Monthly Archives: October 2011

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು

-ಡಾ.ಎಚ್.ಎಸ್. ಅನುಪಮಾ
-ಕೆ.ಎಲ್. ಚಂದ್ರಶೇಖರ್ ಐಜೂರ್

1932 ಸೆಪ್ಟೆಂಬರ್ 24 ರಂದು ಹಿಂದೂ ಮುಖಂಡರು ಹಾಗೂ ಅಂಬೇಡ್ಕರ್ ಸೇರಿದಂತೆ ಶೋಷಿತ ವರ್ಗಗಳ ಮುಖಂಡರ ನಡುವೆ ಏರ್ಪಟ್ಟ ಪೂನಾ ಒಪ್ಪಂದ ಐತಿಹಾಸಿಕವೆಂದು ಪರಿಗಣಿಸಲ್ಪಟ್ಟಿದೆ. ಅದು ಐತಿಹಾಸಿಕವಾಗಿದ್ದು ಒಂದಲ್ಲ ಹಲವು ಕಾರಣಗಳಿಗೆ. ಹಿಂದೂಧರ್ಮದ ಅಸ್ಪೃಶ್ಯತೆ ಕಳಂಕವನ್ನು ತೊಡೆದುಹಾಕಲು ಮತ್ತು ಮೇಲ್ಜಾತಿ ಹಿಂದೂಗಳ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕೆಂದು 1932ರ ಸೆಪ್ಟೆಂಬರ್ 20 ರಂದು ಗಾಂಧಿ ಪೂನಾದ ಯರವಾಡಾ ಜೈಲಿನಲ್ಲಿ ಆಮರಣಾಂತ ಉಪವಾಸ ಶುರುಮಾಡಿದರು. ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಶೋಷಿತ ಸಮುದಾಯಗಳಿಗೆ ಹಿಂದೂಗಳಿಂದ ಪ್ರತ್ಯೇಕ ಮತದಾನ ವ್ಯವಸ್ಥೆ ನೀಡಿದ್ದನ್ನು ಅವರು ಒಪ್ಪಿರಲಿಲ್ಲ. ಅದರ ರದ್ದತಿಗೆ ಅಂಬೇಡ್ಕರ್ ಮತ್ತಿತರ ನಾಯಕರ ಮನವೊಲಿಸುವುದು ಉಪವಾಸದ ಹಿಂದಿನ ಮತ್ತೊಂದು ಉದ್ದೇಶವಾಗಿತ್ತು. ಕೊನೆಗೆ ಸೆಪ್ಟೆಂಬರ್ ೨೪ನೇ ತಾರೀಕು ಹಿಂದೂ ಮುಖಂಡರು ಮತ್ತು ಅಂಬೇಡ್ಕರ್ ಸಹವರ್ತಿಗಳ ನಡುವೆ ಒಪ್ಪಂದವೇರ್ಪಟ್ಟು ಪ್ರತ್ಯೇಕ ಮತದಾನ ವ್ಯವಸ್ಥೆಯ ಬದಲಾಗಿ ಶೋಷಿತ ಸಮುದಾಯಗಳಿಗೆ ಸ್ಥಾನ ಮೀಸಲು, ಮೀಸಲು ಕ್ಷೇತ್ರಗಳಲ್ಲಿ ಎರಡು ಹಂತದ ಚುನಾವಣೆ, ಕೆಲಕಾಲಾವಧಿಯ ನಂತರ ಪ್ರಾಥಮಿಕ ಚುನಾವಣೆ ರದ್ದತಿ, ಮೀಸಲು ಸ್ಥಾನಗಳ ಏರಿಕೆ ಮಾಡಲಾಯಿತು. ಗಾಂಧಿ ಉಪವಾಸ ಕೂತ ನಂತರ ಹಿಂದೂ ದೇವಾಲಯಗಳು ದಲಿತರಿಗೆ ಪ್ರವೇಶ ನೀಡಬೇಕೆಂಬ ಶೋಷಿತರ ಕೂಗಿಗೆ ಜೀವಬಂದು ದೇಶದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಿಸುವುದಿಲ್ಲವೆಂದು ಪಣತೊಟ್ಟ ಸಾರ್ವಜನಿಕ ಪ್ರಕಟಣೆಗಳು ಹೊರಬಿದ್ದವು. ದೇಶಾದ್ಯಂತ ಅಸ್ಪೃಶ್ಯತೆ ಪಾಪ ಎಂದು ಸವರ್ಣೀಯ ಹಿಂದೂಗಳೆಲ್ಲ ಭಾವಿಸಿ ಅದಿನ್ನು ಮಾಯವಾಗೇ ಬಿಟ್ಟಿತೇನೋ ಎಂಬಂತಹ ವಾತಾವರಣವು ಕೆಲಕಾಲ ಮೂಡಿತು.

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು. ಕಡತದ ಹೊಟ್ಟೆಯೊಳಗೆ ಅವಿತು ಕೂತಿದ್ದ ಕಾಗದದ ಮೇಲಿನ ಅಂಕಿಅಂಶಗಳು ರೋಚಕ ಕತೆಗಳನ್ನು ಹೇಳುತ್ತಿದ್ದರೆ, ವಾಸ್ತವ ಮಾತ್ರ ತನ್ನ ಎಂದಿನ ವಿಕೃತ ಮುಖವನ್ನೇ ಹೊದ್ದು ಕುಣಿಯುತ್ತಿತ್ತು. ಶೋಷಿತರಿಗೆ ದೇವಾಲಯ ಪ್ರವೇಶದ ಹೆಸರಿನಲ್ಲಿ ಹೆಸರೇ ಇಲ್ಲದೆ ಶಿಥಿಲಗೊಂಡ, ಕುಸಿದು ಬೀಳುತ್ತಿರುವ, ಯಾರೂ ಹೋಗದ ಪಾಳು ದೇವಾಲಯಗಳು ಮಹಾತ್ಮನಿಗೆ ಬೆಂಬಲ ತೋರಿಸುವ ನೆಪದಲ್ಲಿ ಸೇರಿಕೊಂಡಿದ್ದನ್ನು ಗುರುತಿಸಿದ ಅಂಬೇಡ್ಕರ್, ಅದರಲ್ಲಿ ಗಾಂಧೀಜಿಯ ಕ್ರಿಯಾಕ್ಷೇತ್ರವಾದ ಗುಜರಾತಿನ ಒಂದೇ ಒಂದು ದೇವಾಲಯವೂ ಇಲ್ಲವೆಂದು, ಅದು ಅಂದಿಗೂ ಸಾಮಾಜಿಕವಾಗಿ ಅಷ್ಟೇ ಗಡುಸಾಗಿ, ಪ್ರತಿಗಾಮಿಯಾಗಿ ಉಳಿದಿರುವುದನ್ನು ಗುರುತಿಸಿದ್ದರು. ಅಂಬೇಡ್ಕರ್‌ಗೆ ಎಂದೋ ಗೊತ್ತಾಗಿದ್ದ ಹಿಂದೂ ಧರ್ಮ ಮತ್ತು ಅಸ್ಪೃಶ್ಯರ ವಿಮೋಚನೆ ಒಟ್ಟೊಟ್ಟಿಗೆ ಚಲಿಸಲಾರವು ಎಂಬ ಕಹಿ ಸತ್ಯವನ್ನು ಗಾಂಧಿ ಪಾಳಯ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಹಿಂದೂ ಧರ್ಮದ ಮೂಲಕವೇ ಅಸ್ಪೃಶ್ಯತೆಯನ್ನು ತೊಡೆದು ಹಾಕುವೆನೆಂಬ ಹುಂಬ ವಿಶ್ವಾಸದಲ್ಲಿ ಗಾಂಧಿ ನಿಂತಿದ್ದರು. ನಂತರ ನಡೆದ ವಿದ್ಯಮಾನಗಳು “ಪೂನಾ ಒಪ್ಪಂದಕ್ಕೆ ಸಹಿಮಾಡಿದ್ದು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು,” ಎಂದು ಅಂಬೇಡ್ಕರ್ ಪರಿತಪಿಸುವಂತೆ ಮಾಡಿದವು. ಅಂಬೇಡ್ಕರ್ ಹಾಗೆ ಭಾವಿಸಲು ಕಾರಣವಾದ ಘಟನೆಗಳನ್ನು ಒಪ್ಪಂದದ ನಂತರದ ಘಟನೆಗಳಲ್ಲಿ ಹುಡುಕಬೇಕು. ಸೆಪ್ಟೆಂಬರ್ ಕೊನೆಯಿಂದ 1933 ಏಪ್ರಿಲ್‌ವರೆಗೆ ನಡೆದಿದ್ದನ್ನು ಅವರ ಜೀವನಚರಿತ್ರೆಯಿಂದ ನೋಡಿದರೆ ಇದು ಸ್ಪಷ್ಟವಾಗುತ್ತದೆ.

1930ರಲ್ಲಿ ನಾಸಿಕದ ಕಾಳಾರಾಮ್ ದೇವಾಲಯ ಪ್ರವೇಶ, 1931ರಲ್ಲಿ ಕೇರಳದ ಕೆಳಪ್ಪನ್ ಅವರ ಗುರುವಾಯೂರು ದೇವಾಲಯ ಪ್ರವೇಶಕ್ಕೆ ನಡೆಸಿದ ಪ್ರಯತ್ನಗಳು ಕಾಂಗ್ರೆಸ್ಸಿನ ಗಮನ ಸೆಳೆಯದೇ ಹೋಗಿದ್ದವು. ಗಾಂಧಿ ಉಪವಾಸ ಶುರುಮಾಡಿದ ಮರುದಿನವೇ ಮಲಬಾರ್‌ನ ಕೆಳಪ್ಪನ್ ಅಸ್ಪೃಶ್ಯರ ದೇವಾಲಯ ಪ್ರವೇಶ ಕುರಿತು ಗುರುವಾಯೂರು ದೇವಸ್ಥಾನದೆದುರು ಉಪವಾಸ ಕುಳಿತರು. ಅವರಿಗೆ ಗಾಂಧಿ ತಾವಿಬ್ಬರೂ 1933 ಜನವರಿ ಒಂದರಿಂದ ಒಟ್ಟಿಗೇ ಉಪವಾಸ ಶುರು ಮಾಡೋಣವೆಂದು ಹೇಳಿದ್ದರಿಂದ, ದೇವಾಲಯ ಪ್ರವೇಶಕ್ಕಿಂತ ಅವರ ಜೀವವೇ ದೊಡ್ಡದೆಂದೂ, ಉಪವಾಸ ನಿಲ್ಲಿಸಬೇಕೆಂದೂ ಅಂಬೇಡ್ಕರ್ ಕೇಳಿಕೊಂಡಿದ್ದರಿಂದ ಉಪವಾಸ ನಿಲ್ಲಿಸಿದ್ದರು.

1932 ಸೆಪ್ಟೆಂಬರ್ 26: ನಾಸಿಕ್ ದೇವಾಲಯ ಪ್ರವೇಶ ಹೋರಾಟ ಮಾಡಿದ್ದರೂ ಅಂಬೇಡ್ಕರ್ ಈ ವೇಳೆಗೆ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದರು. ತನ್ನ ಜನ ದೇವಾಲಯ ಪ್ರವೇಶಕ್ಕಿಂತ ರಾಜಕೀಯ ಅಧಿಕಾರ ಪಡೆಯಲು, ಲೌಕಿಕ ಸವಲತ್ತುಗಳನ್ನು ಪಡೆಯಲು ಮೊದಲು ಶ್ರಮಿಸಬೇಕು ಎಂದು ಭಾವಿಸಿದ್ದರು. ಮುಂಬಯಿಯ ಸಭೆಯೊಂದರಲ್ಲಿ ಮಾತನಾಡುತ್ತ, “ಕುತ್ತಿಗೆಯ ಸುತ್ತಲಿನ ತುಳಸಿಮಾಲೆ ನಿಮ್ಮನ್ನು ಸಾಲಗಾರರ ಕೈಯಿಂದ ಪಾರುಮಾಡುವುದಿಲ್ಲ. ರಾಮಭಜನೆ ಹಾಡಿದರೆ ಮನೆ ಬಾಡಿಗೆ ಕಡಿಮೆಯಾಗುವುದಿಲ್ಲ. ಪಂಢರಾಪುರ ಯಾತ್ರೆ ತಿಂಗಳ ಕೊನೆಗೆ ಸಂಬಳ ತರುವುದಿಲ್ಲ. ದೇವಾಲಯ ಪ್ರವೇಶ ನಿಮ್ಮ ಆಹಾರಕ್ಕೆ, ಉಡುವ ಬಟ್ಟೆಗೆ, ಶಿಕ್ಷಣಾವಕಾಶಕ್ಕೆ, ರೋಗದ ಮದ್ದಿಗೆ ಹಣ ನೀಡುವುದಿಲ್ಲ. ಬಹುಪಾಲು ಜನ ಅರ್ಥವಾಗದ ಬದುಕಿನ ನಿಗೂಢಗಳ ಕುರಿತು ಮೂಢನಂಬಿಕೆಗಳಲ್ಲಿ ಮುಳುಗಿರುವುದರಿಂದ ಕೆಲವರು ಅದೇ ಅವಕಾಶ ಬಳಸಿ ಸಮಾಜವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ. ಆದ್ದರಿಂದ ನಿಮ್ಮ ಹೋರಾಟ ರಾಜಕೀಯ ಮತ್ತು ಆರ್ಥಿಕ ಶಕ್ತಿ ಬೆಳೆಸಿಕೊಳ್ಳುವತ್ತ ಇರಲಿ,” ಎಂದು ಸ್ಪಷ್ಟವಾಗಿ ಹೇಳಿದರು.

ಅಕ್ಟೋಬರ್ 19ರಂದು ಮುಖ್ಯವಾದ ಕ್ರಿಮಿನಲ್ ಕೇಸೊಂದರ ಸಲುವಾಗಿ ಸಾವಂತವಾಡಿಯ ಕೋರ್ಟಿಗೆ ಹೊರಟಿದ್ದ ಅಂಬೇಡ್ಕರ್ ದಾರಿಯಲ್ಲಿ ಗಾಂಧೀಜಿಯನ್ನು ಯರವಾಡಾ ಜೈಲಿನಲ್ಲಿ ಭೇಟಿಯಾದರು. ಅಸ್ಪೃಶ್ಯತೆ ವಿರೋಧಿ ಸಂಘದಲ್ಲಿರಬೇಕಾದ ವ್ಯಕ್ತಿಗಳ ಕುರಿತು ಮಾತನಾಡುತ್ತಾ ಅದರ ವಿವಿಧ ಸಮಿತಿಗಳಲ್ಲಿ ಅಸ್ಪೃಶ್ಯರೇ ಹೆಚ್ಚು ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಗಾಂಧೀಜಿ ಬಳಿ ಶೋಷಿತ ಸಮುದಾಯಗಳ ಸಬಲೀಕರಣ ಯತ್ನಗಳು ಇತ್ತೀಚೆಗೆ ಕಡಿಮೆಯಾಗಿರುವ ಬಗ್ಗೆ, ವಿಶೇಷ ಗಣತಿಯ ಅವಶ್ಯಕತೆ ಕುರಿತು ಗಮನ ಸೆಳೆದರು. ಅಸ್ಪೃಶ್ಯತೆ ವಿರೋಧಿ ಸಂಘದ ಚಟುವಟಿಕೆಗಳು ಮುಖ್ಯವಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಉನ್ನತಿಗೆ ಶ್ರಮಿಸುವಂಥವಾಗಿರಬೇಕೆಂದು ಸೂಚಿಸಿದರು.

ಅಕ್ಟೋಬರ್ 28ಕ್ಕೆ ಮುಂಬಯಿಯ ಮತ್ತೊಂದು ಸಭೆಯಲ್ಲಿ ಮಾತನಾಡುತ್ತಾ, “ದೇವಾಲಯ ಪ್ರವೇಶ ಮತ್ತು ಸಹಪಂಕ್ತಿ ಭೋಜನದ ಸಂಭ್ರಮದಲ್ಲಿ ಕಳೆದುಹೋಗಬೇಡಿ. ನಿಮ್ಮ ಕಷ್ಟಗಳು ಪೂರ್ವ ಜನ್ಮದ ಕರ್ಮವೆಂದು ನೀವು ಭಾವಿಸದೇ ಇದ್ದರೆ ಒಳ್ಳೆಯದು. ನಿಮ್ಮ ಬಡತನ ಅನಿವಾರ್ಯವೆಂಬ ಭಾವನೆ ತಪ್ಪು. ನಿಮ್ಮನ್ನೇ ನೀವು ಗುಲಾಮರೆಂದು ಭಾವಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ,” ಎಂದರು.

ನವೆಂಬರ್ 7: ಮೂರನೆಯ ದುಂಡುಮೇಜಿನ ಪರಿಷತ್ತಿನ ಸಲುವಾಗಿ ಲಂಡನ್ನಿಗೆ ಹೊರಟರು. ಹಡಗಿನಲ್ಲಿ ಪ್ರಯಾಣಿಸುವಾಗ ಮಿತ್ರನಿಗೆ ಪತ್ರವೊಂದರಲ್ಲಿ, “ನನಗೆ ಶುಭವಿದಾಯ ಹೇಳಲು ಅಪಾರ ಜನ ಸೇರಿದ್ದರು. ನನ್ನ ಮನಸ್ಸು ಏಕಾಂತ ಮತ್ತು ಪ್ರಶಾಂತ ವಾತಾವರಣಕ್ಕಾಗಿ ಹಾತೊರೆಯುತ್ತಿದೆ. ಅಭಿಮಾನಿಗಳ ಈ ತೆರನ ಮೂರ್ತಿಪೂಜೆ ಉಸಿರುಕಟ್ಟಿಸುತ್ತಿದೆ,” ಎಂದು ಬರೆದರು. ಆ ವೇಳೆಗೆ ಹರಿಜನ ಚಳುವಳಿಯ ಕುರಿತು ಗಾಂಧೀಜಿ ನೀಡಿದ ಹೇಳಿಕೆಗಳನ್ನು ತಿಳಿದುಕೊಂಡು, “ಗಾಂಧಿ ನಮ್ಮ ದಾರಿಗೆ ಬರುತ್ತಿದ್ದಾರೆ, ಆದರೆ ಗಾಂಧೀಜಿಯ ಮನಸ್ಸು ಅಂತರ್ಜಾತಿ ವಿವಾಹ ಮತ್ತು ಸಹಭೋಜನವನ್ನು ಒಪ್ಪುವಷ್ಟು ಇನ್ನೂ ಮಾಗಿಲ್ಲ,” ಎಂದು ಬರೆದರು.

ಆ ಹಡಗಿನಲ್ಲಿಯೇ ಅಂಬೇಡ್ಕರರಿಗೆ ಒಂದು ಕಹಿ ಅನುಭವವಾಯಿತು. ಸರ್ ಪಟ್ಟಾನಿ ಎನ್ನುವವರ ಭೇಟಿಯಾಯಿತು. ಆತ ಮಾತನಾಡುತ್ತಾ “ಅಂದು ಮುಂಬಯಿ ಸಭೆಯಿಂದ ಅರ್ಧಕ್ಕೇ ಎದ್ದು ಹೋದೆ. ನಂತರ ಏನು ನಡೆಯಿತು?” ಎಂದು ಪ್ರಶ್ನಿಸಿದರು. ಅಂಬೇಡ್ಕರ್ “ನಡುವೆ ಏಕೆ ಎದ್ದು ಹೋದಿರಿ?” ಎಂದು ಕೇಳಿದಾಗ, “ಹಿಂದೂ ಧರ್ಮಗ್ರಂಥಗಳ ಪ್ರಕಾರ ಒಳ್ಳೆಯ ವ್ಯಕ್ತಿಗೆ ದುಷ್ಟನೊಬ್ಬ ಮಾನಹಾನಿ ಆಗುವಂತೆ ಮಾತನಾಡುತ್ತಿದ್ದರೆ ಆ ಸ್ಥಳ ಬಿಟ್ಟು ಎದ್ದು ಹೋಗಬೇಕು ಅಥವಾ ದುಷ್ಟನ ನಾಲಿಗೆ ಎಳೆದು ಕತ್ತರಿಸಬೇಕು. ಅದಕ್ಕೇ ಎದ್ದು ಹೋದೆ,” ಎಂದರು. ಸಿಟ್ಟಿನಿಂದ ಉರಿದು ಹೋದರೂ ತೋರಗೊಡದ ಅಂಬೇಡ್ಕರ್ ವ್ಯಂಗ್ಯದ ದನಿಯಲ್ಲಿ ತಣ್ಣಗೆ, “ನಿಮ್ಮ ಹಿಂದೂ ಧರ್ಮ ಗ್ರಂಥಗಳು ಹೊಗಳುಭಟ್ಟರಿಗೆ, ಸೋಗಲಾಡಿಗಳಿಗೆ ಏನು ಶಿಕ್ಷೆ ವಿಧಿಸಿವೆ ನೈಟ್ ಸಾಹೇಬರೇ?” ಎಂದು ಕೇಳಿದಾಗ ಆತ, “ನೀವು, ಯಾರ ಬಗ್ಗೆ ಏನು ಮಾತನಾಡುತ್ತಿದ್ದೀರಿ ಎಂದು ಗೊತ್ತು ತಾನೇ?” ಎಂದರು. ಅಂಬೇಡ್ಕರ್, “ನಾನು ಯಾರ ಬಗ್ಗೆ ಮಾತನಾಡುತ್ತಿದ್ದೀನೆಂದು ನನಗೂ ಗೊತ್ತು, ನಿಮಗೂ ಗೊತ್ತು. ಗಾಂಧಿಯ ಸುತ್ತ ತುಂಬಿಹೋಗಿರುವ ಹೊಗಳುಭಟ್ಟರನ್ನು ಮೊದಲು ಆಚೆ ಸರಿಸಿ,” ಎಂದು ಖಾರವಾಗಿ ಹೇಳಿದರು. ಅವರ ಕಾವೇರಿದ ಚರ್ಚೆಯನ್ನು ತಣಿಸಲು ಹಡಗಿನ ಪೊಲೀಸ್ ಆಫೀಸರ್ ಬರಬೇಕಾಯಿತು.

ನವೆಂಬರ್ 14: ಅಸ್ಪೃಶ್ಯತಾ ವಿರೋಧಿ ಸಂಘದ ಅಧ್ಯಕ್ಷ ಠಕ್ಕರ್ ಬಾಪಾಗೆ ಅಂಬೇಡ್ಕರ್ ಒಂದು ಪತ್ರ ಬರೆದರು. ಅಸ್ಪೃಶ್ಯತೆ ನಿವಾರಣೆಗಾಗಿ ಹಿಂದೂ ಸಮಾಜ ಸುಧಾರಕರಿಗೆ ನೀಡಿದ ಅತಿಮೌಲಿಕ ಸಲಹೆ ಎಂದು ಪರಿಗಣಿಸಲಾಗಿರುವ ಆ ಪತ್ರದ ಸಾರಾಂಶ ಹೀಗಿದೆ: “ಸ್ಪೃಶ್ಯ-ಅಸ್ಪೃಶ್ಯರು ಕಾನೂನಿನಿಂದಾಗಲೀ, ಪ್ರತ್ಯೇಕ ಅಥವಾ ಒಂದೇ ಮತಪಟ್ಟಿಯಿಂದಾಗಲೀ ಒಂದಾಗಲು ಸಾಧ್ಯವಿಲ್ಲ. ಅವರನ್ನು ಒಟ್ಟಿಗೆ ಬಂಧಿಸಬಲ್ಲದ್ದು ಒಂದೇ – ಪ್ರೀತಿ. ಶೋಷಿತ ಸಮುದಾಯಗಳು ತಮ್ಮ ಕಷ್ಟದಿಂದ ಮುಕ್ತಿ ಹೊಂದಬೇಕಾದರೆ ಮೇಲ್ಜಾತಿ ಹಿಂದೂ ಯೋಚಿಸುವಂತೆ ಮಾಡಿ ಆತ ಬದಲಾಗುವಂತೆ ಮಾಡಬೇಕು. ಮೇಲ್ಜಾತಿ ಹಿಂದೂಗಳ ಮನಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕಿದೆ. ಅಸ್ಪೃಶ್ಯತೆ ವಿರೋಧಿ ಸಂಘವು ಶೋಷಿತ ಸಮುದಾಯಗಳಿಗೆ ನೀರು, ರಸ್ತೆ, ಶಾಲೆಗಳನ್ನು ಬಳಸುವ ಅವಕಾಶ ಮಾಡಿಕೊಡಬೇಕು. ಇದು ಹಿಂದೂ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಿದಂತೆ. ಅದಕ್ಕಾಗಿ ನಿಮ್ಮ ಸಂಘಕ್ಕೆ ಕಾರ್ಯಕರ್ತರ ಸೇನೆಯೇ ಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೇಕಾಗಿದ್ದಾರೆ. ಇಂತಹ ಕಾರ್ಯಕ್ರಮ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸಾತ್ಮಕ ಸನ್ನಿವೇಶ ಸೃಷ್ಟಿಸುತ್ತದೆ ಎನ್ನುವುದು ನಿಜವಾದರೂ ಅಸ್ಪೃಶ್ಯತೆ ನಿವಾರಣೆಗೆ ಕನಿಷ್ಟ ಪ್ರತಿರೋಧ ವಿಧಾನ ಉಪಯೋಗವಾಗುವುದಿಲ್ಲ. ಸವರ್ಣೀಯರ ಸಾಂಪ್ರದಾಯಿಕ ರೂಢಿನಿಯಮಗಳ ವಿರುದ್ಧ ಪ್ರಹಾರ ಮಾಡಬೇಕು. ಆಗ ತುರ್ತುಸ್ಥಿತಿಯೊಂದು ಹುಟ್ಟುತ್ತದೆ. ಈ ತುರ್ತು ಹಿಂದೂವನ್ನು ಯೋಚಿಸಲು ಹಚ್ಚುತ್ತದೆ. ಆಗ ಆತ ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳಬಲ್ಲ. ಕನಿಷ್ಠ ಪ್ರತಿರೋಧ ಅಥವಾ ಮೌನ ಕ್ರಾಂತಿ ಯಾವ ತುರ್ತನ್ನೂ ಹುಟ್ಟಿಸುವುದಿಲ್ಲ. ಕಾಳಾರಾಮ್ ದೇವಾಲಯ ಪ್ರವೇಶ, ಚೌಡರ್ ಕೆರೆ, ಗುರುವಾಯೂರು ಪ್ರವೇಶ ಹೋರಾಟಗಳು ಸಮಾಜ ಸುಧಾರಕರು ವರ್ಷಗಟ್ಟಲೆ ಸಾಧಿಸಲಾಗದ್ದನ್ನು ಕೆಲವೇ ದಿನಗಳಲ್ಲಿ ಸಾಧಿಸಿವೆ.

“ಶೋಷಿತ ಸಮುದಾಯಗಳ ದೀನ ಸ್ಥಿತಿಗೆ, ಬಡತನಕ್ಕೆ ಸಮಾನ ಅವಕಾಶ ಸಿಗದಿರುವುದೇ ಮುಖ್ಯ ಕಾರಣ. ಸಂಘವು ಈ ಬಗ್ಗೆ ಕೆಲಸ ಮಾಡಲು ಶೋಷಿತ ಸಮುದಾಯಗಳ ಕಾರ್ಯಕರ್ತರನ್ನೇ ತಯಾರು ಮಾಡಬೇಕು. ಸ್ವತಃ ನೋವುಂಡವರು ಸವರ್ಣೀಯ ಕಾರ್ಯಕರ್ತರಿಗಿಂತ ಹೆಚ್ಚು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಬಲ್ಲರು. ಟಾಲ್‌ಸ್ಟಾಯ್ ಹೇಳಿದಂತೆ “ಪ್ರೀತಿಸಬಲ್ಲವನು ಮಾತ್ರ ಸೇವೆ ಮಾಡಬಲ್ಲ.” ಆದ್ದರಿಂದ ಸಂಬಳ ಪಡೆವ ಕೆಲಸಗಾರರು ಈ ವಿಷಯದಲ್ಲಿ ಉತ್ತಮ ಆಯ್ಕೆಯಾಗಲಾರರು.

ಡಿಸೆಂಬರ್ 1932: ಅಂಬೇಡ್ಕರ್ ಲಂಡನ್ ಬಿಡುವ ವೇಳೆಗೆ ಭಾರತದಲ್ಲಿ ದೇವಾಲಯ ಪ್ರವೇಶ ವಿಚಾರ ಬಿಸಿಸುದ್ದಿಯಾಗಿತ್ತು. ಜನವರಿ ಒಂದರಿಂದ ಗುರುವಾಯೂರು ದೇವಾಲಯ ಪ್ರವೇಶದ ಸಲುವಾಗಿ ಕೆಳಪ್ಪನ್ ಜೊತೆಗೆ ತಾನೂ ಉಪವಾಸ ಕೂರುವೆನೆಂದು ಹೇಳಿ ಗಾಂಧಿ ಸಂಚಲನ ಮೂಡಿಸಿದ್ದರು. ಆದರೆ ಗಾಂಧಿ ಅನುಯಾಯಿಗಳಲ್ಲಿ ಭಿನ್ನಮತ ಶುರುವಾಗಿತ್ತು. ಪೂನಾ ಒಪ್ಪಂದದ ಮೊದಲು ಗಾಂಧಿ ಉಪವಾಸ ನಿಲ್ಲಿಸಲಿ ಎಂಬ ಅನುಕಂಪದಿಂದ ಸುಧಾರಣೆ ಮಾಡಹೊರಟ ಕೆಲವರು ಈಗ ನಿಜ ಬಣ್ಣ ತೋರಿದರು. ಕೇರಳದ ಜಾಮೊರಿನ್ ದೊರೆ ಗುರುವಾಯೂರು ದೇವಸ್ಥಾನಕ್ಕೆ ಅಸ್ಪೃಶ್ಯರ ಪ್ರವೇಶ ನಿರಾಕರಿಸಿದ. ಆ ಹಿಂದೂ ರಾಜನ ಅರಮನೆಯ ಎಷ್ಟೋ ಆಚರಣೆಗಳಲ್ಲಿ ಮುಸ್ಲಿಮರು ಇರುತ್ತಿದ್ದರು. ಪೊನ್ನಾನಿ ತಾಲೂಕಿನ ಜನರೆದುರು ಆಯ್ಕೆಯನ್ನಿಟ್ಟು ಬಹುಸಂಖ್ಯಾತರು ಬಯಸಿದಂತೆ ಮಾಡಿ ಎಂದು ಗಾಂಧಿ ಒಂದು ಸಲಹೆ ಮುಂದಿಟ್ಟರು. ಬಹುಸಂಖ್ಯಾತರು ಅಸ್ಪೃಶ್ಯರ ದೇವಾಲಯ ಪ್ರವೇಶವನ್ನು ಸಮ್ಮತಿಸಿದರು. ಆದರೂ ಜಾಮೊರಿನ್ ಜಗ್ಗಲಿಲ್ಲ. ಇದೇ ಸಮಯಕ್ಕೆ ರಂಗಾ ಅಯ್ಯರ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ದೇವಾಲಯ ಪ್ರವೇಶ ಸುಲಭಗೊಳಿಸಲು ಅಸ್ಪೃಶ್ಯತಾ ನಿಷೇಧ ಕಾಯ್ದೆ ಮಂಡಿಸಿದ್ದರು. ರಾಜಾ, ಗ್ಯಾನ್ ಪ್ರಸಾದ್ ಸಿಂಗ್, ಮಿತ್ರ ಮೊದಲಾದವರೂ ಅವರ ಜೊತೆಗಿದ್ದರು. ಆ ಸಮಯದಲ್ಲಿ ಗಾಂಧಿ ಗುರುವಾಯೂರು ಉಪವಾಸ ಮುಂದೂಡಿರುವುದಾಗಿ, ಗವರ್ನರ್ ಜನರಲ್ ಅವರ ನಿರ್ಧಾರಕ್ಕಾಗಿ ಕಾಯುವುದಾಗಿ ಪ್ರಕಟಿಸಿದಾಗ ಅವರ ನಡೆ ಅಂಬೇಡ್ಕರ್ ಬೆಂಬಲಿಗರಲ್ಲಿ ಅನುಮಾನ ಹುಟ್ಟಿಸಿತು.

ಜನವರಿ 23, 1933: ಭಾರತಕ್ಕೆ ವಾಪಸಾದ ಅಂಬೇಡ್ಕರ್ ಸಂದರ್ಶನವೊಂದರಲ್ಲಿ ದೇವಾಲಯ ಪ್ರವೇಶ ಮಸೂದೆ ಬಗ್ಗೆ ಪ್ರತಿಕ್ರಿಯಿಸುತ್ತಾ, “ವೈಸ್‌ರಾಯ್ ತಕ್ಷಣಕ್ಕೆ ಒಪ್ಪಿಗೆ ನೀಡುವ ಲಕ್ಷಣಗಳಿಲ್ಲ. ದೇವಾಲಯ ಪ್ರವೇಶದ ಸಲುವಾಗಿ ಗಾಂಧಿ ತಮ್ಮ ಜೀವ ಕೊಡುವುದು ಬೇಡ. ವೈಸ್‌ರಾಯ್ ಕೂಡಾ ಶಾಸನ ಸಭೆಯಲ್ಲಿ ಈ ಚರ್ಚೆಯನ್ನು ತಡೆಹಿಡಿಯದೇ ಜನಹಿತವಿದೆ ಎನಿಸಿದಲ್ಲಿ ವಿಟೊ ಬಳಸಿಯಾದರೂ ಮಸೂದೆ ಜಾರಿಗೊಳಿಸಬೇಕು,” ಎಂದು ತಿಳಿಸಿದರು.

ಮುಂಬಯಿಯಲ್ಲಿ ಇಳಿದ ಕೂಡಲೇ ಗಾಂಧಿ ಯರವಾಡಾ ಜೈಲಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಟೆಲಿಗ್ರಾಂ ಕಳಿಸಿದರು. ದೆಹಲಿಗೆ ಹೋಗಿ ಹಿಂದಿರುಗುತ್ತಾ ಫೆಬ್ರುವರಿ 4ರ ಮಧ್ಯಾಹ್ನ ಅಂಬೇಡ್ಕರ್ ಗಾಂಧಿ ಭೇಟಿಯಾದರು. ಎದ್ದು, ಕೈ ಕುಲುಕಿ ಬರಮಾಡಿಕೊಂಡ ಗಾಂಧಿ ದೇವಾಲಯ ಪ್ರವೇಶ ಕುರಿತು ಮಾತು ಶುರುಮಾಡಿ ಸುಬ್ಬರಾಯನ್ ಮತ್ತು ರಂಗಾ ಅಯ್ಯರ್ ಮಂಡಿಸುವ ಮಸೂದೆಗೆ ಬೆಂಬಲ ನೀಡಬೇಕೆಂದು ಕೋರಿದರು. ಅದನ್ನು ನೇರಾನೇರ ನಿರಾಕರಿಸಿ ಅಂಬೇಡ್ಕರ್ ಹೇಳಿದ ಮಾತುಗಳು ಮಾರ್ಮಿಕವಾಗಿವೆ:

“ಆ ಮಸೂದೆ ಅಸ್ಪೃಶ್ಯತೆ ಪಾಪ ಎನ್ನುವುದಿಲ್ಲ. ಅಸ್ಪೃಶ್ಯರನ್ನು ದೇವಾಲಯದೊಳಗೆ ಬಿಡಿ ಎನ್ನುತ್ತದೆಯೇ ಹೊರತು ದೇವಾಲಯ ಪ್ರವೇಶ ಅವರ ಹಕ್ಕು ಎನ್ನುವುದಿಲ್ಲ. ಶೋಷಿತ ಸಮುದಾಯಗಳು ವರ್ಣ ವ್ಯವಸ್ಥೆಯ ಶೂದ್ರರಾಗಲು ಇಚ್ಛಿಸುವುದಿಲ್ಲ. ನಾನು ಹಿಂದೂ ಎಂದು ಕರೆದುಕೊಳ್ಳಬಯಸುವುದಿಲ್ಲ. ಯಾವ ವ್ಯವಸ್ಥೆ ನನ್ನನ್ನು ಕೀಳಾಗಿ ಕಂಡಿದೆಯೋ ಅದರ ಬಗ್ಗೆ ನಾನೇಕೆ ಹೆಮ್ಮೆ ಪಡಲಿ? ಜಾತಿವ್ಯವಸ್ಥೆ ಹೀಗೇ ಮುಂದುವರೆಯುವುದಾದರೆ ದೇವಾಲಯ ಪ್ರವೇಶದಿಂದ ಏನೂ ಲಾಭವಿಲ್ಲ.”

ಗಾಂಧಿ ಉತ್ತರಿಸಿದರು: “ವರ್ಣ ವ್ಯವಸ್ಥೆ ಕೆಟ್ಟ ವ್ಯವಸ್ಥೆಯಲ್ಲ. ಮೇಲ್ಜಾತಿ ಹಿಂದೂಗಳು ತಮ್ಮ ಪಾಪ ತೊಳೆದುಕೊಳ್ಳಲು, ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿಕೊಳ್ಳಲು ಒಂದು ಅವಕಾಶ ಕೊಡಿ. ಈ ಸುಧಾರಣೆಯಾದರೆ ಅಸ್ಪೃಶ್ಯರೂ ಸಮಾಜದಲ್ಲಿ ಉನ್ನತಿ ಹೊಂದಬಹುದು. ನೀವೀಗ ದೇವಾಲಯ ಪ್ರವೇಶ ವಿರೋಧಿಸಿದರೆ ಸನಾತನಿಗಳು ಮತ್ತು ಸರ್ಕಾರ ಅದರ ದುರ್ಲಾಭ ಪಡೆಯುತ್ತಾರೆ.”

ಅಂಬೇಡ್ಕರ್ ಒಪ್ಪಲಿಲ್ಲ. ಅವರ ಅಭಿಪ್ರಾಯ ಭಿನ್ನವಾಗಿತ್ತು.

“ಅಸ್ಪೃಶ್ಯರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಉನ್ನತಿ ಸಾಧಿಸಿದರೆ ದೇವಾಲಯ ಪ್ರವೇಶ ತಾನೇ ತಾನಾಗಿ ಸಾಧ್ಯವಾಗುತ್ತದೆ. ಬಹಿಷ್ಕೃತರು ಜಾತಿ ವ್ಯವಸ್ಥೆಯ ಉಪಉತ್ಪನ್ನಗಳು. ಜಾತಿ ವ್ಯವಸ್ಥೆ ಇರುವ ತನಕ ಅವರೂ ಇರುತ್ತಾರೆ. ಜಾತಿಪದ್ಧತಿ ನಾಶವಾಗದೇ ಅವರ ಉದ್ಧಾರ ಸಾಧ್ಯವೇ ಇಲ್ಲ. ಹಿಂದೂ ನಂಬಿಕೆಯಿಂದ ಜಾತಿಯೆಂಬ ಹೇಯ ಮತ್ತು ಕ್ರೂರ ತತ್ವವನ್ನು ತೆಗೆದುಹಾಕುವವರೆಗೆ ಹಿಂದೂ ಧರ್ಮ ಉಳಿಯುವುದಿಲ್ಲ,” ಎಂದು ಫೆಬ್ರವರಿ 11 ರಂದು ಹೊರಬಂದ “ಹರಿಜನ” ಮೊದಲ ಸಂಚಿಕೆಯಲ್ಲಿ ಅಂಬೇಡ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫೆಬ್ರವರಿ 12ರಂದು “ಪ್ರಿಯ ಮಹಾತ್ಮಾಜೀ..” ಎಂದು ಪತ್ರ ಶುರುಮಾಡಿದ ಅಂಬೇಡ್ಕರ್ ಹೀಗೆ ಬರೆದರು: “ಪಾಪ ಮತ್ತು ಅನೈತಿಕತೆಯನ್ನು ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆಂದು ತಾಳಲಾಗುವುದಿಲ್ಲ. ಅಸ್ಪೃಶ್ಯತೆ ಪಾಪ ಮತ್ತು ಅನೈತಿಕವಾಗಿದ್ದಲ್ಲಿ ಬಹುಸಂಖ್ಯಾತರ ಮರ್ಜಿ ಹಿಡಿಯದೇ ನೀವು ಅದನ್ನು ನಾಶಗೊಳಿಸಬೇಕು. ಆದರೆ ನಿಮ್ಮ ಮಸೂದೆ ಅದನ್ನು ಹೇಳುವುದಿಲ್ಲ. ಶೋಷಿತ ವರ್ಗಗಳ ಮುಕ್ತಿ ಮಾರ್ಗ ಶಿಕ್ಷಣ, ಉದ್ಯೋಗ, ಆರ್ಥಿಕ ಉನ್ನತಿಯಲ್ಲಿದೆಯೇ ಹೊರತು ದೇವಾಲಯ ಪ್ರವೇಶದಲ್ಲಿಲ್ಲ. ದೇವಾಲಯಗಳ ಬಾಗಿಲು ತೆರೆಯಬೇಕೋ ಬಿಡಬೇಕೋ ಎನ್ನುವುದು ನೀವು ಚರ್ಚಿಸಬೇಕಾದ ವಿಚಾರ. ನಾವದಕ್ಕೆ ಹೋರಾಟ ಮಾಡುವುದಿಲ್ಲ. ಮನುಷ್ಯನನ್ನು ಕೀಳಾಗಿ ಕಾಣುವುದು ಸಭ್ಯನಡತೆಯಲ್ಲ ಎಂದು ನೀವು ಭಾವಿಸಿದರೆ ದೇವಾಲಯಗಳ ಬಾಗಿಲು ತೆರೆಯಿರಿ. ಸಭ್ಯತೆಗಿಂತ ಹಿಂದೂ ಆಗಿ ಉಳಿಯುವುದೇ ಮುಖ್ಯವಾದಲ್ಲಿ ನಿಮ್ಮ ದೇವಾಲಯಗಳ ಬಾಗಿಲು ಹಾಕಿಕೊಳ್ಳಿ, ನಮಗೆ ಒಳಬರಬೇಕಾದ ತುರ್ತು ಇಲ್ಲ. ಸಾಮಾಜಿಕ ಅಸಮಾನತೆಯನ್ನು ಪ್ರತಿಪಾದಿಸುವ ಧರ್ಮವನ್ನು ಸಹಿಸಲಾಗದು ಎಂದು ಅಸ್ಪೃಶ್ಯರು ನಿರ್ಧರಿಸಿದ್ದಾರೆ. ಹಿಂದೂ ಧರ್ಮ ಸಮಾನತೆಯನ್ನು ಒಪ್ಪಿಕೊಳ್ಳುವುದಾದರೆ ಅಸ್ಪೃಶ್ಯರನ್ನು ಪರದೇಶಿಗಳಂತೆ ನೋಡುವುದನ್ನು ನಿಲ್ಲಿಸಬೇಕು. ದೇವಾಲಯ ಪ್ರವೇಶ ನೀಡಿದರಷ್ಟೇ ಸಾಲದು, ಚಾತುರ್ವರ್ಣ್ಯ ತತ್ವವನ್ನೂ ಕೈಬಿಡಬೇಕು. ಅಸಮಾನತೆ, ತಾರತಮ್ಯ ಮತ್ತು ಜಾತಿ ಪದ್ಧತಿಯ ಮೂಲ ವರ್ಣಾಶ್ರಮ ಧರ್ಮದ ಬೇರುಗಳಲ್ಲಿ ಅಡಗಿ ಕೂತಿವೆ. ನಾನೀಗ ದೇವಾಲಯ ಪ್ರವೇಶ ಮಸೂದೆಗೆ ಸಹಮತ ಸೂಚಿಸಿ ನಂತರ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಾಶಕ್ಕೆ ಹೋರಾಡಿದರೆ ಗಾಂಧಿ ಯಾವ ಕಡೆ ನಿಲ್ಲುತ್ತಾರೆ? ಅವರು ವರ್ಣಾಶ್ರಮ ಬೆಂಬಲಿಸಿ ವಿರೋಧಿ ಪಾಳಯದಲ್ಲಿ ನಿಲ್ಲುವುದಾದರೆ ನಾನೀಗ ಅವರ ಜೊತೆ ನಿಲ್ಲಲಾರೆ.”

ಗಾಂಧಿ-ಅಂಬೇಡ್ಕರ್ ದಾರಿ ಸ್ಪಷ್ಟವಾಗಿ ಬೇರೆಯಾಗಿದ್ದು ಹೀಗೆ. ರಂಗಾ ಅಯ್ಯರ್ ದೇವಾಲಯ ಪ್ರವೇಶ ಮಸೂದೆಯನ್ನು ಕಟ್ಟಾ ಸನಾತನಿಗಳಷ್ಟೇ ಅಲ್ಲ, ಅರೆ ಸನಾತನಿಗಳು, ಸನಾತನ ಸಮಾಜ ಸುಧಾರಕರೂ ವಿರೋಧಿಸಿದರು. ಕಾನೂನು ಧಾರ್ಮಿಕ ವಿಷಯಗಳಲ್ಲಿ ತಲೆಹಾಕಬಾರದು ಎನ್ನುವುದು ಅವರ ವಾದವಾಗಿತ್ತು. ಪಂಡಿತ ಮದನ ಮೋಹನ ಮಾಳವೀಯ ಅವರಂತೂ ಕೋಪಾವಿಷ್ಟರಾಗಿ ದೇವಾಲಯ ವಿಚಾರದಲ್ಲಿ ಕಾನೂನು ಪರೋಕ್ಷವಾಗಿಯೂ ಹಸ್ತಕ್ಷೇಪ ಮಾಡಬಾರದು ಎಂದು ಗುಡುಗಿ ಪೂನಾ ಒಪ್ಪಂದ ಇದಕ್ಕೆ ಅನ್ವಯಿಸುವುದಿಲ್ಲವೆಂದು ಹೇಳಿದರು! ಹೀಗೆ ಯಾವ ಉದ್ದೇಶಕ್ಕಾಗಿ ಗಾಂಧಿ ಉಪವಾಸ ಕೂತು ಪೂನಾ ಒಪ್ಪಂದಕ್ಕೆ ಸಹಿ ಪಡೆದಿದ್ದರೋ ಅದರ ಸೋಲಿನ ಮೊದಲ ಹೆಜ್ಜೆಯಾಗಿ ಮಾರ್ಚ್ 24ರಂದು ರಂಗಾ ಅಯ್ಯರ್ ಅವರ ದೇವಾಲಯ ಪ್ರವೇಶ ಮಸೂದೆ ಬಿದ್ದುಹೋಯಿತು.

ಈ ಹೊತ್ತಿಗೆ ಪೂನಾ ಒಪ್ಪಂದದ ನಿಜ ಬಣ್ಣ ಬಯಲಾಗತೊಡಗಿತ್ತು. ಹೆಚ್ಚು ಕಡಿಮೆ ಪೂನಾ ಒಪ್ಪಂದ ಅಂಗೀಕರಿಸಿದ್ದ ಎಲ್ಲ ಹಿಂದೂ ರಾಜಕೀಯ ಮುಖಂಡರು ಅದನ್ನು ವಿರೋಧಿಸತೊಡಗಿದ್ದರು. ಗಾಂಧೀಜಿ ಶುರುಮಾಡಿದ ಹರಿಜನ ಚಳುವಳಿಯ ಉತ್ಸಾಹ ಇಂಗಿಹೋಗತೊಡಗಿತ್ತು. ಪೂನಾಕ್ಕೆ ಗಾಂಧೀಜಿಯನ್ನು ನೋಡಲು ಬಂದು ಅವರೆದೆಯ ಮೇಲೆ ಮುಖವಿಟ್ಟು ಬಿಕ್ಕಿದ್ದ ಟ್ಯಾಗೋರ್ ಈಗ ಬೇರೆ ಹಾಡು ಶುರುಮಾಡಿದ್ದರು. ಪೂನಾ ಒಪ್ಪಂದವನ್ನು ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ಪ್ರತ್ಯೇಕ ಸಮ್ಮೇಳನ ಮಾಡಿ ಅಂಗೀಕರಿಸಿದ್ದ ಹಿಂದೂ ಮಹಾಸಭಾದ ಮುಖಂಡರು ಅದಕ್ಕೆ ತಿದ್ದುಪಡಿಯಾಗಬೇಕೆಂದು ಬಯಸಿದರು. ಪಂಜಾಬಿನಲ್ಲಿ ಅಸ್ಪೃಶ್ಯತೆ ಸಮಸ್ಯೆಯೇ ಇಲ್ಲದಿರುವುದರಿಂದ ಅಲ್ಲಿ ಅದನ್ನು ಅನ್ವಯಿಸಬಾರದೆಂದು ಹೇಳಿದರು. ಬಂಗಾಳ ಶಾಸನಸಭೆ ಪ್ರಸ್ತಾವವೊಂದನ್ನು ಅಂಗೀಕರಿಸಿ ಪೂನಾ ಒಪ್ಪಂದ ರದ್ದತಿಗೆ ಒತ್ತಾಯಿಸಿತು. ಬಂಗಾಳದ ಒಬ್ಬ ಹಿಂದೂ ಪ್ರತಿನಿಧಿಯೂ ಪೂನಾ ಒಪ್ಪಂದದಲ್ಲಿ ಭಾಗೀದಾರ ಆಗಿಲ್ಲದಿರುವುದರಿಂದ ಅದು ತಮಗೆ ಅನ್ವಯಿಸುವುದಿಲ್ಲ ಎನ್ನುವುದು ಅವರ ವಾದವಾಗಿತ್ತು. ಬ್ರಿಟಿಷ್ ಸರ್ಕಾರ ಈ ಬಗ್ಗೆ ಅಂಬೇಡ್ಕರರಿಗೆ ಪತ್ರ ಬರೆಯಿತು. ಅದಕ್ಕೆ ಉತ್ತರಿಸುತ್ತ ಅವರು, “ಪೂನಾ ಒಪ್ಪಂದದ ಸಮಯದಲ್ಲಿ ಸಂಧಾನಕಾರರಾಗಿ ಅನೇಕ ಬಂಗಾಳಿ ಹಿಂದೂಗಳು ಪ್ರಮುಖ ಪಾತ್ರ ವಹಿಸಿರುವಾಗ ಹೀಗೆ ಹೇಳುತ್ತಿರುವುದು ತಪ್ಪು. ಬ್ರಿಟಿಷ್ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವು ಪೂರಾ ಬ್ರಿಟಿಷ್ ಇಂಡಿಯಾಕ್ಕೆ ಅನ್ವಯವಾಗುವಾಗ ಬಂಗಾಳವು ತಪ್ಪಿಸಿಕೊಳ್ಳಲಾರದು. ಅಷ್ಟೇ ಅಲ್ಲ, ಬಂಗಾಳದ ಶೋಷಿತ ಸಮುದಾಯಗಳ ಮುಖಂಡರು 50 ಸ್ಥಾನ ಬಯಸಿದ್ದಾಗ 30 ಸ್ಥಾನಕ್ಕೆ ಅವರನ್ನು ತೃಪ್ತಗೊಳಿಸಿ ಪೂನಾ ಒಪ್ಪಂದಕ್ಕೆ ಬದ್ಧರಾಗಿರುವಂತೆ ಒಪ್ಪಿಸಿದ್ದೇನೆ. ಅಲ್ಲಷ್ಟೇ ಅಲ್ಲ, ಮುಂಬಯಿ, ಬಿಹಾರ್, ಪಂಜಾಬ್, ಉತ್ತರ ಪ್ರದೇಶ, ಒರಿಸ್ಸಾದ ಶೋಷಿತ ಸಮುದಾಯವೂ ಸ್ಥಾನಸಂಖ್ಯೆಯ ಕುರಿತು ಅಸಮಾಧಾನ ಹೊಂದಿವೆ,” ಎಂದು ಬರೆದರು.

ಜಂಟಿ ಸಂಸದೀಯ ಸಮಿತಿಯಲ್ಲಿ ಭಾಗವಹಿಸಲು ಏಪ್ರಿಲ್‌ನಲ್ಲಿ ಮತ್ತೆ ಲಂಡನ್ನಿಗೆ ಹೊರಟ ಅಂಬೇಡ್ಕರ್‌ರನ್ನು ಗಾಂಧಿ ಯರವಾಡಾ ಜೈಲಿನಲ್ಲಿ ಮತ್ತೆ ಭೇಟಿ ಮಾಡುವಂತೆ ಕೇಳಿದರು. ಯರವಾಡಾದಲ್ಲಿ ಗಾಂಧೀಜಿಯ ಜೊತೆ ಪ್ರಾಥಮಿಕ ಚುನಾವಣೆ ಹಾಗೂ ಅಭ್ಯರ್ಥಿಗಳ ಪಟ್ಟಿ ತಯಾರಿಯ ಕುರಿತು ಚರ್ಚೆಯಾಯಿತು. ಸಾರ್ವತ್ರಿಕ ಚುನಾವಣೆ ಎದುರಿಸುವ ಶೋಷಿತ ಸಮುದಾಯದ ಅಭ್ಯರ್ಥಿ ಪ್ರಾಥಮಿಕ ಹಂತದಲ್ಲಿ ಕನಿಷ್ಠ 25% ಮತ ಗಳಿಸಿರಬೇಕು ಎಂದು ಅಂಬೇಡ್ಕರ್ ಹೇಳಿದರು. ಆ ವಿಷಯದ ಕುರಿತು ಅಂಬೇಡ್ಕರ್ ಅವರ ಲಂಡನ್ ವಿಳಾಸಕ್ಕೆ ಪತ್ರ ಬರೆಯುವುದಾಗಿ ಹೇಳಿದ ಗಾಂಧಿ, ಅಂಬೇಡ್ಕರ್ ಕೈಗೆ ಹೂಗುಚ್ಛವನ್ನಿತ್ತು ಮಾತನ್ನು ಅಸ್ಪೃಶ್ಯತೆ ನಿವಾರಣೆ ಕಡೆಗೆ ತಿರುಗಿಸಿದರು.

*****

ಒಂದು ವೇಳೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್ ತಮ್ಮ ನಿಲುವನ್ನು ಕೊಂಚವೂ ಬದಲಿಸದೆ ಕಠಿಣವಾಗಿ ಉಳಿದುಬಿಟ್ಟಿದ್ದಿದ್ದರೆ ಉಪವಾಸದಿಂದ ಬಳಲಿ ಮಲಗಿದ್ದ ಗಾಂಧಿ ತೀರಿಕೊಳ್ಳುವ ಸಾಧ್ಯತೆಗಳಿದ್ದವು. ಆಗ ಅಂಬೇಡ್ಕರರನ್ನು ಖಳನನ್ನಾಗಿಸಿ, ಈ ದೇಶದಲ್ಲಿ ಶೋಷಿತರ ಮಾರಣಹೋಮವೇ ನಡೆದುಹೋಗುತ್ತಿತ್ತು. ಬಹುಶಃ ಅಂಬೇಡ್ಕರರಿಗಿದ್ದ ದೂರದೃಷ್ಟಿ ಈ ದುರಂತ ಸಂಭವಿಸದಂತೆ ನೋಡಿಕೊಂಡಿತು.

ಹೀಗೆ ಪೂನಾ ಒಪ್ಪಂದವು ರಾಜಕೀಯ ಒಪ್ಪಂದವಾಗಿದ್ದರೂ ಅದಕ್ಕೆ ವಿಶಾಲ ಧಾರ್ಮಿಕ, ಸಾಮಾಜಿಕ ಆಯಾಮಗಳಿದ್ದವು. ಅದರ ಪರಿಣಾಮದ ಬಗ್ಗೆ ಒಪ್ಪಂದದ ಆರಂಭದ ದಿನಗಳಲ್ಲಿ ಉತ್ಸಾಹಿತರಾದಂತೆ ಕಂಡುಬಂದ ಅಂಬೇಡ್ಕರ್ ನಂತರ ಕ್ರಮೇಣ ಯಥಾಸ್ಥಿತಿ ಮುಂದುವರೆದಿದ್ದನ್ನು ಖಿನ್ನತೆಯಿಂದ ಗಮನಿಸುತ್ತಾರೆ. ದಿನಕಳೆದಂತೆ ಅಸ್ಪೃಶ್ಯತೆ ನಿವಾರಣೆ ಅಷ್ಟು ಸುಲಭವಲ್ಲವೆಂದೂ, ಅದರ ಬೇರು ನಾಶವಾಗದೇ ಬರಿಯ ಟೊಂಗೆಗಳನ್ನು ಕಡಿದು ಉಪಯೋಗವಿಲ್ಲವೆಂದೂ ಅವರಿಗೆ ಮನದಟ್ಟಾಗುತ್ತದೆ. ಕಲಿತ, ತಿಳಿದ, ಪ್ರಭಾವಿ ಅಧಿಕಾರಸ್ಥರಾದ ತಾವೇ ತಾರತಮ್ಯ ಎದುರಿಸುತ್ತಿರಬೇಕಾದರೆ ಹಳ್ಳಿಹಳ್ಳಿಗಳಲ್ಲಿ ಬದುಕಿರುವ ಕೋಟ್ಯಂತರ ಬಡ ಶೋಷಿತರ ಪಾಲಿಗೆ ದೇವಾಲಯ ಪ್ರವೇಶದಂತಹ ಕಣ್ಣೊರೆಸುವ ತಂತ್ರಗಳು ಶಾಶ್ವತ ಪರಿಹಾರ ಒದಗಿಸಲಾರವು ಎಂದೆನಿಸಿ ಮತಾಂತರ ನಿರ್ಧಾರಕ್ಕೆ, ಸ್ಥಾನಮೀಸಲು ಹೋರಾಟಕ್ಕೆ ತಾತ್ವಿಕ ನೆಲೆ ಒದಗಿಸುತ್ತದೆ.

ಹೀಗೆ ಪೂನಾ ಒಪ್ಪಂದವು ಸ್ವಾತಂತ್ರ್ಯ ಹೋರಾಟ, ಗಾಂಧಿ-ಅಂಬೇಡ್ಕರ್ ಸಂಘರ್ಷ, ಹಿಂದೂ ಸಮಾಜ ಸುಧಾರಣೆಯ ಕಷ್ಟಗಳು, “ಹರಿಜನ”ರಿಂದ ಆತ್ಮಾಭಿಮಾನಿ “ದಲಿತ”ರ ಹುಟ್ಟು, ಅಂಬೇಡ್ಕರರ ಮತಾಂತರ ಒಲವಿಗೆ ಕಾರಣಗಳನ್ನು ಅನಾವರಣಗೊಳಿಸುತ್ತ ಇತಿಹಾಸದ ಪುಟಗಳನ್ನು ಏಕೆ ಮತ್ತೆಮತ್ತೆ ತಿರುವಿ ಹಾಕಬೇಕೆಂದು ಸ್ಪಷ್ಟಪಡಿಸುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದರು. ನನ್ನ ಭಾಷಣವನ್ನು ಬಹಳ ಮಂದಿ ಮೆಚ್ಚಿಕೊಂಡರು. ನನ್ನ ಕೋಣೆಯ ಪಕ್ಕದಲ್ಲೇ ಇದ್ದವರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಅವರನ್ನು ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಿಚ್ಚಿಟ್ಟರು.

“ಸರ್, ನಮ್ಮ ಮಗನಿಗೆ ಸುಮಾರು ಐದು ತಿಂಗಳಿಂದ ಭಾನಾಮತಿ ಹಿಡಿದಿದೆ. ಇದರಿಂದ ನಾವು ಇಲ್ಲಿ ಒಂದು ತಿಂಗಳಿಂದ ಉಳಿದುಕೊಂಡಿದ್ದೀವಿ,” ಎಂದರು. ಭಾನಾಮತಿ ಎಂಬ ಸಮಸ್ಯೆಯಿಂದ ಬಳಲುತ್ತಿರುವವರು ನಾನು ಕಂಡಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರಲ್ಲಿ ಕಡಿಮೆಯೇ. ಆದರೆ ಇಲ್ಲಿ ಮೂವತ್ತು ವರ್ಷದ ಆರೋಗ್ಯಪೂರ್ಣ ಯುವಕ ಭಾನಾಮತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನನಗೆ ಬಹಳ ಬೇಸರ ಮೂಡಿಸಿತು. ಹಾಗೆಯೇ ಅವನ ವಿವರಗಳನ್ನು ಕೇಳುತ್ತಾ ಹೊರಟಂತೆ ಇದೊಂದು ವಿಸ್ಮಯಕಾರಕ ಘಟನೆ ಎನ್ನಿಸಿತು.

ದಷ್ಟಪುಷ್ಟವಾದ, ಬಲಿಷ್ಟ ಮೈಕಟ್ಟು ಹೊಂದಿದ ಈ ಯುವಕ ವಿದ್ಯಾವಂತ ಕೂಡ. ಆರು ತಿಂಗಳ ಹಿಂದೆ ಯುವತಿಯೊಡನೆ ವಿವಾಹವೂ ಆಯಿತು. ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಮದುವೆಯಾಗಿ ಮೊದಲ ರಾತ್ರಿ ಪ್ರಾರಂಭವಾಯಿತು ನೋಡಿ ಅಲ್ಲಿಂದ ಹುಚ್ಚನಂತೆ ಆಡಲಾರಂಭಿಸಿದ. ಹೆಂಡತಿಯ ಮುಖ ಕಂಡರೆ ದೂರ ಓಡುತ್ತಿದ್ದ. ಆಕೆಯನ್ನು ನೋಡಿದರೆ ಅವನ ಮೈ ಬೆವರಿ ತೊಪ್ಪೆಯಾಗುತ್ತಿತ್ತು. ಇದನ್ನು ನೋಡಿ ಆಕೆ ತನ್ನ ತಂದೆ ತಾಯಿಗೆ ತಿಳಿಸಿದಳು. ಅವರು ಮೊದಲಿಗೆ ಅರಿಶಿನದ ಮೈನಲ್ಲಿ ಹೊರಗಡೆ ಓಡಾಡಿ ಗಾಳಿ ಮೆಟ್ಟಿಕೊಂಡಿರಬಹುದು ಎಂದುಕೊಂಡರು. ಸರಿಯಾಗುತ್ತದೆ ಎನ್ನುವ ಭರವಸೆಯನ್ನೂ ತುಂಬಿದರು.

ನಂತರ ಯಥಾಪ್ರಕಾರ ಎಲ್ಲ ದೇವರುಗಳಿಗೂ ಹರಕೆ ಹೊತ್ತು, ಮಂತ್ರ, ತಾಯಿತ ಕಟ್ಟಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರ ಸಲಹೆ ಪಡೆದರೂ ಅಷ್ಟೇನೂ ಲಾಭವಾಗಲಿಲ್ಲ. ಎಲ್ಲಿ ಹೋದರೂ ಆತನಲ್ಲಿ ದೋಷ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಕಿರುಚಾಟವಂತೂ ನಿಲ್ಲಲಿಲ್ಲ. ರಾತ್ರಿಯಾದರೆ ವಿಚಿತ್ರ ಆಟ, ಬೆಳಿಗ್ಗೆ ಮಂಕು ಕವಿದಂತೆ ನೋಟ.

ಮನೆದೇವರ ಬಳಿಗೆ ಹೋಗಿಬನ್ನಿ ಎಂದರು. ಅದನ್ನೂ ಮಾಡಿದೆವು. ಆದರೆ ಅದೂ ಅಲ್ಪಕಾಲೀನ. ಅಲ್ಲಿದ್ದಷ್ಟು ಕಾಲ ಚೆನ್ನಾಗಿದ್ದ. ಇಲ್ಲಿ ಬಂದ ನಂತರ ಅದೇ ರಾಗ ಅದೇ ಹಾಡು!

ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದೆ ಈ ಮಠದಲ್ಲಿದ್ದೇವೆ ಎಂದರು. ನಾನು ಅವರ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಬೀಳ್ಕೊಂಡೆ.

ನಂತರ ಆ ನವದಂಪತಿಗಳನ್ನು ಒಂದು ಬಾರಿ ನನ್ನ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಬ್ಬರೂ ಜೊತೆಯಲ್ಲಿದ್ದರು.

ಕಾರ್ಯಕ್ರಮ ಮುಗಿದ ನಂತರ ದಂಪತಿಗಳು ನಮ್ಮ ಮನೆಯಲ್ಲೇ ಉಳಿದರು. ಮೊದಲಿಗೆ ಆತನ ಪತ್ನಿಯನ್ನು ಕೌನ್ಸೆಲ್ಲಿಂಗ್ ಮಾಡಲಾರಂಭಿಸಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯ ಇದೆಯೇ? ಅಥವಾ ಲೈಂಗಿಕ ಅನುಭವ ಪಡೆದುಕೊಳ್ಳುವ ವಿಷಯದಲ್ಲಿ ಪರಸ್ಪರ ಅರಿವಿನ ಕೊರತೆಯುಂಟಾಯಿತೇ? ಇತ್ಯಾದಿ ವಿಷಯಗಳನ್ನು ಕೇಳುತ್ತಾ ಹೋದೆ.

ಆಕೆ, “ಸರ್ ಅವರು ನನ್ನನ್ನು ಮುಟ್ಟೇ ಇಲ್ಲ. ನನ್ನ ಮುಖ ನೋಡಿದರೆ ಹೆದರಿಕೊಳ್ಳುತ್ತಾರೆ. ಅವರ ಮುಖ ಬೆವರುತ್ತದೆ. ಮೊದಲ ದಿನದಿಂದಲೂ ಇದು ನಡೆದಿದೆ. ಅಂದಿನಿಂದ ಅವರ ಜೊತೆ ಮಲಗೋದೇ ಬಿಟ್ಟಿದ್ದೇನೆ. ಅವರು ಸುಖವಾಗಿರಲಿ ಎನ್ನೋದೇ ನನ್ನ ಆಸೆ,” ಎನ್ನುತ್ತಾ ಕಣ್ಣೀರುಗರೆದಳು.

ನಂತರ ಆತನಲ್ಲಿ ವಿಷಯ ಪ್ರಸ್ತಾಪಿಸಿದೆ. “ಯಾಕಪ್ಪ ನಿನ್ನ ಹೆಂಡತಿಯ ಹತ್ತಿರ ಮಲಗಿದರೆ ಹುಚ್ಚನಂತೆ ಆಡ್ತೀಯಾ? ಈ ಮದುವೆ ನಿನಗೆ ಇಷ್ಟವಿರಲಿಲ್ಲವಾ? ಅಥವಾ ಆ ಹುಡುಗಿ ಇಷ್ಟ ಆಗಿಲ್ವಾ?…” ಪ್ರಶ್ನಿಸಿದೆ.

“ಹಾಗೇನೂ ಇಲ್ಲ ಸರ್, ಆಕೆ ಬಹಳ ಒಳ್ಳೆಯವಳು. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ,” ಎಂದ.

“ಹಾಗಿದ್ದರೆ ನಿಮ್ಮ ನಡುವೆ ಇರುವ ಸಮಸ್ಯೆ ಏನು?” ಎಂದಿದ್ದಕ್ಕೆ ಆತ, “ನನಗೆ ಪುರುಷತ್ವ ಅಂದರೆ ಏನು ಅಂತ ಗೊತ್ತಿಲ್ಲ. ಹೆಂಡತಿಯೊಡನೆ ಏನು ಮಾಡಬೇಕು ಎನ್ನೋದೂ ಗೊತ್ತಿಲ್ಲ. ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದರ ಬಗ್ಗೆ ಮಾತನಾಡೋದಕ್ಕೆ ಬಹಳ ಮುಜುಗರ. ಆದ್ದರಿಂದ ಅದನ್ನು ಧೈರ್ಯವಾಗಿ ಹೇಳಲಾಗದೆ ಈ ರೀತಿ ಆಡುತ್ತಿದ್ದೇನೆ,” ಎಂದ.

ಅವರಿಬ್ಬರನ್ನೂ ಕೂಡಲೇ ವೈದ್ಯರ ಬಳಿ ಕರೆದೊಯ್ದು ಈ ಲೈಂಗಿಕತೆಯ ಕುರಿತು ಅವರಿಗೆ ಅರಿವನ್ನು ನೀಡುವಂತೆ ಕೇಳಿದೆ.

ಅವರು ಸೂಕ್ತ ಸಲಹೆ ನೀಡಿ ಅವನ ಹಿಂಜರಿಕೆ ನಿವಾರಣೆಗೆ ಔಷಧವನ್ನೂ ನೀಡಿದರು. ನಂತರ ಆತ ತನ್ನ ಸಾಂಸಾರಿಕ ಜೀವನವನ್ನು ಸುಖವಾಗಿ ನಡೆಸಲು ಆರಂಭಿಸಿದ. ಈಗ ಅವರಿಗೂ ಒಂದು ಮುದ್ದಾದ ಹೆಣ್ಣುಮಗುವಿದೆ. ಸುಖೀ ಕುಟುಂಬವಾಗಿದೆ.

ಆದ್ದರಿಂದ ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡರೆ ಅದಕ್ಕೆ ಪರಿಹಾರ ದೊರೆಯಬಹುದು. ಅದನ್ನು ಹೊರತುಪಡಿಸಿ ಒಳಗೇ ಕೊರಗಿದರೆ ಈ ರೀತಿ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ದಂತಗೋಪುರದ ದಂಡನಾಯಕರು

 ಡಾ.ಎನ್. ಜಗದೀಶ್ ಕೊಪ್ಪ

                   ಅವರು ಈ ಕಗ್ಗತ್ತಲಿನಲ್ಲಿ ಹಾಡಬಲ್ಲರೆ?
ಹೌದು ಹಾಡಬಲ್ಲರು
ಕಗ್ಗತ್ತಲನ್ನು ಕುರಿತು ಮಾತ್ರ
ಅವರು ಹಾಡಬಲ್ಲರು
ಬರ್ಟೋಲ್ ಬ್ರೆಕ್ಟ್

ಈ ಅಂಕಿ ಅಂಶವನ್ನು ನೀವು ನಂಬಲೇಬೇಕು. ಈ ದೇಶದ ನಗರ ಪ್ರದೇಶದ ವ್ಯಕ್ತಿ ದಿನವೊಂದಕ್ಕೆ 33 ರೂಗಳನ್ನು ಹಾಗೂ ಗ್ರಾಮಾಂತರ ಪ್ರದೇಶದ ವ್ಯಕ್ತಿ 26 ರೂ ಗಿಂತ ಹೆಚ್ಚು ಖರ್ಚು ಮಾಡಿದರೆ, ಅವರು ಬಡವರಲ್ಲ. ಭಾರತದ ಜನತೆ ಬೆಚ್ಚಿ ಬೀಳಿಸುವ ಈ  ವರದಿಯನ್ನು ನಮ್ಮ ಕೇಂದ್ರ ಯೋಜನಾ ಆಯೋಗ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದೆ.

ನಮ್ಮನ್ನಾಳುವ ಜನನಾಯಕರು ವಾಸ್ತವದ ಬದುಕಿನಿಂದ ಎಷ್ಟು ದೂರವಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕು. ಅತ್ಯಂತ ನೋವಿನ ಸಂಗತಿಯೆಂದರೆ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಡಾ. ಮನಮೋಹನ್‌ ಸಿಂಗ್ ಸಾಧಾರಣ ವ್ಯಕ್ತಿಯಲ್ಲ. ಜಗತ್‌ಪ್ರಸ್ದಿದ್ಧ ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರೇಟ್ ಪಡೆದವರು. ಜೊತೆಗೆ ಅರ್ಥಶಾಸ್ರದ ಪಿತಾಮಹ ಎನಿಸಿಕೊಂಡ ಆಡಂ ಸ್ಮಿತ್ ಹೆಸರಿನಲ್ಲಿ ಇರುವ ಚಿನ್ನದ ಪದಕ ಪಡೆದ ಪ್ರಥಮ ಏಷ್ಯಾದ ವ್ಯಕ್ತಿ. ಇವೆಲ್ಲಕಿಂತ ಹೆಚ್ಚಾಗಿ ಇಡೀ ಜಗತ್ತೇ  ಗೌರವಿಸುವ ಶ್ರೇಷ್ಟ ಆರ್ಥಿಕ ತಜ್ಙ. ಇಂತಹ ವ್ಯಕ್ತಿಯ ಉಸ್ತುವಾರಿಯಲ್ಲಿರುವ , ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಮತ್ತೋರ್ವ ಆರ್ಥಿಕ ತಜ್ಙ ಮೊಂಟೆಕ್ ಸಿಂಗ್ ಅಹ್ಲುವಾಲಿಯ ನ್ಯಾಯಲಯಕ್ಕೆ ನೀಡಿರುವ ವರದಿ ಇಡೀ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.

1921 ರ ಡಿಸಂಬರ್ 12 ರಂದು ನಡೆದ ಕಾಂಗ್ರೆಸ್ ಅಧೀವೇಶನದಲ್ಲಿ ಮಾತನಾಡಿದ್ದ ಗಾಂಧೀಜಿ ಹೇಳಿದ್ದ ಮಾತುಗಳು ಇವು, “ಒಂದು ದೇಶ ಎಷ್ಡು ಸದೃಡವಾಗಿದೆ ಎಂಬುದು ನಿರ್ಧಾರವಾಗುವುದು ಆ ದೇಶದಲ್ಲಿರುವ ಕೋಟ್ಯಾಧೀಶ್ವರರ ಆಧಾರದ ಮೇಲಲ್ಲ, ಆ ದೇಶದಲ್ಲಿ ಎಷ್ಟು ಮಂದಿ ಬಡವರು ಬಡತನದ ಸುಳಿಯಿಂದ ಹೊರ ಬಂದಿದ್ದಾರೆ ಎಂಬುವುದರ ಆಧಾರದ ಮೇಲೆ.” ಇಂತಹ ಕಟು ವಾಸ್ತವದ ಗ್ರಹಿಕೆಗಳನ್ನು ಮರೆತ ನಮ್ಮ ನಾಯಕರ ಬೌದ್ಧಿಕ ಸ್ಥಿರತೆ ಬಗ್ಗೆ ಈಗ ಸಂಶಯ ಉಂಟಾಗುತ್ತಿದೆ.

ಸ್ವತಃ ಕೇಂದ್ರ ಸರ್ಕಾರ ಧೃಡಪಡಿಸಿರುವ ಅಂಕಿ ಅಂಶದ ಆಧಾರದ ಪ್ರಕಾರ ಭಾರತದಲ್ಲಿ ಶೇ.49ರಷ್ಟು ಮಂದಿ ಬಡವರಿದ್ದಾರೆ. ಸರ್ಕಾರದ ಮಾಹಿತಿಯನ್ನು ಹೊರತು ಪಡಿಸಿದರೆ, ವಾಸ್ತವವಾಗಿ ಈ ದೇಶದಲ್ಲಿ ಶೇ.72 ರಷ್ಟು ಮಂದಿ ಬಢವರು ಇರುವುದು ಸತ್ಯ.

ಬಡತನದ ಬಗ್ಗೆ ಯಾವ ಅನುಭವವಾಗಲಿ, ತಿಳಿದುಕೊಳ್ಳುವ ಮನಸ್ಸಾಗಲಿ ಇಲ್ಲದಿರುವ ಈ ನಾಯಕರು ಒಮ್ಮೆ ತಮ್ಮ ಕುಟುಂಬದ ಪರವಾಗಿ ದಿನಸಿ ಅಂಗಡಿಗೆ, ಅಥವಾ  ತರಕಾರಿ ಅಂಗಡಿಗೆ ಇಲ್ಲವೇ, ಮಧ್ಯಮ ವರ್ಗದ ಹೊಟೇಲ್ ಗೆ ಹೋಗಿ ಬಂದಿದ್ದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತಿತ್ತು.

ಬಡತನ ಕೇವಲ ಹಸಿವಿನ ವಿಚಾರ ಮಾತ್ರವಲ್ಲ, ಅದೊಂದು ಸಮಾಜದ ಬಹುಮುಖಿ ಕೊರತೆ, ಜೊತೆಗೆ ಮೈ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸುಡುವ ಸಮಸ್ಯೆ ಎಂದು ವಿಶ್ಲೇಷಿಸಿದವರು ಅಮಾರ್ತ್ಯ ಸೇನ್. ಅಲ್ಲಿಯವರೆಗೆ ಜಾಗತೀಕರಣದ ಹುಚ್ಚು ಹೊಳೆಯಲ್ಲಿ ತೇಲುತ್ತಿರುವ ಈ ಜಗತ್ತಿಗೆ ಬಡತನದ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ, ಇಂದಿಗೂ ಇಲ್ಲ.

ಇವತ್ತಿಗೂ ಭಾರತದ 120 ಕೋಟಿ ಜನಸಂಖೈಯಲ್ಲಿ ಶೇ.70 ರಷ್ಟು ಮಂದಿ ಬಡವರಾಗಿ ಉಳಿದಿದ್ದಾರೆ. ಇದು ವಾಸ್ತವಿಕ ಆಧಾರದ ಸಂಖ್ಯೆ. ಆದರೆ ಸರ್ಕಾರದ ಅಂಕಿ ಅಂಶಗಳಲ್ಲಿ ಶೇ 44 ರಷ್ಟು ಮಾತ್ರ. ಈಗ ಇದು ಶೇ. 37 ಕ್ಕೆ ಇಳಿದಿದೆಯಂತೆ.  ಹೆಬ್ಬೆಟ್ಟಿನ ಸಹಿ ಹಾಕುತಿದ್ದ ಅನಕ್ಷರಸ್ತನಿಗೆ ಅವನ ಹೆಸರು ಬರೆಯಲು ಕಲಿಸಿ ಸಾಕ್ಷರ ಎಂದು ಹಣೆಪಟ್ಟಿ ಕಟ್ಟಿ  ದೇಶದಲ್ಲಿ ಅನಕ್ಷರತೆ ತೊಲಗಿತು ಎಂದು ಅಂತರಾಷ್ಟೀಯ ಮಟ್ಟದಲ್ಲಿ ಡಂಗೂರ ಸಾರಿದ ಕಥೆಯಷ್ಟು ಸುಲಭವಲ್ಲ ಈ ಸಂಗತಿ. ಭಾರತದ ಬಡ ಬೊರೇಗೌಡ ಅವಿದ್ಯಾವಂತ ಅಥವಾ ವಿದ್ಯಾವಂತ ಯಾವ ವರ್ಗಕ್ಕೆ ಸೇರಿದರೂ ಗಳಿಸುವುದು ಇಲ್ಲವೇ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ನಿಜವಾದ ಬಡವನನ್ನು ಬಡವನಲ್ಲವೆಂದು ಘೋಷಿಸಿ ಅವನ ಸವಲತ್ತುಗಳನ್ನು ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಅಮಾನುಷ ಕೃತ್ಯ.

ಈ ಕಾರಣಕ್ಕಗಿಯೆ ಪತ್ರಕರ್ತ ಪಿ.ಸಾಯಿನಾಥ್ ಕಳೆದ 20 ವರ್ಷಗಳಲ್ಲಿ ನಮ್ಮ ಅರ್ಥಶಾಸ್ರ ಮತ್ತು ಅರ್ಥಶಾಸ್ರಜ್ಞರುಗಳ ಯಶಸ್ಸ್ಸು ಎಂದರೆ, ಜನಸಾಮಾನ್ಯರ ಬದುಕಿಗೆ ಸಂಬಂಧವಿರದಂತೆ ಅರ್ಥವ್ಯವಸ್ಥೆಗಳನ್ನು ರೂಪಿಸಿರುವುದು ಎಂದು ಗೇಲಿ ಮಾಡಿದ್ದಾರೆ.

ತೆಂಡೂಲ್ಕರ್ ಸಮಿತಿಯ ಆಧಾರದ ಮೇಲೆ ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಜೊತೆಗೆ ಈ ಅಂಕಿ ಅಂಶ ಬದಲಾಗುವ ಸಾಧ್ಯತೆ ಕೂಡ ಇದೆ. ಭಾರತದ ನಾಗರೀಕ ತೆಗೆದುಕೊಳ್ಳುವ ಆಹಾರದ ಪ್ರಮಾಣದ ಆಧಾರದ ಮೇಲೆ ಆಂದರೆ, ಮನುಷ್ಯನೊಬ್ಬನಿಗೆ  ದಿನವೊಂದಕ್ಕೆ ನಗರ ಪ್ರದೇಶದಲ್ಲಿ 2100 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲೋರಿ ಗಳಷ್ಟು ಪ್ರಮಾಣದ ಆಹಾರದ ಅಗತ್ಯವಿದೆ. ಸಧ್ಯ ಭಾರತದಲ್ಲಿ1100 ರಿಂದ  1600 ರಷ್ಟು ಕ್ಯಾಲೋರಿ ಅಹಾರ ಮಾತ್ರ ದೊರೆಯುತ್ತಿದೆ. ಇವತ್ತಿಗೂ ಹಸಿವಿನಿಂದ ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಮಕ್ಕಳು ಭಾರತದಲ್ಲಿ ಸಾಯುತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗದ ವರದಿಯಲ್ಲಿ ತಿಳಿಸಲಾಗಿದೆ. ಈವರೆಗೆ 2ಲಕ್ಷದ 45 ಸಾವಿರದ ಅಧಿಕ ರೈತರು ಸಾವಿಗೆ ಶರಣಾಗಿದ್ದಾರೆ. ಇಂತಹ ಕಟು ವಾಸ್ತವ ಸಂಗತಿಗಳು ನಮ್ಮೆದುರು ಇದ್ದಾಗಲೂ ಕೂಡ ಅಂತರಾಷ್ಟೀಯ ಸಮುದಾಯದೆದುರು ಭಾರತದಲ್ಲಿ ಬಡತನವಿಲ್ಲ ಎಂದು ತೋರ್ಪಡಿಸಿಕೊಳ್ಳಲು ಈ ನಾಟಕದ ಅವಶ್ಯಕತೆ ಇರಲಿಲ್ಲ. ಇಲ್ಲಿಯ ಬಡವನೊಬ್ಬ ಸಾಯಲು ನಿರ್ಧರಿಸಿ ವಿಷ ಕೊಳ್ಳಲು ಹೋದರೆ, ಮಾರುಕಟ್ಟೆಯಲ್ಲಿ ಆತನಿಗೆ  26 ರೂಪಾಯಿಗೆ ವಿಷ ಕೂಡ ಸಿಕ್ಕುವುದಿಲ್ಲ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಅರ್ಥಶಾಸ್ರಜ್ಞೆ ಉತ್ಸಾ ಪಟ್ನಾಯಕ್ ವರ್ತಮಾನದ ಬೆಲೆ ಸೂಚ್ಯಂಕ ಆಧರಿಸಿ ಆಹಾರಕ್ಕಾಗಿ ಕನಿಷ್ಠ ಗ್ರಾಮಾಂತರ ಪ್ರದೇಶದಲ್ಲಿ 36 ರೂಪಾಯಿಗಳು, ನಗರ ಪ್ರದೇಶದಲ್ಲಿ 60 ರೂಪಾಯಿಗಳನ್ನು ಮನುಷ್ಯನೊಬ್ಬ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ.

ಈ ದೇಶದ ಅಸಮಾನತೆಯ ಬಗ್ಗೆ ಎಲ್ಲಗೂ ತಿಳಿದಿದೆ. ಜಿಂದಾಲ್ ಸಮೂಹದ ಅಧ್ಯಕ್ಷ ನವೀನ್ ಜಿಂದಾಲ್ ವಾರ್ಷಿಕವಾಗಿ 69 ಕೋಟಿ, ರಿಲೆಯನ್ಸ್ ಸಮೂಹದ ಮುಖೇಶ್ ಅಂಬಾನಿ 42 ಕೋಟಿ, ಅನಿಲ್ ಅಂಬಾನಿ 35 ಕೋಟಿ ಸಂಬಳ ಪಡೆಯುತಿದ್ದಾರೆ. ನಮ್ಮ ಕೆಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ತಿಂಗಳಿಗೆ ಪ್ರವಾಸ ಭತ್ಯ, ಮನೆಬಾಡಿಗೆ ಭತ್ಯ ಹೊರತುಪಡಿಸಿ, 1ಲಕ್ಷದ 20 ಸಾವಿರ ಸಂಬಳ ಪಡೆಯುತಿದ್ದಾನೆ.

ಇದೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಕನಿಷ್ಟ 100 ಕೂಲಿ ನಿಗದಿಪಡಿಸಿರುವಾಗ , ಆಹಾರಕ್ಕಾಗಿ 26 ರುಪಾಯಿಯನ್ನು ಹೇಗೆ ನಿರ್ಧರಿಸಿತು?

ಮುಕ್ತ ಮಾರುಕಟ್ಟೆಯ ಪ್ರಭುತ್ವದ ಈ ಜಗತ್ತಿನಲ್ಲಿ ಬಡವರಿಗೆ ನೀಡುವ ಉಚಿತ ಶಿಕ್ಷಣ ಆರೋಗ್ಯ, ಸಬ್ಸಿಡಿಯುಕ್ತ ಆಹಾರಧಾನ್ಯ ಎಲ್ಲವೂ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಕೂಸುಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟೀಯ ನಿಧಿ  ಸಂಸ್ಥೆ ಇವುಗಳ ಕೆಂಗಣ್ಣಿಗೆ ಗುರಿಯಾಗಿವೆ. ಭಾರತ ಈಗ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಬೇಕಾಗಿದೆ. ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ ಇದಾಗಿದೆ. 12 ನೇ ಪಂಚವಾರ್ಷಿಕ ಯೋಜನೆಯ ರೂಪು ರೇಷೆಗಳನ್ನು ಗಮನಿಸಿದರೆ, ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳಶಾಹಿಗಳ  ಮಾರುಕಟ್ಟೆಯ ಪ್ರಭುತ್ವಕ್ಕೆ ಬಲಿ ಕೊಡುವ ಸಂಚು ನಡೆದಿದೆ ಎಂದು ಊಹಿಸಬಹುದು.

1990 ರ ದಶಕದಲ್ಲಿ ಜಾಗತೀರಣಕ್ಕೆ ಬಾರತದ ಹೆಬ್ಬಾಗಿಲನ್ನು ತೆರೆದವರು ಇದೇ ಮನಮೋಹನ್ ಸಿಂಗ್. ಜಾಗತೀಕರಣದ ಒಳಿತು, ಕೆಡಕುಗಳು ಏನೇ ಇರಲಿ, ವೈರುಧ್ಯಗಳನ್ನು ಸೃಷ್ಟಿಸಿ, ಉಳ್ಳವರ ಭಾರತ ಮತ್ತು ನರಳುವವರ ಭಾರತ ಎಂಬ ಎರಡು ಭಾರತ ಗಳು ಸೃಷ್ಟಿಯಾಗಿರುವುದು ಸತ್ಯ. ಬಡವರ ನಿರ್ಮೂಲನೆ ಮಾಡುವುದರ ಮೂಲಕ ಬಡತನ ನಿರ್ಮೂಲನೆ ಮಾಡುವುದು ಈಗಿನ ಗುರಿಯಾಗಿದೆ.

ಇಲ್ಲಿ ಗಾಳಿ, ನೀರು, ಸೇರಿದಂತೆ ಎಲ್ಲವೂ ಮಾರಾಟದ ಸರಕುಗಳಾಗಬೇಕು. ಆಗಲೇ ಜಾಗತೀಕರಣಕ್ಕೆ, ಹಾಗೂ ಅದರ ಪ್ರತಿಪಾದಕರಿಗೆ ನೆಮ್ಮದಿ.

ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!

-ಪರಶುರಾಮ ಕಲಾಲ್.

ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ 60 ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.

ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ, ಇತಿಹಾಸ ನಿರ್ಮಾಣಕಾರರು ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.

ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.

ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೆ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಸ್ಸು ಬಂದಾಗ ಇನ್ನೂ ಸೇತುವೆ ಯಾಕೆ ಬೇಕು, ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.

ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.

ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ, ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು 30ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.

ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ವಿಹಾರ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.

ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?

ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು (ಪತ್ರಕರ್ತನಾಗಿದ್ದರಿಂದ). ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.

ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, “ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.” ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾದದ ನಗೆಯಲ್ಲಿಯೇ “ನಿಮ್ಮಂತವರ ಅಗತ್ಯ ಹಂಪಿಗೆ ಇದೆ,” ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.

“ಕಾಲಿದ್ದವರು ಹಂಪಿಯನ್ನು ನೋಡಬೇಕು,” ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.

ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.

ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. 12 ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ಅಂತೂ ಕೊನೆಗೆ ಬಂದಿರಲ್ಲ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿಬಿಟ್ಟು ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. “ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ,” ಎನಿಸಿಬಿಟ್ಟಿತು.

(ಚಿತ್ರಗಳು: ಲೇಖಕರದು)