Three Gorges Dam

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ

ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ ಹರಿವಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದನೆ ನೆಪದಲ್ಲಿ ಈ ಕಂಪನಿಗಳು ಸರಕಾರಗಳನ್ನು ದಿಕ್ಕು ತಪ್ಪಿಸಿ ಸಾಲದ ಸುಳಿಗೆ ಸಿಲುಕಿಸಿ ಕಾಲು ಕೀಳುತ್ತಿವೆ. ಇದರ ಅಂತಿಮ ಪರಿಣಾಮ ಜೀವ ನದಿಗಳ ಮಾರಣ ಹೋಮ.

ಎಷ್ಟೋ ಬಾರಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿ ಸೋತ ರಾಷ್ಟ್ರಗಳ ಉದಾಹರಣೆ ಜಗತ್ತಿನ ಎಲ್ಲೆಡೆ ದೊರೆಯುತ್ತವೆ. ಇದಕ್ಕೆ ಚೀನಾ ರಾಷ್ಟ್ರದ ಯಾಂಗ್ಟೇಜ್ ನದಿಗೆ ಕಟ್ಟಿದ ತ್ರೀ ಗಾರ್ಜಸ್ಎಂಬ ಅಣೆಕಟ್ಟು ಸಾಕ್ಷಿಯಾಗಿದೆ. ಚೀನಾ ಸರಕಾರ ಮೊದಲು ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಿ ನಂತರ ಇಡೀ ಯೋಜನೆಯನ್ನು

Three Gorges Dam

Three Gorges Dam

ಜಲ ವಿದ್ಯುತ್‌ಗಾಗಿ ಬದಲಿಸಿತು. ಈ ಕಾರಣಕ್ಕಗಿಯೇ ವಿಶ್ವ ಬಾಂಕ್ ತನ್ನ ವರದಿಯಲ್ಲಿ ಆಯಾ ರಾಷ್ಟ್ರಗಳ ಅಥವಾ ಸರಕಾರಗಳ ಮನಸ್ಥಿತಿಗೆ ತಕ್ಕಂತೆ ಅಣೆಕಟ್ಟುಗಳು ಅಥವಾ ಜಲಾಶಗಳು ಬದಲಾಗುತ್ತಿವೆ ಎಂದು ತಿಳಿಸಿದೆ.

ವೆನಿಜುವೇಲ ಗುರಿ ಎಂಬ ನದಿಗೆ ಕಟ್ಟಲಾದ ಇಟ್ಯವು ಅಣೆಕಟ್ಟು, ಸೈಬೀರಿಯಾದ ಗ್ರಾಂಡ್ ಕೌಲಿ ಅಣೆಕಟ್ಟು ಇವುಗಳಲ್ಲಿ ಕ್ರಮವಾಗಿ 12.600 ಮತ್ತು 10.300 ಮೆಗಾವ್ಯಾಟ್ ವಿದ್ಯುತ್ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾವಿರಾರು ಕೋಟಿ ಡಾಲರ್ ಹಣ ವಿನಿಯೋಗವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಇದರಲ್ಲಿ ಲಾಭವಾದದ್ದು ಬಹು ರಾಷ್ಟ್ರೀಯ ಕಂಪನಿಗಳಿಗೆ ಮತ್ತು ವಿಶ್ವ ಬ್ಯಾಂಕಿಗೆ ಮಾತ್ರ.

20 ನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕವಾಗಿ ಶೇ.22 ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಇದರಲ್ಲಿ ಶೇ,18 ಏಷ್ಯಾ ಖಂಡದಲ್ಲಿ, ಶೆ.60 ರಷ್ಟು ಮಧ್ಯ ಅಮೇರಿಕಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಏಷ್ಯಾದ ನೇಪಾಳ, ಶ್ರೀಲಂಕಾ, ಸೇರಿದಂತೆ ಜಗತ್ತಿನ ಇತರೆಡೆಯ ನಾರ್ವೆ, ಅಲ್ಬೇನಿಯಾ, ಬ್ರೆಜಿಲ್, ಗ್ವಾಟೆಮಾಲ, ಘಾನ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.90 ರಷ್ಟು ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ.

1980ರ ದಶಕದಿಂದೀಚೆಗೆ ಜಾಗತಿಕವಾಗಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶಗಳಲ್ಲಿ ಬೇಡಿಕೆ ದ್ವಿಗುಣಗೊಂಡಿದೆ. ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಿರುವ ಕಾರಣಕ್ಕಾಗಿ ಅಮೆರಿಕಾ, ಕೆನಡಾ ರಾಷ್ಟ್ರಗಳು ಸಹ ಶೇ.70ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದಲೇ ಉತ್ಪಾದಿಸುತ್ತಿವೆ.

ನದಿಗಳಿಗೆ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಬಹುದೊಡ್ಡ ತೊಡಕೆಂದರೆ, ನದಿಯ ನೀರಿನ ಪ್ರಮಾಣ ಹಾಗೂ ವಿದ್ಯುತ್ ಬೇಡಿಕೆ ಕುರಿತಂತೆ ತಪ್ಪು ಅಂದಾಜು ವರದಿ ಸಿದ್ಧಗೊಳ್ಳುತ್ತಿದ್ದು, ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಯಾವ ಯಾವ ಋತುಮಾನಗಳಲ್ಲಿ ಎಷ್ಟು ಪ್ರಮಾಣದ ನೀರು ನದಿಗಳಲ್ಲಿ ಹರಿಯುತ್ತದೆ ಎಂಬ ನಿಖರ ಮಾಹಿತಿಯನ್ನು ಯಾವ ಅಣೆಕಟ್ಟು ತಜ್ಞರೂ ಸುಸಂಬದ್ಧವಾಗಿ ಬಳಸಿಕೊಂಡಿಲ್ಲ. ಜೊತೆಗೆ ವಿದ್ಯುತ್‌ನ ಬೇಡಿಕೆಯ ಪ್ರಮಾಣವೆಷ್ಟು ಎಂಬುದನ್ನು ಕೂಡ ಯಾವ ರಾಷ್ಟ್ರಗಳು, ಸರಕಾರಗಳೂ ನಿಖರವಾಗಿ ತಿಳಿದುಕೊಂಡಿಲ್ಲ.

ಇದಕ್ಕೆ ಉದಾಹರಣೆಯೆಂದರೆ ಅರ್ಜೆಂಟೈನಾ ಸರಕಾರದ ಸ್ಥಿತಿ. ತನ್ನ ದೇಶದ ವಿದ್ಯುತ್ ಬೇಡಿಕೆ ಮುಂದಿನ 7 ವರ್ಷಗಳ ನಂತರ ಶೇ.7 ರಿಂದ 8ರವರೆಗೆ ಇರುತ್ತದೆ ಎಂದು ಅಂದಾಜಿಸಿತ್ತು. 1994ರಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯಾಕ್ರಿಯೇಟಾ ಎಂಬ ಅಣೆಕಟ್ಟನ್ನು ನಿರ್ಮಿಸಿತು. ಇದಕ್ಕೆ ತಗುಲಿದ ವೆಚ್ಚ 11.5 ಶತಕೋಟಿ ಡಾಲರ್. ಅಣೆಕಟ್ಟು ನಿರ್ಮಾಣವಾದ ನಂತರ ಅಲ್ಲಿನ ವಿದ್ಯುತ್ ಬೇಡಿಕೆ ಶೇ. 2ರಷ್ಟು ಮಾತ್ರ.ಹೆಚ್ಚಾಗಿತ್ತು. ತಾನು ಸಾಲವಾಗಿ ಪಡೆದ ಹಣಕ್ಕೆ ನೀಡುತ್ತಿರುವ ಬಡ್ಡಿಯ ಪ್ರಮಾಣವನ್ನು ಲೆಕ್ಕ ಹಾಕಿದಾಗ, ವಿದ್ಯುತ್ ಉತ್ಪಾದನಾ ವೆಚ್ಚ ಶೇ. 30ರಷ್ಟು ದುಬಾರಿಯಾಯಿತು. ಇಂತಹದ್ದೇ ಸ್ಥಿತಿ ಜಗತ್ತಿನಾದ್ಯಂತ 12 ಅತಿ ದೊಡ್ಡ ಅಣೆಕಟ್ಟುಗಳೂ ಸೇರಿದಂತೆ 380 ಅಣೆಕಟ್ಟುಗಳದ್ದಾಗಿದೆ.

ಕೊಲಂಬಿಯಾ ರಾಷ್ಟ್ರ ಹಾಕಿಕೊಂಡ ಅನೇಕ ಜಲವಿದ್ಯುತ್ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ, ಆ ರಾಷ್ಟ್ರವನ್ನು ಆರ್ಥಿಕ ದುಸ್ಥಿತಿಗೆ ದೂಡಿವೆ. ಅಲ್ಲಿನ ಸರಕಾರದ ವಾರ್ಷಿಕ ಆಯ-ವ್ಯಯದಲ್ಲಿನ ಶೇ.60ರಷ್ಟು ಹಣ ಅಣೆಕಟ್ಟು ಯೋಜನೆಗಳಿಗಾಗಿ ತಂದ ಸಾಲದ ಮರು ಪಾವತಿ ಹಾಗೂ ಅದರ ಬಡ್ಡಿಗಾಗಿ ವಿನಿಯೋಗವಾಗುತ್ತಿದೆ.

ಮಧ್ಯ ಅಮೆರಿಕಾದ ಗ್ವಾಟೆಮಾಲದ ಚಿಕ್ಷೊಯ್ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗದೆ, ಯೋಜನೆ ವಿಪಲಗೊಂಡಿದ್ದರೆ, ಹಂಡೊರಾಸ್ ದೇಶದಲ್ಲಿ ಮಳೆಯೇ ಇಲ್ಲದೆ ನಿರಂತರ ಬರಗಾಲದಿಂದ ಎಲ್ಲಾ ನದಿಗಳು ಬತ್ತಿಹೋದ ಕಾರಣ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಈ ಕೆಳಗಿನ ರಾಷ್ಟ್ರಗಳ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಗಮನಿಸಿದರೆ, ಇವರು ಅಣೆಕಟ್ಟು ಅಥವಾ ಜಲಾಶಯಗಳ ಮೂಲಕ ಜೀವ ನದಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಮಾಡಿದ ಯೋಜನೆಗಳೆನೊ? ಎಂಬ ಸಂಶಯ ಮೂಡುತ್ತದೆ.

  1. 250 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೆಜಿಲ್ ನಲ್ಲಿ ನಿರ್ಮಾಣವಾದ ಬಲ್ಬಿನಾ ಅಣೆಕಟ್ಟು ಸ್ಥಾವರದಲ್ಲಿ ಉತ್ಪಾದನೆಯಾದ ಪ್ರಮಾಣ ಕೇವಲ ಶೇ.44 ರಷ್ಟು.
  2. 150 ಮೆಗಾವ್ಯಾಟ್ ಯೋಜನೆಯ ಪನಾಮದ ಬಯಾನೊ ಅಣೆಕಟ್ಟಿನಿಂದ ಉತ್ಪಾದನೆಯಾದ ವಿದ್ಯುತ್ ಶೇ.40 ರಷ್ಟು.
  3. ಥಾಯ್ಲೆಂಡಿನ ಬೂಮಿ ಬೊಲ್ ಅಣೆಕಟ್ಟಿನ ಮೂಲ ಉದ್ದೇಶ ಇದ್ದದ್ದು, 540 ಮೆಗಾವ್ಯಾಟ್, ಆದರೆ ಉತ್ಪಾದನೆಯಾದದ್ದು,150 ಮೆಗಾವ್ಯಾಟ್.
  4. ಭಾರತದ ಸರದಾರ್ ಸರೋವರದ ಅಣಕಟ್ಟಿನಲ್ಲಿ ಉದ್ದೇಶಿತ ಗುರಿ 1.450 ಮೆಗಾವ್ಯಾಟ್ ವಿದ್ಯುತ್, ಉತ್ಪಾದನೆಯಾದದ್ದು ಶೇ. 28 ರಷ್ಟು ಮಾತ್ರ.
  5. ಶ್ರೀಲಂಕಾದ ವಿಕ್ಟೋರಿಯಾ ಅಣೆಕಟ್ಟುವಿನಿಂದ 210 ಮೆಗಾವ್ಯಾಟ್ ವಿದ್ಯುತ್‌ಗಾಗಿ ಗುರಿ ಹೊಂದಲಾಗಿತ್ತು. ಅಲ್ಲಿ ಉತ್ಪಾದನೆಯಾದದ್ದು ಶೇ.32 ರಷ್ಟು ಮಾತ್ರ.

ಹೀಗೆ ಜಗತ್ತಿನಾದ್ಯಂತ ನೂರಾರು ಅಣೆಕಟ್ಟುಗಳ ಇತಿಹಾಸದ ಪಟ್ಟಿಯನ್ನು ಗಮನಿಸಿದರೆ, ಇವರುಗಳ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ.

ಜಲವಿದ್ಯುತ್ ಯೋಜನೆಗಾಗಿ ರೂಪಿಸಿದ ಅಣೆಕಟ್ಟುಗಳಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರಕ್ಕೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಪರಿಸರ ತಜ್ಙರು ಗುರುತಿಸಿದ್ದಾರೆ. ಈವರಗೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಘಟಕ, ಅನಿಲ ಆಧಾರಿತ ಘಟಕಗಳಿಂದ ಮಾತ್ರ ಪರಿಸರಕ್ಕೆ ಹಾನಿ ಎಂದು ನಂಬಲಾಗಿತ್ತು. ಈಗ ಜಲ ವಿದ್ಯುತ್ ಯೋಜನೆಯ ಜಲಾಶಗಳಿಂದಲೂ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ.

ಜಲವಿದ್ಯುತ್ ಯೋಜನೆಗಳು ಪರಿಸರ ರಕ್ಷಣೆಗೆ ಪೂರಕವಾಗಿದ್ದು ಇವುಗಳಿಗೆ ಕೈಗಾರಿಕಾ ರಾಷ್ಟಗಳು ಉದಾರವಾಗಿ  ನೆರವು ನೀಡಬೇಕೆಂದು ಅಂತರಾಷ್ಟೀಯ ದೊಡ್ಡ ಅಣೆಕಟ್ಟುಗಳ ಸಮಿತಿ ಆಗ್ರಹಿಸಿತ್ತು.

20 ಮತ್ತು 21 ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿವ ಅಪಾಯಕಾರಿ ಸ್ಥಿತಿಯೆಂದರೆ, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ. ಇದು ಮನು ಕುಲಕ್ಕೆ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ನೂತನವಾಗಿ ಅವಿಷ್ಕಾರಗೊಳ್ಳುವ ಯಾವುದೇ ತಂತ್ರಜ್ಙಾನವಿರಲಿ, ಅದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಎಲ್ಲರ ನಿಲುವಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಙಾನಗಳಿಂದ ಕೂಡಿದ ಜಲವಿದ್ಯುತ್ ಘಟಕದಿಂದ ಯಾವುದೇ ಹಾನಿಯಾಗದಿದ್ದರೂ, ಜಲಾಶಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶ, ಅಲ್ಲಿನ ಗಿಡ ಮರಗಳು, ಪ್ರಾಣಿಗಳು ಇವುಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲ ಮತ್ತು ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದನ್ನು ಪರಿಸರ ವಿಜ್ಷಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಬ್ರೆಜಿಲ್‌ನ ರಾಷ್ಟೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫಿಲಿಪ್ ಪೆರ್ನಸೈಡ್ ಎಂಬುವರು  ಆ ದೇಶದ ಎರಡು ಜಲಾಶಯಗಳಲ್ಲಿ ನಿರಂತರ ಇಪ್ಪತ್ತು ವರ್ಷ ಸಂಶೋಧನೆ ನಡೆಸಿ ವಿಷಯವನ್ನು ಧೃಡಪಡಿಸಿದ್ದಾರೆ.

ಜಲಾಶಯಗಳ ನೀರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಅನಿಲಗಳ ಪ್ರಮಾಣ ಪ್ರಾದೇಶಿಕ ಹಾಗೂ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದಿರುವ ಫಿಲಿಪ್, ಉಷ್ಣವಲಯದ ಆರಣ್ಯ ಪ್ರದೇಶದಲಿರುವ ಜಲಾಶಯಗಳು ಪರಿಸರಕ್ಕೆ ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಆಮ್ಲಜನಕ ಬಿಡುಗಡೆಗೊಂಡು ಮಿಥೇನ್ ಅನಿಲದಿಂದ ಉತ್ಪತ್ತಿಯಾಗವ ಕೊಳೆಯುವಿಕೆಯ ಬ್ಯಾಕ್ಟೀರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಆದರೆ, ಪ್ರವಾಹ ಸಂದರ್ಭದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದರಿಂದ, ಜೊತೆಗೆ ಹೂಳು, ಕಲ್ಮಶಗಳು ಶೇಖರವಾಗುವುದರಿಂದ ಈ ನಿಯಂತ್ರಣ ಏರು ಪೇರಾಗುತ್ತದೆ ಎಂದು ವಿಜ್ಙಾನಿಗಳು ವಿವರಿಸಿದ್ದಾರೆ

ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಹಸಿರು ಮನೆ ಅನಿಲಗಳೆಂದು ಕರೆಯುತ್ತಿರುವ ಇಂಗಾಲಾಮ್ಲ, ಮಿಥೇನ್, ಮತ್ತು ಕಾರ್ಬನ್ ಮೊನಾಕ್ಷೈಡ್ ಇವುಗಳ ಪರಿಣಮದ ಬಗ್ಗೆ ವಿಜ್ಙಾನಿಗಳಲ್ಲಿ ಗೊಂದಲವಿರುವುದು ನಿಜ. ಆದರೆ, ಪಿಲಿಪ್ ಪೆರ್ನಸೈಡ್ ಬ್ರೆಜಿಲ್ನ ಎರಡು ಅಣೆಕಟ್ಟುಗಳ ಅಧ್ಯಯನದಿಂದ, ಜಲಾಯಗಳು ಕಲ್ಲಿದ್ದಲು ವಿದ್ಯುತ್ ಘಟಕದ ಶೇ.50ರಷ್ಟು ಹಾಗೂ ಅನಿಲ ಆಧಾರಿತ ಘಟಕದ ಶೇ.26 ರಷ್ಡು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ನದಿಗೆ ಅಣೆಕಟ್ಟು ನಿರ್ಮಿಸುವ ಮುನ್ನ ಸ್ಥಳದ ಪರಿಶೀಲನೆ, ಅಣೆಕಟ್ಟಿನ ವಿನ್ಯಾಸ, ನದಿ ನೀರಿನ ಹರಿಯುವಿಕೆ ಪ್ರಮಾಣ, ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಭೂಮಿಯ ಲಕ್ಷಣ ಇವೆಲ್ಲವನ್ನು ಪರಿಗಣಿಸುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ಪ್ರವಾಹದ ಸಂದರ್ಭದಲ್ಲಿ ನದಿಯ ನೀರಿನ ಜೊತೆ ಜಲಾಶಯ ಸೇರುವ ಹೂಳಿನ ಪ್ರಮಾಣ ಮತ್ತು ಅದನ್ನು ತೂಬುಗಳ (ಗೇಟ್) ಮೂಲಕ ಹೊರ ಹಾಕುವ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು. ಇತ್ತೀಚಿಗಿನ ದಿನಗಳಲ್ಲಿ ಅಣೆಕಟ್ಟು ನಿರ್ಮಣವೇ ಒಂದು ಅಂತರಾಷ್ಟೀಯ ದಂಧೆಯಾಗಿರುವಾಗ ಯಾವ ಅಂಶಗಳನ್ನು ಗಮನಿಸುವ ತಾಳ್ಮೆ ಯಾರಿಗೂ ಇಲ್ಲ.

ಕಳೆದ ಎರಡು ದಶಕದಿಂದ ಜಗತ್ತಿನ ನದಿಗಳು, ಅಣೆಕಟ್ಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ವಿಜ್ಙಾನಿಗಳು ವಾತಾವರಣದಲ್ಲಾಗುವ ಸಣ್ಣ ಬದಲಾವಣೆಗಳು ಅನೇಕ ಅವಘಡಗಳಿಗೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ. ಆಲಾಶಯಗಳಲ್ಲಿ ಹೂಳಿನ ಪ್ರಮಾಣ ನಿರಿಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟಾಗಿದ್ದು ಈಗಾಗಲೇ ಅಂದಾಜಿಸಿದ್ದ ಜಲಾಶಯಗಳ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವುಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

(ಮುಂದುವರಿಯುವುದು)

Leave a Reply

Your email address will not be published. Required fields are marked *