Monthly Archives: October 2011

ಸಂಪಾದಕೀಯ ಬಳಗದ ಪತ್ರ ಮತ್ತು ಇನ್ನೊಂದಷ್ಟು ಅಸಹ್ಯ/ಅಸಹನೀಯ ವಿಷಯಗಳು…

-ರವಿ ಕೃಷ್ಣಾರೆಡ್ಡಿ

ಕಳೆದ ವಾರ ಬರೆದ “ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ“ಕ್ಕೆ “ಸಂಪಾದಕೀಯ ಬಳಗ“ದವರು ಶನಿವಾರದಂದು ಪತ್ರವೊಂದನ್ನು ಬರೆದು ಅದನ್ನು ಅವರ ಬ್ಲಾಗಿನಲ್ಲೂ ಪ್ರಕಟಿಸಿದ್ದರು. ಕಳೆದ ನಾಲ್ಕೈದು ದಿನದಿಂದ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದುದ್ದರಿಂದ ಮತ್ತು ಕೆಲವು ತಾಂತ್ರಿಕ ಅಡಚಣೆಗಳಿಂದಾಗಿ ಅದನ್ನು ಇಲ್ಲಿ ಪ್ರಕಟಿಸುವುದಾಗಲಿ, ಪ್ರತಿಕ್ರಿಯಿಸುವುದಾಗಲಿ ಸಾಧ್ಯವಾಗಿರಲಿಲ್ಲ. ಈಗಲೂ ಆ ಸಮಸ್ಯೆಗಳು ಮುಂದುವರೆಯುತ್ತಿದ್ದರೂ ಇನ್ನೂ ತಡ ಮಾಡುವುದು ಬೇಡ ಎಂದು ಒಂದು ಪುಟ್ಟ ಟಿಪ್ಪಣಿಯೊಂದಿಗೆ ಅದನ್ನು ಇಲ್ಲಿ ಕೊಡುತ್ತಿದ್ದೇನೆ.

ನಮ್ಮ ರಾಜಕಾರಣ, ಸಮಾಜ, ಸಾಂಸ್ಕೃತಿಕ ಲೋಕ, ಮಾಧ್ಯಮ ರಂಗ, ಎಲ್ಲವೂ ಅಧಃಪತನದತ್ತ ದೌಡಾಯಿಸುತ್ತಲೇ ಇವೆ. ಇದು ನಿರಾಶೆಯಿಂದ ಹುಟ್ಟಿರುವ ಮಾತಲ್ಲ. ವಾಸ್ತವ. ರಾಜ್ಯದ ಬಿ.ಜೆ.ಪಿ. ಸರ್ಕಾರ ಮತ್ತು ಅದನ್ನು ನಿಯಂತ್ರಿಸುವ ಕೈಗಳು ಒಂದು ಸಮಾಜದಲ್ಲಿ ಯಾವುದು ಇದಕ್ಕಿಂತಲೂ ಕನಿಷ್ಟಮಟ್ಟಕ್ಕೆ ಹೋಗಲು ಸಾಧ್ಯ ಎಲ್ಲ ಎನ್ನುವ ಗೆರೆ ಇರುತ್ತದೊ ಅದನ್ನು ಪ್ರತಿ ಬಾರಿಯೂ ಇಳಿಸುತ್ತಲೇ ಹೋಗುತ್ತಿದೆ. ಸಮಾಜದ ವಿವಿಧ ರಂಗಗಳಿಗೂ ಅದರ ಪ್ರಭಾವ ವಿಸ್ತರಿಸುತ್ತಿದೆ. ಸಂಪಾದಕೀಯದವರ ಪತ್ರವಂತೂ ಮಾಧ್ಯಮವಲಯದದ ಇನ್ನಷ್ಟು ಅಸಹ್ಯಗಳನ್ನು ಪ್ರಸ್ತಾಪಿಸಿದೆ. ಇದೊಂದು ಆತ್ಮವಂಚಕರು, ದುಷ್ಟರು, ನಯವಂಚಕರು, ಸಮಾಜದ ಆಯಕಟ್ಟಿನ ಜಾಗಗಳಲ್ಲಿ ಕುಳಿತು ನಿಯಂತಿಸುತ್ತಿರುವ ಸಂದರ್ಭ. ಇದು ಮನುಷ್ಯ ಅಥವ ಸಮುದಾಯ ಪ್ರಯತ್ನದಿಂದ ಬದಲಾಗುತ್ತದೆ ಎನ್ನುವ ಆಸೆ ನನ್ನಲ್ಲಿಲ್ಲ. ಪ್ರಕೃತಿಯೇ ಸರಿ ಮಾಡಬೇಕೆನೊ? ಬಹುಸಂಖ್ಯಾತರಿಗೆ ಇಲ್ಲಿನ ಮೌಲ್ಯಗಳ ಅಧೋಗತಿ ಬಾಧಿಸುತ್ತಿರುವುದಿರಲಿಲಿ, ಅದೊಂದು ಗಮನಹರಿಸಬೇಕಾದ ವಿಷಯ ಎಂತಲೂ ಅನ್ನಿಸುತ್ತಿಲ್ಲ. ಅದಕ್ಕೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಿಗುತ್ತಿರುವ ಪರ-ವಿರೋಧ ಪ್ರತಿಕ್ರಿಯೆಗಳೇ ಸಾಕ್ಷಿ.

ನಾನು “ವರ್ತಮಾನ”ದಲ್ಲಿ ಬರೆದ ಪತ್ರಕ್ಕೆ ಮೊದಲೇ ಊಹಿಸಿದಂತೆ ಪ್ರತಿಕ್ರಿಯಿಸಬೇಕಾದವರ್ಯಾರೂ ಪ್ರತಿಕ್ರಿಯಿಸಿಲ್ಲ. ಅದನ್ನು ಬಹಳ ಜನ ನೋಡಿಲ್ಲ ಎಂದು ಹೇಳುವ ಹಾಗಿಲ್ಲ. ಅದನ್ನು ಗಣನೀಯ ಸಂಖ್ಯೆಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹುಶ: ಬೆಂಗಳೂರಿನ ಪತ್ರಕರ್ತರ ವಲಯದಲ್ಲಿ ನೋಡಬೇಕಾದವರೆಲ್ಲ ನೋಡಿದ್ದಾರೆ. ಆದರೆ, ಮೊದಲೇ ಹೇಳಿದಂತೆ ಇಂತಹ ವಿಷಯಗಳು ಇವತ್ತಿನ ಬಹುತೇಕ ಪತ್ರಕರ್ತರಿಗೆ ಪ್ರಮುಖ ವಿಷಯಗಳೇ ಅಲ್ಲ. ಸ್ವಾರ್ಥಸಾಧನೆಗೆ ಸಂಬಂಧ ಪಡದ ಎಲ್ಲವೂ ಅಮುಖ್ಯವೆ. ಆದರೆ “ಸಂಪಾದಕೀಯ ಬಳಗ” ಸುದೀರ್ಘ ಎನ್ನಬಹುದಾದ ಲೇಖನವನ್ನೇ ಬರೆದಿದ್ದಾರೆ. ಅವರಿಗೆ ಧನ್ಯವಾದ ಎನ್ನಲೇ? ಗೊತ್ತಾಗುತ್ತಿಲ್ಲ. ಅವರ ಕರ್ತವ್ಯವನ್ನು ಮತ್ತು ವೈಯಕ್ತಿಕ ಪ್ರಾಮಾಣಿಕತೆಯನ್ನು, ಅನಾಮಿಕವಾಗಿಯಾದರೂ ಸರಿ, ನಿರ್ವಹಿಸಿದ್ದಾರೆ, ಅಲ್ಲವೆ?. ಇಂತಹ ಧ್ವನಿಗಳು ಹೆಚ್ಚಲಿ ಎನ್ನುವುದರ ಜೊತೆಜೊತೆಗೇ, ಇದನ್ನು ಬಹಿರಂಗ ವೇದಿಕೆಗಳಲ್ಲಿ ನೇರಾನೇರವಾಗಿ ಪ್ರಸ್ತಾಪಿಸುವವರು ಮತ್ತು ಅಂತಹ ಸತ್ಯಕ್ಕಾಗಿ ಹೋರಾಡುವವರು ಬರಲಿ ಎಂದಷ್ಟೇ ಆಶಿಸುತ್ತೇನೆ. ಆದರೂ, ಸಂಪಾದಕೀಯ ಬಳಗ ಇಂತಹುದೊಂದು ಚರ್ಚೆಯನ್ನು ಮುಂದುವರೆಸುತ್ತಿರುವುದರಿಂದ ಅವರಿಗೆ ನನ್ನ ಅಭಿನಂದನೆಗಳು.

ಸಂಪಾದಕೀಯ ಬ್ಲಾಗ್‌ನಲ್ಲಿರುವ ಅವರ ಪತ್ರದ ಕೊಂಡಿ ಇದು. ಅಲ್ಲಿ ಕೆಲವು ಕಾಮೆಂಟ್‌ಗಳೂ ಇವೆ.

ಆ ಪತ್ರದ ಪೂರ್ಣ ಪಾಠ ಇದು:

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ

ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ.

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ. ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ? ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ? ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ… ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ? ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ. ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು. ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

ಭೂ ಸ್ವಾಧೀನ ವಿರೋಧಿ ಸಮಾವೇಶ

-ಅರುಣ್ ಜೋಳದಕೂಡ್ಲಿಗಿ

ಅಕ್ಟೋಬರ್ 17 ರಂದು ಗದಗಿನಲ್ಲಿ ರಾಜ್ಯಮಟ್ಟದ ಭೂಸ್ವಾಧೀನ ವಿರೋಧಿ ಸಮಾವೇಶ ನಡೆಯಿತು. ಇಂದು ಜಾತಿವಾದಿ,ಕೋಮುವಾದಿ ಬೆಂಬಲಿತ ಸಮಾವೇಶಗಳು ನಡೆವ ಹೊತ್ತಲ್ಲಿ ಇಂತಹದ್ದೊಂದು ಸಮಾವೇಶ ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಒಂದೆಡೆ ಭೂ ಕಬಳಿಕೆಯ ಆರೋಪ ಹೊತ್ತು ಆಳುವವರು ಜೈಲು ಸೇರಿದ್ದಾರೆ. ಕೆಲವರು ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಹೋರಾಟ ಕೂಗು ಕೆಲಸಕ್ಕೆ ಬಾರದ್ದು ಎಂದು ಸಿನಿಕರಾದ ಜನ ಮೌನವಾಗಿದ್ದಾರೆ. ಮತ್ತೊಂದೆಡೆ ಜನಪರವಾದ ಪ್ರಾಮಾಣಿಕ ಕೆಲ ಮನಸ್ಸುಗಳು ಒಂದೆಡೆ ಸೇರಿ ಭೂ ಸ್ವಾದೀನವನ್ನು ವಿರೋಧಿಸುತ್ತಿದ್ದಾರೆ. ಇವು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಬಹುದಾದ ವೈರುಧ್ಯದ ಚಿತ್ರಗಳು.

ಪೋಸ್ಕೋದಂತಹ ದೈತ್ಯ ಕಂಪನಿ ಬಾಲ ಮುದುರಿಕೊಂಡು ಹಿಂದೆ ಸರಿವಂತೆ ಎಚ್ಚರಿಕೆ ನೀಡಿದ ನೆಲದಲ್ಲಿಯೇ ಈ ಸಮಾವೇಶ ನಡೆದದ್ದು ಅರ್ಥಪೂರ್ಣ. ಇದನ್ನು ಕರ್ನಾಟಕದಾದ್ಯಂತ ವಿಸ್ತರಿಸಬೇಕಿದೆ. ಪ್ರಭುತ್ವವನ್ನು ಹಾಡಿ ಹೊಗಳುವ ಸ್ವಾಮೀಜಿಗಳ ಪೈಕಿ, ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳು ಭಿನ್ನವಾಗಿ ನಿಲ್ಲುತ್ತಾರೆ. ಸ್ವಾಮೀಜಿಗಳು ರೈತಪರವಾಗಿ ಪ್ರಭುತ್ವದ ಕಿವಿಹಿಂಡುವ ಗುಣ ಪಡೆದರೆ ಆಗಬಹುದಾದ ಪರಿಣಾಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಅವರು ಮಾತನಾಡುತ್ತಾ ಹೊಲ ಕೆಲವರಿಗೆ ಸೇರಿದ್ದರೆ ಈ ನೆಲ ಎಲ್ಲರಿಗೂ ಸೇರಿದ್ದು. ಹಾಗಾಗಿ ನಾವು ನೆಲದ ಬಗ್ಗೆ ಮಾತನಾಡುತ್ತಿದ್ದೇವೆ, ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಇಡೀ ಸಮಾವೇಶದ ಆಶಯವನ್ನು ತಾತ್ವಿಕವಾಗಿ ಮಂಡಿಸಿದರು.

ಈ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ಹಿರಿಯ ಸ್ವಂತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರು. ಅನ್ನಕೊಡುವ ರೈತರ ಭೂಮಿಯನ್ನು ಕಸಿಯುವುದು ಕೆಚ್ಚಲನ್ನೇ ಕೊಯ್ಯುವಂತಹ ಹೇಯ ಕೃತ್ಯ ಇದನ್ನು ತಡೆಯಬೇಕೆಂಬ ಆತಂಕ ವ್ಯಕ್ತಪಡಿಸಿ, ಸಮಾವೇಶದ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದನಗೌಡ ಪಾಟೀಲರು ಜಾಗತೀಕರಣದಿಂದಾಗಿ ಭೂಕೇಂದ್ರೀಕರಣವಾಗುತ್ತಿದೆ, ಸರಕಾರದಿಂದ ಅಧಿಕೃತವಾಗಿ, ಖಾಸಗಿಯವರಿಂದ ಅನಧಿಕೃತವಾಗಿ ಭೂ ಒತ್ತುವರಿಗಳು ನಡೆಯುತ್ತಲೇ ಇವೆ. ಇಂತಹ ಒತ್ತುವರಿಗಳನ್ನು ಪ್ರಜ್ಞಾವಂತರೆಲ್ಲಾ ವಿರೋಧಿಸಬೇಕಿದೆ ಎಂದರು. ಮಾವಳ್ಳಿ ಶಂಕರ್, ಬಾಬಾಗೌಡ ಪಾಟೀಲ್, ಮಾರುತಿ ಮಾನ್ಪಡೆ, ಶೌಕತ್ ಆಲಿ ಆಲೂರು, ರುದ್ರಮುನಿ ಆರದಗೆರೆ ಮುಂತಾದವರು ಸಮಾವೇಶದ ಆಶಯಗಳನ್ನು ಬೇರೆ ಬೇರೆ ನೆಲೆಯಲ್ಲಿ ವಿವರಿಸಿದರು.

ರಹಮತ್ ತರೀಕರೆಯವರು ಜನಸಮುದಾಯ ಯಾವುದನ್ನು ವಿರೋಧಿಸಬೇಕೆಂದು ಸಮಾವೇಶ ಮಾಡುತ್ತಿದ್ದೇವೆಯೋ ಯಾವುದು ಬೇಕು ಎಂದು ಕೂಡ ಹಕ್ಕೋತ್ತಾಯದಂತೆ ಕೇಳಬೇಕಾಗಿದೆ, ಹಲವು ಚಳವಳಿಗಳ ಏಕೀಕರಣವಾಗಬೇಕಿದೆ ಎಂದರು. ಟಿ. ಆರ್. ಚಂದ್ರಶೇಖರ್ ಅವರು ಗದಗ ಜಿಲ್ಲೆಯ ಅಭಿವೃದ್ಧಿಯ ಸಾದ್ಯತೆಗಳ ಬಗ್ಗೆ ತುಂಬಾ ವಾಸ್ತವವಾಗಿ ಮಾತನಾಡಿದರು. ಕೇಂದ್ರದ ಭೂ ಸ್ವಾಧೀನ ಮಸೂದೆ ಮತ್ತು ರೈತರ ಹಿತಾಸಕ್ತಿ ಕುರಿತಂತೆ ಕೆ.ಪಿ. ಸುರೇಶ್ ಅವರು ವ್ಯಂಗ್ಯಬರಿತ ವಿಷಾಧವನ್ನು ವ್ಯಕ್ತಪಡಿಸಿದರು. ಕೃಷಿ ವಲಯ: ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತಂತೆ ಶಿವಸುಂದರ್ ಕಟುವಾದ ಸತ್ಯಗಳನ್ನು ಬಯಲಿಗೆಳೆದರು. ಜಿ. ರಾಮಕೃಷ್ಣ ಅವರು ಕನರ್ಾಟಕದ ಸದ್ಯದ ನಡೆಯ ಬಗ್ಗೆ ವಿಮಶರ್ಾತ್ಮಕವಾಗಿ ಚಚರ್ಿಸಿದರು. ಹೀಗೆ ಇಡೀ ಸಮಾವೇಶ ವರ್ತಮಾನ ಮತ್ತು ಭವಿಷ್ಯದಲ್ಲಿ ರೈತಸಮುದಾಯ ಎದುರಿಸಬೇಕಾದ ಬಿಕ್ಕಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳಲು ಇರಬಹುದಾದ ದಾರಿಗಳನ್ನು ಕುರಿತಂತೆ ಒಂದು ಗಂಭೀರ ಚರ್ಚೆ ಸಾದ್ಯವಾಯಿತು.

ಈ ಸಮಾವೇಶದಲ್ಲಿ ರೈತ ಸಮುದಾಯ, ರೈತಪರ ಜನ ಹೆಚ್ಚಾಗಿಯೇ ಸೇರಿದ್ದರು. ವೆಂಕಟೇಶಯ್ಯ, ಇಪ್ಟಾ, ಸಮುದಾಯ ತಂಡಗಳ ಹೋರಾಟದ ಹಾಡುಗಳು ಈ ಸಮಾವೇಶದ ಆಶಯವನ್ನು ವಿಸ್ತರಿಸುವಂತಹ ಶಕ್ತಿ ಪಡೆದಿದ್ದವು. ಮುತ್ತು ಹಾಳಕೇರಿ, ಹು.ಬಾ. ವಡ್ಡಟ್ಟಿ ಅವರಿಂದ ಪೋಸ್ಕೋ ಹೋರಾಟದ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ಸಮಾವೇಶದ ಪರಿಣಾಮವನ್ನು ಹೆಚ್ಚಿಸುವಂತಿದ್ದವು. ಅಂತೆಯೇ ಭೀಮೇಶ ತಂಡದಿಂದ `ಭೂಮಿ ಕೊಡುವ ಮಾತಾಯಿತು’ ನಾಟಕ ಸದ್ಯದ ರೈತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.

ಈ ಸಮಾವೇಶ ಹಲವು ಸಂಘಟನೆಗಳ ಫಲ. ಹೀಗೆ ಒಂದು ಸಮಾನ ಉದ್ದೇಶ ಸಾಧನೆಗಾಗಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದು ಕೂಗಿಗೆ ತಮ್ಮ ದ್ವನಿ ಸೇರಿಸುವ ಅಗತ್ಯವಿದೆ. ಹಲವು ಸಂಘಟನೆಗಳ ಏಕೀಕರಣಕ್ಕೆ ಕಾರಣವಾದ ಗದಗದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿಯವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಎಲ್ಲರನ್ನೂ ಒಂದೆಡೆ ಸೇರಿಸುವುದರಲ್ಲಿ ಬಸವರಾಜ ಸೂಳಿಬಾವಿ ಅವರ ಶ್ರಮ ಹೆಚ್ಚಿನದು. ಹೀಗೆ ಕರ್ನಾಟಕದಾದ್ಯಾಂತ ಈ ಸಮಾವೇಶವನ್ನು ವಿಸ್ತರಿಸುವ ಮತ್ತು ಆ ಮೂಲಕ ರೈತರಲ್ಲಿ ಒಂದು ಬಗೆಯ ಹೊಸ ಸಂಚಲನವನ್ನು ಉಂಟುಮಾಡುವ ಅಗತ್ಯವಿದೆ. ಇದಕ್ಕೆ ಆಯಾ ಭಾಗದ ಪ್ರಜ್ಞಾವಂತ ಜನ ಕೈ ಜೋಡಿಸಬೇಕಾಗಿದೆ. ಇದು ಸದ್ಯದ ಕರ್ನಾಟಕದಲ್ಲಿ ಆಗಲೇಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು.

Majority of journalists are of a very poor intellectual level

This is one of the important interviews I have see lately. Karan Thapar talks to Chairman of the PCI Markandey Katju, and Justice Katju is very clear and outspoken in his words. I think it is very important to both our readers and journalist friends to listen to this.

Text version of the interview is available here.

[Ravi Krishna Reddy]

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 9

-ಡಾ.ಎನ್.ಜಗದೀಶ್ ಕೊಪ್ಪ

ಅಣೆಕಟ್ಟುಗಳು ಜಗತ್ತಿನೆಲ್ಲೆಡೆ ನದಿಗಳನ್ನು ಮಾತ್ರ ಕೊಲ್ಲಲಿಲ್ಲ. ಇದರ ಜೊತೆಜೊತೆಗೆ ಮನುಕುಲದ ಪೂವರ್ಿಕರು ಎಂದೇ ಜಾಗತಿಕ ಸಮುದಾಯ ನಂಬಿಕೊಂಡು ಬಂದಿದ್ದ, ಅರಣ್ಯವಾಸಿಗಳಾದ ಆದಿವಾಸಿ ಬುಡಕಟ್ಟು ಜನಾಂಗವನ್ನು ಕೂಡ ಹೇಳ ಹಸರಿಲ್ಲದಂತೆ ನಿರ್ನಾಮ ಮಾಡಿದವು.

ಅಣೆಕಟ್ಟುಗಳ ನಿಮರ್ಾಣದ ಇತಿಹಾಸದಲ್ಲಿ, ಗ್ವಾಟೆಮಾಲದಲ್ಲಿ ನಡೆದ ನರಮೇಧ ನಾಗರಿಕ ಜಗತ್ತು ತಲೆ ತಗ್ಗಿಸುವಂತಹದ್ದು. 1980ರ ದಶಕದಲ್ಲಿ ನಡೆದ ಈ ದುರಂತ ಘಟನೆ, ಅಭಿವೃದ್ಧಿಯ ವಾರಸುದಾರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿ ದಾಖಲಾಗಿದೆ.

ಗ್ವಾಟೆಮಾಲದ ರಿಯೊನಿಗ್ರೊ ಎಂಬ ಅರಣ್ಯದಲ್ಲಿನ ಆದಿವಾಸಿಗಳ ವಸತಿ ಪ್ರದೇಶದಲ್ಲಿ ನಡೆದ 376 ಮಂದಿಯ (ಮಹಿಳೆಯರೂ, ಪುರುಷರು, ಮಕ್ಕಳೂ ಸೇರಿದಂತೆ) ನರಮೇಧ ಅಲ್ಲಿನ ಮಾಯ ಅಚಿ ಎಂಬ ಬುಡಕಟ್ಟು ಜನಾಂಗಕ್ಕೆ ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದೆ.

ವಿಶ್ವಬ್ಯಾಂಕ್, ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಇಟಲಿ ಸರಕಾರದ ಧನ ಸಹಾಯದೊಂದಿಗೆ ಗ್ವಾಟೆಮಾಲ ಸರಕಾರ ಚಿಕ್ಸೊಯ್ ಅಣೆಕಟ್ಟು ನಿಮರ್ಿಸಲು 1976 ರಲ್ಲಿ ಯೋಜನೆ ರೂಪಿಸಿದಾಗ ನರಮೇಧದ ಅಧ್ಯಾಯ ಪ್ರಾರಂಭವಾಯಿತು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe1976 ರಲ್ಲಿ ಸರಕಾರದ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆಯ ಇಂಜಿನಿಯರ್ಗಳು ನೇರವಾಗಿ ಹೆಲಿಕಾಪ್ಟರ್ನಲ್ಲಿ ರಿಯೊನಿಗ್ರೊ ಗ್ರಾಮಕ್ಕೆ ಬಂದಿಳಿದು, ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಎಲ್ಲರೂ ಜಾಗ ಖಾಲಿ ಮಾಡಬೇಕು ಎಂದು ಹೇಳಿದಾಗಲೇ ಸರಕಾರ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ಸರಕಾರವು ಇವರಿಗೆ ಕೊಡಲು ನಿರ್ಧರಿಸಿದ ಪರಿಹಾರದ ಮೊತ್ತ, ಹೊಸದಾಗಿ ತೋರಿಸಿದ ಸ್ಥಳದ ಬಗ್ಗೆ ಅತೃಪ್ತಿಗೊಂಡ ಅಲ್ಲಿನ ಮೂಲನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಹಲವಾರು ಬಾರಿ ನಡೆದ ಸಂಧಾನ ಸಭೆಗಳು ವಿಫಲಗೊಂಡ ನಂತರ ಸರಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಯಿತು. ಇದಕ್ಕಾಗಿ ಸರಕಾರ ತುಳಿದ ಹಾದಿ ಮಾತ್ರ ಅನೈತಿಕ ಮಾರ್ಗವಾಗಿತ್ತು. ನಿರಂತರ 4 ವರ್ಷಗಳ ಸಂಘರ್ಷಣೆಯ ನಂತರ, ಸರಕಾರ ಗ್ವಾಟೆಮಾಲದಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಬಂಡುಕೋರರಿಗೆ ಆಹಾರ, ಆಶ್ರಯ ನೀಡುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಮೂಲನಿವಾಸಿಗಳಿಗೂ ಬಂಡುಕೋರರು ಎಂಬ ಹಣೆಪಟ್ಟಿ ಹಚ್ಚಿತು.

1980ರ ಮಾರ್ಚ್ ತಿಂಗಳಲ್ಲಿ ಆದಿವಾಸಿಗಳ ಗ್ರಾಮಕ್ಕೆ ಬಂದ ಮೂವರು ಮಿಲಿಟರಿ ಪೋಲೀಸರು, ಅಣೆಕಟ್ಟು ನಿಮರ್ಾಣದ ಸ್ಥಳದಿಂದ ಕಬ್ಬಿಣ ಕಳುವಾಗಿದೆ ಎಂಬ ನೆಪದಲ್ಲಿ ಕೆಲವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬಂಧನಕ್ಕೆ ವಿರೋಧ ವ್ಯಕ್ತ ಪಡಿಸಿದ ನಿವಾಸಿಗಳು ಪ್ರತಿದಾಳಿ ನಡೆಸಿದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವ ಭಯದಲ್ಲಿ ಓರ್ವ ಪೋಲೀಸ್ ನದಿಯಲ್ಲಿ ಮುಳುಗಿ ಸತ್ತ.

ಈ ಘಟನೆಯ ನಂತರ, ನಾಲ್ಕು ತಿಂಗಳ ಕಾಲ ತಣ್ಣಗಿದ್ದ ಸರಕಾರ ಮತ್ತೆ ಸಂಧಾನದ ನೆಪದಲ್ಲಿ, ಇಬ್ಬರು ಬುಡಕಟ್ಟು ಜನಾಂಗದ ನಾಯಕರನ್ನು ತಮ್ಮ ದಾಖಲೆಗಳ ಸಮೇತ ಅಣೆಕಟ್ಟು ಸ್ಥಳಕ್ಕೆ ಬರಲು ಆಹ್ವಾನಿಸಿತು. ಅವರಿಂದ ಬಲವಂತವಾಗಿ ಸಹಿ ಪಡೆದ ಸರಕಾರ, ಆ ಇಬ್ಬರು ನಾಯಕರನ್ನು ಒಂದುವಾರ ಕಾಲ ಗುಪ್ತ ಸ್ಥಳದಲ್ಲಿ ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿ ಕೊಂದು ಹಾಕಿತು.

ಈ ಘಟನೆ ನಡೆದ ಎರಡು ವರ್ಷಗಳ ನಂತರ ಸರಕಾರ, 1982ರ ಫೆಬ್ರವರಿ ತಿಂಗಳಿನಲ್ಲಿ 73 ಮಂದಿ ಮಹಿಳೆಯರು, ಪುರುಷರು, ಎಕ್ಯೂಕ್ ಎಂಬ ನಗರಕ್ಕೆ ಬಂದು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಆದೇಶ ಹೊರಡಿಸಿತು. ರಿಯೊನಿಗ್ರೊ ಹಳ್ಳಿಯಿಂದ ಮಿಲಿಟರಿ ಪೋಲೀಸರ ಕಛೇರಿಗೆ ಹೋದ 73 ಮಂದಿಯಲ್ಲಿ ಬದುಕುಳಿದು, ಹಳ್ಳಿಗೆ ಹಿಂದಿರುಗಿದ್ದು ಏಕೈಕ ಮಹಿಳೆ ಮಾತ್ರ. ಗ್ವಾಟೆಮಾಲ ಸರಕಾರದ ಸಿವಿಲ್ ಡಿಫೆನ್ಸ್ ಪೆಟ್ರೊಲ್ ಎಂಬ ಮಿಲಿಟರಿ ಪೋಲಿಸ್ ಪಡೆ ಎಲ್ಲರನ್ನೂ ನಿರ್ಧಕ್ಷಿಣ್ಯವಾಗಿ ಕೊಂದುಹಾಕಿತು. ಇದು ಸಾಲದೆಂಬಂತೆ ಅದೇ 1982ರ ಮಾರ್ಚ್ 13 ರಂದು 10 ಸೈನಿಕರು ಹಾಗೂ 25 ಪೋಲೀಸ್ ತುಕಡಿಯೊಂದಿಗೆ ಬಂದಿಳಿದ ನರಹಂತಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಬೇಟೆಯಾಡಿದರು. ಗಂಡಸರು ಮತ್ತು ಮಹಿಳೆಯರನ್ನು ಬಂದೂಕಿನ ಹಿಡಿಯಿಂದ, ಲಾಠಿಯಿಂದ ಬಡಿದು ಕೊಂದರೆ, ಮಕ್ಕಳ ಕೊರಳಿಗೆ ಹಗ್ಗ ಹಾಕಿ ಮರಕ್ಕೆ ನೇತುಹಾಕುವುದರ ಮೂಲಕ ಕೊಂದರು. 107 ಹಸುಳೆಗಳನ್ನು ಈ ಸಂದರ್ಭದಲ್ಲಿ ಹೊಸಕಿ ಹಾಕಲಾಯಿತು. ಈ ನರಮೇಧದಲ್ಲಿ ಬದುಕುಳಿದದ್ದು ಇಬ್ಬರು ಮಹಿಳೆಯರು ಮಾತ್ರ.

ನಾಗರಿಕ ಜಗತ್ತಿನ ಸಂಪರ್ಕವಿರಲಿ, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವಿರದ ಅಮಾಯಕ ಮೂಲನಿವಾಸಿಗಳ ನೋವಿನ ದೌರ್ಜನ್ಯಕ್ಕೆ ಪ್ರತಿಭಟಿಸಿ ಆಗ ಗ್ವಾಟೆಮಾಲದಲ್ಲಿ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಸರಕಾರವನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಿಗೂ ಇರಲಿಲ್ಲ. ಈ ನರಮೇಧ ಘಟನೆ ಸಂಭವಿಸಿದ ಎರಡು ತಿಂಗಳ ನಂತರ, ಮತ್ತೆ ದಾಳಿನಡೆಸಿದ ಮಿಲಿಟರಿ ಪೋಲಿಸರು 35 ಮಕ್ಕಳು ಸೇರಿದಂತೆ, 95 ಮಂದಿ ಆದಿವಾಸಿಗಳನ್ನು, ತಾವು ಬದುಕಿದ್ದ  ಹಳ್ಳಿಯಲ್ಲೇ ಸಾಲಾಗಿ ನಿಲ್ಲಿಸಿ ಹಣೆಗೆ ಗುಂಡಿಕ್ಕಿ ಕೊಂದರು. ಕೊನೆಗೆ ಗ್ವಾಟೆಮಾಲ ಸರಕಾರದ ವಿರುದ್ಧ ದನಿ ಎತ್ತಿದ ಎಡಪಂಥೀಯ ಪಕ್ಷದ ಕಾರ್ಯಕರ್ತರು, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿ ಈ ನರಮೇಧದ ಬಗ್ಗೆ ವಿಶ್ವದ ಗಮನ ಸೆಳೆದರು. ಈ ಸಂದರ್ಭದಲ್ಲಿ ಅಮೆರಿಕಾದ ಸ್ವಯಂ ಸೇವಾ ಸಂಸ್ಥೆ ವಿಟ್ನೆಸ್ ಫಾರ್ ದಿ ಪೀಪಲ್ಸ್ ರಂಗಪ್ರವೇಶ ಮಾಡಿ ಈ ಅಣೆಕಟ್ಟು ಯೋಜನೆಗೆ ಹಣಕಾಸಿನ ನೆರವು ನೀಡಿದ ವಿಶ್ವಬ್ಯಾಂಕ್ ಸೇರಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ವೇಳೆಗಾಗಲೇ ಹತ್ಯೆಯಾದ 369 ಆದಿವಾಸಿಗಳು ಸೇರಿದಂತೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ 72 ಸಾವಿರ ನಾಗರೀಕರು 1980ರಿಂದ 1984ರ ಅವಧಿಯೊಳಗೆ ಹತ್ಯೆಯಾಗಿದ್ದರು, ಇಲ್ಲವೆ ಕಾಣೆಯಾಗಿದ್ದರು. ಸ್ವಯಂ ಸೇವಾ ಸಂಸ್ಥೆ ನಡೆಸಿದ ತನಿಖೆಯ ಮೂಲಕ ಧೃಡಪಟ್ಟ ಅಸಲಿ ಸಂಗತಿಯೆಂದರೆ ಈ ನರಮೇಧ ಮತ್ತು ಸಂಘರ್ಷದ ಹಿಂದೆ ಸರಕಾರದ ಹಲವಾರು ಅಧಿಕಾರಿಗಳ ಕೈವಾಡವಿದ್ದು, ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗುವ ಮಂದಿಗೆ ನೀಡಲಾಗುವ ಪರಿಹಾರವನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳೇ ಗಲಾಟೆಗೆ ಪ್ರಚೋದನೆ ನೀಡಿ ಫಲಾನುಭವಿಗಳನ್ನು ಹತ್ಯೆಗೈದಿದ್ದರು.

ಮೂಲತಃ ಈ ಅಣೆಕಟ್ಟು ಯೋಜನೆಯ ರೂಪು ರೇಷೆ ಸುಳ್ಳಿನ ಕಂತೆಗಳ ಮೇಲೆ ರೂಪುಗೊಂಡಿತ್ತು. ಈ ಅಣೆಕಟ್ಟಿನ ನೀಲಿ ನಕಾಶೆಯನ್ನು ಸಿದ್ದಪಡಿಸಿದ್ದು ಜರ್ಮನಿ ಮೂಲದ ಲ್ಯಾಮ್ ಕನ್ಸಾರ್ಟಿಯಮ್ ಎಂಬ ಸಂಸ್ಥೆ. ಇದರ ಅಂಗ ಸಂಸ್ಥೆಯಾದ ಲ್ಯಾಮಿಯರ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ಪರಿಸರ ಹಾನಿ ಹಾಗೂ ಯೋಜನೆಯಿಂದ ನಿರ್ಗತಿಕರಾಗುವ ಸಂಖ್ಯೆ ಕುರಿತಂತೆ ವರದಿ ಸಿದ್ಧಪಡಿಸಿತ್ತು. ಈ ವರದಿಯ ಪ್ರಕಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಹಳ್ಳಿಗಳಿಂದ ನಿರ್ವಸತಿಗರಾಗುವ ಸಂಖ್ಯೆ ಕೇವಲ 1,500 ಆದಿವಾಸಿಗಳು ಮಾತ್ರ. ವಾಸ್ತವವಾಗಿ 18 ಸಾವಿರ ಮಂದಿ ಆದಿವಾಸಿಗಳು ಅರಣ್ಯದಲ್ಲಿ ವಾಸವಾಗಿದ್ದರು. ವರದಿಯಲ್ಲಿ ಕೆಲವು ಗ್ರಾಮಗಳಲ್ಲಿ ಜನವಸತಿ ಇಲ್ಲ ಎಂದು ನಮೂದಿಸಲಾಗಿತ್ತು.

ಈ ಅಣೆಕಟ್ಟಿನ ವಿವಾದದಿಂದಾಗಿ ಚಿಕ್ಸೊಯ್ ನರಮೇಧ ಹೆಸರಿನಿಂದ ಪ್ರಸಿದ್ಧವಾದ ಈ ಘಟನೆಯ ಕುರಿತಂತೆ 1979ರಿಂದ 1991ರವರೆಗೆ ಸುಮಾರು 12 ವರ್ಷಗಳ ಕಾಲ ವಿಶ್ವಬ್ಯಾಂಕ್ ಆಗಲಿ ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಆಗಲಿ ಇಟಲಿ ಸರಕಾರವಾಗಲಿ ತುಟಿ ಬಿಚ್ಚಲಿಲ್ಲ.

ಅಣೆಕಟ್ಟು ಕಾಮಗಾರಿ ನಡೆದ ಸಮಯದಲ್ಲಿ ವರ್ಷವೊಂದರಲ್ಲಿ ಕನಿಷ್ಠ 3 ತಿಂಗಲ ಕಾಲ ವಿಶ್ವಬ್ಯಾಂಕ್ನ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಕಾಮಗಾರಿಯ ಉಸ್ತುವಾರಿ ವಹಿಸಿದ್ದರು. ಜೊತೆಗೆ ಆದಿವಾಸಿಗಳ ನರಮೇಧಕ್ಕೆ ಮೌನ ಸಾಕ್ಷಿಯಾಗಿದ್ದರು. 1985ರಲ್ಲಿ ಈ ಅಣೆಕಟ್ಟು ಯೋಜನೆಗೆ ಹಣ ಸಾಲದಾದಾಗ ಇಷ್ಟೆಲ್ಲ ಘಟನೆಗಳು ಸಂಭವಿಸಿದ್ದರೂ ಕೂಡ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ನೀಡಿತು. ಈ ಸಾಲ ನೀಡಿಕೆಯ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿತ್ತು. ಏಕೆಂದರೆ ತಾಂತ್ರಿ ಸಹಾಯ ಮತ್ತು ನಿರ್ಮಾಣ ಗುತ್ತಿಗೆಯನ್ನು ಸ್ವಿಡ್ಜರ್‌ಲ್ಯಾಂಡ್ ಮೂಲದ ಮೋಟಾರ್ ಕೊಲಂಬಸ್ ಹಾಗೂ ಅಮೆರಿಕಾದ ಇಂಟರ್ನ್ಯಾಷನಲ್ ಎಂಬ ಬಹು ರಾಷ್ಟ್ರೀಯ ಕಂಪನಿಗಳು ವಹಿಸಿಕೊಂಡಿದ್ದವು.

ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರೆ 1991ರಲ್ಲಿ ಅಣೆಕಟ್ಟು ಕಾಮಗಾರಿ ಮುಕ್ತಾಯಗೊಂಡಾಗ ಸಾಲ ನೀಡಿದ್ದ ವಿಶ್ವಬ್ಯಾಂಕ್ ತಾನು ನೀಡಿದ್ದ ಮುಕ್ತಾಯ ಪ್ರಮಾಣ ಪತ್ರದಲ್ಲಿ “ಗ್ವಾಟೆಮಾಲದ ಚಿಕ್ಸೊಯ್ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದ 1,500 ಮಂದಿ ಆದಿವಾಸಿಗಳು ಘರ್ಷಣೆಯಲ್ಲಿ ಮೃತಪಟ್ಟಿದ್ದು, ಯೋಜನೆ ವಿಳಂಬವಾಗಲು ಸ್ಥಳೀಯರ ಪ್ರತಿರೋಧ ಕಾರಣ,” ಎಂದು ತಿಳಿಸಿ, ಸಂಘರ್ಷದಲ್ಲಿ ಮೃತಪಟ್ಟ ಪುನರ್ವಸತಿ ಉಸ್ತುವಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಿತ್ತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ “ವಿಟ್ನೆಸ್ ಫಾರ್ ದಿ ಪೀಪಲ್ಸ್” 1996ರ ತನ್ನ ವಾರ್ಷಿಕ ವರದಿಯಲ್ಲಿ ಘಟನೆಯ ಬಗ್ಗೆ ಹೀಗೆ ನಮೂದಿಸಿತ್ತು: “ಗ್ವಾಟೆಮಾಲ ದುರಂತದ ಬಗ್ಗೆ ವಿಶ್ವಬ್ಯಾಕ್ಗೆ ಅರಿವಿತ್ತು. ಸಾಲವನ್ನು ವಿಸ್ತರಿಸುವ ಸಮಯದಲ್ಲಿ ಅಲ್ಲಿ ನಡೆದ ಹಿಂಸೆ, ನರಮೇಧದ ಬಗ್ಗೆ ಗೊತ್ತಿಲ್ಲವೆಂದರೆ ಇದು ವಿಶ್ವಬ್ಯಾಂಕ್ನ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಈ ಹಿಂಸೆಯ ಹಿಂದೆ ವಿಶ್ವಬ್ಯಾಂಕ್ನ ಕೈವಾಡವಿತ್ತು ಎಂದು ನಾವು ನಂಬಬೇಕಾಗುತ್ತದೆ.”

ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಕನಸಿನ ಯೋಜನೆಗೆ ಅಡ್ಡಿಯಾಗುವ ಅಮಾಯಕರನ್ನು ಹೊಸಕಿ ಹಾಕಲು ಸೂತ್ರದಾರನಂತೆ ತೆರೆಯ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಮೆರಿಕಾದ ಕೈಗೂಸಿನಂತೆ ವರ್ತಿಸುವ ವಿಶ್ವಬ್ಯಾಂಕಿನ ವಿಶ್ವ ರೂಪಕ್ಕೆ ಗ್ವಾಟೆಮಾಲ ದುರಂತಕ್ಕಿಂತ ಬೇರೊಂದು ಪುರಾವೆ ಬೇಕಿಲ್ಲ.

(ಮುಂದುವರಿಯುವುದು)

ಮಂಗಳೂರಲ್ಲಿ ಪುಣ್ಯವನಿತೆಯರ ಚಂಡಿಕಾಯಾಗ

– ಚಿದಂಬರ ಬೈಕಂಪಾಡಿ

ಸಾಮಾಜಿಕ ಅನಿಷ್ಠಗಳನ್ನು ಬುಡಸಹಿತ ಕಿತ್ತೊಗೆಯಬೇಕು ಎನ್ನುವ ಭಾಷಣ, ಘೋಷಣೆಗಳನ್ನು ಕೇಳುತ್ತೇವೆ, ಆದರೆ ಇಂಥವುಗಳ ಬುಡಕ್ಕೆ ಕೈ ಹಾಕಲು ಹೆದರುತ್ತೇವೆ. ಯಾಕೆಂದರೆ ಮತ್ತೆ ನಮ್ಮನ್ನು ಕಾಡುವುದು ಸಮಾಜ. ನಾವು ಇಂಥ ಸುಧಾರಣೆಗಳ ಜಾಡುಹಿಡಿದು ಹೋದರೆ ಸಮಾಜ ನಮ್ಮನ್ನು ಒಪ್ಪುತ್ತದೆಯೇ? ನಮ್ಮ ಹೆಂಡತಿ-ಮಕ್ಕಳು, ಬಂಧು-ಬಳಗ ಎಲ್ಲವೂ ನೆನಪಾಗುತ್ತದೆ. ಆದರೆ ಆಚರಣೆಗಳ ಹೆಸರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ನಮ್ಮನ್ನು ಕಾಡುವುದಿಲ್ಲ.

ಒಂದು ಕಾಲದಲ್ಲಿ ಅಸ್ತ್ವಿತ್ವಕ್ಕೆ ತಂದ ಆಚರಣೆಗಳನ್ನು ಕಾಲಾನುಕ್ರಮದಲ್ಲಿ ತಿದ್ದುಪಡಿಗಳೊಂದಿಗೆ ಆಚರಿಸಲು ನಮ್ಮ ಮನಸ್ಸುಗಳನ್ನು ಹದಗೊಳಿಸಿಕೊಳ್ಳುತ್ತೇವೆ. ಯಾಕೆಂದರೆ ಅವುಗಳಿಂದ ನಮಗೆ ಎಲ್ಲೋ ಒಂದುಕಡೆ ಸಮಸ್ಯೆ ಆಗುತ್ತಿದೆ ಎನ್ನುವ ಒಳಅರಿನಿನ ಕಾರಣಕ್ಕೆ. ಆದರೆ ನಾವು ಶತಮಾನಗಳ ಹಿಂದಿನ ಸಂದರ್ಭದಲ್ಲಿ ಹಿರಿಯರು ಮಾಡಿದಂಥ ಕೆಲವು ಸಂಪ್ರದಾಯ ಅಥವಾ ಆಚರಣೆಗಳನ್ನು ಪರಿಷ್ಕರಿಸದೆ ಅವುಗಳನ್ನು ಹಾಗೆಯೇ ಅಥವಾ ಹಿಂದಿಗಿಂತಲೂ ಹೆಚ್ಚು ಬದ್ಧತೆಯಿಂದ ಕಾಪಾಡಿಕೊಂಡು ಬರುತ್ತೇವೆ. ಯಾಕೆಂದರೆ ಅವುಗಳ ಬಗ್ಗೆ ಈಗಲೂ ಇರುವ ಬಲವಾದ ನಂಬಿಕೆಯಿಂದ.

ಪತಿಕಳೆದುಕೊಂಡ ವನಿತೆಯನ್ನು ನಾವು ಮನೆಯಲ್ಲಿ ಹೇಗೆ ನಡೆಸಿಕೊಳ್ಳುತ್ತೇವೆ? ಸಮಾಜ ಅಂಥವರ ಬಗೆ ಹೇಗೆ ಪ್ರತಿಕ್ರಿಯೆಸುತ್ತದೆ ಎನ್ನುವುದನ್ನು ಚೆನ್ನಾಗಿ ಬಲ್ಲೆವು. ಆದರೆ ಪತಿಕೊಂಡು ಆಕೆ ಅನುಭವಿಸುವ ಯಾತನೆಗಿಂತಲೂ ದಿನವೂ ಆಕೆ ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ಅನುಭವಿಸುವ ಯಾತನೆ ಅಮಾನವೀಯವಾದುದು. ಯಾಕೆಂದರೆ ಆಕೆ ಹೂ ಮುಡಿಯುವಂತಿಲ್ಲ, ಬಳೆ ತೊಡುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ ಇತ್ಯಾದಿ.. ಇತ್ಯಾದಿ ಹಲವು ಸಲ್ಲದುಗಳದ್ದೇ ಕಾರುಬಾರು.

ಅತ್ಯಂತ ಸೂಕ್ಷ್ಮವಾಗಿ ಸಮಾಜ ಇಂಥ ವನಿತೆಯರನ್ನು, ಅವರ ಯಾತನೆ, ಕಣ್ಣೀರನ್ನು ಗಮನಿಸಿದರೆ ಏನಾದೀತು?. ಆಕಾಶವೇ ಧರೆಗಿಳಿದು ಅನಾಹುತವಾದೀತೇ?, ಅಥವಾ ಬರಗಾಲ, ಅನಾವೃಷ್ಟಿ-ಅತಿವೃಷ್ಟಿ, ಪ್ರಳಯ ಉಂಟಾದೀತೇ?.

ಇರಬಹುದೇನೋ ಗೊತ್ತಿಲ್ಲ. ಆದರೆ ಮಂಗಳೂರಲ್ಲಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಶತಮಾನಗಳ ಹಿಂದ ಬ್ರಹ್ಮ ಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಗೋಕರ್ಣನಾಥನ ಸನ್ನಿಧಿಯಲ್ಲಿ ಪತಿಕಳೆದುಕೊಂಡ ವನಿತೆಯರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ನವರಾತ್ರಿಯ ಸಂದರ್ಭದಲ್ಲಿ ಪತಿಕಳೆದುಕೊಂಡ ವನಿತೆಯರು ಬಳೆ ತೊಟ್ಟು, ಹೂಮುಡಿದು, ಕುಂಕುಮ ಧರಿಸಿ ಗೋಕರ್ಣನಾಥನ ರಥ ಎಳೆದಿದ್ದರು.

ಈ ಕಾರ್ಯಕ್ರಮದ ಕುರಿತು ಅನೇಕ ಬುದ್ಧಿಜೀವಿಗಳು, ಸಾಂಸ್ಕೃತಿಕ ಜಗತ್ತಿನ ಪ್ರಮುಖರು, ಅಕ್ಷರ ಸಂಸ್ಕೃತಿಯನ್ನು ಆವಾಹಿಸಿಕೊಂಡವರು, ಸಾಮಾನ್ಯರು ಹೀಗೆ ವಿಭಿನ್ನ ನೆಲೆಯವರು ತಮ್ಮ ತಮ್ಮ ವಾದಸರಣಿಯನ್ನು ಮಂಡಿಸಿ ಜಗತ್ತಿನ ಕಣ್ಣು ತೆರೆಸಿದರು. ಅದರ ಮುಂದುವರಿದ ಭಾಗಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನಾಂದಿಯಾಗಿದೆ.

ಸಾಮಾನ್ಯವಾಗಿ ಯಾಗ, ಪೂಜೆ ನಡೆಯುವಾಗ ಮನೆಯ ಯಜಮಾನ, ಮುತ್ತೈದೆಯರು ಮಾತ್ರ ಭಾಗವಹಿಸಬೇಕು. ಪತಿಕಳೆದುಕೊಂಡವರು ಯಾಗಕ್ಕೆ ಕುಳಿತುಕೊಳ್ಳುವಂತಿಲ್ಲ. ಬಾಗಿಲ ಮರೆಯಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು, ಆದರೆ ಇದು ಯಾಗದಲ್ಲಿ ಭಾಗವಹಿಸಿದವರ ಕಣ್ಣಿಗೆ ಬೀಳಬಾರದು ಇತ್ಯಾದಿ…ಇತ್ಯಾದಿ ಕಟ್ಟುಪಾಡುಗಳು.

ಆದರೆ ಕುದ್ರೋಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಚಂಡಿಕಾ ಯಾಗ ಆಯೋಜಿಸಲಾಗಿತ್ತು. ಪತಿಕಳೆದುಕೊಂಡವರಿಗಷ್ಟೇ ಯಾಗಕ್ಕೆ ಕುಳಿತುಕೊಳ್ಳುವ ಅವಕಾಶವಿತ್ತು. ಮುಡಿಯಲು ಹೂವು, ಧರಿಸಲು ಸೀರೆ, ಹಣೆಗಿಡಲು ಕುಂಕುಮವನ್ನು ಕ್ಷೇತ್ರದ ವತಿಯಿಂದ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರು ಕೊಡಿಸಿದರು. ಪತಿ ಕಳೆದುಕೊಂಡ ಐನೂರಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು (ಲಾರಿ, ಕಾರು, ಜೀಪಿನಲ್ಲಿ ಕರೆದುತಂದವರಲ್ಲ ಖಂಡಿತಕ್ಕೂ)ಬಂದಿದ್ದರು.

ಯಾಗದ ಪೂಣರ್ಾಹುತಿ ಮುಗಿದಮೇಲೆ ಸುಮಂಗಲೆಯರಾದ ಮಾಲತಿ ಜನಾರ್ಧನ ಪೂಜಾರಿ, ಕಲ್ಪನಾ ಸಾಯಿರಾಂ,ಲಲಿತಾ ರಾಮಯ್ಯ, ಶಶಿಕಲಾ ಹರಿಕೃಷ್ಣ ಬಂಟ್ವಾಳ್ ಮತ್ತು ಪುಷ್ಪಲತಾ ಜಿ.ಸುವರ್ಣ ಅವರು ನೆರೆದ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಹೀಗೆ-`ನಾವು ನಮ್ಮ ಪತಿಯ ನಿಧನದ ನಂತರವೂ ಕರಿಮಣಿ ಸರ ಧರಿಸುತ್ತೇವೆ, ಹೂಮುಡಿಯುತ್ತೇವೆ, ಬಳೆತೊಡುತ್ತೇವೆ’.ಈ ಕ್ಷಣ ಪತಿಕಳೆದುಕೊಂಡ ವನಿತೆಯರ ಕಣ್ಣಾಲಿಗಳು ತುಂಬಿಬಂದದ್ದಂತೂ ನಿಜ. ಆನಂತರ ಈ ವನಿತೆಯರು ಕೈಮುಗಿದು ಬೆಳ್ಳಿ ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಸಂತಸಪಟ್ಟರು.

ಇದಿಷ್ಟು ಕುದ್ರೋಳಿ ಕ್ಷೇತ್ರದಲ್ಲಿ ಕಂಡುಬಂದ ಸಂಗತಿಗಳು. ಹೌದು ಜನಾರ್ಧನ ಪೂಜಾರಿಯವರು ಸಾಲಮೇಳದ ಮೂಲಕ ಲಕ್ಷಾಂತರ ಮಂದಿಗೆ ಸಾಲಕೊಡಿಸಿ ಸಾಲಮೇಳದ ಪೂಜಾರಿಯೆನಿಸಿಕೊಂಡರು. ಅವರ ನಂತರ ಯಾರೂ ಹೀಗೆ ಸಾಲ ಮೇಳ ಮಾಡಲಿಲ್ಲ. ಹಾಗೆಂದು ಈಗ ಕುದ್ರೋಳಿ ಕ್ಷೇತ್ರದಲ್ಲಿ ಮಾತ್ರವಲ್ಲಾ ನಾಡಿನ ಯಾವುದೇ ಮೂಲೆಯಲ್ಲಿ ಮಠಮಂದಿರಗಳು ಮಾಡಬೇಕಾದ ಕೆಲಸವನ್ನು ಪೂಜಾರಿ ಮಾಡಿಸುತ್ತಿದ್ದಾರೆ, ಅವರೇ ಹೇಳಿದ ಮಾತು ಸಂತೃಪ್ತಿ ಪಡುತ್ತಿದ್ದೇನೆ. ಇದು ಇತರ ಕಡೆಗಳಿಗೂ ವಿಸ್ತರಣೆಯಾಗಬೇಕು.

ಹಾಗಾದರೆ ಇಂಥ ಸಾಧ್ಯತೆಗಳನ್ನು ಸಮಾಜ ಒಪ್ಪುತ್ತದೆಯಲ್ಲವೇ?. ಸಾಮಾನ್ಯವಾಗಿ ಮೈಲಿಗೆಯಾದರೆ ದೇವರು ಮುನಿಸಿಕೊಳ್ಳುತ್ತಾರೆ, ಮುನಿಯುತ್ತಾರೆ ಎನ್ನುವ ಬಲವಾದ ನಂಬಿಕೆಯಿರುವ ಭೂಮಿಯಲ್ಲಿದ್ದೇವೆ. ಪತಿಕಳೆದುಕೊಂಡಾಕೆ ಅಮಂಗಳೆ ಎನ್ನುವುದಾದರೆ ಅದು ಮೈಲಿಗೆ ಎಂದೇ ಅರ್ಥವಲ್ಲವೇ?, ಹಾಗಾದರೆ ಬೆಳ್ಳಿಯ ರಥ ದೇವಸ್ಥಾನದ ಸುತ್ತಲೂ ಸರಾಗವಾಗಿ ಚಲಿಸಿದ್ದನ್ನು ನೋಡಿದರೆ ಗೋಕರ್ಣನಾಥನೂ ಇಂಥ ಸುಧಾರಣೆಯನ್ನು ಒಪ್ಪಿದ್ದಾನೆ ಅಂದುಕೊಳ್ಳಬಹುದೇ? ಯಾಕೆಂದರೆ ಈಗಲೂ ಇರುವ ನಂಬಿಕೆ ರಥದ ಹಗ್ಗವನ್ನು ಇಂಥವರೇ ಮೊದಲು ಮುಟ್ಟಬೇಕು, ಅಂಥವರೇ ಮೊದಲು ಪ್ರಸಾದ ಸ್ವೀಕರಿಸಬೇಕು, ಇಂಥ ಸಮುದಾಯದವರು ರಥದ ಹಗ್ಗ ಮುಟ್ಟಿದರೆ ಮಾತ್ರ ರಥ ಮುಂದಕ್ಕೆ ಚಲಿಸುತ್ತದೆ ಇತ್ಯಾದಿ…ಇತ್ಯಾದಿ ನಂಬಿಕೆಗಳಿಯಲ್ಲಾ?

ಮನಸ್ಸು ಮೈಲಿಗೆಯಾಗಬಾರದು ಬಹುಷ: ಕುದ್ರೋಳಿ ಗೋಕರ್ಣನಾಥನಿಗೆ. ಆದ್ದರಿಂದಲೇ ಸುಸೂತ್ರವಾಗಿ ಚಂಡಿಕಾ ಯಾಗ ನಡೆದಿದೆ, ಅದೂ ಪತಿಕಳೆದುಕೊಂಡ
ವನಿತೆಯರಿಂದ. ಬೆಳ್ಳಿ ರಥ ಯಾವ ಆತಂಕವೂ ಇಲ್ಲದೆ ಚಲಿಸಿದೆ. ಅಮಂಗಳೆ ಪತಿಕಳೆದುಕೊಂಡವಳು ಅಂತಾದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ ?.

ಏನೇ ಇರಲಿ ಪತಿಕಳೆದುಕೊಂಡ ವನಿತೆಯರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆಯ ಅಗತ್ಯವಿದೆ ಅನ್ನಿಸುತ್ತಿದೆ. ಪತಿಕಳೆದುಕೊಂಡ ವನಿತೆಯರು ಅನುಭವಿಸುವ ಯಾತನೆಯ ಮೇಲೆ ಬೆಳಕು ಹರಿಯಬೇಕಾಗಿದೆ. ಸಿನಿಮಾ, ಟಿವಿ ಸೀರಿಯಲ್ಗಳು ತಮ್ಮ ಹೊಸ ನೆಲೆ ಕಂಡುಕೊಳ್ಳಲು ಅನುವಾಗುತ್ತಿದೆ ಅನ್ನಿಸುತ್ತಿದೆ.