Monthly Archives: February 2012

Deccan Herald - Mining Payments

ಆದರ್ಶ ಎಂಬುವುದು ಮಾರುಕಟ್ಟೆಯ ಸರಕಲ್ಲ


– ಡಾ.ಎನ್.ಜಗದೀಶ ಕೊಪ್ಪ


[ಕರ್ನಾಟಕ ವಿ.ವಿ.ಯ ಪತ್ರಿಕೋದ್ಯಮ ವಿದಾರ್ಥ್ಯಿಗಳು  ಪತ್ರಿಕೋದ್ಯಮ ಮತ್ತು ಆದರ್ಶ ಕುರಿತಂತೆ ಕೇಳಿದ್ದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯ ಲಿಖಿತ ರೂಪ.]

ವರ್ತಮಾನದ ಬದುಕಲ್ಲಿ ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಸಂಬಧಪಟ್ಟಂತೆ ಆದರ್ಶ ಮತ್ತು ವಾಸ್ತವ ಕುರಿತು ಮಾತನಾಡುವುದು ಅಥವಾ ಬರೆಯುವುದು ಕ್ಲೀಷೆಯ ಸಂಗತಿ. ಇವತ್ತಿನ ಪತ್ರಿಕೋದ್ಯಮದಲ್ಲಿ ನೀತಿ, ಅನೀತಿಗಳ ನಡುವಿನ ಗಡಿರೇಖೆ ಸಂಪೂರ್ಣ ಅಳಿಸಿ ಹೋಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಆಧ್ಯತೆ ಕೂಡ ಬದಲಾಗಿದೆ. ಎಲ್ಲರೂ ಎಲ್ಲವನ್ನು ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾ, ಇಡೀ ಮಾಧ್ಯಮ ಲೋಕವನ್ನು ಲಾಭದಾಯಕ ಉಧ್ಯಮವನ್ನಾಗಿ ಪರಿವರ್ತಿಸುವ ಉಮೇದಿನಲ್ಲಿರುವಾಗ ಆದರ್ಶ ಕುರಿತು ಮಾತನಾಡುವುದು ಅಸಂಗತ ಎಂದು ಅನಿಸತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಎಂದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಇರಬೇಕಾದ ಸಂವಹನದ ಸೇತುವೆ ಎಂಬ ಭಾವನೆ ಇತ್ತು. ಪತ್ರಿಕೆ ಮತ್ತು ಪತ್ರಕರ್ತ ಇಬ್ಬರೂ ಓದುಗರಿಗೆ ಉತ್ತರದಾಯಕತ್ವದ ಭಾಗವಾಗಿದ್ದರು. ಒಬ್ಬ ಪತ್ರಕರ್ತನಿಗೆ ನಾನು ಯಾರಿಗಾಗಿ ಬರೆಯುತಿದ್ದೇನೆ, ನನ್ನ ಓದುಗರು ಯಾರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ದೃಶ್ಯ ಮಾಧ್ಯಮಗಳು ಬಂದ ನಂತರ ಅದೃಶ್ಯ ವೀಕ್ಷಕರಿಗೆ ಸುದ್ಧಿಯನ್ನು ಉಣಬಡಿಸುತ್ತಿರುವಾಗ ಏನೂ ಮಾಡಿದರೂ ಚಲ್ತಾ ಹೈ ಎಂಬ ಉಢಾಪೆತನ ಈಗ ಪತ್ರಕರ್ತ್ರನಲ್ಲಿ ಮನೆ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಯಾವುದೇ ಪತ್ರಕರ್ತನಿಗೆ ಆದರ್ಶಗಳು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಜೊತೆಗೆ ಆದರ್ಶವೆಂಬುವುದು ಅಂಗಡಿಯಲ್ಲಿ ದೊರೆಯುವ ವಸ್ತು ಕೂಡ ಅಲ್ಲ.

ಇತ್ತೀಚೆಗಿನ ಪತ್ರಿಕೋದ್ಯಮದ ಧೋರಣೆ ಕುರಿತು ಆಕ್ಷೇಪ ವ್ಯಕ್ತವಾದಾಗಲೆಲ್ಲಾ, ಪತ್ರಿಕೋದ್ಯಮಿಗಳು ತಮ್ಮ ರಕ್ಷಣೆಗಾಗಿ ಗುರಾಣಿಯಂತೆ ಬಳಸುವುದು, ಲಾಭ ಮತ್ತು ನಷ್ಟದ ವಿಷಯಗಳನ್ನು ಮಾತ್ರ. ಭಾರತದ ಒಂದು ಶತಮಾನದ ಪತ್ರಿಕೆಗಳ ಇತಿಹಾಸ ಗಮನಿಸಿದರೆ, ಇವರು ಅಪ್ಪಟ ಸುಳ್ಳುಗಾರರು ಎಂಬುದು ಸಾಬೀತಾಗುತ್ತದೆ. ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ಸಂಸ್ಥಾಪಕರು ಚೆನ್ನೈ ನಗರದ ನಾಲ್ವರು ವಕೀಲರು, ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯನ್ನು ಬ್ರಿಟಿಷರಿಂದ ಕೊಂಡವರು ಮಾರವಾಡಿ ಮನೆತನದ ಜೈನ್ ಕುಟುಂಬ, ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಸಂಸ್ಥಾಪಕ ರಾಮನಾಥ್ ಗೊಯಂಕ ವ್ಯಾಪಾರಸ್ಥ ಕುಟುಂಬದಿಂದ ಬಂದ ವ್ಯಕ್ತಿ, ಅಷ್ಟೇ ಏಕೆ, ನಮ್ಮ ಕನ್ನಡದ ದಿನಪತ್ರಿಕೆ ಪ್ರಜಾವಾಣಿಯ ಸಂಸ್ಥಾಪಕ ಕೆ. ಎನ್. ಗುರುಸ್ವಾಮಿ ಹೆಂಡ ಮಾರುವ ವೃತ್ತಿಯಿಂದ ಬಂದವರು (ಇವರ ಮೂಲ, ಆಂಧ್ರಪ್ರದೇಶದ ಆಧೋನಿ).

ಇವರುಗಳಿಗೆ ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಆದರ್ಶ ಇದ್ದುದರಿಂದಲೇ ಪತ್ರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವರುಗಳಿಗೆ ಲಾಭ ಮೊದಲ ಆದ್ಯತೆಯಾಗಿರಲಿಲ್ಲ. ಈ ಎಲ್ಲಾ ಪತ್ರಿಕೆಗಳು ನಷ್ಟದಲ್ಲಿದ್ದರೆ, ಇಷ್ಟು ದೂರ ಸಾಗಿಬಂದು ಇವತ್ತಿನ ಹೆಮ್ಮರಗಳಾಗಿ ಬೆಳೆಯಲು ಸಾಧ್ಯವಿತ್ತೆ? ಈ ಆದರ್ಶವಾದಿಗಳಿಗೆ ಲಾಭಕೋರತನ ಎಂದೂ ಗುರಿಯಾಗಿರಲಿಲ್ಲ ಅಂದ ಮಾತ್ರಕ್ಕೆ ಪತ್ರಿಕೆಯನ್ನು ನಷ್ಟದಲ್ಲಿ ನಡೆಸಬೇಕೆಂಬ ಉಮೇದು ಇರಲಿಲ್ಲ. ಪತ್ರಿಕೆಯ ಓದುಗರೇ ನಿಜವಾದ ವಾರಸುದಾರರು ಎಂದು ಇವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕೆಯ ಮುಖಪುಟದ ಜಾಹಿರಾತು ಯಾವ ಕಾರಣಕ್ಕೂ ಕಾಲು ಪುಟಕ್ಕೆ ಮೀರದಂತೆ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದ್ದರು.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಬಲಿಷ್ಟ ರಾಜಕಾರಣಿಗಳ ಮತ್ತು ಕಾರ್ಪೋರೇಟ್ ಕುಳಗಳ ಪಾಲಾಗಿವೆ ಹಾಗಾಗಿ ಹಣ ತರುವ ಜಾಹಿರಾತಿಗಾಗಿ ಇಡೀ ಮುಖಪುಟವನ್ನು ಒತ್ತೆ ಇಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತನಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯ?.

ಮೂರು ದಶಕಗಳ ಹಿಂದೆ ನನ್ನ ತಲೆಮಾರು ಪತ್ರಿಕೋದ್ಯಮ ಪ್ರವೇಶಿಸಿದಾಗ ಪತ್ರಿಕೋದ್ಯಮ ಕುರಿತಂತೆ ಬೋಧಿಸುವ ಯಾವ ಪಠ್ಯಗಳು ಇರಲಿಲ್ಲ,  ಯಾವುದೇ ವಿ.ವಿ.ಯಲ್ಲಿ ಇದು ಜ್ಞಾನ ಶಿಸ್ತುವಾಗಿ ಬೆಳದಿರಲಿಲ್ಲ. ನಮಗೆ ಪತ್ರಿಕೋದ್ಯಮದ ಅ. ಆ. ಇ. ಈ. ಕಲಿಸಿದ ಹಿರಿಯರ ಬದುಕು, ಬರವಣಿಗೆ, ಅವರುಗಳು ನೈತಿಕತೆ ಕುರಿತಂತೆ ಹಾಕಿಕೊಂಡಿದ್ದ ಲಕ್ಷ್ಮಣರೇಖೆ ಇವೆಲ್ಲೂ ನಮ್ಮ ಪಾಲಿಗೆ ನಿಜವಾದ ಪಠ್ಯಗಳಾಗಿದ್ದವು.

ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷ ಇರಬಾರದು. ಓದುಗರಿಗೆ ನಮ್ಮ ಬರವಣೆಗೆ ಮೂಲಕ ನಿಷ್ಟರಾಗಿರಲು ಇರುವ ಏಕೈಕ ಮಾರ್ಗವೆಂದರೆ ಅಧಿಕಾರಯುತ ವ್ಯಕ್ತಿಗಳಿಂದ (ರಾಜಕಾರಣಿ ಮತ್ತು ಅಧಿಕಾರಿ ಇವರುಗಳಿಂದ) ಅಂತರ ಕಾಪಾಡಿಕೊಳ್ಳುವುದು, ಜಾತಿ, ಧರ್ಮ ಇವುಗಳ ವಕಾಲತ್ತು ವಹಿಸಿ ಬರವಣಿಗೆ ಮಾಡಬಾರದು, ನಾವು ಬರೆಯುವ ಒಂದೊಂದು ಅಕ್ಷರದಲ್ಲಿ ಜೀವಪರವಾದ ಧ್ವನಿ ಇರಬೇಕು, ಇವೆಲ್ಲವನ್ನೂ ನನ್ನ ತಲೆಮಾರಿನ ಪತ್ರಕರ್ತರು, ಖಾದ್ರಿ ಶಾಮಣ್ಣ, ಟಿ.ಎಸ್.ಆರ್.,  ವೈ.ಎನ್.ಕೆ.,  ಕೆ. ಶಾಮರಾವ್,  ಎಂ.ಬಿ. ಸಿಂಗ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ.ಲಂಕೇಶ್, ಜಯಶೀಲರಾವ್, ಐ.ಕೆ. ಜಾಗೀರ್‌ದಾರ್, ಪಾ.ವೆಂ. ಆಚಾರ್ಯ, ಸುರೇಂದ್ರಧಾನಿ ಮುಂತಾದ ಮಹನೀಯರಿಂದ ಕಲಿತುಕೊಂಡಿದ್ದರು.

Deccan Herald - Mining Paymentsಈ ತಲೆಮಾರಿನ ಮುಂದಿರುವ ಆದರ್ಶವೆಂದರೆ, ಸಾಧ್ಯವಾದಷ್ಟು ಹಣ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು, ಓಡಾಡಲು ಕಾರಿರಬೇಕು. ಇನ್ನೂ ಸಾಧ್ಯವಾದರೆ, ನಗರದ ಹೊರವಲಯದಲ್ಲಿ ಒಂದು ತೋಟ ಇರಬೇಕು. ಇಂತಹವರಿಂದ ಏನನ್ನು ತಾನೆ ಕಲಿಯಲು ಸಾಧ್ಯ? ಕೇವಲ 15 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದಿದ್ದವರೆಲ್ಲಾ ಇಂದು ಕೋಟಿ ಕೋಟಿ ರೂಗಳ ಒಡೆಯರು. ಗಣಿಧಣಿಗಳ ಎಂಜಲು ಕಾಸಿಗೆ ಕೈಯೊಡ್ಡಿದವರೆಲ್ಲಾ ಇಂದು ಸ್ಟಾರ್ ಪತ್ರಕರ್ತರು. ಇಂತಹ ಅಯೋಮಯ ಸ್ಥಿತಿಯಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇತ್ತೀಚೆಗಿನ ಯುವ ಜನಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಹನೆ ಎದ್ದು ಕಾಣುತ್ತಿದೆ. ಎಲ್ಲೆಡೆ ಪ್ರಾಮಾಣಿಕತೆಯನ್ನು ಬಯಸುವ ಮನೋಭಾವ ಬೆಳೆದು ಬಂದಿದೆ. ಜೊತೆಗೆ ತಾವೂ ಪ್ರಾಮಾಣಿಕರಾಗಿ ಇರಲು ಬಯಸುತ್ತಾರೆ. ಇದು ಪತ್ರಿಕೋದ್ಯಮ ಹೊರತು ಪಡಿಸಿ ಉಳಿದ ರಂಗಗಳ ಯುವಜನತೆಯಲ್ಲಿ ಕಾಣುವ ಅಂಶ ಎಂದು ತೀವ್ರ ವಿಷಾದದಿಂದ ಹೇಳಲು ಬಯಸುತ್ತೇನೆ.

ಇವತ್ತಿನ ಕಾಲೇಜು ಅಥವಾ ವಿ.ವಿ ಗಳಲ್ಲಿ ನಾವು ಪಡೆಯುತ್ತಿರುವ ಪದವಿ ಉದ್ಯೋಗಕ್ಕೆ ಒಂದು ಪರವಾನಗಿ ಅಷ್ಟೇ, ಅದರಾಚೆ ಅದು ಈ ಯುವ ತಲೆಮಾರಿಗೆ ಏನನ್ನೂ ಕಲಿಸಿಕೊಡುವುದಿಲ್ಲ, ಬೋಧಿಸುವುದಿಲ್ಲ. ಅದು ದೃಶ್ಯಮಾಧ್ಯಮವಾಗಿರಲಿ, ಮುದ್ರಣ ಮಾಧ್ಯಮವಾಗಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ಯುವಕರು ನೈತಿಕತೆ ಮತ್ತು ಆದರ್ಶಗಳನ್ನು ಸ್ವಯಂ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಏಕಲವ್ಯನಾಗಲು ಸಿದ್ಧನಿರಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡರೆ, ಬದುಕಿನ ಕಟು ವಾಸ್ತವಗಳು ಏನು ಎಂಬುದು ತಂತಾನೆ ಅರ್ಥವಾಗುವ ಸಂಗತಿ.

ಮಾಧ್ಯಮಗಳ ಮೇಲೊಂದು ಟಿಪ್ಪಣಿ


-ಬಿ. ಶ್ರೀಪಾದ ಭಟ್  


“ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಕೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು.” -ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜಾಗತೀಕರಣಗೊಂಡು ಇಪ್ಪತ್ತು ವರ್ಷಗಳ ನಂತರದ ಇಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ವಲಯಗಳಂತೆ ಪತ್ರಿಕೋದ್ಯಮವೆನ್ನುವುದು ಸಹ ತನ್ನ ಹಿಂದಿನ ರೂಪದಲ್ಲಿ ಉಳಿದಿಲ್ಲ. ಇಂದು ಮಾರುಕಟ್ಟೆ ಆಧಾರಿತ ಆರ್ಥಿಕ ಸ್ಥಿತಿಯಲ್ಲಿ  ಜಾಗತೀಕರಣದ ಮೂಲ ಮಂತ್ರವಾದ, ಸಂಪಾದನೆ ಹಾಗೂ ಸಂಪಾದನೆ ಮತ್ತಷ್ಟು ಸಂಪಾದನೆ ಎನ್ನುವ ಸಿದ್ಧಾಂತವನ್ನು ಇಂದು ತನ್ನದಾಗಿಸಿಕೊಂಡಿರುವ ಪತ್ರಿಕೋದ್ಯಮವೂ ಕೂಡ ಒಂದು ಮಾರ್ಕೆಟಿಂಗ್ ವ್ಯವಸ್ಥೆಯಾಗಿ ಬೆಳೆದುಬಿಟ್ಟಿದೆ. ಇದರ ಫಲವೇ ಮುಕ್ತ ಆರ್ಥಿಕತೆ ಹೇಳುವಂತೆ ವ್ಯವಸ್ಥೆಯಲ್ಲಿ ನೀನು ನಿರಂತರವಾಗಿ ಬದುಕಿ ಉಳಿಯಬೇಕೆನ್ನವುದಾದರೆ ನಿನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಳ್ಳುತ್ತಲೇ ಇರಬೇಕು, ಈ ತಳ್ಳುವಿಕೆ ನಿರಂತರವಾಗಿರಬೇಕು. ಬಹುಪಾಲು ದೃಶ್ಯ ಮಾಧ್ಯಮಗಳು ಈ ಮುಕ್ತ ಆರ್ಥಿಕ ನೀತಿಯ ತಳ್ಳುವಿಕೆಯನ್ನು ತಮ್ಮ ಪತ್ರಿಕೋದ್ಯಮದ ಮೂಲ ಮಂತ್ರ,ತಿರುಳನ್ನಾಗಿಸಿಕೊಂಡಿವೆ.

ಈ ರೀತಿಯಾಗಿ ಬದುಕಿ ಉಳಿಯುವುದಕ್ಕಾಗಿ ತನ್ನನ್ನು ತಾನು ವ್ಯವಸ್ಥೆಯಲ್ಲಿ ತಳ್ಳುವ ಪ್ರಕ್ರಿಯಲ್ಲಿ ಈ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳು, ನೈತಿಕ ಪಾಠಗಳು, ವೈಯುಕ್ತಿಕ ಪರಿಶುದ್ಧತೆ ಮುಂತಾದವುಗಳನ್ನೆಲ್ಲವನ್ನೂ ಕೂಡ ಹಳ್ಳಕ್ಕೆ ತಳ್ಳಿ ಬಿಟ್ಟಿವೆ. ಈಗ ಮಾಧ್ಯಮವೆನ್ನುವುದು ಒಂದು ಪ್ಯಾಕೇಜ್ ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಮಾಲೀಕನ ವ್ಯವಹಾರಿಕ ಬದ್ಧತೆಗಳು ಹಾಗೂ ಅವನ ಉದ್ಯೋಗಿಯಾದ ಸಂಪಾದಕನೊಬ್ಬನ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿಹೋಗಿದೆ. ಈ ಪ್ಯಾಕೇಜ್ ಪದ್ಧತಿಯ ಪ್ರಕಾರ  ಪ್ರತಿಯೊಂದು ದೃಶ್ಯ ಮಾಧ್ಯಮಗಳು ಒಪ್ಪಿಸುವ ಗಿಣಿ ಪಾಠವೆಂದರೆ, ‘ಮೊದಲನೆಯದಾಗಿ ನಾವು ಜನರಿಗೆ ಏನು ಬೇಕು, ಅದರಲ್ಲೂ ಜನ ಸಾಮಾನ್ಯರಿಗೆ ಏನು ಬೇಕೋ, ಅದರಲ್ಲೂ ಜನಸಾಮಾನ್ಯರ ನಂಬಿಕೆಗಳು ಏನಿವೆಯೋ, ಅವನ್ನು ನಾವು ಅತ್ಯಂತ ನಿಯಮಬದ್ಧವಾಗಿ, ಕರಾರುವಕ್ಕಾಗಿ, ಕ್ರಮಬದ್ಧವಾಗಿ ಮರಳಿ ಜನರಿಗೆ ತಲುಪಿಸುತ್ತೇವೆ.’

ಇಲ್ಲಿ ಭಾರತದಂತಹ ದೇಶದಲ್ಲಿ ಇಲ್ಲಿನ ಜನರ ನಂಬಿಕೆಗಳನ್ನು, ಅವರ ಬೇಕು ಬೇಡಗಳನ್ನು ಋಣಾತ್ಮವಾಗಿ ಗ್ರಹಿಸಿರುವುದರ ಫಲವೇ ಇಂದು ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಹಿಂಜರಿಕೆ, ಅನುಮಾನಗಳು ಹಾಗೂ ನಾಚಿಕೆ ಇಲ್ಲದೆ ಮೂಢನಂಬಿಕೆಗಳನ್ನಾಧರಿಸಿದ ಹತ್ತಾರು ಕಾರ್ಯಕ್ರಮಗಳು ದಿನವಿಡೀ ಬಿತ್ತರಗೊಳ್ಳುತ್ತಿರುತ್ತವೆ. ಏಕೆಂದರೆ ಇವು ಜನರಿಗೆ ಬೇಕಲ್ಲವೇ! ಅವರು ಇದನ್ನು ನಂಬುತ್ತಾರಲ್ಲಾ! ಆದರೆ ಈ ಮೂಢನಂಬಿಕೆ ಆಧಾರಿತ ಕಾರ್ಯಕ್ರಮಗಳು ಸಮಾಜವನ್ನು ದಿಕ್ಕು ತಪ್ಪಿಸಿ ಅಮಾಯಕ, ಮುಗ್ಧ ವೀಕ್ಷಕರನ್ನು ಗೊಂದಲಗೊಳಿಸಿ ಅವರನ್ನು ಇನ್ನಷ್ಟು ಕತ್ತಲಲ್ಲಿ ಕೊಳೆಯುವಂತೆ ಮಾಡುತ್ತಿರುವ ಬಗ್ಗೆ ಈ ದೃಶ್ಯ ಮಾಧ್ಯಮಗಳಿಗೆ ಕೊಂಚವೂ ಕೀಳರಿಮೆ ಇಲ್ಲ. ಇದು ಯಾರ ಆಸ್ತಿ ನಿಮ್ಮ ಆಸ್ತಿ ಎಂದು ಹೇಳಿಕೊಂಡು ಬರುವ ಖಾಸಗಿ ಚಾನಲ್‌ಗಳ ಉದ್ದೇಶ ಕೂಡ ಅಷ್ಟೇ. ಜನರಿಂದ ಹಾಗೂ ಜನರಿಗಾಗಿ ಎನ್ನುತ್ತಾ ಜನರನ್ನು ಹಾದಿ ತಪ್ಪಿಸುವುದು. ಸತ್ಯ ದರ್ಶನದ ಹೆಸರಿನಲ್ಲಿ ಚರ್ಚೆಗಳು, ಚೆಕ್‌ಬಂದಿಗಳು ನಡೆಸುವ ವೇದಿಕೆಗಳನ್ನು ನ್ಯಾಯಾಲಯವಾಗಿ ಮಾರ್ಪಡಿಸಿ ಅಲ್ಲಿ ತಾವೊಬ್ಬ ನ್ಯಾಯಾದೀಶನಂತೆಯೂ, ಇಲ್ಲಿನ ಎಲ್ಲಾ ರೋಗಗಳಿಗೆ ತಾನೊಬ್ಬನೇ ಸರ್ವಮುದ್ದು ನೀಡುವ ವೈದ್ಯನೆಂಬಂತೆ ವರ್ತಿಸುತ್ತಾ ಆಳದಲ್ಲಿ ಇವರೊಬ್ಬ ಜಾಹೀರಾತಿನ ರೂಪದರ್ಶಿಗಳಷ್ಟೇ ಎನ್ನುವ ನಿಜವನ್ನು ಮರೆಮಾಚುತ್ತಾರೆ. ಇಲ್ಲಿರುವುದು ಅನುಕೂಲಸಿಂಧು, ಅವಕಾಶವಾದಿ ಪತ್ರಿಕೋದ್ಯಮ. ಇಲ್ಲಿ ಮಾಧ್ಯಮವೆನ್ನುವುದು ಒಂದು ಪ್ರಾಡಕ್ಟ್. ಇದನ್ನು ಅತ್ಯಂತ ಕೊಳಕಾಗಿ ಉತ್ಪಾದಿಸಿ ವ್ಯಾವಹಾರಿಕವಾಗಿ ಸದಾ ಲಾಭದ ಆಧಾರದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಸರಿ ತಪ್ಪುಗಳ ಜಿಜ್ನಾಸೆಯೇ ಬರುವುದಿಲ್ಲ ಹಾಗು ಕಾಡುವುದಿಲ್ಲ. ಇಲ್ಲಿ ದೃಶ್ಯ ಮಾಧ್ಯಮವೆನ್ನುವುದು ಒಂದು ಕಂಪನಿಯಾಗಿ ಮಾರ್ಪಟ್ಟ ಬಳಿಕ ಅಲ್ಲಿ ನೈತಿಕತೆ ಅಥವಾ ಅನೈತಿಕತೆಯ ಪ್ರಶ್ನೆಯೇ ಇರುವುದಿಲ್ಲ.

ಇಲ್ಲಿರುವುದು ಒಂದೇ ಮಂತ್ರ. ಅದು ಲಾಭ ಮತ್ತು ಟಿಅರ್‌ಪಿ. ಅದಕ್ಕಾಗಿ ಇಲ್ಲಿ ನಿಮಿಷಕ್ಕೊಮ್ಮೆ ತಿರಸ್ಕಾರಯೋಗ್ಯವಾದ ಬ್ರೇಕಿಂಗ್ ಸುದ್ದಿ ಬಿತ್ತರಗೊಳ್ಳಲೇ ಬೇಕು, ಇಲ್ಲಿ ಕೆಲವರ ಚಾರಿತ್ಯವಧೆ ನಡೆಯುತ್ತಿರಲೇಬೇಕು, ನಿರ್ಭಯ ಪತ್ರಿಕೋದ್ಯಮದ ಹೆಸರಿನಲ್ಲಿ ಹಸೀ ಹಸೀ ಸುಳ್ಳುಗಳನ್ನು ಬೊಗಳುತ್ತಿರಬೇಕು, ರೋಮಾಂಚಕ ಪತ್ರಿಕೋದ್ಯಮದ ಲಜ್ಜೆಗೇಡಿತನ ಎಲ್ಲೆಲ್ಲೂ ರಾಚುತ್ತಿರಬೇಕು. ಇವೆಲ್ಲ ಇಂದು ದೃಶ್ಯ ಮಾಧ್ಯಮಗಳ ದಿನನಿತ್ಯದ ವಹಿವಾಟಾಗಿದೆ. ಏಕೆಂದರೆ ಇವೆಲ್ಲಾ ಮಾರ್ಕೆಟ್ ವ್ಯವಸ್ಥೆಯ ಆಕಾಂಕ್ಷೆಗಳಿಗೆ ಬದ್ಧತೆಗೊಳಪಟ್ಟಿರುತ್ತವೆ. ಇದು ಪ್ಯಾಕೇಜ್ ನಿಯಮ. ಈ ನೆಲದ ಭಾವನೆಗಳಿಗೆ ಅತ್ಯಂತ ಅಸೂಕ್ಷವಾಗಿ ಸ್ಪಂದಿಸುವ ಈ ದೃಶ್ಯ ಮಾಧ್ಯಮದ ಪತ್ರಕರ್ತರು ಪ್ರಚಲಿತ ವಿದ್ಯಾಮಾನಗಳಿಗೆ ತಾವೇ ಸ್ವತಹ ಬ್ರಾಂಡ್ ಆಗಿಬಿಡುತ್ತಾರೆ ಹೊರತಾಗಿ ಅದರ ಆಳಕ್ಕಿಳಿದು ಸತ್ಯಾಸತ್ಯತೆಗಳನ್ನು ಬಗೆದು ನೋಡುವುದಿಲ್ಲ. ಇಲ್ಲಿನ ಪತ್ರಕರ್ತರು ತಮ್ಮ ಚಾನಲ್ ಜನಪ್ರಿಯಗೊಳ್ಳುತ್ತಿದೆ, ತಾವೊಬ್ಬ ಜನಪ್ರಿಯ ಪತ್ರಕರ್ತ, ಎನ್ನುವ ಭ್ರಮೆಗೆ ಬಲಿಯಾದ ಕ್ಷಣದಿಂದ ಆತ ತನ್ನ ಜೊತೆ ಜೊತೆಗೆ ಗಣರಾಜ್ಯದ ಆದರ್ಶಗಳನ್ನು ಕೂಡ ಮಣ್ಣುಪಾಲು ಮಾಡುತ್ತಾನೆ. ಆಗ ಎಲ್ಲರನ್ನೂ ಆತ ಸಂಬೋಧಿಸುವುದು ಹೊಲಸು ಭಾಷೆಯಿಂದ, ಏಕವಚನದಿಂದ, ತಿರಸ್ಕಾರದಿಂದ, ಆಕ್ಷೇಪಣೆಗಳಿಂದ.

ಅತ್ಯಂತ ಲಾಭದಾಯಕವಾದ ಮಾಧ್ಯಮವಾಗಿರುವುದರಿಂದಲೇ ಇಂದು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುವುದರ ಬಗೆಗೆ ದಿನನಿತ್ಯ ಕಾರ್ಯಕ್ರಮಗಳಿರುತ್ತವೆ. ಆದರೆ ಹಸಿವಿನ ಬಗೆಗೆ, ಅಪೌಷ್ಟಿಕತೆ ಬಗೆಗೆ ಚರ್ಚಿಸಲು ತಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ SLOT ದೊರೆಯುವುದಿಲ್ಲ! ಅಸ್ಪೃಶ್ಯರ ಮಾನವ ಹಕ್ಕುಗಳು ಪದೇ ಪದೇ ಹಲ್ಲೆಗೊಳಗಾದಾಗ ,ಅಲ್ಪಸಂಖ್ಯಾತರು ದಿನನಿತ್ಯದ ಅವಮಾನಗಳಿಗೆ ತುತ್ತಾಗುತ್ತಿದ್ದಾಗ, ಬಲಿಷ್ಟ ಜಾತಿಯ ಧನದಾಸೆಗೆ ದಲಿತನೊಬ್ಬನ ನರಬಲಿ ನಡೆದಾಗ, ಇದಕ್ಕೆ ಸಂಬಂಧಪಟ್ಟ ವರದಿಗಳಿಗೆ, ಚರ್ಚೆಗಳಿಗೆ ದಿನನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಥಾನವೇ ಇರುವುದಿಲ್ಲ. ಆದರೆ ಕ್ರೈಂ ಸ್ಟೋರಿಗಳು, ಭೀಭತ್ಸ ವರದಿಗಳು, ಜನ್ಮಾಂತರದ ಬೊಗಳೆಗಳು ಪ್ರತಿದಿನ ಪ್ರಸಾರಗೊಳ್ಳುತ್ತಿರುತ್ತವೆ. ಏಕೆಂದರೆ ಇದು ಪ್ಯಾಕೇಜ್ ನಿಯಮ. ಮುಕ್ತ ಮಾರುಕಟ್ಟೆ ಇದನ್ನು ರೂಪಿಸಿದೆ.

ಇಲ್ಲಿ ಗಂಭೀರ, ವಿಚಾರಶೀಲ, ವೈಚಾರಿಕ, ನೈತಿಕತೆಯ ಪತ್ರಿಕೋದ್ಯಮವೆನ್ನುವುದು ( ದೃಶ್ಯ ಮಾಧ್ಯಮ) ತೀರಿಕೊಂಡು ಗೋರಿ ಸೇರಿದೆ.

ಕೊಲಂಬಿಯಾ ದೇಶದ ಪ್ರಖ್ಯಾತ ಲೇಖಕ “ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್” ಸುಮಾರು 2004-05 ರಲ್ಲಿ ಸೆಮಿನಾರ್ ಒಂದರಲ್ಲಿ ಮಂಡಿಸಿದ ಪ್ರಬಂಧವನ್ನು ನಾವು ಮತ್ತೊಮ್ಮೆ ಓದಲೇಬೇಕು. ಪತ್ರಿಕೋದ್ಯಮದ ಬಗ್ಗೆ ಸ್ವತಃ ಪತ್ರಕರ್ತರಾಗಿದ್ದ ಮಾರ್ಕೆಜ್‌ನ ಚಿಂತನೆಗಳನ್ನು ಇಲ್ಲಿ ಸಂಗ್ರಹವಾಗಿ ಹಾಗು ಸಂಕ್ಷಿಪ್ತವಾಗಿ ಅನುವಾದಿಸಲಾಗಿದೆ.

“50 ವರ್ಷಗಳ ಹಿಂದೆ ಪತ್ರಿಕೋದ್ಯಮದ ಶಾಲೆಗಳು ವ್ಯಾವಹಾರಿಕವಾಗಿ ಆಕರ್ಷಕವಾಗಿರಲಿಲ್ಲ. ಪತ್ರಿಕೋದ್ಯಮದ ಕಸುಬನ್ನು ನಾವೆಲ್ಲಾ ಸುದ್ದಿಮನೆಗಳಲ್ಲಿ, ಮುದ್ರಣಾಲಯಗಳಲ್ಲಿ, ಟೀ ಅಂಗಡಿಗಳಲ್ಲಿ ಕಲಿಯುತ್ತಿದ್ದೆವು. ಇಲ್ಲಿ ನಮಗೆ ಸರಿಯಾದ ಮೂಲಭೂತ ತರಬೇತಿಯನ್ನು ನೀಡಲಾಗುತ್ತಿತ್ತು, ಇದು ಒಂದು ಸೌಹಾರ್ದಯುತ, ಜೀವಂತ, ಲವಲವಿಕೆಯ ವಾತಾವರಣದಲ್ಲಿ ನಡೆಯುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮವೆನ್ನುವುದನ್ನು ಸುದ್ದಿ, ಸಂಪಾದಕೀಯ, ವರ್ತಮಾನ ಹಾಗೂ ಭವಿಷ್ಯದ ವಿಶ್ಲೇಷಣೆಗಳು, ಈ ರೀತಿಯಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಈ ಮೂರೂ ವಿಭಾಗಗಳಲ್ಲಿ ಸಂಪಾದಕೀಯಕ್ಕೆ ಅತ್ಯಂತ ಘನತೆ ಮತ್ತು ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈ ಪತ್ರಿಕೋದ್ಯಮವನ್ನು ಪ್ರವೇಶಿಸಲು ಸಾಂಸ್ಕೃತಿಕ ಅರಿವು ಹಾಗೂ ಅದರ ಹಿನ್ನೆಲೆಗಳ ಬಗೆಗಿನ ತಿಳುವಳಿಕೆ ಅತ್ಯಂತ ಅವಶ್ಯಕವಾಗಿತ್ತು. ಇದನ್ನು ಅಲ್ಲಿನ ವಾತಾವರಣದಲ್ಲಿ ಕಲಿಸಿಕೊಡುತ್ತಿದ್ದರು. ನಿರಂತರ ಓದುವಿಕೆ ಕೂಡ ಪೂರಕ ಅಗತ್ಯವಾಗಿತ್ತು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಕಡೆಮಿಕ್‌ನ, ಚಿಂತನೆಗಳ ಪರಿಣಿತಿಯ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಪತ್ರಿಕೋದ್ಯಮದ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ಪತ್ರಿಕೋದ್ಯಮಕ್ಕೆ ಬೇಕಾಗುವ ಪೂರಕ ವಿಷಯಗಳನ್ನು ಹೇಳಿಕೊಡುತ್ತಾರೆ, ಆದರೆ ಪತ್ರಿಕೋದ್ಯಮದ ಬಗೆಗೆ ಹೇಳಿಕೊಡುವುದು ಬಹಳ ಕಡಿಮೆ. ಇಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಸಮಯವನ್ನು ಮೀಸಲಿಡವುದರ ಬದಲಾಗಿ ಮಹಾತ್ವಾಕಾಂಕ್ಷೆ ಹಾಗೂ ಜಡತೆಗೆ ಹೆಚ್ಚು ಒತ್ತು ಕೊಡುತ್ತಾರೆ.

“ಈ ಶಾಲೆಗಳಲ್ಲಿ ಸಂಶೋಧನೆಯನ್ನುವುದು ಹೆಚ್ಚುವರಿ ವಿಷಯವನ್ನಾಗಿ ಕಲಿಸದೆ ಪತ್ರಿಕೋದ್ಯಮದ ಒಂದು ಭಾಗವಾಗಿ ಕಲಿಸಬೇಕು. ಅತ್ಯಂತ ಮುಖ್ಯವಾದದ್ದು ಮೌಲ್ಯಗಳು ಹಾಗೂ ನೈತಿಕತೆ. ಅವು ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಹೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು. ಇದನ್ನು ನವ ಪೀಳಿಗೆಯ ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕು. ಆದರೆ ಇಂದು ಪತ್ರಿಕೋದ್ಯಮ ಶಾಲೆಗಳಲ್ಲಿ ಕಲಿತು ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಅತ್ಯಂತ ಅಸಹಜವಾದ ಅಪಾರ ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಇವರಿಗೆ ವಾಸ್ತವದ ಪರಿಚಯವಾಗಲಿ ಅಥವಾ ಅದರೊಂದಿಗಿನ ನಂಟಾಗಲಿ ಇರುವುದಿಲ್ಲ. ಸ್ವಹಿತಾಸಕ್ತಿಯನ್ನು,ತಮ್ಮ ಭವಿಷ್ಯದ ಆತಂಕಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಈ ಪದವೀಧರರು ತಾವು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ಕ್ರಿಯಾಶೀಲತೆ ಹಾಗೂ ಅನುಭವಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟಿರುತ್ತಾರೆ. ಇಂದಿನ ಉದಯೋನ್ಮುಖ ಪತ್ರಕರ್ತರು ಮಂತ್ರಿಗಳ, ಅಧಿಕಾರಿಗಳ ಸುಪರ್ದಿಯಲ್ಲಿರುವ ಗುಪ್ತ ದಾಖಲೆಗಳನ್ನು ಅಮೂಲಾಗ್ರವಾಗಿ ಓದುವುದರಲ್ಲಿ, ಸಂದರ್ಶನದ ವೇಳೆಯಲ್ಲಿ ಆತ್ಮೀಯತೆಯಿಂದ ಹೇಳಿದ ಮಾತುಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸದೆ ಅದನ್ನು ಮುದ್ರಿಸುವುದರಲ್ಲಿ ಅತ್ಯಂತ ಉತ್ಸುಕತೆ ತೋರುತ್ತಾರೆ ಹಾಗೂ ಆ ರೀತಿ ನಡೆದುಕೊಳ್ಳುವುದರ ಬಗೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. “ಆಫ಼್ ದಿ ರೆಕಾರ್ಡ್” ಎಂದು ಹೇಳಿದ್ದರೂ ಅದನ್ನು ಅತ್ಯಂತ ರೋಮಾಂಚಕ ಸುದ್ದಿಯನ್ನಾಗಿ ಪ್ರಚಾರ ಮಾಡುವುದರಲ್ಲಿ ಇವರಿಗೆ ಅಪಾರ ಆಸಕ್ತಿ. ಇಲ್ಲಿ ದುಖಕರ ಸಂಗತಿಯೆಂದರೆ ಈ ಎಲ್ಲಾ ತರಹದ ಅನೈತಿಕ ನಡಾವಳಿಗಳನ್ನು ಈ ಉದಯೋನ್ಮುಖ ಪತ್ರಕರ್ತರು ಅತ್ಯಂತ ಸಹಜವಾಗಿಯೇ ಸ್ವೀಕರಿಸುತ್ತಾರೆ ಹಾಗೂ ಇದನ್ನು ತಮ್ಮ ಪ್ರಜ್ಞೆಯೊಳಗೆ ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. ಅತ್ಯುತ್ತಮ ಸುದ್ದಿಯನ್ನು ಮೊದಲು ಪ್ರಕಟಿಸುವುದಕ್ಕಿಂತಲೂ ಮುಖ್ಯವಾದದ್ದು ಅದನ್ನು ಅಷ್ಟೇ ಉತ್ತಮವಾಗಿ ಮಂಡಿಸಬೇಕು ಎನ್ನುವುದನ್ನು ಮರೆಯುತ್ತಾರೆ. ವ್ಯವಸ್ಥೆಯಲ್ಲಿ ಅಡಕವಾಗಿರುವ ಘಟನೆಗಳನ್ನು, ಸುದ್ದಿಗಳನ್ನು, ತನಿಖಾ ವರದಿಗಳನ್ನು ಪ್ರಕಟಿಸುವಾಗ ಮೊದಲು ಜಾಗಕ್ಕೆ ತೆರಳಿ, ಅಮೂಲಗ್ರವಾಗಿ ಸಂಶೋಧಿಸಿ ನಂತರ ಈ ವರದಿಗಳನ್ನು ವ್ಯಾಕರಣದ ತಪ್ಪಿಲ್ಲದೆ ಬರೆಯುವುದಕ್ಕೆ ಅಪಾರವಾದ ಜ್ಞಾನ, ಸಂಯಮ, ವೇಳೆ, ಮತ್ತಷ್ಟು ಸಂಶೋಧನೆಯನ್ನು ಮಾಡುವ ಹುಮ್ಮಸ್ಸು, ಬರೆಯುವ ಕಸಬುದಾರಿಕೆ, ಎಲ್ಲವೂ ಒಂದೇ ಕಡೆ ಅಡಕಗೊಂಡಿರಬೇಕು. ವರದಿಯೆನ್ನುವುದು ನಡೆದ ಒಂದು ಘಟನೆಯನ್ನು ಅತ್ಯಂತ ಕೂಲಂಕುಷವಾಗಿ, ಪಕ್ಷಪಾತವಿಲ್ಲದೆ, ಆದಷ್ಟು ಸತ್ಯಕ್ಕೆ ಹತ್ತಿರವಾಗಿ ಪುನರ್‌ನಿರ್ಮಾಣ ಮಾಡುವ ಕಲೆ ಎನ್ನುವುದನ್ನು ಇವರು ಮರೆಯುತ್ತಾರೆ.

“ಈ ಟೇಪ್ ರಿಕಾರ್ಡರ್ ಬರುವುದಕ್ಕಿಂತ ಮೊದಲು ಪತ್ರಿಕೋದ್ಯಮದಲ್ಲಿ ನಾವು ಬಳಸುತ್ತಿದ್ದ ಪರಿಕರಗಳೆಂದರೆ ಒಂದು ನೋಟ್ ಬುಕ್, ಪಕ್ಷಪಾತವಿಲ್ಲದ ನಮ್ಮ ಜೋಡಿ ಕಿವಿಗಳು, ಹಾಗು ಹೊಂದಾಣಿಕೆ ಮಾಡಿಕೊಳ್ಳದ ನಮ್ಮ ಪ್ರಾಮಾಣಿಕತೆ. ಕ್ಯಾಸೆಟ್ ಎನ್ನುವುದು ಎಂದಿಗೂ ವ್ಯಕ್ತಿಯೊಬ್ಬನ ನೆನಪಿನ ಶಕ್ತಿಯ ಬದಲೀ ಸಾಧನವಲ್ಲ. ಅದೊಂದು ಉಪಕರಣ ಅಷ್ಟೇ. ಈ ರೆಕಾರ್ಡರ್ ಎನ್ನುವುದು ಕೇಳಿಸಿಕೊಳ್ಳುತ್ತದೆ ಆದರೆ ಮನನ ಮಾಡಿಕೊಳ್ಳುವುದಿಲ್ಲ ಎನ್ನುವ ಸತ್ಯವನ್ನು ನಮ್ಮ ಇಂದಿನ ತಲೆಮಾರಿನ ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಪತ್ರಕರ್ತರು ರೆಕಾರ್ಡರ್ ಅನ್ನು ಕೇವಲ ಸಾಕ್ಷಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕಡೆಗೂ ಉಪಯೋಗಿಸಬೇಕಾಗಿರುವುದು ನ್ಯಾಯದ ಪಕ್ಷಪಾತವಿರುವಂತಹ ಮನಸ್ಸಿನ ತರಬೇತಿಯನ್ನು ಮಾತ್ರ. ಅದರೆ ಇಲ್ಲಿ ಪತ್ರಿಕೋದ್ಯಮದ ತರಬೇತಿ ವಿಷಯಗಳನ್ನು ಕಾಲಕಾಲಕ್ಕೆ ತಕ್ಕ ಹಾಗೆ ಅಂದಿನ ಪ್ರಸ್ತುತತೆಗೆ ಅನುವಾಗುವಂತೆ ಸೂಕ್ತ ಬದಲಾವಣೆಗಳಿಗೆ ಒಳಪಡಿಸುತ್ತಾ, ಇದನ್ನು ಕಲಿಸುವುದಕ್ಕಾಗಿ ಸದಾಕಾಲ ಹೊಸ ಹೊಸ ಪರಿಕರಗಳನ್ನು ಹುಡುಕಿಕೊಳ್ಳಬೇಕು. ಆದರೆ ನಾವು ಹಳೇ ಕಾಲದ ಕೇಳುವ ಹಾಗೂ ಕಲಿಯುವ ಪದ್ಧತಿಯನ್ನು ನವೀಕರಿಸುತ್ತಿದ್ದೇವೆ. ಇದರಿಂದ ಏನೂ ಉಪಯೋಗವಾಗುವುದಿಲ್ಲ.

ಸತ್ಯದೊಂದಿಗೆ ಸದಾ ಮುಖಾಮುಖಿಯಾಗುತ್ತಲೇ ಮಾನವೀಯತೆಯನ್ನು ಈ ಪತ್ರಿಕೋದ್ಯಮವೆನ್ನುವ ಅನುಶಕ್ತಿಯೊಂದಿಗೆ ಮಿಳಿತಗೊಳಿಸಬೇಕಾಗುತ್ತದೆ. ಯಾವನು ಇದನ್ನು ತನ್ನ ವ್ಯಕ್ತಿತ್ವದೊಳಗೆ ರಕ್ತಗತ ಮಾಡಿಕೊಂಡಿರುವುದಿಲ್ಲವೋ ಅವನು ಇದರ ಮಾಂತ್ರಿಕತೆಯನ್ನೂ ಕೂಡ ಗ್ರಹಿಸಲಾರ. ಇದರ ಅನುಭವದ ತೆಕ್ಕೆಗೆ ಒಳಪಡದವನು ಕೇವಲ ರೋಮಾಂಚಕ ವರದಿಗಳಿಗೆ, ಈ ವರದಿಗಳು ತಂದುಕೊಡುವ ಹುಸಿ ರೋಚಕತೆಗೆ ಬಲಿಯಾಗುತ್ತಾನೆ. ಆ ಮೂಲಕ ತನಗರಿವಿಲ್ಲದೆಯೇ ಅನೈತಿಕತೆಯ ಆಳಕ್ಕೆ ಕುಸಿದಿರುತ್ತಾನೆ.”

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – ಕೊನೆ ಕಂತು


– ಎನ್.ಎಸ್. ಶಂಕರ್


 

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6

 

2002ರ ನಾಗಲಾಪಲ್ಲಿ ದುರಂತದ ವೇಳೆಗೆ ದಲಿತ ಸಂಘದೊಳಗಿನ ಎಡಗೈ- ಬಲಗೈ ಒಡಕು ಮುಗಿದು, ಬಲಗೈ ಸಮುದಾಯದ ಒಳಗೇ ವಿಭಜನೆಯ ಸೊಲ್ಲು ಏಳತೊಡಗಿತ್ತು. ಉತ್ತರವಾಗಿ, ಮೊಟ್ಟ ಮೊದಲ ಒಡಕಿನ ಸಂದರ್ಭದಲ್ಲೇ ಕ್ಷೀಣವಾಗಿ ಆರಂಭವಾಗಿದ್ದ ‘ದಲಿತ ಸಂಘಟನೆ ವಿಸರ್ಜನೆ’ಯ ಸೊಲ್ಲು ಈಗ ಗಟ್ಟಿಯಾಗತೊಡಗಿತು. (86- 87ರಲ್ಲೇ ರಾಮಯ್ಯ, ‘ದಲಿತ ಚಳವಳಿಯ ಹೆಣದ ಮೆರವಣಿಗೆ ಮಾಡಬೇಕಾ?’ ಎಂಬ ಪ್ರಶ್ನೆಯೆತ್ತಿದ್ದರು.) ಇದೀಗ ಕೋಲಾರದ ಒಂದು ಸಭೆಯಲ್ಲಿ ರಾಮಯ್ಯ, ಗೋವಿಂದಯ್ಯ ಇಬ್ಬರೂ ‘ದಲಿತ ಚಳವಳಿ ಸತ್ತಿದೆ. ಇನ್ನು ಅದನ್ನು ವಿಧ್ಯುಕ್ತವಾಗಿ ದಫನ್ ಮಾಡುವುದೊಂದೇ ಮಾರ್ಗ. ಈಗ ಸಂಘರ್ಷ ಸಮಿತಿಯನ್ನು ವಿಸರ್ಜಿಸಿ  ಒಂದು ವರ್ಷ ಪೂರ್ತಿ ರಾಜ್ಯಾದ್ಯಂತ ಓಡಾಡೋಣ; ಮರು ಸಂಘಟನೆ ಮಾಡೋಣ. ಅದೊಂದೇ ದಾರಿ’ ಎಂಬ ಚಿಂತನೆ ಮುಂದಿಟ್ಟರು.

ನಾಗಲಾಪಲ್ಲಿ ಪ್ರತಿಭಟನೆ ಸಮಯದಲ್ಲಿ ಒಗ್ಗೂಡಿದ ಎಲ್ಲ ಮುಂದಾಳುಗಳು ಮತ್ತೆ ಇದೇ ಚರ್ಚೆಯನ್ನು ಕೈಗೆತ್ತಿಕೊಂಡರು. ಆಗ ಡಿ.ಜಿ. ಸಾಗರ್ ದಸಂಸ ರಾಜ್ಯ ಸಂಚಾಲಕರು. ಈ ವಿಸರ್ಜನೆಯ ಪ್ರಸ್ತಾಪವನ್ನು ಸಮಿತಿ ಪದಾಧಿಕಾರಿಗಳ ಮುಂದಿಟ್ಟು ‘ಬೇಡಿಕೊಂಡಾದರೂ ಒಪ್ಪಿಸೋಣ’ ಎಂಬ ಸೂಚನೆ- ಮುಖ್ಯವಾಗಿ ಗೋವಿಂದಯ್ಯನವರಿಂದ- ಬಂತು. ಕೆಲವೇ ದಿನಗಳಲ್ಲಿ ಈ ಚಿಂತನೆಗೆ ಅಂತಿಮ ರೂಪ ಕೊಡಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂದಿನ ‘ಸಂಸ’ ಬಯಲು ರಂಗಮಂದಿರದ ಕಟ್ಟೆಯ ಮೇಲೆ ದಲಿತ ಮುಂದಾಳುಗಳು ಸಭೆ ಸೇರಿದರು. ಅಲ್ಲಿ ಚರ್ಚೆ ಆರಂಭವಾದಾಗ ಆ ವೇಳೆಗಿನ್ನೂ ದೇವನೂರ ಮಹಾದೇವ ಸಭೆಗೆ ಬಂದಿರಲಿಲ್ಲ. ಮಾತಾಡುತ್ತ ಆಡುತ್ತ ಬಹುತೇಕ ಎಲ್ಲರೂ ಆ ಚಿಂತನೆಗೆ ಸಹಮತ ವ್ಯಕ್ತಪಡಿಸಿದರು. ಆದರೆ ಮಹಾದೇವ ಬರಬರುತ್ತಿದ್ದಂತೆಯೇ ‘ಈಗ ದಲಿತರಿಗೆ ಇದೊಂದು ದನಿಯಾದರೂ ಇದೆ. ಇದೂ ಇಲ್ಲವಾದರೆ ದಲಿತರು ತಬ್ಬಲಿಗಳಾಗಬಹುದು, ಬೇಡ ಬೇಡ’ ಎನ್ನುತ್ತ ವಿಸರ್ಜನೆಯ ಸೂಚನೆಯನ್ನು ತಳ್ಳಿಹಾಕಿ ಎಲ್ಲರನ್ನೂ ಎಬ್ಬಿಸಿಯೇಬಿಟ್ಟರು…

(‘ಹಾಗೇಕೆ ಮಾಡಿದಿರಿ?’ ಎಂದು ಈಗ ಕೇಳಿದ್ದಕ್ಕೆ ದೇವನೂರು ನೀಡಿದ ಸ್ಪಷ್ಟನೆ: ‘ನಾನು ಆ ಸಮಯದಲ್ಲಿ ದಸಂಸ ಪದಾಧಿಕಾರಿಯೂ ಅಲ್ಲ, ಏನೂ ಅಲ್ಲ. ಕೇವಲ ಹಿತೈಷಿ ಅಷ್ಟೇ. ಆದರೆ ನಾನೊಬ್ಬ ತೀರ್ಮಾನಿಸಿದರೆ ಸಂಘಟನೆಯನ್ನು ಸುಲಭವಾಗಿ ವಿಸರ್ಜಿಸಬಹುದು ಅಂತ ಮಿಕ್ಕವರು ತಿಳಿದುಕೊಂಡಿದ್ದರು. ಹಾಗಲ್ಲ. ಎಲ್ಲರೂ ಒಪ್ಪಿದರೆ ವಿಸರ್ಜನೆಯೇ ಒಳ್ಳೆಯದು ಎಂದು ನಾನೂ ಪ್ರಯತ್ನ ಮಾಡಿ ಸುಸ್ತಾಗಿದ್ದೆ. ಮೊದಲ ಒಡಕಿನ ಸಮಯದಲ್ಲೇ ನಾನು, ಸಿದ್ದಲಿಂಗಯ್ಯ ವಿಭಜನೆ ತಪ್ಪಿಸಲು ಕೈ ಕಾಲು ಹಿಡಿದು ಗೋಗರೆದರೂ ಯಾರೂ ನಮ್ಮ ಮಾತು ಕೇಳಿರಲಿಲ್ಲ. ಈಗ ನಾವು ಹಟ ಹಿಡಿದರೆ ಅದು ನಮ್ಮ ಅಹಂಕಾರವಾಗುತ್ತದೆ. ಹೆಚ್ಚೆಂದರೆ ನಮ್ಮದೇ ಒಂದು ‘ದಲಿತ ಸಂಘರ್ಷ ವಿಸರ್ಜನಾ ಸಮಿತಿ’ ಅಂತ ಸೃಷ್ಟಿಯಾಗಬಹುದಿತ್ತು..’) ಅಂತೂ ಸಂಘಟನೆಯನ್ನು ಮುರಿದು ಮತ್ತೆ ಕಟ್ಟುವ ನೈತಿಕ ತ್ರಾಣ ಯಾರಲ್ಲೂ ಉಳಿದಿರಲಿಲ್ಲ ಎಂಬುದು ಸ್ಪಷ್ಟವಾಯಿತು.

ಇದಾದ ಮೇಲೂ ಅದೇ ಚಿಂತನೆಯಿಂದ ಸ್ಫೂರ್ತಿ ಪಡೆದಂತೆ, ಮಹಾದೇವ ಮತ್ತು ಸಿದ್ದಲಿಂಗಯ್ಯ ಇಬ್ಬರೂ ಸೇರಿ ರಾಜ್ಯಾದ್ಯಂತ ಒಂದು ವರ್ಷ ಕಾಲ ಪ್ರವಾಸ ಮಾಡಿ ಎಲ್ಲರನ್ನೂ ಮಾತಾಡಿಸುತ್ತ, ಗಾಯಗಳನ್ನು ವಾಸಿ ಮಾಡುತ್ತ ಸಂಘಟನೆಯನ್ನು ಹೊಸದಾಗಿ ಕಟ್ಟುವ ಪ್ರಯತ್ನ ಮಾಡುವುದಾಗಿ ಒಂದು ಹೇಳಿಕೆ ನೀಡಿದರು (2004). ಅದಾಗಿ ಹದಿನೈದೇ ದಿನಕ್ಕೆ ಬಲಗೈ ಗುಂಪಿನಲ್ಲೇ ದೊಡ್ಡ ಒಡಕು ಸಂಭವಿಸಿ ಸಾಗರ್- ಲಕ್ಷ್ಮೀನಾರಾಯಣ ನಾಗವಾರ ಬಣಗಳು ಉದ್ಭವಿಸಿದವು. ಅಷ್ಟೇ ಅಲ್ಲ, ಮರುಸಂಘಟನೆಯ ಹೇಳಿಕೆಗೆ ಸಹಿ ಹಾಕಿದ್ದ ಸಿದ್ದಲಿಂಗಯ್ಯ, ನಾಗವಾರ ನೇತೃತ್ವದ ಸಮಾವೇಶದಲ್ಲಿ ಹಾಜರಾಗಿ ಒಂದು ಬಣದೊಂದಿಗೆ ಅಳುಕಿಲ್ಲದೆ ಗುರುತಿಸಿಕೊಂಡೂ ಬಿಟ್ಟರು! ಅತ್ತ ಒಂದೇ ವರ್ಷದಲ್ಲಿ ದೇವನೂರು ‘ಸರ್ವೋದಯ’ದಲ್ಲಿ ಮುಳುಗಿಹೋದರು…!

ಅಲ್ಲಿಂದಾಚೆಗೆ ದಲಿತ ಸಂಘಟನೆ ‘ಎತ್ತಿ ಬಿಸಾಡಿದ ಗಾಜಿನಂತೆ’ ಚುಪ್ಪಾನ ಚೂರಾಗುತ್ತ ಛಿದ್ರಛಿದ್ರವಾಯಿತು. ಲೆಟರ್‌ಹೆಡ್ ಸಂಸ್ಥೆಗಳು ಅಣಬೆಯಂತೆ ತಲೆಯೆತ್ತಿದವು. ಸಂಘಟನೆಯ ಕಿರಿಯ ಗೆಳೆಯರೊಬ್ಬರು ಹೇಳಿದಂತೆ- ಇಂದು ಅಂಥ 360 ಲೆಟರ್‌ಹೆಡ್ ಸಂಸ್ಥೆಗಳು ಅಸ್ತಿತ್ವದಲ್ಲಿವೆ…!

ರೈತಸಂಘದ ಒಡಲಲ್ಲೂ ಇಂಥದೇ ಒಡಕಿನ ಪುರಾಣವಿರಬಹುದೆಂಬ ಸೂಚನೆ ಕಡಿದಾಳು ಶಾಮಣ್ಣನವರ ಪುಸ್ತಕದಲ್ಲಿ ಸಿಕ್ಕುತ್ತದೆ.

ಇಂದು ದಲಿತ ಹೋರಾಟದ ಮೂರು ಮಾದರಿಗಳು ನಮ್ಮ ಕಣ್ಣ ಮುಂದಿವೆ. ಒಂದು: ಇದೇ ಲೆಟರ್‌ಹೆಡ್ ಸಂಸ್ಥೆಗಳ ‘ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರೋಲ್ಕಾಲ್’ನ ಮಾದರಿ. ಎರಡನೆಯದು- ಎಷ್ಟೇ ಕ್ಷೀಣ ಪ್ರಯತ್ನದಂತಿದ್ದರೂ, ಚಳವಳಿಯ ಮುಂದುವರಿಕೆಯಂತೆಯೇ ಕಾಣುವ- ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ದ ಸಾಂಸ್ಕೃತಿಕ ಮರುಎಚ್ಚರದ ಪ್ರಯೋಗ. ಮೂರನೆಯದು ರೈತಸಂಘದ ಪುಟ್ಟಣ್ಣಯ್ಯನವರನ್ನು ಒಳಗೊಂಡ ದೇವನೂರರ ಚುನಾವಣಾಕೇಂದ್ರಿತ ರಾಜಕೀಯದ ಮಾದರಿ. (ಕರ್ನಾಟಕದಲ್ಲಿ ಬಿಎಸ್ಪಿ ಪ್ರಯತ್ನಗಳೂ ಮೊದಲ ಹಾಗೂ ಮೂರನೇ ಮಾದರಿಗಳಲ್ಲಿ ಹಂಚಿಹೋದದ್ದನ್ನು ಕಾಣಬಹುದು.)

ಆಗ ಆ ಚಳವಳಿಗಳು ನನ್ನ ಪೀಳಿಗೆಯಲ್ಲಿ ಸಮಾನತೆಯ, ಸಮಾಜ ಪರಿವರ್ತನೆಯ ಮಹಾ ಕನಸು ಬಿತ್ತಿದ್ದವು. ಒಂದು ಇಡೀ ತಲೆಮಾರಿನ ಜನರಲ್ಲಿ, ಸ್ವಂತದ್ದನ್ನು ಮೀರಿದ ಸ್ಪಂದನ ಹುಟ್ಟಲು ಕಾರಣವಾಗಿದ್ದವು. ಅಷ್ಟಕ್ಕಾದರೂ ಅವು ಇಂದಿಗೂ ಜೀವಂತವಾಗಿ ಉಳಿದು ಬರಬೇಕಿತ್ತು ಎಂದು ಆಸೆಪಟ್ಟರೆ ನನ್ನ ನಿಟ್ಟುಸಿರನ್ನು ಯಾರೂ ಅಪಹಾಸ್ಯ ಮಾಡಲಾರರು ಅಂದುಕೊಂಡಿರುವೆ. ಆದರೆ ಚಳವಳಿಗಳ ದೋಣಿಯಲ್ಲಿ ಒಡಕು ಮೂಡಿದ ಕೂಡಲೇ ದೋಣಿ ಮುಳುಗುವುದು ನಿಶ್ಚಯವಾಯಿತು. ಒಡಕನ್ನು ಜೀರ್ಣಿಸಿಕೊಳ್ಳುವ ಆತ್ಮಬಲ ಯಾವ ಚಳವಳಿಗೂ ಇರುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಯಾಕೆಂದರೆ ಎಲ್ಲ ಒಡಕಿನ ಮೂಲ- ಸ್ವಾರ್ಥ ಮಾತ್ರ. ಪ್ರೊಫೆಸರರು ಸ್ವತಃ ಎಷ್ಟು ದೈತ್ಯಬಲದವರಾದರೂ, ಅಂತಾರಾಷ್ಟ್ರೀಯ ರೈತ ನಾಯಕರಾಗಿ ಬೆಳೆದರೂ, ರೈತಸಂಘದ ಒಡಕಿನ ನಂತರ (80ರ ದಶಕದ ಉತ್ತರಾರ್ಧ ಮತ್ತು 90ರ ದಶಕಗಳಲ್ಲಿ) ಏನು ಹೋರಾಟ ಮಾಡಿದರೂ ಅದು ನರಪೇತಲನ ಕುಸ್ತಿಯಂತೆ ಕಂಡಿದ್ದು ಅವರ ತಪ್ಪೇನಲ್ಲ.

ಚಳವಳಿಗಳು ಇಂದು ನೆಲೆ ಕಳೆದುಕೊಂಡಿದ್ದರೆ ಅದರ ಹಿಂದಿರುವ- ಅನಿವಾರ್ಯವೂ ಅಗೋಚರವೂ ಆದ ಚಾರಿತ್ರಿಕ ಒತ್ತಾಯವನ್ನೂ ಮರೆಯುವಂತಿಲ್ಲ. ಯಾವ ಸಮಾಜವೂ ತನ್ನ ದಿಕ್ಕು ಮತ್ತು ಜಾಯಮಾನಕ್ಕೆ ಎದುರಾಗುವ ಸವಾಲುಗಳನ್ನು ತಾಳಿಕೊಳ್ಳುವುದು ಸಂಕ್ರಮಣ ಕಾಲದಲ್ಲಿ ಮಾತ್ರ. ಆ ಕಾಲ ಜಾರಿದಂತೆ, ಇಡೀ ಸಮಾಜವೇ ಸಹಸ್ರ ಸಹಸ್ರ ಸ್ಥೂಲ ಸೂಕ್ಷ್ಮ ವಿಧಾನಗಳಲ್ಲಿ ತಿರುಗೇಟು ಕೊಡುವ ಮೂಲಕ ತನ್ನ ಮೂಲ ‘ಸಹಜ’ ರೂಪಕ್ಕೆ ಮರಳಲು ಹವಣಿಸುತ್ತದೆ. 90ರ ದಶಕದ ಜಾಗತೀಕರಣದ ನಂತರ ನಾವೀಗ ಕೈ ಚೆಲ್ಲಿ ವೀಕ್ಷಿಸುತ್ತಿರುವುದು ಈ ಛಚಿಛಿಞಟಚಿ- ತಿರುಗೇಟನ್ನೇ. 70-80ರ ದಶಕಗಳ ಕಲಮಲಕ್ಕೆ ಈಗಿನ ಎರಡು ದಶಕಗಳು ನೀಡುತ್ತಿರುವ ಮಾರುತ್ತರವಿದು. ರೈತಸಂಘ, ಫ್ಯೂಡಲ್ ಜಾತಿಗಳ ಒಕ್ಕೂಟವಾಗಿ ಹುಟ್ಟಿ ಅದನ್ನು ಮೀರಲು ಹೆಣಗಿ ಸೋತದ್ದಾಗಲೀ; ಅಥವಾ ಜಾತ್ಯತೀತ ಆಶಯವಾಗಿ ಹುಟ್ಟಿದರೂ ಹೊರಳಿ ಬಂದು ಜಾತಿಯಲ್ಲೇ ಹೂತುಹೋದ ದಲಿತ ಸಂಘವಾಗಲೀ- ಇವೆರಡರ ಹಿಂದೆಯೂ ಕಾಣುವುದು ಈ ಚಾರಿತ್ರಿಕ ಒತ್ತಾಯದ ಚಿಹ್ನೆಗಳೇ ತಾನೇ?

ಇಂದು ಆ ಅಳಿದುಳಿದ ಚಳವಳಿಗಳು- ಒಂದು ಕಡೆ ರೈತರ ಸರಣಿ ಆತ್ಮಹತ್ಯೆ, ಇನ್ನೊಂದು ಕಡೆ ದಲಿತರ ಜಲಿಯನ್ವಾಲಾಬಾಗ್ ಎನಿಸಿದ ಕಂಬಾಲಪಲ್ಲಿ ಮಾರಣಹೋಮದಂಥ- ವಿರಾಟ್ ದುರಂತಗಳೆದುರು ನಿಸ್ಸಹಾಯಕವಾದ ಸ್ಥಿತಿಯಲ್ಲಿವೆ. ಅಂದರೆ ಚಳವಳಿಗಳ ಪ್ರಾಣಶಕ್ತಿ ಇಂಗಿಹೋಗಿದೆ. ‘ಸರ್ವೋದಯ’ದ ಸ್ವರೂಪದಲ್ಲಿ ಉಳಿದಿರುವುದು ಅದರ ಸಿಪ್ಪೆಹೊಟ್ಟು ಮಾತ್ರ . ಆ ದಿನಗಳಲ್ಲಿ ‘ಕಣ್ಣೆದುರೇ ಕಳೆದುಹೋದ ಸಮಾಜವಾದಿ ಚಳವಳಿಯನ್ನು’ ನೆನೆಸಿಕೊಂಡು ದೇವನೂರ ಮಹಾದೇವ ‘ನಾನು ಅತ್ತೆ’ ಎಂದು ಬರೆದಿದ್ದರು.

ವಿಷಾದವೆಂದರೆ, ಈಗ ನಮ್ಮ ‘ಕಣ್ಣೆದುರೇ ಕಳೆದುಹೋದ ಚಳವಳಿಗಳನ್ನು’ ನೆನೆದು ಅಳುವವರೂ ಉಳಿದಿಲ್ಲ…

(ಮುಗಿಯಿತು)

ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ನಾಡು


– ಪರಶುರಾಮ ಕಲಾಲ್


 

ಅದೊಂದು ಪವಿತ್ರ ಸ್ಥಳ. ರಾಜ್ಯದ ನೀತಿ, ನಿಯಮಗಳನ್ನು ರೂಪಿಸುವ ಪ್ರಜಾಪ್ರಭುತ್ವದ ಅಧುನಿಕ ದೇವಾಲಯ. ಅಲ್ಲಿಗೆ ಶಾಸಕರಾಗಿ ತೆರಳುವವರು ಮೊದಲ ವಿಧಾನ ಸಭಾಂಗಣ ಪ್ರವೇಶಿಸುವಾಗ ಬಾಗಿಲಿಗೆ ಕೈ ಮುಗಿದು ಹೋಗುತ್ತಾರೆ. ಅವರ ಕಣ್ಣು ಮುಂದೆ ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸು ಮುಂತಾದ ಮಹನೀಯರು ನೆನಪಾಗುತ್ತಾರೆ ಕಣ್ಣು ಮಂಜಾಗುತ್ತದೆ.

ಈಗ ಕಣ್ಣು ಮಂಜಾಗುವ ಸಮಯ ನಮ್ಮದು. ಒಳಗೆ ಕುಳಿತವರು ಕಣ್ಣು ನೀಲಿಯಾಗಿ ಬಿಟ್ಟಿದೆ.

ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ಮಹಾರಾಜ ಸಂಕಷ್ಟಕ್ಕೆ ಸಿಗುವ ಆಪಾಯ ಕಂಡು ಕೊಂಡ ಲಿಯರ್‌ನ ಆತ್ಮಸಾಕ್ಷಿಯಂತಿರುವ ಕೆಂಟ್ ಏನನ್ನೂ ಮಾಡಲಾಗದ ಸ್ಥಿತಿ ಮುಟ್ಟಿದಾಗ ಒಂದು ಮಾತು ಹೇಳುತ್ತಾನೆ. “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ.” ನಮ್ಮ ಸ್ಥಿತಿಯು ಹಾಗೇ ಆಗಿದೆ. ಮಾದರಿಗಳೇ ಇಲ್ಲ ಈಗ. ಯಾರನ್ನು ಮಾದರಿ ಎನ್ನುತ್ತೇವೆಯೋ ಅವರು ಮಾಯವಾಗುತ್ತಾರೆ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್‌ಗಳ ಕಾಲ ಅಲ್ಲವೇ ಇದು. ಶೂನ್ಯ ಅವರಿಸಿದಾಗ ಇವರೇ ನಾಯಕರಾಗಿ ಮಕ್ಕಳ ಮುಂದೆ ಕಾಣಿಸುತ್ತಾರೆ. ಎಲ್ಲವೂ ರೋಬ್‌ಮಯ.

*

ಅಲ್ಲಿ ಕಕ್ಕ ಮಾಡಬಾರದು ಅದು ಪವಿತ್ರ ಸ್ಥಳ ಎಂದಿರುತ್ತದೆ. ಅಲ್ಲಿ ಕಕ್ಕ ಮಾಡುತ್ತಾರೆ. ಅದು ಕಕ್ಕವೇ ಅಲ್ಲ ಎಂದು ವಾದಿಸುತ್ತಾರೆ. ಕಕ್ಕ ಹೌದು ಅಲ್ಲವೋ ಎಂದು ಪರೀಕ್ಷೆ ನಡೆಸಲು ಫೊರೆನಿಕ್ಸ್ ಲ್ಯಾಬ್‌ಗೆ ಕಳಿಸಿಕೊಡುತ್ತಾರೆ. ವಾಸನೆ ನೋಡಿದ ಯಾರೇ ಆದರೂ ಅದು ಕಕ್ಕ ಎಂದೇ ಹೇಳುತ್ತಾರೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಲ್ಲ ಎಂದು ಮೂಗು ಮುಚ್ಚಿಕೊಂಡೆ ಹೇಳುತ್ತಾರಲ್ಲ ಏನನ್ನಬೇಕು ಇವರಿಗೆ. ನಾನು ಇವರಿಗೆ ಹೇಳುವುದು ಇಷ್ಟೇ, “ಸ್ವಲ್ಪ ತಿಂದು ನೋಡಿ ಬಿಡಿ, ಸ್ವಾಮಿ.”

*

ನಮ್ಮ ಸಂವಿಧಾನದಲ್ಲಿ ಶಾಸಕಾಂಗ ದೊಡ್ಡದು. ಶಾಸಕರಾಗಿ ಆಯ್ಕೆಯಾಗುವ ಜನ ಪ್ರತಿನಿಧಿಗಳು ಆಯಾ ಪಕ್ಷದ ಬಲಾಬಲಗಳ ಮೇಲೆ ಶಾಸಕಾಂಗದ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡುತ್ತದೆ. ಆಡಳಿತ ಪಕ್ಷಕ್ಕೆ ಸೇರಿದವರಾದರೆ ಆತ ಮುಖ್ಯಮಂತ್ರಿಯಾಗುತ್ತಾನೆ. ರಾಜ್ಯದ ಬೇರೆ ಬೇರೆ ಕ್ಷೇತ್ರಗಳ ಕುರಿತಂತೆ ಆಡಳಿತ ನಡೆಸಲು ತನ್ನ ವಿವೇಚನೆಯಂತೆ ಸಚಿವರನ್ನು ಆಯ್ಕೆ ಮಾಡುತ್ತಾನೆ. ಇಲ್ಲಿ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಎಲ್ಲರೂ ಮೂಲಭೂತವಾಗಿ ಶಾಸಕರೇ, ಶಾಸನ ಸಭೆಯ ಸದಸ್ಯರುಗಳೇ. ಶಾಸಕರಾದವರು ಹೆಚ್ಚುವರಿ ಕೆಲಸವಾಗಿ ಮುಖ್ಯಮಂತ್ರಿ, ಮಂತ್ರಿಯಾಗುತ್ತಾರೆ. ಶಾಸನ ಸಭೆಯಲ್ಲಿ ಅಗೌರವ ಸೂಚಿಸುವವರು ಯಾರೇ ಆಗಲಿ, ಅವರನ್ನು ಸದನದಿಂದ ಹೊರ ಹಾಕುವ, ಅಮಾನತ್ತು ಮಾಡುವ ಅಧಿಕಾರವನ್ನು ಸಭಾಪತಿ ಪಡೆದಿರುತ್ತಾರೆ. ಅವರು ಪಕ್ಷಾತೀತವಾಗಿ, ಸಂವಿಧಾನದ ಮೂಲ ಉದ್ದೇಶವನ್ನು ಕಾಪಾಡಲು ಪ್ರಮಾಣವಚನ ಪಡೆದುಕೊಂಡು ಎತ್ತರದ ಸ್ಥಾನ ಅಲಂಕರಿಸಿದವರು. ಶಾಸನ ಸಭೆಯಲ್ಲಿ ಯಾರೇ ಅಸಭ್ಯವಾಗಿ ವರ್ತಿಸಿದರೂ ಅವರ ಮೇಲೆ ಕ್ರಮ ಕೈಗೊಳ್ಳಲೇಬೇಕು. ಇಲ್ಲಿ ಪಕ್ಷದ ಹಿತಾಸಕ್ತಿ ನೋಡುವಂತಿಲ್ಲ.

ಸಚಿವರಾದವರು ಅಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಹೆಚ್ಚುವರಿ ಕೆಲಸಗಳನ್ನು ಮಾಡುವುದನ್ನು ಕೈ ಬಿಟ್ಟಂತೆ ಆಗುತ್ತದೆ ಹೊರತು ಅದು ನೈತಿಕತೆ ಆಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಸಚಿವ ಸ್ಥಾನಕ್ಕೆ ಕೊಟ್ಟಿದ್ದಾರಲ್ಲ ಎಂದು ವಾದಿಸುವುದು ಅನೈತಿಕವಾಗುತ್ತದೆ.

*

ಲಜ್ಜೆ, ನಾಚಿಕೆ ಕಳೆದುಕೊಂಡು ವಾದಿಸಲು ಆರಂಭಿಸಿದರೆ ಅಂತಹ ಲಜ್ಜೆಗೆಟ್ಟ, ನಾಚಿಕೆ ಕಳೆದುಕೊಂಡ ಸಮಾಜದಲ್ಲಿ ಜೀವಿಸುತ್ತಿರುವ ಬಗ್ಗೆ ವಾಕರಿಕೆ ಬರುತ್ತದೆ. ನಾನು ಮೊದಲೇ ಹೇಳಿದಂತೆ ಕೆಂಟ್ ಹೇಳುವ “ತಲೆಕೆಟ್ಟವರಿಗೆ, ತಿರುಬೋಕಿಗಳಿಗೆ ಮಾದರಿಯಾಗಿರುವ ಈ ನಾಡೇ ಇನ್ನೂ ನಮಗೆ ಮಾದರಿ,” ಮಾತು ನೆನಪಾಗುತ್ತದೆ.