ಪತ್ರಿಕೋದ್ಯಮವನ್ನು ಗುರಾಣಿ ಮಾಡಿಕೊಂಡವರ ನಡುವೆ…

– ಪರಶುರಾಮ ಕಲಾಲ್

ಪತ್ರಿಕೋದ್ಯಮ ಹಲವಾರು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಪತ್ರಕರ್ತರಿಗೆ ಉಸಿರುಗಟ್ಟಿಸುವ ವಾತಾವರಣ ಇದೆ. ಇದು ಅರ್ಧ ಸತ್ಯ ಮಾತ್ರ. ಉಳಿದ ಅರ್ಧ ಸತ್ಯವೆಂದರೆ ಅಲ್ಲೂ ಏನಾದರೂ ಮಾಡಬಹುದು. ಅದಕ್ಕೆ ಬದ್ಧತೆ ಬೇಕು. ಜೀವನ ಪ್ರೀತಿ ಇರಬೇಕು. ಜನರಿಗೆ ಏನಾದರೂ ಮಾಡಬೇಕು ಎನ್ನುವ ಕಾಳಜಿ ಇರಬೇಕು. ಆಗ ಹೊಸ ದಾರಿಗಳು ಗೋಚರಿಸುತ್ತವೆ. ಸಿನಿಕರಾಗಿ ಮಾತನಾಡಿದರೆ ಇರುವ ದಾರಿ ಮುಚ್ಚಿ ಹೋಗುತ್ತವೆ ಅಷ್ಟೇ.

ಹಣ ಮಾಡಬೇಕೆಂದವರು ಈ ಕ್ಷೇತ್ರ ಆಯ್ದುಕೊಳ್ಳಬಾರದು. ಬೇರೆ ಕ್ಷೇತ್ರಗಳ ಕಡೆ ಹೋಗಬೇಕು. ಇದು ಪತ್ರಿಕೋದ್ಯಮಕ್ಕೆ ಒಂದಿಷ್ಟು ಮಾನ ತರಬಲ್ಲದು. ಪತ್ರಿಕೋದ್ಯಮವನ್ನೇ ಗುರಾಣಿ ಮಾಡಿಕೊಂಡು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವವರು, ಡಿನೋಟಿಪೆಕೇಷನ್ ಮಾಡಿಸಿಕೊಂಡು ಕೋತಿ ತಾನು ತಿಂದು ಮೇಕೆಯ ಮೋತಿಗೆ ಒರೆಸಿದಂತೆ ಮಾಡುವವರ ನಡುವೆ ಇದು ಮಾನ ತರಬಲ್ಲ ಕೆಲಸವಾಗುವುದು. ಇಂತಹವರನ್ನು ಮಾಡೆಲ್ ಮಾಡಿಕೊಂಡು ಹಲಬುವುದನ್ನು ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಮೊಟ್ಟ ಮೊದಲು ಬಿಡಬೇಕು. ಇವರು ಯಾರು ಮಾಡೆಲ್ ಅಲ್ಲ. ಮಾಡೆಲ್ ಆಗಿ ಕಾಣುವವರು ನಮಗೆ ತುಂಬಾ ಜನ ಇದ್ದಾರೆ.

ಪತ್ರಿಕೋದ್ಯಮ ಇವತ್ತು ಹೊರಳುವ ಹಾದಿಯಲ್ಲಿದೆ. ಒಂದು ಕಡೆ ಅದು ದೃಶ್ಯ ಮಾಧ್ಯಮಗಳನ್ನು ಎದುರಿಸಬೇಕಿದೆ. ಮತ್ತೊಂದು ಕಡೆ ಪತ್ರಿಕೆಗಳ ಪೈಪೋಟಿಯನ್ನು ಎದುರಿಸಬೇಕಿದೆ. ಇದು ಎಲ್ಲಾ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಹಳೇಯ ಶೈಲಿಯಲ್ಲಿ ಇವತ್ತು ಪತ್ರಿಕೆಯನ್ನು ನಡೆಸಲು ಆಗುವುದಿಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗೆ ಸಜ್ಜಾಗಬೇಕಿದೆ. ಈ ಪೈಪೋಟಿಯಲ್ಲಿ ತನ್ನತನ ಮರೆಯದೇ ಉಳಿಸಿಕೊಳ್ಳಬೇಕಿದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಆ ಮಾತು ಬೇರೆ.

ಕ್ಷಣ ಕ್ಷಣದ ಸುದ್ದಿಗಳನ್ನು ಲೈವ್ ಆಗಿ ಬಿತ್ತರಿಸುವ ದೃಶ್ಯ ಮಾಧ್ಯಮದ ಎದುರು ಪತ್ರಿಕೆಗಳ ಸುದ್ದಿಗಳು ತಂಗಳಾಗಿ ಬಿಟ್ಟಿರುತ್ತವೆ. ಇದನ್ನೇ ಉಣಬಡಿಸಿದರೆ ಓದುಗರು ಪತ್ರಿಕೆ ಯಾಕೆ ಓದಬೇಕು? ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಜೊತೆಗೆ ಅದನ್ನು ವಿಶ್ಲೇಷಣೆ ಮಾಡಲೇಬೇಕಾಗುತ್ತದೆ. ಈ ವಿಶ್ಲೇಷಣೆಯು ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಇರಬೇಕು. ಇಂತಹ ಸುದ್ದಿಗಳನ್ನು ಹೆಚ್ಚು ಮಾಡುವ ಮೂಲಕವೇ ದೃಶ್ಯ ಮಾಧ್ಯಮವನ್ನು ಎದುರಿಸುವ ಮೂಲಕ ಹೊಸ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಇದನ್ನು ಪತ್ರಿಕೆಗಳು ಅರ್ಥ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ವಿನ್ಯಾಸ, ತಲೆಬರಹದಲ್ಲಿ ಅಕ್ಷರಗಳ ಆಟ ಆಡುವುದೇ ದೊಡ್ಡ ಪತ್ರಿಕೋದ್ಯಮ ಎಂದು ಕೆಲವರು ಭಾವಿಸಿದ್ದಾರೆ. ಇದು ತಪ್ಪಲ್ಲ, ಇದೇ ಪತ್ರಿಕೆಯ ಜೀವಾಳ ಆಗಲು ಸಾಧ್ಯವಿಲ್ಲ. ಕೆಲವು ಪತ್ರಿಕೆಗಳು ತಮ್ಮ ಭಾಷೆಯ ಶೈಲಿಯನ್ನು ಬದಲಿಸಿ, ಟ್ಯಾಬ್ಲಾಯ್ಡ್ ಪತ್ರಿಕೆಗಳ ಶೈಲಿಯಲ್ಲಿ ಬರೆಯಲು ಆರಂಭಿಸಿವೆ. ಇದು ಕೂಡಾ ಆಪಾಯವೇ. ಜನರಲ್ಲಿ ಗಾಢ ನಂಬಿಕೆಯನ್ನು ಕೊಡದೇ ಅವರ ನಂಬಿಕೆಯನ್ನು ಶಿಥಿಲಗೊಳಿಸುವ ಈ ಪ್ರಯತ್ನ ಸಿನಿಕರನ್ನು ಹೆಚ್ಚು ಮಾಡಬಹುದೇ ಹೊರತು ಅದು ಜನಾಭಿಪ್ರಾಯ ರೂಪಿಸಲಾರದು.

ಒಂದು ಪತ್ರಿಕೆಯು ತನ್ನನ್ನು ತಾನು ಮರುರೂಪಿಸಿಕೊಂಡು ಹೊಸ ಭಾಷೆಯಲ್ಲಿ, ಹೊಸ ಶೈಲಿಯಲ್ಲಿ ಕಾಣಿಸಿಕೊಂಡರೆ ಜನ ಅದನ್ನು ಖಂಡಿತ ಸ್ವೀಕರಿಸುತ್ತಾರೆ. ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಜಾಹಿರಾತು ಎನ್ನುವುದು ಕೂಡಾ ಅಡ್ಡಿಯಾಗುವುದಿಲ್ಲ. ಆದರೆ ಪತ್ರಿಕೆಗಳ ಸಂಪಾದಕರು ಯಾಕೋ ಮನಸ್ಸು ಮಾಡುತ್ತಿಲ್ಲ. ಮಾಲೀಕರು ಎಂದೂ ಅಡ್ಡಿ ಬರುವುದಿಲ್ಲ. ಕೆಲವು ಸುದ್ದಿಗಳಿಗೆ ಅಡ್ಡ ಬಂದರೂ ಈ ಬದಲಾವಣೆಗೆ ಖಂಡಿತ ಅಡ್ಡ ಬರಲಾರರು. ಪತ್ರಿಕೆಗಳು ಹೊಸ ಭಾಷೆಯಲ್ಲಿ ಜನರಿಗೆ ಹತ್ತಿರವಾಗುತ್ತಾ ಹೋದರೆ ಯಾವ ಮಾಲೀಕನಿಗೆ ಇಷ್ಟ ಆಗುವುದಿಲ್ಲ ಹೇಳಿ?

ಕೊರತೆ ಇರುವುದು, ಈ ಬಗ್ಗೆ ಪತ್ರಿಕೋದ್ಯಮದಲ್ಲಿ ಗಂಭೀರವಾಗಿ ಆಲೋಚಿಸುವ ಮನಸ್ಸುಗಳದ್ದು. ಎಲ್ಲರೂ ಒಂದು ಕಡೆ ಕುಳಿತು ಈ ಬಗ್ಗೆ ಯೋಚಿಸಲು ಆರಂಭಿಸುವುದು ಸಾಧ್ಯವಾಗಬೇಕು.

ಕುಶವಂತ್ ಸಿಂಗ್ ಇಲ್ಲ್‌ಸ್ಟ್ರೇಟೆಡ್ ವೀಕ್ಲಿ ಪತ್ರಿಕೆ ಸಂಪಾದಕರಾಗಿದ್ದಾಗ ಆ ಪತ್ರಿಕೆಯ ಸರ್ಕ್ಯೂಲೇಷನ್ ತುಂಬಾ ಏರಿತು. ಪ್ರೀತೀಶ್ ನಂದಿ ಸಂಪಾದಕರಾದಾಗ ಪತ್ರಿಕೆ ಸರ್ಕ್ಯೂಲೇಷನ್ ಇಳಿಯಿತು. ಆದರೆ ಪ್ರೀತೀಶ್ ನಂದಿ ಹೆಸರು ತುಂಬಾ ಏರಿತು. ಇದು ಸುಳ್ಳು, ಸತ್ಯವೋ ಗೊತ್ತಿಲ್ಲ. ಅದು ಏನೇ ಇರಲಿ, ಕನ್ನಡ ಪತ್ರಿಕೆಗಳ ಇವತ್ತಿನ ಅರ್ಭಟ ನೋಡಿದರೆ ಈ ಕಥೆ ನೆನಪಾಗುತ್ತದೆ.

One thought on “ಪತ್ರಿಕೋದ್ಯಮವನ್ನು ಗುರಾಣಿ ಮಾಡಿಕೊಂಡವರ ನಡುವೆ…

Leave a Reply

Your email address will not be published. Required fields are marked *