Daily Archives: January 11, 2012

ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ 

ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ ಎಂಬ ಸಂಸ್ಥೆ ಅಡಿಯಲ್ಲಿ ಗೋಧಿ ಮತ್ತು ಹಾಲಿನ ಪುಡಿಯನ್ನು ಪೂರೈಕೆ ಮಾಡುತಿತ್ತು. ಇದನ್ನು ಶಾಲಾ ಮಕ್ಕಳಿಗೆ ಮಧ್ಯಾದ ಉಪಹಾರವಾಗಿ ಉಪ್ಪಿಟ್ಟು ಹಾಗು ಹಾಲನ್ನು ವಿತರಿಸಲಾಗುತಿತ್ತು. (1966 ರಿಂದ 1969 ರವರೆಗೆ 5, 6, ಮತ್ತು 7ನೇ ತರಗತಿಯಲ್ಲಿ ಓದುತಿದ್ದ ಈ ಲೇಖಕ ಕೂಡ ಇದರ ಫಲಾನುಭವಿಗಳಲ್ಲಿ ಒಬ್ಬ.)

ಆವತ್ತಿನ ಸಂಕಷ್ಟದ ದಿನಗಳಲ್ಲಿ ಭಾರತದ ಹಸಿದ ಹೊಟ್ಟೆಗಳ ಹಾಹಾಕಾರಕ್ಕೆ ಆಸರೆಯಾಗಿ ಬಂದದ್ದು ಹಸಿರು ಕ್ರಾಂತಿಯೋಜನೆ. ಅದೇ ತಾನೆ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದ ನೂತನ ಗೋಧಿ ತಳಿ ಮತ್ತು  ಪಿಲಿಪೈನ್ಸ್ ನಲ್ಲಿ ಬಿಡುಗಡೆಯಾಗಿದ್ದ ಅಧಿಕ ಇಳುವರಿ ಕೊಡುವ ಭತ್ತದ ತಳಿ ಭಾರತದ ಪಾಲಿಗೆ ಅಕ್ಷಯ ಪಾತ್ರೆಯಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.

ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಅವಿಷ್ಕಾರ ರೈತರ ಬದುಕಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು ನಿಜ, ಆದರೆ ಈ ಉಲ್ಲಾಸ ಬಹಳ ದಿನ ಉಳಿಯಲಿಲ್ಲ. ಉತ್ತರಭಾರತದಲ್ಲಿ ನಿರ್ಮಾಣವಾದ ಬೃಹತ್ ಅಣೆಕಟ್ಟುಗಳ ಮೂಲಕ ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು. ಪಾಕಿಸ್ತಾನದಲ್ಲೂ ಕೂಡ ಇಂತಹದ್ದೇ ಕ್ರಾಂತಿ ಜರುಗಿತು. ಕಾಲುವೆ ಮುಖಾಂತರ ರೈತರ ಭೂಮಿಗೆ ಹರಿಸಿದ ನೀರು ಅವರ ಬದುಕಿನ ಅಧ್ಯಾಯವನ್ನು ಬದಲಿಸಿತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ ಏಕೆಂದರೆ, ಹೈಬ್ರಿಡ್ ತಳಿಗಳು ಬೇಡುವ ಅಧಿಕ ಮಟ್ಟದ ನೀರು, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತಗೊಂಡಿತು. ಆಧುನಿಕ ತಳಿಗಳ ಬೇಸಾಯ ರೈತರನ್ನು ಬಸವಳಿಯುವಂತೆ ಮಾಡಿತು.

ಹೈಬ್ರಿಡ್ ತಳಿಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇದ್ದರೂ ಕೂಡ ರೈತರು ಅವುಗಳನ್ನೇ ಆಶ್ರಯಿಸಿದ್ದಾರೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ನಾಟಿ ಬಿತ್ತನೆ ತಳಿಗಳು ಹೈಬ್ರಿಡ್ ತಳಿಗಳ ಸಂಕರದಿಂದಾಗಿ ನಾಶವಾಗತೊಡಗಿವೆ. ಪ್ರಾರಂಭದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಟನ್ ಭತ್ತದ ಇಳುವರಿ ನೀಡುತಿದ್ದ ಹೈಬ್ರಿಡ್ ಬೀಜಗಳಿಂದ ಈಗ ಏಷ್ಯಾ ಖಂಡದ ದೇಶಗಳಲ್ಲಿ ಕೇವಲ 2.6 ರಿಂದ 3.7 ಟನ್ ಇಳುವರಿ ಸಾಧ್ಯವಾಗಿದೆ. ಈ ಕುರಿತು ಸೃಷ್ಟೀಕರಣ ನೀಡಿರುವ ಪಿಲಿಪೈನ್ಸ್ ದೇಶದ ಮನಿಲಾದ ಭತ್ತದ ಸಂಶೋಧನಾ ಸಂಸ್ಥೆಯ ವಿಜ್ಙಾನಿಗಳು, ವರ್ಷವೊಂದಕ್ಕೆ ಒಂದು ಬೆಳೆ ತೆಗೆಯುತಿದ್ದ ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆ ತೆಗೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗತೊಡಗಿದ್ದು ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣ ಎಂದಿದ್ದಾರೆ. ಇಂತಹ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಹೇಗೆ ಸಾಮಾಜಿಕ ಪರಿಣಾಮಗಳನ್ನು ಬೀರಬಲ್ಲವು ಎಂಬುದಕ್ಕೆ ಸಣ್ಣ ಉದಾಹರಣೆ ಮಾತ್ರ.

ಆಧುನಿಕ ನೀರಾವರಿ ಪದ್ಧತಿಯಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಸಂಭವಿಸಿದ್ದು  ಈ ಕುರಿತಂತೆ ಸಮಾಜಶಾಸ್ತ್ರಜ್ಙರು ಜಗತ್ತಿನಾದ್ಯಂತ ಅಧ್ಯಯನ ನಡೆಸುತಿದ್ದಾರೆ. ಈಗಾಗಲೆ ಕೆಲವು ಅಂಶಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಆಧುನಿಕ ನೀರಾವರಿ ಪದ್ಧತಿ ಬಳಕೆಗೆ ಬಂದ ನಂತರ ಕೃಷಿ ಕುರಿತಂತೆ ರೈತರಿಗೆ ಇದ್ದ ಅನೇಕ ಹಕ್ಕುಗಳು ಮತ್ತು ಚಿಂತನೆಗಳು ನಾಶವಾದವು. ಈ ಮೊದಲು ರೈತ ತನ್ನ ಭೂಮಿಯಲ್ಲಿ ಯಾವ ಬೆಳೆಯನ್ನು ಯಾವ ಕಾಲದಲ್ಲಿ ಬೆಳೆಯ ಬೇಕು ಎಂದು ನಿರ್ಧರಿಸುತಿದ್ದ. ಈಗ ಇವುಗಳನ್ನು ನೀರಾವರಿ ಇಲಾಖೆ ಇಲ್ಲವೆ ಸರಕಾರಗಳು ನಿರ್ಧರಿಸುತ್ತಿವೆ.

ನಮ್ಮ ಪ್ರಾಚೀನ ಭಾರತದ ದೇಶಿ ಕೃಷಿ ಪದ್ಧತಿಯ ನೀರಾವರಿ ಚಟುವತಿಕೆಗಳನ್ನು ಆಯಾ ರೈತ ಸಮುದಾಯ ನಿರ್ಧರಿಸುತಿತ್ತು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ  ನೀರು ಹಂಚಿಕೆ ಕುರಿತು ಇದ್ದ ಪದ್ಧತಿಯನ್ನು ಕಂಡು ಬ್ರಿಟೀಷರು ಬೆರಗಾಗಿದ್ದರು. ಆಯಾ ಕೆರೆಗಳಿಂದ ಹಿಡಿದು ಕಾಲುವೆಗಳ ದುರಸ್ತಿ, ನಿರ್ವಹಣೆ ಎಲ್ಲವನ್ನು ರೈತರೇ ನಿರ್ವಹಿಸುತಿದ್ದರು. ಇದು ಚೋಳರ, ಪಾಂಡ್ಯರ ಆಡಳಿತ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಇಂತಹದೆ ಪದ್ಧತಿ ಏಷ್ಯಾದ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಇಂಡೊನೇಷಿಯಾದ ಬಾಲಿ ದ್ವೀಪದ ರೈತರು ಸುಬಕ್ ಎಂಬ ವ್ಯವಸ್ಥೆಯ ಹೆಸರಿನಡಿ ಭತ್ತದ ಬೆಳೆಗೆ ನೀರನ್ನು ಹಂಚಿಕೊಳ್ಳುವ ಪದ್ಧತಿಯನ್ನು ನಾವು ಇಂದಿಗೂ ಕಾಣಬಹುದು.

ಜಲಾಶಯದ ನೆಪದಲ್ಲಿ ಆಧುನಿಕ ನೀರಾವರಿ ಯೋಜನೆಗಳು ಜಾರಿಗೆ ಬಂದ ನಂತರ ರೈತರ ಹಕ್ಕುಗಳು ಮತ್ತು ಪರಿಸರಕ್ಕೆ ಪೂರಕವಾಗಿದ್ದ ದೇಶಿ ತಂತ್ರಜ್ಞಾನಗಳು ಮರೆಯಾಗಿ ರೈತರೆಲ್ಲರೂ ಸರಕಾರಗಳ ಗುಲಾಮರಂತೆ ಬದುಕಬೇಕಾಗಿದೆ. ಇದಕ್ಕೆ ಸೂಡಾನ್ ದೇಶದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸೂಡಾನ್ ನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೊಳ, ಗೆಣಸು, ಅನೇಕ ಬಗೆಯ ಕಿರುಧಾನ್ಯಗಳನ್ನು ಬೆಳೆಯುತಿದ್ದ ರೈತರನ್ನು, ಅಲ್ಲಿ ಹೊಸದಾಗಿ ಜಾರಿಗೆ ಬಂದ ಹಾಲ್ಪ ಎಂಬ ಸರಕಾರದ ನೀತಿಯಿಂದಾಗಿ ರೈತರು ಬಲವಂತವಾಗಿ ಹತ್ತಿ ಬೆಳೆಯುವಂತಾಯಿತು. ತುಟ್ಟಿಯಾದ ಬಿತ್ತನೆ ಬೀಜದ ಬೆಲೆ, ಗೊಬ್ಬರ, ಕೀಟನಾಶಕ ಇವುಗಳಿಂದ ತತ್ತರಿಸಿ ಹೋದ ರೈತರು ಲಾಭ ಕಾಣದೆ ಕಂಗಾಲಾದರು. ಇಂತಹದ್ದೇ ಸ್ಥಿತಿ ಅಂದಿನ ಸೋವಿಯತ್ ಒಕ್ಕೂಟದಲ್ಲೂ ಸಹ ಜಾರಿಯಲ್ಲಿತ್ತು. ಕಮ್ಯೂನಿಷ್ಟ್ ಸರಕಾರದ ಈ ನಿರ್ಧಾರಗಳನ್ನು ಆಗ ಕಜಕಿಸ್ಥಾನದ ಇಬ್ಬರು ಪಕ್ಷದ ಪದಾಧಿಕಾರಿಗಳು ಬಲವಾಗಿ ಖಂಡಿಸಿ ಇದು ರೈತರ ಹಕ್ಕುಗಳನ್ನು ಧಮನ ಮಾಡುವ ಸರ್ವಾಧಿಕಾರದ ನೀತಿ ಎಂದು ಪ್ರತಿಭಟಿಸಿದ್ದರು.

ನೀರಾವರಿ ಯೋಜನೆಗಳಲ್ಲಿ ಸರಕಾರಗಳು ನೇರವಾಗಿ ಹಸ್ತಕ್ಷೇಪ ಮಾಡುವುದರಿಂದ ಹಲವಾರು ಬಾರಿ ಯೋಜನೆಗಳು ತಮ್ಮ ಮೂಲ ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿರುವುದುಂಟು. 1970 ರ ದಶಕದಲ್ಲಿ ಇರಾನಿನ ಅತ್ಯಂತ ಎತ್ತರದ ಅಣೆಕಟ್ಟು ಡೆಜ್ ಜಲಾಶಯದಿಂದ 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾನದಲ್ಲಿ ಸಣ್ಣ ಹಿಡುವಳಿದಾರರಿದ್ದರು. ಆದರೆ, ಆಗಿನ ದೊರೆಯಾಗಿದ್ದ ಷಾ ಇಡೀ ಯೋಜನೆಯ ರೂಪು ರೇಷೆಗಳನ್ನು ಬದಲಿಸಿ ಅಮೇರಿಕಾದ ಬಹುರಾಷ್ಟೀಯ ಕಂಪನಿಗಳ ಬೃಹತ್ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಿದರು. ಇದರ ಲಾಭ ಪಡೆದ ಕಂಪನಿಗಳೆಂದರೆ, ಶೆಲ್ , ಡೆಲ್ ಅಂಡ್ ಕೊ, ಮತ್ತು ಟ್ರಾನ್ಸ್‌ವರ್ಲ್ಡ್  ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಇತ್ಯಾದಿ ಕಂಪನಿಗಳು. ಇಂತಹದ್ದೇ ಕಥನಗಳು ಜಗತ್ತಿನ ಹಲವಾರು ದೇಶಗಳಲ್ಲಿ ಜರುಗಿವೆ.

ಇದು 70 ದಶಕದಲ್ಲಿ ಭಾರತದಲ್ಲಿ ನಡೆದ ಘಟನೆ. ರಾಜಸ್ಥಾನದಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಬೃಹತ್ ನಾಲುವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ರೈತ ಕುಟಂಬಗಳೂ ಸೇರಿ ಹಲವಾರು ಭೂಹೀನ ರೈತರಿಗೆ ತಲಾ 2 ರಿಂದ 5 ಹೆಕ್ಟೇರ್ ಜಮೀನು ನೀಡಿ, ಅವರ ಭೂಮಿಗೆ ಉಚಿತವಾಗಿ ನೀರು, ಸಬ್ಸಿಡಿ ರೂಪದಲ್ಲಿ ಬೀಜ ಗೊಬ್ಬರ ಒದಗಿಸಲಾಗುವುದೆಂದು ಆಶ್ವಾಸನೆ ನೀಡಲಾಗಿತ್ತು. ಅದರಂತೆ ಈ ಪ್ರದೇಶಕ್ಕೆ ನೀರೂ ಹರಿಯಿತು. ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಭೂಮಿಯೆಲ್ಲಾ  ಪ್ರಭಾವಿ ರಾಜಕಾಣಿಗಳ, ಶ್ರೀಮಂತರ, ದಲ್ಲಾಳಿಗಳ ಪಾಲಾಗಿ ಅಲ್ಲಿನ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುವಿನಂತೆ ದುಡಿಯುತಿದ್ದರು. 1989 ರಲ್ಲಿ ಸಮೀಕ್ಷೆ ನಡೆಸಿದಾಗ ಕೇವಲ ಶೇ.30 ರಷ್ಟು ರೈತರು ಮಾತ್ರ ಭೂಮಿ ಉಳಿಸಿಕೊಂಡಿದ್ದರು.

ಉತ್ತರ ಪ್ರದೇಶದ ಸದರ್ಲಾರ್ ಸಹಾಯಕ್ ಕಾಲುವೆಯ ಫಲಾನುಭವಿಗಳು ಕೂಡ ಅತಿ ದೊಡ್ಡ ಶ್ರೀಮಂತ ಜಮೀನಿದಾರರಾಗಿದ್ದಾರೆ. ಇವರೆಲ್ಲಾ ನೀರು ಉಪಯೋಗಿಸಿದ ನಂತರ ಉಳಿದ ನೀರನ್ನು ಕಾಲುವೆ ಕೊನೆ ಭಾಗದ ಸಣ್ಣ ಹಿಡುವಳಿದಾರರು ಬಳಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ಕರ್ನಾಟಕದ ತುಂಗಭದ್ರಾ, ಕಾವೇರಿ, ತಮಿಳುನಾಡಿನ ಮೆಟ್ಟೂರು ಜಲಾಶಯಗಳ ಕೃಷಿ ಚಟುವಟಿಕೆ ಕುರಿತು ಅಧ್ಯಯನ ನಡೆಸಿರುವ ನ್ಯೂಯಾರ್ಕ್ ನಗರದ ಸಿರಾಕಸ್ ವಿ.ವಿ.ಯ ಪ್ರೀತಿ ರಾಮಚಂದ್ರನ್ ಎಂಬಾಕೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದ ಮಹಿಳೆ ಬೇಸಾಯದಿಂದ ವಿಮುಖವಾಗಿರುವುದನ್ನು ಗುರುತಿಸಿದ್ದಾರೆ.

ಅಮೇರಿಕಾದ ಬಹುತೇಕ ಕೃಷಿ ಚಟುವಟಿಕೆ ಬೃಹತ್ ಕಂಪನಿಗಳ ಇಲ್ಲವೆ ಶ್ರೀಮಂತರ ಪಾಲಾಗಿದೆ. ಅಲ್ಲಿನ ಫೆಡರಲ್ ಸರ್ಕಾರದ ನೀರಾವರಿ ಯೋಜನೆ ಕುರಿತಂತೆ ಮಸೂದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ 160 ಎಕರೆ ಮಿತಿಯೊಳಗೆ ಇರುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀರು ಒದಗಿಸಲಾಗುತಿತ್ತು. ನಂತರ   ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಸಕಾðರ ಭೂಮಿತಿಯನ್ನು 900 ಎಕರೆಗೆ ವಿಸ್ತರಿಸಿತು. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂತಹ ಅವಕಾಶಗಳನ್ನು  ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬೃಹತ್ ಕಂಪನಿಗಳು ಸಮರ್ಥವಾಗಿ ಬಳಸಿಕೊಂಡವು.

ನಮ್ಮನ್ನು ಆಳುವ ಸರ್ಕಾರಗಳ ಇಂತಹ ದ್ವಂದ್ವ ನಿಲುವಿನಿಂದಾಗಿ ಹಲವೆಡೆ ಹಿಂಸೆ ಸಾವಿನ ಘಟನೆಗಳು ಜರುಗಿವೆ. ಪಶ್ಚಿಮ ಆಫ್ರಿಕಾದ ಸೆನಗಲ್ ಮತ್ತು ಮಾರಿಷೇನಿಯಾ ನಡುವೆ ಹರಿಯುವ ನದಿಗೆ ಮಿನಂಟಾಲಿ ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಮೊದಲು ನದಿಯು ತಂದು ಹಾಕುತಿದ್ದ ಮೆಕ್ಕಲು ಮಣ್ಣಿನ ಕಣಜ ಭೂಮಿಯಲ್ಲಿ ಸೆನಗಲ್ ದೇಶದ ಕರಿಯ ವರ್ಣದ ರೈತರು ಬೇಸಾಯ ಮಾಡುತಿದ್ದರು. ಜಲಾಶಯ ನಿರ್ಮಾಣವಾದ ನಂತರ ಮಾರಿಷೇನಿಯದ ಬಿಳಿಯ ಬಣ್ಣದ ಅರಬ್ಬರು ಬೃಹತ್ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ತೊಡಗಿಕೊಂಡದ್ದರಿಂದ ನೀರಿಲ್ಲದೆ  ನದಿ ಕೆಳಗಿನ ಪ್ರಾಂತ್ಯದ ಸೆನಗಲ್ ರೈತರು ದಂಗೆಯೆದ್ದ ಪರಿಣಾಮ 250 ಮಂದಿ ಅರಬ್ಬರು ಅಸುನೀಗಿದರು. ಮಾರಿಷೇನಿಯಾದಲ್ಲಿದ್ದ ಸಾವಿರಾರು ಸೆನಗಲ್ ದೇಶದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ನಂತರ ಉಭಯ ದೇಶಗಳು ಜಂಟಿಯಾಗಿ ನಡೆಸಿದ ವಿಚಾರಣೆಯಲ್ಲಿ 600 ಮಂದಿ ರೈತರನ್ನು ನೇಣು ಹಾಕಲಾಯಿತು. ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಸಮಿತಿಯ ವರದಿಯ ಪ್ರಕಾರ, ಇಂದು ಸೆನಗಲ್ ದೇಶದ ಲಕ್ಷಾಂತರ ಹೆಕ್ಟೇರ್ ರೈತರ ಭೂಮಿ ಅಮೇರಿಕಾದ ಬೃಹತ್ ಕಂಪನಿಗಳ ಪಾಲಾಗಿದೆ. ಇವುಗಳ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರು ಅತಂತ್ರರಾಗಿ ಕಡಿಮೆ ಕೂಲಿ ದರಕ್ಕೆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯುತಿದ್ದಾರೆ.

(ಮುಂದುವರಿಯುವುದು)

nayakanuru-1.jpg

ನವಿಲು ಕಣ್ಣಿನ ಗಾಯದ ಚಿತ್ರಗಳು

ವೀರಣ್ಣ ಮಡಿವಾಳರ

ಊರು ಎನ್ನುವ ಪದ ಎಲ್ಲ ಸಮುದಾಯಗಳನ್ನು ಒಳಗೊಂಡ ತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದು ಮಾನಸಿಕವಾಗಿ ಕೇರಿಯಿಂದ ಬೇರ್ಪಟ್ಟ ಜಾಗ ಮಾತ್ರ. ಇದು ಇವತ್ತಿನ ಸ್ಥಿತಿಯೋ ಅಥವಾ ಯಾವತ್ತಿಗೂ ಹೀಗೆಯೇ ಇತ್ತೋ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. `ಗ್ರಾಮೀಣಕೇರಿ` ಎನ್ನುವ ಸಮುದಾಯ ಅದು ಒಂದು ಜೀವ ಸಮುದಾಯವಾಗಿಯೂ ಸಹ nayakanuru-1.jpgಇವತ್ತು ನಮ್ಮನ್ನಾಳುವ ಪ್ರಭುಗಳಿಗೆ ತೋರುತ್ತಿಲ್ಲ. ಇದೇ ಸಮುದಾಯದ ಪ್ರತಿನಿಧಿಗಳಾಗಿ ರಾಜಕೀಯ ಮುಖಂಡರಾದವರೂ ಸಹ ಅಲ್ಲಿಯೂ ಮತ್ತೊಂದು ರೀತಿಯ ದಾಸ್ಯದಲ್ಲಿಯೇ ಮುಂದೆ ನಡೆದಿದ್ದಾರೆ. ತಾವು ಹುಟ್ಟಿ ಬೆಳೆದ, ತಮಗೆ ಬದುಕು ಕೊಟ್ಟ ಹಳ್ಳಿಗಳ ಕೇರಿ ಇಂದವರಿಗೆ ಅಪರಿಚಿತ. ಗ್ರಾಮೀಣಕೇರಿಗಳ ತಳಮಳವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದ ಸ್ಥಿತಿಗೆ ತಳಸಮುದಾಯದ ಪ್ರತಿನಿಧಿಗಳು ತಲುಪಿರಬೇಕಾದರೆ, ಇನ್ನು `ಒಬ್ಬ ಏಕಲವ್ಯನಿಗಾಗಿ ಹಾಸ್ಟೆಲ್‌ಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ` ಎನ್ನುವ ನಾಡ ಪ್ರಭುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಭೋಜದಲ್ಲಿ ಮುರಿದು ಬಿದ್ದ ಕೇರಿ ಬದುಕು

ಊರಿಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತುದಿಯಲ್ಲಿರುವ ಈ ಭೋಜ ಕರ್ನಾಟಕದ ಗಡಿಯಲ್ಲಿರುವ ಒಂದು ಹಳ್ಳಿ. ಇತ್ತೀಚೆಗೆ ಒಂದು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಅಂದಾಜು ಐನೂರಕ್ಕೂ ಹೆಚ್ಚು ಜನ ಕೇರಿಯ ಮೇಲೆ ದಾಳಿ ಇಟ್ಟರು. ಅದೀಗ ನಿದಿರೆಗೆ ಜಾರುತ್ತಿದ್ದ ಜೀವಗಳ ಜೀವ ಕೈಗೆ ಬಂದು ತಲ್ಲಣದಲ್ಲಿ ಮುದುಡಿ ಹೋದವು.

ದಾಳಿಕೋರರು ತೂರಿದ ಕಲ್ಲುಗಳ ಬಾಯಿಗೆ ಕರುಣೆಯಿರಲಿಲ್ಲ. ಆ ಕಲ್ಲುಗಳಿಗೆ ಮೊದಲು ಬಲಿಯಾದದ್ದು ಆ ಕೇರಿಯ ಬೆಳಕು. ಬೀದಿಯ ಕಂಬದ ದೀಪಗಳೆಲ್ಲ ಉದುರಿ ಹೋದವು. ಒಮ್ಮಿಂದೊಮ್ಮೆಗೆ ಕೇರಿಯ ತುಂಬ ಕತ್ತಲು. ಕಿವಿಗಡಚಿಕ್ಕುವ ಬೈಗುಳಗಳು. ಮನೆ ಮನೆಯ ಕದಗಳೆಲ್ಲ ಮುರಿದುಬಿದ್ದವು. ಮನೆಯೊಳಗಿನ ಜೀವಗಳು ಬೇಟೆಗಾರರಿಗೆ ಹೆದರಿದ ಮಿಕಗಳಂತೆ ನಡುಗುತ್ತಾ ಮೂಲೆ nayakanuru-2.jpgಸೇರಿದವು. ಇವರ ಕ್ರೌರ್ಯಕ್ಕೆ ಬಲಿಯಾಗದ ವಸ್ತುಗಳೇ ಉಳಿಯಲಿಲ್ಲ. ನಾಲ್ಕಾರು ಬೈಕ್‌ಗಳು ನಜ್ಜುಗುಜ್ಜಾದವು. ಗುಡಿಸಲುಗಳು ನಡಮುರಿದುಕೊಂಡು ನೆಲಕ್ಕೆ ಒರಗಿದವು. ಗೋಡೆಗಳೆಲ್ಲ ಅಂಗಾತ ಮಲಗಿದವು ವಯಸ್ಸಾದ ಮುದುಕರಂತೆ. ಒಳಕ್ಕೆ ಬಂದು ಕೈಗೆ ಸಿಕ್ಕು ಒಡೆದು ಹೋದ ವಸ್ತುಗಳಲ್ಲಿ ಟಿ.ವಿ., ಡಿ.ವಿ.ಡಿ, ಕುರ್ಚಿಗಳು ತಾವೇ ಸೇರಿದವು. ಈ ರೀತಿ ಹಾಳು ಮಾಡುವ ಮನಸ್ಸುಗಳಿಗೆ ಬಲಿಯಾದ ವಸ್ತುಗಳ ಆಯ್ಕೆಯಲ್ಲಿಯೇ ತಿಳಿಯುತ್ತದೆ ಇವರ ಅಸಹನೆ ಎಂಥದ್ದು ಎಂಬುದು. ವಸ್ತುಗಳನ್ನು ಮತ್ತೆ ಕೊಳ್ಳಬಹುದು, ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹದಿನಾರು ವರುಷದ ಹುಡುಗನಿಗೆ ಆದ ತೊಂದರೆ ತುಂಬಿಕೊಡುವರಾರು?  ಕೆಟ್ಟ ಆಕ್ರೋಶದ ಮನಸ್ಸು ಒದ್ದ ರಭಸಕ್ಕೆ ಕದದ ಹಿಂದೆ ಆತು ನಿಂತಿದ್ದ ಗರ್ಭಿಣಿ ಹೆಣ್ಣುಮಗಳು ನೆಲಕ್ಕೆ ಬಿದ್ದು ಅನುಭವಿಸಿದ ಹಿಂಸೆಗೆ ಹೊಣೆ ಯಾರು?

ಕೇರಿಗೆ ಸೇರಿದ ಕೆಲ ಹುಡುಗರು ರಸ್ತೆಯಲ್ಲಿ ವಾಲಿಬಾಲ್ ತೂರಾಡುತ್ತಾ ಬರುತ್ತಿದ್ದಾಗ ಒಬ್ಬ ಅಜ್ಜನಿಗೆ ಚೆಂಡು ಬಡಿದಿದೆ. ಈ ತಪ್ಪಿಗೆ ಹುಡುಗರನ್ನು ಹಿಡಿದು ಬಡೆದದ್ದಾಗಿದೆ. ತಪ್ಪು ಮಾಡಿದ ಹುಡುಗರ ತಂದೆತಾಯಿಗಳು ಅಜ್ಜನ ಮನೆಗೆ ಹೋಗಿ ಕೈಮುಗಿದು ಕ್ಷಮೆ ಕೇಳಿ ಬಂದದ್ದಾಗಿದೆ. ಮತ್ತೊಂದು ದಿನ ಕೇರಿಯವನೊಬ್ಬ ದಾರಿಯಲ್ಲಿ ಕುಡಿದು ಓಲಾಡುತ್ತ ಬರುತ್ತಿದ್ದಾಗ ಒಬ್ಬ ಹೆಣ್ಣುಮಗಳಿಗೆ ಕೈ nayakanuru-3.jpgತಾಗಿಸಿದ್ದಾನೆ. ಆ ಹೆಣ್ಣುಮಗಳು ಕುಡಿದವನನ್ನು ಬಾರಿಸಿದ್ದಾಳೆ. ಕುಡಿದ ಅಮಲಿನ ಅವಿವೇಕದ ವ್ಯಕ್ತಿ ಮರಳಿ ಆ ಮಹಿಳೆಗೆ ಹೊಡೆದು ಪರಾರಿಯಾಗಿದ್ದಾನೆ. ಇದು ಘಟನೆಯ ಸ್ಥಳದಲ್ಲಿ ಈ ಹಲ್ಲೆಗೆ ತಿಳಿದು ಬಂದ ಕಾರಣ. ವಿಷಾದದ ಸಂಗತಿಯೆಂದರೆ ಮೇಲ್ಜಾತಿಯವರೇ ಸಾಮೂಹಿಕವಾಗಿ ತಪ್ಪು ಮಾಡಿದರೂ, ಅವರ ತಪ್ಪಿಗೆ ಕೇರಿಯೇ ಸಾಮೂಹಿಕವಾಗಿ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ಕೇರಿಯವ ಒಬ್ಬನೇ ತಪ್ಪು ಮಾಡಿದರೂ, ಇಡೀ ಕೇರಿಯೇ ಆ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ಭೋಜಕ್ಕೆ ಸಂಬಂಧಿಸಿದಂತೆ ಇಲ್ಲಿ ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇರೆ ದಾರಿಗಳಿರಲಿಲ್ಲವೆ? ಕರ್ನಾಟಕದ ಗ್ರಾಮೀಣಕೇರಿಗಳ ವಾಸ್ತವಗಳೇ ಹೀಗೆ ಎನಿಸುತ್ತದೆ.

ಹೇಗಿದೆ ನಾಯಕನೂರು?

ಊರಿನ ಜಮೀನ್ದಾರನ ಕೆಂಗಣ್ಣಿಗೆ ಬಲಿಯಾಗಿ, ಬಹಿಷ್ಕಾರಕ್ಕೆ ಒಳಗಾಗಿದ್ದ ನಾಯಕನೂರಿನ ಕೇರಿಯ ಜನ ಸರ್ಕಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಸಮಾಧಾನದಿಂದಿದ್ದರು. ಎಷ್ಟೆಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಹೋಗಿ ಕೆಲವು ತಿಂಗಳೇ ಆದರೂ ಇಲ್ಲಿಯ ಪರಿಸ್ಥಿತಿ ವಿಷಾದ ಹುಟ್ಟಿಸುತ್ತದೆ. ಇವರನ್ನು ಮಾತನಾಡಿಸಿದಾಗ ಅವರ ಮನದಾಳದಿಂದ ಹೊರ ಬೀಳುವ nayakanuru-4.jpgಮಾತುಗಳು ಆರ್ದ್ರತೆ ತರಿಸುತ್ತವೆ. ಇನ್ನೇನು ಬಿದ್ದೇ ಬಿಡುತ್ತವೆ ಎನ್ನಿಸುವಂಥ ಮನೆಗಳು, ಇಕ್ಕಟ್ಟಾದ ಸಂದಿಗಳಲ್ಲಿ ಮೈಯೆಲ್ಲ ಗಾಯ ಮಾಡಿಕೊಂಡು ನಿಂತುಕೊಂಡಿವೆ. ಈ ಕೇರಿಯಲ್ಲಿ ಸುಮಾರು 37 ಕುಟುಂಬಗಳಿವೆ. ಒಬ್ಬರಿಗೂ ಹೇಳಿಕೊಳ್ಳಲೂ ಸಹ ತುಂಡು ಭೂಮಿಯಿಲ್ಲ. ಯಾವ ಮನೆಗೂ ಶೌಚಾಲಯವೇ ಇಲ್ಲವೆಂದ ಮೇಲೆ `ಗ್ರಾಮ ನೈರ್ಮಲ್ಯ` ಎಲ್ಲಿಂದ ಬರಬೇಕು. ಕೆಲವು ಕಡೆ ಮಾಡಲು ಕೆಲಸಗಳಿವೆ, ಆದರೆ ಕೈಗಳಿಲ್ಲ. ನಾಯಕನೂರಿನ ಈ ಕೇರಿಯಲ್ಲಿ ದುಡಿಯಲು ಕೈಗಳು ಸಿದ್ಧ ಇವೆ, ಕೆಲಸ ಕೊಡುವ ಮನಸ್ಸುಗಳಿಲ್ಲ. ತಿಪ್ಪಣ್ಣ ಮಾದರ ಯಾವಾಗಲೋ ನಿರ್ಮಿಸಲಾಗಿರುವ ತನ್ನ ಮನೆಯಲ್ಲಿ 20 ಜನರ ತನ್ನ ಕುಟುಂಬದೊಂದಿಗೆ ಒಟ್ಟಿಗೆ  ವಾಸಿಸುತ್ತಿರುವುದಾಗಿ ಹೇಳುತ್ತಾನೆ. `ಮನೆಗೆ ಅಳಿಯ ಬಂದರೆ ದುರ್ಗಮ್ಮನ ಗುಡಿಯೇ ಗತಿ` ಎನ್ನುತ್ತಾನೆ. ಇದು ತಿಪ್ಪಣ್ಣನ ಕಥೆ ಮಾತ್ರವಲ್ಲ. ಹಲವು ಜನರದ್ದು ಇದೇ ವ್ಯಥೆ. ಕರಿಯಪ್ಪ ತಾಯಿ ಯಲ್ಲವ್ವ ಮಾದರ ಎಂಬ ಅಜ್ಜನಿಗೆ ಎಂಟು ತಿಂಗಳಿನಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಕರಿಯಪ್ಪ ತಾಯಿ ಕರಿಯವ್ವ ಮಾದರ ಎಂಬ ಅಜ್ಜನ ಸ್ಥಿತಿಯೂ ಇದೆ. ಈ ಇಳಿವಯಸ್ಸಿನಲ್ಲಿಯೂ ಕೆಲಸ ಹುಡುಕಿಕೊಂಡು ದುಡಿದು ತಿನ್ನದೆ ಗತ್ಯಂತರವಿಲ್ಲದ ಸ್ಥಿತಿಯಲ್ಲಿ ಈ ಅಜ್ಜಂದಿರಿದ್ದಾರೆ.

ಈ ಕೇರಿ ಅಸಮಾನ ಅಭಿವೃದ್ಧಿಯ ಚಿತ್ರದಂತಿದೆ. ಇಲ್ಲಿ ತಲೆತಲಾಂತರದಿಂದ ಇಂದಿನವರೆಗೂ ಒಬ್ಬನೇ ಒಬ್ಬನಿಗೂ ನೌಕರಿ ಸಿಕ್ಕಿಲ್ಲವೆಂದರೆ, ಮೀಸಲಾತಿ ಮರೀಚಿಕೆಯೇ ಅಲ್ಲವೇ? ಸ್ವಾತಂತ್ರ್ಯ nayakanuru-5.jpgಬಂದು ಆರು ದಶಕಗಳೇ ಆಗಿದ್ದರೂ ನಮ್ಮ ಕೇರಿಗಳು ಇನ್ನೂ ಅಲ್ಲೇ ಇವೆ. ಆಶ್ರಯ ಯೋಜನೆ ಯಾರಿಗೆ ಆಶ್ರಯ ಕೊಟ್ಟಿದೆ? ಸಂಧ್ಯಾ ಸುರಕ್ಷಾ ಯಾರ ರಕ್ಷಣೆಗೆ ನಿಂತಿದೆ? ನಡುಮಧ್ಯಾಣ ತಲೆ ಮೇಲೆ ಕೈ ಹೊತ್ತು ಗುಂಪಾಗಿ ಕುಳಿತ ಮಹಿಳೆಯರನ್ನು ಮಾತನಾಡಿಸಿದರೆ- `ಇಷ್ಟು ದಿನ ಉದ್ಯೋಗ ಖಾತ್ರಿ ಒಳಗ ಕೆಲಸಕ್ಕ ಹೊಕ್ಕಿದ್ವಿರಿ, ಈಗ ಅದು ಮುಗಿದೈತಿ. ಕೆಲಸಕ್ಕ ಯಾರೂ ಕರಿ ಒಲ್ರು, ಬುದ್ದಿ ಬರಬೇಕ ನಿಮ್ಗ ಅಂತಾರೀ.. ಅದ್ಕ ಚಿಂತ್ಯಾಗೇತ್ರಿ`.

ಈ ಊರಿನಲ್ಲಿ ಕಾಯಿಲೆ ಬಿದ್ದರೆ ಔಷಧಿಗಾಗಿ ಪಕ್ಕದ ಊರಿಗೆ ಹೋಗಬೇಕಾದ ಸ್ಥಿತಿ ಹಳ್ಳಿಗರದು. ನೀವು ಜಾತ್ರೆ ಮಾಡುವುದಿಲ್ಲವೆ ಎಂದರೆ, `ಅಲ್ರಿ… ಒಂದು ಸಾರಿ ಎಲ್ಲಾರೂ ಸೇರಿ ನಮ್ಮ ಕೇರಿ ದುರ‌್ಗವ್ವನ ಜಾತ್ರಿ ಮಾಡೋಣಂತ ನಿರ್ಧಾರ ಮಾಡಿದ್ವಿ. ಆದ್ರ ನಮ್ಮ ದುರ‌್ಗವ್ವಗ ಯಾರೂ ಬನ್ನಿ ಮುಡಿಯಾಕ ತಮ್ಮ ಹೊಲದೊಳಗ ಬಿಟ್ಟುಕೊಳ್ಳಲಿಲ್ರಿ. ಅದ್ಕ ಬಿಟ್ಟು ಬಿಟ್ವಿರಿ` ಎನ್ನುತ್ತಾರೆ. ಶೋಷಣೆ ಸಾಂಸ್ಕೃತಿಕವಾಗಿಯೂ ಇರಬಹುದೆ?

ಈ ಬಹಿಷ್ಕಾರದ ಘಟನೆ ನಡೆದ ನಂತರ ಬಂದ ಜನ ಪ್ರತಿನಿಧಿಗಳು ಎಲ್ಲರ ಮನೆ ರಿಪೇರಿ ಮಾಡಿಸಿಕೊಡುವುದಾಗಿಯೂ, ವಾರಕ್ಕೊಮ್ಮೆ ಬಂದು ಯೋಗಕ್ಷೇಮ ವಿಚಾರಿಸುವುದಾಗಿಯೂ ಹೇಳಿ ಹೋದದ್ದೇ ಬಂತು, ಅವರಿಗಾಗಿ ಇವರು ಕಾಯುತ್ತಿದ್ದಾರೆ. ಭೂಮಿ ಕೊಡುವುದಾಗಿ ಹೇಳಿದ್ದನ್ನು ಕನವರಿಸುತ್ತಿದ್ದಾರೆ.

nayakanuru-6.jpgನಾಯಕನೂರಿನ ಕೇರಿಯ ಜನ ಐವತ್ತು ಲಕ್ಷ ರೂಪಾಯಿ ಅನುದಾನ ಬಂದಿರುವುದನ್ನು ಅಧಿಕಾರಿಗಳಿಂದ ತಿಳಿದು ಆ ದುಡ್ಡಿನಲ್ಲಿ ತಮಗೊಂದು ವಸತಿ ಪ್ರದೇಶ, ಅದರಲ್ಲಿ ಕನಿಷ್ಠ ಅಗತ್ಯಗಳಾದರೂ ಇರುವ ಮನೆಗಳು ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಹೇಳುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮ ಅನ್ನ ತಾವೇ ದುಡಿದುಕೊಳ್ಳಲು, ದುರ್ಗವ್ವನಿಗೆ ಬನ್ನಿ ಮುಡಿಸಲು, ಭೂಮಿಗಾಗಿ ಹಂಬಲಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ನೈತಿಕ ಇಚ್ಛಾಶಕ್ತಿ ಇರುವವರಾರು?

ಮತ್ತೆ ಮತ್ತೆ ಏಕಲವ್ಯ

ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಇದು ತಳಸಮುದಾಯಗಳ ಅಳಿವಿನ ಕಾಲ ಎನ್ನಿಸುತ್ತದೆ. ನಮ್ಮ ಊರುಗಳ ಶಾಲೆಗಳನ್ನು ಕೋರ್ಟಿಗೆ ಹೋಗಿ ಉಳಿಸಿಕೊಳ್ಳಲು ಹೆಣಗುತ್ತಿರುವಾಗಲೇ, 154 ಪರಿಶಿಷ ್ಟ ಜಾತಿ ಪಂಗಡಗಳ ಹಾಸ್ಟೆಲ್‌ಗಳನ್ನು ಮುಚ್ಚುತ್ತಿರುವ ಸುದ್ದಿ ಬಂದಿದೆ. ಕೆಲವು ಹಾಸ್ಟೆಲ್‌ಗಳಲ್ಲಿ, ಕೊಠಡಿಯೊಂದರಲ್ಲಿ ಹಿಡಿಸಲಾರದಷ್ಟು ಹುಡುಗರು ತುಂಬಿಕೊಂಡು ಓದುತ್ತಿರುವುದಕ್ಕೆ ಇನ್ನೂ 200 ಹಾಸ್ಟೆಲ್‌ಗಳ ಬೇಡಿಕೆ ಸರಕಾರದ ಮುಂದಿರುವಾಗಲೇ ಈ ನಿರ್ಧಾರ! ಅಂದರೆ, ನಮ್ಮನ್ನಾಳುವ ಪ್ರಭುಗಳ ನೀತಿ ದಲಿತ ವಿರೋಧಿ ಮಾತ್ರವಲ್ಲ, ಮುಖ್ಯವಾಗಿ ಅಸ್ಪೃಶ್ಯರ ವಿರೋಧಿ ಎನಿಸುತ್ತದೆ.

ಏಕಲವ್ಯರು ಮತ್ತೆ ಮತ್ತೆ ಅನಾಥರಾಗುತ್ತಿದ್ದಾರೆ. ಜಮಖಂಡಿಯ ಹಾಸ್ಟೆಲ್‌ವೊಂದರಲ್ಲಿ ತಿನ್ನಬಹುದಾದ ಅನ್ನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿ ಬಂದಿರುವಾಗ ಹಾಸ್ಟೆಲ್‌ಗಳೇ ಮುಚ್ಚಿದರೆ ಮುಂದೇನು? ಅಕ್ಷರದಿಂದಲೇ ಅನ್ನದ ಕನಸು ಕಾಣುವ ಕಣ್ಣುಗಳಿಗೆ ಭರವಸೆಗಳೇ ಉಳಿಯುತ್ತಿಲ್ಲ. ಆಧುನಿಕತೆಯ ನಾಗಾಲೋಟದಲ್ಲಿ ಶಿಕ್ಷಣ ದುಬಾರಿ ಸರಕಾಗಿರುವಾಗ ನಾಯಕನೂರಿನಂಥ ಕೇರಿಗಳಿಂದ ಬರುವ ಕಣ್ಣೀರು ಮಾರುವ ಹುಡುಗರು ಕೊಳ್ಳುವುದೆಲ್ಲಿಂದ ಬಂತು? ಅಕ್ಷರದಿಂದ ಬದುಕಿಗೆ ಬೆಳಕು ಹುಡುಕುವ ಹುಡುಗರ ಆಸೆಗಳು ಕೇರಿಯಲ್ಲೇ ಕಮರಬೇಕೆ?

ಗಾಯಕ್ಕೆ ಮುಲಾಮು ಹುಡುಕುತ್ತಾ…

ಈಗೀಗ ನವಿಲಿನ ಅಷ್ಟೂ ಕಣ್ಣಿನಲ್ಲಿ ತೋರಲಾಗದ ಗಾಯದ ಚಿತ್ರಗಳು. ಕೇರಿ ಅಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ. ಸಾಂವಿಧಾನಿಕ ಮೀಸಲಾತಿ ಅಸಮಾನತೆಯ ಅಭಿವೃದ್ಧಿಗೆ ಬಲಿಯಾಗಿದೆ. ಈ nayakanuru-7.jpgಗಾಯಗಳು ಕೇವಲ ನಿರ್ಗತಿಕತೆಯಿಂದ ಆದವುಗಳಲ್ಲ, ಯಾರೋ ಬಾರಿಸಿದ ಗಾಯಗಳೂ ಸೇರಿವೆ. ಸಾವಿರ ಸಾವಿರ ಕೋಟಿಯ ಲೆಕ್ಕದಲ್ಲಿ ಮಾತನಾಡುವ ನಮ್ಮ ಸರ್ಕಾರದ ಅಭಿವೃದ್ಧಿ ನೀತಿ ಯಾರ ಪರವಾಗಿದೆ ಅಥವಾ ಯಾರ ಹೆಸರಿನಲ್ಲಿ ಯಾರಿಗೆ ದೊರೆಯುತ್ತಿದೆ ಎಂಬುದನ್ನು ಅವಲೋಕಿಸಿದಾಗ ಸಿಕ್ಕ ಕೆಲವು ಚಿತ್ರಗಳು ಮಾತ್ರ ಇವು. ದುಡಿಯಲು ಜನರಿಲ್ಲ ಎಂಬ ಕೊರಗು ನಾಯಕನೂರಿನಂತಹ ಊರುಗಳಲ್ಲಿ ಎಷ್ಟು ನಿಜ. ಊರು ಮತ್ತು ಕೇರಿಯ ನಡುವಿನ ಅಂತರ ಬರಬರುತ್ತಾ ಕಡಿಮೆಯಾಗುವುದರ ಬದಲಾಗಿ ಆಧುನಿಕತೆಯ ಧಾವಂತದಲ್ಲಿ ಕೇರಿಯನ್ನು ಮರೆತ ಊರು ಬಹಳ ದೂರ ಬಂದು ಬಿಟ್ಟಿದೆ, ಅಲ್ಲಿಯೇ ಉಳಿದವರಿಗೆ ತೆವಳಲೂ ಸಾಧ್ಯವಾಗುತ್ತಿಲ್ಲ.

ಜಾತಿ ಮಾತ್ರ ಇಂದು ತನ್ನ ಕ್ರೌರ್ಯ ಪ್ರದರ್ಶಿಸುತ್ತಿಲ್ಲ, ಭೋಗದ ವಾರಸುದಾರರ ಆಳದ ಸ್ವಾರ್ಥ ಇಲ್ಲಿ ತನ್ನ ಕರಾಳತೆ ಮೆರೆಯುತ್ತಿದೆ. ಇಂದು ದಲಿತ ಲೋಕ ಸಮಾನ ಆಭಿವೃದ್ಧಿಗೆ ಹಪಿಹಪಿಸುತ್ತಿಲ್ಲ, ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಅನ್ನ, ವಸತಿ, ಬಟ್ಟೆಗಳು ಕಡಿಮೆಯಾದರೂ ವಿದ್ಯೆಗೇ ಕುತ್ತು ಬಂದರೆ ಹೇಗೆ ಬದುಕುವುದು?

ಇವೆಲ್ಲದರ ನಡುವೆ ಸವಣೂರಿನ ಭಂಗಿ ಬಂಧುಗಳು ನಡೆಸಿದ ಎರಡು ವರ್ಷದ ನಿರಂತರ ಹೋರಾಟದ ಛಲದಿಂದ, ಕಡಿಮೆಯಾದರೂ ಇರಬಹುದಾದ ಕೆಲವು ಸಾಂಸ್ಕೃತಿಕ, ಸಾಹಿತ್ಯಿಕ, ತಳಸಮುದಾಯದ ನಾಯಕರ ಚಿಂತನೆಯ ಇಚ್ಛಾಶಕ್ತಿಯ ಸಾಥ್‌ನಿಂದ ಎಂಟು ಜನ ಭಂಗಿ ಬಂಧುಗಳಿಗೆ ನೌಕರಿ ದೊರೆತು, ಅನ್ನಕ್ಕೆ ದಾರಿಯಾಗಿದೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಬಿದ್ದು nayakanuru-8.jpgಪೌರಕಾರ್ಮಿಕರು ಸಾಯುತ್ತಲೇ ಇದ್ದಾರೆ. ಕೆಲವು ಜೀವಗಳನ್ನೇ ಕಳೆದುಕೊಂಡ ಕೆಜಿಎಫ್‌ನ ಕುಟುಂಬಗಳು ಅನಾಥವಾಗಿ, ಹೊತ್ತಿನ ಗಂಜಿಗೂ ಪರದಾಡುತ್ತಿವೆ.

ಭೋಜ, ನಾಯಕನೂರು, ಹಾಳಕೇರಿಯಂಥ ಊರುಗಳು ಮಾತ್ರ ಅಸಮಾನತೆಯ ದಳ್ಳುರಿಯಲ್ಲಿ ಬದುಕನ್ನು ಸುಟ್ಟುಕೊಳ್ಳುತ್ತಿಲ್ಲ. ಒಂದೇ ಬಿಕ್ಕಿನ ಹಲವು ಮರುದನಿಗಳು ಯಾವುದೇ ಊರಿಗೆ ಹೋದರೂ ಕೇಳಿಸುತ್ತವೆ, ಕರುಣೆ ಇರುವ ಮನಸ್ಸುಗಳಿಗೆ ಮಾತ್ರ. ಶೋಷಣೆಯ ಮುಖಗಳನ್ನು ಹೇಗೆ ವಿಭಾಗಿಸುವುದು? ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ- ನಮ್ಮ ವಿಂಗಡಣೆಗಳನ್ನು ಅಣಕಿಸುವಂತೆ ಕಾಲ ಮುನ್ನಡೆಯುತ್ತಿದೆ. ಕೇರಿಯೊಂದಿಗಿನ ಊರಿನ ಅಸಹನೆಯನ್ನು ತಾಳಿಕೊಳ್ಳುವ ದಲಿತ ಲೋಕದ ಚೈತನ್ಯವನ್ನು ಹೊಗಳುವುದೋ? ಕಂಬಾಲಪಲ್ಲಿಯಲ್ಲಿಯೇ ಅಪರಾಧಿಗಳು ಬಿಡುಗಡೆಯಾಗಿರುವಾಗ ಬಹಿಷ್ಕಾರ ಹಾಕಿದವರಿಗಾಗಲೀ, ಕೇರಿಯ ಮೇಲೆ ದೊಡ್ಡ ದೊಡ್ಡ ಕಲ್ಲು ತೂರಿದವರಿಗಾಗಲೀ ಶಿಕ್ಷೆ ಹೇಗೆ ನಿರೀಕ್ಷಿಸಬಹುದು? ಒಂದು ಹಂತಕ್ಕೆ ಕೇರಿಯ ಜೀವಗಳಿಗೆ ಮನೆ ಕೊಡಬಹುದು, ಭೂಮಿ ಕೊಡಬಹುದು, ಆದರೆ ಅಂದು ರಾತ್ರಿ ಮನೆಯ ಮೇಲೆ ಕಲ್ಲುಗಳು ಬಿದ್ದಾಗ ಅನುಭವಿಸಿದ ತಲ್ಲಣಗಳಿಗೆ, ಬಿದ್ದ ಹೊಡೆತಕ್ಕೆ, ಶತಶತಮಾನದಿಂದಲೂ ಅನುಭವಿಸುತ್ತಲೇ ಬಂದು ಮನಸ್ಸಿನೊಳಗೆ ಉಂಟಾಗಿರುವ ಮಾಯದ ಗಾಯಗಳಿಗೆ ಮುಲಾಮು ಯಾರು, ಹೇಗೆ ಕೊಡಲು ಸಾಧ್ಯ.nayakanuru-9.jpg

ಕೃಪೆ: ಪ್ರಜಾವಾಣಿ
ಚಿತ್ರಗಳು: ಲೇಖಕರವು