ಕಾರ್ಮಿಕರ ದ್ವನಿಯಾಗಬಲ್ಲ “ಲೇಬರ್ ಲೈನ್” ಪತ್ರಿಕೆ

-ಅರುಣ್ ಜೋಳದಕೂಡ್ಲಿಗಿ

ಈಚೆಗೆ ಕಾರ್ಮಿಕ ಪರ ಚಟುವಟಿಕೆಗಳು ಮುಖ್ಯವೆನ್ನಿಸುವಂತೆ ಕಾಣುತ್ತಿಲ್ಲ. ಕಾರಣ ಕಾರ್ಮಿಕರ ಸಮಸ್ಯೆಗಳು ಬಗೆಹರಿದು ಸುಖಿಗಳಾಗಿದ್ದಾರೆಂದಲ್ಲ, ಬದಲಿಗೆ ಕಾರ್ಮಿಕರು ದೊಡ್ಡ ದ್ವನಿ ಎತ್ತದಂತೆ ವ್ಯವಸ್ಥೆ ಕಟ್ಟಿಹಾಕಿದೆಯಷ್ಟೆ. ಈ ಮಧ್ಯೆಯೇ ಕಾರ್ಮಿಕರ ಪರ ಕಾಳಜಿ ಇಟ್ಟುಕೊಂಡು ಹೋರಾಟ, ಪ್ರತಿಭಟನೆಗಳನ್ನು ಸದ್ದಿಲ್ಲದೆ ಮಾಡುವ ಕೆಲವಾದರೂ ಪ್ರಾಮಾಣಿಕರು  ನಮ್ಮ ನಡುವೆ ಇದ್ದಾರೆ. ಅಂತಹ ಕೆಲವರ ಪ್ರಯತ್ನವೇ “ಲೇಬರ್ ಲೈನ್” ಎನ್ನುವ ಪತ್ರಿಕೆ.

ಜಾತಿಗೊಂದು ಜಾತಿವಾದಿ ಪತ್ರಿಕೆಗಳು ಹುಟ್ಟುತ್ತಿರುವ ಈ ಕಾಲದಲ್ಲಿ ಜಾತಿಯಾಚೆ ದುಡಿವ ವರ್ಗವನ್ನು ಆಧರಿಸಿ ಪತ್ರಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ. ಹಿರಿಯ ನ್ಯಾಯವಾದಿಗಳಾದ ಮುರುಳೀಧರ್ ಅವರ ಗೌರವ ಸಂಪಾದಕತ್ವದಲ್ಲಿ, ಎ.ಆರ್.ಎಂ. ಇಸ್ಮಾಯಿಲ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಪತ್ರಿಕೆ ಸಿದ್ದವಾಗುತ್ತಿದೆ. ಬಿ.ಪೀರ್‍‌ಭಾಷಾ, ಜಿ.ಎಂ.ಗುರುಬಸವರಾಜ, ಪರುಶುರಾಮ ಕಲಾಲ್, ಮತ್ತೀಹಳ್ಳಿ ಬಸವರಾಜ್ ರ ಸಂಪಾದಕ ಮಂಡಳಿ ಈ ಪತ್ರಿಕೆಯ ಬೆನ್ನಿಗಿದೆ.

ಪ್ರತೀ ಸಂಚಿಕೆಗೆ ಕಾರ್ಮಿಕರ ಒಂದು ವರ್ಗವನ್ನು ಆಧರಿಸಿ ರೂಪಿಸುವ ಯೋಜನೆ ಇದೆ. ಅಕ್ಟೋಬರ್ ಮೊದಲ ಸಂಚಿಕೆಯನ್ನು ಕಟ್ಟಡ ಕಾರ್ಮಿಕರನ್ನು ಆಧರಿಸಿ ಸಿದ್ದಗೊಳಿಸಲಾಗಿದೆ. ಇಲ್ಲಿ ಕಾರ್ಮಿಕರಿಗೆ ಕಾನೂನಿನ ಅರಿವು, ಕಾರ್ಮಿಕ ಹೋರಾಟಗಾರರ ಮಾತುಕತೆ, ಕಾರ್ಮಿಕ ಜಾಗೃತಿಯ ವೈಚಾರಿಕ ಬರಹಗಳನ್ನು ಸದ್ಯ ಈ ಪತ್ರಿಕೆ ಒಳಗೊಂಡಿದೆ.

ಇದು ಬಳ್ಳಾರಿಯ ಲೇಬರ್ ರಿಸೋರ್ಸ್ ಸೆಂಟರ್ ನಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆ ಇನ್ನಷ್ಟು ವ್ಯಾಪಕತೆಯನ್ನು ಹೆಚ್ಚಿಸಿಕೊಂಡು, ಶ್ರಮಿಕ ಲೋಕದ ಸಂಗತಿಗಳನ್ನು, ಕಾರ್ಮಿಕರ ಆತ್ಮಕಥಾನಕದ ಭಾಗಗಳನ್ನು ಒಳಗೊಳ್ಳಬೇಕಿದೆ. ಇದು ಕೇವಲ ಕಾರ್ಮಿಕ ವರ್ಗದ ಕೂಗು ಮಾತ್ರವಾಗದೆ, ಶಕ್ತಿಯಾಗುವಂತೆ ಇದನ್ನು ರೂಪಿಸಲು ಅವಕಾಶಗಳಿವೆ. ಅಂತಹ ಸಾದ್ಯತೆಯೆಡೆಗೆ ಲೇಬರ್ ಲೈನ್ ಸಾಗಲೆಂದು ಹಾರೈಸೋಣ.

ಆಸಕ್ತರು,
ಲೇಬರ್ ಲೈನ್ ಕನ್ನಡ ಮಾಸಿಕ, ಮೇಲ್ಮಹಡಿ, ಸಪ್ತಗಿರಿ ಕಾಂಪ್ಲೆಕ್ಸ್, ಕೆ.ಸಿ.ರಸ್ತೆ, ಬಳ್ಳಾರಿ-583101, ದೂರವಾಣಿ: 08392-271090, labourlinekannada@gmail.com
ವಿಳಾಸಕ್ಕೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *