Monthly Archives: November 2011

Elephant Corridor…ಎಂಬ ಆನೆ ದಾರಿ

-ಪ್ರಸಾದ್ ರಕ್ಷಿದಿ

ಕಾಡಾನೆಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.  ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ಆನೆಗಳಿಂದ ಗಾಯಗೊಂಡಿರುವವರ, ಸತ್ತುಹೋದವರ ವರದಿಗಳು ಬರುತ್ತಿವೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಪ್ರದೇಶಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಮೂವತ್ತನ್ನು ದಾಟಿದೆ. ಆದರೆ ನಗರ ಪ್ರದೇಶಕ್ಕೆ ಆನೆಗಳು ಬಂದು ದಾಂಧಲೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ವ್ಯಾಪಕ ಪ್ರಚಾರ ಮಾತ್ರ ರೈತರು ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಮಾಮೂಲಿನಂತೆ ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರೂ ಕೂಡಾ ತೇಪೆ ಹಚ್ಚಿದಂತೆ ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸಧ್ಯದ ಮಟ್ಟಿಗೆ ಬಚಾವಾದೆವೆಂದು ಸುಮ್ಮನಾಗುತ್ತಾರೆ.

ಕೇವಲ ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹತ್ತು ವರ್ಷಗಳಿಂದ ಆನೆಗಳ ಉಪಟಳ ಪ್ರಾರಂಭವಾಯಿತು.

ನಮ್ಮ ತಾಲ್ಲೂಕಿನಲ್ಲಿ ಆನೆಗಳಿಂದ ತೊಂದರೆ ಅನುಭವಿಸಿದ ಇಬ್ಬರು ರೈತರ ಮಾತುಗಳೊಂದಿಗೆ ಮುಂದಿನ ವಿಚಾರವನ್ನು ವಿವರಿಸುತ್ತೇನೆ. ಒಬ್ಬರು ಹಿರಿಯ ರೈತರು-ವಿದ್ಯಾವಂತರು, ಒಂದು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದವರು. ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆಬೆಳೆಯನ್ನು ನಾಶಮಾಡಿದ್ದವು, ಕಾಫಿ ತೋಟವೂ ಹಾನಿಗೊಳಗಾಗಿತ್ತು ಯಂತ್ರೋಪಕರಣಗಳು ಜಖಂಗೊಂಡಿದ್ದವು. ಆ ಸಂದರ್ಭದಲ್ಲಿ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಅವರಿಗುಂಟಾದ ನಷ್ಟದ ಬಗ್ಗೆ ಮಾತನಾಡುತ್ತ, ಸರ್ಕಾರದಿಂದ ಏನಾದರೂ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಅವರನ್ನು ಕೇಳಿದೆ. ಅದಕ್ಕವರು ಅದೆಲ್ಲ ಸರಿ ಆದರೆ ಏನು ಮಾಡೋದು ಅವರು (ಆನೆಗಳು) ನಮಗಿಂತ ಸಾವಿರಾರು ವರ್ಷ ಮೊದಲೇ ಭೂಮಿಗೆ ಬಂದವರು.  ಅವರ ಜಾಗದಲ್ಲಿ ನಾವು ಬಂದು ಕೂತಿದ್ದೀವಿ, ತಪ್ಪು ನಮ್ಮದೇ ಅನುಭವಿಸಬೇಕು ಎಂದರು.

ಇನ್ನೊಂದು ಘಟನೆ ಇತ್ತೀಚಿನದ್ದು. ಆನೆ ಧಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಮೃತ ದೇಹದ ಪಕ್ಕದಲ್ಲಿ ಕುಳಿತಿದ್ದ ಅವರ ಮಗ ನಾವು ಗಣಪತೀನ ಇಷ್ಟೊಂದು ಪೂಜೆ ಮಾಡ್ತೀವಿ ಏನನ್ಯಾಯ ಮಾಡ್ದ ಅಂತ ಗಣಪತಿ ನಮ್ಮಪ್ಪನ್ನ ಕರ್ಕೊಂಡು ಹೋದ… ಎಂದು ಬಂದವರೆಲ್ಲರ ಮುಂದೆ ಹೇಳುತ್ತ ರೋಧಿಸುತ್ತಿದ್ದ.

ಮೊದಲನೆಯವರದು ಸಂಪೂರ್ಣ ಅರಿವಿನೊಂದಿಗೆ ಬಂದಂತಹ  ಪ್ರತಿಕ್ರಿಯೆಯಾದರೆ, ಎರಡನೆಯವರದ್ದು ಮುಗ್ಧ ಭಾವುಕ ಅಳಲು. ಆದರೆ ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲ ಅನುಭವಿಸಿದ ಮೇಲೂ ಇಬ್ಬರಲ್ಲೂ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲದಿರುವುದು.

ಇದು ನಮ್ಮ ರೈತರ ಸಾಮಾನ್ಯ ಮನೋಧರ್ಮವನ್ನು ತೋರಿಸುತ್ತದೆ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರಲ್ಲದೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಬಹಳ ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಮತ್ತು ಹಾಗೂ ಕಾನೂನಿನ ಭಯ ಕಾರಣವಾಗಿದೆ. ( ಕಾನೂನಿನ ಭಯವಿದ್ದಾಗಲೂ ಆಹಾರಕ್ಕೆ ಬಳಸುವ ಕಾಡು ಪ್ರಾಣಿಗಳ ಬೇಟೆ ಇಂದಿಗೂ ನಡೆದೇ ಇದೆ) ಆದರೆ ರೈತರು ಆನೆಗಳನ್ನು ಕೊಲ್ಲದಿರಲು ಅದೊಂದೇ ಕಾರಣವಲ್ಲ.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪಿಗೆ ಸೇರಿದವುಗಳು. ಇವು ಬಯಲು ಸೀಮೆಗೂ ಧಾಳಿ ಮಾಡುತ್ತವೆ. ಹಗಲೆಲ್ಲ ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆಯುತ್ತವೆ. ಇವುಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇವು ಸತತವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಈ ಆನೆಗಳು ತುಂಬಾ ಅಪಾಯಕಾರಿಯಾಗಿವೆ. (ಸಾಮಾನ್ಯವಾಗಿ ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ), ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆ ನಾಶಮಾಡಿ ತಿಂದು ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಇವುಗಳನ್ನು ಮತ್ತೆ ಕಾಡಿಗೆ ಅಟ್ಟಿದರೂ ಅವು ಹೋಗಲಾರವು. ಆದ್ದರಿಂದ ಈ ಆನೆಗಳನ್ನು ಹಿಡಿದು, ಸಾಧ್ಯವಾದರೆ ಪಳಗಿಸುವುದು-ಇಲ್ಲವೇ ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೆ ವಿಧದ ಆನೆಗಳು ಈ ರೀತಿಯವಲ್ಲ. ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ.  ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ  ರೊಚ್ಚಿಗೆದ್ದು ದಾಳಿ ಮಾಡಿವೆ. ಈ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ  ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಜನ  ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ.  ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.  ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.

ಆನೆ ನಡೆದದ್ದೇ ದಾರಿ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮಥ್ರ್ಯಗಳನ್ನು ಪರಿಚಯಿಸಲು ಹೇಳುವ ಮಾತು. ಆನೆಗಳು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ಪಶ್ಚಿಮಘಟ್ಟಗಳಲ್ಲಿ ಸಂಚರಿಸುತ್ತಾ ತಾವಾಗಿಯೇ ನಿರ್ಮಿಸಿಕೊಂಡಿರುವ  ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಬಯಸುತ್ತವೆ. ಇವುಗಳನ್ನೇ ‘ಆನೆದಾರಿ’ಗಳೆನ್ನುವುದು. ಆದರೆ ಮನುಷ್ಯನೇ ಅವುಗಳ ದಾರಿಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ.

ಈ ಎಲ್ಲ ಅನಾಹುತಗಳು ನಡೆಯುತ್ತಿರುವಾಗ ಸುಮ್ಮನಿದ್ದ ಸರ್ಕಾರಗಳು, ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಕಾಲಹರಣ ಮಾಡಿ ಇದೀಗ ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡುತ್ತಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ‘ಆನೆದಾರಿ’ಗಳನ್ನು ಮತ್ತೆ ಆನೆಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ  elephant corridor ಗಳನ್ನು ‘ನಿರ್ಮಿಸುವ’ ಮಾತನಾಡುತ್ತಿವೆ. ವಿದ್ಯುತ್ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರಿದರೆ, ಕೇಂದ್ರ ಸಚಿವರೊಬ್ಬರು ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ಹೊಣೆ, ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅರುವತ್ತು ಕಡತಗಳಿಗೆ ರಾಜ್ಯ ಸಕಾರ ಇನ್ನೂ ಅನುಮತಿ ನೀಡದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಗತಿ ಕುಂಠಿತವಾಗಿದೆ ಎನ್ನುತ್ತಾರೆ. ಈಗ ಅನುಮತಿ ಸಿಕ್ಕಿರುವ ಕಂಪೆನಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಘಟ್ಟಪ್ರದೇಶವನ್ನು ಹಾಳುಗೆಡವಿರುವುದರ ಬಗ್ಗೆ, ಮತ್ತು ಆ ಅರುವತ್ತು ಯೋಜನೆಗಳೂ ಮತ್ತದೇ ದಟ್ಟಅರಣ್ಯ ಪ್ರದೇಶದಲ್ಲಿ ಬರುತ್ತದೆಂಬ ವಿಚಾರದ ಬಗ್ಗೆ, ಜಾಣ ಕಿವುಡುತನ ತೋರುತ್ತಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು ಆನೆಗಳಿಂದ ತೊಂದರೆಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಾಕಷ್ಟು ವಿವರವಾಗಿಯೇ ಮಾಹಿತಿಗಳನ್ನು ಸಂಗ್ರಹಿಸಿದರು. ಅವರೆದುರಿನಲ್ಲೇ ಆನೆಗಳು ಕೂಲಿಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆಯೂ ನಡೆಯಿತು. ಮತ್ತದೇ ಆನೆದಾರಿ ನಿರ್ಮಾಣ ಭರವಸೆಯನ್ನು ನೀಡಿ ಸಚಿವರು ವಾಪಸ್ಸಾದರು.

ಇವರೆಲ್ಲ ನಿರ್ಮಾಣ ಮಾಡಲು ಬಯಸುವ ಆನೆದಾರಿ  ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಇವರು ಹೇಳುವಂತೆ ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ  ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ಮಾಡಲಿರುವ ಹೊಸ ಆನೆದಾರಿಗಳಿವು. ಆದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟದ್ದಿಲ್ಲ. ಸಾಮಾನ್ಯವಾಗಿ  ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ದಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆ ದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃಧ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಆಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಬೇಧವಿಲ್ಲದೆ) ನೀಡುತ್ತಲೇ ಇರುತ್ತವೆ. ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿಧರ್ಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತ ಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ.  ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ.  ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.  ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು, (ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಹಾಗೂ ಐ.ಟಿ.-ಬಿ.ಟಿ ಕಂಪೆನಿಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರ. ಇದೀಗ ಆನೆ ದಾರಿ ನಿರ್ಮಾಣಕ್ಕೆಂದು ಇವರು ನೀಡುತ್ತೇವೆಂದು ಹೇಳುತ್ತಿರುವ ಮೊತ್ತವೂ ಅಷ್ಟೇ ಸಣ್ಣದು.

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಮಕ್ಕಳಿಗೆ ನಾನಾ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವೂ ಇದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಬದಲಿಯಾಗಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದು ವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಆನೆಗಳು ಹೀಗೇ ಉಳಿದರೆ ಪುಂಡಾನೆಗಳಾಗಿ ಪರಿವರ್ತನೆಯಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಈಗ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು. ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. (ಒತ್ತುವರಿ ಸರಿಯೆಂದು ನನ್ನ ವಾದವಲ್ಲ, ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಯಾವುದೇ ಸರ್ಕಾರದ ಕರ್ತವ್ಯ ಕೂಡಾ) ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ, ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ,  ಕೆಲವೊಮ್ಮೆ ಮೋಟಾರ್ ರ್‍ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಇವೂ ಕೂಡಾ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ.

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾದ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಆನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ನಮ್ಮ ಆಭಿವೃದ್ಧಿ ಕಾರ್ಯಗಳನ್ನೆಲ್ಲ ಪಶ್ಚಿಮ ಘಟ್ಟದ ಅರಣ್ಯ ಪದೇಶದಿಂದ ಶಾಶ್ವತವಾಗಿ ದೂರಮಾಡಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ. ಇದರೊಂದಿಗೆ ಸ್ವಇಚ್ಛೆಯಿಂದ ಅಲ್ಲಿಂದ ತೆರಳಲು ಬಯಸುವವರಿಗೆ (ಅನೇಕ ವರ್ಷಗಳಿಂದ ಅಲ್ಲಿ ನೆಲೆಸಿರುವ ಭೂರಹಿತ ಕೃಷಿಕಾರ್ಮಿಕರೂ ಸೇರಿದಂತೆ) ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಅನುಮಾನ ಕಂಡುಬರುತ್ತಿದೆ. ಇದರಿಂದಾಗಿಯೇ ಕೆಲವು ‘ಅಭಿವೃದ್ಧಿಪರ’ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪೆನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ (ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ). ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನು ಕೂಡಾ ತಜ್ಞರ ಮಾತಿಗೆ ಮಣಿದು ಹಿಂತೆಗೆದುಕೊಂಡು ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸಲು ಮುಂದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ….. ನಮಗೂ ಇಲ್ಲ-ಆನೆಗಳಿಗೂ ಇಲ್ಲ.

ಫೋಟೋ ಕೃಪೆ: sheldrickwildlifetrust.org

ಮೆಹಬೂಬ್ ಖಾನ್, ಮದರ್ ಇಂಡಿಯಾ, ಮತ್ತು ವಿಜಯ ಮಲ್ಯ

ಬಿ. ಶ್ರೀಪಾದ್ ಭಟ್

30-40ರ ದಶಕದ ಆ ಕಾಲವೇ ಅಂತಹದ್ದು. ಎರಡನೇ ಮಹಾಯುದ್ಧದ, ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ ಹೋರಾಟದ, ತಳ ಸಮುದಾಯಗಳ ಧ್ವನಿಯಾಗಿ ಅಂಬೇಡ್ಕರ್ ರವರ ಹೋರಾಟದ ಆ ದಶಕಗಳು ಅತ್ಯಂತ ಅತಂತ್ರ ಸ್ಥಿತಿಯ, ತಳಮಳದ, ಉದ್ವೇಗದ, ಹತಾಶೆಯ ದಿನಗಳಾಗಿದ್ದವು. ಆ ದಶಕಗಳು ಭಾರತದ ಹಿಂದಿ ಸಿನಿಮಾದ ಇತಿಹಾಸದಲ್ಲೇ ಅತ್ಯಂತ ಪ್ರಗತಿಪರ ದಶಕಗಳಾಗಿದ್ದವು. ಮರಾಠೀ ಮೂಲದ ವಿ.ಶಾಂತಾರಾಮ್ ಒಂದು ಕಡೆ ಸಾಮಾಜಿಕ ಸಮಸ್ಯೆಗಳನ್ನು, ತುಳಿತಕ್ಕೊಳಗಾದ ಹೆಣ್ಣಿನ ಬದುಕನ್ನು ಅಧರಿಸಿ ನಿರ್ಮಿಸಿದ ಚಿತ್ರಗಳಾದ “ಆದ್ಮಿ”, “ದುನಿಯಾ ನಾ ಮಾನೆ”, “ಡಾ.ಕೊಟ್ನಿಸ್ ಕಿ ಅಮರ್ ಕಹಾನಿ”, “ಅಮರ್ ಜ್ಯೋತಿ”, “ತೀನ್ ಬತ್ತಿ ಚಾರ್ ರಾಸ್ತೆ”, “ದೋ ಆಂಖೆ ಬಾರಹ್ ಹಾತ್” ಗಳು ಇವತ್ತಿಗೂ 50 ರಿಂದ 70 ವರ್ಷಗಳ ನಂತರವೂ ತಮ್ಮ ಮುಗ್ಧತೆಯಿಂದ, ಮಾನವೀಯತೆಯಿಂದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಭಾರತದ ಶ್ರೇಷ್ಟ ಚಿತ್ರಗಳ ಪಾಲಿಗೆ ಸೇರುತ್ತವೆ.

ಇನ್ನು ಭಾರತದ ಶ್ರೇಷ್ಟ ನಿರ್ದೇಶಕರಲ್ಲೊಬ್ಬರಾದ ಗುಜರಾತ್ ಮೂಲದಿಂದ ಬಂದ ಮೆಹಬೂಬ್ ಖಾನ್, ತುಳಿತಕ್ಕೊಳಗಾದ ಜನತೆಯ, ಬಡಜನರ, ಹಳ್ಳಿ ಬದುಕಿನ ವಿಷಯಗಳನ್ನೇ ಹೂರಣವನ್ನಾಗಿರಿಸಿಕೊಂಡು ಅತ್ಯಂತ ಅರ್ಥಪೂರ್ಣ, ಮಾನವೀಯ, ಜೀವಪರ ಚಿತ್ರಗಳನ್ನು ನಿರ್ಮಿಸಿದರು ಹಾಗು ನಿರ್ದೇಶಿಸಿದರು. ಇವರ ನಿರ್ದೇಶನದಲ್ಲಿ ತೆರೆ ಕಂಡಂತಹ ’ಔರತ್’, ’ರೋಟಿ,’, ’ಅಮರ್’. ,’ಆನ್’, ’ಅಂದಾಜ಼್’, ’ಅನ್ಮೋಲ್ ಘಡಿ’, ’ಮದರ್ ಇಂಡಿಯಾ’ ಚಿತ್ರಗಲೂ ಇಂಡಿಯಾ ಚಿತ್ರರಂಗದ ಅತ್ಯುತ್ತಮ ಚಿತ್ರಗಳ ಪಾಲಿಗೆ ಸೇರುತ್ತವೆ. ಅನೇಕ ಕಾರಣಗಳಿಗಾಗಿ ಇವರ ಚಿತ್ರಗಳಲ್ಲಿ ಹಸಿವು, ಹಳ್ಳಿಗರ ಮೇಲೆ ನಗರವಾಸಿಗಳ ದಬ್ಬಾಳಿಕೆ ಹಾಗು exploitation ಪದೇ ಪದೇ ತೋರಲ್ಪಡುತ್ತವೆ. ಆದರೆ ದುರಂತವೆಂದರೆ ಮೆಹಬೂಬ್ ಖಾನ್ ತಮ್ಮ ಪ್ರತಿಭೆಗೆ ತಕ್ಕಂತೆ ಅಷ್ಟೊಂದು ಚರ್ಚೆಗೆ, ಖ್ಯಾತಿಗೆ ಒಳಪಡಲಿಲ್ಲ. ಇದು ಈ ನೆಲದ ವಿಪರ್ಯಾಸಗಳಲ್ಲೊಂದು. ಈ ರೀತಿಯ ವಿಪರ್ಯಾಸಕ್ಕೆ ಅನೇಕ ಪ್ರತಿಭಾವಂತರು ಬಲಿಯಾಗಿದ್ದಾರೆ.

ಮೆಹಬೂಬ್ ಖಾನ್ ನಿರ್ದೇಶನದ, ಬೇಗಂ ಅಖ್ತರ್, ಸಿತಾರ ದೇವಿ, ಅಶ್ರಫ್ ಖಾನ್, ಚಂದ್ರ ಮೋಹನ್ ಅಭಿನಯದ 1942ರಲ್ಲಿ ತೆರೆ ಕಂಡ” ರೋಟಿ” ಚಿತ್ರ ಅನೇಕ ಕಾರಣಕ್ಕಾಗಿ ಇವತ್ತಿಗೂ ಪ್ರಸ್ತುತವಾಗಿದೆ, ತನ್ನ ಸಮಕಾಲೀನತೆಯನ್ನ ಉಳಿಸಿಕೊಂಡಿದೆ .ಇದರಲ್ಲಿ ಈ ಶ್ರೀಮಂತರ, ಮಧ್ಯಮ ವರ್ಗದವರ ಅಟ್ಟಹಾಸಕ್ಕೆ, ಕೊಳ್ಳುಬಾಕುತನಕ್ಕೆ, ಸ್ವಾರ್ಥಕ್ಕೆ, ಆಳದಲ್ಲಿ ಹುದುಗಿದ ದುರಾಸೆಗೆ, ಅದರ ಫಲವಾಗಿ ಮನುಕುಲದ ದುರಂತ, ಈ ದುರಂತದಲ್ಲಿ ತಮ್ಮದಲ್ಲದ ಕಾರಣಗಳಿಗೂ ಅಮಾಯಕರಾದ ಬಹುಪಾಲು ಹಳ್ಳಿಗಾಡಿನ ಜನತೆ, ಆದಿವಾಸಿಗಳು ಬಲಿಯಾಗುತ್ತಾರೆ ಹಾಗು ಅವರ ಮುಗ್ಧ ಪ್ರಪಂಚ ಈ ಎಲ್ಲ ಕ್ರೌರ್ಯಕ್ಕೆ ಸಿಕ್ಕು ನುಚ್ಚು ನೂರಾಗುತ್ತದೆ. ಇದನ್ನು ಮೆಹಬೂಬ್ ಖಾನ್ ತಮ್ಮ “ರೋಟಿ” ಚಿತ್ರದಲ್ಲಿ ಅತ್ಯಂತ ನಾಟಕೀಯವಾಗಿ, ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾರೆ. 80 ರ ದಶಕದಲ್ಲಿ ದೂರದರ್ಶನದಲ್ಲಿ ತಿಂಗಳಿಗೆ ಒಂದು ಬಾರಿ ಹಳೇ ಕಾಲದ ಮಹತ್ವದ ಚಿತ್ರಗಳನ್ನು ತೋರಿಸುತ್ತಿದ್ದರು. ಈ ಚಿತ್ರವನ್ನು ಆಗ ಕಾಲೇಜಿನಲ್ಲಿ ಓದುತ್ತಿದ್ದ ನಾವೆಲ್ಲ ಅದೃಷ್ಟವಶಾತ್ ದೂರದರ್ಶನದಲ್ಲಿ ನೋಡಿದ್ದೆವು.

ಸಂಕ್ಷಿಪ್ತವಾಗಿ ಇದರ ಕತೆ ಹೀಗಿದೆ:
ಲಕ್ಷ್ಮಿದಾಸ (ನಟ ಚಂದ್ರಮೋಹನ್)  ನಗರದ ಶ್ರೀಮಂತ ಮಹಿಳೆಯೊಬ್ಬಳನ್ನು ತಾನು ಅವಳ ಕಳೆದು ಹೋದ ಮಗನೆಂದು ಮೋಸದಿಂದ, ಸುಳ್ಳು ಹೇಳಿ ಅವಳ ಆಸ್ತಿಯ ಮಾಲೀಕನಾಗುತ್ತಾನೆ. ಪ್ರಪಂಚದ ಎಲ್ಲ ಶ್ರೀಮಂತಿಕೆಯೂ ತನ್ನ ಬಳಿ ಇರಬೇಕೆನ್ನುವ, ಬಡ ಜನರನ್ನು ತಿರಸ್ಕಾರದಿಂದ, ಅಮಾನವೀಯತೆಯಿಂದ ನೋಡುವ ಅವನ ವ್ಯಕ್ತಿತ್ವವೇ ಸ್ವಾರ್ಥ, ಕಪಟ, ವಂಚನೆಯಿಂದ ಕೂಡಿರುತ್ತದೆ. ಅವನ ನೀಚತನ ಎಲ್ಲಿಗೆ ಮುಟ್ಟುತ್ತದೆಯೆಂದರೆ ತಾನು ಮದುವೆಯಾಗುವ ಡಾರ್ಲಿಂಗ್‌ಳ( ಬೇಗಂ ಅಖ್ತರ್) ತಂದೆಯನ್ನೇ ಮೋಸದಿಂದ ಕೊಲೆ ಮಾಡಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಾನೆ. ಒಂದು ದಿನ ತನ್ನ ಪ್ರೇಯಸಿ ಡಾರ್ಲಿಂಗ್‌ಳೊಂದಿಗೆ ವಿಮಾನವನ್ನೇರಿ ಬಂಗಾರವನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ.

ಆದರೆ ಮಾರ್ಗ ಮಧ್ಯದಲ್ಲಿ ಆದಿವಾಸಿಗಳು ವಾಸಿಸುತ್ತಿರುವ ಹಳ್ಳಿಯೊಂದರಲ್ಲಿ ಅಪಘಾತಕ್ಕೀಡಾಗುತ್ತಾರೆ. ಈ ಆದಿವಾಸಿಗಳ ನಾಯಕ ಬಾಲಮ್ ( ಅಶ್ರಫ಼್ ಖಾನ್) ಹಾಗು ಅವನ ಪ್ರಿಯತಮೆ ಕಿನಾರಿ ( ಸಿತಾರ ದೇವಿ). ಇವರೆಲ್ಲ ದುಡ್ಡಿನ ಮುಖವನ್ನೇ ನೋಡಿರುವುದಿಲ್ಲ. ಅಲ್ಲಿರುವುದು ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮಾಜವಾದದ

ತತ್ವ. ಅವರೆಲ್ಲ barter ಪದ್ಧತಿಯಡಿ ಬದುಕುತ್ತಿರುತ್ತಾರೆ. ಒಬ್ಬರು ಬೆಳೆದದನ್ನು ಇನ್ನೊಬ್ಬರಿಗೆ ಕೊಟ್ಟು ಅವರು ಬೆಳೆದದ್ದನ್ನು ತಾವು ತೆಗೆದುಕೊಳ್ಳುವ ಈ ಸಮತಾವಾದದ ಜೀವನ ಕ್ರಮದಿಂದಾಗಿ ಆ ಹಳ್ಳಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವಿಸುತ್ತಿರುತ್ತಾರೆ. ಬಾಲಮ್ ಹಾಗೂ ಅವನ ಸಂಗಡಿಗರು ಅಪಘಾತಕ್ಕೀಡಾದ ಲಕ್ಷ್ಮಿದಾಸ ಹಾಗೂ ಡಾರ್ಲಿಂಗ್‌ಳನ್ನು ಅಪಘಾತದಿಂದ ರಕ್ಷಿಸುತ್ತಾರೆ. ಅದರೆ ಮೂಲಭೂತವಾಗಿ evil ಮನಸ್ಸಿನ ಲಕ್ಷ್ಮಿದಾಸ ಈ ಮುಗ್ಧ ಆದಿವಾಸಿಗಳ ಬಾಳಲ್ಲಿ ನರಕವನ್ನೇ ಸೃಷ್ಟಿಸುತ್ತಾನೆ. ಅವರಲ್ಲಿ ಬಂಗಾರದ ಆಸೆಯನ್ನು ತೋರಿಸುತ್ತಾನೆ. ಮೂಲವಾಸಿಗಳಾದ ಇವರನ್ನೇ ಒತ್ತೆಯಾಗಿರಿಸಿಕೊಳ್ಳುತ್ತಾನೆ. ಆದಿವಾಸಿಗಳ ಈ ಸುಖ ಸಂತೋಷದ ಜೀವನದಲ್ಲಿ ಈ ಲಕ್ಷಿ ಹಾಗೂ ಲಕ್ಮೀದಾಸನ ಪ್ರವೇಶದಿಂದ ಸಂಪೂರ್ಣ ಕೋಲಾಹಲವುಂಟಾಗುತ್ತದೆ. ಸಮತಾವಾದ ಶೈಲಿಯ ಬದುಕು ಛಿದ್ರಛಿದ್ರವಾಗಿ ಹಳ್ಳಿಗರು ಪರಸ್ಪರ ಕಿತ್ತಾಡುತ್ತ ತಮ್ಮ ಬದುಕನ್ನು ನಾಶಪಡಿಸಿಕೊಳ್ಳುತ್ತಾರೆ.  ಲಕ್ಷ್ಮಿದಾಸ, ಬಾಲಮ್ ಹಾಗು ಆದಿವಾಸಿಗಳನ್ನು ಮೋಸದಿಂದ, ಸುಳ್ಳು ಭರಸೆಗಳ ಮೂಲಕ ಅವರ ಇಬ್ಬರು ಹಳ್ಳಿಗರಾದ ಚಂಗು – ಮಂಗು  ಹಾಗು ಎತ್ತುಗಳ ನೆರವನ್ನು ಪಡೆದು ಅವರ ಮೂಲಕ ನಗರಕ್ಕೆ ಪ್ರಯಾಣ ಬೆಳೆಸುತ್ತಾನೆ. ಆದರೆ ನಂತರ ಇವನ ಹಾಗೂ ಡಾರ್ಲಿಂಗ್‌ಳ ಪತ್ತೆನೇ ಇರುವುದಿಲ್ಲ. ತಮ್ಮ ಜನ ಚಂಗು-ಮಂಗು ಹಾಗೂ ಎತ್ತುಗಳನ್ನು  ಹುಡುಕಿಕೊಂಡು ಪ್ರಥಮ ಬಾರಿಗೆ ನಗರಕ್ಕೆ ಪ್ರಯಾಣ ಬೆಳೆಸುವ ಬಾಲಮ್ ಹಾಗು ಕಿನಾರಿ ಅಲ್ಲಿ ಅನುಭವಿಸುವ ಅವಮಾನ, ನೋವುಗಳು, ಲಕ್ಮೀದಾಸನ ಕಪಟತನ ಚಿತ್ರದ ಮುಂದಿನ ಭಾಗ.

ಇಂತಹ ಕತೆಯುಳ್ಳ ಚಲನಚಿತ್ರವನ್ನು ನಿರ್ಮಿಸಿ ತಮ್ಮ ಮಾನವತಾವದದ, ಜೀವಪರ ಚಿಂತನೆಯನ್ನು ಬಿಗಿಯಾದ ಚಿತ್ರಕಥೆಯ ಮೂಲಕ, ನಾಟಕೀಯ ಅಭಿನಯದ ಮೂಲಕ ಅತ್ಯಂತ ಸಶಕ್ತವಾಗಿ ತೆರೆಗೆ ತಂದ ಮೆಹಬೂಬ್ ಖಾನ್ 15 ವರ್ಷಗಳ ನಂತರ ತಮ್ಮ ಜೀವಿತದ ಅತ್ಯುತ್ತಮ ಚಿತ್ರವಾದ “ಮದರ್ ಇಂಡಿಯಾ”ವನ್ನು ನಿರ್ಮಿಸಿ ನಿರ್ದೇಶಿಸುವುದರ ಮೂಲಕ ಪ್ರಗತಿಪರ ಧೋರಣೆಯೊಂದಿಗೆ ಕಾಲ ಬದಲಾದರೂ ತಾವು ಬದಲಾಗದೆ, ತಮ್ಮ ಚಿಂತನೆಗಳನ್ನು ಸದಾ ಹರಿತವಾಗಿರಿಸಿಕೊಂಡು ತಮ್ಮ ಚಿತ್ರಜೀವನದ ಇನ್ನೊಂದು ಮಜಲನ್ನು ತಲಪುತ್ತಾರೆ. ಆದರೆ ನಿಜದ, ಒರಿಜಿನಲ್ ಪ್ರತಿಭಾವಂತನ ಬಗ್ಗೆ ಈ ದೇಶ ಸದಾಕಾಲ ವಿಸ್ಮೃತಿಯನ್ನು, ಮೆಳ್ಳುಗಣ್ಣನ್ನು, ಅನೇಕ ಬಾರಿ ಕುರುಡುಗಣ್ಣನ್ನು ತೋರಿಸುತ್ತದೆ. ಇದು ರಾಮಮನೋಹರ ಲೋಹಿಯ, ರುತ್ವಿಕ್ ಘಟಕ್, ಎಂ.ಡಿ.ನಂಜುಂಡ ಸ್ವಾಮಿ, ಹೀಗೆ ಅನೇಕರ ಪಾಲಿಗೆ ನಿಜವಾಗಿ ಹೋಯಿತು. ನಿರ್ದೇಶಕ ಮೆಹಬೂಬ್ ಖಾನ್ ಪಾಲಿಗೆ ಕೂಡ.

ಈಗಲೂ ನೋಡಿ ಈ ಉದ್ಯಮಿ ವಿಜಯ ಮಲ್ಯ ದುಡ್ಡನ್ನು ಹುಣಿಸೇಕಾಯಿ ಬೀಜದ ತರಹ ಬಳಸಿ ಭೋಗದಲ್ಲಿ, ರಂಜನೆಯಲ್ಲಿ, ಸಂಪೂರ್ಣ ಸುಖದಲ್ಲಿ ಬದುಕಿದ. ತನ್ನ ಜೀವಿತಾವಧಿಯುದ್ದಕ್ಕೂ ಸಾಮಾಜಿಕತೆಗೆ, ಸಾಮಜಿಕ ಜವಾಬ್ದಾರಿಗಳಿಗೆ ಕವಡೆ ಕಾಸಿನ ಬೆಲೆ ಕೊಡದೆ ಅಪ್ಪಟ ಬಂಡವಾಳಶಾಹಿಯಂತೆ ಮೆರೆದ ಹಾಗೂ ತನ್ನ ಈ ಐಷಾರಮಿನ ಬದುಕಿನಲ್ಲಿ ಒಮ್ಮೆಯೂ ಇಲ್ಲಿನ ಇನ್ನೊಂದು ಮುಖವಾದ ಸಾಮಾಜಿಕ ನರಕದ ಬಗ್ಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದೆ ರೋಟಿ ಚಿತ್ರದ ಲಕ್ಷ್ಮೀದಾಸನಂತೆ ಹಣದ ಹಿಂದೆ, ಸುಖದ ಹಿಂದೆ ಮೆರೆದ ಈ ಪ್ಲೇಬಾಯ್ ಉದ್ಯಮಿ ಈ ವಿಜಯ್ ಮಲ್ಯ ಈಗಿನ ತನ್ನ ಖಾಸಗೀ ವ್ಯಪಾರದ ಕುಸಿತಕ್ಕೆ,ದಿವಾಳಿತನಕ್ಕೆ ಸರ್ಕಾರವನ್ನು ದೂಷಿಸುತ್ತಾನೆ. ಆದರೂ ಭಂಡನಂತೆ ಸರ್ಕಾರದ, ಬ್ಯಾಂಕಿನ ನೆರವು ಕೇಳುತ್ತಾನೆ. ಈ ರೀತಿ ಅನೇಕ ಲಕ್ಷ್ಮೀದಾಸರಿದ್ದಾರೆ ನಮ್ಮ ವ್ಯವಸ್ಥೆಯಲ್ಲಿ ಅಂಬಾನಿಗಳ, ಸಿಂಘಾನಿಗಳ ಇತ್ಯಾದಿಗಳ ರೂಪದಲ್ಲಿ.

ಮಧುಕರ ಶೆಟ್ಟಿ ಮತ್ತವರ ಆದರ್ಶ ದುಷ್ಟಕೂಟಗಳ ದಾಳಗಳಾಗದಿರಲಿ…

– ರವಿ ಕೃಷ್ಣಾರೆಡ್ಡಿ

ಮಧುಕರ ಶೆಟ್ಟರು ಲೋಕಾಯುಕ್ತದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು—ಅದೂ ಈ ರೀತಿ, ವ್ಯಕ್ತಪಡಿಸುವ ಸಂದರ್ಭ ಇದಾಗಿರಲಿಲ್ಲ.

ಅವರು ಕರ್ನಾಟಕದ ದುಷ್ಟ ರಾಜಕಾರಣದ ಮತ್ತು ಮಾಧ್ಯಮದೊಂದಿಗಿನ ಅದರ ಅನೈತಿಕ ಸಂಬಂಧದ ದುಷ್ಟಕೂಟದ ಕೈಯಲ್ಲಿನ ದಾಳಗಳಾಗಿ ಉಪಯೋಗಿಸಲ್ಪಟ್ಟಿದ್ದಾರೆ.

ಯಾವ ಸಂದರ್ಭವೊಂದನ್ನು ಸಂಸ್ಥೆಯೊಂದನ್ನು ಇನ್ನೂ ಗಟ್ಟಿಗೊಳಿಸುವುದಕ್ಕಾಗಿ, ಕ್ರಿಯಾಶೀಲವಾಗಿ ಮಾಡುವುದಕ್ಕಾಗಿ, ಅಲ್ಲಿನ ಕಲ್ಮಶಗಳನ್ನು ತೆಗೆಯುವುದಕ್ಕಾಗಿ ಬಳಸಿಕೊಳ್ಳಬೇಕಿತ್ತೊ, ಅದನ್ನು ಈ ಮಹಾದುಷ್ಟಕೂಟ ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿದೆ. ಲೋಕಾಯುಕ್ತದ ಗತಿ ಏನಾಗುತ್ತದೆ ಎಂದು ಪ್ರಜ್ಞಾವಂತರು ಕಕಮಕರಾಗಿರುವಾಗ ಇದು ಖಂಡಿತವಾಗಿ ಅನಗತ್ಯವಾಗಿತ್ತು.

ಕಳೆದ ಆರೇಳು ತಿಂಗಳಿನಿಂದ ಮಧುಕರ ಶೆಟ್ಟರೊಡನೆ ಆಪ್ತವಾಗಿ ಕುಳಿತು ಮಾತನಾಡಿರಬಹುದಾದ ಯಾರಿಗೂ ಅವರು ಸಂದರ್ಶನದಲ್ಲಿ ಹೇಳಿರುವ ಮಾತುಗಳು ಬಹುಶಃ ಹೊಸದೇನೂ ಅಲ್ಲ. ಅವರು ಅಮೆರಿಕಕ್ಕೆ ಹೊರಡುವ ಒಂದೆರಡು ತಿಂಗಳಿನ ಹಿಂದೆ ಶೆಟ್ಟರನ್ನು ಭೇಟಿಯಾಗುವ ಸಂದರ್ಭ ಒದಗಿತ್ತು. ಸ್ನೇಹಿತರೊಬ್ಬರು ಅವರನ್ನು ಭೇಟಿ ಮಾಡುವವರಿದ್ದರು. ಜೊತೆಗೆ ನಾನೂ ಹೋಗಿದ್ದೆ. ಹಾಗಾಗಿ ಈ ಸಂದರ್ಶನದಲ್ಲಿ ಹೇಳಿದ ಎಲ್ಲವನ್ನೂ ಅಂದು ಅವರು ನಮ್ಮೊಡನೆ ಹಂಚಿಕೊಂಡಿದ್ದರು. ಹಾಗಾಗಿ ಈ ಸಂದರ್ಶನದಲ್ಲಿ ಪ್ರಸ್ತಾಪಿತವಾಗಿರುವ ಒಂದು ವಿಷಯ (ಅವರ ಮದುವೆ ಮತ್ತು ಅವರ ತಂದೆಯವರ ವಿರೋಧ) ಬಿಟ್ಟು ಮಿಕ್ಕೆಲ್ಲವೂ ನನಗೆ ಮೊದಲೇ ತಿಳಿದವಾಗಿದ್ದವು.

ಆದರೆ, ಈಗ ಆವರ ಈ ಮಾತುಗಳು ಸಂದರ್ಶನ ರೂಪದಲ್ಲಿ ಬಂದಿರುವುದು, ಅದನ್ನು ಆ ಪತ್ರಿಕೆ ಪ್ರಸ್ತುತ ಪಡಿಸಿರುವ ರೀತಿ ಮತ್ತು ಅದರ ಸಂದರ್ಭ, ಇವು ಯಾವುವೂ ಲೋಕಾಯುಕ್ತ ಸಂಸ್ಥೆಗಾಗಲಿ, ಕರ್ನಾಟಕದ ಜನತೆಗಾಗಲಿ ಒಳ್ಳೆಯದು ಮಾಡುವ ಹಾಗೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಸಂದರ್ಶನ ನೀಡುವುದೇ ಅಪಾಯಕಾರಿ. ಅದೂ ಇಲ್ಲಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಸಮಾನ ಪಿತೂರಿಕೋರರಾಗಿರುವಾಗ.

ಇಷ್ಟಕ್ಕೂ ಮಧುಕರ ಶೆಟ್ಟರ ಅಂತಿಮ ಗುರಿ ಏನು? ಅದು ತಾವು ಈ ಹಿಂದೆ ದುಡಿದ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಜನಪರವಾಗಿ, ಪ್ರಜಾಸತ್ತೆಯ ಪರವಾಗಿ ಬಲಪಡಿಸುವುದಾಗಿತ್ತೆ ಅಥವ ಅದನ್ನು ದುರ್ಬಲಗೊಳಿಸುವುದಾಗಿತ್ತೆ? ಅವರದು ಖಂಡಿತವಾಗಿ ಮೊದಲನೆಯದೇ ಆಗಿರಬೇಕು. ಆದರೆ ಅವರು ಅದನ್ನು ಒಂದು ಲೇಖನವಾಗಿ ತಮ್ಮೆಲ್ಲಾ ವಿಚಾರಗಳನ್ನು ತರ್ಕಬದ್ಧವಾಗಿ ಒಂದು ಕಡೆಯಿಂದ ಮಂಡಿಸುತ್ತ ನಿರೂಪಿಸಿ, ಬರೆದು, ಪ್ರಕಟಿಸಬೇಕಿತ್ತೇ ಹೊರತು, ಸಂದರ್ಶನವಾಗಿ ಅಲ್ಲ. ಹಾಗೆ ಮಾಡದೇ ಹೋದದ್ದರ ಪರಿಣಾಮಗಳನ್ನು ಈಶ್ವರಪ್ಪನವರಂತಹ ಕಿಡಿಗೇಡಿ, ಸಂಕುಚಿತ ದೃಷ್ಟಿಯ, ಸಣ್ಣತನದ ರಾಜಕಾರಣಿಗಳ ಹೇಳಿಕೆಗಳಲ್ಲಿ ನೋಡುತ್ತಿದ್ದೇವೆ. ಕುಮಾರಸ್ವಾಮಿಯವರು ಸಂತೋಷ ಹೆಗ್ಡೆಯವರ ವಿರುದ್ಧ ತಮ್ಮ ವೈಯಕ್ತಿಕ ದ್ವೇಷ ಕಾರಿಕೊಳ್ಳಲು ಬಳಕೆಯಾಗಿದೆ. ಯಡಿಯೂರಪ್ಪ ಸಹ ಇಂದು ತಮ್ಮ ವಿರುದ್ಧದ ಆರೋಪಗಳಿಗೆ ಶೆಟ್ಟರ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಹೇಳಿಕೆ ಇಲ್ಲಿ ಯಾವ ಮಟ್ಟದ ಹಾನಿ ಮಾಡಿದೆ ಮತ್ತು ಭ್ರಷ್ಟರಿಗೆ ಮಧುಕರ ಶೆಟ್ಟಿ ಯಾವ ಪರಿ ಅನುಕೂಲಕರವಾಗಿ ಪರಿಣಮಿಸಿದ್ದಾರೆ ಎಂದು ಗೊತ್ತಾಗುತ್ತದೆ. ಇಂದು ಕರ್ನಾಟಕದ ಭ್ರಷ್ಟರೆಲ್ಲ ಒಂದೇ ಮಾತುಗಳನ್ನು ಆಡುತ್ತಿದ್ದಾರೆ.

ಇಷ್ಟಕ್ಕೂ ಮಧುಕರ ಶೆಟ್ಟರು ಮತ್ತು ಆ ಸಂದರ್ಶನ ಓದಿದವರು ಒಂದು ವಿಚಾರವನ್ನು ಗಮನಿಸಬೇಕು: ಲೋಕಾಯುಕ್ತ ಸಂಸ್ಥೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಲ್ಲ. ಭ್ರಷ್ಟಾಚಾರ ಇದ್ದಿದ್ದರಿಂದಾಗಿ ಮತ್ತು ಅದನ್ನು ತಡೆಗಟ್ಟುವ ನಿಮಿತ್ತವಾಗಿ ಜನಪ್ರತಿನಿಧಿಗಳ ಸರ್ಕಾರ ಲೋಕಾಯುಕ್ತವನ್ನು ಸ್ಥಾಪಿಸಿರುವುದು. ಲೋಕಾಯುಕ್ತದಲ್ಲೂ ಭ್ರಷ್ಟರಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತ ಹೋಗಬೇಕೆ ಹೊರತು ಅದನ್ನು ಮತ್ತಷ್ಟು ದುರ್ಬಲಗೊಳಿಸುವುದು ತರವಲ್ಲ.

ನಾನು ಹೆಚ್ಚುಕಮ್ಮಿ ವ್ಯವಸ್ಥೆಯ ಹೊರಗಿದ್ದು ಮಾತನಾಡುವವನು. ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಆದಷ್ಟೂ ಅದರ ಸಂಪರ್ಕದಿಂದ ಹೊರಗೇ ಇರುವ ರೀತಿ ವರ್ತಿಸುತ್ತೇನೆ. ಇದು ನಾನು ನನ್ನನ್ನು ಅವಮಾನ-ಸೋಲುಗಳಿಂದ ದೂರ ಇಟ್ಟುಕೊಳ್ಳುವ ರೀತಿ. ಈ ವ್ಯವಸ್ಥೆಯ ಭಾಗವಾದರೆ ನಾನೂ ಭ್ರಷ್ಟನಾಗುತ್ತೇನೆ ಎನ್ನುವ ಭಯ ನನಗಿಲ್ಲ. ಆದರೆ ಸೋಲು-ಅವಮಾನಗಳು ಖಂಡಿತ ಆಗುತ್ತವೆ. ಆಗಿವೆ. ಹಾಗಾಗಿಯೆ ಅವುಗಳ ಅವಶ್ಯಕತೆಯಿಲ್ಲ ಎಂದು ದೂರ ಇರುತ್ತೇನೆ.  ಕೆಲವೊಮ್ಮೆ ಸೋಲುವುದು ನೈತಿಕವಾಗಿ ತಪ್ಪೇನೂ ಅಲ್ಲ, ಮತ್ತು ಆ ಪ್ರಯತ್ನ ನಾವು ನಂಬಿಕೊಂಡ ಆದರ್ಶದ ಕ್ರಿಯಾರೂಪ ಎಂದಾದಾಗ, ಅಂತಹ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ. ಅಲ್ಲಿ ಸೋಲುವುದು ಶತ:ಸಿದ್ಧವಾಗಿದ್ದರೂ. ಮಾತುಗಳೂ ಅಷ್ಟೆ. ಕೆಲವೊಂದು ವೇದಿಕೆಗಳಲ್ಲಿ ತುಂಬಾ ಆದರ್ಶದ, ಅವಾಸ್ತವಿಕ ಎನ್ನಬಹುದಾದ ಮಾತುಗಳನ್ನು ಆಡುತ್ತೇನೆ. ಅದು ಈ ಹೊತ್ತಿನಲ್ಲಿ ಅವಾಸ್ತವ ಎಂದು ಗೊತ್ತಿದ್ದರೂ. ಆದರೆ ಅವು ಎಂದೂ ಸಾಧ್ಯವಾಗದ ಮಾತುಗಳೇನೂ ಅಲ್ಲ. ಪ್ರಪಂಚದ ಯಾವುದೋ ಭಾಗದಲ್ಲಿ ಒಂದಲ್ಲ ಒಂದು ಸಲ ಅವು ಸಾಧಿಸಿ ತೋರಿಸಲ್ಪಟ್ಟಿವೆ, ಇಲ್ಲವೇ ಸಾಧಿಸಲ್ಪಡುತ್ತವೆ. ನನ್ನ ಇಂತಹ ಆಚಾರ-ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ನಾನೊಬ್ಬ ಹುಚ್ಚ, ಪೆದ್ದ, ತಿಕ್ಕಲು, ಎಂದೆಲ್ಲಾ ಅಂದಿದ್ದಾರೆ. ಅದು ಅವರ ವೈಯಕ್ತಿಕ ದ್ವೇಷ ಕಾರಿಕೊಳ್ಳುವ ತೆವಲಿಗಾಗಿಯೇ ಹೊರತು ಅಲ್ಲಿ ಬೇರೇನೂ ಇರಲು ಸಾಧ್ಯವಿಲ್ಲ.

ಇದನ್ನೆಲ್ಲಾ ಹೇಳಬಯಸಿದ್ದು ಮಧುಕರ ಶೆಟ್ಟರು ವ್ಯಕ್ತಪಡಿಸಿರುವ ಕೆಲವು ಆದರ್ಶಪ್ರಾಯದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ಸೂಚಿಸಲು ಮತ್ತು ಅವು ಅವರಂತಹವರು ಆಡುವ ಮಾತುಗಳಲ್ಲ ಮತ್ತು ಇದು ಸಂದರ್ಭವೂ ಅಲ್ಲ ಎಂದು ಹೇಳಲು. ಅವರು ವ್ಯವಸ್ಥೆಯ ಭಾಗವಾಗಿದ್ದವರು. ಆದರೆ ಅತೀ ಎನ್ನಿಸುವಷ್ಟು ಆದರ್ಶದ ಮಾತುಗಳನ್ನು ಆಡಿದ್ದಾರೆ. ನನ್ನಂತಹ ‘ಪೆದ್ದ’ನೇ ಆಶ್ಚರ್ಯಪಡುವಷ್ಟು. ಒಂದು, ಅಧಿಕಾರಿಯ ಮರಣದ ವಿಷಯವಾಗಿದ್ದರೆ, ಮತ್ತೊಂದು “ವೈಯಕ್ತಿಕ ವರ್ಚಸ್ಸು ಮತ್ತು ನೈತಿಕತೆ ವೃದ್ಧಿ ಗೀಳಿಗೆ ಬಿದ್ದ ವ್ಯಕ್ತಿಯಿಂದ ಆತ ಪ್ರತಿನಿಧಿಸುವ ಸಂಸ್ಥೆ ಹಾಳಾಗುತ್ತದೆ. ಪ್ರಾಮಾಣೀಕನೆಂಬ ಬಿರುದು-ಬಾವಲಿಗಳ ಬೆನ್ನತ್ತಿದವನು ಸಂಸ್ಥೆಯ ಮಾರ್ಯಾದೆ ಮತ್ತು ಗೌರವ ಉಪೇಕ್ಷಿಸುತ್ತಾನೆ. ಇಂಥವರು ಭ್ರಷ್ಟರಿಗಿಂತಲೂ ಅಪಾಯಕಾರಿ. ಇಷ್ಟಕ್ಕೂ ಒಬ್ಬ ವ್ಯಕ್ತಿ, ಅಧಿಕಾರಿ, ವ್ಯವಸ್ಥೆಯ ಮುಖ್ಯಸ್ಥನನ್ನು ಪ್ರಾಮಾಣಿಕ ಎಂದು ಕರೆಯುವುದೇ ಹಾಸ್ಯಾಸ್ಪದ.” ಎನ್ನುವ ಮಾತುಗಳು. ಇದನ್ನು ಶೆಟ್ಟರು ಸಹಜವಾಗಿ ಇಡೀ ಸಮಾಜವನ್ನು, ಎಲ್ಲಾ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಆದರ್ಶದ ನೆಲೆಯಲ್ಲಿ ಹೇಳಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿಯವರು ಮಾತ್ರ ಇದನ್ನು ನೇರ ಸಂತೋಷ ಹೆಗ್ಡೆಯವರಿಗೆ ತಿರುಗಿಸಿದ್ದಾರೆ.

ಅವರಂತಹ ವ್ಯಕ್ತಿ, ವ್ಯವಸ್ಥೆಯ ಭಾಗವಾಗಿದ್ದವರು, ಅದನ್ನು ಸುಧಾರಿಸಲು ಸಹಕರಿಸಬೇಕೇ ಹೊರತು (ಅದನ್ನು ಅವರ ಅಧಿಕಾರವಧಿಯುದ್ದಕ್ಕೂ ಮಾಡಿದ್ದಾರೆ ಎಂದು ನಾನು ಖಂಡಿತ ನಂಬುತ್ತೇನೆ. ಅದನ್ನು ಗೌರವಿಸುತ್ತೇನೆ ಕೂಡಾ.) ಆದರ್ಶದ ನೆಲೆಯಲ್ಲಿ ಮಾತನಾಡುತ್ತ ಅದನ್ನು undermine ಮಾಡಬಾರದು. ಈ ವಿಚಾರಗಳನ್ನು ಎತ್ತುವುದಕ್ಕೆ, ಪ್ರಸ್ತುತಗೊಳಿಸುವುದಕ್ಕೆ ಬೇರೆಯದೇ ಆದ ವೇದಿಕೆಗಳಿವೆ, ರೀತಿಗಳಿವೆ. ಅದನ್ನು ಅವರು ಗಮನಿಸಬೇಕಿತ್ತು.

ಒಬ್ಬ ಪೋಲಿಸ್ ಅಧಿಕಾರಿ ಸಾಮಾಜಿಕವಾಗಿ ಎಂತಹ ಜೀವನ ನಡೆಸಬೇಕು, ಯಾರೊಂದಿಗೆ ಎಷ್ಟು ಬೆರೆಯಬೇಕು, ಬೆರೆಯಬಾರದು, ಎನ್ನುವುದರ ಬಗ್ಗೆ ಶೆಟ್ಟರು ಅವರ ವೃತ್ತಿಯಲ್ಲಿರುವ ಯಾರಿಗೇ ಆದರೂ ಆದರ್ಶಪ್ರಾಯರಾಗುವ ವ್ಯಕ್ತಿ. ಅವರೇ ಹೇಳಿಕೊಂಡಂತೆ ಬೆಂಗಳೂರಿನಲ್ಲಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿಲ್ಲ. ಪಾರ್ಟಿಗಳಿಗೆ ಹೋಗುವುದಿಲ್ಲ. ಹೀಗಾಗಿ ಯಾರೂ ತಮ್ಮನ್ನು ಸ್ನೇಹ, ನೆಂಟಸ್ತಿಕೆಯ ಮೂಲಕ ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯಾಧೀಶರೆಲ್ಲ ಎಂತೆಂತವರ ಜೊತೆಯೆಲ್ಲಾ ವೇದಿಕೆ ಹಂಚಿಕೊಳ್ಳಲು, ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳಲು ಔಚಿತ್ಯವಿಲ್ಲದೆ ಸಿದ್ಧರಾಗಿ ನಿಂತಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಹೆಂಡತಿ ಮತ್ತು ಮಗಳು ದೇಶದ ಹೊರಗಿದ್ದಾಗಲೂ ಇಲ್ಲಿ ಪೊಲಿಸ್ ಅಧಿಕಾರಿ ಇರಬೇಕಾದ ರೀತಿಯಲ್ಲಿ ವಿನಾಕಾರಣ ಸಮಾಜದ ಎಲ್ಲರೊಂದಿಗೂ ಗುರುತಿಸಿಕೊಳ್ಳದೆ ನಿಷ್ಟುರ ಜೀವನ ನಡೆಸಿದವರು ಮಧುಕರ್ ಶೆಟ್ಟರು. ಅವರು ಅನವಶ್ಯಕವಾಗಿ ದುರುಳರ ದಾಳಗಳಾಗುವುದು,  ಅದೂ ಪ್ರಾಮಾಣಿಕತೆ ಮತ್ತು ನೈತಿಕತೆಯ ಹೆಸರಿನಲ್ಲಿ, ಖಂಡಿತ ಬೇಸರದ ಸಂಗತಿ.

ಬಹುಶ: ಈ ಲೇಖನವನ್ನು ಮಧುಕರ ಶೆಟ್ಟರು ಓದಿದರೂ ಓದಬಹುದು. ಹಾಗಾದ ಪಕ್ಷದಲ್ಲಿ ಅವರಲ್ಲಿ ನನ್ನ ಒಂದು ವಿನಂತಿ ಏನೆಂದರೆ, “ದಯವಿಟ್ಟು ನಿಮ್ಮ ಸಂದರ್ಶನ ಮತ್ತು ಅದರ ಮೂಲಕ ನೀವು ನಿಜಕ್ಕೂ ಹೇಳಬಯಸಿದ್ದು ಏನು, ಲೋಕಾಯುಕ್ತದಲ್ಲಿರುವ ಸಮಸ್ಯೆಗಳೇನು, ಅದನ್ನು ದೋಷಮುಕ್ತ ಮಾಡಲು ಮತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಮಾಡಬೇಕಿರುವ ಕೆಲಸಗಳೇನು, ಇತ್ಯಾದಿಯೆಲ್ಲ  ವಿಸ್ತೃತವಾಗಿ ಬರೆಯಿರಿ. ಅದನ್ನು ಒಂದಲ್ಲ, ಕರ್ನಾಟಕದ ಎಲ್ಲಾ ಪ್ರಮುಖ ಕನ್ನಡ-ಇಂಗ್ಲಿಷ್ ಪತ್ರಿಕೆಗಳಿಗೂ ಕಳುಹಿಸಿಕೊಡಿ. ನಿಮ್ಮ ಸಂದರ್ಶನವನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿರುವವರಿಗೆ ಅದು ಎಚ್ಚರವೂ ಆಗಲಿ.”

ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

ಮಧುಕರ ಶೆಟ್ಟಿ ಸಂದರ್ಶನ ವಿವಾದ – ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರ ಸಂಚಿಗೆ  ಸಮಾಜವಾದಿ ಪತ್ರಕರ್ತರ ಐ.ಪಿ.ಎಸ್ ಮಗ ಬಲಿಪಶು

-ಚಂದ್ರಗಿರಿ

ದಿನಾಂಕ 13-11-2011ರ ಭಾನುವಾರ ಕಾರ್ಪೊರೇಟ್ ಎಂ.ಪಿ. ಮಲೆಯಾಳಿ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿ ಬರುವ ಕನ್ನಡ ಪ್ರಭದಲ್ಲಿ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ಐ.ಪಿ.ಎಸ್. ಅಧಿಕಾರಿ ಮಧುಕರ ಶೆಟ್ಟಿ ಆವರ ಸಂದರ್ಶನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕೊಳದಲ್ಲಿ ಅಪಾರವಾದ ಹೊಂಡನ್ನು ಸೃಷ್ಟಿ ಮಾಡಿದೆ. ರಜೆ ಮೇಲೆ ಅಮೆರಿಕಾಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿರುವ  ಐ.ಪಿ.ಎಸ್. ಅಧಿಕಾರಿ ಮುಗ್ಧ ಮಧುಕರ ಶೆಟ್ಟೆ ಅವರ ಸಂದರ್ಶನ ಪ್ರಾಮಾಣಿಕತೆಯಿಂದ ಕೂಡಿದ್ದರೂ ಸಮಯೋಚಿತ ಸಂಚಿಗೆ ಬಲಿಯಾಗಿದೆ.

ಈಚಿನ ದಿನಗಳಲ್ಲಿ ಕರ್ನಾಟಕದ ಜನರಿಗೆ  ಲೋಕಾಯುಕ್ತದ ಬಗ್ಗೆ ನಂಬಿಕೆಯನ್ನು ಶಿಥಿಲಗೊಳಿಸುವ ಮಧುಕರ್ ಅವರ ಈ ಸಂದರ್ಶನ ಈ ಸಂದರ್ಭದಲ್ಲಿ ಪ್ರಕಟವಾಗಿರುವುದು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಿದ್ದ ಒಂದು ಸಂಸ್ಥೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಅನುಮಾನವಿದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಮಧುಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡಿರುವ ದಟ್ಟ ಅನುಮಾನಗಳು ನನ್ನನ್ನು ಕಾಡುತ್ತಿವೆ.

ಕನ್ನಡದ ಹೆಸರಾಂತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮಶೆಟ್ಟರ ಮಗನಾದ ಶ್ರೀ ಮಧುಕರ ಶೆಟ್ಟರು ಪತ್ರಿಕಾ ವಲಯ ಹಾಗೂ ಪ್ರಗತಿಪರ ವಲಯದಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ನಾನು ಬಲ್ಲ ಅನೇಕ ಪತ್ರಿಕಾ ಸ್ನೇಹಿತರು ಅವರು ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದನ್ನು, ಲೋಕಾಯುಕ್ತದಲ್ಲಿ ಭ್ರಷ್ಟರನ್ನು ಮಟ್ಟ ಹಾಕಿದ ಬಗೆಯನ್ನು, ಅದರಲ್ಲೂ ವಿಶೇಷವಾಗಿ ಕಟ್ಟಾ ಸುಬ್ರಮಣ್ಯಾ ನಾಯ್ಡು ಅವರ ಭೂ ವಂಚನೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿಜೃಂಭಣೆಯಿಂದ ವಿವರಿಸಿದ್ದಾರೆ.

ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ ಐ.ಪಿ.ಎಸ್. ತರಬೇತಿ ಪಡೆದು ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟರು ಇದ್ದಕ್ಕಿದ್ದಂತೆ ಎರಡು ವರ್ಷ ಅಮೆರಿಕದಲ್ಲಿ ಓದುವ ಸಲುವಾಗಿ ರಜೆ ಹಾಕುವ ಪ್ರಸಂಗ ಎದುರಾದಾಗ ಅವರ ಆಪ್ತ ಬಳಗ ಶೆಟ್ಟರಿಗೆ ಲೋಕಾಯುಕ್ತ ಕಾರ್ಯ ವೈಖರಿ ಬಗ್ಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ವಿಷಾದನೀಯವಾಗಿ ವಿವರಿಸುತ್ತಿತ್ತು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡ ಬಗ್ಗೆಯೂ  ಗಿಲ್ಡ್ ಮತ್ತು ಕ್ಲಬ್‌ಗಳಲ್ಲಿ ಈ ಬಳಗ ಮಾತನಾಡಿದ್ದುಂಟು.

ಮಧುಕರ್ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆಯನ್ನು ಪ್ರಶ್ನಿಸಿ ಅವರ ಅತಿಯಾದ ಪ್ರಚಾರವನ್ನು ಟೀಕಿಸುತ್ತಿದ್ದುದು ಅವರ ಪತ್ರಿಕಾ ಮಿತ್ರರ ಮಾತಿನಿಂದ ನಮಗೆ ಗೊತ್ತಾಗುತ್ತಿತ್ತು. ಸಂತೋಷ ಹೆಗ್ಡೆ ಬಗ್ಗೆ ತಮಗಿರುವ ಅಸಮಾಧಾನವನ್ನು ಮಧುಕರ ಲೋಕಾಯುಕ್ತ ಸಂಸ್ಥೆಯೇನು ಸಾಚ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವ್ಯಕ್ತ ಪಡಿಸುತ್ತಿದ್ದುದು ಅನೇಕ ಪತ್ರಕರ್ತರಿಗೆ ಗೊತ್ತಾಗಿತ್ತು. ಆದರೆ ಸಂತೋಷ ಹೆಗ್ಡೆ ಅವರ ಪ್ರಾಮಾಣಿಕತೆ ಮುಂದೆ ಮಧುಕರರ “ಗಾಸಿಪ್” ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.

ಆದರೀಗ ಲೋಕಾಯುಕ್ತ  ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆ ರೇಣುಕಾಚಾರ್ಯ, ಕುಮಾರಸ್ವಾಮಿ, ಬಿ.ಜೆ.ಪಿ. ಈಶ್ವರಪ್ಪ, ಮಾಜಿ ರೌಡಿ ಶೀಟರ್ ಬಿ.ಕೆ. ಹರಿಪ್ರಸಾದ್ ಅಂತಹವರ ಟೀಕೆಗೆ ತುತ್ತಾಗಿರುವ ಸಂದರ್ಭದಲ್ಲಿ ಮುಗ್ಧ ಮಧುಕರ  ಕನ್ನಡ ಪ್ರಭಕ್ಕೆ ದೂರವಾಣಿ ಸಂದರ್ಶನ ನೀಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹೂರಣವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲಿಗೆ ಹೋಗಿ ಬರುತ್ತಿರುವಾಗ,  ಮಗನ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಮಂಡಲ ಪಂಚಾಯತಿ ಸದಸ್ಯರ ರೀತಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಮಾಜಿ ಪ್ರಧಾನಿಗಳು ಧಮಕಿ ಹಾಕಿರುವಾಗ ಮಧುಕರರ ಮುಗ್ಧ ಹೇಳಿಕೆ ಪ್ರಾಮಾಣಿಕತೆಯ ಆದರ್ಶವನ್ನು ನಂಬಿ ಬದುಕು ನಡೆಸುವ ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತು. ನಮಗೆ ಈಗ ಕರ್ನಾಟಕದಲ್ಲಿ ಸಂತೋಷ ಹೆಗ್ಡೆ ಬಿಟ್ಟರೆ ಬೇರಾರೂ ಪ್ರಾಮಾಣಿಕರು ಮತ್ತು ಪರಿಪಕ್ವರೂ ಕಾಣುತ್ತಿಲ್ಲದ ಈ ಸಂದರ್ಭದಲ್ಲಿ ಮಧುಕರರ ಸಂದರ್ಶನ ಪ್ರಾಮಾಣಿಕರ ಆತ್ಮಸ್ಥೈರ್ಯಕ್ಕೆ  ಸವಾಲಾಗಿ ಪರಿಣಮಿಸಿದೆ.

ಮಧುಕರ ಶೆಟ್ಟರು ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ನಮ್ಮ ಎರಡು ಮಾತಿಲ್ಲ. ಅಂತೆಯೇ ಇವರು ಸಿನಿಕರು ಎಂಬುದು ಸಂದರ್ಶನದ ಪ್ರತಿ ಹಂತದಲ್ಲೂ ವ್ಯಕ್ತವಾಗಿದೆ. ಕೆಟ್ಟು ಕೆರ ಹಿಡಿದಿರುವ ಈ ವ್ಯವಸ್ಥೆಯಲ್ಲಿ ಪರಿಸ್ಥಿತಿಯನ್ನು ನಿಧಾನಕ್ಕೆ ನಿಯಂತ್ರಣಕ್ಕೆ ತಂದುಕೊಂಡು ಸಮಾಜವನ್ನು ಸುಧಾರಣೆ ಮಾಡುವ ಹಂತಕ್ಕೆ ಹೋಗಬೇಕು. ಅದು ಬಿಟ್ಟು ತಡ ರಾತ್ರಿ ಗೋಷ್ಠಿಗಳಲ್ಲಿ ಪರಿಚಯಸ್ಥರ ಮುಂದೆ ತಾನೇ ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ದೂರಿ ಒಳ್ಳೆಯವನಾಗಬಾರದು. ಇದು ಮೀಡಿಯಾ ಫ್ರೆಂಡ್ಲಿ ಆಫೀಸರ್ ಮನೋಭಾವನೆಗಿಂತ ಮಿಗಿಲಾಗಿ ಏನೂ ಅಲ್ಲ.

ದೂರದ ಅಮೆರಿಕೆಯಿಂದ ದೂರವಾಣಿಯಲ್ಲಿ ನೀವು ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಕನ್ನಡ ನಾಡಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ ನೊಡಿ ಮಧುಕರ್..:

  • ಬಿ.ಜೆ.ಪಿ ಅಧ್ಯಕ್ಷ ಈಶ್ವರಪ್ಪ ‘ಕಳ್ಳರನ್ನು ಕಳ್ಳರೇ ಹಿಡಿಯುವುದು ಎಂತಹ ಹಾಸ್ಯಾಸ್ಪದ’ ಎಂದಿದ್ದಾರೆ.
  • ‘ಮಧುಕರ್ ನನಗೆ ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದರು. ಅದಕ್ಕೆ ನಾನು ಲೋಕಾಯುಕ್ತ ಸಂಸ್ಥೆ ಬಗ್ಗೆ ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದು,’ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಸಂತೋಷ ಹೆಗ್ಡೆ ಅವರನ್ನು ಮತ್ತೊಮ್ಮೆ ಟೀಕೆ ಮಾಡಿದ್ದಾರೆ.
  • ಮಧುಕರ್ ಅಮೆರಿಕಾಕ್ಕೆ ಹೋದ ಮೇಲೆ ಸಿಐಎ ಏಜೆಂಟ್ ಥರ ಮಾತನಾಡುತ್ತಾರೆ ಕಣ್ರೀ ಎಂದು ವಡ್ಡರ್ಸೆಗೆ ಆಗದ ಕೆಲವು ಕುಹಕಿ ಕಮುನಿಸ್ಟರು ಕೇಕೆ ಹಾಕುತ್ತಿದ್ದಾರೆ.

ಏನೇ ಆಗಲಿ, ಮಧುಕರ ಶೆಟ್ಟರು ಕನ್ನಡಿಗರಿಗೆ ಏನಾದರೂ ತಮ್ಮ ಸಂದೇಶ ರವಾನಿಸುವದಿದ್ದರೆ ಯೂಟ್ಯೂಬ್ ಮುಖಾಂತರ ಮಾತನಾಡಲಿ. ನಾವು ಅದನ್ನು ಡೌನ್ ಲೋಡ್ ಮಾಡಿ ಪ್ರೆಸ್ ಕ್ಲಬ್‌ನಲ್ಲಿ ಪ್ರದರ್ಶಿಸುತ್ತೇವೆ. ಇನ್ನು ಮುಂದೆ ಮಧುಕರ್ ಕಾಸಿಗಾಗಿ ಸುದ್ದಿ ಪ್ರಕಟಿಸುವ ಚೆಡ್ಡಿ ಪತ್ರಕರ್ತರಿಗೆ ಟ್ರ್ಯಾಪ್ ಆಗುವುದು ಬೇಡ.

objection-to-yeddyurappa's-approval-for-statewide-paper-page2

ಕಾಸಿಗಾಗಿ ಸುದ್ದಿ ಪ್ರಕಟಿಸದ ದಿನಪತ್ರಿಕೆಗಳು ಈಗ ಯಾವು ಉಳಿದಿವೆ?

– ಪರಶುರಾಮ ಕಲಾಲ್

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.

ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.

ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್‌ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?

ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.