Monthly Archives: January 2012

ಬೇಜವಾಬ್ದಾರಿ ಟಿವಿ ನಿರೂಪಕರು…


– ರವಿ ಕೃಷ್ಣಾರೆಡ್ಡಿ  


ನೆನ್ನೆ ರಾತ್ರಿ (30/1/12) ಸುವರ್ಣ ನ್ಯೂಸ್ 24×7 ನಲ್ಲಿ ನಿರೂಪಕ ರಂಗನಾಥ್ ಭಾರದ್ವಾಜ್ ಪಕ್ಷೇತರ ಶಾಸಕ ನರೇಂದ್ರಸ್ವಾಮಿಯವರನ್ನು ಸಂದರ್ಶಿಸುತ್ತಿದ್ದರು. ವಿಷಯ, ನೆನ್ನೆ ಸದನದಲ್ಲಿ ನಾಲ್ವರು ಪಕ್ಷೇತರ ಶಾಸಕರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದ್ದು.

ನಾನು ಆಗ ತಾನೆ ಟಿವಿ ಹಾಕಿದ್ದೆ. ಹಾಗಾಗಿ ಆ ಸುದ್ದಿ ನೋಡಿದ್ದೆ ಎರಡು ನಿಮಿಷ. ಆ ಎರಡು ನಿಮಿಷದಲ್ಲಿ ರಂಗನಾಥ್ ಭರದ್ವಾಜ್ ನರೇಂದ್ರಸ್ವಾಮಿಯರ ಹಿತಚಿಂತಕ, ಪೀಡಕ, ಮತ್ತು ಜನರಂಜಕ, ಕಮೀಡಿಯನ್, ಎಲ್ಲವೂ ಆಗಿಹೋದರು.

ಒಂದು ಪ್ರಶ್ನೆ, “ಇವತ್ತು ನೀವು ಮಾಡಿದ ಪ್ರತಿಭಟನೆ ಯಾರನ್ನು ಮೆಚ್ಚಿಸಲು?” ಎಂದಾಗಿತ್ತು.

ಸರಿಯಾದ ಪ್ರಶ್ನೆಯೇ. ಕರ್ನಾಟಕದ ಈ ಬಾರಿಯ ಪಕ್ಷೇತರ ಶಾಸಕರು ನಡೆದುಕೊಂಡಿರುವುದೇ ಹಾಗೆ. ಅಧಿಕಾರದ ಹಿಂದೆ ಬಿದ್ದು ಸದನದಲ್ಲಿ ಸ್ವತಂತ್ರ ಧ್ವನಿಗಳೇ ಇಲ್ಲದಂತೆ ನಡೆದುಕೊಂಡರು. ಹಾಗಾಗಿ ನೆನ್ನೆಯ ಪ್ರತಿಭಟನೆಯೂ ಯಾವುದೋ ಲಾಭಕ್ಕಾಗಿ ಅಥವ ಮುಂದಿನ ದಿನಗಳ ಅನುಕೂಲಕ್ಕಾಗಿ ಎಂದು ಭಾವಿಸಬಹುದು.

ಆದರೆ, ಒಬ್ಬ ಟಿವಿ ನಿರೂಪಕನಾಗಿ ವಿಷಯದ ಹಿನ್ನೆಲೆ ಮತ್ತು ಗಾಂಭೀರ್ಯ ಅರಿಯದೆ ಕೇಳಬಹುದಾದ ಪ್ರಶ್ನೆಯೇ ಅದು? ಸ್ಪೀಕರ್‌ಗೆ ಸುಪ್ರೀಮ್‌ಕೋರ್ಟ್ ಹಾಕಿರುವ ಛೀಮಾರಿಗೆ ಈ ಶಾಸಕರು ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಸ್ವಾರ್ಥಿಗಳೇ ಇರಬಹುದು. ಜನಪ್ರತಿನಿಧಿಗಳಾಗಲು ವೋಟು ಗಳಿಸುವ ದೃಷ್ಟಿ ಹೊರತುಪಡಿಸಿ ಅಯೋಗ್ಯರೇ ಇರಬಹುದು. ಆದರೆ ನೆನ್ನೆಯದು ಬಹಳ ಗಂಭೀರ ವಿಷಯ. ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಂಬಂಧಿಸಿದ್ದು. ಹಾಗಾಗಿ ಶಾಸಕರ ಆ ಪ್ರತಿಕ್ರಿಯೆಯನ್ನು ಈ ರೀತಿ ಅವಹೇಳನೆ ಅಥವ ನಗೆಪಾಟಲು ಮಾಡುವ ಮೂಲಕ ಸ್ಪೀಕರ್‌ರ ದೋಷ ಮತ್ತು ಅನ್ಯಾಯವನ್ನು ತೆಳು ಮಾಡಿ ಜನರ ಮುಂದೆ ಇಡುತ್ತಿದ್ದೇನೆ ಎನ್ನುವ ಪ್ರಜ್ಞೆ ಈ ನಿರೂಪಕರಿಗೆ ಬೇಡವೆ? ನಗುಮುಖದಿಂದ ಕೂಡಿದ್ದ ಆ ಪ್ರಶ್ನೆ ಕುಚೇಷ್ಟೆಯಿಂದ ಕೂಡಿದ್ದಷ್ಟೇ ಅಲ್ಲ, ಬೇಜವಾಬ್ದಾರಿಯದ್ದೂ ಸಹ.

ಇಷ್ಟಕ್ಕೂ ಇವರು ಸುದ್ದಿಮಾಧ್ಯಮದಲ್ಲಿ ಇದ್ದಾರೊ, ಅಥವ Late Night ಮನರಂಜನೆಯ ಉದ್ಯಮದಲ್ಲಿ ಇದ್ದಾರೊ?

ಇದಕ್ಕಿಂತ ಕೆಟ್ಟ ಪ್ರಶ್ನೆ, “ಈ ಪ್ರತಿಭಟನೆ ಮಾಡದೇ ಇದ್ದಿದ್ದರೆ ನಿಮಗೆ ಮುಂದಕ್ಕೆ ಏನಾದರೂ ಲಾಭ ಆಗುತ್ತಿತ್ತೊ ಏನೊ. ಅದೇನೋ ಹೇಳುತ್ತಾರಲ್ಲ, ಸುಮ್ಮನೆ ಇರಲಾರದೆ ಚಡ್ಡಿಯಲ್ಲಿ.. ಅದೇನೊ ಇರುವೆ ಬಿಟ್ಟುಕೊಂಡರಂತೆ, ಹಾಗೆ. ಯಾಕೆ ಮಾಡೋದಿಕ್ಕೆ ಹೋದ್ರಿ?”

ಇದು ಎಂತಹ ಅಪ್ರಬುದ್ಧ ಭಾಷೆ ನೋಡಿ. ಈ ನರೆಂದ್ರಸ್ವಾಮಿ ರಂಗನಾಥ್‌ಗೆ ಯಾವ ರೀತಿಯ ಸ್ನೇಹಿತ? ಹೀಗೆಲ್ಲ ಜನಪ್ರತಿನಿಧಿಗಳನ್ನು ಕೇವಲವಾಗಿ ಮಾತನಾಡಿಸಿದರೆ ನಮ್ಮ ಶಾಸಕಾಂಗದ ಗೌರವ ಏನು ಉಳಿಯಿತು? ನಮ್ಮ ಶಾಸಕರು ಇವತ್ತು ಇಂತಹುದನ್ನೆಲ್ಲ ಕೇಳಿಸಿಕೊಳ್ಳುವುದಕ್ಕೆ ಯೋಗ್ಯರೇ ಇರಬಹುದು. ಆದರೆ, ಒಬ್ಬ ಜವಾಬ್ದಾರಿಯುತ ಪತ್ರಕರ್ತ, ನಿರೂಪಕ, ಆಡುವ ಮಾತೇ ಇದು? ಬೀದಿಯಲ್ಲಿ ಮಾತನಾಡುವ ಸಲಿಗೆಯ ಕುಚೇಷ್ಟೆಯ ಭಾಷೆ.

ಇಬ್ಬರಿಗೂ ನಾಚಿಕೆಯಾಗಬೇಕು.

ಇಂತಹ ನಡವಳಿಕೆ ರಂಗನಾಥ್ ಭಾರದ್ವಾಜ್ ಒಬ್ಬರಿಗೇ ಸೀಮಿತವಾಗಿಲ್ಲ. ನಮ್ಮ ಅನೇಕ ಟಿವಿ ನಿರೂಪಕರು ರಾಜಕಾರಣಿಗಳ ಜೊತೆ ಅತಿಸಲಿಗೆ ಬೆಳೆಸಿಕೊಂಡು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನೇ ಕುಗ್ಗಿಸುತ್ತಿದ್ದಾರೆ. ಎಷ್ಟೋ ಸಲ ನಮ್ಮ ಪತ್ರಕರ್ತರು ರಾಜಕಾರಾಣಿಗಳಿಗಿಂತ ಹೆಚ್ಚಿಗೆ ಓದಿಕೊಂಡಿರುತ್ತಾರೆ. ಸಿದ್ಧಾಂತ, ಸಭ್ಯನಡವಳಿಕೆ, ಭಾಷಾಪ್ರಯೋಗದ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅದ್ಯಾವುದೂ ಅವರ ನಡವಳಿಕೆ ಮತ್ತು ಭಾಷೆಯಲ್ಲಿ ಕಾಣಿಸುತ್ತಿಲ್ಲ.

ರಾಜಕಾರಣಿಗಳ ಜೊತೆ ಅತಿಸಲಿಗೆಯಿಂದ ಮತ್ತು ಅತಿ ಬೇಜವಾಬ್ದಾರಿಯಿಂದ ವರ್ತಿಸುವ ಕನ್ನಡದ ಟಿವಿ ನಿರೂಪಕರು ವಿನೋದ್ ಮೆಹ್ತಾರ ಈ ಮಾತುಗಳನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯ ಕೆಲವು ಪ್ರಾಥಮಿಕ ಪಾಠಗಳನ್ನಾದರೂ ಕಲಿಯಬೇಕು.

ಟಿವಿ ನಿರೂಪಕರು ಇನ್ನೊಬ್ಬರ ಘನತೆಯನ್ನು ಹೆಚ್ಚು ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ತಮ್ಮ ವೃತ್ತಿಘನತೆಯನ್ನಾದರೂ ಉಳಿಸಿಕೊಳ್ಳಲಿ.

ಈಗಾಗಲೆ ಅವರ ಘನತೆ ರಾಜಕಾರಣಿಗಳ ತರಹವೇ ಭ್ರಷ್ಟಾಚಾರದ ವರದಿಗಳಲ್ಲಿ, ಮಾಧ್ಯಮ ಕುರಿತಾದ ಸೆಮಿನಾರ್‌ಗಳಲ್ಲಿ. ಟ್ಯಾಬ್ಲಾಯ್ಡುಗಳಲ್ಲಿ,  ಹಾದಿಬೀದಿಯಲ್ಲಿ, ಹರಾಜಾಗುತ್ತಿದೆ.

ಶಿಕ್ಷಣ ಕ್ಷೇತ್ರದ ಸಮಸ್ಯೆ ಮತ್ತು ಸವಾಲುಗಳು


-ಬಿ. ಶ್ರೀಪಾದ್ ಭಟ್


“ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿರುವ ಸುಧಾರಣೆಯೆಂದರೆ ಮುಂದಿನ ಬದುಕಿಗೆ ವ್ಯಕ್ತಿಯನ್ನು ಸಿದ್ಧಪಡಿಸುವುದಷ್ಟೇ ಶಿಕ್ಷಣ ಎನ್ನುವ ಸಂಕುಚಿತ ಭಾವನೆಯನ್ನು ತೊಡೆದು ಹಾಕುವುದು, ಬದಲಿಗೆ ಶಿಕ್ಷಣವನ್ನು ಪರಿಪೂರ್ಣ ಬದುಕಿನ ಒಂದು ಭಾಗ ಎನ್ನುವ ಭಾವನೆಯನ್ನು ಬೆಳೆಸುವುದು.” -ಜಾನ್ ಡ್ಯೂಯಿ (ಖ್ಯಾತ ಶಿಕ್ಷಣ ತಜ್ಞ)

“1833 ರಲ್ಲಿ ಹುಟ್ಟಿದ ಡೆಪ್ಯುಟಿ ಚೆನ್ನಬಸಪ್ಪನವರು ವಿದ್ಯಾಧಿಕಾರಿಗಳಾಗಿದ್ದರು. ಈ ನಾಡಿನ ಕೊಳಕು ನೀಚತನ ಅರಿತಿದ್ದಂತಹ ವ್ಯಕ್ತಿ. ಇಲ್ಲಿ ವೈಚಾರಿಕತೆಯ ಅಗತ್ಯವನ್ನು ಅರಿತಿದ್ದ ವ್ಯಕ್ತಿ. ದೇವರನ್ನು ನಂಬಲು ನಿರಾಕರಿಸುತ್ತಿದ್ದ ಚೆನ್ನಬಸಪ್ಪ ಜಗದ್ಗುರುಗಳಿಗೆ ಸಿಂಹಸ್ವಪ್ನವಾಗಿದ್ದರು. ಮನುಷ್ಯನ ಮೂಲಭೂತ ಕೆಟ್ಟತನವನ್ನು ಅರಿತಿದ್ದ ಚೆನ್ನಬಸಪ್ಪ ಆಡಳಿತ ನಿರ್ವಹಣೆಯಲ್ಲಿನ ಎಲ್ಲ ವಿವರ, ಸೂಕ್ಮಗಳನ್ನು ತಿಳಿದು ವರ್ತಿಸುತ್ತಿದ್ದರು. 1850, 1860 ರ ದಶಕಗಳಲ್ಲಿ ಚೆನ್ನಬಸಪ್ಪ ಹಾಗೂ ರಸಲ್ ವಿದ್ಯಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದ 25 ವರ್ಷಗಳಲ್ಲಿ ಧಾರವಾಡದಲ್ಲಿದ್ದ 12 ಶಾಲೆಗಳು 341 ಆದವು. 1341 ಇದ್ದ ವಿದ್ಯಾರ್ಥಿಗಳು 27711 ಆದರು. ಬೆಳಗಾವಿಯ 1498 ವಿದ್ಯಾರ್ಥಿಗಳು 15819 ಆದರು. ಕನ್ನಡ ಪಠ್ಯ ಪುಸ್ತಕಗಳ ರಚನೆ, ಶಿಕ್ಷಕರ ತರಬೇತಿ, ನಿಘಂಟುಗಳ ರಚನೆ, ಭಾಷಾಂತರ ಮಾಡಿದ್ದು, ಜ್ಞಾನದ ಪುಸ್ತಕಗಳ ಪ್ರಕಟಣೆ ಇವೆಲ್ಲಕ್ಕೆ ಚೆನ್ನಬಸಪ್ಪನವರ ವ್ಯವಹಾರ ಜ್ಞಾನ, ಸ್ಪೂರ್ತಿ, ನಿಷ್ಟುರತೆ, ಮಾನವೀಯ ಧೋರಣೆ ಕೂಡ ಕಾರಣವಾಗಿದ್ದವು.” -ಪಿ.ಲಂಕೇಶ್ ( ಟೀಕೆ ಟಿಪ್ಪಣಿ ಸಂಪುಟ 1)

“ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಇಂಡಿಯಾದಲ್ಲಿ ವರ್ಷಕ್ಕೆ ಅಂದಾಜು 60,000 ಕೋಟಿ ರೂಪಾಯಿಗಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರದವತಿಯಿಂದ ಖರ್ಚು ಮಾಡಲಾಗುತ್ತದೆ.”  -ಕೇಂದ್ರ ಸರ್ಕಾರ

1968 ರಲ್ಲಿ ಬಂದ ಕೊಠಾರಿ ಆಯೋಗದಿಂದ ಹಿಡಿದು 2005ರಲ್ಲಿ ಬಂದ ಜ್ಞಾನ ಆಯೋಗದ ವರೆಗೂ ಅನೇಕ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಅಯೋಗಗಳು ರಚಿತಗೊಂಡಿವೆ. ನಮ್ಮ ರಾಜ್ಯದಲ್ಲಿ 50ರ ದಶಕದಲ್ಲಿ 22000 ಪ್ರಾಥಮಿಕ ಶಾಲೆಗಳು, 60ರ ದಶಕದಲ್ಲಿ 27000 ಪ್ರಾಥಮಿಕ ಶಾಲೆಗಳು, 70ರ ದಶಕದಲ್ಲಿ 32000 ಪ್ರಾಥಮಿಕ ಶಾಲೆಗಳು, 80ರ ದಶಕದಲ್ಲಿ 37000 ಪ್ರಾಥಮಿಕ ಶಾಲೆಗಳು, 2006ರ ವೇಳೆಗೆ 54000ಕ್ಕೆ  ಏರಿದೆ. ಶಿಕ್ಷಕರ ಸಂಖ್ಯೆ 2.5 ಲಕ್ಷದಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 8.5 ಮಿಲಿಯನ್ ಆಗಿದೆ. ಹೈಸ್ಕೂಲ್ ಸಂಖ್ಯೆ 9500 ರಷ್ಟಾಗಿದ್ದರೆ ಶಿಕ್ಷಕರ ಸಂಖ್ಯೆ 92000 ರಷ್ಟಿದ್ದರೆ ವಿದ್ಯಾರ್ಥಿಗಳ ಸಂಖ್ಯೆ 1.3 ಮಿಲಿಯನ್ ರಷ್ಟಿದೆ. 80 ದಶಕದಲ್ಲಿ ಪಾಸಾಗುವವರ ಪ್ರಮಾಣ ಶೇಕಡ 30 ರಷ್ಟಿದ್ದರೆ 2010 ರ ವೇಳೆಗೆ ಶೇಕಡ 75ಕ್ಕೆ ಏರಿದೆ. ಸಾಕ್ಷರತೆ  ಪ್ರಮಾಣ ಶೇಕಡ 67ಕ್ಕೆ ತಲುಪಿದೆ. ನಿರಂತರ ಅಭಿವೃದ್ಧಿಗಾಗಿ ಇರುವ ಕೆಲವು ಕಾರ್ಯಕ್ರಮಗಳು ಚಿಣ್ಣರ ಅಂಗಳ, ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ, ಬೇಡಿಯಿಂದ ಶಾಲೆಗೆ, ಮಧ್ಯಾಹ್ನದ ಬಿಸಿಯೂಟ, ಕಲಿ ನಲಿ ಇತ್ಯಾದಿ ಇತ್ಯಾದಿ. ಇವೆಲ್ಲ ಅಲ್ಲದೆ 2010 ರಲ್ಲಿ ಅತ್ಯಂತ ಘನವಾದ ಯೋಜನೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ಶಿಕ್ಷಣದ ಹಕ್ಕು” ಕಾಯ್ದೆ. ಸರ್ವರಿಗೂ ಶಿಕ್ಷಣ ಕಾಯ್ದೆ.

ಇವಿಷ್ಟೂ ಸರ್ಕಾರಗಳು ತಾವು ಶಿಕ್ಷಣ ಖಾತೆಯನ್ನು ಹಾಳುಗೆಡುವಿಲ್ಲ ಬದಲಿಗೆ ನೋಡಿ ಇಲ್ಲಿದೆ ಏರಿಕೆಯ ಪ್ರಮಾಣ ಎಂದು ಸೋಗಲಾಡಿತನದಿಂದ, ಆತ್ಮವಂಚನೆಯಿಂದ ಕೊಚ್ಚಿಕೊಳ್ಳಲು ಮೇಲಿನ ಕೆಲವು ಸ್ಯಾಂಪಲ್ ಅಂಕಿಸಂಖ್ಯೆಗಳ ಗೊಂಡಾರಣ್ಯವನ್ನು ತೋರಿಸುತ್ತಾರೆ. ಪ್ರಜ್ಞಾವಂತರು, “ಅಲ್ಲ ಮಾರಾಯ್ರೆ, ನಾವು ಮಾತನಾಡುತ್ತಿರುವುದು ಸರ್ವರಿಗೂ ಸಮಾನ ಶಿಕ್ಷಣ, ಅಂದರೆ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಅದಕ್ಕೆ ಸಾಕ್ಷಿಪ್ರಮಾಣವನ್ನು ಕೇಳುತ್ತಿದ್ದೇವೆ.” ಎಂದಾಗ ಈ ಮತಿಹೀನ ಸರ್ಕಾರಗಳಿಗೆ ತಲೆಬುಡ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ನಾಗರಿಕತೆಯ ಮೂಲಭೂತ ಹಕ್ಕಾದ ಸಾರ್ವಜನಿಕ ಶಿಕ್ಷಣ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿಯ ಇದುವರೆಗಿನ ಕೆಲವು ಅಘಾತಕಾರಿ ಅಂಕಿಅಂಶಗಳು  ಹಾಗೂ ಅದು ಕೆಳಗಿನಂತಿರುವುದರ ಬಗೆಗೆ ಸರ್ಕಾರಗಳಿಗೆ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ. ಆದರೆ ಏನೇ ಕೇಳಿದರೆ ಅವು ಹೇಳುವುದು ಅರ್ಥಾತ್ ಗಿಣಿಪಾಠ ಒಪ್ಪಿಸುವುದು ಮತ್ತೆ ಮತ್ತೆ ಮೇಲಿನ  ಅಂಕೆ ಸಂಖ್ಯೆಗಳನ್ನೇ. ಆದರೆ ಅತ್ಯಂತ ಚರ್ವಿತ ಚರ್ವಣವಾದ ಕೆಲವು ನೈಜ ಅಘಾತಕಾರಿ ಅಂಕಿಅಂಶಗಳು ಮಾತ್ರ ಈ ರಾಜ್ಯದ ಪ್ರಾಥಮಿಕ ಶಿಕ್ಷಣದ  ಕರಾಳ ಮಗ್ಗುಲನ್ನು ನಮ್ಮ ಮುಂದೆ ಬಿಚ್ಚಿಡುತ್ತವೆ.

90ರ ದಶಕದಲ್ಲಿ ಅರ್ಧದಲ್ಲೇ  ಶಿಕ್ಷಣವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡ 37 ರಷ್ಟಿದ್ದರೆ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡಾ 47ರಷ್ಟು, ಹೈಸ್ಕೂಲಿನಲ್ಲಿ ಶೇಕಡ 59 ರಷ್ಟಿತ್ತು. ಇದರ ಪ್ರಮಾಣ ಹದಿನೈದು ವರ್ಷಗಳ ನಂತರ 2005ರ ವೇಳೆಗೆ ಅನುಕ್ರಮವಾಗಿ ಶೇಕಡ 11, ಶೇಕಡ 29 ಹಾಗೂ ಶೇಕಡ 45. ಅಂದರೆ ಸ್ವಾತಂತ್ರ ಬಂದು 64 ವರ್ಷಗಳ ನಂತರವೂ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ತಮ್ಮನ್ನು ತಾವೇ ಮಧ್ಯದಲ್ಲಿ ಮೊಟಕುಗೊಳಿಸುವ ಪ್ರಕ್ರಿಯೆ ಇನ್ನೂ ಅಬಾಧಿತವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಾರಣಗಳು ನೂರಾರು ಪುಟಗಳಿಷ್ಟಿವೆ. ಎಲ್ಲವೂ ಈ ಪ್ರಭುತ್ವದ ಹೊಣಗೇಡಿತನದಿಂದಾಗಿಯೇ.

ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು ಅರ್ಥಾತ್ ಚಕ್ಕರ್ ಹಾಕುವುದರ ಪ್ರಮಾಣ ಶೇಕಡಾ 30. ಭೋದನೇತರ ಚಟುವಟಿಕೆಗಳ ಶೇಕಡಾವಾರು ಪ್ರಮಾಣ ಶೇಕಡ 47. ಪ್ರತಿ 30 ವಿದ್ಯಾರ್ಥಿಗೆ ಒಬ್ಬ ಶಿಕ್ಷಕ/ಶಿಕ್ಷಕಿಯರಿದ್ದಾರೆ. ಆದರೆ ಏಕೋಪಾಧ್ಯಾಯ ಶಾಲೆಗಳು ಶೇಕಡಾ 30 ರಷ್ಟಿವೆ. ಮೂಲಭೂತ ಸೌಲಭ್ಯಗಳನ್ನು ಪಟ್ಟಿಮಾಡಿದಾಗ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ ಶಾಲೆಗಳು ಶೇಕಡ 70 ರಷ್ಟಿದ್ದರೆ ಶೌಚಾಲಯಗಳನ್ನು ಹೊಂದಿದ ಶಾಲೆಗಳು ಶೇಕಡಾ 47 ರಷ್ಟಿವೆ ಹಾಗೂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದ ಶಾಲೆಗಳ ಪ್ರಮಾಣ ಕೇವಲ ಶೇಕಡ 23. ಇನ್ನು ತರಗತಿಗಳ ಕೊರತೆಯ ಪ್ರಮಾಣ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಒಂದೇ ಕೋಣೆಯನ್ನುಳ್ಳ ಶಾಲೆಗಳ ಪ್ರಮಾಣ ಶೇಕಡಾ 20. ಪ್ರತಿ ಪ್ರಾಥಮಿಕ ಶಾಲೆಯ ಸರಾಸರಿ ಶಿಕ್ಷಕರ ಸಂಖ್ಯೆ 3 ಮಾತ್ರ. ಈ ಎಲ್ಲಾ ಸೌಲಭ್ಯಗಳು ಕನಿಷ್ಟ ಶೇಕಡಾ 100ರ ಪ್ರಮಾಣದಲ್ಲಿರಬೇಕು. ಯಾವುದೇ ಸಂದರ್ಭದಲ್ಲೂ. ಅದರೆ ಇಲ್ಲಿನ ಮಾಹಿತಿಯ ಪ್ರಕಾರ ನಮ್ಮ ರಾಜ್ಯದ ಶೋಚನೀಯ ಸ್ಥಿತಿ ಇದಕ್ಕಿಂತಲೂ ಬೇರೇನೂ ಇರಲಿಕ್ಕಿಲ್ಲ.

7 ರಿಂದ 10 ವಯಸ್ಸಿನ  ಶೇಕಡ 50 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 1 ಮಟ್ಟದ ವಾಕ್ಯಗಳನ್ನೂ ಓದಲು ಬರುವುದಿಲ್ಲ, ಹಾಗೂ ಶೇಕಡಾ 72 ರಷ್ಟು ಶಾಲಾ ಮಕ್ಕಳಿಗೆ ಲೆವೆಲ್ 2 ಮಟ್ಟದ ಪದ್ಯಗಳನ್ನು ಓದಲು ಬರುವುದಿಲ್ಲ. ಇದೇ ವಯೋಮಿತಿಯೊಳಗಿನ ಶೇಕಡ 60 ರಷ್ಟು ಶಾಲಾ ಮಕ್ಕಳಿಗೆ ಕೂಡುವ ಹಾಗೂ ಕಳೆಯುವ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ, ಶೇಕಡಾ 90  ರಷ್ಟು ಶಾಲಾ ಮಕ್ಕಳಿಗೆ ಗುಣಿಸುವ ಹಾಗೂ ಭಾಗಾಕಾರದ ಲೆವೆಲ್ 1 ಮಟ್ಟದ ಗಣಿತ ಬರುವುದಿಲ್ಲ. ಇದೇ ವಯೋಮಾನದ ವಿದ್ಯಾರ್ಥಿಗಳ ಮೂಲಭೂತ ಇಂಗ್ಲೀಷ್ ಜ್ಞಾನದ ಮಟ್ಟ ಕೇವಲ 16 ಪರ್ಸೆಂಟ್. ಯಾಕೆ ಇಂತಹ ಘನಘೋರ ಯಡವಟ್ಟಾಯ್ತು?. ಇಲ್ಲಿ ನಾವು ಕೇವಲ ಮುಗ್ಗರಿಸಲಿಲ್ಲ ಪದೇ ಪದೇ ಮುಗ್ಗರಿಸಿದ್ದೇವೆ. ಉತ್ತಮ ಸರ್ಕಾರವೆನ್ನುವುದು ಒಂದು ಲೊಳಲೊಟ್ಟೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ

ಮೊದಲನೆಯದಾಗಿ ಸ್ವಾತಂತ್ರ ಬಂದ ನಂತರ ನೆಹರೂ ಕನಸಿದ್ದು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರದ ಜೊತೆಜೊತೆಗೇ ಶೈಕ್ಷಣಿಕ, ಕೈಗಾರಿಕೆಯ ಅಭಿವೃದ್ಧಿ ಹಾಗೂ ಇದರ ನಾಗಲೋಟ. ಉತ್ತಮ ಶಿಕ್ಷಣ ಆಗಿನ ಪ್ರಾಮಾಣಿಕ ಕನಸಾಗಿತ್ತು. ಸರ್ವರಿಗೂ ಶಿಕ್ಷಣ ಒಂದು ಮಂತ್ರವಾಗಿತ್ತು. ಅದಕ್ಕಾಗಿಯೇ “ಮಾನವ ಸಂಪನ್ಮೂಲ ಅಭಿವೃದ್ಧಿ” ಎನ್ನುವ ಇಲಾಖೆಯಡಿ ಶಿಕ್ಷಣ ಖಾತೆಯನ್ನು ಒಂದು ಪ್ರಮುಖ ಆದರ್ಶವನ್ನಾಗಿಯೇ ಪರಿಭಾವಿಸಿದ್ದರು. ಆಗ  ಮೌಲಾನ ಅಬ್ದುಲ್ ಕಲಾಂ ಅಜಾದರಂತಹ ಶ್ರೇಷ್ಟ ಶಿಕ್ಷಣ ತಜ್ಞ, ಬುದ್ಧಿಜೀವಿ, ಸಂಸದೀಯಪಟು ಶಿಕ್ಷಣ ಮಂತ್ರಿಗಳಾಗಿದ್ದರು. ಮೌಲಾನ ಅಜಾದರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ಒಂದು ಘನತೆಯನ್ನೇ ತಂದು ಕೊಟ್ಟರು. ಅಷ್ಟೇ ಅಲ್ಲ ಭವಿಷ್ಯದಲ್ಲೂ ಈ ಇಲಾಖೆಗೆ ಭದ್ರ ಅಡಿಪಾಯವನ್ನು ಹಾಕಿದರು. ನಂತರ ಬಂದ ಕೆ.ಎಲ್.ಶ್ರಿಮಾಲಿಯವರೂ ಇದೇ ದಾರಿಯಲ್ಲಿ ಸಾಗಿದ್ದರು. ಆದರೆ ನಂತರ ವರ್ಷಗಳಲ್ಲಿ ಕೇಂದ್ರದ ಈ ಶಿಕ್ಷಣ ಖಾತೆ ಸಂಪೂರ್ಣ ಅವಜ್ಞೆಗೂ, ಸಂಪೂರ್ಣ ತಿರಸ್ಕಾರಕ್ಕೂ ಒಳಗಾಯಿತು. ಉದಾಹರಣೆಗೆ ನೋಡಿ, ದೇಶದ ಸಾಮಾಜಿಕ ವ್ಯವಸ್ಥೆಯ ಪ್ರಾಥಮಿಕ ತಿಳುವಳಿಕೆ, ಹಾಗೂ ಸಮತಾವಾದದ ನೀತಿಯಡಿ ದೇಶದ, ಸಮಾಜದ ಜಮೀನ್ದಾರ ಅಥವಾ ಮೇಲ್ವರ್ಗಗಳ ಮಕ್ಕಳಿಗೂ ಹಾಗೂ ಸ್ಲಂನ, ಕೂಲಿ ಕಾರ್ಮಿಕರ, ಬಡವರ ಮಕ್ಕಳಿಗೂ ಸಮಾನ ಶಿಕ್ಷಣ ಅವಕಾಶ, ಅದಕ್ಕಾಗಿ ಅತ್ಯುತ್ತಮವಾದ ಪಠ್ಯಪುಸ್ತಕಗಳ ರಚನೆ ಇವೆಲ್ಲವನ್ನು ಆದರ್ಶಪ್ರಾಯವಾಗಿಯೇ ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಂತಹ ಶಿಕ್ಷಣ ತಜ್ಞರು, ರಾಜಕೀಯ ಇಚ್ಛಾಶಕ್ತಿಯುಳ್ಳಂತಹ ರಾಜಕಾರಣಿಗಳು ಈ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯನ್ನು ನಡೆಸಬೇಕಾದ ಜಾಗದಲ್ಲಿ ಕಳೆದ ದಶಕಗಳಿಂದ ಬಂದು ಹೋದ ಫಕ್ರುದ್ದೀನ್ ಅಲಿ ಅಹ್ಮದ್, ಎಸ್.ಎಸ್.ರೇ, ಶಂಕರಾನಂದ (ನಮ್ಮ ರಾಜ್ಯದವರು), ಕರಣ ಸಿಂಗ್, ಎಸ್.ಬಿ.ಚವ್ಹಾಣ, ಪಿ.ವಿ. ನರಸಿಂಹರಾವ್, ಮುರಳೀ ಮನೋಹರ ಜೋಶಿ, ಅರ್ಜುನ್ ಸಿಂಗ್, ಈಗ ಕಪಿಲ್ ಸಿಬಾಲ್ ರಂತಹ ರಾಜಕಾರಣಿಗಳ ಕೈಯಲ್ಲಿ ದೇಶದ ಅತ್ಯಂತ  ಪ್ರಮುಖ ಇಲಾಖೆ ನಲುಗಿ, ಹಾದಿ ತಪ್ಪಿ ಹೋಯ್ತು. ಈ ಮೂಲಕ ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳನ್ನು, ಮಾನವತಾವಾದಿಗಳನ್ನು ನಿರ್ಮಿಸಬೇಕಾದಂತಹ ಮಾನವ ಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಯಿತು. ಇದೇ ಮಾತು ಕರ್ನಾಟಕದ ಮಟ್ಟಿಗೂ ಅನ್ವಯಿಸುತ್ತದೆ. ಈ ಪ್ರಾಥಮಿಕ ಶಿಕ್ಷಣದ ಉನ್ನತೀಕರಣವೇ ಈ  ಶತಮಾನದ ಅಭಿವೃದ್ಧಿಯ ಮಾನದಂಡವೆನ್ನುವ ಮಹಾತ್ವಾಕಾಂಕ್ಷೆಯ ರಾಜಕೀಯ ಇಚ್ಛಾಶಕ್ತಿಯ ಸ್ವರೂಪವನ್ನು  ಪಡೆದುಕೊಂಡು ಮುನ್ನುಗ್ಗಬೇಕಿದ್ದ ಈ ಮಾನವ ಸಂಪನ್ಮೂಲ ಅಭಿವೃದ್ಧಿ ಅರ್ಥಾತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ನಗಣ್ಯವಾಗಿದೆ. ಸಂಪೂರ್ಣವಾಗಿ ದಿಕ್ಕುತಪ್ಪಿ ಅನಾಥವಾಗಿದೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಭ್ರಷ್ಟಾಚಾರದ ಕರಿನೆರಳು ಶಿಕ್ಷಣ ಇಲಾಖೆಯನ್ನೂ ಬಿಟ್ಟಿಲ್ಲ.ಅದರಲ್ಲೂ ಶಿಕ್ಷಕರ ವರ್ಗಾವಣೆ ರಾಜಕಾರಣಿಗಳಿಗೆ ಅಕ್ಷಯಪಾತ್ರೆ. ಇಲ್ಲಿನ ಭ್ರಷ್ಟತೆ ಅಳೆತೆಗೂ ಸಿಕ್ಕದು. ಅಲ್ಲದೆ ಸಂಬಂಧಪಟ್ಟ ಶಿಕ್ಷಣ ಮಂತ್ರಿಗಳೂ ಹಾಗೂ ಸಾರ್ವಜನಿಕ ಶಿಕ್ಷಣದ ಅಧಿಕಾರಿಗಳು ಪದೇ ಪದೇ ಕೊಚ್ಚಿಕೊಳ್ಳುವುದು ಮಧ್ಯಾಹ್ನದ ಬಿಸಿಯೂಟದಿಂದಾಗಿ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಸೇರುತ್ತಿದ್ದಾರೆ ಅಲ್ಲದೆ ಮಧ್ಯದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುವ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು !! ಉತ್ತಮ ಭವಿಷ್ಯದಲ್ಲಿ ಆಸೆ ಇಟ್ಟು ಅದಕ್ಕಾಗಿ ಪ್ರಾಥಮಿಕ ಶಾಲೆ ಸೇರಬಯಸುತ್ತಾರೆ ಎಂದು ಈ ಜನ ಹೇಳಬೇಕಾಗಿತ್ತು. ಅದರೆ ಇವರು ತೋರಿಸಿಕೊಳ್ಳುತ್ತಿರುವುದು ತಮ್ಮ ಆತ್ಮವಂಚನೆಯನ್ನ. ಇದು ನಮ್ಮ ನಾಗರಿಕ ಸಮಾಜದ ಆತ್ಮಗೌರವಕ್ಕೇ ಧಕ್ಕೆ  ತರುವಂತಹ  ಹೇಳಿಕೆಗಳು.

ಇದೆಲ್ಲದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಕೇಂದ್ರೀಯ ಆಡಳಿತ ವ್ಯವಸ್ಥೆ. ಇಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ಭವನದಲ್ಲಿ ಕುಳಿತ ಅಧಿಕಾರಿಗಳು ಆಡಳಿತಾತ್ಮಕವಾಗಿ ಎಲ್ಲಾ ನಿರ್ಣಯಗಳನ್ನು ಏಕರೂಪವಾಗಿ ತೆಗೆದುಕೊಳ್ಳುತ್ತಾರೆ. ಇದು ರಾಜ್ಯದಾದ್ಯಾಂತ ಒಟ್ಟಾರೆ ಶಿಕ್ಷಣ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆ. ಏಕೆಂದರೆ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸ್ಥಳೀಯತೆಗೆ (Local) ಬಹಳ  ಆದ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಶಾಲೆಗೆ ಬರುವ ವಿದ್ಯಾರ್ಥಿಗಳು ಸ್ಥಳೀಯತೆಯಿಂದಲೇ ರೂಪಿತಗೊಂಡಿರುತ್ತಾರೆ. ಇದು 6 ರಿಂದ 13 ವಯಸ್ಸಿನ ಮಕ್ಕಳನ್ನು ರೂಪಿಸಬೇಕಾದಂತಹ ಕಾಲಘಟ್ಟ. ಅತ್ಯಂತ ಸೂಕ್ಮವಾದ, ಕುಸುರಿ ಕಲೆಯ ಮಟ್ಟದ ಕಾರ್ಯದಕ್ಷತೆಯ ಅವಶ್ಯಕತೆ ಬಹಳ ಇದೆ. ಇಂತಹ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಸಮುದಾಯಗಳನ್ನು ರೂಪಿಸಿ ಈ ಸಮುದಾಯಗಳನ್ನು ತಮ್ಮ ಆಡಳಿತಗಳಲ್ಲಿ ಒಳಗೊಳ್ಳುವಿಕೆಗಾಗಿ ವೇದಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಆ ಮೂಲಕ ತಮ್ಮ ಕಾರ್ಯನೀತಿಯನ್ನು ಕಾನೂನುಬದ್ಧವಾಗಿ ರೂಪಿಸಿಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾದರೆ ಆಗ ಮಸಲ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಅಥವಾ ತಾಲೂಕು ಪಂಚಾಯ್ತಿ ಮಟ್ಟದಲ್ಲಿ ಬರುವ ಶಾಲೆ ಒಂದು ವೇಳೆ ಯಾವುದೇ ರೀತಿಯ ತೊಂದರೆಗೊಳಗಾದರೂ ಅಲ್ಲಿನ ಸ್ಥಳೀಯ ಸಂಸ್ಥೆಗಳೇ ಇದನ್ನು ಸರಿಪಡಿಸಲು ಮುಂದಾಗುತ್ತವೆ. ಏಕೆಂದರೆ ಇದು ಅವರಿಗೆ ವಹಿಸಿರುವ ಜವಾಬ್ದಾರಿಯ ಜೊತೆಗೆ ಊರಿನ ಮರ್ಯಾದೆಯ ಪ್ರಶ್ನೆ ಮುಖ್ಯವಾಗುತ್ತದೆ. ಆದರೆ ಇದಕ್ಕೆ ಅಪಾರವಾದ ಶ್ರಮ, ಅಧ್ಯಯನ, ಸಮರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ಬೆಂಗಳೂರಿನ ಲಾಬಿ ನಗರದಿಂದ ಹೊರಡುವ ಅಡಳಿತಾತ್ಮಕ ಏಕಪಕ್ಷೀಯ ನಿರ್ಧಾರಗಳ ತಿರುಳು, ಅದರ ಸ್ವರೂಪಗಳು ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕುಗಳು, ಗ್ರಾಮಗಳನ್ನು ಒಳಗೊಳ್ಳುವುದೇ ಇಲ್ಲ. (ಸದ್ಯಕ್ಕೆ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಬಲಿಷ್ಟ ಹಿಡಿತದಲ್ಲಿರುವ ನಮ್ಮ ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳ ಕಾರ್ಯಕ್ಷಮತೆಯನ್ನು,  ಸಾಮಾಜಿಕ ನ್ಯಾಯದ ಒಳತೋಟಿಯನ್ನು ಅಳೆಯಲು ಮತ್ತೊಂದು ಅಧ್ಯಯನವೇ ಬೇಕಾಗುತ್ತದೆ). ಇದು ಒಂದು ರೀತಿಯಲ್ಲಿ ಧ್ವಂಸ ಪ್ರವೃತ್ತಿಯದ್ದಾಗಿರುತ್ತದೆ. ಈ ಮೂಲಕ ವೈವಿಧ್ಯತೆಯನ್ನು ಒಳಗೊಳ್ಳುವ ಏಕತೆಯ ಕನಸು ಸಂಪೂರ್ಣವಾಗಿ ನಿರ್ನಾಮವಾಗುತ್ತದೆ. ಪುಟ್ಟ ವಿದ್ಯಾರ್ಥಿಗಳು ನಲುಗಿಹೋಗುತ್ತಾರೆ. ಎರಡನೇಯದಾಗಿ ಸದಾ ಕಾಲ ಜೀವಂತಿಕೆಯ, ಹುಮ್ಮಸ್ಸಿನ ಚಟುವಟಿಕೆಗಳು, ನಿರಂತರವಾಗಿ ಹೊಸದನ್ನು ಚಿಂತಿಸುವ ಮನಸ್ಸುಗಳ ಅವಶ್ಯಕತೆ ಬೇರೆ ಎಲ್ಲಾ ಇಲಾಖೆಗಿಂತಲೂ ಶಿಕ್ಷಣ ಇಲಾಖೆಗೆ ಜರೂರತ್ತಿದೆ. ಆದರೆ ನಮ್ಮಲ್ಲಿ ಅದು ಸಂಪೂರ್ಣವಾಗಿ ನಶಿಸಿಹೋಗಿದೆ. ಆದರೆ ಕೇಂದ್ರೀಕೃತ ನೌಕರ ವರ್ಗಗಳು ಸದಾ ಕಾಲ ಯಾವುದಾದರೊಂದು ಕಡತಗಳನ್ನು ಹೊತ್ತುಕೊಂಡು ಓಡಾಡುತ್ತಿರುವುದನ್ನು ನಾವೆಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಗಳಲ್ಲಿ ನೋಡಬಹುದು. ಅವು ಮತ್ತೇನಲ್ಲದೆ ವರ್ಗಾವಣೆಗಳದ್ದೋ, ಟಿಎ, ಡಿಎಗಳದ್ದೋ, ಇಲ್ಲಾ ಸಚಿವರ ಹಾಗೂ ಶಿಕ್ಷಣಾದಿಕಾರಿಗಳ ದಿನನಿತ್ಯದ ಸಮಾರಂಭಗಳದ್ದೋ, ಇತ್ಯಾದಿ ಇಷ್ಟೇ. ಬೇರಿನ್ನೇನು ಇರುವುದೇ ಇಲ್ಲ. ಇದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ನೌಕರಶಾಹಿಯ ಸಂಪೂರ್ಣ ನಿಷ್ಕ್ರಿಯತೆ, ಇಲ್ಲಿ ಚಲನಶೀಲತೆಯೇ ನಿಂತು ಹೋಗಿರುವ ವ್ಯವಸ್ಥೆ, ಕೇವಲ ಕಡತಗಳ ವಿಲೇವಾರಿಯನ್ನು ಮಾಡಿಕೊಂಡಿರುವ ಇಲ್ಲಿನ ನೌಕರ ವರ್ಗದಿಂದ ಅದಕ್ಕಿಂತ ಹೆಚ್ಚಿನದನ್ನು ಆಪೇಕ್ಷಿಸುವುದೇ ಮೂರ್ಖತನವಾಗುತ್ತದೆ. ಏಕೆಂದರೆ ಇದಕ್ಕೆ ಅಪರೂಪದ ವೈಚಾರಿಕ, ಪ್ರಗತಿಪರ ರಾಜಕೀಯದ ಸ್ಪರ್ಶ ನಿರಂತರವಾಗಿ ಇರಬೇಕಾಗುತ್ತದೆ. ಆಗಲೇ ಇಲ್ಲಿನ ನೌಕರ  ಶಾಹಿ ಗುಂಪು ಉತ್ತೇಜಗೊಳ್ಳುತ್ತದೆ. ಆದರೆ ಸರ್ಕಾರಗಳಿಗೆ ಬೇಕಾಗಿರುವುದು ವೈಯುಕ್ತಿಕವಾಗಿ ಆರ್ಥಿಕ ಲಾಭ ತಂದುಕೊಡುವ ಇಲಾಖೆಗಳು ಮಾತ್ರ.ಏಕೆಂದರೆ ಇಲ್ಲಿ ತಮ್ಮ ಸಂಪನ್ಮೂಲದ ಅಭಿವೃದ್ಧಿ ತುಂಬಾ ಕಡಿಮೆ ಇರುವುದರಿಂದ ಇವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಎಂದರೆ ಇನ್ನಿಲ್ಲದ ಅಲರ್ಜಿ. ಮಲತಾಯಿ ಧೋರಣೆ.

ನಮ್ಮದು ರಾಜ್ಯವಾರು, ಜಿಲ್ಲಾವಾರು, ತಾಲೂಕು ಮಟ್ಟದಲ್ಲೂ ಜೀವನದ ವಿವಿಧ ರಂಗಗಳಲ್ಲಿ ವಿವಿಧ ಭಿನ್ನತೆಗಳನ್ನೊಳಗೊಂಡ, ವಿವಿಧ ಜಾತಿ, ಕೋಮುಗಳನ್ನೊಳಗೊಂಡ ಗಣರಾಜ್ಯ. ಇದು ದೇಶಕ್ಕೆ ಅನ್ವಯಿಸಿದ ಹಾಗೆಯೇ ರಾಜ್ಯಗಳಿಗೂ, ಹಾಗೆಯೇ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮಗಳಿಗೂ ಅನ್ವಯಿಸುತ್ತದೆ. ಯಾವುದೇ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ರಚಿಸುವಾಗ ವೈವಿಧ್ಯತೆಯನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ನಮ್ಯ ಪಠ್ಯ ಪುಸ್ತಕಗಳು ಏಕರೂಪಿ. ಇಲ್ಲಿನ ಪುರೋಹಿತಶಾಹಿ ಮನಸ್ಸು ಬಹುರೂಪಿಯನ್ನು ನಿರಾಕರಿಸುತ್ತದೆ.ಶಂಕರಾಚಾರ್ಯ, ರಾಮಾನುಜಾಚಾರ್ಯರ ಬಗ್ಗೆ ಪುಸ್ತಕಗಳಲ್ಲಿ ಪಾಠವಾಗಿ ಬರುತ್ತದೆ. ಆದರೆ ಅಲ್ಲಮ, ಮುಂಟೇಸ್ವಾಮಿ ಮಾಹಿತಿ ರೂಪವಾಗಿಯೂ ಬರುವುದೇ ಇಲ್ಲ. ಏಕೆಂದರೆ ಒಂದು ವೇಳೆ ಈ ಅಲ್ಲಮ, ಮುಂಟೇಸ್ವಾಮಿಯವರು ಪಠ್ಯಪುಸ್ತಕಗಳಲ್ಲಿ ಪ್ರಾಥಮಿಕ ಹಂತದಿಂದಲೇ ಸೇರಿಕೊಂಡಿದ್ದರೆ ಇಂದು ವೈದಿಕಶಾಹಿ ಪರಂಪರೆಯ ಭಗವದ್ಗೀತೆ ಅಲ್ಲಿ ಇರುತ್ತಲೇ ಇರಲಿಲ್ಲ. ಅಷ್ಟೊಂದು ವೈಚಾರಿಕ ಪ್ರಖರತೆ, ಜನಪರತೆ ಈ ಧರೆಗೆ ದೊಡ್ಡವರದು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಟೇ ಸ್ವಾಮಿ, ಮಲೆ ಮಹದೇಶ್ವರ, ಸಿದ್ದಯ್ಯ ದೇವರುಗಳನ್ನು ತಮ್ಮ ಗರ್ಭಗುಡಿಯೊಳಗೆ ಬಿಟ್ಟು ಕೊಂಡೇ ಇಲ್ಲ. ಈ ಧರೆಗೆ ದೊಡ್ಡವರ ಬಗ್ಗೆ ವಿದ್ಯಾರ್ಥಿಗಳಿಗೆ ಗೊತ್ತಾಗುವುದು ಒಂದು ವೇಳೆ ಅವರು ತಮ್ಮ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡರೆ ಮಾತ್ರ. ಇಲ್ಲದಿದ್ದರೆ ಇಲ್ಲವೇ ಇಲ್ಲ. ಹೀಗಾಗಿ ಕನ್ನಡದ ಅತ್ಯಂತ ಪ್ರಗತಿಪರ ಪರಂಪರೆ, ಕೇವಲ ಅಕಡೆಮಿಕ್ ಚಿಂತನೆಗಳಲ್ಲಿ, ಸಂಶೋದನೆಗಳಲ್ಲಿ ಉಳಿದುಕೊಳ್ಳುತ್ತದೆ. ಇದು ಅತ್ಯಂತ ಮಾರಕ. ಇದು ಕೇವಲ ಒಂದು ಉದಾಹರಣೆ ಮಾತ್ರ.  ಇಲ್ಲಿ ಅಂಕೆ, ನೀತಿ ಎಚ್ಚರ ತಪ್ಪಿದರೆ ಪುಸ್ತಕಗಳು ಜಾತಿವಾದವನ್ನು, ಕೋಮುವಾದವನ್ನೂ, ಫ್ಯೂಡಲಿಸಂನ್ನೂ ತನ್ನೊಡಲೊಳಗೆ ತುಂಬಿಕೊಳ್ಳುತ್ತವೆ. ಇದು ಅನೇಕ ವೇಳೆ ರಾಜಕಾರಣಿಗಳ ಮೂಗಿನಡಿಯಲ್ಲೇ ರೂಪಿತಗೊಳುತ್ತವೆ. ಇದು ಅಂತಿಮವಾಗಿ ಬಹುಸಂಖ್ಯಾತರಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ವಿವರಿಸಲು ಮತ್ತೊಂದು ವೇದಿಕೆಯೇ ಬೇಕು.

ಕರ್ತರುಗಳಾದ ರಾಜಕಾರಣಿಗಳ ದುರಂತ ಈ ಮಟ್ಟದ್ದಾದರೆ ಕ್ರಿಯೆಗಳಾದ ಶಿಕ್ಷಕರ ಬಗ್ಗೆ ಹೇಳುವುದೇನಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಕರ ಗುಣಮಟ್ಟದ ಬಗ್ಗೆ ಅನೇಕ ಅಪನಂಬಿಕೆಗಳು, ಆರೋಪಗಳು ಮಾಡಲ್ಪಡುತ್ತಿದೆ. ಇದು ಅನೇಕ ಸನ್ನಿವೇಶಗಳಲ್ಲಿ ಸತ್ಯವೆಂದು ಸಾಬೀತಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರ ಗುಣಮಟ್ಟವೆಂದರೆ ಅದಕ್ಕೆ ಮೂರು ಪ್ರಮುಖ ಮಾನದಂಡಗಳಿವೆ.  ಮೊದಲನೇಯದಾಗಿ ವಿಷಯದ ಪರಿಣಿತಿ. ಇಲ್ಲಿ ಅಂತಹ ತಕರಾರು ಇರುವಂತಿಲ್ಲ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಕರು ತಾವು ಕಲಿತ ವಿಷಯಗಳನ್ನು,ಅವುಗಳ ಮೇಲಿನ ಪರಿಣಿತಿಯನ್ನು ವರ್ಷಗಳ ಕಾಲ ನಿರಂತರವಾಗಿ ಅದೇ ಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಸೋಲುತ್ತಾರೆ (sustenance). ಅಲ್ಲದೆ ಬದಲಾದ ಕಾಲಘಟ್ಟದಲ್ಲಿ ವಿಷಯಗಳ ಮೇಲಿನ ಗ್ರಹಿಕೆಗಳೂ ತನ್ನ ಮೂಲಭೂತ ಅಂಶಗಳನ್ನು ಇಟ್ಟುಕೊಂಡೂ ತಂತಾನೇ ಬದಲಾವಣೆಗಳಿಗೆ ಒಳಪಡುತ್ತಿರುತ್ತದೆ. ಇದು ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. ಈ ರೀತಿಯ ಗುಣಾತ್ಮಕ ಬದಲಾವಣೆಗಳಿಗೆ ನಮ್ಮ ಶಿಕ್ಷಕರು ಒಗ್ಗಿಕೊಳ್ಳುವುದೇ ಇಲ್ಲ. ಹೀಗಾಗಿ ವಿಜ್ನಾನ, ಗಣಿತ, ಸಮಾಜ ಶಾಸ್ತ್ರ ದಂತಹ ವಿಷಯಗಳ ಮೇಲಿನ ಪಠ್ಯಗಳು ಸದಾ UPDATED ಆಗುತ್ತಿರುವಂತೆಯೇ ಸಂಬಂಧಪಟ್ಟ ಶಿಕ್ಷಕರೂ ಈ ಹೊಸ ಅವಿಷ್ಕಾರಗಳನ್ನು ತಾವೂ ಅರಿತುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗುವುದೇ ಇಲ್ಲ. ಎಲ್ಲರೂ ಬಾವಿಯೊಳಗಿನ ಕಪ್ಪೆಗಳಾಗಿಯೇ ಉಳಿದುಬಿಡುತ್ತಾರೆ ತಮಗೆ ಅರಿವಿಲ್ಲದೆಯೇ. ಇದು ಕ್ರಮೇಣ ವಿದ್ಯಾರ್ಥಿಗಳ ಜ್ಞಾನದ ಮೇಲು ಖುಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ ಪ್ರತಿ ಶಾಲೆಗಳೂ ಶೇಕಡಾ 100 ರಷ್ಟು ಫಲಿತಾಂಶವನ್ನು ಕೊಡಲೇಬೇಕು ಎನ್ನುವ ಒತ್ತಡದಲ್ಲಿರುವ ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕರು ಗುಣಮಟ್ಟವನ್ನು ಕಾಪಾಡಿಕೊಳ್ಳುವದಿಕ್ಕಿಂತಲೂ ಟಾರ್ಗೆಟ್ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ನನಗೆ ಪರಿಚಯವಿರುವ ಕೆಲವು ಮುಖ್ಯೋಪಾಧ್ಯಾಯರೊಂದಿಗೆ ಅನೇಕ ವೇಳೆ ಈ ವಿಷಯವನ್ನು ಕುರಿತು ಚರ್ಚಿಸಿದ್ದೇನೆ. ಆದರೆ ಅವರಿಗೂ ಯಾವುದೇ ಬಗೆಯ ಮಂತ್ರದಂಡಗಳು ಗೊತ್ತಿಲ್ಲ. ಏಕೆಂದರೆ ಸಧ್ಯಕ್ಕೆ ನಮ್ಮ ಬಹುಪಾಲು ಮುಖ್ಯೋಪಾಧ್ಯಾಯರುಗಳು ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಶೇಕಡಾ 70 ರಷ್ಟು ಸಮಯವನ್ನು ಕೇವಲ ಆಡಳಿತಾತ್ಮಕ ಕೆಲಸಗಳಲ್ಲೇ ಕಳೆದು ಹೋಗುತ್ತಾರೆ. ಶಾಲೆಯ ಯಜಮಾನನ ಸ್ಥಿತಿಯೇ ಈ ಮಟ್ಟದ್ದಾದರೆ ಇನ್ನೆಲ್ಲಿಯ ಗುಣಮಟ್ಟದ  ಶಿಕ್ಷಣ. ಅದು ಗಗನ ಕುಸುಮ.

ಎರಡನೆಯದಾಗಿ ಕೆಲಸದಲ್ಲಿನ ವೃತ್ತಿಪರತೆ (Professionalism) . ಇದು ವಿದ್ಯಾರ್ಥಿಗಳ ಒಟ್ಟಾರೆ ಗುಣಮಟ್ಟವನ್ನು ನಿರ್ಧರಿಸುತ್ತದೆ. ಇದಕ್ಕೆ ನಮ್ಮ ಶಿಕ್ಷಕರ ತರಬೇತಿ ಪಠ್ಯಪುಸ್ತಕಗಳ ಗುಣಮಟ್ಟದ ಜೊತೆ ಜೊತೆಗೆ ಶಿಕ್ಷಕರ ವೈಯುಕ್ತಿಕ ತಿಳುವಳಿಕೆಗಳೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ ಪ್ರತಿಯೊಬ್ಬ ಶಿಕ್ಷಕನೂ/ಶಿಕ್ಷಕಿಯೂ ತರಗತಿಯಲ್ಲಿ ಪಾಠ ಮಾಡುವಾಗ ಅಲ್ಲಿನ ವಿದ್ಯಾರ್ಥಿಗಳ ಸಾಮಾಜಿಕ, ಕೌಟುಂಬಿಕ ಹಿನ್ನೆಲೆ. ಅವರ ಪೋಷಕರ ಸಾಮಾಜಿಕ ಸ್ಥಿತಿಗತಿ ಇವೆಲ್ಲವನ್ನೂ ಗಮನದಲ್ಲಿರಿಸಿಕೊಳ್ಳಲೇಬೇಕು. ಇದಕ್ಕಾಗಿ ಇವರು ಅಪಾರ ಮಾನಸಿಕ ಸಿದ್ಧತೆ ಮಾಡಿಕೊಳ್ಳಲೇಬೇಕಾಗುತ್ತದೆ, ಕನಿಷ್ಟ ಮಟ್ಟದ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಲೇ ಬೇಕಾಗುತ್ತದೆ ಹಾಗೂ ತಮ್ಮ ದೈನಂದಿನ ಕೆಲಸದ ಜೊತೆಗೆ   ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿರಿಸಲೇಬೇಕು. ಮೊದಲನೇ ಮಟ್ಟದ ಈ ವೃತ್ತಿಪರತೆಯನ್ನು ಸಾಧಿಸಲು ಮೊಟ್ಟಮೊದಲು ಶಿಕ್ಷಣ ತರಬೇತಿ ವಿಧಾನ, ಅದಕ್ಕೆ ಬೇಕಾದ ಪರಿಕರಗಳು ಅಮೂಲಾಗ್ರವಾಗಿ ಬದಲಾಗಲೇಬೇಕು. ಈಗಿರುವ ಅತ್ಯಂತ ದೋಷಪೂರ್ಣ, ಬಾಲಿಶ, OUTDATED ತರಬೇತಿ ಪಠ್ಯಕ್ರಮಗಳಿಂದ ವೃತ್ತಿಪರ ತರಬೇತಿ ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಈಗಿನ ಈ ತರಬೇತಿ ವ್ಯಾಸಂಗ ಕ್ರಮ  ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿತವಾದದ್ದು. ಇದನ್ನು ತಮ್ಮ ತರಬೇತಿ ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುವ ಶಿಕ್ಷಕರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋಭೂಮಿಕೆ, ಅವರ ಸಾಮಾಜಿಕ ಹಿನ್ನೆಲೆ, ಅವರು ವಾಸಿಸುವ ಗ್ರಾಮದ ಪರಿಸರ ಇವೆಲ್ಲವೂ ಮನದಟ್ಟಾಗುವ ಸಾಧ್ಯತೆಗಳೇ ಕಡಿಮೆ. ಶಿಕ್ಷಣ ವ್ಯವಸ್ಥೆಯ ಈ ಮಧ್ಯಮ ವರ್ಗದ ಪರ ಸಾರ್ವತ್ರಿಕ ಒಲವು ಗ್ರಾಮೀಣ ವಿದ್ಯಾರ್ಥಿಗಳನ್ನು ನುಂಗಿಹಾಕಿದೆ. ಈ ಎಲ್ಲಾ ದೌರ್ಬಲ್ಯಗಳನ್ನು ಮೀರಲು ಶಿಕ್ಷಕರಲ್ಲಿ ಅಪಾರವಾದ ವೈಯುಕ್ತಿಕ ಅರ್ಪಣಾ ಮನೋಭಾವ ಬೇಕಾಗುತ್ತದೆ. ಆದರೆ ದುಖದ ಸಂಗತಿಯೆಂದರೆ ಬಹುಪಾಲು ಶಿಕ್ಷಕರಲ್ಲಿ ಇದರ ಗೈರುಹಾಜರಿ ಎದ್ದು ಕಾಣುತ್ತದೆ. ಇಂದಿನ ಬಹುಪಾಲು ಶಿಕ್ಷಕರು ತಮಗೆ ಗೊತ್ತಿಲ್ಲದೆಯೇ ತಮ್ಮ ಮನಸ್ಸು ಹಾಗೂ ಮಿದುಳನ್ನು ನಗರಕೇಂದ್ರಿತವಾಗಿರಿಸಿಕೊಂಡಿದ್ದಾರೆ. ಈ ರೀತಿ ನಗರೀಕರಣಗೊಂಡ ಶಿಕ್ಷಕರು ತಮ್ಮ ಅರಿವಿಗೆ ಮೀರಿ ಕೂಪಮಂಡೂಕಗಳಾಗುತ್ತಿದ್ದಾರೆ.ಜಾತ್ಯಾತೀತತೆಯನ್ನು ಮರೆಯುತ್ತಿದ್ದಾರೆ. ಆದರೆ ಇಲ್ಲಿ ನಿರಾಶವಾದಕ್ಕೆ ಅವಕಾಶವೇ ಇಲ್ಲ. ಅಂದಿನ ಕಾಲದ ಡೆಪ್ಯುಟಿ ಚೆನ್ನಬಸಪ್ಪ, ಗಂಗಾಧರೇಶ್ವರ ಮಡಿವಾಳ, ತುರುಮುರಿಯಂತಹ ಶ್ರೇಷ್ಟ ಶಿಕ್ಷಕರ ಪರಂಪರೆಯ ಕೊಂಡಿ ನಮ್ಮ ಕಾಲದ ಕೃಷ್ಣಮೂರ್ತಿ ಬಿಳಿಗೆರೆಯವರವರೆಗೂ ಬೆಳೆದಿದೆ. ಕಳೆದ 150 ವರ್ಷಗಳಿಂದ ಈ ಕೊಂಡಿ ಕಳಚಿಕೊಂಡಿಲ್ಲ. ನಿರಂತರವಾಗಿದೆ. ಆ ಕಾಲದಿಂದ ಇಂದಿನ ಕಾಲದವರೆಗೂ ಎಲ್ಲಾ ತಲೆಮಾರಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವಮಾನದಲ್ಲಿ ಕನಿಷ್ಟವೆಂದರೂ 2 ರಿಂದ 3 ಮಾದರಿ, ನಿಸ್ವಾರ್ಥ, ಸಮರ್ಪಣಾ ಮನೋಭಾವದ ಶಿಕ್ಷಕರ ಕೆಳಗೆ ಓದಿಯೇ ಇರುತ್ತಾರೆ. ಇವರಿಂದ ರೂಪುಗೊಂಡಿರುತ್ತಾರೆ. ಈ ಮಾದರಿ ಶಿಕ್ಷಕರು ಎಲೆಮರೆಯ ಕಾಯಿಯಾಗಿ ಈಗಲೂ ಇದ್ದಾರೆ. ಆದರೆ ಈ ಶಿಕ್ಷಕರ ಸಂಖ್ಯೆ ಒಂದು ಆಂದೋಲನದ ರೂಪು ಪಡೆದಾಗ ಮಾತ್ರ ಶಾಲೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಹುಟ್ಟುವುದಕ್ಕೆ ಸಾಧ್ಯ. ಇದರ ಬಗ್ಗೆ ನಮಗಂತೂ ಆಶಾವಾದವಿದೆ.

ಮೂರನೆಯದಾಗಿ ಶೇಕಡಾ 40 ರಷ್ಟು  ಶಿಕ್ಷಕರು ತಾವು ಕೆಲಸ ಮಾಡುವ ಊರಿನಲ್ಲಿ ವಾಸಿಸುವುದಿಲ್ಲ. ಪ್ರತಿದಿನ ಕೆಲಸಕ್ಕಾಗಿ ಸರಾಸರಿ 40 ಕಿ.ಮೀ. ಪರವೂರಿಗೆ ಪ್ರಯಾಣ ಮಾಡುತ್ತಾರೆ. ಇಲ್ಲಿ ವೃತ್ತಿಪರತೆ ಕುಂಠಿತಗೊಳ್ಳುತ್ತದೆ. ವೈಯುಕ್ತಿಕ ಹಿತಾಸಕ್ತಿ ಮೇಲುಗೈ ಪಡೆದು ಕೊಳ್ಳುತ್ತದೆ. ಇದಕ್ಕೆ ಬಲಿಯಾಗುವುದು ಎಂದಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಒಂದು ಶಾಶ್ವತ ಪರಿಹಾರವೇ ಇಲ್ಲ. ಇನ್ನೂ ಗೊಂದಲಗಳಿವೆ. ಇದಕ್ಕೆ ರಾಜಕಾರಣಿಗಳ ಪ್ರಾಮಾಣಿಕ ಹಸ್ತಕ್ಷೇಪ ಬೇಕಾಗುತ್ತದೆ. ಆದರೆ ಭ್ರಷ್ಟ ರಾಜಕಾರಣಿ ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುವುದೇ ಹಣ ಗಳಿಸಲು. ಇಲ್ಲಿ ವೈದ್ಯ ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ವ್ಯವಸ್ಥೆ ಜಾರಿಗೊಂಡಾಗ ಇನ್ನೆಲ್ಲಿಯ ವೃತ್ತಿಪರತೆ !! ಅದು ಶಿವಾಯ ನಮ:.

ಇನ್ನು ನಮ್ಮ ಪರೀಕ್ಷಾ ಪದ್ಧತಿ. ಇದು ಗಾಯದ ಮೇಲೆ ಬರೆ ಎಳೆದಂತೆ. ಅವ್ಯವಸ್ಥೆಯ ಅಗರವಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ ಪರೀಕ್ಷಾ ಪದ್ಧತಿ, ಸಿದ್ದಪಡಿಸುವ ಪ್ರಶ್ನೆಪತ್ರಿಕೆಗಳು ಎಲ್ಲವೂ ಓಬಿರಾಯನ ಕಾಲಕ್ಕೆ ಸೇರಿದ್ದು. ಇಲ್ಲಿ ವಿದ್ಯಾರ್ಥಿಗಳು ನಿಜದ ಜ್ಞಾನಾರ್ಜನೆಯ ಬದಲು ಅದರ ಇಲಾಖೆಗಳ ಅಸಮರ್ಥತೆಯ ಒಳಸುಳಿಗೆ ಬಲಿಯಾಗಿ ಎಲ್ಲಿಯೂ ಸಲ್ಲದಂತವರಾಗುತ್ತಾರೆ.ಏಕೆಂದರೆ ಮುಂದಿನ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಗಳಿಸುವ ಅಂಕಗಳೇ ಮಾನದಂಡವನ್ನಾಗಿ ಪರಿಗಣಿಸುತ್ತಿರುವಾಗ ಇಲ್ಲಿ ವೈಯುಕ್ತಿಕ ಪ್ರತಿಭೆಯನ್ನು ಅಳೆಯುವ ಮಾನದಂಡ ಎಷ್ಟೇ ದೋಷಪೂರಿತವಾಗಿದ್ದರೂ ಇದರ ಬಲಿ ಬಡ ವಿದ್ಯಾರ್ಥಿಗಳು.

ಇಷ್ಟೆಲ್ಲಾ ಶೋಚನೀಯ ಪರಿಸ್ಥಿಯಲ್ಲಿ ನಮ್ಮ ಕೇಂದ್ರದಲ್ಲಿ ಕಪಿಲ್ ಸಿಬಲ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅವರಿಗೆ ಶತಕೋಟಿಗಳ ವ್ಯವಹಾರವುಳ್ಳ, ಗ್ಲಾಮರ್ ಇರುವ ಕಮುನಿಕೇಶನ್ಸ್  ಖಾತೆಯ ಮೇಲೆ ಅಪಾರ ಪ್ರೀತಿ ಹಾಗೂ ಗಮನ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಏನಾದರೂ ಮಾತನಾಡಿದ್ದರೆ ಅದು ಉನ್ನತ ಶಿಕ್ಷಣದ ಬಗ್ಗೆ. IIT, IIMಗಳ ಬಗ್ಗೆ ಮಾತ್ರ. ಅವುಗಳನ್ನು ಇನ್ನಷ್ಟು ಬಲಪದಿಸುವ ಕಾರ್ಯತಂತ್ರದ ಬಗ್ಗೆ ಮಾತ್ರ. ಮತ್ತದೇ ಸಮಾಜದ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಹಿತಾಸಕ್ತಿ.ಮುಂಬರುವ ರಾಜಕೀಯ ವ್ಯವಸ್ಥೆ ಕೂಡ ಇದರ ಬಗ್ಗೆ ಯಾವ ಬೆಳಕನ್ನು ಚೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಎಂದಿನಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ಲಕ್ಷ ಧೋರಣೆಯಿಂದ ನಾಶವಾಗುತ್ತಿದೆ. ಅಷ್ಟು ಮಾತ್ರ ನಿಜ.  ಇನ್ನು ನಮ್ಮ ರಾಜ್ಯದ ಶಿಕ್ಷಣ ಮಂತ್ರಿ ಸಂಘಪರಿವಾರದ ಸ್ವಂಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು. ಇವರಿಗೆ ಮೇಲಿನ ಎಲ್ಲಾ ವಿಷಯಗಳಿಗಿಂತಲೂ ತಮ್ಮ ಪೂರ್ವಾಶ್ರಮದ ಆರ್.ಎಸ್.ಎಸ್. ಚಾಳಿಯನ್ನು ಮತ್ತೆ ಮತ್ತೆ ಜಾರಿಗೆ ತರಲೆತ್ನಿಸುತ್ತಾರೆ. ಮಾತೆತ್ತಿದರೆ ಶಿಕ್ಷಣದ ಅಮೂಲಾಗ್ರ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಧ್ವನಿಯ ಮೂಲ ಬೇರಿರುವುದು ಕೇಶವ ಕೃಪದಲ್ಲಿ. ಅಮೂಲಾಗ್ರ ಬದಲಾವಣೆ ಎಂದರೆ ಅಖಂಡ ಹಿಂದೂ ರಾಜ್ಯದ  ಪರಿಕಲ್ಪನೆಯನ್ನಾಧರಿಸಿದ ಕೋಮುವಾದ ಶಿಕ್ಷಣ ನೀತಿ. ಇದಕ್ಕೆ ಪ್ರಾಥಮಿಕ ಹಂತವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಪ್ರಸ್ತಾಪ. ಆ ಮೂಲಕ ಭವಿಷ್ಯದ ಪ್ರಜೆಗಳು ಮೂಢನಂಬಿಕೆಗಳನ್ನು ತಲೆ ಮೇಲೆ ಹೊತ್ತುಕೊಂಡು ಅನ್ಯ ಧರ್ಮಗಳನ್ನು ದ್ವೇಷಿಸುವ ನಾಗರಿಕರಾಗಿ ಹೊರಹೊಮ್ಮುತ್ತಾರೆ.

ಇದಕ್ಕೆ ತೀವ್ರ ಪ್ರತಿರೋಧ ಎದುರಾದರೆ ಬೇಕಾದರೆ ಭಗವದ್ಗೀತೆಯ ಜೊತೆಜೊತೆಗೆ ಕುರಾನ್ ಹಾಗೂ ಬೈಬಲ್ ನ ಭಾಗಗಳನ್ನೂ ಸೇರಿಸೋಣ ಎನ್ನುವ ಕೋಮುವಾದದ ಆಷಾಡಭೂತಿತನ. ಧಾರ್ಮಿಕತೆಯೆಂದರೆ ಅದು ತೀರಾ ವೈಯುಕ್ತಿಕವಾದದ್ದು, ಅದನ್ನು ಕೇವಲ ಮನೆಯೊಳಗೆ ಮಾತ್ರ ಆಚರಿಸಿಕೊಳ್ಳಬೇಕು, ಸಾರ್ವಜನಿಕವಾಗಿ, ಅಧಿಕೃತವಾಗಿ ಎಲ್ಲೂ ಭೋದಿಸಬಾರದು ಎನ್ನುವ ಎಲಿಮೆಂಟರಿ ಶಿಕ್ಷಣವನ್ನು ಈ ಹಿಂದೂ ಧರ್ಮದ ಶಿಕ್ಷಣ ಸಚಿವ ಕಾಗೇರಿಯವರಿಗೆ ಈಗ ಅತ್ಯಂತ ತುರ್ತಾಗಿ ನೀಡಬೇಕಾಗಿದೆ. ಇವರಿಗೆ ಸರ್ವ ಶಿಕ್ಷಣ ಅಭಿಯಾನದ ಪ್ರಾಥಮಿಕ ಪಾಠಕ್ಕಾಗಿ ಮತ್ತೆ ಬಾ ಮರಳಿ  ಶಿಕ್ಷಣದ ತರಬೇತಿ ಕೊಡುವುದೊಳಿತು. ಇನ್ನೇನಾಗದಿದ್ದರೂ ಶಿಕ್ಷಣದ ಕೇಸರೀಕರಣವನ್ನಾದರೂ ಚಣ ಮಟ್ಟಿಗಾದರೂ ತಪ್ಪಿಸಬಹುದು. ಇಂತಹ ದಿಕ್ಕುತಪ್ಪಿದ ಪರಿಸ್ಥಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ, ಕನ್ನಡ ಮಾಧ್ಯಮದ ಶಾಲೆಗಳು ಇಂದು ತಲುಪಿರುವ ದುರಂತ ಸ್ಥಿತಿ. ನಮ್ಮೆಲ್ಲರ ಪ್ರೀತಿಯ ಅಭಿಮಾನದ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮೇಲಿನ ಶಿಕ್ಷಣದ ಎಲ್ಲಾ ಅಡತಡೆಗಳನ್ನು ದಾಟಿ ತನ್ನ ಐಡೆಂಟಿಟಿಯನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಿಕೊಳ್ಳಲು ಹೊಸ ದಿಕ್ಕಿನಲ್ಲಿ ಚಿಂತನೆಗಳ ಅವಶ್ಯಕತೆ ಇದೆ. ಸರ್ಕಾರಗಳ ಅನೈತಿಕ, ಅವೈಜ್ಞಾನಿಕ ಚಿಂತನೆಗಳು, ಅಪಾರವಾದ ಆರ್ಥಿಕ ಹಾಗೂ ಬೌದ್ಧಿಕ ಭ್ರಷ್ಟತೆ, ನಮಗೆ ಯಾವುದು ಆರ್ಥಿಕವಾಗಿ ಲಾಭ ಗಳಿಸಿಕೊಡುತ್ತದೆಯೋ ಅದನ್ನು ಮಾತ್ರ ನಾವು ಹಿಂಬಾಲಿಸುತ್ತೇವೆ ಹೊರತಾಗಿ ಈ ನಮ್ಮ ನೆಲ ನಮ್ಮ ಭಾಷೆ ಎನ್ನುವ ಅಭಿಮಾನವೇ ಒಂದು ಅರ್ಥಹೀನ ಚಟುವಟಿಕೆ ಎನ್ನುವ ನಮ್ಮ ಮಧ್ಯಮ,ಮೇಲ್ಮಧ್ಯಮ ವರ್ಗಗಳ ಆತ್ಮವಂಚನೆ, ಹಾಗೂ ಈ ಅತ್ಮವಂಚನೆಯ ತಿರುಳೇ ನಮ್ಮ ಕೆಳ ಮಧ್ಯಮ, ಕೆಳ ವರ್ಗಗಳಿಗೆ ಮಾದರಿಯಾಗಿರುವುದು, ಹಾಗೂ ನಮ್ಮೆಲ್ಲರ ಮೇಲಿನ ನೈತಿಕ ಅಧಪತನವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಕನ್ನಡದಲ್ಲಿ ಶಿಕ್ಷಣ ಎನ್ನುವ ಈ ಅಸ್ಮಿತೆ ಹಾಗೂ ಐಡೆಂಟಿಟಿಯನ್ನು ಮತ್ತೆ ಬಿತ್ತಿ ಬೆಳೆಸಬಹುದು. ಇದಕ್ಕಾಗಿ ಕೃಷ್ಣಮೂರ್ತಿ ಬಿಳಿಗೆರೆರಂತಹವರ ನಿಜದ ಶಿಕ್ಷಣ ತಜ್ಞರ ಮನದಾಳದ ನೋವಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಾತುಗಳು ಮುಂದಿನ ದಿಕ್ಕಿಗೆ ದಾರಿದೀಪವಾಗಬಲ್ಲವು. ಈ ಮಾತುಗಳು ಪುಸ್ತಕದ, ಅಕಡೆಮಿಕ್ ಬದನೇಕಾಯಿಯಲ್ಲ, ಬದಲಿಗೆ ಸ್ವತಹ ಗ್ರಾಮೀಣ ಶಿಕ್ಷಕನಾಗಿ ಅನುಭವಿಸಿ ಕಣ್ಣಾರೆ ಕಂಡಿದ್ದರ ಫಲ. ಈ ಕಾಲಘಟ್ಟದಲ್ಲಿ ನಾವು ಅತ್ಯಂತ ಎಚ್ಚರಿಕೆಯ ನಡೆಗಳನ್ನು ಇಡಬೇಕಾಗುತ್ತದೆ. ನಮ್ಮ ಕನ್ನಡ ಮಾಧ್ಯಮದ ಶಾಲೆಗಳ ಪರವಾಗಿನ ಹೋರಾಟವನ್ನು ಮೇಲಿನ ಎಲ್ಲಾ ಅಡೆತಡೆಗಳನ್ನು ಗಮನದಲ್ಲಿರಿಸಿಕೊಂಡು ಅದನ್ನು ಆದ್ಯತೆಯ ಆಧಾರದ ಮೇಲೆ ಹಂತ ಹಂತವಾಗಿಯಾದರೂ ನಿವಾರಿಸಿಕೊಂಡು, ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಇದಕ್ಕಾಗಿ ನಾವೆಲ್ಲ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಲೇಬೇಕು ಮತ್ತು ಕಡೆಗೆ ಇದನ್ನು ತಾರ್ಕಿಕ ಅಂತ್ಯಕ್ಕೆ (ಅಂದರೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ)  ಮುಟ್ಟಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲೇಬೇಕು. ಇದಕ್ಕಾಗಿ ಅಪಾರ ಪರಿಜ್ಞಾನ ಹಾಗೂ ರೂಪುರೇಷೆ ಇಲ್ಲದಿದ್ದರೆ ನಮ್ಮ ಬೌದ್ಧಿಕ ಬಡಿವಾರಗಳಿಗೋಸ್ಕರ ಮತ್ತೊಮ್ಮೆ ಕಂಡವರ ಮಕ್ಕಳನ್ನು ಬಾವಿಗೆ ದೂಡಿದಂತಾಗುತ್ತದೆ. ಅಲ್ಲದೆ ಕೇವಲ ಚಿಂತನೆಗಳ ರೋಚಕತೆಗೋಸ್ಕರ, ಭಾಷೆಯ ಮೇಲಿನ ಭಾವುಕತೆಗೋಸ್ಕರ ನಾವು ನಡೆದುಕೊಂಡರೆ ಅರ್ವೆಲ್ ಹೇಳಿದಂತೆ “ನಾವು ಭಯಗ್ರಸ್ತ, ವಿಶ್ವಾಸ ಘಾತುಕ, ಶೋಷಣೆಯ, ದಿನ ಕಳೆದಂತೆ ಹೆಚ್ಚು ಹೆಚ್ಚು ಕ್ರೂರ ಜಗತ್ತನ್ನು ಸೃಷ್ಟಿ ಮಾಡುತ್ತಿದ್ದೇವೆ” ಎಂದು ಆಗುತ್ತದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 5)


– ಡಾ.ಎನ್.ಜಗದೀಶ ಕೊಪ್ಪ 


ಕಾರ್ಬೆಟ್‌ ಪಾಲಿಗೆ ಶಾಲೆಗಿಂತ ಹೆಚ್ಚಾಗಿ ಅರಣ್ಯವೇ ಪಾಠಶಾಲೆಯಾಯಿತು. ಬಿಡುವಿನ ವೇಳೆಯಲ್ಲಿ ಹಾಗೂ ಶಾಲಾ ರಜಾದಿಗಳಲ್ಲಿ ತಮ್ಮ ಮನೆಯ ಸಾಕು ನಾಯಿಗಳ ಜೊತೆ ರೈಫಲ್ ಹಿಡಿದು ಕಾರ್ಬೆಟ್‌ ಕಲದೊಂಗಿ ಹಾಗೂ ನೈನಿತಾಲ್ ನಡುವಿನ ಅರಣ್ಯ ಪ್ರದೇಶಕ್ಕೆ ಶಿಖಾರಿಗೆ ಹೊರಟು ಬಿಡುತಿದ್ದ. ತೀರಾ ಅರಣ್ಯದ ಮಧ್ಯ ಭಾಗಕ್ಕೆ ಕಾರ್ಬೆಟ್‌ ಹೋಗುತ್ತಿರಲಿಲ್ಲ. ಬದಲಾಗಿ ಕಲದೊಂಗಿಯಿಂದ ನೈನಿತಾಲ್‌ಗೆ ಅಂಚೆಯವರು, ಪಾದಯಾತ್ರಿಗಳು, ಯಾತ್ರಿಕರು ತೆರುಳುತಿದ್ದ ಹಾದಿಯ ಪಕ್ಕದಲ್ಲಿ ಶಿಖಾರಿಯಲ್ಲಿ ತೊಡಗಿರುತಿದ್ದ. ಈ ರಸ್ತೆಯ ಮಧ್ಯೆ ಕೊಟಾ ಎಂಬ ಹಳ್ಳಿ ಇದ್ದುದರಿಂದ ಉರುವುಲು ಆಯ್ದುಕೊಳ್ಳುವುದಕ್ಕೆ ಮಹಿಳೆಯರು ಬರುತಿದ್ದರು. ಜೊತೆಗೆ ಅವರಿಗೆ ಬೆಂಗಾಲಾಗಿ ಹಳ್ಳಿಯ ಗಂಡಸರು ತಮ್ಮ ಜಾನುವಾರುಗಳನ್ನ ಮೇಯಿಸುತ್ತಾ ಅಲ್ಲೇ ಇರುತಿದ್ದರು. ಸಾಮಾನ್ಯವಾಗಿ ಕಾಡಿನ ಅಪಾಯಕಾರಿ ಪ್ರಾಣಿಗಳು ಮನುಷ್ಯರು ಇರುವ ಕಡೆ ಸುಳಿಯುತ್ತಿರಲಿಲ್ಲ. ಇದರ ಜೊತೆಗೆ ಕಾರ್ಬೆಟ್‌ ಪ್ರಾಣಿಗಳನ್ನು ನಾವು ಉದ್ರೇಕಿಸದ ಹೊರತು ಅವು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಎಂಬುದನ್ನು ಅನುಭವದಿಂದ ಮನವರಿಕೆ ಮಾಡಿಕೊಂಡಿದ್ದ.

ನೈನಿತಾಲ್ ಪರ್ವತ ಪ್ರದೇಶಕ್ಕೆ ಹೊಂದಿಕೊಂಡಿದ್ದ ಆ ಅರಣ್ಯದಲ್ಲಿ ಕೆಲೆವೆಡೆ 50 ಅಡಿ ಎತ್ತರದ ಮರಗಳಿದ್ದರೆ, ಮತ್ತೆ ಕೆಲವೆಡೆ ಸಮತಟ್ಟಾದ ಪ್ರದೇಶವಿದ್ದು 8ರಿಂದ 10 ಅಡಿ ಎತ್ತರ ಬೆಳೆಯುತಿದ್ದ ಹಲ್ಲುಗಾವಲಿನ ಪ್ರದೇಶವಿರುತ್ತಿತ್ತು. ಇಲ್ಲಿ ಬಗೆ ಬಗೆಯ ಪಕ್ಷಿಗಳು ಇರುತ್ತಿದ್ದರಿಂದ ಈ ಪ್ರದೇಶ ಕಾರ್ಬೆಟ್‌ಗೆ ಅಚ್ಚು ಮೆಚ್ಚಿನ ಬೇಟೆಯ ತಾಣವಾಗಿತ್ತು. ಮಳೆಗಾಲದಲ್ಲಿ ಅನೇಕ ಬಗೆಯ ಕಾಡುಕೋಳಿ ಮತ್ತು ಹುಂಜಗಳು ಈ ಸ್ಥಳಕ್ಕೆ ಬರುತ್ತಿದ್ದರಿಂದ ಅವುಗಳನ್ನು ಬೇಟೆಯಾಡುವುದು ಅವನ ಹವ್ಯಾಸವಾಗಿತ್ತು. ಪೊದೆಯೊಳಕ್ಕೆ ಹೊಕ್ಕ ಯಾವುದೇ ಪಕ್ಷಿ ಅಥವಾ ಪ್ರಾಣಿಯ ಮೇಲೆ ಕಾರ್ಬೆಟ್‌ ಗುಂಡು ಹಾರಿಸುತ್ತಿರಲಿಲ್ಲ. ಏಕೆಂದರೆ, ಪೊದೆಯ ಗಿಡಗಳನ್ನು ಉರುವಲಿಗಾಗಿ ಕಡಿಯುತ್ತಾ ಮಹಿಳೆಯರು ಆ ಜಾಗದಲ್ಲಿರುವುದನ್ನ ಮನಗಂಡಿದ್ದ ಅವನು ಬಂದೂಕಿನಿಂದ ಗುಂಡು ಹಾರಿಸುವಾಗ ಎಚ್ಚರಿಕೆ ವಹಿಸುತಿದ್ದ. ಬೇಟೆಯ ಸಂದರ್ಭದಲ್ಲಿ ಸ್ಥಳೀಯರ ಜೊತೆ ಸದಾ ಒಡನಾಡುತ್ತಿದ್ದರಿಂದ ಅವರ ಭಾಷೆ, ಸಂಸ್ಕೃತಿ ಎಲ್ಲವನ್ನು ಅರಿಯತೊಡಗಿದ.

ಪಕ್ಷಿ ಮತ್ತು ಮೊಲಗಳಂತಹ ಚಿಕ್ಕ ಪ್ರಾಣಿಗಳ ಬೇಟಿಯನ್ನು ಹೊರತುಪಡಿಸಿ, ಎಂದೂ ದೊಡ್ಡ ಪ್ರಾಣಿಗಳನ್ನು ಬೇಟಿಯಾಡಿ ಅನುಭವವಿಲ್ಲದ ಕಾರ್ಬೆಟ್‌ ತನ್ನ ಹನ್ನೊಂದನೇ ವಯಸ್ಸಿಗೆ ಪ್ರಥಮ ಭಾರಿಗೆ ಏಕಾಂಗಿಯಾಗಿ ತೋಳವೊಂದನ್ನು ಬೇಟೆಯಾಡಿದ. ಅದೊಂದು ದಿನ ನವಿಲು ಅಥವಾ ಕಾಡುಕೋಳಿಗಳನ್ನು ಬೇಟೆಯಾಡಿ ಬರಲು ಹೋದ ಕಾರ್ಬೆಟ್‌ ಕಾಡಿನ ನವಿಲು, ಹುಂಜ, ಪಕ್ಷಿಗಳ ವಿಚಿತ್ರ ಶಬ್ಧ ಅಪಾಯದ ಸೂಚನೆಗಳನ್ನು ಕೊಡುತ್ತಿರುವುದನ್ನು ಅರಿತು ತಾನಿದ್ದ ಕಣಿವೆ ಪ್ರದೇಶದ ಬಳಿ ಬಂದು ಕಲ್ಲಿನ ಬಂಡೆಗೆ ಒರಗಿ ಹೆಗಲಿಗೆ ಬಂದೂಕು ಇಟ್ಟು ಅಪಾಯ ಎದುರಿಸಲು ಸಿದ್ಧನಾಗಿ ಕುಳಿತ. ತನ್ನ ಹಿಂಬದಿಗೆ ಬೃಹತ್ ಬಂಡೆ ಇದ್ದು ಹಿಂಬದಿಯಿಂದ ಪ್ರಾಣಿ ದಾಳಿ ಮಾಡುವ ಸಾಧ್ಯತೆ ಇಲ್ಲದ್ದರಿಂದ ಅವನ ಗಮನವೆಲ್ಲಾ ತನ್ನ ಮುಂದೆಯೇ ಕೇಂದ್ರೀಕೃತವಾಗಿತ್ತು. ಕಡೆಗೂ ಅವನ ನಿರಿಕ್ಷೆಯಂತೆ ಕಣಿವೆಯೊಂದರ ಪೊದೆಯಿಂದ ಘೀಳಿಡುತ್ತಾ ಹೊರಬಂದ ತೋಳ ಒಂದು ಕ್ಷಣ ಕಾರ್ಬೆಟ್‌ನನ್ನು ಗಮನಿಸಿ, ಈತ ನನ್ನನ್ನು ಹಿಂಬಾಲಿಸುತ್ತಿಲ್ಲ ಎಂಬುದನ್ನ ಖಾತರಿಪಡಿಸಿಕೊಂಡು ಹೊರಡಲು ಅಣಿಯಾಗುತ್ತಿದ್ದಂತೆ ಕಾರ್ಬೆಟ್‌ ಅದರ ಎದೆಯನ್ನ ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ. ಬಂದೂಕಿನಿಂದ ಗುಂಡು ಸಿಡಿದ ತಕ್ಷಣ ಕಪ್ಪು ಹೊಗೆ ಆವರಿಸಿಕೊಂಡಿದ್ದರಿಂದ ಗುಂಡು ತೋಳಕ್ಕೆ ತಾಗಿತೊ, ಅಥವಾ ಇಲ್ಲವೊ ಎಂಬುದು ಗೊತ್ತಾಗಲಿಲ್ಲ. ಆ ಕಾಲದಲ್ಲಿ ಈಗಿನಂತೆ ಸುಧಾರಿತ ತೋಟಗಳು ಬಳಕೆಯಲ್ಲಿ ಇರಲಿಲ್ಲ. ಕಪ್ಪು ಬಣ್ಣದ ಗನ್ ಪೌಡರ್ ಅನ್ನು ಗೋಲಿ ಗಾತ್ರದ ಉಂಡೆಗಳನ್ನಾಗಿ ಮಾಡಿ ಬಳಸಲಾಗುತ್ತಿತ್ತು. ಗುಂಡು ಹಾರಿದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ತೋಳಕ್ಕೆ ಗೊಂಡು ತಾಗಿರುವುದು ಅಲ್ಲಿ ಬಿದ್ದಿದ್ದ ರಕ್ತದ ಕಲೆಗಳಿಂದ ಖಾತರಿಯಾಯಿತು. ಆದರೆ ಯಾವ ಸ್ವರೂಪದ ಗಾಯವಾಗಿದೆ ಎಂಬುದು ಕಾರ್ಬೆಟ್‌ಗೆ ತಿಳಿಯದಾಯ್ತು. ಏಕೆಂದರೆ, ಅದು ಅವನ ಮೊದಲ ಬೇಟೆಯಾಗಿತ್ತು. ಮುಂದಿನ ದಿನಗಳಲ್ಲಿ ಅವನು ಎಷ್ಟೊಂದು ನಿಷ್ಣಾತನಾದನೆಂದರೆ, ರಕ್ತದ ಕಲೆ, ಅದರ ಒಣಗಿರುವಿಕೆ, ಅಥವಾ ಹಸಿಯಾಗಿರುವ ರೀತಿಯ ಮೇಲೆ ಪ್ರಾಣಿಗಳ ಭವಿಷ್ಯವನ್ನು ಹೇಳುತ್ತಿದ್ದ.

ರಕ್ತದ ಕಲೆಯ ಜಾಡು ಹಿಡಿದು ಸಮಾರು ನೂರು ಅಡಿ ಹೋಗಿ ನೋಡಿದಾಗ, ಪೊದೆಯೊಂದರ ಬಳಿ ಅರೆ ಜೀವವಾಗಿ ಒದ್ದಾಡುತ್ತಾ ಬಿದ್ದಿದ್ದ ತೋಳವನ್ನು ಕಂಡಕೂಡಲೇ ಅದರ ತಲೆಗೆ ಗುಂಡು ಹಾರಿಸಿ.ಕೊಂದು ಹಾಕಿದ. ಕಾರ್ಬೆಟ್‌ ಬೇಟೆಯಾಡಿದ ಸಮಯ ಇಳಿ ಸಂಜೆಯಾದ್ದರಿಂದ ಸ್ಥಳೀಯ ಗ್ರಾಮಸ್ಥರನ್ನು ಕರೆಸಿ ಮನೆಗೆ ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅದರ ಕಳೇಬರವನ್ನ ಪೊದೆಯಲ್ಲಿ ಸೊಪ್ಪುಗಳಿಂದ ಮುಚ್ಚಿ ಹಾಕಿದ. ತನ್ನ ಶಿಖಾರಿ ಸಾಹಸಕ್ಕೆ ಸಾಕ್ಷಿಯಾಗಿ ಇರಲಿ ಎಂಬಂತೆ ಅದರ ಬಾಲವನ್ನ ಕತ್ತರಿಸಿಕೊಂಡು, ಮೂರು ಮೈಲು ದೂರವಿದ್ದ ನೈನಿತಾಲ್ ಮನೆಗೆ ಓಡಿ ಬಂದು ತನ್ನ ತಾಯಿ, ಮತ್ತು ಸಹೋದರಿ ಮ್ಯಾಗಿಗೆ ಸುದ್ಧಿ ತಿಳಿಸಿದ. ಬಾಲಕ ಕಾರ್ಬೆಟ್‌ನ ಸಾಹಸಕ್ಕೆ ಖುಷಿಗೊಂಡ ಮ್ಯಾಗಿ ತನ್ನ ಮನೆಯ ಸೇವಕರನ್ನು ಕಳಿಸಿ ತೋಳದ ಶವವನ್ನು ಎತ್ತಿ ತರಿಸಿ ಅದರ ಚರ್ಮವನ್ನ ಸುಲಿಸಿ, ಕಾರ್ಬೆಟ್‌ನ ಮೊದಲ ಬೇಟೆಯ ನೆನಪಿಗಾಗಿ ತಮ್ಮ ಮನೆಯ ಗೋಡೆಗೆ ನೇತು ಹಾಕಿದಳು. ಬಹಳ ವರ್ಷ ಗೋಡೆಯಲ್ಲಿದ್ದ ತೋಳದ ಚರ್ಮವನ್ನು ಮುಂದೆ ಕಾರ್ಬೆಟ್‌ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಲ್ಲಿಸಿದಾಗ ಮನೆಯ ಗೋಡೆಯಿಂದ ತೆಗೆಸಿಹಾಕಿದ.

ಕಾರ್ಬೆಟ್‌ನ ಈ ಸಾಹಸ ಅವನಿಗೊಬ್ಬ ಕಾಡಿನ ಗುರು ಹಾಗೂ ಮಾರ್ಗದರ್ಶಕನೊಬ್ಬನನ್ನು ದೊರಕಿಸಿಕೊಟ್ಟಿತು. ಆತನೆ ಕುನ್ವರ್ ಸಿಂಗ್. ಕಾರ್ಬೆಟ್‌ ತನ್ನ ಬಾಲ್ಯದಿಂದ ಸ್ಥಳೀಯರಾದ ಮನೆಯ ಸೇವಕರು, ಗ್ರಾಮಗಳ ಜನತೆಯ ಜೊತೆ ಮತ್ತು ಅವರ ಭಾಷೆ, ಸಂಸ್ಕೃತಿ ಜೊತೆ ಒಡನಾಡಿದ್ದರಿಂದ ಕುನ್ವರ್ ಸಿಂಗ್ ಜೊತೆಗಿನ ಸ್ನೇಹ ಅವನಿಗೆ ಕಷ್ಟವಾಗಲಿಲ್ಲ.

ಕುನ್ವರ್ ಸಿಂಗ್ ಠಾಕೂರ್ ಜಾತಿಯವನಾಗಿದ್ದು ಸ್ಥಳೀಯ ಚಾಂದಿನಿ ಚೌಕ್ ಎಂಬ ಹಳ್ಳಿಯ ಮುಖಂಡನಾಗಿದ್ದ. ಆತನಿಗೂ ಮತ್ತು ಕಾರ್ಬೆಟ್‌ನ ಅಣ್ಣ ಟಾಮ್‌ಗೂ ಮೊದಲಿನಿಂದಲೂ ಶಿಖಾರಿ ಕುರಿತಂತೆ ಸ್ನೇಹವಿತ್ತು. ಕುನ್ವರ್ ಸಿಂಗ್‌ಗೆ ಬಾಲ್ಯದಿಂದಲೂ ಕಾಡಿನ ಶಿಖಾರಿ ಎಂದರೆ ಹುಚ್ಚು. ಆದರೆ ಅಂದಿನ ನಿಯಾಮಾವಳಿಗಳ ಪ್ರಕಾರ ಬ್ರಿಟೀಷ್ ಅಧಿಕಾರಿಗಳು, ಯುರೊಪಿಯನ್ನರು, ಮತ್ತು ಸಂಸ್ಥಾನಗಳ ರಾಜ ಮಹಾರಾಜರು ಇವರುಗಳನ್ನು ಹೊರತುಪಡಿಸಿದರೆ, ಜನಸಾಮಾನ್ಯರಿಗೆ ಅರಣ್ಯಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಅವಕಾಶವಿರಲಿಲ್ಲ. ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಅನೇಕ ರಾಜರುಗಳು ತಮ್ಮ ಬೇಟೆಯ ಖಯಾಲಿಗಾಗಿ ಅನೇಕ ಅರಣ್ಯಗಳನ್ನು ಮೀಸಲಾಗಿ ಇಟ್ಟುಕೊಳ್ಳುತಿದ್ದರು. ಈ ಕಾರಣಕ್ಕಾಗಿ ಕುನ್ವರ್ ಸಿಂಗ್ ಕಾರ್ಬೆಟ್‌ ಕುಟುಂಬದೊಂದಿಗೆ ಸಲಿಗೆ ಬೆಳೆಸಿಕೊಂಡು ತನ್ನ ಶಿಖಾರಿಯ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದ. ಎಷ್ಟೋಬಾರಿ ಒಬ್ಬನೆ ಕದ್ದು ಬೇಟೆಯಾಡಿದ ಪ್ರಸಂಗವೂ ಉಂಟು. ಹಾಗಾಗಿ ಆತನನ್ನು ಸ್ಥಳೀಯರು ಕಳ್ಳ ಬೇಟೆಗಾರ ಎಂದೂ ಸಹ ಕರೆಯುತ್ತಿದ್ದರು.

ಕಾರ್ಬೆಟ್‌ ಏಕಾಂಗಿಯಾಗಿ ತೋಳವನ್ನು ಬೇಟೆಯಾಡಿದ ನಂತರ ಅವನನ್ನು ಒಬ್ಬ ನುರಿತ ಶಿಖಾರಿಗಾರ ಎಂದು ಒಪ್ಪಿಕೊಂಡ ಕುನ್ವರ್ ಕಾರ್ಬೆಟ್‌ ಜೊತೆ ಅರಣ್ಯದಲ್ಲಿ ಅಲೆದಾಡಲು ಶುರುವಿಟ್ಟುಕೊಂಡ. ಕಾರ್ಬೆಟ್‌ ಕುನ್ವರ್ ಸಿಂಗ್‌ನಿಂದ ಬೇಟೆಯ ಕುರಿತಂತೆ ಅನೇಕ ಸಂಗತಿಗಳನ್ನು ಸಹ ಕಲಿತ. ಇದರಲ್ಲಿ ಮೊದಲ ಪಾಠವೆಂದರೆ, ಅಪಾಯಕಾರಿ ಪ್ರಾಣಿಗಳು ಎದುರಾದಾಗ ಜೀವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ, ಹತ್ತಿರದ ಮರವೇರಿ ಕುಳಿತುಕೊಳ್ಳುವುದು. ಹುಲಿ ಹಾಗೂ ಕೆಲವು ಜಾತಿಯ ಚಿರತೆಗಳು ಬಿಟ್ಟರೆ, ಉಳಿದ ಪ್ರಾಣಿಗಳು ಮರವನ್ನು ಏರಲಾರವು. ಮರವೇರಿ ಕುಳಿತ ವ್ಯಕ್ತಿಗಳನ್ನು ಹುಲಿ, ಅಥವಾ ಚಿರತೆ ಬೆನ್ನಟ್ಟುವ ಸಾಹಸವನ್ನು ಮಾಡಲಾರವು ಎಂಬುದನ್ನ ಕಾರ್ಬೆಟ್‌ ಕುನ್ವರ್ ಮೂಲಕ ಕಲಿತ. ಜೊತೆಗೆ ಕಾಡಿನಲ್ಲಿ ನಾವು ಸಂಚರಿಸುವಾಗ ವಹಿಸಬೇಕಾದ ಎಚ್ಚರಿಕೆ, ಬೇಟೆಯ ಸಂದರ್ಭದಲ್ಲಿ ನಾವು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಳ. ಇವುಗಳ ಬಗ್ಗೆ ಅರಿತ. ಅಕಸ್ಮಾತ್ ಬೇಟೆ ಗುರಿತಪ್ಪಿ, ಅಪಾಯ ಎದುರಾದ ಸಂದರ್ಭದಲ್ಲಿ ಪ್ರಾಣಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕುನ್ವರ್ ಕಾರ್ಬೆಟ್‌ಗೆ ಮನವರಿಕೆ ಮಾಡಿಕೊಟ್ಟ. ಯಾವುದೇ ಕಾರಣಕ್ಕೂ ಕಣಿವೆ ಅಥವಾ ಹಳ್ಳದಂತಹ ಪ್ರದೇಶಗಳಲ್ಲಿ ನಾವು ಕೆಳಗೆ (ತಗ್ಗು ಪ್ರದೇಶದಲ್ಲಿ) ಕುಳಿತು ಹೊಂಚು ಹಾಕಿ ಮೇಲಿಂದ ಬರುವ ಪ್ರಾಣಿಗಳ ಮೇಲೆ ಗುಂಡು ಹಾರಿಸಬಾರದು. ನಾವು ಬೇಟೆಗೆ ಕುಳಿತ ಸ್ಥಳದಲ್ಲಿ ನಮ್ಮ ಹಿಂಬದಿಗೆ ದೊಡ್ಡದಾದ ಮರ ಇಲ್ಲವೆ, ಕಲ್ಲಿನ ಬಂಡೆ ಆಸರೆಯಾಗಿರಬೇಕು ಇದರಿಂದ ಅಪಾಯಕಾರಿ ಪ್ರಾಣಿಗಳಾದ ಹುಲಿ ಚಿರತೆ ಇವುಗಳು ಹಿಂದಿನಿಂದ ನಮ್ಮ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಿಕೊಳ್ಳಬಹುದು. ಇಂತಹ ಶಿಖಾರಿಯ ಅತ್ಯಮೂಲ್ಯ ಪಾಠಗಳನ್ನು ಕಾರ್ಬೆಟ್‌ ಕುನ್ವರ್ಸಿಂಗ್ ಮೂಲಕ ಕಲಿತ. ಹಾಗಾಗಿ ಮುಂದೆ ಬಹಳ ವರ್ಷಗಳ ಕಾಲ ಕುನ್ವರ್ ಸಿಂಗ್ ಕಾರ್ಬೆಟ್‌ಗೆ ಬೇಟೆಯ ಸಂಗಾತಿಯಾಗಿದ್ದ.

ಕಾರ್ಬೆಟ್‌ಗೆ ಅರಣ್ಯ ಕುರಿತಂತೆ ಇದ್ದ ಏಕೈಕ ಭಯವೆಂದರೆ, ಕಾಡ್ಗಿಚ್ಚು. ಬೇಸಿಗೆಯಲ್ಲಿ ಒಣಗುತಿದ್ದ ದಟ್ಟವಾದ ಹುಲ್ಲುಗಾವಲು, ಸಣ್ಣ ಗಿಡಗಳು, ಬಿದಿರು ಮರಗಳ ಘರ್ಷಣೆ ಮತ್ತು ತಿಕ್ಕಾಟದಿಂದ ಉಂಟಾಗುತಿದ್ದ ಬೆಂಕಿಯ ಕಿಡಿಗಳಿಂದ ಹೊತ್ತಿಕೊಂಡು ಉರಿಯುವುದು ಸಾಮಾನ್ಯವಾಗಿತ್ತು. ಗಾಳಿ ಬೀಸಿದ ಕಡೆಯೆಲ್ಲಾ ಹಬ್ಬುತ್ತಿದ್ದ ಈ ಕಾಡ್ಗಿಚ್ಚು ನಿರಂತರ ತಿಂಗಳುಗಟ್ಟಲೆ ಉರಿದು ಒಮ್ಮೊಮ್ಮೆ ಇಡೀ ಅರಣ್ಯವನ್ನು ಆಪೋಷನ ತೆಗೆದುಕೊಳ್ಳುತ್ತಿತ್ತು. ಇಂತಹ ವೇಳೆ ಕಾಡಿನಲ್ಲಿ ಆವರಿಸಿಕೊಳ್ಳುತಿದ್ದ ದಟ್ಟಹೊಗೆ ಅನೇಕ ಪ್ರಾಣಿಗಳ ಜೀವಕ್ಕೆ ಎರವಾಗುತಿತ್ತು. ಯಾವ ವೇಳೆಯಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ತನ್ನ ಬದುಕಿನ ಕಡೆಯವರೆಗೂ ಕಾರ್ಬೆಟ್‌ ಕಾಡ್ಗಿಚ್ಚಿನ ಬಗ್ಗೆ ಹೆದುರುತ್ತಿದ್ದ ಹಾಗೂ ಎಚ್ಚರಿಕೆ ವಹಿಸುತ್ತಿದ್ದ. ಇದೊಂದನ್ನ ಹೊರತು ಪಡಿಸಿದರೆ, ತನ್ನ ವೈಯಕ್ತಿಕ ಅನುಭವದ ಮೇಲೆ ಕಾಡಿನ ಲೋಕದ ಎಲ್ಲಾ ವ್ಯವಹಾರಗಳನ್ನು ಅರ್ಥಮಾಡಿಕೊಂಡಿದ್ದ. ಪಕ್ಷಿ ಮತ್ತು ಮಂಗಗಳ ಧ್ವನಿಯನ್ನು ಅವುಗಳಂತೆಯೇ ಅನುಕರಣೆ ಮಾಡುವುದನ್ನು ಕಲಿತ.

ನಿಸರ್ಗದ ಬಗ್ಗೆ, ಅರಣ್ಯದ ಬಗ್ಗೆ ಇಷ್ಟೆಲ್ಲಾ ಆಸಕ್ತಿ ಇದ್ದರೂ ಕೂಡ ಕಾರ್ಬೆಟ್‌ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ತುಂಬಾ ಬುದ್ಧಿವಂತ, ಪ್ರತಿಭಾವಂತ ವಿದ್ಯಾರ್ಥಿ ಅಲ್ಲದಿದ್ದರೂ, ಉತ್ತಮ ಅಂಕಗಳನ್ನು ತೆಗೆದುಕೊಂಡು ಪ್ರತಿ ತರಗತಿಯನ್ನು ಪಾಸಾಗುವಷ್ಟು ಬುದ್ಧಿಮತ್ತೆ ಅವನಲ್ಲಿತ್ತು. ನೈನಿತಾಲ್‌ನಲ್ಲಿ ಆಂಗ್ಲರೇ ನಡೆಸುತಿದ್ದ ಓಕ್ ಎಂಬ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿದ ಅವನು ಮುಂದೆ ಡೈಯೊಸೆಸನ್ ಬಾಯ್ಸ್ ಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ. ಶಾಲೆಯಲ್ಲಿದ್ದ ಸ್ಕೌಟ್ ತಂಡಕ್ಕೆ ಸೇರ್ಪಡೆಯಾಗಿ ಅತ್ಯುತ್ತಮ ಕೆಡೆಟ್ ಎಂಬ ಗೌರವಕ್ಕೆ ಕಾರ್ಬೆಟ್‌ ಪಾತ್ರನಾಗಿದ್ದ.

ಕಾರ್ಬೆಟ್‌ ವಯಸ್ಸಿಗೆ ಬರುತ್ತಿದ್ದಂತೆ ತನ್ನ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದ. ಅವನ ಮುಂದೆ ಶಿಕ್ಷಣ ಕುರಿತಂತೆ ಅನೇಕ ಅವಕಾಶಗಳಿದ್ದವು. ತನ್ನ ಕುಟುಂಬದ ವೃತ್ತಿಯಾಗಿ ಬಂದಿದ್ದ ವೈದ್ಯವೃತ್ತಿಗೆ, ಅಥವಾ ಇಂಜಿನಿಯರ್ ವೃತ್ತಿಗೆ ಹೋಗುವ ಅವಕಾಶಗಳಿದ್ದವು. ಆದರೆ ಉನ್ನತ ಶಿಕ್ಷಣಕ್ಕೆ ಬೇಕಾಗುವಷ್ಟು ಹಣವನ್ನು ಪೂರೈಸುವ ಸ್ಥಿತಿಯಲ್ಲಿ ಅವನ ಕುಟುಂಬ ಇರಲಿಲ್ಲ. ಅವನ ಸಹೋದರರೆಲ್ಲರೂ ತಮ್ಮ ವಿವಾಹವಾದ ನಂತರ ಹೊರ ಹೋಗಿದ್ದರು. ಕಾರ್ಬೆಟ್‌ನ ತಾಯಿಗೆ ಬರುತ್ತಿದ್ದ ತಂದೆಯ ಪಿಂಚಣಿ ಹಣ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಿಂದ ಬರುತ್ತಿದ್ದ ಅಲ್ಪ ಹಣದಿಂದ ಕುಟುಂಬದ ನಿರ್ವಹಣೆ ಸಾಗಬೇಕಿತ್ತು. ಮನೆಯಲ್ಲಿ ಕಾರ್ಬೆಟ್‌, ಅವನ ಚಿಕ್ಕ ತಮ್ಮ ಆರ್ಚರ್, ಅಕ್ಕ ಮ್ಯಾಗಿ, ವಿಧವೆಯಾಗಿ ಅಣ್ಣನ ಮನೆ ಸೇರಿದ್ದ ಕಾರ್ಬೆಟ್‌ನ ಸೋದರತ್ತೆ ಮತ್ತು ಆಕೆಯ ಇಬ್ಬರು ಸಣ್ಣ ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ನಡೆಯಬೇಕಾಗಿತ್ತು.

ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತ ಕುಟುಂಬವಲ್ಲದ ಬಗ್ಗೆ ಅರಿವಿದ್ದ ಕಾರ್ಬೆಟ್‌ ತನ್ನ 17ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಲ್ಲಿಸಿ ಉದ್ಯೋಗದ ಮೂಲಕ ತನ್ನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದ.್

ಆ ಕಾಲದಲ್ಲಿ ಏಳನೇ ತರಗತಿ ಪಾಸಾದವರಿಗೆ ಶಿಕ್ಷಕ ಹುದ್ದೆ, ಹತ್ತನೇ ತರಗತಿ ಪಾಸಾದವರಿಗೆ ಅಮಲ್ದಾರ್ ಹುದ್ದೆ ಸಿಗುತ್ತಿತ್ತು. ಅದೂ ಬ್ರಿಟೀಷ್ ಕುಟುಂಬದ ಸದಸ್ಯನಾಗಿದ್ದ ಕಾರ್ಬೆಟ್‌ ಮುಂಬೈ, ಕೊಲ್ಕ್ಲತ್ತ, ದೆಹಲಿ ಮುಂತಾದ ಕಡೆ ಇದ್ದ ಬ್ರಿಟೀಷರ ಕಚೇರಿಗಳಲ್ಲಿ, ಇಲ್ಲವೇ ಸೈನ್ಯದಲ್ಲಿ ಕೆಲಸಕ್ಕೆ ಸೇರಬಹುದಾಗಿತ್ತು. ಕಾರ್ಬೆಟ್‌ ಇವೆಲ್ಲವನ್ನು ಬದಿಗೊತ್ತಿ ತಿಂಗಳಿಗೆ 150 ರೂಪಾಯಿ ಸಂಬಳದ ರೈಲ್ವೆ ಉದ್ಯೋಗಕ್ಕೆ ಸೇರ್ಪಡೆಯಾದ.

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3

ನನ್ನ ಕುತೂಹಲವಿಷ್ಟೇ: ದಲಿತ ಚಳವಳಿ ಕೂಡ ರೈತಸಂಘದಷ್ಟೇ ಬಲಿಷ್ಠವಾಗಿತ್ತಾದರೂ, ರೈತಸಂಘದ ಭಾಷೆ ಅಥವಾ ಧೋರಣೆ ದಲಿತರಿಗೇಕೆ ಸಾಧ್ಯವಾಗಲಿಲ್ಲ? ಯಾಕೆಂದರೆ ರೈತಸಂಘಕ್ಕೆ ದಲಿತರಿಗಿಲ್ಲದ ಅನುಕೂಲವಿತ್ತು. ರೈತಸಂಘದ ತಿರುಳು, ಪರಂಪರಾಗತವಾಗಿ ಕರ್ನಾಟಕದಲ್ಲಿ ರಾಜಕೀಯ ಅಧಿಕಾರದ ಗುತ್ತಿಗೆ ಹಿಡಿದಿದ್ದ ಒಕ್ಕಲಿಗ, ಲಿಂಗಾಯಿತ ಸಮೂಹದ್ದೇ ಆಗಿತ್ತು. ಅರಸು ಬರುವವರೆಗೆ ಕರ್ನಾಟಕವನ್ನು ಮುಖ್ಯಮಂತ್ರಿಗಳಾಗಿ ಆಳಿದವರು ಲಿಂಗಾಯಿತರು, ಒಕ್ಕಲಿಗರು ಮಾತ್ರ. ಹಾವನೂರ್ ವರದಿಯಿಂದಾಗಿ ಹಿಂದುಳಿದ ವರ್ಗಗಳಿಗೆ ವ್ಯವಸ್ಥಿತ ಮೀಸಲಾತಿ ಸಿಕ್ಕುವವರೆಗೆ ಕಾಂಗ್ರೆಸ್ಸಿನಲ್ಲೂ ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರಂಸಿಂಗ್ ರಂಥ ‘ಇತರರು’ ಮುಖ್ಯಮಂತ್ರಿ ಪದವಿ ಏರುವುದು ಸಾಧ್ಯವಾಗಿರಲಿಲ್ಲ!… ಹಾಗಾಗಿಯೇ ರೈತಸಂಘವನ್ನು ರೂಪಿಸಿದ್ದ ಆ ಜಾತಿ ಸಮುದಾಯಗಳಿಗೆ ಅಧಿಕಾರಯುಕ್ತ ಧೋರಣೆ ಸಹಜವಾಗಿಯೇ ಮೈಗೂಡಿತ್ತು ಎಂದರೆ, ಅದು ಚಳವಳಿಯ ನೈತಿಕ ಶಕ್ತಿಯನ್ನು, ಅದರ ಹಿಂದಿನ ಬೆವರನ್ನು ಅಲ್ಲಗಳೆದಂತೇನಲ್ಲ.

ಈ ಮೂಲಪ್ರವೃತ್ತಿ ರೈತ ಚಳವಳಿಯ ಉತ್ತುಂಗ ಕಾಲದಲ್ಲೂ ಮರೆಯಾಗಿರಲಿಲ್ಲ. 82-83ರ ಸುಮಾರಿನಲ್ಲಿ ಹಾಸನ ಜಿಲ್ಲೆಯಲ್ಲಿ ರೈತಸಂಘ ಕೆಲ ಕಾಲ ‘ಜನತಾ ನ್ಯಾಯಾಲಯ’ಗಳ ಪ್ರಯೋಗಕ್ಕೆ ಕೈ ಹಾಕಿತ್ತು. ಅಂದರೆ ಸ್ಥಳೀಯ ವ್ಯಾಜ್ಯಗಳಿಗೆ ಪೊಲೀಸ್ ಠಾಣೆ, ಕೋರ್ಟು ಕಚೇರಿ ಮೆಟ್ಟಿಲು ಹತ್ತದೆ ಊರ ಪ್ರಮುಖರೇ ಬಗೆಹರಿಸಿಕೊಳ್ಳುವ ಕ್ರಮ. ರೈತ ಚಳವಳಿ ಬಗ್ಗೆ ಅಪಾರ ಸಹಾನುಭೂತಿಯಿದ್ದ ನನ್ನ ಗೆಳೆಯರು ಈ ಪ್ರಯೋಗ ಕುರಿತು ಆಗ ರೋಮಾಂಚನಗೊಂಡು ಮಾಡುತ್ತಿದ್ದ ಬಣ್ಣನೆ ನನಗೀಗಲೂ ನೆನಪಿದೆ. ನಿಜ. ಸರ್ಕಾರದ ಮೇಲಿನ ಅವಲಂಬನೆ ಹಂತ ಹಂತವಾಗಿ ತಗ್ಗುತ್ತ ಬಂದು ಕ್ರಮೇಣ ಸ್ವಯಮಾಧಿಕಾರ ಸಾಧ್ಯವಾಗಬೇಕು ಎಂಬುದು ಉನ್ನತ ಆದರ್ಶವೇನೋ ಹೌದು; ಮತ್ತು ಚಳವಳಿಗಳ ಅಂತಿಮ ಗುರಿಯೂ ಅದೇ. ಸರಿ. ಆದರೆ ಹಳ್ಳಿಗಾಡಿನ ಅಧಿಕಾರದ ಹಂದರದಲ್ಲಿ ಯಾವ ಮಾರ್ಪಾಡೂ ತರದೆ, ಅದರ ಚೌಕಟ್ಟಿನಲ್ಲೇ ಕೊಡಮಾಡುವ ನ್ಯಾಯ, ಎಷ್ಟರ ಮಟ್ಟಿಗೆ ನ್ಯಾಯವಾಗಿರಲು ಸಾಧ್ಯ ಎಂಬ ಅನುಮಾನಗಳು ನನಗೆ ಆಗಲೂ ಇದ್ದವು. ಆ ಅನುಮಾನ ನಿರಾಧಾರವಲ್ಲವೆಂದು, ರಾಜ್ಯದಲ್ಲಿ ಮುಂದಕ್ಕೆ ಜಿಲ್ಲಾ ಪಂಚಾಯ್ತಿ ಇತ್ಯಾದಿಗಳು ಬಂದ ಮೇಲೆ ನಿಸ್ಸಂದಿಗ್ಧವಾಗಿ ಸಾಬೀತಾಗಿಹೋಯಿತು.

ನಜೀರ್ ಸಾಬ್ ಅಧಿಕಾರ ವಿಕೇಂದ್ರೀಕರಣ ಪ್ರಯೋಗಕ್ಕೆ ಕೈ ಹಾಕಿ (1986) ಜಿಲ್ಲಾ ಪಂಚಾಯ್ತಿ, ಮಂಡಲ್ ಪಂಚಾಯ್ತಿಗಳನ್ನು ರೂಪಿಸಿದ ಮೇಲೆ, ಒಮ್ಮಿಂದೊಮ್ಮೆಲೇ ದಲಿತರ ಮೇಲಿನ ದೌರ್ಜನ್ಯಗಳು ಇನ್ನಷ್ಟು ಹೆಚ್ಚಿದಂತೆ, ಕರಾಳವಾದಂತೆ ಕಾಣತೊಡಗಿತು. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ್ದು (1987) ಆ ದೌರ್ಜನ್ಯಗಳ ಪರಾಕಾಷ್ಠೆ. (ಬೆಂಡಿಗೇರಿಯಲ್ಲಿ ದೌರ್ಜನ್ಯ ಎಸಗಿದವರು- ಲಿಂಗಾಯಿತರು). ಮತ್ತು ಇಂಥ ಬಹುಪಾಲು ದೌರ್ಜನ್ಯಗಳ ಹಿಂದೆ ಗ್ರಾಮ ಮಂಚಾಯ್ತಿ, ಮಂಡಲ ಪಂಚಾಯ್ತಿ ಸದಸ್ಯರೇ ಇದ್ದರು! ಇದರರ್ಥ, ದಲಿತ ದ್ವೇಷಿಗಳೇ ಹಳ್ಳಿ ಹಳ್ಳಿಗಳಲ್ಲಿ ಅಧಿಕಾರಕ್ಕೆ ಬಂದರು ಎಂದಲ್ಲ; ಈ ವಿಕೇಂದ್ರೀಕರಣ ಪ್ರಯೋಗವೂ ಮೊದಮೊದಲು ಪರಂಪರಾಗತ ಅಧಿಕಾರ ಕೇಂದ್ರಗಳ ಸ್ವರೂಪವನ್ನೇ ಗಟ್ಟಿಗೊಳಿಸಿತು ಎಂದಷ್ಟೇ. ಎಲ್ಲ ಸಮುದಾಯಗಳಿಗೂ ಸ್ಥಳೀಯ ಆಡಳಿತದಲ್ಲಿ ಸಮಾನ ಪಾಲು ದೊರೆಯತೊಡಗಿದ್ದು ನಂತರವೇ. ಆದರೆ ಆ ಹಂತ ಬರುವ ಮುಂಚೆ ಹೊಸ ರಾಜಕೀಯ ಅಧಿಕಾರವೂ, ಸಾಮಾಜಿಕ ಅಧಿಕಾರವಿದ್ದ ‘ಉಳ್ಳವರ’ ಕೈಗೇ ಸೇರಿತ್ತು.

ರೈತಸಂಘ ಹೋಳಾದ ಮೇಲೆ, ಸಿಡಿದು ಹೋದ ಹೆಚ್ಚಿನವರು ನೆಲೆ ಕಂಡುಕೊಂಡಿದ್ದು,- ಆಗಂತೂ ಒಕ್ಕಲಿಗ ಲಿಂಗಾಯಿತರದ್ದೇ ಪಕ್ಷವಾಗಿದ್ದ ಜನತಾ ಪರಿವಾರದಲ್ಲೇ ಎಂಬುದೂ ಆಕಸ್ಮಿಕವಲ್ಲ… ಅಧಿಕಾರಿಯ ಕೊರಳಪಟ್ಟಿ ಹಿಡಿಯುವ ‘ಆತ್ಮವಿಶ್ವಾಸ’,- ಇಂಥ ಪರಂಪರಾಗತ ಅಧಿಕಾರದ ನೆನಪುಗಳಿರದ ದಲಿತ ಸಂಘಟನೆಗೆ ದಕ್ಕುವುದು ಸಾಧ್ಯವಿರಲಿಲ್ಲ.

ಇನ್ನು ದಲಿತ ಚಳವಳಿಯ ಸ್ವರೂಪವನ್ನು ಅರಿಯಲು ಒಂದೇ ಒಂದು ಕಾರ್ಯಕ್ರಮದ ಉದಾಹರಣೆ ಸಾಕು: ಉದ್ದಕ್ಕೂ ಅನಿವಾರ್ಯವಾಗಿ ಭೂಹೋರಾಟಗಳು ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆಯಲ್ಲೇ ಜೀವ ಸವೆಸಿದ ದಸಂಸ, ರಾಜ್ಯದಲ್ಲಿ ಒಮ್ಮೆ ಸ್ವಾತಂತ್ರ್ಯೋತ್ಸವಕ್ಕೆ ಆಯೋಜಿಸಿದ ಕಾರ್ಯಕ್ರಮವದು. (ಸಂಘರ್ಷ ಸಮಿತಿಯ ಭೂಹೋರಾಟಗಳಿಂದಾಗಿ, ದಲಿತರೂ ಸೇರಿದಂತೆ ರಾಜ್ಯದಲ್ಲಿ ಎಲ್ಲ ಜಾತಿಯ ಭೂಹೀನರ ಒಡೆತನಕ್ಕೆ ಸಿಕ್ಕಿದ ಒಟ್ಟು ಜಮೀನು- ನಾಲ್ಕು ಲಕ್ಷ ಎಕರೆ!) ಅಂದು ಊರೂರುಗಳಲ್ಲಿ ದಲಿತ ಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ‘ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ’ ಎಂದು ಊರಿನ ಎಲ್ಲ ಜಾತಿ ಸಮುದಾಯಗಳನ್ನು ಆಹ್ವಾನಿಸಿದರು! ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು’ ಎನ್ನುತ್ತ ದೇವನೂರರು ರೂಪಿಸಿದ ಆ ಕಾರ್ಯಕ್ರಮದ ಮೂಲಕ ಗಾಂಧಿಯ ತುಣುಕೊಂದು ಮತ್ತೆ ಹುಟ್ಟಿ ಬಂದಂತಾಗಿತ್ತು. ನನ್ನ ಕಣ್ಣಲ್ಲಿ ನೀರು ತರಿಸಿದ ಏಕೈಕ ಸ್ವಾತಂತ್ರ್ಯೋತ್ಸವವದು. ಊರೂರುಗಳಲ್ಲಿ ಗಮನಾರ್ಹ ಯಶಸ್ಸನ್ನೂ ಪಡೆದ ಈ ಕಾರ್ಯಕ್ರಮದ ಹಿಂದಿನ ಉದಾತ್ತ ಅಂತಃಕರಣ,’ದೊಡ್ಡ ಮನಸ್ಸ’ನ್ನು- ರೈತಸಂಘದ ಧೋರಣೆಗೆ ಹೋಲಿಸಿದರೆ, ಅಂಥ ‘ಪರಿವರ್ತನೆ’ಯ ಕಾಲಘಟ್ಟದಲ್ಲೂ ನಮ್ಮ ಮೂಲ ಸಾಮಾಜಿಕ ಹಂದರ ಅಲ್ಲಾಡಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ…

ಇಷ್ಟು ಹೇಳುತ್ತ ಅವೆರಡು ಸ್ವಾಭಿಮಾನ ಚಳವಳಿಗಳ ಅಭೂತಪೂರ್ವ ಸಾಧನೆಗೆ, ತಂದ ಸಂಚಲನಕ್ಕೆ ಕುರುಡಾಗಬಾರದು. ಆ ಚಳವಳಿಗಳು ತೆತ್ತ ಬೆಲೆ; ಅನುಭವಿಸಿದ ಸಾವು ನೋವು, ಪ್ರಯಾಸ, ಸಂಕಟ, ಪರಿಶ್ರಮ; ಎದುರಿಸಿದ ಎಡರು ತೊಡರು, ಸಂದಿಗ್ಧಗಳು… ಎಲ್ಲವೂ ವಿರಾಟ್ ಸ್ವರೂಪದ್ದೇ. ನಮ್ಮ ಪಾಲಿಗೆ ಆಗಿನ ಸಂಭ್ರಮ, ಹುರುಪು, ಹುಂಬತನಗಳೆಲ್ಲ ಈಗಲೂ ನಲ್ಮೆಯ ನೆನಪುಗಳೇ. ‘ಅಕಾರಣ ಪ್ರೀತಿ, ಸಕಾರಣ ಸಿಟ್ಟು’ ನಮ್ಮ ನೆಚ್ಚಿನ ಮಂತ್ರವಾಗಿದ್ದ ಕಾಲವದು. ಆ ಸಾಮಾಜಿಕ ಚಳವಳಿಗಳಿಗೆ ಪೂರಕವಾಗಿಯೇ ಉದಿಸಿದ ಭಾಷಾ ಚಳವಳಿ, ಲಂಕೇಶ್ ಪತ್ರಿಕೆ, ದೇವರಾಜ ಅರಸರ ಆಡಳಿತಾತ್ಮಕ ಕ್ರಾಂತಿ, ನಾವೇ ಮಾಡಿದ ‘ಮುಂಗಾರು’ ದಿನಪತ್ರಿಕೆ, ‘ಸುದ್ದಿ ಸಂಗಾತಿ’ ವಾರಪತ್ರಿಕೆ… ಎಲ್ಲವೂ ಒಂದೊಂದು ಕಾಲಘಟ್ಟದಲ್ಲಿ ಸಾಧ್ಯವಾಗುವ ಮಹಾನ್ ಚೈತನ್ಯ ಸ್ಫೋಟದ ಕುರುಹುಗಳು.

ಮತ್ತೆ ದಲಿತ ಚಳವಳಿಗೆ ಬಂದರೆ ಅದರ ನೈತಿಕ ಶಕ್ತಿಯ ಕುರುಹಾಗಿ ಕವಿ ಸಿದ್ದಲಿಂಗಯ್ಯನವರು ದಾಖಲಿಸುವ ಹಾಸನ ಜಿಲ್ಲೆಯ ಒಂದು ‘ಅತಿಮಾನುಷ’ ಪ್ರಕರಣ ನೋಡಬೇಕು:

ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಗ್ರಾಮದೇವತೆ ಪೂಜಾರಿಗೆ ವಾರಕ್ಕೊಮ್ಮೆ ಮೈದುಂಬುತ್ತಿತ್ತು. ಪೂಜಾರಿಯು ಮೇಲುಜಾತಿಗೆ ಸೇರಿದವರು. ದಲಿತ ವ್ಯಕ್ತಿಯೊಬ್ಬ ತನ್ನ ಕಷ್ಟ ಪರಿಹಾರಕ್ಕಾಗಿ ಆ ದೇವತೆಗೆ ಮೊರೆಯಿಡಲು ಪ್ರತಿ ವಾರವೂ ಬರುತ್ತಿದ್ದ. ಅದೇ ಗ್ರಾಮದ ಬಲಾಢ್ಯನೊಬ್ಬ ಈ ಬಡ ದಲಿತನಿಗೆ ಅಪಾರ ಕಿರುಕುಳ ನೀಡುತ್ತಿದ್ದ. ಬಲಾಢ್ಯನಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಈ ಮುಗ್ಧ ದಲಿತ ಗ್ರಾಮದೇವತೆಯಲ್ಲಿ ಬೇಡಿಕೊಳ್ಳುತ್ತಿದ್ದ.

ಮೂರು ನಾಲ್ಕು ವಾರಗಳು ದೇವತೆಯ ಬಳಿ ಹೋದರೂ ದಲಿತನಿಗೆ ಯಾವುದೇ ಪರಿಹಾರ ದೊರೆಯಲಿಲ್ಲ. ದಲಿತ ಬೇಸರದಿಂದ ಒಮ್ಮೆ ದೇವತೆಯನ್ನು ‘ತಾಯಿ, ಇಷ್ಟು ದಿನಗಳಿಂದ ಬಂದರೂ, ನನಗೆ ದಿಕ್ಕು ತೋರಿಸುತ್ತಿಲ್ಲ, ಯಾಕವ್ವಾ?’ ಎಂದು ಪ್ರಶ್ನಿಸಿದ. ಈ ಪ್ರಶ್ನೆಯಿಂದ ದೇವತೆ ವಿಚಲಿತವಾಗಿ ‘ನಿನ್ನ ಕಷ್ಟ ಪರಿಹರಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ತನ್ನ ಅಸಹಾಯಕತೆ ತೋಡಿಕೊಂಡಿತು. ‘ನಾನೇನು ಮಾಡಲಿ ತಾಯಿ?’ ಎಂದು ಈತ ಕೇಳಿದ. ‘ದಲಿತ ಸಂಘ ಸೇರು. ಹೋರಾಡು’ ಎಂದು ದೇವತೆ ಅಪ್ಪಣೆ ಮಾಡಿತು…!

ಹೀಗೆ ‘ದೇವತೆಗಳ ಆಶೀರ್ವಾದ ಪಡೆದೇ’ ಬಂದಂತಿದ್ದ ಸಂಘಟನೆಗಳು ನಿತ್ರಾಣವಾಗತೊಡಗಿದ್ದು; ಆ ಅಖಂಡ ಎಚ್ಚರದ ವಾತಾವರಣ ಹಳಸತೊಡಗಿದ್ದು ಯಾವಾಗಿನಿಂದ? ನಾಡನ್ನೇ ಆವರಿಸಿದ್ದ ಆ ಮಟ್ಟಿನ ಜಾಗೃತಿಗೆ ತುಕ್ಕು ಹಿಡಿಯತೊಡಗಿದ್ದು ಯಾವಾಗ? ಹೇಗೆ? ಯಾಕೆ?

ಈ ಪ್ರಶ್ನೆಗೆ ಆ ಸಂಘಟನೆಗಳ ರಾಜಕೀಯ ನಡಾವಳಿಯಲ್ಲೇ ಉತ್ತರ ಹುಡುಕಬೇಕು.

ಇಂದಿರಾ ಗಾಂಧಿ ಇರುವವರೆಗೆ ದಲಿತ ಚಳವಳಿ ಒಂದು ಸಂಘಟನೆಯಾಗಿ ಆರಿಸಿಕೊಂಡಿದ್ದ ಹಾದಿ- ಚುನಾವಣೆಗಳ ಬಹಿಷ್ಕಾರದ್ದು. ಸಂಘಟನೆಯ ರಾಜಕೀಯ ಧೋರಣೆಯೇ ಅದು. ಆ ‘ಎಳಸು’ ನಿಲುವನ್ನು ಸರಿ ಮಾಡಲು ದೇವನೂರ ಮಹಾದೇವ 80ರ ದಶಕದ ಆರಂಭದಲ್ಲಿ ಪಟ್ಟು ಹಿಡಿದು ನಿಂತರು. ಮಂಗಳೂರು ಮತ್ತು ಹಾಸನಗಳಲ್ಲಿ ದಸಂಸ ರಾಜ್ಯಸಮಿತಿ ಸಭೆ. ಅಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ತೀರ್ಮಾನವಾಗಬೇಕೆಂದು ಮಹಾದೇವ ಹಟ ಹಿಡಿದರು. ಒಂದು ಚುನಾವಣೆ; ಇನ್ನೊಂದು ಹಿಂಸೆ-ಅಹಿಂಸೆಯ ಪ್ರಶ್ನೆ. “ಅಲ್ರಪ್ಪ, ಎಷ್ಟೋ ದೇಶಗಳಲ್ಲಿ ಮತದಾನದ ಹಕ್ಕೇ ಇಲ್ಲ. ಕೆಲವು ಕಡೆ ಹೆಂಗಸರಿಗೆ ಮತದಾನವಿಲ್ಲ. ಹೀಗಿರುವಾಗ ನಾವು ಮತದಾನ ಬಹಿಷ್ಕರಿಸಿ ಕೂತರೆ, ಸರ್ಕಾರ ಹೀಗೂ ಮಾಡಬಹುದು: ನಿಮಗೆ ಹೇಗಿದ್ದರೂ ಮತದಾನ ಬೇಕಿಲ್ಲವಲ್ಲ, ನಿಮಗ್ಯಾಕೆ ಕಷ್ಟ? ದಲಿತರಿಗೆ ಮತದಾನದ ಹಕ್ಕಿಲ್ಲ ಅಂತ ಸರ್ಕಾರವೇ ಕಾನೂನು ಮಾಡಿಬಿಡುತ್ತೇವೆ ಅಂದರೆ, ಆಗ ನಾವೇನು ಮಾಡುತ್ತೇವೆ? ‘ನಮ್ಮ ರಕ್ತ ಚೆಲ್ಲಿದರೂ ಸರಿ, ಮತದಾನದ ಹಕ್ಕು ಬೇಕು’ ಅನ್ನುತ್ತೇವೆ! ಈಗ ಅನಾಯಾಸವಾಗಿ ಆ ಹಕ್ಕಿದೆ. ಅದನ್ನು ಗೌರವಿಸೋಣ ಎಂದು ವಿವರಿಸಿದಾಗ ಎಲ್ಲರೂ ಕಕ್ಕಾಬಿಕ್ಕಿಯಾದರು. ಹಾಗೇ ಹಿಂಸೆಯ ಪ್ರಶ್ನೆ. ‘ಚುನಾವಣೆ ಬೇಡ, ಅಹಿಂಸೆ ಬೇಡ ಅನ್ನುವುದಾದರೆ ನಾವು ನಕ್ಸಲೀಯರಾಗಬೇಕಾಗುತ್ತೆ’ ಎಂದು ಮಹಾದೇವ ಹೇಳಿದಾಗಲೂ ಗೆಳೆಯರಿಗೆ ದಿಕ್ಕು ತೋಚದಂತಾಯಿತು. ಇವೆರಡೂ ಪ್ರಶ್ನೆಗಳು ಅಂದೇ ಬಗೆಹರಿಯದಿದ್ದರೂ, ದಲಿತ ಚಿಂತನೆಯಲ್ಲಿ ದೊಡ್ಡದೊಂದು ಪಲ್ಲಟಕ್ಕೆ ಈ ಮಾತುಗಳೇ ನಾಂದಿಯಾದವು.

ಕರ್ನಾಟಕದಲ್ಲಿ ಆಗ ಗುಂಡೂರಾಯರ ದರ್ಬಾರಿನ ಕಾಲ. ಇಡೀ ನಾಡು ಕಾಂಗ್ರೆಸ್ ವಿರೋಧವನ್ನೇ ಉಸಿರಾಡುತ್ತಿತ್ತು. ಅಷ್ಟೂ ಕಾಲ ಅವಿರತವಾಗಿ ಕಾಂಗ್ರೆಸ್ಸಿನ ಠೇಂಕಾರ, ನಿರಂಕುಶತೆ, ಜೋಭದ್ರಗೇಡಿತನ, ಭಕ್ಷಣೆಗಳನ್ನು ಕಂಡ ಜನತೆ ರೋಸಿಹೋಗಿದ್ದರು. ಕಾಂಗ್ರೆಸ್ ಬಗ್ಗೆ ಜನರಲ್ಲಿ ಎಂಥ ಹೇವರಿಕೆ ಹುಟ್ಟಿತ್ತೆಂದರೆ, ಈ ನಾಡು ಕಂಡ ಸರ್ವಶ್ರೇಷ್ಠ ಮುಖ್ಯಮಂತ್ರಿ ದೇವರಾಜ ಅರಸರ ಕೊಡುಗೆಯೂ ಕಾಂಗ್ರೆಸ್ಸಿನ ಒಟ್ಟಾರೆ ದುರ್ನಾತದಲ್ಲಿ ಮುಚ್ಚಿಹೋಗಿದೆ. (ಅರಸು ಕುರಿತು ನಮಗೆ ಈ ತಿಳುವಳಿಕೆ ಆಗ ಇರಲಿಲ್ಲ ಎಂಬ ಮಾತು ಬೇರೆ.) ಅರಸು ಆಡಳಿತದ ಸರಿಯಾದ ಮೌಲ್ಯಮಾಪನವೇ ಇಂದಿಗೂ ಸಾಧ್ಯವಾಗಿಲ್ಲ ಎನ್ನುವುದು ಕಾಂಗ್ರೆಸ್ ಕುರಿತ ಸಗಟು ಜನಾಭಿಪ್ರಾಯವೇ ಹೊರತು, ಅರಸು ಕುರಿತ ವ್ಯಾಖ್ಯಾನವಲ್ಲ. ಅರಸರ ಈ ‘ಶ್ರೇಷ್ಠ’ದ ಬೆನ್ನಿಗೇ ಬಂದಿದ್ದು ಗುಂಡೂರಾಯರ ‘ಕನಿಷ್ಠ’. ಕರ್ನಾಟಕದಲ್ಲಿ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆಯಲು ಅಷ್ಟು ಸಾಕಿತ್ತು. ‘ಲಂಕೇಶ್ ಪತ್ರಿಕೆ’ ಪ್ರಸಾರ ಉತ್ತುಂಗ ತಲುಪಿದ್ದು, ಆ ಕಾಂಗ್ರೆಸ್- ಗುಂಡೂರಾವ್ ವಿರೋಧಿ ಅಲೆಯಲ್ಲಿ ಎಂಬುದೇ ಆಗಿನ ಸಾಮೂಹಿಕ ಮನಸ್ಥಿತಿಯ ದ್ಯೋತಕ. ರೈತಸಂಘವೂ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ರೈತರಿಗೆ ಕರೆ ನೀಡಿತ್ತು. ಆದರೆ ದಲಿತ ಸಮೂಹ? ಕಾಂಗ್ರೆಸ್ಸು ಅಷ್ಟೂ ಕಾಲ ದಲಿತರನ್ನು ಗುತ್ತಿಗೆಗೆ ಪಡೆದಿತ್ತು. ಅಂಥ ವಾತಾವರಣದಲ್ಲಿ ಇಂದಿರಾ ಹತ್ಯೆಯಾಯಿತು. (‘ಇಂದಿರಾಗಾಂಧಿ ಸತ್ತಾಗ ದಲಿತರು ಅತ್ತ ಕಣ್ಣೀರು ಒಂದು ಸಮುದ್ರದಷ್ಟಾಗಬಹುದು’ ಎಂದು ಮಹಾದೇವ ಕರಪತ್ರ ಬರೆದಿದ್ದು ಆಗಲೇ). ಒಂದು ಲೆಕ್ಕದಲ್ಲಿ ಇಂದಿರಾ ಸಾವಿನೊಂದಿಗೆ ದಲಿತರ ಮಟ್ಟಿಗೆ ಕಾಂಗ್ರೆಸ್ಸಿನ ಋಣ ಹರಿಯಿತು. ಇಡೀ ದಲಿತ ಸಮೂಹವನ್ನು ಕಾಂಗ್ರೆಸ್ ವಿರೋಧಿ ನಿಲುವಿಗೆ ಒಗ್ಗಿಸುವುದು ಅಂದಿನ ಚಾರಿತ್ರಿಕ ಅಗತ್ಯವೂ ಆಗಿತ್ತು. ಕಾಂಗ್ರೆಸ್ಸಿನ ಹಿಡಿತದಿಂದ ದಲಿತರನ್ನು ಪಾರು ಮಾಡಲು ಆಗ ಕಣ್ಣೆದುರಿಗಿದ್ದ ಆಯ್ಕೆ ಒಂದೇ- ಕಾಂಗ್ರೆಸ್ಸೇತರ ಜನತಾ ಪಕ್ಷಕ್ಕೆ ಸಕ್ರಿಯ ಬೆಂಬಲ ಘೋಷಿಸುವುದು. (ಹಾಗೆಯೇ ಕಾಲಾಂತರದಲ್ಲಿ ದಲಿತ ಚಳವಳಿ ಅಹಿಂಸೆಯನ್ನೇ ತನ್ನ ಮಾರ್ಗವಾಗಿ ಸ್ವೀಕರಿಸಿತು ಕೂಡ.)

ಗುಂಡೂರಾವ್ ನಂತರ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದ ರಾಮಕೃಷ್ಣ ಹೆಗಡೆ (1983), ಬರುವಾಗಲೇ ಸಜ್ಜನ ಸೌಜನ್ಯಮೂರ್ತಿಯಾಗಿ ಕಂಡು, ಜನಸಾಮಾನ್ಯರಲ್ಲಿ ಹೊಸ ಭರವಸೆ, ಸಾರ್ಥಕ್ಯಭಾವ ತಂದಿದ್ದರು. ಇನ್ನೊಂದೆಡೆ, ತಮ್ಮ ಇಂಥ ಜನಾನುರಾಗವನ್ನೂ ಲೆಕ್ಕಿಸದೆ ತಮ್ಮ ವಿರುದ್ಧ ಕಠೋರ ವಿಮರ್ಶಾಧೋರಣೆ ತಳೆದಿದ್ದ ಚಳವಳಿಗಳನ್ನು- ವಿಶೇಷವಾಗಿ ರೈತ ಚಳವಳಿಯನ್ನು ಹಣಿಯಲು ಹೆಗಡೆ ಒಳಗಿಂದೊಳಗೇ ಕತ್ತಿ ಮಸೆಯತೊಡಗಿದರು. ದಲಿತರತ್ತ ಸ್ನೇಹ ಹಾಗೂ ರೈತರ ದಮನ- ಇದು ಅವರು ಅನುಸರಿಸಿದ ತಂತ್ರ. ಆದರೆ ನಿಜಕ್ಕೂ ಶಕ್ತವಾದ ಚಳವಳಿಗಳು ಅಷ್ಟಕ್ಕೇ ನಿಸ್ತೇಜವಾಗಬೇಕಿರಲಿಲ್ಲ. ವಿಷಯವೆಂದರೆ, ಜನಸಮೂಹದ ಒಲವು ಹೆಗಡೆ ಪರ ಇದ್ದು, ಅವರ ವಿರುದ್ಧದ ಟೀಕೆಗಳನ್ನು ಸಹಿಸಲು ಜನರೇ ತಯಾರಿರಲಿಲ್ಲ. ಅದುವರೆಗೆ ಸಕರ್ಾರವನ್ನು ಎದುರು ಹಾಕಿಕೊಂಡಿದ್ದ ಚಳವಳಿಗಳು ಆಗ ‘ಕಾಂಗ್ರೆಸ್ ವಿರೋಧಿ’ಯಾಗಿ ಜನಸ್ತೋಮದ ಚಡಪಡಿಕೆಯನ್ನು ಪ್ರತಿನಿಧಿಸುತ್ತಿದ್ದವು. ಆದರೆ ‘ಜನಾನುರಾಗಿ’ ಹೆಗಡೆ ಬಂದೊಡನೆ, ಜನಕ್ಕೆ ಇದೇ ಚಳವಳಿಗಳು ಅನಗತ್ಯ ಕಿರಿಕಿರಿಯಾಗಿ ಗೋಚರಿಸಿರಬೇಕು. ಜೊತೆಗೆ ಆಗ ಬ್ರಾಹ್ಮಣ ಹೆಗಡೆಯವರನ್ನು ಎತ್ತಿ ಮೆರೆಸಿದ ಮೇಲ್ಜಾತಿ ಮಾಧ್ಯಮಗಳ ಪಾತ್ರವೇನೂ ಕಮ್ಮಿಯಲ್ಲ. ರೇವಜಿತು, ಬಾಟ್ಲಿಂಗ್, ಫೋನ್ ಕದ್ದಾಲಿಕೆ… ಹೆಗಡೆ ಕಾಲದಲ್ಲಿ ಹಗರಣಗಳಿಗೇನೂ ಕೊರತೆಯಿರಲಿಲ್ಲ. ಆದರೆ ಕೊನೆ ಗಳಿಗೆವರೆಗೆ ಅವರಿಗೆ ಮಾಧ್ಯಮಗಳ ಬೆಂಬಲ ಕುಗ್ಗಲಿಲ್ಲ!… ‘ಇಂಡಿಯಾ ಟುಡೇ’ ಅವರನ್ನು ಮುಂದಿನ ಪ್ರಧಾನಿಯಾಗಿಯೇ ಕಂಡಿರಲಿಲ್ಲವೇ?

(ಮುಂದುವರೆಯುವುದು)

ನ್ಯಾ.ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

ರಾಜ್ಯದ ಬಿಜೆಪಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಲೋಕಾಯುಕ್ತ ನೇಮಕದ ವಿಚಾರ ಇನ್ನೂ ಬಗೆಹರಿದಿಲ್ಲ. ಈ ವಿಷಯ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಪಡೆದುಕೊಳ್ಳುತ್ತಿದೆ. ವಿರೋಧಪಕ್ಷಗಳಿಗೂ ಲೋಕಾಯುಕ್ತರ ನೇಮಕ ಬೇಕಿದ್ದಂತಿಲ್ಲ. ಇದ್ದಿದ್ದರೆ ಈ ರೀತಿ ದಿವ್ಯನಿರ್ಲಕ್ಷ್ಯದಲ್ಲಿ ಕಾಲಹರಣ ಮಾಡುತ್ತಿರಲಿಲ್ಲ. ರಾಜ್ಯದಲ್ಲಿನ ಪ್ರಜಾಸತ್ತೆಯ ಪ್ರಕ್ರಿಯೆ ಮತ್ತು ಅದರ ಗುಣಮಟ್ಟದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗೂ ಕಿಂಚಿತ್ ಕಾಳಜಿ ಇದ್ದಂತಿಲ್ಲ.

ಈ ಮಧ್ಯೆ, ಮುಖ್ಯಸ್ಥನಿಲ್ಲದೆ ಲೋಕಾಯುಕ್ತ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದಕ್ಕೆ ಸಲ್ಲಿಸಲಾಗುತ್ತಿರುವ ದೂರುಗಳೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬ ವರದಿಗಳು ಬರುತ್ತಿವೆ.

ರಾಜ್ಯಪಾಲರು “ಕೆಲವು ಕ್ರಿಮಿನಲ್ ಶಕ್ತಿಗಳು” ನ್ಯಾ.ಬನ್ನೂರುಮಠರೇ ಲೋಕಾಯುಕ್ತರಾಗಬೇಕೆಂದು ಹಠ ಹಿಡಿದಿದ್ದಾರೆ ಎನ್ನುತ್ತಿದ್ದಾರೆ ಮತ್ತು ಬನ್ನೂರುಮಠರನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ನನ್ನ ಬಳಿ ಸಾಕಷ್ಟು ಕಾರಣಗಳಿವೆ ಎಂದಿದ್ದಾರೆ.

ನ್ಯಾ.ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬಾರದೆಂದು ಮೂರು ತಿಂಗಳಿಗೂ ಹಿಂದೆ ದಾವಣಗೆರೆ ಜಿಲ್ಲೆಯ ನಂದಿಗಾವಿ ಗ್ರಾಮದ ಹಲವು ನಾಗರಿಕರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದು ಇಲ್ಲಿಯವರೆಗೂ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಮಗೆ ಈಗ ಆ ಪತ್ರದ ಪ್ರತಿ ಲಭ್ಯವಿದ್ದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ