ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ ಆಕೆಗೆ ಮದುವೆ ಮಾಡಲು ನಿರ್ಧರಿಸಿದರು.

ಆಕೆಯ ಪೋಷಕರು ಹಳ್ಳಿಯಲ್ಲಿದ್ದರೂ ನನಗೆ ಗೊತ್ತಿದ್ದರಿಂದ ನಾನು ಅವರಿಗೆ ಕಿರಿಯ ವಯಸ್ಸಿನಲ್ಲಿ ಮದುವೆ ಮಾಡದಂತೆ ಎಚ್ಚರಿಸಿದೆ. ಆದರೆ ಅವರು ನನ್ನ ಎಚ್ಚರಿಕೆಯನ್ನೂ ಧಿಕ್ಕರಿಸಿ ಆಕೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದರು.

ಕೆಲವು ದಿನಗಳ ನಂತರ ಆ ಹುಡುಗಿಯನ್ನು ನೋಡಲು ಹೊರಟೆ. ಹುಡುಗಿಯನ್ನು ಒಂದು ದೇವಸ್ಥಾನದಲ್ಲಿ ಇರಿಸಿದ್ದರು. ಕುಟುಂಬದ ಎಲ್ಲರ ಮುಖದಲ್ಲೂ ಒಂದು ಬಗೆಯ ಭಯವಿತ್ತು. ಆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಹುಡುಗಿ ತುಂಬಾ ಸುಸ್ತಾದಂತೆ ಕಂಡುಬಂದಳು. ಆಕೆಯ ಪೋಷಕರು, `ರಾತ್ರಿ ಆದರೆ ಸಾಕು. ಭಯಪಡುತ್ತಾಳೆ. ದೀಪ ಆರಿಸಿದರೆ ಕಿರುಚಾಡುತ್ತಾಳೆ. ಏನೇನೋ ವಿಚಿತ್ರವಾಗಿ ಆಡುತ್ತಿದ್ದಾಳೆ,’ ಎಂದರು.

ಆರೋಗ್ಯಪೂರ್ಣವಾಗಿ ನಳನಳಿಸುತ್ತಿದ್ದ ಹುಡುಗಿ ಹೀಗಾಗಿದ್ದು ನೋಡಿ ನನಗೆ ಬಹಳ ದುಃಖವಾಯಿತು.

ಆ ಹುಡುಗಿಯ ಗಂಡನನ್ನು ಮಾತನಾಡಿಸಿದೆ. “ಯಾಕಪ್ಪಾ ನಿನ್ನ ಹೆಂಡತಿ ಭಯಪಡುತ್ತಾಳಂತೆ. ಅವಳಿಗೇನಾದರೂ ಹೊಡೆಯೋದು, ಬಡಿಯೋದು ಮಾಡಿದೆಯೋ ಹೇಗೆ?” ಎಂದೆ.

ಅದಕ್ಕೆ ಆತ, “ಇಲ್ಲ ಸರ್, ಅವಳೆಂದರೆ ನನಗೆ ಇಷ್ಟ. ನನ್ನ, ಅವಳ ಮೊದಲ ರಾತ್ರಿಯಾದ ನಂತರ ಹೀಗೆ ಭಯಪಡಲು ಪ್ರಾರಂಭಿಸಿದ್ದಾಳೆ. ಮೊದ ಮೊದಲು ಸುಮ್ಮನಿದ್ದಳು. ನಂತರ ಹೆದರೋಕೆ ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ತಾಯಿ ಮನೆಗೆ ಕರೆದುಕೊಂಡು ಹೋದರು,” ಎಂದ.

ನನಗೆ ಸಮಸ್ಯೆ ಸ್ಪಷ್ಟವಾಯಿತು. ಇದು ಲೈಂಗಿಕತೆಯ ತಿಳಿವಳಿಕೆ ಇಲ್ಲದಿದ್ದರಿಂದ ಉಂಟಾದ ಸಮಸ್ಯೆ.

ಆ ಹುಡುಗಿಯನ್ನು ಸ್ತ್ರೀವೈದ್ಯರಲ್ಲಿಗೆ ಕರೆದೊಯ್ದು ಲೈಂಗಿಕತೆಯ ಪೂರ್ಣ ಮಾಹಿತಿಯನ್ನು ವೈದ್ಯರ ಮೂಲಕ ಕೊಟ್ಟ ನಂತರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಲೈಂಗಿಕತೆಯ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಪುರುಷರಿಗೂ, ಮಹಿಳೆಯರಿಗೂ ವಿವಾಹದ ನಂತರ ತಮ್ಮ ಜವಾಬ್ದಾರಿಗಳೇನು ಎಂಬ ತಿಳಿವಳಿಕೆ ಇಲ್ಲದಿದ್ದಲ್ಲಿ ಸಂಕಷ್ಟ ಖಂಡಿತ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

Leave a Reply

Your email address will not be published. Required fields are marked *