ಒಂದು ಕೆಂಪು ಸಂಜೆ

“ಒಂದು ಕೆಂಪು ಸಂಜೆ”

ಕಿಶೋರಿ ಚರಣ್ ದಾಸ
ಅನುವಾದ: ಬಿ. ಶ್ರೀಪಾದ್ ಭಟ್

[ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದ ಕಿಶೋರಿ ಚರಣ್ ದಾಸ ಒರಿಯಾದಲ್ಲಿ ನವ್ಯ ಲೇಖಕರೆಂದೇ ಪ್ರಸಿದ್ದಿಯಾಗಿದ್ದರು. ಅವರ ಕತೆಗಳು ನವ್ಯದ ಅಭಿವ್ಯಕ್ತಿಯನ್ನು ಮೈಗೂಡಿಸಿಕೊಂಡಿದ್ದರೂ ಅವರ ಕತೆಗಳ ಹೂರಣ, ಗ್ರಹಿಕೆಗಳು ಮಾತ್ರ ಸಾಮಾಜಿಕತೆಯನ್ನು, ಅದರ ಅಸಹಾಯಕತೆಯನ್ನು, ತಳಮಳವನ್ನೂ ಒಳಗೊಂಡಿತ್ತು. ನಾನು ಇಲ್ಲಿ ಅನುವಾದಿಸಿದ 1970 ರಲ್ಲಿ ಬರೆದ  “ಒಂದು ಕೆಂಪು ಸಂಜೆ”  ಕಥೆ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಸ್ವಾರ್ಥ, ಆತ್ಮವಂಚನೆಯ ಮನೋಭಾವನೆಯನ್ನು ಬಯಲಾಗಿಸುತ್ತದೆ. 42 ವರ್ಷಗಳ ನಂತರವೂ ಈ ಕಥೆ ತನ್ನ ಅನನ್ಯತೆಯಿಂದ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದಕ್ಕಾಗಿಯೇ ಇದನ್ನು ಮರು ಓದಿದಾಗ ಅನುವಾದಿಸಬೇಕೆನಿಸಿತು. – ಬಿ. ಶ್ರೀಪಾದ್ ಭಟ್]


“ದಯವಿಟ್ಟು ನನಗಾಗಿ ಕಾಯುತ್ತೀಯ ತಾನೆ?”
“ಖಂಡಿತ, ನಿಧಾನವಾಗಿ ಬಾ. ಅವಸರವೇನಿಲ್ಲ”

ಮತ್ತೇನಿಲ್ಲ, ನನ್ನ ಬಲಗಾಲಿನ ಶೂ ಒಳಗೆ ಮೊಳೆಯೋ, ಕಲ್ಲೋ ಸಿಕ್ಕಿಕೊಂಡು ನನ್ನ ಕಾಲಿನ ಹೆಬ್ಬೆರಳನ್ನು ಒತ್ತುತ್ತಿದೆ. ಅದನ್ನು ವಿವರವಾಗಿ ನೋಡಲೂ ನನಗೆ ವ್ಯವಧಾನವಿಲ್ಲ. ನಾನು ಸದ್ಯಕ್ಕೆ ದತ್ತ ಅವರನ್ನು ಕೂಡಿಕೊಳ್ಳಬೇಕು. ಅವರು ಪರವಾಗಿಲ್ಲ ನಿಧಾನಕ್ಕೆ ಬನ್ನಿ ಎನ್ನುತ್ತಿದ್ದರೂ ನನಗಾಗಿ ಕಾಯದೆ ತಾವು ಮಾತ್ರ ದಾಪುಗಾಲಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದ್ದರು. ನಾನು ಅವರನ್ನು ನನ್ನ ದೃಷ್ಟಿಯಳತೆಯಲ್ಲಿ ಇರಿಸಿಕೊಂಡು ನನ್ನಿಂದ ಕಣ್ಮರೆಯಾಗದಂತೆ ಆಗಾಗ ಅವರನ್ನು ಕೂಗಿ ಕರೆಯುತ್ತಾ ನನ್ನ ಕಣ್ಣಳತೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದೆ. ನಾನು ಅವರ ಹತ್ತಿರ ಹೋದಾಗಲೆಲ್ಲ ಅತ್ಯಂತ ನಿರ್ಭಾವುಕದಿಂದ ನನ್ನೆಡೆ ನೋಡುತ್ತಾ, “ನನ್ನನ್ನು ಕ್ಷಮಿಸಿ. ನನ್ನ ಕಾರನ್ನು ಆ ಬದಿಯ ಮೂಲೆಯ, ಡ್ರೈ ಕ್ಲೀನರ್ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದೇನೆ. ನಾವು  ಅಲ್ಲಿಗೆ ತಲುಪಬೇಕಾಗಿದೆ’  ಎಂದು ಹೇಳಿದರು. ಅದರಲ್ಲಿ ನನಗೆ ನನ್ನ ನಡಿಗೆಯನ್ನು ತೀವ್ರಗೊಳಿಸಲು ಸೂಚನೆಯಿತ್ತು.

ನಾನು ಅವನ ಯಾವುದೇ ರೀತಿಯ ತೋರಿಕೆಯ ಸಭ್ಯ ನಡುವಳಿಕೆಗಳಿಗೆ ಅಷ್ಟೊಂದು ಗಮನ ಕೊಡಲಿಲ್ಲ. ಏಕೆಂದರೆ ಇವನೂ ಕೂಡ ತನ್ನ ಈ ವರ್ಗಗಳ ಜನರಂತೆಯೇ ಎಂದು ನನಗೆ ಗೊತ್ತಿತ್ತು. ನಾನು ಅವನನ್ನು ಹಿಂಬಾಲಿಸುತ್ತಿರುವುದಕ್ಕೆ ಮೂಲಭೂತ ಕಾರಣ ಈ ದತ್ತ ಎನ್ನುವವನು ಈ ಕ್ರಾಂತಿಕಾರಿ ನಗರ ಕಲ್ಕತ್ತಕ್ಕೆ ಸೇರಿದವನಾಗಿದ್ದಕ್ಕಾಗಿ ಹಾಗೂ ಇಲ್ಲಿಗೆ ನಾನು ಹೊಸಬನಾಗಿದ್ದಕ್ಕಾಗಿ. ಇವನ ಈ ಕಲ್ಕತ್ತ ನಗರದೊಂದಿಗಿನ ಚಿರಪರಿಚತೆಯೇ ನನಗೆ ತನ್ನಿಷ್ಟ ಬಂದಂತೆ ಮಾರ್ಗದರ್ಶನ ಮಾಡುವ ಅರ್ಹತೆಯನ್ನು ದೊರಕಿಸಿತ್ತು. ಆದರೆ ಇವೆಲ್ಲದರ ಮಧ್ಯೆ ನನ್ನ ಬಲಗಾಲಿನ ಶೂ ನನಗೆ ತೊಂದರೆ ಕೊಡುತ್ತಲೇ ಇತ್ತು. ನಗರದ ಅಂಗಡಿ, ಮುಂಗಟ್ಟುಗಳು ತಮ್ಮ ದೈನಂದಿನ ವ್ಯವಹಾರವನ್ನು ಮಾಡದೆ ಮುಚ್ಚಿದ್ದವು. ಇದು ಒಂದು ಸಣ್ಣ ಕ್ರಾಂತಿಗಾಗಿ ತೆರಬೇಕಾದ ಬೆಲೆಯೇನೊ. ಆದರೆ ಇದೇ ಕಾರಣಕ್ಕಾಗಿ ಬೀದಿ ಬದಿಯ ಸಣ್ಣ ಸಣ್ಣ ವಸ್ತುಗಳನ್ನು ವ್ಯಾಪಾರ ಮಾಡುವ ಬಡವರು ಕೂಡ ಈ ಸಣ್ಣ ಕ್ರಾಂತಿಗಾಗಿ ಅಲ್ಲಿಂದ ಕಣ್ಮರೆಯಾಗಿದ್ದು ಮಾತ್ರ ನನ್ನಲ್ಲಿ ಆಕ್ರೋಶವನ್ನುಂಟು ಮಾಡಿತ್ತು. ಆದರೆ ಆ ಗಲಭೆಪೀಡಿತ ರಸ್ತೆಯ ಮಧ್ಯದಲ್ಲಿ ಕೇವಲ ಒಂದು ಬೀದಿ ನಾಯಿ ಮಾತ್ರ ಸ್ವಾತಂತ್ರದ್ಯೋತಕವಾಗಿ ಬಾಲವನ್ನು ಅಲ್ಲಾಡಿಸುತ್ತಾ ನಿಂತಿತ್ತು. ಸಹಜವಾಗಿಯೇ ಈ ಪ್ರಮುಖ ನಗರದಲ್ಲಿ ಮನುಷ್ಯರಿಗೆ ಬದುಕುವ ಹಕ್ಕನ್ನು ಕಲ್ಪಿಸಲಾಗಿತ್ತು. ಆದರೆ ಅವರು ನಿಜವಾದ ಅರ್ಥದಲ್ಲಿ ಬದುಕಿದ್ದರೇ?  ಅಲ್ಲಿ ಬೀದಿ ದೀಪಕಂಬದ ಹಿಂದೆ ಕಾಣಿಸುತ್ತಿರುವ ಮನುಷ್ಯನಾರು? ಅವನು ತನ್ನ ಕಳಚಿಬೀಳುತ್ತಿರುವ ಲುಂಗಿಯನ್ನು ಮರೆತು ಕೈಯ್ಯಲ್ಲಿ ಕಲ್ಲನ್ನು ಹಿಡಿದು ನಿಂತಿದ್ದಾನೆಯೇ? ಆ ತರಹ ಕಾಣಿಸುತ್ತಿದೆ?  ಅಂದರೆ ಈ ನಿರ್ಜನ ನಗರ ಒಂದು ದೊಡ್ಡ ಕ್ರಾಂತಿಗಾಗಿ ತಯಾರಾಗುತ್ತಿರುವುದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿ ಹೋಯ್ತು. ಇಲ್ಲಿ ಕಳಚಿ ಬೀಳುತ್ತಿರುವ ಲುಂಗಿಯುಟ್ಟ ಒಬ್ಬ ವ್ಯಕ್ತಿ, ಅಲ್ಲಿ ಮೊಣಕಾಲು ಮಟ್ಟಕ್ಕೆ ಧೋತಿಯುಟ್ಟ ವ್ಯಕ್ತಿ ದಾಳಿ ನಡೆಸಲು ತಯಾರಾಗಿದ್ದರು. ಅವರು ಶೋಷಕರ ಪ್ರತಿನಿಧಿಯಂತಿದ್ದ ಪೋಲೀಸ್ ನವನ ಮೇಲೆ ದಾಳಿ ನಡೆಸಿ ನಂತರ ಜನಜಂಗುಳಿಯಲ್ಲಿ ಕರಗಿ ಹೋಗುವ ತಯಾರಿಯಲ್ಲಿದ್ದಂತಿತ್ತು. ನಾನು ಈ ಸಾಮಾನ್ಯ ಜನರ ನಿಸ್ವಾರ್ಥ, ಸಮರ್ಪಣಾ ಮನೋಭಾವದ ಕ್ರಾಂತಿಗೆ ಮೆಚ್ಚಿಕೊಳ್ಳುತ್ತಿರುವಂತೆಯೇ ಈ ಕ್ರಾಂತಿಯ ಆಗಮನವನ್ನು ಸೂಚಿಸುವಂತೆ ಒಂದು ದೊಡ್ಡ ಶಬ್ದ ನನ್ನ ಕಿವಿಗಪ್ಪಳಿಸಿತು,  ಜೊತೆ ಜೊತೆಗೇ ದೂರದಿಂದ ಚೀರಾಟದ, ಹೆಜ್ಜೆಯ ದಡಬಡ ಶಬ್ದ ಕೂಡ ಕೇಳಿಸಲಾರಂಬಿಸಿತು. ನಾನೂ ಕೂಡಲೇ ಓಡಿದೆ.

ಆಗ ದತ್ತ ಅಪಾದಮಸ್ತಕವಾಗಿ ನನ್ನನ್ನು ಪರೀಕ್ಷಿಸುತ್ತಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ಆಳದ ಆ ದೊಡ್ದ ಶಬ್ದದ ಧ್ವನಿಯಂತೆಯೇ ಹೇಳಿದ  “ನೀನು ಈ ರೀತಿ ಓಡಿದರೆ ಪೋಲೀಸರ ಕೋಲು ನಿನ್ನನ್ನು ಹಿಂಬಾಲಿಸುತ್ತದೆ, ಅಥವಾ ಬೇಕಿದ್ದರೆ ಬಂದೂಕು ಸಹ.”  “ನೀನೊಬ್ಬ ಬಂಡವಾಳಶಾಹಿ, ಬೂರ್ಜ್ವ ವರ್ಗಗಳ ಪ್ರತಿನಿಧಿ, ದುಡಿಯುವ ವರ್ಗಗಳ ಶೋಷಕ,” ಎಂದು ನನ್ನೊಳಗೆ ನಾನು ಗೊಣಗಿಕೊಂಡೆ, ಅಷ್ಟರಲ್ಲಿ ಮತ್ತೊಂದು ದೊಡ್ಡ ಶಬ್ದ, ಮತ್ತೆ ಮನುಷ್ಯರ ಚೀರಾಟದ ಧ್ವನಿಗಳು ನನ್ನ ಕಿವಿಗಪ್ಪಳಿಸಿತು. ನಾನು ಒಂದು ದೊಡ್ಡ ಗಲಭೆಯಲ್ಲಿ ಸಿಲುಕಿಕೊಂಡಿರುವುದು ಖಾತ್ರಿಯಾಯ್ತು. ಆದರೆ ನಾನು ಭಯದಿಂದ ಕಂಪಿಸಲಿಲ್ಲ. ನನ್ನ ಧೀರೋಧಾತ್ತ ನಡವಳಿಕೆಯನ್ನು ತೋರಿಸಲು ಈ ಸಂದರ್ಭಕ್ಕಾಗಿ ಎದುರು ನೋಡುತ್ತ. ಆದರೆ ಚೀರಾಟ ದೊಡ್ಡದಾಗ ತೊಡಗಿತು. ಜನರ ಓಡುತ್ತಿರುವ ಹೆಜ್ಜೆಯ ಸಪ್ಪಳದೊಂದಿಗೆ ಕುದುರೆಗಳ ಖರಪುಟ ಸದ್ದು ಮಿಳಿತವಾಗತೊಡಗಿತ್ತು. ಹೊಗೆ ಕೇವಲ ವಾಸನೆಯಾಗಿರದೆ ಕಣ್ಣಿಗೆ ಕಾಣತೊಡಗಿತ್ತು. ಈ ಹೊಗೆ ನನ್ನ ಕಣ್ಣನ್ನು, ಕಿವಿಯನ್ನು, ಶ್ವಾಸಕೋಶವನ್ನು ಆವರಿಸಿಕೊಳ್ಳತೊಡಗಿತು. ನಾನು ಕೆಮ್ಮುತ್ತಾ ದಾರಿಯಲ್ಲಿ ಬಿದ್ದ ಬುಟ್ಟಿಯೊಂದಕ್ಕೆ ಅಡ್ಡಗಾಲು ಹಾಕಿ ಎಡವಿ ದತ್ತನ ಕೈ ಹಿಡಿದುಕೊಂಡೆ. ಅದರೆ ಇದರರ್ಥ ನಾನು ಭಯಗೊಂಡಿದ್ದೇನೆಂತಲ್ಲ. ಅಥವಾ ಸ್ವಲ್ಪ ಹೊತ್ತಿನ ಮುಂಚೆ ನಾನು ಓಡಲೆತ್ನಿಸಿದ್ದು ಭಯದಿಂದಲ್ಲ.  ಬದಲಾಗಿ ನಿಜ ಹೇಳಬೇಕೆಂದರೆ ನನ್ನೊಳಗೆ ಉದ್ವೇಗವಿತ್ತು.  ಈ ಗಲಭೆಯ  ಸಂದರ್ಭದಲ್ಲಿ ಏನನ್ನಾದರೂ ಮಾಡಬೇಕೆನ್ನುವ ಹುಮ್ಮಸ್ಸಿತ್ತು. ಕ್ರಾಂತಿಗಾಗಿ ಕನಿಷ್ಟ ಒಂದು ಚಪ್ಪಲಿಯನ್ನು ತೂರುವುದರ ಮೂಲಕವಾದರು.

ಆ ಹೊಗೆಯಲ್ಲಿ ಕೆಲವು ಜನರನ್ನು ಪೋಲೀಸರು ಆಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ನಾನು ಪೋಲೀಸರತ್ತ ಉಗುಳಿದೆ. ನಾನು ಪೋಲಿಸರ ವಿರುದ್ಧ ಉಗುಳಿದ್ದನ್ನು ದತ್ತ ನೋಡಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಅವನಿಗೆ ಈ ಬಂಡವಾಳಶಾಹಿಗಳ ವಿರುದ್ಧದ ನನ್ನೊಳಗಿನ ಆಕ್ರೋಶ ಅರಿವಾಗಬೇಕೆಂಬುದು ನನ್ನ ಆಸೆ. ಅದರೆ ಅವನು ಇದ್ಯಾವುದನ್ನು ಗಮನಿಸದೆ ಯಂತ್ರದಂತೆ ನೆಟ್ಟಗೆ ನಡೆಯುತ್ತಿದ್ದ. ಅವನ ನೇರವಾದ, ಗೊಂದಲವಿಲ್ಲದ ಈ ನಡಿಗೆ ಯಾವುದೋ ಸೆಮಿನಾರ್ ನ  ಭಾಷಣಕ್ಕೆ ಹೋಗುವಂತಿತ್ತು. ನನಗೆ ಅಸಹ್ಯವೆನಿಸಿತು.  ನಾನು ತಿರುವಿನ ಬಳಿ ಸಾಗುತ್ತಿದ್ದಂತೆಯೇ ಗಲಭೆ ನಮ್ಮೆಲ್ಲರ ಕೈಮೀರಿದಂತಿತ್ತು. ಹಠಾತ್ತಾಗಿ ಬೀದಿಯ ಮದ್ಯೆ, ಮನೆ, ಅಂಗಡಿಗಳ ಮೇಲೆ ಎಲ್ಲೆಲ್ಲಿಯೂ ಜನರು ಕಾಣಿಸಕೊಳ್ಳತೊಡಗಿದರು. ನಾನು ಈ ಜನಸಮೂಹದಲ್ಲಿ, ಈ ಸಮೂಹ ಸನ್ನಿಯಲ್ಲಿ ಸಿಕ್ಕಿಕೊಂಡಿರುವುದು ಖಾತ್ರಿಯಾಯಿತು. ನನ್ನ ಅಸಹಾಯಕತೆಯನ್ನು ಹಳಿದುಕೊಂಡೆ. ನಾನು ಉತ್ತೇಜನಕ್ಕಾಗಿ ರೋಧಿಸತೊಡಗಿದೆ. ನಾನು ಈ ಜನ ಸಮೂಹವನ್ನು ಪ್ರಚೋದಿಸುತ್ತಾ, ಅದರ ನಾಯಕತ್ವ ವಹಿಸಿಕೊಳ್ಳಲು ಬಯಸಿದ್ದೆ…. ಆದರೆ ಈ ಜನ ಸಮೂಹ ನನ್ನನ್ನು ನೆಲದ ಮೇಲೆ ಕಾಲಿಡದಂತೆ ತಳ್ಳತೊಡಗಿತು. ನಾನು ಹರಸಾಹಸ ಮಾಡಿ ದತ್ತನಿಗೆ ಅಂಟಿಕೊಂಡು ಇಲ್ಲ ನಾನು ಈ ರೀತಿಯ ಅಸಹಾಯಕ ಮನುಷ್ಯನಲ್ಲ ! ನನಗೆ ಈ ಶೋಷಣೆ ವಿರುದ್ದ ಹೋರಾಟಕ್ಕೆ ಒಂದು ಅಸ್ತ್ರವನ್ನು ಕೊಡಿ !! ಒಂದು ಬಾಂಬನ್ನು ಕೊಡಿ!! ಇಲ್ಲವೇ ನಿಮ್ಮ ಕಾರೊಳಗೆ ತೂರಿಕೊಳ್ಳಲು ಬಿಟ್ಟುಬಿಡಿ !! ಇಲ್ಲಿ ಏನನ್ನೂ ಮಾಡಲಿಕ್ಕಾಗದ ಅವಮಾನಕ್ಕಿಂತ ನಿಮ್ಮ ಕಾರಲ್ಲಿ ತೂರಿಕೊಳ್ಳುವುದು ಉತ್ತಮವೆಂದು ನನಗನ್ನಿಸುತ್ತಿದೆ!!! ಹೌದು ಮಿ.ದತ್ತರ ಬಳಿ ಈ ರೀತಿಯ ಒಂದು ಹುಚ್ಚು ಹುಚ್ಚಾದ ಮೌನ ಕೋರಿಕೆಯನ್ನು ಮಾಡಿದೆ.

ನನಗೆ ಈ ದತ್ತನ ಜಾಣತನದ ಬಗೆಗೆ ಮೆಚ್ಚುಗೆಯಾಯ್ತು. ಇಷ್ಟೊಂದು ಗಲಭೆ, ಕಲ್ಲು ತೂರಾಟ, ಬೆಚ್ಚಿಬೀಳಿಸುವ ಶಬ್ದಗಳ ನಡುವೆಯೂ ಇವನು ಚಾಣಾಕ್ಷತನದಿಂದ ನನ್ನನ್ನು ಈ ಗಲಭೆಪೀಡಿತ ರಸ್ತೆಯಿಂದ ಪಾರುಮಾಡಿಸಿ ಅಲ್ಲಿ ಮೂಲೆಯಲ್ಲಿದ್ದ ತನ್ನ ಕಾರ್‌ನ ಬಳಿಗೆ ಕರೆದೊಯ್ದಿದ್ದ. ಆ ಅತ್ಯಂತ ದೊಡ್ಡ ಮಿರಮಿರ ಮಿಂಚುವ ಕಪ್ಪು ಕಾರು ನೋಡಿದ ತಕ್ಷಣ ನನಗೆ ಒಂದು ರೀತಿಯಲ್ಲಿ ಅದು ಅತಿ ಘೋರವೆನಿಸಿತು. ಹಾಗೂ ಈ ದತ್ತನ ಶ್ರೀಮಂತ ಪ್ರದರ್ಶನಕ್ಕೆ ಹೀಯಾಳಿಸಬೇಕೆನಿಸಿತು. ನೀನು ಇಂದಿನ ಈ ಗಲಭೆ, ಸಾವು ನೋವಿನ ದಿನದಂದೂ ಕೂಡ ಸೂಟ್ ಹಾಗೂ ಟೈ ಅನ್ನು ಧರಿಸಿ, ಇದರ ಜೊತೆಗೆ ಇಂತಹ ಐಷಾರಾಮಿ ಕಾರನ್ನು ಇಟ್ಟುಕೊಂಡು ಶ್ರೀಮಂತಿಕೆಯಿಂದ ಓಡಾಡುತ್ತಿರುವುದು ಈ ಗಲಭೆಯಿಂದ ತೊಂದರೆಗೊಳಗಾದ ಸಾವಿರಾರು ಜನರನ್ನು ಅವಮಾನ ಮಾಡಿದಂತಾಗಲಿಲ್ಲವೇ ಎಂದು ಕೇಳಬೇಕೆನಿಸಿತು. ಅಲ್ಲಿ ಅ ರಸ್ತೆಯ ಅಂಚಿನಲ್ಲಿ ಒಂದು ಗಾಡಿ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿತ್ತು. ಆದರೆ ದತ್ತ ಇದನ್ನು ಕಡೆಗಣಿಸಿ ಕಾರನ್ನೇರಿದ. ಅವನ ಜೊತೆಗೆ ನಾನೂ ಕಾರೊಳಗೆ ತೂರಿಕೊಂಡೆ ಆರಾಮಾಗಿ!

(ಈ ಬಾರಿ ನನ್ನಲ್ಲಿ ಅಂತಹ ಗೊಂದಲಗಳಿದ್ದಂತಿರಲಿಲ್ಲ.)  ಚಲಿಸುವ ಕಾರಿನೊಳಗೆ ನನ್ನನ್ನು ನಾನು ಹಿಂಬದಿಯ ಕನ್ನಡಿಯೊಳಗೆ ನೋಡಿಕೊಂಡೆ. ಅಲ್ಲಿನ ಪ್ರತಿಬಿಂಬ ನನಗೆ ಧೈರ್ಯವನ್ನು ಕೊಡುತ್ತಿತ್ತು. ಅದೇ ಪರಿಚಿತ ಗುಳಿಬಿದ್ದ ಕೆನ್ನೆಗಳು, ಉಬ್ಬಿದ ಹಣೆ, ಆತಂಕದ ಕಣ್ಣುಗಳು. ಅಥವಾ ಅದೇ ಉಪೇಂದ್ರ ದಾಸ್‌ನ ಕ್ರಾಂತಿಕಾರಿ ಚಹರೆ. ಒಂದು ಕಾಲದಲ್ಲಿ ಹಳ್ಳಿಯ ಶಾಲೆಯಲ್ಲಿ ಇಂಗ್ಲೀಷನ್ನು ಭೋದಿಸುತ್ತಿದ್ದ ಈ ಉಪೇಂದ್ರ ದಾಸ್ ಈಗ ಕಲ್ಕತ್ತದ ಸರ್ಕಾರಿ ಕಛೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತ. ನನ್ನ ಈ ಚಹರೆಯನ್ನು ಎಣ್ಣೆ ಮುಖದ ಕಾರೊಳಗಿನ ನನ್ನ ಸಂಗಾತಿಯೊಂದಿಗೆ ಯಾರಾದರೂ ಹೋಲಿಸಿ ಗೊಂದಲಗೊಂಡರೆ??  ಒಂದು ವೇಳೆ ಹೋಲಿಸಿದರೂ ಅವರಿಗೆ ವ್ಯತ್ಯಾಸಗಳು ಗೊತ್ತಾಗುತ್ತವೆ. ಏಕೆಂದರೆ ನಾನು ಅಲ್ಲಿ ಬೀದಿಗಳಲ್ಲಿ ಗಲಭೆಯಲ್ಲಿ ಹೋರಾಡುತ್ತಿರುವ ಸಾವಿರಾರು ಜನರೊಂದಿಗೆ ಬಾಯಲ್ಲಿ ಹೇಳಲಾರದ ಹೃದಯದ ಮೌನ ಭಾಷೆಯನ್ನು ಬಳಸಿ ಮಾತನಾಡಿದ್ದೇನೆ.

“ಕಾಮ್ರೇಡ್ಸ್, ನಾನು ಇವನೊಂದಿಗೆ ಇರುವುದು ತಾತ್ಕಾಲಿಕ ಮಾತ್ರ. ನಾನು ಎಂದಿಗೂ ನಿಮ್ಮವನೇ.  ಇವನೊಂದಿನ ಈ ತಾತ್ಕಾಲಿಕ ಐಷಾರಾಮಿ ಸ್ನೇಹ ನಿಮ್ಮೊಂದಿಗಿನ ಸಂಬಂಧವನ್ನು ಕಡಿದು ಹಾಕಲಾರದು !! ನನ್ನ ಪ್ರಿಯ ಕಾಮ್ರೇಡ್ ಸ್ನೇಹಿತರೇ, ನಾನು ಸಧ್ಯಕ್ಕೆ ಸ್ಥಗಿತಗೊಂಡಿದ್ದೇನೆ!!  ಆದರೂ ನಾನು ನಿಮ್ಮೊಂದಿಗಿದ್ದೇನೆ!!  ಕ್ರಾಂತಿ ಚಿರಾಯುವಾಗಲಿ!!!” ಅತ್ಯಂತ ಸುಖಮಯವಾಗಿ ಈ ವಿದೇಶಿ ಕಾರು ಚಲಿಸುತ್ತಿರುವಾಗಲೂ ಕೂಡ ನನ್ನಲ್ಲಿ ಅನೇಕ ಪ್ರಶ್ನೆಗಳೇಳುತ್ತಿದ್ದವು.   “ನಾವು ಸಾಗುತ್ತಿರುವ ರಸ್ತೆ ಗಲಭೆಗ್ರಸ್ತ ರಸ್ತೆಗೆ ಸಮಾನಂತರದಲ್ಲಿದೆ. ಯಾರಿಗೆ ಗೊತ್ತು ಇಲ್ಲಿಯೂ ಕೂಡ ಲುಂಗಿಯನ್ನು ಧರಿಸಿದ ಯುವಕರು ಕೈಯಲ್ಲಿ ಕಲ್ಲು ಹಿಡಿದು ಮರದ, ಕಟ್ಟಡದ ಮರೆಯಲ್ಲಿ ನಿಂತಿದ್ದರೆ ? ನಮ್ಮ ಸುರಕ್ಷತೆಯ ಬಗೆಗೆ ಯಾವ ಗ್ಯಾರಂಟಿ ?  ಇಲ್ಲಿ ನಮ್ಮ ಅಂದರೆ ಈ ಬೂರ್ಜ್ವ ದತ್ತನ ಸುರಕ್ಷತೆ ಹೇಗೆ ಎಂದರ್ಥ.” ಹೀಗೆ ಪ್ರಯಾಣ ಮುಂದುವರಿಯುತ್ತಿದ್ದಾಗ ದಾರಿಯಲ್ಲಿ ಗುಡಿಸಲುಗಳು, ಬಡತನವನ್ನು ಹೊದ್ದುಕೊಂಡು ನಿಂತಿದ್ದ ಅರೆಬೆತ್ತಲಿನ ಸಣ್ಣ ಹುಡುಗರು, ಟೀ ಅಂಗಡಿ, ಅದಕ್ಕೆ ನೇತುಬಿದ್ದ ಒಣಗಿದ ಬಾಳೆ ಹಣ್ಣು, ಟೀ ಪೊಟ್ಟಣಗಳು ಕಣ್ಣಿಗೆ ಬಿದ್ದವು. ಒಂದು ರೀತಿಯಲ್ಲಿ ಮಂಕು ಕವಿದ ನೀರವತೆ! ಈ ಮಧ್ಯೆ ಅಂಬುಲೆನ್ಸ್ ನಮ್ಮನ್ನು ದಾಟಿ ಮುಂದೆ ಚಲಿಸಿದ್ದನ್ನು ಬಿಟ್ಟರೆ ಸಧ್ಯಕ್ಕೆ ಅಂತಹ ವಿಶೇಷವಾದುದ್ದೇನು ಕಾಣಿಸಲಿಲ್ಲ. ಅಂದರೆ ನಾವು ಗಲಭೆಪೀಡಿತ ಪ್ರದೇಶವನ್ನು ದಾಟಿದ್ದೇವೆಂದಾಯ್ತು. ದಾರಿ ಮುಂದೆ ಸಾಗಿದಂತೆ ಇಲ್ಲಿ ಯಾವುದೇ ಹೊಗೆ ಕಾಣಿಸುತ್ತಿರಲಿಲ್ಲ. ಅದರ ಬದಲಿಗೆ ಆಕಳುಗಳು, ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಹಸಿರು ಕಣ್ಣಿಗೆ ಮುದಗೊಳಿಸುತ್ತಿದೆ. ಆದರೆ ನನ್ನೊಳಗಿನ ಅಂತರಾತ್ಮ ನನ್ನನ್ನು ಕೆಣಕುತ್ತಿದ್ದ.  “ಉಪೇಂದ್ರ ದಾಸ್, ನೀನು ಆ ಚಳುವಳಿಯಲ್ಲಿ ಭಾಗವಹಿಸದೆ ತಪ್ಪು ಮಾಡಲಿಲ್ಲವೇ?  ಈ ಬೂರ್ಜ್ವ ಕ್ರಿಮಿಯ ಜೊತೆ ಸೇರಿ ನಿನ್ನನ್ನು ನೀನು ಈ ಗಲಭೆಯಿಂದ ರಕ್ಷಿಸಿಕೊಂಡೆಯಲ್ಲವೇ?  ಇಲ್ಲಿ ಗೆದ್ದದ್ದು ಆ ಬೂರ್ಜ್ವ ದತ್ತ !!  ಇವನು ಬಲಶಾಲಿಯಾದಂತಹ ಆನೆ ಇರುವೆಗಿಂತಲೂ ಶಕ್ತಿಶಾಲಿ ಎಂದು ಸಾಬೀತುಪಡಿಸಿಬಿಟ್ಟ. ಈ ಎಲ್ಲ ಪ್ರಶ್ನೆಗಳನ್ನು ಆ ಗಲಭೆಗ್ರಸ್ತ ಜನ ನಿನ್ನನ್ನು ಕೇಳುತ್ತಾರೆ.”

ನಾನು ಆಪಾದನೆ ಮುಕ್ತಗೊಳ್ಳುವ ಭರವಸೆಯಿದ್ದರೂ ನನಗೆ ಸುಸ್ತಾಗತೊಡಗಿತು. “ಆ ಬಾತು ಕೋಳಿಗಳನ್ನು ನೋಡಿದಾಗ ಆ ಬಾತು ಕೋಳಿಯಂತಹ ಕತ್ತಿನ ನನ್ನ ಜೊತೆಗಾರನ ಕತ್ತನ್ನು ತಿರುಚಲು ನನಗೆ ಮನಸ್ಸಾಗಿತ್ತೆಂದು ನಾನು ಆ ಹೋರಾಟಗಾರರಿಗೆ ಹೇಗೆ ಹೇಳಲಿ?” ಈ ಸುಖಕರ ಪ್ರಯಾಣ ಕ್ಷಣಿಕವಾಗಿತ್ತು. ಒಂದು ಕಲ್ಲು ಎಲ್ಲಿಂದಲೋ ತೂರಿ ಬಂದು ನಾವು ಕುಳಿತಿದ್ದ ವಿದೇಶಿ ಕಾರಿಗೆ ಬಡಿಯಿತು. ಮತ್ತೊಂದು ಕಲ್ಲು ನಾನು ಕುಳಿತ ಸೀಟಿನ ಬಾಗಿಲಿಗೆ ಬಂದಪ್ಪಳಿಸಿತು. ನಮ್ಮ ಕಣ್ಣೆದುರಿಗೆ ಈ ಕೃತ್ಯವನ್ನು ಎಸುಗಿದ ವ್ಯಕ್ತಿ ಗೋಚರಿಸತೊಡಗಿದ. ಆದರೆ ಇವನು ಲುಂಗಿ ಅಥವಾ ಧೋತಿಯನ್ನು ಉಟ್ಟಿರಲಿಲ್ಲ. ಬದಲಿಗೆ ಇವನ ಕಣ್ಣಲ್ಲಿ ಮೃಗದ ಬೇಟೆಯ ಛಾಯೆಯಿತ್ತು. ಅಲ್ಲಿ ಅಪಾರವಾದ ಸಿಟ್ಟಿತ್ತು. ನಾನು ನಡುಗಲಾರಂಬಿಸಿದೆ. ಆದರೆ ಜೊತೆಗಾರ ದತ್ತ ಇದರಿಂದ ವಿಚಲಿತನಾಗದೆ ತಣ್ಣಗೆ ಕಾರು ಓಡಿಸುತ್ತಿದ್ದ. ಇವನ ಕೆನ್ನೆ, ತುಟಿ ಹಾಗೂ ಕಣ್ಣುಗಳಲ್ಲಿ ಒಂದು ರೀತಿಯ ವಿಚಿತ್ರವಾದ ತಣ್ಣಗಿನ ಧೃಡತೆಯಿತ್ತು. ಇವನಲ್ಲಿ ಈ ಹಲ್ಲೆಗಾರನನ್ನು ಮುಗಿಸುವಂತಹ ಯೋಜನೆಯಿದ್ದಂತಿತ್ತು. ಆದರೆ ಕಲ್ಲುಗಳ ಮೇಲೆ ಕಲ್ಲುಗಳು ಇದೇ ರೀತಿ ಬಂದು ಈ ಕಾರಿನ ಮೇಲೆ, ಇವನ ಮೇಲೆ ಅಪ್ಪಳಿಸಲಿ, ಈ ಬೂರ್ಜ್ವ ದತ್ತ ಅಪಾರವಾಗಿ ನರಳಿ ಮಂಡಿಯೂರಿ ಪ್ರಾಣಭಿಕ್ಷೆ ಬೇಡುವಂತಾಗಲಿ ಎಂದು ನಾನು ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಅಷ್ಟರಲ್ಲಿ ಮತ್ತೊಂದು ದೊಡ್ಡ ಕಲ್ಲು ನೇರವಾಗಿ ಬಂದು ಕಾರಿನ ಮುಂಬದಿಯ ಗಾಜಿಗೆ ಬಂದಪ್ಪಳಿಸಿತು.  ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟುಕೊಂಡರೂ ಛಿದ್ರ ಛಿದ್ರವಾಗಲಿಲ್ಲ. ಈ ದತ್ತ  “ಈ ಗಲಭೆಕೋರರಿಗೆ ಈ ಗಾಜು ಒಡೆಯಲಾರದಂತೆ ಪುಲ್ ಪ್ರೂಫ್ ಆಗಿದೆ ಎಂದು ಗೊತ್ತಿಲ್ಲ,”  ಎಂದು ಗೊಣಗುತ್ತಿದ್ದುದು ಕಿವಿಗೆ ಬಿತ್ತು.  ಎಂತಹ ಅವಮಾನ!!  ಅಷ್ಟರಲ್ಲಿ ಆ ಹಲ್ಲೆಗಾರ ಕೈಯಲ್ಲಿ ದುಂಡನೆಯ ಲೋಹವನ್ನು ಹಿಡಿದುಕೊಂಡು ನೇರವಾಗಿ ನಮ್ಮ ಕಾರಿನ ಮುಂಭಾಗಕ್ಕೇ ಬಂದು ನಿಂತ.  ಅದು ಬಾಂಬ್!!!  ಆದರೆ ಕಿರುಚಿಕೊಳ್ಳಲೂ ಸಮಯವಿಲ್ಲ!!  ಅರೆ ನಿಲ್ಲು ನಿಲ್ಲು ನಾನೂ ಕೂಡ ನಿನ್ನ ಜೊತೆಗಿದ್ದೇನೆ, ಈ ಬಾಂಬ್ ಏತಕ್ಕೆ??  ಇದು ಹೇಡಿತನದ ಕೃತ್ಯ ಎಂದು ಕಿರುಚಲಾರಂಬಿಸಿದೆ. ಅಷ್ಟರಲ್ಲಿ ದತ್ತ ಹಾವಿನಂತೆ ಬುಸುಗುಡುತ್ತಾ ಮೆಲ್ಲಗೆ ಸರಿಯಲಾರಂಭಿಸಿದ.

ಅಷ್ಟರಲ್ಲಿ ಒಬ್ಬ ಪೋಲೀಸ್ ಬಂದೂಕಿನೊಂದಿಗೆ ಬರುತ್ತಿರುವುದು,  ರಸ್ತೆಯಲ್ಲಿ ರಕ್ತ ಚೆಲ್ಲಿದ್ದು ಎಲ್ಲವೂ ನನಗೆ ಮುಸುಕಾಗಿ ಕಾಣಲಾರಂಬಿಸಿತು.  ಆಗಲೇ ನಾನು ಎಚ್ಚರ ತಪ್ಪಿ ಕೆಳಗೆ ಬಿದ್ದಿದ್ದೆ. ನಾನು ಎಚ್ಚರಗೊಂಡಾಗ ಒಂದು ಮುರುಕು ಗ್ಯಾರೇಜಿನಲ್ಲಿ ಬಿದ್ದಿರುವುದು ಗೊತ್ತಾಯಿತು. ಜೊತೆಗಾರ ದತ್ತ ಜೋರಾಗಿ ಉಸಿರಾಡುತ್ತಿರುವುದು ಕಿವಿಗೆ ಬೀಳುತ್ತಿತ್ತು. ಜೊತೆಗೆ ಅಲ್ಲಿ ಒಬ್ಬ ಸರ್ದಾರ್‌ಜಿ ಇದ್ದ. ಬಹುಶ ಆ ಗ್ಯಾರೇಜಿನ ಮಾಲೀಕನಿರಬಹುದು. ಈ ಸರ್ದಾರ್‌ಜಿ ನನ್ನನ್ನು ಉದ್ದೇಶಿಸಿ ಹೇಳತೊಡಗಿದ,  “ನೀನು ನಿಜಕ್ಕೂ ಅದೃಷ್ಟಶಾಲಿ, ನೀನು ಅವನಂತೆ ಸಾಯಲಿಲ್ಲ … ” ಎಂದು ಅರ್ಧದಲ್ಲೇ ಮಾತು ನಿಲ್ಲಿಸಿ ದತ್ತನೆಡೆಗೆ ನೋಡಿದ.  ಅವರಿಬ್ಬರ ನಡುವೆ ಅಲ್ಲೇನೋ ಕಣ್ಣುಗಳ ಮೂಲಕ ಸಂಭಾಷಣೆ ನಡೆದಂತಾಯ್ತು. ಇದಕ್ಕೆ ಅಷ್ಟು ಗಮನ ಕೊಡದೆ ನಾನು ನಡೆಯಿರಿ ಇಲ್ಲಿಂದ ಹೊರಡೋಣ ಎಂದೆ.  ಆಗ ದತ್ತ ನನ್ನ ಭುಜದ ಸುತ್ತ ಕೈ ಹಾಕಿ ಸಂಕ್ಷಿಪ್ತವಾಗಿ ಹೇಳಿದ  “ನನ್ನ ಕಾರು ಹಾಳಾಗಿದೆ,  ನನ್ನ ನಾದಿನಿಯ ಮನೆಗೆ ನಡೆದೇ ಹೋಗೋಣ, ಈ ಸರ್ದಾರ್‌ಜಿಯ ಸಹಕಾರದಿಂದ ನಿನ್ನ ಪ್ರಾಣ ಉಳಿಯಿತು.”  ಸರ್ದಾರ್‌ಜಿ ನಿಮ್ಮಿಂದಲೂ ಸಹ ಎಂದು ದತ್ತನಿಗೆ ಹೇಳಿದ. ಒಟ್ಟಿನಲ್ಲಿ ಇವರಿಬ್ಬರೂ ನನ್ನನ್ನು ಉಳಿಸಿದರೆಂದಾಯ್ತು.  (ಸಾಯಿಸಿದ್ದು ಯಾರನ್ನ??)  ಆ ಸಂಜೆ ಕತ್ತಲಿನ ದಾರಿಯನ್ನು ನಾವು ನಡೆದು ದತ್ತನ ನಾದಿನಿ ಅನುರಾಧ ಅವರ ಮನೆ ತಲುಪಿದೆವು. ಅವರ ಮನೆಯ ಸೋಫಾದಲ್ಲಿ ನಾನು ನಿಶ್ಯಕ್ತನಾಗಿ ಕುಸಿದು ಕುಳಿತೆ. ದೊಡ್ಡದಾದ ಕಣ್ಣುಗಳನ್ನು ಹೊಂದಿದ್ದ ದತ್ತನ ನಾದಿನಿ ಅನುರಾಧ ತೆಳ್ಳಗೆ ಎತ್ತರವಿದ್ದಳು. ಪಟ ಪಟನೆ ಮಾತನಾಡುತ್ತಿದ್ದಳು. ಅವಳ ಮಾತಿನಲ್ಲಿ ಸ್ತ್ರೀವಾದದ ಛಾಯೆ ಇಣುಕುತ್ತಿತ್ತು. ಅವಳು ನೀಡಿದ ಕಾಫಿಯನ್ನು ಕುಡಿಯುತ್ತಾ ಅನುರಾಧಳನ್ನು ಗಮನಿಸಿದಾಗ ಅವಳು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆಯಂತೆಯೂ ಮಗದೊಮ್ಮೆ ನನ್ನ ನಾದಿನಿಯಂತೆಯೂ ಮತ್ತೊಮ್ಮೆ ಅಪ್ತ ಸ್ನೇಹಿತಳಂತೆಯೂ ಗೋಚರಿಸುತ್ತಿದ್ದಳು. ಪರಿಚಯವಾದ ಕೆಲವೇ ಕ್ಷಣಗಳಲ್ಲಿ ನನ್ನೊಂದಿಗೆ ಬೆರೆತು ಮಾತನಾಡುವ ರೀತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿತ್ತು.

ಆ ಮನೆಯನ್ನೊಮ್ಮೆ ಕಣ್ಣಾಡಿಸಿದಾಗ ಅಲ್ಲಿ ಇಕೆಬಾನದ ಹೂವುಗಳು, ವ್ಯಾನ್‌ಗೋವನ ಪೇಂಟಿಂಗಳೂ, ಮೊಘಲರ, ಟಾಲ್‌ಸ್ಟಾಯ್, ಠ್ಯಾಗೂರ್ ರವರ ಭಾವಚಿತ್ರಗಳೂ ಕಣ್ಣಿಗೆ ಬಿದ್ದವು. ಅಂದರೆ ಈ ಅನುರಾಧ ನನಗಿಂತಲೂ ಬುದ್ಧಿಜೀವಿಯೇ??  ಹಿಂದೊಮ್ಮೆ ನಮ್ಮಿಬ್ಬರ ಪ್ರಥಮ ಭೇಟಿಯ ಸಂದರ್ಭದಲ್ಲಿ ದತ್ತನಿಗೆ ನಾನು ಇಂಗ್ಲೀಷ್ ಕ್ಲಾಸಿಕ್ ನಾಟಕದ ಪುಸ್ತಕವೊಂದನ್ನು ತೋರಿಸಿ ಅದನ್ನು ಓದಲು ಶಿಫಾರಸ್ಸನ್ನು ಮಾಡಿದ್ದೆ.  ಆ ಪುಸ್ತಕವನ್ನು ಈಗ ಅವನ ನಾದಿನಿ ಅನುರಾಧಳ ಮನೆಯಲ್ಲಿ ನೋಡಿದೆ. ಇದನ್ನು ಆ ದತ್ತ ಇವಳಿಗೆ ಉಡುಗೊರೆಯಾಗಿ ಕೊಟ್ಟನೆ??  ಅಷ್ಟರಲ್ಲಿ ದತ್ತ ನನಗೆ ಮತ್ತಷ್ಟು ಉಪಚಾರ ಮಾಡತೊಡಗಿದ. ಈ ಮಧ್ಯೆ ದತ್ತ ಹಾಗೂ ಅನುರಾಧಾ ಅವರ ನಡುವೆ ಸರಸದ ಸಂಭಾಷಣೆಗಳು ವಿನಿಮಯವಾಗುತ್ತಿದ್ದವು. ಅಲ್ಲಿ ಸಾಹಿತ್ಯವಿತ್ತು, ಚರಿತ್ರೆಯಿತ್ತು. ಈ ದತ್ತನಿಗೆ ಈ ಸ್ಥಿಥಪ್ರಜ್ಞಾತೆ ಹೇಗೆ ಸಾಧ್ಯವಾಯಿತು??  ಇದರ ಮಧ್ಯೆ ನನಗೆ ದತ್ತನನ್ನು ಕೇಳಬೇಕೆನಿಸಿದ  “ಆ ಹಲ್ಲೆಕೋರನನ್ನು ಕೊಂದಿದ್ದು ನೀನೋ ಅಥವಾ ಪೋಲೀಸನೋ??  ನನಗೆ ನಿಜಕ್ಕೂ ಆಗಿದ್ದೇನು??  ಈ ಮಧ್ಯೆ ಆ ಸರ್ದಾರ್ಜಿ ಎಲ್ಲಿಂದ ಬಂದ ??” ಎನ್ನುವ ಪ್ರಶ್ನೆಗಳು ನನ್ನೊಳಗೇ ಉಳಿದವು. ಒಂದು ವೇಳೆ ಕೇಳಿದರೆ ಪ್ರತ್ಯುತ್ತರವಾಗಿ ದತ್ತ ಇದನ್ನೆಲ್ಲಾ ಕೇಳಲು ಹಾಗೂ ಹೇಳಲು ಇದು ಸಂದರ್ಭವಲ್ಲ ಎಂದರೆ ಏನು ಮಾಡುವುದು?. ಇಷ್ಟರಲ್ಲಾಗಲೇ ಕಾಫಿ ತಣ್ಣಗಾಗುತ್ತಿತ್ತು. ಅತಿಥೇಯಳು ಕೊಂಚ ದುಗುಡದಲ್ಲಿದ್ದಂತಿತ್ತು. ನನ್ನೊಳಗಿನ ಅಂತರಾತ್ಮ ಮತ್ತೆ ನನ್ನನ್ನು ಕೆಣಕತೊಡಗಿದ. “ದತ್ತ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವನೇ?? ನಿನಗಿಂತಲೂ ಅವನು ಅನುಭವಸ್ಥ.  ನೀನಿನ್ನೂ ಎಳಸು.” ನನ್ನಲ್ಲಿ ಗೋಜಲಾಗತೊಡಗಿತು. ಆ ಗಲಭೆಪೀಡಿತ ರಸ್ತೆಗಳು, ಯಾವ ಬಾಂಬ್ ಗೂ ಒಡೆಯದ ಕಾರಿನ ಗಾಜು, ರಕ್ಷಣೆಗಾಗಿ ಮೊರೆಯಿಡುತ್ತಿರುವ ಹತ್ಯೆಗೊಳಗಾದ ಜನ, ಈ ಸುಂದರ ಮನೆ, ಇಲ್ಲಿನ ಕವಿಗಳ, ಚಿತ್ರಕಾರರ ಭಾವಚಿತ್ರಗಳು, ಮನಮೋಹಕ ಅನುರಾಧ … ಅಷ್ಟರಲ್ಲಿ ನನ್ನ ಗಮನ ತೆರೆದ ಕಿಟಿಕಿಯೆಡೆಗೆ ಹರಿಯಿತು. ಹೊರಗಡೆಯಿಂದ ಗಲಭೆಯ ಸದ್ದಿಗೆ ಕಾತರಿಸಿದೆ. ಆದರೆ ಎಲ್ಲವೂ ನಿಶ್ಯಬ್ದವಾದಂತಿತ್ತು. ಅಂದರೆ ಪ್ರತಿಭಟನೆಯ ಧ್ವನಿಗಳು ಸತ್ತು ಹೋದವೆ??  ಅದರ ಪ್ರತಿಧ್ವನಿಗಳೂ ಸಹ??  ಈ ದತ್ತನನ್ನು ಕೇಳಲೆ ? ಅವನ ನಾದಿನಿ ಅನುರಾಧಳನ್ನು??  ಇವೆಲ್ಲವನ್ನೂ ಮರೆತೂ ನಾನೂ ಇಲ್ಲಿನಂತೆ ಹವಾನಿಯಂತ್ರಿತ ಮನೆಯನ್ನು, ಸುಂದರ ತೋಟವನ್ನು ಹೊಂದಬೇಕೆನಿಸುತಿತ್ತು. ಏಕೆಂದರೆ ನಾನೂ ಮನುಷ್ಯನಲ್ಲವೇ !!  ನಾನು ನನ್ನ ಬದುಕಿನ ಅಂತಸ್ಥಿನಲ್ಲಿ ಮೇಲೇರಿದಾಗಲೇ ನಿಮ್ಮ ಕ್ರಾಂತಿಗೆ ನಾನು ಸಹಾಯ ಮಾಡಲು ಸಾಧ್ಯ. ನಿಮ್ಮನ್ನು ಮುನ್ನಡೆಸಲು ಸಾಧ್ಯ.  ಓಹ್ ಎಲ್ಲಾ ಗೋಜಲುಗಳು!!  ದತ್ತ ಹಾಗೂ ಅವನ ನಾದಿನಿ ಪದೇ ಪದೇ ತಮ್ಮ ಗಡಿಯಾರವನ್ನೂ ಆ ತೆರೆದ ಕಿಟಿಕಿಯನ್ನೂ ಆತುರದಿಂದ ನೋಡುತ್ತಿದ್ದರು. ನಾನು ಇದರ ಬಗ್ಗೆ ವಿಚಾರಿಸಿದಾಗ ಇವರಿಬ್ಬರೂ ಹೇಳಿದರು.

“ಅವನು ಬರುವುದು ಇಂದು ತಡವಾಗಬಹುದು. ಏಕೆಂದರೆ ಬಹಳಷ್ಟು ತಲೆಗಳನ್ನು ಎಣಿಸಬೇಕಲ್ಲವೇ?” ನನಗೆ ತಬ್ಬಿಬ್ಬಾಯಿತು. ಯಾರೀತ??  ಕುರಿಗಳ ತಲೆ ಎಣಿಸುವ ಕುರುಬನೇ?  ನನ್ನ ಗೊಂದಲವನ್ನು ಅರ್ಥ ಮಾಡಿಕೊಂಡ ದತ್ತ ಹೇಳಿದ. “ಆತನ ಹೆಸರು ನಾರಿಯನ್ ಬೋಸ್. ನನ್ನ ನಾದಿನಿ ಅನುರಾಧಾಳ ಪತಿ. ಆತ ಪೋಲೀಸ್ ವಿಶೇಷ ಪಡೆಗಾಗಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಬಗೆಗೆ ಕೇಳಿರಬೇಕಲ್ಲವೇ?”  ಇಲ್ಲ ಆತನ ಹೆಸರನ್ನು ನಾನು ಕೇಳಿರಲಿಲ್ಲ. ಮುಂದೆಯೂ ತಿಳಿದುಕೊಳ್ಳುವುದೂ ಬೇಡ. ನನಗೆ ಇವರಿಬ್ಬರೂ ನನ್ನನ್ನು ಇಲ್ಲಿಂದ ಹೊರಕಳುಹಿಸಲು ಪಿತೂರಿ ನಡೆಸುತ್ತಿರುವಂತಿತ್ತು. ಮತ್ತೆ ನನ್ನಲ್ಲಿ ರಕ್ತ,  ಆ ಎದೆಯನ್ನು (ಅಥವಾ ಹೊಟ್ಟೆಯನ್ನೋ ಅಥವಾ ಗಂಟಲನ್ನೋ) ಚಿಮ್ಮಿಕೊಂಡು ಬಂದಂತಹ ರಕ್ತ ತಲೆಯಲ್ಲಿ, ಕಣ್ಣಲ್ಲಿ ಹರಿದಾಡತೊಡಗಿತು. ಮತ್ತೆ ಸ್ವಲ್ಪ ಕಾಫೀ ಬೇಕೆ ಎಂದು ಅನುರಾಧಾ ಕೇಳುತ್ತಿದ್ದುದು ದೂರದಲ್ಲೆಲ್ಲೋ ಕೇಳಿಸುತ್ತಿತ್ತು. ಅಷ್ಟರಲ್ಲಿ ದತ್ತ ನನ್ನ ಬಳಿ ಬಂದು ಅನುಕಂಪದ ಧ್ವನಿಯಲ್ಲಿ ಹೇಳತೊಡಗಿದ  “ಈಗ ಹೇಗಿದ್ದೀಯ? ನಿನಗೆ ತಡವಾಗುತ್ತಿದೆ. ಮನೆಗೆ ಹೋಗಲ್ಲವೇ?  ನೀನಿರುವುದು ಮೋಮಿಪುರದಲ್ಲವೇ? ಕೆಳಗಿನ ವೃತದ ರಸ್ತೆಯನ್ನು ಬಳಸಿ ನಂತರ ಎಡಕ್ಕೆ ತಿರುಗಿದಾಗ ಈ ರಸ್ತೆಯ ಕೊನೆ ಸಿಗುತ್ತದೆ. ಅಲ್ಲಿಂದ ನಿಧಾನವಾಗಿ ಕೆಳಗೆ ನಡೆದುಕೊಂಡು ಹೋಗು.  ಹಿಂತಿರುಗಿ ಮಾತ್ರ ನೋಡಬೇಡ.”  ಆದರೆ ನಾನು ಹೊರಡುವ ಗಡಿಬಿಡಿಯನ್ನು ತೋರಿಸಲಿಲ್ಲ. ನನ್ನಲ್ಲಿ ಒಳಗೊಳಗೇ ನಡುಕವುಂಟಾಗತೊಡಗಿತು. ಅನುರಾಧ ಮತ್ತೊಮ್ಮೆ ಬರಲು ಆಹ್ವಾನಿಸಿದಳು. ದತ್ತ ನನ್ನನ್ನು ಗೇಟಿನವರೆಗೂ ಬಿಡಲಿಕ್ಕೆ ಬಂದ. ಕೆಳಗಿನ ವೃತ್ತದ ರಸ್ತೆಯಲ್ಲಿ ಬೆಳಕು ಚೆಲ್ಲಿತ್ತು. ಅಲ್ಲಿ ಸುತ್ತಲೂ ಕಲ್ಲು, ಮುರಿದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾರಾದರೂ ಬಂದು ಅವುಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಕಾಯುತ್ತಿದ್ದವು …..

Leave a Reply

Your email address will not be published. Required fields are marked *