Monthly Archives: November 2011

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.

ಕಾರ್ಮಿಕರ ದ್ವನಿಯಾಗಬಲ್ಲ “ಲೇಬರ್ ಲೈನ್” ಪತ್ರಿಕೆ

-ಅರುಣ್ ಜೋಳದಕೂಡ್ಲಿಗಿ

ಈಚೆಗೆ ಕಾರ್ಮಿಕ ಪರ ಚಟುವಟಿಕೆಗಳು ಮುಖ್ಯವೆನ್ನಿಸುವಂತೆ ಕಾಣುತ್ತಿಲ್ಲ. ಕಾರಣ ಕಾರ್ಮಿಕರ ಸಮಸ್ಯೆಗಳು ಬಗೆಹರಿದು ಸುಖಿಗಳಾಗಿದ್ದಾರೆಂದಲ್ಲ, ಬದಲಿಗೆ ಕಾರ್ಮಿಕರು ದೊಡ್ಡ ದ್ವನಿ ಎತ್ತದಂತೆ ವ್ಯವಸ್ಥೆ ಕಟ್ಟಿಹಾಕಿದೆಯಷ್ಟೆ. ಈ ಮಧ್ಯೆಯೇ ಕಾರ್ಮಿಕರ ಪರ ಕಾಳಜಿ ಇಟ್ಟುಕೊಂಡು ಹೋರಾಟ, ಪ್ರತಿಭಟನೆಗಳನ್ನು ಸದ್ದಿಲ್ಲದೆ ಮಾಡುವ ಕೆಲವಾದರೂ ಪ್ರಾಮಾಣಿಕರು  ನಮ್ಮ ನಡುವೆ ಇದ್ದಾರೆ. ಅಂತಹ ಕೆಲವರ ಪ್ರಯತ್ನವೇ “ಲೇಬರ್ ಲೈನ್” ಎನ್ನುವ ಪತ್ರಿಕೆ.

ಜಾತಿಗೊಂದು ಜಾತಿವಾದಿ ಪತ್ರಿಕೆಗಳು ಹುಟ್ಟುತ್ತಿರುವ ಈ ಕಾಲದಲ್ಲಿ ಜಾತಿಯಾಚೆ ದುಡಿವ ವರ್ಗವನ್ನು ಆಧರಿಸಿ ಪತ್ರಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ. ಹಿರಿಯ ನ್ಯಾಯವಾದಿಗಳಾದ ಮುರುಳೀಧರ್ ಅವರ ಗೌರವ ಸಂಪಾದಕತ್ವದಲ್ಲಿ, ಎ.ಆರ್.ಎಂ. ಇಸ್ಮಾಯಿಲ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪತ್ರಿಕೆ ಸಿದ್ದವಾಗುತ್ತಿದೆ. ಬಿ.ಪೀರ್‍‌ಭಾಷಾ, ಜಿ.ಎಂ.ಗುರುಬಸವರಾಜ, ಪರುಶುರಾಮ ಕಲಾಲ್, ಮತ್ತೀಹಳ್ಳಿ ಬಸವರಾಜ್ ರ ಸಂಪಾದಕ ಮಂಡಳಿ ಈ ಪತ್ರಿಕೆಯ ಬೆನ್ನಿಗಿದೆ.

ಪ್ರತೀ ಸಂಚಿಕೆಗೆ ಕಾರ್ಮಿಕರ ಒಂದು ವರ್ಗವನ್ನು ಆಧರಿಸಿ ರೂಪಿಸುವ ಯೋಜನೆ ಇದೆ. ಅಕ್ಟೋಬರ್ ಮೊದಲ ಸಂಚಿಕೆಯನ್ನು ಕಟ್ಟಡ ಕಾರ್ಮಿಕರನ್ನು ಆಧರಿಸಿ ಸಿದ್ದಗೊಳಿಸಲಾಗಿದೆ. ಇಲ್ಲಿ ಕಾರ್ಮಿಕರಿಗೆ ಕಾನೂನಿನ ಅರಿವು, ಕಾರ್ಮಿಕ ಹೋರಾಟಗಾರರ ಮಾತುಕತೆ, ಕಾರ್ಮಿಕ ಜಾಗೃತಿಯ ವೈಚಾರಿಕ ಬರಹಗಳನ್ನು ಸದ್ಯ ಈ ಪತ್ರಿಕೆ ಒಳಗೊಂಡಿದೆ.

ಇದು ಬಳ್ಳಾರಿಯ ಲೇಬರ್ ರಿಸೋರ್ಸ್ ಸೆಂಟರ್ ನಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆ ಇನ್ನಷ್ಟು ವ್ಯಾಪಕತೆಯನ್ನು ಹೆಚ್ಚಿಸಿಕೊಂಡು, ಶ್ರಮಿಕ ಲೋಕದ ಸಂಗತಿಗಳನ್ನು, ಕಾರ್ಮಿಕರ ಆತ್ಮಕಥಾನಕದ ಭಾಗಗಳನ್ನು ಒಳಗೊಳ್ಳಬೇಕಿದೆ. ಇದು ಕೇವಲ ಕಾರ್ಮಿಕ ವರ್ಗದ ಕೂಗು ಮಾತ್ರವಾಗದೆ, ಶಕ್ತಿಯಾಗುವಂತೆ ಇದನ್ನು ರೂಪಿಸಲು ಅವಕಾಶಗಳಿವೆ. ಅಂತಹ ಸಾದ್ಯತೆಯೆಡೆಗೆ ಲೇಬರ್ ಲೈನ್ ಸಾಗಲೆಂದು ಹಾರೈಸೋಣ.

ಆಸಕ್ತರು,
ಲೇಬರ್ ಲೈನ್ ಕನ್ನಡ ಮಾಸಿಕ, ಮೇಲ್ಮಹಡಿ, ಸಪ್ತಗಿರಿ ಕಾಂಪ್ಲೆಕ್ಸ್, ಕೆ.ಸಿ.ರಸ್ತೆ, ಬಳ್ಳಾರಿ-583101, ದೂರವಾಣಿ: 08392-271090, labourlinekannada@gmail.com
ವಿಳಾಸಕ್ಕೆ ಸಂಪರ್ಕಿಸಬಹುದು.

ಅನಾರೋಗ್ಯ, ವರ್ತಮಾನ.ಕಾಮ್, ಕೈಜೋಡಿಸಬೇಕಾದ ಸಮಯ

ಸ್ನೇಹಿತರೆ,

ಕೆಲವೊಂದು ವಿಚಾರಗಳನ್ನು ಹೇಳಬೇಕಿದೆ. ಇದು “ವರ್ತಮಾನ.ಕಾಮ್”ಗೆ ಸಂಬಂಧಿಸಿದ್ದಾದ್ದರಿಂದ ಒಂದಷ್ಟು ವೈಯಕ್ತಿಕ ವಿಚಾರಗಳಿದ್ದರೂ ಇಲ್ಲಿ ಹೇಳುವುದು ಸೂಕ್ತ.

ಹೀಗಾಗುತ್ತದೆ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ. ದೈಹಿಕವಾಗಿ ಸಾಕಷ್ಟು ಗಟ್ಟಿಮುಟ್ಟಾಗಿದ್ದರೂ (ಅದು ಇಪ್ಪತ್ತರ ವಯಸ್ಸಿನ ತನಕ ಮಾಡಿದ ದೈಹಿಕ ದುಡಿಮೆಯ ಫಲ) ನನಗೆ ಕಳೆದ ಹತ್ತಾರು ವರ್ಷಗಳಿಂದ ಸಿಗರೇಟ್ ವಾಸನೆ, ಧೂಳು, ವಾಹನಗಳ ಹೊಗೆಯ ಮಾಲಿನ್ಯದ ಅಲರ್ಜಿ ಇತ್ತು. ಭಾರತಕ್ಕೆ ಬರುತ್ತಿದ್ದ ಪ್ರತಿಸಲವೂ ಇವುಗಳ ಕಾರಣದಿಂದ. ಮುಖ್ಯವಾಗಿ ಪ್ರಯಾಣ ಮತ್ತು ವಾಹನಗಳ ಹೊಗೆಯ ಮಾಲಿನ್ಯದಿಂದಾಗಿ ನೆಗಡಿ-ಕೆಮ್ಮು-ಜ್ವರ ಬರುತ್ತಿತ್ತು. ಸುಮಾರು ಒಂದು ವಾರ ಕಾಲದ ಅನಾರೋಗ್ಯ ಅದು. ಕಳೆದ ವರ್ಷ ವಾಪಸಾದಾಗಿನಿಂದ ಇದು ಎರಡು ತಿಂಗಳಿಗೊಮ್ಮೆ ಪುನರಾವರ್ತನೆ ಆಗುತ್ತಿದ್ದ ಕ್ರಿಯೆ. ಅದೆಷ್ಟು ಸಿಟ್ರಿಜಿನ್ ತಿಂದಿರುವೆನೊ ಲೆಕ್ಕವಿಲ್ಲ. ಇದರಿಂದೆಲ್ಲ ರೋಸಿ ಹೋಗಿ ಬೇಕೆಂತಲೆ ನನ್ನ ದೇಹವನ್ನು ಇನ್ನಷ್ಟು ಪರೀಕ್ಷೆಗೆ ಒಡ್ಡುತ್ತಿದ್ದೆ. ಪರಿಣಾಮವಾಗಿ ಒಂದು ತಿಂಗಳಿನಿಂದ ಆರೋಗ್ಯವಾಗಿದ್ದ ದಿನಗಳೇ ಇರಲಿಲ್ಲ.

ಈ ತಿಂಗಳಿನಲ್ಲಿ ಒಂದಷ್ಟು ಕಡೆ ಓಡಾಟವೂ ಆಗಿತ್ತು. ಬೀದರ್-ಹೈದರಾಬಾದ್-ಹಿರಿಯೂರು-ಮೈಸೂರು-ಕೋಲಾರ, ಹೀಗೆ ಸುತ್ತಾಟ ಈ ಅನಾರೋಗ್ಯದ ನಡುವೆಯೂ ಸಾಗಿತ್ತು. ನಾನಿರುವ ಬಿಟಿಎಂ ಲೇಔಟ್‌ನಲ್ಲಿರುವಷ್ಟು ಸೊಳ್ಳೆಗಳು ಇನ್ನೆಲ್ಲೂ ಇದ್ದ ಹಾಗಿಲ್ಲ. ಆ Aedes aegypti ಎನ್ನುವ ಸೊಳ್ಳೆ ಎಲ್ಲಿ ಯಾವಾಗ ಕಚ್ಚಿತೊ ಗೊತ್ತಿಲ್ಲ. ನನ್ನನ್ನು ಕಚ್ಚುವ ಮೊದಲು ಅದು ಕಚ್ಚಿದ್ದ ಮನುಷ್ಯನ ಗತಿ ಏನಾಗಿದೆಯೊ? ನನ್ನ ನಂತರ ಇನ್ನೆಷ್ಟು ಜನರನ್ನು ಕಚ್ಚಿದೆಯೊ? ಮೊದಲೆ ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ನನ್ನ ದೇಹಕ್ಕೆ ಸೊಳ್ಳೆ ಕಡಿತದಿಂದಾದ ಡೆಂಗಿ ವೈರಸ್ ಅನ್ನು ನಿವಾರಿಸಿಕೊಳ್ಳಲಾಗಿಲ್ಲ. ಈ ಕಾಯಿಲೆಯ incubation ಅವಧಿ 3-14 ದಿನ ಎನ್ನುತ್ತಾರೆ.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಯಡ್ಡಯೂರಪ್ಪ ಮತ್ತು ಸೋಮಣ್ಣನವರ ವಿರುದ್ಧ ಕೇಸು ದಾಖಲಿಸಿದ ಮಾರನೆ ದಿನ ಜ್ವರ ಕಾಣಿಸಿಕೊಂಡಿತು. 102 ರಿಂದ 104 ಫ್ಯಾರನ್‌ಹೀಟ್ ತನಕ ಜ್ವರ. ಯಾವ ಮಾತ್ರೆಗೂ ಕಮ್ಮಿ ಆಗುತ್ತಿರಲಿಲ್ಲ. ಎರಡು ದಿನದ ನಂತರ ಆಸ್ಪತ್ರೆಗೆ ದಾಖಲಾಗಿ ರಕ್ತಪರೀಕ್ಷೆ ನಡೆಸಿದ ನಂತರವೇ ಜ್ವರದ ಕಾರಣ ಗೊತ್ತಾಗಿದ್ದು. ಆ ಜ್ವರದಲ್ಲಿಯೇ 21/11/11ರ ಸೋಮವಾರದಂದು ನೇರವಾಗಿ ಆಸ್ಪತ್ರೆಯಿಂದ ಕೋರ್ಟಿಗೆ ಹೋಗಿದ್ದು. ಅಂದು ಹೋಗದೆ ಇದ್ದಿದ್ದರೆ ಕೇಸು ಮುಂದಕ್ಕೆ ಹೋಗಿ ಮತ್ತೆ ಏನಾಗುತ್ತಿತ್ತು ಎಂದು ಹೇಳುವುದು ಕಷ್ಟ. ಕೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ ಅಲ್ಲಿಯತನಕ ಕಟ್ಟಿಕೊಂಡಿದ್ದ ಕಫ ವಾಂತಿಯಾಗಿ ಬಂತು. ಜ್ವರ ಇನ್ನಷ್ಟು ಏರಿತು. ಆದರೆ ಅಲ್ಲಿಗೆ ನನ್ನ ಬಹುಪಾಲು ಕೆಲಸ ಮುಗಿದಿತ್ತು. ಮಾರನೆ ದಿನ ನ್ಯಾಯಾಧೀಶರು ತನಿಖೆಗೆ ಆದೇಶಿಸಿದರು.

ಆ ಸಮಯದಲ್ಲಿ ಒಟ್ಟು ಆರು ದಿನ ಆಸ್ಪತ್ರೆಯಲ್ಲಿದ್ದೆ. ಬಹಳಷ್ಟು ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ಆಸ್ಪತ್ರೆಯಲ್ಲಿದ್ದ ವಿಷಯ ತಿಳಿದು ಗಾಬರಿ ಆಗಿದ್ದು ಸಹಜ. ಇದೇನು ಭಯದಿಂದ ಹುಟ್ಟಿಕೊಂಡ ಚಳಿಜ್ವರ ಇರಬಹುದೆ ಎಂದು ಒಂದಿಬ್ಬರು ಕೇಳಿದರು ಸಹ. ಮತ್ತೆ ಕೆಲವರು ಯಾರಾದರೂ ಧಾಳಿ ಮಾಡಿದರೇನೊ ಎಂದುಕೊಂಡರು. ಆದರೆ ಹಾಗೇನೂ ಆಗಿರಲಿಲ್ಲ. ಇನ್ನು ಬೆದರಿಕೆ ಕರೆಗಳು. ಮೊದಲ ದಿನ ಒಬ್ಬಾತ ಫೋನ್ ಮಾಡಿ ವಿಚಿತ್ರ ಪ್ರಶ್ನೆ ಕೇಳಿದ್ದ. ಆತ ಯಾವುದೊ ಪುಡಾರಿಯ ಚೇಲಾ ಇದ್ದ ಹಾಗೆ ಇದ್ದಾನೆ. ಏನೇನೊ ಹೆಸರು ಹೇಳಿದ. ನಂತರ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದ ಕಾರಣ ಮತ್ತು ಮಾತನಾಡಿ ಆಯಾಸ ಮಾಡಿಕೊಂಡರೆ ಜ್ವರ ಏರುತ್ತಿದ್ದ ಕಾರಣ ಅನೇಕ ಫೋನ್‌ ಕರೆಗಳನ್ನು ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಯಾರು ಏತಕ್ಕೆ ಕರೆ ಮಾಡಿದ್ದರು ಎಂದು ಸಹ ಗೊತ್ತಿಲ್ಲ. ಹಾಗಾಗಿ ಬೆದರಿಕೆ ಕರೆಗಳ ಬಗ್ಗೆ ಹೌದು ಇಲ್ಲ ಎಂದು ಹೇಳುವುದು ಕಷ್ಟವೆ. ಆದರೆ ಡೆಂಗಿ ಜ್ವರಕ್ಕೂ ಇದ್ಯಾವುದಕ್ಕೂ ಯಾವುದೆ ಸಂಬಂಧ ಇರಲಿಲ್ಲ.

ಈ ಎಲ್ಲಾ ಸಮಯದಲ್ಲಿ ನಮ್ಮ ವರ್ತಮಾನದ ಬಳಗದ ಗೆಳೆಯರು ವೆಬ್‌ಸೈಟನ್ನು ಸಾಧ್ಯವಾದಷ್ಟು ಅಪ್‌ಡೇಟ್ ಮಾಡುತ್ತಲೇ ಇದ್ದರು. ಅವರಿಗೆ ಮತ್ತು ಅವರ ಬದ್ಧತೆಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಅವರಿಲ್ಲದೆ ಹೋಗಿದ್ದರೆ ನಾನು ಆಸ್ಪತ್ರೆಗೂ ಸಹ ಬೇಗ ದಾಖಲಾಗುತ್ತಿರಲಿಲ್ಲ. ಅವರ ಕಾಳಜಿ ನನ್ನ ಸ್ಥಿತಿ ಇನ್ನಷ್ಟು ಹದಗೆಡುವುದನ್ನು ಕಾಲಕಾಲಕ್ಕೆ ನಿಲ್ಲಿಸಿದೆ.

ಜ್ವರ ಒಂದು ಬಿಟ್ಟರೆ ಮಿಕ್ಕ ಡೆಂಗಿ ಜ್ವರದ ಇತರೆ ಅನಾಹುತಕಾರಿ ಪರಿಣಾಮಗಳು ನನ್ನ ಮೇಲೆ ಆಗಲಿಲ್ಲ. ಪ್ಲೇಟ್‌ಲೆಟ್ಸ್ (ರಕ್ತಸ್ರಾವದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ರಕ್ತಕಣಗಳು) ಮಾತ್ರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತ ಹೋದವು. ಕೊನೆಗೆ ಐದು ಪೈಂಟ್ಸ್ ತರಿಸಿ Transfusion ಮಾಡಬೇಕಾಯಿತು. ಮಾರನೆ ದಿನದಿಂದ ಅವುಗಳ ಸಂಖ್ಯೆ ನಿಧಾನಕ್ಕೆ ಏರುತ್ತ ಹೋಯಿತು.

ಈಗ ಆಸ್ಪತ್ರೆಯಿಂದ ಮನೆಗೆ ಬಂದು ನಾಲ್ಕೈದು ದಿನವಾಗಿದೆ. ಆದರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎನ್ನಿಸಿಲ್ಲ. ಮೊದಲ ಮೂರ್ನಾಲ್ಕು ದಿನವಂತೂ ತೀವ್ರ ತುರಿಕೆ. ಡಾಕ್ಟರ್ ಹೇಳುವ ಪ್ರಕಾರ ಅದು ನನಗೆ ಕೊಡಲ್ಪಟ್ಟ ರಕ್ತದ ಪ್ಲೇಟ್‍ಲೆಟ್‌ಗಳಿಂದಾದ ಅಲರ್ಜಿ. ಈಗ ಒಂದೆರಡು ದಿನಗಳಿಂದ ಮತ್ತೆ ನೆಗಡಿ, ಕೆಮ್ಮು, ಗಂಟಲುನೋವು ಆರಂಭವಾಗಿದೆ. ಬಹುಶಃ ಬೆಂಗಳೂರಿನ ಚಳಿಯಿಂದಾಗಿರಬಹುದು. ಸಂಪೂರ್ಣ ಎಂದು ಗುಣಮುಖನಾಗುತ್ತೇನೆ ಗೊತ್ತಿಲ್ಲ. ಹಿರಿಯ ಗೆಳೆಯರೊಬ್ಬರು ಹೇಳಿದ ಪ್ರಕಾರ ಅವರಿಗೆ ಡೆಂಗಿ ಜ್ವರ ಬಂದನಂತರ ಮಲೇರಿಯಾ ಬಂದಿತ್ತಂತೆ. ಈ ಜ್ವರ ಬಂದ ಎಲ್ಲರದೂ ಒಂದಲ್ಲ ಒಂದು ಕತೆ. ಯಾರಿಗೂ ಇದು ಜೀವನ ಸಹನೀಯಗೊಳಿಸಿಲ್ಲ. ದಯವಿಟ್ಟು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ.

ಈ ಎಲ್ಲಾ ಕಾರಣಗಳಿಂದಾಗಿ “ವರ್ತಮಾನ” ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಗಳು ಸ್ವಲ್ಪ ಕುಂಟಿತವಾಗಿವೆ. ಅನೇಕ ವಿಚಾರಗಳ ಬಗ್ಗೆ ಬರೆಯಬೇಕಿತ್ತು, ಬರೆಸಬೇಕಿತ್ತು. ದಾಖಲೆಗಳು ಸಿಗುತ್ತಲೆ ಇವೆ. ಈ ಮಧ್ಯೆಯೂ ಜಗದೀಶ್ ಕೊಪ್ಪ, ಶ್ರೀಪಾದ್ ಭಟ್, ಪರಶುರಾಮ್ ಕಲಾಲ್ ಮತ್ತು ಬಳಗದ ಸ್ನೇಹಿತರು ಗಂಭೀರ ವಿಚಾರಗಳನ್ನು ಚರ್ಚೆಗೆ ಒಡ್ಡುತ್ತಲೇ ಇದ್ದಾರೆ. ಮಿಕ್ಕ ಸ್ನೇಹಿತರೂ ಸಹ ಕೈಜೋಡಿಸಬೇಕಾದ ಸಂದರ್ಭ ಇದೇನೆ. ಅದೇ ಇಲ್ಲಿ ನಾನು ಹೇಳಬೇಕೆಂದುಕೊಂಡ ಮುಖ್ಯ ವಿಷಯ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಮಡೆಸ್ನಾನ ಎಂಬ ವಿಕೃತಿ

 -ಡಾ. ಎನ್ ಜಗದೀಶ್ ಕೊಪ್ಪ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಮಡೆಸ್ನಾನ ಎಂಬ ಅನಾಗರೀಕ ಸಂಸ್ಕೃತಿಯ ಆಚರಣೆ ಇಡೀ ನಾಗರೀಕ ಜಗತ್ತು ತಲೆ ತಗ್ಗಿಸುವಂತಹದ್ದು. ಪುರೋಹಿತಶಾಹಿ ಮನಸ್ಸುಗಳು ವರ್ತಮಾನದ ಜಗತ್ತನ್ನು 18 ನೇ ಶತಮಾನಕ್ಕೆ ಕೊಂಡೊಯ್ಯುತ್ತಿರುದು ನಿಜಕ್ಕೂ ಇದೊಂದು ಸಾಂಸ್ಕೃತಿಕ ದಿಗ್ಭ್ರಮೆ.(ಕಲ್ಚರಲ್ ಶಾಕ್)

ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳು ಎಂಬ ಆಧಾರದ ಮೇಲೆ ಸರ್ಕಾರ ಇಂತಹ ಅಮಾನುಷ, ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವುದು ಸರ್ಕಾರದ ಮನೋ ಇಂಗಿತವನ್ನು ಅನಾವರಣಗೊಳಿಸಿದೆ.

ಈ ಹಿಂದೆ ಈ ದೇಶದ ಉದ್ದಗಲಕ್ಕೂ ಇದ್ದ ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ಸತಿಸಹಗಮನ ಇವೆಲ್ಲವೂ ಆಯಾ ಸಮುದಾಯಗಳ ಧಾರ್ಮಿಕ ನಂಬಿಕೆಗಳೇ ಆಗಿದ್ದವು. ಧಾರ್ಮಿಕ ಆಚರಣೆಯ ನೆಪದಲ್ಲಿ ಇಂತಹ ಅನಿಷ್ಟ ಪದ್ಧತಿಗಳನ್ನು ಮತ್ತೇ ಆಚರಣೆಗೆ ತರಲು ಸಾಧ್ಯವೆ?

ಇತಿಹಾಸದ ಪ್ರಜ್ಙೆ ಇಲ್ಲದವರು ಮಾತ್ರ ಇಂತಹ ಅನಾಗರೀಕ ಜಗತ್ತಿನಲ್ಲಿ ಬದುಕ ಬಲ್ಲರು. ಪೇಜಾವರ ಸ್ವಾಮೀಜಿ ಹಾಗೂ ಸಚಿವ ವಿ.ಎಸ್. ಆಚಾರ್ಯ ಇವುಗಳನ್ನು ಸಮರ್ಥಿಸುವ ಬಗೆ ನೋಡಿದರೆ, ನಾಳೆ ಇವರು ಭವಿಷ್ಯದಲ್ಲಿ ಎಂಜಲು ಎಲೆ ಮಾತ್ರವಲ್ಲ, ಬ್ರಾಹಣರ ಹೇಸಿಗೆಯ ಮೇಲೂ ಈ ನೆಲದ ಶೂದ್ರ ಮತ್ತು ದಲಿತರನ್ನ ಉರುಳಾಡಿಸಬಲ್ಲರು ಎನಿಸುತ್ತಿದೆ.

19 ನೇ ಶತಮಾನದ ಆದಿಯಿಂದ ಹಿಡಿದು, ರಾಜಾರಾಮ ಮೋಹನರಾಯ್, ನಾರಾಯನಗುರು, ಮಹಾತ್ಮ ಪುಲೆ, ಸಾಹು ಮಹರಾಜ್, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಇಂತಹ ಮಹಾತ್ಮರ ಸಾಮಾಜಿಕ ಸುಧಾರಣೆಗಳಿಗೆ ಯಾವುದೇ ಅಳುಕಿಲ್ಲದೆ ತಿಲಾಂಜಲಿ ಇತ್ತು, ನಾಚಿಕೆಯಿಲ್ಲದೆ ಅನಿಷ್ಟ ಪದ್ಧತಿಯನ್ನ  ಸಮರ್ಥಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ, ಇವರುಗಳಿಗೆ ಆತ್ಮಸಾಕ್ಷಿ ಇಲ್ಲವೆನಿಸುತ್ತದೆ. ಅತ್ಯಂತ ನೋವಿನ, ಹಾಗೂ ಸಿಟ್ಟುಗಳ ಈ ಕ್ಷಣದಲ್ಲಿ ಅಲ್ಲಮನ ವಚನ ನೆನಪಾಗುತ್ತಿದೆ.

ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೆನೊ, ಭಾವ ಬಯಲಾಗದನ್ನಕ್ಕರ?
ಭಸ್ಮವ ಹೂಸಿದಡೇನೊ,
ಕರುಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು.

ಹಿಂದು ಪರ ಸಂಘಟನೆಗಳ ಮರೆಮಾಚಿದ ಎಲ್ಲಾ ನಿಲುವಳಿಗಳಿಗಳನ್ನ ( ಹಿಡನ್ ಅಜೆಂಡ) ವೈವಸ್ಥಿತವಾಗಿ ಜಾರಿಗೆ ತರುತ್ತಿವ ಈ ಸರ್ಕಾರಕ್ಕೆ ಗೋಮಾಂಸ ಭಕ್ಷಣೆ ದಲಿತರ, ಹಿಂದುಳಿದ ಸಮುದಾಯದ ಆಹಾರ ಸಂಸ್ಕೃತಿ, ಅದೇ ರೀತಿ ದೇವಸ್ಥಾನದಲ್ಲಿ ಕುರಿ ಕೋಳಿ ಮೇಕೆ ಕಡಿಯುವುದು ಶೂದ್ರರ ಧಾರ್ಮಿಕ ಹಕ್ಕು ಎಂದು ಏಕೆ ಅರ್ಥವಾಗುತ್ತಿಲ್ಲ? ಅವುಗಳ ಮೇಲೆ ನಿಷೇಧ ಹೇರುವ ಇವರಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ? ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನು ಅರ್ಥೈಸಿಕೊಂಡು ಬರುತ್ತಿರುವ ಈ ವೈದಿಕ ಮನಸ್ಸುಗಳಿಗೆ ಕೇಳಬೇಕಾಗಿದೆ. ಹೊಟ್ಟೆಗೆ ಏನು ತಿನ್ನುತಿದ್ದೀರಿ? ಎಂದು. ಏಕೆಂದರೆ, ಅನ್ನ ತಿನ್ನುವವರು ಮಾಡುವ ಅಥವಾ ಸಮರ್ಥಿಸುವ ಕ್ರಿಯೆ ಇದಲ್ಲ.

ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? ಕನ್ನಗಳ್ಳಂಗೆ ಕರುಳುಂಟೆ?

ಇದು ಅಲ್ಲಮ 11ನೇ ಶತಮಾನದಲ್ಲಿ ಎತ್ತಿದ ಪ್ರಶ್ನೆ, ಈಗ ಇದು ನನ್ನದೂ ಕೂಡ ಹೌದು.

ಜೀವನದಿಗಳ ಸಾವಿನ ಕಥನ – 13

– ಜಗದೀಶ್ ಕೊಪ್ಪ

ಹರಿಯುವ ಎಲ್ಲಾ ನದಿಗಳೂ ಸ್ವಚ್ಛವಾದ ತಿಳಿನೀರನ್ನು ಒಳಗೊಂಡಿರುವುದಿಲ್ಲ. ಜಗತ್ತಿನ ಎಲ್ಲಾ ನದಿಗಳೂ ನೀರಿನ ಜೊತೆ ಹೂಳನ್ನು ಹೊತ್ತು ಹರಿಯುವುದು ಸಹಜ. ಅದರಲ್ಲೂ ಬಹುತೇಕ ನದಿಗಳ ನೀರು ಕಲ್ಮಶ ಹಾಗೂ ಮಣ್ಣಿನಿಂದ ಕೂಡಿದ್ದು, ಇವುಗಳಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳು ನೀರು ಸಂಗ್ರಹದ ಜಲಾಶಯಗಳಾಗುವ ಬದಲು ಹೂಳು ಸಂಗ್ರಹ ಗುಂಡಿಗಳಾಗಿವೆ. ಹಾಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗುವ ಹೂಳು ಎಲ್ಲಾ ಸರಕಾರಗಳಿಗೆ, ತಂತ್ರಜ್ಞರಿಗೆ ಇಂದಿಗೂ ದೊಡ್ಡ ಸವಾಲಾಗಿದೆ.

ಅಮೆರಿಕಾದ ಜಾರ್ಜ್  ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಖಲೀದ್ ಮಹಮದ್ ಅವರ ಪ್ರಕಾರ, ಪ್ರತಿ ವರ್ಷ ಐವತ್ತು ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದೆ. 1990 ರಲ್ಲೇ ಜಗತ್ತಿನಾದ್ಯಂತ 1,300 ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಲಾಶಯಗಳಲ್ಲಿ ತುಂಬಿಹೋಗಿತ್ತು. ಇದೀಗ ಎರಡು ದಶಕಗಳ ನಂತರ ದುಪ್ಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಬಹಳಷ್ಟು ಜಲಾಶಯಗಳ ಆಯುಷ್ಯ ಅವುಗಳ ಗಾತ್ರ, ನೀರು ಶೇಖರಿಸುವ ಸಾಮಥ್ರ್ಯಗಳಿಂದ ನಿರ್ಧಾರವಾಗುತ್ತದೆ. ಸಣ್ಣ ಜಲಾಶಯಗಳು ಎರಡು ಮೂರು ದಶಕಗಳಲ್ಲೇ ಹೂಳಿನಿಂದ ತುಂಬಿಹೋಗಿರುವ ಉದಾಹರಣೆಗಳು ಹಲವಾರಿವೆ.

ಚೀನಾದ ಹಳದಿ ನದಿ

ಸಾಮಾನ್ಯವಾಗಿ ಹರಿಯುವ ನದಿಗಳ ನೀರಿನಲ್ಲಿರುವ ಹೂಳಿನ ಪ್ರಮಾಣ ಶೇ.0.2ರಿಂದ 0.5ರವರೆಗೆ ಇದ್ದು, ಚೀನಾದ ನದಿಗಳಲ್ಲಿ ಮಾತ್ರ ಈ ಪ್ರಮಾಣ 2.3ರಷ್ಟಿದೆ. ಜಲಾಶಯದ ಹೂಳು ಮತ್ತು ನದಿನೀರಿನ ಕಲ್ಮಶ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿದೆ. ಬಹುತೇಕ ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸುವ ಕೊಳವೆಗಳು, ಟರ್ಬನ್ ಇಂಜಿನ್ ಬ್ಲೇಡುಗಳು ಕೆಸರಿನಿಂದ ಕಲ್ಮಶವಾದ ನೀರಿನಿಂದಾಗಿ ತುಕ್ಕು ಹಿಡಿಯುತ್ತಿದ್ದು, ಇವುಗಳ ದುರಸ್ತಿ ವೆಚ್ಚ ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.

ಜಗತ್ತಿನ ಅತ್ಯಂತ ಕಲ್ಮಷಯುಕ್ತ ನದಿಯೆಂದೇ ಪರಿಗಣಿಸಿರುವ ಚೀನಾದ ಹಳದಿ ನದಿ ಉತ್ತರ ಚೀನಾದಿಂದ ಹರಿದು ಬರುವಾಗ ನೀರಿಗಿಂತ ಹೆಚ್ಚಾಗಿ ಕೆಸರನ್ನೇ ತನ್ನೊಡಲೊಳಗೆ ಸಾಗಿಸುತ್ತದೆ. ಇದರ ಪ್ರಮಾಣ ಗತ್ತಿನ ಇತರೆ ನದಿಗಳಿಗಿಂತ ಶೇ.9ರಷ್ಟು ಹೆಚ್ಚಾಗಿದೆ. 1957ರಲ್ಲಿ ಅಂದಿನ ಸೋವಿಯತ್ ಸರಕಾರದ ತಾಂತ್ರಿಕ ನೆರವಿನಿಂದ ಹಳದಿನದಿಯ ಕೆಳ ಪಾತ್ರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಮೂರು ಗೇಟಿನ ಜಾರ್ಜ್  ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪರಿಸರ ತಜ್ಞರು, ಅತಿ ಶೀಘ್ರದಲ್ಲೇ ಹೂಳು ತುಂಬುವ ಸಂಭವ ಇದೆ ಎಂದು ಎಚ್ಚರಿಸಿದರೂ, ಸರಕಾರ ಇವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 1960ರಲ್ಲಿ ಅಣೆಕಟ್ಟು ಮುಕ್ತಾಯಗೊಂಡು, 1962ರ ವೇಳೆಗೆ 50 ಮಿಲಿಯನ್ ಟನ್ ಹೂಳು ಶೇಖರವಾಗಿತ್ತು. ಹೂಳು ತುಂಬಿದ ಕಾರಣ ಜಲಾಶಯದ ಹಿನ್ನೀರಿನ ವಿಸ್ತೀರ್ಣವೂ ಹೆಚ್ಚಾಯಿತು. ಆಗ ಎಚ್ಚೆತ್ತುಗೊಂಡ ಚೀನಾ ಸರಕಾರ 1962ರಿಂದ 1973ರವರೆಗೆ ಸತತವಾಗಿ, ಅಣೆಕಟ್ಟಿನ ವಿನ್ಯಾಸವನ್ನು ಬದಲಿಸಿ, ಶೇಖರವಾಗುವ ಹೂಳು ಪ್ರವಾಹ ಸಂದರ್ಭದಲ್ಲಿ ಹೊರಹೋಗುವಂತೆ ಕಾಮಗಾರಿಯನ್ನು ಮಾಡಿತು. ಪ್ರವಾಹ ನಿಯಂತ್ರಣದ ಜೊತೆಗೆ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ ಹೂಳಿನ ಪರಿಣಾಮದಿಂದ ಕೇವಲ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಯಿತು.

ಇಂತಹದ್ದೇ ಘಟನೆ ಚೀನಾದ ಯಂಗೊಕ್ಷಿಯಾ ಎಂಬ ನದಿಗೆ 57 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸುವಾಗ  ಮತ್ತೆ ಮರುಕಳಿಸಿತು. 1967ರಲ್ಲಿ ನಿರ್ಮಿಸಲಾಗದ ಈ ಜಲಾಶಯ ಹೂಳಿನಿಂದ ತುಂಬಿಹೋಗಿ, ನೀರಿನ ಶೇಖರಣೆಗಿಂತ ಹೂಳಿನ ಶೇಖರಣೆಯೇ ಈ ಜಲಾಶಯದ ಗುರಿಯೇನೊ ಎಂಬಂತಾಗಿದೆ. ಹೂಳು ಮಿಶ್ರಿತ ನೀರು ಹರಿಯುವ ನದಿಗಳ ಸಂಗತಿ ಹೊಸದೇನಲ್ಲ. ಆದರೆ ನಮ್ಮ ಅಣೆಕಟ್ಟು ತಜ್ಞರು, ಜಗತ್ತಿನ ಎಲ್ಲಾ ನದಿಗಳೂ ಸ್ವಚ್ಛ ತಿಳಿನೀರಿನ ನದಿಗಳೆಂದೇ ಭಾವಿಸಿ ಅಣೆಕಟ್ಟು ನಿರ್ಮಾಣಕ್ಕೆ  ಮುಂದಾಗಿರುವುದೇ ಅಣೆಕಟ್ಟುಗಳ ದುರಂತಕ್ಕೆ ಕಾರಣವಾಗಿದೆ.

ಆಯಾ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣ, ಸವಕಲು ಮಣ್ಣಿನ ನದಿಯ ಇಕ್ಕೆಲಗಳು ನದಿಗಳು ಹೂಳು ತುಂಬಿ ಹರಿಯಲು ಕಾರಣವಾಗಿವೆ. ಹಾಗಾಗಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮುನ್ನ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಅವಶ್ಯಕ. ಜೊತೆಗೆ ಈಗಾಗಲೇ ನಿಮರ್ಿಸಿರುವ ಅಣೆಕಟ್ಟಿನಲ್ಲಿ ಶೇಖರವಾಗಿರುವ ಹೂಳಿನ ಪ್ರಮಾಣವದ ಪರಿಶೀಲಿನೆ ಅಗತ್ಯ. ಕೆಲವು ನದಿಗಳು ಮಳೆಗಾಲದ ಪ್ರವಾಹದಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ಹೂಳು ತುಂಬಿದ ನೀರಿನೊಡನೆ ಹರಿದರೆ, ಹಲವು ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹೂಳಿನಿಂದ ಕೂಡಿದ ನೀರಿನಿಂದಲೇ ಹರಿಯುತ್ತವೆ.

ನದಿಗಳು ಹೂಳು ತುಂಬಿದ ನೀರಿನೊಡನೆ ಹರಿಯಲು ಕಾರಣವೆಂದರೆ, ಅಗ್ನಿಜ್ವಾಲೆ ಮತ್ತು ಪರ್ವತದ ತಪ್ಪಲಿನಲ್ಲಿ ಭೂಕಂಪನದಿಂದಾಗಿ ಉಂಟಾಗುವ ಮಣ್ಣಿನ ಕುಸಿತ. ಅಮೆರಿಕಾ, ಏಷ್ಯಾದ ಭಾರತ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ ನದಿಗಳು ಹೂಳು ತುಂಬಿ ಹರಿದರೆ, ಚೀನಾದ ಬಹುತೇಕ ನದಿಗಳು ವರ್ಷದ ಎಲ್ಲಾ ಋತುಗಳಲ್ಲೂ ಹೂಳಿನೊಡನೆ ಹರಿಯುತ್ತವೆ. ಇಂತಹ ಯಾವುದೇ ಅಂಕಿ ಅಂಶಗಳನ್ನು ಪರಿಗಣಿಸದೇ ಜಗತ್ತಿನ ಶೇ.80ಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗಿವೆ, ಆಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, 1981ರಲ್ಲಿ ನೇಪಾಳದಲ್ಲಿ ನಿರ್ಮಾಣ ವಾದ ಕುಲೇಖಾನಿ ಎಂಬ ಅಣೆಕಟ್ಟು. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಲು ಕನಿಷ್ಠ 75ರಿಂದ 100 ವರ್ಷಗಳು ಬೇಕಾಗಬಹುದೆಂದು ಅಣೆಕಟ್ಟು ತಜ್ಞರು ಊಹಿಸಿದ್ದರು. ಆದರೆ 1993ರಲ್ಲಿ ಅಣೆಕಟ್ಟಿನ ಮೇಲ್ಭಾಗದ ನದಿ ಪಾತ್ರದಲ್ಲಿ ಉಂಟಾದ ಭೂ ಕುಸಿತದಿಂದ ಕೇವಲ 30 ಗಂಟೆಗಳ ಅವಧಿಯಲ್ಲಿ ಜಲಾಶಯದ ಸಾಮರ್ಥ್ಯದ 10ನೇ ಒಂದು ಭಾಗದಷ್ಟು ಹೂಳು ತುಂಬಿತು. ಆ ನಂತರ 19 ವರ್ಷಗಳ ಅವಧಿಯಲ್ಲಿ ಅಂದರೆ 2000 ಇಸವಿಗೆ 114 ಅಡಿ ಎತ್ತರದ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಿ, ಯಾವ ಪ್ರಯೋಜನಕ್ಕೂ ಬಾರದಾಯಿತು.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದ  ಅಣೆಕಟ್ಟು ಯೋಜನೆಯಿಂದ ನೇಪಾಳ ಸರಕಾರ ವಿಶ್ವಬ್ಯಾಂಕ್ ಸಾಲದ ಸುಳಿಗೆ ಸಿಲುಕುವಂತಾಯಿತು. ಇದೇ ರೀತಿ ಜಗತ್ತಿನಾದ್ಯಂತ ವಿಶ್ವಬ್ಯಾಂಕ್ ಹಾಗೂ ಅಮೆರಿಕಾದ ಇಂಟರ್ ಅಮೇರಿಕನ್ ಬ್ಯಾಂಕಿನಿಂದ ಸಾಲಪಡೆದ ದಕ್ಷಿಣ ಅಮೆರಿಕಾದ ರಾಷ್ಟ್ರಗಳು, ಗ್ವಾಟೆಮಾಲಾ, ಹಂಡುರಾಸ್, ಕಾಸ್ಪರಿಕಾ ಮುಂತಾದ ದೇಶಗಳಲ್ಲಿ ನಿರ್ಮಾಣವಾಗಿರುವ ಅಣೆಕಟ್ಟುಗಳು ನಿಷ್ಪ್ರಯೋಜಕವಾಗಿವೆ. 1993ರಲ್ಲಿ ಅಮೆರಿಕಾದ ಆರ್ಮ್  ಕಾರ್ಪ್ಸ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಯಿಂದ ಎಲ್ಸೆಲ್ಫಡಾರ್ನಲ್ಲಿ 135 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣವಾದ   ಸೆರ್ರೆನ್ ಗ್ಯ್ರಾಂಡ್ ಎಂಬ ಅಣೆಕಟ್ಟು ಕೇವಲ 30 ವರ್ಷಗಳಲ್ಲಿ ಹೂಳು ತುಂಬಿ ಕೆಲಸಕ್ಕೆ ಬಾರದಂತಾಯಿತು. ಈ ಜಲಾಶಯದಲ್ಲಿ ಹೂಳು ತುಂಬಲು 350 ವರ್ಷಗಳು ಬೇಕು ಎಂದು ಅಮೆರಿಕ ಸಂಸ್ಥೆ ಯೋಜನಾ ವರದಿಯಲ್ಲಿ ತಿಳಿಸಿತ್ತು. ಭಾರತದ ಪರಿಸ್ಥಿತಿ ಕೂಡ ಮೇಲಿನ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ.

ಭಾರದ 11 ಜಲಾಶಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ಶೇಖರವಾಗುತ್ತಿದೆ. ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟು ಜಲಾಶಯದಿಂದ ಹಿಡಿದು ದಕ್ಷಿಣದ ಆಂಧ್ರದ ನಿಜಾಂಸಾಗಸ್ ಜಲಾಶಯದವರೆಗೆ ಶೇ.135ರಿಂದ ಶೇ.1650 ಪಟ್ಟು ವೇಗದಲ್ಲಿ ಹೂಳು ಶೇಖರವಾಗುತ್ತಿದೆ. ಕೇವಲ ಅಣೆಕಟ್ಟು ನಿಮರ್ಾಣವನ್ನೇ ತಮ್ಮ ಲಾಭದಾಯಕ ದಂಧೆಯನ್ನಾಗಿ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅಣೆಕಟ್ಟುಗಳ ದುರಂತದ ಬಗ್ಗೆಯಾಗಲಿ, ಭವಿಷ್ಯದ ಬಗ್ಗೆಯಾಗಲಿ ಉತ್ತರದಾಯಕತ್ವ ಇಲ್ಲದಿರುವುದು ಕೂಡ ಗಮನಾರ್ಹ ಸಂಗತಿ. ಯಾವುದೇ ನದಿಗೆ ಅಣೆಕಟ್ಟು ನಿಮರ್ಿಸುವ ಮುನ್ನ ನದಿಯ ನೀರಿನ ಹರಿವಿನ ಪ್ರಮಾಣವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅಣೆಕಟ್ಟು ನಿರ್ಮಾಣವಾಗುವ ಸ್ಥಳದ ಮೇಲ್ಭಾಗದ ನದಿಯ ಪಾತ್ರ ಹಾಗೂ ಇಕ್ಕೆಗಳ ಭೂಮಿ, ಅಲ್ಲಿನ ಮಣ್ಣಿನ ಗುಣ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಮಣ್ಣು ಮರಳು ಮಿಶ್ರಿತವಾಗಿದ್ದು ಸವಕಳು ಗುಣ ಹೊಂದಿದ್ದರೆ ನದಿಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದರ ಜೊತೆಗೆ ಅಲ್ಲಲ್ಲಿ ಸಣ್ಣ-ಸಣ್ಣ ಬ್ಯಾರೇಜ್ಗಳನ್ನು ನಿರ್ಮಿಸಿ, ನೀರಿನಲ್ಲಿ ಹರಿಯುವ ಹೂಳನ್ನು ತಡೆಯುವ ಯೋಜನೆಗಳನ್ನು ರೂಪಿಸಬೇಕು.

ಆದರೆ ನದಿಗಳ ಸಹಜ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದೊಂದನ್ನೇ ಗುರಿಯಾಗಿರಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸಾಲ ನೀಡುವ ಏಜನ್ಸಿಗಳಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ. ಏಕೆಂದರೆ ಭವಿಷ್ಯದಲ್ಲಿ ಜಲಾಶಯ ಹೂಳಿನಿಂದ ತುಂಬಿದರೆ ಈ ಸಂಸ್ಥೆಗಳಿಗೆ ಲಾಭ. ಹೂಳು ತೆಗೆಯುವ ಕಾಮಗಾರಿಯನ್ನೂ ಇವರೇ ಪಡೆಯಬಹುದು. ಸಾಮಾನ್ಯವಾಗಿ ಜಲಾಶಯಗಳಲ್ಲಿ ಶೇಖರವಾಗುವ ನೀರಿನ ಪ್ರಮಾಣವನ್ನು ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಜೀವ ಶೇಖರಣೆ(Live storege) ಇನ್ನೊಂದು ನಿರ್ಜೀವ  ಶೇಖರಣೆ(Dead storage) ಅಂದರೆ ಮೊದಲ ಹಂತದಲ್ಲಿ ಶೇಖರವಾಗುವ ನೀರನ್ನು ನೀರಾವರಿ ಇಲ್ಲವೆ ಜಲವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಎರಡನೇ ಹಂತದಲ್ಲಿ ಶೇಖರವಾಗುವ ನೀರು, ಅಣೆಕಟ್ಟಿನ ತೂಬು ಅಥವಾ ನೀರು ಹೊರ ಹೋಗುವ ಗೇಟ್ಗಳ ಕೆಳಹಂತದ ಮಟ್ಟದಲ್ಲಿ ಶೇಖರವಾಗುವ ನೀರು. ಇದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಶೇಖರಣೆಯಾಗಿರುತ್ತದೆ. ಬಹುತೇಕ ಎಲ್ಲಾ ಹಂತಗಳಲ್ಲಿ ಹೂಳು ಈ ನಿಜರ್ೀವ ಶೇಖರಣೆ ಎನ್ನುವ ಜಲಾಶಯದ ತಳಮಟ್ಟದಲ್ಲಿ ಸಂಗ್ರಹವಾಗುವುದರಿಂದ, ಪ್ರವಾಹದಂತಹ ಸಂದರ್ಭದಲ್ಲೂ ಗೇಟ್ ಮೂಲಕ ಹರಿಸುವ ನೀರಿನ ಜೊತೆ ಹೂಳು ಹೊರಹೋಗುವುದಿಲ್ಲ. ನದಿಯ ಕೆಳ ಪಾತ್ರದ ಭೂಮಿಯ ವಿನ್ಯಾಸ ಕೂಡ ಈ ಸಂದರ್ಭದಲ್ಲಿ ಮುಖ್ಯ. ತೀರ ಇಳಿಜಾರಾಗಿದ್ದರೆ, ಜಲಾಶಯದ ಹೂಳು ನೀರಿನ ಜೊತೆ ಹರಿದು ಹೋಗಲು ಸಾಧ್ಯ. ಭೂಮಿ ಸಮತಟ್ಟಾಗಿದ್ದರೆ ಹೂಳು ಹರಿಯುವ ಸಾಧ್ಯತೆ ಬಹಳ ಕಡಿಮೆ.

ಇಂತಹ ಸ್ಥಿತಿಯಲ್ಲಿ  ಹೂಳೂ ತೆಗೆಯುವ ಯಂತ್ರಗಳ ಸಹಾಯದಿಂದ ತೆಗೆಸಬೇಕಾಗುತ್ತದೆ. ನೀರು ಮಿಶ್ರಿತ ಹೂಳನ್ನು ದೊಡ್ಡ ಮಟ್ಟದ ಪಂಪ್ಗಳಿಂದ ಪೈಪ್ ಮೂಲಕ ಹೊರಕ್ಕೆ ಸಾಗಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಕೆಲಸ. ನಮ್ಮನ್ನಾಳುವ ಸರಕಾರಗಳು ಯಾವುದೇ ಒಂದು ಯೋಜನೆ ಆರಂಭಿಸುವ ಮುನ್ನ ಅದರ ಆಳ – ಅಗಲ, ಸಿಗಬಹುದಾದ ಪ್ರತಿಫಲ ಅಥವಾ ಆಗಬಹುದಾದ ನಷ್ಟ ಇವೆಲ್ಲವನ್ನೂ ಎಲ್ಲಾ ಕೋನಗಳಿಂದ ಗ್ರಹಿಸಿ ವಿಶ್ಲೇಷಿಸಬೇಕು. ಜೊತೆಗೆ ನೈಸಗರ್ಿಕವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಉಂಟಾಗುವ ಪರಿಣಾಮಗಳನ್ನೂ ಗ್ರಹಿಸಬೇಕು. ಇವುಗಳ ವಿವೇಚನೆ ಇಲ್ಲದೆ ಜಾಗತಿಕವಾಗಿ ಕೈಗೊಳ್ಳುವ ಅನೇಕ ಬೃಹತ್ ಯೋಜನೆಗಳು ಅಭಿವೃದ್ಧಿ ಹೆಸರಿನ ಅವಘಡಗಳಾಗುತ್ತವೆ ಅಷ್ಟೆ.

( ಮುಂದುವರಿಯುವುದು)