ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…


– ಪರಶುರಾಮ ಕಲಾಲ್


ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:

  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)

ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?

ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.

ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.

ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.

ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.

2 thoughts on “ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…

  1. g.mahanthesh.

    ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪ ಅವರು, ರಾಗ ಬದಲಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇ ಒಂದು, ಪ್ರಟಕವಾಗಿದ್ದೇ ಒಂದು. ಹೀಗೆಂದು ಹೇಳುವ ಮೂಲಕ ರಾಜಕಾರಣಿಗಳ ವರಸೆ ಆರಂಭಿಸಿದ್ದಾರೆ. ನಿನ್ನೆಯಷ್ಟೇ ಹೇಳಿದ್ದ ಮಾತು, ಬೆಳಗಾಗುವುದರೊಳಗಾಗಿ ಬದಲಾಗಿತ್ತು. ಮಾಧ್ಯಮದವರ ಮೇಲೆ ಗೂಬೆ ಕೂರಿಸಿರುವ ಮುರಿಗೆಪ್ಪ, ಅಂದೇ ಎಲ್ಲವನ್ನೂ ಹೇಳಬಹುದಿತ್ತು. ಎಲ್ಲರೂ ಅಷ್ಟೇ, ಅಧಿಕಾರ ಅನುಭವಿಸುವವರೆಗೂ ಎಲ್ಲವನ್ನೂ ಒಪ್ಪಿಕೊಂಡು, ನಂತರ ಹುಳಿ ದ್ರಾಕ್ಷಿ ಕಥೆ ಹೇಳತೊಡಗುತ್ತಾರೆ. ಈ ಸಾಲಿಗೆ ಮುರಿಗೆಪ್ಪ ಹೊಸ ಸೇರ್ಪಡೆ ಅಷ್ಟೇ
    ಮಹಂತೇಶ್​, ಜಿ.

    Reply
  2. vittal

    ಪರಶುರಾಮ್,ಹೇಗಿದ್ದೀರಿ? ನಾಡೋಜ ಬೆಲೆ ಕಳೆದುಕೊಳ್ಳುತ್ತಿರುವುದಂತೂ ಸತ್ಯ. ಸರಿದಾರಿಗೆ ತರಬೇಕಾಗಿದೆ.–ವಿಠ್ಠಲ

    Reply

Leave a Reply to vittal Cancel reply

Your email address will not be published. Required fields are marked *