ಮಂಗಳೂರಲ್ಲಿ ಪುಣ್ಯವನಿತೆಯರ ಚಂಡಿಕಾಯಾಗ

– ಚಿದಂಬರ ಬೈಕಂಪಾಡಿ

ಸಾಮಾಜಿಕ ಅನಿಷ್ಠಗಳನ್ನು ಬುಡಸಹಿತ ಕಿತ್ತೊಗೆಯಬೇಕು ಎನ್ನುವ ಭಾಷಣ, ಘೋಷಣೆಗಳನ್ನು ಕೇಳುತ್ತೇವೆ, ಆದರೆ ಇಂಥವುಗಳ ಬುಡಕ್ಕೆ ಕೈ ಹಾಕಲು ಹೆದರುತ್ತೇವೆ. ಯಾಕೆಂದರೆ ಮತ್ತೆ ನಮ್ಮನ್ನು ಕಾಡುವುದು ಸಮಾಜ. ನಾವು ಇಂಥ ಸುಧಾರಣೆಗಳ ಜಾಡುಹಿಡಿದು ಹೋದರೆ ಸಮಾಜ ನಮ್ಮನ್ನು ಒಪ್ಪುತ್ತದೆಯೇ? ನಮ್ಮ ಹೆಂಡತಿ-ಮಕ್ಕಳು, ಬಂಧು-ಬಳಗ ಎಲ್ಲವೂ ನೆನಪಾಗುತ್ತದೆ. ಆದರೆ ಆಚರಣೆಗಳ ಹೆಸರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ನಮ್ಮನ್ನು ಕಾಡುವುದಿಲ್ಲ.

ಒಂದು ಕಾಲದಲ್ಲಿ ಅಸ್ತ್ವಿತ್ವಕ್ಕೆ ತಂದ ಆಚರಣೆಗಳನ್ನು ಕಾಲಾನುಕ್ರಮದಲ್ಲಿ ತಿದ್ದುಪಡಿಗಳೊಂದಿಗೆ ಆಚರಿಸಲು ನಮ್ಮ ಮನಸ್ಸುಗಳನ್ನು ಹದಗೊಳಿಸಿಕೊಳ್ಳುತ್ತೇವೆ. ಯಾಕೆಂದರೆ ಅವುಗಳಿಂದ ನಮಗೆ ಎಲ್ಲೋ ಒಂದುಕಡೆ ಸಮಸ್ಯೆ ಆಗುತ್ತಿದೆ ಎನ್ನುವ ಒಳಅರಿನಿನ ಕಾರಣಕ್ಕೆ. ಆದರೆ ನಾವು ಶತಮಾನಗಳ ಹಿಂದಿನ ಸಂದರ್ಭದಲ್ಲಿ ಹಿರಿಯರು ಮಾಡಿದಂಥ ಕೆಲವು ಸಂಪ್ರದಾಯ ಅಥವಾ ಆಚರಣೆಗಳನ್ನು ಪರಿಷ್ಕರಿಸದೆ ಅವುಗಳನ್ನು ಹಾಗೆಯೇ ಅಥವಾ ಹಿಂದಿಗಿಂತಲೂ ಹೆಚ್ಚು ಬದ್ಧತೆಯಿಂದ ಕಾಪಾಡಿಕೊಂಡು ಬರುತ್ತೇವೆ. ಯಾಕೆಂದರೆ ಅವುಗಳ ಬಗ್ಗೆ ಈಗಲೂ ಇರುವ ಬಲವಾದ ನಂಬಿಕೆಯಿಂದ.

ಪತಿಕಳೆದುಕೊಂಡ ವನಿತೆಯನ್ನು ನಾವು ಮನೆಯಲ್ಲಿ ಹೇಗೆ ನಡೆಸಿಕೊಳ್ಳುತ್ತೇವೆ? ಸಮಾಜ ಅಂಥವರ ಬಗೆ ಹೇಗೆ ಪ್ರತಿಕ್ರಿಯೆಸುತ್ತದೆ ಎನ್ನುವುದನ್ನು ಚೆನ್ನಾಗಿ ಬಲ್ಲೆವು. ಆದರೆ ಪತಿಕೊಂಡು ಆಕೆ ಅನುಭವಿಸುವ ಯಾತನೆಗಿಂತಲೂ ದಿನವೂ ಆಕೆ ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ಅನುಭವಿಸುವ ಯಾತನೆ ಅಮಾನವೀಯವಾದುದು. ಯಾಕೆಂದರೆ ಆಕೆ ಹೂ ಮುಡಿಯುವಂತಿಲ್ಲ, ಬಳೆ ತೊಡುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ ಇತ್ಯಾದಿ.. ಇತ್ಯಾದಿ ಹಲವು ಸಲ್ಲದುಗಳದ್ದೇ ಕಾರುಬಾರು.

ಅತ್ಯಂತ ಸೂಕ್ಷ್ಮವಾಗಿ ಸಮಾಜ ಇಂಥ ವನಿತೆಯರನ್ನು, ಅವರ ಯಾತನೆ, ಕಣ್ಣೀರನ್ನು ಗಮನಿಸಿದರೆ ಏನಾದೀತು?. ಆಕಾಶವೇ ಧರೆಗಿಳಿದು ಅನಾಹುತವಾದೀತೇ?, ಅಥವಾ ಬರಗಾಲ, ಅನಾವೃಷ್ಟಿ-ಅತಿವೃಷ್ಟಿ, ಪ್ರಳಯ ಉಂಟಾದೀತೇ?.

ಇರಬಹುದೇನೋ ಗೊತ್ತಿಲ್ಲ. ಆದರೆ ಮಂಗಳೂರಲ್ಲಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಶತಮಾನಗಳ ಹಿಂದ ಬ್ರಹ್ಮ ಶ್ರೀ ನಾರಾಯಣಗುರುಗಳು ಸ್ಥಾಪಿಸಿದಂಥ ಕುದ್ರೋಳಿ ಗೋಕರ್ಣನಾಥನ ಸನ್ನಿಧಿಯಲ್ಲಿ ಪತಿಕಳೆದುಕೊಂಡ ವನಿತೆಯರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ನವರಾತ್ರಿಯ ಸಂದರ್ಭದಲ್ಲಿ ಪತಿಕಳೆದುಕೊಂಡ ವನಿತೆಯರು ಬಳೆ ತೊಟ್ಟು, ಹೂಮುಡಿದು, ಕುಂಕುಮ ಧರಿಸಿ ಗೋಕರ್ಣನಾಥನ ರಥ ಎಳೆದಿದ್ದರು.

ಈ ಕಾರ್ಯಕ್ರಮದ ಕುರಿತು ಅನೇಕ ಬುದ್ಧಿಜೀವಿಗಳು, ಸಾಂಸ್ಕೃತಿಕ ಜಗತ್ತಿನ ಪ್ರಮುಖರು, ಅಕ್ಷರ ಸಂಸ್ಕೃತಿಯನ್ನು ಆವಾಹಿಸಿಕೊಂಡವರು, ಸಾಮಾನ್ಯರು ಹೀಗೆ ವಿಭಿನ್ನ ನೆಲೆಯವರು ತಮ್ಮ ತಮ್ಮ ವಾದಸರಣಿಯನ್ನು ಮಂಡಿಸಿ ಜಗತ್ತಿನ ಕಣ್ಣು ತೆರೆಸಿದರು. ಅದರ ಮುಂದುವರಿದ ಭಾಗಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನಾಂದಿಯಾಗಿದೆ.

ಸಾಮಾನ್ಯವಾಗಿ ಯಾಗ, ಪೂಜೆ ನಡೆಯುವಾಗ ಮನೆಯ ಯಜಮಾನ, ಮುತ್ತೈದೆಯರು ಮಾತ್ರ ಭಾಗವಹಿಸಬೇಕು. ಪತಿಕಳೆದುಕೊಂಡವರು ಯಾಗಕ್ಕೆ ಕುಳಿತುಕೊಳ್ಳುವಂತಿಲ್ಲ. ಬಾಗಿಲ ಮರೆಯಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು, ಆದರೆ ಇದು ಯಾಗದಲ್ಲಿ ಭಾಗವಹಿಸಿದವರ ಕಣ್ಣಿಗೆ ಬೀಳಬಾರದು ಇತ್ಯಾದಿ…ಇತ್ಯಾದಿ ಕಟ್ಟುಪಾಡುಗಳು.

ಆದರೆ ಕುದ್ರೋಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಚಂಡಿಕಾ ಯಾಗ ಆಯೋಜಿಸಲಾಗಿತ್ತು. ಪತಿಕಳೆದುಕೊಂಡವರಿಗಷ್ಟೇ ಯಾಗಕ್ಕೆ ಕುಳಿತುಕೊಳ್ಳುವ ಅವಕಾಶವಿತ್ತು. ಮುಡಿಯಲು ಹೂವು, ಧರಿಸಲು ಸೀರೆ, ಹಣೆಗಿಡಲು ಕುಂಕುಮವನ್ನು ಕ್ಷೇತ್ರದ ವತಿಯಿಂದ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರು ಕೊಡಿಸಿದರು. ಪತಿ ಕಳೆದುಕೊಂಡ ಐನೂರಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು (ಲಾರಿ, ಕಾರು, ಜೀಪಿನಲ್ಲಿ ಕರೆದುತಂದವರಲ್ಲ ಖಂಡಿತಕ್ಕೂ)ಬಂದಿದ್ದರು.

ಯಾಗದ ಪೂಣರ್ಾಹುತಿ ಮುಗಿದಮೇಲೆ ಸುಮಂಗಲೆಯರಾದ ಮಾಲತಿ ಜನಾರ್ಧನ ಪೂಜಾರಿ, ಕಲ್ಪನಾ ಸಾಯಿರಾಂ,ಲಲಿತಾ ರಾಮಯ್ಯ, ಶಶಿಕಲಾ ಹರಿಕೃಷ್ಣ ಬಂಟ್ವಾಳ್ ಮತ್ತು ಪುಷ್ಪಲತಾ ಜಿ.ಸುವರ್ಣ ಅವರು ನೆರೆದ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಹೀಗೆ-`ನಾವು ನಮ್ಮ ಪತಿಯ ನಿಧನದ ನಂತರವೂ ಕರಿಮಣಿ ಸರ ಧರಿಸುತ್ತೇವೆ, ಹೂಮುಡಿಯುತ್ತೇವೆ, ಬಳೆತೊಡುತ್ತೇವೆ’.ಈ ಕ್ಷಣ ಪತಿಕಳೆದುಕೊಂಡ ವನಿತೆಯರ ಕಣ್ಣಾಲಿಗಳು ತುಂಬಿಬಂದದ್ದಂತೂ ನಿಜ. ಆನಂತರ ಈ ವನಿತೆಯರು ಕೈಮುಗಿದು ಬೆಳ್ಳಿ ರಥವನ್ನು ದೇವಸ್ಥಾನದ ಸುತ್ತಲೂ ಎಳೆದು ಸಂತಸಪಟ್ಟರು.

ಇದಿಷ್ಟು ಕುದ್ರೋಳಿ ಕ್ಷೇತ್ರದಲ್ಲಿ ಕಂಡುಬಂದ ಸಂಗತಿಗಳು. ಹೌದು ಜನಾರ್ಧನ ಪೂಜಾರಿಯವರು ಸಾಲಮೇಳದ ಮೂಲಕ ಲಕ್ಷಾಂತರ ಮಂದಿಗೆ ಸಾಲಕೊಡಿಸಿ ಸಾಲಮೇಳದ ಪೂಜಾರಿಯೆನಿಸಿಕೊಂಡರು. ಅವರ ನಂತರ ಯಾರೂ ಹೀಗೆ ಸಾಲ ಮೇಳ ಮಾಡಲಿಲ್ಲ. ಹಾಗೆಂದು ಈಗ ಕುದ್ರೋಳಿ ಕ್ಷೇತ್ರದಲ್ಲಿ ಮಾತ್ರವಲ್ಲಾ ನಾಡಿನ ಯಾವುದೇ ಮೂಲೆಯಲ್ಲಿ ಮಠಮಂದಿರಗಳು ಮಾಡಬೇಕಾದ ಕೆಲಸವನ್ನು ಪೂಜಾರಿ ಮಾಡಿಸುತ್ತಿದ್ದಾರೆ, ಅವರೇ ಹೇಳಿದ ಮಾತು ಸಂತೃಪ್ತಿ ಪಡುತ್ತಿದ್ದೇನೆ. ಇದು ಇತರ ಕಡೆಗಳಿಗೂ ವಿಸ್ತರಣೆಯಾಗಬೇಕು.

ಹಾಗಾದರೆ ಇಂಥ ಸಾಧ್ಯತೆಗಳನ್ನು ಸಮಾಜ ಒಪ್ಪುತ್ತದೆಯಲ್ಲವೇ?. ಸಾಮಾನ್ಯವಾಗಿ ಮೈಲಿಗೆಯಾದರೆ ದೇವರು ಮುನಿಸಿಕೊಳ್ಳುತ್ತಾರೆ, ಮುನಿಯುತ್ತಾರೆ ಎನ್ನುವ ಬಲವಾದ ನಂಬಿಕೆಯಿರುವ ಭೂಮಿಯಲ್ಲಿದ್ದೇವೆ. ಪತಿಕಳೆದುಕೊಂಡಾಕೆ ಅಮಂಗಳೆ ಎನ್ನುವುದಾದರೆ ಅದು ಮೈಲಿಗೆ ಎಂದೇ ಅರ್ಥವಲ್ಲವೇ?, ಹಾಗಾದರೆ ಬೆಳ್ಳಿಯ ರಥ ದೇವಸ್ಥಾನದ ಸುತ್ತಲೂ ಸರಾಗವಾಗಿ ಚಲಿಸಿದ್ದನ್ನು ನೋಡಿದರೆ ಗೋಕರ್ಣನಾಥನೂ ಇಂಥ ಸುಧಾರಣೆಯನ್ನು ಒಪ್ಪಿದ್ದಾನೆ ಅಂದುಕೊಳ್ಳಬಹುದೇ? ಯಾಕೆಂದರೆ ಈಗಲೂ ಇರುವ ನಂಬಿಕೆ ರಥದ ಹಗ್ಗವನ್ನು ಇಂಥವರೇ ಮೊದಲು ಮುಟ್ಟಬೇಕು, ಅಂಥವರೇ ಮೊದಲು ಪ್ರಸಾದ ಸ್ವೀಕರಿಸಬೇಕು, ಇಂಥ ಸಮುದಾಯದವರು ರಥದ ಹಗ್ಗ ಮುಟ್ಟಿದರೆ ಮಾತ್ರ ರಥ ಮುಂದಕ್ಕೆ ಚಲಿಸುತ್ತದೆ ಇತ್ಯಾದಿ…ಇತ್ಯಾದಿ ನಂಬಿಕೆಗಳಿಯಲ್ಲಾ?

ಮನಸ್ಸು ಮೈಲಿಗೆಯಾಗಬಾರದು ಬಹುಷ: ಕುದ್ರೋಳಿ ಗೋಕರ್ಣನಾಥನಿಗೆ. ಆದ್ದರಿಂದಲೇ ಸುಸೂತ್ರವಾಗಿ ಚಂಡಿಕಾ ಯಾಗ ನಡೆದಿದೆ, ಅದೂ ಪತಿಕಳೆದುಕೊಂಡ
ವನಿತೆಯರಿಂದ. ಬೆಳ್ಳಿ ರಥ ಯಾವ ಆತಂಕವೂ ಇಲ್ಲದೆ ಚಲಿಸಿದೆ. ಅಮಂಗಳೆ ಪತಿಕಳೆದುಕೊಂಡವಳು ಅಂತಾದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ ?.

ಏನೇ ಇರಲಿ ಪತಿಕಳೆದುಕೊಂಡ ವನಿತೆಯರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆಯ ಅಗತ್ಯವಿದೆ ಅನ್ನಿಸುತ್ತಿದೆ. ಪತಿಕಳೆದುಕೊಂಡ ವನಿತೆಯರು ಅನುಭವಿಸುವ ಯಾತನೆಯ ಮೇಲೆ ಬೆಳಕು ಹರಿಯಬೇಕಾಗಿದೆ. ಸಿನಿಮಾ, ಟಿವಿ ಸೀರಿಯಲ್ಗಳು ತಮ್ಮ ಹೊಸ ನೆಲೆ ಕಂಡುಕೊಳ್ಳಲು ಅನುವಾಗುತ್ತಿದೆ ಅನ್ನಿಸುತ್ತಿದೆ.

Leave a Reply

Your email address will not be published. Required fields are marked *