Monthly Archives: December 2011

ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವವರಿಗೆ ಧನ್ಯವಾದಗಳು…

-ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

KGF ನ ಸಂತ್ರಸ್ತರಿಗಾಗಿ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿ ಈಗಾಗಲೆ ಐದಾರು ಜನ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ನಾವು ಮನವಿ ಪ್ರಕಟಿಸಿದ ಮೊದಲ ಎರಡು ದಿನ ಹಣಸಂದಾಯ ಮಾಡುವ ವಿಚಾರಕ್ಕೆ ಕೆಲವೊಂದು ಮಾಹಿತಿಗಳು ಅಪೂರ್ಣವಾಗಿದ್ದವು. ಈಗ ನೀವು ಯಾವುದೇ ರೀತಿ ಕಳುಹಿಸಬೇಕೆಂದರೂ (ಇಂಟರ್ನೆಟ್/ಎಟಿಎಮ್ ಟ್ರಾನ್ಸ್‌ಫರ್/ಚೆಕ್) ಸಂಪೂರ್ಣ ಮಾಹಿತಿ ಲಭ್ಯವಿದೆ.

ಇಲ್ಲಿಯವರೆಗೆ ಒಟ್ಟು ರೂ. 18,500 ಸಂಗ್ರಹವಾಗಿದೆ. ಇನ್ನೂ ಹಲವರು ಒಂದೆರಡು ದಿನದಲ್ಲಿಯೇ ಚೆಕ್ ಕಳುಹಿಸುವ, ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಆಶ್ವಾಸನೆ ಇತ್ತಿದ್ದಾರೆ. ಸಹಾಯ ಮಾಡಬೇಕೆಂದಿರುವವರು ಆದಷ್ಟು ಬೇಗ ಮಾಡಿ. ಡಿಸೆಂಬರ್ 15ಕ್ಕೆ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಪದಾರ್ಥರೂಪದಲ್ಲಿ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಆರಂಭಿಸಲು ಅನುಕೂಲವಾಗುತ್ತದೆ. ಸರಿಯಾದ ಅಥವ ಅತ್ಯಗತ್ಯವಾದ ಸಮಯದಲ್ಲಿ ಮಾಡುವ ಸಹಾಯವೇ ಅತ್ಯುತ್ತಮ ಸಹಾಯ. ಅದನ್ನು ಮತ್ತಷ್ಟು ನಿಧಾನಗೊಳಿಸುವುದು ಬೇಡ ಎನ್ನುವುದಷ್ಟೇ ನಮ್ಮ ಆಶಯ.

ಅಂದ ಹಾಗೆ, ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವವರ ಮತ್ತು ಚೆಕ್ ಕಳುಹಿಸಿರುವವರ ವಿವರ ಹೀಗಿದೆ:

ವರ್ತಮಾನ ಬಳಗ  – 5000
ರಾಮಕೃಷ್ಣ ಎಂ. – 10000
ಮಾನಸ ನಾಗರಾಜ್ – 500
ಅನಾಮಧೇಯ-1 – 1000
ಎಸ್.ವಿಜಯ, ಮೈಸೂರು – 1000
ಸ್ವರ್ಣಕುಮಾರ್ ಬಿ.ಎ. – 1000

ಒಟ್ಟು: 18,500

ಬದಲಾಗುತ್ತಿರುವ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ

 -ಶ್ರೀಮತಿ ದೇವಿ

“ಸಂಗೀತ ಎನ್ನುವುದು ಮನುಷ್ಯನ ಪ್ರಜ್ನೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಆ ಕಲಾಕಾರನ ಸೃಜನಶೀಲತೆಯ ಅಭಿವ್ಯಕ್ತಿಗಾಗಿ ಇರುವ ಮಾಧ್ಯಮವೂ ಆಗಿರುತ್ತದೆ. ಇದರಿಂದಾಗಿದೆಯೇ ಕಾಲ ಬದಲಾಗುತ್ತಾ ಮುಂದೆ ಸಾಗಿದಂತೆ, ಹೇಗೆ ಪರಿವರ್ತಿತವಾಗುವ ಸಮಾಜದೊಂದಿಗೆ ಬದುಕುತ್ತಿರುವ ವ್ಯಕ್ತಿಗಳ ಜೀವನವೂ, ಆಲೋಚನಾ ವಿಧಾನವೂ, ವ್ಯಕ್ತಿತ್ವವೂ, ಸಮಾಜದ ಬದಲಾವಣೆಗೆ ಸ್ಪಂದಿಸುವ ರೀತಿಯೂ ಬದಲಾಗುತ್ತದೋ ಹಾಗೆಯೇ ಅದರೊಂದಿಗೆ ಸಮಾನಾಂತರವಾಗಿ ಸಂಗೀತಾದಿ ಕಲೆಗಳು ಬದಲಾಗುತ್ತವೆ, ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ.” ಎಂಬ ಈ ಆಸಕ್ತಿದಾಯಕವಾದ ವಿಚಾರದೆಡೆಗೆ ಇತ್ತೀಚೆಗೆ ನನ್ನ ಗಮನವನ್ನು ಸೆಳೆದು ಆಲೋಚನೆಗೆ ಹಚ್ಚಿದವರು, ಬಹುದೊಡ್ಡ ಸಂಗೀತಗಾರರೂ ನನ್ನ ಗುರುಗಳೂ ಆದ ಪಂ. ನಾರಾಯಣ ಪಂಡಿತರು.

ಪಂಡಿತರು, ದ್ರುಪದ್ ಗಾಯನದ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದ ವರೆಗಿನ ಸಂಗೀತದ ಪ್ರವಾಸವನ್ನು ಸುಂದರವಾಗಿ “ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಪ್ರವಾಸ” ಎಂದು ಕರೆಯುತ್ತಾರೆ.

ದ್ರುಪದ್ ಎಂಬುದು ಇಂದಿನ ಖ್ಯಾಲ್ ಗಾಯನಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗಾಯನಪ್ರಕಾರ. ಬಹಳ ಧೀಮಂತವಾಗಿ, ಗಂಭೀರವಾಗಿ ಸಾಗುವ ಈ ಪಧ್ಧತಿಯಲ್ಲಿ ರಾಜ ಗಾಂಭೀರ್ಯವಿದೆ. ಹಾಗೆಯೇ ಇದು ಎಲ್ಲೂ ಗಮಕ್, ಖಟ್ಗಾ, ಮುರ್ಕಿಗಳು ಎಂಬಂತಹ ಉಪರಸ್ತೆಗಳ ಕಡೆ ತಿರುಗಿಯೂ ನೋಡದೇ ರಾಜಮಾರ್ಗದಲ್ಲಿ ಸಾಗುತ್ತದೆ.

ದೇವರ ವರ್ಣನೆ, ಆಶ್ರಯದಾತನಾದ ರಾಜನ ಹಿರಿಮೆಯನ್ನು ಹೊಗಳುವ ವಿಚಾರಗಳನ್ನುಳ್ಳ ದ್ರುಪದ್ ರಚನೆಯಲ್ಲಿ ಸಾಮಾನ್ಯ ಮಾನವನ ದೈನಂದಿನ ಜೀವನ, ತುಮುಲ, ಆತನ ಭಾವನೆಗಳು ಇವನ್ನೆಲ್ಲಾ ಕಾಣಲು ಸಾಧ್ಯವಿಲ್ಲ. ಇದಕ್ಕೆ ಸಾಥಿಗಾಗಿ ಬಳಸಲಾಗುತ್ತಿದ್ದ ಪಖವಾಜನ್ನು ಗಮನಿಸಿದಾಗಲು ಈ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಪಖವಾಜ್ ನೋಡಲು ಮೃದಂಗದಂತಹ ತಾಳವಾದ್ಯವಾಗಿದ್ದು, ಇದರಲ್ಲಿ ಖುಲ್ಲಾಬಾಜ್ ನ ಬೋಲ್ ಗಳನ್ನು ಬಾರಿಸಲಾಗುತ್ತದೆ. ’ಧಾ, ಧಿಂ, ತಿಟತಕ’ ಮೊದಲಾದ ಪದಗಳನ್ನು ದೊಡ್ಡ ಸ್ವರದೊಂದಿಗೆ ಗಂಭೀರವಾಗಿ ಬಾರಿಸಲಾಗುತ್ತದೆ.

ಕಾಲ ಸರಿದಂತೆ, ದ್ರುಪದ್ ಗಾಯನದಿಂದ ಖ್ಯಾಲ್ ಗಾಯನದೆಡೆಗೆ ಜನರ ಒಲವು ಬೆಳೆದಂತೆ ಸಂಗೀತದಲ್ಲಿ ಬದಲಾವಣೆಯ ಗಾಳಿ ಸಣ್ಣದಾಗಿ ಬೀಸಲು ಆರಂಭವಾಯಿತು. ಇದನ್ನು ಪಂಡಿತರು, “objectivity ಇಂದ subjectivity ಯ ಕಡೆಗೆ” ಎಂದು ಗುರುತಿಸುತ್ತಾರೆ. ಖ್ಯಾಲ್ ರಚನಾಕಾರನು ಇಲ್ಲಿ “ತನಗೇನು ಅನಿಸುತ್ತಿದೆ, ಹೇಗೆ ಕಾಣುತ್ತಿದೆ” ಎಂಬುದನ್ನು ಹೇಳಲೇಬೇಕಾದ ಒತ್ತಡವನ್ನು ಕಂಡುಕೊಂಡ. ಇದರಿಂದಾಗಿಯೇ ಸ್ವಲ್ಪಮಟ್ಟಿಗೆ ಜಾಸ್ತಿಯೇ ಎನ್ನಬಹುವಾದ ಶೃಂಗಾರ, ವಿರಹಮಯವಾದ ರಚನೆಗಳು ಬರಲು ಕಾರಣವಾಯಿತು. ಆದರೆ ಇವುಗಳೊಂದಿಗೆ ಗೆಳೆತನ, ಮಾತೃವಾತ್ಸಲ್ಯ, ಮಗುವಿನ ತುಂಟಾಟ, ಈ ಎಲ್ಲಾ ಭಾವನೆಗಳ ಅಭಿವ್ಯಕ್ತಿಗೂ ಆಸ್ಪದದೊರಕುವಂತಾಯಿತು.

ಖ್ಯಾಲ್ ಗಾಯನದಲ್ಲಿ, ದ್ರುಪದ್ ಗಾಯನದಲ್ಲಿ ಇರುವುದಕ್ಕಿಂತ ಹೆಚ್ಚು ಹಾಡುಗಾರನಿಗೆ ಸ್ವಾತಂತ್ರ್ಯವಿರುವುದರಿಂದ ಆತನೂ ಈ ರಚನೆ ” ನನ್ನ ಕಣ್ಣಿಗೆ ಹೇಗೆ ಕಾಣುತ್ತಿದೆ” ಎಂದು ತಿಳಿದು ಹಾಡಲು ಆರಂಭಿಸಿದ. ಪಂಡಿತರು ಹೇಳುವಂತೆ ಈ ರೀತಿಯಾಗಿ ಸಂಗೀತದಲ್ಲಿ “humanizing process” ಆರಂಭವಾಯಿತು. ಪಖವಾಜ್ ಗಿಂತ ಬೇರೆಯಾದ ತಬಲ ಸಾಥ್, ಸೂಕ್ಷ್ಮವಾದ ಬೋಲ್ ಗಳೊಂದಿಗೆ ಸಂಗೀತಕ್ಕೆ ಮತ್ತಷ್ಟು ತರಲತೆಯನ್ನು ನೀಡತೊಡಗಿತು. ಅಭಿವೃದ್ಧಿಯೆಡೆಗೆ ಧಾಪುಗಾಲು ಇಟ್ಟು ಸಾಗುತ್ತಿದ್ದ ಸಮಾಜದಲ್ಲಿ ಮೈಕ್ರೋಫೋನ್ ಇತ್ಯಾದಿಗಳ ಆವಿಷ್ಕಾರದಿಂದ, ಹಾಡಲು ಹಿಂದೆ ಬೇಕಾಗಿದ್ದ ಶಾರೀರಿಕ ಶ್ರಮ ಕಡಿಮೆಯಾಗಿ ಮನಸ್ಸಿನ ಪಿಸುಮಾತುಗಳನ್ನು ಹೇಳಲು ಸಾಧ್ಯವಾಯಿತು. ಇದನ್ನೇ ಪಂಡಿತರು “expressionism in music”ಎನ್ನುತ್ತಾರೆ.

ಗಾಯಕರ ಕೇಳುಗರ ಕಿವಿಗಳು ಸೂಕ್ಷ್ಮವಾಗುತ್ತಾ ಸಾಗಿದಂತೆ, ಒಂದುಕಾಲದಲ್ಲಿ “ಕೋಟೆ ಸಂಗೀತ” ಎಂದು ಮಡಿವಂತರಿಂದ ದೂರ ಇರಿಸಲ್ಪಟ್ಟಿದ್ದ ಠುಮ್ರಿ ಮೊದಲಾದ ಪ್ರಕಾರಗಳು ವೇದಿಕೆಯ ಮೇಲೆ ಸ್ಥಾನ ಪಡೆದುಕೊಳ್ಳತೊಡಗಿದವು. ರಚನೆಯ ಸಾಹಿತ್ಯಕ್ಕೂ ಗಮನ ನೀಡಲಾಯಿತು. ಹಲವು ರೀತಿಯ ಭಾವನೆಗಳಿಗೆ ಅಭಿವ್ಯಕ್ತಿ ನೀಡಲು ರಚನೆಯ ಶಬ್ದಗಳ ನೆರವು ಪಡೆಯಲಾಯಿತು. ಶಾಸ್ತ್ರೀಯ ಸಂಗೀತ ತಿಳಿಯದ ಸಾಮಾನ್ಯರ ಮನಸ್ಸನ್ನು ತಲುಪುವಂತಹ ಈ ರಚನೆಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಅಂತೆಯೇ, ಹಿಂದೊಮ್ಮೆ ದ್ರುಪದ್ ಪ್ರಭಾವದ ಖ್ಯಾಲ್ ಸಂಗೀತವನ್ನು ನೋಡಿದಂತೆ ಇಂದು ಠುಮ್ರಿ ಸಂಗೀತದ ಪ್ರಭಾವದಲ್ಲಿರುವ ಖ್ಯಾಲ್ ಗಾಯನವನ್ನು ನೋಡಬಹುದಾಗಿದೆ. ಠುಮ್ರಿಯಲ್ಲಿ ಹೇಳುವ ಭಾವನೆಗಳನ್ನೇ ಮತ್ತಷ್ಟು ಧ್ರುತ್ ಆಗಿ ಟಪ್ಪಾ ದಲ್ಲಿ ಹೇಳಲಾಗುತ್ತದೆ.

ಒಂದು ರಾಗದ ಚೌಕಟ್ಟಿನ ಒಳಗೇ, ಸ್ವರಗಳ ಚಲನೆ ಹಾಗೂ ಸ್ಪಂದನೆಗಳನ್ನು ನೋಡಬಹುದಾದ ಸೂಕ್ಷ್ಮತೆಯ ಎಡೆಗೆ ಇಂದು ನಾವು ಸಾಗುತ್ತಿದ್ದೇವೆ. ಶಾಸ್ತ್ರದ ಬಿಗಿ ಕಟ್ಟುಪಾಡು ಇಲ್ಲದೆ ಬಹಳ aggressive ಆಗಿ ಮನಸ್ಸಿನ ಭಾವನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊರಹಾಕಲು ಇಲ್ಲಿ ಸಾಧ್ಯವಿದೆ ಹಾಗೂ ಅದು ಕೇಳುಗರನ್ನೂ ತಟ್ಟುತ್ತದೆ ಎಂಬ ಕಾರಣವೂ ಇಂದು ಉಪಶಾಸ್ತ್ರೀಯ ಸಂಗೀತ, fusion ಇತ್ಯಾದಿಗಳ ಜನಪ್ರಿಯತೆಯ ಹಿಂದಿದೆ ಎಂದು ಅನಿಸುತ್ತದೆ.

ನಾರಾಯಣ ಪಂಡಿತರು ಪರಿಭಾವಿಸುವಂತೆ ಸಿನಿಮಾದ ಅಥವಾ ಯಾವುದೇ ಬಹುಜನಪ್ರಿಯವಾದ ಹಾಡಿನ ಧಾಟಿಯನ್ನು ಗಮನಿಸಿದಾಗ ಅದು ಹೆಚ್ಚಾಗಿ ನಮ್ಮ ಮಣ್ಣಿನ folk tune ಇಂದ ಬಂದಿರುತ್ತದೆ. ಶಾಸ್ತ್ರೀಯ ಸಂಗೀತಗಾರರು ತಮ್ಮ ಸಂಗೀತವನ್ನು ಬಹು ಶಿಷ್ಟವಾದದ್ದು ಎಂದು ಪರಿಗಣಿಸುವುದರಿಂದ ಇಂತಹ tune ಕಡೆಗೆ ನಿರ್ಲಕ್ಷ್ಯವನ್ನು ತಾಳಿರುತ್ತಾರೆ. ಈ ಅಂಶವನ್ನು ಗಮನಿಸಿದಾಗ ನಮಗೆ ಅನಾಯಾಸವಾಗಿ ನೆನೆಪಾಗುವುದು ಪಂ. ಕುಮಾರ ಗಂಧರ್ವರು ಮಾಡಿದ ಮಹತ್ಕಾರ್ಯ. ಅವರು ಮಧ್ಯಪ್ರದೇಶದ ಜನಪದ ಗೀತೆಗಳನ್ನು ಅಭ್ಯಸಿಸಿ, ಅವುಗಳಿಂದ ಸುಂದರವಾದ tune ಗಳನ್ನು ಎತ್ತಿಕೊಂಡು ಅವುಗಳನ್ನು ರಾಗಗಳನ್ನಾಗಿ ಮಾಡಿದರು. ಆಧುನಿಕ ಕಾಲದ ಸಂಗೀತದ ಹರಿಕಾರರಾದ ಕುಮಾರ್ ಜೀಯವರು ಸಂಗೀತದ ಸೂಕ್ಷ್ಮತೆಯೆಡೆಗಿನ ಪ್ರವಾಸದ ಬಹುದೊಡ್ಡ ನೇತಾರರು.

ರಾಗವೆಂದರೆ, ಕೆಲವು ನಿರ್ದಿಷ್ಟ ಸ್ವರಗಳನ್ನೊಳಗೊಂಡ ಆರೋಹ ಅವರೋಹದಿಂದ ಕೂಡಿದ ಅಸ್ಥಿಪಂಜರವಲ್ಲ; ಇದು ರಾಗದ ಚೌಕಟ್ಟಿನ ಒಳಗೆ ಇದ್ದುಕೊಂಡೇ, ಹಲವು ಮಧುರವಾದ ಸಂಚಾರಗಳಿಂದ ಆದ ಭಾವಭಿವ್ಯಕ್ತಿಗಾಗಿ ಇರುವ ಮಾಧ್ಯಮ. ಅಂತೆಯೇ ರಾಗದ ಗುರುತಿಸುವಿಕೆ, ಸ್ವರಗಳ ಆಧಾರದ ಮೇಲಲ್ಲ, ಭಾವದ ಆಧಾರದಲ್ಲಿ ಎಂಬುದು ಪಂಡಿತರ ನಿಲುವು.

ಹಾಗೆಯೇ ಇಂದು ಠುಮ್ರಿ, ಟಪ್ಪಾ, ದಾದ್ರಾ ಗಾಯನಗಳಲ್ಲಿ ರಾಗದ ಒಳಗಿನ ಸ್ವರಗಳ ವಿವಿಧ ರೀತಿಯ ಸಂಯೋಜನೆಯ ಜೊತೆಗೆ ಹಲವು ಅನ್ಯಸ್ವರಗಳ ಬಳಕೆಯೂ ಆಗುತ್ತದೆ. ಉದಾ., ಕಾಫಿ ರಾಗದಲ್ಲಿ ಕೋಮಲ ದೈವತ ಹಾಗೂ ಶುದ್ಧ ನಿಶಾದದ ಬಳಕೆ ಇತ್ಯಾದಿ.

ಪಂಡಿತರು ಗಮನಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಯಾವುದೇ ಒಂದು ರಾಗದಲ್ಲಿ ಬರುವ ರಚನೆ – ಅದರ ಸಾಹಿತ್ಯ – ತಾಳದ ರೂಪ ಬದಲಾದಂತೆ ಆ ರಾಗದ ರೂಪವೂ ಬದಲಾಗುತ್ತದೆ ಎನ್ನುವುದು. ಆ ನಿರ್ದಿಷ್ಟ ರಚನೆಗೆ ನ್ಯಾಯನೀಡಲು ಬೇಕಾದ ರೀತಿಯಲ್ಲಿ ರಾಗವು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ರಚನೆಯಲ್ಲಿ ಬರುವ ಸಾಹಿತ್ಯಕ್ಕೆ ನ್ಯಾಯ ನೀಡಲು ಬೇಕಾದ ರಸವನ್ನು ನೀಡಲು ರಾಗ ಸಮರ್ಥವಾಗುತ್ತದೆ. ಅಂತೆಯೇ ಯಾವ ರಾಗಗಳಿಗೂ ನಿರ್ದಿಷ್ಟ ರಸಗಳು ಎನ್ನುವುದು ಇಲ್ಲ. ಎಲ್ಲಾ ರಾಗಗಳ ಹಿಂದೆ ಸ್ಥಾಯೀ ಆಗಿರುವುದು ಒಂದೇ ರಸ, ಅದೆಂದರೆ ಶಾಂತ ರಸ. ಇದಕ್ಕೆ ಉದಾಹರಣೆಯಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಅತಿ ಗಂಭೀರರಾಗವೆಂದು ಪರಿಗಣಿತವಾದ ದರ್ಬಾರಿ ಕಾನಡದ ’ಅನೋಖಾ ಲಾಡಲಾ ಮಾಯಿ’ ಎಂಬ ಪಾರಂಪರಿಕ ರಚನೆಯನ್ನು ನೀಡುತ್ತಾರೆ. ಇದು ಸಣ್ಣ ಮಕ್ಕಳ ಆಟದ ವರ್ಣನೆ ಇರುವ ರಚನೆಯಾಗಿದೆ.

ಬಹಳ ಹಿಂದಿನ ಸಮಯದಿಂದ ಆರೋಪಿತವಾಗಿರುವ ಇಂತಹ ಕೆಲವು sterotype ವಿಚಾರಗಳನ್ನು ಇಟ್ಟುಕೊಳ್ಳದೆ, ಸಂಗೀತಕ್ಕೆ ಯಾವುದೇ ಚ್ಯುತಿಬಾರದಂತೆ ವಿಚಾರಗಳನ್ನು ಚಿಂತನೆಯ ಒರೆಗೆ ಹಚ್ಚಿ ’ಇದು ನನಗೆ ಹೇಗೆ ಕಾಣುತ್ತಿದೆ’ ಎಂಬುದಕ್ಕೆ ಗಮನಕೊಡುವುದು ಇಂದಿಗೆ ಅಗತ್ಯವಾಗಿದೆ.

ಇವತ್ತು ಹೊಸ ಹೊಸ ಆವಿಷ್ಕಾರಗಳ ಮೂಲಕ ತಂತ್ರಜ್ನಾನ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ಸೂಕ್ಷ್ಮತೆಯೆಡೆಗೆ ಸಾಗುತ್ತಿದ್ದೇವೆ. ನ್ಯಾನೊ ಟೆಕ್ನಾಲಜಿ, ಪಾಮ್ ಟಾಪ್, ಇತ್ಯಾದಿಗಳು ಇನ್ನೂ ಸೂಕ್ಷ್ಮತೆಯತ್ತ ಚಲಿಸುತ್ತಲೇ ಇವೆ. ಆದರೆ ಈ ಸೂಕ್ಷ್ಮತೆ ನಮ್ಮ ಪ್ರಜ್ಞೆಯ ಭಾಗವಾಗಿ ಆಗಬೇಕಾಗಿದೆ. ಕೇವಲ ಬೌದ್ಧಿಕ ಮಟ್ಟದಲ್ಲಿ ಎಲ್ಲವನ್ನು ಸೀಳಿ ಪರೀಕ್ಷಿಸಿ ಒಳಹೊಕ್ಕು ನೋಡಬೇಕು ಎಂಬ ಬರಿಯ ಅಹಂಕಾರದ ಬುಧ್ಧಿವಂತಿಕೆ ಬಿಟ್ಟು ಭಾವನಾತ್ಮಕವಾಗಿ ಅಧ್ಯಾತ್ಮಿಕವಾಗಿ ಸೂಕ್ಷ್ಮತೆಯೆಡೆಗೆ ಸಾಗಿದಾಗ ಮಾತ್ರ ಈ ಬೆಳವಣಿಗೆಗೆ ನಿಜವಾದ ಅರ್ಥ ಬಂದೀತು.

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಕಥನಕ್ಕೊಂದು ಮುನ್ನುಡಿ

-ಡಾ. ಜಗದೀಶ್ ಕೊಪ್ಪ

ಕಳೆದ ಒಂದು ವರ್ಷದಿಂದ ನನ್ನನ್ನು ಕಾಡುತ್ತಾ ಬರೆಯದೆ ಉಳಿದಿದ್ದ ಜಗತ್ ಪ್ರಸಿದ್ಧ ಬೇಟೆಗಾರ ಜಿಮ್ ಕಾರ್ಬೆಟ್‌ನ ಕಥನಕ್ಕೆ ಈಗ ಕಾಲ ಕೂಡಿ ಬಂದಿದು ಈಗ ಕೈ ಹಾಕಿದ್ದೇನೆ. ಕನ್ನಡಕ್ಕೆ ಜಿಮ್ ಕಾರ್ಬೆಟ್ ಹೊಸಬನೇನಲ್ಲ. “ರುದ್ರ ಪ್ರಯಾಗದ ನರಭಕ್ಷಕ” ಎಂಬ ರೋಮಾಂಚನ ಕಥನದ ಮೂಲಕ ತೇಜಸ್ವಿ ಕನ್ನಡಿಗರಿಗೆ ಪರಿಚಯಿಸಿದ್ದಾರೆ.

ನಾನಿಲ್ಲಿ ಬರೆಯುತ್ತಿರುವುದು ಆತನ ಶಿಖಾರಿ ಕಥೆಗಳನ್ನಲ್ಲ. ಕಾರ್ಬೆಟ್‌ನ ಬದುಕು, ಬಾಲ್ಯ, ಭಾರತ ಹಾಗೂ ಇಲ್ಲಿನ ಜನರ ಬಗ್ಗೆ ಆತನಿಗೆ ಇದ್ದ ಅನನ್ಯ ಪ್ರೀತಿ, ನಿಸರ್ಗ ಕುರಿತಾದ ಅವನ ಅಸಾಮಾನ್ಯ ಜ್ಙಾನ, ಇವುಗಳ ಕುರಿತಾಗಿ.ಮಾತ್ರ. ಭಾರತದಲ್ಲೇ ಹುಟ್ಟಿ, ಬೆಳೆದರೂ ಕೂಡ, ಭಾರತಕ್ಕೆ ಸ್ವಾತಂತ್ರ್ಯ ಹತ್ತಿರವಾಗುತಿದ್ದಂತೆ ಬ್ರಿಟೀಷರ ಬಗ್ಗೆ ಇಲ್ಲಿನ ಜನರಿಗೆ ಇದ್ದ ದ್ವೇಷಕ್ಕೆ ಹೆದರಿ ತಾನು ಬದುಕಿ ಬಾಳಿದ ನೈನಿತಾಲ್ ಗಿರಿಧಾಮದ ಸಮೀಪದ ಕಲದೊಂಗಿ ಮನೆಯನ್ನು ಹಳ್ಳಿಯವರ ವಶಕ್ಕೆ ಒಪ್ಪಿಸಿ ತಲ್ಲಣ ಮತ್ತು ತಳಮಳಗಳೊಂದಿಗೆ ತನ್ನ ಅವಿವಾಹಿತ ಸಹೋದರಿಯೊಂದಿಗೆ ದೇಶ ತೊರೆದ ದುರ್ದೈವಿ. ಇವತ್ತಿಗೂ ಆ ಹಳ್ಳಿಯ ಜನ ಕಾರ್ಪೆಟ್ ಸಾಹೇಬ ( ಸ್ಥಳೀಯರು ಆತನನ್ನು ಕರೆಯುತಿದ್ದುದು ಹಾಗೆ) ಬರುತ್ತಾನೆಂದು ಆತನ ಐದು ಎಕರೆ ವಿಸ್ತೀರ್ಣದ ಮನೆಯನ್ನ ಜತನದಿಂದ ಕಾಯುತಿದ್ದಾರೆ. ( ಪಕ್ಕದ ಚಿತ್ರದಲ್ಲಿರುವ ಮನೆ)

ಉತ್ತರಾಂಚಲದಲ್ಲಿ ವಿಶೇಷವಾಗಿ ನೈನಿತಾಲ್, ಅಲ್ಮೋರ, ರಾಮ್‌ನಗರ್, ಕಥಮ್‌ಗೊಡ, ರುದ್ರಪ್ರಯಾಗ, ಹೃಷಿಕೇಶ, ಚೋಟಹಲ್ದಾನಿ, ಕಲದೊಂಗಿ ಮುಂತಾದ ಪ್ರದೇಶಗಳಲ್ಲಿ ಇವತ್ತಿಗೂ ದಂತಕಥೆಯಾಗಿರುವ ಕಾರ್ಬೆಟ್‌ನ ಕಥನಕ್ಕಾಗಿ ಕಳೆದ ವರ್ಷ 16 ದಿನಗಳಲ್ಲಿ 28 ಸಾವಿರ ಚದುರ ಕಿಲೋಮೀಟರ್ ಹುಚ್ಚನಂತೆ ಅಲೆದು ಸಂಗ್ರಹಿಸಿದ ಮಾಹಿತಿ ಹಾಗೂ ಆತನೇ ಬರೆದ ಬಾಲ್ಯ ಮತ್ತು ಭಾರತದ ಅನುಭವಗಳನ್ನ ಇದೀಗ ಸರಣಿ ಲೇಖನಗಳ ಮುಖಾಂತರ ನಿಮ್ಮ ಮುಂದೆ ಇಡುತಿದ್ದೇನೆ. ( ಜನವರಿ ಮೊದಲ ವಾರದಿಂದ “ವರ್ತಮಾನ.ಕಾಮ್” ಅಂತರ್ಜಾಲತಾಣದಲ್ಲಿ ಪ್ರಕಟವಾಗಲಿದೆ.)

ನನಗೆ ಕಾರ್ಬೆಟ್ ಕುರಿತು ಗುಂಗು ಹಿಡಿಸಿದವರು, ನನ್ನ ಪ್ರೀತೀಯ ಮೇಷ್ಟರಾದ ಪಿ.ಲಂಕೇಶ್. ಅವು 1993ರ ಮಳೆಗಾಲದ ನಂತರದ ದಿನಗಳು. ಆವಾಗ ಪ್ರತಿ ಬುಧವಾರ ಲಂಕೇಶ್ ಪತ್ರಿಕೆ ಮುದ್ರಣವಾಗಿ ಗುರುವಾರ ನಾಡಿನೆಲ್ಲೆಡೆ ದೊರೆಯುತಿತ್ತು. ಬುಧವಾರ ಬೆಳಿಗ್ಗೆ 11 ಘಂಟೆಗೆ ಸರಿಯಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಸಂಜೆವಾಣಿ ಪತ್ರಿಕೆಯ ಕಛೇರಿಗೆ ಶಿಷ್ಯ ಬಸವರಾಜು ಜೊತೆ ಬರುತಿದ್ದ ಮೇಷ್ಟ್ರು ಮಾಲಿಕ ಮಣಿ ಮತ್ತು ಅವರ ಮಗ ಅಮುದಮ್  ಜೊತೆ ಮಾತನಾಡಿ ಚಹಾ ಕುಡಿದು ಪತ್ರಿಕೆಯನ್ನ ಮುದ್ರಣಕ್ಕೆ ಕಳಿಸಿ ನಂತರ ಮಧ್ಯಾಹ್ನ 2 ಗಂಟೆವರೆಗೆ ಪ್ರೆಸ್‌ಕ್ಲಬ್ ನಲ್ಲಿ ಬಿಯರ್ ಕುಡಿಯುತ್ತಾ ಕುಳಿತು ಕೊಳ್ಳುವುದು ವಾಡಿಕೆಯಾಗಿತ್ತು. ಆ ದಿನಗಳಲ್ಲಿ ತೇಜಸ್ವಿಯವರ ರುದ್ರಪ್ರಯಾಗದ ನರಭಕ್ಷಕ ಲೇಖನ ಮಾಲೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಒಮ್ಮೆ ಅನಿರಿಕ್ಷಿತವಾಗಿ ಕ್ಲಬ್‌ನಲ್ಲಿ ಸಿಕ್ಕ ಲಂಕೇಶರ ಜೊತೆ ಕಾರ್ಬೆಟ್‌ನ ಸಾಹಸ ಕುರಿತು ಪ್ರಸ್ತಾಪಿಸಿದೆ. ಆ ದಿನ ತುಂಬಾ ಒಳ್ಳೆಯ ಮೂಡ್‌ನಲ್ಲಿ ಇದ್ದ ಅವರು ನನಗೆ ಅರ್ಧ ಘಂಟೆ ಕಾರ್ಬೆಟ್ ಕುರಿತು ಉಪದೇಶ ಮಾಡಿದರು. ಅವರ ಮಾತಿನ ದಾಟಿ ಹೀಗಿತ್ತು:

“ಇಲ್ಲ ಕಣೊ ಇಡೀ ಜಗತ್ತು ಅವನನ್ನ ಅದ್ಭುತ ಶಿಖಾರಿಕಾರ ಎಂದು ತಿಳಿದುಕೊಂಡಿದೆ. ಆದರೆ ನಿಜಕ್ಕೂ ಕಾರ್ಬೆಟ್ ಅದನ್ನೂ ಮೀರಿದ ನಿಸರ್ಗಪ್ರೇಮಿ. ಜೀವ ಜಾಲಗಳ ನೈಜ ಚಟುವಟಿಕೆಗಳ ಬಗ್ಗೆ ಅವನಿಗೆ ಇದ್ದ ಅರಿವು ಜಗತ್ತಿನಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಹಾಗೂ ಪಕ್ಷಿಗಳ ಚಲನ ವಲನ ಅವುಗಳ ಅಭಿವ್ಯಕ್ತಿಯ ಬಾಷೆ ಇವುಗಳನ್ನ ಆತ ಅರಿತಿದ್ದ. ಕಾಡಿನಲ್ಲಿ ದಿಕ್ಕು ತಪ್ಪಿ ಹೋದರೆ ಅರಳಿ ನಿಂತಿರುವ ಹೂಗಳು ಯಾವ ದಿಕ್ಕಿಗೆ ಮುಖ ಮಾಡಿ ನಿಂತಿವೆ ಎಂಬುದರ ಮೇಲೆ ದಿಕ್ಕುಗಳನ್ನು ಗುರುತಿಸುವ ಶಕ್ತಿ ಅವನಲ್ಲಿತ್ತು. ಸೊಳ್ಳೆ ಅಥವಾ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಸೊಪ್ಪಿನ ರಸವನ್ನು ಮೈಗೆ ಲೇಪಿಸಿಕೊಳ್ಳಬೇಕು, ದೀರ್ಘಾವಧಿ ಕಾಲ ಕಾಡಿನಲ್ಲಿರುವ ಸಂದರ್ಭದಲ್ಲಿ ಹಸಿವು, ನೀರಡಿಕೆ ಹೋಗಲಾಡಿಸಲು ಯಾವ ಹಣ್ಣು, ಯಾವ ಬೇರು ತಿನ್ನಬೇಕು ಇವಗಳ ಬಗ್ಗೆ ಕಾರ್ಬೆಟ್‌ಗೆ ಅಪಾರ ಜ್ಞಾನವಿತ್ತು. ಈ ಕಾರಣಕ್ಕಾಗಿ ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಜಪಾನ್ ವಿರುದ್ಧ ಹೊರಾಡುವ ಸಂದರ್ಭದಲ್ಲಿ, ಬ್ರಿಟೀಷ ನೇತೃತ್ವದ ಭಾರತೀಯ ಸೇನೆ ಬರ್ಮಾ ದೇಶದ ಕಾಡಿನಲ್ಲಿ ಹೋರಾಟ ನಡೆಸುತಿದ್ದಾಗ ಸೈನಿಕರಿಗೆ ಕಾರ್ಬೆಟ್ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ.” ಹೀಗೆ ಕಾರ್ಬೆಟ್ ಕುರಿತಂತೆ ರೊಮಾಂಚಕಾರಿ ಕಥೆಯ ಮಹಾಪೂರವನ್ನೇ ಹರಿಸಿದ ಲಂಕೇಶರು ಆತನ ಕೃತಿಗಳ ಕುರಿತಂತೆ ಮಾಹಿತಿಯನ್ನ ನನಗೆ ಒದಗಿಸಿದರು. ಮುಂದಿನ ವಾರ ಅಚ್ಚರಿ ಎಂಬಂತೆ ಈ ಬಗ್ಗೆ ಪತ್ರಿಕೆಯಲ್ಲಿ ಮರೆಯುವ ಮುನ್ನ ಎಂಬ ಕಾಲಂ ನಲ್ಲಿ ಬರೆದರು.

ಈ ಘಟನೆ ಮತ್ತೆ ನನಗೆ ನೆನಪಾದ್ದು 2009 ಅಕ್ಟೋಬರ್‌ನಲ್ಲಿ. ಆ ಅಕ್ಟೋಬರ್ 5 ನೇ ತಾರೀಖು ಮಂಡ್ಯದಲ್ಲಿ ನನ್ನ ಅತ್ತಿಗೆ ಅನಿರೀಕ್ಷಿತವಾಗಿ ತೀರಿಹೋದರು. 6 ರಂದು ಅವರ ಅಂತ್ಯಕ್ರಿಯೆ ಮುಗಿಸಿ ನಾನು, ನನ್ನ ಮಕ್ಕಳು ಧಾರವಾಡಕ್ಕೆ ವಾಪಾಸಾಗುತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಓದಲು ಇರಲಿ ಎಂಬ ಉದ್ದೇಶದಿಂದ ಸ್ಟೇಶನ್ ನಲ್ಲಿ ಮಯೂರ, ಸುಧಾ, ಲಂಕೇಶ್ ಪತ್ರಿಕೆಯನ್ನು ತೆಗೆದುಕೊಂಡೆ. ಅವರಿಬ್ಬರಿಗೂ ಸುಧಾ, ಮಯೂರ ಕೊಟ್ಟು ನಾನು ಲಂಕೇಶ್ ಪತ್ರಿಕೆಯ ಪುಟ ತೆರದಾಗ ಆ ವಾರದ ಸಂಚಿಕೆಯಲ್ಲಿ ಮೇಷ್ಟ್ರು ಕಾರ್ಬೆಟ್ ಕುರಿತು ಬರೆದಿದ್ದ ಅಂಕಣ ಮತ್ತೆ ಪ್ರಕಟವಾಗಿತ್ತು.  ಬದುಕಿನ ಜಂಜಾಟದಲ್ಲಿ ಜಿಮ್ ಕಾರ್ಬೆಟ್‌ನನ್ನು ನಾನು ಮರೆತಿದ್ದರ ಬಗೆ ಆ ಕ್ಷಣದಲ್ಲಿ ಬೇಸರ ಮೂಡಿತು. ಬೆಳಿಗ್ಗೆ 6 ಘಂಟಗೆ ಮನೆಗೆ ಬಂದವನೇ  ಮಾಡಿದ ಮೊದಲ ಕೆಲಸವೆಂದರೆ, ಅಂತರ್ಜಾಲದ ಮೂಲಕ ಅವನ ಎಲ್ಲಾ ಕೃತಿಗಳ ವಿವರ ತೆಗೆದು ಆ ಕ್ಷಣವೇ ಪೆಂಗ್ವಿನ್ ಪ್ರಕಾಶನ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ಗೆ ಆರ್ಡರ್ ಮಾಡಿದೆ. ಒಂದು ವಾರದಲ್ಲಿ ಕಾರ್ಬೆಟ್ ಬರೆದ “ಮೈ ಇಂಡಿಯಾ”, “ಜಂಗಲ್ ಲೋರ್”, “ಮ್ಯಾನ್ ಈಟರ್ಸ್ ಆಫ್ ಕುಮಾವನ್”, “ದ ಮ್ಯಾನ್ ಈಟಿಂಗ್ ಲೆಪಾರ್ಡ್ ಆಪ್ ರುದ್ರಪ್ರಯಾಗ್”, “ದ ಟೆಂಪಲ್ ಟೈಗರ್ ಅಂಡ್ ಮೋರ್ ಮ್ಯಾನ್ ಈಟರ್ಸ್ ಆಪ್ ಕುಮಾವನ್”, “ಟ್ರೀ ಟಾಪ್” ಮತ್ತು ಕಾರ್ಬೆಟ್ ಬಗ್ಗೆ ಬ್ರಿಟೀಷ್ ಲೇಖಕ ಮತ್ತು ಪತ್ರಕರ್ತ ಮಾರ್ಟಿನ್ ಬೂತ್ ಬರೆದ “ಕಾರ್ಪೆಟ್ ಸಾಹೇಬ್” ಕೃತಿಗಳು ನನ್ನ ಕೈ ಸೇರಿದವು.

ಒಂದು ತಿಂಗಳ ಕಾಲ ರಾತ್ರಿ ವೇಳೆ ಅವುಗಳನ್ನ ಓದಿ ಮುಗಿಸಿದ ತಕ್ಷಣ ನಾನೊಂದು ನಿರ್ಧಾರಕ್ಕೆ ಬಂದೆ. ಆಪ್ತವಾಗಿ ಕಾರ್ಬೆಟ್‌ನ ವ್ಯಕ್ತಿ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಡಬೇಕು ಎಂದು. ಕೇವಲ ಪುಸ್ತಕ ಓದಿ ಆತನ ಬಗ್ಗೆ ಬರೆಯುವ ಬದಲು ಆತ ನಡೆದಾಡಿದ ನೆಲ, ಒಡನಾಡಿದ ಜನರನ್ನ ಕಂಡು ಬಂದು ಬರೆದರೆ ಉತ್ತಮ ಎಂದು ಅನಿಸಿದಕೂಡಲೆ, ಕಳೆದ ವರ್ಷ ಪೆಬ್ರವರಿ ತಿಂಗಳಿನಲ್ಲಿ ನಾನು ಅವನ ನೆಲದಲ್ಲಿದ್ದೆ. ಅಲ್ಲಿ ನಾನು ಅನುಭವಿಸಿದ ಸಂತಸ, ನೋವು, ಎಲ್ಲವನ್ನು ಕೃತಿಯಲ್ಲಿ ದಾಖಲಿಸಿದ್ದೇನೆ. ಮೊದಲ ಏಳು ಅಥವಾ ಎಂಟು ಅಧ್ಯಾಯಗಳಲ್ಲಿ ಅವನ ಬದಕಿನ ಚಿತ್ರಣ, ತಲ್ಲಣಗಳಿದ್ದರೆ, ಮುಂದಿನ ಅಧ್ಯಾಯಗಳಲ್ಲಿ ಅವನು ಕಂಡ ಭಾರತ ಮತ್ತು ಇಲ್ಲಿನ ಜನರ ಬಗ್ಗೆ ಪ್ರೀತಿಯನ್ನ ಅವನ ಮಾತುಗಳಲ್ಲೇ ದಾಖಲಿಸಿದ್ದೇನೆ. ಅವನ ಹೃದಯವಂತಿಕೆಗೆ ಅವನ ಈ ಮಾತು ಸಾಕ್ಷಿಯಾಗಿದೆ: “ಭಾರತದ ಜನರಲ್ಲಿ ಬಡತನವಿದೆ, ಅಜ್ಞಾನವಿದೆ, ನಿಜ. ಆದರೆ ಅವರಷ್ಟು ಪ್ರ್ರಾಮಾಣಿಕರು, ನಂಬಿದವರನ್ನು ಕೈಬಿಡದ ಹೃದಯವಂತರು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.” ಇದು ಸುಮಾರು 75 ವರ್ಷಗಳ ಹಿಂದೆ ಆತ ಆಡಿದ ಮಾತು. ಅವನ ನಂಬಿಕೆಯನ್ನ ನಿಜವಾಗಿಸುವಂತೆ ಅವನು ಬದುಕಿದ್ದ ಕಲದೊಂಗಿಯ ಹಳ್ಳಿಯ ಜನ ಬಂಗಲೆಯನ್ನು, ಅವನು ಬಳಸುತಿದ್ದ ಕುರ್ಚಿ, ಮೇಜು, ಸಮವಸ್ತ್ರ ಹಾಗೂ ಲಾಟೀನು ಇನ್ನಿತರೆ ವಸ್ತುಗಳನ್ನ ಜೋಪಾನದಿಂದ ಕಾಪಾಡಿದ್ದಾರೆ. ಐದು ಎಕರೆ ವಿಸ್ತೀರ್ಣದ ಅವನ ಬಂಗಲೆ, ಅಲ್ಲಿನ ಗಿಡ ಮರ, ಹಸಿರು, ಪಕ್ಷಿಗಳ ಕಲರವ ಎಲ್ಲವೂ ನಮ್ಮನ್ನು ಅವನ ಪ್ರಕೃತಿಯ ಲೋಕಕ್ಕೆ ಕರೆದೊಯ್ಯುತ್ತವೆ.

ನೈನಿತಾಲ್ ಗಿರಿಧಾಮಕ್ಕೆ ಹೋಗುವ ರಸ್ತೆಯಲ್ಲಿ ಈ ಹಳ್ಳಿ ಇರುವುದರಿಂದ  ಕಾರ್ಬೆಟ್ ಬಗ್ಗೆ ತಿಳಿದ ಪ್ರವಾಸಿಗರು ಇಲ್ಲಿ ಬೇಟಿ ನೀಡುತ್ತಾರೆ.  ಪ್ರತಿ ಪ್ರವಾಸಿಗನಿಗೂ ಸಿಹಿ ಮೊಸರು (ಲಸ್ಸಿ) ನೀಡಿ ಸ್ವಾಗತಿಸುವ ಆ ಹಳ್ಳಿಯ ಹೆಣ್ಣು ಮಕ್ಕಳ ಪ್ರೀತಿ ತಾಯಿತನದಿಂದ ಕೂಡಿರುವುದು ವಿಶೇಷ.

ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

-ಪರುಶುರಾಮ ಕಲಾಲ್

ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ.

ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು.

ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು.

ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು.

ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು.

ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು.

ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು.

ನಾಲ್ಕನೆಯದು, ಜೆಡಿಎಸ್.

ಜೆಡಿಎಸ್ ಜಾತ್ಯಾತೀತತೆ:
ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು.  “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು

ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ.

ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ.

ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ.

ಮನವಿಗೆ ಸ್ಪಂದನೆ ಆರಂಭವಾಗಿದೆ

ನಮ್ಮ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ಕೆಲ ಉತ್ಸಾಹಿ ಬ್ಲಾಗ್ ಗಳು, ವೆಬ್ ಸೈಟ್ ಗಳು, ಫೇಸ್ ಬುಕ್ ಸ್ನೇಹಿತರು ನಮ್ಮ ಮನವಿಯನ್ನು ಮತ್ತಷ್ಟು ಜನರಿಗೆ ಮುಟ್ಟಿಸುವಲ್ಲಿ ತಮ್ಮ ಸಹಕಾರ ನೀಡಿದ್ದಾರೆ. ಅವರಿಗೆಲ್ಲಾ ನಮ್ಮ ಧನ್ಯವಾದಗಳು. ಅವರ ಸಹಕಾರ ಹೀಗೇ ಇರಲಿ ಎಂದು ಬಯಸುತ್ತೇವೆ.  ಈ ಮಧ್ಯೆ ಕೆಲವರು ಹಣ ಕಳುಹಿಸುವುದರ ಬಗ್ಗೆ ಕೆಲವು ಮಾಹಿತಿ ಬಯಸಿದ್ದಾರೆ.

ಇಂಟರ್ ನೆಟ್ ಮೂಲಕ ಹಣ ವರ್ಗಾವಣೆ ಮಾಡ ಬಯಸುವವರಿಗೆ ಅನುಕೂಲವಾಗಬಹುದಾದ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆ ಸಂಖ್ಯೆ: 64046096974
ಖಾತೆ: ಉಳಿತಾಯ ಖಾತೆ
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು.
ಐಎಫ್ ಎಸ್ ಸಿ ಕೋಡ್ (IFSC code): SBMY0040376
ಬ್ರಾಂಚ್ ಕೋಡ್ : 040376

(ಇಂಟರ್ ನೆಟ್ ಮೂಲಕ ಹಣ ವರ್ಗಾಯಿಸುವವರು, ಹಣ ಕಳುಹಿಸಿದ ನಂತರ ವರ್ತಮಾನ ಕ್ಕೆ ಇಮೇಲ್ ಮೂಲಕ ತಮ್ಮ ಹೆಸರು, ವಿಳಾಸ ಹಾಗೂ ಕಳುಹಿಸಿದ ಮೊತ್ತ ವನ್ನು ತಿಳಿಸಿದರೆ ತಮ್ಮ ಹೆಸರನ್ನು ಪ್ರಕಟಿಸಲು ಸಹಾಯವಾಗುತ್ತದೆ).

ಚೆಕ್ ಅಥವಾ ಡಿಡಿ ಕಳುಹಿಸುವವರು:

“T.K. Dayanand / ಟಿ.ಕೆ. ದಯಾನಂದ”

ಹೆಸರಿಗೆ ಚೆಕ್ ಬರೆದು
ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ನಂ. 400, 23ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು – 560076

ದೂ: 080-26783329

ನಮಸ್ಕಾರ,
ವರ್ತಮಾನ ಬಳಗ.