ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದರು. ನನ್ನ ಭಾಷಣವನ್ನು ಬಹಳ ಮಂದಿ ಮೆಚ್ಚಿಕೊಂಡರು. ನನ್ನ ಕೋಣೆಯ ಪಕ್ಕದಲ್ಲೇ ಇದ್ದವರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಅವರನ್ನು ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಿಚ್ಚಿಟ್ಟರು.

“ಸರ್, ನಮ್ಮ ಮಗನಿಗೆ ಸುಮಾರು ಐದು ತಿಂಗಳಿಂದ ಭಾನಾಮತಿ ಹಿಡಿದಿದೆ. ಇದರಿಂದ ನಾವು ಇಲ್ಲಿ ಒಂದು ತಿಂಗಳಿಂದ ಉಳಿದುಕೊಂಡಿದ್ದೀವಿ,” ಎಂದರು. ಭಾನಾಮತಿ ಎಂಬ ಸಮಸ್ಯೆಯಿಂದ ಬಳಲುತ್ತಿರುವವರು ನಾನು ಕಂಡಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರಲ್ಲಿ ಕಡಿಮೆಯೇ. ಆದರೆ ಇಲ್ಲಿ ಮೂವತ್ತು ವರ್ಷದ ಆರೋಗ್ಯಪೂರ್ಣ ಯುವಕ ಭಾನಾಮತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನನಗೆ ಬಹಳ ಬೇಸರ ಮೂಡಿಸಿತು. ಹಾಗೆಯೇ ಅವನ ವಿವರಗಳನ್ನು ಕೇಳುತ್ತಾ ಹೊರಟಂತೆ ಇದೊಂದು ವಿಸ್ಮಯಕಾರಕ ಘಟನೆ ಎನ್ನಿಸಿತು.

ದಷ್ಟಪುಷ್ಟವಾದ, ಬಲಿಷ್ಟ ಮೈಕಟ್ಟು ಹೊಂದಿದ ಈ ಯುವಕ ವಿದ್ಯಾವಂತ ಕೂಡ. ಆರು ತಿಂಗಳ ಹಿಂದೆ ಯುವತಿಯೊಡನೆ ವಿವಾಹವೂ ಆಯಿತು. ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಮದುವೆಯಾಗಿ ಮೊದಲ ರಾತ್ರಿ ಪ್ರಾರಂಭವಾಯಿತು ನೋಡಿ ಅಲ್ಲಿಂದ ಹುಚ್ಚನಂತೆ ಆಡಲಾರಂಭಿಸಿದ. ಹೆಂಡತಿಯ ಮುಖ ಕಂಡರೆ ದೂರ ಓಡುತ್ತಿದ್ದ. ಆಕೆಯನ್ನು ನೋಡಿದರೆ ಅವನ ಮೈ ಬೆವರಿ ತೊಪ್ಪೆಯಾಗುತ್ತಿತ್ತು. ಇದನ್ನು ನೋಡಿ ಆಕೆ ತನ್ನ ತಂದೆ ತಾಯಿಗೆ ತಿಳಿಸಿದಳು. ಅವರು ಮೊದಲಿಗೆ ಅರಿಶಿನದ ಮೈನಲ್ಲಿ ಹೊರಗಡೆ ಓಡಾಡಿ ಗಾಳಿ ಮೆಟ್ಟಿಕೊಂಡಿರಬಹುದು ಎಂದುಕೊಂಡರು. ಸರಿಯಾಗುತ್ತದೆ ಎನ್ನುವ ಭರವಸೆಯನ್ನೂ ತುಂಬಿದರು.

ನಂತರ ಯಥಾಪ್ರಕಾರ ಎಲ್ಲ ದೇವರುಗಳಿಗೂ ಹರಕೆ ಹೊತ್ತು, ಮಂತ್ರ, ತಾಯಿತ ಕಟ್ಟಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರ ಸಲಹೆ ಪಡೆದರೂ ಅಷ್ಟೇನೂ ಲಾಭವಾಗಲಿಲ್ಲ. ಎಲ್ಲಿ ಹೋದರೂ ಆತನಲ್ಲಿ ದೋಷ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಕಿರುಚಾಟವಂತೂ ನಿಲ್ಲಲಿಲ್ಲ. ರಾತ್ರಿಯಾದರೆ ವಿಚಿತ್ರ ಆಟ, ಬೆಳಿಗ್ಗೆ ಮಂಕು ಕವಿದಂತೆ ನೋಟ.

ಮನೆದೇವರ ಬಳಿಗೆ ಹೋಗಿಬನ್ನಿ ಎಂದರು. ಅದನ್ನೂ ಮಾಡಿದೆವು. ಆದರೆ ಅದೂ ಅಲ್ಪಕಾಲೀನ. ಅಲ್ಲಿದ್ದಷ್ಟು ಕಾಲ ಚೆನ್ನಾಗಿದ್ದ. ಇಲ್ಲಿ ಬಂದ ನಂತರ ಅದೇ ರಾಗ ಅದೇ ಹಾಡು!

ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದೆ ಈ ಮಠದಲ್ಲಿದ್ದೇವೆ ಎಂದರು. ನಾನು ಅವರ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಬೀಳ್ಕೊಂಡೆ.

ನಂತರ ಆ ನವದಂಪತಿಗಳನ್ನು ಒಂದು ಬಾರಿ ನನ್ನ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಬ್ಬರೂ ಜೊತೆಯಲ್ಲಿದ್ದರು.

ಕಾರ್ಯಕ್ರಮ ಮುಗಿದ ನಂತರ ದಂಪತಿಗಳು ನಮ್ಮ ಮನೆಯಲ್ಲೇ ಉಳಿದರು. ಮೊದಲಿಗೆ ಆತನ ಪತ್ನಿಯನ್ನು ಕೌನ್ಸೆಲ್ಲಿಂಗ್ ಮಾಡಲಾರಂಭಿಸಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯ ಇದೆಯೇ? ಅಥವಾ ಲೈಂಗಿಕ ಅನುಭವ ಪಡೆದುಕೊಳ್ಳುವ ವಿಷಯದಲ್ಲಿ ಪರಸ್ಪರ ಅರಿವಿನ ಕೊರತೆಯುಂಟಾಯಿತೇ? ಇತ್ಯಾದಿ ವಿಷಯಗಳನ್ನು ಕೇಳುತ್ತಾ ಹೋದೆ.

ಆಕೆ, “ಸರ್ ಅವರು ನನ್ನನ್ನು ಮುಟ್ಟೇ ಇಲ್ಲ. ನನ್ನ ಮುಖ ನೋಡಿದರೆ ಹೆದರಿಕೊಳ್ಳುತ್ತಾರೆ. ಅವರ ಮುಖ ಬೆವರುತ್ತದೆ. ಮೊದಲ ದಿನದಿಂದಲೂ ಇದು ನಡೆದಿದೆ. ಅಂದಿನಿಂದ ಅವರ ಜೊತೆ ಮಲಗೋದೇ ಬಿಟ್ಟಿದ್ದೇನೆ. ಅವರು ಸುಖವಾಗಿರಲಿ ಎನ್ನೋದೇ ನನ್ನ ಆಸೆ,” ಎನ್ನುತ್ತಾ ಕಣ್ಣೀರುಗರೆದಳು.

ನಂತರ ಆತನಲ್ಲಿ ವಿಷಯ ಪ್ರಸ್ತಾಪಿಸಿದೆ. “ಯಾಕಪ್ಪ ನಿನ್ನ ಹೆಂಡತಿಯ ಹತ್ತಿರ ಮಲಗಿದರೆ ಹುಚ್ಚನಂತೆ ಆಡ್ತೀಯಾ? ಈ ಮದುವೆ ನಿನಗೆ ಇಷ್ಟವಿರಲಿಲ್ಲವಾ? ಅಥವಾ ಆ ಹುಡುಗಿ ಇಷ್ಟ ಆಗಿಲ್ವಾ?…” ಪ್ರಶ್ನಿಸಿದೆ.

“ಹಾಗೇನೂ ಇಲ್ಲ ಸರ್, ಆಕೆ ಬಹಳ ಒಳ್ಳೆಯವಳು. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ,” ಎಂದ.

“ಹಾಗಿದ್ದರೆ ನಿಮ್ಮ ನಡುವೆ ಇರುವ ಸಮಸ್ಯೆ ಏನು?” ಎಂದಿದ್ದಕ್ಕೆ ಆತ, “ನನಗೆ ಪುರುಷತ್ವ ಅಂದರೆ ಏನು ಅಂತ ಗೊತ್ತಿಲ್ಲ. ಹೆಂಡತಿಯೊಡನೆ ಏನು ಮಾಡಬೇಕು ಎನ್ನೋದೂ ಗೊತ್ತಿಲ್ಲ. ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದರ ಬಗ್ಗೆ ಮಾತನಾಡೋದಕ್ಕೆ ಬಹಳ ಮುಜುಗರ. ಆದ್ದರಿಂದ ಅದನ್ನು ಧೈರ್ಯವಾಗಿ ಹೇಳಲಾಗದೆ ಈ ರೀತಿ ಆಡುತ್ತಿದ್ದೇನೆ,” ಎಂದ.

ಅವರಿಬ್ಬರನ್ನೂ ಕೂಡಲೇ ವೈದ್ಯರ ಬಳಿ ಕರೆದೊಯ್ದು ಈ ಲೈಂಗಿಕತೆಯ ಕುರಿತು ಅವರಿಗೆ ಅರಿವನ್ನು ನೀಡುವಂತೆ ಕೇಳಿದೆ.

ಅವರು ಸೂಕ್ತ ಸಲಹೆ ನೀಡಿ ಅವನ ಹಿಂಜರಿಕೆ ನಿವಾರಣೆಗೆ ಔಷಧವನ್ನೂ ನೀಡಿದರು. ನಂತರ ಆತ ತನ್ನ ಸಾಂಸಾರಿಕ ಜೀವನವನ್ನು ಸುಖವಾಗಿ ನಡೆಸಲು ಆರಂಭಿಸಿದ. ಈಗ ಅವರಿಗೂ ಒಂದು ಮುದ್ದಾದ ಹೆಣ್ಣುಮಗುವಿದೆ. ಸುಖೀ ಕುಟುಂಬವಾಗಿದೆ.

ಆದ್ದರಿಂದ ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡರೆ ಅದಕ್ಕೆ ಪರಿಹಾರ ದೊರೆಯಬಹುದು. ಅದನ್ನು ಹೊರತುಪಡಿಸಿ ಒಳಗೇ ಕೊರಗಿದರೆ ಈ ರೀತಿ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

3 thoughts on “ಅಜ್ಞಾನ ತಂದಿತ್ತ ಸಂಕಷ್ಟ!

  1. Dhananjaya

    Oh! You did a Great job. Keep it up…..I appreciate The way you are trying to educate the people in real way….

    Reply
  2. argerii

    shri Hulikal Natraj mestru tharaha jana oorige obbaru iddare saaku noadu, bharathatha bhavishya adhbhutha ashte : abhinandanegalu :

    Reply

Leave a Reply to Veerabhadraiah H. Cancel reply

Your email address will not be published. Required fields are marked *