Monthly Archives: December 2011

Hope good sense dawn on all media men in 2012

Kariyappa Gudadahalli

The role of media began this year (2011) with exposing corruption of unimaginable magnitude and ended with attracting strong criticism from the present chairman of Press Council of India. Besides, a few powerful media people had embarrassing days for having friendship with Niira Radia, a PR person interested in setting up the cabinet as per the wishes of her clients.

‘Sensationalising’, ‘trivialising’, ‘ignoring’ and sometimes ‘glorifying’ are some of the charges generally levelled against media. Media’s role this year was no different. It sensationalised violence on its late evening crime bulletins, trivialised ‘news’ by giving undue importance to incidents worth ignoring. It also ignored the issues worth an in-depth coverage. On top of all these, the one thing which vast media never failed to perform was ‘glorifying’. No doubt, this is in reference to Anna movement in general and Anna Hazare in particular.

A group of five people claimed to have conducted consultations with crores of people over a draft bill consisting innumerable clauses and sub-clauses. And, the media believed it. Hardly made any attempts to question the process of consultation. Needless to state that Anna movement, despite many follies within, succeeded to evoke conscience of public against corruption. But the impact has not yet reached the grassroots. Nobody can state that earnings of a traffic police inspector or an RTO or a sub registrar in Revenue Department or a minister/MLA have come down following the Anna movement. There are no instances of the educated class, which rallied behind Anna, taking up a fight against corrupt officer on demanding bribe either.

Forget the government establishments, the media which gave the possible widest coverage to anti-corruption movement, has not been able to throw out the corrupt within. Journalists, better known as lobbyists, continue to enjoy good will of the management and get regular hikes and promotions.

A Kannada news channel, whose owner was actively identified with Anna movement, attracted attention of other media people by changing its approach in reporting charges of corruption, misuse of office faced by former Chief Minister B.S Yeddyurappa. Any layman regularly watching the channel could notice ‘the change’ within days of Yeddyurappa’s release from the central prison. The change was well displayed in his two-hour long interview with two anchors and a journalist. Anchors generally known for conducting media trial were on a different mission that day. Except the bloggers and websites, no media house raised a voice demanding an inquiry into reports of ‘top journalists’ receiving huge cash from Bellary brothers, accused of illegal mining.

In simple terms, media houses glorified Anna movement against corruption and ignored blatant corruption within. No editor has come forward to declare his assets voluntarily. But they ask their reporters to file a story if the new Lokayukta fails to do it soon after assuming his office. Let the veterans come out with sites, houses they own and declare whether the property they own is in proportionate to their known sources of income.

Nobody would dare to object to the comment that media have continued with their attempts to take society backwards this year too. They gave undue time and space for astrologers and soothsayers. Husbands of women named Lakshmi had a nightmarish experience when a Kannada news channel shamelessly aired a programme professing that whoever married women named Lakshmi had to face hardships throughout their life. The channel people seemed to have not understood the impact the programme had on innocent viewers, particularly girls named Lakshmi.

Going by the present trend one can’t be hopeful of a better year ahead. Of course, the same people continue to hold positions, continue with sermons on objectivity, honesty and many other virtues in their columns. Columns by a couple of senior journalists, committed to democratic principles and diversity are an exception. One can hope a better year in prompt efforts aimed at working out alternatives to mainstream media. Such efforts do not demand huge investment and need to compromise with values. Though their audience is limited it can expand through continuous effort.

Hope good sense prevail upon all media men and media houses in 2012.

ಟಿ.ಆರ್.ಸಿ ಅಮಾನತು: ಯಾರ ಮಸಲತ್ತು?

-ಪರುಶುರಾಮ ಕಲಾಲ್
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಟಿ.ಆರ್. ಚಂದ್ರಶೇಖರ್ ಒಬ್ಬರು. ಅವರನ್ನು ಈಗ ತಾಂತ್ರಿಕ ಕಾರಣವೊಂದರ ನೆಪದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ  ಅಮಾನತ್ತುಗೊಳಿಸಿದೆ. ಕನ್ನಡ ವಿವಿಯಲ್ಲಿ ಇದೊಂದು ಕೆಟ್ಟ ಬೆಳವಣಿಗೆ. ಕುತ್ಸಿತ ಮನಸ್ಸುಗಳು ಹಾಗೂ ವಿಘ್ನ ಸಂತೋಷಿಗಳು ಮಾತ್ರ ಇಂತಹ ನಿರ್ಣಯ ಕೈಗೊಳ್ಳಬಲ್ಲರು.

ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಿದ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಚಂದ್ರಶೇಖರ್ ಅವರು ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಕನ್ನಡ ವಿಶ್ವವಿದ್ಯಾಲಯ ಕಾರ್ಯ ಕಾರಿ ಸಮಿತಿ ಅಮಾನತ್ತುಗೊಳಿಸಿದೆ. ವಾಸ್ತವವೆಂದರೆ ಅದನ್ನು ಯಾರ ಗಮನಕ್ಕೂ ತಂದಿಲ್ಲ ಎನ್ನುವುದು ಮಾತ್ರ ಅಪ್ಪಟ ಸುಳ್ಳಾಗಿದೆ.
ರಾಯಚೂರು ಜಿಲ್ಲಾ ಪಂಚಾಯತ್ ಹಾಗು ಯುನಿಸೆಫ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ ಯೋಜನೆ (ಟುವರ್ಡ್ಸ್ ಎ ಚೈಲ್ಡ್ ಫ್ರೆಂಡ್ಲಿ ಡಿಸ್ಟಿಕ್ಟ್-ವಿಲೇಜ್ ಲೆವೆಲ್ ಮೈಕ್ರೋ ಪ್ಲಾನಿಂಗ್ ಅಂಡ್ ಕನ್ವರ್ಜೆಂಟ್ ಮಾನಿಟರಿಂಗ್ ಆಫ್ ಬೇಸಿಕ್ ಸರ್ವೇಸ್ ಇನ್ ರಾಯಚೂರು ಡಿಸ್ಟಿಕ್) ಈ ಯೋಜನೆಯಲ್ಲಿ ಪಾಲ್ಗೊಳ್ಳುವ ತಮ್ಮ ಇರಾದೆಯನ್ನು ಪ್ರಸ್ತಾಪವೊಂದರ ಮೂಲಕ ವಿಭಾಗದ ಗಮನಕ್ಕೆ ತಂದಿದ್ದಾರೆ. 2008 ನವೆಂಬರ್ 26ರಂದು ನಡೆದ ವಿಭಾಗದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಈ ಯೋಜನೆಯ ಬಗ್ಗೆ ವಿಭಾಗದ ಅನುಮತಿಯನ್ನು ಪಡೆದಿದ್ದಾರೆ. ಈ ಸಭೆಯ ನಡಾವಳಿಯ ಪ್ರತಿಯನ್ನು ಆಡಳಿತಾಂಗಕ್ಕೂ ಕಳಿಸಲಾಗಿದೆ.
2008-09ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಅದೇ ವರ್ಷ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಯೋಜನೆ ಪೂರ್ಣಗೊಳಿಸಿರುವುದನ್ನು ವಿವಿ ಗಮನಕ್ಕೆ ತಂದಿದ್ದಾರೆ. ವಿವಿ ಗಮನಕ್ಕೆ ತರದೇ ಈ ಯೋಜನೆಯ ಜವಾಬ್ದಾರಿ ನಿರ್ವಹಿಸುವ ಉದ್ದೇಶ ಟಿ.ಆರ್. ಚಂದ್ರಶೇಖರ್ ಅವರಿಗಿದ್ದರೆ ಯೋಜನೆ ಪ್ರಸ್ತಾವನೆಯನ್ನೇ ವಿಭಾಗಕ್ಕೆ ಸಲ್ಲಿಸುತ್ತಿರಲಿಲ್ಲ. ವಾರ್ಷಿಕ ವರದಿಯಲ್ಲಿ ಇದನ್ನು ದಾಖಲಿಸುತಲೂ ಇರಲಿಲ್ಲ.
ತಪ್ಪಿತಸ್ಥ ವ್ಯಕ್ತಿ ಮುಂದೆ ನಡೆಯಲಿರುವ ತನಿಖೆಯನ್ನು ಪ್ರಭಾವಿಸಬಹುದೆನ್ನುವ ಕಾರಣಕ್ಕಾಗಿ ತನಿಖೆಗೆ ಮುನ್ನ ವ್ಯಕ್ತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವ ಕ್ರಮವಿದೆ. ಟಿ.ಆರ್. ಚಂದ್ರಶೇಖರ್ ಅವರು ವಿವಿ ಆಡಳಿತಾಂಗದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅವರು ಅಧ್ಯಾಪಕರು ಮಾತ್ರ. ತನಿಖೆ ನಡೆಸಿ, ತಪ್ಪಿತಸ್ಥರೆಂದು ತೀರ್ಮಾನವಾಗುವ ಮುಂಚೆಯೇ ಅಮಾನತ್ತು ಮಾಡಿರುವುದರ ಹಿಂದಿನ ಉದ್ದೇಶ ಏನು?
1996ರಲ್ಲಿ ಕನ್ನಡ ವಿವಿಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಸ್ಥಾಪನೆಗೊಂಡಾಗ ವಿಭಾಗದ ಉದ್ದೇಶವೇ ಅಭಿವೃದ್ಧಿ ಸಿದ್ಧಾಂತ ಮತ್ತು ಆಚರಣೆಯನ್ನು ಅಧ್ಯಯನ ಮಾಡುವುದು. ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು. ಅಭಿವೃದ್ಧಿ ತಜ್ಞರ ರೂಪದಲ್ಲಿ ವಿವಿಧ ಸಂಘ, ಸಂಸ್ಥೆಗಳಿಗೆ ನೆರವು ನೀಡುವುದೇ ಆಗಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ  ಪ್ರದೇಶಗಳ ಜಿಲ್ಲಾ ಪಂಚಾಯತ್ಗಳೊಂದಿಗೆ ಸೇರಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ, ಜನಯೋಜನೆ ಸಿದ್ದಪಡಿಸುವುದು, ಅಭಿವೃದ್ಧಿ ಪಾಲುದಾರರಿಗೆ ತರಬೇತಿ ನೀಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಲ್ಲೂ ಕೂಡ ವಿಭಾಗದ ಉದ್ದೇಶದ ಭಾಗವಾಗಿಯೇ ಡಾ. ಟಿ.ಆರ್. ಚಂದ್ರಶೇಖರ್ ಯುನಿಸೆಫ್ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಯುನಿಸೆಫ್ ಮತ್ತು ಜಿಲ್ಲಾ ಪಂಚಾಯ್ತಿಯು ಜಂಟಿಯಾಗಿ ಕೈಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವು ಎರಡೂ ಸರ್ಕಾರಿ  ಸಂಸ್ಥೆಗಳೇ ಆಗಿವೆ. ಲೆಕ್ಕಪತ್ರಗಳನ್ನು ಐ.ಎ.ಎಸ್. ಅಧಿಕಾರಿಗಳು ಧೃಢೀಕರಿಸಿದ್ದಾರೆ. ಅವರು ಯಾವ ಆರೋಪವನ್ನೂ ಸಹ ಮಾಡಿಲ್ಲ. ಟಿ.ಆರ್.ಚಂದ್ರಶೇಖರ್ ಅವರೇ ಸಲ್ಲಿಸಿದ ವಾರ್ಷಿಕ  ವರದಿಯನ್ನು ಉಲ್ಲೇಖಿಸಿಯೇ ಅಮಾನತ್ತು ಶಿಕ್ಷೆ ನೀಡಲಾಗಿದೆ.
ಯೊಜನೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಧನ ಸಹಾಯ ಪಡೆದುಕೊಂಡು ಯೋಜನೆಯನ್ನು ಪೂರ್ಣಗೊಳಿಸದಿರುವ, ಯೋಜನೆಗಾಗಿ ಪಡೆದ ಹಣದ ಹೊಂದಾಣಿಕೆಯನ್ನು ವರ್ಷಾನುಗಟ್ಟಲೆ ಮಾಡದಿರುವ ಹಲವಾರು ಪ್ರಕರಣಗಳು ಕನ್ನಡ ವಿವಿಯಲ್ಲಿ ಇವೆ. ಈ ಬಗ್ಗೆ ಹಲವಾರು ಬಾರಿ ಕನ್ನಡ ವಿವಿ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಗಳೂ ಆಗಿವೆ. ಇವುಗಳ ಬಗ್ಗೆ ವಿವಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎನ್ಜಿಓಗಳೊಂದಿಗೆ ಯೋಜನೆಯನ್ನು ಹಂಚಿಕೊಂಡು ಅಲ್ಲೂ ಇಲ್ಲೂ ಲಾಭ ಮಾಡಿಕೊಂಡವರೂ  ವಿ.ವಿ.ಯಲ್ಲಿ ಇದ್ದಾರೆ. ಸರ್ಕಾರಿ ಸಾರ್ವಜನಿಕ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಯೋಜನೆ ಪೂರ್ಣಗೊಳಿಸಿದವರಿಗೆ ಮಾತ್ರ ಈ ಶಿಕ್ಷೆ ನೀಡಲಾಗಿದೆ.
ಟಿ.ಆರ್. ಚಂದ್ರಶೇಖರ್ ಅವರ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಸಮಾಜೋಮುಖಿ ಅಭಿವೃದ್ಧಿ ಬರಹಗಳು ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ನೇರ ಟೀಕೆಯಿಂದ ಕೂಡಿರುತ್ತಿದ್ದವು. ಅವರು ಕನ್ನಡ ವಿವಿಯ 80 ಏಕರೆ ಭೂಮಿಯ ಪರಭಾರೆ ವಿರುದ್ಧ ಹೋರಾಟದ ಮಂಚೂಣಿಯಲ್ಲಿದ್ದರು. ಆಡಳಿತಾಂಗದ ನಿರ್ಣಯವನ್ನು ಸದಸ್ಯರಾಗಿ ತಡೆ ಹಿಡಿಯುವ ಕೆಲಸ ಮಾಡಿದರು. ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದ್ದ ಅವರ ನಿಲುವಿನಿಂದಾಗಿ ಭಗ್ನಗೊಂಡಿದ್ದ ಮನಸ್ಸುಗಳು ತಾಂತ್ರಿಕ ಕಾರಣವನ್ನು ಹೆಕ್ಕಿ ತೆಗೆದು, ಅವರ 17 ವರ್ಷದ ವಿವಿಯ ಸೇವೆಯನ್ನು ಪರಿಗಣಿಸಿದೇ ಅಮಾನತ್ತು ಎನ್ನುವ ಘೋರ ಶಿಕ್ಷೆಯನ್ನು ನೀಡಿ ಕೇಕೇ ಹಾಕಿ ನಕ್ಕಿವೆ. ಕನ್ನಡ ವಿವಿಯಲ್ಲಿ ಚೂರುಪಾರು ಮಾನ ಮರ್ಯಾದೆಯಿಂದ ಕೂಡಿದವರು ಕನ್ನಡ ವಿವಿಯ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ಮನಸ್ಸುಗಳನ್ನು ಜಡಗೊಳಿಸಿ, ಅಧ್ಯಾಪಕರನ್ನು  ಗುಮಾಸ್ತರನ್ನಾಗಿ ಮಾಡಿ ಹಾಕಲಿದೆ ಈ ಅಮಾನತ್ತು ಎಂಬ ನಿರ್ಣಯ. ಇದೊಂದು ಯಕಶ್ಚಿತ ಘಟನೆ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರು ಯೋಚಿಸುತ್ತಿದ್ದಾರೆ. ಅವರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಬಲಿಗಳು ಅವರೇ ಆಗಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ  ಕಾರ್ಯಕಾರಿ ಸಮಿತಿಯು ಕೂಡಲೇ ಅಮಾನತ್ತು ಹಿಂತೆಗೆದುಕೊಳ್ಳುವ ಮೂಲಕ ವಿವಿಯ ಘನತೆ ಉಳಿಸಿಕೊಳ್ಳಬೇಕು.

ಉತ್ತರ ಪ್ರದೇಶದ ಮುಸ್ಲಿಮರ ಆಯ್ಕೆಗಳು…

ಚಿತ್ರಕೃಪೆ: ಗಾರ್ಡಿಯನ್

ಬಿ. ಶ್ರೀಪಾದ ಭಟ್

ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದಿದ್ದಾವೆ ಐದು ಹೆಣನು
ಬಂದು ಬಂದು ಅಳುವರು-ಬಳಗ ಘನವಾದ ಕಾರಣ
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ
— ಅಲ್ಲಮ

ಇತ್ತೀಚೆಗೆ ತೆಹಲ್ಕ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಉತ್ತರ ಪ್ರದೇಶದ ಮುಸ್ಲಿಂ ನಾಯಕರು, ಧರ್ಮ ಗುರುಗಳು ಕಳೆದ 60 ವರ್ಷಗಳಿಂದ ಚುನಾವಣಾ ರಾಜಕೀಯ ಲಾಭಕ್ಕಾಗಿ ರಾಜ್ಯದ ಅಮಾಯಕ, ಮುಗ್ಧ ಮುಸ್ಲಿಮರನ್ನು ಬಳಸಿಕೊಂಡು ತದನಂತರ ಉಂಡ ಬಾಳೆ ಎಲೆಯನ್ನು ಬಿಸಾಡಿದಂತೆ ಕೆಳೆಗೆಸೆಯುವ ಆ ರಾಜ್ಯದ ಪ್ರಮುಖ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಈ ಮುಸ್ಲಿಂ ನಾಯಕರ ಆಕ್ರೋಶಕ್ಕೆ ತುತ್ತಾಗಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿಗಳೆಂಬ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳು. ಮುಸ್ಲಿಂರ ಇಂದಿನ ಹೊಸ ಸಿಟ್ಟಿನ ಲಾಭದ ಪಾಲು ನೇರವಾಗಿ ತನ್ನ ತಟ್ಟೆಯೊಳಗೆ ಜಾರಿಬೀಳುತ್ತದೆ ಎನ್ನುವ ದುರಾಸೆಯಲ್ಲಿ ಕಾಯುತ್ತಿರುವುದು ಇದೇ ಮುಸ್ಲಿಂರ ರಾಷ್ಟ್ರೀಯತೆಯನ್ನು ಸದಾ ಕಾಲ ಒಂದಲ್ಲ ಒಂದು ರೀತಿ ಪ್ರಶ್ನಿಸಿ ಅವರನ್ನು ಅವಮಾನಿಸುತ್ತಿರುವ ಕೋಮುವಾದಿ ಸಂಘಪರಿವಾರ.

ಇದಕ್ಕೆಲ್ಲ ಉತ್ತರಿಸಬೇಕಾದ ಆ ರಾಜ್ಯದ ಮುಗ್ಧ ಮುಸ್ಲಿಂ ಪ್ರಜೆಗಳು ಮಾತ್ರ ಗೊಂದಲದ ಗೂಡಾಗಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣಾ ಫಲಿತಾಂಶಗಳು ಮಾತ್ರ ಇದಕ್ಕೆ ಸರಿಯಾದ ಉತ್ತರ ಕೊಡಬಲ್ಲವು. ಇದಕ್ಕೆ ಉದಾಹರಣೆಯಾಗಿ ಒಂದು ಕಾಲಕ್ಕೆ ಬಿಎಸ್‌ಪಿ ಪಕ್ಷದ ಪ್ರಮುಖ ಮುಸ್ಲಿಂ ನೇತಾರರಾಗಿದ್ದ ಇಲ್ಯಾಸ್ ಅಜ್ಮಿ ಅವರು ಆ ಪಕ್ಷದಿಂದ ಹೊರ ನಡೆದು ತಮ್ಮದೇ ಸ್ವತಂತ್ರ ಪಕ್ಷ “ಆರ್.ಐ.ಪಿ”ಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಮುಸ್ಲಿಂರ ಹಕ್ಕುಭಾದ್ಯತೆಗಳಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಕಳೆದ 60 ವರ್ಷಗಳಿಂದ ಮುಮಸ್ಲಿಮರನ್ನು ನಂಬಿಸಿ ಕೈಕೊಟ್ಟ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಈ ಬಾರಿ ಮಣ್ಣುಮುಕ್ಕಿಸಲು ಟೊಂಕಕಟ್ಟಿ ನಿಂತಿರುವ ಇಲ್ಯಾಸ್ ಅವರು ಇದಕ್ಕಾಗಿ ಯಾವುದೇ ಸೈದ್ಧಾಂತಿಕ ತತ್ವಗಳ ಬದಲಾಗಿ ಆಸರೆ ಪಡೆದುಕೊಳ್ಳುತ್ತಿರುವುದು  ಇದೇ ಮುಸ್ಲಿಂರ ದುರ್ಗತಿಗೆ ಕಾರಣರಾದ ಸಂಘಪರಿವಾರವನ್ನು. ಈಗ ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಇಲ್ಯಾಸ್ ಅಜ್ಮಿ ಅವರು ಬಿಜೆಪಿಯ ಮುಸ್ಲಿಂ ಮುಖವಾಡವಾಗಿ ಗುರುತಿಸಲ್ಪಡುತ್ತಿದ್ದಾರೆ. ಬಿಜೆಪಿಯೊಂದಿಗೆ ವೇದಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ.

ಇವರಷ್ಟು ನೇರವಾಗಿ ಸಂಘಪರಿವಾರದೊಂದಿಗೆ ಗುರುತಿಸಿಕೊಳ್ಳದಿದ್ದರೂ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಗೆ ಮಾತ್ರ  ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿರುವ ಇತರ ಮುಸ್ಲಿಂ ನಾಯಕರೆಂದರೆ “ಶಾಂತಿ ಪಕ್ಷ”ದ ಮಹಮ್ಮದ್ ಅಯೂಬ್, “ಐಎಮ್‌ಸಿ”ಯ ತಕೀರ್ ರಾಜ, ಹಾಗೂ ಜಾವೆದ್ ಸಿದ್ದಿಕಿ. ಇವರ ಆಳದ ಆಕ್ರೋಶ ನಿಜಕ್ಕೂ ಅರ್ಥಪೂರ್ಣ ಹಾಗೂ ಸಹಜವಾದದ್ದು. ಆದರೆ ಬೆಂಕಿಯಿಂದ ಹೊರಬರಬೇಕೆನ್ನುವ ನಿರ್ಧಾರದಿಂದ ಇವರು ಬೀಳುತ್ತಿರುವುದು ಬಾಣಲೆಗೆ ಕೂಡ ಅಲ್ಲ, ಸಂಘ ಪರಿವಾರವೆಂಬ ಕುದಿಯುವ ಲಾವಾರಸಕ್ಕೆ. ಇಲ್ಲಿ ಬಂದು ಬಿದ್ದರೆ ಚಣ ಮಾತ್ರದಲ್ಲಿ ಬೂದಿಯಾಗುವುದು ಗ್ಯಾರಂಟಿ. ಇದು ಈ ನಾಯಕರಿಗೆ ಗೊತ್ತು. ಆದರೆ ಅವರು ಪ್ರದರ್ಶಿಸುವ ಅಸಹಾಯಕತೆ ಅರ್ಥವಾಗುವಂತದ್ದಾರೂ ಅದಕ್ಕೆ ಕಂಡುಕೊಳ್ಳುವ ಪರಿಹಾರ ಮಾತ್ರ ಅತ್ಮಹತ್ಯಾತ್ಮಕವಾದದ್ದು. ವರ್ಷಗಳಷ್ಟು ಕಾಲ ಅವಮಾನಕ್ಕೆ, ಮೋಸಕ್ಕೆ ಒಳಗಾಗಿರುವ ಸಮುದಾಯವೊಂದಕ್ಕೆ ಅದರಿಂದ ಬಿಡುಗಡೆ ಪಡೆಯಬೇಕಾದರೆ ಸೈದ್ಧಾಂತಿಕವಾಗಿ, ವೈಚಾರಿಕವಾಗಿ, ಸರಿ ತಪ್ಪುಗಳನ್ನು ಅಳೆದು ಸುರಿದು ಯೋಚಿಸಿ ಅತ್ಯಂತ ನ್ಯಾಯಬದ್ಧ ದಾರಿಯಲ್ಲಿ ನಡೆಸುವ, ತಮ್ಮೊಳಗಿನ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ನಾಯಕತ್ವದ ತಂಡವೊಂದರ ಅವಶ್ಯಕತೆ ಸದಾಕಾಲ ಬೇಕಾಗುತ್ತದೆ. ಏಕೆಂದರೆ ಕತ್ತಲಿನ ಈ ದೂರದ ದಾರಿಯನ್ನು ಕ್ರಮಿಸುವುದು ಅತ್ಯಂತ ಕಷ್ಟಕರವಾದದ್ದಾರರೂ, ಅತ್ಯಂತ ದೀರ್ಘವಾದದ್ದಾರೂ ನಂತರ ಅದು ತಲಪುವ ಗುರಿ ಮಾತ್ರ ನಿರ್ಣಾಯಕವಾಗಿರುತ್ತದೆ, ನೆಮ್ಮದಿಯದಾಗಿರುತ್ತದೆ. ಹಾಗೂ ಅಲ್ಲಿ ಸರಾಗವಾದ ಉಸಿರಾಡುವಂತಹ, ಆತ್ಮಾಭಿಮಾನದ ವಾತಾವರಣವಿರುತ್ತದೆ. ಆದರೆ ಅಂದಿಗೂ ಹಾಗೂ ಇಂದಿಗೂ ಭಾರತ ಮುಸ್ಲಿಂ ಸಮುದಾಯಗಕ್ಕೆ ಈ ಸುಯೋಗ ಲಭ್ಯವಾಗಿಲ್ಲ.

ಪ್ರತಿಗಾಮಿ ಬ್ರಾಹ್ಮಣ್ಯದ ವೈದಿಕ ಸಿದ್ಧಾಂತವನ್ನು, ಶೂದ್ರರ ದೈಹಿಕತೆಯನ್ನೂ ಬಳಸಿಕೊಂಡು ಮುಸ್ಲಿಂರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಒಂದಂಶದ ಕಾರ್ಯಕ್ರಮದ ಮೂಲಕ “ಏಕ್ ಧಕ್ಕ ಔರ್ ದೋ”ಎನ್ನುವ ಠೇಂಕಾರದ ಕ್ರೌರ್ಯದ ಅಮಾನುಷತೆಯನ್ನು ಬಳಸಿಕೊಂಡು ಮುಸ್ಲಿಂರ ನರಮೇಧವನ್ನು ನಡೆಸಿ, ರಾಷ್ಟ್ರೀಯತೆಯ, ಹುಸಿ ದೇಶಪ್ರೇಮದ  ಹೆಸರಿನಲ್ಲಿ ಸದಾಕಾಲ “ಅವರನ್ನು” ಅವಮಾನಕ್ಕೆ ಗುರಿಪಡಿಸುತ್ತ “ಅವರು” ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಬದುಕುವಂತಹ ಸ್ಥಿತಿ ನಿರ್ಮಾಣಗೊಳಿಸಿರುವ ಈ ಸಂಘ ಪರಿವಾರ ಅಧಿಕಾರದ ದುರಾಸೆಗೆ ಇಂದು ಯಾವುದೇ ನಾಚಿಕೆಯಿಲ್ಲದೆ ಈ ಗೊಂದಲದ ವಾತಾವರಣದ ದುರ್ಲಾಭ ಪಡೆಯುವ ಹುನ್ನಾರದಲ್ಲಿದೆ. ದಶಕಗಳ ಕಾಲ ಸದಾ ಸುಳ್ಳುಗಳನ್ನೇ ಹುಟ್ಟಿ ಹಾಕುತ್ತಾ, ಫ್ಯಾಸಿಸಂ ಮಾರ್ಗವನ್ನೇ ಬಳಸಿ ತನ್ನ ಗುಪ್ತ  ಕಾರ್ಯಸೂಚಿಗಳನ್ನು ಅನುಷ್ಟಾನಗೊಳಿಸಿಕೊಳ್ಳುತ್ತಿರುವ ಇವರ ಕುಟಿಲ ನೀತಿಗೆ ಇಂದು ಉತ್ತರ ಪ್ರದೇಶದಲ್ಲಿ ಮುಸ್ಲಿಂರು ವಿಚಿತ್ರ ರೀತಿಯಲ್ಲಿ ಬಲಿಯಾಗುತ್ತಿರುವುದು ಅತ್ಯಂತ ದುರಂತ ಸ್ಥಿತಿ. ಇದು ಮುಸ್ಲಿಂರ ಹೊರಗಿನ ಶತ್ರುಗಳು ಇವರನ್ನು ಒಂದು ಕಡೆಗೆ ಜಗ್ಗಿದರೆ ಒಳಗಿನ ಶತ್ರುಗಳಾದ ಇಸ್ಲಾಂ ಮೂಲಭೂತವಾದವು ಇವರನ್ನು ಮತ್ತೆಲ್ಲಿಗೂ ಹೋಗದಂತೆ ಕಟ್ಟಿಹಾಕಿದೆ. ಪ್ರತಿ ಹೆಜ್ಜೆಗೂ ಅಧುನಿಕತೆಯನ್ನು ,ಸಮಾನತೆಯನ್ನು ಚಿವುಟಿಹಾಕುವ ಈ ಮೂಲಭೂತವಾದಿಗಳ ಕಪಿಮುಷ್ಟಿಯಿಂದ ನಿಸ್ಸಾಹಯಕ ಮುಸ್ಲಿಂ ಸಮಾಜವನ್ನು ಬಿಡುಗಡೆಗೊಳಿಸುವ ಯಾವ ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಬಹುಪಾಲು ಮುಸ್ಲಿಂ ನಾಯಕರು ವಿನಾಕಾರಣವಾಗಿ ಪರಿಸ್ಥಿತಿಯನ್ನು ಕೈತಪ್ಪಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿರುವುದು ಯಾರಿಗೆ ಲಾಭವೆನ್ನುವುದು ಸರ್ವವಿದಿತ.

ಧರ್ಮಧ ಅಧಾರದ ಮೇಲೆ ವಿಭಜನೆಗೊಂಡ ದೇಶದಲ್ಲಿ ಅಲ್ಪಸಂಖ್ಯಾತರು ಹೊರಗಿನ ಕೋಮುವಾದದ ಫ್ಯಾಸಿಸಂ ವಿರುದ್ಧವೂ, ಒಳಗಿನ ಪ್ರತಿಗಾಮಿ ಮೂಲಭೂತವಾದದ ವಿರುದ್ಧವೂ ಏಕ ಕಾಲಕ್ಕೆ ಹೋರಾಡಬೇಕಾದ ಪ್ರಸಂಗದಲ್ಲಿ ಅತ್ಯಂತ ಆಧುನಿಕ ಶಿಕ್ಷಣದ ಜರೂರತ್ತು, ಸದಾಕಾಲ ಪೊರೆಯುವ ದಿಟ್ಟತೆ ಏಕಕಾಲಕ್ಕೆ ಬೇಕಾಗುತ್ತದೆ. ಆದರೆ ಇದ್ಯಾವುದೂ ಮಾತಾಡಿದಷ್ಟೂ ಸುಲುಭವಲ್ಲ ಎನ್ನುವುದು ಭಾರತ ಸ್ವಾತಂತ್ರಗೊಂಡ 64 ವರ್ಷಗಳ ನಂತರವೂ ದೇಶದ ಉತ್ತರ ಭಾಗದಲ್ಲಿ ಕೋಮು ಗಲಭೆಗಳು, ಭಯೋತ್ಪಾದನೆ ನಡೆದರೆ ಉತ್ತರದಿಂದ ತುದಿಯಿಂದ ದಕ್ಷಿಣದ ತುದಿಯುದ್ದಕ್ಕೂ ಇಡೀ ಮುಸ್ಲಿಂ ಸಮುದಾಯ ಅನುಮಾನದ ಹಿಂಸೆಯಲ್ಲಿ ಕಣ್ತಪ್ಪಿಸಿ ಬದುಕಬೇಕಾಗಿ ಬರುವುದು ಇದಕ್ಕೆ ಸಾಕ್ಷಿ. ಇವೆಲ್ಲಕೂ ಆಶಾವಾದದಂತೆ ಹುಟ್ಟಿಕೊಂಡ ಎಡಪಂಥೀಯ ಸೆಕ್ಯುಲರ್ ಚಿಂತನೆಗಳು, ಚಳುವಳಿಗಳು ಮುಸ್ಲಿಂರಲ್ಲಿ ಕೊಂಚ ನಿರಾಳತೆಯನ್ನು, ಸ್ಥಿರತೆಯನ್ನು, ಇವ ನಮ್ಮವ ಇವ ನಮ್ಮವ ಎನ್ನುವ ಭ್ರಾತೃತ್ವವನ್ನು ತಂದು ಕೊಟ್ಟರೂ ಈ ಚಳುವಳಿಗಳ ನಾಸ್ತಿಕವಾದತ್ವ ಮತ್ತೊಂದು ರೀತಿಯಲ್ಲಿ ಬಿಕ್ಕಟ್ಟನ್ನೂ ಸೃಷ್ಟಿಸಿದ್ದು ಯಾರೂ ನಿರಾಕರಿಸುವಂತಿಲ್ಲ. ಈ ಬಿಕ್ಕಟ್ಟಿನ ದುರ್ಲಾಭ ಪಡೆದ ಸಂಘ ಪರಿವಾರ ಬಹುಪಾಲು ಹಿಂದೂಗಳಲ್ಲಿ ಎಡಪಂಥೀಯರ ಬಗ್ಗೆ ನಿರಾಕರಣೆ ಧೋರಣೆಯನ್ನು ಯಶಸ್ವಿಯಾಗಿ ಹುಟ್ಟಿ ಹಾಕಿತು. ಈ ಸಂದರ್ಭದಲ್ಲಿ ಚಿಂತಕ ಅಸ್ಗರ್ ಅಲಿ ಇಂಜಿನಿಯರ್ ಹೇಳಿದ” ಗಾಂಧೀಜಿಯವರೇನಾದರೂ ನಾಸ್ತಿಕರಾಗಿದ್ದರೆ ಈ ಸಂಘಪರಿವಾರ ಅವರನ್ನು ಸೈದ್ಧಾಂತಿಕವಾಗಿ ಎಂದೋ ಮುಗಿಸಿಬಿಡುತ್ತಿತ್ತು” ಮಾತು ಎಷ್ಟೊಂದು ಅರ್ಥಪೂರ್ಣ. ಅದಕ್ಕೆ ಇರಬೇಕು ಪ್ರಗತಿಪರ, ಎಡಪಂಥೀಯ ಪ್ರಜಾಪ್ರಭುತ್ವವಾದಿ ಚಳುವಳಿಗಳು ಪ್ರಖರವಾಗಿರುವ ದಕ್ಷಿಣದ ರಾಜ್ಯಗಳಲ್ಲಿನ ಕೋಮುಗಲಭೆಗಳ ಪ್ರಮಾಣ ಪ್ರಗತಿಪರ ಚಳವಳಿಗಳ ಕೊರತೆಯಿರುವ ಉತ್ತರ ಭಾರತಕ್ಕೆ ಹೋಲಿಸಿದರೆ  ಬಹುಪಾಲು ಕಡಿಮೆಯೆ. ಏಕೆಂದರೆ ದಕ್ಷಿಣ ರಾಜ್ಯಗಳ ಈ ಪ್ರಗತಿಪರ ಚಳುವಳಿಗಳು ಕೇವಲ ಕೋಮುವಾದವನ್ನಷ್ಟೇ ವಿರೋಧಿಸದೆ ಈ ಕೋಮುವಾದದ ಗುಪ್ತ ಕಾರ್ಯಸೂಚಿಯಾದ ಪುರೋಹಿತಶಾಹಿಯ ಪುನುರುಜ್ಜೀವೀಕರಣದ ಕುಟಿಲ ನೀತಿಗಳ ವಿರುದ್ಧವೂ ದೊಡ್ಡದಾದ ಹೋರಾಟಗಳನ್ನೇ ನಡೆಸಿದವು. ಇಲ್ಲಿನ ಚಿಂತಕರು ಸಂಘಪರಿವಾರದ ದುಷ್ಟತನದ ಬಗ್ಗೆ ಮಾತನಾಡುತ್ತಿದ್ದರೂ ಅದೇ ಕಾಲಘಟ್ಟಕ್ಕೆ ಅದು ಜೀವವಿರೋಧಿ ವೈದಿಕ ಪರಂಪರೆಯ ವಿರೋಧದ ಅಯಾಮವನ್ನೂ ಪಡೆದುಕೊಳ್ಳುತ್ತಿತ್ತು. ಆದರೆ ಉತ್ತರ ಭಾರತದ ಪರಂಪರೆಯ ಅಸ್ಮಿತೆ ದಕ್ಷಿಣಕ್ಕಿಂತಲೂ ಭಿನ್ನವಾದದ್ದು.ಅಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಅನ್ಯಧರ್ಮೀಯರೊಂದಿಗೆ ಕೊಡು ಕೊಳ್ಳುವಿಕೆಯ ಮೂಲಕ ಸಾಧಿಸಿರುವ ಸಾಮರಸ್ಯ ಅನನ್ಯವಾದದ್ದು. ಅದು ಲಕ್ನೋವಿನ ಅಲ್ಲಿನ ಅವಧ ರಾಜ್ಯದ, ಪುರಾತನ ದೆಹಲಿಯ, ಕಿಲ್ಲೆಗಳ, ಗುಂಬಸುಗಳ ಈ ವೈವಿಧ್ಯಮಯ ಪರಂಪರೆಗಳೊಂದಿಗೆ ಅಲ್ಲಿನ ಮುಸ್ಲಿಂ ಜನತೆಯ ಬದುಕು ಹಾಸುಹೊಕ್ಕಾಗಿರುವುದು, ಗುರುತಿಸಿಕೊಂಡಿರುವುದು ಹಾಗೂ ಏಕಕಾಲಕ್ಕೆ ಪರಂಪರೆಯೂ ಹಾಗೂ ಜೀವಪರವೂ ಆಗಿರುವ ಇಲ್ಲಿನ ಬದುಕು ಹಾಗು ಅದರ ವಿಶ್ಲೇಷಣೆ  ಚಿಂತನೆಯ ಮತ್ತೊಂದು ಆಯಾಮವನ್ನೇ ಬೇಡುತ್ತದೆ.

ಕೊನೆಗೂ ಉತ್ತರ ಪ್ರದೇಶದ ಮುಸ್ಲಿಂರ ನಿರ್ಣಾಯಕ ಪಾತ್ರ ಹಾಗೂ ನಿರ್ಣಯಗಳು ಇಂದು ಆ ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಂದೆಂಗಿಂತಲೂ ಪ್ರಮುಖ ಪಾತ್ರವಹಿಸುತ್ತಿರುವುದು ಕುತೂಹಲಕರ ಹಾಗೂ ದುರಂತ. ಏಕೆಂದರೆ ಇದರ ಫಲಿತಾಂಶಗಳಿಂದ ಬದುಕು ಹಸನಾಗುವ ಸಾಧ್ಯತೆಗಳು ಬಹಳ ಕಡಿಮೆ. ಇವೆಲ್ಲದರ ಮಧ್ಯೆ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಂಡರು ಎನ್ನುವಂತೆ ಕಾಂಗ್ರೆಸ್ ಮುಸ್ಲಿಂರಿಗೆ ಒಳ ಮೀಸಲಾತಿಯನ್ನು ಘೋಷಿಸಿದೆ. ಇದು ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಬಂದಂತಹ ಕೊಡುಗೆ. ಮತ್ತೊಮ್ಮೆ ಹಳ್ಳ ಬಂತು ಹಳ್ಳ. ಕಾಂಗ್ರೆಸ್ ಪಾಠ ಕಲಿಯುವ ಕಾಲವೂ ಮುಗಿದಿದೆ. ಏಕೆಂದರೆ ಈ ಪಕ್ಷ ಪದೇ ಪದೇ ಎಡವುವದನ್ನು, ಆ ಮೂಲಕ ತಮ್ಮನ್ನು ನಂಬಿದವರನ್ನು ಕೂಡ ದಿಕ್ಕುತಪ್ಪಿಸುವುದನ್ನು, ಇಂದು ತನ್ನ ಒಂದು ನಿತ್ಯ ಪರಿಪಾಠವನ್ನಾಗಿ ಮಾಡಿಕೊಂಡಿದೆ.

ಎಂದಿನಂತೆ “ಅಲ್ಪಸಂಖ್ಯಾತರ ಹಿತರಕ್ಷಣೆಗೆ ನಾವೆಲ್ಲ ಟೊಂಕಕಟ್ಟಿ ಅರ್ಥಾತ್ ಕಟಿಬದ್ಧರಾಗಿ ನಿಂತಿದ್ದೇವೆ” ಹಾಗೂ “ಭಾರತದಲ್ಲಿನ ಮುಸ್ಲಿಂರ ಸುರಕ್ಷತೆ ಇಲ್ಲಿನ ಬಹುಸಂಖ್ಯಾತ ಹಿಂದೂಗಳೊಂದಿಗೆ ಹೊಂದಿಕೊಂಡು ಬದುಕುವುದರಲ್ಲಿದೆ” ಎನ್ನುವ ಎರಡು ದಂಡೆಗಳ ಮಧ್ಯೆ ಮುಸ್ಲಿಮರು ನಿಂತಿದ್ದಾರೆ ಎಂದಿನಂತೆ ಅಸಹಾಯಕರಾಗಿ, ಒಂಟಿಯಾಗಿ. ಈ ಸಂಧಿಗ್ಧತೆ ಅತ್ತ ದರಿ ಇತ್ತ ಪುರಿ ಎನ್ನುವ ಗಾದೆ ಮಾತನ್ನೂ ಮೀರಿಸುವಷ್ಟು ಶೋಚನೀಯವಾಗಿದೆ.

ಬಂಗಾರಪ್ಪ ನಿಧನ: ತಣ್ಣಗಾದ ತಹತಹ

– ವಿ.ವಿ.ಸಾಗರ್

ರಾಜ್ಯ ರಾಜಕಾರಣದಲ್ಲಿ ಸಮಾಜವಾದದ ನೆಲೆಯಿಂದ ರಾಜಕಾರಣ ಆರಂಭಿಸಿ ಗಟ್ಟಿಯಾಗಿ ಕಾಲೂರಿದ್ದ ಒಂದೊಂದೇ ಕೊಂಡಿಗಳು ಕಳಚುತ್ತಿವೆ. ಕೆಲವೇ ದಿನಗಳ ಹಿಂದೆ ಬುದ್ಧಪ್ರಜ್ಞೆಯ ಕೆ.ಎಚ್.ರಂಗನಾಥ್, ಈಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇನ್ನಿಲ್ಲ.

ಬಂಗಾರಪ್ಪ ಎಂಬ ಹೆಸರೇ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯ ಆಕರ್ಷಣೆ, ತಲ್ಲಣ, ಗೊಂದಲ ಎಲ್ಲವೂ ಆಗಿತ್ತು. ಅದು ವಯಕ್ತಿಕ ಲಾಭಕ್ಕೊ ಅಥವಾ ಬೇರ್ಯಾವ ಕಾರಣಕ್ಕೊ ತಮ್ಮ ರಾಜಕೀಯ ಬದುಕನ್ನು ನಿರಂತರ ಪ್ರಯೋಗಕ್ಕೆ ಒಡ್ಡುತ್ತಲೇ ಒಂದು ಶಕ್ತಿಯಾಗಿ ಉಳಿದಿದ್ದು, ವರ್ಣ ರಂಜಿತ ರಾಜಕಾರಣಿ ಎಂದೆಲ್ಲಾ ಬಿರುದು ಗಳಿಸಿದ್ದು, ಕೆಲವೇ ವರ್ಷ ಮಾತ್ರ ಅಧಿಕಾರದಲ್ಲಿದ್ದರೂ ನಿರಂತರವಾಗಿ ಅಧಿಕಾರ ಗದ್ದುಗೆಯಲ್ಲಿ ಕುಳಿತವರು ಕೂಡ ಗಳಿಸಲಾರದಷ್ಟು ಜನಪ್ರಿಯತೆ ಪಡೆದಿದ್ದು, ಮಾಸ್ ಲೀಡರ್ ಎನಿಸಿಕೊಂಡಿದ್ದು ಎಲ್ಲವೂ ಅವರ ರಾಜಕೀಯ ಬದುಕಿನ ಅಕೌಂಟಿನ ಖಾತೆಯಲ್ಲಿ ಠೇವಣಿಯಾಗಿರುವುದು ಗೋಚರಿಸುತ್ತದೆ.

ನಮ್ಮಂತಹ ಕಿರಿಯರಲ್ಲಿ ರಾಜಕೀಯ ಪ್ರಜ್ಞೆ ಮೂಡುವ ಹೊತ್ತಿಗಾಗಲೇ ಬಂಗಾರಪ್ಪ ಅವರ ರಾಜಕೀಯ ದಿನಗಳ ವೈಭವ ಅಂತ್ಯಕ್ಕೆ ಸರಿಯುತ್ತಿತ್ತು. ಸಮಾಜವಾದಿ ನೆಲೆಯಿಂದ ರಾಜಕೀಯ ಆರಂಭಿಸಿ ಈಗ ಯಾವುದೇ ಪಕ್ಷಗಳಲ್ಲಿ ನೆಲೆಗೊಂಡಿದ್ದರೂ ಆ ರಾಜಕಾರಣಿಗಳ ಬಗ್ಗೆ ನಮ್ಮಂತವರಿಗೆ ಒಂದು ಸಣ್ಣ ಕುತೂಹಲ ಇದ್ದಿದ್ದರಿಂದ ಬಂಗಾರಪ್ಪ ಅವರ ಬಗ್ಗೆಯೂ ಕೇಳಿ ತಿಳಿದುಕೊಳ್ಳುವುದರೊಟ್ಟಿಗೆ ಅವರನ್ನು ಗಮನಿಸುವುದು ನಡೆದಿತ್ತು.

`ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು’ ಎಂಬ ಕವಿವಾಣಿಯಂತೆ ಸದಾ ತಹತಹದಿಂದ ಹಾರಾಡಿದ ರಾಜಕಾರಣಿ ಇವರು. ಕಾಂಗ್ರೆಸ್ ಬಿಡುವುದು, ಸೇರುವುದು, ತನ್ನದೇ ಪಕ್ಷ ಕಟ್ಟಿದ್ದು, ಕಮಲ ಮುದ್ದಿಸಿದ್ದು, ಸೈಕಲ್ ತುಳಿದಿದ್ದು, ಅಂತ್ಯದಲ್ಲಿ ತೆನೆ ಹೊತ್ತು ನಡೆದಿದ್ದು ಎಲ್ಲವೂ ಇದಕ್ಕೆ ತಾಜಾ ಸಾಕ್ಷಿ.

ಬಹುಶಃ ಕರ್ನಾಟಕದಲ್ಲಿ ಸ್ವಂತ ಪಕ್ಷ ಕಟ್ಟಿ ಒಂದಿಷ್ಟು ಕೊಂಚ ಯಶಸ್ಸು ಗಳಿಸಿ `ಭರವಸೆ ಹುಟ್ಟಿಸಿದವರಲ್ಲಿ ಮೊದಲಿಗರು. ದೇವರಾಜ ಅರಸು ಅಂತಹ ಗಟ್ಟಿ ವ್ಯಕ್ತಿತ್ವದ ರಾಜಕಾರಣಿಗೂ ಸಿಗದ ಫಲವನ್ನು ಈ ವಿಷಯದಲ್ಲಿ ಅವರು ಪಡೆದಿದ್ದರು. ಇವರು ಕಾಂಗ್ರೆಸ್ ಬಿಟ್ಟಾಗ ಪ್ರತಿ ಸಾರಿಯೂ ಈ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಸವಾಲಿನ ಎದುರು ಶಿವಮೊಗ್ಗ ಉಪ ಚುನಾವಣೆಯಲ್ಲಿ ಸೈಕಲ್ ಸವಾರಿ ಹೊರಟು ವಿಜಯ ಪತಾಕೆ ಹಾರಿಸಿದ್ದು ಎಲ್ಲವೂ ಅವರಿಗಿದ್ದ ರಾಜಕೀಯ ಶಕ್ತಿಯ ಕನ್ನಡಿ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಸಿಡಿದು ಪಕ್ಷ ಬಿಡುವ ಸಂದರ್ಭ ಎದುರಾಯಿತು. ಆ ವೇಳೆ ಸಂಪುಟ ಸಭೆಯ ನಂತರ ಅಂದು ಮಂತ್ರಿಯಾಗಿದ್ದ ವಿಶ್ವನಾಥ್(ಈಗ ಸಂಸದ) ಲೋಕಾಭಿರಾಮವಾಗಿ ಈ ವಿಷಯ ಚರ್ಚಿಸಿ ಬಂಗಾರಪ್ಪ ಅವರನ್ನು ಪಕ್ಷ ಬಿಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಹಿತದಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ.

ಆದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ, ನೋಡಿ ನಾವೆಲ್ಲಾ ಕೇವಲ ಮಂತ್ರಿಗಳಷ್ಟೇ, ಆದರೆ ಬಂಗಾರಪ್ಪ ಜನನಾಯಕ, ಅದರಲ್ಲೂ ಹಿಂದುಳಿದ ಸಮುದಾಯವಾದ ಈಡಿಗರ ಏಕಮಾತ್ರ ನಾಯಕ ಎಂದು ಹೇಳಿದಾಗ ಅದಕ್ಕೆ ದೊಡ್ಡ ಆಕ್ಷೇಪಣೆಗಳೇ ಏಳುತ್ತವೆ. ಆದರೆ ನಿಜಕ್ಕೂ ಬಂಗಾರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕೆ.ಎಚ್.ರಂಗನಾಥ್ ಕೂಡ ವಿಶ್ವನಾಥ್ ಮಾತಿಗೆ ಬೆಂಬಲಿಸುತ್ತಾರೆ. ಆದರೆ ಇತರೆಯವರು ಒಪ್ಪಲು ತಯಾರಿರಲಿಲ್ಲ. ಅದರ ಫಲ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆಯುತ್ತದೆ. ಈ ವಿಷಯವನ್ನು ವಿಶ್ವನಾಥ್ ತಮ್ಮ ಆತ್ಮಕಥನ ಹಳ್ಳಿಹಕ್ಕಿಯ ಹಾಡು ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗೆ ನೋಡಿದರೆ ಬರೀ ಕಾಂಗ್ರೆಸ್ ಅಷ್ಟೇ ಅಲ್ಲ ಅವರ ಶಕ್ತಿಯನ್ನು ಇಡಿಯಾಗಿ ಅವರು ಕಾಲಿಟ್ಟ ಯಾವ ಪಕ್ಷವೂ ಬಳಸಿಕೊಳ್ಳಲಿಲ್ಲ.

ಇವೆಲ್ಲಾ ಅವರ ರಾಜಕೀಯ ಶಕ್ತಿಯ ನಿದರ್ಶನಗಳು. ಇದೆಲ್ಲದರ ಆಚೆ ಅವರಲ್ಲಿ ಎಂತಹ ಸಂದರ್ಭವನ್ನು ಹಾಸ್ಯದಿಂದ ತಿಳಿಗೊಳಿಸುವ ಮತ್ತೊಂದು ಮುಖವಿತ್ತು. ಭದ್ರಾವತಿಯಲ್ಲೊಮ್ಮೆ ಒಂದು ಪತ್ರಿಕೆ ಕಚೇರಿ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಭಾಷಣದ ನಂತರ ಅಲ್ಲಿನ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಪಡೆದ ಅವರು ಅದು, ಇದು ಕೇಳುತ್ತಲೇ ‘ಬಂಗಾರಪ್ಪ ಅವರು ಒಳ್ಳೆಯವರು ಎಂದು ಬರೆಯಿರಿ, ಅನುದಾನ ಕೊಡೋಣ’ ಎಂದು ನಗುತ್ತಲೇ ಕಾರು ಹತ್ತಿ ಹೊರಟೇ ಬಿಟ್ಟರು.

ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಪಕ್ಷ ಕಟ್ಟಲು ರಾಜ್ಯಾದ್ಯಂತ ಸೈಕಲ್ ತುಳಿಯುತ್ತಿದ್ದರು. ಈ ವೇಳೆ ಚಿತ್ರದುರ್ಗದಲ್ಲಿ ಸಭೆ ಆಯೋಜಿಸಲಾಗಿತ್ತು. ನಿಜಕ್ಕೂ ಆ ಸಭೆಗೆ ಬೆರಗಾಗುವಷ್ಟು ಜನ ಸೇರಿದ್ದರು. ವೇದಿಕೆ ಮೇಲೆ ಕೂತೇ ಇವರು ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಜಾನಪದ ಕಲಾ ತಂಡವೊಂದು ಪ್ರದರ್ಶನ ನೀಡಿ ವೇದಿಕೆ ಇಳಿದು ಹೋಗುತ್ತಿತ್ತು. ಆಗ ಎದ್ದು ನಿಂತ ಬಂಗಾರಪ್ಪ, ಯಾರೂ ಗಲಾಟೆ ಮಾಡಬಾರದು, ಅವರು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ನೀವ್ಯಾರು ಸರಿಯಾಗಿ ನೋಡ್ಲಿಲ್ಲ ಎಂದು ಆ ಕಲಾ ತಂಡವನ್ನು ವೇದಿಕೆ ಕರೆದು ಮತ್ತೊಮ್ಮೆ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು.

ಕಾರ್ಯಕ್ರಮ ಆರಂಭವಾದಾಗ ಮುಖಂಡರೊಬ್ಬರು ಬಂಗಾರಪ್ಪ ಅವರನ್ನು ಯರ್ರಾಬಿರ್ರಿ ಹೊಗಳಿ ಭಾಷಣ ಬಿಡುತ್ತಿದ್ದರು. ಕ್ಷಣ ಹೊತ್ತು ಕೇಳಿಸಿಕೊಂಡ ಇವರು, ನೀವು ಮಾತನಾಡಿದ್ದು ಸಾಕು ಬನ್ನಿ ಎಂದು ವಾಪಾಸು ಕರೆದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮುಖಂಡನನ್ನು ಹೋಗಿ ನೀವು ಮಾತನಾಡಿ ಎಂದು ಕಳುಹಿಸಿದ್ದು ನೋಡಿ ನಾವು ಬಿದ್ದು, ಬಿದ್ದು ನಕ್ಕಿದ್ದೆವು.

ತಮ್ಮ ತವರಾದ ಶಿವಮೊಗ್ಗ ಸೇರಿದಂತೆ ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇವರ ಪ್ರಭಾವದ ಗಾಢತೆ ಕಾಣಬಹುದು. ಅದಕ್ಕೆ ಜಾತಿಯ ಬೆಂಬಲವೂ ಒಂದು ಕಾರಣವಾದರೆ, ಅದರಾಚೆಗೂ ಅವರಿಗಿದ್ದ ಬಡ ಜನರೆಡೆಗಿನ ಕಾಳಜಿಯೂ ಒಂದಾಗಿತ್ತು. ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಎಂಬಂತೆ ಗುರುತಿಸಿಕೊಂಡಿದ್ದ ಬಂಗಾರಪ್ಪ ಅವರ ಸ್ಥಾನವನ್ನು ತುಂಬುವವರು ಯಾರು ? ರಾಜಕೀಯ ಬದುಕಿನ ಅಕೌಂಟಿನಲ್ಲಿ ಇಂತಹ ದೊಡ್ಡ ಠೇವಣಿಯಿದೆ. ಇದನ್ನು ಯಾರು ನಗದೀಕರಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಬೇಕಿದೆ.

ಸಮಾಜವಾದಿ ನೆಲೆಯಿಂದ ಬಂದರೂ ಅವರ ರಾಜಕೀಯ ಬದುಕಿನಲ್ಲಿ ಸಮಾಜವಾದದ ಶಿಸ್ತು ಅಳವಡಿಸಿಕೊಳ್ಳದೆ ಚೆಲ್ಲಿದಂತೆ ಬದುಕಿದರು. ಆದರೆ ಅವರು ನಡೆ, ನುಡಿ ಸೇರಿದಂತೆ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಅನೇಕ ಯೋಜನೆಗಳಲ್ಲಿ ಸಮಾಜವಾದದ ಅಂಶಗಳಿದ್ದವು. ಹಿಂದುಳಿದ ಸಮುದಾಯದ ರಾಜಕಾರಣಿಯೊಬ್ಬ ಇಲ್ಲಿನ ಎಲ್ಲ ತರತಮಗಳ ನಡುವೆ ಶಕ್ತಿಯಾಗಿ ಬೆಳೆದಿದ್ದು ಅನೇಕರಿಗೆ ಮಾದರಿ. ಜನರಿಗೆ ಹತ್ತಿರಾಗುವ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಬಹುದು ಎಂಬುದನ್ನು ಸಾರೆಕೊಪ್ಪದ ಬಂಗಾರಪ್ಪ ಸಾಧಿಸಿ ತೋರಿಸಿದ್ದರು.

ಸಾರೆಕೊಪ್ಪದ ಸರದಾರ ಇನ್ನಿಲ್ಲ

ಕರ್ನಾಟಕ ರಾಜಕೀಯ ಕಂಡ ಬಹು ಮುಖ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ 79ನೇ ವಯಸ್ಸಿಗೆ ಇಂದು ತಮ್ಮ ಇಹಲೋಕ ತ್ಯಜಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದವರು ಬಂಗಾರಪ್ಪ.
ಅವರು ಕಟ್ಟದ ಪಕ್ಷಗಳಿಲ್ಲ, ಕರ್ನಾಟಕದಲ್ಲಿರುವ ಪಕ್ಷಗಳಿಗೆ ಸೇರ್ಪಡೆಯಾಗಿ, ಮತ್ತೆ ತ್ಯಜಿಸಿ ಬಾರದೆ ಇರುವ ಪಕ್ಷಗಳಿಲ್ಲ. ಬಂಗಾರಪ್ಪ ತಮ್ಮ ಬದುಕಿನುದ್ದಕ್ಕೂ ದೇವೆಗೌಡರಂತೆ ರಾಜಕೀಯವನ್ನು ಉಂಡು, ಹಾಸಿ, ಹೊದ್ದವರು. ತಾವು ಮುಖ್ಯಮಂತ್ರಿಯಾಗಿದ್ದಾಗ ಇವತ್ತಿನ ಯಡಿಯೂರಪ್ಪನಂತೆ ಯಾವ ಅಂಜಿಕೆಯಿಲ್ಲದೆ ಜಾತಿ ರಾಜಕಾರಣವನ್ನು ನೇರವಾಗಿ ಮಾಡಿದರು.
ಕರ್ನಾಟಕ ಯಶಸ್ವಿ ರಾಜಕಾರಣಿ ಎಂದು ನಾವು ಕರೆಯಲಾಗದಿದ್ದರೂ, ಅವರೊಬ್ಬ ನಾಡು ಕಂಡ ಅಪ್ರತಿಮ ಹೋರಾಟಗಾರ ಇದರಲ್ಲಿ ಎರಡನೆ ಮಾತಿಲ್ಲ. ಇವರು ತಮ್ಮ ಹುಟ್ಟು ಹೋರಾಟವನ್ನು ಹಠವಾಗಿ ಪರಿವರ್ತಿಸಿಕೊಂಡ  ಫಲವಾಗಿ ಇಳಿವಯಸ್ಸಿನಲ್ಲಿ ಅನೇಕ ಸೋಲುಗಳನ್ನು ಅನುಭವಿಸಬೇಕಾಯಿತು. ಒಂದು ವರ್ಷದ ಹಿಂದೆ ಮುಲಾಯಂಸಿಂಗ್ ಯಾದವ್ ರವರ ಸಮಾಜವಾದಿ ಪಕ್ಷವನ್ನು ತೊರೆದು  ದೇವೆಗೌಡರ ಜೆ.ಡಿ.ಎಸ್.ಪಕ್ಷ ಸೇರಿದ್ದ ಬಂಗಾರಪ್ಪನವರು ಬಿ.ಜೆ.ಪಿ. ಸೋಲಿಸಲು ಪಣ ತೊಟ್ಟಿದ್ದರು. ಆದರೆ, ಯುದ್ಧಕ್ಕೆ ಮುನ್ನವೇ ಅವರು ಇಲ್ಲವಾದದ್ದು, ರಾಜಕೀಯ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.
ನಾಲ್ಕು ವರ್ಷದ ಹಿಂದೆ ಬಂಗಾರಪ್ಪನವರಿಗೆ 75 ವರ್ಷ ತುಂಬಿದ ಸಮಯದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಸಂಪಾದಕತ್ವದಲ್ಲಿ ಹೊರತರಲಾಗಿದ್ದ  ಸಾರೆಕೊಪ್ಪದ ಬಂಗಾರ ಎಂಬ ಅಭಿನಂದನಾ ಗ್ರಂಥಕ್ಕೆ ನಾನು ಬರೆದಿದ್ದ ಒಂದು ಲೇಖನ ಅವರ ಸಾವಿನ ಸಂದರ್ಭದಲ್ಲಿ ಇಲ್ಲಿದೆ.
– ಡಾ.ಎನ್.ಜಗದೀಶ್ ಕೊಪ್ಪ
ಜನ ನದಿಯಂತೆ ಹರಿದು ಬರುತ್ತಾರೆ

ಬಂಗಾರಪ್ಪ ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ 40 ವರ್ಷಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುಳಿದ ಒಂದು ಹೆಸರು. ಬಡತನ, ಹಸಿವು, ಶೋಷಣೆ, ಗುಲಾಮಗಿರಿತನ ಇವುಗಳ ವಿರುದ್ಧ ತನ್ನ ರಾಜಕೀಯ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಹುಟ್ಟು ಹೋರಾಟಗಾರ ಎಸ್.ಬಂಗಾರಪ್ಪನವರು ಕನರ್ಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಕರ್ನಾಟಕದ  ರಾಜಕೀಯಕ್ಕೆ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್.ಪಟೇಲರಂತಹ ಧೀಮಂತ ನಾಯಕರು ಹಾಗೂ ಚಿಂತಕರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಮಣ್ಣಿನಿಂದ ಹುಟ್ಟಿ ಬಂದ ಇನ್ನೋರ್ವ ರಾಜಕೀಯ ನೇತಾರ ಎಸ್.ಬಂಗಾರಪ್ಪ.
1960ರ ದಶಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ ಮತ್ತು ಗೇಣಿದಾರರ ಪರ ಹೋರಾಡುತ್ತಾ ಸಮಾಜವಾದಿ ಚಳುವಳಿಗೆ ಧುಮುಕಿದ ಬಂಗಾರಪ್ಪನವರು, 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಪ್ರವೇಶಿಸಿದರು. ಆನಂತರ ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ.
ಸೊರಬ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ನಿರಂತರವಾಗಿ ವಿಧಾನಸಭೆಗೆ ಆರಿಸಿ ಬಂದ ಬಂಗಾರಪ್ಪನವರು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ದನಿಯೆತ್ತಿ ಕರ್ನಾಟಕದ ಜನಮನವನ್ನು ಸೂರೆ ಗೊಂಡರು. ರಾಜಕೀಯ ಬದುಕಿನ ಒತ್ತಡಗಳಿಗೆ ಅನುಗುಣವಾಗಿ ಬಂಗಾರಪ್ಪನವರು ಪಕ್ಷಗಳನ್ನು ಬದಲಾಯಿಸಿದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಎಂದೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಲಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಮಮನೋಹರ ಲೋಹಿಯಾರ ಚಿಂತನೆ ಹಾಗೂ ಶಾಂತವೇರಿ ಗೋಪಾಲಗೌಡರ ಪ್ರಭಾವ.
ಗೋಪಾಲಗೌಡರ ನಿಧನಾನಂತರ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಜೆ.ಎಚ್.ಪಟೇಲರ ಜೊತೆ ಗುರುತಿಸಿಕೊಂಡ ಬಂಗಾರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರತೊಡಗಿದರು.
ಕರ್ನಾಟಕ ಕಂಡ ಜನಪರ ಕಾಳಜಿಯ ಧೀಮಂತ ಮುಖ್ಯಮಂತ್ರಿ ಎಂದೇ ಹೆಸರಾದ ದಿವಂಗತ ದೇವರಾಜ ಅರಸುರವರು ಕಟ್ಟಿದ ಕ್ರಾಂತಿ ರಂಗ ಪಕ್ಷವನ್ನು ಅವರ ನಿಧನಾನಂತರ ಮುನ್ನಡೆಸುವುದರ ಮೂಲಕ 80ರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವುದರಲ್ಲಿ ಬಂಗಾರಪ್ಪನವರ ಪಾತ್ರ ಪ್ರಮುಖವಾದುದು. ಗುಂಡೂರಾವ್ ಸರಕಾರ ಪತನಗೊಂಡ ನಂತರ ಈ ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯ ಮಂತ್ರಿಯಾಗಬೇಕಿದ್ದ ಬಂಗಾರಪ್ಪ ಹಲವು ರಾಜಕೀಯ ಒಳಸುಳಿಗೆ ಸಿಲುಕಿ ಅಂದಿನ ಜನತಾ ಸರಕಾರದ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ತಮ್ಮ ಕ್ರಾಂತಿರಂಗ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ಬಂಗಾರಪ್ಪನವರು ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. 1989ರಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅನಿರೀಕ್ಷಿತವಾಗಿ ಕೆಳಗಿಳಿಸಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು.
ತಮ್ಮ ಜಿಲ್ಲೆಯಾದ ಶಿವಮೊಗ್ಗದ ಜನತೆಯನ್ನು ಜಾತಿ ಧರ್ಮದ ಹಂಗಿಲ್ಲದೆ, ರಾಜಕೀಯ ಪಕ್ಷಗಳ ಕಟ್ಟುಪಾಡುಗಳಿಲ್ಲದೆ ಪ್ರೀತಿಸಬಲ್ಲ ವ್ಯಕ್ತಿತ್ವ ಬಂಗಾರಪ್ಪನವರದ್ದು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಯಾವುದೇ ಹಳ್ಳಿಗೆ ಹೋಗಲಿ ಅಲ್ಲಿಯ ಗ್ರಾಮಸ್ಥರನ್ನು ಹೆಸರಿಡಿದು ಕರೆಯುವಷ್ಟು ನೆನಪನ್ನು ಬಂಗಾರಪ್ಪ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಬಂಗಾರಪ್ಪನವರ ಯಾವುದೇ ಕಾರ್ಯಕ್ರಮ ನಡೆಯಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳಿಂದ ಜನರು ನದಿಯಂತೆ ಹರಿದು ಬರುತ್ತಾರೆ. ಜೊತೆಗೆ ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದರೂ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ.
ಬಂಗಾರಪ್ಪನವರ ರಾಜಕೀಯ ತಪ್ಪು ನಿರ್ಧಾರಗಳಿಂದಾಗಿ ಇಂದಿನ ಯು.ಪಿ.ಎ. ಸರಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶವನ್ನು ಕಳೆದುಕೊಂಡರು. ಬಂಗಾರಪ್ಪನವರು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಚುನಾವಣೆಯಲ್ಲಿ ಸೋಲುಂಡಿತು. ಬಂಗಾರಪ್ಪನವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದ ಬಿ.ಜೆ.ಪಿ. ಪಕ್ಷದ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲಾರದೆ ರಾಜಿನಾಮೆ ನೀಡಿ ಅವರು ಹೊರಬಂದರು.
ಅತ್ತ ಕಾಂಗ್ರೆಸ್ ಪಕ್ಷವನ್ನು ಇತ್ತ ಬಿ.ಜೆ.ಪಿ.ಪಕ್ಷವನ್ನು ಸಮಾನ ಶತೃಗಳಂತೆ ಭಾವಿಸಿರುವ ಬಂಗಾರಪ್ಪನವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಉತ್ತರ ಪ್ರದೇಶದ ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿ ಮತ್ತೆ ಲೋಕಸಭೆಗೆ ಸ್ವರ್ಧಿಸಿ ಜಯಭೇರಿ ಬಾರಿಸಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಬೆಳೆಯಲು ಶ್ರಮಿಸುತ್ತಿದ್ದಾರೆ.
ನನಗೆ ಬಂಗಾರಪ್ಪನವರ ಬಗ್ಗೆ ಗೌರವ ಮೂಡಲು ವಿಶೇಷ ಕಾರಣವೆಂದರೆ ಅವರ ಶಿಸ್ತುಬದ್ಧ ಜೀವನ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಕ್ರೀಡೆ, ಸಂಗೀತ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ಯಾವುದೇ ದುರಭ್ಯಾಸಗಳಿಲ್ಲದೆ ತಮ್ಮ ದೇಹ ಹಾಗೂ ಮನಸ್ಸನ್ನ ಆರೋಗ್ಯಯುತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಇಂದಿನ  ಕರ್ನಾಟಕ ದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ದೇವೇಗೌಡ ಮೂವರು ಒಂದೇ ವಯೋಮಾನದವರು. ಈ ಮೂವರ ಹೋರಾಟ, ಚಿಂತನೆ ಮತ್ತು ಜನಪರ ಕಾಳಜಿ ಕರ್ನಾಟಕದ ಭವಿಷ್ಯದ ರಾಜಕಾರಣಿಗಳಿಗೆ ಮಾದರಿಯಾಗಬಲ್ಲದು. 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಬಂಗಾರಪ್ಪನವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಕರ್ನಾಟಕದ ನೆಲ ಜಲ, ಭಾಷೆ ಸಂಸ್ಕೃತಿ ಮುಂತಾದ ಹೋರಾಟಗಳಿಗೆ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ.