Monthly Archives: October 2011

ದಲಿತರ ಬಹಿಷ್ಕಾರ ಮತ್ತು ‘ದೊಡ್ಡ ಜನರ’ ಜವಾಬ್ದಾರಿ

– ಭೂಮಿ ಬಾನು

ಅರಕಲಗೂಡು ತಾಲೂಕಿನ ಸಿದ್ದಾಪುರದಲ್ಲಿ ಮುಂದುವರಿದ ಜಾತಿಯವರು ದಲಿತರನ್ನು ಇತ್ತೀಚೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದರು. ದಲಿತ ಸಮುದಾಯದ ಒಂಭತ್ತೋ-ಹತ್ತು ಕುಟುಂಬಗಳ ಸದಸ್ಯರಿಗೆ ಹಳ್ಳಿಯ ಯಾವುದೇ ಅಂಗಡಿಯ ಮಾಲೀಕ ಏನನ್ನೂ ಮಾರುವಂತಿಲ್ಲ. ಹಿಟ್ಟಿನ ಗಿರಣಿ ಮಾಲಿಕ ದಲಿತರ ದವಸ ಬೀಸುವಂತಿಲ್ಲ. ಕ್ಷೌರಿಕ ದಲಿತರಿಗೆ ಬ್ಲೇಡು ತಾಕಿಸುವಂತಿಲ್ಲ. ಇಂತಹದೇ ಹಲವು ಕಟ್ಟುಪಾಡುಗಳು.

ಸಿದ್ದಾಪುರ, ಸರಗೂರು ಗ್ರಾಮ ಪಂಚಾಯಿತಿಗೆ ಸೇರುವ ಒಂದು ಹಳ್ಳಿ. ಆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇದೇ ಸಿದ್ದಾಪುರದವರು. ಹೆಸರು ಚೆಲುವಯ್ಯ. ಅವರು ಕೂಡ ದಲಿತ ಸಮುದಾಯಕ್ಕೆ ಸೇರಿದವರು. ಬಹಿಷ್ಕಾರ ಘೋಷಣೆಯಾದ ಮಾರನೆಯ ದಿನ ಹಿಟ್ಟಿನ ಗಿರಣಿಗೆ ಅವರು ನಾಲ್ಕು ಕೆಜಿ ರಾಗಿ ತಗೊಂಡು ಹೋಗಿ ಬೀಸಿಕೊಡುವಂತೆ ಕೋರಿದ್ದಾರೆ. ಗಿರಣಿ ಮಾಲಿಕ ಒಬ್ಬ ಮುಸಲ್ಮಾನ. ಅವನಿಗೆ ಚೆಲುವಯ್ಯನ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. “ಕ್ಷಮಿಸಿ, ನಾನು ನಿಮ್ಮ ರಾಗಿ ಬೀಸೋಕೆ ಆಗೋಲ್ಲ. ನೀವೇನೋ ನಾಲ್ಕು ಕೆಜಿ ರಾಗಿ ಬೀಸೋಕೆ ಹತ್ತು ರೂಪಾಯಿ ಕೊಡ್ತೀರಿ. ಆದರೆ, ನಿಮ್ಮ ರಾಗಿ ನಾನು ಬೀಸಿದ್ದಕ್ಕೆ ಊರ ದೊಡ್ಡವರ ಪಂಚಾಯಿತಿಗೆ 1,001 ರೂಪಾಯಿ ದಂಡ ಕಟ್ಟಬೇಕಾಗುತ್ತೆ..” ಎಂದು ಗೋಗರೆದ.

ಆ ಪಂಚಾಯಿತಿಯ ಪ್ರಥಮ ಪ್ರಜೆ ಚೆಲುವಯ್ಯನದು ಈ ಪರಿಸ್ಥಿತಿ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರ ಎದುರು ತಮ್ಮ ಸಂಕಟ ತೋಡಿಕೊಂಡು ಚೆಲುವಯ್ಯ ಕಣ್ಣೀರು ಹಾಕಿದರು. ತಮ್ಮ ಮಾತಿನಲ್ಲಿ ಅವರು ತಪ್ಪಿಯೂ ತಮ್ಮ ಸಮುದಾಯಕ್ಕೆ ಬಹಿಷ್ಕಾರ ಹಾಕಿದ ಮುಂದುವರಿದವರ ಬಗ್ಗೆ ಒಮ್ಮೆಯೂ ಏಕವಚನ ಬಳಸಲಿಲ್ಲ.

ಇಷ್ಟೆಲ್ಲಕ್ಕೂ ಕಾರಣ, ದಲಿತರು ಕುಲವಾಡಿಕೆ ಮಾಡಲು ನಿರಾಕರಿಸಿದ್ದು. ಹಲವು ವರ್ಷಗಳಿಂದ ದಲಿತ ಸಮುದಾಯದ ಕೆಲ ಕುಟುಂಬಗಳು ಸತ್ತವರಿಗೆ ಗುಳಿ ತೋಡುವುದು, ಹಬ್ಬಗಳಂದು ಊರ ಗುಡಿಗೆ ಚಪ್ಪರ ಹಾಕುವುದು, ನಾಯಿ ಅಥವಾ ಇತರೆ ಪ್ರಾಣಿ ಸತ್ತರೆ ಶುಚಿ ಮಾಡುವ ಕೆಲಸಗಳನ್ನು ಮಾಡಿಕೊಂಡು ಬಂದಿವೆ. ಕ್ರಮೇಣ ಈ ಕೆಲಸ ಮಾಡುತ್ತಿದ್ದವರು ವೃದ್ಧರಾದರು. ಅವರ ಮಕ್ಕಳು ಹಾಗೂ-ಹೀಗೂ ವಿದ್ಯಾವಂತರಾದರು. ವೃದ್ಧರ ಕೈಯಲ್ಲಿ ಕೆಲಸ ಮಾಡಲಾಗೋಲ್ಲ. ವಿದ್ಯಾವಂತ ಮಕ್ಕಳು ಜಾಗೃತರಾಗಿ ನಾವೇಕೆ ಈ ಕೆಲಸ ಮಾಡಬೇಕು ಎಂದು ಪ್ರಶ್ನೆ ಹಾಕಿದರು. ಈ ಬೆಳವಣಿಗೆ ಮುಂದುವರಿದ ಜನಾಂಗದವರಿಗೆ ಸಹಿಸಲಾಗಲಿಲ್ಲ.

ಐನೂರಕ್ಕೂ ಹೆಚ್ಚು ಕುಟುಂಬಗಳಿರುವ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಏನು ತಾನೇ ಮಾಡಲು ಸಾಧ್ಯ. ದಲಿತರ ಮನೆ ಮಂದಿ ಪ್ರತಿದಿನ ಕೂಲಿ ಮಾಡುವುದು ಇದೇ ಮುಂದುವರಿದ ಜಾತಿ ಜನರ ಜಮೀನುಗಳಲ್ಲಿ. ಬಹಿಷ್ಕಾರದ ಪರಿಣಾಮ ಕೂಲಿಯೂ ಕಟ್. ಅವರು ಬದುಕುವುದು ಹೇಗೆ?

ಇಂತಹದೇ ಪ್ರಕರಣ ಇದೇ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇವಲ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಕುಲವಾಡಿಕೆ ಮಾಡಲು ನಿರಾಕರಿಸಿದ್ದ ಒಂಭತ್ತು ಕುಟುಂಬಗಳಿಗೆ ಆ ಊರಿನ ಮುಖಂಡರು ಬಹಿಷ್ಕಾರ ಹಾಕಿದ್ದರು. ಈ ಪ್ರಕರಣ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ವಿ.ಸೋಮಣ್ಣ ಆ ಹಳ್ಳಿಗೆ ಭೇಟಿ ನೀಡಿದರು. ಎರಡೂ ಸಮುದಾಯದ ಮುಖಂಡರನ್ನು ಸೇರಿಸಿ ಊರಿನ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿ ಆಶ್ವಾಸನೆ ನೀಡಿದರು. ಆ ಹಳ್ಳಿಯನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡುತ್ತೇನೆ ಎಂದರು. ಅಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣವೇ ಊರಿನ ಅಭಿವೃದ್ಧಿಗೆ ಬೇಕಾದ ಕಾರ್ಯಯೋಜನೆ ಸಿದ್ಧಪಡಿಸಿ ಎಂದು ತಾಕೀತು ಮಾಡಿದರು. ಕಂಡ ಕಂಡವರನ್ನೆಲ್ಲಾ ಅಮಾನತ್ತು ಮಾಡ್ತೀನಿ ಎಂದು ಧಮಕಿ ಹಾಕಿದರು. ಕೆಳಹಂತದ ಇಬ್ಬರ ಅಮಾನತ್ತಿಗೆ ಆದೇಶವನ್ನೂ ನೀಡಿದರು.

ಆದರೆ ನೆನಪಿರಲಿ, ಅಂದಿನಿಂದ ಇದುವರೆಗೆ ಸೋಮಣ್ಣ ಆ ಹಳ್ಳಿ ಕಡೆಗೆ ಮತ್ತೆ ತಿರುಗಿ ನೋಡಿಲ್ಲ. ಆ ನಂತರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭಗಳಲ್ಲೂ ಆ ಬಗ್ಗೆ ಮಾತನಾಡಿಲ್ಲ.
ಒಕ್ಕಲಿಗ, ಲಿಂಗಾಯುತ ಹಾಗೂ ಕುರುಬ ಜನಾಂಗದವರು ಹೆಚ್ಚಿನ ಪ್ರಭಾವಿಗಳಾಗಿರುವ ಅರಕಲಗೂಡು ತಾಲೂಕಿನಲ್ಲಿ ಆಗಾಗ ಇಂತಹ ಪ್ರಕರಣಗಳು ಕೇಳಿ ಬರುತ್ತಿವೆ. ಆದರೆ ಆ ಪ್ರಬಲ ಸಮುದಾಯಗಳ ರಾಜಕೀಯ ನಾಯಕರು ತಮ್ಮ ಜನಾಂಗದವರಿಗೆ ತಿಳಿ ಹೇಳುವಂತಹ ಕೆಲಸ ಒತ್ತಟ್ಟಿಗಿರಲಿ, ಇಂತಹ ಪ್ರಕರಣಗಳನ್ನು ಖಂಡಿಸಲೂ ಆಸಕ್ತಿ ತೋರಿಸಿಲ್ಲ.
ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಕೆರಗೋಡು ಹಾಗೂ ಸಿದ್ದಾಪುರದ ಘಟನೆಗಳ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ಮತಬಾಂಧವರ ಪೈಕಿ ಕೆಲವರು ಅಸ್ಪೃಶ್ಯತೆ ಎಂಬ ಪಿಡುಗಿಗೆ ಬಲಿಯಾಗಿ ಶೋಷಣೆಗೆ ಒಳಗಾಗುವುದನ್ನು ನೋಡಿದಾಗಲೂ ಇವರಿಗೆ ಏನೂ ಅನ್ನಿಸುವುದಿಲ್ಲವೆ?

ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಚಾಲಕ ಎನ್. ಮಹೇಶ್ ಸಿದ್ದಾಪುರದ ಘಟನೆ ತರುವಾಯ ದೌರ್ಜನ್ಯ ಮುಕ್ತ ಸಮಾಜದೆಡೆಗೆ ಎಂಬ ಹೆಸರಿನಡಿ ಸಿದ್ದಾಪುರದಿಂದ ಹಾಸನದವರೆಗೆ ಪಾದಯಾತ್ರೆ ನಡೆಸಿದರು. ಅವರು ತಮ್ಮ ಹೋರಾಟದ ವೇಳೆ ಕೇಳಿದ ಪ್ರಶ್ನೆ ಇಷ್ಟೆ – ಮೇಲ್ಜಾತಿ ಜನ ನಾಯಕರಿಗೆ ಶೋಷಣೆ ಮುಕ್ತ ಸಮಾಜ ಸ್ಥಾಪಿಸುವ ಹೊಣೆ ಇಲ್ಲವೆ?
ದೇವೇಗೌಡ, ಎಚ್.ಡಿ.ರೇವಣ್ಣ – ಹೀಗೆ ಅನೇಕರ ಹೆಸರನ್ನು ಉದ್ಧರಿಸಿ ಅವರು ಪ್ರಶ್ನೆ ಹಾಕಿದರು. ಉತ್ತರ ಕರ್ನಾಟಕದಲ್ಲಿ ಬೆಳಕಿಗೆ ಬಂದ ಇಂತಹ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸಮುದಾಯದವರು. ಆ ಸಮುದಾಯಕ್ಕೆ ನೂರಾರು ಮಠಗಳ ಬೆಂಬಲ, ಮಾರ್ಗದರ್ಶನ ಇದೆ. ಹಾಗಾದರೆ ಆ ಎಲ್ಲಾ ಮಠಗಳ ಸ್ವಾಮಿಗಳು ತಮ್ಮ ಭಕ್ತ ಸಮುದಾಯದವರಿಗೆ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಸಾಧ್ಯವಿಲ್ಲವೆ? ಅಥವಾ ಕಾರ್ಯ ಚುನಾವಣೆ ವೇಳೆ ಭಕ್ತರಿಗೆ ಅವರು ಅಯ್ಕೆ ಮಾಡಬೇಕಾದ ಅಭ್ಯರ್ಥಿಯನ್ನು ಸೂಚಿಸುವುದಷ್ಟೇ ಸ್ವಾಮೀಜಿಗಳ ಕೆಲಸವೆ?

ಮಂಡ್ಯದಲ್ಲಿ ಇತ್ತೀಚೆಗೆ ದಲಿತರೊಬ್ಬರು ಕ್ಷೌರ ಮಾಡಿಸಿಕೊಳ್ಳಲು ಹೋದಾಗ ಅವನ ಮೂಗಿಗೇ ಕತ್ತರಿ ಹಾಕಿದ ಪ್ರಕರಣ ವರದಿಯಾಗಿದೆ. ವಿಚಿತ್ರ ನೋಡಿ, ಕ್ಷೌರ ಸಮುದಾಯದವರೂ ಹಿಂದುಳಿದವರೇ. ಅವರು ತನ್ನಂತೆ ಅಥವಾ ತನಗಿಂತ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?
ಕ್ಷೌರ ಸಮುದಾಯ ಹಾಗೂ ದಲಿತರ ನಡುವೆ ಸಾಮರಸ್ಯ ಸಾಧಿಸಲು ಮಂಡ್ಯದಲ್ಲಿ ನಾಲ್ಕು ದಿನಗಳ ಹಿಂದೆ ವಿಶಿಷ್ಟ ಕಾರ್ಯಕ್ರಮ ಏರ್ಪಟ್ಟಿತ್ತು. ಕೆಲ ಪ್ರಜ್ಞಾವಂತರು ಸೇರಿಕೊಂಡು ಏರ್ಪಡಿಸಿದ್ದ ಕಾರ್ಯಕ್ರಮವದು. ಅಲ್ಲಿ ಕ್ಷೌರ ಸಮುದಾಯದವರು ದಲಿತರ ಕ್ಷೌರ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾಂಗ್ರೆಸ್ ನ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಎರಡೂ ಸಮುದಾಯಗಳೂ ಹಿಂದುಳಿದಿವೆ. ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಏಳ್ಗೆ ಸಾಧ್ಯ ಎನ್ನುವುದನ್ನು ತಿಳಿ ಹೇಳುವ ಪ್ರಯತ್ನ ಆ ಕಾರ್ಯಕ್ರಮ. ಇಂತಹ ಕಾರ್ಯ ಅಲ್ಲಲ್ಲಿ, ಆಗಾಗ ನಡೆಯುತ್ತಿರಬೇಕು.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boe

ಜೀವನದಿಗಳ ಸಾವಿನ ಕಥನ – 8

ಡಾ.ಎನ್.ಜಗದೀಶ್ ಕೊಪ್ಪ

ಅಭಿವೃದ್ಧಿ ಮತ್ತು ಆಧುನಿಕತೆ ಮನುಷ್ಯನನ್ನು ನೆಲದ ಸಂಸ್ಕೃತಿಯಿಂದ ದೂರ ಮಾಡಿದ್ದು ಮಾತ್ರವಲ್ಲದೆ, ಪ್ರಕೃತಿಯ ಕೊಡುಗೆಗಳಾದ ನೆಲ- ಜಲ, ಗಾಳಿ, ಗಿಡ-ಮರ ಇವೆಲ್ಲವೂ ತನ್ನ ಉಪಭೋಗಕ್ಕಾಗಿ ಇರುವ ಪುಕ್ಕಟೆ ಸವಲತ್ತುಗಳು ಎಂಬ ಅಹಂ ಅನ್ನು ಅವನೆದೆಗೆ ಕಸಿ ಮಾಡಿಬಿಟ್ಟವು. ಹೀಗಾಗಿ 21 ನೇ ಶತಮಾನದ ನಾಗರಿಕರಿಗೆ ಕಾಡು, ಬೆಟ್ಟ, ಗುಡ್ಡ, ಕಣಿವೆ, ಕಂದರಗಳಲ್ಲಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ನಿಸರ್ಗದ ಮಕ್ಕಳಾದ ಆದಿವಾಸಿಗಳೆಂದರೆ ತಾತ್ಸಾರ.

ಇವತ್ತಿನ ಮೂಲ ಮಂತ್ರವಾಗಿರುವ ಅಭಿವೃದ್ಧಿಯ ನಾಗಾಲೋಟಕ್ಕೆ ಸಿಕ್ಕಿ ತತ್ತರಿಸಿದವರೇ ಈ ಮಣ್ಣಿನ ಮಕ್ಕಳು. ಜಗತ್ತಿನೆಲ್ಲೆಡೆ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಚರಿತ್ರೆಯಲ್ಲಿ ಈ ಮೂಕ ಮಕ್ಕಳ ಅರಣ್ಯ ರೋದನವಿದೆ, ರಕ್ತ ಸಿಕ್ತ ಅಧ್ಯಾಯದ ಭಾಗಗಳಿವೆ.

ಭಾರತ ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಈವರೆಗೆ ಅಣೆಕಟ್ಟು ಯೋಜನೆಗಳಿಂದ ನಿರ್ವಸತಿಗರಾದವರಲ್ಲಿ ಶೇ.40 ರಷ್ಟು ಆದಿವಾಸಿ ಜನರಿದ್ದಾರೆ. ನಾವು ಅರಿಯಬೇಕಾದ ಸತ್ಯವೇನೆಂದರೆ, ಭಾರತದ ಜನಸಂಖ್ಯೆಯ ಶೇ.6 ರಷ್ಟು ಮಂದಿ ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳಿದ್ದಾರೆ. ಇಂದಿನ ಬಹುತೇಕ ಅಭಿವೃದ್ಧಿ ಯೋಜನೆಗೆ ಬಲಿಪಶುಗಳಾಗುತ್ತಿರುವವರಲ್ಲಿ ಈ ನತದೃಷ್ಟರು ಮುಂಚೂಣಿಯಲ್ಲಿದ್ದಾರೆ. ಇಂತಹ ದುರಂತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಪಿಲಿಫೈನ್ಸ್ ದೇಶದಲ್ಲಿರುವ 47 ಲಕ್ಷ ಆದಿವಾಸಿಗಳಲ್ಲಿ 58 ಸಾವಿರ ಮಂದಿಯನ್ನು ಹಾಗೂ ವಿಯೆಟ್ನಾಂನಲ್ಲಿ 1 ಲಕ್ಷದ 22 ಸಾವಿರ ಮಂದಿಯನ್ನು ಅಣೆಕಟ್ಟು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾಗಿದೆ.

ನಾಗರೀಕತೆಯ ಸೋಂಕಿಲ್ಲದೆ, ಆಧುನಿಕ ಬದುಕಿನ ಕ್ರಮಗಳಿಗಿಂತ ವಿಭಿನ್ನವಾಗಿ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಈ ಜನತೆ ತಮ್ಮ ಮೂಲ ನೆಲೆಗಳಿಂದ ಪಲ್ಲಟಗೊಂಡ ನಂತರ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಆಧುನಿಕ ಬದುಕಿನ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರಗಳಿಗೆ ಹೊಂದಿಕೊಳ್ಳಲಾಗದ ಬುಡಕಟ್ಟುಗಳ ಸಂತತಿ ನಶಿಸಿ ಹೋಗುತ್ತಿದೆ. ಅನೇಕ ಸರಕಾರಗಳು ಇವರಿಗೆ ಮನೆ, ಕೃಷಿಭೂಮಿ ಮುಂತಾದ ಸವಲತ್ತುಗಳನ್ನು ನೀಡಿದ್ದರೂ ತಾವು ಹಿಂದೆ ವಾಸಿಸುತ್ತಿದ್ದ ಭೂಮಿಯ ಬಗ್ಗೆ, ಅಲ್ಲಿನ ಗಿಡ-ಮರಗಳ ಬಗೆಗಿನ ವಿಚಿತ್ರ ಆಕರ್ಷಣೆಯ ಜೊತೆಗೆ ಪ್ರತಿಯೊಂದಕ್ಕೂ ದೈವಿಕ ಶಕ್ತಿ ಇದೆ ಎಂದು ನಂಬಿ ಪೂಜಿಸಿಕೊಂಡು ಬಂದಿದ್ದ ಪದ್ಧತಿ ಇವುಗಳಿಂದ ವಂಚಿತರಾದದ್ದೇ ಬುಡಕಟ್ಟು ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ಮಾನಸಿಕ ಒತ್ತಡ ಮತ್ತು ರೋಗ, ಅನೇಕ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿರುವ ಈ ಜನತೆ ನಿಸರ್ಗದಲ್ಲಿ ದೊರೆಯುತ್ತಿದ್ದ ಗಿಡ ಮೂಲಿಕೆಗಳಿಂದ ವಂಚಿತರಾಗಿ ಸಾವಿಗೆ ಶರಣಾಗುತ್ತಿದ್ದಾರೆ.

ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಬ್ರೆಜಿಲ್ ದೇಶದ ಮೂಲ ನಿವಾಸಿಗಳ ಅವಸಾನದ ಕಥನ.

Compilation of pictures of Native Brazilians from the tribes Assurini, Tapirajé, Kaiapó, Kapirapé, Rikbaktsa and Bororo-Boeದಕ್ಷಿಣ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್ ಇಂದಿಗೂ ಮೂಲ ನಿವಾಸಿಗಳ ಸಂಸ್ಕೃತಿಯಿಂದ ಪ್ರೇರಿತವಾದ ನಾಡು. ಅಲ್ಲಿನ ಜನತೆಯ ನಡೆ-ನುಡಿ, ಆಹಾರ, ಉಡುಪು ಎಲ್ಲವುಗಳಲ್ಲಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಆಚರಣೆಗಳು ಮಿಳಿತಗೊಂಡಿವೆ. ಕಳೆದ 40 ವರ್ಷಗಳ ಅವಧಿಯಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟುಗಳ ಫಲವಾಗಿ ಉದ್ಭವಿಸಿದ ಸಾಮಾಜಿಕ ಕ್ಷೊಭೆಯೊಂದು ಅಲ್ಲಿನ ಸರಕಾರಕ್ಕೆ ಸವಾಲಾಗಿದೆ.

ಯೂರೋಪಿಯನ್ನರ ಆಕ್ರಮಣ ಹಾಗೂ ವಸಾಹತುಶಾಹಿಯ ದಬ್ಬಾಳಿಕೆ ಇವುಗಳಿಂದ ಪಾರಾಗಿ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷ ಬದುಕಿದ್ದ ವೈಮಿರಿ-ಅಟ್ರೋರಿ ಬುಡಕಟ್ಟು ಜನಾಂಗ ಜಲಾಶಯ ಮತ್ತು ಅಣೆಕಟ್ಟುಗಳಿಂದಾಗಿ ಅತಂತ್ರವಾಗಿದೆ. 1905 ರಲ್ಲಿ 6 ಸಾವಿರದಷ್ಟಿದ್ದ ವೈಮಿರಿ ಮತ್ತು ಅಟ್ರೋರಿ ಜನಾಂಗದ ಜನಸಂಖ್ಯೆ 1985 ರ ವೇಳೆಗೆ ಕೇವಲ 374 ಕ್ಕೆ ಇಳಿದಿತ್ತು. ಈ ಜನಾಂಗವನ್ನು ಉಳಿಸಲು ಬ್ರಜಿಲ್ ಸರಕಾರ ಕಾಡಿನಲ್ಲಿ ಅವರ ಬದುಕಿಗೆ ಪೂರಕವಾಗುವಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಪ್ರತಿಫಲ ಮಾತ್ರ ಶೂನ್ಯವಾಗಿದೆ. ನದಿಗಳಲ್ಲಿ ದೊರೆಯುತ್ತಿದ್ದ ಮೀನು, ಆಮೆ ಮತ್ತು ಅವುಗಳ ಮೊಟ್ಟೆ ಈ ಜನಾಂಗದ ಪ್ರಮುಖ ಆಹಾರವಾಗಿತ್ತು. ಈಗ ಬದುಕುಳಿದವರ ಸಂಖ್ಯೆ ಬರಿ 97 ಮಾತ್ರ.

ಇದಕ್ಕಿಂತ ಭಿನ್ನವಾದ ಕತೆ ಬಾಂಗ್ಲಾ ದೇಶದ ಚಕ್ಮಾ ಬುಡಕಟ್ಟು ಜನಾಂಗದ್ದು. ಈ ಜನರ ಸಮಸ್ಯೆ ಕೇವಲ ಬಾಂಗ್ಲಾಕ್ಕೆ ಸೀಮಿತವಾಗಿರದೆ ಭಾರತಕ್ಕೂ ಸಮಸ್ಯೆಯಾಗಿದೆ. ಬಾಂಗ್ಲಾದ ಆಗ್ನೇಯ ಪ್ರಾಂತ್ಯದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಹರಿಯುತ್ತಿರುವ ನದಿಯೊಂದಕ್ಕೆ ಅಮೆರಿಕಾದ ನೆರವಿನೊಂದಿಗೆ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಿದ ಕಪ್ಟಾಯ್ ಅಣೆಕಟ್ಟಿನಿಂದಾಗಿ 1 ಲಕ್ಷ ಚಕ್ಮಾ ಬುಡಕಟ್ಟು ಜನಾಂಗ ನೆಲೆ ಕಳೆದುಕೊಂಡಿತು. ಸರಕಾರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಎಡವಿದ ಪರಿಣಾಮವಾಗಿ ನಗರಕ್ಕೆ ವಲಸೆ ಬಂದ, ಮೂಲತಃ ಬೌದ್ಧ ಧರ್ಮವನ್ನು ಆಚರಿಸಿಕೊಂಡು ಬಂದಿದ್ದ ಚಕ್ಮಾ ಜನಾಂಗಕ್ಕೂ ಮತ್ತು ಸ್ಥಳೀಯ ಮುಸ್ಲಿಮರಿಗೂ ಘರ್ಷಣೆ ಏರ್ಪಟ್ಟು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಚಕ್ಮಾ ನಿವಾಸಿಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದು ಇವರನ್ನು ವಾಪಸ್ ಕಳಿಸಲಾಗದೆ ಇತ್ತ ಪುನರ್ವಸತಿಯನ್ನು ಕಲ್ಪಿಸಲಾಗದ ಸ್ಥಿತಿಯನ್ನು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಎರಡು ಸರಕಾರಗಳೂ ಎದುರಿಸುತ್ತಿವೆ. ಬಾಂಗ್ಲಾ ಮತ್ತು ಬ್ರೆಜಿಲ್‌ನ ಬುಡಕಟ್ಟು ಜನಾಂಗದ ಕತೆಗಿಂತ ಬೇರೆಯದೇ ಆದ ನೋವಿನ ಕತೆ ಅಮೆರಿಕಾದ ಇತಿಹಾಸದಲ್ಲಿ ದಾಖಲಾಗಿದೆ.

ನಗರದ ಜನತೆಗೆ ಕುಡಿಯುವ ನೀರಿಗಾಗಿ ಅಮೆರಿಕಾದ ಉತ್ತರ ಡಕೋಟ ಪ್ರದೇಶದಲ್ಲಿ ನಿರ್ಮಿಸಿದ ಗ್ಯಾರಿಸನ್ ಅಣೆಕಟ್ಟಿನಿಂದಾಗಿ ಅಮೆರಿಕನ್ ಮೂಲನಿವಾಸಿಗಳಾದ ಮಂಡಾನ್ಸ್, ಅರಿಕಾಸ್, ಹಿಡಸ್ಟಾಸ್ ಜನಾಂಗಗಳನ್ನು ಅಮೆರಿಕಾ ಸರಕಾರ ಅಪೋಷನ ತೆಗೆದುಕೊಂಡಿದೆ.

ಜಲಾಶಯ ನಿರ್ಮಾಣವಾದ ನದಿ ಪಾತ್ರದಲ್ಲಿ ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆಯನ್ನು ನಂಬಿ ಬದುಕಿದ್ದ ಈ ಜನಾಂಗ ತನ್ನ ಅಸಹಾಯಕ ಸ್ಥಿತಿಯಲ್ಲಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ವಾಸಿಸಲು ಅನುಮತಿ ಕೇಳಿತು. ಜೊತೆಗೆ ಹಿನ್ನೀರಿನಲ್ಲಿ ಮುಳುಗುವ ಮರಗಳನ್ನು ಕಡಿದು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಪ್ರಾರ್ಥಿಸಿಕೊಂಡಿತು. ಎಲ್ಲಾ ಬೇಡಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಅಮೆರಿಕನ್ ಸರಕಾರ ಬುಡಕಟ್ಟು ಜನಾಂಗದ ಪ್ರತಿನಿಧಿಯಿಂದ ಬಲವಂತವಾಗಿ ಸಹಿ ಪಡೆದು ಅಲ್ಲಿನ ನಿವಾಸಿಗಳನ್ನು, ಜಾನುವಾರುಗಳನ್ನು ಹೊರದಬ್ಬಿತು.

1948 ರಲ್ಲಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ಕಛೇರಿಯಲ್ಲಿ ಅಂದಿನ ಆಂತರಿಕ ಆಡಳಿತ ಕಾರ್ಯದರ್ಶಿ ಕ್ಯಾಪ್‌ ಕೃಗ್ ಎದುರು ತಮ್ಮೆಲ್ಲ ವಸತಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾರ್ವಭೌಮ ಹಕ್ಕು ಸರಕಾರಕ್ಕಿದೆ ಎಂದು ಬುಡಕಟ್ಟು ಜನಾಂಗದ ನಾಯಕ ಜಾರ್ಜ್ ಗಿಲ್ಲೆಟ್ ಸಹಿ ಮಾಡಿದ ಸನ್ನಿವೇಶವನ್ನು ರೆಸಿನಾರ್ ಎಂಬ ಲೇಖಕ ತನ್ನ “ದಿ ಅಮೆರಿಕನ್ ವೆಸ್ಟ್ ಅಂಡ್ ಇಟ್ಸ್ ಡಿಸಪ್ಪಿಯರಿಂಗ್ ವಾಟರ್” ಎಂಬ ಕೃತಿಯಲ್ಲಿ ಈ ರೀತಿ ಬಣ್ಣಿಸಿದ್ದಾನೆ. “ಕಾರ್ಯದರ್ಶಿ ಕೃಗ್ ಎದುರು ತಲೆ ಬಗ್ಗಿಸಿ ನಿಂತಿದ್ದ ದೃಢವಾದ ಮೈಕಟ್ಟಿನ ಬುಡಕಟ್ಟು ಜನಾಂಗದ ನಾಯಕ ಒಪ್ಪಂದ ಪತ್ರಕ್ಕೆ ಭಾರವಾದ ಹೃದಯದಿಂದ ಸಹಿ ಮಾಡಿದನು. ಸಹಿಗೆ ಮುನ್ನ ಇಂದಿನಿಂದ ನಮ್ಮ ಜನಾಂಗದ ಭವಿಷ್ಯಕ್ಕೆ ಬೆಳಕೆಂಬುದು ಕನಸಿನ ಮಾತು ಎಂದು ನೊಂದು ನುಡಿದನು. ಸಹಿ ಮಾಡಬೇಕಾದ ಮೇಜಿನ ಮೇಲೆ ಡಜನ್‌ ಗಟ್ಟಲೆ ಪೆನ್‌ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ತನ್ನ ಎಡಗೈ ಹಸ್ತದಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ-ಬಿಕ್ಕಿ ಅಳುತ್ತಾ ಬಲಗೈನಲ್ಲಿ ಪತ್ರಕ್ಕೆ ಸಹಿ ಮಾಡಿದನು”.

ಮೊಂಟಾನ್ ವಿಶ್ವವಿದ್ಯಾಲಯದ ಅಮೆರಿಕನ್ ಮೂಲ ನಿವಾಸಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ಯಾಟ್ರಿಕ್ ಮೋರಿಸ್, ಅಮೆರಿಕನ್ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಉತ್ತರ ಡಕೋಟ ಪ್ರಾಂತ್ಯದಲ್ಲಿ ಹರಿಯುವ ಮಿಸ್ಸೊರಿ ನದಿ ಶೇ.70 ರಷ್ಟು ಮೂಲನಿವಾಸಿಗಳಿಗೆ ಮೀನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮೂಲಕ ಉದ್ಯೋಗ ಒದಗಿಸಿತ್ತು ಎಂದಿದ್ದಾರೆ.

ಕೊಲಂಬಿಯಾ ಪ್ರಾಂತ್ಯದಲ್ಲಿ ಅಮೆರಿಕನ್ನರು ಸಾಲ್ಮನ್ ಜಾತಿಯ ಮೀನುಗಳ ಸಂತತಿ ನಾಶದ ಪಾಪಕ್ಕೂ ಹೊಣೆಯಾಗಿದ್ದಾರೆ. ಶಿಲ್ಲಿನ ನದಿಯೊಂದಕ್ಕೆ ಕಟ್ಟಲಾದ ಗ್ರ್ಯಾಂಡ್ ಕೌಲಿ ಎಂಬ ಅಣೆಕಟ್ಟಿನಿಂದಾಗಿ ಮೀನಿನ ಸಂತತಿ ನಶಿಸಿಹೋಯಿತು.

1940 ರ ಜೂನ್ 17 ರಂದು ಪ್ರಥಮ ಬಾರಿಗೆ ಅಣೆಕಟ್ಟಿನಿಂದ ನೀರು ಹರಿಸಿದಾಗ, ತಾವು ಹಿಂದೆ ಮೀನಿನ ಶಿಕಾರಿ ಮಾಡುತ್ತಿದ್ದ ಕೆಟಲ್ ಜಲಪಾತದ ಬಳಿ ನೆಲದ ಮೂಲ ನಿವಾಸಿಗಳು ಕಳೆದುಹೋದ ತಮ್ಮ ಬದುಕನ್ನು ನೆನೆಯುತ್ತಾ ನದಿಗೆ ಅಶ್ರುಧಾರೆಯನ್ನು ಅರ್ಪಿಸಿದರು.

ಇದು ಬದುಕಿನ ವ್ಯಂಗ್ಯವೋ ಅಥವಾ ದುರಂತವೊ ನೀವೇ ನಿರ್ಧರಿಸಿ. 1951 ರಲ್ಲಿ ಅಮೆರಿಕಾ ಸರಕಾರ ಮೂಲನಿವಾಸಿಗಳಿಗೆ ಪರಿಹಾರವಾಗಿ ದಾಖಲೆಯ 5 ಕೋಟಿ 40 ಲಕ್ಷ ಡಾಲರ್ ಹಣ ಹಾಗೂ ವಾರ್ಷಿಕ ಪರಿಹಾರವಾಗಿ 1.5 ಕೋಟಿ ಡಾಲರ್ ನೆರವು ಘೋಷಿಸಿತ್ತು. ನೋವಿನ ಸಂಗತಿಯೆಂದರೆ ಈ ಪರಿಹಾರವನ್ನು ಪಡೆಯಲು ಬುಡಕಟ್ಟು ಜನಾಂಗದ ಒಂದೇ ಒಂದು ಜೀವ ಕೂಡ ಉಳಿದಿರಲಿಲ್ಲ.

(ಚಿತ್ರಕೃಪೆ: ವಿಕಿಪೀಡಿಯ)

(ಮುಂದುವರಿಯುವುದು)

ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ…

ಸ್ನೇಹಿತರೆ,

ಕರ್ನಾಟಕದ ಮುಖ್ಯವಾಹಿನಿ ಮಾಧ್ಯಮದಲ್ಲಿ ಅಸಹನೀಯವಾದ ವಾತಾವರಣ ಸೃಷ್ಟಿಯಾಗಿರುವುದು ಈ ರಂಗದಲ್ಲಿರುವವರಿಗೆ ಮತ್ತು ಅದನ್ನು ಗಮನಿಸುತ್ತಿರುವವರಿಗೆ ತಿಳಿದಿರುವ ವಿಚಾರವಷ್ಟೆ. ಇಂತಹ ಪರಿಸ್ಥಿತಿಯಲ್ಲಿ ಈ ರಂಗದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಮತ್ತು ಹಿರಿಯ ಪತ್ರಕರ್ತರು ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸುವ ಮೂಲಕ ಆ ಬಗೆಗಿನ ವಿಚಾರವನ್ನು ಚರ್ಚೆಗೊಡ್ಡೋಣ ಎಂದು ಈ ಪತ್ರ ಬರೆಯುತ್ತಿದ್ದೇನೆ.

byraghavendra-affidavit

ನಾನು ಮೂರ್ನಾಲ್ಕು ದಿನಗಳ ಹಿಂದೆ “Third-rate frauds in politics” ಎಂಬ ಈ ಲೇಖನ ಬರೆಯುವ ಸಂದರ್ಭದಲ್ಲಿ ಅಲಂ ಪಾಷ ಅವರನ್ನು ಕೇಳಿ ಖಚಿತಪಡಿಸಿಕೊಂಡೇ ಒಂದು ವಿಚಾರ ಬರೆದಿದ್ದೆ. ಅದರಲ್ಲಿ ಸಚಿವ ನಿರಾಣಿ ಮೀಟಿಂಗ್ ಒಂದರಲ್ಲಿ ಅವರ ಮೇಲೆ ಈಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಪಾಷ ಅವರಿಗೆ, “ನಾನು ಸಮಯ ಚಾನೆಲ್ಲಿನ ಮಾಲಿಕ. ನಿನ್ನ ಬಗ್ಗೆ ಅಲ್ಲಿ ಕವರ್ ಮಾಡಿಸಬಲ್ಲೆ. ನಿನ್ನ ಹಗರಣಗಳನ್ನೂ ಬಯಲಿಗೆ ಎಳೆಯಬಲ್ಲೆ,” ಎಂದು ಎಚ್ಚರಿಕೆ ಕೊಟ್ಟಿದ್ದರು. ಪಾಷಾ ಅವರಿಂದ ಈ ಮಾತನ್ನು ನಾನು ಕೋಟ್ ಮಾಡಬಹುದು ಎಂದು ಒಪ್ಪಿಗೆ ಪಡೆದುಕೊಂಡೇ ಅಲ್ಲಿ ಪ್ರಸ್ತಾಪಿಸಿದ್ದೆ.

ನೆನ್ನೆ ನಾನು ಬೆಳಗ್ಗೆ ಏಳಕ್ಕೆ ಬೆಂಗಳೂರಿನಿಂದ ಹಿರಿಯೂರಿಗೆ ಹೋಗುವ ಕೆಲಸ ಇತ್ತು. ಬಂದಿದ್ದು ರಾತ್ರಿ. ಬಂದ ಮೇಲೆ ಸ್ನೇಹಿತರಿಂದ ವಿಚಾರ ತಿಳಿಯಿತು. ಏನೆಂದರೆ, ಸಮಯ ಚಾನಲ್‌ನಲ್ಲಿ ನಿರಾಣಿ ಎಚ್ಚರ ಕೊಟ್ಟಿದ್ದಕ್ಕೆ ಪೂರಕವಾಗಿ ಅಲಂ ಪಾಷಾ ವಿರುದ್ಧ ಕಾರ್ಯಕ್ರಮ ಪ್ರಸಾರವಾಯಿತೆಂದು.

ಇಲ್ಲಿ ನಾನು ಪಾಷಾರವರ ಪರವಹಿಸಿಕೊಂಡು ಮಾತನಾಡಲಾರೆ. ಪಾಷಾ ಸಹ ಈ ಹಿಂದೆ ಭ್ರಷ್ಟ ಮಾರ್ಗ ಹಿಡಿದಿದ್ದರೆ ಅವರ ವಿಚಾರಣೆಯಾಗಿ ಶಿಕ್ಷೆಯಾಗಲಿ. ಅದಕ್ಕೆ ಯಾವ ರೀತಿಯಿಂದಲೂ ನನ್ನ ಅಕ್ಷೇಪಣೆ ಇಲ್ಲ.

ಆದರೆ, ಈ ಒಂದು ಸಂದರ್ಭದಲ್ಲಿ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಏನು ಮಾಡುತ್ತಿವೆ, ಎನ್ನುವುದು ನನ್ನ ಎದುರಿರುವ ಪ್ರಶ್ನೆ.

ಸಚಿವ ನಿರಾಣಿ ಹೀಗೆ ಮೀಟಿಂಗ್ ಒಂದರಲ್ಲಿ ಹೇಳಿದ್ದು, ಅದಾದ ಕೆಲ ದಿನಗಳಲ್ಲಿ ಪಾಷಾ ವಿರುದ್ಧ ಕಾರ್ಯಕ್ರಮ ಬರುವುದು, ಇಲ್ಲಿರುವ ವಿವಿಧ ಆಯಾಮಗಳೇನು, ಕೋನಗಳೇನು, ಸಮಯ ಚಾನಲ್‌ನಲ್ಲಿ ಮಾತ್ರ ಯಾಕೆ ಈ ಕಾರ್ಯಕ್ರಮ ಬರುತ್ತದೆ, ಬೇರೆಯದರಲ್ಲಿ ಯಾಕೆ ಬರುವುದಿಲ್ಲ, ಅಲ್ಲಿ ಬಹುಶಃ ಅಧಿಕೃತವಾಗಿ ಯಾವುದೇ ಮಾಲಿಕತ್ವ ಹೊಂದಿರದ ನಿರಾಣಿ ಹೇಗೆ ಆ ಚಾನಲ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,.. ಇವೆಲ್ಲವನ್ನು ಯಾಕೆ ನಮ್ಮ ರಾಜ್ಯಮಟ್ಟದ ದಿನಪತ್ರಿಕೆಗಳು ಕೈಗೆತ್ತಿಕೊಳ್ಳುವುದಿಲ್ಲ? ಒಂದು ಮಾಧ್ಯಮ ಸಂಸ್ಥೆ ಇನ್ನೊಂದು ಮಾಧ್ಯಮ ಸಂಸ್ಥೆಯನ್ನು ವಿಮರ್ಶಿಸಬಾರದು ಎನ್ನುವುದು ಅದೆಂತಹ ಘನ ಮೌಲ್ಯ? ನಮ್ಮ ಹುಳುಕುಗಳನ್ನು ಅವರು ಎತ್ತುವುದಿಲ್ಲ, ಅವರ ಹುಳುಕುಗಳನ್ನು ನಾವು ಎತ್ತುವುದಿಲ್ಲ ಎನ್ನುವ ಅಲಿಖಿತ ನಿಯಮ ನಿಮಗೆ ಅದೆಂತಹ ನೈತಿಕತೆ ಕೊಡುತ್ತದೆ?

ನೀವು ಅದನ್ನು ಟ್ಯಾಬ್ಲಾಯ್ಡ್ ಪತ್ರಿಕೆಗಳ ರೀತಿಯೇ ಬರೆಯಬೇಕಿಲ್ಲ. ಗಂಭೀರವಾಗಿ, ಪ್ರಬುದ್ಧವಾಗಿಯೇ ಬರೆಯಬಹುದಲ್ಲ? ಯಾಕೀ ವೃತ್ತಿಮೋಸ?

ಇಲ್ಲಿ ಮಾಧ್ಯಮ ಸಂಸ್ಥೆಗಳಷ್ಟೇ ಅಲ್ಲ, ಪತ್ರಕರ್ತರು, ಪ್ರೆಸ್‌ಕ್ಲಬ್, ಪತ್ರಕರ್ತರ ಸಂಘಗಳು, ಇವೆಲ್ಲರೂ/ವೂ ಒಂದು ರೀತಿಯ ಬೇಜವಾಬ್ದಾರಿತನದಲ್ಲಿ ಇಲ್ಲವೆ ಪುಕ್ಕಲುತನದಲ್ಲಿ ವರ್ತಿಸುತ್ತಿದ್ದಾರೆ. ವಿಶೇಷವಾಗಿ, ತಮ್ಮದೇ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಅನ್ಯಾಯವಾದಾಗ ಅವರಿಗೆ ಬೆಂಬಲ ಕೊಡುವುದು, ಅವರ ಪರ ಹೋರಾಡುವುದು, ಅಂತಹ ವ್ಯವಸ್ಥಿತ ವ್ಯವಸ್ಥೆ/ಸಂಸ್ಥೆಯೊಂದನ್ನು ಕಟ್ಟಿಕೊಳ್ಳುವುದು ಇವರ ಕೈಯ್ಯಲ್ಲಿ ಸಾಧ್ಯವೇ ಆಗಿಲ್ಲ. ಜೊತೆಗೆ ಮೌಲ್ಯ, ಆದರ್ಶ, ನಿಷ್ಠುರತೆ ಇರುವಂತಹವರು ಅಲ್ಲಿ ಮುಖ್ಯಸ್ಥಾನಗಳಲ್ಲಿ ಇದ್ದಂತೆಯೂ ಕಾಣಿಸುತ್ತಿಲ್ಲ. ಅಧಿಕಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕಾಗಿ ಹಪಹಪಿಸುವ ಜನರೆ ಅಲ್ಲಿಯೂ ತುಂಬಿದ್ದಾರೆ ಎನಿಸುತ್ತದೆ. ಇದನ್ನು ಆಪಾದನೆ ಎಂದುಕೊಂಡರೂ ಸರಿಯೇ, ಕನ್ನಡದ/ಕರ್ನಾಟಕದ ಮಿತ್ರರು ನನ್ನ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಆಶಿಸುತ್ತೇನೆ.

ಮೇಲಿನ ಮಾತಿಗೆ ಫೂರಕವಾಗಿ ನಾನು ಇಲ್ಲಿ ಪುದುವೆಟ್ಟುರವರ ಸಂಗತಿ ಪ್ರಸ್ತಾಪಿಸುತ್ತೇನೆ. ನಾವು ವರ್ತಮಾನದಲ್ಲಿ ದಾಖಲೆ ಸಮೇತ ಪ್ರಕಟಿಸಿದ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ಲೇಖನದಲ್ಲಿನ ವಿಚಾರವನ್ನು ತಿಂಗಳ ಹಿಂದೆಯೇ ಸುರೇಶ್ ಪುದುವೆಟ್ಟು ಎನ್ನುವ ಪತ್ರಕರ್ತರು ಉದಯವಾಣಿಯಲ್ಲಿ ಬರೆದಿದ್ದರು. ಆ ಸಮಯದಲ್ಲಿ ಸುರೇಶ್ ಪುದುವೆಟ್ಟುರವರ ಪತ್ನಿ ಮಾನಸ ಪುದುವೆಟ್ಟು ಸಮಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಲೇಖನ ಪ್ರಕಟವಾದ ತಕ್ಷಣ ಮಾನಸರವರಿಗೆ ಸಮಯ ಟಿವಿಯಲ್ಲಿ “ಹೀಗೆಲ್ಲ ಮಾಡಬಾರದು,” ಎನ್ನುವ ಎಚ್ಚರಿಕೆ ಕೊಟ್ಟು ದೂರದ ಗುಲ್ಬರ್ಗಕ್ಕೆ ವರ್ಗ ಮಾಡಿದರು. ಆ ಶಿಕ್ಷೆ ಭರಿಸಲಾಗದೆ ಮಾನಸ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಇಲ್ಲಿ ಮತ್ತೊಮ್ಮೆ ಗಮನಿಸಬೇಕಾದ ಅಂಶ, ಮಾನಸರವರ ಗಂಡ ಬೇರೆ ಪತ್ರಿಕೆಯಲ್ಲಿ ನಿರಾಣಿ ವಿರುದ್ಧ ಬರೆದಿದ್ದಕ್ಕೆ ಇಲ್ಲಿ ಇವರಿಗೆ ಶಿಕ್ಷೆ. ಇದು ಯಾವ ನಿಯಮ, ನೈತಿಕತೆ, ವೃತ್ತಿಮೌಲ್ಯ? ಈ ವಿಷಯವನ್ನು ನಾನು ಊಹಾಪೋಹಗಳ ಆಧಾರದ ಮೇಲೆ ಬರೆಯಲಿಲ್ಲ. ಸುರೇಶ್ ಪುದುವೆಟ್ಟುರವರಿಗೆ ಪೋನ್ ಮಾಡಿ ವಿಷಯ ಖಚಿತಪಡಿಸಿಕೊಂಡೇ ಬರೆದೆ. ಈ ವಿಷಯವನ್ನು ಪತ್ರಕರ್ತರು ಯಾಕೆ ಕೈಗೆತ್ತಿಕೊಳ್ಳಲಿಲ್ಲ? ಇದೊಂದು ಸಹಿಸಬಾರದ ವಿದ್ಯಮಾನ ಎಂದು ಯಾಕೆ ಎಂದುಕೊಳ್ಳಲಿಲ್ಲ? ಇಲ್ಲಿರುವ ಎಲ್ಲರೂ ಕೇವಲ ಜೀವನೋಪಾಯಕ್ಕೆ ದುಡಿಯುತ್ತಿರುವ ಕೂಲಿಗಳೇ, ಅಥವ ಅವರಿಗೂ ಸ್ವತಂತ್ರ ಆಲೋಚನೆ ಮತ್ತು ತಮ್ಮ ವೃತ್ತಿಬಾಂಧವರಿಗೆ ಅನ್ಯಾಯವಾದಾಗ ಅವರ ಪರ ನಿಲ್ಲಬೇಕು ಎನ್ನುವ ನಿಷ್ಠೆ ಇದೆಯೆ?

ಮತ್ತು, ತಮ್ಮದೇ ರಂಗ ಅವ್ಯವಹಾರ ಮತ್ತು ಅನೀತಿಯುಕ್ತ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಅದನ್ನು ವಿಮರ್ಶಿಸಬಾರದು ಎನ್ನುವಷ್ಟು ಬೌದ್ಧಿಕ ದಿವಾಳಿತನ ಇಲ್ಲಿದೆಯೆ? Shameful.

ನಿಜಕ್ಕೂ ಇಲ್ಲಿ ಒಂದು ಹೊತ್ತಿನ ತುತ್ತಿಗೆ ಪರದಾಡುತ್ತಿರುವವರು ಮಾತ್ರವೇ ದುಡಿಯುತ್ತಿದ್ದಾರೆಯೆ? ನಿಮಗೆ ಅಷ್ಟು ಬಡತನವೆ ಅಥವ ಅದು ಇನ್ನೊಂದು ತರಹದ ದಾರಿದ್ತ್ರವೆ? ಏನದು?

ಇಲ್ಲಿ ಇನ್ನೊಂದು ವಿಷಯ. ನಾನು ಪತ್ರಕರ್ತ ಅಲ್ಲ. ಈಗಲೂ ನಾನು ಜೀವನೋಪಾಯಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೇ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ, ಇದನ್ನು ನಾನು ನನ್ನ ವೃತ್ತಿಬಾಂಧವರ ಪರ ಎತ್ತಬೇಕಿರುವ ವಿಷಯ ಎಂದು ಎತ್ತುತ್ತಿಲ್ಲ. ಇಲ್ಲಿ, ಪತ್ರಿಕಾರಂಗದಲ್ಲಿ, ಒಂದಷ್ಟು ಕೊಳೆತು ನಾರುತ್ತಿದೆ, ಅಸಮರ್ಥರು, ಅನರ್ಹರು ಈ ರಂಗದಲ್ಲೂ ಮುಂಚೂಣಿಗೆ ಬಂದಿದ್ದಾರೆ, ಮತ್ತು ಅವರಲ್ಲಿ ಅಂತಹ ಹೇಳಿಕೊಳ್ಳುವ ಮೌಲ್ಯಗಳಾಗಲಿ, ಅನ್ಯಾಯದ ವಿರುದ್ಧ ಹೋರಾಡಲೇಬೇಕೆಂಬ ಬದ್ಧತೆಯಾಗಲಿ, ಬಹಳಷ್ಟು ಜನರಿಗೆ ಇಲ್ಲ ಎಂದು ಪ್ರಸ್ತಾಪಿಸುವುದಕ್ಕೆ ಎತ್ತುತ್ತಿದ್ದೇನೆ. ನಮ್ಮ ಮಾಧ್ಯಮ ರಂಗವೇ ಭ್ರಷ್ಟವಾಗುತ್ತಿರುವಾಗ ಅದು ಸಮಾಜದಲ್ಲಿ ಸೃಷ್ಟಿಸುವ ಅಭಿಪ್ರಾಯಗಳಿಗೆ ಯಾವ ಮೌಲ್ಯಗಳಿರುತ್ತವೆ, ಮತ್ತು ಅದು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದೇ ನನ್ನ ಭಯ. ಇದನ್ನು ಒಬ್ಬ ಬಾಧ್ಯಸ್ಥ ಪ್ರಜೆಯಾಗಿ, ಸಮುದಾಯದ ಹಿತದೃಷ್ಟಿಯಿಂದ ಪ್ರಸ್ತಾಪಿಸುತ್ತಿದ್ದೇನೆ—ಇತರೆ ಸಮಾಜಸಂಬಂಧಿ ವಿಷಯಗಳ ಬಗ್ಗೆ ಬರೆಯುವಂತೆ. ಇದನ್ನು ಎತ್ತುವ ಮೂಲಕ ವ್ಯವಸ್ಥೆಯೂ ಸರಿಹೋಗುತ್ತ ಹೋಗಬಹುದು ಎನ್ನುವ ಆಸೆ.

ಈ ಲೇಖನವನ್ನು ಇನ್ನೂ ವಿಸ್ತಾರವಾಗಿ ಅಥವ ಇನ್ನೂ ಹೆಚ್ಚು ತರ್ಕಬದ್ಧವಾಗಿ ಬರೆಯಬೇಕಿತ್ತು. ಆದರೆ, ಮುಂದಿನ ನಾಲ್ಕೈದು ದಿನ ನಾನು ಊರಿನಲ್ಲಿ ಇರದೇ ಇರುವುದರಿಂದ ಮತ್ತು ಅಂತರ್ಜಾಲದಿಂದ ದೂರ ಇರುವುದರಿಂದ ಈ ವಿಷಯವನ್ನು ಕೂಡಲೆ ಪ್ರಸ್ತಾಪಿಸೋಣ ಎಂದು  ಬರೆದಿದ್ದೇನೆ. ಇತರೆ ಪತ್ರಕರ್ತ ಸ್ನೇಹಿತರು ಈ ವಿಷಯವನ್ನು ಇಟ್ಟುಕೊಂಡು ಚರ್ಚೆ ಮುಂದುವರೆಸುತ್ತಾರೆ ಎಂದು ಬಯಸುತ್ತೇನೆ.

ಬಯಸುತ್ತೇನೆ, ಅಷ್ಟೇ. ಅದು ಆಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಅದು ಉಳಿದಿಲ್ಲ. ಕ್ಷಮಿಸಿ.

ಆದರೂ…

ನಮಸ್ಕಾರ,
ರವಿ ಕೃಷ್ಣಾ ರೆಡ್ಡಿ

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ ಆಕೆಗೆ ಮದುವೆ ಮಾಡಲು ನಿರ್ಧರಿಸಿದರು.

ಆಕೆಯ ಪೋಷಕರು ಹಳ್ಳಿಯಲ್ಲಿದ್ದರೂ ನನಗೆ ಗೊತ್ತಿದ್ದರಿಂದ ನಾನು ಅವರಿಗೆ ಕಿರಿಯ ವಯಸ್ಸಿನಲ್ಲಿ ಮದುವೆ ಮಾಡದಂತೆ ಎಚ್ಚರಿಸಿದೆ. ಆದರೆ ಅವರು ನನ್ನ ಎಚ್ಚರಿಕೆಯನ್ನೂ ಧಿಕ್ಕರಿಸಿ ಆಕೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದರು.

ಕೆಲವು ದಿನಗಳ ನಂತರ ಆ ಹುಡುಗಿಯನ್ನು ನೋಡಲು ಹೊರಟೆ. ಹುಡುಗಿಯನ್ನು ಒಂದು ದೇವಸ್ಥಾನದಲ್ಲಿ ಇರಿಸಿದ್ದರು. ಕುಟುಂಬದ ಎಲ್ಲರ ಮುಖದಲ್ಲೂ ಒಂದು ಬಗೆಯ ಭಯವಿತ್ತು. ಆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಹುಡುಗಿ ತುಂಬಾ ಸುಸ್ತಾದಂತೆ ಕಂಡುಬಂದಳು. ಆಕೆಯ ಪೋಷಕರು, `ರಾತ್ರಿ ಆದರೆ ಸಾಕು. ಭಯಪಡುತ್ತಾಳೆ. ದೀಪ ಆರಿಸಿದರೆ ಕಿರುಚಾಡುತ್ತಾಳೆ. ಏನೇನೋ ವಿಚಿತ್ರವಾಗಿ ಆಡುತ್ತಿದ್ದಾಳೆ,’ ಎಂದರು.

ಆರೋಗ್ಯಪೂರ್ಣವಾಗಿ ನಳನಳಿಸುತ್ತಿದ್ದ ಹುಡುಗಿ ಹೀಗಾಗಿದ್ದು ನೋಡಿ ನನಗೆ ಬಹಳ ದುಃಖವಾಯಿತು.

ಆ ಹುಡುಗಿಯ ಗಂಡನನ್ನು ಮಾತನಾಡಿಸಿದೆ. “ಯಾಕಪ್ಪಾ ನಿನ್ನ ಹೆಂಡತಿ ಭಯಪಡುತ್ತಾಳಂತೆ. ಅವಳಿಗೇನಾದರೂ ಹೊಡೆಯೋದು, ಬಡಿಯೋದು ಮಾಡಿದೆಯೋ ಹೇಗೆ?” ಎಂದೆ.

ಅದಕ್ಕೆ ಆತ, “ಇಲ್ಲ ಸರ್, ಅವಳೆಂದರೆ ನನಗೆ ಇಷ್ಟ. ನನ್ನ, ಅವಳ ಮೊದಲ ರಾತ್ರಿಯಾದ ನಂತರ ಹೀಗೆ ಭಯಪಡಲು ಪ್ರಾರಂಭಿಸಿದ್ದಾಳೆ. ಮೊದ ಮೊದಲು ಸುಮ್ಮನಿದ್ದಳು. ನಂತರ ಹೆದರೋಕೆ ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ತಾಯಿ ಮನೆಗೆ ಕರೆದುಕೊಂಡು ಹೋದರು,” ಎಂದ.

ನನಗೆ ಸಮಸ್ಯೆ ಸ್ಪಷ್ಟವಾಯಿತು. ಇದು ಲೈಂಗಿಕತೆಯ ತಿಳಿವಳಿಕೆ ಇಲ್ಲದಿದ್ದರಿಂದ ಉಂಟಾದ ಸಮಸ್ಯೆ.

ಆ ಹುಡುಗಿಯನ್ನು ಸ್ತ್ರೀವೈದ್ಯರಲ್ಲಿಗೆ ಕರೆದೊಯ್ದು ಲೈಂಗಿಕತೆಯ ಪೂರ್ಣ ಮಾಹಿತಿಯನ್ನು ವೈದ್ಯರ ಮೂಲಕ ಕೊಟ್ಟ ನಂತರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಲೈಂಗಿಕತೆಯ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಪುರುಷರಿಗೂ, ಮಹಿಳೆಯರಿಗೂ ವಿವಾಹದ ನಂತರ ತಮ್ಮ ಜವಾಬ್ದಾರಿಗಳೇನು ಎಂಬ ತಿಳಿವಳಿಕೆ ಇಲ್ಲದಿದ್ದಲ್ಲಿ ಸಂಕಷ್ಟ ಖಂಡಿತ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಚಂದ್ರೇಗೌಡರಿಗೆ ಕೆಲವು ಪ್ರಶ್ನೆಗಳು

ಡಾ. ಎನ್. ಜಗದೀಶ್ ಕೊಪ್ಪ

ಇದು ನಮ್ಮ ಸಾಮಾಜಿಕ ಅಥವಾ ರಾಜಕೀಯ ಅದಃಪತನವೆಂದರೂ ತಪ್ಪಾಗಲಾರದು. ಸಂಸದ ಹಾಗೂ ಕರ್ನಾಟಕ ಕಂಡ ಹಿರಿಯ ಮುತ್ಸದ್ದಿ ರಾಜಕಾರಣಿ ನಿನ್ನೆ ಮಂಗಳವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿ ನಡೆಸಿ, ದೆಹಲಿಯ ತಿಲಕ್ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಜ ಇವರ ವಿರುದ್ಧ ದೂರು ದಾಖಾಲಾಗಿರುವುದರಿಂದ ರಾಜಿನಾಮೆ ಕೊಡಬೇಕೆಂದು ಅಪ್ಪಣೆ ಹೊರಡಿಸಿದ್ದಾರೆ. ಅವರ ಮಾತು ನಿಜ. ನೈತಿಕ ಪ್ರಜ್ಙೆ ಇರುವ ಯಾವುದೇ ರಾಜಕಾರಣಿ ರಾಜಿನಾಮೆ ನೀಡಬೇಕು.

ಮಾನ್ಯ ಚಂದ್ರೇಗೌಡರು ಇಂತಹ ರಾಜಾಜ್ಞೆ ನೀಡುವ ಮುನ್ನ ತಾವು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ, ಆರೋಪ ಹೊತ್ತು ಜೈಲು ಪಾಲಾದವರ ಎಷ್ಟು ಮಂದಿಯ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಅಥವಾ ಆರೋಪ ಹೊತ್ತವರ ಕೈಯಲ್ಲಿ ರಾಜಿನಾಮೆ ಕೊಡಿಸಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಈ ಸಂದರ್ಭದಲ್ಲಿ ಯಾವೊಬ್ಬ ಪತ್ರಕರ್ತ ಈ ಕುರಿತಂತೆ ಪ್ರಶ್ನಿಸಲಿಲ್ಲ. ಇದು ಈ ತಲೆಮಾರಿನ ಪತ್ರಕರ್ತರಿಗೆ ತಮ್ಮ ವೃತ್ತಿಯ ಬಗ್ಗೆ ಇರುವ ಅಜ್ಞಾನವೊ? ಅಥವಾ ಪ್ರಶ್ನೆ ಕೇಳಲು ಹಿಂಜರಿಕೆಯೋ? ನನಗೆ ಅರ್ಥವಾಗುತ್ತಿಲ್ಲ.

ತನ್ನ ಮೂರು ದಶಕಗಳ ರಾಜಕೀಯ ಜೀವನವನ್ನು ಕಾಂಗ್ರೆಸ್  ಪಕ್ಷದಲ್ಲಿ ಕಳೆದು ಶಾಸಕನಾಗಿ, ಸಂಸದನಾಗಿ, ವಿದಾನಸಭೆಯ ಒಳ್ಳೆಯ ಸ್ಪೀಕರ್ ಹೆಸರು ಮಾಡಿದ್ದ ಚಂದ್ರೇಗೌಡರು ರಾಜಕೀಯವಾಗಿ ಕಸದಬುಟ್ಟಿಗೆ ಸೇರಿದ ಸಂದರ್ಭದಲ್ಲಿ,, ಯಡಿಯೂರಪ್ಪ ಕರೆದು ಬೆಂಗಳೂರು ಉತ್ತರ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಸೀಟು ಕೊಟ್ಟು ಗೆಲ್ಲಿಸಿದ ಮಾತ್ರಕ್ಕೆ ಈ ರೀತಿಯ ಬೌದ್ಧಿಕ ದಿವಾಳಿತನಕ್ಕೆ ಓಳಗಾಗಬಾರದಿತ್ತು.

ಕಳೆದ ಹತ್ತು ವರ್ಷದ ಹಿಂದಿನ ಮಾತು ಇದು. ಮಂಡ್ಯ ಜಿಲ್ಲೆಯ ಸ್ವಾತಂತ್ರೈ ಹೋರಾಟಗಾರ ಹಾಗೂ ಜಿಲ್ಲೆ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಹೆಸರಿನಲ್ಲಿ (ಕ್ರೀಡಾಪಟು ವಿಕಾಸ್ ಗೌಡರ ಅಜ್ಜ) ನಾವು ಗೆಳೆಯರು 10 ಸಾವಿರ ರೂ. ಗಳ ಪ್ರಶಸ್ತಿ ಸ್ಥಾಪಿಸಿದೆವು, ಮೊದಲ ವರ್ಷ ಹಿರಿಯ ಪತ್ರಕರ್ತ ಜಯಶೀಲರಾವ್ ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ  ಇದೇ ಚಂದ್ರೇಗೌಡ ಆಡಿದ ಮಾತುಗಳು ಇವು : “ಇವತ್ತಿನ ರಾಜಕಾರಣಿಗಳು ಮುಖವಾಡತೊಟ್ಟಿಕೊಂಡು ಬದುಕುತಿದ್ದಾರೆ.”

ಇವತ್ತಿನ ಚಂದ್ರೇಗೌಡರು ಯಾವ ಮುಖವಾಡ ತೊಟ್ಟು ಬದುಕುತಿದ್ದಾರೆ?

ಇನ್ನು ನಮ್ಮ ಮಠಾದೀಶರು ಯಡಿಯೂರಪ್ಪನ ವಿತರಿಸಿದ ಪ್ರಸಾದ ತಿಂದು ಈ ರೀತಿ ಬೀದಿಗೆ ಬೀಳಬಾರದಿತ್ತು. ಇವರೆಲ್ಲಾ ಒಮ್ಮೆ ಅಲ್ಲಮಪ್ರಭುವಿನ ಈ ವಚನ ಓದಿಕೊಳ್ಳುವುದು ಒಳಿತು.

ಮಠವೇಕೊ, ಪರ್ವತವೇಕೊ
ಜನವೇಕೊ, ನಿರ್ಜವೇಕೊ
ಚಿತ್ತ ಸಮಾಧಾನವುಳ್ಳ ಶರಣಂಗೆ
ಮತ್ತೆ ಹೊರಗಣ ಚಿಂತೆ, ಧ್ಯಾನ ಮೌನ
ಜಪ ತಪವೇಕೊ ತನ್ನ ತಾನರಿದ ಶರಣಂಗೆ ಗುಹೇಶ್ವರಾ