Daily Archives: April 7, 2012

ಹಿಂದೂ ಕೋಮುವಾದ ಮತ್ತದರ ಕ್ಷುದ್ರ ವಿರಾಟರೂಪ


-ಬಿ. ಶ್ರೀಪಾದ ಭಟ್


ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವವರೆಗೂ ಈ ಆರ್.ಎಸ್.ಎಸ್. ಪ್ರೇರಿತ ಚಟುವಟಿಕೆಗಳನ್ನು ನಾವೆಲ್ಲಾ ಸದಾ ಕಾಲ ಪ್ರಜ್ಞಾಪೂರ್ವಕವಾಗಿಯೇ ವಿಶ್ಲೇಷಣೆ ಹಾಗೂ ವಿಮರ್ಶೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಇವರ ವ್ಯಾಪ್ತಿ ಹಾಗೂ ಪರಿಣಾಮಗಳು ಯಾವಾಗಲೂ ದೀರ್ಘಕಾಲದ್ದಾಗಿರುತ್ತವೆ ಹಾಗೂ ಸಮಾಜಕ್ಕೆ ಅಪಾಯಕಾರಿಯಾಗಿರುತ್ತವೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಹಿರಿಯಣ್ಣ ಆರ್.ಎಸ್.ಎಸ್. ಕೇಶವಕೃಪದಲ್ಲಿ ತನ್ನ ಕೋಮುವಾದಿ ಹಿಂದುತ್ವದ ವೈದಿಕ ಸಿದ್ಧಾಂತಕ್ಕೆ ಅನುಗುಣವಾಗುವಂತೆ, ಸಾಧ್ಯವಾದಷ್ಟು ತನ್ನ ಶಾಖಾ ಮಠಗಳನ್ನು, ಅಂಗಸಂಸ್ಧೆಗಳನ್ನು ಸರ್ಕಾರದ ದಿನನಿತ್ಯದ ಆಡಳಿತದಲ್ಲಿ ಭಾಗಿಯಾಗುವಂತಹ ಅನೇಕ ಮಾರ್ಗಗಳನ್ನು ಹಾಗೂ ಇದನ್ನು ಕಾರ್ಯಗತಗೊಳಿಸಲು ಆಡಳಿತದ ಆಯಕಟ್ಟಿನ ಇಲಾಖೆಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅತ್ಯಂತ ಸಂವಿಧಾನಬಾಹಿರವಾಗಿ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುತ್ತದೆ.

ಇಲ್ಲಿ ಆರ್.ಎಸ್.ಎಸ್. ಆರ್ಥಿಕವಾಗಿ ಅತ್ಯಂತ ಫಲವತ್ತಾದ ಇಲಾಖೆಗಳಾದ ಕಂದಾಯ, ನೀರಾವರಿ, ಲೋಕೋಪಯೋಗಿ, ವಾಣಿಜ್ಯ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಆಯ್ಕೆ ಮಾಡಿಕೊಳ್ಳುವುದು ಗೃಹ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸದೀಯ ವ್ಯವಹಾರ ಹೀಗೆ ಸಾಂಸ್ಕೃತಿಕ ಮಜಲುಗಳುಳ್ಳ, ಜನ ಸಂಪರ್ಕವನ್ನುಳ್ಳ ಇಲಾಖೆಗಳನ್ನು. ಈ ಇಲಾಖೆಗಳಲ್ಲಿ ಆರ್.ಎಸ್.ಎಸ್. ಒಲವುಳ್ಳವರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುವ ಕರಡು ನೀತಿಯನ್ನು ರೂಪಿಸುತ್ತದೆ. ಇದನ್ನು ಆರ್.ಎಸ್.ಎಸ್. ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸುತ್ತದೆ.

ತನ್ನ ಹಿಂದುತ್ವದ ಮೂಲಭೂತ ಸಿದ್ಧಾಂತಗಳನ್ನು, ಸಂಘಟನಾತ್ಮಕ ಉದ್ದೇಶಗಳನ್ನು ಜಾರಿಗೊಳಿಸಲು ವಿಭಿನ್ನವಾದ ತಂತ್ರಗಳನ್ನು ಆಯೋಜಿಸುತ್ತದೆ. ಮೇಲ್ನೋಟಕ್ಕೆ ಅತ್ಯಂತ ಸಹಜವಾಗಿ ಕಾಣುವಂತೆ, ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೂ ತನಗೂ ಅಧಿಕೃತವಾಗಿ ಯಾವುದೇ ಸಂಬಂಧವಿಲ್ಲವೆನ್ನುವಂತೆ ತನ್ನ ಕಾರ್ಯತಂತ್ರಗಳನ್ನು ರೂಪಿಸುತ್ತದೆ. ಶಿಕ್ಷಣ ಇಲಾಖೆ ಈ ಆರ್.ಎಸ್.ಎಸ್.ನ ಮೊದಲ ಆದ್ಯತೆ ಮತ್ತು ಪ್ರಮುಖ ಆಯ್ಕೆ. ಈ ಶಿಕ್ಷಣ ಇಲಾಖೆಗೆ ತನ್ನ ಸ್ವಯಂಸೇವಕನನ್ನು, ಆರ್.ಎಸ್.ಎಸ್. ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿನ್ನೆಲೆ ಉಳ್ಳವರನ್ನು ಮಾತ್ರ ಸಚಿವರನ್ನಾಗಿ ನೇಮಿಸಿಕೊಂಡು, ಆ ಮೂಲಕ ಆರ್‍.ಎಸ್.ಎಸ್. ಸಿದ್ಧಾಂತಕ್ಕೆ ಬದ್ಧರಾದಂತಹ ಶಿಕ್ಷಕರನ್ನು, ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು, ಈ ಮೂಲಕ ಪಠ್ಯಪುಸ್ತಕಗಳ ಕೇಸರೀಕರಣವನ್ನು ತನ್ನ ಕಣ್ಣಳತೆಯಲ್ಲಿಯೇ ಜರಗುವಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತದೆ. ಇಲ್ಲಿ ಎಲ್ಲಿಯೂ ಅಧಿಕೃತವಾಗಿ ಆರ್.ಎಸ್.ಎಸ್. ತಾನು ನೇರವಾಗಿ ಪಾಲುದಾರನಾಗದಂತೆ ಎಚ್ಚರವಹಿಸುತ್ತದೆ.

ಆದರೆ ತನ್ನ ಮೂಲಭೂತ ಆಶಯಗಳನ್ನು ಮಾತ್ರ ಬಿಡದೇ ನೆರವೇರಿಸಿಕೊಳ್ಳುತ್ತದೆ. ಒಮ್ಮೆ ಶಿಕ್ಷಣದಲ್ಲಿ ಕೇಸರೀಕರಣವನ್ನು ಯಶಸ್ವಿಯಾಗಿ ಸಿದ್ಧಪಡಿಸಿ ಆ ಪಠ್ಯಪುಸ್ತಕಗಳನ್ನು ಸಂಬಂಧಪಟ್ಟ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆಗೊಳಿಸಿದ ನಂತರ ಇದನ್ನು ಮತ್ತೆ ಹಿಂದಕ್ಕೆ ಪಡೆಯುವುದು ಅತ್ಯಂತ ದುಸ್ತರವಾದ ಕಾರ್ಯ ಎಂದು ಆರ್.ಎಸ್.ಎಸ್.ಗೆ ಚೆನ್ನಾಗಿ ಗೊತ್ತು. ಹೀಗೆ ತನ್ನ ಕೋಮುವಾದದ ಹಿಂದುತ್ವದ, ವೈದಿಕ ಅಜೆಂಡವನ್ನು ಮಾರುಕಟ್ಟೆಗೆ, ಮಕ್ಕಳ ಮನಸ್ಸಿಗೆ ತಲುಪಿಸುವ ಬೃಹತ್ ಮಹಾತ್ವಾಕಾಂಕ್ಷಿ ಯೋಜನೆ ಕೈಗೂಡಿಸಿಕೊಳ್ಳುತ್ತದೆ. ಈ ರೀತಿಯಾಗಿ ಕೇಸರೀಕರಣಗೊಂಡ ಪುಸ್ತಗಳನ್ನು ಓದಿದ ಅಮಾಯಕ ಮುಗ್ಧ ವಿದ್ಯಾರ್ಥಿಗಳನ್ನು ನಂತರ ಶಿಸ್ತುಬದ್ಧ ಸಂಘಟನೆಯ ಮೂಲಕ ತನ್ನ ಪ್ರಮುಖ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ತೆಕ್ಕೆಗೆ ಜಾರಿಕೊಳ್ಳುವಂತೆಯೂ ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇಲ್ಲಿನ ಶಿಬಿರಗಳಲ್ಲಿ ಅಧ್ಯಯನದ ಹೆಸರಿನಲ್ಲಿ, ಸಂಘಟನೆಯ ಹೆಸರಿನಲ್ಲಿ ಬಲಪಂಥೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬೇರುಬಿಡುವಂತೆ ನೋಡಿಕೊಳ್ಳಲಾಗುತ್ತದೆ. ಇವೆಲ್ಲವೂ ಸಹ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರಗುವಂತೆ, ಅಧಿಕೃತವಾಗಿ ಸಂಯೋಜಿಸಲಾಗುತ್ತದೆ. ಹೇಳಿ ಇಲ್ಲಿ ಹಿರಿಯಣ್ಣ ಆರ್.ಎಸ್.ಎಸ್. ಎಲ್ಲಾದರೂ ನೇರವಾಗಿ ಕಾಣಿಸಿಕೊಂಡಿದ್ದಾರೆಯೇ? ಇಲ್ಲವೇ ಇಲ್ಲ !! ಆದರೆ ತನ್ನ ಗುರಿ ಮುಟ್ಟುವ ಜಾಗಕ್ಕೆ ಮಾತ್ರ ನೇರಾವಾಗಿ ಶಿಸ್ತುಬದ್ಧವಾಗಿ ತಲುಪುತ್ತದೆ. ಇದೊಂದು ಯಶಸ್ವಿ ಕಾರ್ಯಾಚರಣೆ ಅಂದರೆ ಕೂಂಬಿಂಗ್ !!

ತನ್ನ ಶಾಖಾ ಮಠಗಳಾದ ವಿದ್ಯಾಭಾರತಿ (ದೇಶಾದ್ಯಾಂತ 28000 ಶಾಲೆಗಳನ್ನು 32,50,000 ವಿದ್ಯಾರ್ಥಿಗಳನ್ನು ಹೊಂದಿದೆ) ಸೇವಾ ಭಾರತಿ, ಏಕಲ ವಿದ್ಯಾಲಯ (ದೇಶಾದ್ಯಾಂತ 35000 ಹಳ್ಳಿಗಳಲ್ಲಿ 1000000 ವಿದ್ಯಾರ್ಥಿಗಳು) ಸರಸ್ವತಿ ಬಾಲ ಮಂದಿರ, ಗೀತ ಮಂದಿರ, ಭಾರತೀಯ ವಿದ್ಯಾನಿಕೇತನಗಳಂತಹ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ ಮೂಲಕ ಇಂಡಿಯಾದ ರಾಷ್ಟ್ರೀಯತೆಯನ್ನು ತಮ್ಮ ಮೂಲಭೂತವಾದದ ಹಿಂದೂ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿಕೊಳ್ಳುವ ಹಪಾಹಪಿತನ, ಅತಿ ಭಾವುಕತೆಯ ಹುಸಿ ರಾಷ್ಟ್ರೀಯತೆ ಹಾಗೂ ಅಂಧ ಧಾರ್ಮಿಕತೆಯ ಹೆಸರಿನಲ್ಲಿ ಅಖಂಡ ಹಿಂದುತ್ವದ ಪ್ರತಿಪಾದನೆ, ವೇದ ಹಾಗೂ ಉಪನಿಷತ್‍ಗಳ ನಿರಂತರ ಭೋಧನೆ, ವರ್ಣಾಶ್ರಮದ ಪ್ರಾಮುಖ್ಯತೆ, ಸನಾತನ ಪರಂಪರೆಯನ್ನು ಉಳಿಸಿಕೊಳ್ಳುವ ರೂಪುರೇಷೆಗಳು ಹಾಗೂ ಬಹುಸಂಖ್ಯಾತ ಅವೈದಿಕತೆಯ ಈ ನೆಲ ಸಂಸ್ಕೃತಿಯ ನಾಶವನ್ನು, ಅಲ್ಪಸಂಖ್ಯಾತರ ತುಚ್ಛೀಕರಣಗಳಂತಹ ಅತ್ಯಂತ ಜೀವವಿರೋಧಿ ಹಾಗೂ ಅಮಾನವೀಯ ಪಠ್ಯಗಳನ್ನು ನಿರಂತರವಾಗಿ ಬೋಧಿಸುವುದು ಆರ್.ಎಸ್.ಎಸ್.ನವರ ಪ್ರಮುಖ ಕಾರ್ಯತಂತ್ರ.

ಇದಕ್ಕಾಗಿ ತನ್ನ ರಾಷ್ಟ್ರೋತ್ಥಾನ ಪ್ರಕಾಶನದ ಮೂಲಕ ಸಂಸ್ಕೃತಿ ಜ್ಞಾನಪರೀಕ್ಷೆ ಹಾಗೂ ಸಂಸ್ಕೃತಿ ಜ್ಞಾನ ಪ್ರಶ್ನೋತ್ತರಗಳು ಎನ್ನುವ ಟಿಪ್ಪಣಿಗಳಡಿಯ ಜೀವವಿರೋಧಿ, ಪುರೋಹಿತಶಾಹಿ ಪುಸ್ತಕಗಳನ್ನು ಆಯಕಟ್ಟಿನ ಸ್ಥಳಗಳಿಗೆ, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಮತ್ತು ಪ್ರಮುಖವಾಗಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ರಚನಸಮಿತಿಗೆ (ಇಲ್ಲಿ ಆಗಲೇ ಆರ್.ಎಸ್.ಎಸ್. ತನ್ನ ಗುಂಪಿನ ಶಿಕ್ಷಣ ಸಚಿವರ ಮೂಲಕ ಸಂಘ ಪರಿವಾರದ ಹಿನ್ನೆಲೆಯುಳ್ಳ ಶಿಕ್ಷಣ ತಜ್ಞರನ್ನು ಸದಸ್ಯರು ಹಾಗೂ ಅಧ್ಯಕ್ಷರನ್ನಾಗಿ ಆರಿಸಿರುತ್ತದೆ.) ತಲಪುವಂತೆ ಅಚ್ಚುಕಟ್ಟಾಗಿ ಆಯೋಜಿಸುತ್ತದೆ. ಈ ಆರ್.ಎಸ್.ಎಸ್. ಮೇಲ್ವಿಚಾರಣೆಯಲ್ಲಿ, ಅಖಂಡ ಹಿಂದುತ್ವದ ತತ್ವದಡಿಯಲ್ಲಿ ರೂಪಿತವಾದ ಪಠ್ಯ ಪುಸ್ತಕಗಳಲ್ಲಿ ದುರುದ್ದೇಶಪೂರಿತ, ಹಸೀ ಸುಳ್ಳುಗಳನ್ನು ಪಠ್ಯಗಳೆಂದು ತುಂಬಿರುವುದಕ್ಕೆ ಕೆಲವು ಉದಾಹರಣೆಗಳು.

1. 9ನೇ ಸೆಪ್ಟೆಂಬರ್ 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು “ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಗ್ರಂಥಾಲಯಗಳು ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ ಸುಮಾರು 300 ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸಬೇಕು. ಇದಕ್ಕಾಗಿ ತಗಲುವ ವೆಚ್ಚವನ್ನು ಶಾಸಕರ ಸ್ಥಿರನಿಧಿಯಲ್ಲಿ ಅಭಿವೃದ್ಧಿ ವೆಚ್ಚಕ್ಕಾಗಿ ಇರುವ ಹಣವನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ತಗಲುವ ಅಂದಾಜು ವೆಚ್ಚ 17 ಕೋಟಿ.  – ಕೆನರಾ ಟೈಮ್ಸ್.

2. ಕೇಂದ್ರದಲ್ಲಿ NDA ಸರ್ಕಾರ ಆಡಳಿತವಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಆರ್.ಎಸ್.ಎಸ್. ಸ್ವಯಂಸೇವಕರಾದ ಮುರಳೀ ಮನೋಹರ ಜೋಷಿಯವರು UGC ಮೂಲಕ NCERT ಪಠ್ಯಕ್ರಮದಲ್ಲಿ ಮೂಢನಂಬಿಕೆಗಳ ಅಗರವಾದಂತಹ  “ಜ್ಯೋತಿಷ್ಯಾಸ್ತ್ರ, ವೇದ ಪಾಠಗಳು, ಪುರೋಹಿತ ಕಾರ್ಯಗಳು, ವೇದ ಗಣಿತ ಶಾಸ್ತ್ರ”ಗಳನ್ನು ಸೇರಿಸಲಾಯಿತು. ನಂತರ ತೀವ್ರ ಪ್ರತಿರೋಧದ ನಡುವೆ ಇದನ್ನು ತಡೆಹಿಡಿಯಲಾಯಿತು. ಈಗಲೂ ಕೂಡ ಇದು ಆರ್.ಎಸ್.ಎಸ್.ನ ಅತ್ಯಂತ ಅಚ್ಚುಮೆಚ್ಚಿನ, ಜೀವಕ್ಕೆ ಹತ್ತಿರವಾದ ಪಠ್ಯಗಳು. ದೇಶ, ಕಾಲ, ಜಗತ್ತು ಆಧುನಿಕತೆಗೆ ತೆರೆದುಕೊಂಡು ಎಷ್ಟೇ ಮುಂದಕ್ಕೆ ಓಡುತ್ತಿರಲಿ ತಮ್ಮದು ಮಾತ್ರ ಧಾರ್ಮಿಕತೆ, ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ ತಮ್ಮ ಪ್ರೀತಿಯ ಭಾರತ ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಶಿಲಾಯುಗಕ್ಕೆ ಮರಳಿ ಕೊಂಡೊಯ್ಯುವ ಪ್ರಣಾಳಿಕೆ ಈ ಆರ್.ಎಸ್.ಎಸ್.ನದು.

3.  A.D. 1528 – A.D.1914 ರ ಮಧ್ಯದಲ್ಲಿ ರಾಮ ಜನ್ಮಭೂಮಿಯನ್ನು 77 ಸಲ ಅತಿಕ್ರಮಣ ಮಾಡಲಾಗಿದೆ, ಇದನ್ನು ಪ್ರತಿರೋಧಿಸಿ 3.5 ಲಕ್ಷ ಮುಗ್ಧ ಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದರು. ಅಲ್ಲದೆ ನವೆಂಬರ್ 2, 1990 ರಂದು ಹಿಂದೂ ಭಕ್ತರು ರಾಮ ಜನ್ಮಭೂಮಿಗೆ ತೆರಳಿ ಅಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಲು ಹೋದಾಗ ಪೋಲೀಸರ ಗುಂಡೇಟಿಗೆ ಬಲಿಯಾದರು. ಅಂದಿನಿಂದ ಆ ದಿನವನ್ನು ಭಾರತದ ಇತಿಹಾಸದಲ್ಲಿ ಕಪ್ಪು ಶುಕ್ರವಾರವನ್ನಾಗಿ ಆಚರಿಸಲಾಗುತ್ತಿದೆ.

4. 2006 ರಲ್ಲಿ ಬಿಜೆಪಿಯ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಮಂತ್ರಿಯಾಗಿದ್ದ ಬಿಜೆಪಿಯ ಡಿ.ಎಚ್.ಶಂಕರಮೂರ್ತಿಯವರು ಟಿಪ್ಪು ಸುಲ್ತಾನ್ ಕುರಿತಾಗಿ ಪಠ್ಯ ಪುಸ್ತಕದಲ್ಲಿರುವ ಎಲ್ಲಾ ವಿಷಯಗಳನ್ನು ತೆಗೆದು ಹಾಕಬೇಕೆಂದು ಕರೆಕೊಟ್ಟಿದ್ದರು. ಈ ಸಂಘ ಪರಿವಾರದ ಶಂಕರಮೂರ್ತಿಯವರ ಪ್ರಕಾರ ಟಿಪ್ಪು ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ಇವನನ್ನು ಓದಿಕೊಂಡರೆ ವಿದ್ಯಾರ್ಥಿಗಳು ಹಾದಿ ತಪ್ಪುತ್ತಾರೆ.

5. ಗುಜರಾತ್‍ನ ಹತ್ತನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದಲ್ಲಿ “ದೇಶದ ಕಂಟಕಗಳು ಹಾಗೂ ಅದಕ್ಕೆ ಪರಿಹಾರಗಳು” ಎನ್ನುವ ತಲೆ ಬರಹದಡಿ “ಅಲ್ಪಸಂಖ್ಯಾತರು ಅತ್ಯಂತ ದೊಡ್ಡ ಕಂಟಕರು. ನಂತರದ ಕಂಟಕರು ದಲಿತರು ಹಾಗೂ ಆದಿವಾಸಿಗಳು. ಮುಸ್ಲಿಂರು ಹಾಗೂ ಕ್ರಿಶ್ಚಿಯನ್ನರು ಪರಕೀಯರು,” ಎಂದು ಬರೆಯಲಾಗಿದೆ. ಇದಕ್ಕೆ ತೀವ್ರ ವಿರೋಧ ಎದುರಾದಾಗ ಸರ್ಕಾರ ಈ ವಿವಾದಿತ ಭಾಗಗಳನ್ನು ತೆಗೆಯಲಾಗಿದೆ ಎಂದು ಹೇಳಿತು. ಆದರೂ ಇಂದಿಗೂ ಆ ರಾಜ್ಯದ ಅನೇಕ ಭಾಗಗಳಲ್ಲಿ ಈ ಸಂಗತಿಗಳನ್ನು ಉದಾಹರಿಸುತ್ತಾರೆ. ಅಲ್ಲಿನ ಸೆಕೆಂಡರಿ ಶಾಲೆಗಳಲ್ಲಿ ನರೇಂದ್ರ ಮೋದಿಯ ಜೀವನವನ್ನು ಅಧ್ಯಯನಕ್ಕಾಗಿ ಸೇರಿಸಲಾಗಿದೆ. ( ಕೃಪೆ :ಫ್ರಂಟ್ ಲೈನ್ 25.2. 2012)

6. ನರೇಂದ್ರ ಮೋದಿಯ ಆಡಳಿತದ ಗುಜರಾತ್‍ನಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹಿಟ್ಲರ್ ಹಾಗೂ ನಾಝೀಗಳನ್ನು ವೈಭವೀಕರಿಸುತ್ತಾ ಈ ರೀತಿ ಬರೆಯಲಾಗಿದೆ: “ಹಿಟ್ಲರ್ ಅತ್ಯಂತ ಉಗ್ರವಾದವನ್ನು ಪ್ರತಿಪಾದಿಸಿದ ಈ ಮೂಲಕ ಜರ್ಮನಿಯನ್ನು ಮೇಲ್ಮಟ್ಟದ ರಾಷ್ಟ್ರೀಯತೆಯೆಡೆಗೆ ಕೊಂಡೊಯ್ದ.”

7. ಮಧ್ಯ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಭಗವದ್ಗೀತೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಲು ಅನೇಕ ಕುತಂತ್ರಗಳನ್ನು ಮಾಡಲಾಗುತ್ತಿದೆ. ಮೊದಲು ಪುರೋಹಿತಶಾಹಿ ಧಾರ್ಮಿಕ ಮಠಗಳಿಂದ ಗೀತ ಅಭಿಯಾನ ಎನ್ನುವ ಹೆಸರಿನಡಿಯಲ್ಲಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿ ನಂತರ ಪಠ್ಯಗಳ ಮುಖಾಂತರ ಅವರಲ್ಲಿ ವೈದಿಕತೆಯ ಸನಾತನ ವಿಚಾರಗಳನ್ನು ತುಂಬುವ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ. ಇದನ್ನು ಮುಖ್ಯಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ಸದಾನಂದ ಗೌಡ) ಶಿಕ್ಷಣ ಮಂತ್ರಿ (ಆರ್.ಎಸ್.ಎಸ್. ಸ್ವಯಂಸೇವಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ) ಪ್ರಮುಖ ಆದ್ಯತೆಯನ್ನಾಗಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮಲ್ಲಿ ಕರ್ನಾಟಕದ 5ನೇ ಹಾಗೂ 8ನೇ ತರಗತಿಯ ಪಠ್ಯ ಪುಸ್ತಕಗಳನ್ನು ಕೇಸರೀಕರಣಗೊಳಿಸುವ ಕಾರ್ಯತಂತ್ರಗಳನ್ನು ಚಿಂತಕ ಹಾಗೂ ವಕೀಲರಾದ ಸಿ.ಎಸ್.ದ್ವಾರಕಾನಾಥ್ ಅವರು ವಿವರವಾಗಿ ಬಯಲುಗೊಳಿಸಿದ್ದಾರೆ. ಅವರು ಪ್ರಚುರ ಪಡಿಸಿದ ವಿಷಯಗಳು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತವೆ.

8. ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪದೇ ಪದೇ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುತ್ತಾರೆ. ಅಮೂಲಾಗ್ರ ಬದಲಾವಣೆ ಅಂದರೆ ಅಖಂಡ ಹಿಂದುತ್ವದ ಪ್ರತಿಪಾದನೆ ಎಂದರ್ಥ. ಈ ಅಖಂಡ ಹಿಂದುತ್ವದ ಪ್ರತಿಪಾದನೆಯಲ್ಲಿ ಮತ್ತೆ ವರ್ಣಾಶ್ರಮ ಪದ್ಧತಿಯನ್ನು, ವೈದಿಕ ಆಚರಣೆಗಳನ್ನು ವೈಭವೀಕರಿಸುವ ಚಿಂತನೆಗಳನ್ನು ಪಠ್ಯಕ್ರಮವನ್ನಾಗಿ ರೂಪಿಸಲಾಗುತ್ತದೆ. ಆ ಮೂಲಕ ಈ ನೆಲದ ಅವೈದಿಕ ಸಂಸ್ಕೃತಿಯನ್ನು, ದಲಿತರ ಜಾಗೃತ ಪ್ರಜ್ಞೆಯನ್ನೇ ಅಲ್ಲಗೆಳೆಯುಲಾಗುತ್ತದೆ ಹಾಗೂ ನಿಧಾನವಾಗಿ ನಾಶಪಡಿಸಲಾಗುತ್ತದೆ.

ರಾಮಾಯಣ ಕೃತಿಯನ್ನು ತಾನೊಬ್ಬನೇ ಗುತ್ತಿಗೆ ಹಿಡಿದವನಂತೆ, ಅದರ ವ್ಯಾಖ್ಯಾನವನ್ನು ತಾವು ಮಾತ್ರ ಮಾಡಬೇಕು ಎನ್ನುವಂತೆ ವರ್ತಿಸುವ ಆರ್.ಎಸ್.ಎಸ್. ಈ ಕೃತಿಯನ್ನು ವೈಚಾರಿಕವಾಗಿ, ವಿಶ್ಲೇಷಣಾತ್ಮಕವಾಗಿ ಸೆಮಿನಾರ್ ಗಳಲ್ಲಿ, ಕಮ್ಮಟಗಳಲ್ಲಿ ಚರ್ಚೆಗಳನ್ನು ನಡೆಸಿದಾಗ, ಇದರ ಕುರಿತಾದ ವೈಚಾರಿಕ ಚಿಂತನೆಗಳ ಲೇಖನವನ್ನು ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಲ್ಲಿ ಅಧ್ಯಯನಕ್ಕಾಗಿ ಅಳವಡಿಸಿದಾಗ ತನ್ನ ಅಂಗ ಪಕ್ಷಗಳಾದ ವಿಎಚ್‍ಪಿ ಮತ್ತು ಎಬಿವಿಪಿ ಮೂಲಕ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸುತ್ತದೆ. ಪ್ರತಿಭಟನೆಗಳನ್ನು, ಲೇಖಕರ ಚಾರಿತ್ರ್ಯವಧೆಯನ್ನೂ ನಡೆಸಲಾಗುತ್ತದೆ. ಇದು ಅತ್ಯಂತ ಕೀಳು ಮಟ್ಟದಲ್ಲಿ ನಡೆಯುವಂತೆ ಮೇಲ್ವಿಚಾರಣೆ ನಡೆಸುವುದು ಆರ್.ಎಸ್.ಎಸ್.

ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು” ಎನ್ನುವ ಪ್ರಬಂಧವನ್ನು 2008 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆ ಮಾಡಲಾಯಿತು. ಅದನ್ನು ಪಠ್ಯಕ್ರಮವನ್ನಾಗಿಯೂ ಅಳವಡಿಸಲಾಯಿತು. ಆದರೆ ಈ ಆರ್.ಎಸ್.ಎಸ್.ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಪೋಲೀಸರ, ಅಧಿಕಾರಿಗಳ ಸಮ್ಮುಖದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲೇ ದಾಳಿಯನ್ನು ನಡೆಸಿ ತನ್ನ ಗೂಂಡಾ ವರ್ತನೆಯನ್ನು ತೋರಿಸಿತು. ಇವರಿಗೆ ರಾಮಾಯಣವನ್ನು ತಮ್ಮ ಮೂಗಿನ ನೇರಕ್ಕೆ ಮಾತ್ರ ಬರೆಯಬೇಕು ಅಷ್ಟೇ. ಇದು ಪ್ರಜಾಪ್ರಭುತ್ವದಲ್ಲಿ ಆರ್.ಎಸ್.ಎಸ್.ತನ್ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯನ್ನು ಬಳಸಿಕೊಂಡು ನಡೆಸುತ್ತಿರುವ ದೌರ್ಜನ್ಯದ ಮಾದರಿ. ಪ್ರೊಫೆಸರ್ ವಿನೋಜ್ ಅಬ್ರಹಂ Centre for Development Studies (CDS), ತಿರುವನಂತಪುರಂ ಅವರು ಹೇಳಿದ್ದು.  “ಎ.ಕೆ. ರಾಮಾನುಜಂ ಅವರ” ಮುನ್ನೂರು ರಾಮಾಯಣಗಳು” ಪ್ರಬಂಧದ ಮೇಲೆ ನಡೆದ ಹಲ್ಲೆ ನಿಜಕ್ಕೂ ಚಿಂತೆಗೀಡುಮಾಡಿದೆ. ಜನ ಸಾಮಾನ್ಯರ ನಂಬುಗೆಯೊಳಗೇ ನಡೆಸುವ ಬಹುಮುಖೀ ಚಿಂತನೆಯನ್ನು ನಾಶಪಡಿಸಲಾಗಿದೆ. ಸಂವಿಧಾನದ ಮೂಲ ಆಶಯವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಹಕ್ಕನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ.”

ಮುನ್ನೂರು ರಾಮಾಯಣದ ವಿರೋಧದ ಬೆನ್ನಲ್ಲೇ 25 ಫೆಬ್ರವರಿ 2008 ರಂದು ಸಂಘಪರಿವಾರ ವಿದ್ಯಾಲಯದ ಆವರಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಯಿತು. ಈ ಸಂಘ ಪರಿವಾರದವರು ತಮ್ಮೊಂದಿಗೆ ದೃಶ್ಯ ಮಾಧ್ಯಮದವರನ್ನೂ ಕರೆದುಕೊಂಡು ಬಂದು ಇತಿಹಾಸ ವಿಭಾಗದ ಮುಖ್ಯಸ್ಥರಾದ ಎಸ್.ಝ್. ಜಾಫ಼್ರಿಯವರ ಮೇಲೆ ಹಲ್ಲೆ ನಡೆಸಿ ಅಲ್ಲಿನ ಪೀಠೋಪಕರಣಗಳನ್ನು, ಧ್ವನಿವರ್ಧಕಗಳನ್ನು ಧ್ವಂಸಗೊಳಿಸಿ, ಪುಸ್ತಕಗಳನ್ನು ಹರಿದುಹಾಕಿದರು. ಈ ದುಷ್ಕೃತ್ಯಕ್ಕೆ ಪೋಲೀಸಿನವರು ಸಹ ಮೂಕ ಪ್ರೇಕ್ಷರಾಗಿದ್ದರು. ಆಗ ಅಲ್ಲಿನ ಬೇರೆ ವಿಭಾಗದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು –   ಅಮರ್ ಫರೂಕಿ, ಪೀಪಲ್ಸ್ ಡೆಮಾಕ್ರಸಿ ಚಿಂತಕ ಖಲೀದ್ ಅಖ್ಥರ್ ಅವರ ಮಾತುಗಳಲ್ಲೇ ಹೇಳುವುದಾದರೆ ಎ.ಕೆ. ರಾಮಾನುಜಂ ಅವರ “ಮುನ್ನೂರು ರಾಮಾಯಣಗಳು, 5 ಉದಾಹರಣೆಗಳು ೩ ಚಿಂತನೆಗಳು” ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ಇತಿಹಾಸದ ಪಠ್ಯವಾಗಿ ಆಯ್ಕೆಯಾದಾಗ, ಈ ಹಿಂದೂ ಮಹಾಕಾವ್ಯವನ್ನು ಅತ್ಯಂತ ಆಳವಾಗಿ, ವಿಸ್ತಾರವಾಗಿ, ಬಹುಮುಖೀ ನೆಲೆಯ ತೌಲನಿಕ ಅಧ್ಯಯನ ಮಾಡುವುದರ ಮೂಲಕ ಆ ಮಹಾಕಾವ್ಯಕ್ಕೆ ಅತ್ಯಂತ ನ್ಯಾಯ ಒದಗಿಸಿಕೊಡಲಾಗುತ್ತದೆ ಎಂದು ಈ ಆರ್.ಎಸ್.ಎಸ್. ಹಾಗೂ ಎಬಿವಿಪಿಯವರು ಸಂತೋಷಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಇಲ್ಲಿನ ಪ್ರಬಂಧ ಈ ಮಹಾಕಾವ್ಯವನ್ನು ವಿವರವಾಗಿ ಹೇಳುವುದರ ಮೂಲಕ ಇಲ್ಲಿನ ಚಲನಶೀಲತೆಯನ್ನು, ವೈವಿಧ್ಯತೆಯನ್ನು, ಈ ದೇಶದ ರಾಮನನ್ನು ಜಗತ್ತಿಗೇ ಪ್ರಚುರಪಡಿಸಲಾಗುತ್ತದೆ ಎನ್ನುವ ವಿಷಯವೇ ಈ ಬಲಪಂಥೀಯರಿಗೆ ಹೆಮ್ಮೆಯನ್ನುಂಟು ಮಾಡಬೇಕಾಗಿತ್ತು. ಆದರೆ ಸಮಾನ ನಾಗರಿಕ ಸಂಹಿತೆ, ಏಕರೂಪಿ ಭಾರತ, ಏಕರೂಪಿ ಸಂಸ್ಕೃತಿ, ಈಗ ಏಕರೂಪಿ ರಾಮಾಯಣ ಈ ಎಂದೆಂದಿಗೂ ಬಗ್ಗಿಸಲಾಗದ ದೃಷ್ಟಿಕೋನದಲ್ಲಿ ನಮ್ಮ ಜೀವಪರವಾದ ಬಹುರೂಪಿ, ವೈವಿಧ್ಯತೆಗಳ ಚಿಂತನೆಗಳು ಒಂದಾಗುವುದೇ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಶ್ರೇಷ್ಠ ಚರಿತ್ರೆಗಾರ್ತಿ ಹಾಗೂ ಚಿಂತಕಿ ರೊಮಿಲಾ ಥಾಪರ್ ( 1999 ರಲ್ಲಿ) “ನಾನು 35 ವರ್ಷಗಳ ಹಿಂದೆ NCERT ಗಾಗಿ 6 ಮತ್ತು 7ನೇ ತರಗತಿಗಳಿಗೆ ಒಂದು ಪುಸ್ತಕವನ್ನು ಬರೆದಿದ್ದೆ. ಅದರಲ್ಲಿ ಒಂದು ಸಣ್ಣ ಪರಿಚ್ಛೇದದಲ್ಲಿ ನಾನು ಮಹಮದ್ ಘಜನಿಯ ಬಗ್ಗೆ ಬರೆಯುತ್ತಾ “ಅವನು ಮೂರ್ತಿ ಭಂಜಕನಾಗಿದ್ದ, ಭಾರತ ದೇಶದ ದೇವಾಲಯಗಳ ಮೇಲೆ ದಾಳಿ ನಡೆಸಿ ಅಲ್ಲಿ ಹುದುಗಿದ್ದ ಐಶ್ವರ್ಯವನ್ನು ಲೂಟಿ ಮಾಡಿ ಮರಳಿ ತನ್ನ ದೇಶವಾದ ಘಜನಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮಧ್ಯ ಏಷ್ಯಾದ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ ಅದರೊಳಗೆ ಸೇನೆಯನ್ನು, ವಿದ್ಯಾಲಯವನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ” ಎಂದು ಬರೆದೆ. ಇದು ಕೋಮುವಾದಿ ಇತಿಹಾಸಕಾರರನ್ನು ಕೆರಳಿಸಿತು. ಈ ಕೋಮುವಾದಿಗಳು “ಘಜನಿ ಮೂರ್ತಿ ಭಂಜಕನಾಗಿದ್ದ, ಇಲ್ಲಿನ ದೇವಾಲಯದ ಸಂಪತ್ತನ್ನು ಲೂಟಿ ಮಾಡಿದ ಎನ್ನುವ ಸಂಗತಿಗಳನ್ನು ಹಾಗೇ ಇರಲಿ ಆದರೆ ಅವನು ಈ ಸಂಪತ್ತಿನಿಂದ ಸಾಮ್ರಾಜ್ಯವನ್ನು ಸ್ಥಾಪಿಸಿದ, ವಿದ್ಯಾಲಯಗಳನ್ನು, ಗ್ರಂಥಾಲಯಗಳನ್ನು ನಿರ್ಮಿಸಿದ ಎನ್ನುವುದನ್ನು ನಿಮ್ಮ ಟಿಪ್ಪಣಿಯಿಂದ ಕಿತ್ತುಹಾಕಿ” ಎಂದು ನನಗೆ ತಾಕೀತು ಮಾಡಿದರು. ಇದು ಈ ಬಲಪಂಥೀಯ ಇತಿಹಾಸಕಾರರ ಅತ್ಯಂತ selective ಆದ ಚರಿತ್ರೆಯ ದೃಷ್ಟಿಕೋನ. ಇದೇ ಮಾತನ್ನು ಔರಂಗಜೇಬನ ಬಗೆಗೂ ಹೇಳಬಹುದು. ಈ ಕೋಮುವಾದಿಗಳು ಬಯಸುವುದು ಈ ಔರಂಗಜೇಬನ ಅನೇಕ ಕೆಟ್ಟ ಗುಣಗಳನ್ನು ಬರೆಯಬೇಕು. ಆದರೆ ಇದೇ ಔರಂಗಜೇಬ ಬ್ರಾಹ್ಮಣರಿಗೆ, ದೇವಸ್ಥಾನಗಳಿಗೆ ಅನುದಾನವನ್ನು, ಹಣವನ್ನು ನೀಡಿದ್ದನ್ನು ಮಾತ್ರ ಬರೆಯಬೇಡಿ. So it’s a highly selective history. ನಮಗೆಲ್ಲಾ ಗೊತ್ತಿರುವಂತೆ ಒಂದು ಘಟ್ಟದವರೆಗೂ ಇತಿಹಾಸ selective ಆಗಿರುತ್ತದೆ. ಏಕೆಂದರೆ ದಿನನಿತ್ಯದಲ್ಲಿ, ಪ್ರತಿ ಕ್ಷಣದಲ್ಲಿ ನಡೆದ ಘಟನೆಗಳನ್ನು ಯಾರಿಗೂ ಮಾಹಿತಿ ಇರುವುದಿಲ್ಲ, ಆದರೆ ಸಿದ್ಧಾಂತಗಳೇ selective ಆಗಿ ಹೋದರೆ ಇತಿಹಾಸ ಛಿದ್ರಗೊಳ್ಳುತ್ತದೆ. The problem with communal history writing is that not only is it being extremely selective about facts but the interpretation is also from a deliberately partisan point”.   ಹೀಗೆ ಮುಂದುವರೆದು ರೊಮಿಲಾ ಥಾಪರ್ ಹೇಳುವುದು “1920 ರಲ್ಲಿ ಹಿಂದುತ್ವ ಸಿದ್ಧಾಂತವನ್ನು ಹುಟ್ಟುಹಾಕಲಾಯಿತು. ಆದರೆ ಈ ಸಿದ್ಧಾಂತ 50ರ ದಶಕದವರೆಗೂ ಎಲ್ಲಿಯೂ ಬಹಿರಂಗವಾಗಿ ವಿಜೃಂಬಿಸುತ್ತಿರಲಿಲ್ಲ. ಆದರೆ ಕಳೆದ 20, 30 ವರ್ಷಗಳಲ್ಲಿ ಈ ಹಿಂದುತ್ವ ಸಿದ್ಧಾಂತ ಸಮಾಜದ ಎಲ್ಲಾ ವ್ಯವಸ್ಥೆಯೊಳಗೆ ತೂರಿಕೊಳ್ಳುತ್ತ ಪತ್ರಿಕೆಗಳು, ಶಾಲೆಗಳು, ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿ ಸೇರಿಕೊಂಡಿದೆ. ಈ ಮೂಲಕ ಕೋಮುವಾದಿ ಇತಿಹಾಸ ಬರವಣಿಗೆಗೆ ಹಿಂದೂ – ಮುಸ್ಲಿಂ ಘರ್ಷಣೆ ಅತ್ಯಂತ ಮುಖ್ಯ ಪಠ್ಯವಾಗಿಬಿಟ್ಟಿದೆ.”

ಇತ್ತೀಚೆಗೆ ಬರೋಡ ವಿಶ್ವವಿದ್ಯಾಲಯದಲ್ಲಿ ಹಿಂದೂ ದೇವರು ಹಾಗೂ ದೇವತೆಗಳ ಚಿತ್ರಕಲಾ ಪ್ರದರ್ಶನದ ಮೇಲೆ ದಾಳಿ ನಡೆಸಿ ಅಲ್ಲಿನ ಚಿತ್ರಗಳನ್ನು ಧ್ವಂಸಗೊಳಿಸಲಾಯಿತು. ರಾಜಕೀಯ, ಸಾಂಸ್ಕೃತಿಕ. ಬೌದ್ಧಿಕ ವಲಯಗಳಲ್ಲಿ ತಮ್ಮ ಕೋಮುವಾದದ ದೃಷ್ಟಿಕೋನದೊಳಗೆ ದಕ್ಕುವ ಚಿಂತನೆಗಳನ್ನು ಮಾತ್ರ ಪ್ರತಿಪಾದಿಸುತ್ತಾ ಈ ಏಕರೂಪಿ ಜೀವವಿರೋಧಿ ದೃಷ್ಠಿಕೋನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವ ಸರ್ವಾಧಿಕಾರದ ಧೋರಣೆ ಈ ಆರ್.ಎಸ್.ಎಸ್. ಹಾಗೂ ಇದರ ಅಂಗ ಸಂಸ್ಥೆಗಳದ್ದು. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಲೋಕದ ಮೇಲೆ ಈ ಎಬಿವಿಪಿಗಳ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೆ. ಈ ಮೂಲಕ ನಾಗರಿಕ ಸಮಾಜ ಕುಬ್ಜಗೊಳ್ಳುತ್ತಿದೆ. ಇವೆಲ್ಲಕ್ಕಿಂತಲೂ ದೊಡ್ಡ ದುರಂತವೆಂದರೆ ಕಾಂಗ್ರೆಸ್ ಅಧಿಕಾರವಿರುವ ಕಾಲಘಟ್ಟದಲ್ಲಿ ಈ ಸಂಘಪರಿವಾರದ ದಾಳಿ ಎದುರಿಸಲಾರದೆ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ತಿರುಗಬೇಕಾಯಿತು. ಈ ಕಾಂಗ್ರೆಸ್ ಅಧಿಕಾರವಿರುವ ಮಹರಾಷ್ಟ್ರದಲ್ಲಿ 2004 ರಲ್ಲಿ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇಸ್ಟಿಟ್ಯೂಟ್ ಮೇಲೆ ಸಂಘ ಪರಿವಾರದಿಂದ ದಾಳಿ ನಡೆಯಿತು. ಇಲ್ಲೂ ಕಾಂಗ್ರೆಸ್ ಅಸಹಾಯಕ ಮೂಕ ಪ್ರೇಕ್ಷಕ. ಈ ಕಾಂಗ್ರೆಸ್ ತಾನೂ ನೈತಿಕವಾಗಿ ಭ್ರಷ್ಟನಾಗುವುದರ ಮೂಲಕ ಇಡೀ ದೇಶವನ್ನು ಸಹ ಅನೈತಿಕತೆಗೆ ತಳ್ಳಿದೆ.

ಇಷ್ಟೆಲ್ಲ ಕರಾಳ ಹಿನ್ನೆಲೆಯನ್ನುಳ್ಳ ಆರ್.ಎಸ್.ಎಸ್. ಪ್ರೇರಿತ ಏಕರೂಪಿ, ವೈದಿಕ ಸಂಸ್ಕೃತಿ ರಕ್ಷಣೆಯ ದುಷ್ಟಕಣ್ಣು ಈಗ ಕನ್ನಡದ ಸಂವೇದನಶೀಲ ಲೇಖಕಿ ಸಬೀಹಾ ಭೂಮೀಗೌಡ ಅವರ ಲೇಖನ “ಕೋಮುವಾದಿ ಮತ್ತು ಮಹಿಳೆ” ಎನ್ನುವ ವೈಚಾರಿಕ ಲೇಖನದ ಮೇಲೆ ಬಿದ್ದಿದೆ. ಎಂದಿನಂತೆ ಈ ಸಂಸ್ಕೃತಿ ಭಕ್ಷಕರಾದ ಎಬಿವಿಪಿಗಳು ಈ ಲೇಖನದ ವಿರುದ್ಧ ಪ್ರತಿಭಟಿಸಿದ್ದಾರೆ. ಸಬೀಹ ಅವರು “ಈ ಲೇಖನ ಕೋಮುಗಲಭೆಗಳು ಸಂಭವಿಸಿದಾಗ ಮಹಿಳೆ ಅನುಭವಿಸುವ ನೋವು, ಈ ಕೋಮು ಗಲಭೆಗಳಿಗೆ ಮಹಿಳೆ ಮಾತ್ರ ತುತ್ತಾಗುವ ಅತ್ಯಂತ ಕ್ರೂರ ಪ್ರಕ್ರಿಯೆಯನ್ನು ಉದಾಹರಣೆ ಸಮೇತ ವಿವರಿಸಿದ್ದೇನೆ” ಎಂದು ಅತ್ಯಂತ ವಿವರವಾಗಿ, ಸಹನಶೀಲರಾಗಿ, ಆಧಾರ ಸಮೇತ ಸ್ಪಷ್ಟಪಡಿಸಿದರು. ಆದರೆ ಸೈರಣೆ ಎನ್ನುವ ಪದದ ಅರ್ಥವೇ ಗೊತ್ತಿಲ್ಲದ ಈ ಸಂಘಪರಿವಾರಕ್ಕೆ ಮತ್ತೇ ಅದೇ ಹಳೇ ಹೆಳವಂಡ. ಈ ಲೇಖನ ತಮ್ಮ ಚಿಂತನೆಯ ಮೂಗಿನ ನೇರಕ್ಕಿಲ್ಲ !!! ಮತ್ತೇ ನೀವು ಏನನ್ನಾದರೂ ಬರೆದರೂ ಅದು ಹಿಂದೂ ಸಂಸ್ಕೃತಿಯನ್ನು ವೈಭವೀಕರಣವನ್ನು ಒಳಗೊಳ್ಳಲೇಬೇಕು. ಒಂದು ವೇಳೆ ಈ ಹಿಂದೂ ಸಂಸ್ಕೃತಿಯ ಅವಗುಣಗಳ ಬಗೆಗೆ ಬರೆದರೆ ಅವರದರ ಬಗ್ಗೆ ಅಂದರೆ ಮುಸ್ಲಿಂರ ಕಂದಾಚಾರಗಳ ಬಗ್ಗೆ ಯಾಕೆ ಬರೆದಿಲ್ಲ ಈ ರೀತಿಯ ಕ್ಯಾತೆ ಈ  ಸಂಘಪರಿವಾರದ್ದು. ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದರೂ ಅವರ ಎಲೆಯಲ್ಲಿ ನೊಣ ಓಡಿಸುವ ಇವರ ಚಾಳಿ ಇಂದಿಗೂ ಕಡಿಮೆಯಾಗಿಲ್ಲ. ಒಟ್ಟಿನಲ್ಲಿ ಇದೇ ರೀತಿ ಮುಂದುವರೆದರೆ ನಾವೆಲ್ಲ ನಮ್ಮ ಪುಸ್ತಕಗಳ ಪ್ರತಿಯೊಂದನ್ನು ಸೆನ್ಸಾರ್‍‌ಗಾಗಿ ಕೇಶವ ಕೃಪಕ್ಕೆ ಕೊಡಬೇಕಾಗಿ ಬರುವ ದಿನಗಳು ದೂರವೇನಿಲ್ಲ. ಇಲ್ಲಿ ಪ್ರತಿಯೊಂದು ಪ್ರಗತಿಪರವಾದ, ವೈಚಾರಿಕ, ಕ್ರಿಯಾತ್ಮಕವಾದ ಸಾಂಸ್ಕೃತಿಕ ಚಿಂತನೆಗಳಿಗೆ, ಹೋರಾಟಗಳಿಗೆ  ಸಂಘ ಪರಿವಾರ ಕ್ಯಾತೆ ತೆಗೆಯುತ್ತಾ, ಪ್ರಜ್ಞಾವಂತರ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಸುತ್ತಾ ರಾಜ್ಯದೆಲ್ಲಡೆ ಅಶಾಂತಿಯನ್ನು ಹರಡುತ್ತಿದ್ದರೆ ನಾವೆಲ್ಲ ವಿಚಿತ್ರ ರೀತಿಯ ವಿಸ್ಮೃತಿಯಲ್ಲಿ ಮೈಮರತಿದ್ದೇವೆ. ಏಕೆಂದರೆ ನಮ್ಮ ಬುದ್ಧಿಜೀವಿಗಳಿಗೆ, ಸಾಹಿತಿಗಳಿಗೆ ಇನ್ನೂ ಇದರ ಅಪಾಯಕಾರಿ ಪರಿಣಾಮಗಳು ಅರ್ಥವಾದಂತಿಲ್ಲ. ಮೊನ್ನೆ ಡೋಂಗಿ ಗುರು ರವಿಶಂಕರ್ ಅತ್ಯಂತ ಹೀನಾಯವಾಗಿ ಸರ್ಕಾರಿ ಶಾಲೆಗಳ ಬಗೆಗೆ ಅವಮಾನಕರವಾಗಿ ಮಾತನಾಡಿದಾಗಲೂ ಸಹ ಅಷ್ಟೆ ಬುದ್ಧಿಜೀವಿಗಳೆಲ್ಲ ಜಾಣ ಕಿವುಡುತನವನ್ನು, ಮರೆಮೋಸವನ್ನು ಪ್ರದರ್ಶಿಸಿದರು. ಈ ಡೋಂಗಿ ಗುರು ಸಂವಿಧಾನಕ್ಕೆ ಅಪಚಾರವೆಸಗುವ ಹಾಗೆ ಸರ್ಕಾರಿ ಶಾಲೆಗಳ ಬಗೆಗೆ ದುರಹಂಕಾರದ, ಬೇಜವಬ್ದಾರಿ ಹೇಳಿಕೆ ಕೊಟ್ಟರೂ ಈ ರವಿಶಂಕರ್ ಗುರೂಜಿಯನ್ನು Prosecution ಮಾಡುವರಿಲ್ಲ. ಎರಡೂ ಘಟನೆಗಳಲ್ಲಿ ಮತ್ತೆ SFI ಗೆಳೆಯರು ಮಾತ್ರ ಪ್ರತಿಭಟಿಸಿದರು. ಪ್ರಗತಿಪರ ವಿದ್ಯಾರ್ಥಿ ವೇದಿಕೆ ಇದರ ಕುರಿತಾಗಿ ಒಂದು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು. ಆದರೆ ಇದು ಸಹ ಸಾಂಕೇತಿಕವಾಗುತ್ತಿದೆ.

2008 -2011 ರ ಮೂರು ವರ್ಷಗಳ ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ, ಹಿಂದುಳಿದವರ ಮೇಲೆ ಸಂಘ ಪರಿವಾರ ನಡೆಸಿದ ಹಲ್ಲೆಗಳು ಅರ್ಥಾತ್ “ಅಲ್ಪಸಂಖ್ಯಾತ ಆಯೋಗದ ವರದಿ”  (ಆಧಾರ ; 25.2.2012 ತೆಹೆಲ್ಕ ಇಂಗ್ಲಿಷ್ ವಾರ ಪತ್ರಿಕೆ)

  • 19.8.2008: ರೈತರಾದ ಸದಾನಂದ ಪೂಜಾರಿ ಉಡುಪಿಯಲ್ಲಿ ಹತ್ಯೆಗೀಡಾದರು.
  • 7.8.2008 : ರೂಪಶ್ರೀ ಮತ್ತು ವಿಕಾರ್ ಅಹಮದ್ ಇಬ್ಬರ ಮೇಲೆ ವಿಟ್ಲದಲ್ಲಿ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದರು. ಮಂಗಳೂರಿನಲ್ಲಿ ದೀಪ ಹಾಗೂ ಅಬ್ದುಲ್‍ವಾಹಿದ್ ಅವರನ್ನು ಬಸ್ಸಿನಿಂದ ಎಳೆದು ಹಲ್ಲೆ ನಡೆಸಿದರು.
  • 15.12.2008: 24 ಮುಸ್ಲಿಂ ಯುವಕರು ಭಟ್ಕಳಕ್ಕೆ ಪಿಕ್ನಿಕ್‍ಗೆ ಹೋದಾಗ ನೂರಾರು ಕಾರ್ಯಕರ್ತರು ಈ ಮುಸ್ಲಿಂ ಗುಂಪಿನ ಮೇಲೆ ಹಲ್ಲೆ ನಡೆಸಿದರು. ಈ ಹಲ್ಲೆಯಲ್ಲಿ ಒಬ್ಬನು ಸಾವಿಗೀಡಾದ.
  • 24.1.2009: ಮಂಗಳೂರು ಪಬ್‍ನಲ್ಲಿ ಮಹಿಳೆಯರ ಮೇಲೆ ಹಲ್ಲೆ.
  • 16.8.2009: ಬಂಟ್ವಾಳದ ಬಳಿಯ ಮದರಾಸದಲ್ಲಿ ಹಂದಿಯ ಮಾಂಸವನ್ನು ಎಸೆದರು.
  • 3.11.2009: ಉಪ್ಪಿನಂಗಡಿಯ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಂದು ಮುಸ್ಲಿಂ ನಡುವೆ ಘರ್ಷಣೆ.
  • 19.11.2009: ಹಿಂದು ಹುಡುಗಿಗೆ ಪತ್ರ ಬರೆದ ಆರೋಪದ ಮೇಲೆ ಮಂಗಳೂರಿನ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ.
  • 25.1.2010 : ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ಧಾಳಿ ಹಾಗೂ ಮೇರಿ ಪ್ರತಿಮೆ ಧ್ವಂಸ.
  • 5.1.2011: ಗಲಭೆಕೋರರು ಮಂಗಳೂರಿನ ಪೋಲೀಸ್ ಸ್ಟೇಷನ್‍ಗೆ ದಾಳಿ.
  • 1.2.2011: ಬಂಟ್ವಾಳ ಪಟ್ಟಣದ ಅಭಿವೃದ್ದಿ ಛೇರ್ಮನ್ ಆದ ಗೋವಿಂದ ಪ್ರಭು ಅವರನ್ನು ಅವಮಾನಿಸಿದರು ಎಂದು ಪುತ್ತೂರು ಎ.ಎಸ್.ಪಿ ಅಮಿತ್ ಸಿಂಗ್ ಮೇಲೆ ಕೆಂಗಣ್ಣು. ಸುಮಾರು 200 ಜನ MP ನಳಿನ್ ಕುಮಾರ್ ಕಟೀಲ್ ಮತ್ತು MLA  ಮಲ್ಲಿಕ ಪ್ರಸಾದ್ ನೇತೃತ್ವದಲ್ಲಿ  ಎ.ಎಸ್.ಪಿ ಅಮಿತ್ ಸಿಂಗ್ ಮನೆಯನ್ನು ಕಬ್ಜಾ ಮಾಡಿದರು. ಕಡೆಗೆ ಪೋಲೀಸ್ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು. 16.3.2011: ಕಾರ್ ಮೆಕ್ಯಾನಿಕ್ ಆಗಿದ್ದ ಬದೃದ್ದೀನ್ ಅನ್ನು ಹಿಂದು ಹುಡುಗಿಯನ್ನು ಪ್ರೇಮಿಸುತ್ತಿರುವ ಅಪಾದನೆಯ ಮೇಲೆ ಕೊಲೆ ಮಾಡಲಾಯಿತು. ವಿಚಾರಣೆಯ ವೇಳೆ ಹುಡುಗಿಯ ತಂದೆಯನ್ನು ಬಂಧಿಸಲಾಯಿತು.
  • 23.3.2011: ತನ್ನ ಗಂಡ ಮಹಮದ್ ಅಲಿ ಹಾಗೂ ಮಗ ಜಾವೆದ್ ಅಲಿ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಉಲ್ಲಾಳದ ಮೈಮೂನ ತನಿಖೆಗಾಗಿ ಸರ್ಕಾರವನ್ನು ಕೋರಿದ್ದಳು.
  •  26.2.2011: ಕಡಬದ ಜ್ಯೂಸ್ ಅಂಗಡಿಯ ಬಳಿ ಮುಸ್ಲಿಂ ಹುಡುಗ ಹಾಗೂ ಹಿಂದು ಹುಡುಗಿಯ ಮೇಲೆ ಹಲ್ಲೆ ನಡೆಸಿದರು.
  • 8.7.2011: ಜಾನುವಾರು ಸಾಗಣಿಕೆ ಆಪಾದನೆಯ ಮೇಲೆ ಪೆರಲ್‍ನ ನಿತ್ಯಾನಂದ ಅವರ ಮೇಲೆ ಹಲ್ಲೆ.
  • 18.7.2011 : ನಾಲ್ಕು ಮಕ್ಕಳ ತಾಯಿಯಾದ ಮಂಗಳೂರಿನ ಬುಶ್ರ ಅನ್ನು ಬಲವಂತವಾಗಿ ಹಿಂದು ಧರ್ಮಕ್ಕೆ ಮತಾಂತರಗೊಳಿಸಲಾಯಿತು.
  • 30.10.2011: ಸಂಘಪರಿವಾರದ ಮುಖವಾಣಿ “ಹೊಸ ದಿಗಂತ” ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆಯ ಸ್ಥಾನವನ್ನು ಸರ್ಕಾರದಿಂದ ನೀಡಲಾಯಿತು.
  •  26.12.2011: ಸಕಲೇಶಪುರದ ಆಸಿಫ್ ತಾನು ಪ್ರೇಮಿಸಿದ ಹಿಂದು ಹುಡುಗಿಯೊಂದಿಗೆ ಬೆಂಗಳೂರಿಗೆ ಓಡಿ ಬಂದಿದ್ದ. ಇವರಿಬ್ಬರನ್ನು ಹುಡುಕಿ ಅಪಹರಣ ಹಾಗೂ ಅತ್ಯಾಚಾರದ ಅಪಾದನೆಯ ಮೇಲೆ ಆಸಿಫ್ ಅನ್ನು ಬಂಧಿಸಲಾಯಿತು.
  • 28.12.2011:  ಮಂಗಳೂರಿನ ಹೆಬ್ರಾನ್ ದೇವರ ಚರ್ಚ್ ಮೇಲೆ ದಾಳಿ ಕಟ್ಟಡವನ್ನು ಧ್ವಂಸಗೊಳಿಸಲು ಯತ್ನ .