Monthly Archives: November 2011

ರವಿಕೃಷ್ಣಾರೆಡ್ಡಿ ಶೀಘ್ರ ಗುಣಮುಖರಾಗಲಿ: ವರ್ತಮಾನ ಬಳಗ

ರವಿಕೃಷ್ಣಾ ರೆಡ್ಡಿ ಅವರು ನಿನ್ನೆ ಅಸ್ಪತ್ರೆಗೆ ದಾಖಲಾಗಿದ್ದಾರೆ. ಡೆಂಗಿ ಜ್ವರ ಅವರ ಅನಾರೋಗ್ಯಕ್ಕೆ ಕಾರಣವೆಂದು ಗೊತ್ತಾಗಿದ್ದು, ಇನ್ನೂ ಎರಡು ಮೂರು ದಿನ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ. ಅವರು ಶೀಘ್ರ ಗುಣಮುಖ ಆಗಲೆಂದು ವರ್ತಮಾನ ಬಳಗ ಹಾರೈಸುತ್ತದೆ.

ಜೀವನದಿಗಳ ಸಾವಿನ ಕಥನ -12

– ಜಗದೀಶ್ ಕೊಪ್ಪ

ಅಣೆಕಟ್ಟುಗಳ ನಿರ್ಮಾಣದ ವಿಷಯದಲ್ಲಿ, ಜಗತ್ತಿನ ಬಹುತೇಕ ಸರಕಾರಗಳು, ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ವಾಸ್ತವಿಕ ಅಂಕಿ ಅಂಶಗಳನ್ನು ಮರೆಮಾಚುತ್ತಿರುವುದು ಕೂಡ ಹಲವಾರು ಅನಾಹುತಗಳಿಗೆ ಕಾರಣವಾಗಿದೆ. ವಾಸ್ತವವಾಗಿ ಕಾಮಗಾರಿ ವೆಚ್ಚ, ನಿರ್ಮಾಣದ ಅವಧಿ, ವಾಸ್ತವವಾಗಿ ಸಂಗ್ರಹವಾಗುವ ನೀರಿನ ಪ್ರಮಾಣ, ಕಾಮಗಾರಿ ಸ್ಥಳದ ಭೂಮಿಯ ಲಭ್ಯತೆ ಹಾಗೂ ಕಾಮಗಾರಿಗೆ ಈ ಭೂಮಿ ಸೂಕ್ತವೆ ಎಂಬ ಅಂಶ ಇವೆಲ್ಲವುಗಳಲ್ಲಿ ಸತ್ಯಕ್ಕಿಂತ ಸುಳ್ಳಿನ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಜಗತ್ತಿನ ಯಾವೊಂದು ಅಣೆಕಟ್ಟು ತನ್ನ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಇತಿಹಾಸವಿಲ್ಲ. ಅಷ್ಟೇ ಏಕೆ ಪೂರ್ವ ನಿಗತ ವೆಚ್ಚದೊಳಗೆ ಮುಗಿದ ಉದಾಹರಣೆಗಳಿಲ್ಲ. ಅಣೆಕಟ್ಟು ನಿರ್ಮಾಣಕ್ಕಿಂತ  ಮಿಗಿಲಾಗಿ, ಅಣೆಕಟ್ಟು ಸ್ಥಳ ಹಾಗೂ ಹಿನ್ನೀರಿನಲ್ಲಿ ಮುಳುಗುವ ಪ್ರದೇಶಗಳಿಂದ ಸಂತ್ರಸ್ತರಾಗುವ ಜನತೆಯ ಬಗ್ಗೆ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಾ ಬಂದಿರುವುದು, ಜಾಗತಿಕವಾಗಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈಗಾಗಲೇ ಆಯಾ ದೇಶಗಳಲ್ಲಿ ತಾಂಡವವಾಡುತ್ತಿರುವ ಬಡತನ ನಿವಾರಣೆ ಅಲ್ಲಿನ ಸರಕಾರಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಮತ್ತೊಂದು ತೊಡಕಾಗಿದೆ.

ಅಣೆಕಟ್ಟು ವಿಷಯದಲ್ಲಿ ಕೇವಲ ಲಾಭವನ್ನೇ ಗುರಿಯಾಗಿರಿಸಿಕೊಂಡ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳಿಗೆ ಉತ್ತರದಾಯಕತ್ವದ ಪ್ರಶ್ನೆಯೇ ಎದುರಾಗುವ ಸಂಭವವಿಲ್ಲದೆ ಇರುವುದರಿಂದ, ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಕಳಪೆ ಇದ್ದರೂ ಕೂಡ, ಮುಂದೆ ಸಂಭವಿಸುವ ಅವಘಡಗಳಿಗೆ ಇವು ಹೊಣೆಹೊರುವ, ಹೊತ್ತಿರುವ ಸಂಧರ್ಭ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಯಾವುದೇ ಸ್ಥಳದಲ್ಲಿ ಅಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದರೂ, ಪ್ರತಿಯೊಂದು ಅಣೆಕಟ್ಟಿನ ಸ್ಥಳಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ. ಕೆಲವೊಂದು ಸ್ಥಳಗಳು ಅಣೆಕಟ್ಟು ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಲ್ಲಿನ ಭೂಮಿಯ ಗುಣಮಟ್ಟ, ಮಣ್ಣಿನ ಗುಣ, ಸಂಗ್ರಹವಾಗುವ ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಯಾವೊಂದು ಸರಕಾರ ಮತ್ತು ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಜ್ವಲಂತ ಉದಾಹರಣೆಗಳೆಂದರೆ, 1990ರಲ್ಲಿ ವಿಶ್ವಬ್ಯಾಂಕ್ ತಾನು ಆರ್ಥಿಕ  ನೆರವು ನೀಡಿದ್ದ 49 ಅಣೆಕಟ್ಟುಗಳ ಸಮೀಕ್ಷೆ ನಡೆಸಿದಾಗ ಇವುಗಳಲ್ಲಿ 36 ಅಣೆಕಟ್ಟುಗಳು ಪ್ರಶಸ್ತವಾದ ಸ್ಥಳಗಳಲ್ಲಿ ನಿರ್ಮಾಣ ವಾಗಿರಲಿಲ್ಲ. ಅಮೇರಿಕಾದೇಶದ ಟೆಟಾನ್ ನದಿಗೆ ದಕ್ಷಿಣ ಪ್ರಾಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಗೆ ಕಾಮಗಾರಿ ಆರಂಭಿಸಿದಾಗ ಭೂಗರ್ಭ ಶಾಸ್ತ್ರಜ್ಞರು, ಈ ಸ್ಥಳ ಅಣೆಕಟ್ಟು ಕಾಮಗಾರಿಗೆ ಯೋಗ್ಯವಲ್ಲ ಎಂದು ನೀಡಿದ್ಥೆಚ್ಚರಿಕೆಯನ್ನು ನಿರ್ಲಕ್ಷಿಸಿ, 1970ರಲ್ಲಿ 270 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ  ಕಾರ್ಯ ಪ್ರಾರಂಭವಾಯಿತು.

1970ರಲ್ಲಿ ಆರಂಭವಾದ ಕಾಮಗಾರಿ 1976ರಲ್ಲಿ ಮುಕ್ತಾಯವಾಗಿ, ಅದೇ ಜೂನ್ ತಿಂಗಳಿನಲ್ಲಿ ಚಾಲನೆ ನೀಡಿದಾಗ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಒತ್ತಡದಿಂದ ಅಣೆಕಟ್ಟಿನ ಬಲಭಾಗದ ಭೂಮಿಯಲ್ಲಿ ದೊಡ್ಡ ಬಾವಿಯಾಕಾರದ ರಂಧ್ರವೊಂದು ನಿರ್ಮಾಣವಾಗಿ  ಜಲಾಶಯದ ನೀರು ಅದರೊಳಗೆ ಹರಿಯತೊಡಗಿತು. ಮರುದಿನ ಅಣೆಕಟ್ಟಿನ 270 ಅಡಿ ಎತ್ತರದ ತಡೆಗೋಡೆ ಹೊರತುಪಡಿಸಿ ಅದಕ್ಕೆ ಹೊಂದಿಕೊಂಡಿದ್ದ ಭೂಮಿ ಕೊಚ್ಚಿಹೋದ ಪರಿಣಾಮ ಸುಮಾರು 20 ಅಡಿ ಎತ್ತರದ ಅಣೆಕಟ್ಟಿನ ಗೋಡೆ ಮಗುಚಿಬಿತ್ತು.

ಇದರಿಂದ ನಾಲ್ಕುಸಾವಿರ ಮನೆಗಳು, ಮೂರು ಪಟ್ಟಣಗಳು ಈ ದುರಂತದಲ್ಲಿ ನಿರ್ನಾಮವಾದವು. ಅಪಾತವನ್ನು ಅರಿತ ಅಲ್ಲಿನ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವ ಸಾವು ನೋವೂ ಸಂಭವಿಸಲಿಲ್ಲ. ಆದರೆ ನೂರು ಕೋಟಿ ಡಾಲರ್ ಹಣ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲದ ಹೊರೆ ಹೊರಬೇಕಾಯ್ತು. ಇಂತಹದ್ದೇ ಇನ್ನೊಂದು ಘಟನೆ ಸಂಭವಿಸಿದ್ದು ಗ್ವಾಟೆಮಾಲಾದಲ್ಲಿ. ಭೂಕಂಪ ಪೀಡಿತ ಈ ರಾಷ್ಟ್ರದಲ್ಲಿ 1974ರಲ್ಲಿ ಜರ್ಮನ್ ಹಾಗೂ ಸ್ವಿಟ್ಜರ್ಲ್ಯಾಂಡ್ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಕೈಗೆತ್ತಿಕೊಂಡ ಚಿಕ್ಸೊಯ್ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿಗೆ ಗ್ವಾಟೆಮಾಲಾ ಸರಕಾರ, ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ 105 ಮಿಲಿಯನ್ ಡಾಲರ್ ಸಾಲ ಪಡೆದು ಕಾಮಗಾರಿ ಪ್ರಾರಂಭಿಸಿತು.

1976ರಲ್ಲಿ ಜಲಾಶಯದಿಂದ 26 ಕಿ.ಮೀ. ದೂರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸಲು ನಿರ್ಮಿಸಿದ  ಸುರಂಗ ಕಾಲುವೆಗಳು ಭೂಕಂಪದ ಪರಿಣಾಮ ಮಣ್ಣು ಕುಸಿತದಲ್ಲಿ ಮುಚ್ಚಿಹೋದವು. ಮತ್ತೆ ಇವನ್ನು ದುರಸ್ತಿಗೊಳಿಸಿ, ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಾಗ, ಗ್ವಾಟೆಮಾಲ ಸರಕಾರ ಅಂದಾಜಿಸಿದ್ದ ನಿರ್ಮಾಣ  ವೆಚ್ಚಕ್ಕಿಂತ 375 ಪಟ್ಟು ಹಣ ಹೆಚ್ಚು ಖರ್ಚಾಯಿತ. ಆ ನಂತರವೂ ಸಂಭವಿಸಿದ ವಿವಿಧ ಅವಘಡಗಳಿಂದ 270 ಕೋಟಿ ಡಾಲರ್ ವೆಚ್ಚದಲ್ಲಿ ಮುಗಿಯಬೇಕಿದ್ದ ಅಣೆಕಟ್ಟು ನಿರ್ಮಾಣ , 1988ರಲ್ಲಿ ಅಂತಿಮಗೊಂಡಾಗ 944 ಕೋಟಿ ಡಾಲರ್ ಹಣವನ್ನು ನುಂಗಿಹಾಕಿ, ಗ್ವಾಟೆಮಾಲ ರಾಷ್ಟ್ರವನ್ನು ಅಮೆರಿಕಾದ ಶಾಶ್ವತ ಸಾಲಗಾರನನ್ನಾಗಿ ಮಾಡಿತು.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮತ್ತೊಂದು ಹಗಲು ದರೋಡೆಯೆಂದರೆ, ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿ ಸಲಾಗುವ ಅಣೆಕಟ್ಟಿಗೆ ಮುನ್ನ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ನೀಡುವ ತಪ್ಪು ಮಾಹಿತಿ. ಯಾವುದೇ ಬಹುರಾಷ್ಟ್ರೀಯ ನಿರ್ಮಾಣ  ಸಂಸ್ಥೆಗಳು, ನದಿಯ ಪಾತ್ರದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣವನ್ನು ಹಿಂದಿನ 20-30 ವರ್ಷಗಳಿಂದ ಹಿಡಿದು ಮುಂದಿನ 50 ವರ್ಷಗಳವರೆಗೂ ಲೆಕ್ಕಾಚಾರ ಹಾಕಿ, ನಂತರ ನದಿಯ ನೀರಿನ ಪ್ರಮಾಣವನ್ನು ಅಂದಾಜು ಮಾಡಬೇಕು.ಆದರೆ ಯಾವುದೋ ಒಂದು ವರ್ಷದ ಮಳೆಯ ಪ್ರಮಾಣವನ್ನು ಹಾಗೂ ನದಿ ನೀರಿನ ಹರಿಯುವಿಕೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಣೆಕಟ್ಟು ನಿರ್ಮಿಸಲು ಸರಕಾರಗಳನ್ನು ಪುಸಲಾಯಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಜಗತ್ತಿನ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗುತ್ತಿಲ್ಲ.

ಜೊತೆಗೆ ವಿುದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಿಲ್ಲ. ಸ್ಪೇನ್ ದೇಶದಲ್ಲಿ ಗೌಡಿಯಾಲ ಮತ್ತು ಟ್ಯಾಗೂಸ್ ನದಿಗೆ 1950ರ ದಶಕದಲ್ಲಿ ಜನರಲ್ ಫ್ರಾಂಕೋಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಎರಡು ಅಣೆಕಟ್ಟುಗಳ ಜಲಾಶಯಗಳು 2000ದ ಇಸವಿಯವರೆಗೆ ತಮ್ಮ ಸಾಮಥ್ರ್ಯದ ಶೇ.17ರಷ್ಟು ನೀರನ್ನು ಮಾತ್ರ ಸಂಗ್ರಹಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವ ಬ್ಯಾಂಕ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2000ದ ಅಂತ್ಯದ ವೇಳೆಗೆ ತಾನು ಸಾಲ ನೀಡಿದ 25 ಬೃಹತ್ ಜಲಾಶಯಗಳು ಕೇವಲ ಅರ್ಧದಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿರುವುದಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಥಾಯ್ಲೆಂಡ್ ದೇಶದ 7 ಅಣೆಕಟ್ಟುಗಳು, ಭಾರತದ ನರ್ಮದಾ ಸರೋವರದ ಅಣೆಕಟ್ಟು, ಅಮೆರಿಕಾದ ಕೊಲರಾಡೊ ನದಿಗೆ ನಿಮರ್ಿಸಲಾದ ಹೂವರ್ ಅಣೆಕಟ್ಟು ಸೇರಿರುವುದು ಗಮನಾರ್ಹ ಸಂಗತಿ.

(ಮುಂದುವರಿಯುವುದು)

ರಾಜಕೀಯ ದ್ವೇಷ ಸಾಧನೆಗೆ ಖಾಸಗಿ ದೂರು-ಕನ್ನಡಪ್ರಭ

-ರವಿ ಕೃಷ್ಣಾರೆಡ್ಡಿ

ಇದು ಖಂಡಿತವಾಗಿ ಅನಿರೀಕ್ಷಿತವಲ್ಲ. ಊಹಿಸಿದ್ದದ್ದೆ. ಬರೆಸಿದವರ ಮತ್ತು ಬರೆದವರ ಮಧ್ಯೆ ಹೊಂದಾಣಿಕೆ ಆಗಿಲ್ಲ. ಅವರ ನಿರೀಕ್ಷೆಯನ್ನು ಇವರು ಮುಟ್ಟಿಲ್ಲ. ನಿಜಕ್ಕೂ ಬರೆದವರು ನನ್ನ ಬಗ್ಗೆ ಅಂದುಕೊಂಡಿದ್ದಕ್ಕಿಂತ ಉದಾರವಾಗಿದ್ದಾರೆ.

 

 

 

 

 

 

ಚಿತ್ರಕೃಪೆ: ಕನ್ನಡಪ್ರಭ

ಬಿಎಸ್ ವೈ, ಸೋಮಣ್ಣ ವಿರುದ್ಧ ದೂರು

ಗುರುವಾರ ಲೋಕಾಯುಕ್ತ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ವಿರುದ್ಧ ಭೂಹಗರಣದ ದೂರು ದಾಖಲಾಯಿತು. ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಕೆಂಗೇರಿ ಸಮೀಪ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ದಾಖಲೆಗಳು ಲಭ್ಯವಾಗಿವೆ.  ತೀವ್ರ ಅನಾರೋಗ್ಯದ ಕಾರಣ ರವಿಕೃಷ್ಣಾ ರೆಡ್ಡಿ ಅವರಿಗೆ ಇಲ್ಲಿ ವಿಸ್ತೃತ ಲೇಖನ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ದೂರು ದಾಖಲಾದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನ ಇಲ್ಲಿ ನೀಡಿದ್ದೇವೆ.

 

 

 

 

 

 

ಚಿತ್ರಕೃಪೆ: ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

– ಡಾ. ಎನ್ ಜಗದೀಶ್ ಕೊಪ್ಪ.

ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.

ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.

ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.

ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್  ಮೊರೆ ಹೊಕ್ಕಾಗ  ಹೈಕೋರ್ಟ್  ಸಹ ಸಾವಂತರ ಪರ ತೀರ್ಪು  ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.

ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್  ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.

ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.

ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ  ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.

ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.

ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.

ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ  ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.

ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.

ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.

ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.

ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.