Daily Archives: March 14, 2012

ಖಾನ್ ಅಕ್ಯಾಡೆಮಿಯಲ್ಲಿ ಕಲಿಯುತ್ತಿರುವ ಕಿರಿಹಿರಿಯರು

– ರವಿ ಕೃಷ್ಣಾರೆಡ್ಡಿ

ಈ ಸಲ್ಮಾನ್ ಖಾನ್ (ಸ್ಯಾಲ್ ಖಾನ್) ಅಮೆರಿಕದಲ್ಲಿ ಬಂಗಾಳಿ ದಂಪತಿಗಳಿಗೆ ಹುಟ್ಟಿದವನು. ತಾಯಿ ಕೊಲ್ಕತ್ತದವಳು, ಅಪ್ಪ ಬಾಂಗ್ಲಾ ದೇಶಿ. ಇಂದು ಅಮೆರಿಕ ಮತ್ತು ಭಾರತವೂ ಸೇರಿದಂತೆ ಲಕ್ಷಾಂತರ ಶಾಲಾ ಮಕ್ಕಳಿಗೆ, ಅಧ್ಯಾಪಕರಿಗೆ, ಮತ್ತು ನನ್ನಂತಹ ವಯಸ್ಕರಿಗೂ ಈತ ಕಲಿಸುವ ಮೇಷ್ಟ್ರು. ಈತನ ಶಾಲೆಯ ಹೆಸರು “ಖಾನ್ ಆಕ್ಯಾಡೆಮಿ”.

ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಖಾನ್‌ನ ಹಿನ್ನೆಲೆ, ಅಕ್ಯಾಡೆಮಿಯ ಆರಂಭ, ಆತ ಮಾಡುತ್ತಿದ್ದ ಮತ್ತು ಮಾಡುತ್ತಿರುವ ಕೆಲಸ, ಆತನ ಬೆನ್ನಿಗೆ ನಿಂತವರು, ಪ್ರತಿದಿನವೂ ಆತನಿಂದ ಪ್ರಾಥಮಿಕ ಹಂತದ ಶಿಕ್ಷಣದಿಂದ ಕ್ಲಿಷ್ಟ ಮತ್ತು ಗಹನ ವಿಷಯಗಳ ಬಗ್ಗೆ ಕುರಿತು ಪಾಠ ಕಲಿಯುತ್ತಿರುವ ಪ್ರಪಂಚದಾದ್ಯಂತದ ಲಕ್ಷಾಂತರ, ಕೋಟ್ಯಾಂತರ ಜನರ ಬಗ್ಗೆ ಈ ಕೆಳಗಿನ CBS – 60 Minutes ವಿಡಿಯೋ ಹೇಳುತ್ತದೆ:

ಇದು ಖಾನ್ ಅಕ್ಯಾಡೆಮಿಯ ವಿಕಿಪೀಡಿಯ ಕೊಂಡಿ: http://en.wikipedia.org/wiki/Khan_Academy

www.khanacademy.org ಖಾನ್ ಅಕ್ಯಾಡೆಮಿಯ ವೆಬ್‌ಸೈಟ್.

ಮಾಧ್ಯಮ ಮಿತ್ರರು ಇದನ್ನು ತಮ್ಮ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಳಲ್ಲಿ ಇದರ ಬಗ್ಗೆ ಬರೆಯುವುದು ಈಗ ಸಕಾಲ. ಮಕ್ಕಳಿಗೆ ಇನ್ನೇನು ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಲಿದೆ. ಅವಕಾಶ ಮತ್ತು ಸೌಲಭ್ಯ ಇರುವ ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತು ರಜೆಯಲ್ಲಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಈ ವೆಬ್‌ಸೈಟ್‌ನಲ್ಲಿ ಸುಮಾರು 3000ಕ್ಕಿಂತ ಹೆಚ್ಚಿನ ವಿಡಿಯೋಗಳಿವೆ. ಆದರಲ್ಲಿ ಸುಮಾರು ಮುಕ್ಕಾಲು ಪಾಲಿಗಿಂತ ಹೆಚ್ಚಿನವು ನಮ್ಮ ಮಕ್ಕಳಿಗೂ ಸೂಕ್ತವಾದವುಗಳೆ.

ಅಂದ ಹಾಗೆ, ಖಾನ್ ಅಕ್ಯಾಡೆಮಿ ಇದನ್ನು ಇಂಗ್ಲಿಷ್ ಮಾತ್ರವಲ್ಲದೆ ಬೇರೆ ಭಾಷೆಗಳಿಗೂ ಭಾಷಾಂತರಿಸುವ ಕೆಲಸ ಮಾಡುತ್ತಿದೆ. ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳು ಇದರತ್ತ ಒಮ್ಮೆ ಗಮನಹರಿಸುವುದು ಸೂಕ್ತ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ತಮಾನದಲ್ಲಿ ಇದಕ್ಕಿಂತ ಒಳ್ಳೆಯ ಯೋಜನೆ ಸಿಗುವುದು ಅಪರೂಪ. ಆದರೆ ಮೂರ್ಖರಿಗೆ ಹೇಳುವವರು ಯಾರು? ಆಧುನಿಕ ಪ್ರಪಂಚದ ಅಆಇಈಗಳೇ ಗೊತ್ತಿಲ್ಲದವರಿಂದ ಏನನ್ನು ನಿರೀಕ್ಷಿಸುವುದೂ ಸಾಧುವಲ್ಲ.

ಇದು ಖಾನ್ ಸೂರ್ಯ ಮತ್ತು ಭೂಮಿಯ ಗಾತ್ರ ಮತ್ತು ದೂರದ ಕುರಿತು ಮಾಡುತ್ತಿರುವ ಪಾಠ:

ಇದು ಗುಣಾಕಾರದ ಪ್ರಾಥಮಿಕ ಪಾಠ:

ಈ ಪಾಠದಲ್ಲಿ ಸಲ್ಮಾನ್ ಖಾನ್ ಬಂಡವಾಳವಾದ ಮತ್ತು ಸಮಾಜವಾದದ ಬಗ್ಗೆ ಮಾತನಾಡುತ್ತಾನೆ:

ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಹೃದಯಾಘಾತಕ್ಕೆ ಸಂಬಂಧಿಸಿದ ಪಾಠ:

ಇದು ಖಾನ್ ಕಳೆದ ವರ್ಷ ಟೆಡ್‌ನಲ್ಲಿ ಮಾತನಾಡಿದ್ದ ವಿಡಿಯೋ:

ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.