Monthly Archives: January 2012

ಕವಿಮನೆಯ ಬಗ್ಗೆ ಡಿ.ಎಸ್. ನಾಗಭೂಷಣ ದಂಪತಿಗಳ ಮಾತು…

-ರವಿ ಕೃಷ್ಣಾರೆಡ್ಡಿ

ಮೂರು ವರ್ಷ ಆಗುತ್ತ ಬಂತು. 2009 ರ ಮಾರ್ಚ್ 29 ರಂದು ಡಿ.ಎಸ್.ನಾಗಭೂಷಣ ದಂಪತಿಗಳು ಮತ್ತು ನಾನು ಉಡುಪಿಯಲ್ಲಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸಾಗುತ್ತ ರಾತ್ರಿ ಕುಪ್ಪಳ್ಳಿಯಲ್ಲಿ ಉಳಿದುಕೊಂಡಿದ್ದೆವು. ಮಾರನೆ ದಿನ ಕವಿಮನೆ, ಕವಿಶೈಲ, ಸಿಬ್ಬಲುಗುಡ್ಡೆ, ಮತ್ತಿತರ ಕೆಲವು ಸ್ಥಳಗಳನ್ನು ಸುತ್ತಾಡಿದ್ದೆವು. ಆಗ ನಾನು ಒಂದಷ್ಟು ವಿಡಿಯೊ ತೆಗೆದಿದ್ದೆ. ಹೀಗೇ ಕಾರಣಾಂತರಗಳಿಂದ ಅವನ್ನು ಸಂಕಲಿಸಿ ಯೂಟ್ಯೂಬ್‌ಗೆ ಹಾಕಲು ಆಗಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳಿಗೆ ತೊಡಗಿಕೊಂಡ ಪರಿಣಾಮವಾಗಿ ಈ  ವಿಡಿಯೊ ಸಿದ್ದಪಡಿಸಿದೆ.

ಇನ್ನು ಮುಂದೆ ವಾರಕ್ಕೆ ಒಂದೆರಡಾದರೂ ವಿಡಿಯೋಗಳನ್ನು ವರ್ತಮಾನದ ಮೂಲಕ ಸಿದ್ದಪಡಿಸಿ ಹಾಕಬೇಕಿದೆ. ಬರಹಗಳಷ್ಟೇ ಅಲ್ಲ, ನಾವು ಬಹುಮಾಧ್ಯಮ ಸಾಧ್ಯತೆಗಳಿಗೆ ಹೊರಳಬೇಕಿದೆ. ಈ ವಿಚಾರವಾಗಿ ನಿಮ್ಮ ಸಲಹೆ-ಸೂಚನೆಗಳಿಗೆ ಸ್ವಾಗತ.

ಕರ್ನಾಟಕದ ನಾಲ್ಕು ರಾಜಕಾರಣಿ ಬಣಗಳು

ಬಿ.ಶ್ರೀಪಾದ್ ಭಟ್

ಬಣ 1 :

60 ಹಾಗೂ 70 ರ ದಶಕದಲ್ಲಿ ತಮ್ಮರಾಜಕಾರಣ ಶುರು ಮಾಡಿದ ನಜೀರ ಸಾಬ್, ಕೆ.ಹೆಚ್.ರಂಗನಾಥ್, ಬಿ.ಎಲ್.ಗೌಡ, ಕೆಂಪೀರೆಗೌಡ, ಸಂಗಮೇಶ್ವರ ಸರ್ದಾರ, ಎ.ಲಕ್ಷ್ಮೀಸಾಗರ್, ಕಲ್ಲಣನವರ್, ಬಂಡೀ ಸಿದ್ದೇಗೌಡ, ವೈ.ಕೆ.ರಾಮಯ್ಯ  (ಇಲ್ಲಿ ಇನ್ನೂ ಅನೇಕ ಹೆಸರುಗಳನ್ನು ಸೇರಿಸಬಹುದು. ಇದು ಕೇವಲ ಉದಾಹರಣೆಗೆ) ರಂತಹ ಕರ್ನಾಟಕದ ರಾಜಕಾರಣಿಗಳು 80 ಹಾಗೂ 90ರ ದಶಕದ ಮಧ್ಯಭಾಗದವರೆಗೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

ಇವರಲ್ಲಿ ಕೆಲವರು ಕಾಂಗ್ರೆಸ್‌ನವರಾಗಿದ್ದರೆ, ಕೆಲವರು ಜನತಾ ಪಕ್ಷಕ್ಕೆ ಸೇರಿದ್ದರು. ಈ ವಿಭಿನ್ನ ಪಕ್ಷದ ಭಿನ್ನತೆ ಹೊರತುಪಡಿಸಿ ಇವರಲ್ಲಿ ಅನೇಕ ಸಾಮ್ಯತೆಗಳಿದ್ದವು. ಮೊದಲನೆಯದಾಗಿ ಇವರೆಲ್ಲ ಶೂದ್ರ, ಹಿಂದುಳಿದ, ದಲಿತ, ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು, ಸಂಕೋಚದ ವ್ಯಕ್ತಿತ್ವವುಳ್ಳವರು, ಆಕರ್ಷಕ ಮಾತುಗಾರರಾಗಿರಲಿಲ್ಲ, ರಾಜಕಾರಣಿಗಳಾಗಿದ್ದರೂ ಎಂದೂ ವೇದಿಕೆ ಮೇಲೆ ಅಸಂಖ್ಯ ಜನರನ್ನು ಮೋಡಿ ಮಾಡುವ ಭಾಷಣಕಾರರಾಗಿರಲಿಲ್ಲ, ರಾಜಕೀಯದಲ್ಲೂ ಎಂದೂ ಆರಕ್ಕೇರದ ಇವರು ಮಾನವತಾವಾದಿಗಳಾಗಿದ್ದರು, ಅನೇಕರು ಉತ್ತಮ, ದಕ್ಷ ಆಡಳಿತಗಾರರಾಗಿದ್ದರು, ಬಡಜನತೆಯ ಪರವಾಗಿ ಇವರ ಹೃದಯ ಪ್ರಾಮಾಣಿಕವಾಗಿ ಮಿಡಿಯುತ್ತಿತ್ತು.

ಇವರಲ್ಲಿ ಬಹುತೇಕರು ಆಷಾಡಭೂತಿತನದ, ಮೋಸದ ರಾಜಕಾರಣ ಕಂಡರೆ ಕೆಂಡಾಮಂಡಲವಾಗುತ್ತಿದ್ದರು. ಈ ಕಾರಣಕ್ಕೆ ಕೆಲವು ಬಾರಿ ವಿವಾದಕ್ಕೆ ಕಾರಣರಾಗಿದ್ದರು. ಆದರೆ ತಾವು ಸಚಿವರಾಗಿದ್ದ ಕಾಲದುದ್ದಕ್ಕೂ ಜನಪರ ಕೆಲಸಗಳನ್ನು ಮಾಡಿದ್ದರು. ಈ ಮೂಲಕ ತಮ್ಮ ಪ್ರೀತಿಯ ನಾಯಕರಾದ ಅರಸು, ಹೆಗಡೆಯವರಿಗೆ ಹೆಸರನ್ನು ತಂದುಕೊಟ್ಟಿದ್ದರು. ಇವರು ಎಂದೂ ಜಾತೀಯತೆ ಮಾಡಲಿಲ್ಲ, ಜಾತಿ ರಾಜಕಾರಣದಿಂದ ದೂರವಿದ್ದರು, ಗುಂಪುಗಳನ್ನು, ಹಿಂಬಾಲಕರನ್ನು, ಪುಢಾರಿಗಳನ್ನು ಕಟ್ಟಲಿಲ್ಲ ಹಾಗೂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ವಿಫುಲ ಅವಕಾಶಗಳಿದ್ದರೂ ಎಂದೂ ರಾಜಕೀಯವಾಗಿ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಇದರಿಂದಾಗಿಯೇ  ಯಾವುದೇ ಹಿಂದುಳಿದ ಜಾತಿಗಳ ಒಕ್ಕೂಟಗಳನ್ನು ಕಟ್ಟಲ್ಲಿಲ್ಲ. ಚಳುವಳಿ ಆಧಾರಿತ ಹೋರಾಟಗಳು ಇವರ ಪಾಲಿಗೆ ಒಗ್ಗುತ್ತಿರಲ್ಲಿಲ್ಲ. ಹಾಗಾಗಿಯೇ ಯಾವುದೇ ಜನ, ಜಾತಿ, ವರ್ಗ ಸಮುದಾಯದೊಂದಿಗೂ ಇವರ ಐಡೆಂಟಿಟಿ ಇರಲಿಲ್ಲ. ಕೇವಲ ವ್ಯಕ್ತಿಗತ ಪರಿಶುದ್ಧ, ಸರಳ ರಾಜಕಾರಣವೇ ಇವರ ಬಂಡವಾಳ.

ಇವರ ಈ ಎಲ್ಲ ಗುಣಗಳು ರಾಜಕೀಯ ಜೀವನದಲ್ಲಿ ಇವರನ್ನು ಭ್ರಷ್ಟಾಚಾರದ ಕಳಂಕದಿಂದ ಮುಕ್ತಿಗೊಳಿಸಿತ್ತು. ಆದರೆ ಇವೆಲ್ಲಕ್ಕಿಂತಲೂ ಇವರ ದೊಡ್ಡ ಸಾಧನೆ  ತಮ್ಮ ನಂಬಿದ ಆದರ್ಶಗಳನ್ನು ಬಿಟ್ಟುಕೊಡದೆ ಯಾವ ಆಮಿಷೆಗಳಿಗೆ ಬಲಿಯಾಗದೆ ಅತ್ಯಂತ ಬಿಕ್ಕಟ್ಟಿನ ಸಂಧರ್ಭದಲ್ಲೂ, ಅನೇಕ ಒತ್ತಡಗಳಿದ್ದರೂ ಕುಂಟುಂಬ ರಾಜಕಾ  ರಣವನ್ನು ಮಾಡಲೇ ಇಲ್ಲ. ಸ್ವಜನ ಪಕ್ಷಪಾತವೆನ್ನುವ ಹೊಲಸನ್ನು ಇವರೆಂದೂ ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದರ ಫಲವಾಗಿಯೇ ಇವತ್ತಿಗೂ ಇವರ ಮಕ್ಕಳು, ಬಂಧುವರ್ಗದವರಾರು ರಾಜಕೀಯದಲ್ಲಿಲ್ಲ. ಇದು ಅಂತಿಂಥ ಸಾಧನೆ ಏನಲ್ಲ. ಇದಕ್ಕಾಗಿ ಕರ್ನಾಟಕದ ಜನತೆ ಇವರಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತದೆ.

ಎರಡು ಬಾರಿ, ಮೂರು ಬಾರಿ ಗೆದ್ದು ಬಂದರೂ ತಮ್ಮ ರಾಜಕೀಯ ಕ್ಷೇತ್ರವನ್ನು ಎಂದೂ ಮೂಗಿನ ಮೇಲೆ ಬೆರಳಿಡುವಷ್ಟು ಬೆಳೆಸುವ, ಅಭಿವೃದ್ದಿಗೊಳಿಸುವ ಯಾವ ಕಾರ್ಯಕ್ರಮಗಳನ್ನೂ ಇವರು ಹಾಕಿಕೊಳ್ಳಲಿಲ್ಲ, ಹೀಗಾಗಿ ಇವರ ಅಧಿಕಾರದ ಅವಧಿಯಲ್ಲಿ ಇವರ ಶಾಸಕ ಸ್ಥಾನದ ಕ್ಷೇತ್ರಗಳು  ಎಂದೂ ಅಭೂತಪೂರ್ವ ಎನ್ನುವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲೇ ಇಲ್ಲ. ಇದಕ್ಕೆ ಮೂಲಭೂತ ಕಾರಣ ಇವರು ಸದಾಕಾಲ ಪೊರೆಯುವ ಜನಸಂಪರ್ಕದ ಕೊರತೆಯನ್ನು ಎದುರಿಸಿದ್ದು, ಹಾಗೂ ಎಂದಿಗೂ 24 ಗಂಟೆಗಳಲ್ಲದಿದ್ದರೂ ಕನಿಷ್ಟ 12 ಗಂಟೆಗಳ ಬಿಡುವಿಲ್ಲದ ರಾಜಕಾರಣ ಮಾಡುವ ಜಾಯಮಾನವೇ ಇವರದಾಗಿರಲಿಲ್ಲ. ಇವರು ಅತ್ಯಂತ ಜನಪ್ರಿಯರಾಗಿದ್ದರೂ ನಿಜವಾದ ಅರ್ಥದ ಜನನಾಯಕರಾಗಿರಲಿಲ್ಲವಾಗಿದ್ದರಿಂದ ವ್ಯವಸ್ಥೆಯೊಂದಿಗೆ ಸದಾಕಾಲವಲ್ಲದಿದ್ದರೂ ಅವಶ್ಯಕತೆ ಬಿದ್ದಾಗಲೆಲ್ಲ ಜಿದ್ದಾಜಿದ್ದಿ ನಡೆಸುವ ರಾಜಕೀಯ ಎದೆಗಾರಿಕೆ ಇವರಲ್ಲಿರಲ್ಲ. ರಾಜಕೀಯ ಬಿಕ್ಕಟ್ಟಿನ ಸಂಧರ್ಭಗಳಲ್ಲಿ (ಕಾಂಗ್ರೆಸ್ ಹೋಳಾದಾಗ, ತುರ್ತು ಪರಿಸ್ಥಿತಿ, ತಮ್ಮ ನಾಯಕ ಅರಸು ಅವರು ಕಾಂಗ್ರೆಸ್ ನಿಂದ ಹೊರ ಬಂದು ತಬ್ಬಲಿಯಾದಾಗ, ಜನತಾ ಪಕ್ಷ ವಿಘಟನೆಗಳ ಸರಮಾಲೆಯಲ್ಲಿ ಸಿಲುಕಿಕೊಂಡಾಗ, ರಾಮಕೃಷ್ಣ ಹೆಗಡೆ ಸ್ವಜನ ಪಕ್ಷಪಾತದ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದಾಗ) ಇವರೆಂದೂ ದಿಟ್ಟತನವನ್ನು ಪ್ರದರ್ಶಿಸಲಿಲ್ಲ. ಒಂದು ರೀತಿಯಲ್ಲಿ ಜಾಣ ಮೌನವನ್ನು ಆಶ್ರಯಸಿದ್ದರು. ಈ ಜಾಣ ಮೌನ ಆ ಕಾಲದಲ್ಲಿ  ಪ್ರಶ್ನಾರ್ಹ ಎನಿಸಿತ್ತು.

ಅನೇಕ ಸಾಮಾಜಿಕ ಸ್ಥಿತ್ಯಂತರಗಳು, ಜಾತೀಯ ದೌರ್ಜನ್ಯಗಳು ತಮ್ಮ ಕಾಲಘಟ್ಟದಲ್ಲಿ ನಡೆದಾಗಲೂ ಇವರು ವ್ಯಕ್ತಪಡಿಸಿದ ಅಸಹಾಯಕತೆ, ನಿರ್ಲಕ್ಷ್ಯತೆ ಕೂಡ ಪ್ರಶ್ನಾರ್ಹವೇ ಆಗಿತ್ತು. ರಾಜಕೀಯ ಇಚ್ಛಾಶಕ್ತಿಯನ್ನು ಸಂಪೂರ್ಣವಾಗಿ, ಅತ್ಯಂತ ದಿಟ್ಟತನದಿಂದ ಪ್ರಯೋಗಿಸಿದಾಗ ಮಾತ್ರ ಒಬ್ಬ ಜನನಾಯಕ ಮತ್ತೊಂದು ಅರ್ಥಪೂರ್ಣ ತಲೆಮಾರನ್ನು ಹುಟ್ಟಿಹಾಕಲು ಸಾಧ್ಯ ಎನ್ನುವ ರಾಜಕೀಯದ ಮೂಲ ಮಂತ್ರ ಈ ಬಣಕ್ಕೆ ಅರ್ಥವಾಗಿರಲಿಲ್ಲವೋ ಅಥವಾ ಎಂದಿನಂತೆ ನಮಗ್ಯಾತಕ್ಕೆ ಇದೆಲ್ಲ ಎನ್ನುವ ಧೋರಣೆಯೋ, ಕೊನೆಗೂ ಇವರಿಗೆ ರಾಜಕೀಯ, ಸಾಮಾಜಿಕ ಸಂಕೀರ್ಣತೆ, ಸ್ಥಿತ್ಯಂತರಗಳು, ಕಾಲ ಕಾಲಕ್ಕೆ ಬದಲಾಗುತ್ತಿರುವ ವಸ್ತುನಿಷ್ಟತೆ ಅರ್ಥವಾದಂತಿರಲಿಲ್ಲ. ಆದರೆ ರಾಜಕಾರಣಿ ಏನೆಲ್ಲ ಅದ್ಭುತ ಕಾರ್ಯಗಳನ್ನು, ಹೊಸ ಸಮಾಜವನ್ನು ಕಟ್ಟಲಿಕ್ಕಾಗುವಷ್ಟು, ಜೀವಪರ ಚಲನಶೀಲತೆಯನ್ನು ತರವಷ್ಟು ಧೀಮಂತ ನಾಯಕ ಆಗಿರಬೇಕು ಎನ್ನುವ ಸರ್ವಕಾಲದ ಆದರ್ಶದ ಅಪೇಕ್ಷಣೆಯೇ ಇಂದು ಕನಸಿನ ಗಂಟಾಗಿರುವ ಸಂಧರ್ಭದಲ್ಲಿ ಅಸಹಾಯಕನೂ, ನೀಚನೂ ಅಗದೆ ಕನಿಷ್ಟ ಇವರಷ್ಟಾದರೂ ಪ್ರಾಮಾಣಿಕವಾಗಿ ದುಡಿದು, ಬಾಳಿ ಬದುಕಬೇಕು ಎಂದು ಇಂದಿನ ತಲೆಮಾರಿಗೆ, ಮುಂದಿನ ತಲೆಮಾರಿಗೆ ಇವರನ್ನು ಮಾದರಿಯಾಗಿ ನಾವು ಅತ್ಯಂತ ಹೃತ್ಪೂರ್ವಕವಾಗಿ ಹೇಳಬಹುದು.

 

ಬಣ 2  :

ಮೇಲಿನ ಬಣಕ್ಕೆ ಹೋಲಿಸಿದರೆ ಸಂಪೂರ್ಣ ತದ್ವಿರುದ್ಧ ವ್ಯಕ್ತಿತ್ವದ, ರಾಜಕಾರಣಿಗಳು ದೇವೇಗೌಡ ಹಾಗೂ ದಿವಂಗತ ಎಸ್.ಬಂಗಾರಪ್ಪ. ರಾಜಕೀಯವಾಗಿ ಅತ್ಯಂತ ಮಹಾತ್ವಾಕಾಂಕ್ಷಿಗಳಾಗಿದ್ದ ಇವರಿಬ್ಬರೂ ಶೂದ್ರರ, ಹಿಂದುಳಿದ ವರ್ಗಗಳ ಪ್ರಶ್ನಾತೀತ ನೇತಾರರೆನಿಸಿಕೊಂಡವರು.

ಇವರು ಹಳ್ಳಿ ಮೂಲದ ಜಿಗುಟುತನದ, ಸರಳತೆ, ಆಷಾಢಭೂತಿತನವನ್ನು, ಪುಢಾರಿಗಿರಿಯನ್ನು ಕಂಡರೆ ಸದಾ ಸಿಡಿದೇಳುವ ಗುಣ, ಉಳುವವರ ಬಗೆಗೆ ಸದಾಕಾಲ ಚಿಂತಿಸುವ ಮನಸ್ಸು, ಯಾವುದಕ್ಕೂ ಬಗ್ಗದ ಆತ್ಮ ವಿಶ್ವಾಸ ಹಾಗೂ ಈ ನೆಲದ. ಈ ಮಣ್ಣಿನ ವ್ಯಕ್ತಿತ್ವವನ್ನು ಹೊಂದಿದ್ದರು. 80ರ ದಶಕದಲ್ಲಿ ಅತ್ಯಂತ ಸಮರ್ಥ ನಾಯಕರಾಗಿ ಹೊರಹೊಮ್ಮಿದ ದೇವೇಗೌಡರು ಅಂದಿಗೂ ಇಂದಿಗೂ ಅತ್ಯುತ್ತಮ ನೀರಾವರಿ ತಜ್ಞರೆಂದು ಪ್ರಖ್ಯಾತಿಯಾದವರು.  ರಾಜ್ಯದ ಪ್ರತಿಯೊಂದು ಜಿಲ್ಲೆಗಳ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಅರಿತಿದ್ದ ದೇವೇಗೌಡರು ಹಾಗೂ ಇದೇ ಮಾದರಿಯ ಮತ್ತೊಬ್ಬ ಧೀಮಂತ ನಾಯಕರಾಗಿದ್ದ ದಿವಂಗತ ಎಸ್.ಬಂಗಾರಪ್ಪ ಹಿಂದುಳಿದ ವರ್ಗಗಳಲ್ಲಿ ಸದಾ ಪ್ರಜ್ವಲಿಸುವ ಸ್ವಾಭಿಮಾನದ ಕಿಚ್ಚನ್ನು ತಂದುಕೊಟ್ಟಿದ್ದು ಸಾಮಾನ್ಯ ಸಂಗತಿಯೇನಲ್ಲ.

ತಮ್ಮ ಹಳ್ಳಿಯ ಮುಗ್ಧ, ಪ್ರಾಮಾಣಿಕ ವ್ಯಕ್ತಿತ್ವವನ್ನು ದೇವೇಗೌಡರು ದಣಿವರಿಯದ ನಿರಂತರ ಜನಸಂಪರ್ಕದ ರಾಜಕಾರಣದ ಮೂಲಕವೂ ಬಂಗಾರಪ್ಪನವರು ಸಮಾಜವಾದಿ ಹಿನ್ನೆಲೆಯಿಂದ, ಶಾಂತವೇರಿ ಗೋಪಾಲ ಗೌಡರ ನಾಯಕತ್ವದಿಂದ ಪಡೆದುಕೊಂಡಿದ್ದರು. ಸಕಾರಣವಾಗಿಯೆ ಇವರಿಗೆ ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಅರ್ಹರೂ ಎನ್ನುವ ಆತ್ಮವಿಶ್ವಾಸ ಹಾಗೂ ಇದು ಫಲಿಸುವ ಕಾಲವೂ ಕೂಡಿ ಬಂದಾಗ ಆಗ ಚಲಾವಣೆಯಲ್ಲೇ ಇಲ್ಲದ ರಾಮಕೃಷ್ಣ ಹೆಗಡೆ ಎನ್ನುವ ಬೋರ್ಡ್ ರೂಂ ರಾಜಕಾರಣಿ ಹಿಂಬಾಗಿಲಿನಿಂದ ಪ್ರವೇಶಿಸಿ ಮುಖ್ಯಮಂತ್ರಿ ಗದ್ದುಗೆಗೇರಿ ತಮ್ಮ ಕುಟಿಲ ನೀತಿಯ ಮೂಲಕ ಇವರಿಬ್ಬರಿಗೂ ಚೆಳ್ಳೆಹಣ್ಣು ತಿನ್ನಿಸಿದ್ದರು.

ಇವರಿಬ್ಬರನ್ನು 80ರ ದಶಕದುದ್ದಕ್ಕೂ ಕಾಡಿದ ಕನ್ನಡ ಮಾಧ್ಯಮಗಳ ಜಾತೀಯತೆ ಹಾಗೂ ಧೂರ್ತತನವಂತೂ ಕಣ್ಣಿಗೆ ರಾಚುವಷ್ಟು ಪ್ರಖರವಾಗಿತ್ತು. ( ಆ ದಶಕಗಳಲ್ಲಿ ಹೆಗಡೆಯವರೊಂದಿಗೆ ಸತತವಾಗಿ ಗುರುತಿಸಿಕೊಂಡ,) ಅವರನ್ನು ಸದಾ ಬೆಂಬಲಿಸಿ ಈ ಶೂದ್ರ, ಹಿಂದುಳಿದ ರಾಜಕಾರಣಿಗಳ ಬಗ್ಗೆ ಅಸಡ್ಡೆ ತೋರಿದ ನಮ್ಮ ಪ್ರೀತಿಯ, ಹೆಮ್ಮೆಯ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಈಗ ಬಂಗಾರಪ್ಪನವರು ತೀರಿಕೊಂಡನಂತರ ವಿಚಿತ್ರ ರೀತಿಯಲ್ಲಿ ರಾಗ ಬದಲಿಸಿ ಹಾಡುತ್ತಿರುವುದು ನಮ್ಮಂತಹವರಲ್ಲಿ ಬೆರಗನ್ನು, ಹತಾಶೆಯನ್ನು ಮೂಡಿಸಿದೆ.

ಆಗ ಲಂಕೇಶ್ ಪತ್ರಿಕೆ, ಮುಂಗಾರು,  ಪ್ರಜಾವಾಣಿಯಂತಹ ಪತ್ರಿಕೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲ ಮಾಧ್ಯಮಗಳು ಬೆನ್ನೆಲುಬಿಲ್ಲದ, ಕುತಂತ್ರ ರಾಜಕಾರಣಿ ಹೆಗಡೆಯವರನ್ನು ಅಟ್ಟದ ಮೇಲೆ ಕೂರಿಸಿ ಜನಗಳ ಮಧ್ಯದಿಂದ ರಾಜಕೀಯವನ್ನು ಮಾಡಿ ಜನನಾಯಕರೆನಿಸಿಕೊಂಡ ಇವರಿಬ್ಬರನ್ನೂ ಪದೇ ಪದೇ ಗೇಲಿಗೊಳಿಸುತ್ತ, ಹಂಗಿಸುತ್ತ ಹೆಗಡೆ ಒಬ್ಬ ವಿನಯವಂತ ರಾಜಕಾರಣಿಯಂತೆಯೂ, ಇವರು ಸೀನಿದರೆ ಅಕ್ಕರೆಯಿಂದ ಕೊಡೆ ಹಿಡಿದು, ದೇವೇಗೌಡ ಹಾಗೂ ಎಸ್.ಬಂಗಾರಪ್ಪ ಕೇವಲ ತಂಟೆಕೋರರಂತೆಯೂ, ಇವರಿಬ್ಬರೂ ಇಲ್ಲಿನ ಬರ ಪೀಡಿತ ಹಳ್ಳಿಗಳ ಬಗ್ಗೆ, ನೀರಾವರಿಯ ಅಗತ್ಯತೆಯ ಬಗ್ಗೆ ತಮ್ಮೆಲ್ಲ ಅನುಭವವನ್ನು ಬಳಸಿ ಮಾತನಾಡತೊಡಗಿದಾಗ ಇದೇ ಮಾಧ್ಯಮಗಳು ಇದನ್ನು ಬಂಡಾಯವೆನ್ನುವಂತೆಯೂ ಯಶಸ್ವಿಯಾಗಿ ಬಿಂಬಿಸಿದ್ದು ಇವರಿಬ್ಬರ ಆತ್ಮಪ್ರತಿಷ್ಠೆಗೆ ದೊಡ್ಡ ಬರೆಯನ್ನೇ ಎಳೆಯಿತು.

ಇದನ್ನು ಇವರಿಬ್ಬರೂ ತಮ್ಮ ಹಳ್ಳಿತನದ ಪ್ರಾಮಾಣಿಕತೆ, ಸರ್ವರಿಗೂ ಸಮಪಾಲನ್ನು ಬಯಸುವ ಪ್ರಾಮಾಣಿಕತೆಯನ್ನು ಬಳಸಿಕೊಂಡು ಮರಳಿ ತಮ್ಮ ಜನರ ಬಳಿಗೆ ಹೋಗುವುದರ ಬದಲು, ಆ ಮೂಲಕ ಮತ್ತೆ ತಮ್ಮ ರಾಜಕೀಯದ ಬುನಾದಿಯನ್ನು ಹಂತಹಂತವಾಗಿ ಕಟ್ಟುವುದರ ಬದಲು 90ರ ದಶಕದ ಅಂತ್ಯದ ವೇಳೆಗೆ ಸಾಮಾಜಿಕ ಸ್ಪರ್ಶವನ್ನು ನಿಧಾನವಾಗಿ ಕಳೆದುಕೊಳ್ಳುತ್ತ ಒಕ್ಕಲಿಗರೆಂದರೆ ಅವರು ಎಲ್ಲಾ ಜಾತಿಗಳಲ್ಲಿರುವ ವೃತ್ತಿಪರ, ಅಮಾಯಕ, ಅಸಹಾಯಕ ರೈತರು ಎನ್ನುವ ಮೂಲಭೂತ ತತ್ವವನ್ನೇ ಮರೆತು ಅವರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಜಾತಿಯಾಗಿ ಕಂಡ, ಸ್ವಂತದ, ಆದರ್ಶದ ಘನತೆಯೆಂದರೆ ಒಕ್ಕಲಿಗರ, ಸ್ವಂತ ಕುಟುಂಬದ ವರ್ಚಸ್ಸು ಹಾಗೂ ಅಧಿಕಾರವೆನ್ನುವ ಮಟ್ಟಕ್ಕೆ ತಲುಪಿದ ದೇವೇಗೌಡರು, 90ರ ದಶಕದ ಅಂತ್ಯದ ವೇಳೆಗೆ ತಮ್ಮ ಮೂಲ ಪ್ರಗತಿಪರ ಗುಣವಾದ ಎಲ್ಲಾ ಜಾತಿಯ ಬಡವರ ಪರ ಸದಾ ತುಡಿಯುವ ಹಳೇ ಕಾಲದ ತಮ್ಮ ವ್ಯಕ್ತಿತ್ವವನ್ನು ಜನನಾಯಕರಾಗುವ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ರಾಜಕೀಯ ಮುತ್ಸದ್ದಿತನವನ್ನೇ ಕಲಿಯದೆ ಕೇವಲ ವೈಯುಕ್ತಿಕ ಛಲವನ್ನೇ ಇನ್ನಿಲ್ಲದಂತೆ ನೆಚ್ಚಿ ಇದರ ಋಣಾತ್ಮಕ ಅಂಶಗಳನ್ನೇ ತಮ್ಮ ಆತ್ಮ ಪ್ರತ್ಯಯದ ಸದಾ ಕಾಲ ದುರಂತ ನಾಯಕನ ಪೋಸಿಗೆ ಬಳಸಿಕೊಂಡು ಸೋಲಿಲ್ಲದ ಸರದಾರರೆನ್ನುವ ಘೋಷಣೆಗೆ ಬಲಿಯಾಗಿ ಸಂಪೂರ್ಣವಾಗಿ ಹಾದಿ ತಪ್ಪಿದ ದಿವಂಗತ ಎಸ್.ಬಂಗಾರಪ್ಪ.

ಇವರಿಬ್ಬರೂ ತಮಗೆ ಸಹಜವಾಗಿ ದೊರೆತ ಜನನಾಯಕರ ಜನಪ್ರಿಯತೆಯ ಧನಾತ್ಮಕ ಅಂಶಗಳಿಗೆ ತಿಲಾಂಜಲಿಯಿಟ್ಟು, ಸ್ವತಹ ಪರಿಶ್ರಮದಿಂದ ಪಡೆದ ಈ ಜನನಾಯಕ ಜನಪ್ರಿಯತೆಯನ್ನು ಯಾರೂ ಕಂಡರಿಯದಂತಹ ಕುಂಟುಂಬ, ಸ್ವಜನ ಪಕ್ಷಪಾತದ ರಾಜಕಾರಣಕ್ಕೆ ಧಾರೆಯೆರೆದು ತಮ್ಮನ್ನು ನಂಬಿದ ಪಕ್ಷ, ಅಮಾಯಕ ಹಿಂಬಾಲಕರನ್ನು ಸಂಪೂರ್ಣ ಅಧೋಗತಿಗೆ ತಂದು ನಿಲ್ಲಿಸಿ ತಮ್ಮ ಜೀವಿತದ ಸಂಧ್ಯಾಕಾಲದ ವೇಳೆಗೆ ಸಂಪೂರ್ಣ ಆಸಹಾಯಕ ಸ್ಥಿತಿಗೆ ತಲುಪಿ ನಗೆಪಾಟಲಿಗೀಡಾಗಿದ್ದು ನಿಜಕ್ಕೂ ದುಖದ ಸಂಗತಿ. ಇಷ್ಟೇ ಅಲ್ಲ ತಮ್ಮ ಹುಂಬ ಛಲವನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಯಾರಿಗೋ ಪಾಠ ಕಲಿಸುತ್ತೇವೆ ಎನ್ನುವ ಹುಸಿ ಭ್ರಮೆಯಿಂದ ಅಧಿಕಾರಕ್ಕಾಗಿ ನೇಪಥ್ಯದಲ್ಲಿ ಹೊಂಚಿಹಾಕುತ್ತಿದ್ದ ಸಂಘ ಪರಿವಾರಕ್ಕೆ ಸಮರ್ಥ ರಾಜಕೀಯ ವೇದಿಕೆಯನ್ನು ನಿರ್ಮಿಸಿಕೊಟ್ಟರು. ಇಂತಹ ಸುವರ್ಣಾವಕಾಶವನ್ನು ಈ ಸಂಘ ಪರಿವಾರ ಕನಸಿನಲ್ಲಿಯೂ ನೆನಸಿರಲಿಲ್ಲ. ಆದರೆ ಈ ಜನನಾಯಕರು ತಮ್ಮ ರಾಜಕೀಯ ನೈತಿಕತೆಯನ್ನು ಅನಗತ್ಯವಾಗಿ ಬಲಿಕೊಟ್ಟು ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲನ್ನು ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ತೆರೆದು ಕೊಟ್ಟರು. ಇದಕ್ಕಾಗಿ ಇವರು ತೆತ್ತ ಬೆಲೆ ಅಪಾರವಾದದ್ದು ಹಾಗೆಯೇ ಕರ್ನಾಟಕದ ಜನತೆ ಕೂಡ. ಇವರಿಬ್ಬರಿಗೆ ಮೇಲಿನ ಬಣದ ತಮ್ಮ ಸಹೋದ್ಯೋಗಿಗಳ ಋಜು ಸ್ವಭಾವ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಏನೇ ಬಂದರು ಕುಟುಂಬ ರಾಜಕಾರಣವನ್ನು ಮಾತ್ರ ಪೋಷಿಸುವುದಿಲ್ಲ ಎನ್ನುವ ನೈತಿಕ ಛಲ ಸ್ವಲ್ಪವಾದರೂ ದಕ್ಕಿದ್ದರೆ, ಮೇಲಿನ ಬಣದ ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದ ನೈತಿಕತೆಯ ಪಾಲು ಸ್ವಲ್ಪವಾದರೂ ದಕ್ಕಿದ್ದರೆ….

 

ಬಣ  3 :

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂ.ಸಿ.ನಾಣಯ್ಯ, ಎಚ್.ಕೆ.ಪಾಟೀಲ, ಸಿಂಧ್ಯ, ಎಚ್.ಸಿ.ಮಹಾದೇವಪ್ಪ ಮುಂತಾದವರು. ಮೇಲಿನ ಎರಡೂ ಬಣಗಳ ವ್ಯಕ್ತಿತ್ವವನ್ನು ಅಷ್ಟಿಷ್ಟು ಪಡೆದುಕೊಂಡಂತಿರುವ ಇವರ ಬಗ್ಗೆ ಹೆಚ್ಚಿಗೆ ಹೇಳುವುದೇನಿದೆ?

ಇವರು ಸಂಘ ಪರಿವಾರದ ಕೋಮುವಾದ ರಾಜಕಾರಣಕ್ಕೆ ತಮ್ಮ ಸೆಕ್ಯುಲರ್ ವ್ಯಕ್ತಿತ್ವದ ಮೂಲಕವೇ ತಕ್ಕ ಉತ್ತರ ನೀಡಬಲ್ಲ ಛಾತಿಯುಳ್ಳವರು. ಆಡಳಿತಾತ್ಮಕವಾಗಿ ದಕ್ಷತೆಯನ್ನು, ಅಪಾರ ಅನುಭವವನ್ನು ಸಾಧಿಸಿರುವವರು. ರಾಜ್ಯದ ಹಣಕಾಸಿನ ಬಗ್ಗೆಯಾಗಲಿ, ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯಾಗಲೀ ಇವರು ಅಪಾರ ಜ್ಞಾನದಿಂದ ಮಾತನಾಡಬಲ್ಲರು. ಆದರೆ ಸಕ್ರಿಯ ರಾಜಕಾರಣಕ್ಕೆ ಅತ್ಯವಶ್ಯಕವಾಗಿರುವ ಸದಾಕಾಲ ಜನಸಂಪರ್ಕದ ತುರ್ತು ಅಗತ್ಯತೆ ಇವರಿಗೆ ಅಲರ್ಜಿ. ಏಕೆಂದರೆ ಇದಕ್ಕಾಗಿ ಕನಿಷ್ಟ 12 ಗಂಟೆಗಳ ರಾಜಕೀಯ ಮಾಡಬೇಕಾಗುತ್ತದೆ. ಅದು ಇವರಿಗಾಗದು. ಇವರ ಜನನಾಯಕನ ಖ್ಯಾತಿ ಮೇಲಿನ ಬಣ ಒಂದಂಕ್ಕಿಂತಲೂ ಕೊಂಚ ಜಾಸ್ತಿ ಹಾಗೂ ಮೇಲಿನ ಬಣ ಎರಡಕ್ಕಿಂತಲೂ ಕಡಿಮೆ. ಯಾವುದೇ ಕಾಲಕ್ಕೂ ಯಾರನ್ನು ಎದುರಿಸಿಯಾದರೂ ಸರಿಯೆ ನನ್ನ ಸ್ವಂತ ವ್ಯಕ್ತಿತ್ವ, ಛಲವನ್ನು ನೆಚ್ಚಿಯೇ ರಾಜಕೀಯ ಮಾಡುತ್ತೇನೆ ಹೊರತು ಇನ್ನೊಬ್ಬರ ಹಂಗಿನೊಳಗೆ ನೆಚ್ಚಿಕೊಂಡು ಮಾತ್ರ ಅಲ್ಲ ಎನ್ನುವ ರಾಜಕೀಯ ಛಲ ಮೇಲಿನ ಮೊದಲ ಬಣಕ್ಕಿಂತ ಸ್ವಲ್ಪ ಜಾಸ್ತಿ, ಎರಡನೇ ಬಣಕ್ಕಿಂತ ಕಡಿಮೆ. ಇವರ ಪ್ರಗತಿಪರ ಚಿಂತನೆಯ ಮನೋಭಾವ ಮೇಲಿನ ಎರಡೂ ಬಣಕ್ಕಿಂತಲೂ ಜಾಸ್ತಿ. ರಾಜಕೀಯದಲ್ಲಿ ಸದಾಕಾಲ ಎದುರಾಗುವ ಮುಂದೇನು ಮಾಡಬೇಕು ಎನ್ನುವ ನಿರಂತರ ಜಿಜ್ಞಾಸೆಯನ್ನು ಎದುರಿಸುವ, ನಿರ್ಧರಿಸುವ ಸ್ಪಷ್ಟತೆಯ ವಿಷಯದಲ್ಲಿ ಮೇಲಿನ ಎರಡೂ ಬಣಕ್ಕಿಂತಲೂ ಸಂಪೂರ್ಣ ಕಡಿಮೆ. ಇದು ಇವರಲ್ಲಿ ಅತ್ಯಂತ ದುರ್ಬಲ ರಾಜಕೀಯ ಇಚ್ಛಾಶಕ್ತಿಯ ಮನೋಭಾವವನ್ನು ಹುಟ್ಟಿಹಾಕಿ ಮಸಿ ಇಟ್ಟಂತೆ ಎಲ್ಲವನ್ನೂ ನುಂಗಿ ನೀರು ಕುಡಿದಿದೆ.

ಇಂದಿನ ಅತ್ಯಂತ ಹತಾಶೆಯ, ಸಂಧಿಗ್ಧ, ದಿಕ್ಕೆಟ್ಟ ಪರಿಸ್ಥಿತಿಯನ್ನು ಇವರು ತಮ್ಮ ಜಡತ್ವವನ್ನು ಕಳಚಿ ಸಂಪೂರ್ಣವಾಗಿ ಮೇಲೆದ್ದು ನಿರಂತರ ಜನಸಂಪರ್ಕದ ಮೂಲಕ ತಮ್ಮ ರಾಜಕೀಯ ಜೀವನದ ಪುನರುಜ್ಜೀವನಗೊಳಸಿಕೊಂಡರೆ ಇವರಿಗೆ ಸುವರ್ಣಾವಕಾಶ. ಆದರೆ ಕೊಟ್ಟ ಕುದುರೆಯನ್ನು ಏರಲು ನಿರಾಕರಿಸುತ್ತಾರೆ ಅಥವಾ ನಿರಾಕರಿಸಿದ್ದಾರೆ ಎನ್ನುವ ತಮ್ಮ ಮೇಲಿನ ಅಪಾದನೆಯಿಂದ ಹೊರಬರಲು ಇವರು ಪ್ರಯತ್ನಿಸಿದ ಯಾವುದೇ ನಿದರ್ಶನಗಳು ಇಲ್ಲ.

 

ಬಣ 4 :

ಕುಮಾರಸ್ವಾಮಿ, ಯಡಿಯೂರಪ್ಪ, ಶ್ರೀರಾಮುಲು ಹಾಗೂ ಮುಂತಾದವರು. ಮೊದಲಿಗೇ ಹೇಳಬಿಡಬೇಕು ಅನಾಯಾಸವಾಗಿ ಮೂರನೇ ಬಣದಲ್ಲಿರಬಹುದಾದಂತಹ ಜನಪ್ರಿಯ ರಾಜಕಾರಣಿ ಕುಮಾರಸ್ವಾಮಿ ತಮ್ಮ ಗೊಂದಲಗಳು, ಆತ್ಮಹತ್ಯಾತ್ಮಕ ನಿಲುವುಗಳು  ಮೂಲಕ ಸರ್ರನೆ ಈ ಭ್ರಷ್ಟ ನಾಲ್ಕನೇ ಬಣಕ್ಕೆ ಜಾರಿರುವುದು 21ನೇ ಶತಮಾನದ ಕರ್ನಾಟಕ ರಾಜಕೀಯದ ದುರಂತಗಳಲ್ಲೊಂದು. ಕೇವಲ ತಂತ್ರ ಹಾಗೂ ಪ್ರತಿ ತಂತ್ರಗಳನ್ನು ಹೆಣೆಯುತ್ತಾ ಎದುರಾಳಿಗಳನ್ನು ಅಡ್ಡಬೀಳಿಸುವುದೇ ಸಕ್ರಿಯ ರಾಜಕಾರಣ, ವೈಯುಕ್ತಿಕ ಭ್ರಷ್ಟಾಚಾರದ ಜೊತೆಗೆ ಸಂಪೂರ್ಣ ವ್ಯವಸ್ಧೆಯನ್ನೇ ಭ್ರಷ್ಟಾಚಾರಗೊಳಿಸಿದ ಅಪಕೀರ್ತಿ, ಕರ್ನಾಟದಲ್ಲಿ ಸದಾಕಾಲ ಅಧಿಕಾರ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವ ಪಾಳೇಗಾರಿಕೆ ಧೋರಣೆ, ನೈತಿಕ ರಾಜಕಾರಣದ ಬಗ್ಗೆ ಇನ್ನಿಲ್ಲದಂತಹ ಅಸಡ್ಡೆ ಹಾಗೂ ತಿರಸ್ಕಾರ, ರಾಜಕೀಯದಲ್ಲಿ ನೈತಿಕತೆ ಎನ್ನುವುದೇ ಕಸದ ಬುಟ್ಟಿಗೆ ಸಮ, ಕುಂಟುಂಬ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣವೆನ್ನುವುದು ಜನತೆಯ ಆಶೀರ್ವಾದದ ಮೂಲಕವೇ ಮಾಡುತ್ತಿದ್ದೇವೆ ಎನ್ನುವ ಹೂಂಕರಿಕೆ ಇಂತಹ ಅವಗುಣಗಳನ್ನು ಹೊಂದಿರುವ ಯಡಿಯೂರಪ್ಪ, ಶ್ರೀರಾಮುಲುರಂತಹವರ ರಾಜಕಾರಣಿಗಳು ಇವಕ್ಕೆ ಸಮವೆನ್ನುವಂತೆ ನಡೆದುಕೊಳ್ಳುತ್ತಿರುವ ಕುಮಾರಸ್ವಾಮಿ ಹಾಗೂ ಇವರ ಜೊತೆಗೆ ಸದಾಕಾಲ ಕಣ್ಣಾಮುಚ್ಚಾಲೆಯಾಟವಾಡುತ್ತ, ಅದರ ಖುಷಿಯನ್ನು ಅನುಭವಿಸುತ್ತ, ಇದನ್ನೇ ರಾಜಕಾರಣವೆನ್ನುವ ಭ್ರಮೆಯಲ್ಲಿರುವ, ಸುದ್ದಿಯಲ್ಲಿರುವ ಕುಮಾರಸ್ವಾಮಿಯವರ ರಾಜಕೀಯ ಎಲ್ಲವೂ ಬರುವ ವರ್ಷಗಳಲ್ಲಿ ಕರ್ನಾಟಕವನ್ನು ಮತ್ತಷ್ಟು ಅಂಧಕಾರಕ್ಕೆ, ಅಧೋಗತಿಗೆ ತಳ್ಳುವುದು ಗ್ಯಾರಂಟಿ. ಇವೆಲ್ಲವಕ್ಕೆ ಕಿರೀಟವಿಟ್ಟಂತೆ ಶ್ರೀರಾಮುಲು ಅವರು ಹಿಂದುಳಿದವರ ಏಳಿಗೆಗಾಗಿ ಸ್ಥಾಪಿಸುವ ಹೊಸ ಪಕ್ಷ ಆ ವರ್ಗದ ಅಮಾಯಕ ಜನತೆಯನ್ನು ಹಳ್ಳಕ್ಕೆ ಬೀಳಿಸುವುದು ಗ್ಯಾರಂಟಿ.

ಕೇವಲ ನೋಟುಗಳನ್ನು ಹಂಚುವುದೇ ಸಮಾಜಕಾರ್ಯವೆನ್ನುವುದನ್ನು ರಾಜಕೀಯ ಸಿದ್ಧಾಂತವನ್ನಾಗಿ ರೂಪಿಸಿರುವ ಶ್ರೀರಾಮುಲು ಹಾಗೂ ರೆಡ್ಡಿಯ ಬಳಗ ಬಳ್ಳಾರಿ ಭಾಗದ ಜನತೆಯನ್ನು ಕೂಡ ಇದಕ್ಕೆ ಸರಿಯಾಗಿ ಟ್ಯೂನ್ ಮಾಡಿಕೊಂಡಿರುವುದು ಹಾಗೂ ಈ ಮತಿಹೀನ ಹೊಸ ಪಕ್ಷದ ಮೂಲಕ ಇದು ಇನ್ನಷ್ಟು ಮುಂದುವರೆದು ಇನ್ನಿಲ್ಲದ ಹಂಗಿನ ಅನೈತಿಕ ಸ್ಥಿತಿಗೆ ಆ ಜಿಲ್ಲೆಯನ್ನು ಸಂಪೂರ್ಣವಾಗಿ ತಳ್ಳಿ ಇದೇ ತತ್ವವನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಕುಟಿಲ ಯೋಜನೆಗಳಿಗೆ ಮಿಕ್ಕವರಿಬ್ಬರೂ ಅಗಲೇ ಕಣ್ಣು ಮಿಟುಕಿಸುತ್ತಿರುವ ರೀತಿ, ಈ ಬಣದ ಮೂವರೂ ಮುಂದಿನ ದಿನಗಳ ರಾಜಕೀಯದ ಕಿಂಗ್ ಮೇಕರ್ ಗಳಾಗಿ ಬಿಂಬಿತವಾಗಿರುತ್ತಿರುವುದು, ಮೂರನೇ ಬಣದ ಜನರ ನಿಷ್ಕ್ರಿಯತೆ ಎಲ್ಲವೂ ರಾಜ್ಯದ ಪ್ರಜ್ಞಾವಂತರಿಗೆ, ನೈತಿಕತೆಗೆ ದೊಡ್ಡ ಸವಾಲಾಗುತ್ತವೆ.

ಹಾಗಿದ್ದರೆ ನಾವೇನು ಮಾಡಬೇಕು?

ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ

ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಶೇ.80 ರಷ್ಟನ್ನು ಕೃಷಿಗೆ ಬಳಸುತಿದ್ದರೆ, ಭಾರತದಲ್ಲಿ ಶೇ.90 ರಷ್ಟು ನೀರನ್ನು ಕೃಷಿಗೆ ವಿನಿಯೋಗಿಸಲಾಗುತ್ತಿದೆ. ಜಗತ್ತಿನಾದ್ಯಂತ ಕೃಷಿ ಉತ್ಪಾದನೆ ಪೈಕಿ ಶೇ.60 ರಷ್ಟು ಭಾಗ ನೀರಾವರಿ ಪ್ರದೇಶದಿಂದ ಬರುತ್ತಿದೆ.

19ನೇ ಶತಮಾನದ ಪ್ರಾರಂಭದಿಂದ ದೇಶಿ ತಂತ್ರಜ್ಞಾನದ ಜೊತೆಗೆ ಅವಿಷ್ಕಾರಗೊಂಡ ನೂತನ ತಂತ್ರಜ್ಞಾನಗಳೊಂದಿಗೆ ಜಲಾಶಯದ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಆರಂಭಿಸಲಾಯಿತು. ಭಾರತದ ಸಿಂಧೂ ಮತ್ತು ಗಂಗಾ ನದಿಯ ಪಾತ್ರದಲ್ಲಿ, ಈಜಿಪ್ಟ್‌ನ ನೈಲ್ ನದಿಯ ಪ್ರಾಂತ್ಯ, ಪಶ್ಚಿಮದ ಅಮೇರಿಕಾ, ಆಸ್ಷೇಲಿಯಾ ಮುಂತಾದ ದೇಶಗಳಲ್ಲಿ 1800 ರಿಂದ 1900 ರ ವೇಳೆಗೆ 44 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿತ್ತು. ಮುಂದಿನ 50 ವರ್ಷಗಳಲ್ಲಿ ಅತಿ ದೊಡ್ಡ ಅಣೆಕಟ್ಟುಗಳು ನಿರ್ಮಾಣವಾದ ನಂತರ ನೀರಾವರಿ ಪ್ರದೇಶ ದ್ವಿಗುಣಗೊಂಡಿತು. ಇದರ ಜೊತೆಗೆ 1960 ರಲ್ಲಿ ಅವಿಷ್ಕಾರಗೊಂಡ ನೂತನ ತಳಿಗಳು, ವಿಶೇಷವಾಗಿ ಭತ್ತ ಮತ್ತು ಗೋಧಿಯ ತಳಿಗಳಿಂದಾಗಿ ಜಗತ್ತಿನೆಲ್ಲೆಡೆ ಹಸಿರುಕ್ರಾಂತಿಗೆ ಕಾರಣವಾಯ್ತು.

1970 ರ ನಂತರ ನೀರಾವರಿ ಪ್ರದೇಶದ ವಿಸ್ತೀರ್ಣದ ವೇಗ ನಾಟಕೀಯವಾಗಿ ಬೆಳೆಯತೊಡಗಿತು.ಅಂತರರಾಷ್ಟೀಯ ನೀರಾವರಿ ಮತ್ತು ಒಳಚರಂಡಿ ಸಮಿತಿಯ ಅಧ್ಯಯನದ ಪ್ರಕಾರ 1985 ರಲ್ಲಿ 310 ಮಿಲಿಯನ್ ಹೆಕ್ಟೇರ್ ನೀರಾವರಿ ಪ್ರದೇಶವಿದ್ದದ್ದು 2000 ದ ಅಂತ್ಯದ ವೇಳೆಗೆ 420 ಮಿಲಿಯನ್ ಹೆಟ್ಕೇರ್ ಪ್ರದೇಶಕ್ಕೆ ವಿಸ್ತೀರ್ಣಗೊಂಡಿತ್ತು. ನಂತರ ಈ ಬೆಳವಣಿಗೆ ಕುಂಠಿತಗೊಂಡಿತು. ಫಲವತ್ತಾದ ಭೂಮಿಯ ಕೊರತೆ, ನೀರಾವರಿಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಜಲಾಶಯಗಳ ನಿರ್ಮಾಣಣ, ಮುಂತಾದ ಅಂಶಗಳು ಇದಕ್ಕೆ ಕಾರಣವಾದವು.
ಹಸಿರು ಕ್ರಾಂತಿಯ ಫಲವಾಗಿ ಪ್ರಾರಂಭದಲ್ಲಿ ಅತ್ಯಧಿಕ ಇಳುವರಿ ಸಿಕ್ಕಿತಾದರೂ, ಹೈಬ್ರಿಡ್ ತಳಿಗಳು ಬೇಡುವ ಅತ್ಯಧಿಕ ನೀರು, ರಸಾನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಕೇವಲ ಹತ್ತು ವರ್ಷಗಳಲ್ಲಿ ಫಲವತ್ತಾದ ಭೂಮಿ ಬಂಜರು  ಭೂಮಿಯಾಗಿ ಮಾರ್ಪಟ್ಟಿತು. ಈ ಕುರಿತಂತೆ  ಜಗತ್ತಿನ ಕೃಷಿತಜ್ಞರ ನಡುವೆ ಮರುಚಿಂತನೆ ಆರಂಭವಾಯಿತು.

ಭೂಮಿಗೆ ನೀರುಣಿಸುವ ನೀರಾವರಿ ಯೋಜನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಕೃತಿಯ ಕೊಡುಗೆಯಾದ ಮಳೆ ನೀರನ್ನು ಆಶ್ರಯಿಸಿ ಬೇಸಾಯ ಮಾಡುತಿದ್ದ ನಮ್ಮ ಪೂರ್ವಿಕರು ತಮ್ಮ ಜಮೀನುಗಳ ಸಮೀಪ ಕೆರೆ, ಕಟ್ಟೆಗಳನ್ನು ನಿರ್ಮಿಸಿಕೊಂಡು ಕಿರು ಕಾಲುವೆಗಳ ಮುಖಾಂತರ ನೀರುಣಿಸಿ ಬೆಳೆ ಬೆಳೆಯುತಿದ್ದರು. ಇದಲ್ಲದೆ ಮಳೆಯಾಶ್ರಿತ ಬೆಳೆಗಳಿಗಾಗಿ ದೇಶಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತಿದ್ದರು. ಮಳೆಗಾಲ ಮುಗಿದ ನಂತರ, ಭೂಮಿಯ ತೇವಾಂಶ ಮತ್ತು ಚಳಿಗಾಲದ ಇಬ್ಬನಿಯಿಂದ ಕೂಡಿದ ಕಪ್ಪು ಎರೆಮಣ್ಣಿನಲ್ಲಿ ಮೆಣಸಿನಕಾಯಿ, ಹತ್ತಿ ಬೇಳೆಯುತಿದ್ದರು. ಈ ಪದ್ಧತಿಯನ್ನು ಈಗಲೂ ನಾವು ಉತ್ತರ ಕರ್ನಾಟಕದಲ್ಲಿ ಕಾಣಬಹುದು.

ಮಳೆಗಾಲದಲ್ಲಿ ಹರಿದು ಬರುತಿದ್ದ ನೀರನ್ನು ಕಟ್ಟೆಗಳಲ್ಲಿ ಸಂಗ್ರಹಿಸಿ, ಕಟ್ಟೆಯ ಕೆಳಭಾಗದ ಅಚ್ಚು ಕಟ್ಟು ಪ್ರದೇಶದಲ್ಲಿ ದೀರ್ಘಾವಧಿ ಬೆಳೆ ತೆಗೆಯುವುದರ ಜೊತೆಗೆ ತಮ್ಮ ಜಾನುವಾರುಗಳಿಗೂ ಇದೇ ನೀರನ್ನು ಬಳಕೆ ಮಾಡುತಿದ್ದರು. ಇದು ಜಗತ್ತಿನೆಲ್ಲೆಡೆ, ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ಒಂದು ದೇಶೀಯ ಜ್ಞಾನಶಿಸ್ತು.

ಆಧುನಿಕ ತಂತ್ರಜ್ಞಾನದ ನೀರಾವರಿಯಲ್ಲಿ ಎರಡು ವಿಧಾನಗಳಿವೆ. ಒಂದು ಏತ ನೀರಾವರಿ ಪದ್ಧತಿ, ಇನ್ನೊಂದು ಕಾಲುವೆಗಳ ಮೂಲಕ ಭೂಮಿಗೆ ನೀರುಣಿಸುವ ಪದ್ಧತಿ. ಏತ ನೀರಾವರಿಯಲ್ಲಿ ಬಾವಿ, ಕಟ್ಟೆ ಅಥವಾ ಕೆರೆಗಳಿಂದ ನೀರನ್ನು ಮೇಲಕ್ಕೆ ಎತ್ತಿ ಭೂಮಿಗೆ ಹರಿಸುವ ಕ್ರಮವಿದ್ದರೆ, ಜಲಾಶಯಗಳಿಂದ ನಾಲುವೆ ಮೂಲಕ ನೀರುಣಿಸುವ ಕ್ರಮ ಈಗ ಜನಪ್ರಿಯ ಪದ್ಧತಿಯಾಗಿದೆ.

ಆಫ್ರಿಕಾ ಖಂಡದ ಅನೇಕ  ಹಿಂದುಳಿದ ರಾಷ್ಟಗಳಲ್ಲಿ ಜಲಾಶಯಗಳ ಹಂಗಿಲ್ಲದೆ, ಮಳೆ ನೀರನ್ನು ಶೇಖರಿಸಿಟ್ಟುಕೊಂಡು ಅಲ್ಲಿ ರೈತರು ಬೇಸಾಯ ಮಾಡುವುದನ್ನು ವಿಶ್ವ ಕೃಷಿ ಮತ್ತು ಆಹಾರ ಸಂಘಟನೆ ಗುರುತಿಸಿದೆ. 1987 ರವರೆಗೆ ಅಲ್ಲಿ ರೈತರು ಕೃಷಿ ಬೂಮಿಯ ಶೇ.37ರಷ್ಟು ಅಂದರೆ, 50 ಲಕ್ಷ ಹೆಕ್ಟೇರ್ ಭೂಮಿಯನ್ನು ದೇಶಿ ತಂತ್ರಜ್ಞಾನದ ಬೇಸಾಯಕ್ಕೆ ಅಳವಡಿಸಿದ್ದರು.

ಇಂತಹದ್ದೇ ಮಾದರಿಯ ಕೃಷಿ ಪದ್ಧತಿ ಬಾರತ, ಈಜಿಪ್ಟ್, ಇಂಡೊನೇಷಿಯ ಮತ್ತು ಅಮೇರಿಕಾ ದೇಶಗಳಲ್ಲಿ ಜಾರಿಯಲ್ಲಿತ್ತು. ಅಮೇರಿಕಾದ ಮೂಲನಿವಾಸಿಗಳು ಮಳೆನೀರನ್ನು ಬಳಸಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, ಮೆಕ್ಕೆಜೋಳ ಬೆಳೆಯುತಿದ್ದದನ್ನು ವಿಜ್ಙಾನಿಗಳು ಗುರುತಿಸಿದ್ದಾರೆ.

ಭಾರತದಲ್ಲೂ ಸಹ ಅತ್ಯಧಿಕ ಸಣ್ಣ ಹಿಡುವಳಿದಾರರಿದ್ದು ಅವರೂ ಕೂಡ ದೇಶಿ ತಂತ್ರಜ್ಞಾನ ಬಳಸಿ ಬೇಸಾಯ ಮಾಡುತಿದ್ದಾರೆ. ಅವರುಗಳು ಗ್ರಾಮಾಂತರ ಪ್ರದೇಶದಲ್ಲಿ ಕೆರೆ, ಬಾವಿ ಉಪಯೋಗಿಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಭೂಮಿಯ ಪ್ರಮಾಣ, ಜಲಾಶಯ ಮತ್ತು ಕಾಲುವೆಗಳ ಮೂಲಕ ನೀರು ಹರಿಸಿ ಮಾಡುತ್ತಿರುವ ಕೃಷಿ ಭೂಮಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಕೃಷಿ ಉತ್ಪನ್ನ ಕುರಿತ ಇಂದಿನ ಅಂಕಿ ಅಂಶಗಳು ಜಲಾಶಯದ ಮೂಲಕ ಕೃಷಿ ಮಾಡುತ್ತಿರುವ ಭೂಮಿಯಲ್ಲಿ ಅಧಿಕ ಇಳುವರಿ ನೀಡಿರುವುದನ್ನು ಧೃಡಪಡಿಸಿವೆ ನಿಜ. ಇದಕ್ಕೆ ಕಾರಣವಾದ ಅಂಶಗಳೆಂದರೆ, ಹೈಬ್ರಿಡ್ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಸಮರ್ಪಕ ನೀರು ಪೂರೈಕೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯುತಿದ್ದ ಭೂಮಿಯಲ್ಲಿ ಈಗ ಅಲ್ಪಾವಧಿ ಕಾಲದ ತಳಿಗಳನ್ನು ಸೃಷ್ಟಿಸಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರ ನೇರ ಪರಿಣಾಮ ಭೂಮಿಯ ಮೇಲಾಗಿದೆ. ಫಲವತ್ತಾದ ಭೂಮಿಯಲ್ಲಿ ಸುಧೀರ್ಘ ಕಾಲ ಅತ್ಯಧಿಕ ಫಸಲನ್ನು ತೆಗೆಯಲು ಸಾದ್ಯವಾಗುವುದಿಲ್ಲ. ಏಕೆಂದರೆ, ನಿರಂತರವಾಗಿ ಬಳಸುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ಭೂಮಿಯಲ್ಲಿ ಕ್ಷಾರಕ ಅಂಶಗಳೂ ಹೆಚ್ಚಾಗಿ ಚೌಳು ಪ್ರದೇಶವಾಗಿ ಪರಿವರ್ತನೆ ಹೊಂದುತ್ತಿದೆ.

ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಟ್ಟದಲ್ಲಿ ಫಲವತ್ತಾದ ಭೂಮಿ ಕಾಲುವೆ ಹಾಗೂ ನೀರು ಬಸಿದು ಹೋಗುವ ಚರಂಡಿಗಳಿಗೆ ಬಳಕೆಯಾಗುತಿದ್ದು ಇದರಿಂದಾಗಿ ನೀರಾವರಿ ಯೋಜನೆಗಳ ಮೂಲ ಉದ್ದೇಶಗಳಿಗೆ ಧಕ್ಕೆಯುಂಟಾಗಿದೆ. ಕೆಲವೆಡೆ ಯಾವ ಕಾರಣಕ್ಕಾಗಿ ಜಲಾಶಯ ನಿರ್ಮಾಣವಾಯಿತೊ, ಅದರ ಉದ್ದೇಶಕ್ಕೆ ಅನುಗುಣವಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಸಾದ್ಯವಾಗಿಲ್ಲ. ಇನ್ನೂ ಹಲವೆಡೆ ಉದ್ದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಒತ್ತಡಗಳಿಂದಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಿ ನೀರುಣಿಸಲು ಸಾಧ್ಯವಾಗಿಲ್ಲ. ಜಗತ್ತಿನ ಹಲವಾರು ಅಣೆಕಟ್ಟುಗಳ ನಿರ್ಮಾಣದಿಂದ, ನೀರಾವರಿ ಕೃಷಿಗೆ ಒಳಪಟ್ಟ ಭೂಮಿಗಿಂತ ಎರಡು ಪಟ್ಟು ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾದ ಉದಾಹರಣೆಗಳಿವೆ.

ನೈಜೀರಿಯಾ ಸರ್ಕಾರ ತಾನು ನಿರ್ಮಿಸಿದ ಬಾಕಲೋರಿ ಅಣೆಕಟ್ಟಿನಿಂದ 44 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ಹೊಂದಿತ್ತು. ಜಲಾಶಯ ನಿರ್ಮಾಣದ ನಂತರ 12 ಸಾವಿರ ಹೆಕ್ಟೇರ್ ಪ್ರದೇಶ ಹಿನ್ನೀರಿನಲ್ಲಿ ಮುಳುಗಿದರೆ, ನದಿಯ ಕೆಳಗಿನ ಪಾತ್ರದ 11 ಸಾವಿರ ಹೆಕ್ಟೇರ್ ಪ್ರದೇಶ ನೀರಿಲ್ಲದೆ ಬಂಜರು ಭೂಮಿಯಾಯಿತು. ಇದೇ ನೈಜೀರಿಯಾದ ಉತ್ತರ ಭಾಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ನಿರ್ಮಿಸಿದ ಡಾಡಿನ್ಕೋವಾ ಅಣೆಕಟ್ಟಿನಿಂದಾಗಿ 35 ಸಾವಿರ ಹೆಕ್ಟೇರ್ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಯಿತು.

ವಿಶ್ವಬ್ಯಾಂಕ್‌ನ ಸಮೀಕ್ಷೆಯ ಪ್ರಕಾರ ಭಾರತದಲ್ಲೂ ಕೂಡ ಶೇ.5ರಿಂದ ಶೇ.13ರಷ್ಟು ಪ್ರಮಾಣದ ಫಲವತ್ತಾದ ಭೂಮಿ ಕಾಲುವೆಗಳ ನಿರ್ಮಾಣಕ್ಕಾಗಿ ಬಳಕೆಯಾಗಿದೆ. ಸೋಜಿಗದ ಸಂಗತಿಯೆಂದರೆ ಭಾರತದಲ್ಲಿ ಜಲಾಶಯಗಳ ಮೂಲಕ ನೀರಾವರಿಗೆ ಒಳಪಟ್ಟ ಪ್ರದೇಶದ ಬಗ್ಗೆ ನಿಖರವಾದ ಅಂಕಿ ಅಂಶಗಳೇ ಇಲ್ಲ. ಕೆಲವೆಡೆ ಜಲಾಶಯದಲ್ಲಿ ದೊರೆಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚಾಗಿ ಒಣಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಪ್ರಯತ್ನಗಳು ನಡೆದು ವಿಫಲವಾಗಿರುವುದು ಕಂಡುಬಂದಿದೆ.

ನರ್ಮದಾ ನದಿಗೆ ನಿರ್ಮಿಸಲಾದ ಬಾಗ್ರಿ ಅಣೆಕಟ್ಟಿನಿಂದ 81 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುವುದೆಂದು ಸರ್ಕಾರ ಪ್ರಕಟಿಸಿತ್ತು. ಈ ಅಣೆಕಟ್ಟಿನಿಂದಾಗಿ 4 ಲಕ್ಷದ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 1986ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ನೀರಾವರಿಗೆ ಒಳಪಟ್ಟ ಪ್ರದೇಶ ಕೇವಲ 12 ಸಾವಿರ ಹೆಕ್ಟೇರ್ ಮಾತ್ರ.

ಈಜಿಪ್ಟ್ ದೇಶದ ನೈಲ್ ನದಿಗೆ ನಿರ್ಮಿಸಲಾದ ಅಸ್ವಾನ್ ಅಣೆಕಟ್ಟಿನ ಮೂಲ ಗುರಿ 6 ಲಕ್ಷದ 80 ಸಾವಿರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಿ ಹತ್ತಿ, ಕಬ್ಬು, ಗೋಧಿ ಬೆಳೆಯುವ ಯೋಜನೆಯಾಗಿ ರೂಪಿಸಲಾಗಿತ್ತು. ಈ ಜಲಾಶಯದಿಂದ ನೀರುಣಿಸಲು ಸಾಧ್ಯವಾಗಿದ್ದು ಕೇವಲ 2 ಲಕ್ಷದ 60 ಸಾವಿರ ಹೆಕ್ಟೇರ್ ಭೂಮಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿರುವ ಅಣೆಕಟ್ಟುಗಳ ನಿರ್ಮಾಣಣದ ವೆಚ್ಚವನ್ನು ಮರೆಮಾಚಲು ಹಲವಾರು ಸರಕಾರಗಳು ಸುಳ್ಳು ಅಂಕಿ ಅಂಶಗಳನ್ನು ಪ್ರಕಟಿಸುತ್ತಾ ಜನಸಾಮಾನ್ಯರನ್ನು ವಂಚಿಸುವುದು ವಾಡಿಕೆಯಾಗಿದೆ.

ಜಲಾಶಯದಲ್ಲಿ ಸಂಗ್ರಹವಾದ ನೀರಿನಿಂದ ಕೃಷಿ ಚಟುವಟಿಕೆಗೆ ಪರೋಕ್ಷವಾಗಿ ಧಕ್ಕೆಯಾಗುತ್ತಿರುವುದನ್ನು ಕೃಷಿ ವಿಜ್ಞಾನಿಗಳು ಇತ್ತೀಚೆಗಿನ ಅಧ್ಯಯನದಿಂದ ಧೃಡಪಡಿಸಿದ್ದಾರೆ. ನೀರಿನಲ್ಲಿರುವ ಲವಣ ಮತ್ತು ಕ್ಷಾರಕ ಅಂಶಗಳು ಭೂಮಿಯ ಫಲವತ್ತತೆಯನ್ನು ತಿಂದು ಹಾಕುತ್ತಿವೆ ಎಂದಿದ್ದಾರೆ. ಸೂರ್ಯನ ತಾಪದಿಂದ ಜಲಾಶಯದಲ್ಲಿನ ನೀರು ಆವಿಯಾಗುವುದರ ಜೊತೆಗೆ ನೀರಿನಲ್ಲಿ ಹೆಚ್ಚಿನ ಲವಣಾಂಶಗಳು ಉತ್ಪಾದನೆಯಾಗುತ್ತಿವೆ ಎಂದು ವಿಜ್ಙಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾದ ನ್ಯಾಷನಲ್ ಯೂನಿವರ್ಸಿಟಿಯ ಸೆಂಟರ್ ಫಾರ್ ರೀಸೋರ್ಸ್ ಅಂಡ್ ಎನ್ವಿರಾನ್ಮೆಂಟ್ ಸ್ಟಡೀಸ್ ಅಧ್ಯಯನ ಕೇಂದ್ರ ನಡೆಸಿರುವ ಅಧ್ಯಯನದಲ್ಲಿ ಜಗತ್ತಿನ 4 ಕೋಟಿ 54 ಲಕ್ಷ ಹೆಕ್ಟೇರ್ ಪ್ರದೇಶ ಲವಣಾಂಶಗಳಿಂದ ಕೂಡಿದ್ದು, ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದಿದೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ 20ರಿಂದ 30 ಲಕ್ಷ ಹೆಕ್ಟೇರ್ ಪ್ರದೇಶ ಕ್ಷಾರಕ ಅಂಶಗಳಿಂದಾಗಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ವಿಶ್ವಬ್ಯಾಂಕ್ ತಜ್ಞರ ತಂಡ ಕೂಡ ಅಭಿಪ್ರಾಯ ಪಟ್ಟಿದೆ.

(ಮುಂದುವರಿಯುವುದು)

2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ…

 -ರವಿ ಕೃಷ್ಣಾರೆಡ್ಡಿ

ಕಳೆದ ವರ್ಷದ ಜಾಗತಿಕ ಮತ್ತು ರಾಷ್ಟ್ರ ಮಟ್ಟದ ವಿದ್ಯಮಾನಗಳ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ದಿನೇಶ್ ಅಮಿನ್ ಮಟ್ಟುರವರು ಉತ್ತಮವಾಗಿ ಬರೆದು ವಿಶ್ಲೇಷಿಸಿದ್ದರು. ಓದದೇ ಇದ್ದವರು ದಯವಿಟ್ಟು ಅದನ್ನು ಓದಿ. ಅವರು 2011 ನ್ನು ಬೆಳಕಿನ ವರ್ಷ ಎನ್ನುತ್ತಾ, ಮನುಕುಲದ ಮುನ್ನಡೆಯ ಹಾದಿಗೆ ಬೆಳಕು ತೋರಿದ ಭರವಸೆಯ ವರ್ಷವೂ ಹೌದು ಎನ್ನುತ್ತಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ.

ಕಳೆದ ವರ್ಷ ಪ್ರಪಂಚದ ಬೇರೆಬೇರೆ ಕಡೆ ಹೊತ್ತಿಕೊಂಡ ಪ್ರಜಾಪ್ರಭುತ್ವದ ಕಿಡಿಗಳು ಮತ್ತು ಜನಹೋರಾಟದ ಕಾರಣವಾಗಿಯೇ ಪತನಗೊಂಡ ಸರ್ವಾಧಿಕಾರಿ ಆಡಳಿತಗಳು ಒಬ್ಬ ಪ್ರಜಾಪ್ರಭುತ್ವ ಪ್ರೇಮಿಯಾಗಿ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿಗಳು. ಈ ವರ್ಷವೂ ಅದು ಮುಂದುವರೆದು ಇಡೀ ಅರೇಬಿಯಾದಲ್ಲಿ, ರಷ್ಯದಲ್ಲಿ, ಬರ್ಮಾದಲ್ಲಿ, ಉತ್ತರ ಕೊರಿಯಾದಲ್ಲಿ, ಮಧ್ಯ-ದಕ್ಷಿಣ ಅಮೇರಿಕಾಗಳಲ್ಲಿ ಮತ್ತು ಎಲ್ಲೆಲ್ಲಿ ರಾಜಪ್ರಭುತ್ವ, ಹುಸಿಪ್ರಜಾಪ್ರಭುತ್ವ, ಸೇನಾಡಳಿತ, ಸರ್ವಾಧಿಕಾರಿಗಳ ಆಡಳಿತ ಇದೆಯೋ ಅಲ್ಲೆಲ್ಲಾ, ಅಲ್ಲಿಯ ಸ್ಥಳೀಯ ಜನರ ನೈಜ ಬೇಡಿಕೆ ಮತ್ತು ಹೋರಾಟವಾಗಿ ಪಸರಿಸಿ ಗಟ್ಟಿಯಾದ ಜನತಂತ್ರಗಳು ನೆಲೆಯೂರಲಿ ಎಂದು ಆಶಿಸುತ್ತೇನೆ.

ನಮ್ಮದೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಳೆದ ವರ್ಷ ಬಹಳ ಮಹತ್ತರವಾದುದಾಗಿತ್ತು. ಜನ ತಮ್ಮ ನಾಗರಿಕ ಜವಾಬ್ದಾರಿಗಳಿಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎನಿಸುತ್ತದೆ. ನಮ್ಮ ರಾಜ್ಯದ ಸ್ಥಿತಿ ನೋಡಿದರೆ ಅದು ಹುಸಿ ಅಂತಲೂ ಭಾಸವಾಗುತ್ತದೆ. ಅಯೋಗ್ಯ, ಅಪ್ರಬುದ್ದ, ಕಳ್ಳ, ವಂಚಕ, ಭ್ರಷ್ಟ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಜೈಲಿಗೆ ಹೋದದ್ದನ್ನು ನೋಡಿದರೆ ವ್ಯವಸ್ಥೆಯಲ್ಲಿ ಅಷ್ಟಿಷ್ಟು ನಂಬಿಕೆಯೂ ಹುಟ್ಟುತ್ತದೆ. ಮತ್ತೆ ಕೆಲವು ಘಟನೆಗಳನ್ನು ಗಮನಿಸಿದರೆ, ಅವೆಲ್ಲಾ ಮೇಲ್ನೋಟಕ್ಕೆ ಮಾತ್ರ ಎಂತಲೂ ಅನ್ನಿಸುತ್ತದೆ. ವಾಸ್ತವದಲ್ಲಿ ದುಷ್ಟರಿಗೆ ಎಂದೂ ಪ್ರಾಯಶ್ಚಿತ್ತವಾಗಲಿ, ಮನ:ಪರಿವರ್ತನೆಯಾಗಲಿ ಆಗುವುದಿಲ್ಲ ಎನ್ನುವ ಮಾತಿಗೆ ಸಾಕಷ್ಟು ಪುರಾವೆ ಸಿಗುತ್ತವೆ.

ವೈಯಕ್ತಿಕವಾಗಿ ನೋಡುವುದಾದರೆ ನನಗೆ ಕಳೆದ ವರ್ಷ ಅನೇಕ ಅನುಭವಗಳ, ಚಟುವಟಿಕೆಗಳ ವರ್ಷ. ಹತ್ತು ವರ್ಷಗಳ ನಂತರ ವರ್ಷಪೂರ್ತಿ (ನಡುವೆ ಒಂದು ತಿಂಗಳನ್ನು ಹೊರತುಪಡಿಸಿ) ದೇಶದಲ್ಲಿಯೇ ಉಳಿದ ವರ್ಷ. ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರ್ ಸುತ್ತಿ, ಕರ್ನಾಟಕದ ಹಲವಾರು ಪ್ರದೇಶ, ಜನರನ್ನು ಕಂಡ ವರ್ಷ. ಕೆಲವರ ಬಗ್ಗೆ ಭರವಸೆ ಬೆಳೆಸಿಕೊಂಡ, ಮತ್ತು ಹಲವರ ಬಗ್ಗೆ ಭ್ರಮನಿರಸನಗೊಂಡ ವರ್ಷ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಉತ್ತರಾರ್ಧದಲ್ಲಿ ಮಾತು-ಕೃತಿಯ ಭಾಗವಾಗಿ ವರ್ತಮಾನ.ಕಾಮ್ ಆರಂಭಿಸಿದ ಸಮಯ.

ಕನ್ನಡದಲ್ಲಿ ಈಗಾಗಲೆ ಅನೇಕ ವೆಬ್‌ಸೈಟುಗಳಿವೆ. ಆದರೆ ಸಾಮಾಜಿಕ-ರಾಜಕೀಯ-ಆರ್ಥಿಕ-ಮಾಧ್ಯಮ ವಿಚಾರಗಳನ್ನು ಇಟ್ಟುಕೊಂಡು, ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಹುಡುಕಾಟದಲ್ಲಿ ನಾನು ಮತ್ತು ಒಂದಷ್ಟು ಜನ ಸಮಾನಮನಸ್ಕರು ಆರಂಭಿಸಿದ ನಮ್ಮ ವೆಬ್‍ಸೈಟ್ ಆ ದೃಷ್ಟಿಯಲ್ಲಿ ಕನ್ನಡಕ್ಕೆ ವಿಭಿನ್ನವಾದದ್ದು. ಇಲ್ಲಿಯವರೆಗೂ ನಾವು ಖರ್ಚು ಮಾಡಿದ್ದು ಬಹುಶಃ ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆ, ಆದರೆ ಸಾಮೂಹಿಕವಾಗಿ ನಾವೆಲ್ಲ (ನಮ್ಮ ಬಳಗ ಮತ್ತು ಲೇಖಕರು) ಕೊಟ್ಟ ಸಮಯ ಮತ್ತು ಶ್ರಮ ಮಾತ್ರ ಹೆಚ್ಚಿದೆ. ವರ್ಷಾಂತ್ಯದಲ್ಲಿ ನಾನು ಅನಾರೋಗ್ಯಪೀಡಿತನಾಗಿದ್ದು ಮತ್ತು ಸ್ವಲ್ಪ ವಿಶ್ರಾಂತಿ ಬಯಸಿ ಓಡಾಟ ನಿಲ್ಲಿಸಿದ್ದರಿಂದ ಮತ್ತೂ ಒಂದಷ್ಟು ಬೆಳವಣಿಗೆ ಕಮ್ಮಿಯಾಯಿತು ಎನ್ನಬಹುದೇನೊ. ಆದರೆ, ನಮಗೆಲ್ಲ ಈ ಪ್ರಯತ್ನದ ಬಗ್ಗೆ ತೃಪ್ತಿ ಇದೆ. ಈ ವರ್ಷ ಸಮಯದ ಜೊತೆಗೆ ಸಮುದಾಯಿಕವಾಗಿ ಒಂದಷ್ಟು ಹಣ ಸಂಗ್ರಹಿಸಿ, ಅದನ್ನು ಹೂಡಿ, ವರ್ತಮಾನ.ಕಾಮ್ ಅನ್ನು ಹೆಚ್ಚುಹೆಚ್ಚು ಪ್ರಸ್ತುತ ಪಡಿಸುತ್ತ, ವಿಸ್ತಾರಗೊಳಿಸುತ್ತ, ಬೇರೆ ಆಯಾಮಗಳಿಗೂ ಹೊರಳಿಸಬೇಕು ಎನ್ನುವ ಯೋಜನೆ ನಮ್ಮದು.

ನನ್ನ ಪ್ರಕಾರ 2012 ಅನೇಕ ವಿಚಾರಗಳಿಗೆ ನಿರ್ಣಾಯಕವಾಗಲಿದೆ. ಈ ವರ್ಷವೂ ನಾವು ಜಾಗತಿಕವಾಗಿ ಅನೇಕ ಪಲ್ಲಟಗಳನ್ನು ಕಾಣಲಿದ್ದೇವೆ, ಅಮೆರಿಕ ಮತ್ತು ರಷ್ಯದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ನಡೆಯಲಿವೆ. ಒಬಾಮ ಎರಡನೆ ಅವಧಿಗೆ ಚುನಾಯಿತನಾಗುವುದು ಕಷ್ಟಸಾಧ್ಯವೇನಲ್ಲ-ಅನಿರೀಕ್ಷಿತ ಘಟನೆಗಳು ಜರುಗದೇ ಇದ್ದಲ್ಲಿ. ಆದರೆ ರಷ್ಯದಲ್ಲಿ ಪುಟಿನ್ ಬಗ್ಗೆ ಅದೇ ಮಾತನ್ನು ಹೇಳುವ ಹಾಗೆ ಇಲ್ಲ. ನನ್ನ ಸಹೋದ್ಯೋಗಿಯಾಗಿದ್ದ ಉಕ್ರೇನ್ ಮೂಲದ ಸ್ನೇಹಿತನ ಮಾತನ್ನು ನಂಬುವುದಾದರೆ ಅಲ್ಲಿಯ ಈಗಿನ ಪ್ರಧಾನಿ ವ್ಲಾಡಿಮಿರ್ ಪುಟಿನ್ ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸಿರುವುದೇ ಅಲ್ಲದೆ ಭ್ರಷ್ಟ ಮಾರ್ಗಗಳಿಂದ ಬಿಲಿಯನ್ ಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನೂ ಸ್ಥಾಪಿಸಿಕೊಂಡಿದ್ದಾನೆ. ಅಲ್ಲಿಯ ವಿರೋಧ ಪಕ್ಷಗಳು ಹೇಳುವ ಪ್ರಕಾರ ಆತ ಆ ದೇಶದ ಅತಿ ಶ್ರೀಮಂತ ವ್ಯಕ್ತಿ. ಅಲ್ಲಿ ನಿಜಕ್ಕೂ ಹೇಳಿಕೊಳ್ಳುವಂತಹ ಪ್ರಜಾಪ್ರಭುತ್ವ ಇಲ್ಲ. ಕಳೆದ ತಿಂಗಳು ಅಲ್ಲಿ ನಡೆದ ಸಂಸತ್ ಚುನಾವಣೆಗಳು ಮೋಸದಿಂದ ಕೂಡಿದ್ದವು. ಅಲ್ಲಿಯ ಈಗಿನ ಅಧ್ಯಕ್ಷ ಪುಟಿನ್‌ನ ಕೈಗೊಂಬೆ. ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಪುಟಿನ್ ಮತ್ತೆ ಸ್ಪರ್ಧಿಸುತ್ತಿದ್ಡಾನೆ. ಅವನ ಸೋಲು-ಗೆಲುವು ಕೇವಲ ರಷ್ಯಕ್ಕಷ್ಟೇ ಅಲ್ಲ, ಜಾಗತಿಕವಾಗಿಯೂ, ನಮಗೂ, ಮುಖ್ಯವಾಗಲಿದೆ. ಯಾಕೆಂದರೆ, ಶಕ್ತಿ ಉತ್ಪಾದನೆಯಲ್ಲಿ ರಷ್ಯ ಪ್ರಪಂಚದ ಸೂಪರ್‌ಪವರ್ (energy superpower of the world). ತೈಲ ಉತ್ಪಾದನೆಯಲ್ಲಿ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೂರು ವರ್ಷಗಳೇ ಆದವು. ಇವೆಲ್ಲವುಗಳಿಂದಾಗಿ, ಜಾಗತಿಕ ತಾಪಮಾನ ಕಾರಣಗಳಿಗಾಗಿ, ಸೌರ ಅಲೆಗಳು, ಹುಚ್ಚು ಪ್ರಳಯದ ಭೀತಿ, ಪ್ರವಾಹ ಮತ್ತು ಬರಗಾಲಗಳು, ಹೀಗೆ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಘಟನಾವಳಿಗಳಿಂದ ಕೂಡಿರುತ್ತದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ, ಉತ್ತರ ಪ್ರದೇಶದ ಜೊತೆಗೆ ಇನ್ನೂ ಐದು ರಾಜ್ಯದ ಚುನಾವಣೆಗಳು ನಡೆಯಲಿವೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬಹುದು. ಅಣ್ಣಾ ತಂಡ ಅಥವ ಮತ್ತೊಂದು ನಾಗರಿಕರ ತಂಡ ಇದನ್ನು ಮೀರಿ ಚುನಾವಣಾ ಸುಧಾರಣೆಗಳಿಗಾಗಿ ಹೋರಾಡಬಹುದು. ದೇಶದಾದ್ಯಂತ ಇನ್ನಷ್ಟು ರಾಜಕಾರಣಿಗಳು ಜೈಲಿಗೆ ಹೋಗುವ ಸಾಧ್ಯತೆಗಳು ಈ ಭ್ರಷ್ಟಾಚಾರದ ಯುಗದಲ್ಲಿ ಹೆಚ್ಚೇ ಇದೆ. ಭ್ರಷ್ಟಾಚಾರ ಈ ವರ್ಷವೂ ಬಹುಮುಖ್ಯ ವಿಷಯವಾಗಿರುತ್ತದೆ. ಜಯಾ-ಮಾಯಾ-ಮಮತಾರಿಂದಾಗಿ, ಅಥವಾ ಕಾಂಗ್ರೆಸ್‌ನ ನಾಯಕರ ಅಹಂಕಾರದ ಫಲವಾಗಿ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ಬಂದರೆ ಅದೇನೂ ಅನಿರೀಕ್ಷಿತವಲ್ಲ. ಮಮತಾರ ಒಂದೇ ಕಾರಣದಿಂದ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ಲೋಕಪಾಲ್ ಮಸೂದೆ ವಿಚಾರವಾಗಿ ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಯಿತು. ಹಾಗಾಗಿ ಮನಮೋಹನ್ ಸಿಂಗ್, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ಮುಂದಿನ ವರ್ಷಗಳನ್ನು ನಿರ್ಧರಿಸುವ ವರ್ಷ ಇದು. ದೇಶದಲ್ಲಿ ಮತ್ತೆ ತೃತೀಯ ರಂಗ ಪ್ರಸ್ತುತವಾದರೆ ನನಗೇನೂ ಆಶ್ಚರ್ಯವಿಲ್ಲ. ಆದರೆ ಅದು ಕಾಂಗ್ರೆಸ್ ಅಥವ ಬಿಜೆಪಿಯ ಬೆಂಬಲ ಇಲ್ಲದೆ ಅಧಿಕಾರಕ್ಕೆ ಬರಲಾಗದು.

ಕರ್ನಾಟಕದಲ್ಲಿ ಈ ವರ್ಷವೂ ಒಂದಷ್ಟು ಹಾಲಿ ಮಂತ್ರಿಗಳು ಮತ್ತು ರಾಜಕಾರಣಿಗಳು ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ. ಯಡಿಯೂರಪ್ಪನವರು ಯಾವುದೋ ಒಂದು ಕೇಸಿನಲ್ಲಾದರೂ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿದರೂ ತೀರ್ಮಾನಿಸಿತು. ಅವರ ವಿರುದ್ಧ ಅಷ್ಟೊಂದು ಕೇಸುಗಳಿವೆ. ಲೋಕಾಯುಕ್ತ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕಾರಣವಾಗಿ ಮತ್ತೂ ಒಂದಿಬ್ಬರು ಸಚಿವರು ರಾಜೀನಾಮೆ ಕೊಡಬೇಕಾಗಿ ಬರಬಹುದು. ನೋಡುತ್ತಿದ್ದರೆ ಈ ಸರ್ಕಾರ ಅದಕ್ಕೆ ಮುಂಚೆ ಬಿದ್ದರೂ ಬಿದ್ದೀತು. ಏನೇ ಆಗಲಿ ಈ ವರ್ಷದ ಅಂತ್ಯದ ಒಳಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಆಗುತ್ತದೆ, ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರುತ್ತದೆ. ಕರ್ನಾಟಕದ ಜನ ಏನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಯಡ್ಡಯೂರಪ್ಪನವರು ಜೈಲಿನಿಂದ ಬಂದಾಗ ಜನ ವರ್ತಿಸಿದ ರೀತಿ, ಕಳೆದ ವರ್ಷ ಪ್ರತಿ ಉಪಚುನಾವಣೆಯಲ್ಲಿ ಮತ ಹಾಕಿದ ಪರಿ, ಮುಂದುವರೆದ ಜಾತಿ ಮತ್ತು ಹಣದ ಪ್ರಭಾವ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಬಿಜೆಪಿಗಿಂತ ಭಿನ್ನವಾಗಿಲ್ಲದ ರಾಜಕಾರಣ, ಮತ್ತು ಅಲ್ಲಿಯವರಿಗಿಂತ ಬೇರೆ ರೀತಿ ಕಾಣಿಸುತ್ತಿಲ್ಲದ ಈ ಪಕ್ಷಗಳ ಶಾಸಕರು-ನಾಯಕರು, ಯಾವುದೂ ಏನನ್ನೂ ಬಿಟ್ಟುಕೊಡುತ್ತಿಲ್ಲ. ಆದರೆ ಈ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿ 2011 ಕ್ಕಿಂತ ಹೆಚ್ಚೇ ಇರುತ್ತದೆ. ರಾಜ್ಯಕ್ಕೆ ಬರಗಾಲ ಈಗಾಗಲೆ ಉತ್ತರದಲ್ಲಿ ಒಂದು ಕಾಲನ್ನು ಇಟ್ಟಿದೆ.

ಇವೆಲ್ಲವೂ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಬೇಕು. ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ. ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ)

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಗೆಳೆಯರೆ,

ಎಲ್ಲರಿಗೂ 2012 – ಹೊಸ ವರ್ಷದ ಶುಭಾಶಯಗಳು. ಹಿಂದೆ ಡಾ. ಜಗದೀಶ್ ಕೊಪ್ಪರವರು ಜಿಮ್ ಕಾರ್ಬೆಟ್ ಬಗೆಗಿನ ತಮ್ಮ ಲೇಖನದಲ್ಲಿ ತಿಳಿಸಿದ್ದಂತೆ, ಇಂದಿನಿಂದ “ಬಿಳಿ ಸಾಹೇಬನ ಭಾರತ” ಲೇಖನ ಮಾಲೆಯನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ಲೇಖನ ಮಾಲೆ ಪ್ರತಿ ಭಾನುವಾರ ಪ್ರಕಟವಾಗಲಿದೆ. ಇಲ್ಲಿಯವರೆಗೂ ಭಾನುವಾರದಂದು ಪ್ರಕಟವಾಗುತ್ತಿದ್ದ “ಜೀವನದಿಗಳ ಸಾವಿನ ಕಥನ” ಈ ವಾರದಿಂದ ಬುಧವಾರದಂದು ಪ್ರಕಟವಾಗುತ್ತದೆ. ಎಂದಿನಂತೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. -ವರ್ತಮಾನ ಬಳಗ.

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಡಾ. ಎನ್. ಜಗದೀಶ್ ಕೊಪ್ಪ

ಅದು 1985ರ ಚಳಿಗಾಲದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಪ್ರಾರಂಭದ ಒಂದು ದಿನ. ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಚಾನಲ್‌ನ ತಂಡ ಕಲದೊಂಗಿಯ ಕಾರ್ಬೆಟ್ ಮನೆಯಲ್ಲಿ ಬೀಡು ಬಿಟ್ಟು ಆತನ ಬಗ್ಗೆ ಚಿತ್ರೀಕರಣ ಮಾಡುತಿತ್ತು.

ಕಾರ್ಬೆಟ್‌ನ ಶಿಖಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಖಾರಿಯ ವೇಳೆ 30ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಪಾತ್ರಗಳನ್ನು ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‌ನ ಪಾತ್ರಕ್ಕಾಗಿ ಆತನನ್ನೇ ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಆತ್ಮ ಕಥನ ಬರೆದಿದ್ದ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.

ಚಿತ್ರಿಕರಣದ ವೇಳೆ ಸ್ಥಳಿಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಙರು ಮತ್ತು  ಸಹಾಯಕರನ್ನು ಸಹ ಕರೆಸಲಾಗಿತ್ತು. ಅದೊಂದು ದಿನ  ಚಿತ್ರೀಕರಣ ನಡೆಯುತಿದ್ದ ಬೆಳಿಗ್ಗೆ ವೇಳೆ ಸ್ಥಳೀಯರು ಬಂದು ದೂರದ ಊರಿನಿಂದ ಕಾರ್ಬೆಟ್‌ನನ್ನು ನೋಡಲು ವೃದ್ಧನೊಬ್ಬ ಬಂದಿದ್ದಾನೆ ಎಂದರು. ಚಿತ್ರದ ತಂಡ ಬಹುಷಃ ಕಾರ್ಬೆಟ್‌ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊ