Daily Archives: November 7, 2011

ನ್ಯಾ.ಕಟ್ಜು ಅವರ ಮಾತಿನಲ್ಲಿ ಟೀಕಿಸುವಂತಹ ಕಟುವಾದ್ದೇನಿದೆ?

– ಲೋಕವಿರೊಧಿ

ಪ್ರೆಸ್ ಕೌನ್ಸಿಲ್ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಾಟ್ಜು ಅವರ ಇಂದಿನ ಮಾಧ್ಯಮ ಕುರಿತ ಅಭಿಪ್ರಾಯಗಳು ಸಂಚಲವನ ಉಂಟುಮಾಡಿವೆ. ರಾಷ್ಟ್ರಮಟ್ಟದ ಪತ್ರಕರ್ತ ಸಂಘಟನೆಗಳು ಕಟ್ಜು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಮತ್ತೊಂದು ವರ್ಗದಿಂದ ಅವರ ಮಾತುಗಳಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಚುರುಮುರಿ ಬ್ಲಾಗ್ ಆನ್ ಲೈನ್ ಪೋಲ್ ನಲ್ಲಿ ಸಂಗ್ರಹಿಸಿರುವ ಅಭಿಪ್ರಾಯಗಳನ್ನು ಗಮನಿಸಿದರೆ (ಸೋಮವಾರ ರಾತ್ರಿ 10ರವರೆಗೆ) ಪ್ರತಿಕ್ರಿಯಿಸಿದವರ ಪೈಕಿ ಶೇ. 75 ರಷ್ಟು ಮಂದಿ ನ್ಯಾ.ಕಟ್ಜು ಅವರ ಅಭಿಪ್ರಾಯಗಳಿಗೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವಿರೋಧ ವ್ಯಕ್ತಪಡಿಸಿದವರು ಕೇವಲ 6.08 ರಷ್ಟು ಮಾತ್ರ. ಉಳಿದಂತೆ ಭಾಗಶಃ ಒಪ್ಪುವವರು ಶೇ.15.88 ಮತ್ತು ಭಾಗಶಃ ಒಪ್ಪದಿರುವವರು 3.04 ರಷ್ಟು.  ಚುರುಮುರಿಯ ಓದುಗರಲ್ಲಿ ಬಹುತೇಕರು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಮಾಧ್ಯಮದ ಬಗ್ಗೆ ಆಸಕ್ತಿ ಉಳ್ಳವರು. ಹಾಗಾಗಿ ಆ ಬ್ಲಾಗ್ ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಸಿಎನ್ಎನ್ ಐಬಿನ್ ಶುಕ್ರವಾರ ಪ್ರಸಾರ ಮಾಡಿದ ಲಾಸ್ಟ್ ವರ್ಡ್ ಕಾರ್ಯಕ್ರಮದಲ್ಲಿ ದಿ ಹಿಂದೂ ಪತ್ರಿಕೆ ಎಡಿಟರ್ ಇನ್ ಚೀಫ್ ಎನ್. ರಾಮ್ ಕೂಡಾ ನ್ಯಾ.ಕಟ್ಜು ಅವರ ಬಹುತೇಕ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದರು. ಬಹುತೇಕರಲ್ಲಿ ಸುಪ್ತವಾಗಿದ್ದ ಅಥವಾ ವೈಯಕ್ತಿಕ ನೆಲೆಯಲ್ಲಿಯೇ ಚರ್ಚೆಗೆ ಒಳಗಾಗಿರಬಹುದಾದ ಅಭಿಪ್ರಾಯಗಳು ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಸಂದರ್ಶನದ ಕಾರಣ ಮುಖ್ಯವಾಹಿನಿಗೆ ಬಂದಿವೆ.

ನ್ಯಾ.ಕಟ್ಜು ಅವರ ಅಭಿಪ್ರಾಯಗಳನ್ನು ಟೀಕಿಸುವ ಸಂಪಾದಕರ ಗಿಲ್ಡ್ ಮತ್ತಿತರ ಸಂಘಟನೆಗಳು ಅವರು (ನ್ಯಾ.ಕಟ್ಜು) ಎತ್ತಿರುವ ಬಹುಮುಖ್ಯ ಆರೋಪ ರೂಪದ ಪ್ರಶ್ನೆಗಳನ್ನು ಎದುರಿಸಲೇ ಇಲ್ಲ. ನ್ಯಾಯಮೂರ್ತಿಯವರು ಮಾಡಿರುವ ಬಹುಮುಖ್ಯ ಮೂರು ಅಂಶಗಳು – ಮಾಧ್ಯಮ ಜನವಿರೋಧಿ, ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಸಮುದಾಯವನ್ನು ವಿಭಜಿಸುತ್ತದೆ ಮತ್ತು ಅನೇಕ ಪತ್ರಕರ್ತರ ಬೌದ್ಧಿಕ ಮಟ್ಟ ತೀರಾ ಸಾಮಾನ್ಯ.

1. ಮಾಧ್ಯಮ ಜನವಿರೋಧಿ:
ಎಲ್ಲಾ ಚಾನೆಲ್ ಗಳು, ಎಲ್ಲಾ ಸುದ್ದಿ ಸಂಸ್ಥೆಗಳು ಜನವಿರೋಧಿ ಎಂದು ಅವರು ಹೇಳಿಲ್ಲ. ‘ಬಹುತೇಕ’ ಎನ್ನುವ ಪದ ಬಳಸಿದ್ದಾರೆ. ಜನರ ನಿಜ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕ್ರಿಕೆಟ್ ಆಟಗಾರರನ್ನು, ಸಿನಿಮಾ ತಾರೆಯರನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲವೇ? ಐಶ್ವರ್ಯ ರೈಗೆ ಹುಟ್ಟುವ ಮಗು/ಮಕ್ಕಳ ಬಗ್ಗೆ ಬಿತ್ತರವಾದಷ್ಟು ವರದಿಗಳು, ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ವರದಿಗಳು ಪ್ರಕಟಗೊಂಡಿಲ್ಲ. ಐಶ್ವರ್ಯ ರೈ ನ ಮುಗುಳ್ನಗು ನೋಡಿಕೊಂಡು, ಹಳ್ಳಿಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಮಗುವಿಗೆ ಜನ್ಮ ನೀಡುವಾಗಲೇ ಪ್ರಾಣ ಕಳೆದುಕೊಳ್ಳುವ ಹೆಣ್ಣು ಮಕ್ಕಳ ದುಃಖ ಮರೆಯಬೇಕೆ? ಹಾಗಾದರೆ, ನ್ಯಾ.ಕಟ್ಜು ಅವರ ಅಭಿಪ್ರಾಯದಲ್ಲಿ ತಪ್ಪೇನಿದೆ?

2. ಕೋಮು ಭಾವನೆ ಬಿತ್ತನೆ:
ಭಾರತದ ಯಾವುದೇ ಭಾಗದಲ್ಲಿ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಮಾಧ್ಯಮ ಕಚೇರಿಗಳಿಗೆ ಈ-ಮೇಲ್ ಬರುತ್ತದೆ. ಈ-ಮೇಲ್ ಆಧರಿಸಿ ಸುದ್ದಿ ಸಂಸ್ಥೆಗಳು ಬಾಂಬ್ ದಾಳಿಯ ಹಿಂದೆ ಯಾರಿದ್ದಾರೆ ಎಂದು ಘೋಷಿಸಿಬಿಡುತ್ತದೆ. ಹಾಗೆ ತೇಲಿ ಬರುವ ಯಾವುದೇ ಒಂದು ಸಂಘಟನೆಯ ಹೆಸರು ಮೇಲ್ನೋಟಕ್ಕೆ ಮುಸ್ಲಿಂ ಸಂಘಟನೆ ಎಂದು ಹೇಳಲು ಯಾರಿಗೂ ಕಷ್ಟವಲ್ಲ. ಹೀಗೆ ಇಲ್ಲಿ ನಡೆಯುವ ಬಾಂಬ್ ದಾಳಿಗಳಿಗೆ ಮುಸ್ಲಿಂ ಸಂಘಟನೆಯೊಂದು ಹೊಣೆ ಎಂಬಂತೆ ಮಾಧ್ಯಮಗಳು ಯಾವುದೇ ಅಧಿಕೃತತೆ ಇಲ್ಲದ ಈ-ಮೇಲ್ ಆಧರಿಸಿ ಬಿಂಬಿಸುತ್ತಿರುವುದು ಸುಳ್ಳೇ? ಹಾಗಾದರೆ, ನ್ಯಾ.ಕಟ್ಜು ಮಾತುಗಳಲ್ಲಿ ತಪ್ಪು ಹುಡುಕುವ ಪ್ರಯತ್ನವೇಕೆ?

3. ಮೂಢ, ಅಂಧ ಆಚರಣೆಗಳಿಗೆ ಮಹತ್ವ:
ನ್ಯಾ.ಕಾಟ್ಜು ಅವರು ಮಾಡಿರುವ ಮತ್ತೊಂದು ಗಂಭೀರ ಆರೋಪ ಮೂಢ ಆಚರಣೆಗಳಿಗೆ ಮಾಧ್ಯಮ ಅನಗತ್ಯ ಮಹತ್ವ ನೀಡುತ್ತಿದೆ. ಇದನ್ನಂತೂ ಯಾರೂ ಸುಳ್ಳು ಎಂದು ಸಾಧ್ಯವಿಲ್ಲ. ಬಹುತೇಕ ಚಾನೆಲ್ ಗಳ ಬೆಳಗಿನ ಕೆಲ ಗಂಟೆಗಳು ಜ್ಯೋತಿಷಿಗಳಿಗೆ ಮೀಸಲು. ತಲೆ ಬುಡ ಇಲ್ಲದ ಶಾಸ್ತ್ರ ಹೇಳುತ್ತಾ ನೋಡುಗರನ್ನು ದಿಕ್ಕು ತಪ್ಪಿಸುತ್ತಾರೆ ಅವರು. ನ್ಯಾ.ಕಾಟ್ಜು ಅವರು ಹೇಳೋದು, ಆಧುನಿಕ ಪ್ರಜಾಪ್ರಭುತ್ವದತ್ತ ಸಾಗುತ್ತಿರುವ ಭಾರತದ ಮಾಧ್ಯಮ ನಡೆದುಕೊಳ್ಳಬೇಕಾದ ರೀತಿ ಇದಲ್ಲ ಎನ್ನುವುದು ನ್ಯಾಯಮೂರ್ತಿಯವರ ವಾದ.

4. ಅನೇಕ ಪತ್ರಕರ್ತರ ತಿಳವಳಿಕೆ ತೀರ ಕಡಿಮೆ.
ಇದು ಚರ್ಚಾಸ್ಪದ ವಿಚಾರ. ಮಾಧ್ಯಮದಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳು ಹಾಗೂ ಮಾಧ್ಯಮ ಮಂದಿ ಮಂಡಿಸುವ ಅಭಿಪ್ರಾಯದ, ವಿಷಯವನ್ನು ವಿಶ್ಲೇಷಿಸುವ ವಿಧಾನ – ಹೀಗೆ ಕೆಲವು ಸಂಗತಿಗಳ ಆಧಾರದ ಮೇಲೆ ನ್ಯಾ.ಕಟ್ಜು ಅವರು ಮಾಧ್ಯಮ ಕ್ಷೇತ್ರದಲ್ಲಿರುವ ಅನೇಕರಿಗೆ ಆರ್ಥಿಕ ಸಿದ್ಧಾಂತ, ರಾಜ್ಯಶಾಸ್ತ್ರ..ಹೀಗೆ ಯಾವ ವಿಚಾರದಲ್ಲೂ ನಿಪುಣರಲ್ಲ. ಇದೇ ಹೊತ್ತಿನಲ್ಲಿ ಅವರು ಮಾಧ್ಯಮ ಕ್ಷೇತ್ರದ ಎಲ್ಲರೂ ಹೀಗೆ ಎಂದು ಹೇಳಲಿಲ್ಲ. ಬದಲಿಗೆ ಕೆಲವರು ಅತ್ಯಂತ ಪ್ರಾಜ್ಞರು ಇದ್ದಾರೆ ಎಂದರು. ಜೊತೆಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಪಿ.ಸಾಯಿನಾಥ್ ರವರ ಹೆಸರನ್ನೂ ಉಲ್ಲೇಖಿಸಿದರು. ಆದರೆ ನ್ಯಾ.ಕಟ್ಜು ಅವರನ್ನು ಟೀಕಿಸುತ್ತಿರುವ ಬಹುತೇಕರು ಈ ಅಂಶವನ್ನು ಗಮನಿಸಲೇ ಇಲ್ಲ.

5. ಮಾಧ್ಯಮದ ಅತಿರೇಕದ ವರ್ತನೆ ನಿಯಂತ್ರಣಕ್ಕೆ ವಿಶೇಷ ಅಧಿಕಾರ:
ಕನ್ನಡದಲ್ಲಿಯೇ ಅನೇಕ ಟ್ಯಾಬ್ಲಾಯ್ಡ್ ಗಳಿವೆ. ಅನೇಕ ಬಾರಿ ಯಾವುದೇ ಸೂಕ್ತ ಆಧಾರ ಇಲ್ಲದೆ ಆರೋಪ ಮಾಡಿ ಮಾನಹಾನಿ ಪ್ರಕರಣಗಳಿವೆ. ಅಷ್ಟೇ ಅಲ್ಲ ಇತ್ತೀಚೆಗೆ ಚಾನೆಲ್ ಗಳು ಕೆಲವೊಮ್ಮೆ ಇದೇ ಧಾಟಿಯಲ್ಲಿ ವರ್ತಿಸುತ್ತಿವೆ. ಟಿಆರ್‌ಪಿಗಾಗಿ ಅಸಂಬದ್ಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇತ್ತೀಚೆಗೆ ಕನ್ನಡದ ಒಂದು ಸುದ್ದಿ ವಾಹಿನಿ ಲಕ್ಷ್ಮೀ ಹೆಸರಿನ ಪತ್ನಿಯನ್ನು ಹೊಂದಿರುವ ಗಂಡಂದಿರಿಗೆಲ್ಲಾ ಗಂಡಾಂತರ ತಪ್ಪಿದಲ್ಲ ಎಂದು ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ನೂರಾರು ಉದಾಹರಣೆ ನೀಡಬಹುದು. ಇಂತಹ ಭಾನಗಡಿಗಳನ್ನು ಮಾಡಿದಾಗ ಮಾಧ್ಯಮದ ಕಿವಿ ಹಿಂಡುವುದು ಯಾರು?

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡುವುದರ ಹೊರತಾಗಿ ಬೇರೆ ಅಧಿಕಾರ ಇಲ್ಲ. ಆ ಕಾರಣ ‘ವಿಶೇಷ ಸಂದರ್ಭದಲ್ಲಿ’ ಮಾತ್ರ ಬಳಸಲು ಕೆಲ ಅಧಿಕಾರಗಳು ಬೇಕು ಎಂದು ಕೇಂದ್ರ ಸರಕಾರವನ್ನು ಕೇಳುವ ಇರಾದೆ ನ್ಯಾ.ಕಟ್ಜು ಅವರದು.  ಈ ಸಂದರ್ಭ ಸೃಷ್ಟಿಯಾಗಲು ತಮ್ಮ ಜವಾಬ್ದಾರಿ ಮರೆತ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೇ ಕಾರಣ. ಮಾಧ್ಯಮ ಸಂಸ್ಥೆಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳದೇ ಇರುವಾಗ ಪ್ರಭುತ್ವ ಅಂತಹದೊಂದು ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ಟಿಆರ್‌ಪಿಗಾಗಿ ತಲೆಕೆಟ್ಟ ಜ್ಯೋತಿಷಿಗಳನ್ನು ಕರೆತಂದು ಸ್ಟುಡಿಯೋದಲ್ಲಿ ಅಸಹ್ಯಗಳನ್ನು ಸೃಷ್ಟಿಸುತ್ತಿರುವಾಗ, ಅಪರಾಧದ ವರದಿಗಳಲ್ಲಿ ಮಹಿಳೆಯರನ್ನು ಹೀಗಳೆಯುವ ಭಾಷೆ ಬಳಸುತ್ತಿರುವಾಗ, ಕೋಮುಭಾವನೆ ಕೆರಳಿಸಿ ರಾಜಕೀಯ ಪಕ್ಷಗಳ ಏಜೆಂಟರಂತೆ ಚಾನೆಲ್ ಗಳು ವರ್ತಿಸುತ್ತಿರುವಾಗ… ನಿಯಂತ್ರಣ ಬೇಕು ಎನಿಸುವುದಿಲ್ಲವೆ? ನ್ಯಾ.ಕಟ್ಜು ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸರಕಾರದ ನಿಯಂತ್ರಣ ಅಪಾಯಕಾರಿ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾದರೆ, ಈಗಲಾದರೂ ಮಾಧ್ಯಮ ಕೇಂದ್ರ ನೇತಾರರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಸಂಯಮ ಕಳೆದುಕೊಳ್ಳದೆ ಕಾರ್ಯಕ್ರಮ ಬಿತ್ತರ ಮಾಡುವ ನಿಟ್ಟಿನಲ್ಲಿ ಒಂದಿಷ್ಟು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬೋಣವೆ?

ಚಿತ್ರ ಕೃಪೆ: ಸಿಎನ್ಎನ್ ಐಬಿಎನ್.

ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.