Monthly Archives: February 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 9)


– ಡಾ.ಎನ್.ಜಗದೀಶ್ ಕೊಪ್ಪ   


ಜಿಮ್ ಕಾರ್ಬೆಟ್ ಮೊಕಮೆಘಾಟ್ ನಿಲ್ದಾಣಕ್ಕೆ ಬಂದ ಐದನೇ ವರ್ಷಕ್ಕೆ ಸರಿಯಾಗಿ ಅವನ ಮೇಲಧಿಕಾರಿ ಸ್ಟೋರರ್‌ಗೆ ಬಡ್ತಿಯಾದ ಪ್ರಯುಕ್ತ ಬೇರೆಡೆ ವರ್ಗಾವಣೆಯಾಯಿತು. ಖಾಲಿಯಾದ ಆ ಸ್ಥಾನಕ್ಕೆ ರೈಲ್ವೆ ಇಲಾಖೆ ಕಾರ್ಬೆಟ್‌ನನ್ನು ನೇಮಿಸಿತು. ಸ್ಟೋರರ್ ವಾಸವಾಗಿದ್ದ ಬಂಗಲೆಯನ್ನು ಇಲಾಖೆಯಿಂದ ಖರೀದಿಸಿದ ಕಾರ್ಬೆಟ್  ಮೂವರು ಸೇವಕರನ್ನು ನೇಮಿಸಿಕೊಂಡು ಹೊಸ ಮನೆಯಲ್ಲಿ ವಾಸಿಸತೊಡಗಿದ. ಮೂವರು ಸೇವಕರಲ್ಲಿ ಒಬ್ಬ ಅಡುಗೆ ಮಾಡಲು, ಮತ್ತೊಬ್ಬ ಮನೆಗೆ ನೀರು ತರುವುದು, ಕಸಗುಡಿಸುವುದು ಇತ್ಯಾದಿ ಕೆಲಸಗಳಿಗೆ, ಇನ್ನೊಬ್ಬನನ್ನು ವಿದ್ಯುತ್ ಮತ್ತು ಫ್ಯಾನ್ ಇಲ್ಲದ ಆ ಕಾಲದಲ್ಲಿ ಕಾರ್ಬೆಟ್ ಗೆ ಗಾಳಿ ಬೀಸುವುದಕ್ಕೆ ನೇಮಕ ಮಾಡಲಾಗಿತ್ತು. ಪಂಖ ಎಂದು ಕರೆಯುತ್ತಿದ್ದ, ಬೀಸಣಿಗೆ ಆಕಾರದ ಬೃಹತ್ ಪರದೆಯೊಂದನ್ನು ಮಲುಗುವ ಮಂಚದ ಮೇಲೆ ತೂಗುಹಾಕಿ ಅದರ ಹಗ್ಗವನ್ನು ಮನೆಯ ಹೊರಗಡೆ ಇಳಿಬಿಡಲಾಗುತ್ತಿತ್ತು. ಮಾಲಿಕ ಮಲಗಿದಾಗ ಸೇವಕ ಹಗ್ಗವನ್ನು ಜಗ್ಗುತ್ತಿರಬೇಕು. ಈ ವ್ಯವಸ್ಥೆ ಆ ಕಾಲದಲ್ಲಿ ಉತ್ತರ ಭಾರತದ ಶ್ರೀಮಂತರು, ಬ್ರಿಟಿಷ್ ಅಧಿಕಾರಿಗಳು, ಸಂಸ್ಥಾನದ ದೊರೆಗಳ ಅರಮನೆಗಳಲ್ಲಿ ಚಾಲ್ತಿಯಲ್ಲಿತ್ತು.

ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ನಂತರ ಕಛೇರಿಯಲ್ಲಿ ಕುಳಿತು ಲೆಕ್ಕ ಪತ್ರ ನೋಡುವುದು, ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ಒಂದು ಗಂಟೆ ನಿದ್ರೆ ಮಾಡಿ ಮತ್ತೇ ಕೆಲಸದ ಸ್ಥಳಕ್ಕೆ ಹೊರಡುವುದು, ನಂತರ ಆ ದಿನದ ವಿವರಗಳನ್ನು ಕೇಂದ್ರ ಕಛೇರಿಗೆ ಟೆಲಿಗ್ರಾಮ್ ಮೂಲಕ ಕಳಿಸಿ ಬರುವುದು, ಇವೆಲ್ಲವೂ ಕಾರ್ಬೆಟ್‌ನ ದಿನಚರಿಯಾಗಿತ್ತು. ಮನೆಗೆ ಬಂದ ನಂತರ ಸ್ನಾನ ಮಾಡಿ, ರಾತ್ರಿ ಊಟದ ನಂತರ ಪುಸ್ತಕ ಓದಿ ಮಲಗುವುದು ಕಾರ್ಬೆಟ್‌ಗೆ ರೂಢಿಯಾಗಿತ್ತು. ಬೆಳದಿಂಗಳ ದಿನಗಳಲ್ಲಿ ಗಂಗಾ ನದಿಯಲ್ಲಿ ಮೀನು ಶಿಕಾರಿಗೆ ಸಹ ಹೋಗುತ್ತಿದ್ದನು. ಮೊಕಮೆಘಾಟ್‌ಗೆ ಬಂದ ನಂತರ ಕಾರ್ಬೆಟ್ ಬದುಕಿನಲ್ಲಿ  ಮತ್ತೊಂದು ಬದಲಾವಣೆಯಾಯಿತು., ಗಂಗಾನದಿಯ ತೀರಕ್ಕೆ ಬರುತಿದ್ದ ಬಗೆ ಬಗೆಯ ಪಕ್ಷಿಗಳು ಮತ್ತು ಪತಂಗಗಳ ಬಗ್ಗೆ ಕಾರ್ಬೆಟ್ ಅಪಾರ ಆಸಕ್ತಿ ಬೆಳಸಿಕೊಂಡ. ಅವುಗಳ ಜೀವನ ಕುರಿತು ಅಧ್ಯಯನ ಮಾಡತೊಡಗಿದ.

ಮೊಕಮೆಘಾಟ್ ಪ್ರಮುಖ ರೈಲ್ವೆ ಜಂಕ್ಷನ್ ಆದ ಪರಿಣಾಮ ಸದಾ ವಿವಿಧ ಬಗೆಯ ಸಂಸ್ಕೃತಿ, ಭಾಷೆಯ ಜನರಿಂದ ತುಂಬಿ ತುಳುಕುತ್ತಿತ್ತು. ಅವೆರೆಲ್ಲರ ಆಚಾರ, ವಿಚಾರ, ಆಹಾರ, ಉಡುಪು, ಇವೆಲ್ಲವನ್ನು ಕಾರ್ಬೆಟ್ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಬ್ರಿಟಿಷ್ ಸರ್ಕಾರ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಇಂಗ್ಲೆಂಡ್‌ನಲ್ಲಿ ಯುವಕರನ್ನು ನೇಮಕ ಮಾಡಿ ಅವರುಗಳನ್ನು ತರಬೇತಿಗಾಗಿ ದೊಡ್ಡ ದೊಡ್ಡ ನಿಲ್ದಾಣಗಳಿಗೆ ಕಳಿಸುತ್ತಿದ್ದರು. ಮೊಕಮೆಘಾಟ್ ನಿಲ್ದಾಣದಲ್ಲಿ ಸರಕು ಸಾಗಾಣಿಕೆ ನಿರ್ವಹಣೆ ಕುರಿತಂತೆ ಕಾರ್ಬೆಟ್ ಬಳಿ ತರಬೇತಿ ಪಡೆಯಲು ಪ್ರತಿ ವರ್ಷ 30 ಮಂದಿ ಯುವಕರು ಬರುತ್ತಿದ್ದರು. ಕಾರ್ಬೆಟ್ ಅವರಿಗೆ ವ್ಯವಹಾರದ ಜೊತೆಗೆ  ಭಾರತೀಯ ಜನರು, ಅವರ ವಿಭಿನ್ನ ಸಂಸ್ಕೃತಿ, ಭಾಷೆ, ಇಲ್ಲಿನ ಭೌಗೋಳಿಕ ಪರಿಸರ ಎಲ್ಲವನ್ನು ಪರಿಚಯಿಸುತ್ತಿದ್ದ. ಧರ್ಮ, ಜಾತಿ ಇವುಗಳ ಸೂಕ್ಷ್ಮತೆಯನ್ನು ವಿವರಿಸಿ ಇಲ್ಲಿನ ಜನತೆಯೊಂದಿಗೆ ಹೇಗೆ ವರ್ತಿಸಬೇಕು ಮತ್ತು ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಹೇಳಿಕೊಡುತ್ತಿದ್ದ.

ಕಾರ್ಬೆಟ್‌ನ ಬದುಕು ನೆಮ್ಮದಿಯತ್ತ ಸಾಗತೊಡಗಿದಂತೆ, ಅವನ ತಾಯಿ ಮತ್ತು ಸಹೋದರಿ ಮ್ಯಾಗಿ ಇಬ್ಬರೂ ಮೊಕಮೆಘಾಟ್‌ಗೆ ಬಂದು ಅವನ ಮನೆಯಲ್ಲಿ ತಿಂಗಳುಗಳ ಕಾಲ ಇದ್ದು ಹೋಗುತ್ತಿದ್ದರು. ಕಾರ್ಬೆಟ್ ತಾನು ಉಳಿಸಿದ ಹಣವನ್ನು ತಾಯಿಗೆ ರವಾನಿಸುತಿದ್ದ. ಆಕೆ ಈ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸುತ್ತಿದ್ದಳು. ಕಾರ್ಬೆಟ್ ಜೀವನದುದ್ದಕ್ಕೂ ವಿವಾಹವಾಗದೇ ಬ್ರಹ್ಮಚಾರಿಯಾಗಿ ಏಕೆ ಉಳಿದ ಎಂಬುದಕ್ಕೆ ಅವನ ಜೀವನದಲ್ಲಿ ಯಾವ ಸುಳಿವೂ ಸಿಗುವುದಿಲ್ಲ. ಒಮ್ಮೆ ಮಾತ್ರ ನೈನಿತಾಲ್ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಒಬ್ಬ ಆಂಗ್ಲ ಯುವತಿಯತ್ತ ಆಸಕ್ತಿ ತೋರಿದ್ದು ಬಿಟ್ಟರೆ, ಪ್ರೇಮ ವಿಫಲತೆಯ ಸುಳಿವು ಸಹ ಅವನ ಬದುಕಿನಲ್ಲಿ ಸಿಗುವುದಿಲ್ಲ. ಅಕ್ಕ ಮ್ಯಾಗಿ ಅವಿವಾಹಿತಳಾಗಿ ಉಳಿದದ್ದು ಕಾರ್ಬೆಟ್ ಸಹ ಬ್ರಹ್ಮಚಾರಿಯಾಗಿ ಉಳಿಯಲು ಕಾರಣವಿರಬೇಕೆಂದು ಊಹಿಸಲಾಗಿದೆ.

ಒಬ್ಬ ಅನನುಭವಿ ಯುವಕನಾಗಿ ಮೊಕಮೆಘಾಟ್‌ಗೆ ಬಂದ ಕಾರ್ಬೆಟ್ ಅಧಿಕಾರಿಯಾಗಿ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದ. ಅವನಿಗೆ ಸಿಕ್ಕ ಕೆಲಸಗಾರರು ಅವನ ಜವಬ್ದಾರಿಯನ್ನು ಹಗುರಗೊಳಿಸಿದ್ದರು. ಚಮರಿ ಎಂಬ ಮಧ್ಯ ವಯಸ್ಸಿನ ಮೇಸ್ತ್ರಿ ಕಾರ್ಮಿಕರ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಕಾರ್ಬೆಟ್ ನ ಜೀವನ  ಆರಾಮವಾಗಿರುವಂತೆ ನೋಡಿಕೊಂಡಿದ್ದ. ಚಮರಿ ಎಂಬ ಅತ್ಯಂತ ಕೆಳಜಾತಿಯ ಸಹೃದಯದ ವ್ಯಕ್ತಿ ಕಾರ್ಬೆಟ್‌ಗೆ ಮೇಸ್ತ್ರಿಯಾಗಿ ಸಿಕ್ಕಿದ್ದು ಕೂಡ ಆಕಸ್ಮಿಕ. ಪ್ರಾರಂಭದ ದಿನಗಳಲ್ಲಿ ಒಂದು ದಿನ ಮಾಸಿದ ಹರಕಲು ಬಟ್ಟೆಯ, ಕುರುಚಲು ಗಡ್ಡದ ಈ ವ್ಯಕ್ತಿ ತನ್ನ ಪತ್ನಿಯೊಂದಿಗೆ ಬಂದು ಕಾರ್ಬೆಟ್‌ನಲ್ಲಿ ಕೂಲಿ ಕೆಲಸ ಕೇಳಿದ. ಕಾರ್ಬೆಟ್ ಇಬ್ಬರಿಗೂ ಗುದ್ದಲಿ ಮತ್ತು ಬುಟ್ಟಿಯನ್ನು ಕೊಟ್ಟು ರೈಲ್ವೆ ವ್ಯಾಗನ್ ಗಳಿಗೆ ಕಲ್ಲಿದ್ದಲು ತುಂಬುವಂತೆ ಹೇಳಿ ಇಡೀ ದಿನ ಅವರಿಬ್ಬರ ಕಾರ್ಯವನ್ನು ಗಮನಿಸತೊಡಗಿದ. ಮಧ್ಯಾಹ್ನದ ವೇಳೆಗೆ ಅಂಗೈಯಲ್ಲಿ ಬೊಕ್ಕೆ ಬಂದರೂ ಕೂಡ, ತನ್ನ ಬಾಯಿಂದ ಗಾಳಿ ಬೀಸಿಕೊಂಡು ಚಮರಿ ಕಲ್ಲಿದ್ದಲು ತಂಬುವುದನ್ನು ಕಾರ್ಬೆಟ್ ಗಮನಿಸಿದ್ದ.

ಮಾರನೇ ದಿನ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಕಾಯುತ್ತಿರುವಾಗ, ಚಮರಿ ಗಾಯವಾಗಿರುವ ತನ್ನ ಎರಡು ಅಂಗೈಗಳಿಗೆ ಹೊಲಸು ಬಟ್ಟೆಯ ಚೂರನ್ನು ಸುತ್ತಿಕೊಂಡು ತನ್ನ ಪತ್ನಿಯೊಂದಿಗೆ ಅಂದಿನ ಕೂಲಿಗಾಗಿ ಕಾಯುತಿದ್ದ. ಸ್ಥಳಕ್ಕೆ ಬಂದು ಎಲ್ಲರಿಗೂ ಕೆಲಸ ಹಂಚಿದ ಕಾರ್ಬೆಟ್, ಚಮರಿಯನ್ನು ಕಚೇರಿಗೆ ಬಂದು ಕಾಣುವಂತೆ ಹೇಳಿ ಕಚೇರಿಯತ್ತ ತೆರಳಿದ.

ಬಹುಶಃ ನಾನು ಈ ಕೆಲಸಕ್ಕೆ ಅನರ್ಹ ಎಂದು ಸಾಹೇಬರಿಗೆ ಅನಿಸಿರಬೇಕು, ನಿನ್ನೆಯ ಕೂಲಿ ಹಣಕೊಟ್ಟು ಕಳಿಸುತ್ತಾರೆ ಎಂದುಕೊಳ್ಳುತ್ತಾ ಕಚೇರಿಗೆ ಹೋದ ಚಮರಿಯನ್ನು ಹತ್ತಿರ ಕರೆದು ಏನು ಓದಿದ್ದೀಯಾ ಎಂದು ಕಾರ್ಬೆಟ್ ಕೇಳಿದ. ನಾಲ್ಕನೇ ತರಗತಿ ಓದಿದ್ದೇನೆ ಎಂದು ಚಮರಿ ತಿಳಿಸುತ್ತಿದ್ದಂತೆ, ಇಂದಿನಿಂದ ನೀನು ಕಲ್ಲಿದ್ದಲು ತುಂಬುವ ಬದಲು ಯಾವ ತಂಡ ಎಷ್ಟು ಕೆಲಸ ನಿರ್ವಹಿಸಿದೆ ಎಂಬುದನ್ನು ಬರೆದುಕೊ ಎಂದು ತಿಳಿಸಿದ ಕಾರ್ಬೆಟ್ ಗಾಯಗೊಂಡಿದ್ದ ಅವನ ಅಂಗೈಗಳಿಗೆ ಮುಲಾಮು ಹಚ್ಚಿ, ಒಂದು ಪೆನ್ಸಿಲ್ ಹಾಗೂ ಪುಸ್ತಕ ಕೊಟ್ಟು ಕೂಲಿಗಾರರ ಕೆಲಸದ ಬಗ್ಗೆ ಹೇಗೆ ಲೆಕ್ಕ ಬರೆದುಕೊಳ್ಳಬೇಕೆಂದು ವಿವರಿಸಿದ. ಅನಿರೀಕ್ಷಿತವಾಗಿ ಸಿಕ್ಕ ಈ ಭಾಗ್ಯಕ್ಕೆ ಬೆರಗಾದ ಚಮರಿ ಪೆನ್ಸಿಲ್ ಅನ್ನು ತನ್ನ ಕಿವಿಗೆ ಸಿಕ್ಕಿಸಿ, ಪುಸ್ತಕವನ್ನು ಕಂಕುಳಲ್ಲಿ ಇರಿಸಿಕೊಂಡು, ಕಾರ್ಬೆಟ್‌ಗೆ ಒಂದು ದೀರ್ಘದಂಡ ನಮಸ್ಕಾರ ಹಾಕಿ ಮೇಲೆದ್ದಾಗ ಅವನ ಕಣ್ಣಾಲಿಗಳು ನೀರಾಗಿದ್ದವು. ಮುಂದಿನ ದಿನಗಳಲ್ಲಿ ಚಮರಿ ಎಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುತಿದ್ದನೆಂದರೆ, ಕಾರ್ಬೆಟ್ ಅವನ ಪ್ರಾಮಾಣಿಕತೆ, ಬದ್ಧತೆ ಇವೆಲ್ಲವನ್ನು ಗಮನಿಸಿ, ಒಂದೇ ವರ್ಷದಲ್ಲಿ ಅವನ ಸಂಬಳವನ್ನು 15 ರೂಪಾಯಿಂದ 40 ರೂಪಾಯಿಗೆ ಹೆಚ್ಚಿಸಿದ.

ಚಮರಿ ಜಾತಿಯಿಂದ ಅಸ್ಪೃಶ್ಯನಾಗಿದ್ದು, ಅವನ ಕೈ ಕೆಳಗೆ ಅನೇಕ ಮೇಲ್ಜಾತಿಯ ಕಾರ್ಮಿಕರು ದುಡಿಯುತ್ತಿದ್ದರು. ಎಲ್ಲರನ್ನು ಗೌರವದಿಂದ ಕಾಣುವುದು ಅವನ ವಿಶಿಷ್ಟ ಗುಣವಾಗಿತ್ತು. ತನಗೆ ಬರುತ್ತಿದ್ದ ನಲವತ್ತು ರೂಪಾಯಿ ಸಂಬಳದಲ್ಲಿ ಕೇವಲ ಹದಿನೈದು ರೂಪಾಯಿಗಳನ್ನು ತಾನು ಮತ್ತು ತನ್ನ ಪತ್ನಿಯ ಜೀವನ ನಿರ್ವಹಣೆಗೆ ಇಟ್ಟುಕೊಂಡು ಉಳಿದ ಹಣವನ್ನು ಬಡವರಿಗೆ ಪ್ರತಿ ನಿತ್ಯ ಊಟಹಾಕುವುದು, ಬಡ ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಭರಿಸುವುದು ಹೀಗೆ ಖರ್ಚು ಮಾಡುತ್ತಿದ್ದ. ಇದನ್ನು ಗಮನಿಸಿದ ಕಾರ್ಬೆಟ್ ಒಮ್ಮೆ ಚಮರಿಯನ್ನು ಪ್ರಶ್ನಿಸಿ ಒಂದಿಷ್ಟು ಹಣ ಉಳಿಸುವಂತೆ ಹೇಳಿ, ಒಳ್ಳೆಯ ಬಟ್ಟೆ ಧರಿಸುವಂತೆ ಸಲಹೆ ನೀಡಿದ. ಇದಕ್ಕೆ ಉತ್ತರಿಸಿದ ಚಮರಿ, “ಮಹಾರಾಜ್, ಮಕ್ಕಳಿಲ್ಲದ ನನ್ನ ಕುಟುಂಬಕ್ಕೆ ಹದಿನೈದು ರೂ ಸಾಕು, ಉಳಿತಾಯ ಮಾಡಿ ಏನು ಮಾಡಲಿ? ನಿಮ್ಮ ದಯೆಯಿಂದ ನಾಲ್ಕಾರು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪುಣ್ಯ ಎಂದು ಭಾವಿಸಿದ್ದೇನೆ. ನೀವೆ ಇಲ್ಲಿ ನಮ್ಮ ನಡುವೆ ಸಾಮಾನ್ಯ ಧಿರಿಸು ತೊಟ್ಟು ಕೆಲಸ ಮಾಡುವಾಗ ನಾನು ಹೇಗೆ ಒಳ್ಳೆಯ ಬಟ್ಟೆ ಧರಿಸಲಿ?” ಎಂದ.

ಚಮರಿಯ ಈ ಮನೋಭಾವಕ್ಕೆ  ಮನಸೋತ ಕಾರ್ಬೆಟ್ ಅವನನ್ನು ಆತ್ಮೀಯ ಸೇವಕನನ್ನಾಗಿ ಮಾಡಿಕೊಂಡಿದ್ದ. ಚಮರಿಯ ಬಗ್ಗೆ ಕಾರ್ಬೆಟ್‌ಗೆ ಅಗಾಧ ನಂಬಿಕೆಯಿತ್ತು. ನಾಲ್ಕು ವರ್ಷಗಳ ಕಾಲ ಇಡೀ ಜವಬ್ದಾರಿಯನ್ನ ಚಮರಿಗೆ ವಹಿಸಿ ಕಾರ್ಬೆಟ್ ಯುದ್ಧಭೂಮಿಗೂ ಸಹ  ತೆರಳಿದ್ದ. ಬೇಸಿಗೆಯ ಆ ದಿನಗಳಲ್ಲಿ ವಾಂತಿ, ಭೇಧಿ, ಕಾಲಾರಾದಂತಹ ಸಾಂಕ್ರಾಮಿಕ ರೋಗ ಹರಡುವುದು ಸಾಮಾನ್ಯವಾಗಿತ್ತು. ಅಂತಹ ದಿನಗಳಲ್ಲಿ ಚಮರಿ ಹಗಲು ರಾತ್ರಿ ಕಾರ್ಬೆಟ್ ಜೊತೆ ನಿಂತು ಕಾಯಿಲೆಗೆ ತುತ್ತಾದ ಕಾರ್ಮಿಕರನ್ನು ಶುಶ್ರೂಶೆ ಮಾಡುತಿದ್ದ. ಆತ ಎಂತಹ ದುರ್ದೈವಿಯೆಂದರೆ, ಕಾರ್ಬೆಟ್ ಬಳಿ 20 ವರ್ಷ ಕೂಲಿ ಕೆಲಸ ಮಾಡಿದ ಮೂರು ಮಕ್ಕಳ ತಾಯಿಯಾಗಿದ್ದ ವಿಧವೆ ಪ್ರಭಾವತಿಯನ್ನು ಕಾಲರಾ ರೋಗದಿಂದ ಉಳಿಸಲು ಹೋಗಿ ತಾನೇ ಆ ಸಾಂಕ್ರಮಿಕ ರೋಗಕ್ಕೆ ತುತ್ತಾದ. ಕೊನೆಗೆ ಸಾವು ಬದುಕಿನ ನಡುವೆ ಹೋರಾಡಿ, ಅಂತಿಮವಾಗಿ ಚಮರಿ ಕಾರ್ಬೆಟ್ ತೊಡೆಯ ಮೇಲೆ ಶುಶ್ರೂಷೆ ಮಾಡುತಿದ್ದಾಗಲೇ ಅಸುನೀಗಿದ.

ಚಮರಿ ಕಾರ್ಬೆಟ್‌ನ ಸಹಾಯಕನಾಗಿ ಮೊಕಮೆಘಾಟ್ ಪಟ್ಟಣದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ. ಅವನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಇಡೀ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು. ಕಾರ್ಬೆಟ್ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಎಲ್ಲಾ ವರ್ಗದ ಜನ ಪಾಲ್ಗೊಂಡು ಚಮರಿಗೆ ಅಂತಿಮ ನಮನ ಸಲ್ಲಿಸಿದರು. ಕಾರ್ಬೆಟ್ ತನ್ನ ಆತ್ಮ ಚರಿತ್ರೆಯಂತಿರುವ “ಮೈ ಇಂಡಿಯ” ಕೃತಿಯಲ್ಲಿ ಚಮರಿಯ ಬಗ್ಗೆ ಆದ್ರ ಹೃದಯದಿಂದ ಬರೆದುಕೊಂಡಿದ್ದಾನೆ.

ಇಂತಹದ್ದೇ ಇನ್ನೊಂದು ಹೃದಯಸ್ಪರ್ಶಿ ಘಟನೆಯನ್ನು ಕಾರ್ಬೆಟ್ ದಾಖಲಿಸಿದ್ದಾನೆ. ಅದು ವ್ಯಾಪಾರಿಯೊಬ್ಬನ ನೋವಿನ ಕಥನ.

ಅದು ಬಿರು ಬೇಸಿಗೆಯ ಒಂದು ಸಂಜೆ ಸಮಯ. ಗಯಾ ಮಾರ್ಗವಾಗಿ ಮುಜಾಪುರ್ ನಗರದಿಂದ ಬಂದ ರೈಲು ಸಮಾರಿಯ ಘಾಟ್ ತಲುಪಿದ ತಕ್ಷಣ ಪ್ರಯಾಣಿಕರು ತಮ್ಮ ಸಾಮಾನುಗಳೊಂದಿಗೆ ದೋಣಿಯನ್ನೇರಿ ಮೊಕಮೆಘಾಟ್‌ನತ್ತ ಪ್ರಯಾಣ ಬೆಳಸಿದರು. ಕಾರ್ಬೆಟ್ ಗಂಗಾ ನದಿಯ ತಟದಲ್ಲಿ ಎಲ್ಲರ ಚಲನ ವಲನ ವೀಕ್ಷಿಸುತ್ತಾ ನಿಂತಿದ್ದ. ಒಬ್ಬ ವ್ಯಕ್ತಿ ಮಾತ್ರ ಯಾವ ಕಡೆಗೂ ಪ್ರಯಾಣ ಬೆಳಸದೇ, ಮುಸ್ಸಂಜೆಯಲ್ಲಿ ಬಟ್ಟೆಯ ಗಂಟಿನೊಂದಿಗೆ ನದಿಯ ತಟದಲ್ಲಿ ಏಕಾಂಗಿಯಾಗಿ ಕುಳಿತಿರುವುದು ಕಾರ್ಬೆಟ್  ಗಮನಕ್ಕೆ ಬಂತು. ಕಾರ್ಬೆಟ್ ಅವನ ಹತ್ತಿರ ತೆರಳಿದಾಗ ಅವನು ಯಾವುದೋ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೆಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಪ್ರಯಾಣ ಮಾಡದೇ ಏಕೆ ಇಲ್ಲಿ ಕುಳಿತಿದ್ದೀಯಾ? ಎಲ್ಲಾ ರೈಲುಗಳು ಹೊರಟು ಹೋದವು ಎಂದು ಕಾರ್ಬೆಟ್ ಪ್ರಶ್ನಿಸುತ್ತಿದ್ದಂತೆ ಆ ರೋಗಿ ತನ್ನ ಬದುಕಿನ ವೃತ್ತಾಂತವನ್ನೆಲ್ಲಾ ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲು ಕುಳಿತಿರುವುದಾಗಿ ತಿಳಿಸಿದ.

ಗಯಾ ಪಟ್ಟಣದಲ್ಲಿ ಬೇಳೆಕಾಳುಗಳ ಪ್ರಸಿದ್ಧ ವ್ಯಾಪಾರಿಯಾಗಿದ್ದ ಲಾಲಾಜಿ ಎಂಬ ಹೆಸರಿನ ಆತ ತನ್ನ ಗೆಳೆಯನೊಬ್ಬನನ್ನು ವ್ಯಾಪಾರಕ್ಕೆ ಪಾಲುದಾರನನ್ನಾಗಿ ಮಾಡಿಕೊಂಡಿದ್ದ. ಒಮ್ಮೆ ತೀರ್ಥಯಾತ್ರೆ ಹೋಗುವ ಸಲುವಾಗಿ ಗೆಳೆಯನಿಗೆ ವ್ಯಾಪಾರದ ಜವಾಬ್ದಾರಿ ವಹಿಸಿ, ತೀರ್ಥಯಾತ್ರೆ ಮುಗಿಸಿ ಬರುವದರೊಳಗೆ ಅವನ ಗೆಳೆಯ ಅಂಗಡಿಯ ದಾಸ್ತಾನು ಖಾಲಿ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ. ಅಂಗಡಿ ಹಾಗೂ ಅದರಲ್ಲಿ ಇದ್ದ ಅಲ್ಪ ಸ್ವಲ್ಪ ಸಾಮಾನುಗಳನ್ನು ಮಾರಿ ಹಾಕಿ ಎಲ್ಲಾ ಸಾಲ ತೀರಿಸಿ, ತಾನು ವ್ಯವಹಾರ ನಡೆಸುತ್ತಿದ್ದ ಸಗಟು ವ್ಯಾಪಾರದ ಅಂಗಡಿಯಲ್ಲಿ ತಿಂಗಳಿಗೆ ಏಳು ರೂಪಾಯಿ ಸಂಬಳಕ್ಕೆ ಲಾಲಾಜಿ ದುಡಿಯತೊಡಗಿದ. ಇದೇ ಸಂದರ್ಭದಲ್ಲಿ ಅವನ ಪತ್ನಿ ಕೂಡ ತೀರಿ ಹೋದಳು. ಇರುವ ಏಕೈಕ ಮಗನೊಂದಿಗೆ ವಾಸಿಸುತ್ತಿದ್ದ ಲಾಲಾಜಿ ಕಾಲಾರಾ ರೋಗದ ಸೋಂಕಿಗೆ. ಬಲಿಯಾದ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ಆತ, ತಾನು ಸತ್ತರೆ ಮಗನಿಗೆ ನನ್ನ ಅಂತ್ಯ ಸಂಸ್ಕಾರ ಹೊರೆಯಾಗುತ್ತದೆ ಎಂದು ಭಾವಿಸಿ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಸಿ ಬಂದು ಕುಳಿತಿದ್ದ.

ನಡೆಯಲು ನಿಶ್ಯಕ್ತನಾಗಿದ್ದ ಅವನನ್ನು ಎಬ್ಬಿಸಿ ನಿಧಾನವಾಗಿ ನಡೆಸಿಕೊಂಡು ತನ್ನ ಮನೆಗೆ ಕರೆದೊಯ್ದ ಕಾರ್ಬೆಟ್ ಆ ರಾತ್ರಿ ಅವನಿಗೆ ಚಿಕಿತ್ಸೆ ನೀಡಿದ. ಆ ವೇಳೆಗಾಗಲೇ ಕಾರ್ಬೆಟ್ ಬಳಿ ಮೂವರು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಲಾಲಾಜಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಯಿತು. ಅಂತಿಮವಾಗಿ ತನ್ನ ಮನೆಯ ಹೊರ ಆವರಣದಲ್ಲಿದ್ದ ಕೊಠಡಿಯಲ್ಲಿ ಅವಕಾಶ ಕಲ್ಪಿಸಿದ. ಮೊದಲ ಎರಡು ಮೂರು ದಿನ ಲಾಲಾಜಿ ಬದುಕುತ್ತಾನೆ ಎಂಬ ಯಾವ ನಂಬಿಕೆಯೂ ಕಾರ್ಬೆಟ್‌ಗೆ ಇರಲಿಲ್ಲ. ಒಂದು ವಾರದ ನಂತರ ನಿಧಾನವಾಗಿ ಚೇತರಿಸಿಕೊಂಡ ಲಾಲಾಜಿಯನ್ನು ಮನೆಯ ಮುಂದಿನ ಆವರಣದಲ್ಲಿ ಕೂರಿಸಿಕೊಂಡು ಆತ್ಮ ವಿಶ್ವಾಸ ತುಂಬಿದ ಕಾರ್ಬೆಟ್, ನೀನೇಕೆ ಮತ್ತೇ ವ್ಯಾಪಾರ ಆರಂಭಿಸಬಾರದು ಎಂದು ಕೇಳಿದ.

ನನಗೆ ವ್ಯಾಪಾರ ಮಾಡಲು 500 ರೂಪಾಯಿ ಬಂಡವಾಳ ಬೇಕು. ಭದ್ರತೆಯಿಲ್ಲದೆ ಯಾರೂ ಸಾಲ ಕೊಡುವುದಿಲ್ಲ, ಜೊತೆಗೆ ನನ್ನ ಬಳಿ ಮೈ ಮೇಲಿನ ಈ ಬಟ್ಟೆಗಳನ್ನು ಹೊರತುಪಡಿಸಿದರೆ, ಬೇರೇನೂ ಆಸ್ತಿ ಇಲ್ಲ. ಹಾಗಾಗಿ ಮತ್ತೆ ಗಯಾ ಪಟ್ಟಣಕ್ಕೆ ಹೋಗಿ ಅಂಗಡಿಯಲ್ಲಿ ದುಡಿಯುತ್ತೀನಿ, ಎಂದು ಲಾಲಾಜಿ ನುಡಿದಾಗ ತಕ್ಷಣಕ್ಕೆ ಕಾರ್ಬೆಟ್ ಯಾವ ಪ್ರತಿಕ್ರಿಯೆ ನೀಡಲಿಲ್ಲ.

ಒಂದು ತಿಂಗಳ ನಂತರ ಒಂದು ದಿನ ಲಾಲಾಜಿ ತನ್ನ ಬಟ್ಟೆಗಳನ್ನು ಸ್ವಚ್ಛಗೊಳಿಸುಕೊಂಡು ತನ್ನೂರಿಗೆ ಹೊರಡಲು ಸಿದ್ಧನಾಗಿ ಕುಳಿತಿದ್ದ. ಸಂಜೆ ಮನೆಗೆ ಬಂದ ಕಾರ್ಬೆಟ್ ಲಾಲಾಜಿಗೆ ಗಯಾಕ್ಕೆ ತೆರಳಲು ರೈಲ್ವೆ ಟಿಕೇಟು, ಒಂದಿಷ್ಟು ಹಣ್ಣು ಹಂಪಲುಗಳನ್ನು ನೀಡಿದ. ನಂತರ ಬೇರೆ ಲಕೋಟೆಯಲ್ಲಿ ಇಟ್ಟಿದ್ದ ನೂರು ರೂಪಾಯಿಗಳ 5 ನೋಟುಗಳನ್ನು ನೀಡಿ, ನಿನ್ನ ಮೇಲೆ ವಿಶ್ವಾಸವಿದೆ, ಹೋಗಿ ವ್ಯಾಪಾರ ಮುಂದುವರಿಸು ಎಂದು ಹೆಗಲ ಮೇಲೆ ಕೈಯಿಟ್ಟು ಹೇಳಿದ. ಆ ಕ್ಷಣದಲ್ಲಿ ಲಾಲಾಜಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ. ಆ ಕಾಲದಲ್ಲಿ 500 ರೂಪಾಯಿ ಎಂದರೆ ಸಾಮಾನ್ಯ ಮೊತ್ತವಾಗಿರಲಿಲ್ಲ. ಲಾಲಾಜಿ ಕಾರ್ಬೆಟ್ ನ ಕಾಲುಮುಟ್ಟಿ ನಮಸ್ಕರಿಸಿ, ಅವನೆದುರು ಕೈ ಮುಗಿಯುತ್ತಾ ಶಿಲೆಯಂತೆ ನಿಂತುಬಿಟ್ಟ.. ಕಾರ್ಬೆಟ್ ಅವನನ್ನು ಸಮಾಧಾನ ಪಡಿಸಿ ತಾನೇ ನಿಲ್ದಾಣವರೆಗೆ ಹೋಗಿ ರೈಲು ಹತ್ತಿಸಿ ಬಂದ. ತನ್ನ ಉಳಿತಾಯದ ಹಣವನ್ನು ಲಾಲಾಜಿಗೆ ನೀಡುವಾಗ ಕಾರ್ಬೆಟ್‌ಗೆ ಏನೂ ಅನಿಸಲಿಲ್ಲ. ಭಾರತದ ಬಡಜನತೆಯ ಜೊತೆ ಹಲವಾರು ವರ್ಷ ಒಡನಾಡಿದ ಅನುಭವವಿತ್ತು. ತನ್ನಿಂದ ಸಹಾಯ ಪಡೆದ ಈ ಜನತೆ ಎಂದೂ ಮೋಸ ಮಾಡುವುದಿಲ್ಲ ಎಂಬ ವಿಶ್ವಾಸ, ನಂಬಿಕೆ ಅವನ ಮನದಲ್ಲಿ ಬಲವಾಗಿ ಬೇರೂರಿತ್ತು.

ಅವನ ನಂಬಿಕೆ ಹುಸಿಯಾಗಲಿಲ್ಲ. ಹನ್ನೊಂದು ತಿಂಗಳ ನಂತರ ಒಂದು ಸಂಜೆ ದಿನದ ಕಾರ್ಯವನ್ನೆಲ್ಲಾ ಮುಗಿಸಿ, ಸ್ನಾನ ಮಾಡಿ ಮನೆಯ ಮುಂದೆ ಕಾರ್ಬೆಟ್ ಕುಳಿತಿದ್ದಾಗ, ಕೋಟು, ಟೋಪಿ, ಕಚ್ಚೆ ಹಾಕಿದ್ದ ಒಬ್ಬ ವ್ಯಕ್ತಿ ಹಣ್ಣಿನ ಬುಟ್ಟಿ ಹಿಡಿದು ಮುಂದೆ ಬಂದು ನಿಂತಾಗ ಕಾರ್ಬೆಟ್‌ಗೆ ತಕ್ಷಣ ಗುರುತು ಹಿಡಿಯಲಾಗಲಿಲ್ಲ. ಸಾಹೇಬ್ ನಾನು ಲಾಲಾಜಿ ಎನ್ನುತ್ತಾ ಕಾರ್ಬೆಟ್ ಕಾಲಿಗೆ ನಮಸ್ಕರಿಸಿದ ಅವನು ಕಾಲು ಬಳಿ ಕುಳಿತಾಗ ಕಾರ್ಬೆಟ್‌ಗೆ ಲಾಲಾಜಿ ಬಗ್ಗೆ ನಿಜಕ್ಕೂ ಅಚ್ಚರಿಯಾಯಿತು.

ಗಯಾ ಪಟ್ಟಣದಲ್ಲಿ ಪುನಃ ಬೇಳೆ ಕಾಳು ವ್ಯಾಪಾರದಲ್ಲಿ ಯಶಸ್ವಿಯಾಗಿರುವ ಕಥೆಯನ್ನು ಹೇಳುತ್ತಾ ಕಾರ್ಬೆಟ್ ನೀಡಿದ್ದ 500 ರೂಪಾಯಿಗಳ ಜೊತೆಗೆ 125 ರೂಪಾಯಿ ಬಡ್ಡಿ ಸೇರಿಸಿ ತಂದಿದ್ದ ಹಣವನ್ನು ಲಾಲಾಜಿ, ಕಾರ್ಬೆಟ್ ಗೆ ನೀಡಿದ. ಕಾರ್ಬೆಟ್ ಬಡ್ಡಿ ಹಣ ನಿರಾಕರಿಸಿ, ಕೇವಲ ತಾನು ನೀಡಿದ್ದ 500 ರೂಗಳನ್ನು ಮಾತ್ರ ಅವನಿಂದ ಪಡೆದುಕೊಂಡ.

ಕಾರ್ಬೆಟ್ ನೀಡಿದ ಬಂಡವಾಳದಿಂದ ಗಯಾ ಪಟ್ಟಣದಲ್ಲಿ ದೊಡ್ಡ ವ್ಯಾಪಾರಿಯಾಗಿ ಮರುಜನ್ಮ ಪಡೆದ ಲಾಲಾಜಿ, ಮುಂದೆ ಮೊಕಮೆಘಾಟ್‌ನಲ್ಲಿ ಕಾರ್ಬೆಟ್ ಸೇವೆ ಸಲ್ಲಿಸಿದ ಹನ್ನೆರೆಡು ವರ್ಷಗಳ ಕಾಲ ತಪ್ಪದೇ ಬೇಸಿಗೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಹೊತ್ತು ತರುತ್ತಿದ್ದ. ಕೆಲವೊಮ್ಮೆ ರೈಲಿನಲ್ಲಿ ಪಾರ್ಸಲ್ ಕಳಿಸುವುದರ ಮೂಲಕ ಕಾರ್ಬೆಟ್‌ನ ಋಣವನ್ನು ಸಂದಾಯ ಮಾಡುತಿದ್ದ.

ಬುದ್ದು, ಚಮರಿ, ಲಾಲಾಜಿಯಂತಹ ವ್ಯಕ್ತಿಗಳು ಕಾರ್ಬೆಟ್ ಬದುಕಿನಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವಗಳೊಂದಿಗೆ ಅಳಿಸಲಾರದ ನೆನಪಾಗಿ ಉಳಿದುಹೋದರು. ಅಲ್ಲದೆ ಬಡವರ ಬಗ್ಗೆ ಕಾರ್ಬೆಟ್ ಗೆ ಇದ್ದ ಮನೋಧರ್ಮವನ್ನು ಮತ್ತಷ್ಟು ಸಧೃಡಗೊಳಿಸಿದರು. ಈ ಕಾರಣದಿಂದಲೇ ಅವನು ಮುಂದಿನ ದಿನಗಳಲ್ಲಿ ಕಲಾದೊಂಗಿ ಬಳಿಯ ಚೋಟಾಹಲ್ದಾನಿ ಹಳ್ಳಿಯಲ್ಲಿ ತಾನು ಖರೀದಿಸಿದ್ದ ಸಾವಿರಾರು ಎಕರೆ ಭೂಮಿಯನ್ನು ಬಡ ರೈತರಿಗೆ ಉಚಿತವಾಗಿ ಹಂಚಲು ಸಾಧ್ಯವಾಯಿತು.

(ಮುಂದುವರೆಯುವುದು)

ಸಾಮುದಾಯಿಕ ಹಾದಿಯಾಗಿ ಸಂಗೀತ

-ಭಾರತೀ ದೇವಿ. ಪಿ

ಸಂಗೀತ ಕುರಿತಾದ ಸಂಕಥನಗಳಲ್ಲಿ ನಾವು ಮತ್ತೆ ಮತ್ತೆ ‘ಸಂಗೀತ ಆತ್ಮದ ಭಾಷೆ, ಅದಕ್ಕೆ ಕಾಲ ದೇಶಗಳ ಹಂಗಿಲ್ಲ, ಅದರ ಭಾಷೆ ವಿಶ್ವಾತ್ಮಕವಾದುದು’ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಹೀಗೆ ದೇಶ ಭಾಷೆಗಳಾಚೆಗೆ ಎಲ್ಲರನ್ನು ತಲುಪುವ ವಿಶೇಷ ಗುಣ ಸಂಗೀತಕ್ಕಿದೆ, ಏಕೆಂದರೆ ಅದು ಭಾಷೆಯನ್ನು ಸಂಕೋಲೆಯಾಗಿ ಮಾಡಿಕೊಂಡಿಲ್ಲ. ಆದರೆ ತಾಂತ್ರಿಕವಾಗಿ ಸುಸಜ್ಜಿತವಾದ, ಶ್ರೇಷ್ಠ ಅಭಿರುಚಿ ತಮ್ಮದೆಂದುಕೊಂಡ ಕೇಳುಗರಿಂದ ತುಂಬಿಕೊಂಡಿರುವ ಸಭಾಂಗಣದಲ್ಲಿ ಕುಳಿತಾಗೆಲ್ಲ ಈಚೆಗೆ ವಿಚಿತ್ರ ಕಸಿವಿಸಿಯಾಗುತ್ತದೆ. ಇಂತಹ ವಿಶ್ವಾತ್ಮಕ ಭಾಷೆಯಾದ ಸಂಗೀತದ ಒಂದು ಪ್ರಭೇದವಾದ ‘ಶಾಸ್ತ್ರೀಯ’ ಎನಿಸಿಕೊಂಡಿರುವ ಸಂಗೀತ ಕೆಲವೇ ನಿರ್ದಿಷ್ಟ ಗುಂಪಿನ ಜನರ ಅಭಿರುಚಿಯ ಸಂಗತಿಯಾಗಷ್ಟೇ ಸೀಮಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಹೀಗೆ ನನ್ನಲ್ಲಿ ಎದ್ದ ಹಲವು ಪ್ರಶ್ನೆ ಮತ್ತು ಆತಂಕಗಳನ್ನು ಅವಲೋಕಿಸುವ ಲೌಡ್ ಥಿಂಕಿಂಗ್‍ನ ರೂಪದಲ್ಲಿ ಇಲ್ಲಿನ ನನ್ನ ಅಭಿಪ್ರಾಯಗಳಿವೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ.

ಕಲೆಯ ಹಾದಿ ಆತ್ಮಸಾಕ್ಷಾತ್ಕಾರದ ಹಾದಿ ಎಂದು ಭಾವಿಸಿಕೊಂಡಾಗ ಅದು ವೈಯಕ್ತಿಕ ಸಾಧನೆಯ ಪಥವಾಗುತ್ತದೆ. ತನ್ನ ಸಾಧನೆ, ಅದರ ಮೂಲಕ ಪಡೆಯುವ ಪಕ್ವತೆ, ಸಹೃದಯನೊಂದಿಗೆ ನಡೆಸುವ ಅನುಸಂಧಾನ ಇವು ಒಂದು ವಲಯದೊಳಗೆ ನಡೆಯುವಂಥವು. ಇದರಾಚೆಗೆ ಒಂದು ಸಾಮುದಾಯಿಕ ಆಯಾಮ ಸಂಗೀತ ಸೇರಿದಂತೆ ಲಲಿತಕಲೆಗಳಿಗೆ ಇದೆ. ಇದು ಸಂಸ್ಕಾರ, ರಂಜನೆ, ಭಕ್ತಿ, ಆತ್ಮ ನಿರೀಕ್ಷಣೆಯಾಚೆಗಿನ ಎಲ್ಲರೊಂದಿಗೆ ಒಂದಾಗಿ ತನ್ನನ್ನು ಗುರುತಿಸಿಕೊಳ್ಳುವ ಬಗೆ. ಆದರೆ ಶಾಸ್ತ್ರೀಯ ಸಂಗೀತದ ಇಂದಿನ ಬೆಳವಣಿಗೆಯನ್ನು ಕಂಡಾಗ ಅದು ವೈಯಕ್ತಿಕ ಸಾಧನೆಯ, ಶೋಧನೆಯ ದಾರಿಯಾಗಿ ಕಾಣುತ್ತಿದೆ. ಒಂದೇ ಬಗೆಯ ಶ್ರೋತೃಗಳು, ಸಂಘಟನೆ, ಪ್ರಸ್ತುತಿಯಲ್ಲಿ ಏಕರೂಪತೆ ಕಾಣುತ್ತಿದೆ. ಇವುಗಳು ಬಹುತ್ವದಿಂದ ದೂರವಾಗಿವೆ.

ವೈವಿಧ್ಯ ಮತ್ತು ಬಹುತ್ವ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಮನಾರ್ಹವಾದ ಮತ್ತು ಮುಖ್ಯವಾದ ಸಂಗತಿಗಳು. ಕೇವಲ ಹಾಡುವ ಬಗೆ, ಕೌಶಲಗಳಲ್ಲಿ ಮಾತ್ರ ವೈವಿಧ್ಯ ವ್ಯಕ್ತವಾದರೆ ಸಾಕೆ? ಕುಮಾರ ಗಂಧರ್ವರು ತತ್ವಪದಗಳೊಂದಿಗೆ ಮಾಡಿಕೊಂಡ ಅನುಸಂಧಾನ, ಹಿಂದೆ ಶಾಸ್ತ್ರೀಯ ಸಂಗೀತದೊಡನೆ ನಾಟ್ಯ ಸಂಗೀತದ ಅಂಶಗಳು ಬೆರೆತು ಪರಸ್ಪರ ಕೊಡುಕೊಳ್ಳುಗಳ ಮೂಲಕ ಶ್ರೀಮಂತಗೊಂಡ ಬಗೆ ಇವುಗಳಿಂದ ಕಲಿಯುವುದು ಸಾಕಷ್ಟಿದೆ. ವೈವಿಧ್ಯ ಮತ್ತು ಒಳಗೊಳ್ಳುವಿಕೆ ಶಾಸ್ತ್ರೀಯ ಸಂಗೀತದ ಕಸುವನ್ನು ಹೆಚ್ಚಿಸುತ್ತದೆ.

ಶಾಸ್ತ್ರೀಯ ಸಂಗೀತದ ಬೇರುಗಳಿರುವುದು ಸಮುದಾಯದಲ್ಲಿ. ಆದರೆ ಇಂದು ಅದು ಬೇರಿನಿಂದ ಸಾಕಷ್ಟು ದೂರ ಕ್ರಮಿಸಿದೆ. ತಂತ್ರಜ್ಞಾನದ ಬೆಂಬಲದೊಂದಿಗೆ ಹೊಸತನಕ್ಕೆ ಒಡ್ಡಿಕೊಂಡಿರುವ ಸಂಗೀತ ಮತ್ತೆ ಬೇರುಗಳೆಡೆಗೆ ಸಾಗದ ಹೊರತು ಶುಷ್ಕವಾಗಿಬಿಡುತ್ತದೆ. ಹಿಂದಿನ ಗಂಗೂಬಾಯಿಯವರಲ್ಲಾಗಲೀ, ಭೀಮಸೇನ ಜೋಶಿಯವರಲ್ಲಾಗಲೀ ಕಾಣುವ ಕಸುವು ಇಂದಿನ ಹಾಡುಗಾರರಲ್ಲಿ ಕಾಣಲಾಗುತ್ತಿಲ್ಲ ಎಂದು ಹೇಳುವಾಗ ನಮ್ಮ ಗಮನ ಸಾಗಬೇಕಾದುದು ಈ ಕಡೆಗೆ. ವಿಶಾಲವಾಗುವ, ಎತ್ತರಕ್ಕೇರುವ ಹುಮ್ಮಸ್ಸಿನಲ್ಲಿ ಆಳಕ್ಕಿಳಿಯುವ, ಬೇರುಗಳನ್ನು ತಡಕುವ ಹಾದಿ ಹಿನ್ನಡೆಯ ಹಾದಿಯಲ್ಲ; ಅದು ಜೀವರಸವನ್ನು ಮತ್ತೆ ಪಡೆಯುವ ಹಾದಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಅದು ಭೇಟಿ ನೀಡಬೇಕಾಗಿರುವುದು ಮರಳಿ ಸಮುದಾಯದ ಕಡೆಗೇ.

ಸಂಗೀತ ಹೃದಯದ ಭಾಷೆ ಎನ್ನುವುದು ಅದರ ನಿರೂಪಣೆಗೆ ಸಂಬಂಧಿಸಿದ ಸಂಗತಿ. ಹೃದಯದ ಭಾಷೆಗೆ ವಿಚಾರದ ಹಂಗಿಲ್ಲ ಎನ್ನುವುದೂ ನಿಜ. ಆದರೆ ಹೃದಯ ತಟ್ಟುವುದರಾಚೆಗೆ ನಮ್ಮ ಪ್ರಜ್ಞೆಯನ್ನು ತಟ್ಟಬಲ್ಲ ಗುಣ, ಶಕ್ತಿ ಸಂಗೀತಕ್ಕಿಲ್ಲವೇ? ಆದರೆ ಇಂದು ಸಂಗೀತ ಬಲ್ಲವರಲ್ಲಿ ಬಹುಪಾಲು ಜನ ಅದರ ವೈಚಾರಿಕ ಆಯಾಮದ ಕುರಿತು ಯೋಚಿಸಿದಂತಿಲ್ಲ. ಯಾವುದೇ ಸಾಮಾಜಿಕ ಸಂಗತಿಗಳ ಬಗೆಗೆ ಅವರ ದನಿ ಕೇಳುವುದಿಲ್ಲ. ಇಂದಿನ ರಿಯಾಲಿಟಿ ಶೋಗಳ, ಸಿನೆಮಾಗಳ ಜನಪ್ರಿಯ ಹಾಡುಗಾರರಿಂದ ಹಿಡಿದು ಶಾಸ್ತ್ರೀಯ ಸಂಗೀತಗಾರರವರೆಗೆ ಸಾಮಾಜಿಕ ಸಂಗತಿಗಳಿಗೆ ಸಂಗೀತಗಾರರು ಸ್ಪಂದಿಸಿದ್ದು ಕಡಿಮೆ. ಸಂಗೀತಕ್ಕಿರುವ ಸಾಮಾಜಿಕ ಆಯಾಮ ಸಹೃದಯರ ರಂಜನೆಗಷ್ಟೇ ಸೀಮಿತವೇ? ಅದರಾಚೆಗೆ ಸಮಾಜದೊಂದಿಗೆ ಸಂಗೀತಗಾರರು ಯಾವ ಬಗೆಯಲ್ಲಿ ಸ್ಪಂದಿಸಬಹುದು? ಸಂಗೀತ ಕಲಿಕೆ, ಕೇಳ್ಮೆ ಮತ್ತು ಪ್ರಸ್ತುತಿಯಲ್ಲಿ ಸಂಗೀತದ ಪ್ರಜಾಪ್ರಭುತ್ವೀಕರಣ ನಡೆಸಬಹುದಾದ ಬಗೆ ಯಾವುದು?

ಈ ಪ್ರಶ್ನೆಗಳೊಂದಿಗೆ ಹೊರಟಾಗ ಸಂಗೀತ ದೈವಿಕವಾದದ್ದು, ಅದು ಆತ್ಮದ ಭಾಷೆ ಎಂಬೆಲ್ಲ ಮಾತುಗಳನ್ನು ಮರುಪ್ರಶ್ನೆಗೊಳಪಡಿಸಬೇಕಾಗುತ್ತದೆ. ಸಂಗೀತ ಶ್ರೇಷ್ಠವಾದ ಕಲೆ ನಿಜ, ಅದಕ್ಕೆ ಅದರದೇ ಆದ ಸ್ಥಾನ, ಗೌರವ ಇದೆ. ಆದರೆ ಯಾವುದನ್ನೇ ಆಗಲಿ ಅದು ಉಳಿದವುಗಳಿಗಿಂತ ಶ್ರೇಷ್ಠ ಎನ್ನುವ ಮಾತು ಶ್ರೇಣೀಕರಣವನ್ನು ಪೋಷಿಸುವ ಮಾತಾಗುವಂತೆಯೇ ನಿಧಾನಕ್ಕೆ ಶ್ರೇಷ್ಠವೆನಿಸಿಕೊಂಡದ್ದರ ಬೇರನ್ನು ಶಿಥಿಲಗೊಳಿಸುವ ಬಗೆಯೂ ಆಗುತ್ತದೆ. ನಮ್ಮ ಶಾಸ್ತ್ರೀಯ ಪ್ರಭೇದಗಳು ಶ್ರೇಷ್ಠತೆಯ ಕಲ್ಪನೆ ಮತ್ತು ವ್ಯಸನದಿಂದ ಹೊರಬಂದ ಹೊರತು ಅವುಗಳಿಂದ ಹೊಸದೇನನ್ನೂ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ.

ಇಂದಿಗೂ ಶಾಸ್ತ್ರೀಯ, ಜನಪದ ಮತ್ತು ಜನಪ್ರಿಯ ಸಂಗೀತ ಇವುಗಳ ನಡುವೆ ಸ್ಪಷ್ಟ ಶ್ರೇಣೀಕರಣ ಮನೆ ಮಾಡಿರುವುದು ಕಾಣುತ್ತದೆ. ಯಾವುದೇ ಸಾಂಸ್ಕೃತಿಕ ಉತ್ಸವ ನಡೆಯಲಿ, ಇವುಗಳಿಗೆ ದೊರೆಯುವ ವೇದಿಕೆಗಳೇ ಬೇರೆ, ಇವುಗಳ ಕೇಳುಗ ವರ್ಗವೇ ಬೇರೆ. ಅವುಗಳ ನಡುವಣ ವೈಶಿಷ್ಟ್ಯವನ್ನು ಮೆಚ್ಚುತ್ತಲೇ ಒಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ಬಗೆಯ ‘ವಾಟರ್ ಟೈಟ್ ಕಂಪಾರ್ಟ್‍ಮೆಂಟ್ಸ್’ ಪರಸ್ಪರ ಪ್ರಭಾವ ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆಯೇ? ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನರಿಗೆ ಬೇಕಾದಂತೆ ಹಾಡುವವರನ್ನು ಜನರನ್ನು ಓಲೈಸುವವರು ಎಂದು ಅಸಡ್ಡೆಯಿಂದ ಕಾಣುವವರಿದ್ದಾರೆ. ಕಟ್ಟುನಿಟ್ಟಾಗಿ ಪಾಠಾಂತರಕ್ಕೆ ಕಟ್ಟುಬಿದ್ದವರಿದ್ದಾರೆ. ಇವು ಸಂಗೀತವನ್ನು ಸದಾ ಒಂದು ಅಲ್ಪಸಂಖ್ಯಾತ ವರ್ಗದ ಚಟುವಟಿಕೆಯಾಗಿ ನಿರ್ದಿಷ್ಟಗೊಳಿಸುತ್ತದೆಯೇ? ಇದರಿಂದ ಸಂಗೀತ ಕ್ಷೇತ್ರ ಪಡೆಯುವುದೇನು ಮತ್ತು ಕಳೆದುಕೊಳ್ಳುವುದೇನು?

ಈ ಬಗ್ಗೆ ಇಂದು ಸಂಗೀತ ಕ್ಷೇತ್ರದಲ್ಲಿ ಮನೆಮಾಡಿರುವುದು ತುಂಬಾ ಸರಳೀಕೃತವಾದ ಗ್ರಹಿಕೆ. ಜನರನ್ನು ಮೆಚ್ಚಿಸಲು ಹೋದಾಗ ಸಂಗೀತ ಜಾಳುಜಾಳಾಗುತ್ತದೆ, ಜನಪ್ರಿಯತೆಗೆ ಮಾರುಹೋದ ಸಂಗೀತಗಾರ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಾನೆ ಎಂಬ ಭಾವನೆ. ಈ ತಿಳುವಳಿಕೆಯನ್ನು ಮರುಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಶುದ್ಧ ಎಂಬುದು ಯಾವುದು? ಸಂಗೀತ ಹಿಂದೆಂದೋ ಇದ್ದಂತೆ ಇಂದು ಇಲ್ಲ. ಕಾಲಕ್ಕನುಗುಣವಾಗಿ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಬದಲಾವಣೆಗಳನ್ನು ಒಳಗು ಮಾಡಿಕೊಂಡಿದೆ. ಅಲ್ಲದೆ, ತಮ್ಮ ತನವನ್ನು ಬಿಟ್ಟುಕೊಡದೆಯೂ ಜನರನ್ನು ಸೆಳೆಯುವ ಅನ್ನುವುದಕ್ಕಿಂತ ಹೆಚ್ಚಾಗಿ ಒಳಗು ಮಾಡಿಕೊಳ್ಳುವ ಬಗೆಯಲ್ಲಿ ಸಂಗೀತದ ಪ್ರಸ್ತುತಿ ಸಾಧ್ಯವಿಲ್ಲವೇ? ಒಂದು ನಿರ್ದಿಷ್ಟ  ವರ್ಗಕ್ಕೆ ಸೀಮಿತವಾಗಿದ್ದಾಗ ಅದು ಬಹಳ ಮುಂದೆ ಹೋಗುವುದು ಕಷ್ಟವಾಗುತ್ತದೆ. ಕಾಲಕ್ಕನುಗುಣವಾಗಿ ಬದಲಾಗುವ ಬಗೆಯಲ್ಲಿ ಸಂಗೀತ ಹೆಚ್ಚು ಜನಮುಖಿಯಾಗಬೇಕು. ಇಂದಿನ ಸಂಗೀತದ ಕುರಿತು ಹಳಹಳಿಕೆಯ ಮಾತಾಡುವಾಗ ಈ ಸಂಗತಿ ನಮ್ಮ ದೃಷ್ಟಿಯಿಂದ ತಪ್ಪಿ ಹೋಗಬಾರದು. ಸಂಗೀತದ ಎಲ್ಲ ಪ್ರಭೇದಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ದೃಷ್ಟಿಯಿಂದ ಮಾತ್ರವಲ್ಲ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

Deve Gowda – 50 years in politics

– Bhoomi Banu

Deve Gowda has completed 50 years in politics, considering his first election to Karnataka Assembly in 1962 as the beginning of his political career. Undoubtedly he stands first among the popular leaders with huge population behind him. Of course, he had downfalls in his career graph. But his success lies in his capacity to rise from status zero. His party’s strength was reduced to negligible numbers after the split in the Janata Dal in 1998. In the very next elections (2004) he rose to become the kingmaker.

Despite his long career in politics he enjoyed the prime position for a lesser period. He was the Chief Minister for eighteen months and the Prime Minister for little over 10 months. Though he was elected to the assembly in 1962, elevated to the position of the leader of Opposition in 1972 and led the Janata Party to assume power in 1983, he had to wait till 1994 to become the Chief Minister.

His journey was not a smooth sail. He had to fight with leaders of forward community within the party, cut short growth of other promising leaders from his own community and select a few who would hardly challenge his leadership as his followers. By and large he succeeded in his efforts. Now his children also enjoy fruits of his hard labour.

No doubt the fact that he belongs to a socially not-so-backward land holders’ community has been the major influencing factor for his overall growth in politics. Had he belonged to any other backward class his career would not have been what it is today. In other words, he would not have enjoyed as many positions as he could.

Despite his long stint in politics Deve Gowda has not been able to extend his support base beyond Vokkaliga belt. Neither backward classes nor minorities opt to identify themselves with the JD(S). The gravest strength and weakness of the JD(S) is that is has been deemed to be Vokkaliga’s party. In some constituencies minorities and a few backward classes might have favoured the JD(S). But that is insufficient to term the party as minorities’ choice or backward classes’ favourite.

H.D Kumaraswamy’s misdemeanor in 2006 proved costly for the party. He joined hands with the BJP and became the CM. That move widened the gap between the JD(S) and the minorities. Similarly Siddaramaiah’s exit from the party prompted the a few backward classes, if not all, view the JD(S) suspiciously.

Besides, the JD(S) supreme leader Deve Gowda time and again favoured people from his own community for important positions. The BJP is also seeing his hand in appointment of Justice Chandrashekharaiah as Upalokayukta. The chemistry between the JD(S) and the BJP underwent a serious change after B.S Yeddyurappa was replaced by a Gowda. And, interestingly, that change in chemistry caused reactions in the BJP too.

Deve Gowda and his family members have their say in the recruitments done by Karnataka Public Service Commission. If someone makes a detail study of people recruited under the general category and the 3A through KPSC he/she can easily make out the influence of the Gowda clan.

Deve Gowda’s vociferous protest against Havanur’s committee report during Devraj Urs’s rule is well documented. Ironically, Deve Gowda chose to felicitate Mr. L.G. Havanur when he was on the mission to woo ST votes.

Politicians across the political spectrum accept that Deve Gowda is clever and also a man of schemes. He chooses the right pawn to move on right occasions. Soon after Siddaramaiah left the party, he raised his voice for internal reservation with the backward class categories. Despite having son in the CM’s gaddi he could not reclassify the reservation.

The legal battle he has waged against Ashok Kheny’s BMIC project is a landmark episode of his career. He has not given up the struggle. It is sad that the successive governments played to the tunes of the private project promoter at the cost of poor people’s hard earned land. It is equally sad that Deve Gowda’s struggle for justice in this case has not gone down well with the people other than those directly impacted by design of the project. It is also true that the JD(S) has failed to communicate the alleged injustice caused by the project to the public at large. As he grew older, Deve Gowda lost the patience to communicate the issue in the language understood by the present generation. As a result sections of media and society view his struggle as Gowda’s fight against a Lingayat project promoter.

Besides, Deve Gowda has failed to build his party on a strong ideological base. He himself did not follow any ideology, except the ideology of convenience. His son emerged as his heir apparent after a coup against the Congress-JD(S) combine. He is also going on the same path as his father did. His burst of anger in reaction to Siddaramaiah’s question why could not he nominate any among – M.C Nanaiah, PGR Sindhia, Basavaraj Horatti – as next CM candidate from the JD(S), alone is enough to understand he would not be different from his father. The tradition of family rule continues.

ಚರಕ – ಭೀಮನಕೋಣೆಯಲ್ಲೊಂದು “ದೇಸಿ” ಕ್ರಾಂತಿ


– ರವಿ ಕೃಷ್ಣಾರೆಡ್ಡಿ


 

ಸಾಗರದ ಬಳಿಯ ಹೆಗ್ಗೋಡು ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪರಿಚಿತವಾದ ಸ್ಥಳವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿಯೇ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಯೊಂದು ಜರುಗುತ್ತಿದೆ. ಅದು “ಚರಕ” ಸಂಸ್ಥೆಯ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ರೂಪದಲ್ಲಿ.

ಹಿರಿಯ ರಂಗಕರ್ಮಿ, ಲೇಖಕ, ನಾಟಕಕಾರ ಪ್ರಸನ್ನರ ಪ್ರಯತ್ನ ಇದು. ಹತ್ತಿಯ ನೂಲಿಗೆ ಬಣ್ಣ ಹಾಕಿ ಖಾದಿ ಬಟ್ಟೆ ನೇಯುವುದರಿಂದ ಹಿಡಿದು ವಿವಿಧ ದಿರಿಸುಗಳನ್ನು ಹೊಲಿದು ಮಾರುಕಟ್ಟೆಗೆ ತಲುಪಿಸುವ ತನಕ “ಚರಕ” ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಅದು ತನ್ನದೇ ಆದ “ದೇಸಿ” ಹೆಸರಿನ ಅಂಗಡಿಗಳ ಮೂಲಕ ಈ ರೆಡಿಮೇಡ್ ದಿರಿಸುಗಳನ್ನು ಮಾರಾಟ ಮಾಡುತ್ತದೆ.

ವಾರ್ಷಿಕ ಒಂದು ಕೋಟಿ ಆದಾಯವಿರುವ ಈ “ಚರಕ” ಸಹಕಾರ ಸಂಘ ನಡೆಯುತ್ತಿರುವುದೆಲ್ಲ ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಬಹುದು. ಅವರನ್ನು ಆಯ್ಕೆ ಮಾಡುವುದು ಪ್ರಜಾಸತ್ತಾತ್ಮಕವಾಗಿ; ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳೆ ತಮ್ಮಲ್ಲಿಯ ಹಲವರನ್ನು ಅಧ್ಯಕ್ಷೆ, ಕಾರ್ಯದರ್ಶಿ, ಇತ್ಯಾದಿಯಾಗಿ ಆರಿಸಿಕೊಳ್ಳುತ್ತಾರೆ.

ಮತ್ತೆ “ಚರಕ” ಕೇವಲ ನೌಕರಿ ನೀಡುವ ಸಂಸ್ಥೆ ಮಾತ್ರವಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆ ಸಹ. ಅಲ್ಲಿ ವರ್ಷಕ್ಕೊಮ್ಮೆ ಚರಕ ಉತ್ಸವ ನಡೆಯುತ್ತದೆ. ಇದೇ ಹೆಣ್ಣುಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ವೈಚಾರಿಕವಾಗಿ ಅವರನ್ನು ಬೆಳೆಸುವ ಪರಿಸರ ಅದು.

ಅಲ್ಲಿಗೆ ನಾನು 2009ರ ಮಾರ್ಚ್‌ನಲ್ಲಿ ಭೇಟಿ ಕೊಟ್ಟಿದ್ದೆ; ಹಿರಿಯ ಮಿತ್ರರಾದ ಡಿ.ಎಸ್.ನಾಗಭೂಷಣ್ ಮತ್ತು ಸವಿತಾ ನಾಗಭೂಷಣ್‌ರೊಂದಿಗೆ. ಅಂದು “ಚರಕ”ದ ಆ ವರ್ಷದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರೊಡನೆ ಅನೌಪಚಾರಿಕವಾಗಿ ಎಂಬಂತೆ ಮಾತನಾಡುತ್ತ ಅವರ ಮಾತುಗಳನ್ನು ವಿಡಿಯೊ ರೆಕಾರ್ಡ್ ಮಾಡಿದ್ದೆ. ಇಷ್ಟು ದಿನ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲು ಆಗಿರಲಿಲ್ಲ. ಇತ್ತೀಚೆಗಷ್ಟೆ ಸಾಧ್ಯವಾಯಿತು. ಈ ವಿಡಿಯೊ ಬಹುಶಃ ನಿಮಗೆ “ಚರಕ”ದ ಬಗ್ಗೆ ಒಂದಷ್ಟು ವಿಭಿನ್ನ ಮಾಹಿತಿ ನೀಡಬಹುದು ಎನ್ನಿಸುತ್ತದೆ.

ಅಂದ ಹಾಗೆ, ರಾಜ್ಯದ ವಿವಿಧ ಕಡೆ ಇರುವ “ದೇಸಿ” ಅಂಗಡಿಗಳ ವಿವರ “ಚರಕ”ದ ಈ ವೆಬ್‌ಸೈಟಿನಲ್ಲಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ, ನೈಸರ್ಗಿಕವಾಗಿ ಲಭ್ಯವಿರುವ ಪದಾರ್ಥಗಳಿಂದ ಬಣ್ಣಹಾಕಿದ, ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳು ಇವು. ಚಿಕ್ಕವರಿಗೆ, ಹೆಂಗಸರಿಗೆ, ಗಂಡಸರಿಗೆ, ಒಳ್ಳೆಯ ಡಿಸೈನ್‌ಗಳಿರುವ ಬಟ್ಟೆಗಳು ಇಲ್ಲಿ ಸಿಗುತ್ತವೆ. ಸಾಧ್ಯವಾದಲ್ಲಿ ಒಮ್ಮೆ ಈ ಅಂಗಡಿಗಳನ್ನು ಸಂದರ್ಶಿಸಿ ಇಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಿ.

ಪ್ರಸನ್ನ, ಅವರ ಗಾಂಧೀವಾದ, ಚರಕ, ದೇಸಿ, ಇವುಗಳ ಬಗ್ಗೆ ಇಲ್ಲೊಂದು ಒಳ್ಳೆಯ ಇಂಗ್ಲಿಷ್ ಲೇಖನವಿದೆ. ಗಮನಿಸಿ.

http://charaka.in ಇದು “ಚರಕ” ಸಂಸ್ಥೆಯ ವೆಬ್‌ಸೈಟ್.

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ