Daily Archives: October 7, 2011

“ಲಕ್ಷ್ಮಿಪತಿಯರಿಗೆ ಗಂಡಾಂತರ” ಮತ್ತು “ತಪ್ಪು, ಆದರೆ ಮಹಾಪರಾಧವೇನಲ್ಲ”

-ಭಾರತಿ ದೇವಿ ಪಿ.

‘ರಾಮಾಯಣ ಯುದ್ಧಕ್ಕೆ ಸೀತೆಯ ಚಪಲವೇ ಕಾರಣ, ಮಹಾಭಾರತದ ದುರಂತಕ್ಕೆ ನಾಂದಿ ಹಾಡಿದ್ದು ದ್ರೌಪದಿಯೇ’ ಎಂಬ ಹುಂಬ ವಾದದ ಮುಂದುವರಿಕೆಯಂತೆ ‘ಲಕ್ಷ್ಮಿಪತಿಯರಿಗೆ ತಪ್ಪಿದ್ದಲ್ಲ ಗಂಡಾಂತರ’ ಎಂಬ ಫರ್ಮಾನನ್ನು ಕನ್ನಡದ ಸುದ್ದಿ ವಾಹಿನಿಯೊಂದು ಹೊರಡಿಸಿದೆ. ಜೊತೆಗೆ, ನಿಮ್ಮ ಹೆಂಡತಿಯ ಹೆಸರು ಲಕ್ಷ್ಮಿಯೇ? ಎಂದು ಕೇಳುವುದರ ಮೂಲಕ ‘ನೀವು ಹುಶಾರಾಗಿರಿ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ, ಇಲ್ಲಿಗೆ ಗಂಡಂದಿರು ಮಾಡಿದ ಅನಾಚಾರಕ್ಕೆಲ್ಲ ಅವರ ದುರಾಸೆ,  ಅಧಿಕಾರ ಲಾಲಸೆ, ದುಷ್ಟತನ ಕಾರಣವಲ್ಲ, ಪತ್ನಿಯ ಹೆಸರು ಲಕ್ಷ್ಮಿ ಎಂದು ಇರುವುದೇ ಕಾರಣ ಎಂಬ ಅಪೂರ್ವ ಸಂಶೋಧನೆ ನಡೆಸಿ ತೀರ್ಮಾನ ಹೊರಡಿಸಿದೆ.

ಸ್ವಾತಂತ್ರ್ಯ ದೊರೆತು 64 ವರ್ಷಗಳಾದ ಮೇಲಾದರೂ ಸಮಾಜದಲ್ಲಿ ದಲಿತರ, ಮಹಿಳೆಯರ ಸ್ಥಾನಮಾನ ಉತ್ತಮಗೊಂಡಿದೆ ಎಂಬ ಭರವಸೆ ಹುಸಿಯಾಗುವ ಬಗೆಯಲ್ಲಿ ಈ ಬಗೆಯ ಘಟನೆಗಳು ಕಾಣಿಸುತ್ತವೆ. ಇತ್ತೀಚೆಗಿನ ದರ್ಶನ್ ಪ್ರಕರಣದಲ್ಲಿ ಒಂದೆಡೆ ಚಿತ್ರರಂಗದ ‘ಗಣ್ಯರು’ ಅವರ ಪತ್ನಿ ವಿಜಯಲಕ್ಷ್ಮಿಗೆ ಬಾತ್‌ರೂಮ್‌ನಲ್ಲಿ ಬಿದ್ದುದಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದರೆ ಇನ್ನೊಂದೆಡೆ ಇದಕ್ಕೆಲ್ಲ ಕಾರಣ ನಿಖಿತಾ ಎಂದು ಅವರಿಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕುತ್ತದೆ. ಏಕೆಂದರೆ ‘ಗಂಡ ಹೆಂಡತಿಗೆ ಹೊಡೆಯುವುದು ಸಹಜ’ವಾದ ಸಂಗತಿ ಎಂದು ಇವರಿಗೆ ಕಾಣುತ್ತದೆ. ಗಂಡಸಿನದು ಯಾವುದೇ ತಪ್ಪಿಲ್ಲದೆ ಅವನನ್ನು ತನ್ನ ಮೈಮಾಟಗಳಿಂದ ಸೆಳೆದು, ಸಂಸಾರಕ್ಕೆ ಹುಳಿ ಹಿಂಡುವವಳು ಇನ್ನೊಬ್ಬ ಹೆಣ್ಣು ಎಂದು ಅವರಿಗೆ ಅನಿಸುತ್ತದೆ. ಕನ್ನಡ ಚಿತ್ರರಂಗದ ಅಪ್ರಬುದ್ಧತೆ ಹೊಸದೇನೂ ಅಲ್ಲ ಎಂದಿಟ್ಟುಕೊಳ್ಳೋಣ. ಆದರೆ ಕರ್ನಾಟಕದ ಹೆಸರಾಂತ ಪತ್ರಿಕೆಯೊಂದು ಜನರ ಸಮೀಕ್ಷೆ ನಡೆಸಿ ದರ್ಶನ್ ಮಾಡಿದ್ದು ‘ತಪ್ಪು, ಆದರೆ ಮಹಾಪರಾಧವೇನಲ್ಲ’ ಎಂಬ ನಿಲುವಿಗೆ ಬಂದಿರುವುದು ಆಘಾತವುಂಟುಮಾಡುತ್ತದೆ. ಮಾಧ್ಯಮಗಳು ನ್ಯಾಯಾಧೀಶರಂತೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೊಡುತ್ತಿರುವುದು ಆತಂಕ ಹುಟ್ಟಿಸುತ್ತದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಿಡಬೇಕಾದ ಮಾಧ್ಯಮಗಳು ಸ್ವಾತಂತ್ರ ದೊರೆತು ಇಷ್ಟು ವರ್ಷಗಳಾದ ಹಂತದಲ್ಲಿ ಪ್ರಬುದ್ಧತೆಯನ್ನು ಮೆರೆಯಬೇಕಿತ್ತು. ಬದಲಿಗೆ ಇಂದು ಜನರಲ್ಲಿ ಬೇರೂರಿರುವ ಮೌಢ್ಯಗಳನ್ನು ಬಲಪಡಿಸುತ್ತಾ ಹಣ ಗಳಿಸುವತ್ತ ಸಾಗುತ್ತಿವೆ. ಅಷ್ಟೇ ಅಲ್ಲ, ಜನಸಾಮಾನ್ಯರ ಬದುಕಿನಲ್ಲಿ ಆಟ ಆಡುತ್ತಿವೆ. ‘ಲಕ್ಷ್ಮಿ ಪತಿಯರಿಗೆ ಕಾಟ ತಪ್ಪಿದ್ದಲ್ಲ’ ಕಾರ್ಯಕ್ರಮ ನಡೆದಾಗ ಬಂದ ಹಲವಾರು ಆತಂಕಿತ ಫೋನ್ ಕರೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಈ ಕಾರ್ಯಕ್ರಮದಿಂದಾಗಿ ಲಕ್ಷ್ಮಿ ಎಂಬ ಹೆಂಗಸಿನ ಗಂಡ ತನ್ನ ಸೋಲಿಗೆ ಅನುದಿನವೂ ಪತ್ನಿಯನ್ನು ದೂರುತ್ತಿದ್ದರೆ ಆಕೆಗಾಗುವ ಮಾನಸಿಕ ಹಿಂಸೆಯನ್ನು ಈ ಕಾರ್ಯಕ್ರಮದ ರೂವಾರಿಗಳು ಸರಿಪಡಿಸುತ್ತಾರೆಯೇ? ಅಥವಾ ಲಕ್ಷ್ಮಿ ಎಂಬ ಹೆಸರಿರುವ ಹುಡುಗಿಗೆ ಮದುವೆಯಾಗುವುದು ಕಷ್ಟವಾದರೆ ಅದರ ಹೊಣೆಯನ್ನು ಇವರು ಹೊರುತ್ತಾರೆಯೇ?

ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು ಅವರು ‘ಮಾಧ್ಯಮಗಳ ಕೆಲಸ ಜನರು ಏನು ಬಯಸುತ್ತಾರೆ, ಅದನ್ನು ಕೊಡುವುದಲ್ಲ. ಜನರಿಗೆ ಏನು ಬೇಕು ಅದನ್ನು ನೀಡುವುದು’ ಎಂದು ಒಂದೆಡೆ ಹೇಳಿದ್ದರು. ಇದಕ್ಕೆ ತದ್ವಿರುದ್ಧವಾಗಿ ಇಂದಿನ ಮಾಧ್ಯಮಗಳು ಜನರ ಬದುಕಿಗೆ ಬೇಕಾದ ತಿಳುವಳಿಕೆ ಕೊಡುವುದಕ್ಕೆ ಬದಲಾಗಿ ಅವರ ಬದುಕನ್ನು ಈ ಬಗೆಯಲ್ಲಿ ಕಲಕುವ ಪ್ರಯತ್ನ ಮಾಡುತ್ತಿವೆ. ಜೊತೆಗೆ, ಇನ್ನೊಬ್ಬರ ವೈಯಕ್ತಿಕ ಬದುಕಿಗೆ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ವಿವೇಕ ಮಾಧ್ಯಮಗಳಲ್ಲಿ ಇಲ್ಲದಿರುವುದು ವ್ಯಕ್ತಿಯ ಬದುಕಿನ ಘನತೆ, ಪಾವಿತ್ರ್ಯವನ್ನೇ ಅಲ್ಲಗಳೆಯುವ ಪ್ರಜಾಪ್ರಭುತ್ವ ವಿರೋಧಿ ಮೌಲ್ಯ.

ವಾಸ್ತವವಾಗಿ, ಜನಾರ್ದನ ರೆಡ್ಡಿಯ ಪತ್ನಿ, ಗ್ಯಾನಳ್ಳಿ ತಮ್ಮಯ್ಯ ಇವರೆಲ್ಲರ ಪತ್ನಿಯರು ತಮ್ಮ ಗಂಡಂದಿರು ಮಾಡಿದ ತಪ್ಪಿನಿಂದ ಈ ಪಡಬಾರದ ಸಂಕಟ ಪಡುತ್ತಿರುವುದೂ ಅಲ್ಲದೆ, ಈಗ ತಮ್ಮ ಹೆಸರುಗಳಿಂದ ತಾವೇ ಗಂಡಂದಿರ ಅನಾಚಾರಕ್ಕೆ ಹೊಣೆಯನ್ನೂ ಹೊತ್ತುಕೊಳ್ಳಬೇಕಾಗಿದೆ. ಅವರ ಮೇಲೆ ಅನ್ಯಥಾ ಆರೋಪ ಹೊರಿಸುವಾಗ ಕನಿಷ್ಟ ವಿವೇಕವನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೋರಿಸಿಲ್ಲ.

ಕಾರ್ಲ್ ಸಾಗನ್ ತನ್ನ “ದಿ ಡೆಮನ್ ಹಾಂಟೆಡ್ ವರ್ಲ್ಡ್” ಎಂಬ ಪುಸ್ತಕದಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಪ್ರಜಾಪ್ರಭುತ್ವ ಇವೆರಡೂ ಪ್ರತಿಪಾದಿಸುವ ಮೌಲ್ಯಗಳು ಒಂದೇ ಎಂದು ಹೇಳುತ್ತಾನೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು ಪ್ರಜಾಪ್ರಭುತ್ಚದ ಮೌಲ್ಯಗಳನ್ನು ಬಲಪಡಿಸುತ್ತದೆ. ಅದರ ಬದಲಿಗೆ ಇಂದು ಅಧ್ಯಯನ ನಡೆಸಬೇಕಾಗಿರುವುದು ಮೌಢ್ಯವನ್ನೇ ಪ್ರತಿಪಾದಿಸುತ್ತಾ ಪಾಳೇಗಾರಿಕೆಯ ಮೌಲ್ಯಗಳನ್ನೇ ಬಲಪಡಿಸುವತ್ತ ಮಾಧ್ಯಮಗಳು ಸಾಗುತ್ತಿರುವುದರ ಬಗೆಗೇ ಹೊರತು ಯಾರ ಹೆಸರು ಏನು, ಅದು ಹಾಗಿರುವುದರಿಂದಲೇ ಏನು ಅನರ್ಥವಾಗಿದೆ ಎಂಬ ತಳವಿಲ್ಲದ ಸಂಗತಿಗಳ ಬಗೆಗೆ ಅಲ್ಲ.

ಟಿಆರ್‌ಪಿ ಆಧಾರದಲ್ಲಿ ಜನಪ್ರಿಯತೆಯನ್ನು ನಿರ್ಧರಿಸುವ ಕಾಲದಲ್ಲಿ ಇಂದು ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಿರುವುದರ ಮಾನದಂಡ ಅದನ್ನು ಎಷ್ಟು ಹೆಚ್ಚು ಜನ ಮೆಚ್ಚಿದ್ದಾರೆ ಎಂಬುದಷ್ಟೇ ಆಗಿಲ್ಲ. ಅದನ್ನು ಅತಿ ಹೆಚ್ಚು ಜನ ತೆಗಳಿದರೂ ಆ ಕಾರ್ಯಕ್ರಮ ಯಶಸ್ವಿಯಾಯಿತೆಂದೇ ಭಾವಿಸಲಾಗುತ್ತದೆ. ಒಟ್ಟಿನಲ್ಲಿ ಒಳ್ಳೆಯ ರೀತಿಯಲ್ಲೇ ಆಗಲೀ, ಕೆಟ್ಟ ರೀತಿಯಲ್ಲೇ ಅಗಲಿ, ಅತಿ ಹೆಚ್ಚು ಜನರನ್ನು ಸೆಳೆದು ನೋಡುವಂತಾಗಿಸುವುದೇ ಚಾನೆಲ್ಗಳ ಗುರಿ. ಹೀಗಾಗಿ ಈ ಬಗೆಯ ಕಾರ್ಯಕ್ರಮಗಳನ್ನು ವಿಮರ್ಶಿಸುವ ನಾವೂ ಪರೋಕ್ಷವಾಗಿ ಅದನ್ನು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇವೆ ಎಂಬುದೇ ಇಲ್ಲಿನ ವ್ಯಂಗ್ಯ.

ಈ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರನ್ನು ಕರೆದು ಮಾತಾಡಿಸಿದಂತೆ ಒಬ್ಬ ವಿಚಾರವಾದಿಗೆ ಅವಕಾಶ ಇರಲಿಲ್ಲ. ಅದರಲ್ಲೂ ಅಲ್ಲಿಗೆ ಬಂದಿದ್ದ ಜ್ಯೋತಿಷಿಯೊಬ್ಬರು ‘ಲಕ್ಷ್ಮಿ ಅನ್ನುವ ಹೆಸರು ಶುಭವಾದದ್ದೇ ಆಗಿದ್ದರೂ ಗಂಡ ಹೆಂಡತಿಯನ್ನು ಲಕ್ಷ್ಮಿ, ಬಾರೇ ಹೋಗೇ ಅನ್ನುವುದರಿಂದ ಆ ಹೆಸರು ಅಪಮೌಲ್ಯಗೊಂಡು ತೊಂದರೆಯುಂಟಾಗುತ್ತದೆ’ ಎಂದೆಲ್ಲ ಬಾಲಿಶವಾಗಿ ಮಾತಾಡಿದ್ದರು. ಇಡೀ ಕಾರ್ಯಕ್ರಮವನ್ನು ಟಿಆರ್‌ಪಿಗಾಗಿಯೇ ಮಾಡಿದ್ದರೂ ಇಡೀ ಚರ್ಚೆಯಲ್ಲಿ ಒಂದು ಭಿನ್ನ ದನಿಗೆ ಅವಕಾಶ ಮಾಡಿಕೊಡುವ ಅವಕಾಶವಿತ್ತು. ಆದರೆ ಹಾಗಾಗಲಿಲ್ಲ.

ಮುರ್ಡೋಕ್ ಪ್ರಕರಣದ ಬಗ್ಗೆ ಜಿ.ಎನ್.ಮೋಹನ್ ಬರೆಯುತ್ತಾ “ಸಿಟಿಜನ್ ಕೇನ್” ಎಂಬ ಚಿತ್ರದ ಉದಾಹರಣೆ ನೀಡಿ ಅದರಲ್ಲಿ ‘ಪತ್ರಿಕೆಗೆ ಅತಿರಂಜಿತ ಸುದ್ದಿ ಸಿಗದಾಗ ಮಾಲೀಕ ತಾನೇ ಕೊಲೆ ಮಾಡಿಸಿ ಸುದ್ದಿ ಮಾಡುವ ಸ್ಥಿತಿ’ಗೆ ತಲುಪುವುದನ್ನು ವಿವರಿಸಿದ್ದರು. ಆದರೆ ಅವರೇ ಮುಖ್ಯಸ್ಥರಾಗಿರುವ ಸಮಯ ವಾಹಿನಿಯಲ್ಲಿ ಟಿಆರ್‌ಪಿಗಾಗಿ ಇಂತಹ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದು ನಿರಾಸೆ ಹುಟ್ಟಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಬಯಸುವ ನಾವು ನೋಡುಗರಾಗಿ, ಓದುಗರಾಗಿ ಹುರುಳಿಲ್ಲದ ಕಾರ್ಯಕ್ರಮಗಳನ್ನು, ಬರಹಗಳನ್ನು ಗಟ್ಟಿದನಿಯಿಂದ ವಿರೋಧಿಸುವ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ರಾಜಕೀಯ ಪಕ್ಷಗಳಿಗೆ ಕೊಪ್ಪಳದ ಫಲಿತಾಂಶ ಕೊಟ್ಟ ಸಂದೇಶ

-ಚಿದಂಬರ ಬೈಕಂಪಾಡಿ

ಕೊಪ್ಪಳ ವಿಧಾನ ಸಭೆಯ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಬೀಗುತ್ತಿದೆ, ಕಾಂಗ್ರೆಸ್ ತನ್ನ ಸೋಲನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕಾಗಿದೆ. ಜೆಡಿಎಸ್ ಇಲ್ಲಿ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವಂತೆ ಪ್ರತಿಕ್ರಿಯೆಸಿದೆ. ಇಲ್ಲಿ ಕರಡಿ ಸಂಗಣ್ಣ ಗೆದ್ದಿರುವುದಕ್ಕೆ ಬಿಜೆಪಿ ಮನೆಯೊಳಗೆ ಹಲವು ಮಂದಿ ತಾವೇ ಕಾರಣವೆಂದು ಹೇಳಿಕೊಳ್ಳುತ್ತಿದ್ದಾರೆ. ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವೆಂದು ಬಣ್ಣಿಸುವ ಜಾಣ್ಮೆಯನ್ನೂ ತೋರಿಸಿದ್ದಾರೆ.

ಕೊಪ್ಪಳ ಉಪಚುನಾವಣೆಯನ್ನು ಬಿಜೆಪಿಗೆ ಗೆಲ್ಲಲೇ ಬೇಕಾಗಿತ್ತು, ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷ. ಚುನಾವಣೆಗೂ ಮೊದಲು ಬಿಜೆಪಿಯೊಳಗೆ ಕೊಪ್ಪಳ ಉಪಚುನಾವಣೆ ನಾಯಕತ್ವ ಯಾರ ಹೆಗಲಿಗೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಮುಖ್ಯಮಂತ್ರಿ ಸದಾನಂದ ಗೌಡರ ನಡುವೆ ಆಂತರಿಕ ಯುದ್ಧವೇ ನಡೆದಿತ್ತು. ಆದರೆ ತಮ್ಮೊಳಗಿನ ವೈಮನಸ್ಸನ್ನು ತಾವೇ ಬಗೆಹರಿಸಿಕೊಂಡು ಕೊಪ್ಪಳ ಗೆಲುವಿಗೆ ಮುಂದಾದರು.

ಕೊಪ್ಪಳ ಉಪಚುನಾವಣೆ ಫಲಿತಾಂಶವನ್ನು ಬಿಜೆಪಿ ತನ್ನ ಸ್ವಸಾಮರ್ಥ್ಯವೆಂದು ಭ್ರಮೆಪಟ್ಟುಕೊಳ್ಳಬಾರದು. ಹಾಗೆಯೇ ಕಾಂಗ್ರೆಸ್ ಇಲ್ಲಿನ ಸೋಲನ್ನು ಸುಲಭವಾಗಿ ಮರೆಯಬಾರದು. ಜೆಡಿಎಸ್ ನಿರ್ಲಿಪ್ತವಾಗಿ ಕುಳಿತುಕೊಳ್ಳುವಂತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಕೊಪ್ಪಳದಲ್ಲಿ ಸಮರ್ಥವಾಗಿ ಹೋರಾಟ ಮಾಡಲಾಗದೆ ಸೊರಗಿತು. ಹಣಬಲ, ಹೆಂಡದ ಬಲದಿಂದ ಬಿಜೆಪಿ ಗೆಲುವು ಸಾಧಿಸಿತು ಎಂದು ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಹೇಳಿರುವುದು ತಾನು ಹಣ ಚೆಲ್ಲಲಿಲ್ಲ ಎನ್ನುವ ಅರ್ಥ ಕೊಡುತ್ತದೆ ಹೊರತು ವಾಸ್ತವ ಅದಲ್ಲ.

ಕರಡಿ ಸಂಗಣ್ಣ ಅವರನ್ನು ಅಲ್ಲಿನ ಮತದಾರರು ಮತ್ತೊಮ್ಮೆ ವಿಧಾನ ಸಭೆಗೆ ಕಳುಹಿಸಿ ಹಿಟ್ನಾಳ್, ಪ್ರದೀಪ್ ಗೌಡರನ್ನು ಕೈಬಿಟ್ಟಿರುವುದಕ್ಕೆ ಸಂಗಣ್ಣ ಅವರ ಮೇಲಿನ ವಿಶ್ವಾಸವೂ ಕಾರಣವಿರಬಹುದು. ಹಾಗೆಯೇ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಚುನಾವಣೆ ಗೆಲ್ಲುವುದನ್ನೇ ಮರೆತು ಬಿಟ್ಟಿರುವುದು ಕೂಡಾ ಸಂಗಣ್ಣ ನಗೆಬೀರಲು ಕಾರಣ. ಸಹಜವಾಗಿಯೇ ಬಿಜೆಪಿಗೆ ಗೆಲ್ಲುವ ಎಲ್ಲಾ ಅನುಕೂಲತೆಗಳು ಇದ್ದವು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಸಮರ್ಥ ನಾಯಕತ್ವದ ಮೂಲಕ ಜನಮನ ಗೆಲ್ಲಲು ವಿಫಲವಾಗಿದೆ. ಎಲ್ಲಾವರ್ಗದ ಜನ  ಒಪ್ಪುವ ನಾಯಕತ್ವ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎನ್ನುವುದು ಈ ಉಪಚುನಾವಣೆಯ ಮೂಲಕ ಅನಾವರಣಗೊಂಡಿದೆ.

ಯಡಿಯೂರಪ್ಪ ಮಾಜಿಯಾಗಿದ್ದರೂ ಹಾಲಿಯಷ್ಟೇ ಪವರ್ಫುಲ್ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನಿಸಿದ್ದಾರೆ. ಕನರ್ಾಟಕದಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟು ಬಿಜೆಪಿ ರಾಜಕೀಯ ಮಾಡುವಂತಿಲ್ಲ ಎನ್ನುವುದನ್ನು ಕೊಪ್ಪಳದ ಗೆಲುವು ನಿರೂಪಿಸಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಇಲ್ಲಿಯ ಗೆಲುವನ್ನು ಬಿಜೆಪಿ ಸಕರ್ಾರದ ಹೆಗಲಿಗೆ ಹಾಕಿ ಬುದ್ಧಿವಂತಿಕೆ ತೋರಿಸಿದ್ದಾರೆ.

ಜೆಡಿಎಸ್ನ ಪರಮೋಚ್ಛನಾಯಕ ದೊಡ್ಡ ಗೌಡರು ಕೊಪ್ಪಳದ ಫಲಿತಾಂಶವನ್ನು ಮೊದಲೇ ಊಹಿಸಿದವರಂತೆ ದೂರವೇ ಉಳಿದುಕೊಂಡು ತಮ್ಮ ಚಾಣಾಕ್ಷತೆಯನ್ನು ಪ್ರದಶರ್ಿಸಿದ್ದಾರೆ. ಕೊಪ್ಪಳ ಸಂಗಣ್ಣ ಅವರ ಕರ್ಮಭೂಮಿ ಎನ್ನುವ ಕಾರಣಕ್ಕೆ ದೇವೇಗೌಡರು ಸುಮ್ಮನಾದರೆಂದು ಭಾವಿಸುವಂತಿಲ್ಲ ಅಥವಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಗೆಲ್ಲುವ ಕಸುಬುಗಾರಿಕೆ ಗೊತ್ತಿಲ್ಲರಲಿಲ್ಲ ಅಂದುಕೊಳ್ಳುವಂತಿಲ್ಲ. ಕಾಂಗ್ರೆಸ್ ಪಕ್ಷ ಸರಣಿ ಸೋಲು ಅನುಭವಿಸಿತ್ತಿದ್ದರೂ ಆ ಪಕ್ಷದವರು ಜೆಡಿಎಸ್ ಜೊತೆ ಕೈಜೋಡಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಪಾಠ ಕಲಿಸಲು ಗೌಡರು ಈ ನಡೆ ಅನುಸರಿಸಿದ್ದಾರೆ.

ಬಿಜೆಪಿಯನ್ನು ಕಾಂಗ್ರೆಸ್, ಜೆಡಿಎಸ್ ಸಮಾನ ದೂರದಲ್ಲಿಟ್ಟು ರಾಜಕೀಯ ಮಾಡುತ್ತಿವೆ. ಅಂತೆಯೇ ಬಿಜೆಪಿ ಕೊಡಾ ಈ ಪಕ್ಷಗಳನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ನಂಬಿ ರಾಜಕೀಯ ಮಾಡುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಕಲಹದ ಲಾಭ ಪಡೆಯುವುದು ಕಾಂಗ್ರೆಸ್ ಮತ್ತು ಜೆಡಿಎಸ್ನ ಉದ್ದೇಶವಾಗಿರಬಹುದು. ಆದರೆ ಈ ಪಕ್ಷಗಳಿಗೆ ಬಿಜೆಪಿಯೊಳಗೆ ಅದೆಷ್ಟೇ ಕಿತ್ತಾಟವಿದ್ದರೂ ಚುನಾವಣೆ ಕಾಲದಲ್ಲಿ ಪಕ್ಷವನ್ನು ಮುಂದಿಟ್ಟುಕೊಂಡು ನಾಯಕರು ಮತಯಾಚಿಸುತ್ತಾರೆ ಎನ್ನುವ ಅರಿವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಗೊತ್ತಿದೆ. ಆದರೂ ಒಣಪ್ರತಿಷ್ಟೆ ವಿಶೇಷವಾಗಿ ಕಾಂಗ್ರೆಸ್ ನಾಯಕರನ್ನು ಆವರಿಸಿಬಿಡುತ್ತದೆ, ಆದ್ದರಿಂದಲೇ ಈ ಪಕ್ಷದ ನಾಯಕರು ತಮ್ಮತಮ್ಮೊಳಗೇ ಸ್ವಯಂ ನಾಯಕತ್ವವನ್ನು ಆವಾಹಿಸಿಕೊಂಡು ಓಡಾಡುತ್ತಿರುತ್ತಾರೆ.

ಕೆಪಿಸಿಸಿ ನಾಯಕರಾದವರಿಗೆ ಮಾತ್ರ ಚುನಾವಣೆ ಗೆಲ್ಲಿಸುವ ಜವಾಬ್ದಾರಿ ಎನ್ನುವಂತೆ ಈ ಪಕ್ಷದ ಉಳಿದ ನಾಯಕರು ವರ್ತಿಸುವುದರಿಂದ ಚುನಾವಣೆ ಕಣದಲ್ಲಿ ಹಿನ್ನಡೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಸುಲಭದ ಕೆಲಸವಲ್ಲ ಎನ್ನುವುದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮನವರಿಕೆ ಮಾಡಿಕೊಳ್ಳಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಅವಲೋಕಿಸಬೇಕಾಗಿದೆ. ಅಲ್ಲಿನ ಮತದಾರರ ಅಂಕೆ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಗೆ ಸುಮಾರು ಅರ್ಧದಷ್ಟು ಮತದಾರರು ವಿರೋಧವಿರುವುದು ಗೋಚರಿಸುತ್ತದೆ. ಕರಡಿ ಸಂಗಣ್ಣ ಅವರನ್ನು 60,405 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಬಸವರಾಜ್ ಹಿಟ್ನಾಳ್ ಪರ 47,917 ಮಂದಿ ಮತ ಚಲಾಯಿಸಿದ್ದಾರೆ. ಪರಾಜಿತ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡರನ್ನು 20,719 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಒಟ್ಟು ಮತಗಳು ಗೆದ್ದ ಅಭ್ಯರ್ಥಿಗಿಂತಲೂ ಹೆಚ್ಚು. ಈ ಲೆಕ್ಕಾಚಾರ ಬಿಜೆಪಿಗೂ ಮುಂದಿನ ನಡೆ ಹೇಗಿಡಬೇಕೆನ್ನುವುದಕ್ಕೆ ದಿಕ್ಸೂಚಿಯಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಯೋಚಿಸಿದರೆ ಬಿಜೆಪಿ ಮುನ್ನಡೆಗೆ ಕಾರಣಗಳು ಅರ್ಥವಾಗಿಬಿಡುತ್ತವೆ. ಚುನಾವಣೋತ್ತರ ಮೈತ್ರಿಯ ಅನಿವಾರ್ಯತೆಯನ್ನು ಕೊಪ್ಪಳ ಉಪಚುನಾವಣೆ ಈ ಪಕ್ಷಗಳ ಮುಂದಿಟ್ಟಿದೆ. ಹಾಗೆಯೇ ಬಿಜೆಪಿ ಆಂತರಿಕ ಕಿತ್ತಾಟಗಳಿಂದ ನಲುಗಿದರೆ ಭವಿಷ್ಯ ಏನಾಗಬಹುದು ? ಎನ್ನುವ ಒಳಮರ್ಮವನ್ನು ಅರಿತುಕೊಳ್ಳಲು ಅವಕಾಶವಾಗಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಪಕ್ಷಗಳು ತಾಲೀಮು ನಡೆಸಬೇಕಾಗಿರುವುದರಿಂದ ತಾವು ಯಾವ ಸ್ತರದಲ್ಲಿದ್ದೇವೆ ಎನ್ನುವುದನ್ನು ನೋಡಿಕೊಳ್ಳಲು ಇದು ಸಕಾಲ. ಗುಜರಾತ್ ಮಾದರಿ ಅಭಿವೃದ್ಧಿ ಮಾಡುವ ಕನಸು ಬಿತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬಿಜೆಪಿ ಸಾರಥಿಯಾಗಿ ಕರ್ನಾಟಕವನ್ನು ಮುನ್ನಡೆಸಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಪ್ರೇರಣೆಯಾಗಿದೆ. ಅಂತೆಯೇ ಕಾಂಗ್ರೆಸ್, ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುನ್ನುಡಿಯಾಗಿದೆ.