ನಮ್ಮ ಗಣರಾಜ್ಯ ಎತ್ತ ಸಾಗಿದೆ?

-ಪ್ರೊ. ಬರಗೂರು ರಾಮಚಂದ್ರಪ್ಪ

1950 ಜನವರಿ 26 ರಂದು ಅನುಷ್ಠಾನಕ್ಕೆ ಬಂದ ನಮ್ಮ ಸಂವಿಧಾನದ ಪ್ರಕಾರ ನಮ್ಮ ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಇದು ಇಂಡಿಯಾದ ರಾಜಕೀಯ ಚರಿತ್ರೆಯಲ್ಲಿ ಒಂದು ಮುಖ್ಯ ಘಟ್ಟ; ಬ್ರಿಟಿಷರಿಂದ ಬಿಡುಗಡೆಗೊಳಿಸಲ್ಪಟ್ಟ ನಮ್ಮ ದೇಶವು ತಾಂತ್ರಿಕವಾಗಿ ಒಂದು ನಿರ್ದಿಷ್ಟ ವಿಧಿವಿಧಾನವನ್ನು ಒಪ್ಪಿಕೊಂಡ ಘಟ್ಟ. ಆದರೆ ಯಾವುದೇ ಗಣರಾಜ್ಯಕ್ಕೆ ತನ್ನ ತಾಂತ್ರಿಕ ನೆಲೆಯೊಂದೇ ಮೂಲ ಸತ್ವವಾಗುವುದಿಲ್ಲ. ಈ ತಾಂತ್ರಿಕ ನೆಲೆಯು ರಾಜಕೀಯ ಸ್ವಾತಂತ್ರ್ಯವನ್ನು ಪ್ರಕಟಿಸುವ ಒಂದು ಸಾಧನ. ಈ ಸಾಧನವನ್ನು ಬಳಸುತ್ತಲೇ ಅದನ್ನು ಮೀರಿದ ಅರ್ಥಪೂರ್ಣ ಬದಲಾವಣೆಗಳನ್ನು ತರದಿದ್ದರೆ ಆ ತಾಂತ್ರಿಕ ನೆಲೆಯು ತಾತ್ವಿಕ ನೆಲೆಯಾಗಿ ಬೇರು ಬಿಡುವುದಿಲ್ಲ.

ಈ ರಾಜಕೀಯ ಸ್ವತಂತ್ರ್ಯವು ಆರ್ಥಿಕ  ಸಾಮಾಜಿಕ ಸಮಾನತೆಯನ್ನು ತರಲು ವಿಫಲವಾದರೆ ಅನ್ಯಾಯಕ್ಕೆ ಒಳಗಾದ ಜನ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿಯಾರು ಎಂಬ ಎಚ್ಚರಿಕೆಯ ಮಾತನ್ನು ಅಂಬೇಡ್ಕರ್ ಆಡಿದಾಗ ಅದರ ಹಿನ್ನೆಲೆಯಲ್ಲಿ ಕಾಳಜಿ ಎಂದರೆ ಸಮಗ್ರ ಸಾಮಾಜಿಕ ಬದಲಾವಣೆ, ಈ ಬದಲಾವಣೆಯ ಸ್ವರೂಪ ಕುರಿತಂತೆ ಭಿನ್ನಾಭಿಪ್ರಾಯಗಳು ಇರಬಹುದಾದರೂ ಗಣರಾಜ್ಯದ ಅರ್ಥಪೂರ್ಣತೆ ಇರುವುದಂತೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಬೆಲೆ ತರುತ್ತ, ಅದರ ಬೇರುಗಳನ್ನು ಭದ್ರಮಾಡುತ್ತದೆ.

ಆದರೆ ನಮ್ಮ ಸಂವಿಧಾನವು ಮೂಲತಃ ತಾಂತ್ರಿಕ ನೆಲೆಯ ವ್ಯಾಪಕ ಚೌಕಟ್ಟನ್ನು ಒದಗಿಸಿದೆಯೇ ಹೊರತು, ರಾಜಕೀಯ ಸೈದ್ಧಾಂತಿಕ ಸಂಕಲ್ಪದ ಒಳಚಿತ್ರವನ್ನು ಒಳಗೊಂಡಿಲ್ಲ. ವಿಧಿ, ವಿಧಾನಗಳ ಈ ವ್ಯಾಪಕ ಸ್ವರೂಪವು ನಮ್ಮ ದೇಶದ ಆಧುನಿಕ ರಾಜಕೀಯ ಪ್ರಕ್ರಿಯೆಗೆ ಹೇರಳ ಅವಕಾಶವನ್ನು ಒದಗಿಸುವ ಉದ್ದೇಶವನ್ನೇನೋ ಹೊಂದಿದೆ. ಅನಕ್ಷರತೆ-ಅಸಮಾನತೆಗಳು ಪ್ರಧಾನ ಲಕ್ಷಣವಾದ ಸಮಾಜದಲ್ಲಿ ಈ ಸಂವಿಧಾನಾತ್ಮಕ ಚೌಕಟ್ಟನ್ನು ಜನಪರವಾದ ಸೈದ್ಧಾಂತಿಕ ಚೌಕಟ್ಟನ್ನಾಗಿಸುವ ಕ್ರಿಯೆ ಒಂದು ಪ್ರಮುಖ ಹೊಣೆಗಾರಿಕೆಯಾಗಿದ್ದು ಇತರೆ ಅಂಶಗಳೊಂದಿಗೆ ಈ ಕ್ರಿಯೆಗೂ ಮುಕ್ತ ಅವಕಾಶವನ್ನು ನಮ್ಮ ಸಂವಿಧಾನವು ಒದಗಿಸಿದೆ. ಮುಕ್ತ ಅವಕಾಶ ಕಲ್ಪನೆಯ ಹಿಂದೆ ಬಿಡುಗಡೆಯ ಭಾವನೆಯೊಂದು ಕೆಲಸ ಮಾಡುತ್ತದೆಯೆಂಬುದು ನಿಜ. ನಮ್ಮ ಸಂವಿಧಾನದ ರಚನೆ ಮತ್ತು ಸ್ವೀಕಾರದ ಸಂದರ್ಭ ಈ ಭಾವನೆಯ ಜೊತೆಗೆ ‘ಮುಕ್ತ ಬೌದ್ಧಿಕ ನೆಲೆ’ ಯನ್ನೂ ಪಡೆದಿತ್ತೆನಿಸುತ್ತದೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಎದ್ದು ಕಾಣಿಸಿದ ಸಾಮಾಜಿಕ ಆರ್ಥಿಕ ಸಂಗತಿಗಳ ಕ್ರೋಢಿಕರಣ ನಡೆದು, ಅದರ ಫಲವಾಗಿ ರೂಪುಗೊಂಡ ರಾಜಕೀಯ ತಾತ್ವಿಕತೆಯ ಒಳನೋಟಗಳನ್ನು ಸಂವಿಧಾನ ಒಳಗೊಳ್ಳಲಿಲ್ಲ. ಸ್ವದೇಶಿ ಸ್ವಾವಲಂಬನೆಯ ಪ್ರಶ್ನೆ ಸಂವಿಧಾನದ ಪ್ರಶ್ನೆಯಾಗಲಿಲ್ಲ. ಆದರೆ ಅಲ್ಲೀವರೆಗಿನ ಹೋರಾಟದ ಅನುಭವವು ಎರಡು ಪ್ರಮುಖ ಸಂಗತಿಗಳನ್ನು ಸಂವಿಧಾನದ ಭಾಗವನ್ನಾಗಿಸಿತು. ಒಂದು ಈ ದೇಶದಲ್ಲಿ ಜಾತ್ಯತೀತ ನೆಲೆಯೇ ಮುಖ್ಯವೆಂದು ಪ್ರತಿಪಾದಿಸಿದ್ದು. ಈ ಮೂಲಕ ಧರ್ಮ ನಿರಪೇಕ್ಷತೆಯನ್ನು ಒಪ್ಪಿದ್ದು, ಅಸ್ಪೃಶ್ಯತೆಯ ಆಚರಣೆಯನ್ನು ವಿರೋಧಿಸುತ್ತ  ಮೀಸಲಾತಿಯ ಅವಕಾಶ ಒದಗಿಸಿದ್ದು, ಈ ಎರಡೂ ಅಂಶಗಳು ನಮ್ಮ ಸಂವಿಧಾನದ ಹಿಂದಿರುವ ರಾಜಕೀಯ ಸಂಕಲ್ಪದ ಸಂಕೇತಗಳು. ಆದರೆ ಇಂಥ ರಾಜಕೀಯ ಸಂಕಲ್ಪ ವ್ಯಾಪಕವಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ರಾಜಕಾರಣಕ್ಕಿಂತ ನ್ಯಾಯಾಂಗದ ನೆಲೆ-ನೋಟಗಳನ್ನು ಪಡೆದ ಸಂವಿಧಾನವೊಂದು ರೂಪುಗೊಂಡು ಸ್ವೀಕಾರವಾಯಿತು. ಇದರಲ್ಲಿ ಆಡಳಿತ ನಡೆಸಲಿಕ್ಕೆ ಬೇಕಾದ ತಾಂತ್ರಿಕ ಅಂಶಗಳನ್ನು ವಿವರಿಸಿಕೊಳ್ಳುವುದೇ ಪ್ರಧಾನ ಅಂಶವಾಯಿತು. ತಕರಾರುಗಳು ಎದ್ದಾಗ ಎದುರಿಸಬೇಕಾದ ವಿಧಾನಗಳನ್ನು ಒಳಗೊಳ್ಳುವ ತೀವ್ರತೆ ಕಂಡುಬಂದಿತು. ಆದ್ದರಿಂದಲೇ ನಮ್ಮ ಸಂವಿಧಾನವು ನ್ಯಾಯಾಂಗದ ನೋಟವನ್ನು ಒಳಗೊಂಡಿದೆ- ಎಂದದ್ದು.

ನಮ್ಮ ನ್ಯಾಯಕಲ್ಪನೆಯ ಮಿತಿಯನ್ನು ನಿರ್ದೇಶಿಸಲು ಉತ್ತಮ ಉದಾಹರಣೆಯೆಂದರೆ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆ, ನ್ಯಾಯಾಂಗವೇ ಎಲ್ಲವನ್ನೂ ಒದಗಿಸಲು ಸಾಧ್ಯವೆಂಬ ಭರವಸೆಯ ವಾತಾವರಣ ಇದ್ದ ಪಕ್ಷದಲ್ಲಿ  ‘ಸಾಮಾಜಿಕ ನ್ಯಾಯ’ ವೆಂಬ ವಿಚಾರವೇ ಹುಟ್ಟುತ್ತಿರಲಿಲ್ಲ. ಈ ವಿಚಾರದ ವ್ಯಾಪಕತೆಯು ನಮ್ಮ ಸಂವಿಧಾನದ ಇತಿಮಿತಿಗಳ ಮೇಲೂ ಬೆಳಕು ಚೆಲ್ಲುತ್ತದೆ, ನಿರ್ದಿಷ್ಟ ರಾಜಕೀಯ ನೆಲೆಯ ಅಭಾವವನ್ನು ಎತ್ತಿ ತೋರಿಸುತ್ತದೆ. ಸಂವಿಧಾನದಲ್ಲಿ ಕೆಲಸ ಮಾಡಿರುವ ಮೂಲಭೂತ ಹಕ್ಕುಗಳು ಮತ್ತು ಸೂಚಿಸಿರುವ ನಿರ್ದೇಶಕ ತತ್ವಗಳು ರಾಜಕೀಯ ನೆಲೆಯನ್ನು ಹೊಂದಿವೆಯೆಂಬುದು ನಿಜ. ಆದರೆ ಈ ಅಂಶಗಳು ಮುಕ್ತ ಸಮಾಜದ ಕಲ್ಪನೆಯ ಹಿನ್ನೆಲೆ ಪಡೆದಿರುವುದರಿಂದ ಸಮಾಜದ ಸಕಲ ವರ್ಗಗಳಿಗೂ ಮುಕ್ತ ಅವಕಾಶವನ್ನು ಒದಗಿಸುತ್ತವೆ. ಈ ಅವಕಾಶವನ್ನು ಬಳಸಿಕೊಂಡು ಜನಪರ ಹೋರಾಟಗಳ ಮೂಲಕ ನಿರ್ದಿಷ್ಟ ರಾಜಕೀಯ ಶೈಲಿಯನ್ನು ರೂಪಿಸುವ ಹೊಣೆ ಜನತೆಯ ಮೇಲೆ ಇದೆ. ಇಷ್ಟರಮಟ್ಟಿಗೆ ಇದು ಪ್ರಜಾಸತ್ತಾತ್ಮಕವಾದದ್ದು. ಈ ಪ್ರಜಾಸತ್ತಾತ್ಮಕ ತಾಂತ್ರಿಕ ನೆಲೆಯ ಉಪಯೋಗದಿಂದ ರಾಜಕೀಯ ತಾತ್ವಿಕತೆಯನ್ನು ಬೆಳೆಸುವ ಕ್ರಿಯೆಗೆ ಒಂದು ಅವಕಾಶ ಒದಗಿದೆ. ಅದೇ ಸಂದರ್ಭದಲ್ಲಿ ಈ ಕ್ರಿಯೆಗೆ ವಿರುದ್ಧವಾಗಿ ಕೆಲಸ ಮಾಡುವ ಶಕ್ತಿಗಳಿಗೂ ಅವಕಾಶವಿದೆ. ಸರ್ವರಿಗೂ ಸಮಾನ ಅವಕಾಶ ಒದಗಿಸುವ ನಮ್ಮ ಸಂವಿಧಾನದ ಆಶಯಕ್ಕೆ (14ನೇ ವಿಧಿ) ಮಿತಿಯೊದಗುವುದು ಇಂಥ ಸಂದರ್ಭದಲ್ಲೇ ಕೆಲವು ಸಾಮಾಜಿಕ- ಆರ್ಥಿಕ  ಸಂಗತಿಗಳ ಪ್ರಸ್ತಾಪವಿದ್ದರೂ ಸ್ವಾತಂತ್ರ್ಯ ಚಳವಳಿಯು ಪ್ರಧಾನವಾಗಿ ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಒತ್ತಾಸೆ ಹೊಂದಿದ್ದು ಅಧಿಕಾರದ ಹಸ್ತಾಂತರವನ್ನು ಬಯಸಿದ್ದರಿಂದ, ರಾಜಕೀಯ ಕ್ರಾಂತಿಯಿಂದ ನಿರೀಕ್ಷಿಸುವ ಸಂವಿಧಾನ ಶೈಲಿಯನ್ನು ಇಲ್ಲಿ ಅಪೇಕ್ಷಿಸುವುದು ಸರಿಯಾಗಲಾರದು. ಈ ಅರಿವನ್ನು ಇಟ್ಟುಕೊಂಡೇ ವಸ್ತುಸ್ಥಿತಿಯನ್ನು ವಿಶ್ಲೇಷಿಸತೊಡಗಿದಾಗ ನಮ್ಮ ಗಣರಾಜ್ಯದ ಕಲ್ಪನೆಯ ಹಿಂದೆ ಮುಕ್ತ ಸಮಾಜದ ಶೈಲಿಯೊಂದು ಕಂಡು ಬರುತ್ತದೆ. ‘ಮುಕ್ತ ಸಮಾಜ’ ಎನ್ನುವುದು  ಬೂರ್ಜ್ವಾ  ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆಯ ಲಕ್ಷಣಗಳನ್ನು ಹರ್ಬರ್ಟ್  ಅಪ್ತೇಕರ್ ಎಂಬ ರಾಜಕೀಯ ವಿಜ್ಞಾನಿಯು ಸೊಗಸಾಗಿ ಕ್ರೋಢೀಕರಿಸಿದ್ದಾರೆ. ((The nature of Democarcy, Freedom and Revoluton ಎಂಬ ಗ್ರಂಥದಲ್ಲಿ)

(1)  ಬೂರ್ಜ್ವಾ ಸ್ವಾತಂತ್ರ್ಯವೆಂದರೆ ಮುಕ್ತವ್ಯಾಪಾರಕ್ಕೆ ಅವಕಾಶ.

(2) ಆರ್ಥಿಕ  ಚಟುವಟಿಕೆಯಲ್ಲಿ ಬಂಡವಾಳಶಾಹಿಯ ತೊಡಗುವಿಕೆ ಒಂದು ಸಾಮಾನ್ಯ ಸ್ವಾಭಾವಿಕ ಕ್ರಿಯೆ.

(3) ಇಂಥ ಕ್ರಿಯೆಗೆ ಸರ್ಕಾರಿ ನಿಯಂತ್ರಣ ಸಲ್ಲದೆಂಬ ಭಾವನೆ.

(4) ಆದರೆ ಸರ್ಕಾರದ ಮೇಲೆ ಬಂಡವಾಳಶಾಹಿಯ ನಿಯಂತ್ರಣ.

(5) ಸ್ವಾತಂತ್ರ್ಯ ಎನ್ನುವುದು ರಾಜಕೀಯ ವಿಧಿವಿಧಾನಕ್ಕೆ ಸಂಬಂಧಿಸಿದ್ದು; ಆರ್ಥಿಕತೆಗಲ್ಲ.

(6) ಆರ್ಥಿಕ  ಅಸಮಾನತೆ ಎನ್ನುವುದು ಸ್ವಾತಂತ್ರ್ಯದ ಒಂದು ಸಹಜ ಪರಿಣಾಮ; ಅದರ ಅಸ್ತಿತ್ವ ಸ್ವಾಭಾವಿಕ.

ಹೀಗೆ ಪಟ್ಟಿ ಮಾಡುವ ಹರ್ಬರ್ಟ್ ಅಪ್ತೇಕರ್ ಮತ್ತೊಂದು ಮುಖ್ಯ ಮಾತನ್ನು ಹೇಳುತ್ತಾನೆ, ಬೂರ್ಜ್ವಾ ದೃಷ್ಟಿಕೋನವು ರಾಜಕೀಯವನ್ನು ಉಳ್ಳವರ ನಡುವಿನ ಹೋರಾಟವನ್ನಾಗಿ ನೋಡುತ್ತದೆಯೇ ಹೊರತು ಉಳ್ಳವರು ಮತ್ತು ಬಡವರ ನಡುವಿನ ಹೋರಾಟವನ್ನಾಗಿ ನೋಡುವುದಿಲ್ಲ-ಇದು ಆತನ ಮಾತು. ಮುಕ್ತ ಸಮಾಜ ಮತ್ತು ಅದರ ಪ್ರತಿಪಾದನೆ ಮಾಡುವ ರಾಜಕೀಯ ನೆಲೆಯ ಬಗ್ಗೆ ಇದೊಂದು ಗಮನಾರ್ಹ ವ್ಯಾಖ್ಯಾನ. ನಮ್ಮ ದೇಶವೂ ಇಂಥ ಸ್ಥಿತಿಯಲ್ಲೇ ಗಣರಾಜ್ಯವಾಗಿ ವಿವಿಧ ತಿರುವುಗಳಿಂದ ಹೊಸ ನಲೆಯ ಹುಡುಕಾಟದಲ್ಲಿ ತೊಡಗಿರುವುದರಿಂದ, ಬೂರ್ಜ್ವಾ ಸ್ವಾತಂತ್ರ್ಯದ ಗುಣಲಕ್ಷಣಗಳನ್ನು ಗಮನಿಸುವುದು ಉಪಯುಕ್ತವಾಬಹುದು.

ಮುಕ್ತದ್ವಾರದ ದನಿಯೆತ್ತಿದ ನಮ್ಮ ಗಣರಾಜ್ಯ ತನ್ನ ಆರ್ಥಿಕ ನೀತಿಯಲ್ಲೇ ತನ್ನೆಲ್ಲವನ್ನೂ ಪ್ರಕಟಿಸಿಕೊಂಡಿದೆ. ಸ್ಥೂಲವಾಗಿ ಹೇಳುವುದಾದರೆ ಇಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸೆಕ್ಟರ್ಗಳೆರಡೂ ಇಲ್ಲಿ ಚಲಾವಣೆಯಲ್ಲಿವೆ. ಖಾಸಗಿ ಒಡೆತನದಲ್ಲಿ ಉತ್ತಮ ಸೇವೆ ಸಿಗುತ್ತದೆಯೆಂಬ ಭಾವನೆ ನಮ್ಮ ಗಣರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಉಳಿದ ವಿಚಾರಗಳೇನೇ ಇರಲಿ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ 1969 ರಲ್ಲಿ ಕಾಂಗ್ರೆಸ್ ಒಡೆದ ನಂತರದ ವರ್ಷಗಳಲ್ಲಿ, ಖಾಸಗಿ ಒಡೆತನಕ್ಕೆ ಪೆಟ್ಟು ಕೊಡುವ ಪ್ರಬಲ ಪ್ರಕ್ರಿಯೆ ಪ್ರಾರಂಭವಾಯಿತು. ರಾಜಧನ ರದ್ದು, ಬ್ಯಾಂಕ್ ರಾಷ್ಟ್ರೀಕರಣದಂಥ ನಿರ್ಧಾರಗಳು ತಲ್ಲಣ ಉಂಟು ಮಾಡಿದವು. ವಾಸ್ತವವಾಗಿ ಇವು ಅತ್ಯಂತ ಪ್ರಗತಿಪರ ನಿರ್ಧಾರಗಳು. ಇಲ್ಲಿ ತಲ್ಲಣಕ್ಕೆ ಒಳಗಾದವರು ಉಳ್ಳವರೆ ಹೊರತು ಬಡವರಲ್ಲ, ಬ್ಯಾಂಕ್ ರಾಷ್ಟ್ರೀಕರಣದ ಕೆಲಕಾಲದಲ್ಲೇ ‘ಬ್ಯಾಂಕು’ ಗಳ ಸೇವೆ ಸರಿಯಿಲ್ಲ ಎಂಬ ಕೂಗು ಎದ್ದಿತು, ಸರ್ಕಾರಿ ನೌಕರರ ಕೆಲಸಗಳ್ಳತನವು ಗಮನಾರ್ಹ ಪ್ರಮಾಣದಲ್ಲಿ ಇರಬಹುದಾದರೂ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಎದ್ದ ಈ ಕೂಗು ಖಾಸಗಿ ಒಡೆತನದ ನೆಲೆಯಿಂದ ಹೊರಟಿದ್ದು ಎಂಬುದನ್ನು ಮರೆಯಬಾರದು. ತಮ್ಮ ಹಿಡಿತ ತಪ್ಪಿದ್ದರಿಂದಲೇ ಸಣ್ಣಪುಟ್ಟ ತಪ್ಪುಗಳನ್ನೂ ದೊಡ್ಡದು ಮಾಡಿ ಪ್ರಚಾರ ಮಾಡಲಾಯಿತು.

ಇಷ್ಟಕ್ಕೂ ಈ ‘ಸೇವೆ’ ಎಂಬ ಪರಿಕಲ್ಪನೆಯೇ ಗಣರಾಜ್ಯಕ್ಕೆ ಅವಮಾನಕರವಾದುದು. ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೆ ಒಳ್ಳೆಯ ಕೆಲಸ ನಡೆಯುತ್ತಿಲ್ಲ ಎಂದು ಹೇಳುವುದಕ್ಕೆ ಅವಕಾಶವಾಗದೆ ಒಳ್ಳೆಯ ಸೇವೆ ಸಲ್ಲುತ್ತಿಲ್ಲ ಎಂದು ಆರೋಪಿಸಿದ್ದು ಎಂಥ ಮಾನಸಿಕ ನೆಲೆಯಿಂದ ಎಂಬುದನ್ನು ಯೋಚಿಸಿ ಪ್ರಾಚೀನ ರಾಜಶಾಹಿ ಪ್ರೇರಿತ ಆಧುನಿಕ ಪಾಳ್ಳೇಗಾರಿ ಮತ್ತು ಬಂಡವಾಳಶಾಹಿ ಮನಸ್ಸುಗಳು ಅನ್ಯರಿಂದ ಸದಾ ಸೇವೆಯನ್ನು ಬಯಸುತ್ತವೆ. ಬಾಗಿಲಲ್ಲೇ ಬಾಗಿದ ಬೆನ್ನು ಮತ್ತು ಮಂದಹಾಸದ ಮುಖಗಳನ್ನು ನಿರೀಕ್ಷಿಸುತ್ತವೆ. ಆಗುವ ‘ಕೆಲಸ’ಕ್ಕಿಂತ ಮಾಡುವ ಸೇವೆ ಇವರಿಗೆ ಮುಖ್ಯ. ಗಣರಾಜ್ಯವೊಂದರಲ್ಲಿ ನೌಕರನು ನಿಷ್ಠೆಯಿಂದ ತನ್ನ ಕೆಲಸ ಮಾಡಬೇಕು, ಸೇವೆ ಮಾಡಬೇಕಾಗಿಲ್ಲ, ಜನರು ಆತನಿಂದ ಕೆಲಸವನ್ನು ನಿರೀಕ್ಷಿಸಬೇಕು. ಸೇವೆಯನ್ನಲ್ಲ ಆದರೆ ನಾವಿಂದು ಕೆಲಸ ಮತ್ತು ಸೇವೆ ಎರಡನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದೇವೆ. ಒಂದೇ ರೀತಿಯಲ್ಲಿ ನೋಡುವಂತೆ ನಮ್ಮ ಮಾನಸಿಕ ನೆಲೆಯನ್ನು ನಿರ್ಮಿಸಲಾಗಿದೆ. ಕೆಲಸವನ್ನೇ ಸೇವೆಯೆಂದು ಕರೆಯುವ ದೃಷ್ಟಿ ಒಂದು ಕಡೆಗಿದ್ದರೆ, ‘ಸೇವೆ’ ಸಲ್ಲಿಸಬೇಕೆಂದು ಒತ್ತಾಯಿಸುವ ಅಪೇಕ್ಷೆ ಖಾಸಗಿ ಒಡೆತನದ ಮನಸ್ಥಿತಿಯಿಂದ ಬರುತ್ತಿದೆ; ಇದು ರಾಜಶಾಹಿ ಮತ್ತು ಪಾಳ್ಳೇಗಾರಿ ಪ್ರವೃತ್ತಿಯ ಅಪೇಕ್ಷೆ. ಈಗ ಆಧುನಿಕ ಮಾದರಿಗಳ ಮುಖಾಂತರ ‘ಸೇವೆ’ಯು ಬಂಡವಾಳಶಾಹಿ ಮುಖ ಹೊತ್ತುಕೊಂಡು ಬಂದಿದೆ. ಅಂದರೆ ನಮಗೆ ಪ್ರಜಾಪ್ರಭುತ್ವದ ಪರಿಭಾಷೆಯೊಂದು ಇನ್ನೂ ಖಚಿತವಾಗಿ ರೂಪುಗೊಳ್ಳುತ್ತಿಲ್ಲ. ಆದ್ದರಿಂದಲೇ ‘ಕೆಲಸ’ವನ್ನು ‘ಸೇವೆ’ ಎನ್ನುತ್ತೇವೆ. ಖಚಿತ ಪ್ರಜಾಸತ್ತಾತ್ಮಕ ಪರಿಭಾಷೆ ರೂಪುಗೊಂಡಿಲ್ಲ ಮತ್ತು ಬಳಕೆಯಲ್ಲಿಲ್ಲ ಎಂಬುದರ ಅರ್ಥ ನಾವಿನ್ನು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಿಲ್ಲ ಎಂಬುದೇ ಆಗಿದೆ. ಹಳೆಯ ರಾಜ್ಯವ್ಯವಸ್ಥೆಯ ಪಳೆಯುಳಿಕೆಗಳನ್ನುಳ್ಳ ‘ಪಾಳೆಗಾರಿ ಪ್ರಜಾಪ್ರಭುತ್ವ’ ನಮ್ಮಲ್ಲಿದೆ. ಈ ಪಾಳ್ಳೇಗಾರಿ ಪ್ರಜಾಪ್ರಭುತ್ವದ (Feudal Democracy ) ಮನಸ್ಸು ಅನ್ಯರಿಂದ ‘ಸೇವೆ’ಯನ್ನು ಬಯಸುತ್ತದೆ. ಸೇವೆ ಮಾಡುವ ಮತ್ತು ಸೇವೆ ಮಾಡಿಸಿಕೊಳ್ಳುವ ವರ್ಗ ವಿಭಜನೆಯನ್ನು ಉಳಿಸಿಕೊಳ್ಳಲು ಅಪೇಕ್ಷಿಸುತ್ತದೆ.

ನಮ್ಮ ಗಣರಾಜ್ಯದಲ್ಲಿ ಪ್ರಾಚೀನ ರಾಜ್ಯವ್ಯವಸ್ಥೆಯ ಪಾಳ್ಳೇಗಾರಿ ಪ್ರವೃತ್ತಿಯು ಆಧುನಿಕ ರಾಜಕೀಯ ಮುಖದ ಮೂಲಕವೂ ಉಳಿದುಕೊಂಡು ಬರುತ್ತಿರುವುದಕ್ಕೆ ವ್ಯಕ್ತಿ ಪ್ರಧಾನ ರಾಜಕೀಯ ಒಂದು ಉತ್ತಮ ಉದಾಹರಣೆ. ಆಧುನಿಕ ರಾಜಕಾರಣದ ಪ್ರಮುಖ ಬೆಳವಣಿಗೆ ಎಂದರೆ ರಾಜಕೀಯ ಪಕ್ಷಗಳ ಉದಯ. ಇದನ್ನು ರಾಜಕೀಯ ವಿಜ್ಞಾನಿ ಸಾಮ್ಯುಯಲ್ ಹಂಟಿಂಗ್ಟನ್ ಹೀಗೆ ಹೇಳುತ್ತಾನೆ, ರಾಜಕೀಯ ಆಧುನಿಕೀಕರಣ ಮೂಲಭೂತ ಅಂಶವೆಂದರೆ ಹಳ್ಳಿ ಪಟ್ಟಣಗಳನ್ನೂ ದಾಟಿ ವಿವಿಧ ಸಾಮಾಜಿಕ ಗುಂಪುಗಳು ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಆದದ್ದು. ಇದರಿಂದ ರಾಜಕೀಯ ಪಕ್ಷಗಳಂಥ ರಾಜಕೀಯ ಸಂಸ್ಥೆಗಳು ಬೆಳೆದು ಈ ಪಾಲ್ಗೊಳ್ಳುವಿಕೆಯನ್ನು ಸಂಘಟಿಸುವಂತಾಯಿತು. ಹೀಗೆ ರಾಜಕೀಯ ಆಧುನಿಕೀಕರಣದಿಂದ ರಾಜಕೀಯ ಪಕ್ಷಗಳು ಬೆಳೆದು ಬಂದದ್ದಲ್ಲದೆ ಇನ್ನೊಂದು ಮುಖ್ಯ ಸಂಗತಿಯು ರಾಜಕೀಯ ವ್ಯಾಪ್ತಿಗೆ ಬಂತು. ಹಂಟಿಂಗ್ಟನ್ ಹೇಳುವಂತೆ ಎಲ್ಲ ಸಾಮಾಜಿಕ ಗುಂಪುಗಳು-ಅಂದರೆ, ಹಳೆಯ, ಹೊಸ, ಸಾಂಪ್ರದಾಯಿಕ, ಆಧುನಿಕ-ಎಲ್ಲವೂ ಸಮೂಹಗಳಾಗಿ ಜಾಗೃತಗೊಂಡು ಇನ್ನೊಂದು ಸಮೂಹಕ್ಕೆ ಸಂಬಂಧಿಸಿದಂತೆ ತಂತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತವೆ.

ಇಂಥ ಸಂದರ್ಭದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಲಶಾಲಿಯಾದ ಸಮೂಹ ಸಹಜವಾಗಿಯೇ ತನ್ನ ಹಿತಾಸಕ್ತಿಯನ್ನು ಸಮರ್ಥವಾಗಿ ರಕ್ಷಿಸಿಕೊಳ್ಳುತ್ತದೆ. ನಮ್ಮ ಗಣರಾಜ್ಯದಲ್ಲಿ ಸರ್ಕಾರವನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆಯುತ್ತದೆ. ಇದು ಪ್ರಜಾಪ್ರಭುತ್ವದ ಶಕ್ತಿಯನ್ನು ಕುಗ್ಗಿಸುತ್ತದೆಯಾದರೂ ಆ ದಿಕ್ಕಿನತ್ತ ಒತ್ತು ಬೀಳದಂತೆ ಎಚ್ಚರವಹಿಸಲಾಗುತ್ತದೆ. ಹೀಗಾಗಿ ಎಲ್ಲವೂ ‘ಪ್ರಜಾಪ್ರಭುತ್ವದ ಅನಿವಾರ್ಯ’ಗಳೆಂದು ಒಪ್ಪಿಕೊಳ್ಳುವ ವಾತಾವರಣ ನಿರ್ಮಿತವಾಗುತ್ತದೆ. ಪಾಳೆಗಾರಿ ವ್ಯಕ್ತಿ ಪ್ರಾಧಾನ್ಯತೆ ಎದ್ದು ಕಾಣುತ್ತದೆಯಾದರೂ ಇದನ್ನೂ ಸ್ವಾಭಾವಿಕ ಅನಿವಾರ್ಯವೆಂಬಂತೆ ಪ್ರಚುರಪಡಿಸಲಾಗುತ್ತದೆ. ಹೀಗಾಗಿ ನಮ್ಮ ಗಣರಾಜ್ಯದಲ್ಲಿ ರಾಜಕೀಯ ಪಕ್ಷಗಳು ಸೈದ್ಧಾಂತಿಕೆಯನ್ನು ರೂಪಿಸಿ, ರೂಢಿಸಿಕೊಳ್ಳುವ ಕ್ರಿಯೆಗಿಂತ ಹೀರೋಗಳನ್ನು ರೂಪಿಸಿ ವಿಜೃಂಭಿಸುವ ಕೆಲಸಕ್ಕೆ ಶಾಮೀಲಾಗುತ್ತದೆ. ರಾಜಶಾಹಿ, ಪಾಳ್ಳೇಗಾರಿ ಪದ್ಧತಿಗಳ ಹಿನ್ನೆಲೆಯುಳ್ಳ ನಮ್ಮ ಮನಸ್ಸು ಅದರಿಂದ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಸಾಧ್ಯವಾಗಿಲ್ಲ. ಆಧುನಿಕ ಬೆಳವಣಿಗೆಯಿಂದ ನಮ್ಮ ಸಮಾಜದ  ಆರ್ಥಿಕ ಸಂಬಂಧಗಳು ಸ್ವಪ ಬದಲಾಗಿದ್ದರೂ ಖಾಸಗಿ ಒಡೆತನ ಮತ್ತು ನಿಯಂತ್ರಣಗಳು ಬಲವಾಗಿಯೇ ಇವೆ. ಸಂವಿಧಾನದ ಆಸ್ತಿಯ ಹಕ್ಕು ಉಳ್ಳವರಿಗೆ ‘ವರ’ವಾಗಿ ಪರಿಣಮಿಸಿದೆ. ಆಸ್ತಿವಂತರು ದೇಶದ ಉತ್ಪಾದನೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಆರ್ಥಿಕ  ವ್ಯವಸ್ಥೆಯನ್ನು ತಮ್ಮ ಪರವಾಗಿ ಒಗ್ಗಿಸಿಕೊಳ್ಳುತ್ತಾರೆ.

ಖಾಸಗಿ ಒಡೆತನ ಎನ್ನುವುದು ವ್ಯಕ್ತಿ ಪ್ರಧಾನ ನೆಲೆಯನ್ನು ಒಳಗೊಂಡ ಪರಿಕಲ್ಪನೆ. ಆದ್ದರಿಂದ ಇಂದಿನ ನಮ್ಮ ಗಣರಾಜ್ಯದಲ್ಲಿ ಖಾಸಗಿ ಆಸ್ತಿಯ ವಿಸ್ತರಣೆ, ವ್ಯಕ್ತಿಪ್ರಧಾನ ರಾಜಕಾರಣ-ಎರಡೂ ವಿಜೃಂಭಿಸುತ್ತಿವೆ. ವಿವಿಧ ಮಾಧ್ಯಮಗಳು ಪ್ರಜಾಪ್ರಭುತ್ವದ ಹೆಸರಿನಲ್ಲೇ ಇಂಥ ಪ್ರವೃತ್ತಿಯನ್ನು ಪೋಷಿಸುತ್ತಿವೆ. ಇದು ಎಷ್ಟರಮಟ್ಟಿಗೆ ನಡೆಯುತ್ತಿದೆಯೆಂದರೆ ಮಧ್ಯಪಂಥೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವೆನ್ನುವುದು ಉಳಿದಿಲ್ಲ; ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಆಯ್ಕೆಯಲ್ಲಿ ಕಾಂಗ್ರೆಸ್ಸಾಗಲೀ ಜನತಾದಳವಾಗಲಿ ರಹಸ್ಯ ಮತದಾನವನ್ನು ಅನುಸರಿಸುತ್ತಿಲ್ಲ. ರಹಸ್ಯ ಮತದಾನದ ಕ್ರಮಕ್ಕೆ ಒತ್ತಾಯಿಸುವವರು ಮತ್ತು ವ್ಯಕ್ತಿ ಪ್ರಾಧಾನ್ಯತೆಯನ್ನು ಖಂಡಿಸುವವರು (ಈ ಎರಡೂ ಪಕ್ಷಗಳಲ್ಲಿ ಮತ್ತು ಮಾಧ್ಯಮಗಳಲ್ಲಿ) ಖಳನಾಯಕರಾಗಿ ಬಿಡುತ್ತಾರೆ! ಇಷ್ಟಾದರೂ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ! ಪ್ರಜಾಪ್ರಭುತ್ವದ ತಾತ್ವಿಕತೆ ಹಾಗಿರಲಿ, ತಾಂತ್ರಿಕತೆಯನ್ನೂ ಪೂರೈಸಲಾಗದೆ ‘ಸರ್ವಾನುಮತ’ದ ಸೋಗಿನಲ್ಲಿ ಸೊರಗಿ ಹೋಗುತ್ತಿರುವ ಇಂಥ ರಾಜಕೀಯ ಪಕ್ಷಗಳು ಸೈದ್ಧಾಂತಿಕ ನೋಟಗಳನ್ನು ತಮ್ಮ ಕೇಂದ್ರ ಪ್ರಜ್ಞೆಯಾಗಿಸಿಕೊಳ್ಳುವ ಮಾತು ದೂರವೇ ಉಳಿದಿದೆ. ಸೈದ್ಧಾಂತಿಕತೆಯ ಕೇಂದ್ರಪ್ರಜ್ಞೆಯುಳ್ಳ ಪಕ್ಷಗಳಲ್ಲಿ ಎಡಪಂಥೀಯತೆ ಕಂಡಕೂಡಲೇ ಕೆಂಡವಾಗುವ ಕಣ್ಣುಗಳು ನಮ್ಮಲ್ಲಿವೆ; ಎಡಪಂಥೀಯತೆಯೋ ಬಲಪಂಥೀಯತೆಯೋ ಒಟ್ಟಿನಲ್ಲಿ ಒಂದು ಸೈದ್ಧಾಂತಿಕ ಸಂಘರ್ಷದ ನೆಲೆಯನ್ನಾದರೂ ಕಾಣಬೇಕೆಂಬ ಹಂಬಲ ನಮ್ಮ ಅನೇಕ ಬುದ್ಧಿವಂತರಿಗೆ ಇಲ್ಲ; ನಮ್ಮ ಮಾಧ್ಯಮಗಳಿಗೂ ಸೈದ್ಧಾಂತಿಕತೆಯಲ್ಲಿ ರೋಚಕತೆ’ ಕಾಣುವುದಿಲ್ಲ ತಾತ್ವಿಕತೆಯೆನ್ನುವುದೇ ಶುಷ್ಕವಾಗಿ ಕಾಣುವ ಮನಸ್ಥಿತಿಯೊಂದು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಅನಾರೋಗ್ಯಕರವಾದುದು. ಇಂಥ ಅನಾರೋಗ್ಯಕರ ಮನಸ್ಸಿನ ಹಿಂದೆ ಯಥಾಪ್ರಕಾರ ನಮ್ಮ ಸಾಮಾಜಿಕ-ಆರ್ಥಿಕ  ನೆಲೆಗಳ ಸಾಂಪ್ರದಾಯಿಕ ಸೆಳೆತವಿರುತ್ತದೆ. ವ್ಯಕ್ತಿವೈಭವೀಕರಣಕ್ಕೆ ಒತ್ತೆಯಾಳಾಗುವ ಮನಸ್ಸು ಮತ್ತು ಮೆದುಳುಗಳು ಪ್ರಜಾಸತ್ತಾತ್ಮಕ ಮೌಲ್ಯದ ಮಾತನ್ನೇ ಬಾಯಿಪಾಠ ಒಪ್ಪಿಸುವುದು ಎಂಥ ವಿಪರ್ಯಾಸ!

ನಿಜ, ಯಾವುದೇ ಪಕ್ಷಕ್ಕೆ ನಾಯಕತ್ವ ಬೇಕು. ಆದರೆ ಪಕ್ಷದಿಂದ ನಾಯಕತ್ವವೂ ನಾಯಕತ್ವದಿಂದ ಪಕ್ಷವೂ ಎನ್ನುವುದು ಇಲ್ಲಿನ ಪ್ರಶ್ನೆ ಪಕ್ಷದ ಸೈದ್ಧಾಂತಿಕ ಪ್ರತಿನಿಧಿಯಾಗಿ ನಾಯಕನಿರಬೇಕೇ ಹೊರತು ನಾಯಕನೇ ಸರ್ವಸ್ವವಾಗಿ ಆತನಿಂದಲೇ ಪಕ್ಷ-ಎಂಬಂಥ ಸ್ಥಿತಿ ನಿರ್ಮಾಣ ವಾಗುವುದು ಅಪಾಯಕರ.

ನಮ್ಮ ಗಣರಾಜ್ಯದಲ್ಲಾದ ಇನ್ನೊಂದು ಅನಾರೋಗ್ಯಕರ ಬೆಳವಣಿಗೆಯೆಂದರೆ ಪಕ್ಷಕ್ಕಿಂತ  ಸರ್ಕಾರವೇ ಮುಕ್ಯವಾಗುವುದು. ನಿರ್ದಿಷ್ಟ ಪಕ್ಷವೊಂದು ಬಹುಮತ ಪಡೆದು  ಸರ್ಕಾರವನ್ನು ರಚಿಸಿದಾಗ ಪಕ್ಷದ ನಿರ್ದೇಶನಕ್ಕನುಗುಣವಾಗಿ ಕಾರ್ಯನಿರ್ವಹಿಸುವ ಹೊಣೆ  ಸರ್ಕಾರ ದ್ದಾಗಿರುತ್ತದೆ. ಯಾಕೆಂದರೆ ಜನರು ಪಕ್ಷವನ್ನು ಆಯ್ಕೆಮಾಡಿರುತ್ತಾರೆ. ಆದರೆ  ಸರ್ಕಾರದ ರಚನೆಯಾದ ಕೂಡಲೆ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯು ತನ್ನ ಪಕ್ಷದ ಪ್ರತಿ ವಹಿವಾಟಿನ ಮೇಲೂ ನಿಯಂತ್ರಣ ಸಾಧಿಸಿ ಬಿಡುತ್ತಾನೆ. ಪಕ್ಷದ ಅಧ್ಯಕ್ಷ ಮತ್ತಿತರ ಪದಾಧಿಕಾರಿಗಳಿಗೆ ತಾಂತ್ರಿಕ ಅಸ್ತಿತ್ವ ಮಾತ್ರ ಇರುತ್ತದೆ. ಅಧಿಕಾರಕೇಂದ್ರಿತ ರಾಜಕೀಯದ ಅಪಾಯಕಾರಿ ಮುಖಕ್ಕೆ ಇನ್ನೊಂದು ಉದಾಹರಣೆ, ಅಷ್ಟೇ ಅಲ್ಲ, ಪಾಳ್ಳೇಗಾರಿ ಪ್ರಜಾಪ್ರಭುತ್ವಕ್ಕೆ ಉದಾಹರಣೆಯೂ ಹೌದು. ಚುನಾವಣೆ ಮುಂತಾದ ತಾಂತ್ರಿಕ ಅಂಶಗಳನ್ನು ಪೂರೈಸುವುದರಿಂದ ಪ್ರಜಾಪ್ರಭುತ್ವವಾಗಿಯೂ, ಸಾಮಾಜಿಕ-ಆರ್ಥಿಕ ನೆಲೆ ಮತ್ತು ಅಧಿಕಾರ ಕೇಂದ್ರಿತ ರಾಜಕೀಯದಿಂದ ಪಾಳ್ಳೇಗಾರಿ ಸ್ವರೂಪದ್ದಾಗಿಯೂ, ಇರುವ ಈ ಗಣರಾಜ್ಯದಲ್ಲಿ, ಮೂಲಭೂತ ಸಮಸ್ಯೆಗಳು ಗೌಣವಾಗಿ, ಮೇ ತೊಡಕುಗಳೇ ಸವಾಲುಗಳೆಂಬಂತೆ ಪ್ರತಿಪಾದಿತವಾಗುತ್ತವೆ. ಈ ನನ್ನ ಮಾತಿಗೆ ಉದಾಹರಣೆಯಾಗಿ ಕೆಲವು ವಿರೋಧ ಪಕ್ಷಗಳು ‘ವಂಶಾಡಳಿತ ವಿರೋಧ’ವನ್ನು ದೊಡ್ಡಸವಾಲೆಂಬಂತೆ ಪ್ರತಿಪಾದಿಸಿದ್ದನ್ನು ಗಮನಿಸಬಹುದು. ಜವಹರಲಾಲ್ ನೆಹರೂ ಅವರ ಹಿನ್ನೆಲೆ ಇದ್ದುದರಿಂದ ಇಂದಿರಾಗಾಂಧಿಯವರಿಗೆ, ಇಂದಿರಾಗಾಂಧಿಯವರಿಂದ ರಾಜೀವ್ ಗಾಂಧೀಯವರಿಗೆ ವಿಶೇಷ ರಾಜಕೀಯ ಸೌಲಭ್ಯ, ಸವಲತ್ತು ಮತ್ತು ಅಧಿಕಾರಗಳು ಲಭ್ಯವಾದವು ನಿಜ.

ಆದರೆ ಇವರು ಇಂಥವರ ಮಕ್ಕಳು ಎಂಬ ಕಾರಣಕ್ಕಾಗಿಯೇ ರಾಜಕೀಯ ಅಧಿಕಾರ ಪಡೆಯಬಾರದೆಂದು ಹೇಳುವಂತಿಲ್ಲ. ಸೂಕ್ತ ವಿಧಾನದಲ್ಲಿ ರಾಜಕೀಯ ಅಧಿಕಾರ ಪಡೆಯಬೇಕೆಂದು ನಾವು ಪ್ರತಿಪಾದಿಸಬಹುದಷ್ಟೆ. ಇಂಥವರಿಗೆ ವಂಶದ ಹಿನ್ನೆಲೆಯಿರುವುದರಿಂದಲೇ ವಿಶೇಷಾಧಿಕಾರ ಲಭ್ಯವಾಗುತ್ತಿದೆಯೆಂದು ಹೇಳುವಾಗಲೂ ನಾವು ತಾಂತ್ರಿಕ ಪ್ರಶ್ನೆಗಳಿಂದ ಇಕ್ಕಟ್ಟಿಗೆ ಸಿಕ್ಕಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಂಶಾಡಳಿತ ವಿರೋಧ ಎನ್ನುವುದು ಒಂದು ನೈತಿಕ ಪ್ರಶ್ನೆಯಾಗುತ್ತದೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿ ನಾಯಕತ್ವದ ವಿಷಯವನ್ನು ನಾವು ನೋಡುವುದೇ ಹೆಚ್ಚು ಸೂಕ್ತವಾದುದು. ಆ ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತು ಕೆಲವು ಆಸಕ್ತರ ಆಕಾಂಕ್ಷೆಗಳ ಫಲವಾಗಿ ಒಂದೇ ವಂಶಕ್ಕೆ ಸೇರಿದ ನಾಯಕರು ಅನಿವಾರ್ಯವಾಗಿದ್ದರೆ ಅದನ್ನೇ ಇತರೆ ಪಕ್ಷಗಳು ದೊಡ್ಡ ಸವಾಲೆಂದು ಭಾವಿಸಬೇಕಾಗಿಲ್ಲ. ವಂಶಾಡಳಿತ ವಿರೋಧ ಮಾಡುವುದೇ ಮುಖ್ಯವಾಗುವುದು, ಮೂಲಭೂತ ಭಿನ್ನ ನೆಲೆಗಳು ಇಲ್ಲದ ಸಂದರ್ಭದಲ್ಲಿ ಮಾತ್ರ ಎನ್ನುವುದು ನನಗಿಲ್ಲಿ ಮುಖ್ಯ. ಕಾಂಗ್ರೆಸ್, ಜನತಾದಳ (ಪಕ್ಷ)-ಇಂಥ ಮಧ್ಯ ಪಂಥೀಯ ಪಕ್ಷಗಳ ರಾಜಕೀಯ ನೆಲೆ-ನಿಲುವುಗಳು ಮೂಲಭೂತವಾಗಿ ಬೇರೆಬೇರೆಯಾಗಿಲ್ಲ. ಮೇಲ್ಮೈ ಲಕ್ಷಣದಲ್ಲಿ ಭಿನ್ನತೆ ಕಾಣಿಸಬಹುದಾದರೂ ಉಳಿದಂತೆ ಒಡೆದು ಕಾಣುವ ವ್ಯತ್ಯಾಸವೇನೂ ಇಲ್ಲ. ಕಂಡು ಬರುವ ಒಂದೇ ವ್ಯತ್ಯಾಸವೆಂದರೆ ಕಾಂಗ್ರೆಸ್ನಲ್ಲಿ ಒಂದೇ ವಂಶದವರಿಗೆ ನಾಯಕತ್ವ ಸಿಗುತ್ತಾ ಬಂದದ್ದು ಸರಿ, ಅದೇ ಇತರರಿಗೆ ದೊಡ್ಡ ಸವಾಲು ಎಂಬಂತಾಯಿತು. ವಾಸ್ತವವಾಗಿ ನಿಜವಾದ ಸವಾಲೆಂದರೆ ಈ ಗಣರಾಜ್ಯದ ಸಾಮಾಜಿಕ, ಆರ್ಥಿಕ  ಬದಲಾವಣೆ ಮತ್ತು ಈ ಮೂಲಕ ಸಮಾನತೆಯ ಸಮಾಜದ ನಿರ್ಮಾಣ , ಆದರೆ ಇತರೆ ಮಧ್ಯಪಂಥೀಯ ಪಕ್ಷಗಳಿಗೆ ಈ ಹಿನ್ನೆಲೆಯ ಚಿಂತನೆಯಾಗಲೀ, ಕಾರ್ಯಕ್ರಮವಾಗಲಿ ದೃಢವಾಗಿ ಇಲ್ಲವಾದ ಕಾರಣ ಅಧಿಕಾರ ಗಳಿಸಲು ಅಡ್ಡವಾಗಿ ಕಂಡ ಇಂದಿರಾಗಾಂಧಿ ರಾಜೀವ್ಗಾಂಧಿಯವರು ಒಂದು ವಂಶದ ವ್ಯಕ್ತಿಗಳಾಗಿ ಸವಾಲೆಂಬಂತಾದರು. ಇಂದಿರಾಗಾಂಧಿಯವರು ಇದ್ದುದರಲ್ಲಿ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತ ಅಧಿಕಾರದಲ್ಲುಳಿಯಲು ಪ್ರಯತ್ನಿಸಿದ್ದರಿಂದ ಆ ಕಾರ್ಯಕ್ರಮಗಳನ್ನು ವಿರೋಧಿಸುವುದು ಮತ್ತು ಪರ್ಯಾಯ ಕಾರ್ಯಕ್ರಮ ಕೊಡುವುದು ಕಷ್ಟವಾಗಿ ಈ ಪಕ್ಷಗಳು ವಂಶಾಡಳಿತವಿರೋಧಕ್ಕೆ ಗಂಟುಬಿದ್ದವು. ಪಾಳ್ಳೇಗಾರಿ ಪ್ರಭುತ್ವಕ್ಕೆ ಸೇವೆ ಸಲ್ಲಿಸಿದ ಪಂಪರೆಯುಳ್ಳ ನಮ್ಮ ದೇಶದ ಜನತೆಗೆ ವಂಶಾಡಳಿತ ಎನ್ನುವುದು ಒಂದು ತೊಡಕಾಗಿ ಕಾಣಿಸಲಿಲ್ಲ, ಸಾಮಾನ್ಯ ಜನತೆಗೆ ಬದುಕಿನ ಬವಣೆಯೇ ಪ್ರಮುಖ ಸವಾಲಾಗಿದೆಯಾದ್ದರಿಂದ ತಮಗಾದ ಅಲ್ಪಸ್ವಲ್ಪ ಅನುಕೂಲಕ್ಕಾಗಿ ಅವರು ವ್ಯಕ್ತಿ ಆರಾಧನೆಯಲ್ಲಿ ತೊಡಗಿದರು. ಇಂಥ ಪ್ರವೃತ್ತಿಯನ್ನು ವಿರೋಧಿಸಿದ ಕೆಲ ಬುದ್ಧಿವಂತರು ಮತ್ತು ಮಾಧ್ಯಮಗಳು ಸಹ ವಿರೋಧಪಕ್ಷಗಳ ನೆಲೆಯಲ್ಲಿ ವ್ಯಕ್ತಿ ಆರಾಧನೆಗೆ ತೊಡಗಿದ್ದು ಒಂದು ವಿರೋಧಾಭಾಸವೇ ಸರಿ! ಒಟ್ಟಿನಲ್ಲಿ ಬಹುಪಾಲು ಅಕ್ಷರಸ್ತರು ಮತ್ತು ಅನಕ್ಷರಸ್ತರಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಗಾಧ ಅಂತರವೇನೂ ಕಾಣುತ್ತಿಲ್ಲ. ಅನಕ್ಷರಸ್ತರು ಪ್ರಜಾಪ್ರಭುತ್ವವನ್ನು ಕುರಿತು ಮಾತೇ ಆಡುವುದಿಲ್ಲ. ಅಕ್ಷರಸ್ತರು ಪ್ರಜಾಪ್ರಭುತ್ವದ ಮಾತಾಡುತ್ತಲೇ ಅದಕ್ಕೆ ವಿರುದ್ಧ ನೆಲೆಯಲ್ಲಿ ಕೆಲಸ ಮಾಡುವುದು ನಿಂತಿಲ್ಲ. ಅಂದರೆ ನಮ್ಮಲ್ಲಿ ಬಲವಾದ ಸಾಮಾಜಿಕ  ಆರ್ಥಿಕ  ಬದಲಾವಣೆಯಾಗದೆ, ಈ ಮೂಲಕ ಸಮಾನತೆಯತ್ತ ಸಾಗುವ ಹೆಜ್ಜೆ ಗಟ್ಟಿಯಾಗದೆ, ಈ ದ್ವಂದ್ವಗಳು ನೀಗುವುದಿಲ್ಲ; ಪ್ರಜಾಪ್ರಭುತ್ವದ ಮೂಲ ಆಶಯ ಅನುಷ್ಠಾನಗೊಳ್ಳುವುದಿಲ್ಲ. ಇಲ್ಲಿಯವರೆಗೆ ಈ ದಿಕ್ಕಿನಲ್ಲಿ ನಡೆದ ಕೆಲಸ ಹೇಳಿಕೊಳ್ಳುವಂತಿಲ್ಲ.

ನಮ್ಮ ಗಣರಾಜ್ಯದ ಸಾಮಾಜಿಕ  ಆರ್ಥಿಕ ಸ್ಥಿತಿಗತಿಗಳು ಮೇಲಿನ ಮಾತುಗಳಿಗೆ ಪುಷ್ಟಿ ಕೊಡುತ್ತವೆ. ನಮ್ಮಲ್ಲಿ ಪ್ರಗತಿಯೇ ಆಗಿಲ್ಲವೆಂದರೆ ಅದು ಹಸಿ ಸುಳ್ಳಾಗುತ್ತದೆ. ಆದರೆ ಈ ಪ್ರಗತಿಯು ಅಧಿಕಾರದ ಒಂದು ಯಾಂತ್ರಿಕ ಪ್ರಕ್ರಿಯೆಯಾಗಿ ನಡೆಯಿತೇ ಹೊರತು ನಿರ್ದಿಷ್ಟ, ದೃಢ ರಾಜಕೀಯ ಕಾರ್ಯಕ್ರಮವಾಗಿ ನಡೆಯಲಿಲ್ಲ. ಉಳಿದಂತೆ ಏನೇ ಭಿನ್ನಾಭಿಪ್ರಾಯವಿರಲಿ ಪ್ರಗತಿಯ ತೀವ್ರತೆ ಎರಡು ಸಂದರ್ಭದಲ್ಲಿ ಉಂಟಾಗಿದೆ ಎನ್ನಿಸುತ್ತದೆ. ಒಂದು ನೆಹರು ಅವರ ಔದ್ಯಮೀಕರಣದ ಕ್ರಿಯೆ; ಎರಡು-ಇಂದಿರಾಗಾಂಧಿಯವರು ‘ಗರೀಬಿ ಹಠಾವೊ’ ಘೋಷಣೆಯ ಹಿಂದೆಯೇ ಹಾಕಿಕೊಂಡ ಪ್ರಗತಿಪರ ಕಾರ್ಯಕ್ರಮಗಳು. ಈ ಎರಡೂ ಸಂದರ್ಭಗಳು ಕೆಟ್ಟದ್ದನ್ನೂ ಕೊಡುವುದರ ಜೊತೆಗೆ ನಮ್ಮ ಕನಸುಗಳು ಬತ್ತದಂತೆಯೂ ನೋಡಿಕೊಂಡಿವೆ. ಒಂದು ಕಡೆ ಔದ್ಯಮೀಕರಣದ ಅತಿರೇಕ ಕಂಡು ಬಂತು. ಇನ್ನೊಂದು ಕಡೆ ಪ್ರಗತಿಪರ ಕಾರ್ಯಕ್ರಮಗಳು ಅಧಿಕಾರದಲ್ಲಿ ಉಳಿಯುವ ತಂತ್ರಗಳಾದವು. ಇಷ್ಟಾದರೂ ಈ ಎರಡೂ ಕಾಲಘಟ್ಟದಲ್ಲಿ ನಮ್ಮ ದೇಶದ ಅನೇಕರ ಆಸೆ, ಆಕಾಂಕ್ಷೆಗಳಿಗೆ, ಬದುಕಬಹುದೆಂಬ ಭರವಸೆಗೆ, ಕನಸಿನ  ಸ್ಪರ್ಶ ಸಿಕ್ಕಿತು. ಆದ್ದರಿಂದಲೇ ತುರ್ತುಪರಿಸ್ಥಿತಿ ಹೇರಿದರೂ ಬುದ್ಧಿಜೀವಿಗಳು ಅದನ್ನು ವಿರೋಧಿಸಿದರೂ ಇಂದಿರಾ ಗಾಂಧಿ ಜನಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಳ್ಳಲಿಲ್ಲ. ಇಷ್ಟಾಗಿಯೂ ನಮ್ಮ ದೇಶದ ಸ್ಥಿತಿ ಆಶಾದಾಯಕವಾಗಿಲ್ಲ; ಸಾಮಾಜಿಕ- ಆರ್ಥಿಕ ಅಸಮಾನತೆಯ ಅಂತರ ಕಡಿಮೆಯಾಗಿಲ್ಲ, ಬದಲಾಗಿ ಬಂಡವಾಳಗಾರರ ಸಂಪತ್ತು ಬೆಳೆಯುತ್ತಲೇ ಇದೆ. ರಾಜಕೀಯ ಆಧುನಿಕತೆಯಿಂದ ಹಳ್ಳಿಗಳ ಪಾಳ್ಳೇಗಾರಿ ಭೂಮಾಲೀಕ ವರ್ಗವು ಅಧಿಕಾರಗಳಿಸುವುದಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತಿರುವಂತೆ, ಆಧುನಿಕ ಬಂಡವಾಳಗಾರರು ಔದ್ಯಮೀಕರಣದ ಲಾಭ ಪಡೆಯುತ್ತಿದ್ದಾರೆ. ಸಾಂಕೇತಿಕವಾಗಿ ಉದಾಹರಿಸುವುದಾದರೆ-ಬಿರ್ಲಾ ಅವರ ಬಂಡವಾಳ 1950ರಲ್ಲಿ 150 ಕೋಟಿಗಳಿದ್ದದ್ದು 1966 ರಲ್ಲಿ 456 ಕೋಟಿಯಾಗಿ, 1976 ರಲ್ಲಿ 1056 ಕೋಟಿಯಾಗಿ 1984 ರ ವೇಳೆಗೆ 2400 ಕೋಟಿ ರೂಪಾಯಿಗಳಾಗಿತ್ತು. ನಮ್ಮ ಕೇಂದ್ರ ಸರ್ಕಾರದ ಬಜೆಟ್ನ ಖೋತಾ ಲೆಕ್ಕವು ಮೇಲ್ಕಂಡ ಇಸವಿಗಳ ಕ್ರಮದಲ್ಲಿ 532 ಕೋಟಿ, 948 ಕೋಟಿ, 1133 ಕೋಟಿ ಮತ್ತು 2060 ಕೋಟಿಯಷ್ಟಾಗಿತ್ತು. ಈಗ ಇನ್ನೂ ಹೆಚ್ಚಾಗಿದೆ. ಬಂಡವಾಳಗಾರರ ಬಂಡವಾಳವೂ ಹೆಚ್ಚಾಗಿದೆ. ಇವರ ಬಂಡವಾಳ ಹೆಚ್ಚಾಗುತ್ತಿದ್ದರೆ ಸರ್ಕಾರದ ಸಂಪನ್ಮೂಲ ಖೋತಾ ಆಗುತ್ತಿದೆ! ಜೊತೆಗೆ ಒಂದು ಅಂದಾಜಿನ ಪ್ರಕಾರ ನಮ್ಮ ಗಣರಾಜ್ಯದಲ್ಲಿ ಈಗ 40,000 ಕೋಟಿ ರೂಪಾಯಿಗಳಷ್ಟು ಕಪ್ಪು ಹಣವಿದೆ. ಇಷ್ಟಾಗಿಯೂ ನಮ್ಮದು ಬಡದೇಶ; ಬಡತನಕ್ಕೆ ಬರವಿಲ್ಲದ ದೇಶ!

ಇನ್ನು ಗ್ರಾಮೀಣ ಭಾರತಕ್ಕೆ ಬಂದರೆ ಸರ್ಕಾರಿ ಲೆಕ್ಕದ ಪ್ರಕಾರವೇ ನಮ್ಮ ದೇಶದಲ್ಲಿ-ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ – 22 ಲಕ್ಷ ಜನ ಜೀತಗಾರರಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಒಂದು ಲಕ್ಷ ತೊಂಬತ್ತು ಸಾವಿರ. ಈ ದೇಶದಲ್ಲಿ 1981 ರಲ್ಲಿ 571 ಜನ ದಲಿತರ ಕೊಲೆಯಾದರೆ 1982 ರಲ್ಲಿ 633 ಮತ್ತು 1983 ರಲ್ಲಿ 683 ದಲಿತರ ಮೇಲೆ ದಲಿತರ ಕೊಲೆಯಾಗಿದೆ. 1988 ರ ಅಂಕಿ ಅಂಶದ ಪ್ರಕಾರ, ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಅತಿಯಾಗಿದ್ದು, ಆ ರಾಜ್ಯ ಪ್ರಥಮ ಸ್ಥಾನ ಪಡೆದಿದೆ! ಒಟ್ಟಿನಲ್ಲಿ ಸಾಮಾಜಿಕ-ಆರ್ಥಿಕ  ಹಲ್ಲೆಗಳು ಅತಿಯಾಗುತ್ತ ಹೋದದ್ದು ನಮ್ಮ ರಾಷ್ಟ್ರದ ರಾಜಕೀಯ ಪಕ್ಷಗಳ ದೌರ್ಬಲ್ಯ, ಅಧಿಕಾರ ಆಕರ್ಷಿತ  ರಾಜಕೀಯದಲ್ಲಿ ಮಾತ್ರ ಆಸಕ್ತರಾದ ವ್ಯಕ್ತಿ ಮತ್ತು ಪಕ್ಷಗಳಿಗೆ ನೈಜ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರ ಮಾರ್ಗಾನ್ವೇಷಣೆಯ ಪ್ರಕ್ರಿಯೆ ಪ್ರಮುಖವಾಗದೆ, ಕೆಲವು ಅಮುಖ್ಯ ಸಂಗತಿಗಳು ರಾಜಕೀಯ ಪ್ರಶ್ನೆಗಳಾಗಿ ಕಾಣಿಸಿದ್ದು ನಮ್ಮ ರಾಜಕಾರಣದ ಮಿತಿ ಮಧ್ಯಪಂಥೀಯ ರಾಜಕಾರಣದ ಪಟ್ಟು, ಪ್ರತಿಪಟ್ಟುಗಳು ಮತ್ತು ತಂತ್ರ ಕುತಂತ್ರಗಳು ನಮ್ಮ ನಡುವಿನ ಸಾಹಸಗಳೆಂಬಂತೆ ವೈಭವೀಕೃತಗೊಳ್ಳುತ್ತಿರುವುದು ನಿಜಕ್ಕೂ ಅವಮಾನದ ಸಂಗತಿ. ಇವೆಲ್ಲ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವುದಂತೂ ಅವಮಾನ ಮಾತ್ರವಲ್ಲ, ಅಪರಾಧ.

ಇಲ್ಲಿ ಬರ್ನಾಡ್ ಶಾ  ಅವರು ಹೇಳಿದ ಮಾತು ಮುಖ್ಯವೆನಿಸುತ್ತದೆ- ಪ್ರಜಾಪ್ರಭುತ್ವವು ಬಿಸಿಗಾಳಿ ತುಂಬಿದ ಒಂದು ಬೆಲೂನು. ಜನರು, ತಮ್ಮ ಜೇಬುಗಳ್ಳತನವಾಗುತ್ತಿರುವುದನ್ನೂ ಲೆಕ್ಕಿಸದೆ, ಮೇಲೆ ಹಾರಾಡುವ ಈ ಬೆಲೂನನ್ನು ನೋಡುತ್ತಿರುತ್ತಾರೆ-ಈ ಮಾತುಗಳು ಪ್ರಜಾಪ್ರಭುತ್ವ ಉಂಟುಮಾಡಬಹುದಾದ ಮೈಮರೆವು ಮತ್ತು ಭ್ರಷ್ಟತೆಯ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ನಾವು ಪ್ರಜಾಪ್ರಭುತ್ವದಿಂದ ಪುಳಕಿತರಾಗುತ್ತಲೇ ಸದಾ ಜಾಗೃತರಾಗಿರಬೇಕಾದ ಅಗತ್ಯವನ್ನು ಬರ್ನಾಡ್ ಶಾ ತನ್ನದೇ ರೀತಿಯಲ್ಲಿ ಹೇಳಿದ್ದಾರೆ. ಜನರ ಅಜಾಗರೂಕತೆಯು ರಾಜಕೀಯ ದುರುಪಯೋಗ ಮತ್ತು ಭ್ರಷ್ಟತೆಯ ದಾರಿಯನ್ನು ಸುಗಮಗೊಳಿಸುತ್ತದೆ. ಸಮೂಹ ಚಳವಳಿಗಳು ಹೆಚ್ಚಾಗಿಲ್ಲದಿದ್ದರೆ ದುರುಪಯೋಗದ ಪ್ರಮಾಣ ಮತ್ತಷ್ಟು ಏರುತ್ತದೆ. ನಮ್ಮ ದೇಶದಲ್ಲಿ ಜನಪರವಾದ ಸಮೂಹ ಚಳವಳಿಗಳು ಎಲ್ಲಾ ಕಡೆ ವ್ಯಾಪಿಸಿಲ್ಲವಾದ್ದರಿಂದ ರಾಜಕೀಯವೂ ಒಂದು ‘ವ್ಯವಹಾರ’ ಮಾತ್ರವಾಗದೆ. ವ್ಯಾವಹಾರಿಕ ನೆಲೆಗೆ ಒತ್ತು ಬಿದ್ದಿದೆ. ಭ್ರಷ್ಟಾಚಾರ, ಪ್ರತ್ಯೇಕವಾದ ಮತ್ತು ಕೋಮುವಾದಗಳು ನಮ್ಮ ಗಣರಾಜ್ಯದ ಇವತ್ತಿನ ಪ್ರಮುಖ ಸಮಸ್ಯೆಗಳಾಗಿ ಕಣಿಸುತ್ತಿದೆ..

ಭ್ರಷ್ಟಾಚಾರವೆಂದರೆ ಭಯ ಬೀಳಬೇಕಾದ ಮನಸ್ಥಿತಿ ಇಂದು ಮಾಯವಾಗುತ್ತಿದ್ದು ಅದೊಂದು ಸ್ವಾಭಾವಿಕ ಕ್ರಿಯೆಯಾಗುತ್ತಿದೆ. ನಮ್ಮ ಗಣರಾಜ್ಯದ ಅತ್ಯಂತ ಅನಾರೋಗ್ಯಕರ ಬೆಳವಣಿಗೆಯಿದು. ಸ್ವಾರ್ಥ, ಲಾಭಕೋರತನ, ಲಂಚಾದಿಗಳೇ ಜೀವನವಿಧಾನವಾಗುತ್ತಿರುವ ಸಮಾಜ, ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಆತಂಕಕಾರಿಯಾಗುತ್ತದೆ. ಲಂಚ ತೆಗೆದುಕೊಂಡರೂ ಪರವಾಗಿಲ್ಲ ಕೆಲಸವಾದರೆ ಸಾಕೆಂದು ಜನರು ಅಪೇಕ್ಷಿಸುವ ಹಂತ ತಲುಪಿರುವುದು ನಮ್ಮ ಸಾಮಾಜಿಕ ಬದುಕಿನ ದೊಡ್ಡ ಕಳಂಕ. ಈ ಕಳಂಕಕ್ಕೆ ಕಾರಣವಾದ ರಾಜಕೀಯ ಪುಢಾರೀಕರಣ ಮತ್ತು ಪದ್ಧತಿಗಳು ಬದಲಾಗುವಂತೆ ನಮ್ಮ ಕಣ್ತುಂಬ ಹೊಸ ಸಮಾಜದ ಕನಸು ತುಂಬಬೇಕಾಗಿದೆ. ಆದರೆ ಕನಸಿಗೆ ಕಿಚ್ಚಿಟ್ಟು ಕುರುಡಾಗಿಸುವ ಕ್ರೌರ್ಯ ನಮ್ಮ ವ್ಯವಸ್ಥೆಯ ಒಳಸೇರಿಕೊಂಡಿದೆ. ಭ್ರಷ್ಟಾಚಾರ ಎನ್ನುವುದು ಕೇವಲ ನೈತಿಕ ಪ್ರಶ್ನೆಯಲ್ಲ. ಅದೊಂದು ರಾಜಕೀಯ ಪ್ರಶ್ನೆ. ಭ್ರಷ್ಟಾಚಾರ ಬಲವಾಗುತ್ತ ಸರ್ವಾಧಿಕಾರ, ಚಿಗುರತೊಡಗುತ್ತದೆ. ಯಾಕೆಂದರೆ, ಭ್ರಷ್ಟಾಚಾರಿಯಾದ ಅಧಿಕಾರಸ್ಥ ರಾಜಕಾರಣಿಗಳು ಅದು ಬಯಲಾಗುತ್ತ ಹೋದಂತೆ ಬಿಗಿಯಾಗತೊಡಗುತ್ತಾರೆ. ತಮ್ಮ ರಕ್ಷಣೆಗಾಗಿ ಅಧಿಕಾರದ ಸೂತ್ರಗಳನ್ನು ಬಳಸಿಕೊಳ್ಳುತ್ತಾರೆ. ಸಾಧ್ಯವಾದಷ್ಟು ರಾಜಕೀಯ ಶಕ್ತಿಯನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳಬಯಸುತ್ತಾರೆ. ಆಗ ಪ್ರಜಾಪ್ರಭುತ್ವದ ತಾಂತ್ರಿಕ ಅಂಶಗಳು ಅಸ್ತಿತ್ವದಲ್ಲಿದ್ದರೂ ಅಂತಃ ಸತ್ವವು ಸರ್ವಾಧಿಕಾರಿ ಧೋರಣೆಯನ್ನು ಒಳಗೊಳ್ಳುತ್ತದೆ. ಇದರಿಂದ ರಾಜಕೀಯ ಅಧಿಕಾರಸ್ಥರ ಭ್ರಷ್ಟಾಚಾರವು ಸರ್ವಾಧಿಕಾರೀ ಹೆಜ್ಜೆಗೆ ಒತ್ತಾಸೆಯಾಗುವ ಅಪಾಯವಿದೆ.

ಭ್ರಷ್ಟಾಚಾರದ ಇನ್ನೊಂದು ಅಪಾಯವೆಂದರೆ ‘ಅಭಿನಯ ಚತುರತೆ’, ಭ್ರಷ್ಟಾಚಾರಿಯಾದವನು ತನ್ನನ್ನು ಹಾಗೆಂದು ಕರೆದುಕೊಳ್ಳಲು ಸಾಧ್ಯವಿಲ್ಲದ್ದರಿಂದ ಸದಾ ಸತ್ಯನ್ಯಾಯಗಳ ಮಾತೇ ಆಡುತ್ತಾನೆ; ಅದರಂತೆ ಅಭಿನಯಿಸುತ್ತಾನೆ. ಇನ್ನು ಜನರಿಗೆ ಈತ ಭ್ರಷ್ಟಚಾರಿಯೆಂದು ಗೊತ್ತಿದ್ದರೂ ಆತನ ಬಳಿ ಕೆಲಸಕ್ಕೆ ಅಲೆಯಬೇಕಾಗಿ ಬಂದಾಗ ಇಲ್ಲದ ನಗುವನ್ನು ಬರಿಸಿಕೊಳ್ಳುತ್ತಾರೆ; ಸಲ್ಲದ ಗೌರವ ಕೊಡುತ್ತಾರೆ; ಅಸಹಾಯಕತೆಯಿಂದ ಆಕ್ರೋಶವನ್ನು ಅದುಮಿಟ್ಟುಕೊಳ್ಳುತ್ತಾರೆ. ಬರಬರುತ್ತ ಭ್ರಷ್ಟಾಚಾರವನ್ನು ಒಪ್ಪಿಕೊಂಡು ಒಗ್ಗಿಕೊಳ್ಳುವ ಮನಃಸ್ಥಿತಿ ತಲುಪುತ್ತಾರೆ. ಒಟ್ಟಾರೆ ಆಪ್ರಮಾಣಿಕತೆ ಆವರಿಸಿಕೊಳ್ಳುತ್ತದೆ. ಆಗ ಇವರ ನಗು ನಿಜವಾದ ನಗುವಾಗಿರುವುದಿಲ್ಲ; ಆಳು ಅಂತರಂಗದ ಒತ್ತಾಸೆಯಿಂದ ಬರುವುದಿಲ್ಲ; ಆಕ್ರೋಶ, ಆಳದ ನೋವಿನಿಂದ ಹುಟ್ಟುವುದಿಲ್ಲ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಭಿನಯ ಚತುರತೆಗೆ ಇಂಥ ಅಂತರ್ ಸಂಬಂಧವಿದೆ.

ಅಪ್ರಾಮಾಣಿಕತೆಯುಳ್ಳವರ ಇನ್ನೊಂದು ನಡವಳಿಕೆಯೆಂದರೆ ಅನ್ಯರ ಮೇಲೆ ಅಸಂಬದ್ಧ ಆರೋಪ ಹೊರಿಸುವ ಚಾಳಿ. ತನ್ನ ಅಪ್ರಾಮಾಣಿಕತೆ ಮತ್ತು ಅಭಿನಯ ಚತುರತೆಗಳು ಅನಾವರಣಗೊಳ್ಳುತ್ತ ಹೋದಂತೆ ಗಟ್ಟಿವ್ಯಕ್ತಿಗಳಿಗೆ ಮಸಿ ಬಳಿಯುವ ವಿಷ ಮನಸಿನ ಮೂಲಕ ಖುಷಿ ಪಡುವ ವಿಕೃತ ಪ್ರವೃತ್ತಿ ಬೆಳೆಯುತ್ತದೆ. ಅಕ್ಷರಸ್ಥ ಅಪ್ರಾಮಾಣಿಕರಲ್ಲಿ ಈ ಅಂಶ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅನಕ್ಷರಸ್ಥರಲ್ಲಿ ಇನ್ನು ಮುಗ್ಧ ಭಾವನೆಗಳು ಉಳಿದಿದ್ದು ನೇರ ನಡೆ ನುಡಿ ಕಾಣಿಸಲು ಸಾಧ್ಯ. ಆದರೆ ಬುದ್ಧಿವಂತ ಅಪ್ರಾಮಾಣಿಕರು ತಾವೂ ಕೆಡುವುದಲ್ಲದೆ ಅನ್ಯರ ಹೆಸರನ್ನು ಕೆಡಿಸುತ್ತಾ ಸಾಮಾಜಿಕ ಪರಿಸರಕ್ಕೆ ತಮ್ಮ ಅಂತರಂಗದ ಕೊಳಕನ್ನು ಧಾರೆಯೆರೆಯುತ್ತಾರೆ. ಒಂದು ಕಡೆ ರಾಜಕೀಯ ಭ್ರಷ್ಟತೆ, ಇನ್ನೊಂದು ಕಡೆ ಇಂಥ ಮಾನಸಿಕ ಭ್ರಷ್ಟತೆ-ಎರಡೂ ಸೇರಿ ಪ್ರಜಾಸತ್ತಾತ್ಮಕ ಪರಿಸರದ ಅಂತಃಸತ್ವವನ್ನು ಹಾಳು ಮಾಡುತ್ತಿವೆ. ರಾಜಕೀಯ ಭ್ರಷ್ಟಾಚಾರಿಗಳಂತೆ  ‘ಅಂತರಂಗ ಅತ್ಯಾಚಾರಿ’ ಗಳೂ ಅತ್ಯಂತ ಅಪಾಯಕಾರಿಗಳಾಗಿದ್ದರೆ.

ಇದರಿಂದ ನಮ್ಮ ಶಿಕ್ಷಣವು ಕಲಿಕೆಯನ್ನು ಮೀರಿ ಮಾನವೀಯ ಅಂಶಗಳನ್ನು ಎಷ್ಟರಮಟ್ಟಿಗೆ ಕಲಿಸಿದೆ ಎಂಬ ಪ್ರಶ್ನೆಯೇಳುತ್ತದೆ. ಸಾರ್ವಜನಿಕ ಶಿಕ್ಷಣದ ಒತ್ತಾಸೆಯಲ್ಲಿ ನಮ್ಮ ದೇಶದ ಹೆಚ್ಚು ಜನ ವಿದ್ಯಾವಂತರಾಗುತ್ತಿರುವುದು, ಸಮಾಜದ ವಿವಿಧ ನೆಲೆಗಳಿಂದ ಶಿಕ್ಷಿತರು ಹೆಚ್ಚಾಗುತ್ತಿರುವುದು ಗಣರಾಜ್ಯಕ್ಕೆ ಗೌರವ ತರುವ ಸಂಗತಿ. ಆದರೆ ಇದೇ ಸಂದರ್ಭದಲ್ಲಿ ನಡೆಯುತ್ತಿರುವ ಅಕ್ಷರ ದುರುಪಯೋಗ ಮತ್ತು ಅಕ್ಷರ ವ್ಯಕ್ತಿತ್ವದ ಪೊಳ್ಳುತನಗಳನ್ನು ನಾವು ಗಮನಿಸಬೇಕು. ಅನೇಕರಲ್ಲಿ ವಿದ್ಯೆ, ವಿನಯ ತರುವ ಬದಲು ವಿಕೃತಿಗಳನ್ನು ತರುತ್ತಿದೆ. ಅಕ್ಷರದ ಅಹಂಕಾರ ಹೆಚ್ಚುತ್ತಿದೆ. ಇದರಿಂದ ಕೆಲವರಾದರೂ ಅಕ್ಷರ ವ್ಯಭಿಚಾರದಲ್ಲಿ ತೊಡಗುತ್ತಾರೆ. ಅಕ್ಷರದ ಮೂಲಕ ಆತಂಕ ಹುಟ್ಟಿಸಿ ಭಯೋತ್ಪಾದಕರಾಗುವವರೂ ಇದ್ದಾರೆ. ಇಂಥವರೆಲ್ಲ ತಮಗೆ ತಾವು ಸ್ವಯಂಸಿದ್ಧರೆಂಬ ಭ್ರಮೆಯಲ್ಲಿ ಆತ್ಮವಂಚನೆ ಮತ್ತು ಅನ್ಯವಂಚನೆ- ಎರಡಕ್ಕೂ ಕಾರಣರಾಗುತ್ತರೆ. ಶಿಕ್ಷಿತ ಜನಾಂಗ ಅಶಿಕ್ಷಿತರಿಂದ ಅಂತರ ಹೆಚ್ಚಿಸಿಕೊಳ್ಳುವ ಅಪಾಯವೂ ನಮ್ಮ ಕಣ್ಣೆದುರಿಗಿದೆ. ಒಂದು ಕಾಲಕ್ಕೆ ಅಕ್ಷರ ಕಲಿಕೆಯೇ ದುಸ್ಸಾಧ್ಯವಾಗಿದ್ದ ಈ ದೇಶದಲ್ಲಿ ಗಣರಾಜ್ಯದ ವಾತಾವರಣದಿಂದ ಅದು ಸಾಧ್ಯವಾಗುತ್ತಿದ್ದು, ಇದನ್ನು ಮೀರಿದ ಮುನ್ನೋಟ ಮತ್ತು ಮಾನವೀಯ ದನಿಗಳನ್ನು ನಮ್ಮ ಅಕ್ಷರಗಳು ಮಿಡಿಯಬೇಕು. ಪ್ರಜಾಪ್ರಭುತ್ವದಲ್ಲಿ ಅಕ್ಷರಗಳಿಗೆ ಅಂತಃಕರಣವಿರಬೇಕು. ಇದು ಯಾವುದೇ ಮಾನವೀಯ ಸಮಾಜದ ಆಶಯ.

ಈ ಆಶಯಕ್ಕನುಗುಣವಾದ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆಯಾದರೂ ಅವನ್ನು ಮೆಟ್ಟಿಮರೆಸುವಂತೆ ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಕ್ಷರದ ಆತ್ಮವಂಚನೆಗಳು ಒಗ್ಗೂಡುತ್ತಿವೆ. ಪೊಳ್ಳು ವ್ಯಕ್ತಿತ್ವಗಳನ್ನು ರೂಪಿಸುತ್ತಿವೆ. ಇದು ನಿಸ್ಸಂದೇಹವಾಗಿ ಜನವಿರೋಧಿ ಪ್ರಕ್ರಿಯೆ; ಗಣರಾಜ್ಯವನ್ನು ಗೂಳಿರಾಜ್ಯ ಮಾಡುವ ಕ್ರಿಯೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಗಣರಾಜ್ಯ ಕಂಡ ಇನ್ನೊಂದು ಪ್ರಮುಖ ತಳಮಳವೆಂದರೆ ಪ್ರಾದೇಶಿಕ ಮತ್ತು ಪ್ರತ್ಯೇಕತಾವಾದ. ವಾಸ್ತವವಾಗಿ ಪ್ರಾದೇಶಿಕವಾದ ಮತ್ತು ಪ್ರತ್ಯೇಕವಾದಗಳು ಬೇರೆಯೇ ನೆಲೆಗಳನ್ನು ಪಡೆದಿದೆ. ಆದರೂ ಪ್ರತ್ಯೇಕತಾವಾದಕ್ಕೆ ಪ್ರಾದೇಶಿಕವಾದವು ಮೂಲ ಪ್ರೇರಣೆಯಂತೆ ಕೆಲಸ ಮಾಡಿದೆ. ಗಣರಾಜ್ಯ ಘೋಷಣೆಯ ನಂತರದ ನಮ್ಮ ಯೋಜನೆಗಳು ತೋರಿದ ಪ್ರಾದೇಶಿಕ ಅಸಮತೋಲನ, ಅಸಮಾನತೆಗಳು ಪ್ರಾದೇಶಿಕವಾದ ಹುಟ್ಟಲು ಕಾರಣವಾದವು. ತಂತಮ್ಮ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಸಂರಕ್ಷಿಸಿಕೊಳ್ಳಬಯಸುವ ‘ಸಾಂಸ್ಕೃತಿಕ ಸ್ವಾಯತ್ತತೆ’ಯ ಅಪೇಕ್ಷೆ ಒಂದು ಕಡೆಗಿದ್ದರೆ, ಮೇಲೆ ಸೂಚಿಸಿದ ಅಸಮತೋಲನದ ಫಲವಾಗಿ ಕಡೆಗಣಿಸಲ್ಪಟ್ಟ ಭಾವನೆ ಮತ್ತು ಅವಕಾಶವಂಚಿತ ಅಸಹಾಯಕತೆಯಿಂದ ಹುಟ್ಟಿದ ಆಕ್ರೋಶವು ಪ್ರಾದೇಶಿಕ ಭಾವನೆಗಳನ್ನು ಕೆರಳಿಸತೊಡಗಿತು. ಇದೇ ಅಂಶ ಅತ್ಯುಗ್ರ ಸ್ಥಿತಿ ತಲುಪಿದಾಗ ಪ್ರತ್ಯೇಕತಾವಾದ ಹುಟ್ಟಿತು. ಪ್ರಾದೇಶಿಕ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿಯ ಅವಕಾಶವಿರಬೇಕೆಂಬ ಒಂದು ಬೇಡಿಕೆಯೇ ಆಗಬಾರದು. ಯಾಕೆಂದರೆ ಫೆಡರಲ್ ಪದ್ಧತಿಯನ್ನು ಒಪ್ಪಿದ ನಮ್ಮ ಸಂವಿಧಾನದ ಒಂದರ್ಥದಲ್ಲಿ ಪ್ರಾಂತ್ಯಗಳಿಗೆ ವ್ಯಕ್ತಿತ್ವದ ನೆಲೆಯೊದಗಿಸಿದೆ. ಪ್ರಾಂತೀಯ ವ್ಯಕ್ತಿತ್ವವನ್ನು ಉಳಿಸಿಕೊಂಡೇ ರಾಷ್ಟ್ರೀಯ ವ್ಯಕ್ತಿತ್ವವಾಗುವುದು ಫೆಡರಲ್ ಪದ್ಧತಿಯ ಆಶಯ. ಆದ್ದರಿಂದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ಪೂರಕವಾಗಿರಬೇಕೇ ಹೊರತು ವಿರುದ್ಧ ದಿಕ್ಕಿನಲ್ಲಿರಬೇಕಿಲ್ಲ. ಇದನ್ನು ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳ ಪರ ವಾದ ಮಂಡಿಸುವರು ಅಗತ್ಯವಾಗಿ ಅರಿಯಬೇಕು. ಈ ಅರಿವಿನ ಅಭಾವವೆ ಅನಾರೋಗ್ಯಕರ ನೆಲೆಗಳನ್ನು  ನಿರ್ಮಿಸುತ್ತಿದೆ.

ಕೇಂದ್ರ-ರಾಜ್ಯ ಸಂಬಂಧದ ಪ್ರಶ್ನೆಯೂ ಈ ಹಿನ್ನೆಲೆಯಲ್ಲೇ ಚರ್ಚಿತವಾಗುತ್ತಿದ್ದ ರಾಜ್ಯಗಳಿಗೆ ಹೆಚ್ಚು ಆರ್ಥಿಕ ಸ್ವಾಯತ್ತತೆ ಕೊಡುವುದು ಸೂಕ್ತ. ಆದರೆ ಸರ್ವ ಸಂಪೂರ್ಣ ಸ್ವಾಯತ್ತತೆ ಎನ್ನುವುದು ಪ್ರತ್ಯೇಕತಾವಾದವಾಗುವ ಅಪಾಯವಿದೆ. ಅಲ್ಲದೆ, ಪ್ರಾದೇಶಿಕವಾದಿಗಳು ಮಂಡಿಸುತ್ತಿರುವ ವಿಚಾರದ ಧಾಟಿಯನ್ನು ನೋಡಿದರೆ, ರಾಜ್ಯಗಳಿಗೆ ಸ್ವಾಯತ್ತತೆ ಸಿಕ್ಕಿದರೆ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆಯೆಂಬ ಭ್ರಮೆ ಕಾಣುತ್ತದೆ. ವಾಸ್ತವವಾಗಿ ನಿರುದ್ಯೋಗ, ಸಾಮಾಜಿಕ- ಆರ್ಥಿಕ ಅಸಮಾನತೆ, ಅನಕ್ಷರತೆ-ಇಂಥ ಮೂಲಭೂತ ಸಮಸ್ಯೆಗಳ ಮೂಲ ಇರುವುದು ರಾಜಕೀಯ ವ್ಯವಸ್ಥೆಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಬಲ್ಲ ರಾಜಕೀಯ ವ್ಯವಸ್ಥೆಯನ್ನು ಬರಮಾಡಿಕೊಳ್ಳುವ ಹೋರಾಟಗಳನ್ನು ರೂಪಿಸುವ  ಬದಲು ಪ್ರಾದೇಶಿಕ ಮತ್ತು ಪ್ರತ್ಯೇಕತಾವಾದಗಳೇ ಪರಿಹಾರವೆಂಬಂತೆ ಅಭಿಪ್ರಾಯ ಮೂಡಿಸಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಕ್ರಮ ಸ್ವಾಗತಾರ್ಹವಾದರೂ ಇಷ್ಟರಿಂದಲೇ ನಿರುದ್ಯೋಗ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾಕೆಂದರೆ ನಿರುದ್ಯೋಗವು ಪ್ರಾದೇಶಿಕತೆ ಅಥವಾ ರಾಷ್ಟ್ರೀಯತೆ ಪರಿಕಲ್ಪನೆಗಳ ಸೃಷ್ಟಿಯಲ್ಲ; ದೇಶದ ಆರ್ಥಿಕ ನೀತಿಯನ್ನು ಅವಲಂಬಿಸಿದ ಸಮಸ್ಯೆ. ಈ ಅರಿವಿಲ್ಲದೆ ಭ್ರಮೆ ಮೂಡಿಸುವುದು, ಸಮಸ್ಯೆಯ ಮೂಲವನ್ನು ಮೂಲೆಗೊತ್ತುವುದು ಪ್ರಾದೇಶಿಕವಾದದ ಸ್ವಯಂ ಸಮಸ್ಯೆ. ಈ ಸಮಸ್ಯೆಯನ್ನು ನೀಗಿಕೊಂಡು ಹೊಸ ರಾಜಕೀಯ ವ್ಯವಸ್ಥೆಯನ್ನು ಅಪೇಕ್ಷಿಸುವ ಅರಿವಿನ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾಂಸ್ಕೃತಿಕ ಸ್ವಾಯತ್ತತೆ ಮತ್ತು ಹೆಚ್ಚು ಆರ್ಥಿಕಸ್ವಾಯತ್ತತೆಗೆ ತನ್ನ ಬೇಡಿಕೆಯನ್ನು ಮಿತಿಗೊಳಿಸಿಕೊಳ್ಳುವುದು ಆರೋಗ್ಯಕರ ಪ್ರಾದೇಶಿಕವಾದವಾಗುತ್ತದೆ. ಈ ಬೇಡಿಕೆಯನ್ನು ಗೌರವಿಸುವುದು ಉತ್ತಮ ರಾಷ್ಟ್ರೀಯವಾದವಾಗುತ್ತದೆ. ಆದರೆ ಪ್ರತ್ಯೇಕವಾದವು ರಾಷ್ಟ್ರೀಯ ಅಭದ್ರತೆಗೆ ಕಾರಣವಾಗುತ್ತದೆ.

ಸಾಮಾಜಿಕ ಆರ್ಥಿಕ ಸಮಾನತೆಯನ್ನು ತರಬಯಸುವ ಸೂಕ್ತ ಪ್ರಾಮಾಣಿಕ ರಾಜಕೀಯ ವ್ಯವಸ್ಥೆ ಮತ್ತು ಜನಪರ ಕಾಳಜಿಯ ಕಾರ್ಯಕ್ರಮಗಳು, ಪ್ರತ್ಯೇಕತಾವಾದ ಹುಟ್ಟದಂತೆ ನೋಡಿಕೊಳ್ಳಲು ಸಾಧ್ಯವಿತ್ತು. ಹೀಗಾಗದೆ ಪ್ರಾದೇಶಿಕತೆಯಿಂದ ಪ್ರತ್ಯೇಕತೆಯತ್ತ ಚಳವಳಿಗಳು ತಿರುಗಿದಾಗ ವಿದೇಶಿಶಕ್ತಿಗಳು ಕೈವಾಡ ನಡೆಸಿದ್ದೂ ಉಂಟು. ಅಭಿವೃದ್ಧಿಶೀಲ ರಾಷ್ಟ್ರಗಳು ಸಮತೆಯ ಸಮಾಜದತ್ತ ಸರಿಯದಂತೆ ತಡೆಯುವ ಯತ್ನವಾಗಿ ವಿದೇಶಿಶಕ್ತಿಗಳು ಹೇರಳ ಹಣ ಸುರಿಯುವುದು ಮತ್ತು ಪ್ರತ್ಯೇಕತೆಯನ್ನು ಪ್ರಚೋದಿಸುವುದು ಈಗ ರಹಸ್ಯವಾಗಿ ಉಳಿದಿಲ್ಲ. ಕೆಲವೊಮ್ಮೆ ಪ್ರಾರಂಭದಲ್ಲಿ ಪ್ರಾಮಾಣಿಕವಾಗಿಯೇ ಪ್ರತ್ಯೇಕತೆಯ ಹೋರಾಟಗಳು ಹುಟ್ಟಿದರೂ ಆಮೇಲೆ ವಿದೇಶೀ ಸೂಕ್ಷ್ಮಗಳು ತಳುಕು ಹಾಕಿಕೊಳ್ಳಬಹುದು; ಪರೋಕ್ಷವಾಗಿ ಪ್ರತ್ಯೇಕತೆಯ ವಿಚಾರವನ್ನು ಗಟ್ಟಿಗೊಳಿಸುವ ವೈಚಾರಿಕ ಪ್ರಯತ್ನಗಳು ನಡೆಯಬಹುದು. ಒಟ್ಟಿನಲ್ಲಿ ಜನಪರತೆಯ ಹೆಸರಿನಲ್ಲೇ ಜನವಿರೋಧೀ ಪರಿಣಾಮವನ್ನುಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ನಮ್ಮ ಗಣರಾಜ್ಯ ಎದುರಿಸುತ್ತಿರುವ ಒಂದು ಪ್ರಮುಖ ಸವಾಲು, ಈ ಸವಾಲನ್ನು ಪ್ರಾದೇಶಿಕ ಅಸಮತೋಲನವನ್ನು ನೀಗುವ ನಿಜವಾದ ಫೆಡರಲ್ ವ್ಯವಸ್ಥೆಯ ಒಳನೋಟದಿಂದಲೇ ಎದುರಿಸಬೇಕು; ಪ್ರಾದೇಶಿಕ ಪ್ರಾಮುಖ್ಯತೆಯನ್ನು ಒಪ್ಪುತ್ತ ಪ್ರತ್ಯೇಕತೆಯ ಪ್ರಯತ್ನಗಳನ್ನು ಮಣ್ಣುಗೂಡಿಸಬೇಕು. ಈ ದಿಕ್ಕಿನಲ್ಲಿ ನಮ್ಮ ಗಣರಾಜ್ಯಕ್ಕೆ ಬೇಕಾಗಿರುವುದು-ಸಾಮಾಜಿಕ, ರಾಜಕೀಯ ಸಂಕಲ್ಪ, ಇಲ್ಲದಿದ್ದರೆ ಪ್ರಾದೇಶಿಕತೆಯ ಹೆಸರಿನಲ್ಲಿ ಭಾವೋದ್ರೇಕದ ಬಿಂದ್ರನ್ವಾಲೆಗಳು ‘ಸೃಷ್ಟಿ’ ಯಾಗುತ್ತಲೇ ಇರುತ್ತಾರೆ.

ನಮ್ಮ ದೇಶವು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸವಾಲೆಂದರೆ ಕೋಮುವಾದ, ಈ ಸವಾಲು ನಮ್ಮ ದೇಶದ ಸ್ವಾತಂತ್ರ್ಯಗಳಿಕೆಯ ಸಂದರ್ಭದಿಂದಲೂ ಇದೆ. ಈಗಂತೂ ಕೋಮುವಾದದ ಕೆಂಡ, ದೇಶದ ಸಂದಿಗೊಂದಿಯ ಕಿಟಕಿ ಬಾಗಿಲುಗಳನ್ನು ಬಡಿಯುತ್ತಿದ್ದು ಅತ್ಯಂತ ಸೂಕ್ಷ್ಮ ಸ್ಥಿತಿಯನ್ನು ತಲುಪುತ್ತಿದೆ. ಅಲ್ಪಸಂಖ್ಯಾತರ ಅಭದ್ರತೆ ಮತ್ತು ಬಹುಸಂಖ್ಯಾತರ ಅಸಹನೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಚಿಲ್ಲರೆತನ ವಿಜೃಂಭಿಸುತ್ತಿದೆ. ಈಗ ಹಿಂದೂ-ಮುಸ್ಲಿಂ ಮತ್ತು ಹಿಂದೂ-ಸಿಖ್ ಜನಾಂಗಗಳ ನಡುವೆ ವಿಷಗೋಡೆ ನಿರ್ಮಿಸಿರುವ ಕೋಮುವಾದವು ಮುಂದೊಂದು ದಿನ ದಲಿತ ಜನಾಂಗ ಮತ್ತು ಸವರ್ಣೀಯ ಹಿಂದುಗಳ ನಡುವಿನ ನಿರಂತರ ಅಂತರ ಮತ್ತು ಅಂತರ್ಘರ್ಷಣೆಯತ್ತ ಕಣ್ಣು ಹಾಕಲಿದೆ. ಕೋಮುವಾದದ ವ್ಯಾಪ್ತಿ ಅಪಾಯಕಾರಿಯಾಗಿ ಹಬ್ಬುವ ಎಲ್ಲ ಲಕ್ಷಣಗಳೂ ಇಂದು ಕಾಣಿಸುತ್ತಿದೆ. ಇದರಿಂದ ಜನಸಾಮಾನ್ಯರು ಮತ್ತು ಭ್ರಮಿತ ‘ಬುದ್ಧಿಜೀವಿ’ಗಳು ಅನೇಕರಲ್ಲಿ ಚರಿತ್ರೆಯನ್ನು ಸಮಚಿತ್ತದಿಂದ ನೋಡಿ ಮತೀಯ ದೃಷ್ಟಿಯನ್ನು ಮೆಟ್ಟುವ ಮಾನವೀಯ ದೃಷ್ಟಿ ಮಾಯವಾಗುತ್ತಿದೆ. ಚರಿತ್ರೆಯು  ಚರ್ಚೆಯ ವಸ್ತುವಾಗದೆ ವೈಭವೀಕರಣದ ಬೀದಿ ಜಗಳವಾಗುವುದು ಯಾವುದೇ ಮನಸ್ಸು ಮತ್ತು ಮೆದುಳುಗಳಿಗೆ ಮಾಡುವ ಅಪಮಾನ. ಆದರೆ ಮತೀಯ ಹಕ್ಕು ಸ್ಥಾಪನೆಯ ಸಾಧನವಾಗಿ ಈ ಅಪಮಾನ ಮಾಡುವ ಕೆಲಸ ನಡೆಯುತ್ತಲೇ ಇದೆ. ಇದರಿಂದ ಚರಿತ್ರೆಯ ಸಂಶೋಧನೆ, ಸಂವಾದಗಳಿಗಿಂತ ಭಾವೋದ್ರೇಕ ಬಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಯಾವುದೇ ಮತಧರ್ಮದಲ್ಲಿರುವ ಕೋಮುವಾದಿಗಳನ್ನು ವಿರೋಧಿಸುವ ವಾತಾವರಣವನ್ನು ನಾವು ಬೆಳೆಸಬೇಕು. ನಮ್ಮ ಗಣರಾಜ್ಯವು ಯಾವುದೇ ಕಾರಣಕ್ಕೂ ಮತೀಯ ರಾಜ್ಯವಾಗಕೂಡದು. ನಮ್ಮ ಗಣರಾಜ್ಯ ನಿಜವಾದ ಅರ್ಥದಲ್ಲಿ ಜನಪರರಾಜ್ಯವಾಗಿ ಅರ್ಥವಂತಿಕೆಯನ್ನು ಅರಳಿಸಬೇಕು.

ಈ ದಿಕ್ಕಿನತ್ತ ಹೆಜ್ಜೆಯಿಡುವುದಕ್ಕಾಗಿಯೇ ನಾವು ನಮ್ಮ ಗಣರಾಜ್ಯ ಎತ್ತಸಾಗಿದೆ ಎಂದು ಸಾವಿರ ಸಾರಿ ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ಪ್ರಶ್ನೆಯ ಹಿಂದೆ ಇರಬೇಕಾದ್ದು ನಿರಾಶೆಯಲ್ಲ; ನೋವು ಮತ್ತು ಕಳಕಳಿ.

 

Leave a Reply

Your email address will not be published. Required fields are marked *