ನಕ್ಸಲ್ ಕಥನಕ್ಕೊಂದು ಮುನ್ನುಡಿ

ಸ್ನೇಹಿತರೆ,

ಕನ್ನಡಕ್ಕೆ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಅಧ್ಯಾಯವೊಂದನ್ನು ಸಂಪೂರ್ಣವಾಗಿ ಪರಿಚಯಿಸಲು ನಮ್ಮ ಪ್ರೀತಿಯ ಜಗದೀಶ್ ಕೊಪ್ಪರವರು ಸಿದ್ಧವಾಗಿದ್ದಾರೆ. ಹಲವಾರು ತಿಂಗಳುಗಳ ಕರ್ನಾಟಕ ಮತ್ತು ಭಾರತದ ಹಲವು ಕಡೆಗಳ ಓಡಾಟ, ಅಧ್ಯಯನ, ಮಾತುಕತೆಗಳ ಫಲ ಇದು.

ನಕ್ಸಲ್ ಚಳವಳಿ ರಕ್ತಸಿಕ್ತ ಚಳವಳಿ. ಅದೊಂದು ಸಾಮಾಜಿಕ ಮತ್ತು ರಾಜಕೀಯ ಹೋರಾಟವೂ ಹೌದು. ಆದರೆ ಅದು ನಮ್ಮ ರಾಷ್ಟ್ರನಿರ್ಮಾತೃಗಳು ಒಪ್ಪಿಕೊಂಡ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಪೂರಕವಾಗಿಲ್ಲ. ಆದರೆ, ಭಾರತದಂತಹ ಅಸಮಾನ ಮತ್ತು ಶೋಷಣೆಯ ಸಮಾಜದಲ್ಲಿ, ಪ್ರಜಾಪ್ರಭುತ್ವ ಮತ್ತು ಆಧುನಿಕ ವಿಚಾರಧಾರೆಗಳು ಬೇರೂರದಂತಹ ಕಗ್ಗಾಡುಗಳಲ್ಲಿ, ಪಾಳೆಯಗಾರಿಕೆ ಪರಿಸರದಲ್ಲಿ, ಶೋಷಣೆ ಮತ್ತು ಅನ್ಯಾಯ ಮುಂದುವರೆಯುತ್ತಲೇ ಇದೆ. ಮಾನವ ಹಕ್ಕುಗಳ ದಮನವಾಗುತ್ತಲೇ ಇದೆ. ಜಮೀನ್ದಾರರ ಮತ್ತು ಶೋಷಕರ ವಿರುದ್ಧ ಸಿಗುವ ಕ್ಷಣಿಕ ಮತ್ತು ತಕ್ಷಣದ ನ್ಯಾಯವನ್ನೇ ನ್ಯಾಯ ಎಂದು ಭಾವಿಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುವ ನ್ಯಾಯ ಮತ್ತು ಸುಧಾರಣೆಗಳೇ ದೀರ್ಘಕಾಲೀನವಾದವು; ಸಾರ್ವಕಾಲಿಕವಾದವು; ಮತ್ತು ಅಹಿಂಸಾತ್ಮಕವಾದವು.

ವರ್ತಮಾನದಲ್ಲಿ ಅಪ್ರಸ್ತುತವಾಗಬೇಕಿದ್ದ ಈ ನಕ್ಸಲ್ ಚಳವಳಿ ಭಾರತದಲ್ಲಿ ಹಬ್ಬುತ್ತಲೇ ಇದೆ. ಒಂದೆಡೆ ನಕ್ಸಲರ ಎನ್‌ಕೌಂಟರ್ ಆಗುತ್ತಿದ್ದರೆ ಮತ್ತೊಂದೆಡೆ ಅವರೂ ಸಹ ಅಪಹರಣ ಮತ್ತು ಕಗ್ಗೊಲೆಗಳಲ್ಲಿ ತೊಡಗಿದ್ದಾರೆ. ಒಡಿಶಾದಲ್ಲಿ ಒಬ್ಬ ಶಾಸಕ ಮತ್ತು ಒಬ್ಬ ವಿದೇಶಿ ಪ್ರಜೆ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಕೊಪ್ಪರವರು ಈ ಚಳವಳಿಯ ಇತಿಹಾಸ ಮತ್ತು ವರ್ತಮಾನವನ್ನು ಅದರೆಲ್ಲ ಮಗ್ಗಲುಗಳೊಂದಿಗೆ ನಮಗೆ ಪರಿಚಯಿಸ ಹೊರಟಿದ್ದಾರೆ.

ಇಂದಿನಿಂದ ಈ ಮಾಲಿಕೆ ಪ್ರತಿ ಗುರುವಾರದಂದು ಪ್ರಕಟವಾಗುತ್ತದೆ.

ಈ ಮಾಲಿಕೆ ಆರಂಭಿಸುತ್ತಿರುವ ಕೊಪ್ಪರವರಿಗೆ ವರ್ತಮಾನದ ಬಳಗದಿಂದ ಪ್ರೀತಿಯ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಎಂದಿನಂತೆ ನಿಮ್ಮ ಅಭಿಪ್ರಾಯ ಮತ್ತು ಟಿಪ್ಪಣಿಗಳು ಬರುತ್ತಿರಲಿ.

– ರವಿ ಕೃಷ್ಣಾರೆಡ್ಡಿ



– ಡಾ.ಎನ್. ಜಗದೀಶ್ ಕೊಪ್ಪ  


ಇದು ಕಳೆದ ಎಂಟು ವರ್ಷದ ಹಿಂದಿನ ಒಂದು ಘಟನೆ, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಜಾಗತೀಕರಣ ಮತ್ತು ಗ್ರಾಮಭಾರತ ಎಂಬ ಶೀರ್ಷಿಕೆಯಡಿ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಕೈಗೊಂಡಿದ್ದ, ಸಂದರ್ಭದಲ್ಲಿ ದೆಹಲಿಯ ‘ಡೆಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್’ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಗ್ರಂಥಾಲಯದಲ್ಲಿ ಕಾಶ್ಮೀರದ ಸ್ಥಿತಿ ಗತಿ ಬಗ್ಗೆ ಎಮ್.ಫಿಲ್. ಅಧ್ಯಯನ ಮಾಡಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಸಂಶೋಧನಾ ಪ್ರಬಂಧದಲ್ಲಿ ಭಯೋತ್ಪಾದನೆ ಮತ್ತು ಬಡತನ ಕುರಿತು ಬರೆದಿದ್ದ ಒಂದು ಅಧ್ಯಾಯ ನನ್ನ ಗಮನ ಸೆಳೆಯಿತು.

ಕಾಶ್ಮೀರದ ಬಡ ಮುಸ್ಲಿಂ ಕುಟುಂಬಗಳ ಯುವಕರಿಗೆ ಪಾಕಿಸ್ತಾನದ ಐ.ಎಸ್,ಐ ಏಜೆಂಟರು ತಲಾ ಎರಡರಿಂದ ಮೂರು ಲಕ್ಷ ರೂ ಹಣ ನೀಡಿ, ಅವರಿಗೆ ಜೆಹಾದ್ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ಕುರಿತು ತರಬೇತಿ ನೀಡುವುದನ್ನು ದಾಖಲಿಸಿದ್ದಳು.

ಮನೆಯಲ್ಲಿ ಬೆಳೆದು ನಿಂತ ತಮ್ಮ ಸಹೋದರಿಯರ ಮದುವೆ ಖರ್ಚಿಗಾಗಿ ಕಾಶ್ಮೀರದ ಅಮಾಯಕ ಯುವಕರು ಇಂತಹ ಸಂಚಿಗೆ ಬಲಿಯಾಗುತ್ತಿರುವ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಸಮೀಕ್ಷೆ ಮಾಡಿ, ಪೋಲಿಸರಿಂದ ಬಂಧಿತರಾದ ಯುವಕರನ್ನು ಭೇಟಿಯಾಗಿ ಅಧಿಕೃತವಾಗಿ ಅಂಕಿ ಅಂಶಗಳನ್ನು ದಾಖಲಿಸಿದ್ದಳು. ಅಲ್ಲಿಯವರೆಗೆ ನಾನು ಬಡತನ ಮತ್ತು ಹಿಂಸೆ ಹಾಗೂ ಭಯೋತ್ಪಾದನೆ ನಡುವೆ ಹೀಗೊಂದು ಸಾವಯವ ಸಂಬಂಧ ಇದೆ ಎಂದು ಊಹಿಸಿರಲಿಲ್ಲ.

ಚಿಕ್ಕಂದಿನಿಂದಲೂ ದೇವರು, ಧರ್ಮ, ಮೂಢನಂಬಿಕೆ, ಕಂದಾಚಾರ ಇವುಗಳ ಆಚೆಗೆ ಬೆಳೆದು ಬಂದ ನಾನು. ಕಾಲೇಜು ದಿನಗಳಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತನಾದವನು. ಇವುಗಳ ನಡುವೆಯೂ, ಅತಿಯಾದ ಎಡಪಂಥೀಯ ಅಥವಾ ಬಲಪಂಥೀಯ ವಿಚಾರಧಾರೆಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿದವನು. ಹಾಗಾಗಿ ಗಾಂಧಿ ಮತ್ತು ಲೋಹಿಯಾ, ಅಂಬೇಡ್ಕರ್ ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು ವರ್ತಮಾನದ ಎಲ್ಲಾ ವಿದ್ಯಾಮಾನಗಳನ್ನು ಈವರೆಗೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.

ಮುಂದಿನ ವರ್ಷದ ಮೇ ತಿಂಗಳಿಗೆ 45 ವರ್ಷ ತುಂಬುವ ನಕ್ಸಲ್ ಚಳವಳಿಯ ಹೋರಾಟವನ್ನು 1978 ರಿಂದ ಅವಲೋಕಿಸುತ್ತಾ ಅವರ ಹಿಂಸೆಯ ಹಾದಿಯೊಂದನ್ನು ಹೊರತುಪಡಿಸಿ, ಹಲವು ಸಂದರ್ಭಗಳಲ್ಲಿ ಅವರ ವಿಚಾರಧಾರೆಗೆ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿದ್ದೇನೆ ಆದರೆ, ನಕ್ಸಲ್ ಹೋರಾಟದ ಏಳು ಬೀಳಿನ ಇತಿಹಾಸ ದಾಖಲಿಸುವ ಯಾವುದೇ ಆಸೆಯಾಗಲಿ, ಕನಸಾಗಲೀ ಕಳೆದ ನವಂಬರ್‌ವರೆಗೆ ನನ್ನಲ್ಲಿ ಇರಲಿಲ್ಲ.

ಕಾಶ್ಮೀರದ ಹಾಗೆ ನಕ್ಸಲ್ ಚಳವಳಿಯಲ್ಲಿ ಬಡತನ ಮತ್ತು ಹಿಂಸೆಯ ನಡುವೆ ಸಂಬಂಧವಿರಬಹುದೇ ಎಂಬ ಕುತೂಹಲ ಮಾತ್ರ ನನ್ನಲ್ಲಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಜವಹರಲಾಲ್‍ನೆಹರೂ ವಿ.ವಿ. ಹಾಗೂ ಕೊಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ  ಕಾಣೆಯಾಗಿ ನಕ್ಸಲ್ ಚಳವಳಿಗೆ ಸೇರ್ಪಡೆಯಾಗುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೆ. ಇವರಲ್ಲಿ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿರುವುದು ನನ್ನ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೇಶಾದ್ಯಂತ ನಡೆಯುತ್ತಿದ್ದ ನಕ್ಸಲ್‍ರ ಹಿಂಸಾಚಾರ, ಪೋಲಿಸರ ಎನ್‍ಕೌಂಟರ್ ಇವುಗಳನ್ನು ಗಮನಿಸುತ್ತಿದ್ದ ನನಗೆ 2011 ರ ನವಂಬರ್ 24 ರಂದು ಪಶ್ಚಿಮ ಬಂಗಾಳದ ಪೋಲಿಸರು ನಕ್ಸಲಿಯರ ನಾಯಕ ಕಿಶನ್‍ಜಿಯನ್ನು ಬಲೆಗೆ ಕೆಡವಿ, ಕೊಂದುಹಾಕಿದ ಘಟನೆ ಮತ್ತು ಆನಂತರದ ಬೆಳವಣಿಗೆಗಳು ನನ್ನ ಈ ಕಥನಕ್ಕೆ ಪ್ರೇರಣೆಯಾದವು.

34 ವರ್ಷಗಳ ಹಿಂದೆ ಆಂಧ್ರದ ಕರೀಂನಗರ ಜಿಲ್ಲೆಯ ತನ್ನ ಹುಟ್ಟೂರನ್ನು ತೊರೆದ ಕಿಶನ್‍ಜಿ (ಮೂಲಹೆಸರು ಮಲ್ಲೋಜಲ ಕೋಟೇಶ್ವರರಾವ್) ನಂತರ ಆಂಧ್ರ, ಒಡಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‍ಘಡ್, ಮಹಾರಾಷ್ಟ್ರ ರಾಜ್ಯಗಳ 16 ಸಾವಿರ ಹಳ್ಳಿಗಳನ್ನು ತನ್ನ ಮನೆಯನ್ನಾಗಿ ಮಾಡಿಕೊಂಡು ಮಾವೋವಾದಿ ನಕ್ಸಲರ ನಾಯಕನಾಗಿ ಬೆಳೆದು ನಿಂತವನು. ಈ ಎಲ್ಲಾ ರಾಜ್ಯಗಳ ಗುಡ್ಡಗಾಡು ಜನರ ಪ್ರೀತಿಯ ಆರಾಧ್ಯ ದೈವವಾಗಿದ್ದ ಕಿಶನ್‍ಜಿ, ಪೋಲಿಸರಿಗೆ ಮತ್ತು ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಪಡೆಗೆ ತನ್ನ ಮೊಬೈಲ್ ನಂಬರ್ ನೀಡಿ ತನ್ನನ್ನು ಬಂಧಿಸುವಂತೆ ಸವಾಲೆಸೆದ ಸಾಹಸಿ ಈತ. ಇದು ಸಾಲದೆಂಬಂತೆ ಮಾಧ್ಯಮದವರನ್ನು ತನ್ನ ಅಡಗುದಾಣಕ್ಕೆ ಕರೆಸಿಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಾ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅಂತಿಮವಾಗಿ ಪೋಲಿಸರು ಆತನ ಸಹಚರರಾದ ನಕ್ಸಲಿಯರಿಗೆ ಹಣದ ಆಮಿಷ ಒಡ್ಡಿ ಕಿಶನ್‍ಜಿಯ ಚಲನವಲನದ ಮಾಹಿತಿ ಪಡೆದು ಕಳೆದ ನವಂಬರ್ 24 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಆರಣ್ಯ ಪ್ರದೇಶದ ಅಡಗು ತಾಣದಲ್ಲಿ ಅವನನ್ನು ಜೀವಂತ ಹಿಡಿದುದಲ್ಲದೆ, ಸ್ಥಳದಲ್ಲೇ ಕೊಂದು ಹಾಕಿ, ಇಡೀ ಘಟನೆಯನ್ನು ಎನ್‍ಕೌಂಟರ್ ಎಂದು ಪ್ರತಿಬಿಂಬಿಸಿದರು.

‘ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಮಾವೋವಾದಿ) ಸಂಘಟನೆಯ ಪ್ರಮುಖ ನಾಯಕನಾಗಿದ್ದ ಕಿಶನ್‍ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜಿ ಕರೆ ನೀಡಿದ್ದ, ಶಾಂತಿಯುತ ಮಾತುಕತೆಗೆ ಒಲವು ತೋರಿದ್ದ. ಆದರೆ ತನ್ನ ಸಂಗಡಿಗರ ಕುತಂತ್ರಕ್ಕೆ ಬಲಿಯಾದ. ಐದು ದಿನಗಳ ನಂತರ ಆಂಧ್ರದ ಅವನ ಹುಟ್ಟೂರಿಗೆ ಶವವನ್ನು ತಂದಾಗ 34 ವರ್ಷಗಳ ನಂತರ ಶವವಾಗಿ ಬಂದ ಮಗನ ಮುಖವನ್ನು ನೋಡಿದ 89 ವರ್ಷದ ಅವನ ತಾಯಿ ಸದ್ದಿಲ್ಲದೆ ಕಣ್ಣೀರಿಟ್ಟಳು. ಕಿಶನ್‍ಜಿಯ ಅಂತ್ಯ ಸಂಸ್ಕಾರದ ದೃಶ್ಯಗಳನ್ನು ತೆಲುಗು ಸುದ್ಧಿ ಚಾನಲ್‍ಗಳು ನೇರ ಪ್ರಸಾರ ಮಾಡಿದವು. ಇದನ್ನು ವೀಕ್ಷಿಸುತ್ತಾ ಕುಳಿತ್ತಿದ್ದ ನಾನು. ಆಕೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ನೋಡಿ ಆ ಕ್ಷಣಕ್ಕೆ ದಂಗಾಗಿ ಹೋದೆ.

“ಈ ದಿನ ನನ್ನ ಮಗ ಸತ್ತಿರಬಹುದು ಆದರೆ, ನನಗೆ ಈ ನೆಲದಲ್ಲಿ ಸಾವಿರಾರು ಕೋಟೇಶ್ವರರಾವ್‍ನಂತಹ (ಕಿಶನ್‍ಜಿ) ಮಕ್ಕಳಿದ್ದಾರೆ,” ಎನ್ನುವ ಆ ವೃದ್ಧೆಯ ಮಾತಿನ ಹಿಂದಿನ ಸಿಟ್ಟು ನೋವು, ಸಂಕಟ ಈ ಎಲ್ಲಾ ಭಾವನೆಗಳು ಏಕಕಾಲಕ್ಕೆ ಅನೇಕ ಅರ್ಥಗಳನ್ನು ಹೊರಹಾಕುತ್ತಿದ್ದವು. ಇಡೀ ನಕ್ಸಲ್ ಚಳವಳಿಯ ಇತಿಹಾಸವನ್ನು ಗಮನಿಸಿದರೆ, ಅದರ ನಾಯಕತ್ವ ವಹಿಸಿದ ಬಹುತೇಕ ನಾಯಕರು ಸಾಮಾನ್ಯ ವ್ಯಕ್ತಿಗಳಲ್ಲ, ನಮ್ಮ ಕರ್ನಾಟಕದ ಸಾಕೇತ್‍ರಾಜನ್‍ನಿಂದ ಹಿಡಿದು, ಕಿಶನ್‍ಜಿ, ಅಜಾದ್, ಚಾರುಮುಜಮ್ದಾರ್, ಕನುಸನ್ಯಾಲ್, ಸತ್ಯನಾರಾಯಣ, ಕೊಂಡಪಲ್ಲಿ ಸೀತಾರಾಮಯ್ಯ, ಗಣಪತಿ, ನಾಗಭೂಷಣ ಪಟ್ನಾಯಕ್, ಸುನೀತಿಘೋಷ್, ದತ್ತ ಸರೋಜ್, ಅಸೀಮ್ ಚಟರ್ಜಿ, ರಾಜೇಂದ್ರಕುಮಾರ್ ಇವರೆಲ್ಲಾ ಪದವೀಧರರು ಮತ್ತು ಇಂಜಿನಿಯರ್‍‍ಗಳು, ಇದಲ್ಲದೇ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಇವರುಗಳು ಸಮಾಜದ ಮುಖ್ಯ ವಾಹಿನಿಯಲ್ಲಿದ್ದರೆ ಈ ನಾಡಿಗೆ, ಈ ನೆಲಕ್ಕೆ ಆಸ್ತಿಯಾಗಬಲ್ಲವರಾಗಿದ್ದರು. ಇವೆರೆಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ಸಂಗತಿಯೆಂದರೆ, ಗುಡ್ಡಗಾಡಿನ ಬುಡಕಟ್ಟು ಜನಾಂಗವನ್ನು ಇನ್ನಿಲ್ಲದಂತೆ ಶೋಷಣೆ ಮಾಡಿದ ಜಮೀನುದಾರರು, ಅರಣ್ಯಾಧಿಕಾರಿಗಳು, ಮತ್ತು ಪೋಲಿಸರ ಅಮಾನುಷ ವರ್ತನೆ. ಬಾಯಿಲ್ಲದವರ ಶೋಷಿತರ ಸಂಘಟನೆಗೆ ಮುಂದಾಗಿ, ಅವರಿಗೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಡಲು ಹೋಗಿ, ಅರಿವಿಲ್ಲದಂತೆ ತಮ್ಮ ಬದುಕನ್ನು ಬೀದಿಗೆ ಬಿಸಾಕಿ ಪೊಲೀಸರ ಗುಂಡಿಗೆ ಬಲಿಯಾಗಿ ಅನಾಥ ಹೆಣವಾದ ನತದೃಷ್ಟರು ಇವರು.

ಅಂದಿನ ದಿನಗಳ ಆ ಕಾಲಘಟ್ಟದಲ್ಲಿ ಇವರ ಹೋರಾಟ ನಿಜಕ್ಕೂ ಅತ್ಯಗತ್ಯವಾಗಿತ್ತು. ಆದರೆ, ಇವತ್ತಿನ ಈ ಸಂದರ್ಭಕ್ಕೆ ನಕ್ಸಲಿಯರ ಈ ಕದನ ಅಪ್ರಸ್ತುತ. ವರ್ತಮಾನದಲ್ಲಿ ನಾವು ಕಾಣುತ್ತಿರುವ ನಕ್ಸಲಿಯರ ಹೋರಾಟ ಏನಿದ್ದರೂ ತಮ್ಮ ಅಸ್ತಿತ್ವದ ಉಳಿವಿಗಾಗಿ ಎಂಬಂತಾಗಿದೆ. ಅಂದು ಅವರ ಕೈಯಲ್ಲಿ ಕೇವಲ ಬಿಲ್ಲು ಬಾಣಗಳಿದ್ದವು. ಈಗ ಅದೇ ಕೈಗಳಿಗೆ ಬಂದೂಕು, ಬಾಂಬುಗಳು ಬಂದಿವೆ.

1917 ರಲ್ಲಿ ರಷ್ಯಾ ಕ್ರಾಂತಿಗೆ ನಾಂದಿ ಹಾಡಿದ ಲೆನಿನ್ ಮತ್ತು ಚೀನಾದ ಸಾಮಾಜಿಕ ಕ್ರಾಂತಿಗೆ ಕಾರಣಕರ್ತನಾದ ಮಾವೋತ್ಸೆ ತುಂಗನ ವಿಚಾರಧಾರೆಗಳನ್ನು ನಂಬಿಕೊಂಡು ಭಾರತದಲ್ಲಿ ಕ್ರಾಂತಿ ಮಾಡುತ್ತೇವೆ ಎನ್ನುವುದು ನಕ್ಸಲಿಯರ ಭ್ರಮೆಯಷ್ಟೇ ಮಾತ್ರವಲ್ಲ, ಹುಚ್ಚುತನದ ಪರಮಾವಧಿ ಎಂದು ಕೂಡ ವಿಶ್ಲೇಷಿಸಬಹುದು. ಚೀನಾ ಮತ್ತು ರಷ್ಯಾ ಈ ಎರಡು ರಾಷ್ಟ್ರಗಳು ತಮ್ಮ ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ಈಗಾಗಲೇ ಗಾಳಿಗೆ ತೂರಿ ಜಾಗತೀಕರಣವೆಂಬ ವಿಟ ಪುರುಷನಿಗೆ ಸೆರಗು ಹಾಸಿ ಮಲಗಿರುವಾಗ, ಭಾರತದಂತಹ ಬಹು ಸಂಸ್ಕೃತಿಯ ಈ ನೆಲದಲ್ಲಿ ಕ್ರಾಂತಿ ಸಾಧ್ಯವೆ? ಒಮ್ಮೆ ತಣ್ಣಗೆ ಕುಳಿತು ಯೋಚಿಸಿ ನೋಡಿ. ಆದರೆ, ನಕ್ಸಲಿಯರು ಇದನ್ನು ನಂಬುವುದಿಲ್ಲ. ಏಕೆಂದರೆ, ಅವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ನನಗೆ ಇವರು ಮೆದುಳು ತೊಳೆಸಿಕೊಂಡವರು (Brain washed people) ಎಂಬ ಭಾವನೆ ಗಟ್ಟಿಯಾಗಿದೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ನಕ್ಸಲಿಯರ ಹೋರಾಟಕ್ಕೆ ಅಂತ್ಯವೆಂಬುದು ಕನಸಾಗಿದೆ ಹಾಗಾಗಿ ಎಂದೂ ಮುಗಿಯದ ಯುದ್ಧ ಎಂಬ ಶೀರ್ಷಿಕೆಯ ಈ ಹೋರಾಟದ ಕಥನಕ್ಕಾಗಿ ಕಳೆದ ಜನವರಿಯಲ್ಲಿ ನಾನು ಆಂಧ್ರ, ಪಶ್ಚಿಮಬಂಗಾಳ, ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳ ಹದಿನೆಂಟು ನಕ್ಸಲ್‍ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಅಡಗು ತಾಣಕ್ಕೆ ಭೇಟಿ ನೀಡಿ, ಮಾಜಿ ನಕ್ಸಲಿಯರು ಮತ್ತು ಮಾವೋವಾದಿ ಕಮ್ಯೂನಿಷ್ಟರ ಜೊತೆ ಮಾತನಾಡಿ, ಅವರಿಂದ ಸಂಗ್ರಹಿಸಿದ ಅಂಕಿ ಅಂಶ, ಮಾಹಿತಿ ಇವೆಲ್ಲವನ್ನು ಕ್ರೂಢೀಕರಿಸಿ ನಕ್ಸಲರ ಇತಿಹಾಸವನ್ನು ಕಥನ ರೂಪದಲ್ಲಿ ಇಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ.

ನಕ್ಸಲಿಯರ ಹೋರಾಟಕ್ಕೆ ಹಲವಾರು ಮಗ್ಗಲುಗಳಿವೆ. ಇದಕ್ಕೆ ಕೇವಲ ಒಂದು ದೃಷ್ಟಿಕೋನ ಸಾಲದು ಎಂಬ ನಂಬಿಕೆಯ ಆಧಾರದ ಮೇಲೆ ಈ ವಯಸ್ಸಿನಲ್ಲಿ, ಅದೂ ದಿನಕ್ಕೆ ಎರಡು ಬಾರಿ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹಿ ರೋಗಿಯಾಗಿ ರಿಸ್ಕ್ ಎನ್ನುವಂತಹ ಪ್ರವಾಸ ಕೈಗೊಂಡೆ.

ಹೈದರಾಬಾದ್‍ನಗರದ ಪೊಟ್ಟಿ ಶ್ರಿರಾಮುಲು ತೆಲುಗು ವಿ.ವಿ.ಯ ಮುಖ್ಯದ್ವಾರದಿಂದ ನನ್ನನ್ನು ಕರೆದೊಯ್ದ ನಕ್ಸಲ್ ಮಿತ್ರರು ಆಂಧ್ರದ ಕರೀಂ ನಗರ, ನಲ್ಗೊಂಡ, ವಿಜಯವಾಡ, ರಾಜಮಂಡ್ರಿ, ಶ್ರೀಕಾಕುಳಂ ಜಿಲ್ಲೆ ಹಾಗೂ ಒಡಿಸ್ಸಾದ ಗಂಜಾಂ ಜಿಲ್ಲೆಗಳಲ್ಲಿ ತಿರುಗಾಡಿಸಿ ಅಂತಿಮವಾಗಿ ಚಿಲ್ಕಾ ಸರೋವರದ ಬಳಿಯ ರೈಲು ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿದರು. ಜೊತೆಗೆ ಪಶ್ಚಿಮ ಬಂಗಾಳದ ಹಾಗೂ ಮಹಾರಾಷ್ಟ್ರದ ಲಿಂಕ್ ದೊರಕಿಸಿಕೊಟ್ಟರು. ಇದೆಲ್ಲಾ ಸಾಧ್ಯವಾದದ್ದು, ಆಂಧ್ರದ ಪ್ರಮುಖ ದಿನಪತ್ರಿಕೆಯಲ್ಲಿ ಸುದ್ಧಿ ಸಂಪಾದಕನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತನಾಗಿರುವ ನನ್ನ ಮಿತ್ರನಿಂದ. ಆತ ಮೂಲತಃ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯಿಂದ ಬಂದವನು, ಅವನ ಬಾಲ್ಯದ ಗೆಳೆಯರೆಲ್ಲಾ ನಕ್ಸಲ್ ಹೋರಾಟಗಾರರಾಗಿದ್ದವರು, ನಂತರದ ದಿನಗಳಲ್ಲಿ. ಭ್ರಮನಿರಶನಗೊಂಡವರು.

1967 ರಲ್ಲಿ ಪ್ರಪಥಮವಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್‍‌ಗ್ರೂಪ್ (ಪ್ರಜಾ ಸಮರಂ) ಎಂಬ ನಕ್ಸಲಿಯರ ಹೋರಾಟಕ್ಕೆ ನಾಂದಿ ಹಾಡಿದ ಪ್ರದೇಶವೆಂದರೆ,  ಶ್ರೀಕಾಕುಳಂ ಜಿಲ್ಲೆ. ಆದರೆ ಈಗ ಇಲ್ಲಿನ ಜನರಿಗೆ ಅದೊಂದು ಇತಿಹಾಸವೆನೋ ಎಂಬಾಂತಾಗಿದೆ. (ಈ ಬಗ್ಗೆ ಕಥನದಲ್ಲಿ ವಿವರಾಗಿ ಪ್ರಸ್ತಾಪಿಸಿದ್ದೇನೆ) ಕೊಲ್ಕತ್ತ ನಗರದಲ್ಲಿ ನಾನು ಉಳಿದಿದ್ದ ನಾಲ್ಕು ದಿನಗಳಲ್ಲಿ ಅಲ್ಲಿನ ಅನೇಕ ಕಮ್ಯೂನಿಷ್ಟ್ ಗೆಳೆಯರು ನನಗೆ ನಕ್ಸಲ್ ಇತಿಹಾಸ ಕುರಿತು ಸಮಗ್ರ ಮಾಹಿತಿ ಒದಗಿಸಿಕೊಟ್ಟರು, ಪ್ರತಿ ಗಂಟೆಗೊಮ್ಮೆ ಅವರ ಜೊತೆಗಿನ ಚಹಾ, ಸಿಗರೇಟು, ಮತ್ತು ರಾತ್ರಿಯ ಪಾರ್ಟಿಯಲ್ಲಿ ಅವರೊಂದಿಗೆ ನಡೆಸಿದ ಅಂತ್ಯವನ್ನೇ ಕಾಣದ ಚರ್ಚೆ ಇವೆಲ್ಲವೂ ನನ್ನ ಪಶ್ಚಿಮ ಬಂಗಾಳ ಒರಿಸ್ಸಾ ಪ್ರವಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿವೆ.

ಅಲ್ಲಿಂದ ಬಂದವನು ಮಾರ್ಚ್ ಮೊದಲವಾರ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಲೆದು ಬಂದೆ. ಕೇವಲ 20 ರಿಂದ 25 ಮಂದಿಯಷ್ಟು ಇರುವ ಕರ್ನಾಟಕದ ನಕ್ಸಲಿಯರು ಇವತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಎಷ್ಟೋ ವೇಳೆ ಅಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಭಕ್ತರಂತೆ ಭಾಗವಹಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಪ್ರದೇಶಗಳ ಗ್ರಾಮಸ್ಥರ ಸ್ಥಿ ತಿ ಹೇಳತೀರದಾಗಿದೆ. ಹಸಿದು ಬಂದು ಅನ್ನ ಕೇಳಿದವರಿಗೆ ಊಟ ಕೊಟ್ಟರೆ, ನಕ್ಸಲ್ ಬೆಂಬಲಿಗರೆಂಬ ಹಣೆಪಟ್ಟಿಯೊಂದಿಗೆ ಜೈಲು ಸೇರುವ ಸ್ಥಿತಿ, ಕೊಡದಿದ್ದರೆ, ನಕ್ಸಲಿಯರ ಬಂದೂಕಿನ ಭಯ ಅತ್ತ ಹಳ್ಳ, ಇತ್ತ ಹುಲಿ ಎಂಬಂತಿದೆ.

ನಾನು ಕರ್ನಾಟಕದ ಕಾಡುಗಳಲ್ಲಿ ಅಲೆಯುತ್ತಿದ್ದಾಗಲೇ ಪಶ್ಚಿಮ ಬಂಗಾಳದಲ್ಲಿ ತೀವ್ರತರವಾದ ಘಟನೆಗಳು ಜರುಗಿದವು. ಕಿಶನ್‍ಜಿ ನಂತರ ಸಂಘಟನೆಯ ಉಸ್ತುವಾರಿ ಹೊತ್ತಿದ್ದ ಆರ್,ಕೆ. ಹೆಸರಿನ ರಾಮಕೃಷ್ಣನನ್ನು ನಕ್ಸಲ್ ನಿಗ್ರಹ ಪಡೆ ಬಂಧಿಸಿದೆ. ಆಂಧ್ರ ಮೂಲದ ರಾಮಕೃಷ್ಣ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಶಸ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ. ಈತನ ಬಂಧನ ನಕ್ಸಲ್ ಹೋರಾಟದ ಬೆನ್ನು ಮೂಳೆಯನ್ನು ಮುರಿದಂತಾಗಿದೆ. ಇದಕ್ಕೆ ಪೂರಕವಾಗಿ ಹಲವು ಕಿಶನ್‍ಜಿ ಬೆಂಬಲಿಗರು ಇದೇ ಮಾರ್ಚ್ ಎಂಟರಂದು ಕೊಲ್ಕತ್ತ ನಗರದಲ್ಲಿ ಮಮತಾ ಬ್ಯಾನರ್ಜಿ ಎದುರು ಶರಣಾಗತರಾಗುವುದರ ಮೂಲಕ ಸಮಾಜದ ಮುಖ್ಯವಾಹಿನಿಯತ್ತ ಮುಖ ಮಾಡುತ್ತಿದ್ದಾರೆ. ಇದು ನಿಜಕ್ಕೂ ನೆಮ್ಮದಿಯ ಸಂಗತಿ.

(ಮುಂದುವರೆಯುವುದು)

2 thoughts on “ನಕ್ಸಲ್ ಕಥನಕ್ಕೊಂದು ಮುನ್ನುಡಿ

  1. jagadish

    nimma article thumba chennagide adare nimmanthe Himseyannu virodisuthale, avra bedikegalige sharanadavanu, aadare ee democratic country nalli ondu janarannu vicharavantharannagie maadi Maoism namma nelakke antikollalu sadhyavilla, Jai AMBEDKAR, Jai Lohiya

    Reply
  2. Ananda Prasad

    ನಿಮ್ಮ ಲೇಖನವು ವಾಸ್ತವದ ನೆಲೆಗಟ್ಟಿನಲ್ಲಿ ಮೂಡಿಬಂದಿದೆ. ಭಾರತದಲ್ಲಿ ಸಶಸ್ತ್ರ ಕ್ರಾಂತಿ ಯಶಸ್ವಿಯಾಗುವ ಪರಿಸ್ಥಿತಿ ಇಲ್ಲ. ಸಶಸ್ತ್ರ ಕ್ರಾಂತಿ ಯಶಸ್ವಿಯಾಗಬೇಕಾದರೆ ಅದು ಪ್ರವಾಹದ ರೀತಿ ಎದ್ದು ಬರಬೇಕು ಮತ್ತು ಬಹುಜನರ ಬೆಂಬಲ ಅದಕ್ಕೆ ದೊರಕಬೇಕು. ಇಂಥ ಪರಿಸ್ಥಿತಿ ರಷಿಯ ಹಾಗೂ ಚೀನಾದಲ್ಲಿ ದೊರಕಿದ ಕಾರಣ ಅಲ್ಲಿ ಸಶಸ್ತ್ರ ಕ್ರಾಂತಿ ಯಶಸ್ವಿಯಾಯಿತು. ಇಂಥ ಪರಿಸ್ಥಿತಿ ಭಾರತದಲ್ಲಿ ಇಲ್ಲ, ಇನ್ನು ಮುಂದೆಯೂ ಅಂಥ ಪರಿಸ್ಥಿತಿ ಬರುವ ಸಂಭವ ಇಲ್ಲವೇ ಇಲ್ಲ. ನಕ್ಸಲ್ ಚಳುವಳಿಯಲ್ಲಿ ನಮ್ಮ ದೇಶದ ಕೆಲವು ಉನ್ನತ ವಿದ್ಯಾವಂತ ಪ್ರತಿಭೆಗಳು ತೊಡಗಿ ಎನ್ಕೌಂಟರ್ಗಳಲ್ಲಿ ಸತ್ತು ಹೋಗಿದ್ದಾರೆ. ಇದು ದೇಶಕ್ಕಾದ ನಷ್ಟ. ಇದೇ ಪ್ರತಿಭೆಗಳು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟದಲ್ಲಿ ತೊಡಗಿದ್ದರೆ ದೇಶಕ್ಕೆ ಉತ್ತಮ ನಾಯಕತ್ವ ಕೊಡಲು ಸಾಧ್ಯವಿತ್ತು. ದೇಶದಲ್ಲಿ ಇಂದು ನಿಜ ಅರ್ಥದಲ್ಲಿ ನಾಯಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಸ್ವಾರ್ಥ ನಿಲುವಿನ ಪ್ರಗತಿಶೀಲ ಮನೋಭಾವದ ನಾಯಕರು ದೇಶಕ್ಕೆ ಅಗತ್ಯವಿದೆ. ಅಂಥ ಸ್ಥಾನವನ್ನು ನಕ್ಸಲ ಹೋರಾಟದಲ್ಲಿ ತೊಡಗಿ ಜೀವ ಕಳೆದುಕೊಂಡ ಪ್ರತಿಭಾವಂತರು ತುಂಬಲು ಸಾಧ್ಯವಿತ್ತು ಏಕೆಂದರೆ ಅವರಲ್ಲಿ ತಮ್ಮ ಜೀವವನ್ನೇ ಕೊಡುವ ಅರ್ಪಣಾ ಮನೋಭಾವ ಇತ್ತು.

    Reply

Leave a Reply to Ananda Prasad Cancel reply

Your email address will not be published. Required fields are marked *