ವಿನಾಯಿತಿ ನೀಡಿ, ಚಿತ್ರಮಂದಿರಗಳ ಮೇಲೆ ಖಾಸಗಿಯವರ ಹಿಡಿತ ತಪ್ಪಿಸಿ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲವೇ?
  6. ಎ, ಬಿ, ಮತ್ತು ಸಿ ಕೇಂದ್ರಗಳಲ್ಲಿ ಟಿಕೆಟ್ ಶುಲ್ಕವನ್ನು ರಾಜಧಾನಿ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಾಂತರ ವಿಭಾಗಗಳಾಗಿ ಪ್ರತ್ಯೇಕಿಸಿ ಭಿನ್ನ ದರಗಳಲ್ಲಿ ಜಾರಿಗೆ ತರಲು ಸಾಧ್ಯವಾದರೆ ಚಿತ್ರಮಂದಿರಗಳತ್ತ ಒಂದಷ್ಟು ಜನರನ್ನು ಸೆಳೆಯಬಹುದಲ್ಲವೆ?

**

ಕೊನೆಯದಾಗಿ, ಕ್ರಿಕೆಟ್ ಮತ್ತು ಸಿನಿಮಾ ಈ ದೇಶದ ಅಧಿಕೃತ ಧರ್ಮಗಳಾಗಬಲ್ಲವು ಎಂದು ಕವಿ ಜಾವೇದ್ ಅಖ್ತರ್ ಹೇಳಿದ ಮಾತು ನೆನಪಾಗುತ್ತಿದೆ. ಇಲ್ಲಿ ಬದುಕಿನ ವ್ಯಂಗ್ಯ ವಿಪರ್ಯಾಸಗಳು ಹೇಗಿರುತ್ತವೆಂದರೆ, “ಎಲ್ಲ ಮಾಯ ನಾಳೆ ನಾವೂ ಮಾಯ” ಎಂಬ ಪ್ರಾಸಬದ್ಧ ಹಾಡು ತುರುಕಿ ತೆರೆಯ ಮೇಲೆ ತೋರಿಸುವ ಮಂದಿಗೆ ಈ ಸರ್ಕಾರ “ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ” ಪ್ರಶಸ್ತಿ ಕೊಡಲು ಮುಂದಾಗುತ್ತದೆ. ಅದೇ ಹಾಡಿನ ನಾಲ್ಕು ಸಾಲನ್ನು ಬೀದಿ ಹೋರಾಟಗಳಲ್ಲಿ ಬಳಸಿಕೊಂಡವರ ಕುರಿತು, “ಅವರು ನಕ್ಸಲರು. ಅವರ ಮೇಲೆ ಕಣ್ಣಿರಲಿ” ಎಂಬುದಾಗಿ ಪೊಲೀಸರಿಗೆ ಆದೇಶಿಸುತ್ತದೆ.

ಈ ತಾತ್ವಿಕತೆಯೇನೇ ಇರಲಿ, ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಸಂಪೂರ್ಣ ನೋಡುವ ಬದಲು ಅರ್ಧದಲ್ಲಿಯೇ ಎದ್ದು ಬಂದ ಸಂದರ್ಭಗಳನ್ನು ಹೆಚ್ಚಾಗಿ ಎದುರುಗೊಂಡಿರುವ ನನಗೆ, “If you can’t believe a little in what you see on the screen, it’s not worth wasting your time on cinema” ಎಂಬ Serge Daney ಯ ಮಾತುಗಳು ವಿಷಾದದ ಜೊತೆಗೆ ಖುಷಿಯನ್ನೂ ಉಂಟುಮಾಡಿವೆ ಎಂಬುದು ನಿಜ.

**

ಕೆ.ಎಲ್.ಚಂದ್ರಶೇಖರ್ ಐಜೂರ್
ಸಂಶೋಧಕ,
“ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ”
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ,
ಅಂಚೆ ಪೆಟ್ಟಿಗೆ ಸಂ. 7201,
ನಾಗರಭಾವಿ, ಬೆಂಗಳೂರು – 560 072

ಪಾಪು-ಕಂಬಾರ ಮತ್ತು ಕುವೆಂಪು-ಬೇಂದ್ರೆ

– ಡಾ.ಎನ್.ಜಗದೀಶ್ ಕೊಪ್ಪ

ಡಾ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಪಾಟೀಲ ಪುಟ್ಟಪ್ಪನವರನ್ನು 22ರ ಬುಧವಾರ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಗೆಳೆಯರ ಜೊತೆ ಬೇಟಿ ಮಾಡಿದೆ. ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಬಗ್ಗೆ ನನಗೆ ವಿಸ್ಮಯ ಉಂಟುಮಾಡಿತು.

ಪುಟ್ಟಪ್ಪನವರ ವಾದವೆಂದರೆ, ಕಂಬಾರರು ಹಲವರ ಜಾನಪದ ಕೃತಿಯ ವಸ್ತುವನ್ನು ಕದ್ದಿದ್ದಾರೆ, ಕಂಬಾರರ ಲಕ್ಷಾಧಿಪತಿ ರಾಜನ ಕಥೆ ಮುದೆನೂರು ಸಂಗಣ್ಣ ಸಂಗ್ರಹಿದ ಜಾನಪದ ಕಥೆ. ಇದಕ್ಕೆ ಸಂಗಣ್ಣ ಬರೆದ ಪತ್ರ ಅವರಲ್ಲಿದೆಯಂತೆ. ಹಾಗಾಗಿ ಕಂಬಾರರು ಪ್ರಶಸ್ತಿಗೆ ಯೋಗ್ಯರಲ್ಲ. ಪುಟ್ಟಪ್ಪನವರ ವಾದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ, ಸಮಯ ಅದಾಗಿರಲಿಲ್ಲ. ಏಕೆಂದರೆ, ವೈದ್ಯರು ಪಿಸಿಯೋಥೆರೆಪಿ ಚಿಕಿತ್ಸೆ ನೀಡಲು ನಾವು ಹೊರಹೋಗವುದನ್ನೇ ಕಾಯುತಿದ್ದರು.

ಪುಟ್ಟಪ್ಪನವರು ಕನ್ನಡ ನಾಡು ನುಡಿ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಾರೆ, ಅದರೆ ನಮ್ಮ ಜಾನಪದ ಕಥಾ ಪರಂಪರೆ, ಮೌಖಿಕ ಕಾವ್ಯ ಪರಂಪರೆಯ ಬಗ್ಗೆ ಏಕೆ ತಿಳಿದುಕೊಂಡಿಲ್ಲ?

ಜಾನಪದ ಕಥೆಯಾಗಲಿ, ಹಾಡಾಗಲಿ ಅವು ಯಾರೊಬ್ಬರ ಸ್ವತ್ತಲ್ಲ. ಅವುಗಳ ನಿಜ ವಾರಸುದಾರರು ನಮ್ಮ ಜನಪದರು. ಬಾಯಿಂದ ಬಾಯಿಗೆ, ಎದೆಯಿಂದ ಎದಗೆ ಹರಿದು ಬಂದ ಜಾನಪದ ಸಾಹಿತ್ಯ ಸೃಜನಶೀಲರ ಮನಸ್ಸು ಮತ್ತು  ಬಾಯಲ್ಲಿ ಹಲವು ರೂಪಗಳಲ್ಲಿ ಮೈದಾಳಿ ಇಂದು ನಮ್ಮೆದುರು ಹರಡಿಕೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಜನರ ಸಂಪತ್ತು. ಇಂದು ನಮ್ಮೆದೆರು ಇರುವ ಮಂಟೆಸ್ವಾಮಿ ಕಾವ್ಯವಾಗಲಿ, ಮಲೆ ಮಹದೇಶ್ವೇರ ಕಾವ್ಯವಾಗಲಿ, ಜನಪದ ಮಹಾಭಾರತವಾಗಲಿ ಇವೆಲ್ಲವು ಹಲವು ರೂಪಗಳನ್ನು ದಾಟಿ ಬಂದ ಜನಪದ ಕಾವ್ಯಗಳಾಗಿವೆ.

ಕಂಬಾರರು ಸೃಷ್ಟಿಸಿದ ಸಂಗ್ಯಾ-ಬಾಳ್ಯ, ಜೋಕುಮಾರಸ್ವಾಮಿ, ಕರಿಮಾಯಿ, ಋಷ್ಯಶೃಂಗ, ಲಕ್ಷಾಧಿಪತಿರಾಜನ ಕಥೆ, ಇವೆಲ್ಲವೂ ನಮ್ಮ ಜನಪದರ ನಡುವಿನಿಂದ ಎತ್ತಿಕೊಂಡ ಕಥೆಗಳ ಹಂದರದಿಂದ ಕೂಡಿದ ನಾಟಕಗಳು. ಇದನ್ನು ಕಂಬಾರು ಎಂದೂ ಅಲ್ಲಗೆಳದಿಲ್ಲ. ನಿಜ, ಆದರೆ, ಈ ನಾಟಕಗಳ ಸೃಷ್ಟಿಯಲ್ಲಿ ಕಾರ್ಯನಿರ್ವಹಿಸಸಿರುವ ಕಂಬಾರರ ಸೃಜನ ಶೀಲತೆಯನ್ನು ನಾವು ಅಲ್ಲಗೆಳೆಯಲು ಸಾಧ್ಯವೆ?

ಇನ್ನೊಂದು ಗಮನಿಸಬೆಕಾದ ಮುಖ್ಯ ಸಂಗತಿಯಂದರೆ, ಎ.ಕೆ. ರಾಮಾನುಜನ್ ರವರು ಸಂಪಾದಿಸಿದ ದಕ್ಷಿಣ ಭಾರತದ ಜಾನಪದ ಕಥೆಗಳು ಸಂಗ್ರಹದ ಕಥೆಯೊಂದರ ತಿರುಳನ್ನು ಇಟ್ಟುಕೊಂಡು ಗಿರೀಶ್ ಕಾರ್ನಾಡ್ ನಾಗಮಂಡಲ ನಾಟಕ ರಚಿಸಿದರೆ, ಕಂಬಾರರು ಇದೇ ಕಥೆಯನ್ನಾಧರಿಸಿ ಸಿರಿಸಂಪಿಗೆ ನಾಟಕ ರಚಿಸಿದರು. ಇವುಗಳನ್ನು ರಾಮಾನುಜನ್ ಕಥೆಗಳ ಕೃತಿಚೌರ್ಯ ಎಂದು ಕರೆಯಲು ಸಾಧ್ಯವೆ? ಒಂದೇ ಕಥೆಯನ್ನ ಕನ್ನಡದ ಎರಡು ಅನನ್ಯ ಪ್ರತಿಭೆಗಳು ವಿಭಿನ್ನ ರೀತಿ ಗ್ರಹಿಸಿ ನಿರ್ವಹಿಸಿರುವುದು ಕನ್ನಡದ ರಂಗಭೂಮಿಯಲ್ಲೊಂದು ದಾಖಲೆ ಜೊತೆಗೆ  ಹೆಮ್ಮೆಯ ಸಂಗತಿ.

ಮೂಲತಃ ರಾಮಾನುಜನ್ ಕಥೆಯ ವಾರಸುದಾರರಲ್ಲದಿದ್ದರೂ ಕೂಡ, ಅವರ ಸೃಜನಶೀಲ ಮನಸ್ಸು ಇಂತಹ ಕಥೆಗಳ ಆಯ್ಕೆಯ ಹಿಂದೆ ಕೆಲಸ ಮಾಡಿದೆ

ಕಂಬಾರರ ಜನಪ್ರಿಯ ನಾಟಕ ಸಂಗ್ಯಾ ಬಾಳ್ಯ ಬಂದ ನಂತರವೂ ಅವರ ಸಹಪಾಠಿಯಾಗಿದ್ದ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲ್ಬುಗರ್ಿ ನಾಟಕದ ಮೂಲ ರೂಪವನ್ನು ಸಂಗ್ರಹಿಸಿ ಖರೇ ಸಂಗ್ಯಾ-ಬಾಳ್ಯ ಎಂದು ಪ್ರಕಟಿಸಿದ್ದಾರೆ. ಇಂದು ಉತ್ತರ ಕನರ್ಾಟಕದಲ್ಲಿ ಶ್ರೀ ಕೃಷ್ಣ ಪಾರಿಜಾತ ಹಾಗು ಸಂಗ್ಯಾ ಬಾಳ್ಯ ಹಲವು ರೂಪದಲ್ಲಿ ಪ್ರದಶರ್ೀತವಾಗುತ್ತಿವುದು ಪುಟ್ಟಪ್ಪನವರಿಗೆ ತಿಳಿಯದ ಸಂಗತಿಯೆನಲ್ಲ.

ಕಂಬಾರರ ಪ್ರತಿಭೆಯನ್ನು ಅವರ ನಾಟಕಗಳ ಮೂಲಕ ಅಳೆಯಲು ಹೊರಟ ಪುಟ್ಟಪ್ಪನವರಿಗೆ ಅವರ ಹೇಳತೇನ ಕೇಳ ಮುಂತಾದ ಕಾವ್ಯಗಳಾಗಲಿ, ಸಿಂಗಾರವ್ವ ಮತ್ತು ಅರಮನೆ, ಶಿಖರ ಸೂರ್ಯದಂತಹ  ಕಾದಂಬರಿಗಳೇಕೆ ಗೋಚರಿಸಲಿಲ್ಲ?

ಜ್ಙಾನಪೀಠ ಪ್ರಶಸಿ ಎಂಬುದು ಯಾವುದೇ ಸಕರ್ಾರ ಕೊಡುವಂತಹದ್ದಲ್ಲ. ಅದಕ್ಕೆ ಅದರದೇ ಆದ ಆಯ್ಕೆ ಪ್ರಕ್ರಿಯೆಗಳಿವೆ. ಜಾತಿಯ ಬೆಂಬಲ. ಮಠಾಧೀಶರ, ರಾಜಕಾರಣಿಗಳ ಕುಮ್ಮಕ್ಕಿನಿಂದ ಪಡೆಯುವ ರಾಜ್ಯೋತ್ಸವ ಪ್ರಶಸ್ತಿ ಅದಲ್ಲ. ಲಾಬಿಯ ಬಗ್ಗೆ ಮಾತನಾಡುವ ಪುಟ್ಟಪ್ಪನವರಿಗೆ ಈ ವಾಸ್ತವಗಳು ಏಕೆ ಅರ್ಥವಾಗುತ್ತಿಲ್ಲ?

ಕನ್ನಡದಲ್ಲಿ ಬೈರಪ್ಪ ಮಾತ್ರವಲ್ಲ ಜಿ.ಎಸ್. ಶಿವರುದ್ರಪ್ಪ, ಯಶವಂತಚಿತ್ತಾಲ, ಕುಂ.ವೀರಭದ್ರಪ್ಪ ಮುಂತಾದ ಶಕ್ತಿವಂತ ಲೇಖಕರು ಜ್ಙಾನಪೀಠ ಪ್ರಶಸ್ತಿಗೆ ಯೋಗ್ಯರಿದ್ದಾರೆ. ಇಂತಹ ಸಂದರ್ಭದಲ್ಲಿ ಭೈರಪ್ಪನವರ ಪರ ವಕಾಲತ್ತು ವಹಿಸಿ ಕಂಬಾರರನ್ನು ಯೋಗ್ಯರಲ್ಲ ಎಂದು ನಿಂದಿಸುವ ಅಗತ್ಯವಿರಲಿಲ್ಲ. ಕಂಬಾರರು ಈಗಾಗಲೇ ಪದ್ಮಶ್ರಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಪಡೆದು ನಾಟಕಕಾರರಾಗಿ, ಕವಿಯಾಗಿ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡವರು.

ಯಾವುದೇ ಲೇಖಕ ಎಷ್ಟೇ ದೊಡ್ಡವನಿರಲಿ ಆತನಿಗೆ ತನ್ನ ಸಮಕಾಲಿನ ಬರಹಗಾರನ ಬಗ್ಗೆ ಗೌರವ ಸೌಜನ್ಯತೆ ಇರಬೇಕು. ಇದಕ್ಕೆ ಕುವೆಂಪು ನಮ್ಮ ಮುಂದೆ ಉದಾಹರಣೆಯಾಗಿದ್ದಾರೆ.
ಅದು 1960 ದಶಕ ಡಾ. ಪ್ರಭುಶಂಕರರವರು ಕುವೆಂಪು ಮಾರ್ಗದರ್ಶನದಲ್ಲಿ ಭಾವಗೀತೆ ಕುರಿತು ಪಿ.ಹೆಚ್.ಡಿ. ಪದವಿಗಾಗಿ ಅಧ್ಯಯನ ಮಾಡುತಿದ್ದಾಗ ಬೇಂದ್ರೆಯವರ ಕವಿತೆಯೋಂದರ ಸಾಲು “ಮಲ್ಲಿಗಿ ಪಟಪಟನೆ ಬಿರಿದಾವು” ಎಂಬುದರ  ಬಗ್ಗೆ ತಮ್ಮ ಪ್ರಬಂಧದಲ್ಲಿ ಕಟುವಾಗಿ ವಿಮರ್ಶ ಮಾಡಿದ್ದರು. ಹೂವು ಅರಳುವಾಗ ಶಬ್ಧ ಮಾಡುವುದಿಲ್ಲ ಎಂಬುದು ಪ್ರಭುಶಂಕರರ ನಿಲುವಾಗಿತ್ತು. ಪ್ರಬಂಧವನ್ನು ಗಮನಿಸಿದ ಕುವೆಂಪು ಶಿಷ್ಯನನ್ನು ಕರೆದು “ಜಗತ್ತು ಕಾಣದ್ದನ್ನು, ಕೇಳದ್ದನ್ನು ಕವಿ ಕಾಣಬಲ್ಲ, ಕೇಳಬಲ್ಲ ಅದಕ್ಕಾಗಿ ಅವನನ್ನು ಕವಿ ಎಂದು ಕರೆಯುವುದು,” ಎಂದು ಬುದ್ಧಿವಾದ ಹೇಳಿ ವಿಮರ್ಶೆಯನ್ನು ತಿದ್ದುಪಡಿ ಮಾಡಿದರು.

ಇಲ್ಲಿ ಗಮನಿಸಬೇಕಾದ ವಿಶಿಷ್ಟ ಸಂಗತಿಯೆಂದರೆ, ಆ ವೇಳೆಗಾಗಲೆ ಧಾರವಾಡದಲ್ಲಿ ಗೆಳೆಯರ ಬಳಗ ಹೆಸರಿನಲ್ಲಿ ಕೆಲವರು ಬೇಂದ್ರೆ ಪರ ನಿಂತು ಕುವೆಂಪುರವರ ರಾಮಾಯಣ ದರ್ಶನಂ ನಿಂದ ಹಿಡಿದು ಅವರ ಕವಿತೆಗಳ ಮೇಲೆ ಟೀಕೆ ಮಾಡುತ್ತಾ ನಿರಂತರ ವಾಗ್ಧಾಳಿ ನಡೆಸುತಿದ್ದರು. ಈ ಕುರಿತು ಕುವೆಂಪುಗೆ ಬೇಂದ್ರೆ ಬಗ್ಗೆಯಾಗಲಿ, ಅವರ ಗೆಳೆಯರ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ. ಕುವೆಂಪು ಬೇಂದ್ರೆಯವನ್ನು ಕನ್ನಡದ ದೊಡ್ಡ ಕವಿ ಎಂದೇ ಭಾವಿಸಿದ್ದರು. ಬೇಂದ್ರೆಗೂ ಕೂಡ ಕುವೆಂಪು ಬಗ್ಗೆ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿಯೆಂದರೆ, ಕುವೆಂಪು ಕುರಿತು ಬೇಂದ್ರೆ ಬರೆದ ಕವಿತೆಯ ಸಾಲುಗಳೇ ಸಾಕು.

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣದರ್ಶನದಿಂದಲೇ ಕೈ
ಮುಗಿದ ಕವಿಗೆ-ಮಣಿಯದವರು ಆರು?

ಇದು ಕನ್ನಡದ ಇಬ್ಬರು ಮಹಾನ್ ಕವಿಗಳು ಪರಸ್ಪರ ಹೊಂದಿದ್ದ ಗೌರವ ಮತ್ತು ಸಹೃದಯತೆಯ ಭಾವನೆಗಳಿಗೆ ಸಾಕ್ಷಿ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಮೂಲಕ ಕೀರ್ತಿಯ ಕಿರೀಟಕ್ಕೆ ಮತ್ತೋಂದು ಗರಿ ಮುಡಿಸಿದ ಕಂಬಾರರ ಬಗ್ಗೆ ಕನ್ನಡಿಗರು ಸಂಭ್ರಮಿಸುತ್ತಿರುವಾಗ, ಯಜಮಾನನ ಸ್ಥಾನದಲ್ಲಿರುವ ಪಾಟೀಲ ಪುಟ್ಟಪ್ಪ ಈ ರೀತಿ ಪ್ರತಿಕ್ರಿಯಸಬಹುದೆ?

ಇದು ಸಂಕಟದಿಂದ ಕೇಳಲೇಬೇಕಾದ ಪ್ರಶ್ನೆ.

Three Gorges Dam

ಜೀವನದಿಗಳ ಸಾವಿನ ಕಥನ – 4

– ಡಾ.ಎನ್.ಜಗದೀಶ್ ಕೊಪ್ಪ

ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಜಲವಿದ್ಯುತ್ಗಾಗಿ ಅಸಂಖ್ಯಾತ ಅಣೆಕಟ್ಟುಗಳು ನಿರ್ಮಾಣಗೊಂಡವು. ರಷ್ಯಾದ ಮಹಾನದಿಯಾದ ವೋಲ್ಗಾ ನದಿಯೊಂದಕ್ಕೇ ಆರು ಅಣೆಕಟ್ಟೆಗಳನ್ನು ನಿರ್ಮಿಸಲಾಯಿತು.

ಯೂರೋಪ್, ಅಮೆರಿಕಾ, ರಷ್ಯಾವನ್ನು ಹೊರತುಪಡಿಸಿದರೆ, ಏಷ್ಯಾದ ಬಹುತೇಕ ರಾಷ್ಟ್ರಗಳು 19 ಮತ್ತು 21ನೇ ಶತಮಾನದಲ್ಲಿ ಬ್ರಿಟೀಷ್ ವಸಾಹತು ಪ್ರದೇಶಗಳಾಗಿದ್ದ ಕಾರಣ, ಇಲ್ಲಿ ಬ್ರಿಟೀಷರ ಅವಶ್ಯಕತೆಗೆ ತಕ್ಕಂತೆ (ಭಾರತವೂ ಸೇರಿ) ಹಲವು ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

ಬ್ರಿಟೀಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಒಣ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಕಬ್ಬು ಮತ್ತು ಹತ್ತಿ ಬೆಳೆಯಲು ಪ್ರೋತ್ಸಾಹಿಸಿದರು. ಇದರಲ್ಲಿ ಅವರ ಸ್ವ-ಹಿತಾಸಕ್ತಿಯೂ ಅಡಗಿತ್ತು. ಇಂಗ್ಲೆಂಡ್‌ನ ಕೈಗಾರಿಕೆಗಳಿಗೆ ತಮ್ಮ ವಸಾಹತು ಪ್ರದೇಶಗಳಿಂದ ಕಚ್ಛಾ ವಸ್ತುಗಳನ್ನು ಸರಬರಾಜು ಮಾಡುವುದು ಅವರ ಗುರಿಯಾಗಿತ್ತು.

1902ರಲ್ಲಿ ಇದೇ ಬ್ರಿಟೀಷರು ಈಜಿಪ್ಟ್‌ನ ನೈಲ್ ನದಿಗೆ ಐಸ್ವಾನ್ ಅಣೆಕಟ್ಟು ನಿರ್ಮಿಸಿ, ಅಲ್ಲಿ ಹತ್ತಿ ಬೆಳೆಯುವಂತೆ ಪ್ರೋತ್ಸಾಹಿಸಿ, ಲಂಕಾಷ್ವರ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಾಗುವಂತೆ ನೋಡಿಕೊಂಡರು.

ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ಉಂಟಾದ ರಾಜಕೀಯ ವಿದ್ಯಾಮಾನಗಳಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಬ್ರಿಟೀಷರಿಂದ ಮುಕ್ತಿ ಪಡೆದವು. ಅಷ್ಟರ ವೇಳೆಗೆ ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಅಣೆಕಟ್ಟುಗಳ ನಿರ್ಮಾಣವೊಂದೇ ಮಾರ್ಗ ಮತ್ತು ಮುಕ್ತಿ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿದ್ದ ಕಾರಣ, ಇದು ಸ್ವಾತಂತ್ರ್ಯಾ ನಂತರ ಭಾರತದ ನಾಯಕರ ಮೇಲೂ ಪ್ರಭಾವ ಬೀರಿತು. ಈ ಕಾರಣಕ್ಕಾಗಿಯೇ 1947 ರಿಂದ 1980 ರವರೆಗೆ ರಾಷ್ಟ್ರದ ಒಟ್ಟು ಖರ್ಚಿನಲ್ಲಿ ಶೇ.15 ರಷ್ಟನ್ನು ಭಾರತ ಸರಕಾರ ಅಣೆಕಟ್ಟುಗಳ ನಿರ್ಮಾಣಕ್ಕೇ ಮೀಸಲಾಗಿಟ್ಟಿತು. 1980 ರ ವೇಳೆಗೆ ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಮಧ್ಯಮ ಹಾಗೂ ಬೃಹತ್ ಗಾತ್ರದ ಅಣೆಕಟ್ಟುಗಳು ನಿರ್ಮಾಣಗೊಂಡವು.

ಇದರ ಪರಿಣಾಮವೆಂದರೆ, ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞರಿಗೆ ಅಣೆಕಟ್ಟುಗಳ ನಿರ್ಮಾಣ ಕುರಿತಂತೆ ಸಲಹೆ, ತಂತ್ರಜ್ಞಾನ ನೀಡುವ ವೃತ್ತಿ ಒಂದು ಬೃಹತ್ ದಂಧೆಯಾಗಿ ಬೆಳೆಯಿತು. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಿಸಿರುವ ಚೀನಾ ದೇಶಕ್ಕೆ 1949 ರವರೆಗೆ ರಷ್ಯಾ, ಹಾಗೂ 1960 ರವರೆಗೆ ಅಮೆರಿಕಾದ ಇಂಜಿನಿಯರ್ಗಳು ಸಲಹೆ ನೀಡಿದ್ದಾರೆ.

ಚೀನಾದಲ್ಲಿ 1960 ರಿಂದ 1990 ರವರೆಗೆ ವರ್ಷವೊಂದಕ್ಕೆ 600 ಅಣೆಕಟ್ಟುಗಳು ನಿರ್ಮಾಣಗೊಂಡವು. ಅಲ್ಲಿನ ಹಳದಿ ನದಿಗೆ ನಿರ್ಮಿಸಲಾದ ಜಗತ್ತಿನ ಬೃಹತ್ ಅಣೆಕಟ್ಟು 2005 ರಲ್ಲಿ ಪೂರ್ಣಗೊಂಡಿತು.

ಜಗತ್ತಿನಾದ್ಯಂತ ಅಣೆಕಟ್ಟುಗಳ ನಿರ್ಮಾಣಕ್ಕೆ ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಇಂದು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಣೆಕಟ್ಟುಗಳ ನಿರ್ಮಾಣಕ್ಕಾಗಿ 75 ಶತಕೋಟಿ ಡಾಲರ್ ಹಣವನ್ನು ವಿಶ್ವಬ್ಯಾಂಕ್ ಸಾಲವಾಗಿ ನೀಡಿದೆ. ಇದಲ್ಲದೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಆಹಾರ ಮತ್ತು ಕೃಷಿ ಸಂಘಟನೆ(ಎಫ್.ಎ.ಒ.), ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆಯಡಿ(ಯು.ಎನ್.ಡಿ.ಪಿ.), ಅಮೆರಿಕಾದ ವಿಎಸ್.ಎ.ಐ.ಡಿ. ಸಂಸ್ಥೆ, ಇಂಗ್ಲೆಡ್ನ ಓವರ್ ಸೇಸ್ ಡೆವಲಪ್ಮೆಂಟ್ ಏಡ್ ಸಂಸ್ಥೆಗಳು ಸಹ ಸಾಲದ ನೆರವು ನೀಡುತ್ತಿವೆ.

ಈ ರೀತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಾಯ ನೀಡುತ್ತಿರುವ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು, ಅಣೆಕಟ್ಟುಗಳ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಅಣೆಕಟ್ಟುಗಳ ನಿರ್ಮಾಣ ವೆಚ್ಚ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಆಗುತ್ತಿರುವುದು  ಸಹ ಟೀಕೆಗೆ ಗುರಿಯಾಗಿದೆ.

ಬ್ರೆಜಿಲ್, ಪೆರುಗ್ವೆ ರಾಷ್ಟ್ರಗಳ ಗಡಿಭಾಗದಲ್ಲಿ ನದಿಯೊಂದಕ್ಕೆ 12,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಒಂದು ಅಣೆಕಟ್ಟು (ಇದರ ವೆಚ್ಚ 20 ಶತಕೋಟಿ ಡಾಲರ್) ಹಾಗೂ ಚೀನಾದಲ್ಲಿ 18,200 ಮೆಗಾವ್ಯಾಟ್ ವಿದ್ಯುತ್ ಉತ್ಫಾದನೆಗೆ ನಿರ್ಮಿಸಿದ ಮೂರು ಅಣೆಕಟ್ಟುಗಳು (ಇವುಗಳ ವೆಚ್ಚ 50 ಶತಕೋಟಿ ಡಾಲರ್), ಇವುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಯಾ ರಾಷ್ಟ್ರಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವದಿಂದಾಗಿ ಯಾವುದೇ ಅಣೆಕಟ್ಟು ನಿಗದಿತ ವೇಳೆಗೆ ಪೂರ್ಣಗೊಂಡ ಇತಿಹಾಸವೇ ಇಲ್ಲ. ಈಗಾಗಿ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕೂಡ ಮಿತಿ ಮೀರುತ್ತಿದೆ.

ಹಿಂದೊಮ್ಮೆ ಅಣೆಕಟ್ಟುಗಳು ಭಾರತದ ಪಾಲಿನ ಗುಡಿ-ಗೋಪುರಗಳು ಎಂದು ಹಾಡಿ ಹೊಗಳಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ “ಬೃಹತ್ ಅಣೆಕಟ್ಟುಗಳ ಬಗ್ಗೆ ನಾನು ಮರುಚಿಂತನೆ ನಡೆಸುತ್ತಿದ್ದೇನೆ ಎಂದಿದ್ದರಲ್ಲದೇ, ನಾವು ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ಮಿಸಬಲ್ಲೆವು ಅಷ್ಟೆ. ಆದರೆ ಇವುಗಳಿಂದ ಅರ್ಧದಷ್ಟು ಪ್ರಮಾಣದ ಪ್ರತಿಫಲವಿಲ್ಲ ಎಂಬುದು ಮನದಟ್ಟಾಗಿದೆ” ಎಂದು ಸಂಸತ್ತಿನಲ್ಲಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು (1958).

ಇಂತಹದ್ದೇ ಭಾವನೆಯನ್ನು ರಷ್ಯಾದ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಕಿತಾ ಕೃಶ್ನೇವ್ ವೋಲ್ಗಾ ನದಿಗೆ ಕಟ್ಟಲಾದ ಅಣೆಕಟ್ಟನ್ನು ನಾಡಿಗೆ ಅರ್ಪಿಸುವ ಸಂದರ್ಭದಲ್ಲಿ “ಇಂತಹ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳಿಗಿಂತ, ನದಿಗಳ ನೈಜ ಸ್ಥಿತಿಯನ್ನು ನಾಶ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕ ವಿನಾಶಕ್ಕೆ ಬೆಲೆಕಟ್ಟಲಾಗದು” ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರವಾದಿಗಳಿಂದ ಹುಟ್ಟಿಕೊಂಡ ಪ್ರತಿಭಟನೆಯಿಂದಾಗಿ  ಬೃಹತ್ ಅಣೆಕಟ್ಟುಗಳ ಭ್ರಮೆ ನಿಧಾನವಾಗಿ ಕಳಚತೊಡಗಿದೆ. ಪರಿಸರವಾದಿಗಳ ಉಗ್ರ ಹೋರಾಟದ ಫಲವಾಗಿ ಆಸ್ಟ್ರೇಲಿಯಾದ ಪ್ರಾಂಕ್ಲಿನ್ ಅಣೆಕಟ್ಟು, ಥೈಲಾಂಡ್ನ ನಾಮ್ ಚೊಹಾನ್, ಹಂಗೇರಿಯ ನ್ಯಾಗಿ ಮರೇಗ್, ಭಾರತದ ಕೇರಳ ರಾಜ್ಯದ ಮೌನ ಕಣಿವೆಯ ಅಣೆಕಟ್ಟು, ಬ್ರೆಜಿಲ್ನ ಬಾಬಾಕ್ಸರ್, ರಷ್ಯಾದ ಕಟೂನ್, ಪ್ರಾನ್ಸ್ನ ಸರ್ರೆಡಿ-ಲ-ಪೆರ್ರೆ ಹೀಗೆ ಅನೇಕ ಅಣೆಕಟ್ಟುಗಳ ನಿರ್ಮಾಣ ಯೋಜನೆ ರದ್ದಾಗಿ, ಅಲ್ಲಿನ ಜೀವನದಿಗಳ ಸಹಜ ಹರಿಯುವಿಕೆಗೆ ವರದಾನವಾಗಿದೆ.

ನಮ್ಮ ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಬಗೆಗಿನ ವಿರೋಧ ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಿ (ನರ್ಮದಾ ಬಚಾವ್ ಆಂಧೋಲನ-ಮೇಧಪಾಟ್ಕರ್ ನೇತೃತ್ವದಲ್ಲಿ), ಈ ಯೋಜನೆಗೆ ಹಣಕಾಸಿನ ನೆರವು ನೀಡಿದ್ದ ವಿಶ್ವಬ್ಯಾಂಕ್ ಯೋಜನೆ ಕುರಿತಂತೆ ಮರುಚಿಂತನೆ ನಡೆಸಿದೆ. ಇದೇ ರೀತಿ ನೇಪಾಳದಲ್ಲಿ ಕೂಡ ಅರುಣ್ ಎಂಬ ಅಣೆಕಟ್ಟು ಯೋಜನೆ ರದ್ದಾಯಿತು.

ಅಣೆಕಟ್ಟುಗಳ ನಿರ್ಮಾಣದಿಂದ ಪರಿಸರದ ಏರು-ಪೇರು, ಅರಣ್ಯನಾಶ, ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶ, ಅಲ್ಲಿನ ಜೈವಿಕ ವೈವಿಧ್ಯತೆ, ಸಸ್ಯ ಪ್ರಭೇದಗಳು, ಯೋಜನೆಯಿಂದ ನಿರ್ವಸತಿಗರಾಗುವ ಲಕ್ಷಾಂತರ ಕುಟುಂಬಗಳ ಬದುಕು, ಅವರ ಪುನರ್ವಸತಿಯ ಸವಾಲುಗಳು ಇವೆಲ್ಲವೂ ಬೃಹತ್ ಅಣೆಕಟ್ಟಿನ ವಿರೋಧಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳು.

1950 ರಿಂದ 70 ರ ದಶಕದವರೆಗೆ ವಿಶ್ವಬ್ಯಾಂಕ್ ನೆರವಿನಿಂದ ಜಾಗತಿಕವಾಗಿ ವರ್ಷವೊಂದಕ್ಕೆ ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗುತ್ತಿದ್ದವು. ಈಗ ಇದರ ಪ್ರಮಾಣ 200 ಕ್ಕೆ ಕುಸಿದಿದೆ. ಅಂದರೆ ಬೃಹತ್ ಅಣೆಕಟ್ಟುಗಳ ಬಗೆಗಿನ ಭ್ರಮೆ ಕಳಚುತ್ತಿದ್ದು, ವಾಸ್ತವಿಕ ಕಟು ಸತ್ಯಗಳು ಮನದಟ್ಟಾಗುತ್ತಿವೆ.

ಅಣೆಕಟ್ಟಿನಿಂದಾಗಿ ಜಲಾಶಯದಲ್ಲಿ ಶೇಖರವಾಗುವ ನೀರಿನ ಪ್ರಮಾಣ, ಅದರಲ್ಲಿನ ಬದಲಾವಣೆ, ಉಷ್ಣಾಂಶದ ಏರಿಳಿತ, ಅಲ್ಲಿನ ಜಲಚರಗಳ ಸ್ಥಿತಿ-ಗತಿ ಮತ್ತು ಅಣೆಕಟ್ಟು ನಿರ್ಮಾಣದಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಗಬಹುದಾದ ನೈಸರ್ಗಿಕ ಬದಲಾವಣೆ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಧ್ಯಯನಗಳು ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ.

ಇಂತಹ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಹಾಗೂ ನದಿ ನೀರಿನ ಸಹಜ ಹರಿಯುವಿಕೆಗೆ ಅಡ್ಡಿಯಾಗದ ಸಣ್ಣ-ಸಣ್ಣ ಅಣೆಕಟ್ಟು ಮತ್ತು ಜಲಾಶಯಗಳ ಬಗ್ಗೆ ಚಿಂತನೆ ಆರಂಭವಾಗಿದೆ. ಅಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಜೀವ ವೈವಿಧ್ಯತೆ ಹಾಗೂ ನದಿಗಳ ನೈಜ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಹಲವಾರು ನದಿಗಳನ್ನು ಅಣೆಕಟ್ಟು ಮುಕ್ತ ನದಿಗಳೆಂದು ಘೋಷಿಸಲಾಗಿದೆ.

ಸ್ಪೀಡನ್ ಮತ್ತು ನಾರ್ವೆ ರಾಷ್ಟ್ರಗಳು ಈ ದಿಶೆಯಲ್ಲಿ ದೃಢ ಹೆಜ್ಜೆ ಇಟ್ಟ ಪ್ರಥಮ ರಾಷ್ಟ್ರಗಳಾಗಿವೆ. ಈಗ ಅಮೆರಿಕಾ ಕೂಡ ಕೆಲವು ನದಿಗಳ 16 ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿಷೇಧ ಹೇರಿದೆ. ಬೃಹತ್ ಅಣೆಕಟ್ಟು ಎಂಬ ಪರಿಕಲ್ಪನೆ ಹುಟ್ಟುಹಾಕಿ, ಅಂತಹ ಸಾಹಸಕ್ಕೆ ಚಾಲನೆ ನೀಡಿದ್ದ ಅಮೆರಿಕಾ ದೇಶವೇ ಈಗ, ನದಿಗಳು ಮತ್ತು ಅಣೆಕಟ್ಟು ನಿರ್ಮಾಣ ಕುರಿತಂತೆ ತನ್ನ ಆಲೋಚನಾ ದಿಕ್ಕನ್ನೇ ಬದಲಿಸತೊಡಗಿರುವುದು ಸಧ್ಯದ ಸ್ಥಿತಿಯಲ್ಲಿ ಒಂದು ರೀತಿಯ ಸಮಾಧಾನಕರ ಸಂಗತಿ.

(ಚಿತ್ರಕೃಪೆ: ವಿಕಿಪೀಡಿಯ)

ಭ್ರಷ್ಟಾಚಾರ ವಿರೋಧೀ ಹೋರಾಟ – ಉತ್ತರಿಸದೇ ಉಳಿದ ಪ್ರಶ್ನೆಗಳು

-ಸಂಜ್ಯೋತಿ ವಿ.ಕೆ.

ಅಣ್ಣಾ ಹಜಾರೆ, ಅವರ ಉಪವಾಸ ಸತ್ಯಾಗ್ರಹ, ಅವರ ತಂಡದ ಸದಸ್ಯರುಗಳ ತರಹೇವರಿ ಹೇಳಿಕೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಅಸಂಬದ್ಧ ಪ್ರತಿಕ್ರಿಯೆಗಳು ಇವೆಲ್ಲ “ಸ್ಫೋಟಕ  ಸುದ್ದಿ”ಗಳಾಗಿ ಎಲ್ಲಾ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡಿದ ನೆನಪುಗಳು ಕರಗುತ್ತಿರುವ ಈ ಗಳಿಗೆಯಲ್ಲಿ ಒಂದು ಪುನರಾವಲೋಕನ…

ಹಾಲಿ ಇರುವ ಕಾನೂನುಗಳನ್ನು ಪ್ರಾಮಾಣಿಕವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದರ ಹೊರತಾಗಿಯೂ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಒಂದು ಪ್ರಬಲ ಮಸೂದೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ. ಈ  ನಿಟ್ಟಿನಲ್ಲಿ ಜವಹರಲಾಲ ನೆಹರುರವರ ಕಾಲದಲ್ಲಿಯೇ ರಚಿತವಾಗಿ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಲೋಕಪಾಲ ಮಸೂದೆ, ವಿವಿಧ ಕೇಂದ್ರ ಸರ್ಕಾರಗಳ ಕಾಲದಲ್ಲಿ ಇಣುಕಿ, ಹಣಕಿ ಮತ್ತೆ ಧೂಳು ತಿನ್ನುತ್ತಾ ಕುಳಿತಿತ್ತು. ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ. ಸರ್ಕಾರ ತನ್ನ “ಕನಿಷ್ಟ ಸಾಮಾನ್ಯ ಕಾರ್ಯಸೂಚಿ”ಯಲ್ಲಿ (ಕಾಮನ್ ಮಿನಿಮಮ್ ಪ್ರೋಗ್ರಾಮ್) ಇದರ ಪ್ರಸ್ತಾಪ ಮಾಡಿತ್ತಾದರೂ, ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯು.ಪಿ.ಎ.ನ ಯಾವುದೇ ಅಂಗ ಪಕ್ಷಗಳಿಗಾಗಲಿ, ಯು.ಪಿ.ಎ. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸುತ್ತಿರುವ ಆದರೆ ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಕುರುಡು, ಕಿವುಡು, ಮೂಕಾಗಿರುವ ಬಿ.ಜೆ.ಪಿ.ಗಾಗಲೀ ಒಂದು ಪ್ರಬಲವಾದ ಮಸೂದೆಯನ್ನು ಮಂಡಿಸುವ ಮನಸ್ಸಿಲ್ಲ ಎಂಬುದು ಸುಸ್ಪಷ್ಟ.

ಭ್ರಷ್ಟಾಚಾರವೆಂಬ ಆಕ್ಟೋಪಸ್ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನೆಲ್ಲಾ ವ್ಯಾಪಿಸುತ್ತಾ ತನ್ನ ಬಾಹುಗಳನ್ನು ದಶದಿಕ್ಕುಗಳಲ್ಲೂ ಚಾಚಿ ಮೇರೆ ಮೀರಿ ಬೆಳೆಯುತ್ತಿರುವಾಗ ಅಣ್ಣಾ ಹಜಾರೆ ಎಂಬ ಪ್ರಾಮಾಣಿಕ ಮನುಷ್ಯನೊಬ್ಬ ಜನಲೋಕಪಾಲ ಮಸೂದೆಗಾಗಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಪವಾಸ ಕೂತಾಗ, ಬೇಸತ್ತಿದ್ದ ಜನರಿಗೆ ಇದೊಂದು ಆಶಾಕಿರಣವಾಗಿ ಕಂಡಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಬಹಿರಂಗವಾಗಿ ಸೇರಲಿಲ್ಲವಾದರೂ ಒಂದು ಅವ್ಯಕ್ತ ಸಹಮತ ಬಹುಪಾಲು ಜನರಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೇಂದ್ರ ಸರ್ಕಾರದ ಗ್ರಹಿಕೆ ಏನಿದ್ದಿತೋ, ಮಸೂದೆಯ ರೂಪುರೇಷೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಜಂಟಿ ಸಮಿತಿಯನ್ನು ರಚಿಸುವ ಇಂಗಿತ ವ್ಯಕ್ತಪಡಿಸಿತು. ಅದಕ್ಕೆ ಒಪ್ಪಿದ ಅಣ್ಣಾ ಸಹಾ “ಸಮಿತಿಯ ವತಿಯಿಂದ ಉತ್ತಮ ಮಸೂದೆಯನ್ನು ಪ್ರಸ್ತುತ ಪಡಿಸುತ್ತೇವೆ. ಅದನ್ನು ಚರ್ಚಿಸಿ ಅಂಗೀಕಾರ ಮಾಡುವ ಅಧಿಕಾರ ಸಂಸತ್ತಿನದ್ದು” ಎಂದು ಮಾಧ್ಯಮಗಳ ಮುಂದೆ ಹೇಳಿದರು. ಅಲ್ಲಿಯವರಗೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ ಅದರ ಮುಂದಿನ ಘಟ ನಾವಳಿಗಳು ನಾಡಿನ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಿಗೆ, ಸಂವಿಧಾನದ ಬಗ್ಗೆ ನಂಬಿಕೆಯಿಟ್ಟ ಪ್ರತಿಯೊಬ್ಬ ಪ್ರಜ್ಞಾವಂತನಿಗೆ ಗಾಬರಿ ಹುಟ್ಟಿಸುವಂತವು.

ಈ ಹಿನ್ನೆಲೆಯಲ್ಲಿ ಅಣ್ಣಾ ಪರ ಅಥವಾ ವಿರುದ್ಧ ಎಂಬ ಪೂರ್ವಾಗ್ರಹಗಳಿಗೆ ಸಿಲುಕದೆಯೇ ಇಡೀ ಪ್ರಕರಣವನ್ನು ವಿಶ್ಲೇಷಿಸುವಾಗ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ.

ಮೊದಲಿಗೆ – ‘ನಾಗರಿಕ ಸಮಾಜದ ಪ್ರತಿನಿಧಿಗಳು’ ಎಂಬ ಅಣ್ಣಾ ತಂಡದ ಆಯ್ಕೆಯ ಮಾನದಂಡಗಳೇನು? ದೇಶದ ವಿವಿಧ ಭಾಗಗಳ, ವರ್ಗಗಳ ಪ್ರಾತಿನಿಧ್ಯವಿಲ್ಲದೆ ಇದು ಕೇವಲ ‘ಅಣ್ಣಾ ತಂಡ’ವಾಯಿತೇ ಹೊರತು ನಿಜವಾದ ಸಮಾಜದ ಪ್ರತಿನಿಧಿಗಳ ತಂಡವಾಗಲಿಲ್ಲ. ‘ಇದು ಕೇವಲ ಆಕಸ್ಮಿಕ ಅಥವಾ ಇಂತಹ ಚರ್ಚೆಗಳಲ್ಲಿ ಹೋರಾಟದ ಮೂಲ ಉದ್ದೇಶವನ್ನು ಮುಕ್ಕಾಗಿಸುವುದು ಬೇಡ’ ಎನ್ನುವ ವಾದವನ್ನು ವಾದಕ್ಕಾಗಿಯಾದರೂ ಒಪ್ಪಿಬಿಡಬಹುದಿತ್ತು- ಸಾಮಾಜಿಕ ನ್ಯಾಯದ ಬಗೆಗಿನ ಅಣ್ಣಾರ ನಿಲುವು ಸಮರ್ಪಕವಾಗಿದ್ದಿದ್ದರೆ.

Sansad_Bhavan

Sansad_Bhavan

ಪತ್ರಕರ್ತ ಮುಕುಲ್ ಶರ್ಮ ಅವರು ರಾಳೇಗಾಂವ್ ಸಿದ್ಧಿಯಲ್ಲಿನ ಅಣ್ಣಾರ ಸುಧಾರಣಾ ಕ್ರಮಗಳಿಂದ ಪ್ರಭಾವಿತರಾಗಿದ್ದರೂ, ಅವರ ‘ಬ್ರಾಹ್ಮಣಿಕೆ’ಯ ಧೋರಣೆಯನ್ನೂ ಗುರುತಿಸುತ್ತಾರೆ.  ಅಣ್ಣಾ ತಂದಿರುವ ಜಲ ಸಂರಕ್ಷಣೆ ಮತ್ತು ಸಮರ್ಪಕ ಜಲ ನಿರ್ವಹಣೆ, ಅದರಿಂದ ಹೆಚ್ಚಿದ ಬೇಸಾಯಗಾರರ ಇಳುವರಿ ಮತ್ತು ಆದಾಯ, ಪಾನ ನಿಷೇಧ ಇವೆಲ್ಲಾ ನಿಜಕ್ಕೂ ಅನುಕರಣ ಯೋಗ್ಯ. ಆದರೆ ಜೊತೆಗೇ ದಲಿತರ ಆಹಾರ ಕ್ರಮಗಳ ಬಗೆಗಿನ ಅವರ ಋಣಾತ್ಮಕ ಧೋರಣೆ ಪ್ರಶ್ನಾರ್ಹ. ಅಂತೆಯೇ “ಪ್ರತೀ ಹಳ್ಳಿಯಲ್ಲಿ ಒಬ್ಬ ಚಮ್ಮಾರ, ಕಂಬಾರ, ಝಾಡಮಾಲಿ ಇರಲೇಬೇಕು ಮತ್ತು ಅವರೆಲ್ಲಾ ತಮ್ಮ ಪಾತ್ರ, ಕಸುಬಿನಂತೆ ದುಡಿಯಬೇಕು. ಇದೇ ರಾಳೇಗಾಂವ್ ಸಿದ್ಧಿಯ ಮಾದರಿ” ಎನ್ನುವ ಅಣ್ಣಾರ ಮನಸ್ಸತ್ವ ಇಂತಹ ವಾದವನ್ನು ಒಪ್ಪುವುದನ್ನು ಅಸಾಧ್ಯವಾಗಿಸುತ್ತದೆ. ಮೀಸಲಾತಿಯನ್ನು ವಿರೋಧಿಸುವವರು ಅಣ್ಣಾರ ಹೋರಾಟದೊಡನೆ ತಮ್ಮನ್ನು ಗುರುತಿಸಿಕೊಳ್ಳುವುದು ಕಾಕತಾಳೀಯವಲ್ಲ.

ಎರಡನೆಯದು – ಸರ್ಕಾರ ಪ್ರಸ್ತಾಪಿಸಿದ ಲೋಕಪಾಲ ಮಸೂದೆ ಕೇವಲ ಕಾಗದದ ಮೇಲೂ ಘರ್ಜಿಸಲಾರದಷ್ಟು ದುರ್ಬಲವೆಂಬುದು ನಿಜ. ಆದರೆ ಅಣ್ಣಾ ತಂಡ ರಚಿಸಿದ ಜನಲೋಕಪಾಲ ಮಸೂದೆ ಅದಕ್ಕೆ ಪರ್ಯಾಯವಾಗಬಲ್ಲುದೇ?

  1.  ‘ಜನಲೋಕಪಾಲವನ್ನು ಯಥಾವತ್ತಾಗಿ ಅಂಗೀಕರಿಸಿದರೂ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಬಿಡಲು ಸಾಧ್ಯವಿಲ್ಲ’ ಎಂಬುದನ್ನು ಅದರ ಪರವಾಗಿರುವ ಪರಿಣಿತರೇ ಒಪ್ಪುತ್ತಾರೆ.
  2. ಸಂವಿಧಾನಬದ್ಧವಾಗಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳೆಲ್ಲರ ಮೇಲೆ (ನ್ಯಾಯಾಂಗವನ್ನೂ ಒಳಗೊಂಡಂತೆ!) ಒಂದು ಸರ್ವತಂತ್ರ ಸ್ವತಂತ್ರವಾದ ಸರ್ವಾಧಿಕಾರಿಯನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಮೂಲತತ್ವಕ್ಕೇ ಅಪಾಯಕಾರಿಯಾದದ್ದಲ್ಲವೇ?
  3. ಭ್ರಷ್ಟಾಚಾರವೆಂಬುದು ಮನುಕುಲದ ಇತಿಹಾಸದಷ್ಟೇ ಹಳೆಯ ವಿಷಯವಾದರೂ ಅದರ ವ್ಯಾಪ್ತಿ ಮತ್ತು ಪ್ರಮಾಣ ಇಂದು ಹಿಂದೆಂದಿಗಿಂತಲೂ ಸಹಸ್ರಾರು ಪಟ್ಟು ಹೆಚ್ಚಿದ್ದು, ಜನಸಾಮಾನ್ಯರ  ಕಲ್ಪನೆಗೂ ಮೀರಿದ್ದಾಗಿದೆ. ಇದೇ ಭ್ರಷ್ಟ ಹಣ ಚುನಾವಣೆಗಳನ್ನು ಮತದ ಮಾರುಕಟ್ಟೆಯಾಗಿ ಪರಿವರ್ತಿಸುತ್ತಿದೆ; ನ್ಯಾಯಾಂಗವನ್ನೂ ಭ್ರಷ್ಟಗೊಳಿಸುತ್ತಾ ನ್ಯಾಯವನ್ನು ಬಿಕರಿಯ ವಸ್ತುವನ್ನಾಗಿಸುವ ಧಾಷ್ಟ್ರ್ಯ  ತೋರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಭಷ್ಟಾಚಾರಗಳೆಲ್ಲ ಇಂದು ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಅದರ ಮೂಲವಿರುವುದು ಕಾರ್ಪೊರೇಟ್ ಲಾಬಿ, ಕಾರ್ಪೊರೇಟ್ ಭಷ್ಟಾಚಾರದಲ್ಲಿ. ಹೀಗಿರುವಾಗ ಜನಲೋಕಪಾಲ ಮಸೂದೆ ಕಾರ್ಪೊರೇಟ್ ವಲಯವನ್ನು ತನ್ನ ಪರಿಧಿಯಿಂದ ಸಂಪೂರ್ಣ ಹೊರಗಿಟ್ಟಿರುವುದು, ಕೇವಲ ರೋಗದ ಲಕ್ಷಣಗಳನಷ್ಟೇ ಉಪಚರಿಸುತ್ತಾ ಅದರ ಮೂಲವನ್ನು ಕಡೆಗಣಿಸುವ ಕಸರತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಅಣ್ಣಾ ತಂಡಕ್ಕೆ ಕಾರ್ಪೊರೇಟ್ ವಲಯದ ಮತ್ತು ಮೇಲ್ಮಧ್ಯಮ ವರ್ಗದ ಕಾರ್ಪೊರೇಟ್ ನೌಕರರ ಬೆಂಬಲವನ್ನು ಅನುಮಾನಿಸಬೇಕಿದೆ. ತನ್ನ ನೌಕರರಿಗೆ ತಮ್ಮದೇ ಸಂಘಟನೆ ರೂಪಿಸಿಕೊಳ್ಳುವ, ತನ್ನ ಹಕ್ಕುಗಳಿಗಾಗಿ ಪ್ರತಿಭಟಿಸುವ ಕನಿಷ್ಟ ಹಕ್ಕನ್ನೂ ಪ್ರತ್ಯಕ್ಷ/ಪರೋಕ್ಷವಾಗಿ ನಿರಾಕರಿಸುವ ಕಾರ್ಪೊರೇಟ್ ಕಂಪನಿಗಳು ಅಣ್ಣಾ ತಂಡದ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತನ್ನ ನೌಕರರಿಗೆ ಬಿಡುವು ಮಾಡಿಕೊಟ್ಟು ಫ್ರೀಡಂ ಪಾರ್ಕ್‌ಗೆಗೆ ಕಳಿಸುವುದು ಅರಿಯಲಾಗದ ದೊಡ್ಡ ರಹಸ್ಯವೇನಲ್ಲ. ‘ಭ್ರಷ್ಟಾಚಾರ ವಿರುದ್ಧ ಭಾರತ’ ಹೋರಾಟಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಇಂತಹ ಹಲವಾರು ಕಾರ್ಪೊರೇಟ್ ಕಂಪನಿಗಳೇ.
  4. ಈ ಜನಲೋಕಪಾಲ ಮಸೂದೆ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ.)ಗಳನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಡಲು ಬಯಸುತ್ತದೆ. ಎಲ್ಲೋ ಕೆಲವು ಎನ್.ಜಿ.ಓ.ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯಾದರೂ ಇಂದಿನ ಮುಕ್ಕಾಲುವಾಸಿ ಎನ್.ಜಿ.ಓ.ಗಳು ದುಡ್ಡು ಮಾಡುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆಂಬ ವಿಷಯ ಎಲ್ಲರಿಗೂ ತಿಳಿದಿರುವ ಒಂದು ತೆರೆದ ರಹಸ್ಯವಷ್ಟೆ. ಲಕ್ಷಾಂತರ, ಕೋಟ್ಯಾಂತರ ರೂಗಳನ್ನು ನಾನಾ ಮೂಲಗಳಿಂದ (ವಿದೇಶಿ ದೇಣಿಗೆಯೂ ಸೇರಿದಂತೆ) ಸಾರ್ವಜನಿಕ ಉದ್ದೇಶಗಳಿಗಾಗಿ ದೇಣಿಗೆಯಾಗಿ ಪಡೆವ ಈ ಸಂಸ್ಥೆಗಳಿಗೆ ಉತ್ತರದಾಯಿತ್ವವಿರಬೇಕಲ್ಲವೇ? ಎನ್.ಜಿ.ಓ.ಗಳ ಬಹುತೇಕ ದೇಣಿಗೆ ಕಾರ್ಪೊರೇಟ್ ಮೂಲಗಳಿಂದ ಬರುವುದು ಸಹಾ ಈ ಅಪವಿತ್ರ ವರ್ತುಲವನ್ನು ಹಿರಿದಾಗಿಸುತ್ತದೆ. ಅಣ್ಣಾ ತಂಡದ ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ ತಮ್ಮದೇ ಎನ್.ಜಿ.ಓ.ಗಳನ್ನು ಹೊಂದಿರುವುದು ಮತ್ತು ಈ ತಂಡ ಎನ್.ಜಿ.ಓ.ಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತರುವುದನ್ನು ವಿರೋಧಿಸುವುದು ಸಹಜವಾಗಿಯೇ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
  5. ಕೋಟಗಟ್ಟಲೆ ಸಾರ್ವಜನಿಕ ಹಣವನ್ನು ಕೂಡಿಟ್ಟಿರುವ ಮತ್ತು ಅನೇಕ ರಾಜಕಾರಣಿಗಳ ಕಪ್ಪು ಹಣಕ್ಕೆ ದೇಸೀ ಸ್ವಿಸ್ ಬ್ಯಾಂಕ್‌ಗಳಾಗಿರುವ ಮಠಗಳು, ಧಾರ್ಮಿಕ ಕೇಂದ್ರಗಳ ಭ್ರಷ್ಟಾಚಾರದ  ಜನಲೋಕಪಾಲದ ಕಣ್ಣಿಗೇ ಕಾಣದಿರುವುದು ಹೇಗೆ?

ಮೂರನೆಯದಾಗಿ – ಒಂದು ಗಳಿಗೆಯ ಮಟ್ಟಿಗೆ ಈ ಎಲ್ಲಾ ದೂರುಗಳನ್ನೂ, ಅನುಮಾನಗಳನ್ನೂ ಪಕ್ಕಕ್ಕಿಟ್ಟು, ಈ ಇಡೀ ಹೋರಾಟ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೆಂದೂ, ಇದರಿಂದ ಭ್ರಷ್ಟಾಚಾರವನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದೆಂದೂ ನಂಬೋಣ. ಹಾಗಿದ್ದಾಗ್ಯೂ ಈ ಹೋರಾಟದ ರೀತಿ ನಮ್ಮದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದ್ದುದನ್ನು ಒಪ್ಪಬಹುದೇ?

ಜಂಟಿ ಸಮಿತಿಯ ಮೂಲಕ ಜನದನಿಯನ್ನು ನೇರವಾಗಿ ಸಂಸತ್ತಿಗೆ ತಲುಪಿಸಬಹುದಾದ ಒಂದು ಅಪರೂಪದ ಅವಕಾಶ ಅಣ್ಣಾ ಹಜಾರೆಗೆ ದೊರೆತರೂ, ತಮ್ಮ ದೂರದೃಷ್ಟಿಯ ಕೊರತೆಯಿಂದ ಅವರು ಇದನ್ನು ತುಂಬಾ ಅಪ್ರಬುದ್ಧವಾಗಿ ನಿರ್ವಹಿಸಿದಂತೆ ಕಾಣುತ್ತದೆ.

ಸಮಿತಿಯಲ್ಲಿ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗ ತಾನೇ ಒಂದು ಕರಡು   ಮಸೂದೆ ರಚಿಸಲು ಮುಂದಾದ ಅಣ್ಣಾ ತಂಡ, ಅದನ್ನು ನಿಜವಾದ ಅರ್ಥದಲ್ಲಿ ಜನರ ಲೋಕಪಾಲ ಮಸೂದೆಯಾಗಿ ರೂಪಿಸುವಲ್ಲಿ ಸೋತಿತೆಂದೇ ಹೇಳಬೇಕು. ಇಡೀ ದೇಶಕ್ಕೆ ಸಂಬಂಧಿಸಿದ, ಅದರಲ್ಲೂ ಭ್ರಷ್ಟಾಚಾರದಂತಾ ಆಳ ಬೇರುಗಳುಳ್ಳ ವಿಷಯದಲ್ಲಿ ಮಸೂದೆ ರಚಿಸುವಾಗ ದೇಶದ ವಿವಿಧ ಭಾಗಗಳ ಜನರ, ಪರಿಣಿತರ ಜೊತೆಗೆ ಚರ್ಚಿಸಿ ಅದನ್ನು ರೂಪಿಸಬೇಕಿತ್ತು. ಅದನ್ನು ಜನರ ನಡುವೆ ಒಯ್ದು ಸಾರ್ವಜನಿಕ ಅರಿವು ಮೂಡಿಸುವ ಬಹಿರಂಗ ಚರ್ಚೆಗೆ ಒಡ್ಡಿ, ಒಂದು ಉತ್ತಮ ಮಸೂದೆಯನ್ನಾಗಿ ಬೆಳೆಸಬೇಕಿತ್ತು. ಅಂತಹ ಒಂದು ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಇಟ್ಟಾಗ ಅದಕ್ಕೊಂದು ಸಮಗ್ರತೆ ಬರುತ್ತಿತ್ತು. ಅದು ದೇಶದ ಒಟ್ಟೂ ಜನರ ಅಭಿಪ್ರಾಯ ಮಂಡನೆಯಾಗಿರುತ್ತದಾದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಅದನ್ನು ಅನುಮೋದಿಸುವ ಒತ್ತಡವೇರ್ಪಡುತಿತ್ತು. ಇಷ್ಟಾಗಿಯೂ ಒಂದು ಪ್ರಬಲ ಮಸೂದೆ ಅಂಗೀಕಾರವಾಗದೇ ಇದ್ದಿದ್ದರೆ ತಿದ್ದುಪಡಿಗಳ ಮೂಲಕ ಅದನ್ನು ಬಲಪಡಿಸಲು ತಂತಮ್ಮ ಕ್ಷೇತ್ರದ ಜನ ಪ್ರತಿನಿಧಿಗಳ ಮೇಲೆ ಜನರೇ ಒತ್ತಡ ಹೇರುವಂತಾ ಪ್ರಜಾಸತ್ತಾತ್ಮಕ ಮಾರ್ಗದ ಬಗ್ಗೆ ಯೋಚಿಸಬಹುದಿತ್ತು. ಆದರೆ ಅಣ್ಣಾ ತಂಡಕ್ಕೆ ಇದಾವುದಕ್ಕೂ ವ್ಯವಧಾನವೇ ಇದ್ದಂತೆ ತೋರಲಿಲ್ಲ.

ಆದರೆ ಇಂತಹ ಒಂದು ಮಹತ್ವದ ವಿಷಯ ಮತ್ತು ಹೋರಾಟವನ್ನು ಹೀಗೆ ಹಾದಿ ತಪ್ಪಿಸುವಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ತಿಳಿಗೇಡಿತನ, ಎಲ್ಲ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣ ಮತ್ತು ಅವಕಾಶವಾದಿ, ಬೇಜವಾಬ್ದಾರಿ ಮಾಧ್ಯಮಗಳ ಪಾತ್ರವೂ ಅಷ್ಟೇ ಇದೆ.

ಒಂದು ಪ್ರಬಲ ಭ್ರಷ್ಟಾಚಾರಿ ವಿರೋಧೀ ಮಸೂದೆ ತರುವ ವಿಷಯದಲ್ಲಿ ಅಪ್ರಾಮಾಣಿಕವಾದ ಕೇಂದ್ರ ಸರ್ಕಾರ, ತನ್ನ ನ್ನು ಶಾಂತಿಯುತವಾಗಿ ಆಗ್ರಹಿಸುವುದನ್ನೂ ಸಹಿಸದೆ ಉಪವಾಸ ಕೂರುವ ಮೊದಲೇ ಅಣ್ಣಾರನ್ನು ಬಂಧಿಸಿ ತನ್ನ ದಮನಕಾರಿ ಮನೋಭಾವ ಪ್ರದರ್ಶಿಸಿತು. ಶಾಂತಿಯುತವಾಗಿ ಬೇರೆ ಬೇರೆ ಹೋರಾಟಗಳಲ್ಲಿ ತೊಢಗಿಕೊಂಡಿದ್ದವರಿಗೂ ತಮ್ಮ ಯಾವ ಹೋರಾಟಗಳಿಗೂ ಯಾವುದೇ ಸರ್ಕಾರ ಸ್ಪಂದಿಸದೇ ಇರುವುದು ಒಂದು ರೀತಿಯ ಹತಾಶೆ ಮೂಡಲು ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿಯೇ ನಡೆದ ಈ ಘಟನೆ ಜನರನ್ನು ‘ನಾವು ಹೀಗಲ್ಲದೆ ಮತ್ತೇನು ಮಾಡಿ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯ’ ಎಂಬ ಒಂದು ತಪ್ಪಾದ ಚಿಂತನಾ ಕ್ರಮಕ್ಕೆ ದೂಡಿತು. ಕಾಂಗ್ರೆಸ್ಸಿನ ಕಪಿಲ್ ಸಿಬಾಲ್, ಮನೀಶ್ ತಿವಾರಿಯಂತಹವರು ಬಾಲಿಶ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಹಿಂಪಡೆಯುವುದು ಇಂತಹ ಅಪ್ರಬುದ್ಧ ನಡವಳಿಕೆಗಳು ಜನರಲ್ಲಿ ಗೊಂದಲ ಹೆಚ್ಚಿಸಿತು.

Anna_Hazare

Anna_Hazare

ಕಾಂಗ್ರೆಸ್ ಜನಲೋಕಪಾಲದ ವಿರೋಧಿ ಎಂದು ಅಣ್ಣಾ ತಂಡ ಟೀಕಿಸುತ್ತಿದ್ದಾಗ ಕಾಂಗ್ರೆಸ್‌ನ ದಮನಕಾರಿ ನಿಲುವನ್ನು ಟೀಕಿಸುವ ನೆಪದಲ್ಲಿ ರಂಗಕ್ಕಿಳಿದ ಬಿ.ಜೆ.ಪಿ. ಜನರ ಭ್ರಷ್ಟಾಚಾರೀ ವಿರೋಧವನ್ನು ಕಾಂಗ್ರೆಸ್ ವಿರೋಧವನ್ನಾಗಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರದಲ್ಲಿ ತೊಡಗಿತು. ಅಷ್ಟಕ್ಕೂ ಯು.ಪಿ.ಎ.ಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಹುಮತವಿದೆ. ಆದರೆ ಜನಲೋಕಪಾಲದ ಬಗ್ಗೆ  ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ಕೆಲಸವನ್ನು ಅಣ್ಣಾ ತಂಡ ಮಾಡಲಿಲ್ಲ. ಕೊನೆಗೆ ಟಿ. ವಿ. ವಾಹಿನಿಯೊಂದು ಜನಲೋಕಪಾಲದ ಬಗ್ಗೆ ನಿಮ್ಮ ನಿಲುವೇನೆಂದು ಬಿ.ಜೆ.ಪಿ.ಯನ್ನು ಜಗ್ಗಿಸಿ ಕೇಳಿದಾಗ “ನಮಗೂ ಜನಲೋಕಪಾಲದ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಒಪ್ಪಿಗೆಯಿಲ್ಲ” ಎಂದು ಹೇಳಿಯೂ ಹೇಳದ ಹಾಗೆ ನುಣಿಚಿಕೊಂಡಿದ್ದನ್ನ ಗಮನಿಸಬೇಕಿದೆ.

ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿ ಮಾಧ್ಯಮಗಳು ಈ ಇಡೀ ಪ್ರಸಂಗವನ್ನು ಕಾಂಗ್ರೆಸ್ ವರ್ಸಸ್ ಅಣ್ಣಾ ಎಂಬಂತೆ ಬಾಲಿಶವಾಗಿ ( ಅಥವಾ ಪ್ರಜ್ಙಾಪೂರ್ವಕವಾಗಿ) ಚಿತ್ರಿಸಿದವು. ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಅಥವಾ ತಮ್ಮ ಕಾರ್ಪೊರೇಟ್ ದೊರೆಗಳ ಹಿತಕಾಯುವುದನ್ನೇ ಪರಮ ಕರ್ತವ್ಯವಾಗಿಸಿಕೊಂಡಿರುವ ಮಾಧ್ಯಮಗಳು ಈ ವಿಷಯದ ಬಗ್ಗೆ ಜನರನ್ನು ಆಳವಾದ ಚಿಂತನೆಗೆ ಹಚ್ಚುವ ಬದಲಿಗೆ, ದೇಶಭಕ್ತಿ ಎಂದರೆ ಭ್ರಷ್ಟಾಚಾರವನ್ನು ವಿರೋಧಿಸುವುದು; ಭ್ರಷ್ಟಾಚಾರವನ್ನು ವಿರೋಧಿಸುವುದೆಂದರೆ ಅಣ್ಣಾ ಟೊಪ್ಪಿ ತೊಟ್ಟು, ಮೇಣದ ಬತ್ತಿ ಹಿಡಿದು ಸಾಗುವುದು, ಎಂಬಂತ ತೆಳು ಚಿಂತನೆಗಳನ್ನೇ ಹಬ್ಬಿಸಿದವು.

ಇನ್ನು ಅಣ್ಣಾ ತಂಡ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರವನ್ನು ಅದರ ಪಾವಿತ್ರ್ಯತೆ, ಘನತೆಗಳ ಅರಿವೇ ಇಲ್ಲದೆ ಒಂದು ಬೆದರಿಕೆಯ ತಂತ್ರವಾಗಿ ಬಳಸುವುದು, ಚರ್ಚೆ, ಸಂವಾದಗಳ ಪ್ರಸ್ತುತತೆಯನ್ನೇ ಕಡೆಗಣಿಸಿ, ತಾನು ಪ್ರಸ್ತಾಪಿಸಿದ ಮಸೂದೆಯನ್ನೇ ಸಂಸತ್ತು ಅಂಗೀಕರಿಸಬೇಕಂದು ಆಗ್ರಹಿಸುವುದು, ಅದಕ್ಕೊಂದು ಗಡುವು ವಿಧಿಸಿ ಇಡೀ ಸಂಸತ್ತು ತನ್ನ ಅಣತಿಯಂತೆ ನಡೆಯಬೇಕೆಂದು ಸರ್ವಾಧಿಕಾರಿ ಧೋರಣೆ ತೋರುವುದು; ಇದೆಲ್ಲದರ ಒಟ್ಟಾರೆ ಪರಿಣಾಮ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳ ನಂಬಿಕೆಯ ತಳಪಾಯವನ್ನೇ ಅಲುಗಿಸುವ ಪ್ರಯತ್ನ. ಇದನ್ನು ಒಪ್ಪಿದರೆ ‘ಹೋರಾಟದ ಕಾರಣ ಒಳ್ಳೆಯದಿದ್ದರೆ ಆಯಿತು, ಮಾರ್ಗದ ಬಗ್ಗೆ ಚಿಂತಿಸಬೇಕಿಲ್ಲ’ ಎನ್ನುವಂತ ತಪ್ಪು ಸಂದೇಶ ರವಾನಿಸಿದಂತಲ್ಲವೇ?

ಹಾಗಾದರೆ ಭ್ರಷ್ಟಾಚಾರವನ್ನು ತೊಲಗಿಸುವುದಾದರೂ ಹೇಗೆ? ಇದು ಅಹೋರಾತ್ರಿ ಆಗಿಬಿಡುವ ಕೆಲಸವಲ್ಲ ಮತ್ತು ಸಿನಿಕರಾಗುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಕಾನೂನು ರಚಿಸುವ ಜೊತೆಗೇ ಚುನಾವಣಾ ಸುಧಾರಣೆಯೂ ಆಗಬೇಕಾದ್ದು ಅವಶ್ಯ. ಅಲ್ಲದೆ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ “ಭ್ರಷ್ಟಾಚಾರ ಸಹಾ ಒಂದು ಮಿತಿಯಲ್ಲಿದ್ದರೆ ಒಂದು ಒಪ್ಪಿತ ಮೌಲ್ಯ” ಎಂಬ ಮನೋಭಾವ ಬದಲಾಗಬೇಕಾದುದು ಬಹು ಮುಖ್ಯ.

(ಚಿತ್ರಕೃಪೆ: ವಿಕಿಪೀಡಿಯ)