Monthly Archives: December 2011

ಪತ್ರಿಕೋದ್ಯಮದ ಪರಿಪಾಟಲು

-ಡಾ. ಎನ್. ಜಗದೀಶ್ ಕೊಪ್ಪ

ಮಿತ್ರರೆ, ಈ ದಿನ ಅಂದರೆ, ದಿನಾಂಕ 15-12-11ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯವನ್ನು ನೀವು ಓದಿರಬಹುದೆಂದು ಭಾವಿಸಿದ್ದೇನೆ. ಬೆಳಿಗ್ಗೆ ಅದನ್ನು ಓದಿದ ಮೇಲೆ ನಮ್ಮಿಬ್ಬರ ನಡುವೆ ಅಂತಹ ಗಾಢ ಸಂಬಂದ ಇಲ್ಲದಿದ್ದರೂ ಕೂಡ ಹಲವು ಭೇಟಿ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಒಟ್ಟಾಗಿ ವೇದಿಕೆ ಹಂಚಿಕೊಂಡ ಪರಿಣಾಮ  ನನಗೆ ಮಿತ್ರರೇ ಆಗಿರುವ ವಿಶ್ವೇಶ್ವರ ಭಟ್ ಇದನ್ನು ಬರೆಯಬಾರದಿತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು.

ಏಕೆಂದರೆ, ಮೂರು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಮಣ್ಣು ಹೊತ್ತಿರುವ ನಾನು, ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷವಿಲ್ಲದೆ ನಿರ್ಭಾವುಕತನದಿಂದ ನಡೆದುಕೊಳ್ಳುವುದೇ ಪತ್ರಕರ್ತನ ಮೂಲಭೂತ ಕರ್ತವ್ಯ ಎಂದು ನಂಬಿದವನು.

ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ ಭಟ್ಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ತಮ್ಮ ಕನ್ನಡಪ್ರಭದ ಸಂಪಾದಕೀಯದಲ್ಲಿ ಆಕ್ರೋಶವನ್ನು ಹೊರಚೆಲ್ಲಿದ್ದಾರೆ. ಅದು ಎಲ್ಲಿಯವರೆಗೆ ಸಾಗಿದೆ ಎಂದರೆ, ಪಟ್ಟಣಶೆಟ್ಟಿಯವರ ಮೊದಲ ಪತ್ನಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಪ್ಪಲಿಯಲ್ಲಿ ಹೊಡೆದ ಪ್ರಸಂಗ ಕೂಡ ದಾಖಲಾಗಿದೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವನ್ನು ಓದಿಕೊಂಡಿರುವ ಎಲ್ಲರೂ ಸಿದ್ದಲಿಂಗ ಪಟ್ಟಣಶೆಟ್ಟಿಯವರ ದಾಂಪತ್ಯದ ಕಹಿನೆನಪುಗಳನ್ನು ಬಲ್ಲರು. ಹಲವುಕಡೆ ಇದನ್ನು ಸ್ವತಃ ಅವರೇ ದಾಖಲಿಸಿದ್ದಾರೆ. ನನ್ನ ಪ್ರಶ್ನೆ ಇದಲ್ಲ, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕನೊಬ್ಬ ಸಂಪಾದಕೀಯ ಪುಟವನ್ನ ಹೀಗೆ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದೆ? ಜಿಲ್ಲಾ ಮಟ್ಟದಲ್ಲಿ ಸಂಪಾದಕನೇ ಪ್ರಕಾಶಕ, ಮುದ್ರಕ, ಕಡೆಗೆ ಓದುಗ ಕೂಡ ಆಗಿರುವುದರಿಂದ ಇಂತಹ ಘಟನೆಗಳು ಸಾಮಾನ್ಯ.

ಇಡೀ ಘಟನೆಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟರ ತಪ್ಪು ಎದ್ದು ಕಾಣುತಿದೆ ನಿಜ. ಅವರನ್ನು ತರಾಟೆಗೆ ತೆಗೆದುಕೊಳ್ಳಲು ಭಟ್ಟರಿಗೆ ಅವರದೇ ಆದ ಬ್ಲಾಗ್, ವೆಬ್‌ಸೈಟ್, ಫೇಸ್‌ಬುಕ್ ತಾಣವಿದ್ದದ್ದರಿಂದ ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ನಮ್ಮಂತಹ ಸಾರ್ವಜನಿಕರ ಜೊತೆ ಒಡನಾಡುವ ಪತ್ರಕರ್ತರಿಗೆ ಇಂತಹ ಆಪಾದನೆ, ಟೀಕೆ ಎಲ್ಲವೂ ಸಾಮಾನ್ಯ. ಇವುಗಳಿಗೆ ನಾವು ಗುರಿಯಾಗದೆ, ನಾಲ್ಕು ಗೋಡೆಯ ನಡುವೆ ಇರುವ ನಮ್ಮ ಪತ್ನಿ ಅಥವಾ ಮಕ್ಕಳು ಗುರಿಯಾಗಲು ಸಾಧ್ಯವಿಲ್ಲ. ನಾವು ತಪ್ಪು ಮಾಡದಿದ್ದಾಗ ಇಲ್ಲವೆ ಅನಾವಶ್ಯಕಕವಾಗಿ ನಮ್ಮ ಮೇಲೆ ಆರೋಪ ಹೊರಿಸಿದಾಗ ಮುಖಾ ಮುಖಿಯಾಗಿ ನಿಂತು ಝಾಡಿಸುವುದು ಉತ್ತಮ ಮಾರ್ಗವೇ ಹೊರತು ಪರೋಕ್ಷವಾಗಿ ಪತ್ರಿಕೆಯ ಮೂಲಕ ಬೆಂಕಿ ಕಾರುವುದು ಉತ್ತಮ ಬೆಳವಣಿಗೆಯಲ್ಲ.

ಕೆಲವೆಡೆ ಭಟ್ಟರ ಸಂಪಾದಕೀಯ ಸಾಲುಗಳು ಅವರ ಟೀಕಾಕಾರಿಗೆ ಎಚ್ಚರಿಕೆ ನೀಡುವಂತಿವೆ. ಇಡೀ ರಾಜ್ಯಾದ್ಯಂತ ನನ್ನ ಪತ್ರಿಕೆ, ಛಾನಲ್‌ನ ವರದಿಗಾರರಿದ್ದಾರೆ, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಮಿತ್ರರಿದ್ದಾರೆ, ಅವರ ಮೂಲಕ ಕ್ಷಣ ಮಾತ್ರದಲ್ಲಿ ವಿಷಯ ಸಂಗ್ರಹಿಸಬಲ್ಲೆ ಎಂಬುದರ ಮೂಲಕ ಭಟ್ಟರು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯುತಿದ್ದಾರೆನೋ ಎಂಬ ಸಂಶಯ ಆತಂಕ ಕಾಡತೊಡಗಿದೆ.

ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಂಡಿರುವ ನಾನು ಭಟ್ಟರು ಅನುಭವಿಸಿದಂತಹ ನೂರಾರು ಅಪಮಾನ, ಯಾತನೆಗಳನ್ನು ಅನುಭವಿಸಿದ್ದೇನೆ. ಎದುರಿಗೆ ಸಿಕ್ಕಾಗ ಮುಖ ಮುಸುಡಿ ನೋಡದೆ ಎದೆಗೆ ಒದ್ದ ಹಾಗೆ ಮಾತನಾಡಿದ್ದೇನೆ. ಆದರೆ, ನನ್ನನ್ನು ಟೀಕಿಸುವವರ ಬಗ್ಗೆ ದ್ವೇಷಿಸುವವರ ಬಗ್ಗೆ ಅಕ್ಷರ ರೂಪದಲ್ಲಿ ನಾನೆಂದು ಸೇಡು ತೀರಿಸಿಕೊಳ್ಳಲಾರೆ. ಏಕೆಂದರೆ, ಅಕ್ಷರ ದಾಖಲಾಗುವ ಮಾಧ್ಯಮ. ಅಲ್ಲಮನ ಈ  ವಚನದ ಸಾಲು ನಾನು ಸಿಟ್ಟಿಗೆದ್ದಾಗಲೆಲ್ಲಾ ನನ್ನನ್ನು ತಡೆಯುತ್ತದೆ. “ಬರೆಯಬಾರದು ನೋಡಾ ಅಳಿಸಬಾರದ ಲಿಪಿಯ”. ನಾವು ಬರೆದ ಲಿಪಿ ಶಾಶ್ವತವಾಗಿ ಉಳಿಯುವಂತಿರಬೇಕು. ಹಾಗಾಗ ಬೇಕೆಂದರೆ, ಲೇಖಕ, ಪತ್ರಕರ್ತನಾದವನು ಬರವಣಿಗೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಇದು ನನ್ನ ನಂಬಿಕೆ.

ಮುಲ್ಲಪೆರಿಯಾರ್ ಅಣೆಕಟ್ಟು – ತಮಿಳುನಾಡಿನ ತರ್ಕವಿಲ್ಲದ ತಕರಾರು

ಡಾ. ಎನ್. ಜಗದೀಶ್ ಕೊಪ್ಪ

ಭಾಷೆ ಮತ್ತು ಸಂಸ್ಕೃತಿ ಮೇಲಿನ ಅಭಿಮಾನಕ್ಕೆ ತಮಿಳರು ಇಡೀ ದೇಶಕ್ಕೇ ಮಾದರಿ. ಅದರೆ ಇಂತಹ ಅಭಿಮಾನವನ್ನು ಇತರೆ ಎಲ್ಲಾ ವಿಷಯಗಳಿಗೂ ವಿಸ್ತರಿಸಲಾಗದು. ವರ್ತಮಾನದ ದುರಂತವೆಂದರೆ, ತಮಿಳುನಾಡಿನ ರಾಜಕಾರಣಿಗಳು ಅಲ್ಲಿನ ಜನರ ಬಡತನ ಮತ್ತು ಹುಚ್ಚು ಅಭಿಮಾನವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರದ ಗದ್ದುಗೆ ಏರುವುದರಲ್ಲಿ ನಿಸ್ಸೀಮರು. ಪ್ರತಿ ಚುನಾವಣೆಯಲ್ಲಿ, ಶಿಕ್ಷಣ, ಆರೋಗ್ಯ. ಬಡತನ ನಿವಾರಣೆ ಇವುಗಳಿಗೆ ಅಲ್ಲಿನ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಹತ್ವವಿಲ್ಲ. ಏನಿದ್ದರೂ ಕಲರ್ ಟಿ.ವಿ., ಮಿಕ್ಸರ್ ಗ್ರೈಂಡರ್, ಒಂದು ರೂಪಾಯಿಗೆ ಕಿಲೋ ಅಕ್ಕಿ, ಅರಿಶಿನ ಪುಡಿ, ಸಾಂಬಾರ್ ಪೌಡರ್, ಮದುವೆಗೆ ತಾಳಿ, ಸೀರೆ ಇಂತಹುಗಳಿಗೆ ಮಾತ್ರ ಆದ್ಯತೆ.

ತಮಿಳರ ಭಾವನೆಯನ್ನ, ದುರ್ಬಲತೆಯನ್ನ ಚೆನ್ನಾಗಿ ಅರಿತಿರುವ ಮುಖ್ಯಮಂತ್ರಿ ಜಯಲಲಿತ ಈಗ ನೀರಿನ ರಾಜಕೀಯ ಶುರುವಿಟ್ಟುಕೊಂಡಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತಂತೆ ಸದಾ ಕರ್ನಾಟಕದ ವಿರುದ್ಧ ಕಾಲು ಕೆರೆದು ನಿಲ್ಲುತ್ತಾ ಅಲ್ಲಿನ ತಮಿಳರನ್ನ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಈಕೆ ಇದೀಗ ಕೇರಳ ಜೊತೆ ಸಂಘರ್ಷ ಶುರುವಿಟ್ಟುಕೊಂಡು ಎರಡು ರಾಜ್ಯಗಳ ಗಡಿಭಾಗದಲ್ಲಿ ಉದ್ವಿಗ್ನತೆಗೆ ಕಾರಣವಾಗಿ ತಮಿಳರ ಪಾಲಿಗೆ ಪಕ್ಕಾ ಅಮ್ಮನಾಗಿದ್ದಾರೆ. ಜಯಲಲಿತ ಕೇರಳ ವಿರುದ್ದ ಎತ್ತಿರುವ ತಕರಾರು ಕ್ಷುಲ್ಲಕವಾಗಿದ್ದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾವು ಬದುಕುತಿದ್ದೆವೆ ಎಂಬುದನ್ನು ಈಕೆ ಮರೆತಂತಿದೆ.

ಕೇರಳದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿ ಸೇರುತ್ತಿರುವ ಪೆರಿಯಾರ್ ನದಿ ಈಗ ಕೇರಳ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಕಾರಣವಾಗಿದೆ.

ಈ ನದಿಗೆ ಪಶ್ಚಿಮ ಘಟ್ಟದ ಜೀವಜಾಲದ ತೊಟ್ಟಿಲು ಎನಿಸಿರುವ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಅಣೆಕಟ್ಟನ್ನು ಅಂದಿನ ತಿರುವಾಕೂರಿನ ರಾಜ ನಿರ್ಮಿಸಿದ್ದ. 116 ವರ್ಷಗಳ ಹಿಂದೆ ಬ್ರಿಟೀಷ್ ಇಂಜಿನಿಯರ್ ಕೋರ್‍ಸ್‌ ಸಂಸ್ಥೆ  ಅಂದಿನ ತಂತ್ರಜ್ಙಾನವಾದ ಸುಣ್ಣ ಮತ್ತು ಮರಳನ್ನು ನುಣ್ಣಗೆ ಅರೆದ ಗಾರೆ ಮತ್ತು ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಸ್ವಾತಂತ್ರ ಪೂರ್ವದಲ್ಲಿ ತಮಿಳನಾಡಿನ ದಕ್ಷಿಣದ ಹಲವು ಭಾಗ ತಿರುವಾಂಕೂರು ( ಇಂದಿನ ತಿರುವನಂತಪುರ ) ಸಂಸ್ಥಾನಕ್ಕೆ ಸೇರಿದ್ದ ಕಾರಣ, ಮಧುರೈ, ಶಿವಗಂಗಾ, ತೇಣಿ, ರಾಮನಾಥಪುರ ಜಿಲ್ಲೆಗಳ ಪ್ರದೇಶಗಳಿಗೆ ಕುಡಿಯುವ ನೀರು, ನೀರಾವರಿ ಯೋಜನೆಗಳನ್ನ ಗುರಿಯಾಗಿರಿಸಿಕೊಂಡು ರಾಜ ಈ ಅಣೆಕಟ್ಟನ್ನು ನಿರ್ಮಿಸಿದ್ದ. ಸ್ವಾತಂತ್ರದ ನಂತರ ರಾಜ್ಯಗಳು ಪುನರ್ ವಿಂಗಡಣೆಯಾದಾಗ ಅಣೆಕಟ್ಟು ಪ್ರದೇಶ ಕೇರಳಕ್ಕೆ, ನೀರಾವರಿ ಪ್ರದೇಶಗಳು ತಮಿಳುನಾಡಿಗೆ ಸೇರ್ಪಡೆಯಾದವು..

1970 ರಲ್ಲಿ ಎರಡು ರಾಜ್ಯಗಳ ನಡುವೆ ಒಪ್ಪಂದವೇರ್ಪಟ್ಟು ತಮಿಳನಾಡಿನ 45 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುತ್ತಿರುವುದರಿಂದ ತಮಿಳುನಾಡು ಸರ್ಕಾರ ಅಣೆಕಟ್ಟು ನಿರ್ವಹಣೆಗೆ ವಾರ್ಷಿಕ 10 ಲಕ್ಷ ರೂಪಾಯಿ ನೀಡುವಂತೆ ನಿರ್ಧರಿಸಲಾಗಿತ್ತು. ಅದರಂತೆ ತಮಿಳನಾಡು ಸರ್ಕಾರ ಕೇರಳ ಸರ್ಕಾರಕ್ಕೆ ಹಣ ಪಾವತಿಸುತ್ತಾ ಬಂದಿದೆ.

ಹಣ ನೀಡುತ್ತಿರುವುದನ್ನ ತನ್ನ ಹಕ್ಕು ಎಂದು ಭಾವಿಸಿರುವ ತಮಿಳುನಾಡು ಸಕಾರ, ನೀರಿನ ಬೇಡಿಕೆ ಹೆಚ್ಚಾದ ಕಾರಣ ಅಣೆಕಟ್ಟಿನ ಎತ್ತರವನ್ನ ಈಗಿನ 142 ಅಡಿಯಿಂದ 152ಅಡಿಗೆ ಎತ್ತರಿಸುವಂತೆ ಕೇರಳವನ್ನು ಒತ್ತಾಯಿಸುತ್ತಿದೆ.

116 ವರ್ಷ ಹಳೆಯದಾದ ಹಾಗೂ ಹಳೆಯ ತಂತ್ರಜ್ಙಾನದಿಂದ ನಿರ್ಮಿಸಲಾದ ಈ ಮುಲ್ಲ ಪೆರಿಯಾರ್ ಅಣೆಕಟ್ಟಿನಲ್ಲಿ ಹಲವೆಡೆ ಬಿರುಕು ಕಾಣಿಸಿಕೊಂಡಿದ್ದು ನೀರು ಸಂಗ್ರಹಕ್ಕೆ ಅಣೆಕಟ್ಟು ಯೋಗ್ಯವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1979 ರಿಂದ ಶಿಥಿಲಗೊಳ್ಳುತ್ತಾ ಬಂದಿರುವ ಈ ಅಣೆಕಟ್ಟಿನ ಸಮೀಪ ಇದೇ ವರ್ಷ ಜುಲೈ ತಿಂಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು ಕೇರಳ ಸರ್ಕಾರ ಅಣೆಕಟ್ಟನ್ನು ಒಡೆದು ಹಾಕುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು ತಮಿಳರನ್ನು ಕೆರಳಿಸಿದೆ. ಕಳೆದ 15 ದಿನಗಳಿಂದ ಎರಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಘರ್ಷಣೆ ಸಂಭವಿಸುತಿದ್ದು ಸಂಚಾರ ಸ್ಥಗಿತಗೊಂಡಿದೆ. ಈ ದಿನಗಳಲ್ಲಿ ಅಯ್ಯಪ್ಪ ಭಕ್ತರ ಸ್ಥಿತಿ ಹೇಳಲಾರದಂತಾಗಿದೆ.

ಪೆರಿಯಾರ್ ಅಣೆಕಟ್ಟು ಅನಿರೀಕ್ಷಿತವಾಗಿ ಒಡೆದುಹೋದರೆ, ಕೇರಳದ 35 ಲಕ್ಷ ಮಂದಿಯ ಮಾರಣ ಹೋಮ ಖಚಿತ ಜೊತೆಗೆ ಇಡುಕ್ಕಿ ಪ್ರದೇಶದ ಬಳಿ ಇರುವ ಮೌನ ಕಣಿವೆಯಲ್ಲಿರುವ ಅಪರೂಪದ ಪಕ್ಷಿಪ್ರಭೇದ, ಜಲಚರಗಳು, ಪ್ರಾಣಿಗಳು, ಗಿಡಮೂಲಿಕೆ ಸಸ್ಯಗಳು ಹೀಗೆ ಜೀವಜಾಲದ ವ್ಯವಸ್ಥೆಯೊಂದು ಕುಸಿದು ಬೀಳಲಿದೆ. ಇವುಗಳ ಪರಿವೇ ಇಲ್ಲದಂತೆ ವರ್ತಿಸುತ್ತಿರುವ ತಮಿಳುನಾಡಿನ ಜಯಲಲಿತಾಗೆ ತನ್ನ  ಹಾಗು ತನ್ನ ಜನರ ಹಿತಾಸಕ್ತಿಯೇ ಮುಖ್ಯವಾದಂತಿದೆ. ಇಡೀ ಭಾರತದಲ್ಲಿ ತನ್ನ ನೆರೆಯ ರಾಜ್ಯಗಳ ಜೊತೆ ನೀರಿನ ವಿಷಯದಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವುದು ಈಕೆ ಮಾತ್ರ. ಒಂದು ಗಣತಂತ್ರ ವ್ಯವಸ್ಥೆಯಲ್ಲಿ ನಾವೆಲ್ಲಾ ಮೊದಲು ಭಾರತೀಯರು, ನಂತರ ಕನ್ನಡಿಗ, ತಮಿಳಿಗ, ಮರಾಠಿ, ಇತ್ಯಾದಿ ಎಂಬುದನ್ನ ಅರಿಯಬೇಕಾದ ತಾಳ್ಮೆ ಈಕೆಗೆ ಇದ್ದಂತಿಲ್ಲ..

ತಮ್ಮ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು, ಇಲ್ಲವೆ ಏರಲು ಭಾವನಾತ್ಮಕ ವಿಷಯಗಳಾದ ನೆಲ, ಜಲ, ಭಾಷೆ, ಧರ್ಮ ಇವುಗಳು ರಾಜಕಾರಣಿಗಳ ದಾಳಗಳಾಗುತ್ತಿರುವುದನ್ನ ಎಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕಾಗಿದೆ. ಆಗ ಮಾತ್ರ ಈ ಜಯಲಲಿತಾ, ಬಾಳ್ ಠಾಕ್ರೆ, ಪ್ರವೀಣ್ ತೊಗಾಡಿಯಾ ರಂತಹ ಶನಿಸಂತಾನಗಳು ತೊಲಗಲು ಸಾಧ್ಯ.

ಈ ವಿಷಯದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ತನ್ನ ಕಾರ್ಯ ವೈಖರಿಯನ್ನ ಬದಲಿಸಿಕೊಳ್ಳಬೇಕಾಗಿದೆ. ಕಡು ಭ್ರಷ್ಟಾಚಾರದಲ್ಲಿ ಜೈಲು ಸೇರಿರುವ ರಾಜಕಾರಣಿಗಳಿಗೆ ಜಾಮೀನು ನೀಡುವ ಅಥವಾ ಅವರ ಮೊಕದ್ದಮೆಯನ್ನ ತ್ವರಿತವಾಗಿ ಮುಗಿಸುವ ಕಾಳಜಿ ರಾಜ್ಯ ರಾಜ್ಯಗಳ ನಡುವಿನ ನೆಲ-ಜಲ ವಿವಾದ ಬಗೆಹರಿಸುವಲ್ಲಿ ಏಕೆ ಇಲ್ಲ? ಕರ್ನಾಟಕ ಮಹರಾಷ್ಟ್ರ ಗಡಿ ವಿವಾದ 40 ವರ್ಷಗಳಿಂದ ನ್ಯಾಯಾಲಯದಲ್ಲಿ ಕೊಳೆಯುತ್ತಿದೆ ಎಂದರೆ, ನಮ್ಮ ನ್ಯಾಯಾಧೀಶರುಗಳು ಒಮ್ಮ ತಮ್ಮ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರ್ಕಾರ ಗಡಿವಿವಾದಕ್ಕೆ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಕುರಿತ ವಿವಾದಕ್ಕೆ ಕೇವಲ 10 ವರ್ಷಗಳಲ್ಲಿ ವಕೀಲರಿಗಾಗಿ ಖರ್ಚು ಮಾಡಿರುವ ಹಣ 50 ಕೋಟಿ ರೂಪಾಯಿ ದಾಟಿದೆ ಎಂದರೆ, ಈ ನೆಲದಲ್ಲಿ ವಿವೇಕ-ಅವಿವೇಕಗಳ ನಡುವಿನ ಗಡಿರೇಖೆ ಅಳಿಸಿಹೋಗಿದೆ ಎಂದರ್ಥ.

(ಚಿತ್ರಕೃಪೆ: ವಿಕಿಪೀಡಿಯ)

ಸಮ್ಮೇಳನಗಳು 78 ಆದರೂ, ಸಾಹಿತ್ಯ ಪರಿಷತ್ತು ಸುಧಾರಣೆ ಆಗಿಲ್ಲ

ಭೂಮಿ ಬಾನು

ಗಂಗಾವತಿಯಲ್ಲಿ 78 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನಗಳು 78 ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ, ಸಂಘಟಿಸುವಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲದಿರುವುದು ವಿಪರ್ಯಾಸ.

ಸಾಹಿತ್ಯ ಸಮ್ಮೇಳನದ ಈಗಿನ ಒಟ್ಟಾರೆ ಸ್ವರೂಪವೇ ‘ನಾನು ಬರೆಯಬಲ್ಲೆ’ ಎಂಬ ಏಕೈಕ ಕಾರಣಕ್ಕೆ ಹುಟ್ಟಿಕೊಳ್ಳುವ ಅಹಂ ಅನ್ನು ಪೋಷಿಸುವ ಉದ್ದೇಶದಿಂದ ರೂಪುಗೊಂಡದ್ದು. ಅದು ಸಾಹಿತಿಗಳು, ಬರಹಗಾರರು, ಕವಿಗಳು, ವಿಮರ್ಶಕರು ಎಂದು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಅನೇಕರಿಗೆ ಒಂದು ವೇದಿಕೆ.

ಪರಿಷತ್ತು ‘ಸಾಹಿತ್ಯವನ್ನು’ ಪರಿಭಾವಿಸುವ ರೀತಿಯಲ್ಲಿಯೇ ಲೋಪಗಳಿವೆ. ಇದುವರೆಗೆ ಒಬ್ಬ ಅನಕ್ಷರಸ್ಥ ಕವಿ, ಅರ್ಥಾತ್ ಜನಪದ ಕವಿ ಸಮ್ಮೇಳನ ನೇತೃತ್ವ ವಹಿಸಿದ ಉದಾಹರಣೆ ಇದೆಯೇ? ಬರೆದದ್ದನ್ನೆಲ್ಲ ಪ್ರಿಂಟ್ ಮಾಡಿಸಿ, ಅಲ್ಲಲ್ಲಿ ಪ್ರಶಸ್ತಿ, ಮನ್ನಣೆ ಗಳಿಸಿದವರು ಮಾತ್ರ ಸಾಹಿತಿ. (ಖ್ಯಾತ ಬರಹಗಾರ, ಪತ್ರಕರ್ತ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದಾಗ ಒಮ್ಮೆ ಮಾತನಾಡುತ್ತ ‘ಸರಕಾರ ಸಾಹಿತಿಗಳಿಗೆ ನೀಡುವ ಪ್ರಶಸ್ತಿ, ಪುರಸ್ಕಾರಗಳು ಕಳೆ ಮೇಲೆ ಸಿಂಪಡಿಸುವ ರಸಗೊಬ್ಬರ’ ಎಂದಿದ್ದರು.) ಅಂತಹದೊಂದು ಪಟ್ಟ ಬಂದಾಕ್ಷಣ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಅರ್ಹತೆ ಸಾಹಿತಿಗೆ ತಂತಾನೆ ಬಂದು ಬಿಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಅನೇಕರು ಗಮನಿಸಿರಬಹುದು, ಕಾವೇರಿ ಗಲಾಟೆ, ಅಮೆರಿಕಾದೊಂದಿಗೆ ಅಣು ಒಪ್ಪಂದ, ಬೆಂಗಳೂರಿನ ಅಸ್ತವ್ಯಸ್ತ ರಸ್ತೆ ಸಂಪರ್ಕ… ಹೀಗೆ ಎಲ್ಲವುದರ ಬಗ್ಗೆಯೂ ಅಭಿಪ್ರಾಯ ಹೊಂದಿರುತ್ತಾರೆ. ಅದು ಅಕ್ಷರ ಜ್ಞಾನದೊಂದಿಗೆ ಉಚಿತವಾಗಿ ಒದಗುವ ಅಹಂನ ಕಾರಣ. ಇತ್ತೀಚೆಗೆ ಜನಪ್ರಿಯ ಸಾಹಿತಿ ಎಸ್. ಎಲ್. ಭೈರಪ್ಪ ಭಾರತದ ಸ್ವಾತಂತ್ರೋತ್ತರ ಇತಿಹಾಸದ ಬಗ್ಗೆ ತಮ್ಮ ಸೀಮಿತ ಅರಿವಿನ ಆಧಾರದ ಮೇಲೆಯೇ ತೀರ್ಪು ಹೊರಡಿಸುವ ಧಾಟಿಯಲ್ಲಿ ಅಂಕಣ ಬರೆಯುತ್ತಿರುವುದಕ್ಕೂ ಇಂತಹದೇ ಅಹಂ ಕಾರಣ.

ಹಿಂದೊಮ್ಮೆ ಹಾ.ಮಾ.ನಾಯಕರು ಕನಿಷ್ಟ ಒಂದು ಪುಸ್ತಕವನ್ನಾದರೂ ಪ್ರಕಟಿಸಿದವರು ಮಾತ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ಈ ಮಾತು ಅಲ್ಲಲ್ಲಿ ಟೀಕೆಗೆ ಗುರಿಯಾಗಿತ್ತು. ಸಾಹಿತ್ಯ ಪರಿಷತ್ತು ಸೀಮಿತ ಪರಿಧಿಯಾಚೆಗೆ ಸಮ್ಮೇಳನವನ್ನು ರೂಪಿಸುವ ಅಗತ್ಯವಿದೆ. ಒಟ್ಟಾರೆ ಕನ್ನಡ ಸಮ್ಮೇಳನ ಆಗಬೇಕಿದೆ. ಕನ್ನಡ ಕೇವಲ ಭಾಷೆ ಅಲ್ಲ, ಸಮಾಜ ಮತ್ತು ಕನ್ನಡಿಗರ ಬದುಕು. ರೈತರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿ ಏರ್ಪಡಿಸಿ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್ ಪುಟ್ಟಣ್ಣಯ್ಯ ನವರು ಮಾತನಾಡಲು ಅವಕಾಶ ಕೊಟ್ಟರೆ ಜವಾಬ್ದಾರಿ ಮುಗಿಯಿತೆ? ಅಥವಾ ರೈತರ ಸಮಸ್ಯೆಗಳ ಬಗ್ಗೆ ಒಂದು ನಿರ್ಣಯ ಮಂಡಿಸಿದರೆ ಸಾಕೆ?

ವಿಮರ್ಶಕ ಚಿದಾನಂದಮೂರ್ತಿಯವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನಿರಾಕರಿಸಿದಾಗ ಅದರ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಸಾಹಿತ್ಯ ಪರಿಷತ್ತು, ಮಂಗಳೂರು, ಉಡುಪಿಗಳಲ್ಲಿ ನಡೆದ ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಉಸಾಬರಿಗೇ ಹೋಗುವುದಿಲ್ಲ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಸಮ್ಮೇಳನಕ್ಕೆ ಸಾಕಷ್ಟು ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆಲಸಕ್ಕೆ ನಿಯೋಜಿಸಲಾಗಿರುವ ಪೊಲೀಸರಿಗೆ ಸಮ್ಮೇಳನಕ್ಕೆ ಆಗಮಿಸುವವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕೆಂಬುದರ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದರು. ಅದು ನಿಜ. ಪೊಲೀಸರಿಗೆ ಅಂತಹ ತರಬೇತಿ ಅಗತ್ಯ. ಆದರೆ ಸಾಹಿತಿಗಳ ಜೊತೆ ವ್ಯವಹರಿಸಲು ಮಾತ್ರ ಅಂತಹ ತರಬೇತಿಯೇ? ರೈತರ ಬಗ್ಗೆ, ಇತರೆ ಕನ್ನಡಪರ ಹೋರಾಟಗಾರರ ಬಗ್ಗೆ, ದಲಿತರ ಹಕ್ಕುಗಳಿಗಾಗಿ ಹೋರಾಡುವವರ ಜೊತೆ ವ್ಯವಹರಿಸುವಾಗ ಸಂಯಮ ಬೇಕಿಲ್ಲವೆ?

ಗಂಗಾವತಿಯಲ್ಲಿ ಮೂರು ಕವಿಗೋಷ್ಟಿಗಳು ನಡೆದವು. ಅದೊಂಥರಾ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ. ಅರ್ಜಿ ಹಾಕಿದವರಿಗೆಲ್ಲ ನೂರು ದಿನಗಳ ಕೆಲಸ ಕೊಡಲೇ ಬೇಕು ಎಂಬಂತೆ, ಇಲ್ಲಿಯೂ ಬೇಡಿಕೆ ಸಲ್ಲಿಸಿದವರಿಗೆಲ್ಲಾ ಕವಿತೆ ಓದುವ ಅವಕಾಶ. ಅಲ್ಲಿ ಅನೇಕರು ‘ಕನ್ನಡ ಮಾತೆಗೆ’ ಜೈಕಾರ ಹಾಕುವವರೇ. ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸ ಬೇಕಾದ ಪರಿಷತ್ತು ಇಂತಹ ತೀರಾ ಸಾಧಾರಣ ಕವಿತೆಗಳಿಗೆ ಮಣೆ ಹಾಕಿ ಅಭಿರುಚಿಯನ್ನೇ ಕೊಲ್ಲುತ್ತಿದೆ.

ನಮ್ಮ ಮಾಧ್ಯಮಗಳು ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಿಗೆ ಉತ್ತಮ ಪ್ರಚಾರ ಕೊಡುತ್ತವೆ. ಅಲ್ಲಿ ಕೇಳಿಬರುವ ಹೇಳಿಕೆಗಳಿಗೆ ಸುಖಾಸುಮ್ಮನೆ ಮನ್ನಣೆ ದೊರಕಿಬಿಡುತ್ತದೆ. ಆದರೆ ಆ ಸಾಧ್ಯತೆಯ ಲಾಭ ಪಡೆದುಕೊಂಡು ಮೌಢ್ಯದ ಗುಂಡಿಯಲ್ಲಿರುವ ಜನಸಾಮಾನ್ಯರನ್ನು ಮೇಲೆತ್ತುವ ಪ್ರಯತ್ನ ಮಾಡಿದ ಉದಾಹರಣೆಗಳು ಕಡಿಮೆ.

ಜಾತ್ಯತೀತ ನೆಲೆ:
ಸಮ್ಮೇಳವನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ರೂಪಿಸುವಲ್ಲಿ ಆಸಕ್ತಿಯನ್ನೇ ತೋರಿಸಿಲ್ಲ. ಇವತ್ತಿಗೂ ಸಮ್ಮೇಳನ ಅಧ್ಯಕ್ಷರನ್ನು ಆರತಿ ಎತ್ತಿ, ಹಣೆಗೆ ಕುಂಕುಮವಿಟ್ಟು ಸ್ವಾಗತಿಸುತ್ತಾರೆ. ‘ಪೂರ್ಣ ಕುಂಭ’ ಹೊತ್ತ ‘ಮುತ್ತೈದೆಯರು’ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅದಕ್ಕೂ ಮುನ್ನ ಅಡಿಗೆ ಕೋಣೆಯನ್ನು ಅಣಿಗೊಳಿಸಿದ ದಿನ ಸ್ಥಳೀಯ ಪುರೋಹಿತರು ಕಾಯಿ ಒಡೆದು, ಪೂಜೆ ಮಾಡಿ ಒಲೆ ಹೊತ್ತಿಸುತ್ತಾರೆ.

ಅಷ್ಟೇ ಅಲ್ಲ ಕನ್ನಡಾಂಬೆ, ಭುವನೇಶ್ವರಿ ಎಂಬ ಪರಿಕಲ್ಪನೆಯೇ ಜಾತ್ಯತೀತ ನಂಬಿಕೆಗಳಿಗೆ ವಿರುದ್ಧವಾಗಿವೆ. ಆ ನಂಬಿಕೆಗಳನ್ನು ಪ್ರತಿನಿಧಿಸುವ ಸಂಕೇತಗಳು ಸಮುದಾಯವನ್ನು ಒಗ್ಗೂಡಿಸುವುದರ ಬದಲಿಗೆ ವಿಭಜಿಸುವ ಉದ್ದೇಶವನ್ನೇ ಇಟ್ಟುಕೊಂಡಿವೆ. ಸಮಷ್ಟಿಯನ್ನು ಪ್ರತಿನಿಧಿಸುವ ಸಂಕೇತಗಳೊಂದಿಗೆ ಸಮ್ಮೇಳನವನ್ನು ಆಯೋಜಿಸುವ ತುರ್ತನ್ನು ಸಾಹಿತ್ಯ ಪರಿಷತ್ತು ಇದುವರೆಗೂ ಅರ್ಥಮಾಡಿಕೊಳ್ಳದಿರುವುದು, ಅಜ್ಞಾನವೋ, ಹೊಣೆಗೇಡಿತನವೋ.

ಬಿಜಾಪುರದಲ್ಲಿ ನಡೆಯಲಿರುವ 79 ನೇ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಅಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಲಿ, ಸಮ್ಮೇಳನ ಸ್ವರೂಪದಲ್ಲಿ ಒಂದಿಷ್ಟು ಸುಧಾರಣೆಗಳಾಗಲಿ.

(ಫೋಟೋ ಕೃಪೆ: ದಿ ಹಿಂದು)

ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ

ಬಿ.ಶ್ರೀಪಾದ ಭಟ್

ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ  20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ.

ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು:

1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು.

ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ  ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ?

ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು.

ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ  ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು.

ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ.

ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ.

ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು.

ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ  ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ.

ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು.

ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ  ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ  ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ  ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ.

ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ,  ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು,

ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ.

ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ  ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ.

ದೃಶ್ಯ 4 : ಇಷ್ಟೆಲ್ಲ  ಹತಾಶೆಯ, ಆತಂಕದ  ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು.

Three Gorges Dam

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ

ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ ಹರಿವಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದನೆ ನೆಪದಲ್ಲಿ ಈ ಕಂಪನಿಗಳು ಸರಕಾರಗಳನ್ನು ದಿಕ್ಕು ತಪ್ಪಿಸಿ ಸಾಲದ ಸುಳಿಗೆ ಸಿಲುಕಿಸಿ ಕಾಲು ಕೀಳುತ್ತಿವೆ. ಇದರ ಅಂತಿಮ ಪರಿಣಾಮ ಜೀವ ನದಿಗಳ ಮಾರಣ ಹೋಮ.

ಎಷ್ಟೋ ಬಾರಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿ ಸೋತ ರಾಷ್ಟ್ರಗಳ ಉದಾಹರಣೆ ಜಗತ್ತಿನ ಎಲ್ಲೆಡೆ ದೊರೆಯುತ್ತವೆ. ಇದಕ್ಕೆ ಚೀನಾ ರಾಷ್ಟ್ರದ ಯಾಂಗ್ಟೇಜ್ ನದಿಗೆ ಕಟ್ಟಿದ ತ್ರೀ ಗಾರ್ಜಸ್ಎಂಬ ಅಣೆಕಟ್ಟು ಸಾಕ್ಷಿಯಾಗಿದೆ. ಚೀನಾ ಸರಕಾರ ಮೊದಲು ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಿ ನಂತರ ಇಡೀ ಯೋಜನೆಯನ್ನು

Three Gorges Dam

Three Gorges Dam

ಜಲ ವಿದ್ಯುತ್‌ಗಾಗಿ ಬದಲಿಸಿತು. ಈ ಕಾರಣಕ್ಕಗಿಯೇ ವಿಶ್ವ ಬಾಂಕ್ ತನ್ನ ವರದಿಯಲ್ಲಿ ಆಯಾ ರಾಷ್ಟ್ರಗಳ ಅಥವಾ ಸರಕಾರಗಳ ಮನಸ್ಥಿತಿಗೆ ತಕ್ಕಂತೆ ಅಣೆಕಟ್ಟುಗಳು ಅಥವಾ ಜಲಾಶಗಳು ಬದಲಾಗುತ್ತಿವೆ ಎಂದು ತಿಳಿಸಿದೆ.

ವೆನಿಜುವೇಲ ಗುರಿ ಎಂಬ ನದಿಗೆ ಕಟ್ಟಲಾದ ಇಟ್ಯವು ಅಣೆಕಟ್ಟು, ಸೈಬೀರಿಯಾದ ಗ್ರಾಂಡ್ ಕೌಲಿ ಅಣೆಕಟ್ಟು ಇವುಗಳಲ್ಲಿ ಕ್ರಮವಾಗಿ 12.600 ಮತ್ತು 10.300 ಮೆಗಾವ್ಯಾಟ್ ವಿದ್ಯುತ್ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾವಿರಾರು ಕೋಟಿ ಡಾಲರ್ ಹಣ ವಿನಿಯೋಗವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಇದರಲ್ಲಿ ಲಾಭವಾದದ್ದು ಬಹು ರಾಷ್ಟ್ರೀಯ ಕಂಪನಿಗಳಿಗೆ ಮತ್ತು ವಿಶ್ವ ಬ್ಯಾಂಕಿಗೆ ಮಾತ್ರ.

20 ನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕವಾಗಿ ಶೇ.22 ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಇದರಲ್ಲಿ ಶೇ,18 ಏಷ್ಯಾ ಖಂಡದಲ್ಲಿ, ಶೆ.60 ರಷ್ಟು ಮಧ್ಯ ಅಮೇರಿಕಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಏಷ್ಯಾದ ನೇಪಾಳ, ಶ್ರೀಲಂಕಾ, ಸೇರಿದಂತೆ ಜಗತ್ತಿನ ಇತರೆಡೆಯ ನಾರ್ವೆ, ಅಲ್ಬೇನಿಯಾ, ಬ್ರೆಜಿಲ್, ಗ್ವಾಟೆಮಾಲ, ಘಾನ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.90 ರಷ್ಟು ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ.

1980ರ ದಶಕದಿಂದೀಚೆಗೆ ಜಾಗತಿಕವಾಗಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶಗಳಲ್ಲಿ ಬೇಡಿಕೆ ದ್ವಿಗುಣಗೊಂಡಿದೆ. ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಿರುವ ಕಾರಣಕ್ಕಾಗಿ ಅಮೆರಿಕಾ, ಕೆನಡಾ ರಾಷ್ಟ್ರಗಳು ಸಹ ಶೇ.70ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದಲೇ ಉತ್ಪಾದಿಸುತ್ತಿವೆ.

ನದಿಗಳಿಗೆ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಬಹುದೊಡ್ಡ ತೊಡಕೆಂದರೆ, ನದಿಯ ನೀರಿನ ಪ್ರಮಾಣ ಹಾಗೂ ವಿದ್ಯುತ್ ಬೇಡಿಕೆ ಕುರಿತಂತೆ ತಪ್ಪು ಅಂದಾಜು ವರದಿ ಸಿದ್ಧಗೊಳ್ಳುತ್ತಿದ್ದು, ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಯಾವ ಯಾವ ಋತುಮಾನಗಳಲ್ಲಿ ಎಷ್ಟು ಪ್ರಮಾಣದ ನೀರು ನದಿಗಳಲ್ಲಿ ಹರಿಯುತ್ತದೆ ಎಂಬ ನಿಖರ ಮಾಹಿತಿಯನ್ನು ಯಾವ ಅಣೆಕಟ್ಟು ತಜ್ಞರೂ ಸುಸಂಬದ್ಧವಾಗಿ ಬಳಸಿಕೊಂಡಿಲ್ಲ. ಜೊತೆಗೆ ವಿದ್ಯುತ್‌ನ ಬೇಡಿಕೆಯ ಪ್ರಮಾಣವೆಷ್ಟು ಎಂಬುದನ್ನು ಕೂಡ ಯಾವ ರಾಷ್ಟ್ರಗಳು, ಸರಕಾರಗಳೂ ನಿಖರವಾಗಿ ತಿಳಿದುಕೊಂಡಿಲ್ಲ.

ಇದಕ್ಕೆ ಉದಾಹರಣೆಯೆಂದರೆ ಅರ್ಜೆಂಟೈನಾ ಸರಕಾರದ ಸ್ಥಿತಿ. ತನ್ನ ದೇಶದ ವಿದ್ಯುತ್ ಬೇಡಿಕೆ ಮುಂದಿನ 7 ವರ್ಷಗಳ ನಂತರ ಶೇ.7 ರಿಂದ 8ರವರೆಗೆ ಇರುತ್ತದೆ ಎಂದು ಅಂದಾಜಿಸಿತ್ತು. 1994ರಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯಾಕ್ರಿಯೇಟಾ ಎಂಬ ಅಣೆಕಟ್ಟನ್ನು ನಿರ್ಮಿಸಿತು. ಇದಕ್ಕೆ ತಗುಲಿದ ವೆಚ್ಚ 11.5 ಶತಕೋಟಿ ಡಾಲರ್. ಅಣೆಕಟ್ಟು ನಿರ್ಮಾಣವಾದ ನಂತರ ಅಲ್ಲಿನ ವಿದ್ಯುತ್ ಬೇಡಿಕೆ ಶೇ. 2ರಷ್ಟು ಮಾತ್ರ.ಹೆಚ್ಚಾಗಿತ್ತು. ತಾನು ಸಾಲವಾಗಿ ಪಡೆದ ಹಣಕ್ಕೆ ನೀಡುತ್ತಿರುವ ಬಡ್ಡಿಯ ಪ್ರಮಾಣವನ್ನು ಲೆಕ್ಕ ಹಾಕಿದಾಗ, ವಿದ್ಯುತ್ ಉತ್ಪಾದನಾ ವೆಚ್ಚ ಶೇ. 30ರಷ್ಟು ದುಬಾರಿಯಾಯಿತು. ಇಂತಹದ್ದೇ ಸ್ಥಿತಿ ಜಗತ್ತಿನಾದ್ಯಂತ 12 ಅತಿ ದೊಡ್ಡ ಅಣೆಕಟ್ಟುಗಳೂ ಸೇರಿದಂತೆ 380 ಅಣೆಕಟ್ಟುಗಳದ್ದಾಗಿದೆ.

ಕೊಲಂಬಿಯಾ ರಾಷ್ಟ್ರ ಹಾಕಿಕೊಂಡ ಅನೇಕ ಜಲವಿದ್ಯುತ್ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ, ಆ ರಾಷ್ಟ್ರವನ್ನು ಆರ್ಥಿಕ ದುಸ್ಥಿತಿಗೆ ದೂಡಿವೆ. ಅಲ್ಲಿನ ಸರಕಾರದ ವಾರ್ಷಿಕ ಆಯ-ವ್ಯಯದಲ್ಲಿನ ಶೇ.60ರಷ್ಟು ಹಣ ಅಣೆಕಟ್ಟು ಯೋಜನೆಗಳಿಗಾಗಿ ತಂದ ಸಾಲದ ಮರು ಪಾವತಿ ಹಾಗೂ ಅದರ ಬಡ್ಡಿಗಾಗಿ ವಿನಿಯೋಗವಾಗುತ್ತಿದೆ.

ಮಧ್ಯ ಅಮೆರಿಕಾದ ಗ್ವಾಟೆಮಾಲದ ಚಿಕ್ಷೊಯ್ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗದೆ, ಯೋಜನೆ ವಿಪಲಗೊಂಡಿದ್ದರೆ, ಹಂಡೊರಾಸ್ ದೇಶದಲ್ಲಿ ಮಳೆಯೇ ಇಲ್ಲದೆ ನಿರಂತರ ಬರಗಾಲದಿಂದ ಎಲ್ಲಾ ನದಿಗಳು ಬತ್ತಿಹೋದ ಕಾರಣ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಈ ಕೆಳಗಿನ ರಾಷ್ಟ್ರಗಳ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಗಮನಿಸಿದರೆ, ಇವರು ಅಣೆಕಟ್ಟು ಅಥವಾ ಜಲಾಶಯಗಳ ಮೂಲಕ ಜೀವ ನದಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಮಾಡಿದ ಯೋಜನೆಗಳೆನೊ? ಎಂಬ ಸಂಶಯ ಮೂಡುತ್ತದೆ.

  1. 250 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೆಜಿಲ್ ನಲ್ಲಿ ನಿರ್ಮಾಣವಾದ ಬಲ್ಬಿನಾ ಅಣೆಕಟ್ಟು ಸ್ಥಾವರದಲ್ಲಿ ಉತ್ಪಾದನೆಯಾದ ಪ್ರಮಾಣ ಕೇವಲ ಶೇ.44 ರಷ್ಟು.
  2. 150 ಮೆಗಾವ್ಯಾಟ್ ಯೋಜನೆಯ ಪನಾಮದ ಬಯಾನೊ ಅಣೆಕಟ್ಟಿನಿಂದ ಉತ್ಪಾದನೆಯಾದ ವಿದ್ಯುತ್ ಶೇ.40 ರಷ್ಟು.
  3. ಥಾಯ್ಲೆಂಡಿನ ಬೂಮಿ ಬೊಲ್ ಅಣೆಕಟ್ಟಿನ ಮೂಲ ಉದ್ದೇಶ ಇದ್ದದ್ದು, 540 ಮೆಗಾವ್ಯಾಟ್, ಆದರೆ ಉತ್ಪಾದನೆಯಾದದ್ದು,150 ಮೆಗಾವ್ಯಾಟ್.
  4. ಭಾರತದ ಸರದಾರ್ ಸರೋವರದ ಅಣಕಟ್ಟಿನಲ್ಲಿ ಉದ್ದೇಶಿತ ಗುರಿ 1.450 ಮೆಗಾವ್ಯಾಟ್ ವಿದ್ಯುತ್, ಉತ್ಪಾದನೆಯಾದದ್ದು ಶೇ. 28 ರಷ್ಟು ಮಾತ್ರ.
  5. ಶ್ರೀಲಂಕಾದ ವಿಕ್ಟೋರಿಯಾ ಅಣೆಕಟ್ಟುವಿನಿಂದ 210 ಮೆಗಾವ್ಯಾಟ್ ವಿದ್ಯುತ್‌ಗಾಗಿ ಗುರಿ ಹೊಂದಲಾಗಿತ್ತು. ಅಲ್ಲಿ ಉತ್ಪಾದನೆಯಾದದ್ದು ಶೇ.32 ರಷ್ಟು ಮಾತ್ರ.

ಹೀಗೆ ಜಗತ್ತಿನಾದ್ಯಂತ ನೂರಾರು ಅಣೆಕಟ್ಟುಗಳ ಇತಿಹಾಸದ ಪಟ್ಟಿಯನ್ನು ಗಮನಿಸಿದರೆ, ಇವರುಗಳ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ.

ಜಲವಿದ್ಯುತ್ ಯೋಜನೆಗಾಗಿ ರೂಪಿಸಿದ ಅಣೆಕಟ್ಟುಗಳಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರಕ್ಕೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಪರಿಸರ ತಜ್ಙರು ಗುರುತಿಸಿದ್ದಾರೆ. ಈವರಗೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಘಟಕ, ಅನಿಲ ಆಧಾರಿತ ಘಟಕಗಳಿಂದ ಮಾತ್ರ ಪರಿಸರಕ್ಕೆ ಹಾನಿ ಎಂದು ನಂಬಲಾಗಿತ್ತು. ಈಗ ಜಲ ವಿದ್ಯುತ್ ಯೋಜನೆಯ ಜಲಾಶಗಳಿಂದಲೂ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ.

ಜಲವಿದ್ಯುತ್ ಯೋಜನೆಗಳು ಪರಿಸರ ರಕ್ಷಣೆಗೆ ಪೂರಕವಾಗಿದ್ದು ಇವುಗಳಿಗೆ ಕೈಗಾರಿಕಾ ರಾಷ್ಟಗಳು ಉದಾರವಾಗಿ  ನೆರವು ನೀಡಬೇಕೆಂದು ಅಂತರಾಷ್ಟೀಯ ದೊಡ್ಡ ಅಣೆಕಟ್ಟುಗಳ ಸಮಿತಿ ಆಗ್ರಹಿಸಿತ್ತು.

20 ಮತ್ತು 21 ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿವ ಅಪಾಯಕಾರಿ ಸ್ಥಿತಿಯೆಂದರೆ, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ. ಇದು ಮನು ಕುಲಕ್ಕೆ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ನೂತನವಾಗಿ ಅವಿಷ್ಕಾರಗೊಳ್ಳುವ ಯಾವುದೇ ತಂತ್ರಜ್ಙಾನವಿರಲಿ, ಅದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಎಲ್ಲರ ನಿಲುವಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಙಾನಗಳಿಂದ ಕೂಡಿದ ಜಲವಿದ್ಯುತ್ ಘಟಕದಿಂದ ಯಾವುದೇ ಹಾನಿಯಾಗದಿದ್ದರೂ, ಜಲಾಶಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶ, ಅಲ್ಲಿನ ಗಿಡ ಮರಗಳು, ಪ್ರಾಣಿಗಳು ಇವುಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲ ಮತ್ತು ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದನ್ನು ಪರಿಸರ ವಿಜ್ಷಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಬ್ರೆಜಿಲ್‌ನ ರಾಷ್ಟೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫಿಲಿಪ್ ಪೆರ್ನಸೈಡ್ ಎಂಬುವರು  ಆ ದೇಶದ ಎರಡು ಜಲಾಶಯಗಳಲ್ಲಿ ನಿರಂತರ ಇಪ್ಪತ್ತು ವರ್ಷ ಸಂಶೋಧನೆ ನಡೆಸಿ ವಿಷಯವನ್ನು ಧೃಡಪಡಿಸಿದ್ದಾರೆ.

ಜಲಾಶಯಗಳ ನೀರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಅನಿಲಗಳ ಪ್ರಮಾಣ ಪ್ರಾದೇಶಿಕ ಹಾಗೂ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದಿರುವ ಫಿಲಿಪ್, ಉಷ್ಣವಲಯದ ಆರಣ್ಯ ಪ್ರದೇಶದಲಿರುವ ಜಲಾಶಯಗಳು ಪರಿಸರಕ್ಕೆ ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಆಮ್ಲಜನಕ ಬಿಡುಗಡೆಗೊಂಡು ಮಿಥೇನ್ ಅನಿಲದಿಂದ ಉತ್ಪತ್ತಿಯಾಗವ ಕೊಳೆಯುವಿಕೆಯ ಬ್ಯಾಕ್ಟೀರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಆದರೆ, ಪ್ರವಾಹ ಸಂದರ್ಭದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದರಿಂದ, ಜೊತೆಗೆ ಹೂಳು, ಕಲ್ಮಶಗಳು ಶೇಖರವಾಗುವುದರಿಂದ ಈ ನಿಯಂತ್ರಣ ಏರು ಪೇರಾಗುತ್ತದೆ ಎಂದು ವಿಜ್ಙಾನಿಗಳು ವಿವರಿಸಿದ್ದಾರೆ

ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಹಸಿರು ಮನೆ ಅನಿಲಗಳೆಂದು ಕರೆಯುತ್ತಿರುವ ಇಂಗಾಲಾಮ್ಲ, ಮಿಥೇನ್, ಮತ್ತು ಕಾರ್ಬನ್ ಮೊನಾಕ್ಷೈಡ್ ಇವುಗಳ ಪರಿಣಮದ ಬಗ್ಗೆ ವಿಜ್ಙಾನಿಗಳಲ್ಲಿ ಗೊಂದಲವಿರುವುದು ನಿಜ. ಆದರೆ, ಪಿಲಿಪ್ ಪೆರ್ನಸೈಡ್ ಬ್ರೆಜಿಲ್ನ ಎರಡು ಅಣೆಕಟ್ಟುಗಳ ಅಧ್ಯಯನದಿಂದ, ಜಲಾಯಗಳು ಕಲ್ಲಿದ್ದಲು ವಿದ್ಯುತ್ ಘಟಕದ ಶೇ.50ರಷ್ಟು ಹಾಗೂ ಅನಿಲ ಆಧಾರಿತ ಘಟಕದ ಶೇ.26 ರಷ್ಡು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ನದಿಗೆ ಅಣೆಕಟ್ಟು ನಿರ್ಮಿಸುವ ಮುನ್ನ ಸ್ಥಳದ ಪರಿಶೀಲನೆ, ಅಣೆಕಟ್ಟಿನ ವಿನ್ಯಾಸ, ನದಿ ನೀರಿನ ಹರಿಯುವಿಕೆ ಪ್ರಮಾಣ, ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಭೂಮಿಯ ಲಕ್ಷಣ ಇವೆಲ್ಲವನ್ನು ಪರಿಗಣಿಸುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ಪ್ರವಾಹದ ಸಂದರ್ಭದಲ್ಲಿ ನದಿಯ ನೀರಿನ ಜೊತೆ ಜಲಾಶಯ ಸೇರುವ ಹೂಳಿನ ಪ್ರಮಾಣ ಮತ್ತು ಅದನ್ನು ತೂಬುಗಳ (ಗೇಟ್) ಮೂಲಕ ಹೊರ ಹಾಕುವ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು. ಇತ್ತೀಚಿಗಿನ ದಿನಗಳಲ್ಲಿ ಅಣೆಕಟ್ಟು ನಿರ್ಮಣವೇ ಒಂದು ಅಂತರಾಷ್ಟೀಯ ದಂಧೆಯಾಗಿರುವಾಗ ಯಾವ ಅಂಶಗಳನ್ನು ಗಮನಿಸುವ ತಾಳ್ಮೆ ಯಾರಿಗೂ ಇಲ್ಲ.

ಕಳೆದ ಎರಡು ದಶಕದಿಂದ ಜಗತ್ತಿನ ನದಿಗಳು, ಅಣೆಕಟ್ಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ವಿಜ್ಙಾನಿಗಳು ವಾತಾವರಣದಲ್ಲಾಗುವ ಸಣ್ಣ ಬದಲಾವಣೆಗಳು ಅನೇಕ ಅವಘಡಗಳಿಗೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ. ಆಲಾಶಯಗಳಲ್ಲಿ ಹೂಳಿನ ಪ್ರಮಾಣ ನಿರಿಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟಾಗಿದ್ದು ಈಗಾಗಲೇ ಅಂದಾಜಿಸಿದ್ದ ಜಲಾಶಯಗಳ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವುಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

(ಮುಂದುವರಿಯುವುದು)