Percent of population living below the poverty line, over the final quarter of the 20th century.

ಮಕ್ಕಳ ಹೊಟ್ಟೆಗೆ ಹಿಟ್ಟು ಕೊಡುವುದೇ ದುರ್ಭರ


-ಬಿ. ಶ್ರೀಪಾದ್ ಭಟ್


“ಅಮೇಜಾನ್ ದಾಟಬಹುದು, ಈ ಅನುದಿನದ ಅಂತರಗಂಗೆ ದಾಟುವುದು ಹೇಗೆ”? — ಎ.ಕೆ.ರಾಮಾನುಜನ್

“ಕಳೆದ ಹಲವಾರು ವರ್ಷಗಳಿಂದ ಬಾಗಲಕೋಟೆ ಜಿಲ್ಲೆಯಾದ್ಯಾಂತ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ, ಹಸಿವಿನಿಂದ ನರಳುತ್ತಿವೆ. ಇವರ ಪೋಷಕರಿಗೆ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುವಂತಹ ಸಂಧರ್ಭದಲ್ಲಿ ಈ ಮಕ್ಕಳ ಹೊಟ್ಟೆಗೆ ಹಿಟ್ಟು ಕೊಡುವುದೇ ದುರ್ಭರವಾಗುತ್ತಿದೆ.” – ಪ್ರಜಾವಾಣಿ ವರದಿ

“ಒರಿಸ್ಸಾದ 17 ಪಂಚಾಯ್ತಿಯನ್ನೊಳಗೊಂಡ ಕಾಶೀಪುರ ಬ್ಲಾಕ್ ನಲ್ಲಿ 704 ಹಳ್ಳಿಗಳಿವೆ, ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಅದರಲ್ಲಿ 60,000 ಜನಸಂಖ್ಯೆ ಆದಿವಾಸಿಗಳು, 21,000ರಷ್ಟು ಜನಸಂಖ್ಯೆ ದಲಿತರು. ಶೇಕಡಾ 85 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ (BPL) ಕೆಳಗಿದ್ದಾರೆ. ಇವರಿಗೆ ಇವತ್ತಿಗೂ ಅಕ್ಕಿ ಒಂದು ಭೋಗವಸ್ತು. ಅಲ್ಲಿನ ಬಹಾದುಲ್ಕಿ ಹಳ್ಳಿಯಲ್ಲಿ ತಾಯಂದಿರು ತಮ್ಮ  ಬಹುಪಾಲು ಮಕ್ಕಳಿಗೆ ಹಸಿವನ್ನು ತಣಿಸಲು ಮಾವಿನ ತಿರುಳು, ಹುಣಿಸೇ ಬೀಜ, ಅಣಬೆ, ಗಿಡಗಳ ಎಲೆಗಳನ್ನು ಆಹಾರವಾಗಿ ಕೊಡುತ್ತಾರೆ.”  – ಡೆಕ್ಕನ್ ಹೆರಾಲ್ಡ್ ವರದಿ

“ಕುಟುಂಬ ಆರೋಗ್ಯ ಸರ್ವೇ 3, 2005-2006 ಪ್ರಕಾರ ದೇಶದ ಶೇಕಡ 50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಹಾಗೂ ಸಾಯುತ್ತಿದ್ದಾರೆ ಹಾಗೂ 2010ರ ಸರ್ವೇ ಪ್ರಕಾರ ಪ್ರತಿ ವರ್ಷ 26 ಮಿಲಿಯನ್ ಮಕ್ಕಳು ಹುಟ್ಟುತ್ತಾರೆ. ಅದರಲ್ಲಿ 1.83 ಮಿಲಿಯನ್ ಮಕ್ಕಳು ತಮ್ಮ ಐದನೇ ವಯಸ್ಸಿಗೆ ಮುಂಚೆಯೇ ಸಾವನ್ನಪ್ಪುತ್ತಾರೆ. ಇದರಲ್ಲಿ ಅರ್ಧದಷ್ಟು ಮಕ್ಕಳು ತಾವು ಹುಟ್ಟಿದ ಒಂದು ತಿಂಗಳೊಳಗೆ ಸಾವನ್ನಪ್ಪುತ್ತಾರೆ. ಇದಕ್ಕೆ ಮೂಲಭೂತ ಕಾರಣ ತಾಯಿಯ ಅಪೌಷ್ಟಿಕತೆ. ಅಲ್ಲದೆ 350 ಮಿಲಿಯನ್ ಜನ ಪ್ರತಿದಿನ ಉಪವಾಸ ಮಲುಗುತ್ತಾರೆ.” -ದೇವಿಂದರ್ ಶರ್ಮ.

“ಅಪೌಷ್ಟಿಕತೆ ಎನ್ನುವುದು ದೇಶದ ಅವಮಾನ. ಇಷ್ಟೊಂದು ಆರ್ಥಿಕ ಅಭಿವೃದ್ಧಿಯನ್ನು ಸ್ಥಾಪಿಸಿದರೂ ಬಡತನರೇಖೆಗಿಂತ ಕೆಳಗಿರುವವರ ಜನಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ.” – ಜನವರಿ 2012 ರ ಹೊಸ ವರ್ಷದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ರವರ ಹೇಳಿಕೆ.

ಎಂತಹ ದುರಂತವಿದು. ನಿಜಕ್ಕೂ ಪ್ರಧಾನಮಂತ್ರಿಯವರ ಈ ಹೇಳಿಕೆಯೇ ಎಲ್ಲದಕ್ಕಿಂತಲೂ ದೊಡ್ಡ ಅವಮಾನ. ನಮ್ಮ ಪ್ರೀತಿಯ ಮನಮೋಹನ ಸಿಂಗ್‌ರವರು ತಾವು ಪ್ರಧಾನ ಮಂತ್ರಿಯಾಗಿ 7 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಈ ಅಣಿಮುತ್ತುಗಳನ್ನು ಉದುರಿಸುತ್ತಾರೆ. ಕಳೆದ 20 ವರ್ಷಗಳಿಂದ ದೇಶದ ಆರ್ಥಿಕ ಪ್ರಗತಿ ಎನ್ನುವುದು ಬೆಳೆದಿದೆ ಹಾಗೂ ಬೆಳೆಯುತ್ತಿದೆ ಎನ್ನುವ Percent of population living below the poverty line, over the final quarter of the 20th century.ನಿಗೂಢ ಅಂಕೆಸಂಖ್ಯೆ ಜೊತೆಜೊತೆಗೇ ಈ ದೇಶದ ಹಸಿವೆಯೂ ಅಗಾಧಕಾರವಾಗಿ ಬೆಳೆದಿದೆ. ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿರುವ ಮಕ್ಕಳ ಸಂಖ್ಯೆಯೂ ಬೆಳೆದಿದೆ. ಬಡವರು ಹಾಗೂ ಶ್ರೀಮಂತರ ನಡುವಿನ ಕಂದಕ ದಿನೇ ದಿನೇ ದೊಡ್ದದಾಗುತ್ತಿದೆ. ಇಲ್ಲದವರಿಗೆ ಸಾಮಾಜಿಕ ಭದ್ರತೆ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿ, ಅದನ್ನೆಂದೂ ಪರಭಾರೆ ಮಾಡಕೂಡದು ಎನ್ನುವ ಕನಿಷ್ಟ ರಾಜಕೀಯ ಹಾಗೂ ಸಾಮಾಜಿಕ ಜ್ಞಾನವೂ ಇಲ್ಲದಾಗಿ ಹೋಯ್ತು ನಮ್ಮ ಕೇಂದ್ರದ ಹಾಗೂ ರಾಜ್ಯಗಳ ಪ್ರಭುತ್ವಕ್ಕೆ ಹಾಗೂ ಬಹುಮುಖ್ಯವಾಗಿ ನಮ್ಮ ಪ್ರೀತಿಯ ಮನಮೋಹನ ಸಿಂಗ್ ಜೀಗೆ. ಆದರೆ ನಮ್ಮ ಪ್ರೀತಿಯ ಮನಮೋಹನ ಸಿಂಗ್ ತಮ್ಮ 7 ವರ್ಷಗಳ ಅಧಿಕಾರದುದ್ದಕ್ಕೂ ರಾಜಕಾರಣಿಯಾಗಿ, ಮುತ್ಸದ್ದಿಯಾಗಿ ನೇರವಾಗಿ ಜನಸಂಪರ್ಕವನ್ನು ಇಟ್ಟುಕೊಳ್ಳದೆ, ತಮ್ಮ ಪಕ್ಷದೊಂದಿಗೂ,  ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಯೋಜನ ಆಯೋಜದ ತಜ್ಞರು ಕೊಡುವ ಅಂಕಿಸಂಖ್ಯೆಗಳನ್ನೇ ನಂಬಿ ಕತ್ತಲ ರಾಜ್ಯದಲ್ಲಿ ಮುಳುಗಿ ಅಧಿಕಾರ ನಡೆಸುತ್ತಿರುವುದರ ಫಲವಿದು.

ಕಳೆದ 20 ವರ್ಷಗಳಿಂದ ಖಾಸಗೀಕರಣ ಓಹ್ ಖಾಸಗೀಕರಣ, ಜಾಗತೀಕರಣ ಓಹ್ ಜಾಗತೀಕರಣ ಎಂದು ಈ ದೇಶದ ಪ್ರಜೆಗಳು ಹಾಗೂ ಪ್ರಭುತ್ವ ಒಕ್ಕೊರಲಿನಿಂದ ಸಂಭ್ರಮಿಸಿ ಅದನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಿ ಸಾಮಾಜಿಕ ಕ್ಷೇಮಾಭಿವೃದ್ದಿ ಘಟಕಗಳಾದ ಶುದ್ಧ ಆಹಾರ, ವಸತಿ, ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಉದ್ದಿಮೆ, ಸರ್ಕಾರಿ ನಿಗಮಗಳನ್ನು ಖಾಸಗೀಕರಣದ ಅಮಲಿನಲ್ಲಿ ಸಂಪೂರ್ಣ ಮೂಲೆಗುಂಪು ಮಾಡಿದುದರ ಫಲವಿದು. ಇಲ್ಲಿನ ಜನಜೀವನ ಹಾಗೂ ಅವರ ಬದುಕಿನ ಶೈಲಿ ಹಾಗೂ ಒಟ್ಟಾರೆಯಾಗಿ ಎರಡು ಹೊತ್ತಿನ ಊಟಕ್ಕಾಗಿ ಈ ಜನರಿಗೆ ಏನೇನು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎನ್ನುವುದರ ಯಾವುದೇ ಗಂಧ ಗಾಳಿಯಿಲ್ಲದ ಅತ್ಯಂತ ಭ್ರಷ್ಟ ಮಂತ್ರಿ ಶರದ್ ಪವಾರ್ ರಂತಹವರು ವ್ಯವಸಾಯ ಹಾಗೂ ಅಹಾರ ಪೂರೈಕೆಯ ಮಂತ್ರಿಯಾಗಿರುವುದರ ಫಲವಿದು. ಕೃಷಿ ಕೂಲಿ ರೈತ ಹಾಗೂ ನಗರದ ಬಡವರ ಬಗೆಗಿನ ಯೋಜನೆಗಳನ್ನು ಎಲ್ಲಾ ವರ್ಗಗಳ ಬಡತನ ನಿರ್ಮೂಲನೆ ಯೋಜನೆಗಳನ್ನು ರೂಪಿಸಲು ಹಾಗೂ ಜಾರಿಗೊಳಿಸುವ ಜವಾಬ್ದಾರಿಯನ್ನು ದೇಶದ ನೌಕರಶಾಹಿಗೆ ವಹಿಸಿಕೂಟ್ಟಿರುವುದರ ಫಲವಿದು. ದೇಶದ, ರಾಜ್ಯದ ಚಿಂತಕರ ಚಾವಡಿ ಹಾಗೂ ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನು, ಅದರ ರಚನೆಗಳನ್ನು ಹಾಗೂ ಜಾತೀಯತೆ ಹಾಗೂ ಬಡತನ ಹಾಗೂ ಉಪವಾಸ ಒಂದಕ್ಕೊಂದು ಬೆಸೆದುಕೊಂಡ ಕೊಂಡಿಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾದ ಜಾಗದಲ್ಲಿ ತಮ್ಮ ಅರ್ಥಶಾಸ್ತ್ರದ ಅಕಡೆಮಿಕ್ ಪಾಂಡಿತ್ಯವನ್ನಾಧರಿಸಿ ಈ ಯೋಜನಾ ಆಯೋಗದ ಬುದ್ಧಿಜೀವಿಗಳು ಅತ್ಯಂತ ಅಮಾನವೀಯವಾಗಿ ಈ ದೇಶದ ಬಡತನ ರೇಖೆಯನ್ನು ನಿರ್ಧರಿಸುವುದರ ಫಲವಿದು.

ಈ ದೇಶದ ರೈತರು ಸಾಲ ಮಾಡಿ ವ್ಯವಸಾಯ ಮಾಡಬೇಕಾಗಿರುವುದು ಈ ದೇಶದ ಪಟ್ಟಣ, ನಗರವಾಸಿಗಳ ಹೊಟ್ಟೆ ತುಂಬಿಸಲು ಎನ್ನುವ ಸರ್ಕಾರದ ನೀತಿಗಳು ಹಾಗೂ ಅದಕ್ಕೆ ಪೂರಕವೆನ್ನುವಂತೆಯೇ ಸ್ವತಂತ್ರ ಬಂದು 64 ವರ್ಷಗಳ ನಂತರವೂ  ರೈತ ತಾನು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆಗಾಗಿ ಹೋರಾಟ ಮಾಡಬೇಕಾಗಿ ಬಂದ ದುಸ್ಥಿತಿ ನಿರ್ಮಾಣವಾಗಿರುವುದು ಈ ಪ್ರಭುಗಳೆಲ್ಲ ಸೇರಿಕೊಂಡು ದೇಶದ ಬಡಜನತೆಗೋಸ್ಕರ, ರೈತರಿಗೋಸ್ಕರ ಕಾರ್ಯನೀತಿಯನ್ನು ಅಮೂಲಾಗ್ರವಾಗಿ ರೂಪಿಸುವುದಕ್ಕೆ ಸಂಪೂರ್ಣವಾಗಿ ತಿಲಾಂಜಲಿ ಕೊಟ್ಟು ಕೇವಲ ವಿದೇಶಿ ಬಂಡವಾಳ ಹೂಡಿಕೆ ಹಾಗೂ ದೇಶದ ಉದ್ಯಮದೊಂದಿಗೆ ಇವರ ಪಾಲುದಾರಿಕೆ, ಇದಕ್ಕಾಗಿ ಅನೇಕ ರೀತಿಯ ಅವೈಜ್ಞಾನಿಕ ತೆರಿಗೆ ವಿನಾಯ್ತಿಗಳನ್ನು ಘೋಷಿಸುವುದು, ಇದಕ್ಕಾಗಿ ಜಮೀನು ವಶಪಡಿಸುಕೊಳ್ಳುವುದು ಹಾಗೂ ಇಂತಹ ಮತಿಗೆಟ್ಟ ಯೋಜನೆಗಳ ಮಟ್ಟಕ್ಕೆ ಪ್ರಭುತ್ವ ತಲುಪಿದರ ಫಲ. ಇದರಿಂದಾಗಿ ಈ ನೆಲದ ಜನ ಹಾಗೂ ಸಮುದಾಯಗಳು ಇಲ್ಲಿನ ನೀರು, ನೆಲ, ಕಾಡುಗಳ ಮೇಲೆ ಸಹಜವಾದ, ಅತ್ಯಂತ ನೈಸರ್ಗಿಕ ನ್ಯಾಯದ ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಂಡವು.

20 ಅಂಶಗಳ ಕಾರ್ಯಕ್ರಮ (35 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (MGNREGA )  (7 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಕ್ಕಳ ಸಮಗ್ರ ಅಭಿವೃದ್ದಿ ಯೋಜನೆ (ICDS) (35 ವರ್ಷಗಳಿಂದ ಚಾಲ್ತಿಯಲ್ಲಿದೆ), ಮಧ್ಯಾಹ್ನದ ಊಟದ ಯೋಜನೆ (10 ವರ್ಷಗಳಿಂದ ಚಾಲ್ತಿಯಲ್ಲಿದೆ, ಕೆಲವು ರಾಜ್ಯಗಳಲ್ಲಿ 25 ವರ್ಷಗಳಿಂದ ಚಾಲ್ತಿಯಲ್ಲಿದೆ), ಸಾರ್ವಜನಿಕ ಆಹಾರ ಪೂರೈಕೆ ಯೋಜನೆ (50 ವರ್ಷಗಳಿಂದ ಚಾಲ್ತಿಯಲ್ಲಿದೆ), ಅಂಗನವಾಡಿ ಪದ್ಧತಿ, ಬಾಲಿಕಾ ಸಂವೃದ್ಧಿ ಯೋಜನೆ, ಗ್ರಾಮೀಣ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಯೋಜನೆ, ಪುನರುತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಯೋಜನೆ, ಇಂದಿರಾ ವಿಕಾಸ ಯೋಜನೆ, ಕಿಶೋರಿ ಶಕ್ತಿ ಯೋಜನೆ, ಭಾರತ ನಿರ್ಮಾಣ ಯೋಜನೆ, ಕಾಳಿಗಾಗಿ ಕೆಲಸ ಯೋಜನೆ, ಜವಹರ ಗ್ರಾಮ ಅಭಿವೃದ್ಧಿ ಯೋಜನೆ, ಜವಹರ ರೋಜಗಾರ್ ಯೋಜನೆ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ, ಸಂಪೂರ್ಣ ಗ್ರಾಮೀಣ ಯೋಜನೆ, ಗ್ರಾಮೀಣ ನೈರ್ಮಲೀಕರಣ ಯೋಜನೆ, ಸ್ವಜಲಾಧಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಇನ್ನೂ ನೂರಾರು ಯೋಜನೆಗಳಿವೆ. ಇಲ್ಲಿರುವುದು ಸ್ಯಾಂಪಲ್ ಮಾತ್ರ. ಇದಲ್ಲದೆ ಪ್ರತಿ ರಾಜ್ಯಗಳ ಸ್ವಂತಂತ್ರ ಯೋಜನೆಗಳು. ಇವೆಲ್ಲ ಯೋಜನೆಗಳು ನಿಜಕ್ಕೂ ಆಮ್ ಆದ್ಮಿ ಗಾಗಿ ಸ್ವತಂತ್ರ ಭಾರತದಲ್ಲಿ ಜಾರಿಗೊಂಡ, ರೂಪಿತಗೊಂಡ ಕೆಲವು ಜನಪರ, ಜನಪ್ರಿಯ ಯೋಜನೆಗಳು. ಆದರೆ ಇದನ್ನು ಸಾಕಾರಗೊಳಿಸಲು, ಯಶಸ್ವಿಯಾಗಿ ಮುನ್ನಡಸೆಲು ಬೇಕಾದ ಶಾಸಕಾಂಗದ ರಾಜಕೀಯ ಇಚ್ಛಾಶಕ್ತಿ, ಕೆಳಮಟ್ಟದಿಂದ ಮೇಲ್ಮುಖವಾಗಿ ಸುಲಲಿತವಾಗಿ ಹರಿಯುವಂತಹ ವಿಕೇಂದ್ರಿಕರಣದ ಆಡಳಿತ ವ್ಯವಸ್ಥೆ, ಕಾರ್ಯಾಂಗದ ಕನಿಷ್ಟ ಮಟ್ಟದ ಬದ್ಧತೆ, ಕಡೆಗೆ ಈ ಯೋಜನೆಗಳನ್ನು ಅನುಷ್ಟಾನಗೊಳಿಸಲು ಶಾಸಕಾಂಗ ಹಾಗೂ ಕಾರ್ಯಾಂಗಗಳಿಂದ ಜಂಟಿಯಾಗಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸುವುದು, ಎಲ್ಲವೂ ಇಲ್ಲಿ ಕಾಣೆಯಾಗಿ ಈ ಎಲ್ಲಾ ಜನಪರ ಯೋಜನೆಗಳು ಎಂದಿನಂತೆ ಭ್ರಷ್ಟಾಚಾರದ ಕೂಪಗಳಾಗಿ ಪರಿವರ್ತಿತವಾಗಿಬಿಟ್ಟಿವೆ. ಸೋತಿವೆ. ಈ ಮೂಲಕ ಈ ದೇಶವೂ ಅಂತರಿಕವಾಗಿ ಸೋತಿದೆ. ಶೋಚನೀಯವಾಗಿ ಸೋತಿದೆ.

ಉದಾಹರಣೆಗೆ, ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತರಲೆತ್ನಿಸುತ್ತಿರುವ  “ಆಹಾರ ಭದ್ರತೆ ಯೋಜನೆ”   (Food Security Bill) ಎನ್ನುವ ಪ್ರಗತಿಪರ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ವರ್ಗ ಕನಿಷ್ಟ 46% ರಷ್ಟು ಗ್ರಾಮೀಣ ಜನತೆ ಹಾಗೂ 26% ರಷ್ಟು ನಗರ ಜನತೆ ಪ್ರತಿ ತಿಂಗಳು ವ್ಯಕ್ತಿಯೊಬ್ಬನಿಗೆ 3 ರೂಪಾಯಿಗೆ ಅಕ್ಕಿ, 2 ರೂಪಾಯಿಗೆ ಗೋಧಿ ಅಧಾರದಲ್ಲಿ 7 KG ಧಾನ್ಯ ಸಿಗುತ್ತದೆ. ಅಲ್ಲದೆ ಬಡತನ ರೇಖೆಗಿಂತ ಮೇಲಿರುವ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ 3 KG ಧಾನ್ಯ ಸಿಗುತ್ತದೆ. ಇದನ್ನು ಕೇಂದ್ರ ಸಂಪುಟ ಅನುಮೋದಿಸಿದೆ. ಆದರೆ ಈ ಹೊಸ ಕಾಯ್ದೆಯ ಸಾಧಕ ಬಾಧಕಗಳು ಒತ್ತಟ್ಟಿಗಿರಲಿ ಅದನ್ನು ಚರ್ಚಿಸಲು ಬೇರೆಯದೇ ಆದ ವೇದಿಕೆ ಬೇಕಾಗುತ್ತದೆ.  ಆದರೆ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಹಾಗೂ ಪ್ರಜೆಗಳಿಗೆ ಗೊತ್ತಿರುವ ಹಾಗೆಯೇ ಅನೇಕ ಕಂಟಕಗಳಿವೆ.

ಮೊದಲನೆಯದಾಗಿ, ಬಡತನ ರೇಖೆಗಿಂತ ಕೆಳೆಗಿರುವ ಕುಟುಂಬಗಳನ್ನು ಗುರುತಿಸಲು ಯೋಜನಾ ಆಯೋಗ ಗೊತ್ತುಪಡಿಸಿದ ಸಾಮಾಜಿಕ ಪ್ರಜ್ನೆಯೇ ಇಲ್ಲದ ಅವೈ ಜ್ಞಾನಿಕ ಪದ್ಧತಿ. ಬಡತನದ ರೇಖೆಯನ್ನು ಒಮ್ಮೆ 20 ರೂಪಾಯಿಯನ್ನು ನಗರವಾಸಿಗಳಿಗೂ 15 ರೂಪಾಯಿಗಳನ್ನು ಗ್ರಾಮೀಣವಾಸಿಗಳಿಗೂ ಗೊತ್ತುಪಡಿಸಿ ಇದನ್ನು ಸುಪ್ರೀಂಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಸಮಕಾಲೀನ ಬದುಕಿನ ಬಗ್ಗೆ ಗಂಧಗಾಳಿಯೂ ಇಲ್ಲದ ತನ್ನ ಈ  ಮೌಢ್ಯತನಕ್ಕೆ ಕೋರ್ಟ್ ನಿಂದ ಹಾಗೂ ದೇಶದ ಪ್ರಜ್ಞಾವಂತ ಚಿಂತಕರಿಂದ ಸತತವಾಗಿ ಛೀಮಾರಿ ಹಾಕಿಸಿಕೊಂಡ ಈ ಯೋಜನಾ ಆಯೋಗ ನಂತರ ತಿಪ್ಪೆ ಸಾರಿಸುವ ಕೆಲಸ ಮಾಡಿ ತನ್ನ ವರದಿಯನ್ನು ಪರಿಷ್ಕರಿಸಿ ನಗರವಾಸಿಗಳಿಗೆ 32 ರೂಪಾಯಿಗಳನ್ನೂ, ಗ್ರಾಮೀಣವಾಸಿಗಳಿಗೆ 26 ರೂಪಾಯಿಗಳನ್ನು ಗುರುತಿಸಿ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ದೇಶದ ಅತ್ಯನ್ನತ ಸಂಸ್ಥೆಗಳಲ್ಲಿರುವವರ ಈ ಸಾಮಾಜಿಕ  ಜ್ಞಾನದ ಬಗೆಗಿನ ಸಂಪೂರ್ಣ ಅಜ್ಞಾನ ಹಾಗೂ ನಿಜಕ್ಕೂ ನಮ್ಮ ದೇಶದಲ್ಲಿ ಇಂತಹ ಮೂಢರಿದ್ದಾರೆಯೇ ಎಂದು ಗಾಬರಿಯಾಗುತ್ತದೆ. ಬಡತನರೇಖೆಯನ್ನು ಗುರುತಿಸಲು ಇಷ್ಟೊಂದು ಗೊಂದಲಗಳಿರುವಾಗ ಮುಂದೆ ಈ ಹೊಸ ಅಹಾರ ಭದ್ರತೆಯ ಯೋಜನೆಗಳು ಅರ್ಹ ಕುಟುಂಬಗಳಿಗೆ ದೊರಕುವ ಸಾಧ್ಯತೆಗಳೇ ನಿಜಕ್ಕೂ ಅನುಮಾನಾಸ್ಪದ.

ಎರಡನೆಯದಾಗಿ, ದೇಶದ ವ್ಯವಸಾಯಿಕ ವಲಯದಲ್ಲಿ ಸತತವಾಗಿ ಬೇಡಿಕೆಯನ್ನು ಪೂರೈಸಲು ಬೇಕಾಗುವ ಆಹಾರ ಧಾನ್ಯಗಳ ನಿರಂತರ ಉತ್ಪಾದನಾ ಸಾಮರ್ಥ್ಯವೇ ಉಡುಗಿಹೋಗಿ ನೆಲ ಕಚ್ಚಿರುವಾಗ, ಇಂತಹ ಕಗ್ಗತ್ತಲಿನ ಸಂಧರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಾಯಲ್ಲಿ ಮಂತ್ರ ಕೈಯಲ್ಲಿ ಚೂರಿಯ ಸಿದ್ಧಾಂತವನ್ನು ಪ್ರಯೋಗಿಸಿ ರೈತರ ನೆಲವನ್ನೇ ಆಪೋಶನ ಮಾಡಿಕೊಳ್ಳುತ್ತಿರುವಂತಹ ಸಂಧರ್ಭದಲ್ಲಿ ಈ ಉತ್ಪಾದನಾ ಸಾಮರ್ಥ್ಯವನ್ನು ಅಳೆಯುವ ಮಾನದಂಡಗಳಾವುವು? ಇದಕ್ಕಂತೂ ಸಧ್ಯಕ್ಕಲ್ಲ ಮುಂದೆಯೂ ಉತ್ತರವಿಲ್ಲ.

ಮೂರನೆಯದಾಗಿ, ನಮ್ಮ ಸಂಗ್ರಹಣಾ ಸಾಮರ್ಥ್ಯದ ಮಟ್ಟವಂತೂ ಅತ್ಯಂತ ಶೋಚನಿಯವಾಗಿದೆ. ಈಗಾಗಲೇ 50 ಮಿಲಿಯನ್ ಟನ್ ನಷ್ಟು ಅಕ್ಕಿ ಹಾಗೂ ಗೋಧಿಯ ದಾಸ್ತಾನು, 29 ಮಿಲಿಯನ್ ಟನ್ ನಷ್ಟು ಕಾಳುಗಳ ದಾಸ್ತಾನು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಗೋದಾಮುಗಳಲ್ಲಿ ಕೊಳೆಯುತ್ತಿದೆ, ಈಗಿನ ಪಡಿತರ ವಿತರಣ ವ್ಯವಸ್ಥೆಯಲ್ಲಿ ಇದರಿಂದ ಅಕ್ಕಿ ಹಾಗೂ ಗೋಧಿ ಶೇಕಡ 60 ರಷ್ಟು ಮಾತ್ರ ಬಳಸಲ್ಪಡುತ್ತವೆ. ಉಳಿದ ಶೇಕಡ 40 ರಷ್ಟು ಧವಸ ಧಾನ್ಯಗಳು ಯಾವುದೇ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗಳಿಲ್ಲದೆ ಗೋದಾಮುಗಳಲ್ಲಿ ಕೊಳೆಯುತ್ತವೆ ಇಲ್ಲವೇ ಹೆಗ್ಗಣಗಳಿಗೆ ಆಹಾರವಾಗುತ್ತವೆ. ಇದರ ಕರ್ಮಕಾಂಡದ ಬಗ್ಗೆ ಬರೆಯಲು ಪುಟಗಳೂ ಸಾಲವು.

ಕಡೆಯದಾಗಿ, ನಮ್ಮಲ್ಲಿನ ಪಡಿತರ ವಿತರಣಾ ವ್ಯವಸ್ಥೆಯ ಬಗೆಗೆ ಹೊಸದಾಗಿ ಹೇಳುವುದೇನಿದೆ. ಇಲ್ಲಿನ ಭ್ರಷ್ಟಾಚಾರ ಹಾಗೂ ಹಗಲು ದರೋಡೆ ಸಾರ್ವಜನಿಕ ಪಡಿತರ ವಿತರಣ ವ್ಯವಸ್ಥೆಯ ಪಾವಿತ್ರತೆಯನ್ನೇ ನಾಶಗೊಳಿಸಿದೆ. ಉದಾಹರಣೆಯಾಗಿ ಹೇಳುವುದಾದರೆ, ಅರ್ಥಶಾಸ್ತ್ರಜ್ಞರಾದ “ಪ್ರೇಮ್ ಶಂಕರ್ ಝಾ” ರವರು ಹೇಳಿದ ಪ್ರಕಾರ  “ಈಗಿನ ಪಡಿತರ ವ್ಯವಸ್ಥೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 KG ಅಕ್ಕಿ ಹಾಗೂ ಗೋಧಿ ಸಿಗುತ್ತದೆ. ಇದಕ್ಕಾಗಿ ಅವರು 70 ರೂಪಾಯಿಯನ್ನು ಖರ್ಚು ಮಾಡಬೇಕು. ಬಡವರ ಈ ನಿಸ್ಸಾಹಯಕತೆಯನ್ನು ನ್ಯಾಯಬೆಲೆಯವನು ದುರುಪಯೋಗಪಡಿಸಿಕೊಳ್ಳುತ್ತಾನೆ. ಅವರಿಗೆ 70 ರೂಪಾಯಿಗೆ 35 KG ಅಕ್ಕಿ ಹಾಗೂ ಗೋಧಿ ಕೊಡುವುದರ ಬದಲು ಹಣ ಪಡೆಯದೆ ಕೇವಲ 15 KG ಅಕ್ಕಿ ಹಾಗೂ ಗೋಧಿ ಕೊಟ್ಟು ಮಿಕ್ಕಿದ 20 KG ಯನ್ನು ಮುಕ್ತ ಮಾರುಕಟ್ಟೆಯಲ್ಲಿ ಐದು ಪಟ್ಟು ಬೆಲೆಗೆ ಮಾರಿಕೊಂಡು ಅದರ ಲಾಭವನ್ನೆಲ್ಲ ತನ್ನ ಜೇಬಿಗಿಳಿಸುತ್ತಾನೆ”.  ಇದು ಒಂದು ಉದಾಹರಣೆ ಮಾತ್ರ. ಇಂತಹವು ಬೇಕಾದಷ್ಟಿದೆ.

ಮೇಲಿನ ಯೋಜನೆ ಜಾರಿಗೊಂಡರೆ ಅದಕೆ ತಗಲುವ ಕೋಟ್ಯಾಂತರ ರೂಪಾಯಿಗಳ ಕ್ರೋಢೀಕರಣದ ಬಗೆಗಿನ ಚಿಂತನೆಗಳು ಆಗಿನಿಂದಲೂ ಅಕಡೆಮಿಕ್ ಶೈಲಿಯಿಂದ, ಅರ್ಥಶಾಸ್ತ್ರದ ಗರ್ಭಗುಡಿಗಳಿಂದ ಹೊರಬಂದಿಲ್ಲ. ಇವಕ್ಕೆ ಸಾಮಾಜಿಕ ಜ್ಞಾನದ ಸಂಪರ್ಕವಾಗಲಿ, ಇದರ ಪ್ರಾಯೋಗಿಕ ಸಾಧಕ ಬಾಧಕಗಳಾಗಲಿ ಸ್ವಲ್ಪವೂ ಅರಿವಿರುವುದಿಲ್ಲ. ಅಲ್ಲದೆ ಈ ಮೊತ್ತವನ್ನು ದೇಶದ ಬಡಜನರ ಪರವಾಗಿ ಬಳಸುವುದರ ಬಗ್ಗೆ ಎಂದಿನಂತೆ ನಮ್ಮ ಸ್ವಾರ್ಥ, ಕೊಳ್ಳುಬಾಕ ಸಂಸ್ಕೃತಿಯ  ಮಧ್ಯಮ, ಮೇಲ್ಮಧ್ಯಮ ವರ್ಗಗಳು ಹಾಗೂ ಬಹುಪಾಲು ಮಾಧ್ಯಮಗಳು ಕೆಂಡಕಾರುತ್ತಿವೆ. ಇವರ ಪ್ರಕಾರ ಈ ಮೊತ್ತ ತಮ್ಮೆಲ್ಲರ ತೆರಿಗೆ ಹಣದಿಂದ ಬಳಸಿಕೊಳ್ಳಲಾಗುತ್ತಿದೆ ಎಂದು ಉಗ್ರ ಟೀಕೆ. ತಮ್ಮ ಮಾತೃಭಾಷೆಯ ಬಗೆಗೆ ಅಪಾರ ಪ್ರೀತಿಯನ್ನಾಗಲಿ, ಇಲ್ಲಿನ ನೆಲ, ಜಲದ ಬಗೆಗಿನ ತಿಳುವಳಿಕೆಯಾಗಲಿ ಸಂಪೂರ್ಣ ಕಳೆದುಕೊಂಡಿರುವ ಇವರು ತಮ್ಮ ಸಾಮಾಜಿಕ ಅಂತಸ್ತಿನಲ್ಲಿ ಮೇಲ್ಮುಖವಾಗಿ ಚಲಿಸುತ್ತಾ ಹೊರಟಿರುವ ಈ ವರ್ಗಗಳ ಆತ್ಮವಂಚನೆ ಕೂಡ ಮೇಲ್ಮುಖವಾಗಿಯೇ ಹಬ್ಬಿಕೊಳ್ಳುತ್ತಿದೆ. ಈ ವರ್ಗಗಳು ತೀವ್ರವಾಗಿ ಪ್ರತಿಕ್ರಿಯಿಸುವುದು ತಮ್ಮ ಈ ಮೇಲ್ಮುಖದ ಬೆಳವಣಿಗೆ ಸ್ಥಗಿತಗೊಂಡಾಗ ಮಾತ್ರ. ಇನ್ನುಳಿದಂತೆ ದೇಶದ ಶೇಕಡ 70 ರಷ್ಟಿರುವ ಜನಸಂಖ್ಯೆಯ ಬದುಕು ದಶಕಗಳಿಂದ ಸತತವಾಗಿ ಕೆಳಮುಖವಾಗಿ ಜಾರುತ್ತಿದ್ದರೂ ಇವರೆಲ್ಲರ ಇದೆಲ್ಲ ನಮಗೇನು ಎನ್ನುವ ಧೋರಣೆಯ ಬಗೆಗೆ ಹೆಚ್ಚಿಗೆ ಹೇಳುವ ಅಗತ್ಯವೇ ಇಲ್ಲ.

ಈ ಮೂಲಕ  “ತಾಯಿಯ ಶಿಕ್ಷಣ, ಅವಳ ದೈಹಿಕ ಶಕ್ತಿ, ಅವಳ ಮಾನಸಿಕ ಸ್ಥಿರತೆ” ಗಳನ್ನು ಕೂಡ ನಾಶಮಾಡಲಾಗುತ್ತದೆ. ಈ ಮೂಲಕ ಮಕ್ಕಳ  “ಶಿಕ್ಷಣ, ದೈಹಿಕ ಶಕ್ತಿ, ಮಾನಸಿಕ ಸ್ಥಿರತೆ” ಗಳನ್ನು ಕೂಡ ಸಾಯಿಸಲಾಗುತ್ತದೆ.

Leave a Reply

Your email address will not be published. Required fields are marked *