Daily Archives: November 17, 2011

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.