ದಂತಗೋಪುರದ ದಂಡನಾಯಕರು

 ಡಾ.ಎನ್. ಜಗದೀಶ್ ಕೊಪ್ಪ

                   ಅವರು ಈ ಕಗ್ಗತ್ತಲಿನಲ್ಲಿ ಹಾಡಬಲ್ಲರೆ?
ಹೌದು ಹಾಡಬಲ್ಲರು
ಕಗ್ಗತ್ತಲನ್ನು ಕುರಿತು ಮಾತ್ರ
ಅವರು ಹಾಡಬಲ್ಲರು
ಬರ್ಟೋಲ್ ಬ್ರೆಕ್ಟ್

ಈ ಅಂಕಿ ಅಂಶವನ್ನು ನೀವು ನಂಬಲೇಬೇಕು. ಈ ದೇಶದ ನಗರ ಪ್ರದೇಶದ ವ್ಯಕ್ತಿ ದಿನವೊಂದಕ್ಕೆ 33 ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶದ ವ್ಯಕ್ತಿ 26 ರೂ ಗಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಬಡವರಲ್ಲ. ಭಾರತದ ಜನತೆ ಬೆಚ್ಚಿ ಬೀಳಿಸುವ ಈ  ವರದಿಯನ್ನು ನಮ್ಮ ಕೇಂದ್ರ ಯೋಜನಾ ಆಯೋಗ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ನಮ್ಮನ್ನಾಳುವ ಜನನಾಯಕರು ವಾಸ್ತವದ ಬದುಕಿನಿಂದ ಎಷ್ಟು ದೂರವಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕು. ಅತ್ಯಂತ ನೋವಿನ ಸಂಗತಿಯೆಂದರೆ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ್‌ ಸಿಂಗ್ ಸಾಧಾರಣ ವ್ಯಕ್ತಿಯಲ್ಲ. ಜಗತ್‌ಪ್ರಸ್ದಿದ್ಧ ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರೇಟ್ ಪಡೆದವರು. ಜೊತೆಗೆ ಅರ್ಥಶಾಸ್ರದ ಪಿತಾಮಹ ಎನಿಸಿಕೊಂಡ ಆಡಂ ಸ್ಮಿತ್ ಹೆಸರಿನಲ್ಲಿ ಇರುವ ಚಿನ್ನದ ಪದಕ ಪಡೆದ ಪ್ರಥಮ ಏಷ್ಯಾದ ವ್ಯಕ್ತಿ. ಇವೆಲ್ಲಕಿಂತ ಹೆಚ್ಚಾಗಿ ಇಡೀ ಜಗತ್ತೇ  ಗೌರವಿಸುವ ಶ್ರೇಷ್ಟ ಆರ್ಥಿಕ ತಜ್ಙ. ಇಂತಹ ವ್ಯಕ್ತಿಯ ಉಸ್ತುವಾರಿಯಲ್ಲಿರುವ , ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಮತ್ತೋರ್ವ ಆರ್ಥಿಕ ತಜ್ಙ ಮೊಂಟೆಕ್ ಸಿಂಗ್ ಅಹ್ಲುವಾಲಿಯ ನ್ಯಾಯಲಯಕ್ಕೆ ನೀಡಿರುವ ವರದಿ ಇಡೀ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.

1921 ರ ಡಿಸಂಬರ್ 12 ರಂದು ನಡೆದ ಕಾಂಗ್ರೆಸ್ ಅಧೀವೇಶನದಲ್ಲಿ ಮಾತನಾಡಿದ್ದ ಗಾಂಧೀಜಿ ಹೇಳಿದ್ದ ಮಾತುಗಳು ಇವು, “ಒಂದು ದೇಶ ಎಷ್ಡು ಸದೃಡವಾಗಿದೆ ಎಂಬುದು ನಿರ್ಧಾರವಾಗುವುದು ಆ ದೇಶದಲ್ಲಿರುವ ಕೋಟ್ಯಾಧೀಶ್ವರರ ಆಧಾರದ ಮೇಲಲ್ಲ, ಆ ದೇಶದಲ್ಲಿ ಎಷ್ಟು ಮಂದಿ ಬಡವರು ಬಡತನದ ಸುಳಿಯಿಂದ ಹೊರ ಬಂದಿದ್ದಾರೆ ಎಂಬುವುದರ ಆಧಾರದ ಮೇಲೆ.” ಇಂತಹ ಕಟು ವಾಸ್ತವದ ಗ್ರಹಿಕೆಗಳನ್ನು ಮರೆತ ನಮ್ಮ ನಾಯಕರ ಬೌದ್ಧಿಕ ಸ್ಥಿರತೆ ಬಗ್ಗೆ ಈಗ ಸಂಶಯ ಉಂಟಾಗುತ್ತಿದೆ.

ಸ್ವತಃ ಕೇಂದ್ರ ಸರ್ಕಾರ ಧೃಡಪಡಿಸಿರುವ ಅಂಕಿ ಅಂಶದ ಆಧಾರದ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಮಂದಿ ಬಡವರಿದ್ದಾರೆ. ಸರ್ಕಾರದ ಮಾಹಿತಿಯನ್ನು ಹೊರತು ಪಡಿಸಿದರೆ, ವಾಸ್ತವವಾಗಿ ಈ ದೇಶದಲ್ಲಿ ಶೇ.72 ರಷ್ಟು ಮಂದಿ ಬಢವರು ಇರುವುದು ಸತ್ಯ.

ಬಡತನದ ಬಗ್ಗೆ ಯಾವ ಅನುಭವವಾಗಲಿ, ತಿಳಿದುಕೊಳ್ಳುವ ಮನಸ್ಸಾಗಲಿ ಇಲ್ಲದಿರುವ ಈ ನಾಯಕರು ಒಮ್ಮೆ ತಮ್ಮ ಕುಟುಂಬದ ಪರವಾಗಿ ದಿನಸಿ ಅಂಗಡಿಗೆ, ಅಥವಾ  ತರಕಾರಿ ಅಂಗಡಿಗೆ ಇಲ್ಲವೇ, ಮಧ್ಯಮ ವರ್ಗದ ಹೊಟೇಲ್ ಗೆ ಹೋಗಿ ಬಂದಿದ್ದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತಿತ್ತು.

ಬಡತನ ಕೇವಲ ಹಸಿವಿನ ವಿಚಾರ ಮಾತ್ರವಲ್ಲ, ಅದೊಂದು ಸಮಾಜದ ಬಹುಮುಖಿ ಕೊರತೆ, ಜೊತೆಗೆ ಮೈ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸುಡುವ ಸಮಸ್ಯೆ ಎಂದು ವಿಶ್ಲೇಷಿಸಿದವರು ಅಮಾರ್ತ್ಯ ಸೇನ್. ಅಲ್ಲಿಯವರೆಗೆ ಜಾಗತೀಕರಣದ ಹುಚ್ಚು ಹೊಳೆಯಲ್ಲಿ ತೇಲುತ್ತಿರುವ ಈ ಜಗತ್ತಿಗೆ ಬಡತನದ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ, ಇಂದಿಗೂ ಇಲ್ಲ.

ಇವತ್ತಿಗೂ ಭಾರತದ 120 ಕೋಟಿ ಜನಸಂಖೈಯಲ್ಲಿ ಶೇ.70 ರಷ್ಟು ಮಂದಿ ಬಡವರಾಗಿ ಉಳಿದಿದ್ದಾರೆ. ಇದು ವಾಸ್ತವಿಕ ಆಧಾರದ ಸಂಖ್ಯೆ. ಆದರೆ ಸರ್ಕಾರದ ಅಂಕಿ ಅಂಶಗಳಲ್ಲಿ ಶೇ 44 ರಷ್ಟು ಮಾತ್ರ. ಈಗ ಇದು ಶೇ. 37 ಕ್ಕೆ ಇಳಿದಿದೆಯಂತೆ.  ಹೆಬ್ಬೆಟ್ಟಿನ ಸಹಿ ಹಾಕುತಿದ್ದ ಅನಕ್ಷರಸ್ತನಿಗೆ ಅವನ ಹೆಸರು ಬರೆಯಲು ಕಲಿಸಿ ಸಾಕ್ಷರ ಎಂದು ಹಣೆಪಟ್ಟಿ ಕಟ್ಟಿ  ದೇಶದಲ್ಲಿ ಅನಕ್ಷರತೆ ತೊಲಗಿತು ಎಂದು ಅಂತರಾಷ್ಟೀಯ ಮಟ್ಟದಲ್ಲಿ ಡಂಗೂರ ಸಾರಿದ ಕಥೆಯಷ್ಟು ಸುಲಭವಲ್ಲ ಈ ಸಂಗತಿ. ಭಾರತದ ಬಡ ಬೊರೇಗೌಡ ಅವಿದ್ಯಾವಂತ ಅಥವಾ ವಿದ್ಯಾವಂತ ಯಾವ ವರ್ಗಕ್ಕೆ ಸೇರಿದರೂ ಗಳಿಸುವುದು ಇಲ್ಲವೇ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ನಿಜವಾದ ಬಡವನನ್ನು ಬಡವನಲ್ಲವೆಂದು ಘೋಷಿಸಿ ಅವನ ಸವಲತ್ತುಗಳನ್ನು ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಅಮಾನುಷ ಕೃತ್ಯ.

ಈ ಕಾರಣಕ್ಕಗಿಯೆ ಪತ್ರಕರ್ತ ಪಿ.ಸಾಯಿನಾಥ್ ಕಳೆದ 20 ವರ್ಷಗಳಲ್ಲಿ ನಮ್ಮ ಅರ್ಥಶಾಸ್ರ ಮತ್ತು ಅರ್ಥಶಾಸ್ರಜ್ಞರುಗಳ ಯಶಸ್ಸ್ಸು ಎಂದರೆ, ಜನಸಾಮಾನ್ಯರ ಬದುಕಿಗೆ ಸಂಬಂಧವಿರದಂತೆ ಅರ್ಥವ್ಯವಸ್ಥೆಗಳನ್ನು ರೂಪಿಸಿರುವುದು ಎಂದು ಗೇಲಿ ಮಾಡಿದ್ದಾರೆ.

ತೆಂಡೂಲ್ಕರ್ ಸಮಿತಿಯ ಆಧಾರದ ಮೇಲೆ ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಜೊತೆಗೆ ಈ ಅಂಕಿ ಅಂಶ ಬದಲಾಗುವ ಸಾಧ್ಯತೆ ಕೂಡ ಇದೆ. ಭಾರತದ ನಾಗರೀಕ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಆಧಾರದ ಮೇಲೆ ಆಂದರೆ, ಮನುಷ್ಯನೊಬ್ಬನಿಗೆ  ದಿನವೊಂದಕ್ಕೆ ನಗರ ಪ್ರದೇಶದಲ್ಲಿ 2100 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲೋರಿ ಗಳಷ್ಟು ಪ್ರಮಾಣದ ಆಹಾರದ ಅಗತ್ಯವಿದೆ. ಸಧ್ಯ ಭಾರತದಲ್ಲಿ1100 ರಿಂದ  1600 ರಷ್ಟು ಕ್ಯಾಲೋರಿ ಅಹಾರ ಮಾತ್ರ ದೊರೆಯುತ್ತಿದೆ. ಇವತ್ತಿಗೂ ಹಸಿವಿನಿಂದ ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಮಕ್ಕಳು ಭಾರತದಲ್ಲಿ ಸಾಯುತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ. ಈವರೆಗೆ 2ಲಕ್ಷದ 45 ಸಾವಿರದ ಅಧಿಕ ರೈತರು ಸಾವಿಗೆ ಶರಣಾಗಿದ್ದಾರೆ. ಇಂತಹ ಕಟು ವಾಸ್ತವ ಸಂಗತಿಗಳು ನಮ್ಮೆದುರು ಇದ್ದಾಗಲೂ ಕೂಡ ಅಂತರಾಷ್ಟೀಯ ಸಮುದಾಯದೆದುರು ಭಾರತದಲ್ಲಿ ಬಡತನವಿಲ್ಲ ಎಂದು ತೋರ್ಪಡಿಸಿಕೊಳ್ಳಲು ಈ ನಾಟಕದ ಅವಶ್ಯಕತೆ ಇರಲಿಲ್ಲ. ಇಲ್ಲಿಯ ಬಡವನೊಬ್ಬ ಸಾಯಲು ನಿರ್ಧರಿಸಿ ವಿಷ ಕೊಳ್ಳಲು ಹೋದರೆ, ಮಾರುಕಟ್ಟೆಯಲ್ಲಿ ಆತನಿಗೆ  26 ರೂಪಾಯಿಗೆ ವಿಷ ಕೂಡ ಸಿಕ್ಕುವುದಿಲ್ಲ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಅರ್ಥಶಾಸ್ರಜ್ಞೆ ಉತ್ಸಾ ಪಟ್ನಾಯಕ್ ವರ್ತಮಾನದ ಬೆಲೆ ಸೂಚ್ಯಂಕ ಆಧರಿಸಿ ಆಹಾರಕ್ಕಾಗಿ ಕನಿಷ್ಠ ಗ್ರಾಮಾಂತರ ಪ್ರದೇಶದಲ್ಲಿ 36 ರೂಪಾಯಿಗಳು, ನಗರ ಪ್ರದೇಶದಲ್ಲಿ 60 ರೂಪಾಯಿಗಳನ್ನು ಮನುಷ್ಯನೊಬ್ಬ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ.

ಈ ದೇಶದ ಅಸಮಾನತೆಯ ಬಗ್ಗೆ ಎಲ್ಲಗೂ ತಿಳಿದಿದೆ. ಜಿಂದಾಲ್ ಸಮೂಹದ ಅಧ್ಯಕ್ಷ ನವೀನ್ ಜಿಂದಾಲ್ ವಾರ್ಷಿಕವಾಗಿ 69 ಕೋಟಿ, ರಿಲೆಯನ್ಸ್ ಸಮೂಹದ ಮುಖೇಶ್ ಅಂಬಾನಿ 42 ಕೋಟಿ, ಅನಿಲ್ ಅಂಬಾನಿ 35 ಕೋಟಿ ಸಂಬಳ ಪಡೆಯುತಿದ್ದಾರೆ. ನಮ್ಮ ಕೆಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ತಿಂಗಳಿಗೆ ಪ್ರವಾಸ ಭತ್ಯ, ಮನೆಬಾಡಿಗೆ ಭತ್ಯ ಹೊರತುಪಡಿಸಿ, 1ಲಕ್ಷದ 20 ಸಾವಿರ ಸಂಬಳ ಪಡೆಯುತಿದ್ದಾನೆ.

ಇದೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಕನಿಷ್ಟ 100 ಕೂಲಿ ನಿಗದಿಪಡಿಸಿರುವಾಗ , ಆಹಾರಕ್ಕಾಗಿ 26 ರುಪಾಯಿಯನ್ನು ಹೇಗೆ ನಿರ್ಧರಿಸಿತು?

ಮುಕ್ತ ಮಾರುಕಟ್ಟೆಯ ಪ್ರಭುತ್ವದ ಈ ಜಗತ್ತಿನಲ್ಲಿ ಬಡವರಿಗೆ ನೀಡುವ ಉಚಿತ ಶಿಕ್ಷಣ ಆರೋಗ್ಯ, ಸಬ್ಸಿಡಿಯುಕ್ತ ಆಹಾರಧಾನ್ಯ ಎಲ್ಲವೂ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಕೂಸುಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟೀಯ ನಿಧಿ  ಸಂಸ್ಥೆ ಇವುಗಳ ಕೆಂಗಣ್ಣಿಗೆ ಗುರಿಯಾಗಿವೆ. ಭಾರತ ಈಗ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಬೇಕಾಗಿದೆ. ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. 12 ನೇ ಪಂಚವಾರ್ಷಿಕ ಯೋಜನೆಯ ರೂಪು ರೇಷೆಗಳನ್ನು ಗಮನಿಸಿದರೆ, ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳಶಾಹಿಗಳ  ಮಾರುಕಟ್ಟೆಯ ಪ್ರಭುತ್ವಕ್ಕೆ ಬಲಿ ಕೊಡುವ ಸಂಚು ನಡೆದಿದೆ ಎಂದು ಊಹಿಸಬಹುದು.

1990 ರ ದಶಕದಲ್ಲಿ ಜಾಗತೀರಣಕ್ಕೆ ಬಾರತದ ಹೆಬ್ಬಾಗಿಲನ್ನು ತೆರೆದವರು ಇದೇ ಮನಮೋಹನ್ ಸಿಂಗ್. ಜಾಗತೀಕರಣದ ಒಳಿತು, ಕೆಡಕುಗಳು ಏನೇ ಇರಲಿ, ವೈರುಧ್ಯಗಳನ್ನು ಸೃಷ್ಟಿಸಿ, ಉಳ್ಳವರ ಭಾರತ ಮತ್ತು ನರಳುವವರ ಭಾರತ ಎಂಬ ಎರಡು ಭಾರತ ಗಳು ಸೃಷ್ಟಿಯಾಗಿರುವುದು ಸತ್ಯ. ಬಡವರ ನಿರ್ಮೂಲನೆ ಮಾಡುವುದರ ಮೂಲಕ ಬಡತನ ನಿರ್ಮೂಲನೆ ಮಾಡುವುದು ಈಗಿನ ಗುರಿಯಾಗಿದೆ.

ಇಲ್ಲಿ ಗಾಳಿ, ನೀರು, ಸೇರಿದಂತೆ ಎಲ್ಲವೂ ಮಾರಾಟದ ಸರಕುಗಳಾಗಬೇಕು. ಆಗಲೇ ಜಾಗತೀಕರಣಕ್ಕೆ, ಹಾಗೂ ಅದರ ಪ್ರತಿಪಾದಕರಿಗೆ ನೆಮ್ಮದಿ.

Leave a Reply

Your email address will not be published. Required fields are marked *