Daily Archives: March 7, 2012

ಮರ್ಯಾದೆ ಹತ್ಯೆ ಮತ್ತು ಅಂತರ್ಜಾತಿ ವಿವಾಹ

-ಡಾ.ಎಸ್.ಬಿ.ಜೋಗುರ

ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

ಜಾಗತೀಕರಣದ ಸಂದರ್ಭದಲ್ಲಿಯೂ ಜಾತಿ ಪದ್ಧತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಯ ಉತ್ತರ ಒಂದೇ ದಿಕ್ಕಿನತ್ತ, ಎಲ್ಲರೂ ಒಪ್ಪಬಹುದಾದ ರೀತಿಯಲ್ಲಿ ಸಾಧ್ಯವಿಲ್ಲ. ರಾಜಕೀಯ ರಂಗದಲ್ಲಿ ನಿಂತು ಈ ಪ್ರಶ್ನೆಗೆ ಉತ್ತರಿಸುವಾಗ ಸಾಧ್ಯವಾಗಬಹುದಾದ ಸಾರೂಪ್ಯ ಸಂಗತಿಗಳು ಸಾಮಾಜಿಕ, ಆರ್ಥಿಕ ಸಾಂಸ್ಕೃತಿಕ ವಲಯದಲ್ಲಿ ನಿಂತು ಅರ್ಥೈಸುವಾಗ, ಉತ್ತರಿಸುವಾಗ ವಿಭಿನ್ನವಾದ ವಿವರಣೆಗಳ ಮೂಲಕ ಬಿಚ್ಚಿಕೊಳ್ಳುತ್ತದೆ. ಸುಮಾರು ಐದಾರು ದಶಕಗಳ ಹಿಂದೆ ಆಧುನಿಕ ಶಿಕ್ಷಣ ಪಡೆದ ಭಾರತೀಯರು ಮುಂದೊಂದು ದಿನ ಬಲಾಢ್ಯ ಪ್ರಜಾಸತತ್ತೆಯ ಹಿನ್ನೆಲೆಯಲ್ಲಿ ಭಾರತದ ಸಾಂಪ್ರದಾಯಿಕ ಜಾತಿ ಎನ್ನುವ ಸಂಸ್ಥೆ ಮಂಕಾಗಬಹುದು ಎಂದು ನುಡಿದ ಭವಿಷ್ಯ ಸುಳ್ಳಾಗಿದೆ. 1957 ರ ಸಂದರ್ಭದಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್. ಶ್ರೀನಿವಾಸ ಅವರು “ಆಧುನಿಕ ಸಂದರ್ಭದಲ್ಲಿ ಜಾತಿಯ ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ,”  ಎಂದದ್ದು ಮಾತ್ರ ಹುಸಿ ಹೋಗಲಿಲ್ಲ. ಜಾತಿ ಪದ್ಧತಿಯು ತನ್ನ ಪೊರೆ ಕಳಚಿಕೊಳ್ಳುವ ಪ್ರಯತ್ನ ಮಾಡಿರುವುದಿದೆಯೇ ಹೊರತು ಬದಲಾವಣೆ ಹೊಂದಿರುವುದು ತೀರಾ ಕಡಿಮೆ. ಶ್ರೀನಿವಾಸರ ಮಾತಿನ ತಾತ್ಪರ್ಯವೂ ಇದೇ ಆಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜಾತಿ ಎನ್ನುವದು ಒಂದು ಪದ್ಧತಿಯಾಗಿ, ಭಾರತೀಯ ಸಮಾಜದ ಒಂದು ಅತ್ಯಂತ ನಿರ್ಣಾಯಕ ಸಂಸ್ಥೆಯಾಗಿತ್ತು. ಈಗಿನಂತೆ ಅದು ಆಗ ರಾಜಕೀಯ ಚಟುವಟಿಕೆಗಳ ಮೂಗುದಾರವಾಗಿರುವ ಬಗ್ಗೆ ಚಾರಿತ್ರಿಕವಾಗಿ ಚರ್ಚಿತವಾದ ಉಲ್ಲೇಖಗಳು ತೀರಾ ಕಡಿಮೆ. ಅದೇನಿದ್ದರೂ ಮಡಿ-ಮೈಲಿಗೆ, ಆಚರಣೆ, ಸಾಮಾಜಿಕ ಸಂಪರ್ಕ, ದೇವಸ್ಥಾನಗಳ ಪ್ರವೇಶ, ಭೌತಿಕ ಸಾಮಿಪ್ಯ, ಭೋಜನ ಇಂಥವುಗಳ ಸುತ್ತಲೇ ಅದು ಹೆಚ್ಚೆಚ್ಚು ಕೇಂದ್ರೀ ಕೃತವಾಗಿರುವುದಿತ್ತು.  ಸ್ವಾತಂತ್ರ್ಯೋತ್ತರ ಭಾರತದ ಸಂದರ್ಭದಲ್ಲಿ ಪಾರಂಪರಿಕ ಜಾತಿಯಾಧಾರಿತ ಉದ್ಯೋಗಗಳ ಪ್ರಭಾವ ಕಳೆಗುಂದುತ್ತಾ ಬಂದು ಉದ್ಯೋಗದ ಮುಕ್ತ ಆಯ್ಕೆಗೆ ಅವಕಾಶ ಸಾಧ್ಯವಾಯಿತು. ಪರಿಣಾಮವಾಗಿ ಮೇಲ್ಜಾತಿಯ ಜನರು ಕೂಡಾ ಪಾದರಕ್ಷೆಗಳ ಅಂಗಡಿಯನ್ನು ನಿರ್ವಹಿಸುವಂತಾದರು. ಕುಂಬಾರನ ಮಗ ಕುಂಬಾರ, ಕಂಬಾರನ ಮಗ ಕಂಬಾರ, ಸಿಂಪಿಗನ ಮಗ ಸಿಂಪಿಗ ಹೀಗೆ ಅಪಾರ ಸಾಮರ್ಥ್ಯವಿರುವವರೂ ಜಾತಿಯಾಧಾರಿತ ಉದ್ಯೋಗದ ಪಾರಂಪರಿಕ ಸಂಕೋಲೆಗಳಿಗೆ ಸಿಲುಕಬೇಕಿತ್ತು. ಆಧುನಿಕ ಶಿಕ್ಷಣ ಪಡೆದವರು ಈ ಬಗೆಯ ಸಂಕೋಲೆಗಳನ್ನು ಹರಿದೊಗೆದರು. ಜಾತಿಯಾಧಾರಿತ ಉದ್ಯೋಗ ಇಂದಿನ ಸಂಕೀರ್ಣ ಶ್ರಮ ವಿಭಜನೆಯ ಸಂದರ್ಭದಲ್ಲಂತೂ ಅದು ಸಾಧ್ಯವೂ ಇಲ್ಲ ಸಾಧ್ಯವೂ ಅಲ್ಲ. ಹಾಗೆಯೇ ಉತ್ತರ ಭಾರತದ ಬದಿಗಿದ್ದ ಕಚ್ಚಾ ಆಹಾರ ಹಾಗೂ ಪಕ್ಕಾ ಆಹಾರದ ಪರಿಪಾಠಗಳೂ ಈಗ ಇಲ್ಲ.  (ಕಚ್ಚಾ ಆಹಾರ ನೀರಿನಲ್ಲಿ ತಯಾರಿಸುವ ಆಹಾರ, ಪಕ್ಕಾ ಆಹಾರ ತುಪ್ಪದಲ್ಲಿ ತಯಾರಿಸುವ ಆಹಾರ.)  ಕಚ್ಚಾ ಆಹಾರ ಕೆಳಜಾತಿಗಳು ಹಾಗೂ ಪಕ್ಕಾ ಆಹಾರವನ್ನು ಮೇಲ್ ಜಾತಿಗಳು ಸೇವಿಸಬೇಕು ಎನ್ನುವ ಜಾತಿಯ ನಿರ್ಬಂಧಗಳೂ ಈಗಿಲ್ಲ. ಈ ಬಗೆಯ ಹತ್ತು ಹಲವಾರು ಸಾಮಾಜಿಕ ಧಾರ್ಮಿಕ ದೌರ್ಬಲ್ಯಗಳನ್ನು ಜಾತಿ ಕಳೆದುಕೊಂಡಿದೆಯಾದರೂ ಅದಿನ್ನೂ ಒಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿರುವುದು ಈ ಶತಮಾನದ ಬಹುದೊಡ್ಡ ವಿಪರ್ಯಾಸ..!

ಕೇವಲ ಉದ್ಯೋಗದ ಸ್ವಾತಂತ್ರ್ಯ ಆಯ್ಕೆ ಮಾತ್ರವಲ್ಲ ಊಟೋಪಚಾರ, ಸಾಮಾಜಿಕ ಸಂಪರ್ಕ, ಧಾರ್ಮಿಕ ದೌರ್ಬಲ್ಯ, ಸಹಭೋಜನ ಮುಂತಾದ ಸಂಗತಿಗಳಲ್ಲಿ ತಕ್ಕ ಮಟ್ಟಿಗಿನ ಬದಲಾವಣೆಗಳಾಗಿವೆ. (ಹೀಗೆ ಹೇಳುವಾಗ ಮಡೆಸ್ನಾನದಂತಹ ಅನಿಷ್ಟ ಪದ್ಧತಿ ನೆನಪಾಗದೇ ಇರದು.)  ಈ ಊಟೋಪಚಾರ ಹಾಗೂ ಸಾಮಾಜಿಕ ಸಂಪರ್ಕಗಳಲ್ಲಾದ ಬದಲಾವಣೆಯ ವೇಗ ವಿವಾಹ ಎನ್ನುವ ಸಂಸ್ಥೆಯಲ್ಲಿ ಆಗಲಿಲ್ಲ ಎನ್ನುವದು ಅಷ್ಟೇ ಸತ್ಯ. ಜಾತಿಯ ಪ್ರಭಾವಳಿಯನ್ನು ಸಂಪೋಷಿಸಿಕೊಂಡು ಬಂದ ಒಂದು ಪ್ರಮುಖ ಸಂಸ್ಥೆಯಾಗಿ ವಿವಾಹದ ಅಸ್ಥಿತ್ವವಿದೆ.  ಮೂಲತ: ಒಂದು ಒಳಬಾಂಧವ್ಯ ವಿವಾಹ ಸಮೂಹವಾದ ಜಾತಿಪದ್ಧತಿ ಹೊರಬಾಂಧವ್ಯವನ್ನು ಸಹಿಸುವುದಿಲ್ಲ. ರಾಜಕೀಯ ವಲಯವನ್ನು ಮೀರಿಯೂ ಜಾತಿ ತನ್ನ ಗಡುಸುತನವನ್ನು ವಿವಾಹ ಸಂಸ್ಥೆಯಲ್ಲಿ ಕಾಪಾಡಿಕೊಂಡಿದೆ. ಇಂದಿಗೂ ವಧು-ವರರ ಅನ್ವೇಷಣೆಯಲ್ಲಿ ತನ್ನ ಉಪಜಾತಿಯನ್ನು ಕೋಟ್ ಮಾಡಿಯೇ ತಮಗೊಂದು ಕನ್ಯೆ, ವರ ಬೇಕಾಗಿದೆ ಎಂದು ಹೇಳುವುದಿದೆ. 19ನೇ ಶತಮಾನದ ಅಂತ್ಯದವರೆಗೆ ಹಾಗೂ 20ನೇ ಶತಮಾನದ ಆದಿ ಭಾಗದವರೆಗೆ ಜಾತಿಯ ನಿಯಮಗಳನ್ನು ಧಿಕ್ಕರಿಸಿ ಮದುವೆಯಾಗುವುದು ಅತ್ಯಂತ ದುಸ್ಸಾಹಸವಾಗಿತ್ತು. ಹೀಗಿರುವಾಗ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವಿಸಿದ ಕಿರಿಕಿರಿ ಹೇಗಿರಬೇಡ. 19 ಹಾಗೂ 20ನೇ ಶತಮಾನದಲ್ಲಿ ಅಂತರ್ಜಾತಿಯ ಮದುವೆಯಾದವರನ್ನು ಜಾತಿಯಿಂದಲೇ ಬಹಿಷ್ಕರಿಸುವುದಿತ್ತು ಇಲ್ಲವೇ ಊರಿಂದ ಹೊರಹಾಕುವುದಿತ್ತು.  ಕೆಲ ಬಾರಿ ಈಗ ನಾವು ಓದುವ , ಕೇಳುವ ಮರ್ಯಾದೆ ಹತ್ಯೆಗಳೂ ಜರುಗುತ್ತಿದ್ದವೆಂದೇ ಅರ್ಥ.

ಸಾಮಾಜಿಕ ರಚನೆಯಲ್ಲಾಗುವ ಬದಲಾವಣೆಗಳು ಅದು ಒಳಗೊಂಡಿರುವ ಸಂಘ-ಸಂಸ್ಥೆಗಳಲ್ಲಿಯೂ ಬದಲಾವಣೆಯನ್ನು ತರುವುದಿದೆ. ಹೀಗಾಗಿ ಜಾತಿಪದ್ಧತಿ ಮತ್ತು ವಿವಾಹ ಎನ್ನುವ ಸಂಸ್ಥೆ ಈ ಬದಲಾವಣೆಯಿಂದ ತಪ್ಪಿಸಿಕೊಳ್ಳಲಾಗದು. ಇಂದು ಇಂಟರ್ನೆಟ್ ಮೂಲಕ ಸಂಗಾತಿಗಳನ್ನು ಅರಿಸುವಷ್ಟು ನಾವು ಬದಲಾಗಿದ್ದೇವೆ. ಅದೇ ವೇಳೆಗೆ ಈಗೀಗ ಅಂತರ್ಜಾತಿಯ ವಿವಾಹಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಧ್ಯಮ ವರ್ಗದ ಜನರು ಮಾತ್ರ ಇವತ್ತಿಗೂ ಗುರು-ಹಿರಿಯರ ಸಮ್ಮುಖದ ಸಾಂಪ್ರದಾಯಿಕ ಮದುವೆಗಳನ್ನೇ ಇಷ್ಟಪಡುವುದಿದೆ. ವಿವಾಹ ಸಂಸ್ಥೆಯಲ್ಲಿಯ ಬದಲಾವಣೆಗಳಿಗೆ ಸಾಕ್ಷಿಯಾಗಿ ಪತ್ರಿಕೆಗಳಲ್ಲಿ ಬರುವ ವೈವಾಹಿಕ ಅಂಕಣಗಳ ಜಾಹೀರಾತುಗಗಳಿವೆ. ಸಂಗಾತಿಗಳ ಆಯ್ಕೆಯ ವಿಷಯದಲ್ಲಿ ಅಲ್ಲಿ ಸಾಕಷ್ಟು ಸಡಿಲತೆಗಳಿವೆ. ಹಿಂದೆ ಲಿಂಗಾಯಿತನೊಬ್ಬ ವಿವಾಹ ಸಂದರ್ಭದಲ್ಲಿ ತನ್ನದೇ ಉಪಜಾತಿಯಲ್ಲಿ ಮದುವೆಯಾಗಬೇಕಿತ್ತು. ಉದಾಹರಣೆಗೆ ಒಬ್ಬ ಪಂಚಮಸಾಲಿ, ಬಣಜಿಗ, ಗಾಣಿಕ ಯುವಕ ಅದೇ ಜಾತಿಯ ಕನ್ಯೆಯನ್ನು ಮದುವೆಯಾಗಬೇಕಿತ್ತು. ಈಗ ಹಾಗಿಲ್ಲ.  ಕನ್ಯಾನ್ವೇಷಣೆಯ ಸಂದರ್ಭದಲ್ಲಿಯೇ ಬಣಜಿಗ, ಗಾಣಿಗ, ಸಾದರ ಹೀಗೆ ಒಟ್ಟಿನಲ್ಲಿ ಯಾವುದೇ ಲಿಂಗಾಯಿತ ಉಪಜಾತಿಯಾದರೆ ಆಯಿತು ಅನ್ನುವಷ್ಟು ಧಾರಾಳತೆ ಈಗ ಮೂಡಿದೆ. ಇದು ಜಾತಿಯಂಥ ಗಡುಸಾದ ವ್ಯವಸ್ಥೆಯಲ್ಲಿ ಒಂದು ಮಹತ್ತರವಾದ ಬದಲಾವಣೆಯು ಹೌದು.

ಒಳಬಾಂಧವ್ಯ, ಅನುಲೋಮ ವಿವಾಹ  [ಮೇಲ್ಜಾತಿಯ ವರ ಕೆಳಜಾತಿಯ ಕನ್ಯೆ]  ಹಾಗೂ ಪ್ರತಿಲೋಮ ವಿವಾಹ  [ಕೆಳಜಾತಿಯ ವರ ಮೇಲ್ಜಾತಿಯ ಕನ್ಯೆ]  ಈ ಬಗೆಯ ವಿವಾಹಗಳಿಗೆ ಸಂಬಂಧಿಸಿ ಜಾತಿಯಲ್ಲಿ ಅದರದೇಯಾದ ಕೆಲವು ನಿರ್ಬಂಧಗಳಿದ್ದವು. ಈಗಲೂ ಕೂಡಾ ಕೆಲ ಸಮುದಾಯಗಳಲ್ಲಿ ಈ ಬಗೆಯ ಅನುಲೋಮ ಮತ್ತು ಪ್ರತಿಲೋಮ ವಿವಾಹಗಳು ಅಂತರ್ಜಾತಿಯ ವಿವಾಹ ಪದ್ಧತಿಯ ಸ್ವರೂಪದಲ್ಲಿ ಅಸ್ಥಿತ್ವದಲ್ಲಿವೆ. ಆದರೆ ಅವು ಎದುರಿಸಬಹುದಾದ ಒತ್ತಡ ಮತ್ತು ಪರಿಣಾಮಗಳು ಎಲ್ಲ ಸಮುದಾಯ ಮತ್ತು ರಾಜ್ಯಗಳಲ್ಲಿ ಒಂದೇ ತೆರನಾಗಿಲ್ಲ. ಇವತ್ತಿಗೂ ಕೆಲ ಸಮುದಾಯಗಳು ಜಾತಿಯ ನಿರ್ದೇಶನದಂತೆಯೇ ಜೀವನ ವಿಧಾನವನ್ನು ರೂಪಿಸಿಕೊಂಡಿರುವುದಿದೆ. ಜಾತಿಗೆ ವಿರುದ್ಧವಾದ ತೀರಾ ಸಣ್ಣ ಪ್ರಮಾಣದ ಪ್ರತಿರೋಧಗಳು ಕೂಡಾ ಮರ್ಯಾದೆಯ ಹತ್ಯೆಯಲ್ಲಿ ಮುಕ್ತಾಯವಾಗುವುದಿದೆ. ಬಹಳಷ್ಟು ಮರ್ಯಾದೆಯ ಹತ್ಯೆಯಲ್ಲಿ ಜಾತಿ ಒಂದು ಪ್ರಮುಖ ಕಾರಣವಾಗಿ ಕೆಲಸ ಮಾಡಿರುವುದಿದೆ. ಅದರಲ್ಲೂ ಪ್ರಬಲ ಜಾತಿಗಳ ಆರ್ಭಟವೇ ಹೆಚ್ಚು. ಕೆಳ ಜಾತಿಯ ಹುಡುಗ ಇಲ್ಲವೇ ಹುಡುಗಿ ಮೇಲ್ಜಾತಿಯ ಹುಡುಗ ಇಲ್ಲವೇ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಎಲ್ಲ ಬಗೆಯ ರಿಸ್ಕ್ ಗಳಿಗೂ ತಯಾರಿರಬೇಕು ಎನ್ನುವಂತಹ ಆಹ್ವಾನವನ್ನು ಈ ಜಾತಿಪದ್ಧತಿ ನೀಡುವುದಿದೆ. ಇದನ್ನು ಇತ್ಯಾತ್ಮಕ ಬದಲಾವಣೆ ಅನ್ನಬೇಕೋ ಇಲ್ಲವೇ ನಿಷೇಧಾತ್ಮಕ ಬದಲಾವಣೆ ಅನ್ನಬೇಕೋ ಎನ್ನುವುದೇ ತಿಳಿಯದಾಗಿದೆ. ಪ್ರತಿಗಾಮಿಗಳಿಗೆ ಇದು ಇತ್ಯಾತ್ಮಕವೇ ಹೌದು. ಆದರೆ ಪ್ರಗತಿಗಾಮಿಗಳಿಗಲ್ಲ.

(ಚಿತ್ರಕೃಪೆ: ವಿಕಿಮೀಡಿಯ)

ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)