Monthly Archives: January 2012

Karnataka High Court

ಸುಪ್ರೀಂಕೋರ್ಟಿನ ತೀರ್ಪು ಮತ್ತು ರಾಜ್ಯದ ಹೈಕೋರ್ಟಿನ ತೀರ್ಪು


– ರವಿ ಕೃಷ್ಣಾರೆಡ್ಡಿ  


ಕರ್ನಾಟಕದ ನ್ಯಾಯಾಂಗದ ಬಗ್ಗೆ ಮಾತನಾಡುವುದಕ್ಕೆ ಭಯವಾಗುತ್ತದೆ. ಇಲ್ಲಿರುವ ಭ್ರಷ್ಟತೆಯನ್ನು ಅಥವ ಅಯೋಗ್ಯತೆಯನ್ನು ಕುರಿತು ಎಷ್ಟು ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುವುದಿಲ್ಲ ಮತ್ತು ಆಗುತ್ತದೆ ಎನ್ನುವುದೇ ಗೊತ್ತಾಗದ ಸ್ಥಿತಿಯಲ್ಲಿದ್ದೇವೆ.

ಯಾರಿಗೆ ಯಾವ ಆಧಾರದ ಮೇಲೆ ಜಾಮೀನು ಸಿಗುತ್ತದೆ ಅಥವ ಸಿಗುವುದಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಯಾರೊ ಯಾರೋ ಗರ್ಲ್‌ಫ್ರೆಂಡ್‌ ಜೊತೆ ಡೀಲ್ ಮಾಡಿಕೊಂಡು ಏನೋ ಮಾಡಿಸಿಕೊಂಡರಂತೆ ಎನ್ನುವ ಸುದ್ದಿಗಳೆಲ್ಲ ಹರದಾಡುತ್ತವೆ. ಇನ್ಯಾರದೋ ತೀರ್ಪಿನ ಬಗ್ಗೆ ಜನ ರಾಜ್ಯಪಾಲರಿಗೇ ನೇರ ದೂರು ನೀಡುತ್ತಾರೆ. ನನಗೆ ಇತ್ತೀಚೆಗೆ ಗೊತ್ತಾದ ಪ್ರಕಾರ ಯಾವ ಬೆಂಚಿಗೆ ತಮ್ಮ ಕೇಸು ಹಾಕಿಕೊಂಡರೆ ಕೇಸು ತಮ್ಮ ಪರ-ವಿರುದ್ಧ ಆಗುತ್ತದೆ ಎನ್ನುವ ಕಲ್ಪನೆ ವಕೀಲರಿಗೆ ಇರುತ್ತದಂತೆ. ಎಲ್ಲಿಗೆ ಹೋಯಿತು ನಮ್ಮ ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯ?

ಈಗ, ನೆನ್ನೆ ತಾನೆ ಸುಪ್ರೀಮ್ ಕೋರ್ಟ್ ಕರ್ನಾಟಕ ಹೈಕೊರ್ಟ್‌ ಈ ಹಿಂದೆ ನೀಡಿದ್ದ ತೀರ್ಪನ್ನು ಮತ್ತೊಮ್ಮೆ ತಳ್ಳಿ ಹಾಕಿದೆ.

ಇದು ಪಕ್ಷೇತರರ ಅನರ್ಹತೆ ವಿಷಯಕ್ಕೆ ಸಂಬಂಧಿಸಿದ್ದು. ಕರ್ನಾಟಕದ ಈಗಿನ ಸ್ಪೀಕರ್ ಇಲ್ಲಿಯವರೆಗೆ ನಮ್ಮೆಲ್ಲರಿಗೂ ಗೌರವ ಹುಟ್ಟುವ ರೀತಿಯಲ್ಲಿ ಏನೇನೂ ನಡೆದುಕೊಂಡಿಲ್ಲ. ಬಿಜೆಪಿಯ ಹನ್ನೊಂದು ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ ವಿಷಯದಲ್ಲಿ ಸ್ಪೀಕರ್ ಹುದ್ದೆಯ ಎಲ್ಲಾ ಘನತೆ ಮತ್ತು ಸ್ವಾತಂತ್ರ್ಯವನ್ನು ಮಣ್ಣುಮುಕ್ಕಿಸಿದವರು ಅವರು. ಎಂತೆಂತಹ ಅನರ್ಹರು ಮತ್ತು ಅಯೋಗ್ಯರೆಲ್ಲ ಸ್ಪೀಕರ್ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಮತ್ತು ಅದನ್ನು ವಿಧಾನಸಭೆಯ ಆಡಳಿತ ಮತ್ತು ವಿರೋಧ ಪಕ್ಷದವರು ಸಹಿಸಿಕೊಳ್ಳುತ್ತಾರೆ ಎನ್ನುವುದೇ ನಮ್ಮ ಹಾಲಿ ವಿಧಾನಸಭಾ ಸದಸ್ಯರ composition ಎಂತಹುದು ಎನ್ನುವುದನ್ನು ತೋರಿಸುತ್ತದೆ. ನಾಚಿಕೆಗೇಡು.

ಆದರೆ, ನ್ಯಾಯಾಲಯ? ಯಾವ ಕೋರ್ಟನ್ನು ನಂಬುವುದು? ಹೇಗೆ ಇಲ್ಲಿಯ ನ್ಯಾಯಾಲಯದ ತೀರ್ಪುಗಳ ನಿಷ್ಪಕ್ಷಪಾತವನ್ನು ಖಚಿತ ಪಡಿಸಿಕೊಳ್ಳುವುದು?

ನ್ಯಾಯಾಂಗ ಸುಧಾರಣೆಗಳನ್ನು ಆದಷ್ಟು ಬೇಗ ಸಾಧ್ಯಮಾಡಿಕೊಳ್ಳದಿದ್ದರೆ ಈ ದೇಶದ ನ್ಯಾಯವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ, ಎರಡೂ ಉಳಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಈ ಕೆಳಗಿನ ಲೇಖನ ನಾನು ಎಂಟು ತಿಂಗಳ ಹಿಂದೆ ಬರೆದದ್ದು ಮತ್ತು ಐದು ತಿಂಗಳ ಹಿಂದೆ ಇಲ್ಲಿ ವರ್ತಮಾನದಲ್ಲಿ ಪ್ರಕಟಿಸಿದ್ದು . ಇದನ್ನು ಸುಪ್ರೀಂ ಕೋರ್ಟ್‌ನ ನೆನ್ನೆಯ ತೀರ್ಪಿನ ಹಿನ್ನೆಲೆಯಲ್ಲಿ ನೋಡಿ; ಆ ತೀರ್ಪಿನ ವಿವರಗಳು ಡೆಕ್ಕನ್ ಹೆರಾಲ್ಡ್‌ನ ಈ ವರದಿಯಲ್ಲಿದೆ.

ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹೈಕೋರ್ಟನ್ನೂ ಟೀಕಿಸಿಲ್ಲವೆ

(ಈ ಲೇಖನ ಸುಮಾರು ಮೂರು ತಿಂಗಳಿನ ಹಿಂದೆ (16/05/11) ಬರೆದದ್ದು. ಕಾರಣಾಂತರಗಳಿಂದ ಇದು ಪ್ರಕಟವಾಗಬೇಕಾದ ಕಡೆ ಪ್ರಕಟವಾಗಲಿಲ್ಲ. ನೆನ್ನೆ (18/08/11) ರಾಜ್ಯಸಭೆಯಲ್ಲಿ ಬಂಗಾಳದ ಹೈಕೋರ್ಟ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಮೇಲೆ ಚರ್ಚೆ ಮತ್ತು ಮತ ಚಲಾವಣೆ ನಡೆದು ಜಡ್ಜ್ ವಿರುದ್ದ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಪ್ರಕ್ರಿಯೆ ಲೋಕಸಭೆಯಲ್ಲಿ ಪೂರ್ಣಗೊಂಡಾಗ ಆ ಜಡ್ಜ್ ವಜಾ ಆಗಲಿದ್ದಾರೆ. ಆದರೆ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಮಾತು ಕೇಳಬರುತ್ತಿರುವುದು ಇದೇ ಮೊದಲಲ್ಲ. ಲೊಕಪಾಲ ಮಸೂದೆಯಲ್ಲಿ ನ್ಯಾಯಾಂಗವನ್ನು ಹೊರಗಿಡುವ ಬಗ್ಗೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆ ಬರೆದ ಈ ಲೇಖನ ಈಗಲೂ ಪ್ರಸ್ತುತ ಇಂದು ಇಲ್ಲಿ ಪ್ರಕಟಿಸುತ್ತಿದ್ದೇನೆ… ರವಿ…)

Karnataka High Courtಕಳೆದ ಶುಕ್ರವಾರ ( ಮೇ 13, 2011 ) ಸುಪ್ರೀಂಕೋರ್ಟ್ ಕರ್ನಾಟಕದ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿ ಆದೇಶ ಹೊರಡಿಸುವುದರ ಜೊತೆಗೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಕಟುಶಬ್ದಗಳಲ್ಲಿ ಟೀಕಿಸಿತು. ಆದರೆ, ಇದಕ್ಕೂ ಮುಖ್ಯವಾದುದನ್ನು ಸುಪ್ರೀಂಕೋರ್ಟ್ ನೇರವಾಗಿ ಹೇಳಲಿಲ್ಲ. ಅದೇನೆಂದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (11 ಬಿ.ಜೆ.ಪಿ. ಶಾಸಕರ ಅನರ್ಹತೆ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ) ಕರ್ನಾಟಕ ರಾಜ್ಯದ ಉಚ್ಚನ್ಯಾಯಾಲಯ ಕೊಟ್ಟಿದ್ದ ತೀರ್ಪಿನಲ್ಲಿ ನ್ಯಾಯ ಇರಲಿಲ್ಲ ಎನ್ನುವುದು.

ಕಳೆದ ಅಕ್ಟೋಬರ್ 11ರ ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ತರಾತುರಿಯಲ್ಲಿ ವಿಧಾನಸಭೆಯ ಸ್ಪೀಕರ್ ಮೇಲೆ ಉಲ್ಲೇಖಿಸಿದ 16 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಅವರು ಹಾಗೆ ಮಾಡಲು ಕಾನೂನು ಮತ್ತು ನ್ಯಾಯಪಾಲನೆಗಿಂತ ಹೆಚ್ಚಾಗಿ ತಮ್ಮ ಬಿ.ಜೆ.ಪಿ. ಪಕ್ಷದ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಜಯ ಲಭಿಸುವಂತೆ ಮಾಡುವುದೇ ಆಗಿತ್ತು. ಸ್ಪೀಕರ್‌ರ ಈ ಕ್ರಮ ಅನೈತಿಕ ಮತ್ತು ಅಕ್ರಮವಾದದ್ದು ಎಂದು ಎದ್ದು ಕಾಣಿಸುವಷ್ಟು ಲಜ್ಜಾಹೀನವಾಗಿತ್ತು. ಸ್ಪೀಕರ್‌ರ ಈ ಕ್ರಮವನ್ನು ಪ್ರಶ್ನಿಸಿ ಅನರ್ಹಗೊಂಡ ಬಿ.ಜೆ.ಪಿ.ಯ 11 ಬಂಡಾಯ ಶಾಸಕರು, ಮತ್ತು ಐವರು ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಹೈಕೋರ್ಟ್‌ಗೆ ದೂರು ನೀಡಿದರು.

ಬಂಡಾಯ ಶಾಸಕರ ಅನರ್ಹತೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಸಾಕಷ್ಟು ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 18ರಂದು ಪರಸ್ಪರ ಒಮ್ಮತವಿಲ್ಲದ ನ್ಯಾಯತೀರ್ಮಾನಕ್ಕೆ ಬಂದರು. ನ್ಯಾ. ಖೇಹರ್ ಸ್ಪೀಕರ್ ಮಾಡಿದ್ದು ಸರಿ ಎಂದರೆ, ನ್ಯಾ. ಕುಮಾರ್ ಸ್ಪೀಕರ್‌ರ ಕ್ರಮದಲ್ಲಿ ಲೋಪವನ್ನು ಗುರುತಿಸಿದರು. ಹೀಗೆ ಒಮ್ಮತದ ತೀರ್ಪಿಲ್ಲದ ಕಾರಣವಾಗಿ ಈ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಯ ಅಭಿಪ್ರಾಯಕ್ಕಾಗಿ ನ್ಯಾ. ಸಭಾಹಿತರಿಗೆ ಕಳುಹಿಸಲಾಯಿತು.

ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನ್ಯಾ. ಸಭಾಹಿತರು ಅಕ್ಟೋಬರ್ 29ರಂದು ಮುಖ್ಯನ್ಯಾಯಮೂರ್ತಿ ಖೇಹರ್‌ರ ನ್ಯಾಯತೀರ್ಮಾನವನ್ನು ಅನುಮೋದಿಸಿದರು. ಇದರೊಂದಿಗೆ 2:1 ರ ಅನುಪಾತದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಸ್ಪೀಕರ್‌ರ ಕ್ರಮವನ್ನು ಎತ್ತಿಹಿಡಿದು 11 ಬಂಡಾಯ ಶಾಸಕರ ಅನರ್ಹತೆಯನ್ನು ಮಾನ್ಯಗೊಳಿಸಿತು. ಈ ಇಡೀ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವ ಅತಿಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಉಚ್ಚನ್ಯಾಯಾಲಯದ ದೃಷ್ಟಿಗೆ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯಲ್ಲಿ ಯಾವುದೇ ಅನೈತಿಕತೆ ಮತ್ತು ಅಕ್ರಮ ಕಾಣಿಸದೆ ಇದ್ದುದು.

ಅನರ್ಹಗೊಂಡ ಬಂಡಾಯ ಶಾಸಕರ ಜೊತೆಜೊತೆಗೆ ಅನರ್ಹಗೊಂಡ ಐವರು ಪಕ್ಷೇತರ ಶಾಸಕರೂ ಕೂಡ ಕರ್ನಾಟಕದ ಉಚ್ಚನ್ಯಾಯಾಲಯಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಅಬ್ದುಲ್ ನಜೀರ್, ಮತ್ತು ನ್ಯಾ. ಎಸ್. ಬೋಪಣ್ಣನವರ ಪೀಠವು ಸುದೀರ್ಘ ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವುದೇ ದುರುದ್ದೇಶದಿಂದ ನಡೆದುಕೊಂಡಿಲ್ಲ ಮತ್ತು ಅವರ ಕ್ರಮ ಸರಿ ಎಂಬ ತೀರ್ಪನ್ನು ಫೆಬ್ರವರಿ 15ರಂದು ನೀಡಿತು. ಇಲ್ಲಿ ಒತ್ತಿಹೇಳಬೇಕಾದ ಸಂಗತಿಯೆಂದರೆ ಈ ತೀರ್ಪು ಮೂವರು ನ್ಯಾಯಮೂರ್ತಿಗಳ ಒಮ್ಮತದ ನ್ಯಾಯತೀರ್ಮಾನವಾಗಿದ್ದದ್ದು.

ಹೀಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟಿನ ಆರು ನ್ಯಾಯಮೂರ್ತಿಗಳ ಪೈಕಿ ಐವರಿಗೆ ಸ್ಪೀಕರ್‌ರ ಕ್ರಮ ಮತ್ತು ನಡವಳಿಕೆಯಲ್ಲಿ ಯಾವುದೇ ಪಕ್ಷಪಾತ, ದುರುದ್ದೇಶ, ಮತ್ತು ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಕಂಡಿರಲಿಲ್ಲ.

ತಮಗೆ ಸಿಕ್ಕ ನ್ಯಾಯತೀರ್ಮಾನದಿಂದ ತೃಪ್ತರಾಗದ ಎಲ್ಲಾ 16 ಅನರ್ಹ ಶಾಸಕರು ದೆಹಲಿಯ ಸುಪ್ರೀಂಕೋರ್ಟಿಗೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದರು. ಈ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಪರಿಶೀಲಿಸಿದ ಅದೇ ದಾಖಲೆಗಳನ್ನು ಪುನರ್‌ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಕಬೀರ್ ಮತ್ತು ನ್ಯಾ. ಜೋಸೆಫ್ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ವ್ಯತಿರಿಕ್ತವಾದ ಅವಳಿ ತೀರ್ಮಾನವನ್ನು ನೀಡಿದರು. ಅಷ್ಟೇ ಅಲ್ಲದೆ, “ನೈಸರ್ಗಿಕ ನ್ಯಾಯ ಮತ್ತು ನ್ಯಾಯಯುತ ನಡವಳಿಕೆಯ ಅವಳಿ ತತ್ವಗಳ ಪರೀಕ್ಷೆಯಲ್ಲಿ ಸ್ಪೀಕರ್ ಬೋಪಯ್ಯನವರ ಆದೇಶ ಪಾಸಾಗುವುದಿಲ್ಲ. ಸಂವಿಧಾನದ 10ನೇ ಷೆಡ್ಯೂಲಿನಲ್ಲಿ ಕಾಣಿಸಲಾಗಿರುವ ಸಾಂವಿಧಾನಿಕ ನಡವಳಿಕೆಗಳು ಮತ್ತು 1986ರ ಅನರ್ಹತೆ ನಿಯಮಗಳನ್ನು ಉಲಂಘಿಸುವುದಷ್ಟೇ ಅಲ್ಲದೆ ನ್ಯಾಯಯುತ ವಿಚಾರಣೆಯ ಮೂಲತತ್ವವನ್ನು ಕೂಡ ಗಾಳಿಗೆ ತೂರಿದ ಸ್ಪೀಕರ್ ಮುಂದಿದ್ದ ಏಕೈಕ ಗುರಿ ಎಂದರೆ ಯಡಿಯೂರಪ್ಪ ಸರ್ಕಾರವನ್ನು ವಿಶ್ವಾಸಮತದ ಸಂಕಟದಿಂದ ಪಾರುಮಾಡುವುದು. ಸ್ಪೀಕರ್ ಮುಂದೆ ಪರಿಶೀಲನೆಗೆ ಇಟ್ಟಿದ್ದ ಪ್ರಕರಣಕ್ಕೆ ನೇರವಾಗಿ ಸಂಬಂಧ ಪಡದೇ ಇರುವಂತಹ ಬಾಹ್ಯ ಪರಿಗಣನೆಗಳು ಸ್ಪೀಕರ್ ಆದೇಶದ ಮೇಲೆ ಎದ್ದು ಕಾಣಿಸುತ್ತಿವೆ. ಇಂತಹ ಆದೇಶವನ್ನು ತಳ್ಳಿ ಹಾಕಲೇಬೇಕು,” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಸ್ಪೀಕರ್ ಕ್ರಮವನ್ನು ತಳ್ಳಿಹಾಕಿದ್ದೇ ಅಲ್ಲದೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೂಡ ಅಮಾನ್ಯಗೊಳಿಸಿದರು.

ಇದರೊಂದಿಗೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಅದರ ನ್ಯಾಯಮೂರ್ತಿಗಳ ಸಂವಿಧಾನವನ್ನು ಅರ್ಥೈಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ಪ್ರಶ್ನಿಸಿದಂತಾಗಿದೆ ಎನ್ನುವ ಅಭಿಪ್ರಾಯಕ್ಕೆ ಸದ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರು ಬರುವ ಹಾಗೆ ಆಗಿದೆ.

ಕರ್ನಾಟಕದ ಸಮಕಾಲೀನ ರಾಜಕೀಯ ವ್ಯವಸ್ಥೆ ಅತ್ಯಂತ ಭ್ರಷ್ಟವೂ, ಅನೈತಿಕವೂ, ಸ್ವಾರ್ಥಪೂರಿತವೂ ಆಗಿರುವುದನ್ನು ಕಳೆದ ನಾಲ್ಕೈದು ವರ್ಷಗಳ ಇತಿಹಾಸ ಸಾರಿ ಹೇಳುತ್ತಿದೆ. ಈ ಅನೈತಿಕತೆ ಮತ್ತು ಭ್ರಷ್ಟತೆ ರಾಜಕೀಯ ವಲಯಕ್ಕಷ್ಟೆ ಸೀಮಿತವಾಗದೆ ಬೇರೆಲ್ಲ ಸಾರ್ವಜನಿಕ ರಂಗಗಳಿಗೂ ವ್ಯಾಪಿಸುತ್ತ ಬಂದಿದೆ. ಇಂತಹ ನಿರಾಶಾದಾಯಕ ಸಂದರ್ಭದಲ್ಲಿ ಪ್ರಾಮಾಣಿಕರಿಗೆ ಮತ್ತು ದೇಶಪ್ರೇಮಿಗಳಿಗೆ ಉಳಿದಿದ್ದ ಏಕೈಕ ಭರವಸೆ ಎಂದರೆ ಅದು ನಮ್ಮ ಭ್ರಷ್ಟವಾಗಿಲ್ಲದಿದ್ದ ಮತ್ತು ಸಾಮರ್ಥ್ಯದಿಂದ ಕೂಡಿದ್ದ ನ್ಯಾಯಸ್ಥಾನಗಳು. ಈಗ ಮೇಲೆ ಉಲ್ಲೇಖಿಸಿರುವ ಪ್ರಕರಣಗಳಿಂದ ತಾವು ಇಟ್ಟುಕೊಂಡಿದ್ದ ಆ ಒಂದು ಭರವಸೆಯ ಬಗ್ಗೆಯೂ ನಾಗರಿಕರು ಸಂಶಯಾಸ್ಪದಿಂದ ನೋಡುವಂತೆ ಆಗಿದೆ. ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವ ಸಂಶಯ ಇವೆಲ್ಲದರಿಂದ ಗಟ್ಟಿಯಾಗದೆ?

ಸುಪ್ರೀಂಕೋರ್ಟ್ ಕಂಡಂತೆ ಅಕ್ರಮ ಆದೇಶ ಹೊರಡಿಸಿದ್ದ ಸ್ಪೀಕರ್‌ರ ಕ್ರಮ ರಾಜ್ಯದ ಹೈಕೋರ್ಟ್‌ನಲ್ಲಿ ಸಕ್ರಮವಾಗಿ ಮಾನ್ಯತೆ ಪಡೆದಿದ್ದರ ಹಿಂದೆ ಇರುವ ಕಾರಣಗಳಾದರೂ ಏನು? ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ ಜನರ ಪ್ರಜ್ಞೆಗೂ ಬಂದಿರುವ ನ್ಯಾಯಾಧೀಶರುಗಳ ಭ್ರಷ್ಟಾಚಾರವೆ? ಅಥವ, ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಸಮರ್ಥರೂ ನ್ಯಾಯಮೂರ್ತಿಗಳಾಗಿರುವುದೇ? ಅಥವ, ನ್ಯಾಯಮೂರ್ತಿಗಳ ವೈಯಕ್ತಿಕ ರಾಜಕೀಯ ನಿಲುವುಗಳೂ ಅವರು ಕೊಡುತ್ತಿರುವ ತೀರ್ಪಿನ ಮೇಲೆ ಪ್ರಭಾವ ಬೀರುತ್ತಿರುವುದೆ? ಅಥವ, ಅಧಿಕಾರರೂಢರ ಪರ ಇರುವುದರಿಂದ ತಮ್ಮ ಸವಲತ್ತುಗಳಲ್ಲಿ ಹೆಚ್ಚಳವಾಗುತ್ತದೆಯೆಂಬ ಸ್ವಹಿತಾಸಕ್ತಿಯೆ? ಒಟ್ಟಿನಲ್ಲಿ, ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವುದೇ?

ಈ ಪ್ರಶ್ನೆಗಳು ರಾಜ್ಯದಲ್ಲಿ ಈಗ ನಡೆಯುತ್ತಿರುವ ಎಲ್ಲಾ ರಾಜಕೀಯ ಘಟನೆಗಳಿಗಿಂತ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಕೂಡಲೇ ಸರಿಪಡಿಸಬೇಕಾದ ವಿಷಯಗಳಾಗಿವೆ. ನ್ಯಾಯಸ್ಥಾನದ ಬಗ್ಗೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಂದಿಗೂ ನ್ಯಾಯಮೂರ್ತಿಗಳದ್ದೇ ಆಗಿದೆ. ಅಲ್ಲವೆ?

ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ…


– ರವಿ ಕೃಷ್ಣಾರೆಡ್ಡಿ  


ಇಂದು ಭಾರತ ಜನತಂತ್ರಗೊಂಡ ದಿನದ ವಾರ್ಷಿಕಾಚರಣೆ.

ಬಹುಶಃ ನಾನು ಈ ನನ್ನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಎಂದೂ ಇಷ್ಟೊಂದು ನಿರುತ್ಸಾಹಗೊಂಡಿರಲಿಲ್ಲ. ಅದರಲ್ಲೂ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಬಗ್ಗೆ, ಇಲ್ಲಿನ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ, ಮತ್ತು ಜನ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ಮತ್ತು ಅನೀತಿಗಳಿಗೆ ಪ್ರತಿಸ್ಪಂದಿಸುತ್ತಿರುವ ರೀತಿ ನೋಡಿ ನಿಜಕ್ಕೂ ವಾಕರಿಕೆ ಆಗುತ್ತಿದೆ.

ಇದಕ್ಕೆ ನಾನು ಕಳೆದ ಮೂರು ದಿನಗಳಿಂದ ಪಟ್ಟುಬಿಡದೆ ಕೂತು ಓದಿದ “All the President’s Men” ಪುಸ್ತಕ ಮತ್ತು ಇಂದು ಹರಡಿಕೊಂಡು ಕೂತಿರುವ ಶಾಸಕನೊಬ್ಬನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಗಳೂ ಸ್ವಲ್ಪಮಟ್ಟಿಗೆ ಕಾರಣ ಇರಬಹುದು.

ಬಹುಶಃ ನಿಮಗೆ ಗೊತ್ತಿರಬಹುದು, ಅಮೆರಿಕದ ಇತಿಹಾಸದಲ್ಲಿ ರಾಜೀನಾಮೆ ನೀಡಿ ಹೊರನಡೆದ ಏಕೈಕ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್. ಅಮೆರಿಕದ ರಾಜಕೀಯ ನಮ್ಮಷ್ಟು ಎಂದೂ ಗಬ್ಬೆದ್ದಿರಲಿಲ್ಲ. ಆದಷ್ಟೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆ ಅದು. ಅದಕ್ಕೆ ಕಾರಣ ಅಲ್ಲಿನ ರಾಜಕಾರಣಿಗಳಷ್ಟೇ ಅಲ್ಲ. ಅಲ್ಲಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಚಿಂತಕರು, ಉತ್ತರದಾಯಿತ್ವವನ್ನು ಗಟ್ಟಿಯಾಗಿ ಅಪೇಕ್ಷಿಸುವ ಅಲ್ಲಿಯ ಜನಸಾಮಾನ್ಯರು. ಹೀಗೆ ಎಲ್ಲರೂ ಅಲ್ಲಿಯ ವ್ಯವಸ್ಥೆ ತಕ್ಕಷ್ಟು ಮಟ್ಟಿಗೆ ನ್ಯಾಯಯುತವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಆದರೆ ಇಂತಹ ವ್ಯವಸ್ಥೆಯಲ್ಲಿಯೂ ನಿಕ್ಸನ್ ಮತ್ತು ಆತನ ಕೆಳಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಅಮೇರಿಕದ ಮಟ್ಟಿಗೆ ಮಾಡಬಾರದಂತಹ ಅಪಚಾರ ಮಾಡಿದರು. ಅದು 1971-72ರ ಸಮಯ. ನಿಕ್ಸನ್‌ನ ಮರುಚುನಾವಣೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ಆತನ ಗುಂಪು ತಮ್ಮ ವಿರೋಧಿ ಗುಂಪಿನ ಜನರ ಫೋನ್‌ಗಳನ್ನು ಕದ್ದಾಲಿಸಿದರು. ಅವರ ಮೇಲೆ ವ್ಯವಸ್ಥಿತ ಅಪಪ್ರಚಾರ ಮತ್ತು ಪಿತೂರಿಗಳನ್ನು ಮಾಡಿದರು. ಕೊನೆಗೆ ವಿರೋಧಪಕ್ಷದ ಕಚೇರಿಯಲ್ಲಿಯೇ ಕದ್ದಾಲಿಕೆ ಯಂತ್ರ ಅಳವಡಿಸಲು ಯತ್ನಿಸಿದರು. ಆ ಯತ್ನದಲ್ಲಿ ಇವರ ಜನ ತೊಡಗಿದ್ದಾಗ ಅಚಾನಕ್ ಆಗಿ ಸಿಕ್ಕಿಬಿದ್ದರು. ಅದೇ ವಾಟರ್‌ಗೇಟ್ ಪ್ರಕರಣ ಮತ್ತು ಹಗರಣ.

ಈ ಘಟನೆಯ ಹಿಂದೆ ಬಿದ್ದು ಆ ಇಡೀ ಪ್ರಕರಣವನ್ನು ಬೇಧಿಸುತ್ತಾ ಹೋಗಿದ್ದು ವುಡವರ್ಡ್ ಮತ್ತು ಬರ್ನ್‍ಸ್ಟೀನ್ ಎಂಬ ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಪತ್ರಕರ್ತರು. ಆಗ ಅವರಿಬ್ಬರಿಗೂ ಮುವ್ವತ್ತರ ಆಸುಪಾಸು. ನಂತರದ ದಿನಗಳಲ್ಲಿ ಅಮೆರಿಕದ ಅನೇಕ ಪತ್ರಕರ್ತರು, ಟೈಮ್, ನ್ಯೂಸ್‌ವೀಕ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, .. ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಹಗರಣವನ್ನು ಬೇಧಿಸಲು ಯತ್ನಿಸುತ್ತವೆ. ಆದರೆ ವುಡವರ್ಡ್, ಬರ್ನ್‍ಸ್ಟೀನ್ ಮತ್ತು ವಾಷಿಂಗ್ಟನ್ ಪೋಸ್ಟ್‌ನ ಎಡಬಿಡದೆ ಸಾಗಿದ ಇನ್ವೆಸ್ಟಿಗೇಟಿವ್ ಜರ್ನಲಿಸಂ ಆ ಹಗರಣ ಬಯಲಾಗಲು ಪ್ರಮುಖ ಕಾರಣ. ತನ್ನ ಸಹಚರರು ಮಾಡುತ್ತಿದ್ದ ಕೆಲವು ಅಕ್ರಮ ಕೆಲಸಗಳು ನಿಕ್ಸನ್‌ಗೆ ಗೊತ್ತಿತ್ತು. ಅದನ್ನು ಮುಚ್ಚಿ ಹಾಕಲು ಮಾಡುತ್ತಿದ್ದ ಪ್ರಯತ್ನಗಳ ಬಗ್ಗೆಯೂ ಆತನಿಗೆ ಅರಿವಿತ್ತು. ಮತ್ತು ಆ ಇಡೀ ವಿದ್ಯಮಾನದಲ್ಲಿ ನಿಕ್ಸನ್ ಸುಳ್ಳು ಹೇಳುತ್ತ, ಆರೋಪಗಳನ್ನು ನಿರಾಕರಿಸುತ್ತ ಬಂದ. ಕೊನೆಗೆ ಎಲ್ಲವೂ ಬಯಲಾಗಿ ರಾಜೀನಾಮೆ ನೀಡಿ, ಆತನ ಉಪಾಧ್ಯಕ್ಷನೇ ಅಧ್ಯಕ್ಷನಾದ ಮೇಲೆ ಆತನಿಂದ ಕ್ಷಮಾದಾನ ಪಡೆದುಕೊಂಡು ಜೈಲುಪಾಲಾಗದೆ ಉಳಿದುಕೊಂಡ. (ಮತ್ತೂ ಒಂದಷ್ಟು ವಿವರಗಳಿಗೆ ನನ್ನ ಈ ಲೇಖನ ನೋಡಿ.)

ಈ ಪ್ರಕರಣ ಮತ್ತು ಅದನ್ನು ಬಯಲಿಗೆಳೆದ ರೀತಿ ನಮ್ಮ ಎಲ್ಲಾ ಪತ್ರಕರ್ತರಿಗೂ, ಅದರಲ್ಲೂ ವಿಶೇಷವಾಗಿ ರಾಜಕೀಯ ವರದಿಗಾರರಿಗೆ ಗೊತ್ತಿರಲೇಬೇಕು. ಈ ಪುಸ್ತಕ ಪತ್ರಕರ್ತರಿಗೆ ಪಠ್ಯವಾಗಬೇಕು. ಆದರೆ ಇತ್ತೀಚಿನ ಪತ್ರಕರ್ತರಿಗೆ ಇದು ಗೊತ್ತಿರುವ ಸಾಧ್ಯತೆಗಳು ಬಹಳ ಕಮ್ಮಿ ಎನ್ನಿಸುತ್ತದೆ. ನಾನು 2006ರಲ್ಲಿ ವಿಕ್ರಾಂತ ಕರ್ನಾಟಕ ಆರಂಭಿಸುವ ಮೊದಲು ಬೆಂಗಳೂರಿನಲ್ಲಿ ಕೆಲವು ಹಿರಿಯ ಪತ್ರಕರ್ತರು ಮತ್ತು ಸಂಪಾದಕರೊಡನೆ ಒಂದು ಸಂವಾದ ಏರ್ಪಡಿಸಿದ್ದೆ. ಅದಾದ ನಂತರ ಈ ಪುಸ್ತಕವನ್ನು ಆಧರಿಸಿ ತೆಗೆದಿರುವ ಅದೇ ಹೆಸರಿನ ಸಿನೆಮಾ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿಸಿದ್ದೆ. ಅದನ್ನು ನೋಡಲು ಉಳಿದವರು ಹತ್ತು ಜನರೂ ಇರಲಿಲ್ಲ.

ಕರ್ನಾಟಕದಲ್ಲಿ ಇಂದು ಭ್ರಷ್ಟಾಚಾರ ಎನ್ನುವುದು, ಅದರಲ್ಲೂ ರಾಜಕಾರಣಿಗಳ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳು, ಎಲ್ಲಾ ತರಹದ ಎಲ್ಲೆಗಳನ್ನೂ ಮೀರಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಹತ್ತಾರು ಜನ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್‌ಗಳು, ಪ್ರಾಮಾಣಿಕ ವರದಿಗಾರರು ಹುಟ್ಟಿಕೊಳ್ಳಬೇಕಿತ್ತು. ಏನಾಗಿದೆ ಇಲ್ಲಿ?

ಇವತ್ತು ಬಯಲಾಗುತ್ತಿರುವ ಪ್ರಕರಣಗಳೂ ಸಹ ರಾಜಕೀಯ ವಿರೋಧಿಗಳು ಪತ್ರಿಕಾಲಯಗಳಿಗೆ ತಾವೇ ಖುದ್ದಾಗಿ ತಲುಪಿಸುತ್ತಿರುವ ದಾಖಲೆ ಮತ್ತು ಮಾಹಿತಿಗಳೇ ಹೊರತು ಪತ್ರಕರ್ತರು ತಮ್ಮ ಕಚೇರಿಯಿಂದ ಹೊರಗೆ ಹೋಗಿ ಮಾಹಿತಿ ಕಲೆಹಾಕುತ್ತಿಲ್ಲ. ಇಂತಹ ಸ್ವಚ್ಚಂದ ಭ್ರಷ್ಟಾಚಾರದ ಸಮಯದಲ್ಲಿ ಮತ್ತು ಮಾಹಿತಿ ಹಕ್ಕಿನ ಯುಗದಲ್ಲೂ ಪತ್ರಕರ್ತರು ಮತ್ತು ಅವರ ಸಂಪಾದಕರು ದಡ್ಡರಾಗಿದ್ದಾರೆ; ಸೋಮಾರಿಗಳಾಗಿದ್ದಾರೆ; ಭ್ರಷ್ಟರಾಗಿದ್ದಾರೆ; ಖದೀಮರಾಗಿದ್ದಾರೆ; ಪಕ್ಷಪಾತಿಗಳಾಗಿದ್ದಾರೆ; ಶ್ರೀಮಂತರಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದ ಹಗರಣಗಳನ್ನೇ ನೆನಪಿಸಿಕೊಳ್ಳಿ. ಒಂದೊಎರಡೊ ಬಿಟ್ಟರೆ ಮಿಕ್ಕೆಲ್ಲ ಹಗರಣ ಖಾಸಗಿ ಜನ ಕೋರ್ಟ್ ಮೆಟ್ಟಿಲು ಹತ್ತಿ ಜನರ ಮುಂದೆ ಇಟ್ಟದ್ದೇ ಹೊರತು ನಮ್ಮ ಪತ್ರಿಕೆಗಳು ಬಯಲಿಗೆಳೆದದ್ದು ಎಷ್ಟು?

ಈ ಮಧ್ಯೆ ಅಧಿಕಾರಸ್ಥರಿಂದ ಲಾಭ ಮಾಡಿಕೊಂಡ ಪತ್ರಕರ್ತರ ಮತ್ತು ಮಾಧ್ಯಮಸಂಸ್ಥೆಗಳ ಪಟ್ಟಿಯೇ ದೊಡ್ದದಿದೆ.

ಇನ್ನು ವರ್ಷ ಒಪ್ಪತ್ತಿನಲ್ಲಿ ಬರಲಿರುವ ಚುನಾವಣೆಗಳಲ್ಲಿ ಅದೇ ಭ್ರಷ್ಟ ಜನ ಚುನಾವಣೆಗೆ ನಿಲ್ಲಲಿದ್ದಾರೆ. ನಮ್ಮ ರಾಜಕೀಯ ವರದಿಗಾರರ, ಸಂಪಾದಕರ ಮತ್ತು ಮಾಧ್ಯಮಸಂಸ್ಥೆಗಳ ಜೇಬು ಮತ್ತಷ್ಟು ದೊಡ್ಡದಾಗಲಿವೆ.

ಇಂತಹ ಸ್ಥಿತಿಯಲ್ಲಿ ಗಣತಂತ್ರ ಎಲ್ಲಿದೆ?

ಜೀವನದಿಗಳ ಸಾವಿನ ಕಥನ – 21


– ಡಾ.ಎನ್. ಜಗದೀಶ್ ಕೊಪ್ಪ


ಅಣೆಕಟ್ಟುಗಳ ನೆಪದಲ್ಲಿ ಜೀವನದಿಗಳನ್ನ ಕೊಲ್ಲುತ್ತಿರುವ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರತಿಭಟನೆಗಳು ಜರುಗುತ್ತಿವೆ. ಎಲ್ಲಾ ಸರ್ಕಾರಗಳಿಗೆ ಪ್ರತಿಭಟನೆಯ ಬಿಸಿ ತಾಕತೊಡಗಿದೆ. ನದಿಗಳ ರಕ್ಷಣೆಗಾಗಿ ಅನೇಕ ಸ್ವಯಂ ಸೇವಾ ಸಂಘಟನೆಗಳು, ಕಾರ್ಯಕರ್ತರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಫೇಸ್‌ಬುಕ್, ಗೂಗ್ಲ್ ಪ್ಲಸ್, ಮುಂತಾದ ಸಾಮಾಜಿಕ ತಾಣಗಳು, ಇ-ಮೈಲ್, ಬ್ಲಾಗ್‌ಗಳು ಪರಿಸರ ಪ್ರೇಮಿಗಳಿಗೆ ಅನುಕೂಲಕರ ವೇದಿಕೆಗಳಾಗಿ ಮಾರ್ಪಟ್ಟಿವೆ.

ಅಣೆಕಟ್ಟುಗಳನ್ನ ವಿರೋಧಿಸುವುದಾದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ನಗರೀಕರಣ, ನೀರು, ವಿದ್ಯುತ್‌ಗಳ ಬೇಡಿಕೆ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಬೇಕಾದ ಆಹಾರ ಧಾನ್ಯ, ಇದಕ್ಕಾಗಿ ನೀರಾವರಿ ವ್ಯವಸ್ಥೆ, ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ವರ್ತಮಾನದ ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವೊಂದೇ ಉತ್ತರವಲ್ಲ. ಹಾಗೆಂದ ಮಾತ್ರಕ್ಕೆ ದಿಡೀರ್ ಪರಿಹಾರಕ್ಕೆ ಯಾವ ಮಂತ್ರ ದಂಡ ಯಾರ ಬಳಿಯೂ ಇಲ್ಲ ನಿಜ. ಆದರೆ ನಾವೀಗ ನಮ್ಮ ಪೂರ್ವಿಕರು ನಡೆದು ಬಂದ ಹಾದಿಯಲ್ಲಿ ನಾವು ಹಾದಿ ತಪ್ಪಿದ್ದು ಎಲ್ಲಿ ಎಂಬುದನ್ನ ಕಂಡುಕೊಳ್ಳುವುದರ ಮೂಲಕ ಉತ್ತರ ಹುಡಕಬೇಕಾಗಿದೆ. ನಮ್ಮನ್ನು ತಾಯಿಯಂತೆ ಪೋಷಿಸುತ್ತಿರುವ ನಿಸರ್ಗದಲ್ಲಿ, ಅದರ ಜೀವಜಾಲ ವ್ಯವಸ್ಥೆಯಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೆ ಪರಿಹಾರವಿದೆ. ಅದನ್ನು ಗ್ರಹಿಸುವ, ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಷ್ಟೆ. ನದಿ ನೀರು ಕಲ್ಮಶವಾಗದಂತೆ ಕಾಪಾಡುವ, ಪ್ರವಾಹವನ್ನು ನಿಯಂತ್ರಿಸುವ, ಹೂಳನ್ನು ತಡೆಗಟ್ಟುವ ಬಗ್ಗೆ ನಮ್ಮ ಪೂರ್ವಿಕರು ಅನುಕರಿಸುತಿದ್ದ ಪದ್ದತಿಗಳತ್ತ ನಾವು ಗಮನ ಹರಿಸಬೇಕಾಗಿದೆ.

ನದಿಯ ನೀರಿನ ಕಲ್ಮಶಕ್ಕೆ ಮೂಲ ಕಾರಣ ಮಳೆಯ ನೀರು. ಈ ನೀರು ನೆಲಕ್ಕೆ ಬಿದ್ದಾಗ ಭೂಮಿಯಲ್ಲಿ ಇಂಗಿ ಹೋಗದೆ ನೇರವಾಗಿ ನದಿಗೆ ಸೇರುತ್ತಿದೆ. ನದಿ ಪಾತ್ರದಲ್ಲಿದ್ದ ಅರಣ್ಯ, ಗಿಡ ಮರಗಳ ನಾಶ ಮತ್ತು ನೀರಿನ ತಾಣಗಳ (ಹೊಂಡ) ನಾಶದಿಂದಾಗಿ ನದಿಗಳ ಪ್ರವಾಹ, ಹೂಳು ತುಂಬುವಿಕೆಗೆ ಕಾರಣವಾಗಿದೆ. ಅರಣ್ಯ ಹಾಗೂ ನದಿಯ ಇಕ್ಕೆಲಗಳಲ್ಲಿ ಇರುತ್ತಿದ್ದ ಗಿಡ ಮರಗಳಿಂದ ಉದುರುತಿದ್ದ ಎಲೆಗಳು ಭೂಮಿಯಲ್ಲಿ ಶೇಖರಗೊಂಡು ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀರನ್ನು ಇಂಗಿಸುತಿದ್ದವು. ಗಿಡ ಮರಗಳ ಕೆಳಗೆ ಹತ್ತಿಯ ಹಾಸಿಗೆಯಂತಹ ಒಂದು ಪದರ  ನಿರ್ಮಾಣವಾಗುತ್ತಿತ್ತು. ಇದಕ್ಕೆ ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿಯದಂತೆ ತಡೆದು ಭೂಮಿಗೆ ನೀರುಣಿಸುವ ಸಾಮರ್ಥ್ಯವಿತ್ತು. ಅದೇ ರೀತಿ ನೀರಿನ ಹೊಂಡಗಳಲ್ಲಿ ಮಳೆ ನೀರು ಶೇಖರವಾಗಿ ಅಂತರ್ಜಲ ಹೆಚ್ಚಲು ಸಹಕಾರಿಯಾಗುತ್ತಿತ್ತು. ಜೊತೆಗೆ ನದಿಗಳ ದಡದ ಇಕ್ಕೆಲಗಳಲ್ಲಿ ಬೆಳೆದ ಗಿಡ ಮರಗಳ ಬೇರುಗಳು ಮಣ್ಣು ಕುಸಿದು ನದಿಗೆ ಸೇರದಂತೆ ತಡೆದು ಹಿಡಿದಿಟ್ಟುಕೊಳ್ಳುತ್ತಿದ್ದವು. ಪರಿಸರದ ಸ್ವಯಂಕೃತವಾದ ಈ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವಿದ್ದ ನಮ್ಮ ಪೂರ್ವಿಕರು ನಿಸರ್ಗದ ನೈಜ ಚಟುವಟಿಕೆಗೆ ಕೈ ಹಾಕದೇ ಹಾಗೇ ಪೋಷಿಸಿಕೋಡು ಬಂದಿದ್ದರು.

ಇಂದಿನ ಆಧುನಿಕ ಅಭಿವೃದ್ಧಿಯ ಅಂಧಯುಗದಲ್ಲಿ ನಗರೀಕರಣ ರಭಸದಿಂದ ಸಾಗುತ್ತಿರುವಾಗ, ನಿಸರ್ಗವಿರುವುದೇ ನಮಗಾಗಿ ಎಂಬ ಅಹಂಕಾರ ನಮ್ಮಲ್ಲಿ ಮನೆ ಮಾಡಿರುವಾಗ, ಅರಣ್ಯ, ನೀರಿನ ತಾಣ, ಗಿಡ ಮರ ಅವನತಿಯತ್ತಾ  ಸಾಗಿ ನದಿಗಳು ಈಗ ನಗರ ಪಟ್ಟಣಗಳ ಕೊಳಚೆ ನೀರನ್ನು ಸಾಗಿಸುವ ವ್ಯವಸ್ಥೆಗಳಾಗಿ ಮಾರ್ಪಟ್ಟಿವೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಪ್ರತಿಪಾದಿಸುವ ಸರ್ಕಾರಗಳು, ತಜ್ಞರು ನಮ್ಮ ಮುಂದಿಡುವ ವಾದವೆಂದರೆ, ನದಿಗಳ ಪ್ರವಾಹ ನಿಯಂತ್ರಣ ಮತ್ತು ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಇವರ ದೃಷ್ಟಿಯಲ್ಲಿ ಸಣ್ಣ ಮಟ್ಟದ ಜಲಾಶಯಗಳು ನಿಷ್ಪ್ರಯೋಜಕ. ನಿಸರ್ಗದ ಇತಿಹಾಸ ಬಲ್ಲವರು, ಅದರ ಚಟುವಟಿಕೆ ಅರ್ಥ ಮಾಡಿಕೊಂಡವರು ಆಧುನಿಕ ತಂತ್ರಜ್ಞಾನವನ್ನು ಒಪ್ಪುವುದಿಲ್ಲ. ಅಣೆಕಟ್ಟುಗಳ ಮೊದಲಿಗೆ ಇದ್ದ ನೀರಿನ ತಾಣಗಳು, ಅವು ಸಣ್ಣ ಸ್ವರೂಪದವುಗಳಾಗಿದ್ದು, ಕೊಳವಾಗಿರಲಿ, ಕೆರೆಯಾಗಿರಲಿ ಇವುಗಳ ಮಹತ್ವವನ್ನು ಅರಿಯದವರು ಮಾತ್ರ ದೊಡ್ಡ ಅಣೆಕಟ್ಟುಗಳ ಬಗ್ಗೆ ಮಾತನಾಡುತ್ತಾರೆ.

ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿಕೊಂಡು ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ ಇವುಗಳು ನೀರಿನ ಕಲ್ಮಶವನ್ನು ತಡೆಗಟ್ಟಿ ನದಿಗೂ ಪರಿಶುದ್ಧ ನೀರನ್ನು ಹರಿಯಬಿಡುತಿದ್ದವು. ಈಗಲೂ ಕೂಡ ಆಳವಾದ ನದಿಗಳ ದಡದಲ್ಲಿ ಈ ರೀತಿಯ ನೀರು ಜಿನುಗುವುದರ ಮೂಲಕ ನದಿ ಸೇರುವುದನ್ನು ನಾವು  ಕಾಣಬಹುದು. ಅರಣ್ಯ ನಾಶ ಕೇವಲ ಅಂತರ್ಜಲ ಕೊರತೆಗೆ ಮಾತ್ರ ಕಾರಣವಾಗಿಲ್ಲ, ಆಯಾ ಪ್ರದೇಶದಲ್ಲಿ ಬೀಳುತ್ತಿದ್ದ ಸರಾಸರಿ ಮಳೆಯ ಪ್ರಮಾಣದ ಕುಸಿತಕ್ಕೂ ಕಾರಣವಾಗಿದೆ. ಅರಣ್ಯ ಮತ್ತು ಗಿಡ ಮರಗಳ ನಾಶದಿಂದ ಭೂಮಿಯ ಮೇಲಿರುತಿದ್ದ ಎಲೆಗಳ ಹೊದಿಕೆ ನಾಶವಾಗಿ ಮಳೆಯ ನೀರಿಗೆ ಭೂಮಿಯ ಮೇಲ್ಪದರು ಕೊಚ್ಚಿ ಹೋಗಿ ನದಿಗೆ ಸೇರ್ಪಡೆಯಾಗುತ್ತಿದೆ. ಇದು ಪರೋಕ್ಷವಾಗಿ ನದಿಗಳಲ್ಲಿ ಹೂಳು ಶೇಖರವಾಗಲು ಕಾರಣವಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆಯಂದರೆ, ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಈಶಾನ್ಯ ಭಾರತದ ಚಿರಾಪುಂಜಿಯಲ್ಲಿ ವರ್ಷವೊಂದಕ್ಕೆ ಸರಾಸರಿ 900 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಅಲ್ಲಿನ ಅರಣ್ಯನಾಶದಿಂದಾಗಿ ಈಗ ಮಳೆಯ ಪ್ರಮಾಣ 400 ರಿಂದ 530 ಮಿಲಿ ಮೀಟರ್‌ಗೆ ಕುಸಿದಿದೆ.

ಅರಣ್ಯದಲ್ಲಿ ಬೆಳೆಯುತಿದ್ದ ದಟ್ಟವಾದ ಹುಲ್ಲು ಮಳೆ ನೀರಿಗೆ ಭೂಮಿಯ ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತಿತ್ತು. ಅರಣ್ಯ ಬರಿದಾದ ಮೇಲೆ ಮಳೆನೀರಿನ ಜೊತೆ ಹರಿಯುತ್ತಿರುವ ಮಣ್ಣು ನದಿಯ ಒಡಲು ಸೇರುತ್ತಿದೆ. ಜಗತ್ತಿನಾದ್ಯಂತ 1990ರ ದಶಕದಲ್ಲಿ ವರ್ಷವೊಂದಕ್ಕೆ ಒಂಬೈನೂರು ಕೋಟಿ ಟನ್ ಮಣ್ಣು ನದಿಗಳಿಗೆ ಸೇರ್ಪಡೆಯಗುತ್ತಿತ್ತು. ಈಗ ಅದರ ಪ್ರಮಾಣ ನಾಲ್ಕುವರೆ ಸಾವಿರ ಕೋಟಿ ಟನ್‌ಗೆ ಏರಿಕೆಯಾಗಿದೆ. ನದಿ ಮತ್ತು ಅದರ ನೀರಿನ ರಕ್ಷಣೆಗೆ ಇರುವ ಏಕೈಕ ಪರ್ಯಾಯವೆಂದರೆ, ಕೃಷಿನೀರಿನ ತಾಣ ಮತ್ತು ಅರಣ್ಯದ ರಕ್ಷಣೆ ಮಾತ್ರ.  ಇವುಗಳಿಂದಾಗಿ ಜೈವಿಕ ಪರಿಸರ ಸಮತೋಲನದಲ್ಲಿರುತ್ತದೆ. ಬಹುತೇಕ ಸರ್ಕಾರಗಳು ಕಾಯ್ದಿಟ್ಟ ಅರಣ್ಯ ಅಥವಾ ರಾಷ್ಡೀಯ ಉದ್ಯಾನವನ ಎಂಬ ಯೋಜನೆಯಡಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿವೆ. ಇವರನ್ನು ಹೊರಹಾಕುವ ಹಿಂದೆ ಮರಗಳ್ಳರ ಮಾಫಿಯ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರಣ್ಯಕ್ಕಾಗಲಿ, ಅಲ್ಲಿನ ಪರಿಸರ ಅಥವಾ ಪ್ರಾಣಿಗಳ ಬದುಕಿಗೆ ಧಕ್ಕೆಯಾಗದಂತೆ ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಶತಮಾನಗಳುದ್ದಕ್ಕೂ ಅದರ ರಕ್ಷಕರಂತೆ ಬಾಳಿದ್ದ ಇವರು ಈಗ ಅಕ್ಷರಶಃ ಅನಾಥರು. ಇವರನ್ನು ಅರಣ್ಯದಿಂದ ಹೊರ ಹಾಕಿದ ನಂತರ ಅರಣ್ಯ ಮತ್ತಷ್ಟು ನಾಶವಾಗಿದೆಯೇ ಹೊರತು ಉದ್ಧಾರವಾಗಿಲ್ಲ. ಈಗ ಭಾರತ ಸರ್ಕಾರ  ಅರಣ್ಯವಾಸಿಗಳಿಗೆ ಹಕ್ಕನ್ನು ದಯಪಾಲಿಸಿದ್ದು ಯಾವ ಸರ್ಕಾರಗಳೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅರಣ್ಯದ ಕಿರು ಉತ್ಪನ್ನಗಳ ಜೊತೆ ಜೀವಿಸುವ ಹಕ್ಕನ್ನು ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಇವರ ಅಭಿವೃದ್ಧಿಗಾಗಿ ಕಳೆದ ನಲವತ್ತು ವರ್ಷಗಳಿಂದಲೂ ದುಡಿಯುತ್ತಿರುವ ಡಾ. ಹೆಚ್. ಸುದರ್ಶನ್‌ರವರ ಪರಿಶ್ರಮವಿದೆ. ಇವರಂತೆ ಹಲವಾರು ಸಮಾಜ ಸೇವಕರು ಒರಿಸ್ಸಾ, ಮಧ್ಯಪ್ರದೇಶ, ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡುತಿದ್ದು, ಇವರಿಗೆ ದೆಹಲಿ ಮೂಲದ ಪರಿಸರಕ್ಕೆ ಮೀಸಲಾದ “ಡೌನ್ ಟು ಅರ್ಥ್” ಮಾಸಪತ್ರಿಕೆ ಬೆನ್ನೆಲುಬಾಗಿ ನಿಂತಿದೆ.

ಭೂಮಿಯ ಮೇಲಿನ ಮಣ್ಣಿನ ಪದರು ನಾಶವಾಗದಂತೆ ತಡೆಗಟ್ಟಲು ನಮ್ಮ ಪೂರ್ವಿಕರು ಅನುಸರಿಸುತಿದ್ದ ಸಾಂಪ್ರದಾಯಿಕ ದೇಶಿ ಕೃಷಿ ಪದ್ಧತಿ ಇವತ್ತಿಗೂ ನಮಗೆ ಮಾದರಿಯಾಗಬಲ್ಲದು. ಈ ಪದ್ಧತಿಯಲ್ಲಿ ರೈತರು ಬೇಸಾಯದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಋತುಮಾನಗಳಿಗೆ ಅನುಗುಣವಾಗಿ ಬೆಳೆಯುತ್ತಿದ್ದರಿಂದ ಭೂಮಿಯ ಫಲವತ್ತತೆಯ ಜೊತೆಗೆ ಮಣ್ಣು ಕೊಚ್ಚಿ ಹೋಗದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬೇರುಗಳು ತಡೆಯುತ್ತಿದ್ದವು. ಗುಡ್ಡಗಾಡು ಇಲ್ಲವೆ ಇಳಿಜಾರು ಪ್ರದೇಶದಲ್ಲಿ ಕೃಷಿಕರು ಭೂಮಿಯನ್ನು ಹಂತ ಹಂತವಾಗಿ ಮೆಟ್ಟಿಲುಗಳ ಆಕಾರದಲ್ಲಿ ವಿನ್ಯಾಸಗೊಳಿಸಿ ಬೇಸಾಯ ಮಾಡುತ್ತಿದ್ದುದ್ದರಿಂದ ಮಳೆನೀರು ಬಿದ್ದ ಸ್ಥಳದಲ್ಲೇ ಭೂಮಿಗೆ ಸೇರುತಿತ್ತು.

ದೇಶಿ ಕೃಷಿ ಪದ್ಧತಿಯಲ್ಲಿ ರೈತರು ಸಾವಯವ ರೀತಿಯನ್ನು ಅಳವಡಿಸಿಕೊಂಡು ಯಾವುದೇ ರಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುತ್ತಿರಲಿಲ್ಲ. ಇದರಿಂದಾಗಿ ಜೈವಿಕ ಜೀವಜಾಲಕ್ಕೆ, ಮತ್ತು  ಬೆಳೆಗಳಿಗೆ ಆವರಿಸುತ್ತಿದ್ದ ಕೀಟಗಳ ಭಕ್ಷಣೆಗೆ ಬರುತಿದ್ದ ಪಕ್ಷಿ ಪ್ರಭೇದಗಳಿಗೆ ತೊಂದರೆಯಾಗುತ್ತಿರಲಿಲ್ಲ. ಇಂತಹ ಕೃಷಿ ಪದ್ಧತಿಯನ್ನು ನಾವು ಇಂದಿಗೂ ಗುಡ್ಡಗಾಡು ಪ್ರದೇಶದ ಅರಣ್ಯವಾಸಿಗಳಲ್ಲಿ ಕಾಣಬಹುದು. ಅವರು ಒಂದು ಪ್ರದೇಶದಲ್ಲಿ ಬೆಳೆ ತೆಗೆದ ನಂತರ ಆ ಭೂಮಿಯನ್ನ ವರ್ಷಗಟ್ಟಲೆ ಹಾಗೆ ಬಿಟ್ಟು ಬೇರೊಂದು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಇದು ಭೂಮಿಯ ಫಲವತ್ತತೆ ಕಾಪಾಡಲು ಅವರು ಅನುಕರಿಸುತ್ತಿದ್ದ ತಂತ್ರ.

ಆಧುನಿಕ ಯುಗದಲ್ಲಿ ರೂಪುಗೊಳ್ಳುತ್ತಿರುವ ಜಲಾಶಯಗಳು, ನೀರಾವರಿ ಕಾಲುವೆಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಕೊಂದು ಹಾಕಿದವು. ನಮ್ಮ ಸರ್ಕಾರಗಳು ರೈತರನ್ನು ಒಂದೇ ರೀತಿಯ ಬೆಳೆ ತೆಗೆಯುವಂತೆ ಒತ್ತಾಯಿಸುತ್ತಿವೆ. ರೈತರೂ ಸಹ ಹಣದ ಆಸೆಗೆ ಬಲಿ ಬಿದ್ದು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಅರಣ್ಯ, ನದಿ, ಮಳೆ, ಭೂಮಿ, ನೀರು, ಜೈವಿಕ ವೈವಿಧ್ಯ ಇವೆಲ್ಲವೂ ಒಂದಕ್ಕೊಂದು ಸರಪಳಿಯಂತೆ ಬೆಸೆದುಕೊಂಡಿದ್ದು ಒಂದು ಕೊಂಡಿ ಕಳಚಿಕೊಂಡರೆ, ಇಡೀ ವೈವಸ್ಥೆಯೆ ಕುಸಿದು ಬೀಳುವ ಸ್ಥಿತಿ. ಈ ಸೂಕ್ಷವನ್ನು ರೈತರು, ನೀರಾವರಿ ತಜ್ಙರು ಕೃಷಿವಿಜ್ಞಾನಿಗಳು ಅರಿಯಬೇಕಾಗಿದೆ.

ಪ್ರವಾಹ ನಿಯಂತ್ರಣದ ನೆಪದಲ್ಲಿ ಅಣೆಕಟ್ಟುಗಳ ಮೂಲಕ ನದಿಗಳನ್ನು ನಿಯಂತ್ರಿಸಲು ಹೊರಟಿರುವ ಆಧುನಿಕ ನೀರಾವರಿ ತಜ್ಞರು ನದಿಗಳ ಪ್ರವಾಹದ ಜೊತೆ ಬದುಕು ಸಾಗಿಸುತ್ತಿರುವ ಜನತೆಯ ಕಾರ್ಯವಿಧಾನ, ಅವರ ಕೃಷಿ ಚಟುವಟಿಕೆಗಳನ್ನು ಗಮನಿಸಬೇಕಾಗಿದೆ. ನದಿಗಳನ್ನು ಮಣಿಸಬೇಕೆ? ಅಥವಾ ಬೇಡವೆ? ಇದು ಇವತ್ತಿನ ಪ್ರಶ್ನೆಯಲ್ಲ, ಅದು ಶತಮಾನಗಳ ಉದ್ದಕ್ಕೂ ಮನುಕುಲವನ್ನು ಕಾಡಿರುವ ಪ್ರಶ್ನೆ. ಚೀನಾದ ಪ್ರಸಿದ್ಧ ಚಿಂತಕ ಚಿಯೊಜಂಗ್ ಎಂಬಾತ ನದಿಗಳ ಕುರಿತು ಈ ರೀತಿ ಬಣ್ಣಿಸಿದ್ದಾನೆ: “ನದಿಗಳೆಂದರೆ ಮಗುವಿನ ಬಾಯಿ ಇದ್ದಂತೆ. ಅದನ್ನು ಮುಚ್ಚಲು ಹೊರಟರೆ ಕರ್ಕಶ ಶಬ್ದ ಕೇಳಬೇಕು, ಇಲ್ಲವೇ ಉಸಿರುಗಟ್ಟಿ ಸಾಯುವುದನ್ನು ನೋಡುವುದಕ್ಕೆ ಸಿದ್ದವಾಗಿರಬೇಕು.”

ಚೀನಾದಲ್ಲೂ ಕೂಡ ನದಿಗಳನ್ನು ಪ್ರವಾಹದ ನೆಪದಲ್ಲಿ ಮಣಿಸಲು ಹೊರಟಾಗ ನಡೆದ ಪರ-ವಿರೋಧಗಳ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ನದಿಗಳು ಪ್ರವಾಹದ ಸಂದರ್ಭದಲ್ಲಿ ತುಂಬಿ ಹರಿದು ಇಕ್ಕೆಲಗಳ ಒಣಭೂಮಿಗೆ ನೀರು ಉಣಿಸುವುದರಿಂದ ತೇವಾಂಶಭರಿತ ಭೂಮಿಯಲ್ಲಿ ಅಲ್ಪಾವಧಿಯ ಬೆಳೆ ತೆಗೆಯುವ ಕಲೆಯನ್ನು ನಮ್ಮ  ಪೂರ್ವಿಕರು ಕರಗತ ಮಾಡಿಕೊಂಡಿದ್ದರು. ಇದು ಜಗತ್ತಿನ ನಾಗರೀಕತೆಯ ಇತಿಹಾಸದಿಂದ ಹಿಡಿದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಹದ ನದಿಗಳಿರುವ ನಮ್ಮ ನೆರೆಯ ಬಾಂಗ್ಲಾ ದೇಶದಲ್ಲಿ ಮೇಘನಾ, ಬ್ರಹ್ಮಪುತ್ರ, ಗಂಗಾನದಿಗಳ  ಪ್ರವಾಹದ ಜೊತೆ ಅಲ್ಲಿ ಜನರ ಸಾಹಸಮಯ ಬದುಕು ಕುತೂಹಲಕಾರಿಯಾಗಿದೆ. ಪ್ರವಾಹ ಬರುವ ಮುನ್ನವೇ ನದಿಯ ಪಾತ್ರದಲ್ಲಿ 5 ರಿಂದ 8 ಅಡಿ ಎತ್ತರ ಬೆಳೆಯುವ ದೇಶಿ ಬತ್ತದ ಬೀಜವನ್ನು ಬಿತ್ತುತ್ತಾರೆ. ಪ್ರವಾಹ ಇಳಿಮುಖವಾದ ನಂತರ ಫಸಲನ್ನು ಪಡೆಯುತ್ತಾರೆ. ಅದೇ ತೇವ ಭರಿತವಾದ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳಾದ ಕಲ್ಲಂಗಡಿ, ಸೌತೆ. ಹಾಗೂ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ.

1850 ರಿಂದಲೂ ಸಹ ಅಮೇರಿಕಾದ ಮಿಸಿಸಿಪ್ಪಿ ನದಿ ಪ್ರಾಂತ್ಯದಲ್ಲಿ ಪ್ರವಾಹ ನಿಯಂತ್ರಣದ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಅಣೆಕಟ್ಟುಗಳು ಅಥವಾ ನೀರಾವರಿ ಕಾಲುವೆಗಳು ಇವುಗಳಿಂದ ದೂರವಾಗಿ ಒಣಭೂಮಿಯಲ್ಲಿ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು ಶೇ.70 ರಷ್ಟು ಜನ ಬೇಸಾಯ ಮಾಡುತಿದ್ದಾರೆ.

ಆಪ್ರಿಕಾದ ಸಹರಾ ಮರುಭುಮಿಯ ಕನಿಷ್ಟ ಮಳೆ ಬೀಳುವ ಪ್ರದೇಶದಲ್ಲಿ ಹುಲ್ಲುಗಾವಲನ್ನು ಆಶ್ರಯಿಸಿಕೊಂಡು ಜಾನುವಾರು ಸಾಕಿಕೊಂಡು ಕಡಿಮೆ ಮಳೆ ಮತು ಉಷ್ಣವನ್ನು ಸಹಿಸಿಕೊಳ್ಳುವ ಶಕ್ತಿಯುಳ್ಳ ಕಿರುಧಾನ್ಯಗಳನ್ನು ಬೆಳೆದು ಜನರು ಜೀವನ ಸಾಗಿಸುತ್ತಿದ್ದಾರೆ. ಚೀನಾದ ಮಂಗೋಲಿಯ ಪ್ರಾಂತ್ಯದಲ್ಲೂ ಕೂಡ ಇಂತಹದೇ ಬದುಕನ್ನು ನಾವು ಕಾಣಬಹುದು. ಋತುಮಾನಗಳಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಈ ಜನತೆ ವಲಸೆ ಹೋಗುವುದುಂಟು. ಜೊತೆಗೆ ತಾವು ವಾಸಿಸುವ ಸ್ಥಳದಲ್ಲಿ ಬೀಳುವ ಅಲ್ಪ ಮಳೆಯನ್ನು ಸಂಗ್ರಹಿಸಿ ಜೀವನ ಸಾಗಿಸುವ ಕಲೆಯನ್ನೂ ಇವರು ಬಲ್ಲರು.

ಭಾರತದ ರಾಜಸ್ಥಾನ, ಗುಜರಾತ್, ದಕ್ಷಿಣ ಇಸ್ರೇಲ್ ಭಾಗದ ನೆಬೇಟಿಯನ್ ಜನಾಂಗ ಮಳೆ ನೀರು ಸಂಗ್ರಹದಲ್ಲಿ ಸಿದ್ಧಹಸ್ತರು. ಇಸ್ರೇಲ್ ಜನತೆ ಮಳೆನೀರು ಆಧಾರಿತ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾವಿರದ ಮುನ್ನೂರು ವರ್ಷಗಳ ಇತಿಹಾಸವಿದೆ. ಈ ಪ್ರದೇಶದಲ್ಲಿ ಕನಿಷ್ಟ ನೂರು ಮಿಲಿ ಮೀಟರ್ ಮಳೆ ಬಿದ್ದರೂ ಇಲ್ಲಿನ ಜನ ಬೇಸಾಯ ಮಾಡಬಲ್ಲರು. ಜಗತ್ತಿಗೆ ಹನಿ ನೀರಾವರಿ ಪದ್ಧತಿ ಪರಿಚಯಿಸಿದ ಕೀರ್ತಿ ಇಲ್ಲಿನ ಜನತೆಗೆ ಸಲ್ಲುತ್ತದೆ.

ಎರಡು ಸಾವಿರ ವರ್ಷಗಳ ಹಿಂದೆ ಅಮೇರಿಕಾದ ನೈರುತ್ಯ ಭಾಗದ ಎತ್ತರ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆ ನೀರನ್ನು ಮಣ್ಣಿನ ಕೊಳವೆ ಮೂಲಕ ಕೆಳಗಿನ ಪ್ರದೇಶಕ್ಕೆ ಸಾಗಿಸಿ ಅಲ್ಲಿನ ಮೂಲನಿವಾಸಿಗಳು ಬೇಸಾಯ ಮಾಡುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಈ ಪದ್ಧತಿಗೆ ಅಲ್ಲಿನ ಜನ ಅನ್ಸೀಜಿ ಎಂದು ಕರೆಯುತಿದ್ದರು. ( ಸ್ಥಳೀಯ ಭಾಷೆಯಲ್ಲಿ ಪ್ರಾಚೀನವಾದದು ಎಂದರ್ಥ.)

ಆಪ್ರಿಕಾದ ಜನತೆ ಮೂರು ಸಾವಿರ ವರ್ಷಗಳ ಹಿಂದೆ ನದಿ ತೀರದಲ್ಲಿ 12 ರಿಂದ 15 ಅಡಿ ಎತ್ತರ ಬೆಳೆಯುತ್ತಿದ್ದ ಭತ್ತದ ಬೇಳೆ ತೆಗೆಯುತಿದ್ದರು. ಇತ್ತೀಚಿಗಿನ 10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲೂ 6 ಅಡಿ ಎತ್ತರದ ಭತ್ತದ ಬೆಳೆ ತೆಗೆಯುವ ಪದ್ಧತಿ ಚಾಲ್ತಿಯಲ್ಲಿತ್ತು.

ಭಾರತದ ರಾಜಸ್ಥಾನದ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ವೈವಿಧ್ಯಮಯ ವಿಧಾನಗಳಿವೆ. ರಾಜಸ್ಥಾನದ ಜೋಧಪುರ, ಜೈಪುರ, ಜೈಸಲ್ಮೇರ್, ಉತ್ತರ ಪ್ರದೇಶದ ಗ್ವಾಲಿಯರ್, ಮಹರಾಷ್ಟ್ರದ ಔರಂಗಬಾದ್, ದೌಲತಬಾದ್ ಮುಂತಾದ ನಗರಗಳ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೋಟೆಗಳಲ್ಲಿ ಅಂದಿನ ರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿದ್ದ ವ್ಯವಸ್ಥೆಗಳು ಇಂದಿಗೂ ನಮಗೆ ಮಾದರಿಯಾಗಬಲ್ಲವು.

ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಕಾಡೀಸ್ ಎಂಬ ಪದ್ಧತಿಯಲ್ಲಿ ಇಳಿಜಾರು ಪ್ರದೇಶದಲ್ಲಿ 4 ರಿಂದ  5ಅಡಿ ಎತ್ತರದ ದಿಬ್ಬಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ಬೇಸಾಯ ಮಾಡುವ ವೃತ್ತಿ ಈಗಲೂ ಚಾಲ್ತಿಯಲ್ಲಿದೆ. ಮಳೆನೀರಿಗೆ ಕೊಚ್ಚಿಹೋಗದಂತೆ ದಿಬ್ಬಗಳ ಮೇಲೆ ಗಿಡ ಮರಗಳನ್ನು ಬೆಳಸಿರುವುದರಿಂದ ಒಂದಿಷ್ಟು ಹಸಿರು ಸಹ ಕಾಣತೊಡಗಿದೆ.

1970 ರಲ್ಲಿ ಈ ಪ್ರದೇಶಕ್ಕೆ ಇಂದಿರಾಗಾಂಧಿ ನಾಲುವೆ ಹರಿದ ಪ್ರಯುಕ್ತ ರೈತರು ತಮ್ಮ ದೇಶಿ ಕೃಷಿ ಕೈಬಿಟ್ಟರು. ಮತ್ತೇ 1986 ರಿಂದ ರೈತರು ದೇಶಿ ಕೃಷಿ ನೀರಾವರಿ ಪದ್ಧತಿಗೆ ಒಲವು ತೋರಿದ್ದು, ಸಹಕಾರ ತತ್ವದಡಿ ನದಿಗಳಿಗೆ ಸಣ್ಣ ಮಟ್ಟದ ಅಣೆಕಟ್ಟುಗಳನ್ನು ಸ್ವಂತ   ಖರ್ಚಿನಲ್ಲಿ ನಿರ್ಮಿಸಿಸಕೊಂಡು 100 ರಿಂದ 250 ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ಪರಿಸರ ಪ್ರೇಮಿ ಹಾಗೂ ನೈಸ ರ್ಗಿಕ ನೀರಿನ ತಜ್ಞ ಡಾ. ರಾಜೇಂದ್ರಸಿಂಗ್ ನೇತೃತ್ವದಲ್ಲಿ ಅಲ್ಲಿನ ರೈತರು ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ.

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ

-ಭೂಮಿ ಬಾನು

ಸಿಂಧಗಿಯ ಬಸ್ ಕಂಡಕ್ಟರ್ ಅಂಬಣ್ಣ ಎಂ. ದಾವಲರ್ ತನ್ನ ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ರಾಜ್ಯಪಾಲರಿಗೆ ಹಿಂತಿರುಗಿಸಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿರುವ ಇವರು ಕರ್ನಾಟಕ ಲೋಕಸೇವಾ ಆಯೋಗದಿಂದ ತಮಗೆ ಅನ್ಯಾಯವಾಗಿದೆ, ಅರ್ಹತೆ ಇದ್ದರೂ ಉಪನ್ಯಾಸಕ ಹುದ್ದೆ ಸಿಗಲಿಲ್ಲ ಎಂದು ಬೇಸತ್ತು ‘ಇನ್ಯಾಕೆ ಈ ಪ್ರಮಾಣಪತ್ರಗಳು’ ಎಂದು ವಿಶ್ವವಿದ್ಯಾನಿಲಯದ ಕುಲಾಧಿಪಾತಿಗಳಾದ ರಾಜ್ಯಪಾಲರಿಗೆ ರವಾನಿಸಿದ್ದಾರೆ.

ಅರ್ಹತೆಗೆ ತಕ್ಕಂತೆ, ನ್ಯಾಯಯುತವಾಗಿ ಕೆಲಸ ಸಿಕ್ಕದ ಮೇಲೆ ಈ ಪ್ರಮಾಣಪತ್ರಗಳೇಕೆ ಎನ್ನುವುದು ಅವರ ವಾದ. ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ.

ಆಯೋಗದ ಭ್ರಷ್ಟಾಚಾರ, ಸರಕಾರದ ನಿಲುವುಗಳ ಬಗ್ಗೆ ಬೇಸತ್ತು ಈ ಅಭ್ಯರ್ಥಿ ಈ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಸ್ಪಷ್ಟ.

ಅಂಬಣ್ಣ ಇತಿಹಾಸ ವಿಭಾಗದ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ್ದರು. ಇವರಿಗೆ ಪಿಎಚ್‍ಡಿ ಇದ್ದರೂ, ಕೇವಲ ಎಂಫಿಲ್ ಪದವಿ ಗಳಿಸಿದ್ದವರಷ್ಟೆ ಆಯ್ಕೆಯಾದರು. ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಆಯ್ಕೆಯಾದ ಅನೇಕರು ಬೋಗಸ್ ಎಂಫಿಲ್ ಪಡೆದಿದ್ದಾರೆ ಎಂದು ನೇರಾನೇರ ಮಾಧ್ಯಮಗಳಿಗೆ ಹಲವು ಬಾರಿ ಹೇಳುತ್ತಿದ್ದರು. ಆದರೂ ಅವರೆಲ್ಲರ ಆಯ್ಕೆಯನ್ನು ತಡೆಯಲು ದಿಟ್ಟ ಕ್ರಮ ಕೈಗೊಳ್ಳಲಿಲ್ಲ. ಅರ್ಥಾತ್ ಸರಕಾರ ಅನರ್ಹರು ಲಾಬಿ, ಹಣದ ಕಾರಣಗಳಿಗಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಗೊತ್ತಿದ್ದರೂ ಸುಮ್ಮನಿತ್ತು.

ಹಣ ಅಥವಾ ಪ್ರಭಾವ ಇಲ್ಲದವರು ಕೆಪಿಎಸ್‌ಸಿ ಮೂಲಕ ನಡೆಯುವ ಯಾವ ಹುದ್ದೆಗೂ ಆಯ್ಕೆಯಾಗಲು ಸಾಧ್ಯವಿಲ್ಲ ಎನ್ನುವುದು ಜನಜನಿತ. ಈ ಬಗ್ಗೆ ಒಂದಿಷ್ಟು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಪ್ರಯತ್ನಗಳೇ ನಡೆಯಲಿಲ್ಲ.

ಅಂಕಪಟ್ಟಿಯ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯುತ್ತಾರೆ. ನಂತರ ಸಂದರ್ಶನ ವೇಳೆ ಎಷ್ಟು ಅಂಕ ಕೊಟ್ಟರೆ ಆಯ್ಕೆಯಾಗುತ್ತಾರೆ ಅಥವಾ ಆಗುವುದಿಲ್ಲ ಎನ್ನುವ ಲೆಕ್ಕಾಚಾರದ ಮೇಲೆ ಅಂಕಗಳು ನಿಗದಿಯಾಗುತ್ತವೆ. ಹಾಗಾಗಿ ಅನೇಕ ಬಾರಿ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದರೂ, ಸಂದರ್ಶನದಲ್ಲಿ ಅವರ ಗಳಿಕೆ ಎರಡು ಅಥವಾ ಮೂರು ಆಗಿರುತ್ತದೆ. ಅದೇ ರೀತಿ ಕೆಲವರು ಆಶ್ಚರ್ಯಕರ ರೀತಿಯಲ್ಲಿ ಪೂರ್ತಿ ಅಂಕ ಪಡೆದಿರುತ್ತಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳಾಗದಿದ್ದರೆ ಇಂತಹ ಬೇಸರ, ಸಿಟ್ಟುಗಳಿಗೆ ಕೊನೆಯಿಲ್ಲ.

ಹೀಗೆ ಅನ್ಯಮಾರ್ಗಗಳ ಮೂಲಕ ಆಯ್ಕೆಯಾದವರು ಅದ್ಯಾವ ಪರಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದು ಅಧ್ಯಯನ ಯೋಗ್ಯ. ತಮಗೆ ನಿಗದಿಯಾಗಿರುವ ಗಂಟೆಗಳ ಕಾಲ ಹೇಗೋ ಟೈಮ್ ಪಾಸ್ ಮಾಡಿದರಷ್ಟೆ ಸಾಕು ಎನ್ನುವ ಮನೋಭಾವ ಕೆಲವರಲ್ಲಿದೆ. ಕಾಲೇಜಿಗೆ ಬರುವುದೇ ತಡ. ತಡವಾಗಿ ಬಂದರೂ, ಬೇಗ ಮನೆ ಸೇರುವ ತವಕ. ಹೊಸತನ್ನು ಓದಿಕೊಂಡು ವಿದ್ಯಾರ್ಥಿಗಳಿಗೆ ಕಲಿಸುವ ಉತ್ಸಾಹವೇ ಇಲ್ಲ. ಅವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.

ನಮ್ಮ ಪರಿಸರ – ನೆಲ ಜಲ : 3


-ಪ್ರಸಾದ್ ರಕ್ಷಿದಿ


ನಮ್ಮ ಪರಿಸರ – ನೆಲ ಜಲ : 1
ನಮ್ಮ ಪರಿಸರ – ನೆಲ ಜಲ : 2

ಕೃಷಿಯ ಜೊತೆಯಲ್ಲಿ ಇತರ ಪರ್ಯಾಯ ದುಡಿಮೆಗೆ ಅವಕಾಶಗಳೇ ಇಲ್ಲ. ಅಥವಾ ಇದ್ದರೂ ಅವೂ ಕೂಡಾ ಲಾಭದಾಯಕವಲ್ಲ. ಮಲೆನಾಡಿನ ವಿಚಾರವನ್ನೇ ಹೇಳುವುದಾದರೆ ಇಲ್ಲಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಅಡಿಕೆ, ಮೆಣಸು, ಬಾಳೆ, ಭತ್ತ, ಕಿತ್ತಳೆ ಯಾವುದೂ ಕೂಡಾ ಲಾಭದಾಯಕವಾಗಿಲ್ಲ. ಕೆಲವು ಸಾರಿ ಲಾಭದಾಯಕವಾದಂತೆ ಕಂಡರೂ ಇಂದಿನ ಊಹೆಗೂ ಮೀರಿದ ಬೆಲೆ ಏರಿಳಿತಗಳಿಂದಾಗಿ ಸಣ್ಣ ಮತ್ತು ಮಧ್ಯಮ ಕೃಷಿಕರು ಅದರ ಲಾಭವನ್ನು ಪಡೆಯಲಾಗುತ್ತಿಲ್ಲ. (ಉದಾ; ವೆನಿಲ್ಲಾ, ಕಾಫಿ, ಏಲಕ್ಕಿ ಬೆಲೆಗಳ ಏರಿಳಿತವನ್ನು ನೋಡಿ) ಬೇರೆ ಯಾವುದೇ ಉದ್ಯಮವಿಲ್ಲದ ದೊಡ್ಡ ಬೆಳೆಗಾರರೂ ಸಹ ಸಾಲದಲ್ಲಿ ಮುಳುಗಿರುವಾಗ, ಬ್ಯಾಂಕ್ ಸಾಲ ಸಿಗದ ಅಥವಾ ಈಗಾಗಲೇ ಸಾಲ ಪಡೆದು ಸುಸ್ತಿದಾರನಾಗಿರುವ ಸಣ್ಣ ಕೃಷಿಕರಿಗೆ ಉಳಿದಿರುವುದು ಮರ ಕಡಿದು ಮಾರುವುದೋ ಇಲ್ಲವೇ ಕಳ್ಳಬಟ್ಟಿ ದಂಧೆಗೆ ಇಳಿಯುವುದೋ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಮಾತ್ರ. ಹೀಗಾಗಿ ಹಳ್ಳಿಗಳಲ್ಲಿ ಊರೆಲ್ಲಾ ಪುಢಾರಿಗಿರಿ ಮಾಡುತ್ತ ಇಂಥದೇ ಕೃತ್ಯಗಳಲ್ಲಿ ಮುಳುಗಿ ರಾಜಕಾರಣಿಗಳ ಹಿಂದೆ ಸುತ್ತುತ್ತಿರುವ ಯುವಕರ ದಂಡೇ ಸಿದ್ಧವಾಗುತ್ತಿದೆ.

ಈಗ ಮತೊಮ್ಮೆ ಜಾಗತೀಕರಣದ ವಿಷಯಕ್ಕೆ ಬರೋಣ. ಭೂಸುಧಾರಣಾ ಕಾನೂನಿನಿಂದಾಗಿ ನಮ್ಮ ಹಿಡುವಳಿಗಳೆಲ್ಲಾ ಚಿಕ್ಕದಾಗಿ ಯಾವುದೇ ವೈಜ್ಞಾನಿಕ(?) ಕೃಷಿಗೆ ಅನುಕೂಲವಾಗುತ್ತಿಲ್ಲ ಇದರಿಂದಾಗಿ ಕೃಷಿಯಲ್ಲಿನ ಪ್ರಗತಿಗೂ ಅಡ್ಡಿಯಾಗಿದೆ, ಎಂಬ ವಾದವೊಂದು ಇತ್ತೀಚೆಗೆ ಪ್ರಚಾರಕ್ಕೆ ಬರುತ್ತಿದೆ.. ನಮ್ಮ ಮಾಜಿ ಪ್ರಧಾನಿಯೊಬ್ಬರು ಇದೇ ಅಭಿಪ್ರಾಯದ ಮಾತನ್ನಾಡಿದ್ದಾರೆ. ಜಾಗತೀಕರಣದ ಸಮರ್ಥಕರಂತೂ ಮೊದಲಿನಿಂದಲೂ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ನಮ್ಮಲ್ಲಿನ ಭೂಸುಧಾರಣೆಯನ್ನು ನೋಡುವುದಾದರೆ, ಇದು ಭಾರತದಾದ್ಯಂತ ಏಕಪ್ರಕಾರವಾಗಿ ನಡೆದಿಲ್ಲ. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಸ್ವಲ್ಪಮಟ್ಟಿಗೆ ಜಾರಿಯಾಗಿದೆ ಅಷ್ಟೆ. ಇನ್ನಿತರ ಅನೇಕ ರಾಜ್ಯಗಳಲ್ಲಿ ಹಳೆಯ ಜಮೀನ್ದಾರಿ ಪದ್ಧತಿಯೇ ಮುಂದುವರೆದಿದೆ. ಆಧುನಿಕ ಮಾರುಕಟ್ಟೆ ಸಂಸ್ಕೃತಿಯೂ ಈ ಜಮೀನ್ದಾರಿ (ಪಾಳೇಗಾರಿ) ಪದ್ಧತಿಯನ್ನು ಇಷ್ಟಪಡುವುದಿಲ್ಲ ಎನ್ನುವುದು ಬೇರೆಯೇ ವಿಷಯ.

ಜಾಗತೀಕರಣದ ಹಿನ್ನೆಲೆಯಲ್ಲಿ ಕೃಷಿ ಭೂಮಿಯ ಗಾತ್ರದ ಬಗೆಗಿನ ಮೇಲಿನ ಅಭಿಪ್ರಾಯವನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ಉದ್ದಿಮೆದಾರರ-ಮಾರುಕಟ್ಟೆ ಉತ್ಪಾದಕರ ಹುನ್ನಾರವೇ ಕಾಣಿಸುತ್ತದೆ. ಕೃಷಿಯಲ್ಲಿ ಆಧುನಿಕ ದೊಡ್ಡ ಯಂತ್ರಗಳು ಜೊತೆಗೆ ಕಂಪ್ಯೂಟರ್ ನಿಂದ ರೋಬೋತನಕ ಎಲ್ಲವನ್ನೂ ಬಳಕೆ ಮಾಡಲು ಸಾಧ್ಯವಾಗಬೇಕಾದರೆ, ಮತ್ತು ಕೃಷಿಯಿಂದ ಉತ್ಪಾದನೆ ಆಗಬೇಕಾದರೆ, ಕೃಷಿ ಹಿಡುವಳಿಗಳು ದೊಡ್ಡದಾದಷ್ಟೂ ಒಳ್ಳೆಯದು. ಇವರಿಗೆ ಒಂದು ಜೊತೆ ಎತ್ತಿನ ರೈತನಿಗಿಂತ ಟ್ರ್ಯಾಕ್ಟರ್ ಮುಂತಾದ ಯಂತ್ರೋಪಕರಣಗಳನ್ನು ಇಟ್ಟುಕೊಳ್ಳಬಲ್ಲ ದೊಡ್ಡ ಹಿಡುವಳಿದಾರನೇ ಪ್ರೀತಿಪಾತ್ರ. ದೊಡ್ಡ ಪ್ರಮಾಣದ ನಿಯಂತ್ರಿತ ಉತ್ಪಾದನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟಗಳಿಗೆ ಸರಿಯಾಗಿ ನಾವು ಕೂಡಾ ನಮ್ಮ ಕೃಷಿ ಉತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದೆಂದು(?) ಇವರ ವಾದವಾಗಿದೆ.

ಮೊದಲನೆಯದಾಗಿ ಅಧಿಕ ಉತ್ಪಾದನೆಯಿಂದ ರೈತನ ಸಮಸ್ಯೆ ಬಗೆಹರಿಯುವುದಿಲ್ಲವೆಂದು ನಮಗೆ ಈಗಾಗಲೇ ಅನುಭವಕ್ಕೆ ಬಂದ ವಿಷಯವಾಗಿದೆ. ಅಧಿಕ ಉತ್ಪಾದನೆಯಾಗುತ್ತಿದ್ದಾಗಲೂ ವಿಯೆಟ್ನಾಮ್ ನ ಕಾಫಿ ಬೆಳೆಗಾರರ ಹಾಗೂ ನಮ್ಮಲ್ಲಿನ ಕಬ್ಬು ಬೆಳೆಗಾರರ ಪರಿಸ್ಥಿತಿ ಏನಾಯಿತೆಂಬ ವಿಚಾರ ನಮ್ಮ ಕಣ್ಣೆದುರೇ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೆನ್ನುವುದು ಮುಂದುವರೆದ ದೇಶಗಳ ಮಾರುಕಟ್ಟೆಯಾಗಿದ್ದು, ಅವರು ಹೇಳುವ ಗುಣಮಟ್ಟಗಳು, ಮಾನದಂಡಗಳು ಇವೆಲ್ಲ ಅವರ ಮೂಗಿನ ನೇರಕ್ಕೆ ಇರುವಂತಹವುಗಳು. ಮತ್ತು ಅವರು ಎಲ್ಲೆಲ್ಲಿ ಮೂಗು ಹಾಯಿಸಬಲ್ಲರೋ ಅಲ್ಲೆಲ್ಲಾ ಜಾರಿಗೊಳಿಸಲು ಸಾಧ್ಯವಾಗುವಂತೆ ತಯಾರಾದಂತಹವುಗಳು. ಈ ಮಾನದಂಡಗಳು ಕೂಡಾ ಅವರ ಮರ್ಜಿಗೆ ತಕ್ಕಂತೆ ಬದಲಾಗುತ್ತಿರುತ್ತವೆ.

ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ನಮ್ಮ ಕಾಫಿ ಮಾರುಕಟ್ಟೆ. ಭಾರತದ ಕಾಫಿಯಂತೂ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವಂತಹ ಬೆಳೆ. ಇತ್ತೀಚೆಗೆ ಕಾಫಿಯ ಗುಣಮಟ್ಟವನ್ನು ಸುಧಾರಿಸುವ, ಅದನ್ನು ಅಂತಾರಾಷ್ಟ್ರೀಯ ಬೇಡಿಕೆಗಳಿಗೆ ಅನುಗುಣವಾಗಿ ಕಾಫಿ ಉತ್ಪಾದಿಸುವ- ಸಂಸ್ಕರಿಸುವ ಅಗತ್ಯವನ್ನು ಪದೇ ಪದೇ ಹೇಳಲಾಗುತ್ತಿದೆ. (ದೇಸಿ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಸಿಗುವ ಕಾಫಿಪುಢಿಯ ಗುಣಮಟ್ಟಕ್ಕೂ ಈ ಮೇಲೆ ಹೇಳಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೂ ಯಾವದೇ ಸಂಬಂಧವಿಲ್ಲ-ಗಮನಿಸಿ)

ಈ ಸಂದರ್ಭದಲ್ಲಿ ನಮ್ಮ ಕೃಷಿಕರು ಮತ್ತು ವ್ಯಾಪಾರಿಗಳ ದುರ್ಬುದ್ಧಿಯನ್ನು ಹೇಳದಿದ್ದರೆ ಅಪಚಾರವಾದೀತು. ಬೆಲೆ ಏರಿದಾಗೆಲ್ಲ ಕಾಫಿಗೆ ಕಸಕಡ್ಡಿ, ಮೆಣಸಿಗೆ ಪಪ್ಪಾಯಿ ಬೀಜ ಇತ್ಯಾದಿಗಳನ್ನು ಕಲಬೆರಕೆ ಮಾಡುವ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ವಂಚನೆಗಿಳಿಯುವ ಮೂಲಕ ಕೆಟ್ಟಹೆಸರು ಪಡೆಯುವ ನಮ್ಮವರು, ಅಂತಾರಾಷ್ಟ್ರೀಯ ಕುತಂತ್ರಗಳನ್ನು ವಿರೋಧಿಸುವ ಶಕ್ತಿಯನ್ನೂ-ನೈತಿಕಹಕ್ಕನ್ನೂ ಕಳೆದುಕೊಂಡು ಬಿಡುತ್ತಾರೆ. ಮತ್ತು ಈ ಪೀಡೆಗಳನ್ನು ಮುಂದುವರಿದ ದೇಶಗಳ ಬಲಿಷ್ಟರು ತಮ್ಮ ವ್ಯಾಪಾರೀ ಮಾನದಂಡಗಳನ್ನು ಸಮರ್ಥಿಸಿಕೊಳ್ಳಲು ಚೆನ್ನಾಗಿ ಬಳಸಿಕೊಳ್ಳುತ್ತಾರೆ.

ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯಲು ಕಾಫಿಯನ್ನು ಬೆಳೆಯುವ ಹಂತದಲ್ಲೇ ಅನೇಕ ರೀತಿಯ ತಯಾರಿ ನಡೆಸಬೇಕಾಗುತ್ತದೆ. ಇದಕ್ಕಾಗಿಯೇ ಹಲವು ರೀತಿಯ Plant conditioner ,Foliar spray ಗಳು ಗಳು ಬಂದಿವೆ. ಕಾಫಿಬೀಜಗಳ ಗಾತ್ರ ಹೆಚ್ಚಿಸಲು ಅವುಗಳಲ್ಲಿ ಏಕರೂಪತೆ ತರಲು ಹೀಗೆ ಏನೇನೋ ಕಸರತ್ತುಗಳನ್ನು ಹೇಳುವ ತಜ್ಞರೆನಿಸಿಕೊಂಡವರ ಪಡೆಯೇ ಇದೆ. ಅವರು ಹೇಳುವ ರೀತಿಯ ಸಂಸ್ಕರಣೆಗಾಗಿ ಇದೀಗ ಕಾಫಿ ಹಣ್ಣನ್ನು ಸಾಂಪ್ರದಾಯಿಕವಾದ ಎರಡು ಬಾರಿಯ ಕೊಯ್ಲಿಗೆ ಬದಲಾಗಿ ಮೂರು ನಾಲ್ಕು ಬಾರಿ ಕೊಯ್ಲು ಮಾಡಬೇಕಾಗುತ್ತದೆ. ಹಣ್ಣನ್ನು ಪಲ್ಪಿಂಗ್ ಹಂತದಲ್ಲೇ ಗಾತ್ರಕ್ಕೆ ತಕ್ಕಂತೆ ಪ್ರತ್ಯೇಕಿಸಬೇಕಾಗುತ್ತದೆ. (ಈಗ ಅದಕ್ಕೂ ವಿಷೇಷ ಯಂತ್ರಗಳು ಆಮದಾಗಿ ಬಂದಿವೆ ಮತ್ತು ಇನ್ನಷ್ಟು ಭಾರಿ ಬಂಡವಾಳವನ್ನು ಬೇಡುತ್ತಿವೆ).

ಪಲ್ಪಿಂಗ್ ನಂತರ ಕಾಫಿ ಬೀಜಗಳನ್ನು ಹುದುಗು ಹಾಕಿ ನಂತರ ತೊಳೆದು ವಿಶೇಷ ರೀತಿಯಿಂದ ಒಣಗಿಸಿ ಹೊಸ ಗೋಣಿ ಚೀಲಗಳಲ್ಲಿ ತುಂಬಿ ಸಂಸ್ಕರಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇಷ್ಟಾಗುವಾಗ ಕಾಫಿಯ ಉತ್ಪಾದನಾ ವೆಚ್ಚ ಸಾಕಷ್ಟು ಏರಿರುತ್ತದೆ. ಈ ಕಾಫಿ ಸಂಸ್ಕರಣಾ ಕೇಂದ್ರದಲ್ಲಿ ಹಲವು ಹಂತಗಳನ್ನು ಹಾದು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುತ್ತದೆ. ಅಲ್ಲಿ ಕಪ್ ಟೇಸ್ಟರುಗಳೆಂಬ ದೇವತಾ ಸ್ವರೂಪಿಗಳು ಈ ಕಾಫಿಯ ಕಷಾಯವನ್ನು ಕುಡಿದು ನೆಕ್ಕಿ ಚಪ್ಪರಿಸಿ ಅದರ ಹಣೆಬರಹವನ್ನು ನಿರ್ಧರಿಸುತ್ತಾರೆ. ಅಲ್ಲಿ ಆಯ್ಕೆಯಾದರೆ, ಆ ಮಾಲಿಗೆ ವಿಶೇಷ ಬೆಲೆ ದೊರೆಯುತ್ತದೆ. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಚಾರ ದೊರೆಯುತ್ತದೆ. ಆಯ್ಕೆಯಾಗದ ಉಳಿದ ಮಾಲನ್ನು ಕಡಿಮೆ ಬೆಲೆಗೆ ಕೊಳ್ಳಲಾಗುತ್ತದೆ. ಅದ್ದರಿಂದ ಇಡೀ ಕಾಫಿ ಉದ್ಯಮವನ್ನು ಗಣನೆಗೆ ತೆಗೆದುಕೊಂಡರೆ, ಬರುವ ಆದಾಯ ಒಟ್ಟಾರೆಯಾಗಿ ಮೊದಲಿಗಿಂತ ಕಡಿಮೆಯಾಗುತ್ತದೆ. (ಇದಕ್ಕಾಗಿ ಪಡುವ ಹೆಚ್ಚಿನ ಶ್ರಮ ಮತ್ತು ಖರ್ಚನ್ನು ಗಮನಿಸಿ) ಜೊತೆಗೆ ಬೆಳೆಗಾರ ನಿರಂತರ ಒತ್ತಡದಲ್ಲೇ ಇರುತ್ತಾನೆ.

ಈ ಮಾರುಕಟ್ಟೆಯೂ ಹಾಗೇ, ಈ ವರ್ಷ ಚೆನ್ನಾಗಿ ತೊಳೆದು ಒಣಗಿಸಿದ ಕಾಫಿ ಒಳ್ಳೆಯ ಬೆಲೆ ಪಡೆದರೆ, ಇನ್ನೊಂದು ಬಾರಿ ಪಲ್ಪಿಂಗ್ನ ನಂತರ ಅಂಟನ್ನು ತೊಳೆಯದೆ ಹಾಗೇ ಒಣಗಿಸಿದ ಕಾಫಿ ಬೇಕು ಎನ್ನುತ್ತಾರೆ. ಅದೇಕೆಂದು ಕೇಳಿದರೆ, ಈ ಬಾರಿ ಮಾರುಕಟ್ಟೆಯ ಒಲವು ಹಾಗೂ ಬೇಡಿಕೆ ಹಾಗಿದೆ ಎನ್ನುತ್ತಾರೆ ನಮ್ಮ ಕಪ್ ಟೇಸ್ಟರ್ ಮಹಾಶಯರುಗಳು. ಬೆಳೆಗಾರ ಸಾಕಷ್ಟು ಹಣ ಖರ್ಚುಮಾಡಿ ಕಳೆದಬಾರಿಯಷ್ಟೇ ನವೀಕರಿಸಿದ ಯಂತ್ರಗಳ ಕಥೆಯನ್ನು ಯಾರೂ ಕೇಳುವುದಿಲ್ಲ.

ಇದುವರೆಗೂ ನಮ್ಮ ಸ್ಥಳೀಯ ವರ್ಕ್ ಶಾಪ್ ಗಳೇ  ಕಾಫಿ ಹಣ್ಣಿನ ಪಲ್ಪಿಂಗ್ಗೆ ಸಂಬಂಧಪಟ್ಟ ಹೆಚ್ಚಿನ ಎಲ್ಲಾ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸಿಕೊಡುತ್ತಿದ್ದವು. ಈಗ ಅದೂ ಕೂಡಾ ಅಂತಾರಾಷ್ಟ್ರೀಯ ಗುಣಮಟ್ಟದ ಹೆಸರಿನಲ್ಲಿ ಆಮದಾಗುತ್ತಿವೆ. ಇನ್ನು ಕಾಫಿ ಬೆಳೆಯುವಾಗ ಗುಣಮಟ್ಟ ಸುಧಾರಣೆಗೆಂದು ಬಳಸಲಾಗುವ Soil condtioner,  Foliar spray,  wetting agent ಗಳು ಮುಂತಾದವೆಲ್ಲ ಮುಂದುವರೆದ ದೇಶಗಳಲ್ಲಿ ತಯಾರಾದವು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯವ ಆಸೆಗೆ ಬಿದ್ದ ಕೃಷಿಕ  ತಾನು ಗಳಿಸಬಲ್ಲ ಹೆಚ್ಚುವರಿ ಲಾಭವನ್ನು ಮತ್ತೆ ವಿದೇಶಿ ವಸ್ತುಗಳಿಗೆ ಸುರಿಯ ಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾನೆ.

ಈ ಕಪ್ ಟೇಸ್ಟಿಂಗ್ ಅನ್ನುವುದು, ವೈಯಕ್ತಿಕ ರುಚಿ ನಿರ್ಧಾರವಾಗಿದ್ದು ಪೂರ್ಣವಾಗಿ ವೈಜ್ಞಾನಿಕವೆನ್ನಲು ಸಾಧ್ಯವಿಲ್ಲ. ವಿಶ್ವದಲ್ಲಿ ಕಾಫಿ ಬೆಳೆಯುವುದೆಲ್ಲಾ (ಹೆಚ್ಚಿನ ಕೃಷಿ ಉತ್ಪನ್ನಗಳೆಲ್ಲವೂ) ಹಿಂದುಳಿದ ದೇಶಗಳಲ್ಲಿ. ಆದರೆ ಬಳಕೆದಾರರೆಲ್ಲ ಮುಂದುವರೆದ ದೇಶಗಳು. ಈ ದೇಶಗಳಿಗೆ ನಮ್ಮ ಉತ್ಪನ್ನಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಂಡುಕೊಳ್ಳುವುದಷ್ಟೇ ಗುರಿ. ಅದಕ್ಕಾಗಿಯೇ ಇಷ್ಟೆಲ್ಲಾ ಹುನ್ನಾರಗಳನ್ನು ನಡೆಸುತ್ತಾರೆ. ಈ ತಂತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ ಕೃಷಿಕನ ಮಟ್ಟಿಗೆ ದೇಶದ ಒಳಗೂ ಕೂಡಾ ಬಳಕೆಯಾಗುತ್ತಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಗುಣಮಟ್ಟ ನಿಯಂತ್ರಣ ಮುಂತಾದವುಗಳು ಅಭಿವೃದ್ಧಿಶೀಲ ದೇಶಗಳಿಗೆ ತೊಡಿಸುವ ಮೂಗುದಾರ ಅಷ್ಟೆ.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ  ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ.

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, ಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ  ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್ ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದರು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ.  ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಮತ್ತೊಮ್ಮೆ ಕಾಫಿಯದ್ದೇ ಉದಾಹರಣೆ ನೀಡುವುದಾದರೆ, ಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಲಿವೆ. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ   ಇವರೊಂದಿಗೆ  ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. ಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ  ಯಾವುದೇ ಜಾತಿಯ ಪ್ರಾಣಿಗೆ  ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು  ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಜಾಗತೀಕರಣದ ಸಮರ್ಥಕರು ಕೊಡುವ ಇನ್ನೊಂದು ಉದಾಹರಣೆಯೆಂದರೆ ದಕ್ಷಿಣಕೊರಿಯಾದ ಪ್ರಗತಿ ಹಾಗೂ ಚೀನಾದ ಉದಾರೀಕರಣ ಇತ್ಯಾದಿ, ಇದು ನಿಜವಿರಬಹುದು. ನಾಳೆ ನಾವು ಕೂಡಾ ಮುಂದುವರಿದ ದೇಶವಾಗಿಬಿಡಬಹುದು. ಆಗಲೂ ಜಗತ್ತಿನ ಇನ್ನಷ್ಟು ದೇಶಗಳಲ್ಲಿ ಬಡತನ ತಾಂಡವವಾಡುತ್ತಿರುತ್ತದೆ. ಮತ್ತು ಹಾಗೆಯೇ ಮುಂದುವರೆಯುತ್ತದೆ. ನಾವು ಮಾತ್ರ  ಗುಂಪು ಬದಲಾಯಿಸಿ ಈಚೆ ಗುಂಪಿಗೆ ಬಂದಿರುತ್ತೇವೆ ಅಷ್ಟೆ. ಜಾಗತೀಕರಣದ ಈ ವ್ಯವಸ್ಥೆಯಲ್ಲಿ ಕೆಲವು ದೇಶಗಳನ್ನು ಬಿಟ್ಟು ಉಳಿದವುಗಳು ನಿರಂತರ ಶೋಷಣೆಗೆ ಒಳಗಾಗುತ್ತಲೇ ಇರುತ್ತವೆ.

ಈಗಾಗಲೇ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಕಂಪೆನಿಗಳು ವಿಧ್ಯುತ್ ಉತ್ಪಾದನೆ ಮುಂತಾದ ಯೋಜನೆಗಳ ನೆಪಗಳಲ್ಲಿ ನಮ್ಮ ಅರಣ್ಯಗಳ, ನದಿಗಳ ಮೇಲೆ ಹಕ್ಕುಗಳನ್ನು ಸ್ಥಾಪಿಸತೊಡಗಿವೆ. ಈ ರೀತಿಯ ಎಲ್ಲ ಯೋಜನೆಗಳಿಗೆ ಪಕ್ಷ ಬೇಧವಿಲ್ಲದೆ ನಮ್ಮ ಎಲ್ಲ ಸರ್ಕಾರಗಳು ಅತ್ಯುತ್ಸಾಹ ತೋರುತ್ತಿವೆ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ  ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರ  ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ಈ ಸಂದರ್ಭದಲ್ಲಿ ನಮ್ಮ ನೆಲ,ಜಲ-ಪರಿಸರಗಳನ್ನು ಉಳಿಸಿಕೊಳ್ಳುವ  ಬಗ್ಗೆ ಮಾತನಾಡುವಾಗ ಇರಬೇಕಾದ ಎಚ್ಚರ, ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದ ಸಾಧ್ಯತೆಗಳು ಹಾಗೂ ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ   Think globally act locally  ಎಂಬ ಮಾತಿಗೆ ಬದಲಾಗಿ Think locally act globally  ಇರಬಹುದೇನೋ?

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ತುಂಬ ಪ್ರಚಾರಕ್ಕೆ ಬರುತ್ತಿರುವ ಸುಭಾಷ್ ಪಾಳೇಕರ್ ಮತ್ತು ಅಂತಹವರ ಚಿಂತನೆಗಳು ಕೆಲಮಟ್ಟಿಗೆ ಮಾರ್ಗಸೂಚಿಯಾಗಬಲ್ಲದು. ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ( ಪಾಳೇಕರ್ ಅವರ ಕೃಷಿವಿಧಾನಗಳ ಬಗ್ಗೆ ಅದರಲ್ಲಿ ಮುಖ್ಯವಾಗಿ ರೋಗ ನಿಯಂತ್ರಣ ಮತ್ತು ಕೀಟನಾಶಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ) ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು.a

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ.

ನಮ್ಮ ಎಲ್ಲ ದೇಶ ಜನಾಂಗಗಳ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ  ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಕೊಸರು : ಈಗ ಹಸು ಸಾಕುವುದು ಲಾಭದಾಯಕವಲ್ಲವೆಂದು ಅನೇಕರು ಸ್ವಾನುಭವದಿಂದ ಬರೆಯುತ್ತಿದ್ದಾರೆ. ಅದನ್ನು ಲಾಭದಾಯಕವಾಗಿಸಲು ಸಾಧ್ಯವೆಂದು ಕೂಡಾ ಅನೇಕರ ಸಲಹೆ ಸೂಚನೆಗಳು ಅದಕ್ಕೆ ಪರ-ವಿರೋಧಗಳೂ ನಮ್ಮ ಹಲವಾರು ಪತ್ರಿಕೆಗಳಲ್ಲಿ ಬರುತ್ತಿವೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಂತೂ ಮಿಶ್ರತಳಿ ಹಸುಗಳ ಸಾಕಣೆ ಲಾಭದಾಯಕವಲ್ಲವೆಂಬುದು ನನ್ನ ಅನುಭವ ಕೂಡಾ. ಎಂಭತ್ತರ ದಶಕದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ಮಿಶ್ರತಳಿ ಹಸುಗಳಿದ್ದವು. ಈಗ 2006ನೇ ಇಸವಿಯ ವೇಳೆಗೆ ಅವುಗಳ ಸಂಖ್ಯೆ ಐನೂರನ್ನು ಮೀರುವುದಿಲ್ಲ. ಎಮ್ಮೆಗಳಂತೂ ಮಲೆನಾಡಿನಿಂದ ಸಂಪೂರ್ಣವಾಗಿ ಮಾಯವಾಗುತ್ತಿವೆ. ಈಗ ಹಳ್ಳಿಗಳು ಕೂಡಾ ಹೆಚ್ಚಾಗಿ ಪ್ಯಾಕೆಟ್ ಹಾಲನ್ನು ಅವಲಂಭಿಸಿವೆ.

ಇತ್ತೀಚೆಗೆ ಕೃಷಿ ಪತ್ರಿಕೆಯೊಂದರಲ್ಲಿ  ‘ಕಡಿಮೆ ಹಾಲಿನ ತಳಿಗಳೇ ರೈತರಿಗೆ ಹೆಚ್ಚು ಅನುಕೂಲವಾದ’ದ್ದೆಂದು   ಕೃಷಿಕರೊಬ್ಬರು ಅಭಿಪ್ರಾಯಪಟ್ಟಿದ್ದರು. ನಮ್ಮ ಪೂರ್ವಿಕರು ಬಯಸಿದ್ದು-ಮಾಡಿದ್ದು ಇದನ್ನೇ. ನಮ್ಮ ನಾಟಿ ತಳಿಗಳಾದ ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್-ಅಮೃತಮಹಲ್ ತಳಿಗಳನ್ನು ನೋಡಿ ಇವು ಯಾವುದೇ ರೋಗವಿಲ್ಲದೆ, ಕಾಡು ಹುಲ್ಲು ತೋಡು ನೀರನಲ್ಲಿ ಬದುಕಿ ಮನೆಯ ಅಗತ್ಯಕ್ಕೆ ತಕ್ಕಷ್ಟು ಹಾಲನ್ನು ಕೊಡುತ್ತಿದ್ದವು. ಸಾಕಷ್ಟು ಗೊಬ್ಬರವೂ ಸಿಗುವುದರೊಂದಿಗೆ ಎತ್ತುಗಳು ಎಲ್ಲ ಕೆಲಸಕ್ಕೂ ಬರುತ್ತಿದ್ದವು. ದಿನವೊಂದಕ್ಕೆ ಮೂವತ್ತು ಕಿ.ಮೀ. ದೂರ ಗಾಡಿ ಎಳೆಯುವ ಎತ್ತುಗಳ ಅದ್ಭುತ ಕಾರ್ಯಕ್ಷಮತೆಯನ್ನು ನೋಡಿ! ಸ್ವಲ್ಪ ಹೆಚ್ಚು ಹಾಲು ಕೊಟ್ಟೂ ಹೊರೆಯಾಗದ ಸಿಂಧಿ, ದೇವಣಿ ಹಸುಗಳನ್ನು ಗಮನಿಸಿ, ಈ ತಳಿಗಳೆಲ್ಲ ನಮ್ಮ ಆರ್ಥಿಕತೆಗೆ, ಅನುಕೂಲಕ್ಕೆ ತಕ್ಕಂತೆ ನೂರಾರು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಅಬಿವೃದ್ಧಿಯಾಗಿದ್ದವು.

ಇದೊಂದು ಉದಾಹರಣೆ ಮಾತ್ರ. ಹೀಗೆ ನೋಡುತ್ತಾ ಹೋದಲ್ಲಿ ನಮ್ಮ ಪಾರಂಪರಿಕ ಜ್ಞಾನದ ಅದ್ಭುತ ಸಂಗತಿಗಳು ನಮ್ಮ ಆಹಾರ, ವಸ್ತ್ರ, ಔಷಧ ಹೀಗೇ ಅನೇಕ ವಿಷಯಗಳಲ್ಲಿ ದೊರೆಯುತ್ತವೆ.

(ಮುಗಿಯಿತು.)