ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ

-ಭೂಮಿ ಬಾನು

ಸಿಂಧಗಿಯ ಬಸ್ ಕಂಡಕ್ಟರ್ ಅಂಬಣ್ಣ ಎಂ. ದಾವಲರ್ ತನ್ನ ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ರಾಜ್ಯಪಾಲರಿಗೆ ಹಿಂತಿರುಗಿಸಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿರುವ ಇವರು ಕರ್ನಾಟಕ ಲೋಕಸೇವಾ ಆಯೋಗದಿಂದ ತಮಗೆ ಅನ್ಯಾಯವಾಗಿದೆ, ಅರ್ಹತೆ ಇದ್ದರೂ ಉಪನ್ಯಾಸಕ ಹುದ್ದೆ ಸಿಗಲಿಲ್ಲ ಎಂದು ಬೇಸತ್ತು ‘ಇನ್ಯಾಕೆ ಈ ಪ್ರಮಾಣಪತ್ರಗಳು’ ಎಂದು ವಿಶ್ವವಿದ್ಯಾನಿಲಯದ ಕುಲಾಧಿಪಾತಿಗಳಾದ ರಾಜ್ಯಪಾಲರಿಗೆ ರವಾನಿಸಿದ್ದಾರೆ.

ಅರ್ಹತೆಗೆ ತಕ್ಕಂತೆ, ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ ಎನ್ನುವುದು ಅವರ ವಾದ. ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ.

ಆಯೋಗದ ಭ್ರಷ್ಟಾಚಾರ, ಸರಕಾರದ ನಿಲುವುಗಳ ಬಗ್ಗೆ ಬೇಸತ್ತು ಈ ಅಭ್ಯರ್ಥಿ ಈ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಸ್ಪಷ್ಟ.

ಅಂಬಣ್ಣ ಇತಿಹಾಸ ವಿಭಾಗದ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ್ದರು. ಇವರಿಗೆ ಪಿಎಚ್‍ಡಿ ಇದ್ದರೂ, ಕೇವಲ ಎಂಫಿಲ್ ಪದವಿ ಗಳಿಸಿದ್ದವರಷ್ಟೆ ಆಯ್ಕೆಯಾದರು. ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಆಯ್ಕೆಯಾದ ಅನೇಕರು ಬೋಗಸ್ ಎಂಫಿಲ್ ಪಡೆದಿದ್ದಾರೆ ಎಂದು ನೇರಾನೇರ ಮಾಧ್ಯಮಗಳಿಗೆ ಹಲವು ಬಾರಿ ಹೇಳುತ್ತಿದ್ದರು. ಆದರೂ ಅವರೆಲ್ಲರ ಆಯ್ಕೆಯನ್ನು ತಡೆಯಲು ದಿಟ್ಟ ಕ್ರಮ ಕೈಗೊಳ್ಳಲಿಲ್ಲ. ಅರ್ಥಾತ್ ಸರಕಾರ ಅನರ್ಹರು ಲಾಬಿ, ಹಣದ ಕಾರಣಗಳಿಗಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಗೊತ್ತಿದ್ದರೂ ಸುಮ್ಮನಿತ್ತು.

ಹಣ ಅಥವಾ ಪ್ರಭಾವ ಇಲ್ಲದವರು ಕೆಪಿಎಸ್‌ಸಿ ಮೂಲಕ ನಡೆಯುವ ಯಾವ ಹುದ್ದೆಗೂ ಆಯ್ಕೆಯಾಗಲು ಸಾಧ್ಯವಿಲ್ಲ ಎನ್ನುವುದು ಜನಜನಿತ. ಈ ಬಗ್ಗೆ ಒಂದಿಷ್ಟು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಪ್ರಯತ್ನಗಳೇ ನಡೆಯಲಿಲ್ಲ.

ಅಂಕಪಟ್ಟಿಯ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯುತ್ತಾರೆ. ನಂತರ ಸಂದರ್ಶನ ವೇಳೆ ಎಷ್ಟು ಅಂಕ ಕೊಟ್ಟರೆ ಆಯ್ಕೆಯಾಗುತ್ತಾರೆ ಅಥವಾ ಆಗುವುದಿಲ್ಲ ಎನ್ನುವ ಲೆಕ್ಕಾಚಾರದ ಮೇಲೆ ಅಂಕಗಳು ನಿಗದಿಯಾಗುತ್ತವೆ. ಹಾಗಾಗಿ ಅನೇಕ ಬಾರಿ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದರೂ, ಸಂದರ್ಶನದಲ್ಲಿ ಅವರ ಗಳಿಕೆ ಎರಡು ಅಥವಾ ಮೂರು ಆಗಿರುತ್ತದೆ. ಅದೇ ರೀತಿ ಕೆಲವರು ಆಶ್ಚರ್ಯಕರ ರೀತಿಯಲ್ಲಿ ಪೂರ್ತಿ ಅಂಕ ಪಡೆದಿರುತ್ತಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳಾಗದಿದ್ದರೆ ಇಂತಹ ಬೇಸರ, ಸಿಟ್ಟುಗಳಿಗೆ ಕೊನೆಯಿಲ್ಲ.

ಹೀಗೆ ಅನ್ಯಮಾರ್ಗಗಳ ಮೂಲಕ ಆಯ್ಕೆಯಾದವರು ಅದ್ಯಾವ ಪರಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದು ಅಧ್ಯಯನ ಯೋಗ್ಯ. ತಮಗೆ ನಿಗದಿಯಾಗಿರುವ ಗಂಟೆಗಳ ಕಾಲ ಹೇಗೋ ಟೈಮ್ ಪಾಸ್ ಮಾಡಿದರಷ್ಟೆ ಸಾಕು ಎನ್ನುವ ಮನೋಭಾವ ಕೆಲವರಲ್ಲಿದೆ. ಕಾಲೇಜಿಗೆ ಬರುವುದೇ ತಡ. ತಡವಾಗಿ ಬಂದರೂ, ಬೇಗ ಮನೆ ಸೇರುವ ತವಕ. ಹೊಸತನ್ನು ಓದಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಉತ್ಸಾಹವೇ ಇಲ್ಲ. ಅವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.

One thought on “ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ

  1. Pavan

    While recruiting in KPSC they have fixed 15 marks for interview. I hope you people know, why they put 15 Marks. I wanna give an example why? A candidate took 80 percent in University examination and Candidate B took 70 Percent in University examination. Then they will call both for interview and whoever give money they will get more than 12 marks in interview and who will not he will get only 1 or 2 marks. Then if we add exam and interview marks 80+2=82 and 70+13= 83. Candidate B will get selected because he has given money. This was happened last time. If you want you can investigate on this…

    Reply

Leave a Reply

Your email address will not be published. Required fields are marked *