Daily Archives: April 3, 2012

ಇದು ಕೇವಲ ಕೊಲೆಯಲ್ಲ!

– ಶಿವರಾಮ್ ಕೆಳಗೋಟೆ

ಕಳೆದ ನವೆಂಬರ್ ಅಮಾವಾಸ್ಯೆಯಂದು ರಾಣೆಬೆನ್ನೂರು ತಾಲೂಕಿನ ತಿರುಮಲದೇವರ ಕೊಪ್ಪದಲ್ಲಿ ನಡೆದು ಹೋದ ದಲಿತ ಯುವಕನ ನರಬಲಿ ಪ್ರಕರಣ ತೆರೆಯ ಹಿಂದೆ ಸರಿದು ಹೋಗಿದೆ. ಪ್ರಕರಣವನ್ನು ಒಂದು ಸಾಧಾರಣ ಕೊಲೆ ಎಂದು ಬಣ್ಣಿಸಲು ಹೊರಟ ಪೊಲೀಸರು ಅವಸರದಲ್ಲಿ ಅಮಾಯಕ ಯುವತಿ ಮುಖಕ್ಕೆ ಮಸಿ ಬಳಿದಿದ್ದಾರೆ. ಔಟ್‍ಲುಕ್‍ನ ಹಿರಿಯ ಸಹಾಯಕ ಸಂಪಾದಕ, ಕನ್ನಡಿಗರು ಹೆಮ್ಮೆ ಪಡುವಂತಹ ಬರಹಗಾರ, ಪತ್ರಕರ್ತ ಸುಗತ ಶ್ರೀನಿವಾಸರಾಜು ಹಾವೇರಿ, ರಾಣೆಬೆನ್ನೂರು ಅಲೆದಾಡಿ ವಿಸ್ತೃತವಾದ ತನಿಖಾ ವರದಿ ಮಾಡದೇ ಹೋಗಿದ್ದರೆ, ಈ ಹೊತ್ತಿಗೂ ಈ ಪ್ರಕರಣ ಸ್ಟಷ್ಟವಾಗಿ ಹೊರಬರುತ್ತಿರಲಿಲ್ಲ.

ಬಸವರಾಜ ಕಡೇಮನಿ ಎಂಬ ಯುವಕ ಹತ್ಯೆಯಾಗುತ್ತಾನೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆ ವರದಿ ಹೇಳುವಂತೆ ‘ಬಸವರಾಜನ ಮುಖ ಚಪ್ಪಟೆಯಾಗಿದೆ. ಎರಡೂ ಕಡೆಯಿಂದ ಬಲವಾಗಿ ಒತ್ತಲಾಗಿದೆ. ಹಣೆಯ ಮೇಲೆ 5 ಸೆಂಟಿಮೀಟರ್ ನಷ್ಟು ಆಳದ ಗಾಯವಿದೆ. ಬಲಗಣ್ಣು ಅಪ್ಪಚ್ಚಿಯಾಗಿದೆ. ರುಂಡ ಹಾಗೂ ಮುಖದ ಎಲ್ಲಾ ಮೂಳೆಗಳು ತುಂಡಾಗಿವೆ. ಮೆದುಳು ಒಂದು ಮಾಂಸದ ಮುದ್ದೆಯಂತಾಗಿದೆ. ಬಲ ಮತ್ತು ಎಡ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹೃದಯ ಖಾಲಿ (ಕಾಣೆಯಾಗಿದೆ ಎಂದು ಓದಿಕೊಳ್ಳಬೇಕು). ತೀವ್ರ ಆಘಾತ ಮತ್ತು ಮೆದುಳಿನ ರಕ್ತಸ್ರಾವದಿಂದ ವ್ಯಕ್ತಿಯ ಸಾವು ಸಂಭವಿಸಿದೆ’.

ಬಸವರಾಜನ ಹೆಣ ಬೇಲಿಯಲ್ಲಿ ಕಂಡಾಗ ಅದನ್ನು ಮೊದಲು ನೋಡಿದವರ ಪ್ರಕಾರ ಅವನ ದೇಹದ ತುಂಬೆಲ್ಲಾ ಅರಿಶಿನ ಮತ್ತು ಕುಂಕುಮ ಸವರಲಾಗಿತ್ತು. ಅವನ ತಲೆಗೂದಲಿಗೆ ಎಣ್ಣೆ ಹಚ್ಚಲಾಗಿತ್ತು. ಬಾಯಿಗೆ ಹತ್ತಿ ತುರುಕಿದ್ದರು. ಹಣೆ ಭಾಗದಲ್ಲಿ ಮೊಳೆಯೊಂದನ್ನು ಸುತ್ತಿಗೆಯಿಂದ ಹೊಡೆದಿರಬಹುದೇನೋ ಎಂಬ ಸಂಶಯಕ್ಕೆ ಕಾರಣವಾಗುವಂತೆ ಒಂದು ರಂಧ್ರವಿತ್ತು. ಬಲಗಣ್ಣು ಅಪ್ಪಚ್ಚಿಯಾಗಿದ್ದು ಸ್ಪಷ್ಟವಾಗಿತ್ತು. ಕಿವಿ, ತುಟಿ ಹರಿದಿದ್ದವು ಮತ್ತು ಕೆಲ ಹಲ್ಲುಗಳನ್ನೂ ಕಿತ್ತಿದ್ದರು. ಮುಖ ಅದೆಷ್ಟು ವಿಕಾರಗೊಂಡಿತ್ತೆಂದರೆ, ಅವನು ಬಸವರಾಜನೇ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತಿರಲಿಲ್ಲ.

ಆದದ್ದಿಷ್ಟು: ಬಸವರಾಜನ ಕುಟುಂಬ ಮೇಲ್ಜಾತಿಯ ಜಮೀನ್ದಾರ ಬಸವನಗೌಡನ ಮನೆ ಮತ್ತು ಜಮೀನಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು. ಜಮೀನ್ದಾರ ಇತ್ತೀಚೆಗಷ್ಟೆ ಕಟ್ಟಿಸಿದ್ದ ಮನೆಯ ವಾಸ್ತು ಸಮಸ್ಯೆಗೆ ಪರಿಹಾರಕ್ಕಾಗಿ ಸ್ಥಳೀಯ ಮಂತ್ರವಾದಿ ನಿಜಲಿಂಗಸ್ವಾಮಿಯನ್ನು ಸಂಪರ್ಕಿಸಿದ. ಮಂತ್ರವಾದಿ ಹೇಳಿದ್ದು ನರಬಲಿಯ ಪರಿಹಾರ! ಹೀಗೆ ಒಬ್ಬ ದಲಿತ ಯುವಕ ಹತನಾದ. ಇದು ‘ಕೇವಲ ಕೊಲೆಯಲ್ಲ’ ಎಂದು ನಿರ್ಧಾರಕ್ಕೆ ಬರಲು ಮರಣೋತ್ತರ ಪರೀಕ್ಷೆ ವರದಿಯಷ್ಟೇ ಸಾಕು. ಆದರೆ ಪೊಲೀಸರು, ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಎಂ. ಉದಾಸಿ ಇದು ‘ನರಬಲಿ’ಅಲ್ಲ ಕೇವಲ ಕೊಲೆ ಅಂದರು. ಪೊಲೀಸರು ಹೇಳ್ತಾರೆ, ಈ ಹದಿನೇಳು ವರ್ಷದ ಯುವಕ ಜಮೀನ್ದಾರನ ಮಗ ನಿಂಗನಗೌಡನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಆ ಕಾರಣ ಸಿಟ್ಟಿಗೆದ್ದ ನಿಂಗನಗೌಡ ಬಸವರಾಜನನ್ನು ಕೊಂದ.

ವಿಚಿತ್ರ ನೋಡಿ. ನಿಂಗನಗೌಡನಿಗೆ ಮದುವೆಯಾಗಿ ಆ ಹೊತ್ತಿಗೆ ಕೇವಲ ಎಂಟು ತಿಂಗಳು ಆಗಿರುತ್ತೆ. ವಧು ದಾವಣಗೆರೆ ಮೂಲದವಳು. ಮದುವೆಯಾಗಿ ಗಂಡನ ಮನೆಗೆ ಬಂದು ಆಕೆ ಉಳಿದುಕೊಂಡದ್ದು ಹೆಚ್ಚೆಂದರೆ 20 ದಿನ ಮಾತ್ರ, ಅದೂ ಎರಡು ಕಂತಿನಲ್ಲಿ. ಪೊಲೀಸರು ನರಬಲಿ ಪ್ರಕರಣ ಮುಚ್ಚಿ ಹಾಕಿ ಕೇವಲ ಕೊಲೆ ಎಂದು ಸಾಬೀತು ಮಾಡಲು ಇಂತಹ ಕತೆ ಕಟ್ಟಿರುವುದು ಸ್ಪಷ್ಟ. ಆ ನವವಿವಾಹಿತೆ ಮತ್ತು ಅವರ ಪೋಷಕರು ಇಂತಹ ಹೇಳಿಕೆಯಿಂದ ಅದೆಷ್ಟು ನೊಂದಿದ್ದಾರೋ. ಅವರ ಪೋಷಕರು ಒಮ್ಮೆ ಜೈಲಿನಲ್ಲಿದ್ದ ಅಳಿಯನನ್ನು ಭೇಟಿಯಾಗಿ ಮಗಳ ಬಗ್ಗೆ ಹೀಗೇಕೆ ಹೇಳಿದೆ ಎಂದು ಕೇಳಿದ್ದಾರೆ. ಅವನು ಉತ್ತರಿಸಿದನಂತೆ, “ಇದು ನನಗೆ ಗೊತ್ತಿಲ್ಲ. ಪೊಲೀಸರನ್ನು ಕೇಳಿ’. ಒಬ್ಬ ದಲಿತ ಸತ್ತ. ಯುವತಿಗೆ ಆ ಹುಡುಗನೊಂದಿಗೆ ಕಲ್ಪಿಸಿ ಅವಳನ್ನೂ ಅವಮಾನಿಸಿತು ಈ ವ್ಯವಸ್ಥೆ.

ಜಿಲ್ಲಾ ರಕ್ಷಣಾಧಿಕಾರಿ ಚೇತನ್ ಸಿಂಗ್ ರಾಥೋಡ್ ಹೇಳುವಂತೆ, “ಇದು ನರಬಲಿ ಪ್ರಕರಣ ಅಲ್ಲ. ಸಾಮಾನ್ಯ ಕೊಲೆ ಪ್ರಕರಣ. ಏನೇ ಇರಲಿ, ನರಬಲಿ ಕೂಡಾ ಕಾನೂನು ಅಡಿಯಲ್ಲಿ ಒಂದು ಕೊಲೆಯಷ್ಟೇ. ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ”. ಕೇಸು ದಾಖಲಿಸುವಾಗ ನರಬಲಿ – ಕೊಲೆ ಎರಡೂ ಒಂದೇ ಆಗಬಹುದು. ಆದರೆ ತನಿಖೆ, ವಿಚಾರಣೆ ಮತ್ತು ನ್ಯಾಯಾಲಯ ತೀರ್ಪು ನೀಡುವಾಗ ಎರಡೂ ಭಿನ್ನವಾಗಿ ನಿಲ್ಲುತ್ತವೆ. ತೀರ್ಪು ನೀಡುವಾಗ ನ್ಯಾಯಾಧೀಶರಿಗೆ ‘ಹೆಂಡತಿ ಜೊತೆ ಸಂಬಂಧ ಇಟ್ಟುಕೊಂಡ ಕಾರಣ ಸಿಟ್ಟಿಗೆದ್ದು ಗಂಡ ಹತ್ಯೆ ನಡೆಸಿದ್ದಾನೆ’ ಎನ್ನುವುದಕ್ಕಿಂತ ‘ಮನೆಯ ವಾಸ್ತು ದೋಷ ಪರಿಹಾರಕ್ಕಾಗಿ ಒಬ್ಬ ದಲಿತನನ್ನು ಕ್ರೂರವಾಗಿ ಬಲಿಕೊಟ್ಟ’ ಎನ್ನುವ ತನಿಖಾ ವರದಿ ತುಂಬಾ ಭೀಕರವಾಗಿ ಕಾಣಬಹುದು.

ದಲಿತನ ನರಬಲಿ ಎನ್ನುವಾಗ ಜನರಲ್ಲಿರುವ ಮೌಢ್ಯ, ಅಂಧಾಚರಣೆ ಮತ್ತು ಮೇಲ್ಜಾತಿ ಜಮೀನ್ದಾರನ ದರ್ಪ ಎಲ್ಲವೂ ಬಯಲಿಗೆ ಬರುತ್ತದೆ. ಅಷ್ಟೇ ಅಲ್ಲ, ನರಬಲಿ ಎಂದರೆ, ಆರೋಪಿಗಳ ಪಟ್ಟಿಯಲ್ಲಿ ಮಂತ್ರವಾದಿ ಮತ್ತು ಪೂಜೆಯಲ್ಲಿ ಭಾಗಿಯಾದ ಎಲ್ಲರೂ ಸೇರುತ್ತಾರೆ. ಏಕೆ, ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ? ಜನಶ್ರೀ ವಾಹಿನಿ ತನ್ನ “ಜನಶ್ರೀ ತನಿಖೆ” ಕಾರ್ಯಕ್ರಮದಲ್ಲಿ ಸುಗತ ಶ್ರೀನಿವಾಸರಾಜು ಅವರ ವರದಿಯನ್ನು ಆಧರಿಸಿ ವಿಸ್ತೃತವಾಗಿ ನರಬಲಿ ಪ್ರಕರಣದ ಮೇಲೆ ಬೆಳಕು ಚೆಲ್ಲಿತು. ಈ ನಾಡಿನ ದಲಿತ ಮುಖಂಡರು, ವಿರೋಧ ಪಕ್ಷದ ನಾಯಕರು, ಪ್ರಜ್ಞಾವಂತ ಚಿಂತಕರು ಈ ಬಗ್ಗೆ ಒಂದಿಷ್ಟು ದನಿ ಎತ್ತಬೇಕಿದೆ. ಈ ನಾಡಿನ ಮುಖ್ಯಮಂತ್ರಿ, ಮಂತ್ರಿ ಎಲ್ಲರೂ ವಾಸ್ತು ಬಗ್ಗೆ ನಂಬಿಕೆ ಉಳ್ಳವರೇ. ಅವರು ಹೊಸ ಮನೆ ಪ್ರವೇಶಿಸುವಾಗ ಯಾವುದೋ ಪ್ರಾಣಿಯನ್ನು ಬಲಿ ಕೊಟ್ಟರು ಎಂದು ಆಗಾಗ ಸುದ್ದಿ ಓದುತ್ತಲೇ ಇರುತ್ತೇವೆ. ಹಾಗಿರುವಾಗ, ಈ ನೆಲದ ಜನಸಾಮಾನ್ಯನಿಗೆ ಮನೆಯ ವಾಸ್ತು ದೋಷ ಪರಿಹಾರಕ್ಕೆ ನರಬಲಿ ಕೊಡುವುದು ವಿಶೇಷ ಎನ್ನಿಸದಿರಬಹುದು. ಈ ಬಗ್ಗೆ ವಿಸ್ತೃತ ಚರ್ಚೆ ಆಗಬೇಕಿದೆ. ಒಂದಿಷ್ಟು ಜಾಗೃತಿ ಆಗಬೇಕಿದೆ.

(ಚಿತ್ರಕೃಪೆ: ಔಟ್‌ಲುಕ್)

ನೈಸರ್ಗಿಕ ಸಂಪತ್ತಿನ ಉಪಯೋಗ ದೇಶದ ಅಭಿವೃದ್ಧಿಗೆ ಬಳಕೆಯಾಗಲಿ

-ಆನಂದ ಪ್ರಸಾದ್

ವಿವಿಧ ಲೋಹಗಳ ಅದಿರುಗಳು, ಕಲ್ಲಿದ್ದಲು, ನೈಸರ್ಗಿಕ ಅನಿಲ ಮೊದಲಾದವು ನಮ್ಮ ರಾಷ್ಟ್ರೀಯ ಸಂಪತ್ತುಗಳಾಗಿವೆ. ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಯ ಮೂಲಕ ಇವುಗಳನ್ನು ಕೆಲವೇ ಖಾಸಗಿ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದು. ಸರ್ಕಾರಕ್ಕೆ ಸೇರಬೇಕಾದ ಮತ್ತು ತನ್ಮೂಲಕ ಜನತೆಯ ಕಲ್ಯಾಣಕ್ಕೆ ಉಪಯೋಗಿಸಬೇಕಾಗಿದ್ದ ಅಪಾರ ಸಂಪತ್ತು ಖಾಸಗಿ ವ್ಯಕ್ತಿಗಳ ತಿಜೋರಿ ಸೇರಿ ಪರದೇಶಗಳಲ್ಲಿ ಕಪ್ಪು ಹಣವಾಗಿ ಸಂಗ್ರಹವಾಗಿದೆ.

ನಮ್ಮ ದೇಶದಲ್ಲಿ ಉದಾರೀಕರಣ ಹಾಗೂ ಜಾಗತೀಕರಣದ ನಂತರ ದೇಶದ ಖನಿಜ ಸಂಪತ್ತು ಸಕ್ರಮವಾಗಿಯೇ ಖಾಸಗಿ ವ್ಯಕ್ತಿಗಳ ತಿಜೋರಿ ಸೇರುತ್ತಿದೆ. ಒಬ್ಬ ವ್ಯಕ್ತಿ ಅಥವಾ ಕಂಪನಿ ಅದಿರನ್ನು ಅಗೆದು ಮಾರಿದಾಕ್ಷಣ ಅದರ ಬಹುಪಾಲು ಆ ವ್ಯಕ್ತಿಗೆ ಸೇರುವುದು ಎಷ್ಟರ ಮಟ್ಟಿಗೆ ಸಮಂಜಸ? ಉದಾಹರಣೆಗೆ ಕಬ್ಬಿಣದ ಅದಿರಿನ ರಾಯಧನ ಟನ್ನಿಗೆ ಮಾರುಕಟ್ಟೆ ಬೆಲೆಯ 10% ಇದೆ ಅಂದರೆ ಟನ್ನಿಗೆ ಮಾರುಕಟ್ಟೆ ಬೆಲೆ 5000 ರೂಪಾಯಿ ಇದ್ದರೆ 500 ರೂಪಾಯಿ ಸರ್ಕಾರಕ್ಕೆ ಪಾವತಿಸಿ ಉಳಿದ ಹಣ ಅದಿರನ್ನು ಅಗೆದು ಸಾಗಿಸಿದ ಕಂಪನಿಗೆ ಸೇರುತ್ತದೆ.

ಸಕ್ರಮ ಗಣಿಗಾರಿಕೆ ಕೂಡ ದೇಶದ ಸಂಪತ್ತನ್ನು ಬಳಸಿ ಕೆಲವೇ ಕೆಲವರು ಶ್ರೀಮಂತರಾಗಲು ಅವಕಾಶ ಮಾಡಿಕೊಡುವಂತೆ ಸರ್ಕಾರದ ನೀತಿ ಇದೆ. ಇದರ ಬದಲು ರಾಯಧನ ಟನ್ನಿಗೆ 50% ನಿಗದಿಪಡಿಸಿದರೆ ಸರ್ಕಾರಕ್ಕೆ ಸಾಕಷ್ಟು ಆದಾಯ ಬರಬಹುದು. ಭಾರತ ಪ್ರತಿ ವರ್ಷ 20 ಕೋಟಿ ಟನ್ನಿನಷ್ಟು ಕಬ್ಬಿಣದ ಅದಿರನ್ನು ಹೊರತೆಗೆದರೆ ಇದರ ಅರ್ಧದಷ್ಟನ್ನು ಅಂದರೆ 10 ಕೋಟಿ ಟನ್ನಿನಷ್ಟು ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. 20 ಕೋಟಿ ಟನ್ನಿಗೆ 10% ರಾಯಧನದಂತೆ ಸರ್ಕಾರಕ್ಕೆ ಈಗ ಸಂದಾಯವಾಗುವ ಹಣ 10,000 ಕೋಟಿ ರೂಪಾಯಿಗಳು ಮಾತ್ರ. ಇದು ಸಕ್ರಮವಾಗಿ ಗಣಿಗಾರಿಕೆ ಮಾಡಿದರೆ ಮಾತ್ರ.

ಅಕ್ರಮ ಗಣಿಗಾರಿಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುವುದರಿಂದ ಸರ್ಕಾರಕ್ಕೆ ಇಷ್ಟೂ ಆದಾಯ ಬರಲಿಕ್ಕಿಲ್ಲ. ಇದರ ಬದಲು ಟನ್ನಿಗೆ 50% ರಾಯಧನ ನಿಗದಿ ಮಾಡಿದರೆ ಸರ್ಕಾರಕ್ಕೆ 50,000 ಕೋಟಿ ಆದಾಯ ಕಬ್ಬಿಣದ ಅದಿರಿನಿಂದಲೇ ಬರುತ್ತದೆ. ಈ ಆದಾಯವನ್ನು ರಸ್ತೆ, ನೀರಾವರಿ, ವಿದ್ಯುತ್ ಉತ್ಪಾದನೆ ಮೊದಲಾದ ಕ್ಷೇತ್ರಗಳಿಗೆ ಬಳಸಬಹುದು ಅಥವಾ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಬ್ಸಿಡಿಯ ರೂಪದಲ್ಲಿ ನೀಡಿ ಅಸಂಪ್ರದಾಯಿಕ ಇಂಧನ ಉತ್ಪಾದನೆಗೆ ಉತ್ತೇಜನ ನೀಡಬಹುದು ಅಥವಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಳಸಬಹುದು.

ಕೃಷಿಕರ ಜಮೀನಿನ ಬದಿಯಲ್ಲಿ ತೋಡು ಅಥವಾ ನದಿ ಹರಿಯುತ್ತಿದ್ದರೆ ಆ ನದಿಯ ಬದಿಯ ಜಾಗವನ್ನು ಪರಂಬೋಕು ಜಾಗ ಎಂದು ಹೇಳುತ್ತಾರೆ. ಪರಂಬೋಕು ಸರ್ಕಾರಕ್ಕೆ ಸೇರಿದ್ದು ಎಂದು ಪರಿಗಣಿಸಲ್ಪಡುತ್ತದೆ. ತೋಡು ಹಾಗೂ ನದಿಯ ಬದಿಯಲ್ಲಿ ಮರಗಳು ಬೆಳೆದು ನಿಂತಿರುತ್ತವೆ. ಈ ಮರಗಳು ಪ್ರವಾಹದ ಕಾರಣದಿಂದಾಗಿ ಹಾಗೂ ಮಣ್ಣಿನ ಸವೆತದಿಂದಾಗಿ ಬೇರುಗಳು ಸಡಿಲಗೊಂಡು ಆಗಾಗ ಬೀಳುತ್ತಿರುತ್ತವೆ. ಈ ಬಿದ್ದ ಮರವನ್ನೂ ಕೃಷಿಕನು ತನ್ನ ಮನೆ ಉಪಯೋಗಕ್ಕಾಗಿ ಅರಣ್ಯ ಇಲಾಖೆಯ ಕಾನೂನಿನ ಪ್ರಕಾರ ಬಳಸುವಂತಿಲ್ಲ. ಅದನ್ನು ಬಳಸಬೇಕಾದರೆ ಸರ್ಕಾರಕ್ಕೆ ಆ ಮರದ ಮಾರುಕಟ್ಟೆ ಮೌಲ್ಯವನ್ನು ಸಂಪೂರ್ಣವಾಗಿ ಪಾವತಿಸಿ ಉಪಯೋಗಿಸಬೇಕು. ಆ ಮರವು ಕೃಷಿಕನ ಜಮೀನಿನ ಬದಿಯಲ್ಲೇ ಇದ್ದರೂ, ಅದನ್ನು ಕೃಷಿಕನು ಕಳ್ಳಕಾಕರಿಂದ ರಕ್ಷಿಸಿದರೂ ಅವನಿಗೆ ಆ ಮರದ ಉಪಯೋಗದಲ್ಲಿ ಎಳ್ಳಷ್ಟೂ ರಿಯಾಯಿತಿ ಇಲ್ಲ. ಆ ಬಿದ್ದ ಮರವು ಮಳೆ ಗಾಳಿಗೆ ಹಾಳಾಗಿ ಹೋದರೂ ಅದನ್ನು ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಹಾಗೂ ಅರಣ್ಯ ಇಲಾಖೆಯವರು ಅದನ್ನು ತಾವೂ ಕೊಂಡು ಹೋಗುವುದಿಲ್ಲ. ಅದು ಅಲ್ಲೇ ಬಿದ್ದು ಗೆದ್ದಲು ಹಿಡಿದು ಹಾಳಾಗಿ ಹೋದರೂ ಸರಿ ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಎಂಬುದು ಅರಣ್ಯ ಇಲಾಖೆಯ ನಿಲುವು.

ಇದೇ ನಿಲುವನ್ನು ಕಬ್ಬಿಣದ ಅದಿರಿನ ಬಗೆಗಿನ ನಿಲುವಿನ ಜೊತೆ ಹೋಲಿಸಿ ನೋಡಿದರೆ ಅದಿರಿನ ವಹಿವಾಟಿನಲ್ಲಿ ಸರ್ಕಾರದ ಕಾನೂನಿನ ಪ್ರಕಾರವೇ (ಅಂದರೆ ಸಕ್ರಮ ಗಣಿಗಾರಿಕೆ ಮೂಲಕವೇ) ಎಸ್ಟೊಂದು ತಾರತಮ್ಯ ಇದೆ ಎಂಬುದು ಗೊತ್ತಾಗುತ್ತದೆ. ಅದಿರನ್ನು ಅಗೆದು ಸಾಗಿಸಿದ ವ್ಯಕ್ತಿ/ಕಂಪನಿಯು ಅದಿರಿನ ಮಾರುಕಟ್ಟೆ ಮೌಲ್ಯದ 10% ರಾಯಧನ ಸರ್ಕಾರಕ್ಕೆ ಸಲ್ಲಿಸಿದರೆ ಉಳಿದ ಲಾಭ ಆತನಿಗೇ ಸಿಗುತ್ತದೆ. ಕೃಷಿಕನ ಜೊತೆ ಸರ್ಕಾರ ಮರದ ವಿಷಯದಲ್ಲಿ ವರ್ತಿಸುವ ರೀತಿಗೂ ಒಬ್ಬ ಉದ್ಯಮಿಯ ವಿಚಾರದಲ್ಲಿ ಕಬ್ಬಿಣದ ಅದಿರಿನ ವಿಚಾರದಲ್ಲಿ ವರ್ತಿಸುವ ರೀತಿಗೂ ಎಷ್ಟು ಅಂತರ! ಎರಡೂ ಸರ್ಕಾರದ ಸೊತ್ತುಗಳೇ. ಇಂಥ ಕಾನೂನುಗಳನ್ನು ರಚಿಸಿದವರು ಬ್ರಿಟಿಷರಲ್ಲ ಬದಲಿಗೆ ನಮ್ಮ ಶಾಸಕರು ಹಾಗೂ ಸಂಸದರೇ.

ಕಬ್ಬಿಣದ ಅದಿರಿನ ವಿಚಾರದಲ್ಲಿ ಹಗಲು ದರೋಡೆಗೆ ಅವಕಾಶ ನೀಡಿದ ಈ ಕಾನೂನು ಸಕ್ರಮವಾಗಿಯೇ ದೇಶದ ಸಂಪತ್ತಿನ ಶೋಷಣೆಗೆ ಕಾರಣವಾಗಿದೆ. ಆದರೂ ಇದನ್ನು ಬದಲಿಸಿ ಕನಿಷ್ಠ 50% ರಾಯಧನವನ್ನಾದರೂ ಸರ್ಕಾರಕ್ಕೆ ಸಂದಾಯವಾಗುವಂತೆ ಕಾನೂನು ರೂಪಿಸಲು ನಮ್ಮ ಸರ್ಕಾರ ಯಾಕೆ ಮುಂದಾಗುವುದಿಲ್ಲ? ಈ ಬಗ್ಗೆ ಕಾನೂನು ರೂಪಿಸಲು ಯಾಕೆ ಯಾರೂ ಒತ್ತಾಯಿಸುವುದಿಲ್ಲ? ನಮ್ಮ ಮಾಧ್ಯಮಗಳು ಯಾಕೆ ಈ ವಿಷಯದಲ್ಲಿ ಕುರುಡು, ಮೂಕ ಹಾಗೂ ಕಿವುಡಾಗಿವೆ?

ಕಬ್ಬಿಣದ ಅದಿರು ಒಂದರ ಮೇಲೆಯೇ 50% ರಾಯಧನ ನಿಗದಿಪಡಿಸಿದರೆ ಸರ್ಕಾರಕ್ಕೆ ವಾರ್ಷಿಕವಾಗಿ (ದೇಶದಲ್ಲಿ) 50,000 ರೂಪಾಯಿ ಆದಾಯ ಬರುತ್ತದೆ. ಇದೇ ರೀತಿ ಕಲ್ಲಿದ್ದಲು, ನೈಸರ್ಗಿಕ ಅನಿಲ, ಬೇರೆ ಲೋಹಗಳ ಅದಿರುಗಳು ಇವುಗಳ ಮೇಲೆಯೂ ರಾಯಧನವನ್ನು 50% ನಿಗದಿ ಪಡಿಸಿದರೆ ಸರ್ಕಾರಕ್ಕೆ ಬಹಳಷ್ಟು ಆದಾಯ ಬರಬಹುದು. ಈಗ ಇವುಗಳ ಮೇಲೆ ಎಷ್ಟು ರಾಯಧನ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗಲಿಲ್ಲ. ಇವುಗಳ ಮೇಲೆಯೂ ಕಬ್ಬಿಣದ ಅದಿರಿನ ರೀತಿಯಲ್ಲಿಯೇ ಬಹಳ ಕಡಿಮೆ ರಾಯಧನ ಇರುವ ಸಾಧ್ಯತೆ ಇದೆ. ಇದರಿಂದಾಗಿ ದೇಶದ ಸಂಪತ್ತನ್ನು ಕೆಲವೇ ಖಾಸಗಿ ವ್ಯಕ್ತಿಗಳು ನುಂಗಿ ಹಾಕುವ ಪರಿಸ್ಥಿತಿ ಇಂದು ದೇಶದಲ್ಲಿ ಇದೆ. ರಾಯಧನವನ್ನು 50% ಹೆಚ್ಚಿಸಿ ಈ ರೀತಿ ಬಂದ ಆದಾಯವನ್ನು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಉಪಯೋಗಿಸಬಹುದು. ಇಂಥ ಕಾನೂನುಗಳನ್ನು ರೂಪಿಸಲು ನಮ್ಮ ಸಂಸತ್ತು ಹಾಗೂ ವಿಧಾನಸಭೆಗಳು ಮುಂದಾಗುವುದಿಲ್ಲ. ಇಂಥ ಕಾನೂನುಗಳನ್ನು ರೂಪಿಸುವಂತೆ ಜನತೆಯಿಂದ ಜನಪ್ರತಿನಿಧಿಗಳ ಮೇಲೆ ಒತ್ತಾಯ ಬರಬೇಕಾಗಿದೆ.