Monthly Archives: January 2012

ನಮ್ಮ ಪರಿಸರ – ನೆಲ ಜಲ : 2

– ಪ್ರಸಾದ್ ರಕ್ಷಿದಿ

ನಮ್ಮ ಪರಿಸರ – ನೆಲ ಜಲ : 1

ಈ ಮೊದಲಿನ ಎರಡು ಸಂಗತಿಗಳು ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗ ರೂಪಿಸಿಕೊಂಡಿರುವ ಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, ”ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ.  ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ …” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿ ಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಇತ್ತೀಚೆಗೆ ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು  “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು,  ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ,  ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಷಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ” ಎಂದು. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದ”  ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಗೆ ಬರೋಣ. ಈಗ ಸರ್ಕಾರವೇ  ಸಾವಯವ ಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ  ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ  ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ ಯಷ್ಟೆ

ಇರಲಿ, ಸರ್ಕಾರ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೊಡೊ ಮಿಶ್ರಣ ಇವುಗಳ ಬಳಕೆ  ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.  ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. ಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯರ್ವೆದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ಈ ಬಗ್ಗೆ ನಡೆಯುವ ಚರ್ಚೆ, ಸಭೆ, ವಿಚಾರ ಸಂಕಿರಣಗಳನ್ನು ಗಮನಿಸಿದರೆ ಅಲ್ಲಿ ಮತ್ತೆ ಮತ್ತೆ ಅದೇ ತಜ್ಞರುಗಳು ಅದೇ ಜನರು ಇರುತ್ತಾರೆ. ಉದಾಹರಣೆಗೆ ನಮ್ಮ ಜನ ಕೃಷಿಯ ವಸ್ತುಗಳು ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಬೇಕೆಂದು ‘ಫುಕುವೋಕಾ’ ಹೇಳುತ್ತಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಸಹಜ-ಸಾವಯವಗಳಂತಹ ಯಾವ ಪದ್ಧತಿಯ ಉತ್ಪನ್ನಗಳು ಕೂಡಾ ಬೆಲೆಯಲ್ಲಿ ಇತರ ಉತ್ಪನ್ನಗಳೊಂದಿಗೆ ಸ್ಪರ್ದಿಸಲಾರವು. ಒಂದುವೇಳೆ ಇವುಗಳೆಲ್ಲವನ್ನೂ ಮೀರಿ ಸಾವಯವ ಕೃಷಿ ಮಾಡುವ ಉಮೇದಿನಲ್ಲಿರುವ ಕೃಷಿಕ ಹೊರಗಿನಿಂದ ಕೋಳಿಗೊಬ್ಬರವನ್ನೋ ಕೊಟ್ಟಿಗೆ ಗೊಬ್ಬರವನ್ನೋ ಖರೀದಿಸಿ ಉಪಯೋಗಿಸಬಯಸಿದರೆ ಇಂದು ಅದರಲ್ಲಿ ಬೆರೆತಿರುವ ರಾಸಾಯನಿಕಗಳು ಮತ್ತು ಹನುಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಯಾಕೆಂದರೆ ಹಾಲು, ಮೊಟ್ಟೆ ಮಾಂಸದ ಅಧಿಕ ಇಳುವರಿಗಾಗಿ ಈ ಪ್ರಾಣಿಗಳಿಗೆ ತಿನ್ನಿಸಿದ ಆಹಾರ, ಕೊಡುವ ಔಷಧಿ-ಇಂಜೆಕ್ಷನ್ ಗಳನ್ನು ನೋಡಿದರೆ ಗಾಬರಿಯಾಗುವಂತಿದೆ. ಇತ್ತೀಚೆಗೆ ಆ್ಯಂತೋರಿಯಂ ಬೆಳೆ ಆರಂಭಿಸಿದ ಕೃಷಿಕರೊಬ್ಬರು ಕೋಳಿಗೊಬ್ಬರ ಬಳಸಿ ಅದರಿಂದಾಗಿ ಸಾವಿರಾರು ಗಿಡಗಳನ್ನು ಕಳೆದುಕೊಂಡರು. ಪರೀಕ್ಷಿಸಿದಾಗ ಅವರು ಬಳಸಿದ ಕೋಳಿ ಗೊಬ್ಬರವೇ ಸೋಂಕಿನಿಂದ ವಿಷಮಯವಾಗಿತ್ತು. ಉಳಿದ ಗಿಡಗಳನ್ನು ಉಳಿಸಿಕೊಳ್ಳಲು ಮತ್ತೊಂದಷ್ಟು ವಿಷನಿವಾರಕಗಳನ್ನು ಸುರಿಯುವುದು ಅನಿವಾರ್ಯವಾಯ್ತು.

ನಾನು ಇದನ್ನೆಲ್ಲಾ ಮತ್ತೆ ಮತ್ತೆ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಕೃಷಿ ವಿಷಮಯವಾಗುತ್ತ ಹೋದಂತೆ ನೆಲಜಲಗಳೂ ಜೊತೆಯಲ್ಲಿ ವಾತಾವರಣವೂ ವಿಷಮಯವಾಗತ್ತ ಹೋಗುತ್ತದೆ. ಇದಕ್ಕೆ ಪರಿಹಾರ ಕಂಡುಹಿಡಿಯಲು ಸಮಗ್ರವಾದ, ಅಂದರೆ ನಮ್ಮ ಕೃಷಿಪದ್ಧತಿಗಳು, ಕೈಗಾರಿಕೋಧ್ಯಮಗಳು, ನಮ್ಮ ಸಾಮಾಜಿಕ- ಸಾಂಸ್ಕೃತಿಕ ಸಂಬಂಧಗಳು ಇವುಗಳನ್ನೆಲ್ಲ ಗಮನಿಸಿ ರೂಪಿಸಲಾಗುವ ನೀತಿಯೊಂದು ಇಡೀ ಜಗತ್ತಿಗೇ ಅನ್ವಯವಾಗುವಂತೆ ಇರದಿದ್ದರೆ, ಅಥವಾ ಪ್ರತಿಯೊಂದು ಸಮಸ್ಯೆಯನ್ನೂ ಪ್ರತ್ಯೇಕವಾಗಿ ಪರಿಗಣಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದರೆ ಹುತ್ತವ ಬಡಿದಷ್ಟೇ ಫಲ ದೊರೆತೀತು.

ನಮ್ಮಲ್ಲಿ ಕೇಂದ್ರ- ರಾಜ್ಯಗಳೆರಡರಲ್ಲೂ ಪರಿಸರ ಇಲಾಖೆ ಇದೆ, ಮಂತ್ರಿಗಳೂ ಇದ್ದಾರೆ. ಆ ಇಲಾಖೆಯ ಅಡಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಅದಕ್ಕಷ್ಟು ಆಡಳಿತಯಂತ್ರ ಸಿಬ್ಬಂದಿ ಎಲ್ಲವೂ ಇವೆ. ಈ ಇಲಾಖೆ ಮಾಲಿನ್ಯ ನಿಯಂತ್ರಣಕ್ಕಿಂತ ಸುದ್ದಿ ಮಾಡಿದ್ದೇ ಹೆಚ್ಚು. ನಮ್ಮ ಮಲೆನಾಡಿನ ಮಟ್ಟಿಗೆ ಅದೂ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಪಲ್ಪರ್ ನೀರಿನ ಬಗ್ಗೆ ಇವರು ಸುದ್ದಿ ಮಾಡಿದಷ್ಟು ಬೇರಾವುದೇ ಕೈಗಾರಿಕಾ ಮಾಲಿನ್ಯದ ಬಗ್ಗೆ ಮಾಡಿದ್ದಿಲ್ಲ. ಕಾಫಿ ಹಣ್ಣಿನ ಸಂಸ್ಕರಣೆ ಅಂದರೆ ಪಲ್ಪಿಂಗ್ ಮಾಡುವಾಗ ಬರುವ ತ್ಯಾಜ್ಯ ನೀರನ್ನು ನೇರವಾಗಿ ಹೊಳೆಗಳಿಗೆ ಬಿಡುವುದರಿಂದ ಹೊಳೆನೀರು ಕಲುಷಿತವಾಗುತ್ತದೆ. ಕೊಳೆತನೀರಿನ ವಾಸನೆಯುಂಟಾಗುವುದಲ್ಲದೆ ಜಲಚರಗಳು ಸಾಯುತ್ತವೆ. ಜನ ಜಾನುವಾರುಗಳು ಕುಡಿಯಲು ಆ ನೀರು ಯೋಗ್ಯವಾಗಿರುವುದಿಲ್ಲ. ಇದನ್ನು ನಿಲ್ಲಿಸಬೇಕೆಂದು ಜನರೇ ಅನೇಕ ಸಾರಿ ಪ್ರತಿಭಟನೆಯನ್ನೂ ಮಾಡಿದ್ದಾರೆ-ಮಾಡುತ್ತಿದ್ದಾರೆ. ಈ ನೀರನ್ನು ಹೊಳೆಗೆ ಬಿಡದಂತೆ ತಡೆಯಬೇಕಾದ್ದು ಸರ್ವಥಾ ಯೋಗ್ಯವಾದ ಕೆಲಸ. ಆದರೆ ಈ ನೀರಿನ ಮರುಬಳಕೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ತಯಾರಿಸಿರುವ ಯೋಜನೆಗಳು ತುಂಬ ದುಬಾರಿಯಾದವು. ಇಂದಿನ ಕಾಫಿ ಬೆಳೆ ಮತ್ತು ಬೆಲೆಗಳ ಪರಿಸ್ಥಿತಿಯಲ್ಲಿ ಈ ನೀರು ಸಂಸ್ಕರಣಾ ವಿಧಾನವನ್ನು ಅನುಸರಿಸುವುದು ದೊಡ್ಡ ಬೆಳೆಗಾರರಿಗೂ ಕಷ್ಟ.

ಆದರೆ ಈಗ ಹೆಚ್ಚಿನ ಎಲ್ಲಾ ಬೆಳೆಗಾರರೂ ಸಮಸ್ಯೆಯನ್ನು ಅರ್ಥಮಾಡಿಕೊಂಡು ಈ ತ್ಯಾಜ್ಯ ನೀರನ್ನು ದೊಡ್ಡ ದೊಡ್ಡ ಇಂಗುಗುಂಡಿಗಳನ್ನು ಮಾಡಿ ಸಂಗ್ರಹಿಸಿಟ್ಟು ನಂತರ ತೋಟಕ್ಕೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ತ್ಯಾಜ್ಯ ನೀರಿನಲ್ಲಿ ಯಾವುದೇ ರಾಸಾಯನಿಕ ವಸ್ತುಗಳು ಇರುವುದಿಲ್ಲ. ಶುದ್ಧ ಸಾವಯವ ಪದಾರ್ಥಗಳಾದ ಕಾಫಿ ಹಣ್ಣಿನ ಅಂಟು ಮತ್ತು ಸಿಪ್ಪೆ ಮಾತ್ರ ಇರುತ್ತದೆ. ಈ ತ್ಯಾಜ್ಯ ನೀರಿನ ಸಂಸ್ಕರಣೆಗೆ ದುಬಾರಿಯಲ್ಲದ ಸರಳವಿಧಾನವೊಂದನ್ನು ಕಂಡುಹಿಡಿಯಬೇಕಾದ ಅಗತ್ಯವಿದೆ. ಆದರೆ ಕೃಷಿವಿಷಗಳಿಂದ ಆಗುತ್ತಿರುವ ನೆಲ ಜಲ ಮಾಲಿನ್ಯವನ್ನು ತಡೆಯಲು ಯಾವುದೇ ಪ್ರಯತ್ನವನ್ನು ಮಾಡದೆ, ಎಂತಹದೇ ಘನಘೋರ ವಿಷವನ್ನೂ ಮಾರಾಟ ಮಾಡುತ್ತಿದ್ದರೂ ಅದರಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ತುಟಿಬಿಚ್ಚದ ಈ ಪರಿಸರ ಮಾಲಿನ್ಯ ನಿಂತ್ರಣ ಮಂಡಳಿ ಅಧಿಕಾರಿಗಳು, ಕಾಫಿ ತೋಟಗಳಿಗೆ ಬಂದು ಪಲ್ಪಿಂಗ್ ತ್ಯಾಜ್ಯ ನೀರನ್ನು ಬೇರಡೆಗೆ ಹರಿಯದಂತೆ ಸಂಗ್ರಹಿಸಿ ಇಟ್ಟಿದ್ದರೂ ಸಹ ಅದರಿಂದ ವಾಸನೆ ಬರುತ್ತಿದೆ- ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದೆಲ್ಲ ಹೆದರಿಸಬಲ್ಲರು. ಪಲ್ಪಿಂಗ್ ಯೂನಿಟ್ ನ ಯಂತ್ರಗಳನ್ನು ಮುಟ್ಟುಗೋಲು ಹಾಕಿ ವಶಪಡಿಸಿಕೊಳ್ಳುವ ಅಧಿಕಾರ ಈ ಅಧಿಕಾರಿಗಳಿಗೆ ಇರುವುದರಿಂದ ಅನೇಕ ಕಾಫಿ ಬೆಳೆಗಾರರು ಇವರೊಂದಿಗೆ ಹೊಂದಾಣಿಕೆಗೆ ಮೊರೆ ಹೋಗಿದ್ದಾರೆ.

ಕಾಫಿ ಬೆಳೆಯಲ್ಲೇ ಬಳಕೆಯಾಗುವ ಕೃಷಿವಿಷಗಳ ವಿಚಾರ ಹೇಳುವುದಾದರೆ ರೋಬಸ್ಟಾ ಕಾಫಿ ನೂರಕ್ಕೆ ನೂರರಷ್ಟು ವಿಷಮುಕ್ತವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆಯನ್ನು ಬಿಟ್ಟರೆ ಇದು ಸಂಪೂರ್ಣ ಸಾವಯವ ಕೃಷಿಯೇ ಸರಿ. ಅರೇಬಿಕಾ ಕಾಫಿ ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಷ ಬಳಕೆಯಾಗುತ್ತದೆ. ಕಾಫಿ ಬೆಳೆಯೊಂದಿಗೆ ಹೋಲಿಸಿದಲ್ಲಿ  ಟೀ ಯಂತಹ ಇತರ ಪ್ಲಾಂಟೇಷನ್ ಬೆಳೆಗಳಿಗೆ ಬಳಸುವ ವಿಷದಪ್ರಮಾಣ ಅಪಾರ.(ರೋಬಸ್ಟಾ ಕಾಫಿ ಬೆಳೆಗೆ ಇತ್ತೀಚೆಗೆ ‘ಬೆರಿ ಬೋರರ್’ ಎಂಬ ಕಾಯಿಕೊರಕ ಕೀಟವೊಂದು ಅಪಾರ ಹಾನಿಮಾಡುತ್ತಿದ್ದು ಈಗ ಅದರ ನಿಯಂತ್ರಣಕ್ಕಾಗಿ  ಕೆಲವೆಡೆ ವಿಷ ಬಳಸಲು ಪ್ರಾರಂಭಿಸಿದ್ದಾರೆ)

ಇನ್ನು ಹೈಟೆಕ್ ಕೃಷಿಯ ಹೆಸರಲ್ಲಿ ಬರುವ Growth promoter ಗಳು Plant harmone ಗಳು, Soil conditionerಗಳು, Foliar sprayಗಳು, weedicideಗಳು ಇವುಗಳಲ್ಲೆಲ್ಲಾ ಇರುವ ವಸ್ತುಗಳೇನು? ಇವುಗಳ ಧೀರ್ಘಕಾಲದ ಬಳಕೆಯಿಂದ ಆಗುವ ಪರಿಣಾಮಗಳೇನು? ಇತ್ಯಾದಿಗಳಬಗ್ಗೆ ನಮ್ಮಲ್ಲಿ ಯಾವದೇ ಮಾಹಿತಿಯೂ ಇಲ್ಲದೆ, ಅದನ್ನು ತಯಾರಿಸಿದ ಕಂಪೆನಿಗಳು ಹೇಳಿದ್ದನ್ನೇ ನಂಬಿಕೊಂಡು ನಾವು ಕೂತಿದ್ದೇವೆ. ನಮ್ಮ ಪರಿಸರ-ಆರೋಗ್ಯ ಇಲಾಖೆಗಳಂತೂ ಈ ಕಂಪೆನಿಗಳ ವಿರುದ್ಧ ಚಕಾರವನ್ನೂ ಎತ್ತಲಾರವು ಯಾಕೆಂದರೆ ಈ ಕಂಪೆನಿಗಳು ಸರ್ಕಾರಗಳಿಗಿಂತ ದೊಡ್ಡವು!!

ಅರುವತ್ತರ ದಶಕದಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ Gormex ಎಂಬ ಕಳೆನಾಶಕವನ್ನು ವ್ಯಾಪಕವಾಗಿ ಉಪಯೋಗಿಸಿದರು. ಕೇವಲ ಒಂದು ವರ್ಷದಲ್ಲೇ ಕಾಫಿ ಗಿಡಗಳು ಒಣಗಲಾರಂಭಿಸಿದವು. ಇದಕ್ಕೆ ಅವರು ಉಪಯೋಗಿಸಿದ ಕಳೆನಾಶಕವೇ ಕಾರಣವೆಂದು ಗೊತ್ತಾಗುವಷ್ಟರಲ್ಲಿ ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿತ್ತು. ಕಾಫಿ ತೋಟಗಳಿಗಾದ ಹಾನಿಯ ಅಂದಾಜು ಲೆಕ್ಕವೇನೋ ಸಿಕ್ಕಿತು. ಆದರೆ ಒಟ್ಟು ಪರಿಸರದ ಮೇಲೆ ಆದ ಪರಿಣಾಮವೇನು? ಯಾರಿಗೂ ತಿಳಿಯಲಿಲ್ಲ. ಆ ಕಳೆನಾಶಕವನ್ನು ತಯಾರಿಸಿದ-ವಿತರಿಸಿದ ಕಂಪೆನಿಗಳೂ ಶಿಕ್ಷೆಗೊಳಗಾಗಲಿಲ್ಲ. ಈಗ ನಮ್ಮ ಕಣ್ಣೆದುರಿಗೇ ‘ಎಂಡೋಸಲ್ಫಾನ್’ ಎಂಬ ಕೀಟನಾಶಕದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಪ್ರಚಾರ ನಡೆದಿದ್ದರೂ ಅದನ್ನು ತಯಾರಿಸುವ ಕಂಪೆನಿಯ ಕೂದಲೂ ಕೊಂಕಿಲ್ಲ!

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುತ್ತ-ನಿಯಂತ್ರಿಸುತ್ತ ನಗರ ಪ್ರದೇಶಗಳಲ್ಲಿ ಸುದ್ದಿ ಮಾಡುತ್ತಿರುವ ನಮ್ಮ ಸರ್ಕಾರಿ  ಅಧಿಕಾರಿಗಳು,  ಬಡ ಮೀನು ಮಾರಾಟಗಾರರಿಂದ ಸಣ್ಣ ವ್ಯಾಪಾರಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ಕಿತ್ತು ದಂಡ ಹಾಕುತ್ತ ಸುದ್ಧಿ ಶೂರರಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಖಂಡಿತ ಬೇಕು. ಆದರೆ ಇವರು ಅದನ್ನು ತಯಾರಿಕಾ ಹಂತದಲ್ಲೇಕೆ ನಿಷೇಧಿಸುತ್ತಿಲ್ಲ? ಅದರೊಂದಿಗೆ ಅದಕ್ಕಿಂತಲೂ ಮುಖ್ಯವಾದ ಮತ್ತು ಹೆಚ್ಚು ಅಪಾಯಕಾರಿಯಾದ ಇತರೆ ಮಾಲಿನ್ಯಗಳ ಬಗ್ಗೆ ಈ ಅಧಿಕಾರಿಗಳೇಕೆ ಕ್ರಮ ಕೈಗೊಳ್ಳುತ್ತಿಲ್ಲ?

ಯಾಕೆಂದರೆ ಈ ರೀತಿಯ ಅಧ್ವಾನಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣರಲ್ಲ. ಆಡಳಿತಗಾರರಲ್ಲಾಗಲೀ ನೀತಿ ನಿರೂಪಕರಾದ ನಮ್ಮ ಜನ ಪ್ರತಿನಿಧಿಗಳಲ್ಲಾಗಲೀ ಯಾವುದೇ ಖಚಿತ ನೀತಿಯಾಗಲೀ ಸಮಗ್ರ ದೃಷ್ಟಿಕೋನವಾಗಲೀ ಇರುವುದು ವಿರಳ. ಯಾವುದೇ ವಿಷಯದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಜನರಿಂದ ಪ್ರತಿರೋಧ ಬಂದರೆ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ,  ಸರ್ಕಾರ ಎಚ್ಚರವಾಗುತ್ತದೆ. ಆದರೆ ಏನು ಮಾಡಬೇಕೆಂದು ಸ್ಪಷ್ಟತೆಯಾಗಲಿ ಅಥವಾ ಅದಕ್ಕೆ ತಕ್ಕ ಸಿದ್ದತೆಯಾಗಲಿ ಇಲ್ಲದಿರುವುದರಿಂದ ತುರ್ತಾಗಿ ಯಾರಾದರೂ ಐ.ಎ.ಎಸ್ ಅಧಿಕಾರಿಗಳೋ ಇನ್ನಿತರರೋ ಈ ಬಗ್ಗೆ ಒಂದು ಕಾರ್ಯಕ್ರಮವನ್ನು ರೂಪಿಸುತ್ತಾರೆ.  ಆ ಕಾರ್ಯಕ್ರಮಕ್ಕಾಗಿ ಒಂದಷ್ಟು ಹಣ ಮಂಜೂರಾಗುತ್ತದೆ. ಅಷ್ಟರಲ್ಲೇ ಆ ಕಾರ್ಯಕ್ರಮದಿಂದ ಲಾಭಪಡೆದವರು ದೊಡ್ಡ ಪ್ರಚಾರವನ್ನು, ಲಾಭ ದೊರೆಯದವರೋ, ಅಥವಾ ವಿರೋಧ ಪಕ್ಷದವರೋ ಅವ್ಯಾಹತ ಟೀಕೆಯನ್ನು  ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಸರ್ಕಾರ ಇಂತಹದೇ ಇನ್ನೊಂದು ಕಾರ್ಯಕ್ರಮವನ್ನು ಪ್ರಾರಂಭಿಸಿರುತ್ತದೆ. ಆ ವೇಳೆಗಾಗಲೇ ಹಳೆಯ ಕಾರ್ಯಕ್ರಮವನ್ನು ಜನರು ಮರೆತಿರುತ್ತಾರೆ. ಉದಾ: ದಶಕಗಳಿಂದ ನಡೆಯುತ್ತಿರುವ ನಮ್ಮ ರಾಷ್ಟ್ರೀಯ ಸಾಕ್ಷರತಾ ಆಂದೋಲನವನ್ನು ನೆನಪಿಸಿಕೊಳ್ಳಿ.

ಕೃಷಿಯಲ್ಲಿ ಯಾವುದೇ ಹೊಸ ಬದಲಾವಣೆಯನ್ನು ಮಾಡುವುದು ಅಥವಾ ಹೊಸ ವಸ್ತುವನ್ನು ಬಳಕೆಮಾಡುವುದನ್ನು ಆರಂಭಿಸುವುದಾದರೆ, (ಇದು ಪ್ರಕೃತಿಯ ಎಲ್ಲ ಜೀವರಾಶಿಗಳ ವಿಚಾರದಲ್ಲು ಅನ್ವಯವಾಗುತ್ತದೆ) ಅದಕ್ಕೆ ಹಲವು ವರ್ಷಗಳ ತಾಳ್ಮೆಯ ಅಧ್ಯಯನ, ಪ್ರಯೋಗ ಮತ್ತು ವಸ್ತುನಿಷ್ಟ ಮೌಲ್ಯಮಾಪನದ ಅಗತ್ಯವಿದೆ. ಬಹುವಾರ್ಷಿಕ ಬೆಳೆಗಳ ವಿಚಾರದಲ್ಲಂತೂ ಇದು ಹೆಚ್ಚು ಅಗತ್ಯ. ಯಾಕೆಂದರೆ ಬಹುವಾರ್ಷಿಕ ಬೆಳೆಗಳ ಮೇಲೇನಾದರೂ ಪ್ರತಿಕೂಲ ಪರಿಣಾಮವಾದರೆ ಸರಿಪಡಿಸಿಕೊಳ್ಳಲು ವರ್ಷಗಳೇ ಬೇಕು. ಆದ್ದರಿಂದ ಈ ಕಂಪೆನಿಗಳು ಮತ್ತವರ ಮಾರಾಟಗಾರರು ಹೇಳಿದ್ದನ್ನೇ ನಂಬಿಕೊಂಡು ಕೂರದೆ, ಯಾವುದೇ ಹೊಸ ಪದ್ಧತಿಯನ್ನೋ, ಹೊಸವಸ್ತುನ್ನೋ ಬಳಸುವುದು ಅನಿವಾರ್ಯವಾದಾಗ ಇಲ್ಲವೇ ಹೊಸ ಪ್ರಯೋಗ ಮಾಡುವಾಗ ಸಣ್ಣ ಪ್ರಮಾಣದಲ್ಲಿ-ಸಣ್ಣಪ್ರದೇಶದಲ್ಲಿ ಪ್ರಯೋಗಮಾಡಿ ನೋಡುವುದು ಒಳ್ಳೆಯದು.

ನಮ್ಮ ಜಿಲ್ಲೆಯ ದೊಡ್ಡ ಕಾಫಿ ತೋಟವೊಂದರ ಮ್ಯಾನೇಜರ್ ಒಬ್ಬರು ವಿದೇಶಕ್ಕೆ- ಕಾಫಿಬೆಳೆಯುವ ದೇಶಗಳಿಗೆ ಹೋದರು. ವರ್ಷವಿಡೀ ಮಳೆಬೀಳುವ ಹೆಚ್ಚುಕಾಲ ಮೋಡದ ವಾತಾವರಣವಿರುವ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳ ಕೆಲವು ಭಾಗಗಳಲ್ಲಿ  ಕಾಫಿಯನ್ನು ನೆರಳಿಲ್ಲದೆ ಬಯಲಿನಲ್ಲಿ ಬೆಳೆಯುತ್ತಾರೆ. ಅದನ್ನು ನೋಡಿದ ಮ್ಯಾನೇಜರ್ ಸಾಹೇಬರು ಇಲ್ಲಿ ಬಂದು ‘ಕಾಫಿಗೆ ನೆರಳಿನ ಅಗತ್ಯವೇ ಇಲ್ಲ. ಮರಗಳನ್ನೆಲ್ಲಾ ಕಡಿಸಿದರೆ ತೋಟ ನಿರ್ವಹಣೆಯ ಖರ್ಚುನಲ್ಲಿ ಎಷ್ಟೋ ಉಳಿತಾಯವಾಗುತ್ತದೆ’ ಎಂದು ವರ್ಷದಲ್ಲಿ 4-5 ತಿಂಗಳು ಮಾತ್ರವೇ ಮಳೆ ಬೀಳುವ ನಮ್ಮ ಈ ಪ್ರದೇಶದಲ್ಲಿನ ತೋಟದ ಮರಗಳನ್ನೆಲ್ಲಾ ಕಡಿಸಿದರು! ತೋಟ ಸಂಪೂರ್ಣವಾಗಿ ನಾಶವಾಯ್ತು. ಮತ್ತೊಮ್ಮೆ ನೆರಳು ಮರಗಳನ್ನು ನೆಟ್ಟು ಬೆಳೆಸಿ ಹಲವು ವರ್ಷಗಳ ನಂತರ ಈಗ ಅಲ್ಲಿ  ತೋಟ ಎಬ್ಬಿಸಿದ್ದಾರೆ. ಭಾರತದ ಕಾಫಿ ತೋಟಗಳ ಚರಿತ್ರೆಯನ್ನವರು ಸ್ವಲ್ಪ ಅಭ್ಯಾಸ ಮಾಡಿದ್ದರೆ, ಈ ಹಿಂದೆಯೇ ಕೊಡಗಿನಲ್ಲಿ ಅಂದರೆ ಈ ಶತಮಾನದ ಆದಿಭಾಗದಲ್ಲೇ ಕೆಲವರು ಬ್ರಿಟಿಷ್ ಕಾಫಿ ಬೆಳೆಗಾರರು ಈ ಪ್ರಯೋಗ ಮಾಡಿ ಕೈ ಸುಟ್ಟುಕೊಂಡದ್ದು ತಿಳಿಯುತ್ತಿತ್ತು.

ಹೀಗೆ ನಮ್ಮ ಹಿರಿಯರು ಇಷ್ಟು ವರ್ಷಗಳಿಂದ ಏನೇನು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ, ಈ ಪದ್ಧತಿಗಳು ಯಾಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ? ಎಂದೆಲ್ಲಾ ಯೋಚಿಸದೆ ನಮ್ಮ ಪಾರಂಪರಿಕ ಜ್ಞಾನವನ್ನೆಲ್ಲಾ ಕಡೆಗಣಿಸಿ ನಮ್ಮ ಹಿರಿಯರಿಗೆಲ್ಲ ಬುದ್ಧಿಯೇ ಇರಲಿಲ್ಲವೆಂದುಕೊಂಡು ಏನೇನೋ ಮಾಡಹೊರಟರೆ ಅನಾಹುತ ತಪ್ಪಿದ್ದಲ್ಲ. ನನ್ನ ಅನುಮಾನ ನಿಜವಾಗುತ್ತಿದೆ. ಸರ್ಕಾರ ಸಾವಯವ ಕೃಷಿ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಜಿಲ್ಲೆಗೊಂದು ಸಂಘಟನೆ ಅಥವಾ ವ್ಯಕ್ತಿಗಳಿಗೆ ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ವಹಿಸಲಿದೆಯೆಂದು ಸುದ್ದಿ ಬಂದಿದೆ. ಈ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಆಯ್ಕೆಗೆ ಸರ್ಕಾರ  ಯಾವ ಮಾನದಂಡ ಬಳಸಿದೆಯೆಂದು ಗೊತ್ತಿಲ್ಲ. ಈ ಸಂಸ್ಥೆ ಅಥವಾ ವ್ಯಕ್ತಿಗಳು ಸುಮಾರು ಐದು ನೂರು ಎಕರೆ ವಿಸ್ತೀರ್ಣ ಕೃಷಿಭೂಮಿ ಇರುವಂತಹ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸಾವಯವ ಕೃಷಿಗೆ ಒಳಪಡಿಸಿ ಅಧ್ಯಯನ, ಪ್ರಚಾರ ಇತ್ಯಾದಿಗಳಲ್ಲಿ ತೊಡಗುವುದು ಈ ಯೋಜನೆಯ ಉದ್ದೇಶ. ಈ ತಲೆಕೆಳಗಾದ ಯೋಜನೆಗೆ ಸಲಹೆ ನೀಡಿದವರು ಯಾರೋ ತಿಳಿಯದು.

ಸರ್ಕಾರ ನಿಜವಾದ ಕಾಳಜಿ ಇದ್ದರೆ ಈ ರೀತಿ ಪ್ರತಿಜಿಲ್ಲೆಯಲ್ಲೂ ಪ್ರಯೋಗ ನಡೆಸಬೇಕಾದ್ದು ಸಾವಯವ ಕೃಷಿಯ ಬಗ್ಗೆ ಅಲ್ಲ. ಒಂದಷ್ಟು ಜನ ವಿಜ್ಞಾನಿಗಳು, ಪರಿಸರ ತಜ್ಞರು,  ಆರ್ಥಿಕತಜ್ಞರು,  ಆಡಳಿತಗಾರರು,  ಜೊತೆಗೆ ಖಡ್ಡಾಯವಾಗಿ ಕೆಲವರು ಪಾರಂಪರಿಕ ಕೃಷಿಕರು ಇವರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಉಸ್ತುವಾರಿಯಲ್ಲಿ ಆಧುನಿಕ ಕೃಷಿಯಬಗ್ಗೆ,  ಅದರ ಒಳಸುರಿಗಳ ಬಗ್ಗೆ ವಸ್ತು ನಿಷ್ಟವಾದ ಅಧ್ಯಯನಮಾಡಿ ಮೌಲ್ಯಮಾಪನ ನಡೆಸಿ, ಹೊಸತಳಿಗಳು ಕೃಷಿವಿಷಗಳು ಇನ್ನಿತರ ಯಾವುದೇ ಒಳಸುರಿಗಳಿಗೆ ಸಾವಯವ ಪರ್ಯಾಯಗಳನ್ನು ಹುಡುಕಬೇಕು. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈಗ ಸಾವಯವ, ಪರಿಸರಸ್ನೇಹಿ,  ಆಯುರ್ವೇದ , ಇತ್ಯಾದಿ ಹೆಸರುಗಳಲ್ಲಿ ಬರುತ್ತಿರುವ ವಸ್ತುಗಳ ಬಗ್ಗೆಯೂ ಮೌಲ್ಯಮಾಪನ ನಡೆಸಿ ಅದರ ಗುಣಾವಗುಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ವಸ್ತುವಿನ ಬಗ್ಗೆ ನಡೆಸಿದ ಪ್ರಯೋಗಗಳಲ್ಲಿ ಭಿನ್ನವಾದ ಅಭಿಪ್ರಾಯಗಳಿದ್ದರೆ, ಇನ್ನೂ ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸಬೇಕು. ಈ ಎಲ್ಲ ಪ್ರಯೋಗಳ ವಿವರಗಳು ಕೃಷಿಕರಿಗೆ ಲಭ್ಯವಗಾಬೇಕು. ಈ ಪ್ರಕ್ರಿಯೆ ನಿರಂತರವಾಗಿದ್ದು ಆಧುನಿಕ ಜ್ಞಾನವನ್ನು ಪಾರಂಪರಿಕ ಜ್ಞಾನದೊಂದಿಗೆ ಮೇಳೈಸಿ ನಮ್ಮ ಕೃಷಿ ಪದ್ಧತಿಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ಕನಿಷ್ಟ ಮಟ್ಟಕ್ಕಿಳಿಸುವ ಪ್ರಯತ್ನ ನಿರಂತರವಾಗಬೇಕು.

ಈ ಕಾರ್ಯದಲ್ಲಿ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಇದರೊಂದಿಗೆ ಸೇರಿ ಕೆಲಸ ಮಾಡಿ ಸರಿಯಾದ ಮಾಹಿತಿ ನೀಡುವಂತೆ ಸಾರ್ವಜನಿಕರು ಸರ್ಕಾರ  ಮೇಲೆ ಮತ್ತು ಈ ವಿಜ್ಞಾನ ಕೇಂದ್ರಗಳ ಮೇಲೆ ಒತ್ತಡ ತರಬೇಕು. ಈ ರೀತಿಯಲ್ಲಿ ಸಂಶೋಧನಾ ಕೇಂದ್ರಗಳನ್ನೊಗೊಂಡ ಸಮಿತಿಯಿಂದ ಮೌಲ್ಯಮಾಪನವಾಗದ ಯಾವುದೇ ಹೊಸ ವಸ್ತುವನ್ನು ಮಾರಾಟಕ್ಕೆ-ಬಳಕೆಗೆ ತರಬಾರದು. ಅನಂತರವೂ ಬಳಕೆಯ ಸಂದರ್ಭದಲ್ಲಿ ಏನಾದರೂ ತೊಂದರೆ ಕಂಡು ಬಂದರೆ ಅದನ್ನು ತಯಾರಿಸಿದ ಕಂಪೆನಿ ಮತ್ತು ಮೌಲ್ಯಮಾಪನ ಮಾಡಿದ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು. ಹಾಗಾದಲ್ಲಿ ಭೂಮಿಗೆ ವಿಷವುಣಿಸುವ ಪ್ರಮಾಣ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

ಸರ್ಕಾರ ಈಗ ಮಾಡುತ್ತಿರುವ ಯೋಜನೆ ಕೇವಲ ‘ಶೋಕೇಸ್’ನಲ್ಲಿಟ್ಟ ಸಾವಯವ ಕೃಷಿ ಆದೀತು. ನಗರ ಮಧ್ಯದ  ರೆಸಾರ್ಟ್ ಳಲ್ಲಿ ಹಾಕಿದ ಹಳ್ಳಿಯ ಸೆಟ್ನಂತೆ ಅಥವಾ ಇತ್ತೀಚೆಗೆ ಕೃಷಿಮೇಳಗಳಲ್ಲಿ ಕಾಣಸಿಗುವ ‘ಭತ್ತಕುಟ್ಟವುದು,  ಮೊರದಲ್ಲಿ ಕೇರುವುದು, ರಾಟಾಳ ಯಂತ್ರದಲ್ಲಿ ಮರಗೆಲಸ’ ಇತ್ಯಾದಿಗಳನ್ನೊಳಗೊಂಡು ‘ಜಾತ್ರೆಸ್ಟಾಲ್’ಗಳಂತೆ ಕಂಗೊಳಿಸಿ ಮತ್ತೊಂದಷ್ಟು  ಸರ್ಕಾರಿ ಪರಿಸರ ಪ್ರಿಯರನ್ನು ಹುಟ್ಟುಹಾಕಲು ನೆರವಾದೀತು.

ಈ ಯೋಜನೆಗೆ ಅಥವಾ ಯಾವುದೇ ಯೋಜನೆಗೆ ಆರ್ಥಿಕ ತಜ್ಞರುಗಳ ಅಗತ್ಯವನ್ನು ಹೇಳಿದೆ. ಆರ್ಥಿಕತಜ್ಞರೆಂದರೆ ನಮಗೆ ಈ ಕೆಲಸಕ್ಕೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞರ ಅಗತ್ಯವೇನೂ ಇಲ್ಲ. ಆದರೆ ಯಾವುದೇ ಬೆಳೆಯಲ್ಲೂ ಕನಿಷ್ಟ ಖರ್ಚಿನೊಂದಿಗೆ ಪಡೆಯಬಹುದಾದ ಬೆಳೆಗಳು, ಅದರಿಂದ ಸಿಗಬಹುದಾದ ಕನಿಷ್ಟ ಲಾಭದ ಸರಳ ಲೆಕ್ಕಾಚಾರವನ್ನು ಮಾಡಬಲ್ಲವರ ಅಗತ್ಯ ಖಂಡಿತ ಇದೆ. ನಮ್ಮ ಕೃಷಿ ಆರ್ಥಿಕತೆಯಲ್ಲಿ 10-15 ವರ್ಷಗಳಷ್ಟು ಧೀರ್ಘಕಾಲದ ಅನುಭವಗಳಿಂದ ವಾರ್ಷಿಕ ಎಕರೆವಾರು ಸರಾಸರಿ ಆದಾಯ,  ಒಂದು ಸಣ್ಣ ಕುಟುಂಬಕ್ಕೆ ಸಾಧಾರಣ ಮಟ್ಟದ ಜೀವನ ನಡೆಸಲು ಅಗತ್ಯವಾಗುವ ಆದಾಯದ ಪ್ರಮಾಣ, ಇದನ್ನೆಲ್ಲ ಗಮನಿಸಿ ಮಾಡಬಹುದಾದ ಕೃಷಿ ಮತ್ತು ಅದಕ್ಕೆ ಅಗತ್ಯವಾದ ಹಿಡುವಳಿಯ ಗಾತ್ರ ಇವುಗಳನ್ನೆಲ್ಲ ಅಂದಾಜು ಮಾಡಬಲ್ಲವರಿರಬೇಕು. ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ಈ ರೀತಿಯ ಲೆಕ್ಕಾಚಾರಗಳನ್ನು ಮಾಡಬಲ್ಲ ಜನರು ಖಂಡಿತವಾಗಿ ನಮ್ಮ ನಡುವೆಯೇ ಇದ್ದಾರೆ. ಆದರೆ ಈ ಎಲ್ಲ ಕೆಲಸಗಳನ್ನು ಯಾವುದೇ ಸರ್ಕಾರ ಮಾಡೀತೆಂದು ನಿರೀಕ್ಷಿಸುವುದೇ ನಮ್ಮ ಮೂರ್ಖತನವಿರಬಹುದು!

ನಮ್ಮ ಕೃಷಿ ಉದ್ದಿಮೆದಾರರು, ಅಂದರೆ ಇವರು ನಿಜವಾದ ರೈತರಲ್ಲ- ಕೃಷಿಯನ್ನು ಒಂದು ಉದ್ದಿಮೆಯನ್ನಾಗಿ ನಡೆಸುವವರು. ಇವರಲ್ಲಿ ದೊಡ್ಡ ಕಾಫಿ, ಟೀ, ರಬ್ಬರ್ ಬೆಳೆಗಾರರು, ದೊಡ್ಡ ಪ್ರಮಾಣದ ಬೀಜ ಉತ್ಪಾದಕರು. ನೂರಾರು ಎಕರೆ ಕಬ್ಬು, ಹತ್ತಿ, ಬೆಳೆಯುವವರು, ಹೈಟೆಕ್ ಕೃಷಿಯ ಫಲ ಪುಷ್ಪ ಬೆಳೆಯುವವರು ಇದ್ದಾರೆ. ಇವರು ಹೂಡುವ ಭಂಡವಾಳವೂ ಕೋಟಿಗಳ ಲೆಕ್ಕದಲ್ಲಿರುತ್ತದೆ. ಇವರು ಕೃಷಿಯನ್ನು ಉದ್ದಿಮೆಯೆಂದೇ ಪರಿಗಣಿಸಿ  ಮ್ಯಾನೇಜ್ ಮೆಂಟ್ ಶಿಸ್ತಿಗೆ ಅಳವಡಿಸಿ ಶುದ್ಧ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಸಮರ್ಥವಾಗಿ ನಡೆಸಲು ಪ್ರಯತ್ನಿಸುತ್ತಾ ಇರುವುದರಿಂದ, ಕಡಿಮೆ ಮಾನವ ಶ್ರಮದ ಬಳಕೆ- ಹೆಚ್ಚು ಯಾಂತ್ರೀಕರಣದ ಕಡೆಗೇ ಒಲವುಳ್ಳವರಾಗಿರುತ್ತಾರೆ.

ಆದ್ದರಿಂದ ಈ ದೊಡ್ಡ ಕೃಷಿ ಉದ್ಯಮಿಗಳು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪರಿಸರದ ಬಗ್ಗೆ, ನೆಲ-ಜಲಗಳ ಬಗ್ಗೆ ಕಾಳಜಿಯನ್ನು ಅದೂ ಕೂಡಾ ಹೊರಗಿನ ಒತ್ತಡಗಳಿಗೆ ಮಣಿದು ವಹಿಸುತ್ತಾರೆಯೇ ವಿನಃ ಸ್ವಯಂ ಸ್ಪೂರ್ತಿಯಿಂದಲ್ಲ.  ವಿಪರ್ಯಾಸವೆಂದರೆ ಅನೇಕ ಬಾರಿ ಪ್ರತಿಷ್ಟಿತ ಕ್ಲಬ್ ನಲ್ಲಿ ಪರಿಸರ ಸಂರಕ್ಷಣೆಯಬಗ್ಗೆ ನಡೆಯುವ ಸಭೆ- ವಿಚಾರಸಂಕಿರಣಗಳಿಗೆ ಇವರಲ್ಲಿ ಕೆಲವರು ಪ್ರಾಯೋಜಕರೂ ಆಗಿರುತ್ತಾರೆ! ಈ ಕೃಷಿ ಉದ್ಯಮಿಗಳಲ್ಲಿ ಹೆಚ್ಚಿನವರಿಗೆ ಬೇರೆ ಅನೇಕ ಉದ್ಯಮಗಳಿವೆ. ಇವರಿಗೆ ಕೃಷಿ ಇವರ ಒಟ್ಟು ವ್ಯವಹಾರಗಳ ಒಂದು ಭಾಗ ಮಾತ್ರವಾಗಿದ್ದು ಕೃಷಿಯಿಂದಲೇ ಬದುಕಬೇಕಾದ ಅನಿವಾರ್ಯತೆಯಲ್ಲಿ ಇವರು ಇಲ್ಲ.

ಆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ಕೃಷಿಕರು ಹಾಗೂ ಕೃಷಿ ಕೂಲಿಗಾರರ ಪರಿಸ್ಥಿತಿಯೇ ಬೇರೆ. ಇವತ್ತು ಮೆಣಸಿನಕಾಯಿಯನ್ನೋ ತರಕಾರಿಯನ್ನೋ ಬೆಳೆಯುತ್ತಿರುವ ರೈತನನ್ನು ನೋಡಿದಾಗ ಕೊಂಡು ತಿನ್ನುವವನೇ ಸುಖಿ ಎನ್ನಿಸಿದರೆ ಆಶ್ಚರ್ಯವಿಲ್ಲ. ಹೀಗಾಗಿ ರೈತರು ಅದು ಸಾಂಪ್ರದಾಯಿಕವೋ, ಸಾವಯವವೋ, ಇಲ್ಲ ಆಧುನಿಕವೋ ಇತ್ಯಾದಿಗಳ ಗೋಜಿಗೆ ಹೋಗದೆ ಎಲ್ಲಿ ಕಾಸು ಸಿಗುತ್ತದೆಯೋ ಅಲ್ಲಿಗೆ, ಅದು ಶುಂಠಿಯೋ ಬಜೆಯೋ ಅರಶಿನವೋ ಅಥವಾ ಅವನಿಗೆ ಸಂಬಂಧವೇ ಇಲ್ಲದ ಇನ್ನೇನೋ ಬೆಳೆಯೋ ಯಾವುದೇ ಆಗಲಿ, ಎಂಥ ಘನಘೋರ ವಿಷವಾಗಲಿ ತಂದು ಸುರಿದು ಬೆಳೆ ಬೆಳೆಯಲು ಮುನ್ನುಗ್ಗುತ್ತಾರೆ. ಅದಕ್ಕಾಗಿ ನಾಳಿನ ಚಿಂತೆ ಮರೆತು ಮನೆಯನ್ನೋ, ಜಮೀನನ್ನೋ, ಇದ್ದರೆ ಇದ್ದ ಚಿನ್ನವನ್ನೋ ಅಡವಿಟ್ಟು ಲೇವಾದೇವಿಗಾರರಿಂದ ಅಧಿಕ ಬಡ್ಡಿಯ ಸಾಲ ಪಡೆದು ಕೃಷಿಗಿಳಿಯುತ್ತಾರೆ. ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಹೇಗೂ ಕೃಷಿಗೆ ತಂದ ವಿಷವಂತೂ ಇದ್ದೇ ಇದೆ ಕುಡಿಯಲು!

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ನಮ್ಮ ಪರಿಸರ – ನೆಲ ಜಲ : 1

ದಿನೇಶ್ ಅಮಿನ್‌ಮಟ್ಟು ಬರಹಕ್ಕೆ ಹಿಂದೂ ಮತಾಂಧರ ವಿರೋಧ

– ಡಾ. ಎನ್. ಜಗದಿಶ್ ಕೊಪ್ಪ

ಮಿತ್ರರೇ,

ನಿನ್ನೆ ಸೋಮವಾರ ಗೆಳೆಯ ದಿನೇಶ್ ಅಮಿನ್‌ಮಟ್ಟು ವಿವೇಕಾನಂದರ ಬಗ್ಗೆ ಬರೆದ ವಸ್ತುನಿಷ್ಟ ಬರಹವನ್ನು ಪ್ರಜಾವಾಣಿಯಲ್ಲಿ ನೀವೆಲ್ಲಾ ಓದಿದ್ದೀರಾ ಎಂದು ಭಾವಿಸಿದ್ದೇನೆ. ಕೆಳೆದ ಒಂದು ವಾರದಿಂದ ಕನ್ನಡ ಪತ್ರಿಕೆಗಳಲ್ಲಿ ವಿವೇಕಾನಂದರ ಬಗ್ಗೆ ಕಾಗಕ್ಕ, ಗೂಬಕ್ಕನ ಕಥೆಗಳನ್ನ ಹೋಲುವಂತಹ ಲೇಖನಗಳನ್ನ ಪ್ರಕಟಿಸಿದವರಿಗೆ ಮರ್ಮಕ್ಕೆ ತಾಗುವಂತೆ  ತಮ್ಮ ಅಂಕಣದಲ್ಲಿ ದಿನೇಶ್ ವಿವೇಕಾನಂದರ ಬಗ್ಗೆ ನಿಖರ ಮಾಹಿತಿಗಳೊಂದಿಗೆ ಬರೆದಿದ್ದಾರೆ. ಇದು ಹಿಂದು ಮತಾಂಧರ ಪಾಲಿಗೆ ಅರಗಿಸಿ ಕೊಳ್ಳಲಾರದ ಕಹಿ ಮಾತ್ರೆಯಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ ನಿನ್ನೆ ಸೋಮವಾರ ಹುಬ್ಬಳ್ಳಿಯ ಪ್ರಜಾವಾಣಿ ಕಛೇರಿ ಎದುರು ಕೆಲವು ಮತಾಂಧರು ದಿನವಿಡಿ ಧರಣಿ ನಡೆಸಿದರು.

ದಬ್ಬಾಳಿಕೆ ಮತ್ತು ದೌರ್ಜನ್ಯದ ಮೂಲಕ ಸತ್ಯದ ಬಾಯಿ ಮುಚ್ಚಿಸಿಕೊಂಡು ಬಂದಿರುವ ಸಂಘ ಪರಿವಾರದ ಅವಿವೇಕಿಗಳು ಹಿಂದೂ ಧರ್ಮದ ಬಗ್ಗೆ ವಿವೇಕಾನಂದ ಹಾಗೂ ಬಿ,ಆರ್. ಅಂಬೇಡ್ಕರ್ ಮಾಡಿರುವ ವ್ಯಾಖ್ಯಾನಗಳನ್ನು ಮುಚ್ಚಿ ಹಾಕುವ ಬದಲು ಗಂಭೀರವಾಗಿ ಕುಳಿತು ಓದುವುದು ಒಳಿತು. ಅಷ್ಟೇ ಅಲ್ಲ, ವಿವೇಕಾನಂದರು ಕೇವಲ 39ನೇ ವಯಸ್ಸಿಗೆ ಏಕೆ ಸತ್ತರು ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ವಾಸ್ತವವನ್ನು ಸುಳ್ಳು ಲೇಪನಗಳ ಮೂಲಕ ಬಹುಕಾಲ ಮುಚ್ಚಿಡಲಾಗದು. ಚಿಕಾಗೊ ನಗರದಲ್ಲಿ  ವಿವೇಕಾನಂದರು ಮಾಡಿರುವ  ಭಾಷಣದ ಬಗ್ಗೆ ಪುಂಖಾನು ಪುಂಖವಾಗಿ ಬೊಬ್ಬಿರಿಯುವ ಇವರು, ಅದೇ ಹಿಂದೂ ಧರ್ಮದ ಬಗ್ಗೆ, ಅದರೊಳಗಿನ ಕೊಳಕುಗಳ ಬಗ್ಗೆ ವಿವೇಕಾನಂದರು ಎತ್ತಿರುವ ಮೌಲ್ಯಯುತ ಪ್ರಶ್ನೆಗಳ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ?

ಹಿಂದೂ ಧರ್ಮದ ಅಮಲನ್ನ ನೆತ್ತಿಗೇರಿಸಿಕೊಂಡಿರುವ ಈ ಮತಾಂಧರ ಆಲೋಚನೆಗಳು ಹೇಗಿರುತ್ತವೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ ನೋಡಿ:
ಕಳೆದ 6 ಮತ್ತು 7 ನೆ ತಾರೀಖು ನಾನು ಒರಿಸ್ಸಾದ ಭುವನೇಶ್ವರದಲ್ಲಿದ್ದಾಗ 6ರ ಶುಕ್ರವಾರ ಮಧ್ಯಪ್ರದೇಶದ ಭೂಪಾಲ್ ನಗರದಲ್ಲಿ ನಡೆದ ಆರ್. ಎಸ್.ಎಸ್. ಶಿಬಿರದಲ್ಲಿ ಮಾಡಲಾದ ಒಂದು ಉಪನ್ಯಾಸದ ಬಗ್ಗೆ  “ಇಂಡಿಯನ್ ಎಕ್ಸ್‌ಪ್ರೆಸ್” ಇಂಗ್ಲಿಷ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದರ ಸಾರಾಂಶ ಹೀಗಿತ್ತು.

  • 1980ರಲ್ಲಿ ಭೂಪಾಲ್ ನಗರದಲ್ಲಿ ನಡೆದ ವಿಷಾನಿಲ ದುರಂತದಲ್ಲಿ ಬದುಕಿ ಉಳಿದವರು ತಮ್ಮ ಮನೆಯ ಮುಂದೆ ಗೋಡೆಗಳಿಗೆ ಯಾರು ಸಗಣಿ ಬಳಿದಿದ್ದರೋ ಅವರು ಮಾತ್ರ.
  • ಸಗಣಿಗೆ ( ಹಸುವಿನ ಸಗಣಿಗೆ) ವಿಷಾನಿಲ ತಡೆಯುವ ಶಕ್ತಿ ಇದೆಯಂತೆ.
  • ದೇಶಿ ಹಸುಗಳ ಹಾಲು ಕುಡಿಯುವವರು ಮತ್ತು ಕುಡಿದವರು ಸತ್ಪ್ರಜೆಗಳಾಗಿ ಬದುಕುವರಂತೆ.
  • ವಿದೇಶಿ ಆಕಳುಗಳ ಹಾಲು ಕುಡಿದವರಲ್ಲಿ ಅಪರಾಧ ಮನೋಭಾವ ಹೆಚ್ಚುವುದಂತೆ. ಅವರೆಲ್ಲಾ ಕ್ರೂರಿಗಳಾಗಿ ಬದುಕುವರಂತೆ.
  • ದನ ಮಾತ್ರ ಮಾನವಸಂತತಿಯನ್ನು ಉಳಿಸಬಲ್ಲುದಂತೆ; ಅದನ್ನು ಮುಟ್ಟಿದರೆ ಸಾಕು ರಕ್ತದೊತ್ತಡ ಹತೋಟಿಗೆ ಬರುವುದಂತೆ.

ಇಂತಹ ಅಪ್ರಬುದ್ಧ ಹೇಳಿಕೆಯನ್ನು ಪತ್ರಿಕೆ ಗೇಲಿ ಮಾಡಿ ಮುಖಪುಟದಲ್ಲಿ ವರದಿಮಾಡಿತ್ತು. ವಿಷಾನಿಲ ಮತ್ತು ವಿಕಿರಣಗಳ ವೈಜ್ಙಾನಿಕ ಪ್ರಭಾವಗಳ ಬಗ್ಗೆ ಅರಿಯದ ಮೂರ್ಖರು ಮಾತ್ರ ಈ ರೀತಿ ಮಾತನಾಡಬಲ್ಲರು. ಹೋಗಲಿ ಈ ದೇಶದ ನಾಗರೀಕರಿಗೆ ಪೂರೈಕೆಯಾಗುತ್ತಿರುವ ಹೆಚ್ಚಿನ ಪ್ರಮಾಣದ ಹಾಲು ಎಮ್ಮೆಯ ಹಾಲು ಎಂಬ ವಾಸ್ತವ ಅಂಶ ಕೂಡ ಗೊತ್ತಿಲ್ಲ. ಇಂತಹವರಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?

ದಿನಾಂಕ 8 ರ ಭಾನುವಾರ ಬೆಳಿಗ್ಗೆ ನಾನು ಕೊಲ್ಕತ್ತ ನಗರದಲ್ಲಿದ್ದೆ. ಆ ದಿನ ವಿವೇಕಾನಂದರ 150 ನೇ ವರ್ಷದ ಹುಟ್ಟು ಹಬ್ಬ. ಶ್ಯಾಮ್ ಬಜಾರ್ ಪಕ್ಕದಲ್ಲಿರುವ ವಿವೇಕಾನಂದ ರಸ್ತೆಯಲ್ಲಿರುವ ಅವರ ಮನೆಗೆ ಬೇಟಿ ನೀಡಿದಾಗ ಅಲ್ಲಿನ ಜನ ಅವರ ಜಯಂತಿಯನ್ನ ಅರ್ಥಪೂರ್ಣವಾಗಿ ಆಚರಿಸಿದರು. ಬಂಗಾಳಿಗಳು ವಿವೇಕಾನಂದರನ್ನ ಇಲ್ಲಿನ ಮತಾಂಧರ ಹಾಗೆ ದೇವರೆಂದು ಭಾವಿಸುವುದಿಲ್ಲ. ಪಶ್ಚಿಮ ಬಂಗಾಳದ ಕ್ರಾಂತಿ ಪುರುಷ ಎಂದು ಗೌರವಿಸುತ್ತಾರೆ. ಅವರ ಪ್ರಖರ ವಿಚಾರಧಾರೆಯನ್ನ ಕೊಂಡಾಡುತ್ತಾರೆ. ಅದೇ ದಿನ ದಕ್ಷಿಣೇಶ್ವರದಲ್ಲಿ ರಾಮಕೃಷ್ಣ ಪರಮಹಂಸರ ಆಶ್ರಮದ ಎದುರು ವಿವೇಕಾನಂದರ 150ನೇ ಜಯಂತಿಯ ಅಂಗವಾಗಿ ಅವರ ಅಪರೂಪದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇಡೀ ದಿನ ಅವರ ವೈಚಾರಿಕ ಪ್ರಜ್ಞೆ ಕುರಿತಂತೆ ಉಪನ್ಯಾಸಗಳಿದ್ದವೇ ಹೊರತು, ತಲೆಮಾಸಿದವರ ಗೊಡ್ಡು ವಿಚಾರಗಳಿರಲಿಲ್ಲ. ವಿವೇಕಾನಂದರ ಕುರಿತು ಟನ್ನುಗಟ್ಟಲೆ ಪತ್ರಿಕೆಯಲ್ಲಿ ಬರೆಯುವ ಶಿಖಾಮಣಿಗಳು ಒಮ್ಮೆ ಬಂಗಾಲಿ ಜನರ ಜೊತೆ ಬೆರೆತು ಅವರ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ದಿನೇಶ್ ಅಮಿನ್‌ಮಟ್ಟು ಬರೆದಿರುವ ಲೇಖನದಲ್ಲಿ ಮಣಿಸಂಕರ್ ಮುಖರ್ಜಿಯವರ ಕೃತಿಯನ್ನು ಉಲ್ಲೇಖಿಸಿ ಎಲ್ಲ ಅಂಕಿ ಅಂಶಗಳನ್ನ ದಾಖಲಿಸಿದ್ದಾರೆ. ಅದನ್ನು ಓದುವ, ಪರಿಶೀಲಿಸುವ ವ್ಯವಧಾನ ಹಿಂದು ಪರಿವಾರದ ಬೃಹಸ್ಪತಿಗಳಿಗೆ ಇದ್ದಂತಿಲ್ಲ. ಹೋಗಲಿ ಪಶ್ಚಿಮ ಬಂಗಾಳದ ಬ್ರಾಹ್ಮಣರು ಮೀನು, ಮೊಟ್ಟೆ ತಿನ್ನತ್ತಾರೆ, ಇವು ಅವರ ದಿನ ನಿತ್ಯದ ಆಹಾರ ಕ್ರಮ. ಈ ಸತ್ಯವಾದರೂ ಮತಾಂಧರರಿಗೆ ಗೊತ್ತೆ? ಏಕೇಂದರೆ, ಇದೇ ಅವಿವೇಕಿಗಳು ಕರ್ನಾಟಕದ ಶಾಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ ಕೊಡುವುದನ್ನು ತಪ್ಪಿಸಿದರು..

 

ಚಿತ್ರಗಳು:
ರಾಮಕೃಷ್ಣ ಪರಮಹಂಸರ ಆಶ್ರಮ, ವಿವೇಕಾನಂದರ ಪ್ರತಿಮ: ಲೇಖಕರವು

ದಿನೇಶ್ ಅಮಿನ್‌ಮಟ್ಟು ಚಿತ್ರ: ಚಂದ್ರಶೇಖರ್ ಐಜೂರ್

RSS :ಬಾಲ್ಯವಿವಾಹ, ಮಡೆಸ್ನಾನ, ಮರ್ಯಾದಾ ಹತ್ಯೆ,… ಏನನ್ನುತ್ತಾರೆ?

-ಬಿ. ಶ್ರೀಪಾದ್ ಭಟ್

“ಆರ್.ಎಸ್.ಎಸ್. ಗಳ ದೇಶಭಕ್ತಿ ಮತ್ತು ಧರ್ಮ ಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರ್.ಎಸ್.ಎಸ್. ಗಳ ಈ ದೇಶ ಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮ ದ್ವೇಷ ಎಂದು ಗಾಂಧೀಜಿ ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವುವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪಾರಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು. ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ, ಆರ್.ಎಸ್.ಎಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ಼್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ.” — ಪಿ. ಲಂಕೇಶ್ ( ಟೀಕೆ ಟಿಪ್ಪಣಿ – 3 ನೇ ಸಂಪುಟ)

“ಬಡವರ ರಕ್ತ ಹೀರುವ ಬ್ರಾಹ್ಮಣರು ಮತ್ತು ಸಾಧುಗಳನ್ನು, ಹೆಣ್ಣು ಕುಲದ ಮೇಲೆ ದಬ್ಬಾಳಿಕೆ ನಡೆಸುವ ಮೇಲ್ಜಾತಿಯ ಪ್ರಭುತ್ವಕ್ಕೆ ಪ್ರತಿರೋಧ ತೋರಲು ಶೂದ್ರವರ್ಗ ತಲೆ ಎತ್ತಿ ನಿಲ್ಲುವುದು.” ಸ್ವಾಮಿ ವಿವೇಕಾನಂದ (“ಸಂಗ್ರಹ” ,  ಕಲ್ಕತ್ತ 1964)

“ದೇಶದಾದ್ಯಾಂತ ಕೋಮುಗಲಭೆಗಳು ಶೇಕಡ 65 ರಷ್ಟು ಇಳಿಮುಖವಾಗಿದ್ದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಕೋಮುಗಲಭೆಗಳು ಶೇಕಡ 90 ರಷ್ಟು ಜಾಸ್ತಿಯಾಗಿವೆ.” ನಿವೃತ್ತ ನ್ಯಾಯಾಧೀಶ ಸಲ್ಡಾನ ( 12.1.2012 ಡೆಕ್ಕನ್ ಹೆರಾಲ್ಡ್ ವರದಿ)

70ರ ದಶಕದಲ್ಲಿ ನಾವೆಲ್ಲ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಆಗ ಬೆಳಗಿನ ಹೊತ್ತಿನಲ್ಲಿ ನಮಗೆ ಶಾಲೆಯ ಆಟದ ಮೈದಾನದಲ್ಲಿ ದಿನಂಪ್ರತಿ ಕಾಣುವ ಒಂದು ಸಾಮಾನ್ಯ ದೃಶ್ಯವೆಂದರೆ ಖಾಕಿ ಚೆಡ್ಡಿ ಹಾಕಿಕೊಂಡು ಕವಾಯತು ಮಾಡುತ್ತಿದ್ದ ಸಣ್ಣ ಹುಡುಗರು ಹಾಗೂ ಯುವಕರು. ಇವರೆಲ್ಲರ ಮುಖದಲ್ಲಿ ಒಂದು ರೀತಿಯ ಕಠೋರತೆ ಇರುತಿತ್ತು. ನಮಗೆ ಆಶ್ಚರ್ಯವೆಂದರೆ ಈ ಕಠೋರತೆಗೆ ವಯಸ್ಸಿನ ಭೇದವಿರಲಿಲ್ಲ. ನಾವೆಲ್ಲ ಕುತೂಹಲದಿಂದ ಅವರ ಅಕ್ಕ ಪಕ್ಕ ಸುಳಿದಾಡುತ್ತಿದ್ದಾಗಲೆಲ್ಲ ಇವರಿಗೆಲ್ಲ ಮುಖಂಡನಾದವನು ಹೇಳುತ್ತಿದ್ದ “ಅವರೇನಾದರು ಎದುರಿಗೆ ಬಂದರೆ ನೀವು ಪ್ರತಿಯಾಗಿ ಅವರನ್ನು ದೃಷ್ಟಿಸಿ ನೋಡಿ, ಸದಾ ಕಾಲ ಕೈಯಲ್ಲಿ ಒಂದು ಕೋಲನ್ನು ಇಟ್ಟಿಕೊಳ್ಳಿ, ಏನಾದರೂ ನಿಮಗೆ ಸಂಶಯವೆನಿಸಿದರೆ ಆ ಕೋಲನ್ನು ಅವರ ಮೇಲೆ ಬೀಸಲು ಹಿಂದುಮುಂದು ನೋಡಬೇಡಿ” ಎಂಬ ಮಾತುಗಳು ನಮ್ಮ ಕಿವಿಗೆ ಬಿದ್ದು ನಮಗೆಲ್ಲ ಭಯಮಿಶ್ರಿತ ಕುತೂಹಲ. ಯಾರು ಅವರೆಂದರೆ? ಏಕೆ ಅವರ ಮೇಲೆ ದಂಡವನ್ನು ಬೀಸಬೇಕು? ಇತ್ಯಾದಿಯಾಗಿ ಆಗ ಶಾಲೆ ಹುಡುಗರಾಗಿದ್ದ ನಮ್ಮಲ್ಲಿ ಗೊಂದಲಗಳಿದ್ದವು.

ಏಳೆಂಟು ವರ್ಷಗಳ ಹಿಂದೆ ಪರಿಚಯದವರೊಬ್ಬರ ಮಗನೊಬ್ಬ ಈ ಆರ್.ಎಸ್.ಎಸ್. ನವರು ನಡೆಸುತ್ತಿದ್ದ ರೆಸಿಡೆನ್ಸಿ ಶಾಲೆಯೊಂದರಲ್ಲಿ ಓದುತ್ತಿದ್ದ. ಅವನನ್ನು “ಏನಯ್ಯ ಓದುವುದನ್ನು ಬಿಟ್ಟು ಮತ್ತೇನನ್ನು ಕಲಿಯುತ್ತಿದ್ದೀಯ” ಎಂದು ಕುತೂಹಲದಿಂದಲೇ ಕೇಳಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಹೇಳಿದ್ದು” ನಮಗೆಲ್ಲ ಕವಾಯತನ್ನು, ಲಾಠೀ ಬೀಸುವುದನ್ನು, ಅವರೇನಾದರು ಎದುರಿಗೆ ಬಂದರೆ ಸರಿಯಾಗಿ ಲಾಠಿ ತಿರುಗಿಸಿ ಹೇಗೆ ಬೀಸಬೇಕು ಎಂದು ಕಲಿಯುತ್ತಿದ್ದೇನೆ.”

ಮೇಲಿನೆರೆಡು ಘಟನೆಗಳ ಅಂತರ ಸುಮಾರು 25 ರಿಂದ 27 ವರ್ಷಗಳು. ಎರಡು ತಲೆಮಾರು ಬದಲಾಗಿದೆ. ಆದರೆ ಸಂಘಟನೆ ಬದಲಾಗಿಲ್ಲ. ಆರ್.ಎಸ್.ಎಸ್. ಹಾಗೆಯೇ ಇದೆ.  ಚಿಂತನೆಗಳು ಬದಲಾಗಿಲ್ಲ. ಅಗ ಅವರೆಂದರೆ ಮುಸ್ಲಿಮರು. ಈಗಲೂ ಅವರೆಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಇನ್ನೂ ನಾವು 20ರ ದಶಕಕ್ಕೆ ಹೋದರೂ ಕೂಡ ಅಷ್ಟೆ ಆಗ ಸಾವರ್ಕರ್ ಬರೆದ  “ಹಿಂದೂ ಅಂದರೆ ಯಾರು”?  ಎನ್ನುವ ವ್ಯಾಖ್ಯಾನದಿಂದ ಶುರುವಾದ ಇವರ ಹಿಂದೂ ಧರ್ಮದ ಮೇಲಿನ ಉಗ್ರಾಭಿಮಾನ ಹಾಗೂ ಪರಧರ್ಮದ ಬಗೆಗಿನ ಇನ್ನಿಲ್ಲದ ದ್ವೇಷದ ವಿಷವಾಹಿನಿ 80 ವರ್ಷಗಳ ನಂತರವೂ ಇಂದಿಗೂ ಹರಿಯುತ್ತಿದೆ ತಲೆಮಾರಿನಿಂದ ತಲೆಮಾರಿಗೆ. ಅಂತಹ ತೀವ್ರವಾದ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನ ನಡುವೆಯೂ 1927 ರಲ್ಲಿ ನಾಗಪುರದಲ್ಲಿ  “ಹಿಂದೂ ಡಾಕ್ಟರ್ ಒಬ್ಬರ ಮನೆಯ ಮೇಲೆ ಯಾರೋ ಕೆಲವರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತಾ ಕಲ್ಲು ತೂರಾಟ ನದೆಸಿದರು” ಎಂದು ಗುಲ್ಲೆಬ್ಬಿಸಿ ಕೋಮುಗಲಭೆಯನ್ನು ಹುಟ್ಟು ಹಾಕುವುದರಿಂದ ಹಿಡಿದು 2012 ರ ಸಿಂಧಗಿಯಲ್ಲಿ ಶ್ರೀರಾಮ ಸೇನೆಯು ಪಾಕಿಸ್ತಾನ ಬಾವುಟ ಹಾರಿಸಿ ಮತ್ತೊಂದು ಕೋಮುಗಲಭೆಗಳಿಗೆ ಸಂಚು ರೂಪಿಸುವವರೆಗೂ 85 ವರ್ಷಗಳ ಇವರ ಈ ಕರ್ಮಕಾಂಡದ ಇತಿಹಾಸವಿದೆ. ತಮ್ಮ ಅನೇಕ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ, ಬೈಠಕ್ ಗಳಲ್ಲಿ ಇವರೆಂದೂ ಸಮಕಾಲೀನ ವಿಷಯಗಳನ್ನಾಗಲಿ, ಚಿಕಿತ್ಸಕ ದೃಷ್ಟಿಕೋನಗಳ ಸಂವಾದಗಳಾಗಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗೆಗೆ ಶಿಕ್ಷಣವಾಗಲಿ ಕಳೆದ 80 ವರ್ಷಗಳ ಆರ್.ಎಸ್.ಎಸ್. ಇತಿಹಾಸದಲ್ಲಿ ನಡೆದ ಪುರಾವೆಯೇ ಇಲ್ಲ. ಸಂಪೂರ್ಣ ಪುರುಷ ಕೇಂದ್ರಿತ ಸಂಘಟನೆಯನ್ನಾಗಿ ರೂಪಿಸಿಕೊಂಡಿರುವ ಆರ್.ಎಸ್.ಎಸ್. ಎಂದು ಪ್ರಗತಿಪರವಾಗಿ ಕ್ಷೀಣ ಧ್ವನಿಯನ್ನು ಹೊರಡಿಸುವ ಯಾವ ಅವಕಾಶವನ್ನೂ ಅದು ನೀಡಿಲ್ಲ. ಅಲ್ಲಿ ಪ್ರಶ್ನೆಗಳೇ ಇಲ್ಲ. ಇರುವುದು ಒಂದೇ ಅದು ಕೇವಲ ಹಿಂದೂಗಳನ್ನೊಳಗೊಂಡ ಆಖಂಡ ಭಾರತದ ಮಂತ್ರ ಜಪ. ಜಾತಿ ವಿನಾಶದ ಮಾತು ಬಿಡಿ ಅದು ದೂರ ಉಳಿಯಿತು, ಇಂದಿಗೂ ತಮ್ಮ ಹಿಂದೂ ಧರ್ಮದ ಅಡಿಯಲ್ಲಿ ಜರುಗುತ್ತಿರುವ ಬಾಲ್ಯ ವಿವಾಹಗಳು, ಮಡೆ ಸ್ನಾನದಂತಹ ಮೂಢ ಆಚರಣೆಯ ಬಗ್ಗೆ, ಅಂತರ್ಜಾತಿ ವಿವಾಹಿತರನ್ನು ಮರ್ಯಾದೆಯ ಹೆಸರಿನಲ್ಲಿ ಸಾಯುಸುತ್ತಿರವುದರ ಬಗೆಗೆ  ಯಾವ ಆರ್.ಎಸ್.ಎಸ್. ಸ್ವಯಂಸೇವಕರೂ, ಮುಖಂಡರೂ ಬಾಯಿಬಿಟ್ಟಿಲ್ಲ. ಟೀಕಿಸಿಲ್ಲ. ಇದು ಇವರ ಹಿಂದೂ ಧರ್ಮದ ಪುನರುತ್ಥಾನ ಪರಿ!! ಇದೇ ಜನ ಸಮಯ ಸಿಕ್ಕಾಗಲೆಲ್ಲ ಶಾಬಾನು ಪ್ರಕರಣ, ಇಸ್ಲಾಂನ ಮೌಢಾಚರಣೆಗಳು, ಅಲ್ಲಿನ ಬುರ್ಖಾ ಪದ್ಧತಿಗಳ ಬಗ್ಗೆ ಪುಂಖಾನುಪಂಖವಾಗಿ ಕೂಗುತ್ತಿರುತ್ತಾರೆ.

ಇದು ಇವರ ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೆ ಬೇರೆಯವರ ಎಲೆಯಲ್ಲಿ ನೊಣ ಓಡಿಸುವ ಶೈಲಿ. ಇದರ ಜೊತೆಗೆ  “ತಂದೆ ತಾಯಿ, ಗೌರವಿಸಿ, ಪರಂಪರೆ ಶ್ರೇಷ್ಟತೆಯನ್ನು ಮರೆಯಬೇಡಿ ಸಂಪ್ರದಾಯ ನಮ್ಮ ಬದುಕಿನ ತಳಪಾಯ” ಎನ್ನುವ ಸಿಹಿಲೇಪಿತ ಮಾತುಗಳ ಮೂಲಕ ಮುಗ್ಧ ಮೋಡಿಗೊಳಗಾದ ತಂದೆ ತಾಯಿಗಳು ಅಲ್ಲಿ ತಮ್ಮ ಮಕ್ಕಳು ಶಿಷ್ಟವಂತರಾಗಿಯೂ, ಸಹನಶೀಲರಾಗಿಯೂ ರೂಪಿತಗೊಳ್ಳುತ್ತಾರೆ ಎನ್ನುವ ಕನಸಿನೊಂದಿಗೆ ಆರ್.ಎಸ್.ಎಸ್. ಸಂಪರ್ಕಕ್ಕೆ ಬಿಡುತ್ತಾರೆ. ನಂತರ ಈ  ತಮ್ಮೆಲ್ಲ ಮೇಲಿನ ದ್ವೇಷಪೂರಿತ ಚಿಂತನೆಗಳನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಸದಾಕಾಲ ತುಂಬಿರುವಂತೆ ಮಾಡಲು ಇವರು ಬಳಸಿಕೊಳ್ಳುವುದು ಕಡಲಾಚೆಯಿಂದ ಬಂದ ಮೊಘಲರ ಆಕ್ರಮಣ. ಇದು ಕೇವಲ ರಾಜ್ಯ ವಿಸ್ತರಣೆ, ಅಧಿಕಾರ ಕಬಳಿಕೆಯ ಭಾಗವಾಗಿದ್ದ  ಈ ಯುದ್ದಗಳನ್ನು ಅಸಹಿಷ್ಣತೆ ಹಾಗೂ ಮುಸ್ಲಿಂ ದ್ವೇಷದ ಚಿಂತನೆಗಳನ್ನಾಗಿ ರೂಪಿಸಿರುವುದರಿಂದ ಶುರುವಾಗಿ ನಂತರ ದೇಶಾಭಿಮಾನದ ಹೆಸರಿನಲ್ಲಿ ಪಾಕಿಸ್ತಾನವನ್ನು ನೆಪ ಮಾಡಿಕೊಂಡು ಎರಡು ಧರ್ಮಗಳ ಮಧ್ಯೆ ಹುಟ್ಟು ಹಾಕಿದ ಕಂದಕಗಳು, ಕೊನೆಗೆ ಗುಜರಾತ್ ನಲ್ಲಿ ಮುಸ್ಲಿಂರ ಹತ್ಯಾಕಾಂಡಕ್ಕೆ ತಲುಪಿ ಇದರ ರೂವಾರಿ ನರೇಂದ್ರ ಮೋದಿ “ಮಿಯ್ಯಾ ಮುಶ್ರಾಫ್, ಮೇಡಮ್ ಮೇರಿಅಮ್, ಮೈಖೆಲ್ ಲಿಂಗ್ಡೋ” ಎಂದು ಅತ್ಯಂತ ಕ್ರೂರವಾಗಿ ಮಾತನಾಡುವಷ್ಟರ ಮಟ್ಟಿಗೆ ಬಂದು ತಲುಪಿದೆ.

ಈ ಆರ್.ಎಸ್.ಎಸ್. ಗುಂಪಿಗೆ ಈ ಮುಸ್ಲಿಂದ್ವೇಷದ ಮೂಲಭೂತ ಕಾರಣ ಇವರಿಗೆ ತಮ್ಮ ಹಿಂದೂ ಧರ್ಮದ ಮೇಲಿರುವ ಅತ್ಯಂತ ಅಪಾಯಕಾರಿಯಾದ, ಆತಂಕಕಾರಿಯಾದ, ಜೀವವಿರೋಧಿಯಾದ ಅತ್ಯುಗ್ರ ಅಭಿಮಾನ. ಈ ಸದರಿ ಧರ್ಮದಲ್ಲಿ ಅಂತರ್ಗತವಾಗಿರುವ ಜಾತೀಯತೆಯ ಕ್ರೌರ್ಯದ ಬಗ್ಗೆ, ತಳ ಸಮುದಾಯಗಳ ಶೋಷಣೆಯ ಬಗ್ಗೆ ಈ ಆರ್.ಎಸ್.ಎಸ್. ನವರಿಗೆ ಇರುವ ಅಪಾರ ನಂಬುಗೆ. ಪುರೋಹಿತಶಾಹಿಗಳ ಅಮಾನವೀಯ ಚಿಂತನೆಗಳ ಬಗ್ಗೆ ಇನ್ನಿಲ್ಲದ ಭಕ್ತಿ. ಸಾರ್ವಜನಿಕ ಜೀವನದಲ್ಲಿ ಧಾರ್ಮಿಕತೆಯನ್ನು ಬಳಸುವುದಕ್ಕೆ ಇನ್ನಿಲ್ಲದ ಉತ್ಸಾಹ, ಆವೇಶಗಳನ್ನು ತೋರುವ ಆರೆಸಸ್ ಅದಕ್ಕಾಗಿ ಅವರು ಆಶ್ರಯಿಸುವುದು ವೇದ,ಪುರಾಣಗಳನ್ನು, ಅಲ್ಲಿಂದ ಅವರು ಹೆಕ್ಕಿಕೊಳ್ಳುವುದು ಮನುವಾದಿ, ಸನಾತನ ಧರ್ಮದ ಹುಸಿ ಶ್ರೇಷ್ಟತೆಯನ್ನು ಸಾರುವ ಅಮಾನವೀಯ ವೈದಿಕ ಚಿಂತನೆಗಳನ್ನು. ಭ್ರಾಹ್ಮಣ ಮಠಗಳನ್ನು. ಆದರೆ  ತಮ್ಮ ಜೀವನವನ್ನೇ ಪ್ರಯೋಗವನ್ನಾಗಿ ಮಾಡಿಕೊಂಡು ಧಾರ್ಮಿಕತೆಯನ್ನು ಬಳಸಿ ಅಧ್ಯಾತ್ಮದ ವಿವಿಧ ಮಜಲುಗಳನ್ನು, ಅದೇ ಅಧ್ಯಾತ್ಮವನ್ನು ಬಳಸಿ ಸತ್ಯದ ವಿವಿಧ ಮುಖಗಳನ್ನು ನಿರಂತರವಾಗಿ ಶೋಧಿಸಿದ “ರಾಮಕೃಷ್ಣ ಪರಮಹಂಸ”ರನ್ನು ಆರ್.ಎಸ್.ಎಸ್. ನವರು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಏಕೆಂದರೆ ಪ್ರತಿಯೊಂದು ಚಿಂತನೆಗಳೂ ಸತ್ಯಶೋಧನೆಗೊಳಪಡಲೇಬೇಕು, ನಿಕಷನಕ್ಕೆ, ಪ್ರಯೋಗಗಳಿಗೆ ಒಳಪಟ್ಟು ಆ ಪ್ರಯೋಗದಲ್ಲಿ ಬೆಂದು ಹೊರಬಂದಂತಹ ತತ್ವಮೀಮಾಂಸೆಯನ್ನು ಮಾತ್ರ ರಾಮಕೃಷ್ಣ ಪರಮಹಂಸರು ಒಪ್ಪಿಕೊಳ್ಳುತ್ತಿದ್ದರು. ಇದಕ್ಕಾಗಿಯೇ ಅಲ್ಲವೆ ಅನೇಕ ಪ್ರಯೋಗಗಳ ನಂತರ ಪರಮಹಂಸರು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳನ್ನು ಕೂಡ ಆಚರಿಸುತ್ತಿದ್ದರು. ಇವರು ಹೇಳುತ್ತಿದ್ದುದು ಎಲ್ಲಾ ದೇವರು ಒಂದೇ. ಇದೆಲ್ಲ ಆರೆಸಸ್ ನವರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗದು. ಇವರು ಪರಮಹಂಸರ ಈ ಸಂಕೀರ್ಣತೆಯ ಆಧ್ಯಾತ್ಮವನ್ನು ಮುಟ್ಟದೆ ಪರಮಹಂಸರ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಗಟ್ಟಿಯಾಗಿ ಹಿಡಿದುಕೊಂಡರು. ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸರ್ವಧರ್ಮ ಸಮಾನತೆ, ಭ್ರಾತೃತ್ವ ಮನೋಧರ್ಮಕ್ಕೆ ಸಂಘಪರಿವಾರದವರು ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು, ವಿವೇಕಾನಂದರು ಪ್ರತಿಪಾದಿಸಿದ ನ್ಯಾಯ,ನೀತಿಗಳನ್ನೊಳಗೊಂಡ, ಮಾನವೀಯತೆಯ ದೇಶಪ್ರೇಮವನ್ನು ಅತ್ಯಂತ ಋಣಾತ್ಮವಾಗಿ ಬಳಸಿಕೊಂಡು ವಿವೇಕಾನಂದರ ಜೀವಪರ ಚಿಂತನೆಗಳನ್ನೇ ಅಪಮೌಲ್ಯಗೊಳಸಿದರು. ಇಂದು ಬಲಪಂಥೀಯರು ಮಾನವತಾವಾದಿ ವಿವೇಕಾನಂದರನ್ನು ತಮಗೆ ಬೇಕಾದ ಹಾಗೆ ಒಗ್ಗಿಸಿಕೊಂಡ ರೀತಿನೀತಿಗಳೇ ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾದವುಗಳು. ಕಳೆದ ಅನೇಕ ದಶಕಗಳಿಂದ ಪ್ರಗತಿಪರ ಚಿಂತಕರು ಇದನ್ನು ಸಾಕ್ಷಿ ಸಮೇತ ಹೇಳುತ್ತಾ ಬಂದಿದ್ದಾರೆ.

ಆದರೆ ಬದಲಾದ ಕಾಲಘಟ್ಟದಲ್ಲಿ, ದೇಶ ಸ್ವಂತಂತ್ರಗೊಂಡನಂತರ ನೆಹರೂ ಹಾಗೂ ಅಂಬೇಡ್ಕರ್ ರವರು ಭಾರತ ದೇಶವನ್ನು ಜಾತ್ಯಾತೀತ, ಸೆಕ್ಯುಲರ್ ರಾಷ್ಟ್ರವನ್ನಾಗಿಯೂ, ಇಲ್ಲಿ ಸರ್ವಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿ ಸಂವಿಧಾನವೇ ಈ ದೇಶದ ಅಧಿಕೃತ ಕಾನೂನನ್ನಾಗಿಯೂ, ಇದಕ್ಕೆ ಸದಾಕಾಲ ಕಾವಲಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಇರುವಂತೆ ಶಾಸನವನ್ನು ರೂಪಿಸಿ ಭಾರತವನ್ನು ಒಂದು ಮಾದರಿ ಗಣತಂತ್ರ ದೇಶವನ್ನಾಗಿಯೂ ರೂಪಿಸಿಬಿಟ್ಟರು. ಇದು 50ರ ದಶಕದಲ್ಲಿ  ಆರ್.ಎಸ್.ಎಸ್. ಮುಂದಾಳುಗಳಿಗೆ ಇನ್ನಿಲ್ಲದ ಅಘಾತವನ್ನುಂಟುಮಾಡಿತ್ತು. ಅತ್ಯಂತ ಕುತೂಹಲದ ವಿಷಯವೆಂದರೆ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ನಡೆದ ಕೋಮುಗಲಭೆಗಳಲ್ಲಿ ಆರ್.ಎಸ್.ಎಸ್. ಎಂದೂ ಮುಂಚೂಣಿಯಲ್ಲಿ ಇರಲೇ ಇಲ್ಲ ಹಾಗೂ ಇರುತ್ತಲೂ ಇಲ್ಲ!. ತನ್ನನ್ನು ತಾನು ಸಾಂಸ್ಕ್ರತಿಕ ಸಂಘಟನೆಯಾಗಿ ಮಾತ್ರ ಐಡೆಂಟಿಟಿ ಉಳಿಸಿಕೊಂಡು ತನ್ನ ಎಲ್ಲ ಮೇಲಿನ ಕರ್ಮಠ ಚಿಂತನೆಗಳಿಗೆ,  ಬೌದ್ಧಿಕ  ಪ್ರಚಾರಕ್ಕಾಗಿ ತನ್ನ ಶಾಖಾ ಮಠಗಳನ್ನು ಬಳಸಿಕೊಂಡು ಈ ಅಸಹಿಷ್ಣುತೆಯ ಕರ್ಮಠ ಚಿಂತನೆಗಳನ್ನು ಬಹಿರಂಗವಾಗಿ ವ್ಯವಸ್ಥೆಯಲ್ಲಿ ಪ್ರಯೋಗಿಸಲು ಹಾಗೂ ತಮ್ಮ ಈ ಹಿಂಸಾತ್ಮಕ ಕಾರ್ಯಸಾಧನೆಗಾಗಿ ಇದು ಬಳಸಿಕೊಂಡಿದ್ದು ಶೂದ್ರ ಹಾಗು ಹಿಂದುಳಿದ ಸಮುದಾಯಗಳನ್ನ. ಇದಕ್ಕೆ ಸಾಕ್ಷಿಯಾಗಿ ಸ್ವತಂತ್ರ ಭಾರತದಲ್ಲಿ ಕಳೆದ 64 ವರ್ಷಗಳಲ್ಲಿ ನಡೆದ ಕೋಮುಗಲಭೆಗಳಲ್ಲಿ, ದೊಂಬಿಗಳಲ್ಲಿ ಆರ್.ಎಸ್.ಎಸ್. ಗೆ ಸೇರಿದ ಯಾವುದೇ ಸಂಘ ಪ್ರಚಾರಕನೂ, ಸ್ವಯಂಸೇವಕನೂ ಹಾಗೂ ಸದಸ್ಯನೂ ಆರೋಪಿಯಾಗಿಲ್ಲ ಹಾಗೂ ಯಾವುದೇ ರೀತಿಯ ನ್ಯಾಯಾಂಗ ವಿಚಾರಣೆಗೂ ಒಳಗಾಗಿಲ್ಲ. ಆದರೆ ಇವರ ಬೂಟಾಟಿಕೆಯ, ತಮ್ಮ ಕಾರ್ಯ ಸಾಧನೆಗಾಗಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕುತಂತ್ರಕ್ಕೆ ಬಲಿಯಾದದ್ದು  ಹಿಂದುಳಿದ, ದಲಿತ ಸಮುದಾಯ. ಇವರನ್ನು ತಮ್ಮ ಮಾತೃ ಸಂಘಟನೆ ಭ್ರಾಹ್ಮಣಶಾಹೀ ವ್ಯಕ್ತಿತ್ವದ ಆರ್.ಎಸ್.ಎಸ್. ಒಳಗೆ ಕೂಡ ಬಿಟ್ಟುಕೊಳ್ಳದೆ ಇವರಿಗೋಸ್ಕರ ವಿ.ಎಚ್.ಪಿ., ಬಜರಂಗದಳಗಳನ್ನು ಹುಟ್ಟಿಹಾಕಿ ಇವರ ಈ  ಸಂಘಟನೆಗೆ ಸೇರಿದ ಅಮಾಯಕ ಹಿಂದುಳಿದ ಸಮುದಾಯದ ಹುಡುಗರೆಲ್ಲ ಕಳೆದ 40 ವರ್ಷಗಳಿಂದ ಕೋಮು ಗಲಭೆಗಳಲ್ಲಿ, ನ್ಯಾಯಾಂಗ ವಿಚಾರಣೆಗಳಲ್ಲಿ ಸಿಲುಕಿಕೊಂಡು ನಾಶವಾಗಿದ್ದಾರೆ, ಜೀವ ತೆತ್ತಿದ್ದಾರೆ.

ಇಷ್ಟೆಲ್ಲ ಚರ್ವಿತ ಚರ್ವಣ ವಿಷಯಗಳನ್ನು ಅನಿವಾರ್ಯವಾಗಿ ಈಗಲೂ ವಿಧಿ ಇಲ್ಲದೆ ಪದೇ ಪದೇ ಹೇಳಲೇಬೇಕಾಗಿದೆ. ಏಕೆಂದರೆ:

ಮೊದಲನೆಯದಾಗಿ ಇತ್ತೀಚೆಗೆ ಕಾನೂನಿನ ಕುಣಿಕೆ ಬಲವಾಗುತ್ತಿರುವುದನ್ನು ಗಮನಿಸಿರುವ ಸಂಘ ಪರಿವಾರಕ್ಕೆ, ತಮ್ಮ ಎಂದಿನ ಪರಧರ್ಮ ಅಸಹಿಷ್ಣುತೆಯ, ಅಲ್ಪಸಂಖ್ಯಾತ ದ್ವೇಷದ ಮಾಮೂಲಿ ರಾಗಗಳು ಎಂದಿನ ಪ್ರತಿಫಲವನ್ನು ತಂದುಕೊಡುತ್ತಿಲ್ಲ ಎನ್ನುವುದು ಮನವರಿಕೆಯಾಗತೊಡಗಿದೆ. ತಮ್ಮ ಹಳೇ ಚಾಳಿಯನ್ನು ನೇರವಾಗಿಯೇ ಮುಂದುವರಿಸಿದರೆ ನ್ಯಾಯಾಲಯದ ಕಟಕಟೆ ಹತ್ತುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಈಗ ಜಾಸ್ತಿ ಎನ್ನುವ ಜ್ನಾನೋದಯ, ಸಾವಿರಾರು ಸುಳ್ಳುಗಳನ್ನು ಹೇಳಿ ತಾವು ಅತ್ಯಂತ ಜತನದಿಂದ ಬೆಳೆಸಿದ ಮಧ್ಯಮವರ್ಗ ಹಾಗು ಅವರ ಮೃದು ಬಲಪಂಥೀಯ ನಿಲುವುಗಳು ಹಾಗೂ ಒಂದು ರೀತಿಯಲ್ಲಿ ಧರ್ಮವನ್ನು ಅಫೀಮಿನಂತೆ ಬಳಸಿ ದೇಶದ ಉದ್ದಗಲಕ್ಕೂ ಹಬ್ಬಿದ್ದ ಅದರ ಅಮಲು ಕ್ರಮೇಣ ಕ್ಷೀಣವಾಗುತ್ತಿದೆಯೇನೋ ಎನ್ನುವ ಆತಂಕ ಈ ಸಂಘ ಪರಿವಾರದ ಯಜಮಾನನಿಗೆ. ಆ ಕಾರಣಕ್ಕಾಗಿಯೇ ಇದನ್ನು ಮುಂಚಿನಂತೆ ನೇರವಾಗಿ ಹಾಡುತ್ತಿಲ್ಲ. ಬದಲಾಗಿ ತಮ್ಮ ಎಂದಿನ ಕುಖ್ಯಾತ ಗುಪ್ತ ಕಾರ್ಯಸೂಚಿಗಳಿಗೆ ಮೊರೆ ಹೋಗಿದ್ದಾರೆ. ಕೆಲವು ಉದಾಹರಣೆಗಳು:

1. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತಮ್ಮ ಕೆಲವು ಅಂಗ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದೂ ಧರ್ಮದ ಮೇಲರಿಯಮೆಯನ್ನು ಸಾರುವ ಪುಸ್ತಕಗಳನ್ನು ವಿತರಿಸಿ ವಿಧ್ಯಾರ್ಥಿಗಳನ್ನು ತಮ್ಮ ಜಾಲಕ್ಕೆ ಬಗ್ಗಿಸುವುದು. ವಿಶ್ವೇಶ್ವರ ಹೆಗಡೆ ಕಾಗೇರಿಯಂತಹ ಪರಮ ಆರ್.ಎಸ್.ಎಸ್. ಸ್ವಯಂಸೇವಕರು ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳುವಂತೆ (ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಟ್ಟಾ ಆರ್.ಎಸ್.ಎಸ್. ಮುರುಳಿ ಮನೋಹರ ಜೋಶಿಯವರು ಶಿಕ್ಷಣ ಮಂತ್ರಿಯಾಗಿದ್ದರು) ನೋಡಿಕೊಂಡು ಈ ಕಾಗೇರಿಯಂತಹ ಸ್ವಯಂಸೇವಕರ ಕೈಯಲ್ಲಿ ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ ಎನ್ನುವ ಹೇಳಿಕೆ ಕೊಡಿಸುವುದು, ಶಾಲೆಗಳಲ್ಲಿ ಯೋಗಭ್ಯಾಸವನ್ನು ಪಠ್ಯವನ್ನಾಗಿ ಅಳವಡಿಸಬೇಕೆಂದು ಪದೇ ಪದೇ ರಾಗ ಹಾಡಿಸುವುದು, ಭಗವದ್ಗೀತೆಯ ಅಭಿಯಾನ ಎನ್ನುವ ಮರೆ ಮೋಸದ ಮೂಲಕ ತಮ್ಮ ಪರಧರ್ಮ ದ್ವೇಷದ, ಪುರೋಹಿತಶಾಹಿ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವುದು. ನಂತರ ಸದಾನಂದ ಗೌಡರಂತಹ   ದುರ್ಬಲ ಮುಖ್ಯಮಂತ್ರಿಯ ಮೂಲಕ ಭಗವದ್ಗೀತೆಯ ಪಾಠವನ್ನು ಸರ್ಕಾರೀ ಶಾಲೆಗಳಲ್ಲಿ ಅಳವಡಿಸುತ್ತೇವೆ ಎಂದು ಹೇಳಿಸಿ ಅದರ ಪರಿಣಾಮಗಳನ್ನು ಕಾದು ನೋಡುವುದು, ಹಾಗೂ ಆ ಮೂಲಕ ಒಂದು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು. ನಂತರ ತಮ್ಮ ರಾಷ್ಟ್ರೋತ್ಥಾನ ಪರಿಷತ್ತಿನ ಮೂಲಕ  “ತಮ್ಮ ಅಖಂಡ ಹಿಂದೂ ಧರ್ಮವನ್ನು”  ಸಾರುವ ಪುಸ್ತಕಗಳನ್ನು ಪಠ್ಯಪುಸ್ತಕಗಳನ್ನಾಗಿ ರೂಪಿಸುವುದು. ಆದರೆ ವೈಚಾರಿಕವಾಗಿ ಅತ್ಯಂತ ಗಟ್ಟಿಯಾಗಿರುವ ಕರ್ನಾಟಕದಂತಹ ನೆಲದಲ್ಲಿ ಇವರ ಈ ಗುಪ್ತ ಕಾರ್ಯಾಚರಣೆಗೆ ಅವಕಾಶವೇ ದೊರೆತಿಲ್ಲ ಹಾಗೂ ಇಲ್ಲಿನ ಪ್ರಗತಿಪರ ಸಂಘಟನೆಗಳು ಅದಕ್ಕೆ ಮುಂದೆಯೂ ಅವಕಾಶ ಕೊಡುವ ಸಾಧ್ಯತೆಗಳೂ ಕಡಿಮೆ. ಇಷ್ಟರ ಮಟ್ಟಿಗೆ ನಮ್ಮ ರಾಜ್ಯ ಇವರ ವಿಷಮಯವಾದ ರೀತಿನೀತಿಗಳಿಂದ ಮುಕ್ತವಾಗಿದೆ.

2.  ಎಂದಿನಂತೆ ಹಳೇ ಬಾಣವಾದ ಗೋಹತ್ಯೆ ನಿಷೇಧವನ್ನು ಇನ್ನಿಲ್ಲದಂತೆ ಉಗ್ರವಾಗಿ ಪ್ರತಿಪಾದಿಸುತ್ತ,(ಈಶ್ವರಪ್ಪರಂತಹ ಹುಂಬ ಶೂದ್ರರ ಮುಖಾಂತರ ಯಾರಾದರೂ ವಿರೋಧಿಸಿದರೆ ನಾಲಿಗೆ ಸೀಳಲಾಗುತ್ತದೆ ಎಂದು ಫತ್ವ ಹೊರಡಿಸುವುದು)  ಇದು ಸಮಾಜದ ಜೀವನ್ಮರಣದ ಪ್ರಶ್ನೆಯನ್ನಾಗಿಸಿ ಇನ್ನಿಲ್ಲದ ವಿಷಮಯ ವಾತಾವರಣ ನಿರ್ಮಿಸುವುದು.

3. ಮತಾಂತರದ ಬಗೆಗಿನ ಉದ್ವೇಗ, ಭಯವನ್ನು ಹುಟ್ಟಿಹಾಕಿ ಈ ಸಿಂಡ್ರೋಮ್ ಜನರಲ್ಲಿ ಸದಾಕಾಲ ನೆಲೆ ನಿಲ್ಲುವಂತೆ ಅನೇಕ ಪುಕಾರುಗಳನ್ನು ಹಬ್ಬಿಸುತ್ತಾ ನಂತರ ಅಲ್ಪ ಸಂಖ್ಯಾತರ ಮೇಲೆ ತಮ್ಮ ಅಂಗ ಸಂಸ್ಥೆಗಳ ಮೂಲಕ ದಬ್ಬಾಳಿಕೆಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬರುವುದು ಹಾಗೂ ಈ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು.

4. ಬಲಪಂಥೀಯ ಪತ್ರಕರ್ತರ ಮೂಲಕ ಯಶಸ್ವಿಯಾಗಿ ಮಾಧ್ಯಮಗಳ ಮೂಲಕ ಹಿಂದೂಗಳ, ಹಿಂದೂ ಧರ್ಮದ ಶ್ರೇಷ್ಟತೆಯ ಹಸೀ ಹಸೀ ಸುಳ್ಳುಗಳನ್ನು ಬಿಟ್ಟೂ ಬಿಡದೆ ಕೂಗುಮಾರಿಯ ರೀತಿಯಲ್ಲಿ ಪುಂಖಾನುಪುಂಖವಾಗಿ ಬರೆಸುತ್ತಾ ಇಲ್ಲಿ ಈ ದೇಶ  ಬದುಕಿರುವುದೇ ಒಂದು ಪವಾಡದಿಂದ ಎನ್ನುವ ಭ್ರಮೆಗಳನ್ನು ಹುಟ್ಟಿಸುವುದು.

ಮೇಲಿನ ಎಲ್ಲಾ ಉದಾಹರಣೆಗಳ ಮೂಲಕ ತಮ್ಮ ಪ್ರೈಜ್ ಕ್ಯಾಚ್ ಆದಂತಹ ಮಧ್ಯಮವರ್ಗ, ಮೇಲ್ಮಧ್ಯಮವರ್ಗ, ಮೇಲ್ಜಾತಿಗಳು, ವರ್ತಕರು ಹೀಗೆ ತಮ್ಮ ಸಹಜ ಅಭಿಮಾನಿಗಳನ್ನು ಮತ್ತೆ ಟ್ರ್ಯಾಪ್ ಮಾಡುವುದು. ಆ ಮೂಲಕ ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಕುಳ್ಳಿರಿಸುವುದು.

ಇಷ್ಟೆಲ್ಲ ಪ್ರತಿಗಾಮಿ ನೀತಿಗಳನ್ನುಳ್ಳ ಆರ್.ಎಸ್.ಎಸ್. ನವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಂವಿಧಾನ ಬಾಹಿರವಾದ ಅಧಿಕಾರವನ್ನು ಬಳಸುತ್ತಾರೆ, ಅವರು ತಮ್ಮ ಕೇಶವಕೃಪ, ಗರ್ಭಗುಡಿಗೆ ಜನರಿಂದ, ಜನರಿಗಾಗಿ ಆಯ್ಕೆಗೊಂಡ ಶಾಸಕರನ್ನ, ಮಂತ್ರಿಗಳನ್ನ,ಮುಖ್ಯಮಂತ್ರಿಗಳನ್ನ ಕರೆಸಿಕೊಂಡು ಶಿಷ್ಯಂದಿರಂತೆ ಇವರನ್ನು ನಡೆಸಿಕೊಳ್ಳುತ್ತಾ, ಅನೇಕ ರೀತಿಯ ಸರ್ಕಾರಿ ನಿರ್ಧಾರಗಳಲ್ಲಿ ಹಸ್ತಕ್ಷೇಪಗೊಳಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ನಿರ್ನಾಮ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಈಗ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಆರ್.ಎಸ್.ಎಸ್. ಹಲವಾರು ಬಾರಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವುದೂ, ಅನೇಕ ವೇಳೆ ಆಡಳಿತದಲ್ಲಿ ತನ್ನ ಹಸ್ತಕ್ಷೇಪವನ್ನು ನಡೆಸುತ್ತಾ ಆ ಮೂಲಕ ತನ್ನ ಪ್ರಭಾವ ಬಳಸಿಕೊಂಡು ತನ್ನ ಅಂಗ ಸಂಸ್ಥೆಗಳು ನಡೆಸುತ್ತಿರುವ ಕೋಮುವಾದಿ ಶಿಕ್ಷಣಕ್ಕೆ ಭರಪೂರು ಅನುದಾನವನ್ನು ಪಡೆದುಕೊಳ್ಳುತ್ತಾ, ಕಳೆದ 3 ವರ್ಷಗಳಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಸದಾಕಾಲ ಒಂದಿಲ್ಲೊಂದು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಾಗ ತಾನು ಸಂಧಾನಕಾರನಾಗಿಯೂ  ಭಾಗವಹಿಸುತ್ತಾ ತನ್ನ ಸುತ್ತ ಒಂದು ಪ್ರಭಾವಳಿಯನ್ನು ನಿರ್ಮಿಸಿಕೊಂಡಿರುವುದೂ, ಯಾವ ಯಾವ ಶಾಸಕರು ಮಂತ್ರಿಯಾಗಬೇಕೆಂದು ಅವಶ್ಯಕತೆ ಇದ್ದರೆ ಹೇಳುತ್ತೇನೆ ಎನ್ನುವಂತಹ ಪ್ರಭಾವಳಿಗಳ ಮೂಲಕ ತನ್ನ ಕೇಶವ ಕೃಪದಲ್ಲಿ ಆಡಳಿತದ ರೀತಿನೀತಿಗಳನ್ನು ರೂಪಿಸುತ್ತದೆ. ಈ ಮೂಲಕ ಬಿಜೆಪಿ ಸರ್ಕಾರದ, ಮಂತ್ರಿಮಂಡಲದ ಎಲ್ಲಾ ನಿರ್ಣಯಗಳೂ ತನ್ನ ಕಣ್ಣಳತೆಯಲ್ಲಿ ಜರಗುವ ಒಂದು ಸ್ವಾರ್ಥ ವ್ಯವಸ್ಥೆಯನ್ನು,ತನ್ನ ಸುತ್ತಲೂ ಇನ್ನಿಲ್ಲದ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಇವರು ಈ ಮೂಲಕ ಸಂವಿಧಾನದಡಿಯಲ್ಲಿ  ಆಯ್ಕೆಗೊಂಡ ಒಂದು ಪ್ರಜಾಸತ್ತಾತ್ಮಕ ಸರ್ಕಾರವನ್ನು ತಮ್ಮ ಕಿರುಬೆರಳಿನಲ್ಲಿ ಕುಣಿಸುತ್ತ ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳುತ್ತಾರೆ.

ಅತ್ಯಂತ ಖಂಡನಾರ್ಹವಾದ ಇಂತಹ ನಡುವಳಿಕೆಗಳು ಸಂವಿಧಾನದ ಆಶಯಗಳನ್ನೇ ನಾಶಗೊಳಿಸುತ್ತವೆ. ಇದರ ದುರಂತ ಅಧ್ಯಾಯವೇ ತಾವು ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರಿಂದ ಆಯ್ಕೆಯಾಗಿದ್ದರಿಂದ, ತಾವೂ ಉತ್ತರಿಸಬೇಕಾಗಿದ್ದರೆ ಪ್ರಜೆಗಳಿಗೆ ಮಾತ್ರ, ತಾವು ತಮ್ಮ ಭಿನ್ನಪ್ರಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕಾಗಿರುವುದು ಅಧಿಕಾರದಲ್ಲಿರುವ ತಮ್ಮ ಪಕ್ಷದ ಮಿತಿಯೊಳಗೆ ಎನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರಕ್ಕೆ ಸಂಪೂರ್ಣ ತಿಲಾಂಜಲಿಯಿಟ್ಟು  ಈ ಬಿಜೆಪಿ ಶಾಸಕರು ಹಾಗು ಮಂತ್ರಿಗಳು ಹಾಗೂ  ಮುಖ್ಯಮಂತ್ರಿಗಳು ಸೀನಿದ್ದಕ್ಕೂ, ಕೆಮ್ಮಿದ್ದಕ್ಕೆಲ್ಲ ಆರ್.ಎಸ್.ಎಸ್. ಕೇಶವಕೃಪಕ್ಕೆ ಎಡೆತಾಕುತ್ತಿರುವುದನ್ನು ನಾವೆಲ್ಲ ತೀವ್ರವಾಗಿ ವಿರೋಧಿಸಲೇಬೇಕಾಗುತ್ತದೆ. ಇವರೆಲ್ಲರ ಈ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಪ್ರಶ್ನಿಸಿಲೇಬೇಕಾಗಿದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -3)

– ಡಾ.ಎನ್.ಜಗದೀಶ ಕೊಪ್ಪ

ನೈನಿತಾಲ್ನಲ್ಲಿ ಕಾರ್ಬೆಟ್  ಜನಿಸಿದ್ದು 1875ರ ಜುಲೈ25ರಂದು. ಆತನ ತಾಯಿ ಮೇರಿಗೆ ಇದು 12ನೇ ಹೆರಿಗೆ (ಆಕೆಯ ಮೊದಲ ಪತಿಯ ನಾಲ್ಕು ಮಕ್ಕಳು ಸೇರಿ) ಮೇರಿಯ 38 ನೆ ವಯಸ್ಸಿಗೆ ಜನಿಸಿದ ಈತನ ನಿಜ ನಾಮಧೇಯ ಎಡ್ವರ್ಡ್  ಜೇಮ್ಸ್ ಕಾರ್ಬೆಟ್  ಎಂದು. ಆದರೆ ಕುಟುಂಬದ ಸದಸ್ಯರೆಲ್ಲಾ ಪ್ರೀತಿಯಿಂದ ಕರೆಯತೊಡಗಿದ ಜಿಮ್ ಎಂಬ ಹೆಸರು ಆತನಿಗೆ ಶಾಶ್ವತವಾಗಿ ಉಳಿದುಹೋಯಿತು.   ತಾಯಿಯ ಹೆರಿಗೆಗೆ ಸೂಲಗಿತ್ತಿ ಗಿತ್ತಿಯಾಗಿ ಕೆಲಸ ಮಾಡಿದವಳು ಕಾರ್ಬೆಟ್‌ನ ಮೊದಲನೇ ಮಲ ಅಕ್ಕ ಎಂಜಿನಾ. ಹೆರಿಗೆ ವೇಳೆಯಲ್ಲಿ ಈತನ ತಾಯಿ ಬದುಕುವ ಸಂಭವವೇ ಇರಲಿಲ್ಲ. ಚೇತರಿಸಿಕೊಂಡ ಈಕೆ ಮತ್ತೇ ಎರಡು ವರ್ಷದಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದಳು.

ಇಡೀ ಕಾರ್ಬೆಟ್  ಕುಟುಂಬವೇ ಒಂದು ಶಾಲೆಯ ಮಾದರಿಯಲ್ಲಿ ಇತ್ತು. ಕುಟುಂಬದಲ್ಲಿ ಈ ದಂಪತಿಗಳ ಮೊದಲ ವಿವಾಹದ ಮಕ್ಕಳೂ ಸೇರಿದಂತೆ 14 ಮಕ್ಕಳನ್ನು ಸಾಕುವ ಸಲುಹುವ ಹೊಣೆಗಾರಿಕೆಯಿತ್ತು. ಅದನ್ನು ಇ ದಂಪತಿಗಳು ಸಮರ್ಥವಾಗಿ ನಿರ್ವಹಿಸಿದರು. ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ವಿಲಿಯಮ್ಸ್ ನ ಮೊದಲ ಮಗ ಥಾಮಸ್ ತಂದೆಯ ಕಚೇರಿಯಲ್ಲೇ  ಜ್ಯೂನಿಯರ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರಿಂದ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಎಲ್ಲರೂ ವೈದ್ಯ ಮತ್ತು ಇಂಜಿನಿಯರ್ ವೃತ್ತಿಯಲ್ಲಿ ಪದವಿಗಳಿಸಿ ದೇಶ ವಿದೇಶಗಳಲ್ಲಿ ಉದ್ಯೋಗ ದೊರಕಿಸಿಕೊಂಡರು.

ಕ್ರಿಸ್ಟೊಫರ್‌ನ ಅಕ್ಕಳ ಪತಿ ಅನಿರೀಕ್ಷಿತವಾಗಿ ತೀರಿ ಹೋದ್ದರಿಂದ ಆಕೆಯು ಸೇರಿದಂತೆ ನಾಲ್ವರು ಮಕ್ಕಳನ್ನು ಸಲುಹುವ ಜವಬ್ದಾರಿ ಕಾರ್ಬೆಟ್  ಕುಟುಂಬದ ಮೇಲೆ ಬಿತ್ತು. ಆ ವೇಳೆಗೆ ಕಾರ್ಬೆಟ್  ನ ತಂದೆ ಕ್ರಿಸ್ಟೊಫರ್‌ಗೆ  ನಿವೃತ್ತಿಯಾಗಿ ಪಿಂಚಣಿ ಹಣದಲ್ಲಿ ಸಂಸಾರ ಸಾಕುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿಂತವಳು ಕಾರ್ಬೆಟ್  ತಾಯಿ ಮೇರಿ.

ತನ್ನ ಮೊದಲ ವಿವಾಹದಲ್ಲಿ ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳ ಜೊತೆ ಹೋರಾಟದ ಬದುಕನ್ನ ಕಟ್ಟಿಕೊಂಡಿದ್ದ ಮೇರಿಗೆ ಸವಾಲುಗಳನ್ನು ಎದುರಿಸುತ್ತಾ ಜೀವನ ನಿರ್ವಹಣೆ ಮಾಡುವ ಅನುಭವ ಇದ್ದುದರಿಂದ ಆಕೆ ಎದೆಗುಂದಲಿಲ್ಲ. ಆಗ ತಾನೆ ಹೊರಜಗತ್ತಿಗೆ ತೆರೆದುಕೊಳ್ಳುತಿದ್ದ ನೈನಿತಾಲ್ನಲ್ಲಿ ಖಾಲಿ ನಿವೇಶನಗಳನ್ನ ಖರೀದಿಸಿ ಅಲ್ಲಿ ಮನೆಗಳನ್ನ ನಿರ್ಮಿಸಿ ಮಾರುವ ವ್ಯವಹಾರಕ್ಕೆ ಇಳಿದಳು. ಅಲ್ಪ ಕಾಲದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ವಿಯಾದಳು. ಲಾಭದ ಹಣವನ್ನು ಮತ್ತೆ ಭೂಮಿಗೆ ಹಾಕುತಿದ್ದ ಮೇರಿ, ಮನೆಗಳು ಮಾರಾಟವಾಗದಿದ್ದ ಸಮಯದಲ್ಲಿ ಅವುಗಳನ್ನು ಬೇಸಿಗೆಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅಲ್ಪ ಸಮಯಕ್ಕೆ ಬಾಡಿಗೆ ನೀಡುತಿದ್ದಳು. ಅಲ್ಲದೆ, ನೈನಿತಾಲ್ನಲ್ಲಿ ಮನೆಗಳನ್ನು ಹೊಂದಿ ಉದ್ಯೋಗದ ಮೇಲೆ ಹೊರ ಜಾಗಗಳಿಗೆ ಹೋಗಿರುವ ಆಂಗ್ಲರ ಮನೆಗಳನ್ನು ಪಡೆದು ಕಮಿಷನ್ ಆಧಾರದ ಮೇಲೆ ಬಾಡಿಗೆಗೆ ನೀಡುತಿದ್ದಳು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಮೇರಿಯ ರಿಯಲ್ ಎಸ್ಟೇಟ್ ವ್ಯವಹಾರ ಕಾರ್ಬೆಟ್  ಕುಟುಂಬಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿತು.

ನಿವೇಶನಗಳ ಜೊತೆಗೆ ಹಳೆಯ ಮನೆಗಳನ್ನು ಖರೀದಿಸಿ ಅವುಗಳನ್ನು ನವೀಕರಿಸಿ ಮಾರಾಟ ಮಾಡುತಿದ್ದಳು. ಮನೆ ನಿರ್ಮಾಣದ  ಕಚ್ಚಾ ಸಾಮಾಗ್ರಿಗಳನ್ನು ದೂರದ ಊರುಗಳಿಂದ ಕೊಂಡು ತರುವುದನ್ನು ತಪ್ಪಿಸಲು ತಾನೇ ನೈನಿತಾಲ್ನಲ್ಲಿ ಅಂಗಡಿಯೊಂದನ್ನು ತೆರೆದಳು. ಈಕೆಯ ವ್ಯವಹಾರ ಕುಶಲತೆ, ಮತ್ತು ಸ್ಥಳೀಯ ಆಂಗ್ಲರಿಗೆ ನೆರವಾಗುವ ಶೈಲಿ ಇವೆಲ್ಲವೂ ಮೇರಿಯನ್ನು ನೈನಿತಾಲ್ ಗಿರಿಧಾಮದ ಪಟ್ಟಣದ ಗೌರವಾನ್ವಿತ ಮಹಿಳೆಯಾಗಿ ರೂಪಿಸಿದವು.

ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಕೂಡ ನೈನಿತಾಲ್ ಪಟ್ಟಣದ ಹಿರೀಯ ಹಾಗೂ ಗೌರವಾನ್ವಿತ ನಾಗರೀಕನಾಗಿ, ಅಲ್ಲಿನ ಪುರಸಭೆಯ ಪ್ರಾರಂಭಕ್ಕೆ ಕಾರಣನಾದುದಲ್ಲದೆ ಹಲವಾರು ವರ್ಷಗಳ ಕಾಲ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದನು. ಅಲ್ಲಿನ ಮನೆಗಳಿಂದ ಹೊರಬೀಳುವ ಕೊಳಚೆ ನೀರು ನೈನಿತಾಲ್ ಸರೋವರಕ್ಕೆ ಸೇರಿ ಕಲ್ಮಶವಾಗದಂತೆ ತಡೆಗಟ್ಟಲು ಪ್ರಥಮವಾಗಿ ಆಲೋಚಿಸಿದವನು ಕ್ರಿಸ್ಟೊಫರ್. ( ನಂತರ ಮುಂದಿನ ದಿನಗಳಲ್ಲಿ ಮಗ ಜಿಮ್ ಕಾರ್ಬೆಟ್  ಇದೇ ಪುರಸಭೆಯ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಭಾರತದಲ್ಲೇ ಪ್ರಥಮಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿದನು.)

ಕಾರ್ಬೆಟ್   ಕುಟುಂಬ ನೈನಿತಾಲ್ ನಲ್ಲಿ ಸುಖಮಯ ಜೀವನ ಸಾಗಿಸುತಿದ್ದಾಗಲೇ, 1880ರಲ್ಲಿ ನೈಸರ್ಗಿಕ  ದುರಂತವೊಂದು ಸಂಭವಿಸಿತು. ಆ ವರ್ಷದ ಸೆಪ್ಟಂಬರ್ 16 ರಂದು ಸತತ 40 ಗಂಟೆಗಳ ಕಾಲ ಬಿದ್ದ ಮಳೆಯಿಂದಾಗಿ ಇವರು ವಾಸವಾಗಿದ್ದ ನೈನಿತಾಲಿನ  ಕೇಂದ್ರ ಭಾಗದ ಬಝಾರ್ ರಸ್ತೆ ಸಮೀಪದ  ಗುಡ್ಡದ ಬಹುಭಾಗ ಕುಸಿದುಬಿತ್ತು. ಇದರಿಂದಾಗಿ ಕಾರ್ಬೆಟ್   ಕುಟುಂಬಕ್ಕೆ ಆದಾಯ ತರುತಿದ್ದ ಅನೇಕ ಬಾಡಿಗೆ ಮನೆಗಳು ನೆಲಸಮವಾದವು. ಇದರಿಂದ ವಿಚಲಿತರಾದ ಕಾರ್ಬೆಟ್   ತಂದೆ ತಾಯಿ ಅಲ್ಲಿದ್ದ ತಮ್ಮ ಮನೆಯನ್ನು ಮಾರಿ ಸರೋವರದ ಪೂರ್ವ ದಿಕ್ಕಿನಲ್ಲಿದ್ದ ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸತೊಡಗಿದರು. ಇಲ್ಲಿ ಸೂರ್ಯನ ಉದಯವಾಗಲಿ ಅಥವಾ ಬಿಸಿಲಾಗಲಿ ಇವುಗಳ ದರ್ಶನವಾಗುವುದೇ ಕಷ್ಟಕರವಾಗಿತ್ತು. ಆನಂತರ ಅದೇ ಪ್ರದೇಶದ ಬಹು ದೂರ ದಕ್ಷಿಣ ದಿಕ್ಕಿನಲ್ಲಿದ್ದ ಪುರಾತನ ಮನೆಯೊಂದನ್ನ ಖರೀದಿಸಿ, ಸಂಪೂರ್ಣ ನವೀಕರಿಸಿ ಅದಕ್ಕೆ ಗಾರ್ನ್ ಹೌಸ್ ಎಂದು ನಾಮಕರಣ ಮಾಡಿ ಹೊಸ ಬಂಗಲೆಗೆ ಸ್ಥಳಾಂತರಗೊಂಡರು. ಮುಂದೆ ಕಾರ್ಬೆಟ್  ಕುಟುಂಬಕ್ಕೆ ಇದೇ ಶಾಶ್ವತ ನೆಲೆಯಾಯಿತು.

ಕಾರ್ಬೆಟ್  ಜನಿಸಿದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಬಡತನವಿರಲಿಲ್ಲ. ಆತನ ತಾಯಿ ತನ್ನ ವ್ಯವಹಾರ ಕುಶಲತೆಯಿಂದ ಇಡೀ ಕುಟುಂಬ ನೆಮ್ಮದಿಯಿಂದ ಬದುಕುವ ಹಾಗೆ ಆದಾಯದ ಮಾರ್ಗಗಳನ್ನ ರೂಪಿಸಿದ್ದಳು. ಕಾರ್ಬೆಟ್  ಪುಟ್ಟ ಬಾಲಕನಾಗಿದ್ದಾಗ ಅವನ ಮಲ ಸಹೋದರರು, ಸಹೋದರಿಯರು, ಪ್ರೌಢವಸ್ಥೆಗೆ ತಲುಪಿದ್ದರು. ಅವನ ಸ್ವಂತ ಸಹೋದರರು ಅವನಿಗಿಂತ 10-12 ವರ್ಷ ಹಿರಿಯರಾಗಿದ್ದರು ಹಾಗಾಗಿ ಅವನ ಬಾಲ್ಯದ ಒಡನಾಟವಲ್ಲಾ ಅವನಿಗಿಂತ ಒಂದು ವರ್ಷ ಹಿರಿಯವಳಾದ ಅಕ್ಕ ಮ್ಯಾಗಿ ಜೊತೆ ಸಾಗುತಿತ್ತು. ಅಕ್ಕನಿಗೂ ತಮ್ಮ ಜಿಮ್ ಎಂದರೆ ಎಲ್ಲಿಲ್ಲದ ಅಕ್ಕರೆ. ದಿನದ 24 ಗಂಟೆಯೂ ಒಬ್ಬರಿಗೊಬ್ಬರು ಅಂಟಿಕೊಂಡು ಇರುತಿದ್ದರು. ಹಾಗಾಗಿ ಇವರ ತಾಯಿ ಮೇರಿ ಇವರಿಬ್ಬರಿಗೂ ಬ್ರೆಡ್- ಜಾಮ್ ಎಂದು ಅಡ್ಡ ಹೆಸರೊಂದನ್ನು ಇಟ್ಟಿದ್ದಳು. ಸೋಜಿಗವೆಂಬಂತೆ ಇವರಿಬ್ಬರೂ ತಮ್ಮ ಕಡೆಯ ಉಸಿರು ಇರುವ ತನಕ ಹಾಗೆಯೇ ಉಳಿದರು. ತಮ್ಮನ ಮೇಲಿನ ಪ್ರೀತಿಯಿಂದ ಅಕ್ಕ ಅವಿವಾಹಿತಳಾಗಿ ಅವನ ಆಸರೆಗೆ ನಿಂತಳು. ತಮ್ಮ ಕಾರ್ಬೆಟ್   ಕೂಡ ಅಕ್ಕನ ತ್ಯಾಗಕ್ಕೆ ಮನಸೋತು ತಾನೂ ಕೂಡ ಅವಿವಾಹಿತನಾಗಿ ಉಳಿದು ಬದುಕಿನುದ್ದಕ್ಕೂ ಆಕೆಯ ನೆರಳಿನಂತೆ ಬದುಕಿದ.

ನೈನಿತಾಲ್ ಹಾಗು ಕಲದೊಂಗಿಯಲ್ಲಿ ವಾಸವಾಗಿದ್ದ ಆಂಗ್ಲ ಮನೆತನಗಳ ಪೈಕಿ ಸುಸಂಸ್ಕೃತ ಕುಟುಂಬವಾಗಿದ್ದ ಕಾರ್ಬೆಟ್‌ನ  ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಬಾಲ್ಯದಲ್ಲಿ ಅವನ ಪಾಲನೆ, ಪೋಷಣೆ ನೋಡಿಕೊಳ್ಳಲು ಅವನ ತಾಯಿ ಮನೆತುಂಬಾ ಸೇವಕಿಯರನ್ನ ನೇಮಿಸಿದ್ದಳು. ಕಾರ್ಬೆಟ್  ಗೆ ಬಾಲ್ಯದಿಂದಲೇ ಏಕಕಾಲಕ್ಕೆ ಎರಡು ಸಂಸ್ಕೃತಿಯನ್ನು ಗ್ರಹಿಸಲು ಸಾಧ್ಯವಾಯಿತು. ತನ್ನ ಮನೆಯ ವಾತಾವರಣ ಸಂಪೂರ್ಣ ಇಂಗ್ಲೀಷ್ಮಯವಾಗಿತ್ತು. ಅವನ ಆಹಾರ ಉಡುಪು ಎಲ್ಲವೂ ಆಂಗ್ಲ ಮಕ್ಕಳಂತೆ ಇದ್ದವು ನಿಜ. ಆದರೆ ಅವನು ಬೆಳೆದಂತೆ ಅವನಿಗೆ ಅರಿವಿಲ್ಲದಂತೆ ಭಾರತೀಯ ಸಂಸ್ಕೃತಿಯ ಬೀಜಗಳು ಅವನೆದೆಯಲ್ಲಿ ನೆಲೆಯೂರಿದ್ದವು. ಕಾರ್ಬೆಟ್   ಗೆ  ಭಾರತೀಯರು, ಅದರಲ್ಲೂ ಹಳ್ಳಿಗಾಡಿನ ಬಡಜನತೆಯ ಬಗ್ಗೆ ಅಷ್ಟೋಂದು ಅಕ್ಕರೆ ಏಕೆ? ಎಂಬುದಕ್ಕೆ ನಮಗೆ ಉತ್ತರ ಸಿಗುವುದು ಇಲ್ಲೇ.

ಕಾರ್ಬೆಟ್  ನ ತಾಯಿ ಮೇರಿಯ  ರಿಯಲ್ಎಸ್ಟೇಟ್ ವೈವಹಾರ ದೊಡ್ಡದಾಗುತಿದ್ದಂತೆ ಆಕೆ ಮಕ್ಕಳ ಪಾಲನೆಗೆ ಸ್ಥಳೀಯ ಬಡ ಹೆಣ್ಣುಮಕ್ಕಳನ್ನು. ನೇಮಕ ಮಾಡಿಕೊಂಡಿದ್ದಳು. ಇವರೆಲ್ಲಾ ಬಾಲಕ ಕಾರ್ಬೆಟ್   ಅತ್ತಾಗ ಕಣ್ಣೀರು ಒರೆಸಿ, ಹಸಿವಾದಾಗ ಅನ್ನ ತಿನ್ನಿಸಿ, ತಮ್ಮ ಮಾತೃ ಬಾಷೆಯಾದ ಕುಮಾವನ್ ವೈಖರಿಯ ಹಿಂದಿ ಭಾಷೆಯಲ್ಲಿ ಅವನಿಗೆ ಜೋಗುಳವಾಡಿದರು. ಮಲ ವಿಸರ್ಜಿಸಿದಾಗ  ಹೆತ್ತ ತಾಯಿಯಂತೆ ಬೇಸರಿಸದೆ ಅವನ ಅಂಡು ತೊಳೆದರು, ಆಟವಾಡುತ್ತಾ ಮೈ ಕೈ ಕೊಳೆ ಮಾಡಿಕೊಂಡಾಗ ಅವನಿಗೆ ಸ್ನಾನ ಮಾಡಿಸಿ ಹೊಸ ಪೋಷಾಕು ಹಾಕಿದರು. ಇದರಿಂದಾಗಿ ತನ್ನ ಮನೆಯ ಸಂಸ್ಕೃತಿಯ ಜೊತೆ ಜೊತೆಗೆ ಇನ್ನೋಂದು ಭಾಷೆ ಮತ್ತು ಸಂಸ್ಕೃತಿಗೆ ಕಾರ್ಬೆಟ್   ತನಗರಿವಿಲ್ಲದಂತೆ ತೆರೆದುಕೊಂಡ. ಆ ಬಡ ಹೆಣ್ಣುಮಕ್ಕಳ ಪ್ರೀತಿ ಅವನೆದೆಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು ಇದು ಅವನ ಬದುಕಿನುದ್ದಕ್ಕೂ ಬಡವರಿಗೆ ನೆರವಾಗಲು ಪ್ರೇರಣೆಯಾಯಿತು.

ಕಾರ್ಬೆಟ್   ನ ಪ್ರಾಥಮಿಕ ವಿದ್ಯಾಭ್ಯಾಸ ನೈನಿತಾಲ್ನಲ್ಲೇ ನಡೆಯಿತು. ಮನೆಯಲ್ಲಿ ಹಿರಿಯವರಾಗಿದ್ದ ಆತನ  ಅಣ್ಣಂದಿರು, ಅಕ್ಕಂದಿರು ಅವನಿಗೆ ಪಾಠ ಹೇಳುವಲ್ಲಿ ನೆರವಾದರು. ಮನೆಯೊಳಗೆ ಭಾರತ ಮತ್ತು ಇಂಗ್ಲೇಂಡ್ ಇತಿಹಾಸದ ಕೃತಿಗಳು, ಛಾಸರ್ನ ಜಾನಪದ ಶೈಲಿಯ ಕೌತುಕದ ಕಥಾ ಮತ್ತು ಕವಿತೆಯ ಪುಸ್ತಕ ಮತ್ತು ವಿಲಿಯಮ್ ಷೇಕ್ಷ್ ಪಿಯರ್ನ ನಾಟಕಗಳು, ಇವೆಲ್ಲಕಿಂತ ಹೆಚ್ಚಾಗಿ ಆರ್ಯವೇದ ಮತ್ತು ಅಲೊಪತಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಸದಾ ಕೈಗೆಟುಕುವಂತೆ ಇರುತಿದ್ದವು. ಪಕ್ಷಿ ಪ್ರಾಣಿ ಕುರಿತಾದ ಸಚಿತ್ರ ಮಾಹಿತಿ ಪುಸ್ತಕಗಳು ಹೆಚ್ಚಾಗಿ ಅವನ ಗಮನ ಸೆಳೆದವು.

ಕಾರ್ಬೆಟ್  ಮೂರು ವರ್ಷದ ಬಾಲಕನಾಗಿದ್ದಾಗಲೇ ತನ್ನ ಹಿರಿಯಣ್ಣಂದಿರಲ್ಲಿ ಒಬ್ಬನಾಗಿದ್ದ ಜಾನ್ ಕ್ವಿಂಟಾನ್ ಕೈಹಿಡಿದು ನೈನಿ ಸರೋವರ, ಅಲ್ಲಿರುವ ನೈನಾದೇವಿಯ ದೇಗುಲ, ಬಝಾರ್ ರಸ್ತೆ ಇವುಗಳನ್ನ ಸುತ್ತು ಹಾಕುತಿದ್ದ. ತನ್ನ ಮನೆಗೆ ಅತಿ ಸನೀಹದಲ್ಲಿದ್ದ ಸರೋವರಕ್ಕೆ ಬರುವ ಬಗೆ ಬಗೆಯ ಪಕ್ಷಿಗಳೆಂದರೆ ಕಾರ್ಬೆಟ್ಗೆ ಎಲ್ಲಿಲ್ಲದ ಆಸಕ್ತಿ. ರಾತ್ರಿಯ ವೇಳೆ ತನ್ನ ಮನೆಯ ಸಮೀಪದ ಅರಣ್ಯದಲ್ಲಿನ ಹುಲಿ, ಚಿರತೆಗಳ ಘರ್ಜನೆಯ ಶಬ್ದಗಳನ್ನು ಕುತೂಹಲದಿಂದ ಆಲಿಸುತಿದ್ದ. ಅಪರೂಪಕ್ಕೆ ಅರಣ್ಯದಲ್ಲಿ ಆನೆಗಳ ಹಿಂಡು ಸಾಗುವ ದೃಶ್ಯವೂ ಅವನಿಗೆ ಲಭ್ಯವಾಗುತಿತ್ತು. ಹೀಗೆ ಬಾಲ್ಯದಿಂದ ನಿಸರ್ಗವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದ ಕಾರ್ಬೆಟ್  ನಿಗೆ ಮುಂದೆ ಅದು ಅವನ ಜೀವನದ ಹವ್ಯಾಸವಾಗಿ ಬೆಳೆದುಹೋಯಿತು.

ಕಾರ್ಬೆಟ್‌ನ ತಂದೆ ತಾಯಿಗಳಾದ ಕ್ರಿಸ್ಟೊಫರ್‌ ವಿಲಿಯಮ್ಸ್ ಹಾಗು ಮೇರಿಜನ್ ಇವರಿಗೆ ಕುಟುಂಬ ಕುರಿತಂತೆ ಯಾವುದೇ ಅಸ್ತಿರತೆ ಇರಲಿಲ್ಲ. ಕ್ರಿಸ್ಟೊಫರ್‌ ತನ್ನ ಮೊದಲ ಪತ್ನಿಯಿಂದ ಪಡೆದಿದ್ದ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಂಡ್ನಲ್ಲಿ ನೆಲೆಯೂರಿದ್ದರು. ಅದೇ ರೀತಿ ಮೇರಿ ತನ್ನ ಮೊದಲ ಪತಿಯಿಂದ ಪಡೆದು ಉಳಿದುಕೊಂಡಿದ್ದ ಏಕೈಕ ಪುತ್ರಿ ಎಂಜಿನಾಮೇರಿ ಶುಶ್ರೂಷಕಿಯಾಗಿ ಬ್ರಿಟಿಷ್ ಸಕರ್ಾರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಳು. ಉಳಿದ ಮಕ್ಕಳ ಶಿಕ್ಷಣ ಕೂಡ ಯಾವುದೇ ಅಡೆ ತಡೆಯಿಲ್ಲದೆ ಸಾಗುತಿತ್ತು.

ಕಾರ್ಬೆಟ್   ಕುಟುಂಬ ನೆಮ್ಮದಿಯ ಜೀವನ ಸಾಗಿಸುತಿದ್ದಾಗಲೇ 1881ರಲ್ಲಿ ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಹೃದಯಾಪಘಾತದಿಂದ ಮರಣ ಹೊಂದಿದ. ಕೇವಲ 59ನೆ ವಯಸ್ಸಿಗೆ ತೀರಿ ಹೋದ ಪತಿಯ ಸಾವು ಪತ್ನಿ ಮೆರಿಯ ಪಾಲಿಗೆ ಅನಿರೀಕ್ಷಿತ ಆಘಾತವಾಯಿತು.

ನೈನಿತಾಲ್ ಪಟ್ಟಣವನ್ನು ರೂಪಿಸುವಲ್ಲಿ ಅಪಾರ ಶ್ರಮ ವಹಿಸಿ, ಅಲ್ಲಿ ಪುರಸಭೆಯ ಸಂಸ್ಥಾಪಕಕನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ  ಕ್ರಿಸ್ಟೊಫರ್‌ ವಿಲಿಯಮ್ಸ್ ಬಗ್ಗೆ ಪಟ್ಟಣದ ನಾಗರೀಕರಲ್ಲಿ ಮತ್ತು ಅಲ್ಲಿ ವಾಸವಾಗಿದ್ದ ಆಂಗ್ಲರ ಕುಟುಂಬಗಳಲ್ಲಿ ವಿಶೇಷ ಗೌರವಗಳಿದ್ದವು. ಹಾಗಾಗಿ ನೈನಿತಾಲ್ ಹೃದಯ ಭಾಗದಲ್ಲಿದ್ದ ಚರ್ಚ್ ನಲ್ಲಿ ಆತನ ಪಾರ್ಥಿವ ಶರೀರಕ್ಕೆ ಎಲ್ಲಾ ಗಣ್ಯರು ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿ ಸಮೀಪದಲ್ಲಿ ಇದ್ದ ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಲಾಯಿತು. ಈಗ ಮುಚ್ಚಲ್ಪಟ್ಟಿರುವ ಆ ಸ್ಮಶಾನ ಭೂಮಿಯ ಮುಖ್ಯಬಾಗಿಲಿನ ಬಲಭಾಗದಲ್ಲಿ ಈಗಲೂ ಅವನ ಸಮಾಧಿಯನ್ನು ನಾವು ನೋಡಬಹುದು.

(ಮುಂದುವರೆಯುವುದು)