ಊಟ ಮಾಡಿದರೆ ಕೈಯೆಲ್ಲ ಹಸಿರು!

– ಹುಲಿಕಲ್ ನಟರಾಜ್

ಕೊಪ್ಪಳದಲ್ಲಿ ನಾನು ಒಂದು ಕಾರ್ಯಕ್ರಮದಲ್ಲಿದ್ದೆ. ಪವಾಡ ಬಯಲು ಕಾರ್ಯಕ್ರಮದ ನಂತರ ಕೆಲವರು ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರು ಬಂದು,`ಸರ್ ನಮ್ಮೂರಿನಲ್ಲಿ ಒಂದು ಹುಡುಗನಿಗೆ ಸುಮಾರು ಎರಡು ವರ್ಷದಿಂದ ಭಾನಾಮತಿ ಹಿಡಿದಿದೆ. ಅವನು ಊಟ ಮಾಡಿ ಕೈ ತೊಳೆದರೆ ಸಾಕು. ಕ್ಯೆಯಲ್ಲ ಹಸಿರಾಗುತ್ತದೆ. ಇದು 7ನೇ ಕ್ಲಾಸ್ನಿಂದ ಶುರುವಾಗಿ 9ನೇಕ್ಲಾಸ್ಗೆ ಬಂದರೂ ಸರಿಯಾಗಿಲ್ಲ. ನೀವೇನಾದರು ಮಾಡಿ. ಎಂದರು.

ನಾವು ಆ ಹುಡುಗನಿರುವ ಹಳ್ಳಿಗೆ ತಲುಪಿದೆವು. ಆ ಹುಡುಗ ನೋಡೋಕೆ ಒಂದು ರೀತಿಯಲ್ಲಿ ಅಮಾಯಕನಂತಿದ್ದ. ಓದೋದರಲ್ಲಿ ನಿಶ್ಯಕ್ತಿಯಾಗಿದ್ದ. ತಂದೆ ತಾಯಿ ಅಮಾಯಕರಂತೆ ಕಂಡು ಬಂದರು. ನಾನು ಅಲ್ಲೇ ಉ
ಳಿದೆ.

`ನೀನು ಊಟ ಮಾಡು ನಾವೂ ಊಟ ಮಾಡ್ತೀವಿ ನೋಡೋಣ ಏನಾಗುತ್ತೆ ಎಂದೆ. ಅಂದು ರಾತ್ರಿ ಮಂದ ಬೆಳಕು. ನಾವೆಲ್ಲ ಊಟ ಮಾಡಿ ಕೈ ತೊಳೆದೆವು. ಅವನೂ ತೊಳೆದ. ಅವನು ಕೈ ತೊಳೆದಂತೆ ನೀರೆಲ್ಲ ಹಸಿರಾಗಿತ್ತು. ನನಗೆ ನೋಡುತ್ತಿದ್ದಂತೆ ದಿಗ್ಭ್ರಮೆಯಾಯಿತು.

ನಾನು ಅವರ ತಂದೆಯವರ ಹತ್ತಿರ ಯಾವಾಗ ಈ ರೀತಿ ಆಗುತ್ತೆ ಎಂದು ಕೇಳಿದೆ. ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ರಾತ್ರಿ ಆಗುತ್ತದೆ. ಒಂದೊಂದು ಸಲ ಸಂಜೆಯೂ ಆಗುತ್ತದೆ. ನಾವು ಎಲ್ಲ ಕಡೆ ತೋರಿಸಿದೆವು. ಏನೂ ಪ್ರಯೋಜನವಾಗಿಲ್ಲ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ಸ್ವಲ್ಪ ಹೊತ್ತು ಚೆನ್ನಾಗಿರ್ತಾನೆ. ಆಮೇಲೆ ಅದೇ ಕಥೆ ಎಂದರು.

ಇದರ ರಹಸ್ಯ ಬಯಲು ಮಾಡಬೇಕು ಎಂದು ದೃಢ ನಿರ್ಧಾರ ಮಾಡಿ ನಾನು ಅವನೊಂದಿಗೆ ಮತ್ತೆ ಎರಡು ಬಾರಿ ತಿಂಡಿ ತಿಂದೆ. ಏನೂ ಆಗಲಿಲ್ಲ. ಮಧ್ಯಾಹ್ನ ಊಟವಾದ ನಂತರ ಕೈ ತೊಳೆದರೆ ಅದೇ ಹಸಿರು ನೀರು!

ನನಗೆ ಏನೋ ತೋಚಲಿಲ್ಲ. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಹೊರಡಲು ಎದ್ದೆ. ಆಗ `ಸರ್ ದಯವಿಟ್ಟು ಹಾಗೆ ಹೇಳಬೇಡಿ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ. ಅದಕ್ಕೆ ನೀವು ಏನು ಹೇಳಿದರೂ ನಾವು ತಯಾರು ಎಂದು ಆ ಹುಡುಗನ ತಂದೆ ಕೈ ಹಿಡಿದುಕೊಂಡರು. ಆ ಹುಡುಗನನ್ನು ನಮ್ಮ ಊರಿಗೆ ಕಳುಹಿಸಿ ಎಂದು ಹೇಳಿ ಮರಳಿದೆ.

ಒಂದು ತಿಂಗಳ ನಂತರ ಆ ಹುಡುಗನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ನಮ್ಮ ಮನೆಯಲ್ಲಿ ಒಂದು ತಿಂಗಳು ಇದ್ದ. ಆಗ ಅವನಿಗೆ ಏನು ಆಗಲಿಲ್ಲ. ಅವನು ಊಟ ಮಾಡಿದಾಗ ಕೈಯಲ್ಲಿ ಎಂತಹ ಹಸಿರು ಬಣ್ಣವೂ ಬರಲಿಲ್ಲ. ಇದರಿಂದ ನನಗೆ ಅನುಮಾನ ಬಂದು ಆ ಹುಡುಗನನ್ನು ವಿಚಾರಿಸಿದೆ.

`ಯಾಕಪ್ಪ ಊರಲ್ಲಿ ಇದ್ದಾಗ ಮಾತ್ರ ನೀನು ಕೈ ತೊಳೆದಾಗ ಹಸಿರು ನೀರು ಬರ್ತಿತ್ತು. ಇಲ್ಲಿ ಅಂತಹದ್ದು ಏನು ಇಲ್ಲ ಎಂದು ಕೇಳಿದ್ದಕ್ಕೆ ಆತ ಏನೂ ಉತ್ತರ ಕೊಡಲಿಲ್ಲ.

ಅವನನ್ನು ಮತ್ತೆ ಊರಿಗೆ ಕರೆದುಕೊಂಡು ಹೋದೆ. ಮತ್ತೆ ಅಲ್ಲಿ ಒಟ್ಟಿಗೆ ಊಟಮಾಡಿದೆವು. ಮತ್ತೆ ಅವನ ಕೈ ಹಸಿರಾಗಿತ್ತು. ನನಗೆ ಪುನಃ ಶಾಕ್ ಆಯಿತು. ಆ ನೀರನ್ನು ಮೂಸಿದಾಗ ಇಂಕಿನ ವಾಸನೆ ಬಡಿಯಿತು. ಇಂಕ್ ಮೂಲ ಹುಡುಕುತ್ತಾ ಹೋದೆ. ಅವರ ಮನೆಯಲ್ಲಿ ಯಾರೂ ಇಂಕ್ ಬಳಸುತ್ತಿರಲಿಲ್ಲ.

ಇದು ಹುಡುಗನ ಕೃತ್ಯವೇ ಎಂದು ಸ್ಪಷ್ಟವಾಯಿತು. `ನನಗೆ ಎಲ್ಲ ಗೊತ್ತಾಯಿತು. ನಿನಗೆ ಈ ಹಸಿರು ಇಂಕ್ ಪೆನ್ನು ಹೇಗೆ ಬಂತು ಹೇಳು? ಎಂದೆ. ಅವನು ಉತ್ತರಿಸಲಿಲ್ಲ. ಅವನ ಮೇಲೆ ಜೋರು ಮಾಡಿದ ನಂತರ ಹೇಳಿದ.

ಅವನು ಬಿಚ್ಚಿಟ್ಟ ಕಥೆ ಇದು :
`ನಮ್ಮ ಮನೆಯಲ್ಲಿ ಅಪ್ಪ ಕೆಲಸ ಮಾಡು ಅಂತಾರೆ. ಕಸ ಗುಡಿಸು ಅಂತ ಬೈತಾರೆ. ಸಗಣಿ ಬಾಚು ಅಂತಾರೆ. ನನಗೆ ಕೆಲಸ ಮಾಡಕ್ಕೆ ಇಷ್ಟ ಇರಲಿಲ್ಲ. ಒಂದು ದಿವಸ ಸುಮ್ಮನೆ ಇಂಕನ್ನು ಕ್ಯೆಯಲ್ಲಿ ಹಾಕಿಕೊಂಡಿದ್ದೆ. ಆಗ ನಮ್ಮ ತಂದೆ ತಾಯಿ ಭಯ ಪಟ್ಟುಕೊಂಡು ನನ್ನನ್ನ ದೇವಸ್ಥಾನಕ್ಕೆ ಕರೆದು ಕೊಂಡು ಹೋಗಿದ್ದರು. ಆಗ ಅವರು ನನ್ನಿಂದ ಯಾವ ಕೆಲಸವನ್ನೂ ಮಾಡಿಸಲಿಲ್ಲ. ಇದನ್ನೇ ಹೀಗೆ ಮಾಡಿದರೆ ನನಗೆ ಯಾವ ಕೆಲಸ ಮಾಡಿಸೋಲ್ಲ ಅಂದುಕೊಂಡು ಮುಂದುವರೆಸಿದೆ

`ಯಾರಿಗೂ ಗೊತ್ತಿಲ್ಲದಂತೆ ಇಂಕ್ ಹಾಕಿಕೊಳ್ಳುತ್ತಿದ್ದೆ ಹೇಗೆ? ಎಂದೆ.

ನಾನು ಕುಳಿತುಕೊಳ್ಳುವ ಜಾಗದಲ್ಲಿ ನನ್ನ ಹಿಂದೆ ರಾಗಿ ಮೂಟೆ ಇತ್ತು. ಅದರ ಸಂದಿಯಲ್ಲಿ ಇಟ್ಟುಕೊಳ್ಳುತ್ತಿದ್ದೆ. ಊಟ ಮಾಡಿದ ತಕ್ಷಣ ಹತ್ತಿಯಲ್ಲಿ ಹಸಿರು ಇಂಕನ್ನು ಹಾಕಿಕೊಳ್ತಿದ್ದೆ ಎಂದ.
ಇನ್ನೆಂದೂ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಆ ಹುಡುಗನ ತಂದೆ ತಾಯಿಯರಿಗೆ ಸಮಸ್ಯೆ ನಿವಾರಣೆಯಾಗಿದೆ ಎಂಬ ಭರವಸೆ ನೀಡಿದೆ.

ಮಕ್ಕಳಲ್ಲಿರುವ ಸೋಮಾರಿತನವೂ ಇಂತಹ ಸಮಸ್ಯೆಯನ್ನು ಹುಟ್ಟುಹಾಕಬಲ್ಲುದು ಎಂದು ಅರಿವಾಯಿತು. ಆದ್ದರಿಂದ ಮಕ್ಕಳಲ್ಲಿ ಕಷ್ಟ ಸಹಿಷ್ಣುತೆ, ಶ್ರಮಜೀವನದ ಪಾಠಗಳನ್ನು ನಾವು ಕಲಿಸಬೇಕು.

Leave a Reply

Your email address will not be published. Required fields are marked *