KGF ಸಂತ್ರಸ್ತರಿಗೆ ನೆರವು : ದಯಾನಂದರ ವರದಿ…

ಟಿ.ಕೆ. ದಯಾನಂದ್

ವರ್ತಮಾನದ ಕರೆಗೆ ಓಗೊಟ್ಟ ಸಹೃದಯ ಜೀವಪರ ಬಂಧುಗಳಿಗೆ ಕೆಜಿಎಫ್‌ನ ಮಲಸಂತ್ರಸ್ಥರ ನೆನಕೆಗಳು ಸಲ್ಲುತ್ತಿವೆ. ವ್ಯವಸ್ಥೆ, ಅಧಿಕಾರ ಮತ್ತು ಸಮಕಾಲೀನ ನ್ಯಾಯ ನಿರಾಕರಣೆಯ ಅಡಕತ್ತರಿಗೆ ಸಿಕ್ಕಿಬಿದ್ದಿದ್ದ ಈ ಸಂತ್ರಸ್ಥರ ಹಸಿವಿನ ಸಂಕಷ್ಟವನ್ನು ನೀಗಲು ಜೊತೆ ನಿಲ್ಲೋಣ ಎಂಬ ವರ್ತಮಾನದ ಕರೆಗೆ ಅದೆಷ್ಟೋ ಮಂದಿ ಮುಂದೆ ಬಂದರು. ನಾವು ಒಂದು ಕ್ವಿಂಟೋಲ್, ಎರಡು ಕ್ವಿಂಟೋಲ್ ಅಕ್ಕಿ ಕೊಡಿಸುತ್ತೇವೆ ಅಂದವರು ಸುಮಾರು ಮಂದಿ. ಬ್ಯಾಂಕ್ ಅಕೌಂಟಿಗೆ ಒಬ್ಬರ ನಂತರ ಒಬ್ಬರಂತೆ ಹಣವನ್ನು ಸಂದಾಯ ಮಾಡಿದರು. ಕೆಲವರು ಚೆಕ್ ಕಳಿಸಿಕೊಟ್ಟರು, ಇನ್ನು ಹಲವು ಗೆಳೆಯರು/ಗೆಳತಿಯರು ನೇರವಾಗಿಯೇ ಬಂದು ನಮ್ಮ ಪಾಲಿದು ಎಂದು ಧನಸಹಾಯ ಮಾಡಿದರು. ಹೀಗೆ ಒಟ್ಟು ಸಂಗ್ರಹವಾದ ಹಣ 35 ಸಾವಿರ ರೂಪಾಯಿಗಳು. ಕ್ವಿಂಟೋಲ್ ಲೆಕ್ಕದ ಅಕ್ಕಿ ಮೂಟೆಗಳನ್ನು ಕೆಜಿಎಫ್ ಗೆ ಸಾಗಿಸುವುದು ತಾರ್ಕಿಕವಾಗಿ ಅಸಾಧ್ಯವಾದ ಕೆಲಸವೆಂಬ ಕಾರಣಕ್ಕೆ ಸಂಗ್ರಹಗೊಂಡ ಹಣದಲ್ಲಿಯೇ ಕೆಜಿಎಫ್‌ನಲ್ಲಿಯೇ ಒಂದಷ್ಟು ಆಹಾರ ಸಾಮಗ್ರಿಯನ್ನು ಖರೀದಿಸಿ ನೀಡುವುದೆಂದು ತೀರ್ಮಾನವಾಯಿತು. ಜೀವಪರ ನಿಲುಮೆಯ ಗೆಳೆಯ ಗೆಳತಿಯರು ಹೊಂದಿಸಿಕೊಟ್ಟ ಈ ಹಣವನ್ನು ತೆಗೆದುಕೊಂಡು ಕಳೆದ ಭಾನುವಾರ ಕೆಜಿಎಫ್‌ಗೆ ಭೇಟಿ ನೀಡಲಾಯಿತು. ಪತ್ರಕರ್ತ ಗೆಳೆಯರಾದ ದಿನೇಶ್, ಪ್ರವೀಣ್ ಸೂಡರೊಟ್ಟಿಗೆ ಮಧ್ಯಾಹ್ನದ ಹೊತ್ತಿಗೆ ಕೆಜಿಎಫ್ ತಲುಪಿದಾಗ ಅಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಕೆಜಿಎಫ್‌ನ ಮಾಜಿ ಗಣಿ ಕಾರ್ಮಿಕರೂ, ಪ್ರಸ್ತುತ ಮಲ ಹೊರುವ ವೃತ್ತಿಗೆ ಬಿದ್ದು ಜೀವಗಳನ್ನು ಅಡವಿಟ್ಟು ಬದುಕುತ್ತಿದ್ದ ಕಾರ್ಮಿಕರೂ ಆದ ವೈ.ಜೆ. ರಾಜೇಂದ್ರ, ವಕೀಲ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತೆ ಪದ್ಮ ಮತ್ತು ಕೋಲಾರದ ಎಡಪಂಥದ ಸಂಘಟನೆಗಳ ಸಮ್ಮುಖದಲ್ಲಿ ಸಭೆ ಸೇರಿದ್ದರು. ಅವರೊಟ್ಟಿಗೆಯೇ ಕುಳಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವಲ್ಲಿ ಭಾಗಿಯಾಗಿ ಸಭೆ ಮುಗಿಯುವಷ್ಟರಲ್ಲಿ ಕತ್ತಲಾಗತೊಡಗಿತ್ತು.
 
ಸಭೆ ಮುಗಿಸಿ ಬಂದ ಪದ್ಮಾ ಮತ್ತು ಪ್ರಭುರವರೊಟ್ಟಿಗೆ ಕೆಜಿಎಫ್‌ನ ಮಾರುಕಟ್ಟೆಗೆ ತೆರಳಿ ಅಲ್ಲಿನ 50 ಕುಟುಂಬಗಳಿಗೆ ನಮ್ಮ ಬಳಿ ಸಂಗ್ರಹವಾದ 35 ಸಾವಿರದ ಮಿತಿಯಲ್ಲಿ ಯಾವ ಬಗೆಯಲ್ಲಿ ನೆರವು ನೀಡಬಹುದೆಂದು ಕೂಡಿ ಕಳೆದು ಲೆಕ್ಕಾಚಾರ ಮಾಡಿದಾಗ ಒಟ್ಟು 50 ಕುಟುಂಬಗಳಿಗೂ ಪ್ರತೀ ಕುಟುಂಬಕ್ಕೂ 25 ಕೇಜಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬಹುದೆಂದು ನಿಷ್ಕರ್ಷೆಯಾಯಿತು. ಅದರಂತೆ 1250 ಕಿಲೋ ಅಕ್ಕಿಯನ್ನು 25 ಕೇಜಿ ಚೀಲದಂತೆ ಖರೀದಿಸಿ ಅಲ್ಲಿಂದ ಒಂದು ಸರಕುಸಾಗಣೆಯ ವಾಹನದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ವಾಸಿಸುವ ಪ್ರದೇಶವಾದ ಕೆನಡೀಸ್ ಲೈನ್‌ಗೆ ಕೊಂಡೊಯ್ದೆವು. ಅಲ್ಲಿ ಒಟ್ಟು 50 ಕುಟುಂಬಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಿ ಒಬ್ಬೊಬ್ಬರ ಹೆಸರನ್ನೂ ಕರೆದು ಅವರಿಗೆ ಪ್ರತೀ ಮನೆಗೆ 25 ಕೇಜಿ ಅಕ್ಕಿಯಂತೆ ವಿತರಣೆ ಮಾಡಲಾಯಿತು. ತಕ್ಷಣಕ್ಕೆ ದೊರೆತ ಈ ಬಗೆಯ ನೆರವಿನಿಂದ ಕಾರ್ಮಿಕರಲ್ಲಿ ಕೆಲವರು ಭಾವುಕರಾಗಿದ್ದರು, ಕೊಟ್ಟವರು ಯಾರೋ ಏನೋ ಗೊತ್ತಿಲ್ಲ ಅವರ ಜೀವಕ್ಕೆ ಒಳ್ಳೆಯದಾಗಲೆಂಬ ಹರಕೆ ಸಂತ್ರಸ್ಥ ಕಾರ್ಮಿಕರದ್ದಾಗಿತ್ತು. ಎಲ್ಲರ ಮುಖದಲ್ಲೂ ಹಸಿವಿನಿಂದ ತಾತ್ಕಾಲಿಕವಾಗಿಯಾದರೂ ತಪ್ಪಿಸಿಕೊಂಡೆವಲ್ಲ ಎಂಬ ಸಮಾಧಾನವಿತ್ತು. ಅಕ್ಕಿ ಖರೀದಿಗೆ 30 ಸಾವಿರ ರೂಗಳನ್ನು ವ್ಯಯಿಸಿ ಊಟ, ಕಾರಿನ ಪೆಟ್ರೋಲು, ಸರಕುಸಾಗಣೆ ವಾಹನದ ಬಾಡಿಗೆ ಎಲ್ಲವೂ ಕಳೆದು ಇನ್ನೂ ಮೂರೂವರೆ ಸಾವಿರದಷ್ಟು ಹಣ ಹಾಗೆಯೇ ಉಳಿದಿತ್ತು. ಅದರಲ್ಲಿ ಎಣ್ಣೆ ಖರೀದಿಸಿ ವಿತರಿಸುವ ಯೋಜನೆ ಹಾಕಿಕೊಂಡೆವಾದರೂ ಅದಕ್ಕೆ ಮೂರೂವರೆ ಸಾವಿರ ಕಡಿಮೆ ಬೀಳುತ್ತದೆಂಬ ಕಾರಣಕ್ಕೆ ಸುಮ್ಮನಾದೆವು. ಉಳಿದಿರುವ ಮೂರೂವರೆ ಸಾವಿರ ರೂಗಳ ಜೊತೆಗೆ ಬೆಂಗಳೂರಿನ ಕೆಲವರು ಅಕ್ಕಿ ಕೊಡಿಸುವ ಭರವಸೆ ನೀಡಿದ್ದರು, ಅದನ್ನು ಮತ್ತೆ ತೆಗೆದುಕೊಂಡು ಇದೇ ಬಗೆಯ ಸಂಕಷ್ಟಕ್ಕೆ ಸಿಲುಕಿರುವ ಕೆಜಿಎಫ್‌ನ ಬಿ. ಬ್ಲಾಕ್ ಮತ್ತು, ಬೇರ್ಶಾಪ್ ಪ್ರದೇಶಗಳಿಗೆ ತಲುಪಿಸುವ ಯೋಜನೆಯನ್ನು ಯೋಜಿಸಿದೆವು. ರಾತ್ರಿ ಹತ್ತರವರೆಗೂ ಅಕ್ಕಿ ವಿತರಣೆಯ ಕೆಲಸದಲ್ಲಿ ಮಗ್ನವಾಗಿದ್ದ ನಮ್ಮ ತಂಡ ವಿತರಣೆಯ ಜವಾಬ್ದಾರಿ ನಿರ್ವಹಿಸಿದ ಮೇಲೆ, ನಿಮ್ಮೊಟ್ಟಿಗೆ ನಾವಿದ್ದೇವೆ, ನೀವು ಒಂಟಿಯಲ್ಲ, ಬೆಂಗಳೂರಿನ ಒಂದು ಪಡೆಯೇ ನಿಮ್ಮೊಟ್ಟಿಗೆ ಇರುತ್ತದೆ, ನಿಮ್ಮ ಹೋರಾಟವನ್ನು ಮುಂದುವರೆಸಿ, ಯಶಸ್ಸು ಸಿಗಲಿ ಎಂದು ಹಾರೈಸಿ ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ 2 ಗಂಟೆಯಾಗಿತ್ತು. ವರ್ತಮಾನದೊಟ್ಟಿಗೆ ಕೈ ಜೋಡಿಸಿದ ಎಲ್ಲರ ನೆರವಿಗೂ ಸಾರ್ಥಕತೆ ಮೂಡಿದ ಸಮಾಧಾನ ನಮಗಿತ್ತು.
 
ಖರ್ಚು ವೆಚ್ಚಗಳ ವಿವರ:
ಸಂಗ್ರಹಗೊಂಡ ಒಟ್ಟು ಮೊತ್ತ: 35 ಸಾವಿರ ರೂಗಳು.
1250 ಕಿಲೋ ಅಕ್ಕಿ ಖರೀದಿಗೆ  – 30 ಸಾವಿರ ರೂಗಳು
ಕಾರ್ ಪೆಟ್ರೋಲ್‌ಗೆ ಬಳಸಿದ್ದು   – 500 ರೂಗಳು
ನಾಲ್ಕು ಜನರ 2 ಹೊತ್ತಿನ ಊಟದ ವೆಚ್ಚ – 500 ರೂಗಳು
ಸರಕುಸಾಗಣೆ ವಾಹನದ ಬಾಡಿಗೆ  – 400 ರೂಗಳು
ಉಳಿದಿರುವ ಹಣ   – 3600 ರೂಗಳು


Leave a Reply

Your email address will not be published. Required fields are marked *