Daily Archives: January 5, 2012

ಕರ್ನಾಟಕದ ನಾಲ್ಕು ರಾಜಕಾರಣಿ ಬಣಗಳು

ಬಿ.ಶ್ರೀಪಾದ್ ಭಟ್

ಬಣ 1 :

60 ಹಾಗೂ 70 ರ ದಶಕದಲ್ಲಿ ತಮ್ಮರಾಜಕಾರಣ ಶುರು ಮಾಡಿದ ನಜೀರ ಸಾಬ್, ಕೆ.ಹೆಚ್.ರಂಗನಾಥ್, ಬಿ.ಎಲ್.ಗೌಡ, ಕೆಂಪೀರೆಗೌಡ, ಸಂಗಮೇಶ್ವರ ಸರ್ದಾರ, ಎ.ಲಕ್ಷ್ಮೀಸಾಗರ್, ಕಲ್ಲಣನವರ್, ಬಂಡೀ ಸಿದ್ದೇಗೌಡ, ವೈ.ಕೆ.ರಾಮಯ್ಯ  (ಇಲ್ಲಿ ಇನ್ನೂ ಅನೇಕ ಹೆಸರುಗಳನ್ನು ಸೇರಿಸಬಹುದು. ಇದು ಕೇವಲ ಉದಾಹರಣೆಗೆ) ರಂತಹ ಕರ್ನಾಟಕದ ರಾಜಕಾರಣಿಗಳು 80 ಹಾಗೂ 90ರ ದಶಕದ ಮಧ್ಯಭಾಗದವರೆಗೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

ಇವರಲ್ಲಿ ಕೆಲವರು ಕಾಂಗ್ರೆಸ್‌ನವರಾಗಿದ್ದರೆ, ಕೆಲವರು ಜನತಾ ಪಕ್ಷಕ್ಕೆ ಸೇರಿದ್ದರು. ಈ ವಿಭಿನ್ನ ಪಕ್ಷದ ಭಿನ್ನತೆ ಹೊರತುಪಡಿಸಿ ಇವರಲ್ಲಿ ಅನೇಕ ಸಾಮ್ಯತೆಗಳಿದ್ದವು. ಮೊದಲನೆಯದಾಗಿ ಇವರೆಲ್ಲ ಶೂದ್ರ, ಹಿಂದುಳಿದ, ದಲಿತ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು, ಸಂಕೋಚದ ವ್ಯಕ್ತಿತ್ವವುಳ್ಳವರು, ಆಕರ್ಷಕ ಮಾತುಗಾರರಾಗಿರಲಿಲ್ಲ, ರಾಜಕಾರಣಿಗಳಾಗಿದ್ದರೂ ಎಂದೂ ವೇದಿಕೆ ಮೇಲೆ ಅಸಂಖ್ಯ ಜನರನ್ನು ಮೋಡಿ ಮಾಡುವ ಭಾಷಣಕಾರರಾಗಿರಲಿಲ್ಲ, ರಾಜಕೀಯದಲ್ಲೂ ಎಂದೂ ಆರಕ್ಕೇರದ ಇವರು ಮಾನವತಾವಾದಿಗಳಾಗಿದ್ದರು, ಅನೇಕರು ಉತ್ತಮ, ದಕ್ಷ ಆಡಳಿತಗಾರರಾಗಿದ್ದರು, ಬಡಜನತೆಯ ಪರವಾಗಿ ಇವರ ಹೃದಯ ಪ್ರಾಮಾಣಿಕವಾಗಿ ಮಿಡಿಯುತ್ತಿತ್ತು.

ಇವರಲ್ಲಿ ಬಹುತೇಕರು ಆಷಾಡಭೂತಿತನದ, ಮೋಸದ ರಾಜಕಾರಣ ಕಂಡರೆ ಕೆಂಡಾಮಂಡಲವಾಗುತ್ತಿದ್ದರು. ಈ ಕಾರಣಕ್ಕೆ ಕೆಲವು ಬಾರಿ ವಿವಾದಕ್ಕೆ ಕಾರಣರಾಗಿದ್ದರು. ಆದರೆ ತಾವು ಸಚಿವರಾಗಿದ್ದ ಕಾಲದುದ್ದಕ್ಕೂ ಜನಪರ ಕೆಲಸಗಳನ್ನು ಮಾಡಿದ್ದರು. ಈ ಮೂಲಕ ತಮ್ಮ ಪ್ರೀತಿಯ ನಾಯಕರಾದ ಅರಸು, ಹೆಗಡೆಯವರಿಗೆ ಹೆಸರನ್ನು ತಂದುಕೊಟ್ಟಿದ್ದರು. ಇವರು ಎಂದೂ ಜಾತೀಯತೆ ಮಾಡಲಿಲ್ಲ, ಜಾತಿ ರಾಜಕಾರಣದಿಂದ ದೂರವಿದ್ದರು, ಗುಂಪುಗಳನ್ನು, ಹಿಂಬಾಲಕರನ್ನು, ಪುಢಾರಿಗಳನ್ನು ಕಟ್ಟಲಿಲ್ಲ ಹಾಗೂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ವಿಫುಲ ಅವಕಾಶಗಳಿದ್ದರೂ ಎಂದೂ ರಾಜಕೀಯವಾಗಿ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಇದರಿಂದಾಗಿಯೇ  ಯಾವುದೇ ಹಿಂದುಳಿದ ಜಾತಿಗಳ ಒಕ್ಕೂಟಗಳನ್ನು ಕಟ್ಟಲ್ಲಿಲ್ಲ. ಚಳುವಳಿ ಆಧಾರಿತ ಹೋರಾಟಗಳು ಇವರ ಪಾಲಿಗೆ ಒಗ್ಗುತ್ತಿರಲ್ಲಿಲ್ಲ. ಹಾಗಾಗಿಯೇ ಯಾವುದೇ ಜನ, ಜಾತಿ, ವರ್ಗ ಸಮುದಾಯದೊಂದಿಗೂ ಇವರ ಐಡೆಂಟಿಟಿ ಇರಲಿಲ್ಲ. ಕೇವಲ ವ್ಯಕ್ತಿಗತ ಪರಿಶುದ್ಧ, ಸರಳ ರಾಜಕಾರಣವೇ ಇವರ ಬಂಡವಾಳ.

ಇವರ ಈ ಎಲ್ಲ ಗುಣಗಳು ರಾಜಕೀಯ ಜೀವನದಲ್ಲಿ ಇವರನ್ನು ಭ್ರಷ್ಟಾಚಾರದ ಕಳಂಕದಿಂದ ಮುಕ್ತಿಗೊಳಿಸಿತ್ತು. ಆದರೆ ಇವೆಲ್ಲಕ್ಕಿಂತಲೂ ಇವರ ದೊಡ್ಡ ಸಾಧನೆ  ತಮ್ಮ ನಂಬಿದ ಆದರ್ಶಗಳನ್ನು ಬಿಟ್ಟುಕೊಡದೆ ಯಾವ ಆಮಿಷೆಗಳಿಗೆ ಬಲಿಯಾಗದೆ ಅತ್ಯಂತ ಬಿಕ್ಕಟ್ಟಿನ ಸಂಧರ್ಭದಲ್ಲೂ, ಅನೇಕ ಒತ್ತಡಗಳಿದ್ದರೂ ಕುಂಟುಂಬ ರಾಜಕಾ  ರಣವನ್ನು ಮಾಡಲೇ ಇಲ್ಲ. ಸ್ವಜನ ಪಕ್ಷಪಾತವೆನ್ನುವ ಹೊಲಸನ್ನು ಇವರೆಂದೂ ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದರ ಫಲವಾಗಿಯೇ ಇವತ್ತಿಗೂ ಇವರ ಮಕ್ಕಳು, ಬಂಧುವರ್ಗದವರಾರು ರಾಜಕೀಯದಲ್ಲಿಲ್ಲ. ಇದು ಅಂತಿಂಥ ಸಾಧನೆ ಏನಲ್ಲ. ಇದಕ್ಕಾಗಿ ಕರ್ನಾಟಕದ ಜನತೆ ಇವರಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತದೆ.

ಎರಡು ಬಾರಿ, ಮೂರು ಬಾರಿ ಗೆದ್ದು ಬಂದರೂ ತಮ್ಮ ರಾಜಕೀಯ ಕ್ಷೇತ್ರವನ್ನು ಎಂದೂ ಮೂಗಿನ ಮೇಲೆ ಬೆರಳಿಡುವಷ್ಟು ಬೆಳೆಸುವ, ಅಭಿವೃದ್ದಿಗೊಳಿಸುವ ಯಾವ ಕಾರ್ಯಕ್ರಮಗಳನ್ನೂ ಇವರು ಹಾಕಿಕೊಳ್ಳಲಿಲ್ಲ, ಹೀಗಾಗಿ ಇವರ ಅಧಿಕಾರದ ಅವಧಿಯಲ್ಲಿ ಇವರ ಶಾಸಕ ಸ್ಥಾನದ ಕ್ಷೇತ್ರಗಳು  ಎಂದೂ ಅಭೂತಪೂರ್ವ ಎನ್ನುವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲೇ ಇಲ್ಲ. ಇದಕ್ಕೆ ಮೂಲಭೂತ ಕಾರಣ ಇವರು ಸದಾಕಾಲ ಪೊರೆಯುವ ಜನಸಂಪರ್ಕದ ಕೊರತೆಯನ್ನು ಎದುರಿಸಿದ್ದು, ಹಾಗೂ ಎಂದಿಗೂ 24 ಗಂಟೆಗಳಲ್ಲದಿದ್ದರೂ ಕನಿಷ್ಟ 12 ಗಂಟೆಗಳ ಬಿಡುವಿಲ್ಲದ ರಾಜಕಾರಣ ಮಾಡುವ ಜಾಯಮಾನವೇ ಇವರದಾಗಿರಲಿಲ್ಲ. ಇವರು ಅತ್ಯಂತ ಜನಪ್ರಿಯರಾಗಿದ್ದರೂ ನಿಜವಾದ ಅರ್ಥದ ಜನನಾಯಕರಾಗಿರಲಿಲ್ಲವಾಗಿದ್ದರಿಂದ ವ್ಯವಸ್ಥೆಯೊಂದಿಗೆ ಸದಾಕಾಲವಲ್ಲದಿದ್ದರೂ ಅವಶ್ಯಕತೆ ಬಿದ್ದಾಗಲೆಲ್ಲ ಜಿದ್ದಾಜಿದ್ದಿ ನಡೆಸುವ ರಾಜಕೀಯ ಎದೆಗಾರಿಕೆ ಇವರಲ್ಲಿರಲ್ಲ. ರಾಜಕೀಯ ಬಿಕ್ಕಟ್ಟಿನ ಸಂಧರ್ಭಗಳಲ್ಲಿ (ಕಾಂಗ್ರೆಸ್ ಹೋಳಾದಾಗ, ತುರ್ತು ಪರಿಸ್ಥಿತಿ, ತಮ್ಮ ನಾಯಕ ಅರಸು ಅವರು ಕಾಂಗ್ರೆಸ್ ನಿಂದ ಹೊರ ಬಂದು ತಬ್ಬಲಿಯಾದಾಗ, ಜನತಾ ಪಕ್ಷ ವಿಘಟನೆಗಳ ಸರಮಾಲೆಯಲ್ಲಿ ಸಿಲುಕಿಕೊಂಡಾಗ, ರಾಮಕೃಷ್ಣ ಹೆಗಡೆ ಸ್ವಜನ ಪಕ್ಷಪಾತದ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದಾಗ) ಇವರೆಂದೂ ದಿಟ್ಟತನವನ್ನು ಪ್ರದರ್ಶಿಸಲಿಲ್ಲ. ಒಂದು ರೀತಿಯಲ್ಲಿ ಜಾಣ ಮೌನವನ್ನು ಆಶ್ರಯಸಿದ್ದರು. ಈ ಜಾಣ ಮೌನ ಆ ಕಾಲದಲ್ಲಿ  ಪ್ರಶ್ನಾರ್ಹ ಎನಿಸಿತ್ತು.

ಅನೇಕ ಸಾಮಾಜಿಕ ಸ್ಥಿತ್ಯಂತರಗಳು, ಜಾತೀಯ ದೌರ್ಜನ್ಯಗಳು ತಮ್ಮ ಕಾಲಘಟ್ಟದಲ್ಲಿ ನಡೆದಾಗಲೂ ಇವರು ವ್ಯಕ್ತಪಡಿಸಿದ ಅಸಹಾಯಕತೆ, ನಿರ್ಲಕ್ಷ್ಯತೆ ಕೂಡ ಪ್ರಶ್ನಾರ್ಹವೇ ಆಗಿತ್ತು. ರಾಜಕೀಯ ಇಚ್ಛಾಶಕ್ತಿಯನ್ನು ಸಂಪೂರ್ಣವಾಗಿ, ಅತ್ಯಂತ ದಿಟ್ಟತನದಿಂದ ಪ್ರಯೋಗಿಸಿದಾಗ ಮಾತ್ರ ಒಬ್ಬ ಜನನಾಯಕ ಮತ್ತೊಂದು ಅರ್ಥಪೂರ್ಣ ತಲೆಮಾರನ್ನು ಹುಟ್ಟಿಹಾಕಲು ಸಾಧ್ಯ ಎನ್ನುವ ರಾಜಕೀಯದ ಮೂಲ ಮಂತ್ರ ಈ ಬಣಕ್ಕೆ ಅರ್ಥವಾಗಿರಲಿಲ್ಲವೋ ಅಥವಾ ಎಂದಿನಂತೆ ನಮಗ್ಯಾತಕ್ಕೆ ಇದೆಲ್ಲ ಎನ್ನುವ ಧೋರಣೆಯೋ, ಕೊನೆಗೂ ಇವರಿಗೆ ರಾಜಕೀಯ, ಸಾಮಾಜಿಕ ಸಂಕೀರ್ಣತೆ, ಸ್ಥಿತ್ಯಂತರಗಳು, ಕಾಲ ಕಾಲಕ್ಕೆ ಬದಲಾಗುತ್ತಿರುವ ವಸ್ತುನಿಷ್ಟತೆ ಅರ್ಥವಾದಂತಿರಲಿಲ್ಲ. ಆದರೆ ರಾಜಕಾರಣಿ ಏನೆಲ್ಲ ಅದ್ಭುತ ಕಾರ್ಯಗಳನ್ನು, ಹೊಸ ಸಮಾಜವನ್ನು ಕಟ್ಟಲಿಕ್ಕಾಗುವಷ್ಟು, ಜೀವಪರ ಚಲನಶೀಲತೆಯನ್ನು ತರವಷ್ಟು ಧೀಮಂತ ನಾಯಕ ಆಗಿರಬೇಕು ಎನ್ನುವ ಸರ್ವಕಾಲದ ಆದರ್ಶದ ಅಪೇಕ್ಷಣೆಯೇ ಇಂದು ಕನಸಿನ ಗಂಟಾಗಿರುವ ಸಂಧರ್ಭದಲ್ಲಿ ಅಸಹಾಯಕನೂ, ನೀಚನೂ ಅಗದೆ ಕನಿಷ್ಟ ಇವರಷ್ಟಾದರೂ ಪ್ರಾಮಾಣಿಕವಾಗಿ ದುಡಿದು, ಬಾಳಿ ಬದುಕಬೇಕು ಎಂದು ಇಂದಿನ ತಲೆಮಾರಿಗೆ, ಮುಂದಿನ ತಲೆಮಾರಿಗೆ ಇವರನ್ನು ಮಾದರಿಯಾಗಿ ನಾವು ಅತ್ಯಂತ ಹೃತ್ಪೂರ್ವಕವಾಗಿ ಹೇಳಬಹುದು.

 

ಬಣ 2  :

ಮೇಲಿನ ಬಣಕ್ಕೆ ಹೋಲಿಸಿದರೆ ಸಂಪೂರ್ಣ ತದ್ವಿರುದ್ಧ ವ್ಯಕ್ತಿತ್ವದ, ರಾಜಕಾರಣಿಗಳು ದೇವೇಗೌಡ ಹಾಗೂ ದಿವಂಗತ ಎಸ್.ಬಂಗಾರಪ್ಪ. ರಾಜಕೀಯವಾಗಿ ಅತ್ಯಂತ ಮಹಾತ್ವಾಕಾಂಕ್ಷಿಗಳಾಗಿದ್ದ ಇವರಿಬ್ಬರೂ ಶೂದ್ರರ, ಹಿಂದುಳಿದ ವರ್ಗಗಳ ಪ್ರಶ್ನಾತೀತ ನೇತಾರರೆನಿಸಿಕೊಂಡವರು.

ಇವರು ಹಳ್ಳಿ ಮೂಲದ ಜಿಗುಟುತನದ, ಸರಳತೆ, ಆಷಾಢಭೂತಿತನವನ್ನು, ಪುಢಾರಿಗಿರಿಯನ್ನು ಕಂಡರೆ ಸದಾ ಸಿಡಿದೇಳುವ ಗುಣ, ಉಳುವವರ ಬಗೆಗೆ ಸದಾಕಾಲ ಚಿಂತಿಸುವ ಮನಸ್ಸು, ಯಾವುದಕ್ಕೂ ಬಗ್ಗದ ಆತ್ಮ ವಿಶ್ವಾಸ ಹಾಗೂ ಈ ನೆಲದ. ಈ ಮಣ್ಣಿನ ವ್ಯಕ್ತಿತ್ವವನ್ನು ಹೊಂದಿದ್ದರು. 80ರ ದಶಕದಲ್ಲಿ ಅತ್ಯಂತ ಸಮರ್ಥ ನಾಯಕರಾಗಿ ಹೊರಹೊಮ್ಮಿದ ದೇವೇಗೌಡರು ಅಂದಿಗೂ ಇಂದಿಗೂ ಅತ್ಯುತ್ತಮ ನೀರಾವರಿ ತಜ್ಞರೆಂದು ಪ್ರಖ್ಯಾತಿಯಾದವರು.  ರಾಜ್ಯದ ಪ್ರತಿಯೊಂದು ಜಿಲ್ಲೆಗಳ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಅರಿತಿದ್ದ ದೇವೇಗೌಡರು ಹಾಗೂ ಇದೇ ಮಾದರಿಯ ಮತ್ತೊಬ್ಬ ಧೀಮಂತ ನಾಯಕರಾಗಿದ್ದ ದಿವಂಗತ ಎಸ್.ಬಂಗಾರಪ್ಪ ಹಿಂದುಳಿದ ವರ್ಗಗಳಲ್ಲಿ ಸದಾ ಪ್ರಜ್ವಲಿಸುವ ಸ್ವಾಭಿಮಾನದ ಕಿಚ್ಚನ್ನು ತಂದುಕೊಟ್ಟಿದ್ದು ಸಾಮಾನ್ಯ ಸಂಗತಿಯೇನಲ್ಲ.

ತಮ್ಮ ಹಳ್ಳಿಯ ಮುಗ್ಧ, ಪ್ರಾಮಾಣಿಕ ವ್ಯಕ್ತಿತ್ವವನ್ನು ದೇವೇಗೌಡರು ದಣಿವರಿಯದ ನಿರಂತರ ಜನಸಂಪರ್ಕದ ರಾಜಕಾರಣದ ಮೂಲಕವೂ ಬಂಗಾರಪ್ಪನವರು ಸಮಾಜವಾದಿ ಹಿನ್ನೆಲೆಯಿಂದ, ಶಾಂತವೇರಿ ಗೋಪಾಲ ಗೌಡರ ನಾಯಕತ್ವದಿಂದ ಪಡೆದುಕೊಂಡಿದ್ದರು. ಸಕಾರಣವಾಗಿಯೆ ಇವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಅರ್ಹರೂ ಎನ್ನುವ ಆತ್ಮವಿಶ್ವಾಸ ಹಾಗೂ ಇದು ಫಲಿಸುವ ಕಾಲವೂ ಕೂಡಿ ಬಂದಾಗ ಆಗ ಚಲಾವಣೆಯಲ್ಲೇ ಇಲ್ಲದ ರಾಮಕೃಷ್ಣ ಹೆಗಡೆ ಎನ್ನುವ ಬೋರ್ಡ್ ರೂಂ ರಾಜಕಾರಣಿ ಹಿಂಬಾಗಿಲಿನಿಂದ ಪ್ರವೇಶಿಸಿ ಮುಖ್ಯಮಂತ್ರಿ ಗದ್ದುಗೆಗೇರಿ ತಮ್ಮ ಕುಟಿಲ ನೀತಿಯ ಮೂಲಕ ಇವರಿಬ್ಬರಿಗೂ ಚೆಳ್ಳೆಹಣ್ಣು ತಿನ್ನಿಸಿದ್ದರು.

ಇವರಿಬ್ಬರನ್ನು 80ರ ದಶಕದುದ್ದಕ್ಕೂ ಕಾಡಿದ ಕನ್ನಡ ಮಾಧ್ಯಮಗಳ ಜಾತೀಯತೆ ಹಾಗೂ ಧೂರ್ತತನವಂತೂ ಕಣ್ಣಿಗೆ ರಾಚುವಷ್ಟು ಪ್ರಖರವಾಗಿತ್ತು. ( ಆ ದಶಕಗಳಲ್ಲಿ ಹೆಗಡೆಯವರೊಂದಿಗೆ ಸತತವಾಗಿ ಗುರುತಿಸಿಕೊಂಡ,) ಅವರನ್ನು ಸದಾ ಬೆಂಬಲಿಸಿ ಈ ಶೂದ್ರ, ಹಿಂದುಳಿದ ರಾಜಕಾರಣಿಗಳ ಬಗ್ಗೆ ಅಸಡ್ಡೆ ತೋರಿದ ನಮ್ಮ ಪ್ರೀತಿಯ, ಹೆಮ್ಮೆಯ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಈಗ ಬಂಗಾರಪ್ಪನವರು ತೀರಿಕೊಂಡನಂತರ ವಿಚಿತ್ರ ರೀತಿಯಲ್ಲಿ ರಾಗ ಬದಲಿಸಿ ಹಾಡುತ್ತಿರುವುದು ನಮ್ಮಂತಹವರಲ್ಲಿ ಬೆರಗನ್ನು, ಹತಾಶೆಯನ್ನು ಮೂಡಿಸಿದೆ.

ಆಗ ಲಂಕೇಶ್ ಪತ್ರಿಕೆ, ಮುಂಗಾರು,  ಪ್ರಜಾವಾಣಿಯಂತಹ ಪತ್ರಿಕೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲ ಮಾಧ್ಯಮಗಳು ಬೆನ್ನೆಲುಬಿಲ್ಲದ, ಕುತಂತ್ರ ರಾಜಕಾರಣಿ ಹೆಗಡೆಯವರನ್ನು ಅಟ್ಟದ ಮೇಲೆ ಕೂರಿಸಿ ಜನಗಳ ಮಧ್ಯದಿಂದ ರಾಜಕೀಯವನ್ನು ಮಾಡಿ ಜನನಾಯಕರೆನಿಸಿಕೊಂಡ ಇವರಿಬ್ಬರನ್ನೂ ಪದೇ ಪದೇ ಗೇಲಿಗೊಳಿಸುತ್ತ, ಹಂಗಿಸುತ್ತ ಹೆಗಡೆ ಒಬ್ಬ ವಿನಯವಂತ ರಾಜಕಾರಣಿಯಂತೆಯೂ, ಇವರು ಸೀನಿದರೆ ಅಕ್ಕರೆಯಿಂದ ಕೊಡೆ ಹಿಡಿದು, ದೇವೇಗೌಡ ಹಾಗೂ ಎಸ್.ಬಂಗಾರಪ್ಪ ಕೇವಲ ತಂಟೆಕೋರರಂತೆಯೂ, ಇವರಿಬ್ಬರೂ ಇಲ್ಲಿನ ಬರ ಪೀಡಿತ ಹಳ್ಳಿಗಳ ಬಗ್ಗೆ, ನೀರಾವರಿಯ ಅಗತ್ಯತೆಯ ಬಗ್ಗೆ ತಮ್ಮೆಲ್ಲ ಅನುಭವವನ್ನು ಬಳಸಿ ಮಾತನಾಡತೊಡಗಿದಾಗ ಇದೇ ಮಾಧ್ಯಮಗಳು ಇದನ್ನು ಬಂಡಾಯವೆನ್ನುವಂತೆಯೂ ಯಶಸ್ವಿಯಾಗಿ ಬಿಂಬಿಸಿದ್ದು ಇವರಿಬ್ಬರ ಆತ್ಮಪ್ರತಿಷ್ಠೆಗೆ ದೊಡ್ಡ ಬರೆಯನ್ನೇ ಎಳೆಯಿತು.

ಇದನ್ನು ಇವರಿಬ್ಬರೂ ತಮ್ಮ ಹಳ್ಳಿತನದ ಪ್ರಾಮಾಣಿಕತೆ, ಸರ್ವರಿಗೂ ಸಮಪಾಲನ್ನು ಬಯಸುವ ಪ್ರಾಮಾಣಿಕತೆಯನ್ನು ಬಳಸಿಕೊಂಡು ಮರಳಿ ತಮ್ಮ ಜನರ ಬಳಿಗೆ ಹೋಗುವುದರ ಬದಲು, ಆ ಮೂಲಕ ಮತ್ತೆ ತಮ್ಮ ರಾಜಕೀಯದ ಬುನಾದಿಯನ್ನು ಹಂತಹಂತವಾಗಿ ಕಟ್ಟುವುದರ ಬದಲು 90ರ ದಶಕದ ಅಂತ್ಯದ ವೇಳೆಗೆ ಸಾಮಾಜಿಕ ಸ್ಪರ್ಶವನ್ನು ನಿಧಾನವಾಗಿ ಕಳೆದುಕೊಳ್ಳುತ್ತ ಒಕ್ಕಲಿಗರೆಂದರೆ ಅವರು ಎಲ್ಲಾ ಜಾತಿಗಳಲ್ಲಿರುವ ವೃತ್ತಿಪರ, ಅಮಾಯಕ, ಅಸಹಾಯಕ ರೈತರು ಎನ್ನುವ ಮೂಲಭೂತ ತತ್ವವನ್ನೇ ಮರೆತು ಅವರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಜಾತಿಯಾಗಿ ಕಂಡ, ಸ್ವಂತದ, ಆದರ್ಶದ ಘನತೆಯೆಂದರೆ ಒಕ್ಕಲಿಗರ, ಸ್ವಂತ ಕುಟುಂಬದ ವರ್ಚಸ್ಸು ಹಾಗೂ ಅಧಿಕಾರವೆನ್ನುವ ಮಟ್ಟಕ್ಕೆ ತಲುಪಿದ ದೇವೇಗೌಡರು, 90ರ ದಶಕದ ಅಂತ್ಯದ ವೇಳೆಗೆ ತಮ್ಮ ಮೂಲ ಪ್ರಗತಿಪರ ಗುಣವಾದ ಎಲ್ಲಾ ಜಾತಿಯ ಬಡವರ ಪರ ಸದಾ ತುಡಿಯುವ ಹಳೇ ಕಾಲದ ತಮ್ಮ ವ್ಯಕ್ತಿತ್ವವನ್ನು ಜನನಾಯಕರಾಗುವ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ರಾಜಕೀಯ ಮುತ್ಸದ್ದಿತನವನ್ನೇ ಕಲಿಯದೆ ಕೇವಲ ವೈಯುಕ್ತಿಕ ಛಲವನ್ನೇ ಇನ್ನಿಲ್ಲದಂತೆ ನೆಚ್ಚಿ ಇದರ ಋಣಾತ್ಮಕ ಅಂಶಗಳನ್ನೇ ತಮ್ಮ ಆತ್ಮ ಪ್ರತ್ಯಯದ ಸದಾ ಕಾಲ ದುರಂತ ನಾಯಕನ ಪೋಸಿಗೆ ಬಳಸಿಕೊಂಡು ಸೋಲಿಲ್ಲದ ಸರದಾರರೆನ್ನುವ ಘೋಷಣೆಗೆ ಬಲಿಯಾಗಿ ಸಂಪೂರ್ಣವಾಗಿ ಹಾದಿ ತಪ್ಪಿದ ದಿವಂಗತ ಎಸ್.ಬಂಗಾರಪ್ಪ.

ಇವರಿಬ್ಬರೂ ತಮಗೆ ಸಹಜವಾಗಿ ದೊರೆತ ಜನನಾಯಕರ ಜನಪ್ರಿಯತೆಯ ಧನಾತ್ಮಕ ಅಂಶಗಳಿಗೆ ತಿಲಾಂಜಲಿಯಿಟ್ಟು, ಸ್ವತಹ ಪರಿಶ್ರಮದಿಂದ ಪಡೆದ ಈ ಜನನಾಯಕ ಜನಪ್ರಿಯತೆಯನ್ನು ಯಾರೂ ಕಂಡರಿಯದಂತಹ ಕುಂಟುಂಬ, ಸ್ವಜನ ಪಕ್ಷಪಾತದ ರಾಜಕಾರಣಕ್ಕೆ ಧಾರೆಯೆರೆದು ತಮ್ಮನ್ನು ನಂಬಿದ ಪಕ್ಷ, ಅಮಾಯಕ ಹಿಂಬಾಲಕರನ್ನು ಸಂಪೂರ್ಣ ಅಧೋಗತಿಗೆ ತಂದು ನಿಲ್ಲಿಸಿ ತಮ್ಮ ಜೀವಿತದ ಸಂಧ್ಯಾಕಾಲದ ವೇಳೆಗೆ ಸಂಪೂರ್ಣ ಆಸಹಾಯಕ ಸ್ಥಿತಿಗೆ ತಲುಪಿ ನಗೆಪಾಟಲಿಗೀಡಾಗಿದ್ದು ನಿಜಕ್ಕೂ ದುಖದ ಸಂಗತಿ. ಇಷ್ಟೇ ಅಲ್ಲ ತಮ್ಮ ಹುಂಬ ಛಲವನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಯಾರಿಗೋ ಪಾಠ ಕಲಿಸುತ್ತೇವೆ ಎನ್ನುವ ಹುಸಿ ಭ್ರಮೆಯಿಂದ ಅಧಿಕಾರಕ್ಕಾಗಿ ನೇಪಥ್ಯದಲ್ಲಿ ಹೊಂಚಿಹಾಕುತ್ತಿದ್ದ ಸಂಘ ಪರಿವಾರಕ್ಕೆ ಸಮರ್ಥ ರಾಜಕೀಯ ವೇದಿಕೆಯನ್ನು ನಿರ್ಮಿಸಿಕೊಟ್ಟರು. ಇಂತಹ ಸುವರ್ಣಾವಕಾಶವನ್ನು ಈ ಸಂಘ ಪರಿವಾರ ಕನಸಿನಲ್ಲಿಯೂ ನೆನಸಿರಲಿಲ್ಲ. ಆದರೆ ಈ ಜನನಾಯಕರು ತಮ್ಮ ರಾಜಕೀಯ ನೈತಿಕತೆಯನ್ನು ಅನಗತ್ಯವಾಗಿ ಬಲಿಕೊಟ್ಟು ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲನ್ನು ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ತೆರೆದು ಕೊಟ್ಟರು. ಇದಕ್ಕಾಗಿ ಇವರು ತೆತ್ತ ಬೆಲೆ ಅಪಾರವಾದದ್ದು ಹಾಗೆಯೇ ಕರ್ನಾಟಕದ ಜನತೆ ಕೂಡ. ಇವರಿಬ್ಬರಿಗೆ ಮೇಲಿನ ಬಣದ ತಮ್ಮ ಸಹೋದ್ಯೋಗಿಗಳ ಋಜು ಸ್ವಭಾವ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಏನೇ ಬಂದರು ಕುಟುಂಬ ರಾಜಕಾರಣವನ್ನು ಮಾತ್ರ ಪೋಷಿಸುವುದಿಲ್ಲ ಎನ್ನುವ ನೈತಿಕ ಛಲ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದ ನೈತಿಕತೆಯ ಪಾಲು ಸ್ವಲ್ಪವಾದರೂ ದಕ್ಕಿದ್ದರೆ….

 

ಬಣ  3 :

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂ.ಸಿ.ನಾಣಯ್ಯ, ಎಚ್.ಕೆ.ಪಾಟೀಲ, ಸಿಂಧ್ಯ, ಎಚ್.ಸಿ.ಮಹಾದೇವಪ್ಪ ಮುಂತಾದವರು. ಮೇಲಿನ ಎರಡೂ ಬಣಗಳ ವ್ಯಕ್ತಿತ್ವವನ್ನು ಅಷ್ಟಿಷ್ಟು ಪಡೆದುಕೊಂಡಂತಿರುವ ಇವರ ಬಗ್ಗೆ ಹೆಚ್ಚಿಗೆ ಹೇಳುವುದೇನಿದೆ?

ಇವರು ಸಂಘ ಪರಿವಾರದ ಕೋಮುವಾದ ರಾಜಕಾರಣಕ್ಕೆ ತಮ್ಮ ಸೆಕ್ಯುಲರ್ ವ್ಯಕ್ತಿತ್ವದ ಮೂಲಕವೇ ತಕ್ಕ ಉತ್ತರ ನೀಡಬಲ್ಲ ಛಾತಿಯುಳ್ಳವರು. ಆಡಳಿತಾತ್ಮಕವಾಗಿ ದಕ್ಷತೆಯನ್ನು, ಅಪಾರ ಅನುಭವವನ್ನು ಸಾಧಿಸಿರುವವರು. ರಾಜ್ಯದ ಹಣಕಾಸಿನ ಬಗ್ಗೆಯಾಗಲಿ, ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯಾಗಲೀ ಇವರು ಅಪಾರ ಜ್ಞಾನದಿಂದ ಮಾತನಾಡಬಲ್ಲರು. ಆದರೆ ಸಕ್ರಿಯ ರಾಜಕಾರಣಕ್ಕೆ ಅತ್ಯವಶ್ಯಕವಾಗಿರುವ ಸದಾಕಾಲ ಜನಸಂಪರ್ಕದ ತುರ್ತು ಅಗತ್ಯತೆ ಇವರಿಗೆ ಅಲರ್ಜಿ. ಏಕೆಂದರೆ ಇದಕ್ಕಾಗಿ ಕನಿಷ್ಟ 12 ಗಂಟೆಗಳ ರಾಜಕೀಯ ಮಾಡಬೇಕಾಗುತ್ತದೆ. ಅದು ಇವರಿಗಾಗದು. ಇವರ ಜನನಾಯಕನ ಖ್ಯಾತಿ ಮೇಲಿನ ಬಣ ಒಂದಂಕ್ಕಿಂತಲೂ ಕೊಂಚ ಜಾಸ್ತಿ ಹಾಗೂ ಮೇಲಿನ ಬಣ ಎರಡಕ್ಕಿಂತಲೂ ಕಡಿಮೆ. ಯಾವುದೇ ಕಾಲಕ್ಕೂ ಯಾರನ್ನು ಎದುರಿಸಿಯಾದರೂ ಸರಿಯೆ ನನ್ನ ಸ್ವಂತ ವ್ಯಕ್ತಿತ್ವ, ಛಲವನ್ನು ನೆಚ್ಚಿಯೇ ರಾಜಕೀಯ ಮಾಡುತ್ತೇನೆ ಹೊರತು ಇನ್ನೊಬ್ಬರ ಹಂಗಿನೊಳಗೆ ನೆಚ್ಚಿಕೊಂಡು ಮಾತ್ರ ಅಲ್ಲ ಎನ್ನುವ ರಾಜಕೀಯ ಛಲ ಮೇಲಿನ ಮೊದಲ ಬಣಕ್ಕಿಂತ ಸ್ವಲ್ಪ ಜಾಸ್ತಿ, ಎರಡನೇ ಬಣಕ್ಕಿಂತ ಕಡಿಮೆ. ಇವರ ಪ್ರಗತಿಪರ ಚಿಂತನೆಯ ಮನೋಭಾವ ಮೇಲಿನ ಎರಡೂ ಬಣಕ್ಕಿಂತಲೂ ಜಾಸ್ತಿ. ರಾಜಕೀಯದಲ್ಲಿ ಸದಾಕಾಲ ಎದುರಾಗುವ ಮುಂದೇನು ಮಾಡಬೇಕು ಎನ್ನುವ ನಿರಂತರ ಜಿಜ್ಞಾಸೆಯನ್ನು ಎದುರಿಸುವ, ನಿರ್ಧರಿಸುವ ಸ್ಪಷ್ಟತೆಯ ವಿಷಯದಲ್ಲಿ ಮೇಲಿನ ಎರಡೂ ಬಣಕ್ಕಿಂತಲೂ ಸಂಪೂರ್ಣ ಕಡಿಮೆ. ಇದು ಇವರಲ್ಲಿ ಅತ್ಯಂತ ದುರ್ಬಲ ರಾಜಕೀಯ ಇಚ್ಛಾಶಕ್ತಿಯ ಮನೋಭಾವವನ್ನು ಹುಟ್ಟಿಹಾಕಿ ಮಸಿ ಇಟ್ಟಂತೆ ಎಲ್ಲವನ್ನೂ ನುಂಗಿ ನೀರು ಕುಡಿದಿದೆ.

ಇಂದಿನ ಅತ್ಯಂತ ಹತಾಶೆಯ, ಸಂಧಿಗ್ಧ, ದಿಕ್ಕೆಟ್ಟ ಪರಿಸ್ಥಿತಿಯನ್ನು ಇವರು ತಮ್ಮ ಜಡತ್ವವನ್ನು ಕಳಚಿ ಸಂಪೂರ್ಣವಾಗಿ ಮೇಲೆದ್ದು ನಿರಂತರ ಜನಸಂಪರ್ಕದ ಮೂಲಕ ತಮ್ಮ ರಾಜಕೀಯ ಜೀವನದ ಪುನರುಜ್ಜೀವನಗೊಳಸಿಕೊಂಡರೆ ಇವರಿಗೆ ಸುವರ್ಣಾವಕಾಶ. ಆದರೆ ಕೊಟ್ಟ ಕುದುರೆಯನ್ನು ಏರಲು ನಿರಾಕರಿಸುತ್ತಾರೆ ಅಥವಾ ನಿರಾಕರಿಸಿದ್ದಾರೆ ಎನ್ನುವ ತಮ್ಮ ಮೇಲಿನ ಅಪಾದನೆಯಿಂದ ಹೊರಬರಲು ಇವರು ಪ್ರಯತ್ನಿಸಿದ ಯಾವುದೇ ನಿದರ್ಶನಗಳು ಇಲ್ಲ.

 

ಬಣ 4 :

ಕುಮಾರಸ್ವಾಮಿ, ಯಡಿಯೂರಪ್ಪ, ಶ್ರೀರಾಮುಲು ಹಾಗೂ ಮುಂತಾದವರು. ಮೊದಲಿಗೇ ಹೇಳಬಿಡಬೇಕು ಅನಾಯಾಸವಾಗಿ ಮೂರನೇ ಬಣದಲ್ಲಿರಬಹುದಾದಂತಹ ಜನಪ್ರಿಯ ರಾಜಕಾರಣಿ ಕುಮಾರಸ್ವಾಮಿ ತಮ್ಮ ಗೊಂದಲಗಳು, ಆತ್ಮಹತ್ಯಾತ್ಮಕ ನಿಲುವುಗಳು  ಮೂಲಕ ಸರ್ರನೆ ಈ ಭ್ರಷ್ಟ ನಾಲ್ಕನೇ ಬಣಕ್ಕೆ ಜಾರಿರುವುದು 21ನೇ ಶತಮಾನದ ಕರ್ನಾಟಕ ರಾಜಕೀಯದ ದುರಂತಗಳಲ್ಲೊಂದು. ಕೇವಲ ತಂತ್ರ ಹಾಗೂ ಪ್ರತಿ ತಂತ್ರಗಳನ್ನು ಹೆಣೆಯುತ್ತಾ ಎದುರಾಳಿಗಳನ್ನು ಅಡ್ಡಬೀಳಿಸುವುದೇ ಸಕ್ರಿಯ ರಾಜಕಾರಣ, ವೈಯುಕ್ತಿಕ ಭ್ರಷ್ಟಾಚಾರದ ಜೊತೆಗೆ ಸಂಪೂರ್ಣ ವ್ಯವಸ್ಧೆಯನ್ನೇ ಭ್ರಷ್ಟಾಚಾರಗೊಳಿಸಿದ ಅಪಕೀರ್ತಿ, ಕರ್ನಾಟದಲ್ಲಿ ಸದಾಕಾಲ ಅಧಿಕಾರ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವ ಪಾಳೇಗಾರಿಕೆ ಧೋರಣೆ, ನೈತಿಕ ರಾಜಕಾರಣದ ಬಗ್ಗೆ ಇನ್ನಿಲ್ಲದಂತಹ ಅಸಡ್ಡೆ ಹಾಗೂ ತಿರಸ್ಕಾರ, ರಾಜಕೀಯದಲ್ಲಿ ನೈತಿಕತೆ ಎನ್ನುವುದೇ ಕಸದ ಬುಟ್ಟಿಗೆ ಸಮ, ಕುಂಟುಂಬ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣವೆನ್ನುವುದು ಜನತೆಯ ಆಶೀರ್ವಾದದ ಮೂಲಕವೇ ಮಾಡುತ್ತಿದ್ದೇವೆ ಎನ್ನುವ ಹೂಂಕರಿಕೆ ಇಂತಹ ಅವಗುಣಗಳನ್ನು ಹೊಂದಿರುವ ಯಡಿಯೂರಪ್ಪ, ಶ್ರೀರಾಮುಲುರಂತಹವರ ರಾಜಕಾರಣಿಗಳು ಇವಕ್ಕೆ ಸಮವೆನ್ನುವಂತೆ ನಡೆದುಕೊಳ್ಳುತ್ತಿರುವ ಕುಮಾರಸ್ವಾಮಿ ಹಾಗೂ ಇವರ ಜೊತೆಗೆ ಸದಾಕಾಲ ಕಣ್ಣಾಮುಚ್ಚಾಲೆಯಾಟವಾಡುತ್ತ, ಅದರ ಖುಷಿಯನ್ನು ಅನುಭವಿಸುತ್ತ, ಇದನ್ನೇ ರಾಜಕಾರಣವೆನ್ನುವ ಭ್ರಮೆಯಲ್ಲಿರುವ, ಸುದ್ದಿಯಲ್ಲಿರುವ ಕುಮಾರಸ್ವಾಮಿಯವರ ರಾಜಕೀಯ ಎಲ್ಲವೂ ಬರುವ ವರ್ಷಗಳಲ್ಲಿ ಕರ್ನಾಟಕವನ್ನು ಮತ್ತಷ್ಟು ಅಂಧಕಾರಕ್ಕೆ, ಅಧೋಗತಿಗೆ ತಳ್ಳುವುದು ಗ್ಯಾರಂಟಿ. ಇವೆಲ್ಲವಕ್ಕೆ ಕಿರೀಟವಿಟ್ಟಂತೆ ಶ್ರೀರಾಮುಲು ಅವರು ಹಿಂದುಳಿದವರ ಏಳಿಗೆಗಾಗಿ ಸ್ಥಾಪಿಸುವ ಹೊಸ ಪಕ್ಷ ಆ ವರ್ಗದ ಅಮಾಯಕ ಜನತೆಯನ್ನು ಹಳ್ಳಕ್ಕೆ ಬೀಳಿಸುವುದು ಗ್ಯಾರಂಟಿ.

ಕೇವಲ ನೋಟುಗಳನ್ನು ಹಂಚುವುದೇ ಸಮಾಜಕಾರ್ಯವೆನ್ನುವುದನ್ನು ರಾಜಕೀಯ ಸಿದ್ಧಾಂತವನ್ನಾಗಿ ರೂಪಿಸಿರುವ ಶ್ರೀರಾಮುಲು ಹಾಗೂ ರೆಡ್ಡಿಯ ಬಳಗ ಬಳ್ಳಾರಿ ಭಾಗದ ಜನತೆಯನ್ನು ಕೂಡ ಇದಕ್ಕೆ ಸರಿಯಾಗಿ ಟ್ಯೂನ್ ಮಾಡಿಕೊಂಡಿರುವುದು ಹಾಗೂ ಈ ಮತಿಹೀನ ಹೊಸ ಪಕ್ಷದ ಮೂಲಕ ಇದು ಇನ್ನಷ್ಟು ಮುಂದುವರೆದು ಇನ್ನಿಲ್ಲದ ಹಂಗಿನ ಅನೈತಿಕ ಸ್ಥಿತಿಗೆ ಆ ಜಿಲ್ಲೆಯನ್ನು ಸಂಪೂರ್ಣವಾಗಿ ತಳ್ಳಿ ಇದೇ ತತ್ವವನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಕುಟಿಲ ಯೋಜನೆಗಳಿಗೆ ಮಿಕ್ಕವರಿಬ್ಬರೂ ಅಗಲೇ ಕಣ್ಣು ಮಿಟುಕಿಸುತ್ತಿರುವ ರೀತಿ, ಈ ಬಣದ ಮೂವರೂ ಮುಂದಿನ ದಿನಗಳ ರಾಜಕೀಯದ ಕಿಂಗ್ ಮೇಕರ್ ಗಳಾಗಿ ಬಿಂಬಿತವಾಗಿರುತ್ತಿರುವುದು, ಮೂರನೇ ಬಣದ ಜನರ ನಿಷ್ಕ್ರಿಯತೆ ಎಲ್ಲವೂ ರಾಜ್ಯದ ಪ್ರಜ್ಞಾವಂತರಿಗೆ, ನೈತಿಕತೆಗೆ ದೊಡ್ಡ ಸವಾಲಾಗುತ್ತವೆ.

ಹಾಗಿದ್ದರೆ ನಾವೇನು ಮಾಡಬೇಕು?