ಕೇಳುವವರೇ ಇಲ್ಲದ ಕರಾವಳಿ

ನವೀನ್ ಸೂರಿಂಜೆ

ಕರಾವಳಿಯ ಎರಡು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳೇ ಇಲ್ಲ. ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜಕೀಯ ಗೊಂದಲಗಳ ಹಿನ್ನಲೆಯಲ್ಲಿ ಜನರ ಪಾಲಿಗೆ ಸ್ವಿಚ್ಡ್ ಆಫ್ ಆಗಿದ್ದಾರೆ. ಕೇಳುವವರೇ ಇಲ್ಲದ ಕರಾವಳಿಯಲ್ಲಿ ಇದೀಗ ಜಿಲ್ಲಾಡಳಿತ ಆಡಿದ್ದೇ ಆಟ. ಇದೇ ಸಂದರ್ಭವನ್ನು ಬಳಸಿಕೊಂಡ ಮಂಗಳೂರು ವಿಶೇಷ ಆರ್ಥಿಕ ವಲಯದಂತಹ ಸಂಸ್ಥೆಗಳು ಜಿಲ್ಲಾಡಳಿತವನ್ನು ಬಳಸಿಕೊಂಡು ಜನರ ಪ್ರತಿಭಟನೆಯನ್ನು ಹತ್ತಿಕ್ಕಿ ಬಲವಂತವಾಗಿ ಕಾಮಗಾರಿ ಆರಂಭಿಸುತ್ತಿವೆ. ಮೀನುಗಾರ ಸಾರ್ವಜನಿಕ ಆಲಿಕಾ ಸಭೆ ನಡೆಸದೆ, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆ, ಮೀನುಗಾರರ ಆಕ್ಷೇಪಗಳಿಗೆ ಉತ್ತರ ನೀಡದೆ ಕಡಲಿಗೆ ವಿಷ ಉಣಿಸುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಯಶಸ್ವಿಯಾಗಿದ್ದೇ ಆದಲ್ಲಿ ಕರಾವಳಿಯ ಸಾವಿರಾರು ಮೀನುಗಾರರ ಕುಲಕಸುಬಿಗೆ ಬರೆ ಬೀಳಲಿದ್ದು, ಕರಾವಳಿ ಕಡಲಿನ ಜೀವಚರಗಳು ನಶಿಸಿ ಕಡಲು ಬಂಜೆಯಾಗಲಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಮಂಗಳೂರಿನ ಬಜಪೆ, ಕಳವಾರು, ಪೆರ್ಮುದೆ ಗ್ರಾಮಗಳ 1800 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲಾಗಿದ್ದು, ಅದರಲ್ಲಿ ಒಎನ್‍ಜಿಸಿ ಸೇರಿದಂತೆ ಎರಡು ಮೂರು ಪೆಟ್ರೋಲಿಯಂ ಸಂಬಂಧಿ ಕಂಪನಿಗಳು ಅನುಷ್ಠಾನಗೊಳ್ಳಲಿವೆ. ಕೃಷಿಕರಿಂದ ಕೃಷಿ ಭೂಮಿಯನ್ನೆನೋ ಬಲವಂತದಿಂದ ಸ್ವಾಧೀನ ಮಾಡಲಾಗಿದೆ. ಇದೀಗ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿ ಜನರ ವಿರೋಧದ ಮಧ್ಯೆಯೇ ಆರಂಭಗೊಂಡಿದೆ. ಜನರಿಂದ ಭಾರೀ ವಿರೋಧ ವ್ಯಕ್ತವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ರಾಜಕೀಯ ಗೊಂದಲದ ಈ ಸಮಯವನ್ನೇ ಬಳಕೆ ಮಾಡಿಕೊಂಡು ಪುನರಾರಂಭ ಮಾಡಲಾಗುತ್ತಿದೆ.

ಏನಿದು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ?

ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ ಇದೊಂದು ಕೇಂದ್ರ ಸರ್ಕಾರ ಪ್ರಾಯೋಜಿತ ವಿದೇಶದ ಹಿತ ಕಾಯುವ ಬಂಡವಾಳಶಾಹಿಗಳ ಯೋಜನೆ. ನೂರು ಶೇಕಡಾ ರಫ್ತು ಮಾಡುವ ಉತ್ಪನ್ನಗಳನ್ನಷ್ಟೇ ತಯಾರು ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರ ನೂರು ಶೇಕಡಾ ತೆರಿಗೆ ರಿಯಾಯಿತಿಯನ್ನೂ ನೀಡಿದೆ. ಎಸ್ಇಝಡ್ ಸ್ಥಾಪನೆಗಾಗಿ ಈ ದೇಶದಲ್ಲಿ 705 ಅರ್ಜಿಗಳು ಬಂದಿದ್ದು, ತೀರಾ ನಿನ್ನೆ ಮೊನ್ನೆಯವರೆಗೂ 400 ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. “ಭಾರತ ದೇಶ ಅದ್ಯಾಕೆ ಎಸ್ಇಝಡ್‍ಗಳ ಹಿಂದೆ ಬಿದ್ದಿದೆ ಎಂಬುದು ಗೊತ್ತಾಗುತ್ತಿಲ್ಲ. ಎಸ್ಇಝಡ್‍ನಿಂದ ದೇಶದ ಉದ್ದಾರ ಸಾಧ್ಯವಿಲ್ಲ” ಎಂದು ವಲ್ಡ್‌ಬ್ಯಾಂಕ್ ಸಲಹೆಗಾರ ರಾಜನ್ ಹೇಳುವುದನ್ನು ಭಾರತ ಸರ್ಕಾರ ಕೇಳಿಯೂ ಕೇಳದಂತೆ ಅನುಮತಿ ಕೊಡುತ್ತಲೇ ಇದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡಲು ಒಎನ್‍ಜಿಸಿ ಎಂಬ ಪೆಟ್ರೋಲಿಯಂ ಆಧಾರಿತ ಕಂಪನಿಗೆ ಅನುಮತಿ ದೊರೆತು ಕರ್ನಾಟಕ ಸರ್ಕಾರದ ಶೇಕಡಾ 23ರ ಪಾಲುದಾರಿಕೆಯಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಅಧಿಸೂಚನೆ ಹೊರಡಿಸಲಾಯಿತು. ಒಎನ್‍ಜಿಸಿ ಕೊರಿಕೆಯಂತೆ ಅದರದ್ದೇ ಒಡೆತನದ ಎಂಆರ್‌ಪಿಎಲ್ (ಮಂಗಳೂರು ಪೆಟ್ರೋಕೆಮಿಕಲ್ ಪ್ರೈವೇಟ್ ಲಿಮಿಟೆಡ್) ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೊಡಲು ಕೆಐಎಡಿಬಿ ಮಂಗಳೂರು ತಾಲೂಕಿನ ಬಜಪೆ, ಪೆರ್ಮುದೆ, ಕಳವಾರಿನ 1800 ಎಕರೆಗೆ ಪ್ರಥಮವಾಗಿ ಅಧಿಸೂಚನೆ ಹೊರಡಿಸಿತು.

ಕಳವಾರಿನಲ್ಲಿರುವ ಜಮಿನ್ದಾರಿ ಗುತ್ತಿನ ಮನೆಗಳ ಚೇಲಾಗಿರಿಯಿಂದಾಗಿ 1800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಅನಾಯಾಸವಾಗಿ ಕೆಐಎಡಿಬಿ ಪಡೆದುಕೊಂಡಿತು. ಎರಡನೇ ಹಂತದ ಎಸ್ಇಝಡ್‍ಗಾಗಿ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮದ 2035 ಎಕರೆ ಕೃಷಿ ಭೂಮಿಯನ್ನು ಸ್ವಾಧೀನತೆಗೆ ನೋಟಿಫೈಗೊಳಿಸಿತು. ಇದರಲ್ಲಿ ಮಾತ್ರ ಎಸ್ಈಝಡ್ ಆಟ ನಡೆಯಲಿಲ್ಲ. ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್ ಮತ್ತು ನಟೇಶ್ ಉಳ್ಳಾಲ್‍ರ ಉತ್ಸಾಹದಿಂದ ಇಡೀ ಹಳ್ಳಿಯ ರೈತರನ್ನು ಸಂಘಟಿಸಿ ಹೋರಾಟ ನಡೆಸಲಾಯಿತು. ಎಲ್ಲಾ ಧರ್ಮದ ಧರ್ಮ ಗುರುಗಳನ್ನೂ ಹೋರಾಟಕ್ಕೆ ಬಳಸಿ ಪಕ್ಕಾ ರಾಜಕೀಯ ಗಿಮಿಕ್‍ಗಳನ್ನು ಮಾಡಿ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಲಾಯಿತು. ರೈತರ ಭೂಮಿ ಮರಳಿ ರೈತರಿಗೆ ದಕ್ಕಿತು. ಅದರ ಹಿಂದಿನ ಹೋರಾಟದ ಕತೆಗಳು ಎರಡು ವಾಕ್ಯ ಅಥವಾ ಒಂದು ಲೇಖನದಿಂದ ಹೇಳಿ ಮುಗಿಯುವಂತದ್ದಲ್ಲ. ಇದೀಗ ಮೊದಲ ಹಂತದ ಎಸ್ಇಝಡ್ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿವೆ. ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಉಲ್ಲಂಘನೆ ಮಾಡಿ, ಪರಿಸರ ಕಾಯ್ದೆಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದೆ ಎಂಬುದು ಬೇರೆ ಮಾತು. ಅದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಹದಿನೈದು ಮಂದಿ ಉತ್ತರ ಭಾರತದ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.

ಬಂಜೆಯಾಗಲಿರುವ ಕರಾವಳಿ ಕಡಲು

ಇದೀಗ ಮೊದಲ ಹಂತದ ಎಸ್ಇಝಡ್‍ನಲ್ಲಿ ಬರುವ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಕಾಮಗಾರಿಯನ್ನು ಕಡಲ ತಡಿಯಲ್ಲಿ ಮಾಡಲಾಗುತ್ತದೆ. 1990 ರಲ್ಲಿ ಎಂಆರ್‌ಪಿಎಲ್‍ನಿಂದ ತ್ಯಾಜ್ಯ ನೀರು ವಿಸರ್ಜನಾ ಪೈಪ್‍ಲೈನ್ ಅಳವಡಿಸಲು ಮೀನುಗಾರರು ವಿರೋಧ ವ್ಯಕ್ತಪಡಿಸಿ ಕರ್ಫ್ಯೂ ಹೇರುವ ಹಂತಕ್ಕೂ ತಲುಪಿತ್ತು. ಈ ಬಾರಿ  ಎಂಆರ್‌ಪಿಎಲ್ ತ್ಯಾಜ್ಯಕ್ಕಿಂತಲೂ ಅಪಾಯಕಾರಿ ತ್ಯಾಜ್ಯವನ್ನು ಕಡಲಿಗೆ ಬಿಡುವ ಪೈಪ್‍ಲೈನ್‍ಗೆ ಮೀನುಗಾರರ ಅಂತಹ ವಿರೋಧಗಳು ಇಲ್ಲ. ಯಾಕೆಂದರೆ ಮೀನುಗಾರ ಮುಖಂಡರು ಎನಿಸಿಕೊಂಡವರ ಬಳಿ ಎಸ್ಈಝಡ್ ಈಗಾಗಲೇ ಮಾತನಾಡಿ ಸೆಟಲ್ ಮಾಡಿಕೊಂಡಿದೆ. “ತ್ಯಾಜ್ಯ ನೀರನ್ನು ಶುದ್ದೀಕರಿಸಿ ಬಿಡುತ್ತೇವೆ. ಮೀನುಗಾರಿಕೆಗೆ ಕ್ಷೀಣಿಸುವ ಯಾವುದೇ ಅಪಾಯ ಇಲ್ಲ,” ಎಂದು ಹೇಳುವ ಎಸ್ಇಝಡ್ ನಾಡದೋಣಿ ಮೀನುಗಾರರಿಗೆ ಅಧಿಕೃತವಾಗಿ ಎಸ್ಈಝಡ್ ಚೆಕ್ ಮೂಲಕ ಐವತ್ತು ಸಾವಿರ ಪರಿಹಾರ ನೀಡಿದೆ. ಈ ಪರಿಹಾರ ಫಲನುಭವಿಗಳ ಪಟ್ಟಿ ತಯಾರಿಸಿದ್ದು ಜಿಲ್ಲಾಡಳಿತವಲ್ಲ. ಬದಲಿಗೆ ಮೀನುಗಾರ ಮುಖಂಡರು. ನೈಜ ನಾಡದೋಣಿ ಮೀನುಗಾರರಿಗೆ ಪರಿಹಾರ ನೀಡದೆ ಮೀನುಗಾರ ಮುಖಂಡರಿಗೆ ಬೇಕಾದವರಿಗೆ ಪರಿಹಾರ ನೀಡಲಾಗಿದೆ. ಪರಿಹಾರವನ್ನು ಎಲ್ಲಾ ಮೀನುಗಾರರಿಗೆ ನೀಡಲು ಎಸ್ಇಝಡ್ ಸಿದ್ದವಿದ್ದರೂ ಎಲ್ಲಾ ಮೀನುಗಾರರು ಪರಿಹಾರ ಪಡೆದುಕೊಳ್ಳಲು ಸಿದ್ದರಿಲ್ಲ. ಮೀನುಗಾರಿಯನ್ನೇ ಕುಲಕಸುಬು ಮಾಡಿಕೊಂಡಿರುವವರು ಒಮ್ಮೆ ಸಿಗೋ ಐವತ್ತು ಸಾವಿರ ಪರಿಹಾರದ ಹಣದಲ್ಲಿ ಜೀವಮಾನವಿಡೀ ಬದುಕು ಸಾಗಿಸುತ್ತೇನೆ ಎಂದು ಭ್ರಮೆಪಡಲು ಮೀನುಗಾರರೇನೂ ಮೂರ್ಖರಲ್ಲ. ಎಸ್ಇಝಡ್ ಪೈಪ್‍ಲೈನ್ ಕಾಮಗಾರಿ ಮುಗಿದು ಸಮುದ್ರಕ್ಕೆ ಎಸ್ಇಝಡ್ ತ್ಯಾಜ್ಯ ನೀರನ್ನು ಬಿಟ್ಟ ಕರಾವಳಿ ಕಡಲು ಬಂಜೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನಲೆಯಲ್ಲಿ ಮೀನುಗಾರರು ಪೈಪ್‍ಲೈನ್ ವಿರೋಧಿಸುತ್ತಿದ್ದರು. 2011 ನವೆಂಬರ್‍‌ನಲ್ಲಿ ಪೈಪ್‍ಲೈನ್ ಕಾಮಗಾರಿಗೆ ಬಂದಿದ್ದ ಬಾರ್ಜ್‌ಗೆ ನೈಜ ಮೀನುಗಾರರು ವಿರೋಧ ವ್ಯಕ್ತಪಡಿಸಿದ ನಂತರ ಎಸ್ಇಝಡ್ ಇತ್ತೀಚಿನವರೆಗೆ ತೆಪ್ಪಗಿತ್ತು.

ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಮತ್ತು ಪಕ್ಷ ಮೀನುಗಾರರನ್ನು ನಿರ್ಲಕ್ಷಿಸುವಂತಿಲ್ಲ. ಕರಾವಳಿಯಲ್ಲಿ ಬಲಿಷ್ಠ ವರ್ಗವಾಗಿರುವ ಮೀನುಗಾರರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡೇ ಬಂದಿದ್ದಾರೆ. ಮೀನುಗಾರರ ಚಿಕ್ಕ ಪ್ರತಿಭಟನೆ ಮತ್ತು ಬೇಡಿಕೆಯನ್ನೂ ಕರಾವಳಿಯಲ್ಲಿ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತದೆ. ಮೀನುಗಾರರ ಯಾವುದೇ ಸಮಸ್ಯೆಗಳಿಗೂ ಯಾವುದೇ ಪಕ್ಷಗಳು ಈವರೆಗೂ ಪರಿಹಾರ ಕಂಡುಕೊಳ್ಳದಿದ್ದರೂ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಪೈಪ್‍ಲೈನ್ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಆದರೆ ಮೊನ್ನೆಯಿಂದ ಪ್ರಾರಂಭವಾದ ಯಡಿಯೂರಪ್ಪರ ರೆಸಾರ್ಟ್ ವಾಸ ಮತ್ತು ಡಿ.ವಿ. ಸದಾನಂದ ಗೌಡರ ಖುರ್ಚಿಯ ಗೊಂದಲದ ಕಡೆಗೆ ಎಲ್ಲರ ಗಮನ ಹರಿಯುತ್ತಿದ್ದಂತೆ ಎಸ್ಇಝಡ್ ಮೆಲ್ಲನೆ ಎದ್ದುಕೊಂಡಿದೆ. ಮಾರ್ಚ್ 21 ಬಜೆಟ್ ಮಂಡನೆ ಮತ್ತೊಂದೆಡೆ ಉಡುಪಿ ಉಪಚುನಾವಣೆ ಫಲಿತಾಂಶ. ಇವೆಲ್ಲದರ ಮಧ್ಯೆ ರಾಜಕೀಯ ಗೊಂದಲ. ಇದೇ ಸಮಯವನ್ನು ಬಳಸಿಕೊಂಡ ಎಸ್ಈಝಡ್ ಪೈಪ್‍ಲೈನ್‍ಗಾಗಿ ಮೀನುಗಾರರ ವಿರೋಧದ ಮಧ್ಯೆಯೇ ಸುರತ್ಕಲ್ ಸಮೀಪದ ಮಲ್ಲಮಾರ್ ಕಡಲಿಗೆ ಬೃಹತ್ ಬಾರ್ಜ್ ತಂದಿದೆ. ಜನವಿರೋಧವನ್ನು ಲೆಕ್ಕಿಸದೇ ಕಾಮಗಾರಿ ನಡೆಸುತ್ತೇವೆ ಎಂದು ಪೊಲೀಸರ ಮೂಲಕ ಮೀನುಗಾರರಿಗೆ ಬೆದರಿಕೆ ಹಾಕಿದೆ.

ಕೇಳುವವರೇ ಇಲ್ಲದ ಕರಾವಳಿ

ಈಗ ಕರಾವಳಿಯನ್ನು ಕೇಳುವವರೇ ಇಲ್ಲ. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಕಳೆದ ಫೆಬ್ರವರಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಸಚಿವರಾಗಿದ್ದಾಗಲೂ ಎಸ್ಇಝಡ್, ನಾಗಾರ್ಜುಗಳಂತಹ ಕಂಪನಿಗಳನ್ನು ಬೆಂಬಲಿಸುತ್ತಿದ್ದರು ಎಂಬುದು ಬೇರೆ ಮಾತು. ಆದರೆ ತೋರ್ಪಡಿಕೆಗಾದರೂ ಜನಪ್ರತಿನಿಧಿಯೆಂಬಂತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಬ್ಲೂ ಫಿಲಂ ಹಗರಣದಲ್ಲಿ ಸಿಲುಕಿ ಮನೆ ಸೇರಿದ್ದಾರೆ. ಮಂಗಳೂರಿನ ನಿವಾಸಿ, ಉಡುಪಿ ಲೋಕಸಭಾ ಸದಸ್ಯರಾಗಿ ಈಗ ಮುಖ್ಯಮಂತ್ರಿಯಾಗಿರುವ ಸದಾನಂದ ಗೌಡರನ್ನು ಸಂಪರ್ಕಿಸೋಣ ಎಂದರೆ ಅವರು ಶಾಸಕರ ಲೆಕ್ಕಾಚಾರದಲ್ಲೇ ಬ್ಯೂಸಿ ಆಗಿದ್ದಾರೆ. ಒಂದೆಡೆ ಎಲೆಕ್ಷನ್ ಲೆಕ್ಕಾಚಾರದ ತಲೆಬಿಸಿಯಾದರೆ ಮತ್ತೊಂದೆಡೆ ಯಡಿಯೂರಪ್ಪ ಕಾಟ, ಚೊಚ್ಚಲ ಬಜೆಟ್ ಮಂಡನೆಯ ಆತಂಕಗಳು, ಹೈಕಮಾಂಡ್‍ನಿಂದ ಬರೋ ಮಾತುಗಳ ನಿರೀಕ್ಷೆಗಳ ಮಧ್ಯೆ ಸದಾನಂದ ಗೌಡರ ತಲೆ ಹನ್ನೆರಡಾಣೆ ಆಗಿದೆ. ಈಗ ಸದಾನಂದ ಗೌಡರು ಕನಿಷ್ಠ ದೂರವಾಣಿ ಕರೆಗೂ ಸಿಗುವುದು ಕಷ್ಟ. ಒಟ್ಟಾರೆ ಕೇಳುವವರೇ ಇಲ್ಲದ ಕರಾವಳಿಯನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಸದ್ಬಳಕೆ ಮಾಡಿಕೊಳ್ಳುತ್ತಿದೆ.

(ಚಿತ್ರಕೃಪೆ: ಡೈಜಿವರ್ಲ್ಡ್, ಇತ್ಯಾದಿ)

One thought on “ಕೇಳುವವರೇ ಇಲ್ಲದ ಕರಾವಳಿ

  1. upendra hosbet

    i think you have done justice to the issue
    but limiting the msez agitation to the entusiasm one or two people may not be fair.
    similerly blaming the entire fishing community is also not fair.
    if one traces the agitations against polluting industries, many ngos, politicians, social workers, communities , oppurtunists have participated but each one with his/her own agenda, be lt funding, publicity or just to boost their ego. but ultimately the ones whose livihood is affected,is expected to continue the struggle. but the capacity of the promoters of the industry to tempt,bribe, threaten is enormous. and not surprisingly the politcions in power, officials, oppurtunists are with the industrialists. ultimately the agitators succumb to one of those.
    one must also note the role played by the so called intelectuals of our area. just talking about tulu culture in the seminars, (but afriad to go against the govt ) won’t help. making poor students to learn tulu in schools will not sustain our culture. our farmers and fisher folk are the ones who have sustained, it, because it is part of their living.
    coming to the present agitation i am not sure of the result. people are interested in compensation which as you rightly said will not help them throught their life. the pollution of the sea will affect their and their future generation and in the long run, also will affect the fish eating population! either eat diseased fish or pay thru your nose for the buy quality fish. loss of prime agriculture land will result in higher cosr of rice. all the money generated by the industrialisation may not be enough to buy a kg of rice.

    Reply

Leave a Reply

Your email address will not be published. Required fields are marked *