Daily Archives: March 3, 2012

ಗಾಂಧಿ ವಿವರಿಸುವ ವಕೀಲರೂ, ಗೂಂಡಾ ಪ್ರವೃತ್ತಿಯೂ

-ಅಮಾಸ

 ನ್ಯಾಯಕ್ಕೆ ಮೊರೆ ಹೋಗುವ ಬಡಬಗ್ಗರ ಕಣ್ಣಲ್ಲಿ ‘ನ್ಯಾಯ ದೇವರ’ ಹಾಗೆ ಕಾಣಿಸುವ ವಕೀಲರು, ಕಕ್ಷಿಗಾರರ ಕಣ್ಣಲ್ಲಿ ನೀರಿನ ಬದಲಾಗಿ ರಕ್ತವನ್ನು ಹರಿಸುವಂಥ ನಿಷ್ಕರುಣಿಗಳೂ ಆಗಿರುತ್ತಾರೆ. ಅಂಥವರ ಅರಾಜಕತೆಗೆ ಮಾನವೀಯ ಮುಖಗಳೇ ಇರುವುದಿಲ್ಲ. ಭಾರಿ ದಪ್ಪದ ಪುಸ್ತಕ ತೋರಿಸಿ ಅದರೊಳಗಿನ ಸುಳಿವುಗಳೊಂದಿಗೆ ವಾದಿಸುವ ಇವರ ಕರೀ ಕೋರ್ಟಿನ ಒಳಗೆ ಎಲ್ಲ ಮೌಲ್ಯಗಳು ಥಣ್ಣಗೆ ಮಲಗಿಕೊಂಡಿರುತ್ತವೆ. ಇಲ್ಲದ ಕಡೆ ಜಗಳ ಹಚ್ಚಿ ದೇವಮಾನವರ ಹಾಗೆ ನ್ಯಾಯ ಕೊಡಿಸುವ ಇವರೊಳಗಿನ ಕ್ರೌರ್ಯ ಬೂದಿಮುಚ್ಚಿದ ಕೆಂಡದ ಹಾಗಿರುತ್ತದೆ.

ಆದರೆ ಈಗ ತಮ್ಮನ್ನು ಯಾರೂ ಪ್ರಶ್ನಿಸಬಾರದು, ತಾವು ಶ್ರೇಷ್ಠರು ಎಂಬ ಅಹಮ್ಮಿನೊಂದಿಗೆ ಕಾನೂನಿನ ಚೌಕಟ್ಟು ಮುರಿದು ದೆವ್ವಗಳಂತೆ ವರ್ತಿಸಿರುವುದು ಸತ್ಯ ಹೇಳುವ, ಸತ್ಯಶೋಧನೆಯಲ್ಲಿ ನಿರತವಾಗಿರುವ ಪತ್ರಿಕಾರಂಗದ ಜೊತೆಗೆ…. ಕಾರಿಕೊಂಡ ವಕೀಲರು ಯಾರೂ ವಯಸ್ಸಾದವರಲ್ಲ ಯುವಕರು, ಅಂದರೆ, ಈಗಷ್ಟೆ ತಮ್ಮ ಸಂಭಾವನೆಯನ್ನು ನಿಗದಿಪಡಿಸಿಕೊಳ್ಳುತ್ತಿರುವವರು ಇರಬಹುದು. ವೃತ್ತಿಗುಣದೋಷದಿಂದ ಕೆಟ್ಟವರ್ತನೆಯಲ್ಲಿ ತೊಡಗಿದ್ದಾರೆ. ಅವರ ರೋಷಕ್ಕೆ ಕಾರಣ ಬಹಳ ಸಣ್ಣದು ಎನಿಸಬಹುದು, ಆದರೆ ಈ ರಾಜ್ಯದ ಆಡಳಿತ ವ್ಯವಸ್ಥೆಯ ಪಿತೂರಿಯಿಂದಾಗಿ ಹೀಗೆ ಈ ಅವಕಾಶವನ್ನು ಪತ್ರಕರ್ತರ ಮೇಲೆ ಬಳಸಿಕೊಂಡಿರಬಹುದು. ಸದನದ ಸಲ್ಲಾಪ, ವಕೀಲರ ಗೂಂಡಾ ಪ್ರವೃತ್ತಿಯ ವರದಿ, ರಾಜಕಾರಣಿಗಳ ಅವತಾರದ ಸಮೀಕ್ಷೆ, ಗಣಿಗಾರಿಕೆಯ ವರದಿ, ಭ್ರಷ್ಟಾಚಾರದ ಕುರಿತ ವಿಶ್ಲೇಷಣೆ ಈ ಬೂಟಾಟಿಕೆಯ ಮಧ್ಯಮವರ್ಗೀಯ ಜನರನ್ನು ಕೆದಕಿದ್ದಂತೂ ಹೌದು. ಆದರೆ ಸತ್ಯವನ್ನು ಬಹಿರಂಗಗೊಳಿಸುವ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಅಹಮ್ಮಿನ ನಡವಳಿಕೆಯು ವಕೀಲರಿಗೆ ಗೌರವ ತರುವಂಥದ್ದಲ್ಲ.

“ಪರರ ದುಃಖ ನಿವಾರಣೆಗಾಗಿ ಯಾರೂ ವಕೀಲಿ ಮಾಡುವುದಿಲ್ಲ; ಹಣ ಗಳಿಸಲು ಮಾಡುತ್ತಾರೆ. ಐಶ್ವರ್ಯ ಸಂಪಾದನೆಗೆ ಇದೊಂದು ದಾರಿಯಾಗಿದೆ. ಜಗಳ ಹೆಚ್ಚಾದರೆ ಅವರಿಗೆ ಲಾಭ ಹೆಚ್ಚು. ಜಗಳ ಹೆಚ್ಚಾದರೆ ವಕೀಲರಿಗೆ ಸಂತೋಷ; ನಾನಿದನ್ನು ಸ್ವಂತವಾಗಿ ಬಲ್ಲೆ, ಚಿಕ್ಕಪುಟ್ಟ ವಕೀಲರು ಇಲ್ಲದ ಕಡೆ ಜಗಳ ಹಚ್ಚುತ್ತಾರೆ. ಅವರ ದಲ್ಲಾಳಿಗಳು (ಪೂಟ್ ಲಾಯರ್) ಜಿಗಣಿಯಂತೆ ಬಡವರ ರಕ್ತ ಹೀರುತ್ತಾರೆ. ಆ ಕಸಬೇ ಜಗಳ ಕಚ್ಚಾಟಗಳಿಗೆ ಪ್ರೋತ್ಸಾಹ ಕೊಡುವಂಥದು. ವಕೀಲರಿಗೆ ಕೆಲಸ ಹೆಚ್ಚು ಇರುವುದಿಲ್ಲ. ಭೋಗ ವಿಲಾಸಗಳನ್ನು ಬಯಸುವ ಮೈಗಳ್ಳ ಜನ ಇಂಥ ವೃತ್ತಿಗಳನ್ನು ಹುಡುಕುತ್ತಾರೆ. ಇದು ಸತ್ಯ, ಉಳಿದೆಲ್ಲ ವಾದವೂ ಬರೀ ನೆಪ. ವಕೀಲಿ ಕಸಬು ಗೌರವಯುತವಾದುದೆಂದು ಕಂಡುಹಿಡಿದವರೂ ವಕೀಲರೇ. ಆತ್ಮಪ್ರಶಂಸೆ ಮಾಡಿಕೊಳ್ಳುವ ಹಾಗೆಯೆ ಕಾನೂನನ್ನು ರಚಿಸುತ್ತಾರೆ.” ಸ್ವಂತ ಅನುಭವದ ಮೇಲೆ ಮಹಾತ್ಮರು ತಮ್ಮ ಹಿಂದ್ ಸ್ವರಾಜ್ಯ ಕೃತಿಯಲ್ಲಿ ವಕೀಲಿ ವೃತ್ತಿ ಕುರಿತಾಗಿ ಹೇಳಿದ ಮಾತುಗಳಿವು. ಕುಹಕತನದ ವೃತ್ತಿಯವರು ಪಟ್ಟಭದ್ರರಾಗುತ್ತ ಸ್ವಹಿತಾಸಕ್ತಿಗೆ ಅನುಗುಣವಾಗಿ ಆಡಳಿತದ ಸೂತ್ರವನ್ನು ಬದಲಾಯಿಸುವ ಮತ್ತೂ ಭಯ ಹುಟ್ಟಿಸುವ ಸಲುವಾಗಿ ಕುಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾ ಬಂದಿರುವುದು ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಇಂದು ಆಡಳಿತಕ್ಕೇರುವುದೆಂದರೆ ಸ್ವಂತ ಅಸ್ತಿತ್ವ ಪ್ರತಿಷ್ಠಾಪಿಸುವುದು ಮಾತ್ರ ಆಗಿದೆ. ಆದರ್ಶೀಕೃತ ಮಾದರಿ ವ್ಯಕ್ತಿತ್ವಗಳು ಪೂಜೆಗೊಳ್ಳುವ ಈ ಹೊತ್ತಿನಲ್ಲಿ ಭಂಡತನದ ಸಾಧಿಸುವಿಕೆ ಸುಲಭವಾದದ್ದು. ಗಾಂಧಿ ಸ್ವತಃ ವಕೀಲರಾಗಿದ್ದರಿಂದ ವೃತ್ತಿಯ ಆಳರಿವು ಅವರಿಗಿತ್ತು. ಆತ್ಮ ವಿಮರ್ಶೆ ಮಾಡಿಕೊಳ್ಳದ ಯಾವ ಕೆಲಸವೂ, ಅನುಭವದಿಂದ ಬರಲಾರದ ಯಾವ ಮಾತೂ, ಸಿಡಿದೇಳಲಾರದ ಚಳುವಳಿಗಳೂ ಯಾಕೆ ಮಂಕಾಗಿವೆ ಅಂದರೆ ಅದರೊಳಗಿರುವ ಮತ್ತೂ ಆಳಕ್ಕೆ ಹೂತು ಹೋಗಿರುವ ಸ್ವಹಿತಾಸಕ್ತಿ ಕಾರಣ.

ಇವರನ್ನು ನಂಬುವುದಾದರೂ ಹೇಗೆ ? ತಮ್ಮನ್ನು ಸ್ಪಷ್ಟ ಸ್ಪಟಿಕದ ಹಾಗೆ ಇಟ್ಟುಕೊಳ್ಳದ ವಕೀಲರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರಲ್ಲ…. ಇಂಥವರು ಈ ದೇಶದ ಪ್ರಜಾಪ್ರಭುತ್ವದ ಮಹತ್ವದ ಅಂಗವೊಂದನ್ನು ಸಶಕ್ತವಾಗಿ ನಿರ್ವಹಿಸುತ್ತಾರೆನ್ನುವುದು ಅನುಮಾನ. ನಾನು ದೂರದ ಹಳ್ಳಿಯಲ್ಲಿ ಕುಳಿತು ಪತ್ರಿಕೆ ತೆರೆದು ನೋಡಿದರೆ, ಟಿವಿ ಹಾಕಿ ನೋಡಿದರೆ ಕಂಡದ್ದು ಯುವ ವಕೀಲರ ಕೈಯಲ್ಲಿ ಕಲ್ಲು, ಬೂಟು, ಕುರ್ಚಿ ಹಿಡಿದ ಚಿತ್ರಗಳು. ಕಾಲದ ಬೆಂಕಿಯಲ್ಲಿ ಮಾಗದ ಮನಸುಗಳು ದಾರಿ ತಪ್ಪದಂತೆ ತಿದ್ದುವುದು ಸಾಧ್ಯವಾದರೆ ಮುಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ನಂಬಿಕೆ ಬರುತ್ತದೆ. ಇದು ಹೀಗೆ ಅವರವರ ಸ್ವಪ್ರತಿಷ್ಠೆಯ ಮಾತಾದರೆ ವೃತ್ತಿಧರ್ಮದ ಅವನತಿಯ ಜೊತೆಗೆ ಪ್ರಜಾಪ್ರಭುತ್ವವನ್ನು ತೆಗೆದು ಹಾಕುವ ಪ್ರವೃತ್ತಿ ಬೆಳೆಯುತ್ತದೆ. ಹಾಗಾಗಿ ಇಂದು ಜನಸಾಮಾನ್ಯ ಜಾಗೃತಗೊಳ್ಳಬೇಕಾಗಿರುವುದು ಗೋಳೀಕರಣ ಸೃಷ್ಟಿಸಿರುವ ಮಧ್ಯಮವರ್ಗೀಯ ಆಶೋತ್ತರಗಳಿಂದ. ಸಮಾಜ ಒಡೆಯುವ ಓಟ್ ಬ್ಯಾಂಕ್ ರಾಜಕಾರಣ, ಶ್ರೇಷ್ಠತೆಯ ವ್ಯಸನ, ಅರಾಜಕ ಅಸಮಾನತೆಗಳೂ, ಜಮೀನ್ದಾರೀ ಅಂಶಗಳು ಹೀಗೆ ಬ್ರಿಟಿಷರು ಬಿಟ್ಟು ಹೋಗಿರುವ ರಾಜಕಾರಣದ ಎಲ್ಲಾ ಮಜಲುಗಳೂ ಅದರೊಳಗೆ ಉಳಿದುಕೊಂಡಿದ್ದಾವೆ.

ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?

Who is right? Media or Police or Advocates?

Dear Ravi,

This is what I saw in the City Civil Court, Bangalore, yesterday:

First some media persons were holding tube-lights and waiting to beat advocates. Then there was fight between a group of media persons and a group of lawyers. Then police came and said lawyers should go inside the court and press should be outside.

Then the police joined with the press and pelted stones at advocates. One advocate fell due to the stone pelting by the press and when other advocates tried helping him, police started beating the advocates. Advocates were told that 3 advocates are dead and taken in 4 ambulances.

At the same time Kannada Media Channels were showing only police and media person are affected. In the mean time advocates and judges were locked inside the premises by the police and the police started firing, beating advocates and calling advocates saying “come, we will teach you a lesson today”. Then police threw stones from outside the court and the windows broke and an advocate arguing in court-hall 1 was hit by a stone either thrown by the press or the police.

I saw the Kannada news channels that were blaming the advocates and not even allowing the advocates to take part in the discussion by saying that you should not take law into your hands and you should only use your mouth to argue.

May be all three (advocates, police, media) are wrong, I do not know, but I have these questions:

  • Was this incident pre-planned and executed by the media and the police to tarnish the image of advocates and show them as despicable, uncivilized and barbaric, to the general public? Why only show advocates in such a bad light?
  • Was there collusion between the media and the police?
  • Are advocates such a vulnerable community?
  • Are the advocates wrong or are they only shown in bad light?
  • Why was media publishing provocative speeches and discussions against advocates only and not showing any of the incidents committed by its people and the police?

In the meantime some media persons were successful in getting the legal experts like Santhosh Hegde and some other senior advocates’ opinion on this  in order to downgrade the legal profession.

Further, in the late night, a Bowring Hospital doctor says on TV that approximately 30 persons were admitted to the hospital. 7-8 are policemen; 5-6 are press persons and the rest are advocates. That means 15-16 injured persons were advocates! All violence should be condemned very strongly. All injured persons may have families who may be going through a terrible pain right now. My prayers are with them.

I feel Kannada Channels are selectively showing only one-sided reports. No channel is showing how these advocates got injured. There is more to this unfortunate incident than it meets the eye. Who will show the truth about how the advocates including judges got injured and how this incident started? How is this incident connected with Mr Janardhana Reddy’s appearance in court? There should be a judicial enquiry on this incident. Meantime, let all the parties show restraint. Let the truth come out!

One more thing I would like to mention here. Hon’ble judges Mr. Shreedhar Rao, Mr. K.L.Manjunath, Mr. Govindarajulu, Mr. Nagamohandas et al, personally came and took the risk of pacifying the enraged amid such an explosive situation and even they were shocked when they saw one of the judge was hurt and had sustained injuries.  They virtually prayed for peace, despite, police autrociously vandalized.

Regards,
Prashanth Mirle
Advocate