ಡಾ. ಎನ್. ಜಗದೀಶ್ ಕೊಪ್ಪ
ಇದು ನಮ್ಮ ಸಾಮಾಜಿಕ ಅಥವಾ ರಾಜಕೀಯ ಅದಃಪತನವೆಂದರೂ ತಪ್ಪಾಗಲಾರದು. ಸಂಸದ ಹಾಗೂ ಕರ್ನಾಟಕ ಕಂಡ ಹಿರಿಯ ಮುತ್ಸದ್ದಿ ರಾಜಕಾರಣಿ ನಿನ್ನೆ ಮಂಗಳವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಟಿ ನಡೆಸಿ, ದೆಹಲಿಯ ತಿಲಕ್ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಜ ಇವರ ವಿರುದ್ಧ ದೂರು ದಾಖಾಲಾಗಿರುವುದರಿಂದ ರಾಜಿನಾಮೆ ಕೊಡಬೇಕೆಂದು ಅಪ್ಪಣೆ ಹೊರಡಿಸಿದ್ದಾರೆ. ಅವರ ಮಾತು ನಿಜ. ನೈತಿಕ ಪ್ರಜ್ಙೆ ಇರುವ ಯಾವುದೇ ರಾಜಕಾರಣಿ ರಾಜಿನಾಮೆ ನೀಡಬೇಕು.
ಮಾನ್ಯ ಚಂದ್ರೇಗೌಡರು ಇಂತಹ ರಾಜಾಜ್ಞೆ ನೀಡುವ ಮುನ್ನ ತಾವು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ, ಆರೋಪ ಹೊತ್ತು ಜೈಲು ಪಾಲಾದವರ ಎಷ್ಟು ಮಂದಿಯ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಅಥವಾ ಆರೋಪ ಹೊತ್ತವರ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಈ ಸಂದರ್ಭದಲ್ಲಿ ಯಾವೊಬ್ಬ ಪತ್ರಕರ್ತ ಈ ಕುರಿತಂತೆ ಪ್ರಶ್ನಿಸಲಿಲ್ಲ. ಇದು ಈ ತಲೆಮಾರಿನ ಪತ್ರಕರ್ತರಿಗೆ ತಮ್ಮ ವೃತ್ತಿಯ ಬಗ್ಗೆ ಇರುವ ಅಜ್ಞಾನವೊ? ಅಥವಾ ಪ್ರಶ್ನೆ ಕೇಳಲು ಹಿಂಜರಿಕೆಯೋ? ನನಗೆ ಅರ್ಥವಾಗುತ್ತಿಲ್ಲ.
ತನ್ನ ಮೂರು ದಶಕಗಳ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಲ್ಲಿ ಕಳೆದು ಶಾಸಕನಾಗಿ, ಸಂಸದನಾಗಿ, ವಿದಾನಸಭೆಯ ಒಳ್ಳೆಯ ಸ್ಪೀಕರ್ ಹೆಸರು ಮಾಡಿದ್ದ ಚಂದ್ರೇಗೌಡರು ರಾಜಕೀಯವಾಗಿ ಕಸದಬುಟ್ಟಿಗೆ ಸೇರಿದ ಸಂದರ್ಭದಲ್ಲಿ,, ಯಡಿಯೂರಪ್ಪ ಕರೆದು ಬೆಂಗಳೂರು ಉತ್ತರ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಸೀಟು ಕೊಟ್ಟು ಗೆಲ್ಲಿಸಿದ ಮಾತ್ರಕ್ಕೆ ಈ ರೀತಿಯ ಬೌದ್ಧಿಕ ದಿವಾಳಿತನಕ್ಕೆ ಓಳಗಾಗಬಾರದಿತ್ತು.
ಕಳೆದ ಹತ್ತು ವರ್ಷದ ಹಿಂದಿನ ಮಾತು ಇದು. ಮಂಡ್ಯ ಜಿಲ್ಲೆಯ ಸ್ವಾತಂತ್ರೈ ಹೋರಾಟಗಾರ ಹಾಗೂ ಜಿಲ್ಲೆ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಹೆಸರಿನಲ್ಲಿ (ಕ್ರೀಡಾಪಟು ವಿಕಾಸ್ ಗೌಡರ ಅಜ್ಜ) ನಾವು ಗೆಳೆಯರು 10 ಸಾವಿರ ರೂ. ಗಳ ಪ್ರಶಸ್ತಿ ಸ್ಥಾಪಿಸಿದೆವು, ಮೊದಲ ವರ್ಷ ಹಿರಿಯ ಪತ್ರಕರ್ತ ಜಯಶೀಲರಾವ್ ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಇದೇ ಚಂದ್ರೇಗೌಡ ಆಡಿದ ಮಾತುಗಳು ಇವು : “ಇವತ್ತಿನ ರಾಜಕಾರಣಿಗಳು ಮುಖವಾಡತೊಟ್ಟಿಕೊಂಡು ಬದುಕುತಿದ್ದಾರೆ.”
ಇವತ್ತಿನ ಚಂದ್ರೇಗೌಡರು ಯಾವ ಮುಖವಾಡ ತೊಟ್ಟು ಬದುಕುತಿದ್ದಾರೆ?
ಇನ್ನು ನಮ್ಮ ಮಠಾದೀಶರು ಯಡಿಯೂರಪ್ಪನ ವಿತರಿಸಿದ ಪ್ರಸಾದ ತಿಂದು ಈ ರೀತಿ ಬೀದಿಗೆ ಬೀಳಬಾರದಿತ್ತು. ಇವರೆಲ್ಲಾ ಒಮ್ಮೆ ಅಲ್ಲಮಪ್ರಭುವಿನ ಈ ವಚನ ಓದಿಕೊಳ್ಳುವುದು ಒಳಿತು.
ಮಠವೇಕೊ, ಪರ್ವತವೇಕೊ
ಜನವೇಕೊ, ನಿರ್ಜವೇಕೊ
ಚಿತ್ತ ಸಮಾಧಾನವುಳ್ಳ ಶರಣಂಗೆ
ಮತ್ತೆ ಹೊರಗಣ ಚಿಂತೆ, ಧ್ಯಾನ ಮೌನ
ಜಪ ತಪವೇಕೊ ತನ್ನ ತಾನರಿದ ಶರಣಂಗೆ ಗುಹೇಶ್ವರಾ