Monthly Archives: October 2011

ಪೋಸ್ಕೊ ಹೋರಾಟದಲ್ಲಿ ಸಾವಿರಾರು ಹೆಜ್ಜೆಗಳು

– ಹು.ಬಾ.ವಡ್ಡಟ್ಟಿ

ಕರ್ನಾಟಕ ಸರಕಾರವು ಪೋಸ್ಕೊ ಕ0ಪನಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ 2010 ರಲ್ಲಿ ಕೊನೆಯ ಭಾಗದಲ್ಲಿಯೇ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿತ್ತು. ಈ ಪ್ರಕಟಣೆಯು ಜನ ಸಾಮಾನ್ಯರಿಗೆ ಇರಲಿ ಹಳ್ಳಿ ಗುಡಿ ಮತ್ತು ಭೊಮಿ ಕಳೆದು ಕೊಳ್ಳುಲಿರುವ ಇತರೇ ರೈತರಿಗೆ ಗೊತ್ತೆ ಇರಲಿಲ್ಲಾ . ಮು0ಡರಗಿ ತಾಲೊಕಿನ ಜ0ತ್ಲಿ-ಶಿರೊರು. ಗದಗ ತಾಲೊಕಿನ ಹರ್ಲಾಪುರ, ಲಕ್ಕು0ಡಿ ಭಾಗದಲ್ಲಿ ಎಸ್.ಆರ್.ಸ್ಟೀಲ್ ಕ0ಪನಿಗೆ 1560 ಎಕರೆ,  ಅನಿಲಘಟಕ ಸ್ಧಾಪನೆಗೆ 733 ಎಕರೆ ಭೊಮಿಯನ್ನು ವಶಪಡಿಸುವಕೊಳ್ಳುವ ಹುನ್ನಾರ ನಡೆಸಿತ್ತು.

ಈ ಭೂ ಸ್ವಾಧೀನ ಪ್ರಕ್ರಿಯೆಯ ವಿಷಯವನ್ನು ಅಷ್ಟೊ0ದು ಗಹನವಾಗಿ, ರೈತರು  ತೆಗೆದುಕೊ0ಡರಲಿಲ್ಲ. ಆದರೇ ಹಳ್ಳಿಗುಡಿಯ ಬಡ ರೈತ  ಅಲ್ಪ ಭೂಮಿಯನ್ನು ಹೊ0ದಿರುವ ಸಿದ್ದಪ್ಪ ಮುದ್ಲಾಪುರ 2011 ರ ಫೆಬ್ರುವರಿ ತಿ0ಗಳಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಡಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳಗೆ ಫೆಬ್ರುವರಿ 28 ರ0ದು ಪತ್ರದ ಮೂಲಕ ಹೇಳಿಕೆ ನೀಡಲಾಗಿತ್ತು . ಆ ಸಮಯದಲ್ಲೂ ಭೂ ಸ್ವಾಧೀನದ ಕುರಿತಾಗಿ ಚಿ0ತನೆಯನ್ನು ನಡೆಸಿರಲಿಲ್ಲ. ಹೋರಾಟ ಕಟ್ಟುವ ಕುರಿತು ಯೋಚನೆಯನ್ನೆ ಮಾಡಿರಲಲ್ಲಿ. ದಿನದಿ0ದ ದಿನಕ್ಕೆ ಮಾಧ್ಯಮದ ಮುಖಾ0ತರ ಭೂ ಸ್ವಾಧೀನ ಕುರಿತಾಗಿ ಸುದ್ದಿಗಳು ಪ್ರಕಟಣೆಗೊ0ಡಾಗ, ಜನರಿಗೆ ಪೋಸ್ಕೊ ಸ್ಟೀಲ್ ಕ0ಪನಿಯ ಬಗ್ಗೆ ತಿಳಿಯ ತೊಡಗಿತು. ಆನ0ತರವೇ 2011 ರ ಮೇ ತಿ0ಗಳ ಮೊದಲ ವಾರದಲ್ಲಿ ಭೂ ಸ್ವಾಧೀನ ವಿರೋಧ ಹೋರಾಟ ವೇದಿಕೆಯು ಅಸ್ತಿತ್ವಕ್ಕೆ  ಬ0ತು. ಈ ವೇದಿಕೆಯ ಅಡಿಯಲ್ಲಿ ಮೇ 9ರ0ದು ಶ್ರೀ ಜಗದ್ಗುರು ಡಾ. ಅನ್ನಾದಾನೀಶ್ವರ ಮಹಾಶಿವಯೋಗಿಗಳು, ಶಿವ ಕುಮಾರ ಮಹಾಸ್ವಾಮಿಗಳು, ವೈ.ಎನ್.ಗೌಡರ, ಈಶ್ವರಪ್ಪ ಹ0ಚಿನಾಳ, ಲಕ್ಷಣ ದೇಸಾಯಿಯವರ ನೇತೃತ್ವದಲ್ಲಿ ಹಳ್ಳಿಗುಡಿ ಜ0ತ್ಲಿ-ಶಿರೊರು ,ಮೇವು0ಡಿ, ಪೇಠಾಲೊರಿನ ರೈತರು ತಹಸೀದ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಮುಖ್ಯ ಮ0ತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಭೂ ಸ್ವಾಧೀನಕ್ಕೆ ಸ0ಬಂಧಿಸಿದ  5 ಬೇಡಿಕೆಗಳನ್ನು ಮು0ದಿಟ್ಟಿತ್ತು:

1. ಭೂ ಸ್ವಾಧೀನವನ್ನು ಪುನರ್ ಪರಿಶೀಲಿಸ ಬೇಕು.
2 ಭೂಮಿ ಕಳೆದು ಕೊ0ಡ ರೈತರ ಶೇರು ಆ ಕ0ಪನಿಯಲ್ಲಿರ ಬೇಕು .ರೈತರನ್ನು ಶೇರುದಾರನ್ನಾಗಿ ಮಾಡಬೇಕು.

3.ಭೂಮಿ ಕಳೆದುಕೊ0ಡ ಪ್ರತಿ ರೈತರ ಮನೆಯವರಿಗೊ ಉದ್ಯೋಗ ಕೊಡಬೇಕು.

4. ರಾಜ್ಯ ಸರಕಾರ ಮತ್ತು ಕೇ0ದ್ರ ಸರಕಾರಗಳು ಭೂ ಹೀನರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು.

5. ಪ್ರತಿ ಎಕರೆ ಭೊಮಿಗೆ 30 ಲಕ್ಷ ರೊಪಾಯಿಗಳನ್ನು ಪರಿಹಾರ ನೀಡಬೇಕು.

ಶ್ರೀ ಜಗದ್ಗುರು ಡಾ.ಅನ್ನಾದಾನೀಶ್ವರ ಮಹಾ ಶಿವಯೋಗಿಗಳ ನೇತೃತ್ವದಲ್ಲಿ , ನ0ದಿಕೇರಿ ಮಠದ ಶಿವ ಕುಮಾರ ಸ್ವಾಮೀಜಿ, ವೈ.ಎನ್.ಗೌಡರ.ಲಕ್ಷಣ ದೇಸಾಯಿ  ಈಶ್ವರಪ್ಪ ಹ0ಚಿನಾಳರು ಮೇ 9 2011 ರ0ದು ತಹಸಿಲ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಆಗಿನ ಮುಖ್ಯ ಮ0ತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ, ಮನವಿಯನ್ನು ಅರ್ಪಿಸಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪ0ದಿಸಲೇ ಇಲ್ಲ. ಬದಲಿಗೆ ಜೂನ್ ತಿ0ಗಳ ಕೊನೆಯ ವಾರದಲ್ಲಿ ವಿಶೇಷ ಭೊ ಸ್ವಾಧೀನಧಿಕಾರಿಗಳ ಕಛೇರಿ ಧಾರವಾಡ ಕೈಗಾರಿಕಾ ಪ್ರದೇಶಾಭಿವೃದ್ದಿ ಮ0ಡಳಿ ಯಿ0ದ ಪೊಸ್ಕೋ ಇ0ಡಿಯಾ ಪ್ರೈತರ ಮನೆ ಬಾಗಿಲುಗಳಿಗೆ ತಲುಪಿಸಿದರು. ಆಕ್ಷೇಪಗಳಿದ್ದರೆ 15 ದಿನಗಳಲ್ಲಿ ಮೌಖಿಕವಾಗಿ, ಇಲ್ಲವೇ ಲಿಖಿತ ರೂಪದಲ್ಲಿ ಸಲ್ಲಿಸಬೇಕು, ಇಲ್ಲವಾದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಕ್ರಮ ಜರುಗಿಸಲಾಗುವುದು ಎಂದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ರೈತರು  ಸಲ್ಲಿಸಿದ್ದ ಮನವಿಗೆ ಸ್ಪ0ದಿಸಿದೇ ಭೂಮಿ ವಶಪಡಿಸಿ ಕೊಳ್ಳುವದ್ದಕ್ಕೆ ಮು0ದಾಯಿತ್ತು.

ಹೋರಾಟದ ಹಾದಿಯಲ್ಲಿ ಸಾವಿರಾರು ಹೆಜ್ಜೆಗಳು. ಶ್ರೀ ಜಗದ್ಗುರು  ತೋ0ಟದ ಸಿದ್ದಲಿ0ಗ ಮಹಾ ಸ್ವಾಮಿ, ಶ್ರೀ ಜಗದ್ಗುರು  ಅನ್ನದಾನೀಶ್ವರ ಮಹಾಶಿವಯೋಗಿಗಳು, ಡಾ. ಸಿದ್ದನ ಗೌಡ  ಪಾಟೀಲ, ವೈ.ಎನ್. ಗೌಡರ , ಚ0ದ್ರಶೇಖರ ಬಾಳೆ, ಬಸವರಾಜ ಸೂಳಿಬಾವಿ, ಲಕ್ಷ್ಮಣ ದೇಸಾಯಿ, ಚನ್ನಪ್ಪ ಬೂದಿಹಾಳ, ಹನುಮ0ತಪ್ಪ ಗಡ್ಡದರು ಹೋರಾಟಕ್ಕೆ ನಾಯಕತ್ವ ನೀಡತೊಡಗಿದರು.

ಅದಕ್ಕೊ0ದು ದೊಡ್ಡ ಮಟ್ಟದಲ್ಲಿ ಬಲವೆ0ಬ0ತೆ ಹುಬ್ಬಳ್ಳಿಗೆ ಬ0ದಿದ್ದ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್  ಹಳ್ಳಿಗುಡಿಗೆ ಬ0ದು ರೈತರೊ0ದಿಗೆ ಸ0ವಾದ ನಡೆಸಿ ನೈತಿಕ ಸ್ಥೈರ್ಯವನ್ನು ರೈತ-ಮಹಿಳೆಯರಲ್ಲಿ ತು0ಬಿದರು. ಹೋರಾಟಕ್ಕೆ ಮೇಧಾ ಪಾಟ್ಕರ್ ಬಲವು ಸಾವಿರಾರು ಆನೆ ಬಲ ಬ0ದ0ತೆ ಆಯಿತು.

ಅಭಿಮಾನಿಗಳು ಮತ್ತು ಅವತಾರಗಳು

-ಡಾ.ಎನ್.ಜಗದೀಶ್ ಕೊಪ್ಪ

ಇದು ನಾವು ಬದುಕುತ್ತಿರವ ವರ್ತಮಾನದ ಸಮಾಜದ ಅಧೋಗತಿಯೋ? ಅಥವಾ ನಮ್ಮ ಜನಸಾಮಾನ್ಯರ ವೈಚಾರಿಕ ಪ್ರಜ್ಞೆಯ ದಾರಿದ್ರ್ಯವೋ? ಅರ್ಥವಾಗುತ್ತಿಲ್ಲ.. ಕಳೆದ 21 ರ ಶುಕ್ರವಾರ ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕಿನಕೆರೆಯ 20 ಮಂದಿ ಗ್ರಾಮಸ್ಥರು, ಯಡಿಯೂರಪ್ಪ ಅಭಿಮಾನಿಗಳು ಎಂಬ ಬ್ಯಾನರ್ ಅಡಿಯಲ್ಲಿ ಅಲ್ಲಿನ ಮಣ್ಣನ್ನು ತಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲಿನಲ್ಲಿ ಕಾದಿದ್ದರು.
ಯಡಿಯೂರಪ್ಪನವರ ಕೈಯಲ್ಲಿ ಆ ಮಣ್ಣನ್ನು ಮುಟ್ಟಿಸಿ ನಂತರ ಹಂಚಿಕೊಳ್ಳುವ ಬಯಕೆ ಅವರದಾಗಿತ್ತು (ಬಹುಶಃ ತಿನ್ನಲಿಕ್ಕೆ ಇರಬಹುದು). ಈ ಅಂಧಾಭಿಮಾನವನ್ನು ಹೇಗೆಂದು ವ್ಯಾಖ್ಯಾನಿಸಲಿ? ನಾಡಿನಲ್ಲಿ ಕಣ್ಣೆದುರೇ ಕರಗಿ ಹೋಗುತ್ತಿರುವ ವೈಚಾರಿಕ ಪ್ರಜ್ಞೆಯ ದುರಂತವೆನ್ನಲೆ?

ತಲೆಯೆತ್ತುತ್ತಿರುವ ಮೂರನೇ ದರ್ಜೆಯ ಸಂಸ್ಕೃತಿಯೆದುರಿನ ನಮ್ಮ ಅಸಹಾಯಕತೆ ಎನ್ನಬೇಕೆ?
ಇತ್ತೀಚಿನ ದಿನಗಳಲ್ಲಿ ಯಾವುದೇ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳ ಪಾಲಿಗೆ ಅಭಮಾನಿಗಳು ಎಂಬ ಸಂಗತಿ ವಿಮೋಚನೆಯಾಗದ ಶಾಪದಂತಾಗಿದೆ, ತನ್ನ ಅಭಿಮಾನಿಗಳನ್ನು ದೇವರೆಂದು ಕರೆದ ತಮ್ಮ ಬದುಕಿನುದ್ದಕ್ಕೂ ಆರಾಧಿಸಿದ ಡಾ. ರಾಜ್ ಕುಮಾರ್ ರವರಿಗೆ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಈ  ಅಭಿಮಾನಿಗಳು ಕೊಟ್ಟ ಬಳುವಳಿ ಎಂತಹದ್ದು ಎಂಬುದು ಕನ್ನಡಿಗರೆಲ್ಲಾ  ಬಲ್ಲ ಸಂಗತಿ. ರಾಜ್ ಕುಟಂಬಕ್ಕೆ ಅಂತಿಮ ಗೌರವ ಸಲ್ಲಿಸಲು ಬಿಡದ ಇಂತಹ ಅಭಿಮಾನಿಗಳು ಜಗತ್ತಿನಲ್ಲಿ ಯಾರಿಗೂ ಬೇಡ ಎಂದು ಆ ಕ್ಷಣದಲ್ಲಿ ಎಲ್ಲರಿಗೂ ಅನಿಸಿದ್ದು ನಿಜ.
ಅಭಿಮಾನವೆಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನ ಸಾಮಾನ್ಯರ ಅಂತರಂಗದ ಆರಾಧನೆ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಸಂಗೀತ, ನೃತ್ಯ,  ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಹೀಗೆ ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದವರನ್ನು ಮೆಚ್ಚುವುದು, ಅವರ ಬದ್ಧತೆಯ ಬಗ್ಗೆ ಶ್ಲಾಘನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂಸ್ಕೃತಿಕ ಅಭಿರುಚಿ, ಇಂತಹ ಅಭಿಮಾನ ಸಾಧಕರಿಗೆ ತಾವು ಸಾಗುತ್ತಿರುವ ಮಾರ್ಗದಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತಂದುಕೊಡುವಂತಹದ್ದು..
ಆದರೆ ಇಂದು ನಮ್ಮ ಮುಂದೆ ನಡೆಯುತ್ತಿರುವುದು ದಿಢೀರನೆ ಹುಟ್ಟಿಕೊಂಡ ಕಟೌಟ್ ಹಾಗೂ ಫ್ಲೆಕ್ಸ್ ಸಂಸ್ಕೃತಿಯ  ನಾಯಕರ ಕುರುಡು ಆರಾಧನೆ ಮಾತ್ರ. ಇದು ಸಾಮಾಜಿಕ ಬದುಕಿನ ಸ್ವಾಸ್ಥವನ್ನು ಕೆಡಿಸುವಂತಿದೆ. ಈ ಸಮಾಜಕ್ಕೆ, ಈ ನಾಡಿಗೆ, ಅಥವಾ ಈ ನೆಲಕ್ಕೆ ಈ ರೀತಿಯ ಹುಸಿ ಸಂಸ್ಕೃತಿಯ ನಾಯಕರ ಕೊಡುಗೆ ಏನು? ಅವರ ಅಭಿಮಾನಿಗಳು ಎನಿಸಿಕೊಂಡವರಿಗೂ ಸಹ ಉತ್ತರ ಗೊತ್ತಿಲ್ಲ. ಏಕೆಂದರೆ ಅಭಿಮಾನಗಳ ಸಂಘ ಎಂಬುದು ಕೆಲವರ ಪಾಲಿಗೆ ಲಾಭದಾಯಕ ದಂಧೆಯಾಗಿದೆ.
ಸುಮ್ಮನೆ ಹಾಗೆ ಈ ಪಟ್ಟಿ ಗಮನಿಸಿ, ಯಡಿಯೂರಪ್ಪ ಅಭಿಮಾನಿಗಳಸಂಘ, ವಿದಾನಸೌಧದ ಕಚೇರಿಯಲ್ಲಿ ಸಚಿವ ಸೋಮಣ್ಣ ಪಕ್ಷದ ಕಾರ್ಯಕರ್ತನಿಂದ ಚಪ್ಪಲಿ ಏಟು ತಿಂದದ್ದಕ್ಕೆ, ಪ್ರತಿಭಟಿಸುವ ಸಲುವಾಗಿ ಹುಟ್ಟಿಕೊಂಡ ಸೋಮಣ್ಣ ಅಭಿಮಾನಿಗಳ ಸಂಘ, ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ, ರೇಣುಕಾಚಾರ್ಯ ಅಭಿಮಾನಿಗಳ ಸಂಘ (ಈ ಸಂಘ ಈ ಬಾರಿಯ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಬ್ಯಾನರ್ ಹಿಡಿದು  ಕಲಾವಿದರ ಜೊತೆ  ಸಾಗಿತು.) ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳ ಸಂಘ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ, ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಈ ಪಟ್ಟಿಯನ್ನು ನೀವು ರಾಜ್ಯದ ಎಲ್ಲಾ ಶಾಸಕರಿಗೆ, ಸಚಿವರಿಗೆ ಮತ್ತು ಸಂಸದರಿಗೂ ಅನ್ವಯಿಸಬಹುದು. ಯಾವ ಪುರುಷಾರ್ಥಕ್ಕೆ ಈ ಅಭಿಮಾನಿಗಳ ಸಂಘಗಳು?
ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ನಟನೊಬ್ಬನಿಗೆ ಗುಡಿ ಗೋಪುರಗಳ ಮುಂದೆ ಕಾಯಿ ಹೊಡೆದು ಕ ರ್ಪೂರ ಹಚ್ಚಿದ, ಕಣ್ಣೀರ ಧಾರೆ ಸುರಿಸಿದ ಅಭಿಮಾನಿಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಇದು ಈ ನಾಡಿನ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕದ  ಬದುಕು ಅಧಃಪತನದ ಪಾತಾಳಕ್ಕೆ ಇಳಿದಿರುವ ಸಂಕೇತವೆ  ಎಂಬುದರ ಕುರಿತು ನಾಡಿನ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಮನುಷ್ಯನೊಬ್ಬನ ವರ್ತನೆಯ  ತಿಕ್ಕಲುತನದ ಪರಮಾವಧಿ ಎನ್ನಬಹುದಾದ ಈ ಅತಿರೇಕ ಹುಟ್ಟಿಕೊಂಡದ್ದು ನಮ್ಮ ನೆರೆಯ ತಮಿಳುನಾಡಿನಲ್ಲಿ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯನ್ನು ರಾಮಸ್ವಾಮಿ ಪೆರಿಯಾರ್ ಹುಟ್ಟುಹಾಕಿದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಪಳಗಿ  ಪ್ರವರ್ಧಮಾನಕ್ಕೆ ಬಂದ ಸಿ.ಎನ್. ಅಣ್ಣಾದೊರೆ, ಮತ್ತು ಎಂ. ಕರುಣಾನಿಧಿ ತಮ್ಮ ಅಸ್ಖಲಿತ ಹಾಗೂ ಅದ್ಘುತ ತಮಿಳು ಭಾಷಣಗಳಿಂದ ಅಲ್ಲಿನ ಜನರ ಮನಗೆದ್ದರು, ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿದ್ದನ್ನು ತೀವ್ರವಾಗಿ ಖಂಡಿಸಿ, ತಮಿಳು ಭಾಷೆ, ಸಂಸ್ಕೃತಿ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಜೊತೆಗೆ ಈ ಇಬ್ಬರು ನಾಯಕರು ತಮಿಳು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಚಳುವಳಿಯ ಸಂದೇಶಗಳನ್ನು ತಮಿಳರ ಮನಮುಟ್ಟುವಂತೆ ಮಾಡಿದರು. ಇವರ ಎಲ್ಲಾ ಸಿನಿಮಾಗಳಿಗೆ ಎಂ.ಜಿ.ರಾಮಚಂದ್ರನ್ ನಾಯಕನಾದದ್ದು ವಿಶéೇಷ. ಇದು ಅಲ್ಲಿನ ಜನರಲ್ಲಿ ನಾಯಕರ ಬಗ್ಗೆ ಅಭಿಮಾನ ಬೆಳೆಯಲು ಕಾರಣವಾಯಿತು. ಇವರ ಈ ಹೋರಾಟ 1967ರಲ್ಲಿ ತಮಿಳುನಾಡಿನಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸೇತರ ಡಿ.ಎಂ.ಕೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿ, ಅಣ್ಣಾದೊರೆ ಮುಖ್ಯಮಂತ್ರಿಯಾದರು. ಆದರೆ ಕೇವಲ ಎರಡು ವರ್ಷದಲ್ಲಿ ಅಂದರೆ 1969ರಲ್ಲಿ ಅಣ್ಣಾದೊರೆ ಆಕಸ್ಮಿಕವಾಗಿ ನಿಧನರಾದಾಗ 26 ಮಂದಿ ತಮಿಳು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 12 ಮಂದಿ ಚಲಿಸುವ ರೈಲಿನಿಂದ ಬಿದ್ದು ಸಾವಿಗೆ ಶರಣಾಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅಂದಿನ ಮದ್ರಾಸ್ ನಗರದ ಮೆರೀನಾ ಬೀಚ್ ಬಳಿ 14 ಲಕ್ಷ ಅಭಿಮಾನಿಗಳು ಸೇರಿದ್ದು ಇಂದಿಗೂ ವಿಶ್ವದಾಖಲೆ.

ಇದೇ ಪರಂಪರೆ 1987ರಲ್ಲಿ ನಟ ಹಾಗೂ ತಮಿಳುನಾಡಿನ  ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಮುಂದುವರೆದು 19 ಮಂದಿ ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 7 ಮಂದಿ ಸೀಮೆಎಣ್ಣೆ ಸುರಿದುಕೊಂಡು ಸಾವನ್ನಪ್ಪಿದರು. ಇಂತಹ ಅತಿರೇಕದ ಅಭಿಮಾನ ಸಿನಿಮಾ ನಟರ ಮೂಲಕ ಮುಂದುವರಿದು, ಅದು ಕನರ್ಾಟಕದಲ್ಲೂ ಹುಚ್ಚು ಹೊಳೆಯಾಗಿ ಹರಿಯುತ್ತಾ ಇದೀಗ ನಮ್ಮ ನಟರುಗಳನ್ನು ಮತ್ತು ರಾಜಕೀಯ ನಾಯಕರನ್ನು ಆವರಿಸಿಕೊಂಡಿದೆ. ಅಭಿಮಾನಿ ಸಂಘವನ್ನು ನೇರವಾಗಿ ತಿರಸ್ಕರಿದ ಏಕೈಕ ದಕ್ಷಿಣಭಾರತದ ನಟನೆಂದರೆ, ಕಮಲ್ ಹಾಸನ್ ಮಾತ್ರ. ಇಂತಹ ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ. ಜೊತೆಗೆ ಈ ಅಭಿಮಾನಿಗಳ ಅತಿರೇಕಗಳನ್ನು ರೋಚಕತೆಯಿಂದ ಬಿಂಬಿಸುವ ನಮ್ಮ ದೃಶ್ಯ ಮಾಧ್ಯಮಗಳು ಕೂಡ ಒಮ್ಮೆ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಕೆಂಪು ದೀಪದ ಗೂಟದ ಕಾರಿನ ನೆಪದಲ್ಲಿ..

– ಚಿದಂಬರ ಬೈಕಂಪಾಡಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕೆಲವರಿಗೆ ಅದೇನೋ ಒಂಥಾರಾ… ಅನ್ನಿಸುತ್ತಿರಬೇಕಲ್ಲವೇ?. ನಗೆಯ ಮೂಲಕವೇ ಎಲ್ಲರನ್ನೂ ಗೆಲ್ಲುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುವ ಸದಾನಂದ ಗೌಡರು ಇಡುತ್ತಿರುವ ಒಂದೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಪಕ್ಷ ರಾಜಕಾರಣ ಅದೇನೇ ಇದ್ದರೂ ಮುಖ್ಯಮಂತ್ರಿಯಾಗಿ ಅವರು ಕರ್ನಾಟಕವನ್ನು ಹೇಗೆ ಮುನ್ನಡೆಸುತ್ತಾರೆನ್ನುವುದು ಬಹುಮುಖ್ಯವಾಗುತ್ತದೆ.

ನೆನೆಪಿರಬಹುದು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಿನ ಪಂಚಾಯತ್‌ರಾಜ್ ವ್ಯವಸ್ಥೆ ಅವರ ನಿಧನದ ನಂತರ ಹೇಗಾಗಿಹೋಯಿತು ಎನ್ನುವುದು.
ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸುಕಂಡ ದಿವಂಗತ ರಾಮಕೃಷ್ಣ ಹೆಗಡೆಯವರಿಗೆ ಸಾಥ್ ನೀಡಿದ ದಿವಂಗತ ಅಬ್ದುಲ್ ನಜೀರ್ ಸಾಬ್ ಯಾನೇ ನೀರು ಸಾಬ್ ನಂತರ ಪಂಚಾಯತ್‌ರಾಜ್ ವ್ಯವಸ್ಥೆ ಮೊನಚುಕಳೆದುಕೊಂಡು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ದಂತಾಗಿದೆ.

ಯಾಕಿಷ್ಟು ಪೀಠಿಕೆಯೆಂದರೆ ಮೊನ್ನೆ ತಾನೇ ಬೆಂಗಳೂರಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಸಭೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರಗಿದಾಗ ಗಮನ ಸೆಳೆದ ಒಂದು ಬೇಡಿಕೆ. ‘ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಕಾರಿಗೆ ಕೆಂಪು ದೀಪ ಅಳವಡಿಸಲು ಅನುಮತಿ ಕೊಡಬೇಕು’ ಎನ್ನುವುದು. ಸಭೆಯ ಕಲಾಪವನ್ನು
ಟಿವಿಯಲ್ಲಿ ಗಮನಿಸುತ್ತಿದ್ದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಾತನಾಡುತ್ತಾ (ನಗು ನಗುತ್ತಲೇ) ‘ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೆಂಪುದೀಪವಿರುವ ಗೂಟದ ಕಾರು ಬೇಕೆನ್ನುತ್ತಿದ್ದಾರೆ. ನಿಜ, ಗೂಟದ ಕಾರಲ್ಲಿ ತಿರುಗಾಡಬೇಕೆನ್ನುವ ಆಸೆ ಅವರಿಗಿದೆ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರ ಕಾರುಗಳಿಗೆ ಕೆಂಪು
ದೀಪ ಅಳವಡಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು’. ಮುಂದೆ ಟಿವಿ ವಾರ್ತಾ ವಾಚಕಿಯ ಮುಖ-ಧ್ವನಿ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ೧೯೮೭ರಲ್ಲಿ ಜ್ಯಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಕೆಂಪು ದೀಪ ಅಳವಡಿಸಿದ, ಜಿಲ್ಲಾಪಂಚಾಯತ್ ಲೋಗೋ ಇರುವ ಬಾವುಟ ಸಿಕ್ಕಿಸಿಕೊಂಡ ಗೂಟದ ಕಾರಿತ್ತು. ರಾಜ್ಯ ಸಚಿವರಿಗಿರುವ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದರು. ಹಳ್ಳಿಯ ಕಿರಿದಾದ ರಸ್ತೆಗಳಲ್ಲಿ ಕೆಂಪುದೀಪದ ಗೂಟದ ಕಾರು ಕಂಡು ಮಕ್ಕಳು ರೋಮಾಂಚನಗೊಳ್ಳುತ್ತಿದ್ದರು. ಕಾರು ನಿಂತ ಕೂಡಲೇ ಕಾರಿನ ಬಾಗಿಲು ತೆರೆಯಲು ಹಳ್ಳಿಯ ಪುಢಾರಿಗಳು ಮುಗಿಬೀಳುತ್ತಿದ್ದರು. ಜಿಲ್ಲಾಪಂಚಾಯತ್ ಅಧ್ಯಕ್ಷರು ಕಾರಿನಿಂದ ಇಳಿಯುತ್ತಿದ್ದಂತೆಯೇ ಜಿಲ್ಲಾಮಂತ್ರಿಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿತ್ತು.

ಜಿಲ್ಲಾಪಂಚಾಯತ್ ಅಧ್ಯಕ್ಷರೆಂದರೆ ಜಿಲ್ಲೆಯ ಪ್ರಥಮಪ್ರಜೆ. ಪ್ರೊಟೋಕಾಲ್ ಪ್ರಕಾರ ಅವರಿಗೆ ಗಣ್ಯರನ್ನು ಬರಮಾಡಿಕೊಳ್ಳಲು ಅವಕಾಶವಿತ್ತು. ಹಿರಿಯ ಐಎಎಸ್  ಅಧಿಕಾರಿ ಮುಖ್ಯಕಾರ್ಯದರ್ಶಿಯಾಗಿದ್ದರು. ಜಿಲ್ಲಾಪಂಚಾಯತ್ ವ್ಯಾಪ್ತಿಗೆ ಬರುವ ಅಧಿಕಾರಿಗಳು, ಸಿಬ್ಬಂಧಿಗಳಿಗೆ ರಜೆ ಮಂಜೂರುಮಾಡುವ ಅಧಿಕಾರ ಜಿಲ್ಲಾಪಂಚಾಯತ್ ಅಧ್ಯಕ್ಷರಿಗಿತ್ತು. ಶಿಕ್ಷಕರನ್ನು ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳಲು ಡಿಎಲ್‌ಆರ್‌ಸಿ ಸಮಿತಿ ಅಸ್ತಿತ್ವದಲ್ಲಿತ್ತು. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ರಸ್ತೆ, ಚರಂಡಿ, ಡಾಮರೀಕರಣ, ಕಿಂಡಿ ಅಣೆಕಟ್ಟು, ಕೊಳವೇ ಬಾವಿ ಕೊರೆಯುವುದು, ನೀರು ಸರಬರಾಜು ಮಾಡುವುದು ಇತ್ಯಾದಿ..ಇತ್ಯಾದಿಗಳೆಲ್ಲವೂ ಜಿಲ್ಲಾಪಂಚಾಯತ್ ಸದಸ್ಯರ ಸಲಹೆ ಆಧರಿಸಿ ಅನುಷ್ಠಾನಕ್ಕೆ ತರುವ ಅವಕಾಶವಿತ್ತು, ಎಲ್ಲದಕ್ಕೂ ಜಿಲ್ಲಾಪಂಚಾಯತ್‌ಗೇ ಪರಮಾಧಿಕಾರ.

ಜಿಲ್ಲಾಪಂಚಾಯತ್ ಸಭೆ ತೆಗೆದುಕೊಂಡ ನಿರ್ಣಯವನ್ನು ಜ್ಯಾರಿಗೆ ತರಲು ಮುಖ್ಯಕಾರ್ಯದರ್ಶಿ (ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಬದ್ಧರಿದ್ದರು. ಸರ್ಕಾರದ ಗಮನಕ್ಕೆ ತರಬಹುದು. ಸರ್ಕಾರದ ಯಾವುದೇ ಸುತ್ತೋಲೆಗಳು, ಆದೇಶಗಳು ಜಿಲ್ಲಾಪಂಚಾಯತ್ ಮೇಲೆ ಸವಾರಿ ಮಾಡುವಂತಿರಲಿಲ್ಲ. ಶಾಸಕರು ಜಿಲ್ಲಾಪಂಚಾಯತ್ ಸಭೆಗೆ ಕಾಯಂ ಆಹ್ವಾನಿತರು. ಶಾಸಕರು ಸಲಹೆ ಕೊಡಬಹುದು ಹೊರತು ಜಿಲ್ಲಾಪಂಚಾಯತ್ ಸದಸ್ಯರ ಭಾವನೆಗಳಿಗೆ ವಿರೋಧ ಮಾಡುವಂತಿಲ್ಲ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ.

ಇದು ಗಾಂಧಿ ಕಂಡಿದ್ದ ರಾಮರಾಜ್ಯ, ಜನರ ಕೈಗೇ ಅಧಿಕಾರ ಎನ್ನುವ ನಿಜವಾದ ಅರ್ಥ. ಆರುತಿಂಗಳಿಗೊಮ್ಮೆ ಕಡ್ಡಾಯವಾಗಿ ಗ್ರಾಮ ಸಭೆ ನಡೆಯಬೇಕು, ಆ ಸಭೆಯಲ್ಲಿಯೇ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಈ ಕಾರಣಕ್ಕಾಗಿಯೇ ಅಂದು ಜಿಲ್ಲಾಪಂಚಾಯತ್ ಸದಸ್ಯರ ಮನೆ ಮುಂದೆ ಬೆಳಗಾಗುವ ಮುನ್ನವೇ ಜನಜಂಗುಳಿ ಇರುತ್ತಿತ್ತು. ಶಾಸಕರು ಹಳ್ಳಿಯ ಜನರಿಗೆ ಅನಿವಾರ್ಯವಾಗಿರಲಿಲ್ಲ. ಅವರಿಗೆ ಜಿಲ್ಲಾಪಂಚಾಯತ್ ಸದಸ್ಯನೇ ಶಾಸಕ, ಜಿಲ್ಲಾಪಂಚಾಯತ್ ಅಧ್ಯಕ್ಷರೇ ಜಿಲ್ಲೆಯ ಮುಖ್ಯಮಂತ್ರಿ.

ಓರ್ವ ಸಾಮಾನ್ಯ ವರದಿಗಾರನಾಗಿ ನಾನು ಜಿಲ್ಲಾಪಂಚಾಯತ್ ಕಾರ್ಯಕಲಾಪಗಳನ್ನು ಅಂದು ಹತ್ತಿರದಿಂದ ಕಂಡು ಅನುಭವಿಸಿದ ಸಂಗತಿಗಳು. ಜಿಲ್ಲಾಪಂಚಾಯತ್ ಸಭೆಗೆ ಬರುವವರು ಅಧ್ಯಕ್ಷರಿಗೆ ಕೈಜೋಡಿಸಿ ವಂದಿಸಿ ಸಭಾಂಗಣ ಪ್ರವೇಶಿಸಬೇಕು, ಹೋಗುವಾಗಲೂ ಹಾಗೆಯೇ ಕೈಮುಗಿದು ನಿರ್ಗಮಿಸಬೇಕು. ವಿಧಾನ ಸಭಾ ಕಲಾಪಗಳ ಪಡಿಯಚ್ಚು ಅಂದಿನ ಜಿಲ್ಲಾಪಂಚಾಯತ್ ಸಭೆಗಳು.

ಅಂದಿನ ದಿನಗಳಲ್ಲಿ ಜಿಲ್ಲಾಪಂಚಾಯತ್ ಸದಸ್ಯರ ವಾದವೈಖರಿ, ವಿಷಯ ಮಂಡನೆ ವಿಧಾಸಭೆಯೊಳಗಿನ ಕಲಾಪದಂತೆಯೇ (ಹಿಂದಿನ ವಿಧಾನ ಸಭೆಯ ಕಲಾಪ- ಇಂದಿನದ್ದಲ್ಲ) ಇರುತ್ತಿತ್ತು. ಪಕ್ಷ ರಾಜಕಾರಣಕ್ಕೆ ಅವಕಾಶವಿರಲಿಲ್ಲ, ಅಭಿವೃದ್ಧಿ ಹೇಗೆ ?, ಎಲ್ಲಿ ಆಗಬೇಕು ?, ಯಾವ ರೀತಿ ಮಾಡಬೇಕು ?, ಅದರಿಂದ ಹಳ್ಳಿಯ
ಜನರಿಗೆ ಆಗುವ ಪ್ರಯೋಜನ ಎಷ್ಟು ?- ಇವುಗಳ ಸುತ್ತಲೇ ಚರ್ಚೆ ಇರುತ್ತಿತ್ತು.

ಈಗ ಹಿಂದಿನ ಜಿಲ್ಲಾಪಂಚಾಯತ್ ಒಂದು ನೆನಪು ಮಾತ್ರ. ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಅವರ ಕಲ್ಪನೆಯ ಜಿಲ್ಲಾಪಂಚಾಯತ್ ಕಳೆದುಹೋಗಿದೆ. ಸರ್ಕಾರದ ಕಪಿಮುಷ್ಠಿಯಲ್ಲಿ ಜಿಲ್ಲಾಪಂಚಾಯತ್ ನಲುಗುತ್ತಿದೆ. ಜಿಲ್ಲಾಪಂಚಾಯತ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಸರ್ಕಾರದ ಸುತ್ತೋಲೆ, ಆದೇಶಗಳೇ ಮುಖ್ಯ ಹೊರತು ಸದಸ್ಯರ ಭಾವನೆಗೆ ಈಗ ಕವಡೆ ಕಿಮ್ಮತ್ತು ಇಲ್ಲ.

ಆದ್ದರಿಂದ ಈಗ ಜಿಲ್ಲಾಪಂಚಾಯತ್ ಅಧ್ಯಕ್ಷರುಗಳು ಕೇಳುತ್ತಿರುವ ಕೆಂಪು ದೀಪದ ಗೂಟದ ಕಾರು ಕೊಡುವುದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿ ಕಷ್ಟವಾಗುವುದಿಲ್ಲ. ಆದರೆ ಇಂಥ ಬೇಡಿಕೆಯಿಟ್ಟು, ಅದು ಈಡೇರಿದರೆ ಸಂತೃಪ್ತರಾಗಿ ಬಿಡುವ  ಅಧ್ಯಕ್ಷರುಗಳಿಗೆ ಒಂದೇ ಒಂದು ಪ್ರಶ್ನೆ ನೀವು ಕೆಂಪುದೀಪದ ಗೂಟದ ಕಾರಿನಲ್ಲಿ ಸುತ್ತಾಡಿದರೆ ಹಳ್ಳಿ ಉದ್ಧಾರವಾಗುವುದೇ?

ನಿಮಗೆ ಸ್ವತಂತ್ರ ಅಧಿಕಾರಬೇಡವೇ ? ಎಲ್ಲಿ ರಸ್ತೆಯಾಗಬೇಕು, ಎಲ್ಲಿ ಚರಂಡಿಯಾಗಬೇಕೆಂದು ನಿರ್ಧರಿಸುವ ಅಧಿಕಾರ ನಿಮಗಿದೆಯೇ? ಜಿಲ್ಲಾಪಂಚಾಯತ್ ಸಭೆಯಲ್ಲಿ ನೀವು ಮಾಡಿದ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೈತೊಳೆದುಕೊಳ್ಳುತ್ತಾರೆ, ಸರ್ಕಾರದ ಸುತ್ತೋಲೆ, ಆದೇಶಗಳನ್ನು ಭಗವದ್ಗೀತೆಯಂತೆ ಕಾಣುತ್ತಾರಲ್ಲಾ ನಿಮ್ಮ ಧ್ವನಿಗೇನು ಬೆಲೆ ಇದೆ ?

ರಾಜ್ಯ ಸರ್ಕಾರದ ಅನುದಾನವನ್ನು ಸದಸ್ಯರಾದವರು ತಮ್ಮ ಕ್ಷೇತ್ರಗಳಿಗೆ ನೇರವಾಗಿ ಹಂಚಿಕೆ ಮಾಡಿಸಿಕೊಳ್ಳಲು ಸಾಧ್ಯವೇ ? ಅಧ್ಯಕ್ಷರೇ ನಿಮ್ಮ ಜಿಲ್ಲಾಪಂಚಾಯತ್‌ನಲ್ಲಿ ಸಾಮಾನ್ಯ ಸಿಬ್ಬಂದಿಯ ಮೇಲೆ ಕ್ರಮ ಜರಗಿಸುವ ಅಧಿಕಾರವಿದೆಯೇ ನಿಮಗೆ ?
ಮುಖ್ಯಮಂತ್ರಿ ಸದಾನಂದ ಗೌಡರು ನಗುನಗುತ್ತಲೇ ಗೂಟದ ಕಾರು ಒದಗಿಸುವ ಸುಳಿವು ಕೊಟ್ಟರು, ಅಧ್ಯಕ್ಷರು ಖುಷಿಯಾದರು, ನನಗೂ ಖುಷಿ. ಆದರೆ ಕಳೆದುಹೋದ ಜಿಲ್ಲಾಪಂಚಾಯತ್ ವ್ಯವಸ್ಥೆಯ ಬಗ್ಗೆ ನೋವಿದೆ.

ಹೊಸದಿಕ್ಕಿನತ್ತ ನಾಡನ್ನು ಮುನ್ನಡೆಸುವ, ರಾಜ್ಯವನ್ನು ಕಟ್ಟಿಬೆಳೆಸುವ ಸಂಕಲ್ಪ ಮಾಡಿರುವ ಸದಾನಂದ ಗೌಡರಿಗೆ, ಕಳೆದುಹೋಗಿರುವ ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಹುಟ್ಟುಹಾಕಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹುಡುಕಿಕೊಡಲು ಸಾಧ್ಯವೇ ? ಹೆಗಡೆ, ನಜೀರ್ ಸಾಬ್ ಈಗಲೂ ಹಳ್ಳಿಯ ಜನರಿಗೆ ನೆನಪಾಗುತ್ತಾರೆ ಯಾಕೆಂದರೆ ಅವರು ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ. ಮಂಡೆಕೋಲಿನಂಥ ಕುಗ್ರಾಮದಲ್ಲಿ ಜನಿಸಿ ವಿಧಾನ ಸೌಧದ ಸೂತ್ರಹಿಡಿದಿರುವ ಈ ಕಾಲಘಟ್ಟದಲ್ಲಿ ಹಳ್ಳಿಯ ಜನರ ಪರವಾಗಿ ಒಂದೇ ಒಂದು ಬೇಡಿಕೆ ಜನರ ಕೈಗೆ ನಿಜವಾದ ಅಧಿಕಾರ ಕೊಡಿ, ಸಾಧ್ಯವೇ ?

ದಲಿತರ ಮೇಲೆ ದೌರ್ಜನ್ಯ ನಡೆಸುವ ವ್ಯವಸ್ಥೆಯ ಹೆಸರು – ಸರಕಾರ!

ಭೂಮಿ ಬಾನು

ಇಂದು ಒಂದು ದುರಂತ ನಡೆದು ಹೋಗಿದೆ. ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋ ಕಾಲ್ಡ್ ನಾಗರಿಕ ಸಮಾಜ ತಲೆ ತಗ್ಗಿಸುವುದಷ್ಟೇ ಅಲ್ಲ, ಮಂಡಿ ಊರಿ ಕೂರಬೇಕು. ಸರಕಾರ, ಉಳ್ಳವರು ಎಲ್ಲರೂ ಇದಕ್ಕೆ ಹೊಣೆ.

ಊರಿನ ರಸ್ತೆ ಸರಿಯಿಲ್ಲ, ಕುಡಿವ ನೀರಿಲ್ಲ, ಬಸ್ ನಿಲ್ದಾಣದಲ್ಲಿ ಶೆಡ್ ಇಲ್ಲ, ಎಂದೆಲ್ಲಾ ಪ್ರತಿಭಟನೆ ಮಾಡುವ ‘ಮರ್ಯಾದಸ್ಥ’ ಜನ ನಮ್ಮೂರಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಮಲದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳಿಲ್ಲ ಎಂದು ದನಿ ಎತ್ತಿದ್ದು ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಬಸವಲಿಂಗಯ್ಯ ಮಲಹೊರುವ ಪದ್ಧತಿಯನ್ನು ರದ್ದು ಮಾಡುವ ಬಗ್ಗೆ ಮಂತ್ರಿ ಮಂಡಲ ಸಭೆಯಲ್ಲಿ ಮಾತೆತ್ತಿದಾಗ ಜೊತೆಯಲ್ಲಿದ್ದ ಕೆಲವರು “ಆ ಅಸಹ್ಯದ ಬಗ್ಗೆ ಎಷ್ಟು ಹೊತ್ತು ಮಾತಾಡ್ತೀರಿ?” ಎಂದು ಮೂದಲಿಸಿದರಂತೆ. ಬಸವಲಿಂಗಯ್ಯ ಪ್ರತಿಕ್ರಿಯಿಸಿ “ಆ ವಿಷಯ ಮಾತನಾಡೋಕೇ ಇಷ್ಟು ಅಸಹ್ಯ ಪಡ್ತೀರಲ್ಲ, ಅದೇ ಅಸಹ್ಯವನ್ನು ತಲೆಯಲ್ಲಿ ಹೊತ್ತು ಸಾಗಿಸೋರ ಪಾಡೇನು”, ಎಂದು ಪ್ರಶ್ನಿಸಿದ್ದರು. ಆ ‘ಕೆಲ ಮಂತ್ರಿಗಳಂಥದೇ’ ಮನಸುಗಳು ಈ ಹೊತ್ತಿನ ಪರಿಸ್ಥಿತಿಗೆ ಕಾರಣ.

ಕೇಂದ್ರ ಸರಕಾರ 1993 ರಲ್ಲಿಯೇ ಮಲ ಹೊರುವ ಪದ್ಧತಿಯನ್ನು ಕಾನೂನು ತಂದು ನಿಷೇಧಿಸಿತು. ವಿಪರ್ಯಾಸ ನೋಡಿ, ಇದುವರೆಗೆ ಯಾವ ಸರಕಾರಗಳೂ ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕಾನೂನು ತಂದರಷ್ಟೆ ಸಾಕೆ?

ಮಲ ಹೊರುವ ಪದ್ಧತಿ ನಿಷೇಧ ಎಂದಾಕ್ಷಣ ಮಲದ ಗುಂಡಿಗಳು ತುಂಬುವುದು ನಿಲ್ಲುತ್ತದೆಯೆ? ಒಳ ಚರಂಡಿ ವ್ಯವಸ್ಥೆ ಇಲ್ಲದ ಮಂದಿ ಎಂದಿನಂತೆ ಆ ಕೆಲಸ ಮಾಡುವವರನ್ನು ಹುಡುಕಿ ಹೋಗುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟು ಗುಂಡಿ ಖಾಲಿ ಮಾಡಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಬೇಕಾದ ಸ್ಥಿತಿಯಲ್ಲಿರುವ ಅನೇಕ ದಲಿತ ಕುಟುಂಬಗಳು ಅನ್ನಕ್ಕಾಗಿ ಅನಿವಾರ್ಯವಾಗಿ ಆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಸಾಯುತ್ತಾರೆ. (ಆದರೆ ಅದೇ ಮೇಲ್ಜಾತಿಯ ಯಾರೇ ಆಗಲಿ ಎಷ್ಟೇ ಬಡತನವಿದ್ದರೂ, ಎಷ್ಟೇ ದುಡ್ಡು ಕೊಡುತ್ತೇನೆಂದರೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ವಾಸ್ತವ).
ಕಾನೂನು ತಂದು ಒಂದು ದಶಕವಾಯಿತು. ಇನ್ನಾದರೂ ಕರ್ನಾಟಕದ ಬಹುಪಾಲು ನಗರ, ಪಟ್ಟಣಗಳಲ್ಲಿ ಯಂತ್ರಗಳನ್ನು ಬಳಸಿ ಮಲದ ಗುಂಡಿಗಳನ್ನು ಶುಚಿಗೊಳಿಸುವ ಪದ್ಧತಿ ಜಾರಿಯಾಗಿಲ್ಲ.

ಹಾಸನ ಜಿಲ್ಲೆ ಆಲೂರಿನಂತ ತಾಲೂಕು ಕೇಂದ್ರದದಲ್ಲಿ ಒಳ ಚರಂಡಿ ವ್ಯವಸ್ಥೆಯೂ ಇಲ್ಲ, ತುಂಬಿದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳೂ ಇಲ್ಲ. ರಾಜ್ಯದಾದ್ಯಂತ ಇಂತಹ ಅದೆಷ್ಟೋ ತಾಲೂಕುಗಳಿವೆ.

ನೂತನ ಕಾನೂನಿನ ಪ್ರಕಾರ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತರನ್ನು ನಿಯೋಜಿಸಿಕೊಂಡರೆ, ದಲಿತರ ಮೇಲೆ ನಡೆಸಿದ ದೌರ್ಜನ್ಯ ಎಂದು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬಹುದು. ಆದರೂ ಈ ಪದ್ದತಿ ನಿಲ್ಲದೇ ಇರಲು ಪ್ರಮುಖ ಕಾರಣ ಸರಕಾರದ ನಿರ್ಲಕ್ಷ್ಯ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಬಹುದೊಡ್ಡ ವ್ಯವಸ್ಥೆ – ಸರಕಾರ!

ಚಿತ್ರ: persecution.in

ಹೂವು, ಕುಂಕುಮ ಮತ್ತು ಮಹಿಳಾ ಸಬಲೀಕರಣ

-ಶಾಲಿ

ಸಾಮಾನ್ಯವಾಗಿ ಹಬ್ಬ ಹರಿದಿನಗಳ ಸಂಭ್ರಮ,, ಹೂವು, ಕುಂಕುಮ, ದೇವರ ಪೂಜೆಯ ಸಡಗರ ಮುತ್ತೈದೆ ಮತ್ತು ಕನ್ಯಾಮುತ್ತೈದೆಯರಿಗೇ ಮೀಸಲಾಗಿರುತ್ತದೆ.  ಮಂಗಳೂರಿನ ಕುದ್ರೋಳಿ ಶ್ರೀ ನಾರಾಯಣ ಗುರು ದೇವಸ್ಥಾನದಲ್ಲಿ ಈ ಬಾರಿ ನವರಾತ್ರಿ ಆಚರಣೆ ವಿಭಿನ್ನವಾಗಿತ್ತು. ಅಲ್ಲಿ ವಿಧವೆಯರಿಗೆ ಧಾರ್ಮಿಕ ಆಚರಣೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು. ವಿಧವೆಯರೇ ಮುಂದೆ ನಿಂತು ಚಂಡಿಕಾ ಹೋಮಕ್ಕೆ ಪೂರ್ಣಾಹುತಿ ನೀಡಿದರು. ಅವರೇ ಶ್ರೀ ಗೋಕರ್ಣನಾಥೇಶ್ವರ ದೇವರು ಮತ್ತು ಅನ್ನಪೂರ್ಣೇಶ್ವರಿ ದೇವರನ್ನು ಹೊತ್ತ ಬೆಳ್ಳಿರಥವನ್ನು ಎಳೆದರು. ಎಲ್ಲ ವಿಧವೆಯರಿಗೆ ಅವಕಾಶ ಸಿಗುವಂತಾಗಬೇಕು ಎನ್ನುವ ಕಾರಣಕ್ಕಾಗಿ ದೇವಸ್ಥಾನಕ್ಕೆ ರಥವನ್ನು ಐದು ಸುತ್ತು ಎಳೆಯಲಾಯಿತು. ಅದಾದ ನಂತರ ಕುದ್ರೋಳಿ ದೇವಸ್ಥಾನದ ಮುಖ್ಯಸ್ಥರಾದ ಕಾಂಗ್ರೆಸ್ ಬಿ. ಜನಾರ್ದನ ಪೂಜಾರಿ ವಿಧವೆಯರಿಗೆ ಹೂವು, ಸೀರೆ, ಅರಿಶಿಣ ಕುಂಕುಮ ನೀಡಿದರು.

ಸಾಂಪ್ರದಾಯಿಕವಾಗಿ ಪ್ರಗತಿಪರ ಯೋಚನೆಗಳಿಗೆ ಅಷ್ಟೇನೂ  ಬೋಲ್ಡ್ ಆಗಿ ತೆರೆದುಕೊಳ್ಳದ ಕರಾವಳಿಯಲ್ಲಿ ಇಂತಹ ಒಂದು ಆಚರಣೆ ನಿಜಕ್ಕೂ ಐತಿಹಾಸಿಕ ನಡೆ. ಅಳಿಯ ಕಟ್ಟು ಆಚರಣೆಯನ್ನೇ ಮಾತೃಪ್ರಧಾನ ಕುಟುಂಬಗಳು ಎಂದು ಬಿಂಬಿಸಲಾಗುತ್ತಿದ್ದರೂ  ಕೌಟುಂಬಿಕ ಚಟುವಟಿಕೆಗಳಲ್ಲಿ ಮಹಿಳೆಗೆ ಪ್ರಾಧಾನ್ಯತೆ ಕಡಿಮೆಯೇ. ಕೇರಳದ ಧಾರ್ಮಿಕ ಅಚರಣೆಗಳಿಂದ ಗಾಢವಾಗಿ ಪ್ರಭಾವಿತವಾಗಿರುವ ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಒಂದಲ್ಲ ಒಂದು ನೆಪ ಹೇಳಿ ಮಹಿಳೆಯನ್ನು ಬಹು ದೂರ ತಳ್ಳಿವೆ. ಇಂಗ್ಲಿಷ್‌ಗೆ ಹೆಸರಾದ, ಮಿಷಿನರಿ ಪ್ರಭಾವಕ್ಕೆ ಒಳಗಾದ, ಮಾಡರ್ನ್ ಚಿಂತನೆಗಳಿಗೆ ಹೆಸರಾದ ಮಂಗಳೂರಿನಲ್ಲಿಯೂ ಮಹಿಳೆ ಎಂದ ತಕ್ಷಣ ಆಕೆ ಪುರುಷನ ಅಂಕೆಯಲ್ಲಿರುವ, ಎರಡನೇ ದರ್ಜೆಯ ಪ್ರಜೆ ಎನ್ನುವ ನಂಬಿಕೆಯೇ ಇದೆ.

ಇಂಥ ಕರಾವಳಿಯಲ್ಲಿ ವಿಧವೆಯರಿಗೆ ಸೀರೆ ನೀಡುವುದರ ಜೊತೆಗೆ ಅವರಿಗೆ ಹೂವು, ಕುಂಕುಮವನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಎಷ್ಟೋ ವರ್ಷಗಳಿಂದ ಹೂವು ಮುಡಿಯದವರು ಅಂದು ಧೈರ್ಯವಾಗಿ ಹೂ ಮುಡಿದರು. ಹಸಿರು ಬಳೆ ತೊಡಲು ಪ್ರಯತ್ನಿಸಿದರು. ಗಾಜಿನ ಬಳೆ ಹಾಕದೇ ಒರಟಾದ ಕೈಗಳಲ್ಲಿ ಬಳೆ ಹಾಕಲು ಪ್ರಯಾಸ ಪಟ್ಟರು. ಹೂ ಮುಡಿದವರು ದೇವಸ್ಥಾನದಿಂದ ಆಚೆ ಬಂದ ಕೂಡಲೇ ಮುಜುಗರದಿಂದ ಹೂ ತೆಗೆದರು.  ಇವೆಲ್ಲ ಅಲ್ಲಿ ಕಂಡ ಚಿತ್ರಣಗಳು. ಆದರೆ ಒಟ್ಟು ಪ್ರಕ್ರಿಯೆಯ ಪರಿಣಾಮಗಳು ಅಗಾಧವಾದುದು. ವಿಧವೆ ಅಮಂಗಳೆ ಎನ್ನುವ ನಂಬಿಕೆ ಇತ್ತೀಚೆಗೆ ಮೇಲ್ನೋಟಕ್ಕೆ ಅಷ್ಟೇನೂ ಗಾಢವಾಗಿಲ್ಲದೇ ಇದ್ದರೂ ಧಾರ್ಮಿಕ ವಿಧಿ ವಿಧಾನಗಳಲ್ಲಿ, ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಅವರ ಪಾಡು ಇನ್ನೂ ಹಾಗೇ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಸೀರೆವಿತರಣೆಯ ಸಂಭ್ರಮದ ನಡುವೆಯೇ ಮೊನ್ನೆ ಕುದ್ರೋಳಿಯಲ್ಲಿ ಒಂದು ದೃಶ್ಯ ಕಾಡುವಂತಿತ್ತು. ಅಲ್ಲಿಗೆ ಬಂದವರ ಪೈಕಿ ಗ್ರಾಮೀಣ ಪ್ರದೇಶದಿಂದ ಬಂದ ಒಂದು ಕುಟುಂಬ. ಒಬ್ಬಳು ವಿಧವೆ ಅವಳ ಅಕ್ಕ ಮತ್ತು ಅಕ್ಕನ ಮಕ್ಕಳ ಜೊತೆಗೆ ಅಲ್ಲಿಗೆ ಬಂದಿದ್ದಳು. ರಥ ಎಳೆಯಲು ಎಲ್ಲರೂ ಸಾಲು ನಿಲ್ಲುವ ಸಂದರ್ಭದಲ್ಲಿ ಅಕ್ಕ ಮತ್ತು ಮಕ್ಕಳು ಆಕೆಯನ್ನು ರಥ ಎಳೆಯಲು ಹೋಗುವಂತೆ ಹುರಿದುಂಬಿಸುತ್ತಿದ್ದರು. ಅವಳು ಅಳುಕಿದಾಗ, ಏ ಅದು ನಿನ್ನಂಥವರಿಗೇ ಎಳೆಯುವುದಕ್ಕಿರುವ ರಥ. ಯಾಕೆ ಅಳುಕು… ಹೋಗಿ ಚಿಕ್ಕಮ್ಮಾ ಅಂತ ಮಕ್ಕಳು ಮುಂದೆ ದೂಡುತ್ತಿದ್ದರು.

ಆ ಕ್ಷಣಕ್ಕೆ ನನ್ನ ಮನಸ್ಸಲ್ಲಿ ಎದ್ದ ಹತ್ತಾರು ಪ್ರಶ್ನೆಗಳಲ್ಲಿ ಕೆಲವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ :

  • ವಿಧವೆಯರಿಗೆ ಧಾರ್ಮಿಕ ಕ್ರಿಯೆಗಳಲ್ಲಿ ಅವಕಾಶ ನೀಡುವ ಭರಾಟೆಯಲ್ಲಿ `ಇದು ವಿಧವೆಯರ ರಥ’ ಎಂದೇ ಮುಂದಿನ ವರ್ಷಗಳಲ್ಲಿ ಇದು ಬಿಂಬಿತವಾಗುವ ಅಪಾಯವಿದೆಯಲ್ಲವೇ? ಹಾಗಾದರೆ ಒಟ್ಟಿನಲ್ಲಿ ಏನು ಸಾಧಿಸಿದ ಹಾಗಾಯಿತು? ಅದರಿಂದ ವಿಧವೆಯರಿಗೆ ಏನು ಲಾಭವಾದೀತು?
  • ಕುದ್ರೋಳಿ ದೇವಸ್ಥಾನದಲ್ಲಿ ವಿಧವೆಯರಿಗೆ ಸೀರೆ ಕೊಡುತ್ತಾರಂತೆ; ಅದು ಮುತ್ತೈದೆಯರು ತೆಗೆದುಕೊಳ್ಳುವ ಸೀರೆಯಲ್ಲ ಎನ್ನುವ ನಂಬಿಕೆ ಗಟ್ಟಿಯಾದಲ್ಲಿ ಅದರಿಂದ ಯಾವ ಸುಧಾರಣೆಯಾದೀತು ?

ಹೀಗಾಗಿ ಪೂಜಾರಿಯವರ ದೃಷ್ಟಿಕೋನ ಇತ್ಯಾತ್ಮಕವಾದುದಾದರೂ ಅದು ಒಟ್ಟಿನಲ್ಲಿ ಸಮಗ್ರತೆ ಹೊಂದಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸೀರೆ ವಿತರಣೆಯ ಸಂದರ್ಭದಲ್ಲಿ ಮುಖ್ಯವಾಹಿನಿಯ ಜತೆಗೆ ಅಂದರೆ ಮುತ್ತೈದೆಯರು, ಕನ್ಯಾಮುತ್ತೈದೆಯರ ಜೊತೆಜೊತೆಗೇ ವಿಧವೆಯರೂ ಸೇರಿ ಎಲ್ಲರೂ  ಒಟ್ಟಾಗಿ ಭಾಗವಹಿಸುವ  ಅವಕಾಶ ಕಲ್ಪಿಸಿದಾಗ ತಾರತಮ್ಯ ಮರೆಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆರಂಭಿಸುವಾಗ ಸಮಗ್ರ ಮತ್ತು ದೂರದೃಷ್ಟಿಕೋನದ ಅಗತ್ಯವಿದೆ. ಶೋಷಿತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉಮೇದಿನಲ್ಲಿ ಅದು ಶೋಷಿತರನ್ನು ಸಮಾಜದಲ್ಲಿ ಮತ್ತಷ್ಟು ಪ್ರತ್ಯೇಕಗೊಳಿಸಬಾರದು ಎನ್ನುವ ಸೂಕ್ಷ್ಮತೆ ಮತ್ತು ಎಚ್ಚರ ಇಂತಹ ಕಾರ್ಯಕ್ರಮಗಳನ್ನು ರೂಪಿಸುವಾಗ ಬೆಂಬಲವಾಗಿ ಇರಬೇಕಾಗುತ್ತದೆ.

ಏನೇ ಇದ್ದರೂ ಕಡು ಸಂಪ್ರದಾಯವಾದೀ ಊರಿನಲ್ಲಿ ಪೂಜಾರಿಯವರ ಹೆಜ್ಜೆ ಖಂಡಿತ ಶ್ಲಾಘನಾರ್ಹ. ನಿಯಮಗಳನ್ನು ಮುರಿದಾಗಿದೆ. ಹೊಸಿಲು ದಾಟಿಯಾಗಿದೆ. ಇನ್ನು ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ದೇವಸ್ಥಾನಗಳು, ಧರ್ಮಾಧಿಕಾರಿಗಳು ಮತ್ತು ಮಠಮಾನ್ಯಗ

ಳ ಕೈಯಲ್ಲಿದೆ. ರಾಜಕಾರಣಿಯಾಗಿ ಪೂಜಾರಿ ಸಾಮಾಜಿಕ ಬದ್ಧತೆಯಿಂದ ನೋಡಬಲ್ಲರಾದರೆ ಮಠಾಧಿಪತಿಗಳು ತಂತಮ್ಮ ಸಮುದಾಯ ಉದ್ಧಾರದ ನೆಪದಲ್ಲಾದರೂ ಹೊಸ ಹೆಜ್ಜೆ ಇಡುವುದಕ್ಕೆ ಇನ್ನಾದರೂ ಮುಂದಾಗಬೇಕುದ್ಎನಿಸುತ್ತದೆ.   ಕರಾವಳಿಯ ಧರ್ಮಾಧಿಕಾರಿಗಳು ಸೀರೆ ನೀಡುವ ಕಾರ್ಯಕ್ರಮದಲ್ಲಿ ವಿಧವೆಯರಿಗೆ ಇರುವ ನಿಷೇಧ ಇನ್ನಾದರೂ ತೆರವಾಗಬೇಕಾಗಿದೆ.

ಕೊನೆ ಮಾತು :  ಮಹಿಳೆಯರ ಸಬಲೀಕರಣ ಅಥವಾ ವಿಧವೆಯರ ವಿಮೋಚನೆ ಕೇವಲ ಸೀರೆ ವಿತರಣೆಯಿಂದಾಗಲೀ, ಹೂವು ಕುಂಕುಮಗಳಿಂದಾಲೀ ಆಗುವುದಿಲ್ಲ ಎನ್ನುವುದು ಬೇರೆ ಮಾತು.