ಸಾರೆಕೊಪ್ಪದ ಸರದಾರ ಇನ್ನಿಲ್ಲ

ಕರ್ನಾಟಕ ರಾಜಕೀಯ ಕಂಡ ಬಹು ಮುಖ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ 79ನೇ ವಯಸ್ಸಿಗೆ ಇಂದು ತಮ್ಮ ಇಹಲೋಕ ತ್ಯಜಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದವರು ಬಂಗಾರಪ್ಪ.
ಅವರು ಕಟ್ಟದ ಪಕ್ಷಗಳಿಲ್ಲ, ಕರ್ನಾಟಕದಲ್ಲಿರುವ ಪಕ್ಷಗಳಿಗೆ ಸೇರ್ಪಡೆಯಾಗಿ, ಮತ್ತೆ ತ್ಯಜಿಸಿ ಬಾರದೆ ಇರುವ ಪಕ್ಷಗಳಿಲ್ಲ. ಬಂಗಾರಪ್ಪ ತಮ್ಮ ಬದುಕಿನುದ್ದಕ್ಕೂ ದೇವೆಗೌಡರಂತೆ ರಾಜಕೀಯವನ್ನು ಉಂಡು, ಹಾಸಿ, ಹೊದ್ದವರು. ತಾವು ಮುಖ್ಯಮಂತ್ರಿಯಾಗಿದ್ದಾಗ ಇವತ್ತಿನ ಯಡಿಯೂರಪ್ಪನಂತೆ ಯಾವ ಅಂಜಿಕೆಯಿಲ್ಲದೆ ಜಾತಿ ರಾಜಕಾರಣವನ್ನು ನೇರವಾಗಿ ಮಾಡಿದರು.
ಕರ್ನಾಟಕ ಯಶಸ್ವಿ ರಾಜಕಾರಣಿ ಎಂದು ನಾವು ಕರೆಯಲಾಗದಿದ್ದರೂ, ಅವರೊಬ್ಬ ನಾಡು ಕಂಡ ಅಪ್ರತಿಮ ಹೋರಾಟಗಾರ ಇದರಲ್ಲಿ ಎರಡನೆ ಮಾತಿಲ್ಲ. ಇವರು ತಮ್ಮ ಹುಟ್ಟು ಹೋರಾಟವನ್ನು ಹಠವಾಗಿ ಪರಿವರ್ತಿಸಿಕೊಂಡ  ಫಲವಾಗಿ ಇಳಿವಯಸ್ಸಿನಲ್ಲಿ ಅನೇಕ ಸೋಲುಗಳನ್ನು ಅನುಭವಿಸಬೇಕಾಯಿತು. ಒಂದು ವರ್ಷದ ಹಿಂದೆ ಮುಲಾಯಂಸಿಂಗ್ ಯಾದವ್ ರವರ ಸಮಾಜವಾದಿ ಪಕ್ಷವನ್ನು ತೊರೆದು  ದೇವೆಗೌಡರ ಜೆ.ಡಿ.ಎಸ್.ಪಕ್ಷ ಸೇರಿದ್ದ ಬಂಗಾರಪ್ಪನವರು ಬಿ.ಜೆ.ಪಿ. ಸೋಲಿಸಲು ಪಣ ತೊಟ್ಟಿದ್ದರು. ಆದರೆ, ಯುದ್ಧಕ್ಕೆ ಮುನ್ನವೇ ಅವರು ಇಲ್ಲವಾದದ್ದು, ರಾಜಕೀಯ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.
ನಾಲ್ಕು ವರ್ಷದ ಹಿಂದೆ ಬಂಗಾರಪ್ಪನವರಿಗೆ 75 ವರ್ಷ ತುಂಬಿದ ಸಮಯದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಸಂಪಾದಕತ್ವದಲ್ಲಿ ಹೊರತರಲಾಗಿದ್ದ  ಸಾರೆಕೊಪ್ಪದ ಬಂಗಾರ ಎಂಬ ಅಭಿನಂದನಾ ಗ್ರಂಥಕ್ಕೆ ನಾನು ಬರೆದಿದ್ದ ಒಂದು ಲೇಖನ ಅವರ ಸಾವಿನ ಸಂದರ್ಭದಲ್ಲಿ ಇಲ್ಲಿದೆ.
– ಡಾ.ಎನ್.ಜಗದೀಶ್ ಕೊಪ್ಪ
ಜನ ನದಿಯಂತೆ ಹರಿದು ಬರುತ್ತಾರೆ

ಬಂಗಾರಪ್ಪ ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ 40 ವರ್ಷಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುಳಿದ ಒಂದು ಹೆಸರು. ಬಡತನ, ಹಸಿವು, ಶೋಷಣೆ, ಗುಲಾಮಗಿರಿತನ ಇವುಗಳ ವಿರುದ್ಧ ತನ್ನ ರಾಜಕೀಯ ಬದುಕಿನುದ್ದಕ್ಕೂ ಹೋರಾಡುತ್ತಲೇ ಬಂದ ಹುಟ್ಟು ಹೋರಾಟಗಾರ ಎಸ್.ಬಂಗಾರಪ್ಪನವರು ಕನರ್ಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಕರ್ನಾಟಕದ  ರಾಜಕೀಯಕ್ಕೆ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್.ಪಟೇಲರಂತಹ ಧೀಮಂತ ನಾಯಕರು ಹಾಗೂ ಚಿಂತಕರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಮಣ್ಣಿನಿಂದ ಹುಟ್ಟಿ ಬಂದ ಇನ್ನೋರ್ವ ರಾಜಕೀಯ ನೇತಾರ ಎಸ್.ಬಂಗಾರಪ್ಪ.
1960ರ ದಶಕದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮುನ್ನ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರ ಮತ್ತು ಗೇಣಿದಾರರ ಪರ ಹೋರಾಡುತ್ತಾ ಸಮಾಜವಾದಿ ಚಳುವಳಿಗೆ ಧುಮುಕಿದ ಬಂಗಾರಪ್ಪನವರು, 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಪ್ರವೇಶಿಸಿದರು. ಆನಂತರ ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ.
ಸೊರಬ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ನಿರಂತರವಾಗಿ ವಿಧಾನಸಭೆಗೆ ಆರಿಸಿ ಬಂದ ಬಂಗಾರಪ್ಪನವರು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ದನಿಯೆತ್ತಿ ಕರ್ನಾಟಕದ ಜನಮನವನ್ನು ಸೂರೆ ಗೊಂಡರು. ರಾಜಕೀಯ ಬದುಕಿನ ಒತ್ತಡಗಳಿಗೆ ಅನುಗುಣವಾಗಿ ಬಂಗಾರಪ್ಪನವರು ಪಕ್ಷಗಳನ್ನು ಬದಲಾಯಿಸಿದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಎಂದೂ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಲಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಮಮನೋಹರ ಲೋಹಿಯಾರ ಚಿಂತನೆ ಹಾಗೂ ಶಾಂತವೇರಿ ಗೋಪಾಲಗೌಡರ ಪ್ರಭಾವ.
ಗೋಪಾಲಗೌಡರ ನಿಧನಾನಂತರ ಶಿವಮೊಗ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಜೆ.ಎಚ್.ಪಟೇಲರ ಜೊತೆ ಗುರುತಿಸಿಕೊಂಡ ಬಂಗಾರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರತೊಡಗಿದರು.
ಕರ್ನಾಟಕ ಕಂಡ ಜನಪರ ಕಾಳಜಿಯ ಧೀಮಂತ ಮುಖ್ಯಮಂತ್ರಿ ಎಂದೇ ಹೆಸರಾದ ದಿವಂಗತ ದೇವರಾಜ ಅರಸುರವರು ಕಟ್ಟಿದ ಕ್ರಾಂತಿ ರಂಗ ಪಕ್ಷವನ್ನು ಅವರ ನಿಧನಾನಂತರ ಮುನ್ನಡೆಸುವುದರ ಮೂಲಕ 80ರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವುದರಲ್ಲಿ ಬಂಗಾರಪ್ಪನವರ ಪಾತ್ರ ಪ್ರಮುಖವಾದುದು. ಗುಂಡೂರಾವ್ ಸರಕಾರ ಪತನಗೊಂಡ ನಂತರ ಈ ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯ ಮಂತ್ರಿಯಾಗಬೇಕಿದ್ದ ಬಂಗಾರಪ್ಪ ಹಲವು ರಾಜಕೀಯ ಒಳಸುಳಿಗೆ ಸಿಲುಕಿ ಅಂದಿನ ಜನತಾ ಸರಕಾರದ ರಾಮಕೃಷ್ಣ ಹೆಗಡೆಯವರಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ತಮ್ಮ ಕ್ರಾಂತಿರಂಗ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ಬಂಗಾರಪ್ಪನವರು ಕಾಂಗ್ರೆಸ್ ನೇತೃತ್ವದ ಸರಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. 1989ರಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅನಿರೀಕ್ಷಿತವಾಗಿ ಕೆಳಗಿಳಿಸಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು.
ತಮ್ಮ ಜಿಲ್ಲೆಯಾದ ಶಿವಮೊಗ್ಗದ ಜನತೆಯನ್ನು ಜಾತಿ ಧರ್ಮದ ಹಂಗಿಲ್ಲದೆ, ರಾಜಕೀಯ ಪಕ್ಷಗಳ ಕಟ್ಟುಪಾಡುಗಳಿಲ್ಲದೆ ಪ್ರೀತಿಸಬಲ್ಲ ವ್ಯಕ್ತಿತ್ವ ಬಂಗಾರಪ್ಪನವರದ್ದು. ಇಂದಿಗೂ ಶಿವಮೊಗ್ಗ ಜಿಲ್ಲೆಯ ಯಾವುದೇ ಹಳ್ಳಿಗೆ ಹೋಗಲಿ ಅಲ್ಲಿಯ ಗ್ರಾಮಸ್ಥರನ್ನು ಹೆಸರಿಡಿದು ಕರೆಯುವಷ್ಟು ನೆನಪನ್ನು ಬಂಗಾರಪ್ಪ ಉಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಬಂಗಾರಪ್ಪನವರ ಯಾವುದೇ ಕಾರ್ಯಕ್ರಮ ನಡೆಯಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳಿಂದ ಜನರು ನದಿಯಂತೆ ಹರಿದು ಬರುತ್ತಾರೆ. ಜೊತೆಗೆ ಬಂಗಾರಪ್ಪನವರು ಎಷ್ಟೇ ಪಕ್ಷಗಳನ್ನು ಬದಲಾಯಿಸಿದರೂ ಅವರನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ.
ಬಂಗಾರಪ್ಪನವರ ರಾಜಕೀಯ ತಪ್ಪು ನಿರ್ಧಾರಗಳಿಂದಾಗಿ ಇಂದಿನ ಯು.ಪಿ.ಎ. ಸರಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶವನ್ನು ಕಳೆದುಕೊಂಡರು. ಬಂಗಾರಪ್ಪನವರು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಚುನಾವಣೆಯಲ್ಲಿ ಸೋಲುಂಡಿತು. ಬಂಗಾರಪ್ಪನವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದ ಬಿ.ಜೆ.ಪಿ. ಪಕ್ಷದ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲಾರದೆ ರಾಜಿನಾಮೆ ನೀಡಿ ಅವರು ಹೊರಬಂದರು.
ಅತ್ತ ಕಾಂಗ್ರೆಸ್ ಪಕ್ಷವನ್ನು ಇತ್ತ ಬಿ.ಜೆ.ಪಿ.ಪಕ್ಷವನ್ನು ಸಮಾನ ಶತೃಗಳಂತೆ ಭಾವಿಸಿರುವ ಬಂಗಾರಪ್ಪನವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಉತ್ತರ ಪ್ರದೇಶದ ಮುಲಾಯಂಸಿಂಗ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಸೇರಿ ಮತ್ತೆ ಲೋಕಸಭೆಗೆ ಸ್ವರ್ಧಿಸಿ ಜಯಭೇರಿ ಬಾರಿಸಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಬೆಳೆಯಲು ಶ್ರಮಿಸುತ್ತಿದ್ದಾರೆ.
ನನಗೆ ಬಂಗಾರಪ್ಪನವರ ಬಗ್ಗೆ ಗೌರವ ಮೂಡಲು ವಿಶೇಷ ಕಾರಣವೆಂದರೆ ಅವರ ಶಿಸ್ತುಬದ್ಧ ಜೀವನ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಕ್ರೀಡೆ, ಸಂಗೀತ, ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿರುವ ಬಂಗಾರಪ್ಪನವರು ಯಾವುದೇ ದುರಭ್ಯಾಸಗಳಿಲ್ಲದೆ ತಮ್ಮ ದೇಹ ಹಾಗೂ ಮನಸ್ಸನ್ನ ಆರೋಗ್ಯಯುತವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಇಂದಿನ  ಕರ್ನಾಟಕ ದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ದೇವೇಗೌಡ ಮೂವರು ಒಂದೇ ವಯೋಮಾನದವರು. ಈ ಮೂವರ ಹೋರಾಟ, ಚಿಂತನೆ ಮತ್ತು ಜನಪರ ಕಾಳಜಿ ಕರ್ನಾಟಕದ ಭವಿಷ್ಯದ ರಾಜಕಾರಣಿಗಳಿಗೆ ಮಾದರಿಯಾಗಬಲ್ಲದು. 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಬಂಗಾರಪ್ಪನವರು ಇನ್ನಷ್ಟು ಕಾಲ ನಮ್ಮ ನಡುವೆ ಇದ್ದು ಕರ್ನಾಟಕದ ನೆಲ ಜಲ, ಭಾಷೆ ಸಂಸ್ಕೃತಿ ಮುಂತಾದ ಹೋರಾಟಗಳಿಗೆ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ.

One thought on “ಸಾರೆಕೊಪ್ಪದ ಸರದಾರ ಇನ್ನಿಲ್ಲ

  1. Ananda Prasad

    ಬಂಗಾರಪ್ಪನವರು ಆಗಾಗ ಪಕ್ಷಾಂತರ ಮಾಡುತ್ತ ಕರ್ನಾಟಕದ ರಾಜಕಾರಣದಲ್ಲಿ ಕೊನೆಕೊನೆಗೆ ಅಪ್ರಸ್ತುತರಾದರು. ಈ ಪಕ್ಷಾಂತರದಿಂದ ಅವರು ಕರ್ನಾಟಕದ ರಾಜಕಾರಣದ ಅತ್ಯಂತ ಹಾಸ್ಯಾಸ್ಪದ ರಾಜಕಾರಣಿಯಾದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ಪಕ್ಷಾಂತರ ಮಾಡದೇ ಒಂದು ಪಕ್ಷದಲ್ಲಿ ದೃಢವಾಗಿ ನೆಲೆ ನಿಂತಿದ್ದರೆ ಎಷ್ಟೋ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿತ್ತು. ಬಂಗಾರಪ್ಪನವರಿಗೆ ಇದ್ದ ಅಧಿಕಾರದ ಹಪಾಹಪಿಕೆ ಈ ಪಕ್ಷಾಂತರಕ್ಕೆ ಕಾರಣವೆನಿಸುತ್ತದೆ. ಸಮಾಜವಾದಿ ಹಿನ್ನೆಲೆಯ ಅವರು ಭಾ.ಜ.ಪ. ಸೇರಿದ್ದು ಅವರ ದೂರದೃಷ್ಟಿ ಹಾಗೂ ವಿವೇಕದ ಅಭಾವವನ್ನು ತೋರಿಸುತ್ತದೆ. ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟದ್ದು ಹಾಗೂ ಅದೇ ಪಕ್ಷವನ್ನು ಪುನಃ ಸೇರಿದುದು ಅವರ ಎಡಬಿಡಂಗಿತನವನ್ನು ತೋರಿಸುತ್ತದೆ. ಕಾಂಗ್ರೆಸ್ ಬಿಡಲು ಕಾರಣವಾದ ವಿಷಯಗಳು ಪುನ: ಅದೇ ಪಕ್ಷವನ್ನು ಸೇರಿದಾಗಲೂ ಇರುವಾಗ ಪುನಃ ಅದೇ ಪಕ್ಷವನ್ನು ಸೇರಿದುದು ಅಧಿಕಾರ ದಾಹದಿಂದಲೇ ಎಂಬುದು ಎಂತಹ ಮೂರ್ಖರಿಗೂ ಅರ್ಥವಾಗುವುದಿಲ್ಲವೇ? ಬಂಗಾರಪ್ಪನವರ ನಿಧನದ ಸಂದರ್ಭದಲ್ಲಿ ಬಂಗಾರಪ್ಪನವರ ಒಟ್ಟು ವ್ಯಕ್ತಿತ್ವದ ವಸ್ತುನಿಷ್ಠ ವಿಮರ್ಶೆ ನಮ್ಮ ಮಾಧ್ಯಮಗಳಲ್ಲಿ ಕಂಡು ಬರಲೇ ಇಲ್ಲ. ವ್ಯಕ್ತಿಯೊಬ್ಬ ಸತ್ತಾಗ ಆತನ ವಸ್ತುನಿಷ್ಠ ವಿಮರ್ಶೆ ಮಾಡದೇ ಬರೇ ಹೊಗಳುವುದು ನಮ್ಮ ದೌರ್ಬಲ್ಯವೆನಿಸುತ್ತದೆ.

    Reply

Leave a Reply to Ananda Prasad Cancel reply

Your email address will not be published. Required fields are marked *