ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ

-ಡಾ. ನಟರಾಜ್ ಹುಳಿಯಾರ್

ಕಳೆದ ಐವತ್ತು, ಅರವತ್ತು ವರ್ಷಗಳ ಕರ್ನಾಟಕದ ಚರಿತ್ರೆಯ ಮುಖ್ಯ ಬೆಳವಣಿಗೆಗಳಲ್ಲಿ “ಸೆಕ್ಯುಲರ್ ಇಂಟೆಲೆಕ್ಚುಯಲ್ಸ್” ವಿಕಾಸ ಕೂಡ ಒಂದು. ಈ ಸೆಕ್ಯುಲರ್ ಬುದ್ಧಿಜೀವಿಗಳು ಕರ್ನಾಟಕದಲ್ಲಿ ಹಲವು ಬಗೆಯ ವ್ಯವಸ್ಥೆಯ ವಿರೋಧಿ ಚಳವಳಿಗಳಲ್ಲಿ ಬೆರೆತು ಹೋಗಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಗಾಂಧೀವಾದಿ ಚಳವಳಿ, ಸಮಾಜವಾದಿ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ವಿಚಾರವಾದಿ ಚಳವಳಿ, ದಲಿತ ಚಳವಳಿ, ರೈತಚಳವಳಿ, ಸ್ತ್ರೀವಾದಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ… ಮುಂತಾಗಿ ಎಲ್ಲ ಮುಖ್ಯ ಚಳವಳಿಗಳಲ್ಲೂ  ಈ ಸೆಕ್ಯುಲರ್ ಬುದ್ಧಿಜೀವಿಗಳು ಭಾಗಿಯಾಗಿದ್ದಾರೆ. ಹಾಗೆಯೇ ನವೋದಯ, ಪ್ರಗತಿಶೀಲ, ನವ್ಯ, ಬರಹಗಾರರ ಒಕ್ಕೂಟ, ದಲಿತ, ಬಂಡಾಯ ಹಾಗೂ ರಂಗಭೂಮಿ ಚಟುವಟಿಕೆಗಳಂಥ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಳವಳಿಗಳ ಜೊತೆಗೂ ಇದ್ದಾರೆ. ಸರ್ಕಾರೇತರ ಸಂಸ್ಥೆಗಳಲ್ಲೂ ಅವರು ಇದ್ದಾರೆ. ಈ ಎಲ್ಲ ಚಳವಳಿಗಳು, ಅವುಗಳ ನಾಯಕರು, ಅದರಲ್ಲಿ ಭಾಗಿಯಾದ ವಿವಿಧ ವೇದಿಕೆಗಳು, ವಿವಿಧ ರಾಜಕೀಯ ಪಕ್ಷಗಳ ಕಾಲಕಾಲದ ಜಾತ್ಯತೀತ ನಿಲುವುಗಳು ಹಾಗೂ ಜಾತ್ಯತೀತ ಬುದ್ಧಿಜೀವಿಗಳು ಈ ಎಲ್ಲರ ಪ್ರಯತ್ನಗಳಿಂದಾಗಿ ಕರ್ನಾಟಕದಲ್ಲಿ ಗಟ್ಟಿಯಾದ ಜಾತ್ಯತೀತ ಚಿಂತನೆ ಹಾಗೂ ಕೋಮುವಾದ ವಿರೋಧಿ ಚಿಂತನೆಗಳು ರೂಪುಗೊಂಡಿವೆ. ಈ ಚಿಂತನೆಗಳನ್ನು ವಿವಿಧ ಹಂತಗಳಲ್ಲಿ ಕರ್ನಾಟಕದ ಸಾಮಾನ್ಯ ಜನ ಕೂಡ ಒಂದು ಮಟ್ಟದಲ್ಲಿ ಪ್ರತಿಧ್ವನಿಸಿದ್ದಾರೆ. ಇವೆಲ್ಲದರ ಹಿನ್ನೆಲೆಗೆ ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕದಲ್ಲಿ ಬೆಳೆದ ಜಾತಿವಿನಾಶ ಪರಿಕಲ್ಪನೆಯೂ ಕೆಲಸ ಮಾಡಿದೆ.

ಸ್ವಾತಂತ್ರ್ಯೋತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ರಾಜಕಾರಣ, ಚಳವಳಿ, ಚಿಂತನೆಗಳನ್ನು ಪ್ರಭಾವಿಸಿದ ಹಾಗೂ ಪ್ರೇರೇಪಿಸಿದ ಪೆರಿಯಾರ್‍‌ವಾದ, ಲೋಹಿಯಾವಾದ ಹಾಗೂ ಅಂಬೇಡ್ಕರ್‍‌ವಾದಗಳ ಮೂಲದಲ್ಲಿ ಹಾಗೂ ವಿವಿಧ ಸಾಹಿತ್ಯ ಚಳವಳಿಗಳ ಮುಖ್ಯ ಕಾಳಜಿಗಳಲ್ಲಿ ಜಾತಿವಿನಾಶ ಹಾಗೂ ಜಾತಿವಿರೋಧಗಳು ಕೂಡ ಇದ್ದವು. ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಚಿಂತಕರು ಜಾತ್ಯತೀತತೆಯನ್ನು ಒಂದು ತತ್ವವಾಗಿ ಒಪ್ಪಿದವರಾಗಿದ್ದರು. ರೈತ ಚಳ‌ವಳಿಯನ್ನು ರೂಪಿಸಿದ ಎಂ.ಡಿ.‍ನಂಜುಂಡಸ್ವಾಮಿಯವರು ಎಪ್ಪತ್ತರ ದಶಕದ ಸಮಾಜವಾದಿ ಯುವಜನ ಸಭಾದ ಕಾಲದಿಂದಲೂ ಜಾತಿವಿನಾಶ ಕುರಿತ ಚಿಂತನೆಯನ್ನು ಬೆಳೆಸಿದವರು. ಮುಂದೆ ರೈತ ಚಳವಳಿಯ ಇನ್ನಿತರ ನಾಯಕರಲ್ಲೂ ಜಾತ್ಯತೀತತೆ ಒಂದು ಮಟ್ಟದಲ್ಲಾದರೂ ಮುಂದುವರಿಯಿತು. ದಲಿತ ಚಳವಳಿಯಲ್ಲಂತೂ ಜಾತಿ ವಿರೋಧ ಬಹಳ ಸ್ಪಷ್ಟವಾಗಿತ್ತು. ಪೆರಿಯಾರ್‌ವಾದ ವೈಚಾರಿಕತೆಯ ಮೂಲಕ ಜಾತಿಯ ವಿರುದ್ಧ ಸಮರ ಸಾರಿತ್ತು. ಲೋಹಿಯಾವಾದ ಜಾತಿ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಾ ಜಾತಿವಿನಾಶದ ಕಾರ್ಯನೀತಿಯನ್ನು ಅಳವಡಿಸಿಕೊಂಡಿತ್ತು.

ಎಪ್ಪತ್ತರ ದಶಕದ ಅರಸು ಆಡಳಿತದಲ್ಲಿ ಆರಂಭಗೊಂಡ ಹಿಂದುಳಿದ ಹಾಗೂ ದಲಿತ ಜಾತಿಗಳ ಹೊಸ ಸಮೀಕರಣ, ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳಲ್ಲಿ ಕಂಡು ಬಂದ ಹೊಸ ಚಲನೆ, ಬಸವಲಿಂಗಪ್ಪನವರು ಪ್ರಾಚೀನ ಕನ್ನಡ ಸಾಹಿತ್ಯ ಕುರಿತು ಮಾಡಿದ ವಿಮರ್ಶೆಯ ಫಲವಾಗಿ ಹುಟ್ಟಿದ ಬೂಸಾ ಚಳವಳಿ, ಜಯಪ್ರಕಾಶ ನಾರಾಯಣರ ನವನಿರ್ಮಾಣ ಚಳವಳಿ, ಇಂದಿರಾಗಾಂಧಿಯವರು ಹೇರಿದ ಎಮರ್ಜೆನ್ಸಿಯನ್ನು ವಿರೋಧಿಸಿದ ಚಿಂತನೆಗಳು-ಇವೆಲ್ಲದರ ಫಲವಾಗಿ ಕೂಡ ಕರ್ನಾಟಕದಲ್ಲಿ ಜಾತ್ಯತೀತ ಚಿಂತನೆ ರೂಪುಗೊಂಡಿತು. ಈ ದಿಸೆಯಲ್ಲಿ ಎಪ್ಪತ್ತರ ದಶಕದಲ್ಲಿ ವಿಶ್ವವಿದ್ಯಾಲಯಗಳ ಪ್ರಜ್ಞಾವಂತ ವಿದ್ಯಾರ್ಥಿಗಳು ತಮ್ಮ ಹೆಸರುಗಳಲ್ಲಿದ್ದ ಜಾತಿಸೂಚಕ ಗುರುತುಗಳನ್ನು, ಜಾತಿ ಚಿಹ್ನೆಗಳನ್ನು ಕೈ ಬಿಟ್ಟದ್ದು ಕೂಡ ಒಂದು ಚಾರಿತ್ರಿಕ ಬೆಳವಣಿಗೆಯಾಗಿತ್ತು. ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಮುಂತಾದವರ ಚಿಂತನೆ ಹಾಗೂ ಹೋರಾಟಗಳು ಕೇವಲ ದಲಿತ ಜಾತಿ, ವರ್ಗಗಳಿಗೆ ಮಾತ್ರ ಸೀಮಿತವಾಗದೆ, ಅವುಗಳ ಆಚೆಗೂ ಜಾತ್ಯತೀತ ಚಿಂತನೆಯನ್ನು ಬಿತ್ತಲು ನೆರವಾದವು. ವಚನ ಚಳವಳಿಯಿಂದ ಪ್ರಭಾವಿತರಾದ ಸೂಕ್ಷ್ಮಜ್ಞರು, ಕುವೆಂಪು, ಕಾರಂತರ ಬರಹಗಳಿಂದ ಪ್ರಭಾವಗೊಂಡ ಸೂಕ್ಷ್ಮವಾದ ತರುಣ ತರುಣಿಯರು, ನಂತರ ನವ್ಯ ದಲಿತ, ಬಂಡಾಯ ಹಾಗೂ ಸಮುದಾಯದಂಥ ರಂಗ ಚಳವಳಿಗಳಿಂದ ರೂಪುಗೊಂಡ ಬರಹಗಾರ, ಬರಹಗಾರ್ತಿಯರು, ಓದುಗರು, ರಂಗಭೂಮಿ ನಟನಟಿಯರು ಜಾತ್ಯತೀತತೆಯನ್ನು ಒಂದು ಮೌಲ್ಯವನ್ನಾಗಿ ಬೆಳೆಸತೊಡಗಿದರು. ಸಂಕ್ರಮಣ, ಶೂದ್ರ, ವಿಮುಕ್ತಿ, ಪಂಚಮ ಥರದ ಕಿರುಪತ್ರಿಕೆಗಳ ಜೊತೆಗೆ ಪ್ರಜಾವಾಣಿ, ಮುಂಗಾರು, ಆಂದೋಲನ, ಲಂಕೇಶ್‌ಪತ್ರಿಕೆ, ಸುದ್ದಿಸಂಗಾತಿ ಪತ್ರಿಕೆಗಳು ಕೂಡ ಜಾತ್ಯತೀತ ನೋಟಕ್ರಮವನ್ನು ಬೆಳೆಸಿದವು.

ಡಾ.ಸಿದ್ಧಲಿಂಗಯ್ಯನವರು ವಿಧಾನ ಪರಿಷತ್ತಿನ ಶಾಸಕರಾಗಿದ್ದಾಗ ಸದನದಲ್ಲಿ ಮಂಡಿಸಿದ ಅಂತರ್ಜಾತೀಯ ವಿವಾಹಿತರಿಗೆ ಮೀಸಲಾತಿಯ ಬೇಡಿಕೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರವಿವರ್ಮಕುಮಾರ್ ಅವರು ಅಂತರ್ಜಾತೀಯ ವಿವಾಹಿತರ ಮೀಸಲಾತಿಗಾಗಿ ಮಾಡಿರುವ ಶಿಫಾರಸುಗಳು ಕೂಡ ಚಾರಿತ್ರಿಕ ಮಹತ್ವವುಳ್ಳವು. ಈ ಸಂದರ್ಭಗಳಲ್ಲಿ ಡಾ.ಸಿದ್ಧಲಿಂಗಯ್ಯ ಹಾಗೂ ರವಿವರ್ಮಕುಮಾರ್ ಇಬ್ಬರೂ ಭಾರತದ ದೇವಾನುದೇವತೆಗಳೇ ಜಾತಿ ಮೀರಿ ಮದುವೆಯಾದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪ, ಕೆ.ರಾಮದಾಸ್, ಕಡಿದಾಳು ಶಾಮಣ್ಣ, ಎಚ್.ಎಲ್. ಕೇಶವಮೂರ್ತಿ. ಬಂಜಗೆರೆ ಜಯಪ್ರಕಾಶ್, ರವಿವರ್ಮಕುಮಾರ್, ಅನಸೂಯಮ್ಮ ಥರದ ನೂರಾರು ಜಾತ್ಯತೀತ ಚಿಂತಕ, ಚಿಂತಕಿಯರು ಬೆಂಬಲಿಸಿರುವ, ಏರ್ಪಡಿಸಿರುವ ಸರಳ ಜಾತ್ಯತೀತ ವಿವಾಹಗಳು, ಸೈದ್ಧಾಂತಿಕ ಹಿನ್ನೆಲೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು  ಜಾತ್ಯತೀತ  ಆಲೋಚನೆಯನ್ನು ಬಿತ್ತಿ, ಬೆಳೆಸುತ್ತಾ ಬಂದಿವೆ.  ಕನ್ನಡದ ಹಲವು ಜನಪ್ರಿಯ ಸಿನಿಮಾಗಳಲ್ಲಿ ಬರುವ ಅಂತರ್ಜಾತೀಯ ಪ್ರೇಮಗಳ ಸನ್ನಿವೇಶಗಳಲ್ಲಿ ಕೂಡ ಜಾತ್ಯತೀತ ಚಿಂತನೆ ಮೇಲ್ಪದರದಲ್ಲಿಯಾದರೂ ಕಾಣಿಸಿಕೊಳ್ಳುತ್ತಾ ಬಂದಿದೆ. ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳ ಮೂಲಕ, ಉದಾರವಾದಿ ಧೋರಣೆಯ ಶಿಕ್ಷಣ ಸಂಸ್ಥೆಗಳ ಮೂಲಕ  ಕೂಡ ಜಾತ್ಯತೀತ ನೋಟ ಪ್ರಸಾರಗೊಂಡಿದೆ. ಆಧುನಿಕ ಕನ್ನಡ ಸಾಹಿತ್ಯದ ಗಂಭೀರ ಕೃತಿಗಳ ಆಳದಲ್ಲಿ ಜಾತ್ಯತೀತ ಧ್ವನಿಗಳಿವೆ. ಸಾಹಿತ್ಯ, ಕಲೆ, ಸಿನಿಮಾ ಹಾಗೂ ಪತ್ರಿಕೋದ್ಯಮಗಳಲ್ಲಿ ತೊಡಗಿರುವ ಅನೇಕ ಗಂಭೀರ ವ್ಯಕ್ತಿಗಳು ಸಾಮಾನ್ಯವಾಗಿ ಜಾತ್ಯತೀತ ತತ್ವಕ್ಕೆ ಬದ್ಧರಾಗಿಯೇ ಉಳಿದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಕ್ರಿಯಾಶೀಲ ಅಧ್ಯಾಪಕ, ಅಧ್ಯಾಪಕಿಯರು, ಮಾನವ ಹಕ್ಕುಗಳ ಕಾರ್ಯಕರ್ತರು, ಲಾಯರುಗಳು, ವಿವಿಧ ರೀತಿಯ ಸಾಮಾಜಿಕ ನ್ಯಾಯಗಳ ಚಳವಳಿಯಲ್ಲಿ ಭಾಗಿಯಾಗುತ್ತಿರುವವರು ಕೂಡ ಜಾತ್ಯತೀತತೆಯನ್ನು ತಾತ್ವಿಕವಾಗಿ ಒಪ್ಪಿದವರೇ ಆಗಿದ್ದಾರೆ. ಬೌದ್ಧ,  ಶರಣ, ಸೂಫಿ, ಮಂಟೇಸ್ವಾಮಿ, ಮಲೆಮಹದೇಶ್ವರ ಮಾರ್ಗಗಳನ್ನು ಆಧುನಿಕ ಕಾಲದಲ್ಲಿ ಹೊಸದಾಗಿ ವಿವರಿಸುತ್ತಿರುವ ಚಿಂತಕ, ಚಿಂತಕಿಯರು ಭಾರತದ ಧರ್ಮಗಳ ಒಳಗೇ ಇರುವ ಜಾತ್ಯತೀತ ಅಂಶಗಳನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಿದ್ದಾರೆ.

ಅದೇ ರೀತಿ, ಕಾಮ, ಪ್ರೇಮ, ಆಳವಾದ ರಾಷ್ಟ್ರೀಯತಾ ಭಾವ, ಸಮುದಾಯ ಪ್ರಜ್ಞೆ, ಅಸಲಿ ಆಧ್ಯಾತ್ಮ, ವೈಚಾರಿಕತೆ, ವೈಜ್ಞಾನಿಕ ನೋಟ, ಕರುಣೆ, ಮೇಲುಜಾತಿಯ ಜನರಲ್ಲಿರಬಹುದಾದ ನಿಜವಾದ ಪಾಪಪ್ರಜ್ಞೆ, ಸಂಸ್ಕೃತಿಯ ಸ್ವ-ಪರೀಕ್ಷೆ, ಮುಕ್ತತೆ, ತಾರುಣ್ಯದ ತೀವ್ರಸ್ಥಿತಿ, ಒಳಿತಿನ ಪ್ರಜ್ಞೆ, ಮುಗ್ಧತೆ… ಇವೇ ಮುಂತಾದ ಸ್ಥಿತಿಗಳಲ್ಲೂ ಭಾರತೀಯರು ಜಾತಿ ಮೀರಿ ನಡೆದುಕೊಳ್ಳಲೆತ್ನಿಸಿದ್ದಾರೆ. ಹಾಗೆಯೇ, ಹಿರಿಯರ ಅನಗತ್ಯ ಜಾತೀಯ ಹಾಗೂ ಮತೀಯ  ದುರ್ಮಾರ್ಗದರ್ಶನವಿಲ್ಲದ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾತ್ಯತೀತವಾಗಿ ವರ್ತಿಸುತ್ತಾ ಬಂದಿದ್ದಾರೆ. ಕರ್ನಾಟಕದ ಚುನಾವಣೆಗಳಲ್ಲಿ ಕೂಡ ಜನ ಆಗಾಗ್ಗೆ  ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸಿದ್ದಾರೆ. ನಗರಗಳಲ್ಲಿ ಹಾಗೂ ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಅಂತರ್ಜಾತೀಯ ವಿವಾಹಗಳು ಕೂಡ ಆಧುನಿಕ ವಲಯಗಳಲ್ಲಿ ಹಬ್ಬುತ್ತಿರುವ ಒಂದು ಮಟ್ಟದ ಜಾತ್ಯತೀತತೆಯನ್ನು ಸೂಚಿಸುತ್ತವೆ. ಆದರೆ, ಮೀಸಲಾತಿಯ ಪ್ರಶ್ನೆ ಬಂದಾಗ ಈ ಕಾರ್ಪೊರೇಟ್ ವಲಯದ ಜನ ಜಾತ್ಯತೀತವಾಗಿ ಯೋಚಿಸಲಾರರು ಎಂಬುದು ಈ ವಲಯದ ಜಾತ್ಯತೀತತೆಯ ಸೀಮಿತತೆಯನ್ನೂ ಸೂಚಿಸುತ್ತದೆ.

ಭಾರತೀಯ ಸಮಾಜದ  ಎಲ್ಲ  ಜಾತಿಗಳೂ ಭಾಗವಹಿಸುವ ಪ್ರಜಾಪ್ರಭುತ್ವದ ಸ್ವರೂಪದಿಂದಾಗಿ ಸರ್ಕಾರಗಳು ಜಾತ್ಯತೀತವಾಗಿ ವರ್ತಿಸಲೇಬೇಕಾದ ಅನಿವಾರ್ಯತೆಯೂ ಇದೆ. ಭಾರತೀಯ ಸಂವಿಧಾನದ ಬಗೆಬಗೆಯ ನಿರ್ದೆಶನಗಳಿಂದಾಗಿ ಹಾಗೂ ಸರ್ಕಾರಗಳನ್ನು ರೂಪಿಸಿದ ಕೆಲವು ರಾಜಕಾರಣಿಗಳು ಅಧಿಕಾರಿಗಳು ಹಾಗೂ ಸಲಹೆಗಾರರ ಆರೋಗ್ಯಕರ ನೋಟಗಳಿಂದಾಗಿ ಸರ್ಕಾರಿ ನೀತಿಗಳು ಹಾಗೂ ಯೋಜನೆಗಳಲ್ಲೂ ಜಾತ್ಯತೀತ ಚಿಂತನೆ ಕೆಲಸ ಮಾಡಿದೆ. ಉದ್ಯೋಗದಲ್ಲಿ ಮೀಸಲಾತಿ, ಎಲ್ಲ ಜಾತಿಯ ಹುಡುಗರೂ ಇರುವ ಹಿಂದುಳಿದ ವರ್ಗಗಳ ಹಾಸ್ಟೆಲುಗಳು, ಬಿ.ಡಿ.ಎ. ಸೈಟು ಹಂಚಿಕೆ, ವಿವಿಧ ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಯೋಜನೆಗಳು, ಸರ್ಕಾರಿ ಶಾಲಾಕಾಲೇಜುಗಳಲ್ಲಿ ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ  ಒದಗಿರುವ ವಿದ್ಯಾಭ್ಯಾಸದ ಅವಕಾಶಗಳು… ಇವೇ ಮುಂತಾದ ಸರ್ಕಾರಿ ಕಾರ್ಯಕ್ರಮಗಳಲ್ಲೂ ಜಾತ್ಯತೀತ ಚಿಂತನೆಯ ಎಳೆಗಳಿವೆ. ಕಾಂಗ್ರೆಸ್, ಜೆ.ಡಿ.ಎಸ್, ಬಹುಜನ ಸಮಾಜ ಪಕ್ಷಗಳು ಕೂಡ ತಮ್ಮ ಕೆಲ ಬಗೆಯ ಚಿಂತನೆ, ಕಾರ್ಯನೀತಿ ಹಾಗೂ ಕಾರ್ಯಕ್ರಮಗಳಲ್ಲಿ ಜಾತ್ಯತೀತತೆಯನ್ನು ಬಿಂಬಿಸುತ್ತಾ ಬಂದಿವೆ. ಎಷ್ಟೇ ಮತೀಯವಾದಿ ಧೋರಣೆಯಿದ್ದರೂ, ಬಿಜೆಪಿ ಥರದ ಸರ್ಕಾರಗಳು ಕೂಡ ಜಾತ್ಯತೀತವಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಇದೆ. ಇವೆಲ್ಲದಕ್ಕೂ ಒಂದು ದೃಷ್ಟಿಯಿಂದ ಭಾರತೀಯ ಸಂವಿಧಾನದ ಜಾತ್ಯತೀತ ತಳಹದಿಯೇ ಕಾರಣವಾಗಿದೆ.

2

ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಿಂದೀಚೆಗೆ ಹೆಡೆಯೆತ್ತಿದ ಕೋಮುವಾದದಿಂದಾಗಿ  ಜಾತ್ಯತೀತ  ಚಿಂತನೆಯ ಸ್ವರೂಪದಲ್ಲಿ ಮುಖ್ಯ ಪಲ್ಲಟವುಂಟಾಯಿತು. ಜಾತೀಯತೆಯ ಭಾಗವಾಗಿದ್ದ ನೀಚತನ, ಸಂಕುಚಿತತೆ, ಇತರ ಜಾತಿಗಳ ದಮನ ಹಾಗೂ ಅನ್ಯರ ಬಗ್ಗೆ ಅಸಹ್ಯ ಸೃಷ್ಟಿಸುವ ವಿಚಾರಗಳು ಕಳೆದ ಮೂರು ದಶಕಗಳಲ್ಲಿ ಬೆಳೆದ ಕೋಮುವಾದದ ಭಾಗವೂ ಆಗತೊಡಗಿದವು. ಜಾತೀಯತೆಯ ಭಾಗವಾಗಿದ್ದ ಫ್ಯಾಸಿಸ್ಟ  ಧೋರಣೆ ಕೋಮುವಾದಕ್ಕೂ ವರ್ಗಾವಣೆಗೊಂಡಿತು. ಅಸ್ಪೃಶ್ಯತೆಗೆ ಒಗ್ಗಿ ಹೋದ ಕಂದಾಚಾರಿ ಹಿಂದೂ ಮನಸ್ಸು ಹೊಸಹೊಸ ಅಸ್ಪೃಶ್ಯತೆಗಳನ್ನು ಸೃಷ್ಟಿಸಲಾರಂಭಿಸಿತು. ಮುಸ್ಲಿಮರು ಹಾಗೂ ಕ್ರಿಶ್ಚ್ಚಿಯನ್ನರ ಬಗೆಗೆ ಅಸ್ಪೃಶ್ಯತೆಯ ಭಾವವನ್ನು ಬೆಳೆಸತೊಡಗಿತು.  ಹಾಗೆಯೇ ಜನರ ಭಕ್ತಿ, ನಂಬಿಕೆಗಳ ದುರುಪಯೋಗ, ಚರಿತ್ರೆ ಹಾಗೂ ಚಾರಿತ್ರಿಕ ಬೆಳವಣಿಗೆಗಳ ವಿಕೃತ ವ್ಯಾಖ್ಯಾನ, ಧರ್ಮದ ದುರ್ಬಳಕೆಯ ಮೂಲಕ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಕುಟಿಲ ಯೋಜನೆಗಳು, ಪ್ರಬಲ ಜಾತಿಗಳ ಯಜಮಾನೀ ಹಿಡಿತ, ವೈದಿಕ ಹುನ್ನಾರಗಳು ಹಾಗೂ ವ್ಯಾಪಾರಿ ಶಕ್ತಿಗಳು ಕೂಡ ಕೋಮುವಾದವನ್ನು ಬೆಳೆಸಿವೆ, ಬೆಳೆಸುತ್ತಿವೆ. ಈ ದಿಸೆಯಲ್ಲಿ ಕೋಮುವಾದವನ್ನು ಬೆಳೆಸಲೆಂದೇ ಹುಟ್ಟಿರುವ ಆರ್.ಎಸ್.ಎಸ್. ವಿ.ಎಚ್.ಪಿ ಮತ್ತು ಅವುಗಳ ಅಂಗಸಂಸ್ಥೆಗಳು ಹಾಗೂ ಧರ್ಮಗುರುಗಳ  ಕುಮ್ಮಕ್ಕು ನೇರವಾಗಿಯೂ  ಹಿನ್ನೆಲೆಯಲ್ಲಿಯೂ ಕೆಲಸಮಾಡುತ್ತಿದೆ. ಬಹುಸಂಖ್ಯಾತ ಕೋಮುವಾದದಿಂದಾಗಿ ಜಮಾತೆ ಇಸ್ಲಾಮಿ ಥರದ ಅಲ್ಪಸಂಖ್ಯಾತ ಕೋಮುವಾದವೂ ತಲೆಯೆತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಧುನಿಕ ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಲ್ಲಿ ಜಾತೀಯತೆಯ ಜೊತೆಜೊತೆಗೇ, ಅದಕ್ಕಿಂತ  ಅಪಾಯಕಾರಿಯಾದ ಕೋಮುವಾದವೂ ಪ್ರಬಲವಾಗತೊಡಗಿತು. ಈ ಘಟ್ಟದಲ್ಲಿ, ಈ ಬರಹದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ಎಲ್ಲ ಜನತಾ ಚಳವಳಿಗಳೂ ಕ್ರಮೇಣ ಕೋಮುವಾದವನ್ನು ವಿರೋಧಿಸುವ ಹಾಗೂ ಜಾತ್ಯತೀತತೆಯನ್ನು ಬೆಂಬಲಿಸುವ ಹೋರಾಟಗಳ ಜೊತೆ ಸೇರಿದ್ದು ಸಹಜವಾಗಿತ್ತು ಮತ್ತು ಅನಿವಾರ್ಯವಾಗಿತ್ತು. ಬಹುಸಂಖ್ಯಾತರ ಕೋಮುವಾದದಿಂದ ಆತಂಕಕ್ಕೊಳಗಾದ ಅಲ್ಪಸಂಖ್ಯಾತ ಬುದ್ಧಿಜೀವಿಗಳ ಜೊತೆಗೆ, ಅಲ್ಪಸಂಖ್ಯಾತರ ಕೆಲವು ವೇದಿಕೆಗಳು ಕೂಡ ಈ ಹೋರಾಟಗಳ ಜೊತೆ ಸೇರಿಕೊಂಡವು. ಅಲ್ಪಸಂಖ್ಯಾತ ವಲಯದ ಬುದ್ಧಿಜೀವಿಗಳು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಗಳೆರಡನ್ನೂ ವಿರೋಧಿಸುವ  ಕೆಲಸ ಮಾಡಬೇಕಾಯಿತು.

ತೊಂಬತ್ತರ ದಶಕದ ಅಯೋಧ್ಯಾ ರಾಜಕೀಯ ಆರಂಭಿಸಿದ ಹಿಂಸಾಮಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಜಾತ್ಯತೀತ ಹೋರಾಟಕ್ಕೆ ನಿರ್ದಿಷ್ಟವಾದ  ಕೋಮುವಾದ ವಿರೋಧದ ಸ್ವರೂಪ ಸೇರಿಕೊಂಡಿತು. ಬಗೆಬಗೆಯ ಸಮಾಜಪರ ವೇದಿಕೆಗಳು ಒಂದಾಗಿ ಕೋಮುಸೌಹಾರ್ದ ವೇದಿಕೆಯನ್ನು ರೂಪಿಸಿದವು. ಆರಂಭದಲ್ಲಿ ಈ ವೇದಿಕೆಯನ್ನು ಬದ್ಧ ಎಡಪಂಥೀಯ ನಾಯಕರು ರೂಪಿಸಿದರೂ, ಕ್ರಮೇಣ ಅದರಲ್ಲಿ ಕರ್ನಾಟಕದ ದಲಿತ ಚಳವಳಿಯ ಹಲವು ಬಣಗಳು, ಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕುಗಳ ಕಾರ್ಯಕರ್ತರು, ಕಮ್ಯೂನಿಸ್ಟ ಪಕ್ಷಗಳಿಂದ ಹಿಡಿದು ಹಲಬಗೆಯ ಜಾತ್ಯತೀತ ವೇದಿಕೆಗಳು, ಸರ್ಕಾರೇತರ ಸಂಸ್ಥೆಗಳು, ಜಾತ್ಯತೀತ ಪತ್ರಕರ್ತರು, ಬರಹಗಾರ, ಬರಹಗಾರ್ತಿಯರು ಪ್ರಜಾಸತ್ತಾತ್ಮಕ ಸಂಘಟನೆಗಳು ಒಂದುಗೂಡಿದ್ದು ಕರ್ನಾಟಕದ ಚರಿತ್ರೆಯ ಮಹತ್ವದ ಬೆಳವಣಿಗೆಯೊಂದಕ್ಕೆ ಕಾರಣವಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸಲು  ಕೋಮುವಾದಿ ಶಕ್ತಿಗಳು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡ‌ನ್‍ಗಿ‌ರಿಯನ್ನು ನೆಪವಾಗಿಸಿಕೊಂಡ ಆ ಕಾಲಘಟ್ಟದಲ್ಲಿ ಕೋಮುಸೌಹಾರ್ದ ವೇದಿಕೆಯ  ಮೂಲಕ ಜಾತ್ಯತೀತ ಶಕ್ತಿಗಳು ಕರ್ನಾಟಕದ ಕೋಮುವಾದೀಕರಣಕ್ಕೆ ಪ್ರಬಲ ವಿರೋಧವೊಡ್ಡಿದವು. ’ಜನಮತ ಕೋಮುವಾದದ ವಿರುದ್ಧ ಕರ್ನಾಟಕ’ ಸಂಘಟನೆ ಕೂಡ ಕೆಲ ಕಾಲ ಕೋಮುವಾದದ ವಿರುದ್ಧ ಜನಮತವನ್ನು ರೂಪಿಸಿತು. ರಹಮತ್ ತರೀಕೆರೆ, ಎಸ್.ಎಸ್.ಹಿರೇಮಠ, ಜಿ.ರಾಜಶೇಖರ್, ಫಣಿರಾಜ್, ವಸು,  ಶಿವಸುಂದರ್, ಎಸ್.ಚಂದ್ರಶೇಖರ್ ಮೊದಲಾದವರು ಚರಿತ್ರೆ, ಸಾಹಿತ್ಯ, ಸಮಾಜವಿಜ್ಞಾನಗಳಲ್ಲಿ ನಡೆಸಿರುವ ಜವಾಬ್ದಾರಿಯುತ ಸಂಶೋಧನೆಗಳು ಕೋಮುವಾದದ ಪಿತೂರಿಗಳನ್ನು ಬಯಲಿಗೆಳೆಯುತ್ತಾ ಜಾತ್ಯತೀತ ಚಿಂತನೆಯನ್ನು ಬಲಪಡಿಸಿವೆ. ಎಂ.ಡಿ.ನಂಜುಂಡಸ್ವಾಮಿ, ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ಧಪ್ಪ, ರಾಜೇಂದ್ರ ಚೆನ್ನಿ, ಜಿ.ಕೆ.ಗೋವಿಂದರಾವ್, ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ್. ಕಿ.ರಂ.ನಾಗರಾಜ್, ಗಿರೀಶ್ ಕಾರ್ನಾಡ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಬಾನು ಮುಷ್ತಾಕ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣ, ದೇವನೂರ ಮಹಾದೇವ, ದಿನೇಶ್ಅಮೀನಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಶೂದ್ರ ಶ್ರೀನಿವಾಸ್, ಇಂದೂಧರ ಹೊನ್ನಾಪುರ, ಬಿ.ಎಂ.ಹನೀಫ್, ಸುಬ್ಬುಹೊಲೆಯಾರ್, ಗೌರಿ ಲಂಕೇಶ್, ಕೆ.ನೀಲಾ, ಅಗ್ನಿ ಶ್ರೀಧರ್, ಟಿ.ಕೆ.ತ್ಯಾಗರಾಜ್, ಅಬ್ದುಲ್ ಬಶೀರ್, ಬಂಜಗೆರೆ ಜಯಪ್ರಕಾಶ್, ಮೊಗಳ್ಳಿ ಗಣೇಶ್, ಬಿ.ಎಂ.ಪುಟ್ಟಯ್ಯ, ದು.ಸರಸ್ವತಿ, ಮಲ್ಲಿಕಾ ಘಂಟಿ ಹಾಗೂ ಇಲ್ಲಿ ಹೆಸರಿಸದ ಇದೇ ರೀತಿಯ ನೂರಾರು ಬರಹಗಾರರು, ಹೋರಾಟಗಾರರು ತಮ್ಮ ಚಿಂತನೆ ಹಾಗೂ ಕ್ರಿಯೆಗಳ ಮೂಲಕ ಕೋಮುವಾದಕ್ಕೆ ವಿರೋಧ ಒಡ್ಡುತ್ತಾ ಬಂದಿದ್ದಾರೆ. ಬಿ.ಶಾಮಸುಂದರ್, ಬಿ.ಕೃಷ್ಣಪ್ಪ, ಕೆ.ರಾಮದಾಸ್, ಕೆ,ಎಸ್.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ, ಕೆ.ಎಲ್.ಅಶೋಕ್, ಮಾವಳ್ಳಿ  ಶಂಕರ್, ಲಕ್ಮ್ಷೀನಾರಾಯಣ ನಾಗವಾರ, ಡಿ.ಜಿ.ಸಾಗರ್, ವೆಂಕಟಸ್ವಾಮಿ, ಗೋವಿಂದಯ್ಯ ಥರದ ಹೋರಾಟಗಾರರು ಕೋಮುವಾದದ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಾ ಬಂದಿದ್ದಾರೆ. ಹಿಂದೂ ಕೋಮುವಾದವನ್ನು ವಿರೋಧಿಸುವ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮುರುಘಾ ಶರಣರು, ಗದುಗಿನ ತೋಂಟದಾರ್‍ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರಂಥ ಕೆಲವು ಉದಾರವಾದಿ ಲಿಂಗಾಯತ ಹಾಗೂ ಶೂದ್ರ ಜಾತಿಗಳ ಧರ್ಮಗುರುಗಳು, ಫಾದರ್ ಚೆಸರಾ ಥರದ ಕ್ರೈಸ್ತ ಪಾದ್ರಿಗಳು ಕೂಡ ಕೋಮುವಾದ ವಿರೋಧಿ ಹೋರಾಟಗಳಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತಳವೂರಿದ ಮೇಲೆ ಬೇರೆ ಬೇರೆ ರೀತಿಯಲ್ಲಿ ಧ್ರುವೀಕರಣಗೊಳ್ಳತೊಡಗಿದ ಜಾತೀಯ ಹಾಗೂ  ಮತೀಯ ಶಕ್ತಿಗಳಿಗೆ ಇವತ್ತಿಗೂ ಹಲಬಗೆಯ ಜಾತ್ಯತೀತ ವೇದಿಕೆಗಳು, ಗಾಂಧೀವಾದಿಗಳು, ಎಡಪಂಥೀಯರು, ಸಮಾಜವಾದಿಗಳು, ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ವಿರೋಧ ತೋರಿಸುತ್ತಲೇ ಇವೆ. ಈ ವಿರೋಧವು  ಪತ್ರಿಕೆಗಳು, ಪ್ರತಿಭಟನೆ, ಸಾಹಿತ್ಯ, ಬರಹ, ಸಂವಾದ, ವಿಚಾರ ಸಂಕಿರಣ, ಬೋಧನೆ ಹಾಗೂ ಕಾರ್ಯಕ್ರಮಗಳ ಮೂಲಕ  ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ.

3

ಕರ್ನಾಟಕದ ಟಿಪಿಕಲ್ ಸೆಕ್ಯುಲರ್ ಪ್ರಜ್ಞೆ  ಏಕಕಾಲಕ್ಕೆ ಜಾತಿವಿರೋಧಿ ಹಾಗೂ ಕೋಮುವಾದ ವಿರೋಧಿ ಎರಡೂ ಆಗಿದೆ. ಆದರೆ ಕರ್ನಾಟಕದಲ್ಲಿ  ಈ ಬಗೆಯ ಸೆಕ್ಯುಲರ್ ಪ್ರಜ್ಞೆ  ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಇರುವ ಕೆಲವು  ತೊಡಕುಗಳನ್ನೂ ಸರಿಯಾಗಿ ಗಮನಿಸಬೇಕು. ಸಮಾಜಪರ ಕೆಲಸದಲ್ಲಿ ಭಾಗಿಯಾಗಿರುವ ಅನೇಕ ಸಂಘಟನೆಗಳಿಗೆ ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವು ಹಾಗೂ ಅರಿವು ಇಲ್ಲದಿರುವುದು ಕೂಡ ಒಂದು ಮುಖ್ಯ ಸಮಸ್ಯೆಯೇ ಆಗಿದೆ. ಉದಾಹರಣೆಗೆ, ಅರಸು ಆಡಳಿತ ಹಾಗೂ ಆನಂತರದ ಕೆಲವು ಘಟ್ಟಗಳಲ್ಲಿ ಹಿಂದುಳಿದ ವರ್ಗಗಳು ಹಾಗೂ ಹಿಂದುಳಿದ ಜಾತಿಗಳ ಮರು ಧೃವೀಕರಣವಾದಾಗ ಅವುಗಳ ನಾಯಕರು ಜಾತಿವಿನಾಶ ಹಾಗೂ ಜಾತ್ಯತೀತತೆಯ ಅಂಶಗಳನ್ನು ಈ ಚಳವಳಿಯ ಜೊತೆಗೆ ಸಮರ್ಥವಾಗಿ ಬೆಸೆಯಲಾರದೆ ಹೋದರು. ಅಲ್ಪಸಂಖ್ಯಾತ, ಹಿಂದುಳಿದ ದಲಿತರನ್ನು ಒಗ್ಗೂಡಿಸಲು ಯತ್ನಿಸಿದ ’ಅಹಿಂದ’ದ ಪರಿಕಲ್ಪನೆ ಕೂಡ ಜಾತ್ಯತೀತ ಕಲ್ಪನೆಯಾಗಿ ವಿಕಾಸಗೊಳ್ಳಲಿಲ್ಲ. ಯಜಮಾನೀ ಜಾತಿಗಳ ಹಿಡಿತದಿಂದ ನರಳಿರುವ ಹಿಂದುಳಿದ ಜಾತಿಗಳು ಒಗ್ಗೂಡಿದ ಘಟ್ಟದಲ್ಲಿ, ಜಾತಿಪದ್ಧತಿಗೆ ಮಾರಣಾಂತಿಕ ಹೊಡೆತ ಕೊಡುವುದರ ಮೂಲಕವೇ ಹಿಂದುಳಿದವರ ನಿಜವಾದ ಬಿಡುಗಡೆ ಸಾಧ್ಯ ಎಂಬ ಮುಖ್ಯ ಸತ್ಯವನ್ನು ಈ ಜಾತಿಗಳ ನಾಯಕರು ಮರೆತರು. ಬದಲಿಗೆ ತಂತಮ್ಮ ಜಾತಿಗಳ ಜನರನ್ನು ಒಗ್ಗೂಡಿಸುವುದರ ಮೂಲಕ ಸಣ್ಣಪುಟ್ಟ ನಾಯಕತ್ವ ಪಡೆಯಲು ಈ  ನಾಯಕರು ಮುಂದಾದರು. ಹಿಂದುಳಿದ ಜಾತಿಗಳ ಕೆಲವು ನಾಯಕರಲ್ಲಿ ಇದ್ದ ಒಂದು ಮಟ್ಟದ ಜಾತ್ಯತೀತ ಪ್ರಜ್ಞೆ ಅವರ ಹಿಂದುಳಿದ ಜಾತಿಗಳ ಅನುಯಾಯಿಗಳಿಗೆ ವರ್ಗಾವಣೆಯಾಗಲಿಲ್ಲ. ದಲಿತ ಸಂಘರ್ಷ ಸಮಿತಿಗಳ ಮೂಲಕ ದಲಿತ ಪ್ರಜ್ಞೆ  ಹಾಗೂ ಜಾತ್ಯತೀತ ಪ್ರಜ್ಞೆಗಳು ದಲಿತ ಸಮುದಾಯಗಳಲ್ಲಿ ಬೆಳೆದಂತೆ, ಹಿಂದುಳಿದ ವರ್ಗಗಳ ಚಳವಳಿಯ ಮೂಲಕ  ಹಿಂದುಳಿದ ಜಾತಿಗಳಲ್ಲಿ ಶೂದ್ರಪ್ರಜ್ಞೆ ಹಾಗೂ ಜಾತ್ಯತೀತ ಪ್ರಜ್ಞೆಗಳು ಬೆಳೆಯಲಿಲ್ಲ. ಹೀಗಾಗಿ, ಹಿಂದುಳಿದ ಜಾತಿಗಳ ಹುಡುಗರು ಭಜರಂಗ ದಳದಂಥ ಕ್ರೂರ ಮತೀಯ ವೇದಿಕೆಗಳ ಸೇವಕ ವರ್ಗವಾಗುವ ಹೀನಾಯಸ್ಥಿತಿ ತಲುಪಿ, ಕೋಮುವಾದಿ ಹಿಂಸೆಯನ್ನು ಬಿತ್ತುವವರ ದಾಳಗಳಾದರು. ಜಾತಿವಿರೋಧದ ಆಶಯವಿರುವ ಬಹುಜನ ಸಮಾಜ ಪಕ್ಷ ಕೂಡ ಬರಬರುತ್ತಾ, ’ಜಾತಿವಿನಾಶಕ್ಕಿಂತ ಜಾತಿಗಳ ಒಗ್ಗೂಡುವಿಕೆಯ ಮೂಲಕವೇ ಬಹುಜನರು ಅಧಿಕಾರ ಹಿಡಿಯಬೇಕು’ ಎಂದು ವಾದಿಸಿದ ಕಾನ್ಶೀರಾಮ್ ಅವರ ಚಿಂತನೆಯಿಂದ  ಹೆಚ್ಚು ಪ್ರಭಾವಿತವಾಯಿತು.

ಸಾಂಸ್ಕೃತಿಕ ಕೇಂದ್ರಗಳಲ್ಲಿರುವ ಅನೇಕ ಉದಾರವಾದಿ ಗುಂಪುಗಳು ಜಾತಿವಿರೋಧ ಹಾಗೂ ಜಾತ್ಯತೀತತೆಯ ಬಗ್ಗೆ ಇನ್ನೂ  ಸ್ಪಷ್ಟವಿದ್ದಂತಿಲ್ಲ. ಅಲ್ಲದೆ, ಸೆಕ್ಯುಲರ್ ಪ್ರಜ್ಞೆಯ ವ್ಯಕ್ತಿಗಳು ಹಾಗೂ ವೇದಿಕೆಗಳ ಜೊತೆಗೆ  ಬುದ್ಧಿಜೀವಿ ವರ್ಗದ ಬಹು ದೊಡ್ಡ ಭಾಗವಾದ ಲಾಯರುಗಳು, ಇಂಜಿನಿಯರ್‌‍ಗಳು, ವಿಜ್ಞಾನಿಗಳು, ಡಾಕ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ  ಸೇರಿದಂತೆ ಕಾಣುತ್ತಿಲ್ಲ. ಸ್ತ್ರೀವಾದಿಗಳು ಜಾತೀಯತೆ ಹಾಗೂ ಕೋಮುವಾದಕ್ಕೆ ವಿರೋಧ ತೋರುತ್ತಾ ಬಂದಿದ್ದರೂ, ಮಹಿಳೆಯರನ್ನು ಉದ್ದೇಶಿಸಿ ಬರೆದಾಗ, ಮಾತಾಡಿದಾಗ ಈ ಸಮಸ್ಯೆಯನ್ನು ಹೆಚ್ಚು ಮುಖ್ಯವಾಗಿ ಪರಿಗಣಿಸಿದಂತಿಲ್ಲ. ಕೋಮುವಾದದಿಂದ ಅಪಾರ ಅಪಾಯಕ್ಕೆ ಒಳಗಾಗುವ ಹಾಗೂ ಕೋಮುವಾದ ಹಬ್ಬಿಸುವ ಕಂದಾಚಾರದಿಂದಾಗಿ ತಮ್ಮ ಅವಕಾಶಗಳನ್ನು ಹಾಗೂ ಚಲನೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮಹಿಳೆಯರಿಗೆ ಕೋಮುವಾದದ ಬಗ್ಗೆ ವ್ಯಾಪಕ ಎಚ್ಚರ ಮೂಡಿಸಲು ಸ್ತ್ರೀವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಮಹಿಳೆಯರು ಪುರುಷರು ಬಿತ್ತುವ ಕೋಮು ಪೂರ್ವಗ್ರಹದ ಬಲಿಪಶುಗಳೂ ಆಗಿದ್ದಾರೆ. ತಮಗರಿವಿಲ್ಲದೆಯೇ ಆ ಪೂರ್ವಗ್ರಹವನ್ನು ಹಬ್ಬಿಸುವ ಪ್ರಸಾರಕೇಂದ್ರಗಳೂ ಆಗಿದ್ದಾರೆ. ಈ ಅಪಾಯವನ್ನು ನಮ್ಮ ಸ್ತ್ರೀವಾದಿಗಳು  ದೊಡ್ಡ ಮಟ್ಟದಲ್ಲಿ ಗ್ರಹಿಸಿ ವಿವರಿಸಿದಂತಿಲ್ಲ. ಕೋಮುವಾದ ಕುರಿತಂತೆ ವಿದ್ಯಾರ್ಥಿ ಸಮುದಾಯವನ್ನು ಎಚ್ಚರಿಸುತ್ತಾ, ಜಾತ್ಯತೀತತೆಯನ್ನು ಬೆಳೆಸುವ  ಕೆಲಸ ದಲಿತ ಚಳವಳಿ ಹಾಗೂ ಎಸ್.ಎಫ್.ಐ ಥರದ  ಕೆಲವೇ ಸಂಘಟನೆಗಳು ಹಾಗೂ ಬಿಡಿ ಬಿಡಿ ವ್ಯಕ್ತಿಗಳ ಮಟ್ಟದಲ್ಲಿ  ಮಾತ್ರ ನಡೆಯುತ್ತಾ ಬಂದಿದೆಯೇ ಹೊರತು ಉಳಿದ ವೇದಿಕೆಗಳು ಇತ್ತ  ಹೆಚ್ಚು ಗಮನ ಕೊಟ್ಟಂತಿಲ್ಲ.

ಕರ್ನಾಟಕದ ವಿವಿಧ ಸಮುದಾಯಗಳು ಅನುಸರಿಸುತ್ತಿರುವ ಹಲವು ಧರ್ಮಗಳಲ್ಲಿ ಇರಬಹುದಾದ ಒಂದು ಮಟ್ಟದ ಜಾತ್ಯತೀತ ಲಕ್ಷಣಗಳಿಗೂ ಕೋಮುವಾದದಿಂದಾಗಿ ಹಾಗೂಈ ಧರ್ಮಗಳ ಒಳಗೇ ಇರುವ ಸನಾತನ ಧೋರಣೆಯಿಂದಾಗಿ ಹಿನ್ನಡೆಯಾದಂತಿದೆ. ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಧರ್ಮಗಳಲ್ಲಿ ಮನುಧರ್ಮವನ್ನು ಹಾಗೂ ವೈದಿಕ ಹಿಂದೂ ಧರ್ಮವನ್ನು ಪೋಷಿಸುತ್ತಾ ಬಂದಿರುವ ಸ್ಮಾರ್ತ ಹಾಗೂ ಮಾಧ್ವ ಧರ್ಮಗಳನ್ನು ಬಿಟ್ಟರೆ ಉಳಿದ ಅನೇಕ ಧರ್ಮಗಳ ನೋಟಕ್ರಮಗಳು ಚರಿತ್ರೆಯಲ್ಲಿ ಜಾತಿಪದ್ಧತಿಗೆ ಒಂದಲ್ಲ ಒಂದು ಬಗೆಯ ಭಿನ್ನಮತವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಲಿಂಗಾಯತ ಧರ್ಮ, ಜೈನಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಸೂಫಿ ಮಾರ್ಗ, ಮಂಟೇಸ್ವಾಮಿ, ಮಲೆಮಾದೇಶ್ವರ ಚಿಂತನಾ ಕ್ರಮಗಳು ಜಾತಿಪದ್ಧತಿಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿವೆ. ಆದರೆ ಈಚಿನ ದಶಕಗಳಲ್ಲಿ  ಜೈನ, ಲಿಂಗಾಯತ, ಸಿಖ್ ಮಾರ್ಗಗಳು ತಮ್ಮ ಧರ್ಮಗಳ ಮೂಲದಲ್ಲಿರುವ ಜಾತ್ಯತೀತ ಸತ್ವವನ್ನೇ ನಾಶಮಾಡಿಕೊಂಡಂತೆ ಕಾಣುತ್ತದೆ. ಈ ಸ್ಥಿತಿಗೆ ಆಯಾ ಧರ್ಮಗಳ ಉದಾರ ಗುಣಗಳನ್ನು ಅವುಗಳ ಒಳಗಿದ್ದೇ ನಾಶ ಮಾಡುತ್ತಿರುವ ಪೂಜಾರಿ, ಪುರೋಹಿತರೂ, ಈ ಧರ್ಮಗಳ ಅಸ್ತಿತ್ವವನ್ನು ಇಲ್ಲವಾಗಿಸಲು ಯತ್ನಿಸುತ್ತಾ ಬಂದಿರುವ ವೈದಿಕರೂ ಕಾರಣರಾಗಿದ್ದಾರೆ. ’ಜಾತಿ ಸಹಜ ಅಲ್ಲ, ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ’ ಎಂಬ ತತ್ವದ ಮೇಲೆ ನಿಂತಿರುವ ಬೌದ್ಧ ಧರ್ಮ ಮಾತ್ರ ದಲಿತ ಚಳವಳಿಯ ಜೊತೆ ಬೆರೆತಿರುವ ಕಾರಣದಿಂದಾಗಿ ಇಂದಿಗೂ ಜಾತ್ಯತೀತ ತತ್ವವನ್ನು ಉಳಿಸಿಕೊಂಡೇ ಬೆಳೆಯುತ್ತಿದೆ.

ದೇಶದ ಎಲ್ಲೆಡೆ ಜಾತ್ಯತೀತ ಆಂದೋಲನದಲ್ಲಿರುವ ಒಂದು ಮುಖ್ಯ ಸಮಸ್ಯೆ ಕರ್ನಾಟಕದ ಜಾತ್ಯತೀತ ಆಂದೋಲನದಲ್ಲೂ ಇದೆ. ಅದೇನೆಂದರೆ, ಈ ಆಂದೋಲನ ಮತೀಯವಾದಿಗಳು ಒಡ್ಡುವ ಸಮಸ್ಯೆಗಳ ಸಂದರ್ಭದಲ್ಲಿ  ಹೆಚ್ಚು ಜಾಗೃತವಾಗುತ್ತದೆ. ಉಳಿದಂತೆ ಅದು ಅಲ್ಪತೃಪ್ತ ಸ್ಥಿತಿಯಲ್ಲಿರತೊಡಗುತ್ತದೆ.  ಸಾಮಾನ್ಯವಾಗಿ ಕೇಡನ್ನು ಸೃಷ್ಟಿಸುವವರಿಗೆ ಇರುವ  ದುರುಳ ಏಕೋದ್ದೇಶ ಹಾಗೂ ಜಿಗುಟುತನ ಒಳಿತಿನ ಪರವಾಗಿರುವವರಿಗೆ ಇರುವುದಿಲ್ಲ. ಯಥಾಸ್ಥಿತಿವಾದಿಗಳಿಂದ, ರಾಜಕೀಯ ಪಕ್ಷಗಳಿಂದ ಹಾಗೂ ಮತೀಯ ಶಕ್ತಿಗಳಿಂದ ಹಣ ಹಾಗೂ ಇನ್ನಿತರ ಬಗೆಯ ಬೆಂಬಲ ಪಡೆವ ಕೋಮುವಾದಿಗಳು ಸದಾ ಒಂದಲ್ಲ ಒಂದು ಸಂಚು ಮಾಡಿ ಸಮಾಜದ ಸಮತೋಲನ ಕೆಡಿಸುತ್ತಲೇ ಇರುತ್ತಾರೆ. ಈ ಸಂಚುಗಳನ್ನು  ಸಮಾಜ ವಿರೋಧಿ ಅಪರಾಧಗಳೆಂದು ಪರಿಗಣಿಸಿ ಮಟ್ಟ ಹಾಕುವುದು ಸರ್ಕಾರಗಳ ಕರ್ತವ್ಯ. ಈ ಕೆಲಸವನ್ನು ಜಾತ್ಯತೀತವಾದಿಗಳೇ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ, ಬಲಪಂಥೀಯ ಗುಂಪುಗಳು, ಧಾರ್ಮಿಕ ವೇದಿಕೆಗಳು, ಕೋಮುವಾದಿ ಪೋಲೀಸರು, ಅಧಿಕಾರಿಗಳು, ಮಾಧ್ಯಮಗಳಲ್ಲಿ ನುಸುಳಿಕೊಂಡಿರುವ ಕೋಮುವಾದಿಗಳು ವಿಚ್ಛಿದ್ರಕಾರಿ ಕೋಮು ಶಕ್ತಿಗಳಿಗೆ ಬಲ ತುಂಬುತ್ತಿರುವ ಕ್ರಮಗಳ ಬಗೆಗೆ ಸರ್ಕಾರಗಳನ್ನು ಹಾಗೂ ಜನರನ್ನು ಎಚ್ಚರಿಸುವ ಕೆಲಸವನ್ನಂತೂ ಜಾತ್ಯತೀತ ಶಕ್ತಿಗಳು ನಿರಂತರವಾಗಿ ಮಾಡುತ್ತಿರಬೇಕಾಗುತ್ತದೆ. ಸರ್ಕಾರಗಳೇ ಮತೀಯವಾದಾಗ ಈ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.

ಹಾಗೆಯೇ, ಜಾತ್ಯತೀತತೆ ಎನ್ನುವುದು ಕೇವಲ ಕೋಮುವಾದ ಹುಟ್ಟು ಹಾಕುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಜಾತ್ಯತೀತತೆಯನ್ನು  ಒಂದು ವಿಶಾಲ ನೋಟಕ್ರಮವಾಗಿ ಬೆಳೆಸಿ, ಜಾತ್ಯತೀತ ಮೌಲ್ಯಗಳನ್ನು, ಆಶಯಗಳನ್ನು ಜನರ ಜೀವನಕ್ರಮದ ಭಾಗವಾಗಿ ಬೆಳೆಸಲು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಜಾತ್ಯತೀತತೆ ಎನ್ನುವುದು ನಾವೂ ನೆಮ್ಮದಿಯಿಂದ ಬದುಕಿ ನಮ್ಮ ಸುತ್ತಲಿನವರನ್ನೂ ನೆಮ್ಮದಿಯಿಂದ ಬದುಕಲು ನೆರವಾಗುವ ಉದಾತ್ತ ಜೀವನಕ್ರಮ ಎಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಿರಬೇಕಾಗುತ್ತದೆ. ಆಧುನಿಕ ಭಾರತದಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಸ್ಕೂಲು, ಆಸ್ಪತ್ರೆಗಳಿಂದ ಹಿಡಿದು ಯಾವ ಆಧುನಿಕ ಸಂಸ್ಥೆಗಳೂ ಇರುತ್ತಿರಲಿಲ್ಲ ಹಾಗೂ ಶೋಷಿತ ವರ್ಗಗಳ ಬಿಡುಗಡೆ ಅಸಾಧ್ಯವಾಗುತ್ತಿತ್ತು ಎಂಬ ಸರಳ ಸತ್ಯವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಜೊತಗೆ.  ಕೋಮುವಾದದ ವಿಷದ  ಬಗೆಗೆ ಹಾಗೂ ಅದರ ಭೀಕರತೆಯ ಬಗೆಗೆ ಎಲ್ಲ ತಲೆಮಾರಿನ ಜನರನ್ನೂ ಎಚ್ಚರಿಸುತ್ತಿರಬೇಕಾಗುತ್ತದೆ. ನಮ್ಮ ನಿಲುವು, ಬರಹ, ಮಾತು, ಕಾರ್ಯಕ್ರಮ, ರಾಜಕೀಯ ಹಾಗೂ ಸಾಮಾಜಿಕ ಆಯ್ಕೆಗಳು…  ಮುಂತಾಗಿ ಎಲ್ಲ ವಲಯಗಳಲ್ಲೂ ಜಾತಿವಿನಾಶ, ಜಾತಿವಿರೋಧ, ಜಾತ್ಯತೀತತೆ ಹಾಗೂ ಧರ್ಮಾತೀತತೆಗಳು ಬೆಸೆದುಕೊಂಡೇ ಇರಬೇಕಾಗುತ್ತದೆ. ಅದರ ಜೊತೆಗೆ, ಜನಪರವಾದ ಚಳವಳಿಗಳಲ್ಲಿ ಭಾಗಿಯಾಗುವವರು ಜನರ ಕಷ್ಟಗಳನ್ನು ಹಂಚಿಕೊಳ್ಳುವ ಬಗೆಬಗೆಯ ವೇದಿಕೆಗಳಿಗೆ ನೆರವಾಗುತ್ತಾ ಜಾತ್ಯತೀತ ಮನೋಭಾವವನ್ನು ಹಬ್ಬಿಸಬೇಕಾಗುತ್ತದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮನಸ್ಸು ಜಾತೀಯತೆ ಹಾಗೂ ಕೋಮುಭಾವನೆಗಳಿಂದ ವಿಕಾರಗೊಳ್ಳದ ಹಾಗೆ ನೋಡಿಕೊಳ್ಳುವ ಕೆಲಸ ಲಕ್ಷಾಂತರ ಶಿಕ್ಷಕ, ಶಿಕ್ಷಕಿಯರ ಮೇಲೂ ಇದೆ. ಅದೇ ವೇಳೆಗೆ ಬಹುಸಂಖ್ಯಾತರ  ಕೋಮುವಾದಕ್ಕೆ ಪ್ರತಿಯಾಗಿ ಹುಟ್ಟುವ ಅಲ್ಪಸಂಖ್ಯಾತರ ಕೋಮುವಾದದ ಅಪಾಯದ ಬಗೆಗೂ ಕೂಡ ಜಾತ್ಯತೀತರು ಎಚ್ಚರವಾಗಿರಬೇಕಾಗುತ್ತದೆ. ಹಿಂದೂ ಕೋಮುವಾದದಿಂದ ಹಿಂದೂಜಾತಿಗಳ ದುರ್ಬಲರಿಗೆ  ಅನ್ಯಾಯವಾದಂತೆ, ಮುಸ್ಲಿಂ ಮೂಲಭೂತವಾದದಿಂದ ಬಡಮುಸ್ಲಿಮರಿಗೂ ಅನ್ಯಾಯವಾಗುತ್ತದೆ. ಲಂಕೇಶ್, ಅಥವಾ ತೇಜಸ್ವಿ ಥರದವರು ತೋರಿಸಿಕೊಟ್ಟಂತೆ ಸೆಕ್ಯುಲರ್ ಆಗಿರುವುದೆಂದರೆ ಎಲ್ಲ ಬಗೆಯ ಕೋಮುವಾದವನ್ನೂ ವಿರೋಧಿಸುವುದು ಎಂಬುದನ್ನು ನಾವು ಮರೆಯಬಾರದು. ಒಂದು ಬಗೆಯ ಕೋಮುವಾದದ ಬಗ್ಗೆ ಯೋಜಿತ ಮೌನದಿಂದಿರುವುದು ಕೂಡ  ತಪ್ಪು ಎಂಬುದನ್ನು ಲೋಹಿಯಾರಂಥ  ಚಿಂತಕರು ನಮಗೆ ಮನವರಿಕೆ ಮಾಡಿಕೊಟ್ಟಿರುವುದನ್ನು ಕಡೆಗಣಿಸಬಾರದು. ಈ ಎಲ್ಲದರ ನಡುವೆಯೂ ಭಾರತದ ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳನ್ನೂ ಆಯಾ ಧರ್ಮಗಳ ಪುರೋಹಿತಶಾಹಿಗಳ ಹಿಡಿತದಿಂದ ಹೊರತರುವ ದಿಕ್ಕಿನಲ್ಲೂ ಯೋಚಿಸಬೇಕಾಗುತ್ತದೆ. ಹಾಗೆಯೇ, ಕೋಮು ಭಾವನೆಗಳನ್ನು ಬೆಳೆಸುವ ದುರುಳ ವೇದಿಕೆಗಳ ವ್ಯಾಖ್ಯಾನಗಳನ್ನು, ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಗಾಳಿಸುದ್ದಿಗಳಾಗಿ ಹಬ್ಬಿಸುವ ಬೇಜವಾಬ್ದಾರಿ ಮಧ್ಯಮ ವರ್ಗದ ವಾಚಾಳಿಗಳ ಪೂರ್ವಗ್ರಹ ಹಾಗೂ ಅಜ್ಞಾನಗಳನ್ನು ತಿದ್ದುವ ಕೆಲಸವನ್ನೂ ಮಾಡುತ್ತಿರಬೇಕಾಗುತ್ತದೆ.

ಸಂವಿಧಾನದ ಮೂಲ ಆಶಯವಾದ ಹಾಗೂ ಭಾರತದ ಉಳಿವಿಗೆ ಅತ್ಯಗತ್ಯವಾದ ಸೆಕ್ಯುಲರಿಸಮ್ಮನ್ನು ಅಪಾರ ಎಚ್ಚರದಿಂದ, ನಿರಂತರವಾಗಿ ಪೊರೆಯದಿದ್ದರೆ ಭಾರತದ ವರ್ತಮಾನ ಹಾಗೂ ಭವಿಷ್ಯಗಳೆರಡೂ ಗಂಡಾಂತರದಲ್ಲಿರುತ್ತವೆ ಎಂಬ ಕಠೋರ ಸತ್ಯವನ್ನು ಎಲ್ಲ ಭಾರತೀಯರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಜಾತ್ಯತೀತರ ಮೇಲೇ ಇದೆ ಎಂಬುದನ್ನು ಮರೆಯಬಾರದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)

One thought on “ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ

  1. Ananda Prasad

    ಧಾರ್ಮಿಕ ಮೂಲಭೂತವಾದ ಹಾಗೂ ಜಾತಿವಾದ ಇಂದು ವ್ಯವಸ್ಥಿತವಾಗಿ ಉನ್ನತ ವಿದ್ಯಾಭ್ಯಾಸ ಹೊಂದಿದ ವ್ಯಕ್ತಿಗಳಿಂದಲೇ ಸಂಘಟಿತವಾಗಿ ಹಬ್ಬಿಸಲ್ಪಡುತ್ತಿದೆ. ಧಾರ್ಮಿಕ ಮೂಲಭೂತವಾದಿಗಳು ಹಾಗೂ ಜಾತಿವಾದಿಗಳು ಸಂಘಟಿತವಾದಷ್ಟು ಜಾತ್ಯಾತೀತ ಮನೋಭಾವದವರು ಸಂಘಟಿತರಾಗಿಲ್ಲ. ಅತ್ಯಂತ ಉನ್ನತ ಬೌದ್ಧಿಕ ಕ್ಷೇತ್ರವಾದ ಸಾಫ್ಟ್ ವೇರ್ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿಗಳೂ ಇಂಥ ಮೂಲಭೂತವಾದ ಹಾಗೂ ಮೂಢ ನಂಬಿಕೆಗಳ ಪುನರುತ್ಥಾನಕ್ಕೆ ಶ್ರಮಿಸುತ್ತಿರುವುದು ವಿಚಿತ್ರವಾಗಿದೆ ಹಾಗೂ ಅವರಿಗೆ ಸಂವಿಧಾನದಲ್ಲಿ ಜಾತ್ಯತೀತತೆಯನ್ನು ಅಳವಡಿಸಿರುವುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಉನ್ನತ ಬೌದ್ಧಿಕ ಸಾಮರ್ಥ್ಯ ಇರುವ ವ್ಯಕ್ತಿಗಳ ವೈಚಾರಿಕ ದಾರಿದ್ರ್ಯ ಈ ದೇಶದ ಪುರೋಹಿತಶಾಹಿಯ ಬಲವರ್ಧನೆಗೆ ಸಹಕಾರಿಯಾಗಿದೆ.

    Reply

Leave a Reply

Your email address will not be published. Required fields are marked *