ಧರ್ಮ ಹಾಗೂ ಆರ್ಥಿಕ ಅಂತ:ಸತ್ವ


-ಡಾ.ಎಸ್.ಬಿ. ಜೋಗುರ  


 

“Christianity will go. It will vanish and shrink. I needn’t argue about that; I’am right and I will be proved right. We ‘re more popular than Jesus now; I don’t know which will go first-rock’n’ roll or Christinity. Jesus was all right but his desciples were thick and ordinary. It’s them twisting it that ruins it for me.”  – John Lennon

ಧರ್ಮ ಮತ್ತು ಸಮಾಜದ ಮಧ್ಯೆ ಇರುವ ಸಂಬಂಧವನ್ನು ಕುರಿತ ಅಧ್ಯಯನ, ಮಾನವ ಸಮಾಜ ಅತ್ಯಂತ ಸರಳವಾಗಿರುವ ಹಂತದಿಂದಲೂ ಮುಂದುವರೆದುಕೊಂಡು ಬಂದಿರುವುದಿದೆ. ನಿಸರ್ಗದ ಎಲ್ಲ ವ್ಯಾಪಾರಗಳೂ ಧರ್ಮದಿಂದಲೇ ನಿಯಂತ್ರಿತ. ನಿರ್ಧರಿತ ಎನ್ನುವುದರಿಂದ ಆರಂಭಿಸಿ, ಸರ್ವಚೇತನವಾದ ಮತ್ತು ಲಾಂಛನವಾದಗಳ ಮೂಲಕ ಸಾಗಿ ಬಂದು, ಅನೇಕ ದೇವರ ಪರಿಕಲ್ಪನೆಯ ನಡುವೆ ಏಕದೇವತಾರಾಧನೆ ಮತ್ತು ದೇವನೊಬ್ಬ ನಾಮ ಹಲವು ಎನ್ನುವ ದಾರ್ಶನಿಕತೆಯವರೆಗೂ ಬಂದು ತಲುಪಿ, ಈಗ ನಮ್ಮ ನಡುವೆ ಪರಸ್ಪರ ಬಲಪ್ರದರ್ಶನದ ಮೂಲಕ ಗುರುತಿಸಿಕೊಳ್ಳುವ, ತಾನೇ ಶ್ರೇಷ್ಟ ಎನ್ನುವ ಅಹಮಿಕೆಯವರೆಗೂ ಬಂದು ತಲುಪಿರುವ ಅಗೋಚರ, ಅತಿಮಾನುಷ ಶಕ್ತಿಯಾದ ಧರ್ಮವು ಒಂದು ಸಮಾಜದ ಆರ್ಥಿಕ ಅಂತ:ಸತ್ವವಾಗಿಯೂ ಕೆಲಸ ಮಾಡುವುದಿದೆ ಎನ್ನುವುದನ್ನು ಕೆಲವು ಚಿಂತಕರಾದರೂ ತಮ್ಮ ಅಧ್ಯಯನದ ಮೂಲಕ ತೋರಿಸಿಕೊಟ್ಟಿರುವುದಿದೆ.

ಶ್ರೇಷ್ಟ ಮಾನವಶಾಸ್ತ್ರಜ್ಞರಾದ ಇವನ್ಸ್ ಫ್ರಿಚರ್ಡ್ ಮತ್ತು ರಾಡಕ್ಲಿಪ್ ಬ್ರೌನ್‌ರವರು ಸಾಮಾಜಿಕ ವಿಕಸನದ ಘಟ್ಟಗಳಾದ ಬೇಟೆಯಾಡುವ ಹಂತ, ಆಹಾರನ್ವೇಷಣೆಯ ಹಂತ, ಹುಲ್ಲುಗಾವಲು ಹಂತ ಮತ್ತು ಒಕ್ಕಲುತನದ ಹಂತದಲ್ಲಿಯ ಧರ್ಮದ ಸರಳ ಸ್ವರೂಪವನ್ನು ಕುರಿತು ಅಧ್ಯಯನ ಮಾಡಿರುವುದಿದೆ. ವಿಶ್ವದ ಎಲ್ಲ ಧರ್ಮಗಳು ಮನುಷ್ಯ ಕುಲವನ್ನು ಅಖಂಡವಾಗಿ ಬೆಸೆಯುವಲ್ಲಿ ಸೋತಿವೆ ಹಾಗಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಜಾಗತಿಕ ಧರ್ಮಗಳು ತಮ್ಮ ಮೂಲ ಹೊಣೆಗಾರಿಕೆಯಿಂದ ವಿಚಲಿತವಾಗಿದ್ದು, ಅವುಗಳ ಸ್ಥಾನದಲ್ಲಿ ಮಾನವತಾವಾದಿ ಧರ್ಮವನ್ನು ಸ್ಥಾಪಿಸಬೇಕು. ನಿಸರ್ಗವನ್ನು ನಿಯಂತ್ರಿಸುವ, ಮನುಷ್ಯನ ಐಹಿಕ ಬೇಡಿಕೆಗಳನ್ನು ಈಡೇರಿಸುವುದು ಮನುಷ್ಯ ಮಾತ್ರನಿಂದ ಸಾಧ್ಯ ಹೀಗಾಗಿ ದೇವರ ಸ್ಥಾನದಲ್ಲಿ ಮಹಾಮಾನವನನ್ನು ಕುಳ್ಳರಿಸಬೇಕು ಎಂದು ಪ್ರತಿಪಾದನೆ ಮಾಡಿದ ಫ್ರಾನ್ಸ್ ದೇಶದ ಸಮಾಜಶಾಸ್ರ್ತಜ್ಞ ಅದು ಸಾಧ್ಯ ಮಾಡಲಾಗದೇ ಅಂಥಾ ಒಂದು ಧರ್ಮವನ್ನು ಸ್ಥಾಪಿಸಲಾಗದೇ ಜೀವನದ ಕೊನೆಯ ಗಳಿಗೆಯಲ್ಲಿ ತನ್ನ ಖಾಸಗಿ ಬದುಕಿನ ಪೆಟ್ಟುಗಳಲ್ಲಿ ಸಿಲುಕಿ ಅತ್ಯಂತ ಜರ್ಜರಿತನಾಗಿ ಹೋದದ್ದು ಈಗ ಚರಿತ್ರೆ. ಇಂಗ್ಲೆಂಡ್ ಮೂಲದ  ಸ್ಪೆನ್ಸರ್‌ನಂಥಾ ಚಿಂತಕರು ಧರ್ಮವನ್ನು ಸಾಮಾಜಿಕ ನಿಯಂತ್ರಣದ ಅನೌಪಚಾರಿಕ ಸಾಧನವನ್ನಾಗಿ ಗುರುತಿಸಿ ’ಇದ್ದವರ ಭಯದಿಂದ ರಾಜ್ಯ ಹಾಗೂ ಸತ್ತವರ ಭಯದಿಂದ ಧರ್ಮ ಹುಟ್ಟಿತು’ ಎಂದಿರುವುರು. ಇಲ್ಲಿ ಭಯ ಎನ್ನುವುದೇ ಧರ್ಮ ಇಲ್ಲವೇ ರಾಜ್ಯ ಎನ್ನುವ ಪ್ರಭುತ್ವಗಳ ಹುಟ್ಟಿಗೆ ಕಾರಣವಾಗಿರುವುದು ಕಟುವಾಸ್ತವ.

ಫ್ರಾನ್ಸ್ ದೇಶದ ಚಿಂತಕ ಡರ್ಖಹೀಮ್ ಧರ್ಮ ಎನ್ನುವುದು ಬದುಕಿನ ಭಾಗ, ಜೀವನದ ಅಗತ್ಯ ಎನ್ನುವ ಹಾಗೆ ಮಾತನಾಡಿ ಸಂಪ್ರದಾಯವಾದಿಗಳ ಸಾಲಿಗೆ ಸೇರಿರುವುದಿದೆ. ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಅವರು 1952 ರ ಸಂದರ್ಭದಲ್ಲಿ  ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ ಎನ್ನುವ ಅಧ್ಯಯನದ ಮೂಲಕ ಅಲ್ಲಿಯ ಪ್ರಾದೇಶಿಕತೆಯಲ್ಲಿ ಧರ್ಮ ಹೇಗೆ ಒಂದು ಬಗೆಯ ಅಸ್ಮಿತೆಯನ್ನು ಕಾಪಾಡಿಕೊಂಡಿತ್ತು ಎನ್ನುವ ಬಗ್ಗೆ ಚರ್ಚಿಸಿರುವರು. ಹೀಗೆ ಇನ್ನೂ ಅನೇಕರು ಧರ್ಮ ಮತ್ತು ಸಮಾಜವನ್ನು ಕುರಿತು ಅಧ್ಯಯನ ಮಾಡಿರುವರಾದರೂ ಜರ್ಮನಿಯ ಆರ್ಥಿಕ ಚಿಂತಕ ಮತ್ತು ಸಮಾಜಶಾಸ್ತ್ರಜ್ಞ  ಮ್ಯಾಕ್ಸ್‌ವೆಬರನ ನಿಲುವು ಮಾತ್ರ ಮಿಕ್ಕ ಎಲ್ಲರಿಗಿಂತಲೂ ವಿಭಿನ್ನವಾದುದು.

ಈ ಮ್ಯಾಕ್ಸ್‌‍ ವೆಬರ್ 19 ನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಒಬ್ಬ ಶ್ರೀಮಂತ ಉದ್ಯಮಿಯಿದ್ದಾನೆ ಎಂದಾಗ ಆತ ಸಹಜವಾಗಿಯೇ ಪ್ರೊಟೆಸ್ಟಂಟ್ ಆಗಿರಬೇಕು ಎನ್ನುವಂಥಹ ನಂಬುಗೆಯ ಸ್ಥಾಪನೆಗೆ ಕ್ರಿಶ್ಚಿಯನ್ ಧರ್ಮದ ಪಂಗಡವೊಂದು ಕಾರಣವಾಗಿತ್ತು ಎನ್ನುವುದನ್ನು ತನ್ನ ಸಿದ್ಧಾಂತದಲ್ಲಿ ಅತ್ಯಂತ ತಾರ್ಕಿಕವಾಗಿ ಚರ್ಚಿಸಿದ್ದಾನೆ.  ಕ್ರಿಶ್ಚಿಯನ್ ಧರ್ಮದಲ್ಲಿ ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಎನ್ನುವ ಎರಡು ಪಂಗಡಗಳಿವೆ. 19 ನೇ ಶತಮಾನದ ಸಂದರ್ಭದಲ್ಲಿ ಯುರೋಪದಲ್ಲಿ ಪ್ರಬಲವಾದ ಸುಧಾರಣಾವಾದದ ಗಾಳಿಯೊಂದು ಬೀಸತೊಡಗಿತು. ಪ್ರೊಟೆಸ್ಟಂಟರು ಮಾತ್ರ ಆರ್ಥಿಕವಾಗಿ ಬೆಳೆಯಬಲ್ಲರು ಎನ್ನುವಂಥ ನಂಬುಗೆಯ ಗಾಳಿಯದು. ಇದರ ಹೊಡೆತಕ್ಕೆ ಸಿಲುಕಿ ಕ್ಯಾಥೊಲಿಕ್ ನೆಲೆಗಳಾದ ಆಷ್ಟ್ರಿಯಾ, ಫ್ರಾನ್ಸ್, ಇಟಲಿ, ಪೋರ್ಚುಗಲ್, ಸ್ಪೇನ್‌ನಂತಹ ರಾಷ್ಟ್ರಗಳು ಪ್ರೊಟೆಸ್ಟಂಟ್ ಪಂಥದ ಪ್ರಾಂತಗಳಾದ ಇಂಗ್ಲೆಂಡ್, ಹಾಲಂಡ್, ಸ್ಕಾಟಲ್ಯಾಂಡ್‌ಗಳ ಕಡೆಗೆ ಹೊರಳಿ ನೊಡುವಂತಾದದ್ದು ಚರಿತ್ರೆ. ಅದಕ್ಕೆ ಅತಿ ಮುಖ್ಯ ಕಾರಣ ಪ್ರೊಟೆಸ್ಟಂಟ್ ಧರ್ಮದ ವಸ್ತುನಿಷ್ಟ ನಿಲುವು.

ಶ್ರಮ ಮತ್ತು ಬಂಡವಾಳ ಶೇಖರಣೆಗಳೆರಡನ್ನೂ ಬಲವಾಗಿ ಪ್ರತಿಪಾದಿಸುವ ಆ ಪಂಗಡ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಷ್ಟಾಪನೆಗೆ ಆಹ್ವಾನವನ್ನೂ ನೀಡಿತು ಎನ್ನುವುದನ್ನು ವೆಬರ್‌ ತನ್ನ ’ಪ್ರೊಟೆಸ್ಟಂಟ್ ಧರ್ಮ ಮತ್ತು ಬಂಡವಾಳಶಾಹಿ ಸಮಾಜದ ಅಂತ:ಸತ್ವ’ ಎನ್ನುವ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ. ಜರ್ಮನ್ ದೇಶ ಸುಧಾರಣಾವಾದದ ಪ್ರಭಾವಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮ್ಯಾಕ್ಸ್ ವೆಬರ್ ಅತ್ಯಂತ ಉತ್ಸಾಹಿ ತರುಣ. ಆತ ತನ್ನ ಹದಿಮೂರನೇಯ ವಯಸ್ಸಿನಲ್ಲಿ ತನ್ನ ಪಾಲಕರಿಗೆ ಕ್ರಿಸ್ಮಸ್ ಕೊಡುಗೆಯಾಗಿ ’About the Course of German History, with reference to the Positions of the Emperor and the Pope’ ಎನ್ನುವ ಪ್ರಬಂಧವನ್ನು ನೀಡಿರುವುದಿತ್ತು. ವಿಶ್ವದ ಮಹಾನ್ ತತ್ವಜ್ಞಾನಿಗಳನ್ನು ಅಧ್ಯಯನ ಮಾಡಿದ ವೆಬರ್, ಅರ್ಥಶಾಸ್ತ್ರದ ಅಧ್ಯಾಪಕನಾಗಿಯೂ ಕಾರ್ಯನಿರ್ವಹಿಸಿದ.

ಪಶ್ಚಿಮದ ನೆಲೆಗಳು ಶ್ರಮವಹಿಸಿ ದುಡಿಯುವುದನ್ನು ಮಾತ್ರವಲ್ಲದೇ  ಬಂಡವಾಳವನ್ನು ಉಳಿಸುವ, ಬೆಳೆಸುವ ದಿಶೆಯಲ್ಲೂ ಪ್ರೊಟೆಸ್ಟಂಟ್ ಪಂಗಡ ನೆರವಾಗಿರುವ ಬಗ್ಗೆ ಆತ ತನ್ನ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ.  ಜಗತ್ತಿನ ಬಹುತೇಕ ಧರ್ಮಗಳು, ತ್ಯಾಗ, ನಿರ್ಮೋಹ, ಅಸಂಗ್ರಹ ಪ್ರವೃತ್ತಿಯನ್ನೇ ಪ್ರತಿಪಾದಿಸುತ್ತವೆ ಹಾಗಾಗಿ ಅಂಥಾ ಧರ್ಮಗಳಿರುವ ರಾಷ್ಟ್ರಗಳು ಆರ್ಥಿಕವಾಗಿ ಹಿಂದುಳಿದಿರುವುದಿದೆ. ಪ್ರೊಟೆಸ್ಟಂಟ್ ಧರ್ಮ ಹಾಗಲ್ಲ ದುಡಿಮೆಯನ್ನು ಬಲವಾಗಿ ಬೆಂಬಲಿಸುವ ಜೊತೆಯಲ್ಲಿ  ಹಣವನ್ನು ಉಳಿಸುವ, ತೊಡಗಿಸುವ, ಬೆಳೆಸುವ ದಿಶೆಯಲ್ಲಿಯೂ ಅದು ನೆರವಾಗುತ್ತದೆ. ಮಾರುಕಟ್ಟೆಗಾಗಿ ಉತ್ಪಾದಿಸುತ್ತ, ತರ್ಕ ಸಮ್ಮತ ವ್ಯವಹಾರದೊಂದಿಗೆ ಹಣವನ್ನು ಕೂಡಿ ಹಾಕಬೇಕು ಎನ್ನುವ ಧರ್ಮ ಅದಾಗಿದೆ ಎನ್ನುತ್ತಾನೆ. ವಿಶ್ವದಲ್ಲಿ ಬಡ್ಡಿ ವ್ಯವಹಾರವನ್ನು ನಿರಾಕರಿಸದಿರುವ ಪಂಥವೆಂದರೆ ಈ ಪ್ರೊಟೆಸ್ಟಂಟ್ ಪಂಗಡ ಎಂದು ಆತ ಪ್ರತಿಪಾದಿಸುತ್ತಾನೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಉಪದೇಶಿಸುವ ಯಾವುದೇ ಧರ್ಮಗಳು ಬಂಡವಾಳಶಾಹಿ ವ್ಯವಸ್ಥೆಗೆ ಗಟ್ಟಿ ಅಡಿಪಾಯವನ್ನು ಹಾಕಲಾರವು.

ಮನುಷ್ಯ ಈಗಾಗಲೇ ಭೌತಿಕತೆಯ ಧಾವಂತದಲ್ಲಿ ಎಸಗುತ್ತಿರುವ ಪ್ರಮಾದಗಳಿಗೆ ವೆಬರನ ಪ್ರೊಟೆಸ್ಟಂಟ್ ಧರ್ಮದ ವಿಚಾರಗಳು ಸಮರ್ಥನೀಯವಾದ ಪರಿಹಾರಗಳನ್ನು ಒದಗಿಸಲಾರವು ಎನ್ನುವ ಸತ್ಯದ ನಡುವೆಯೇ ಧರ್ಮ ಎನ್ನುವುದು ಕೇವಲ ಆಚರಣೆ. ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿ ಉಳಿಯದೇ 12 ನೇ ಶತಮಾನದ ಶ್ರಮ ಸಂಸ್ಕೃತಿಯನ್ನು ಬೆಂಬಲಿಸಿದ್ದೇಯಾದರೆ ಖಂಡಿತ ವಿಶ್ವದ ಎಲ್ಲ ಧರ್ಮಗಳು ಸಮಾಜಮುಖಿಯಾಗಿ ಕಾರ್ಯ ಎಸಗಿದಂತಾಗುತ್ತದೆ. ಅಷ್ಟಕ್ಕೂ ಈಗೀಗ ಧರ್ಮ ಮತ್ತು ಅದರ ಸಹವಾಸದಲ್ಲಿರುವ ಮಠಗಳು ತಾವು ಧರ್ಮಕಾರಣಕ್ಕಾಗಿ ಮಾತ್ರವಲ್ಲದೇ ರಾಜಕಾರಣಕ್ಕಾಗಿಯೂ ಇದ್ದೇವೆ ಎನ್ನುವಂತೆ ವ್ಯವಹರಿಸುವುದನ್ನು ನೋಡಿದಾಗ ’ಅರ್ಥ’ ಕಾರಣದ ವಿಷಯದಲ್ಲಿಯೂ ಅವು ಹಿಂದೆ ಬಿದ್ದಿವೆ ಎನಿಸುವುದಿಲ್ಲ.

ಆದರೆ ವೆಬರ್ ಹೇಳುವಂತಹ ಬಂಡವಾಳಶಾಹಿ ಸಮಾಜದ ನಿರ್ಮಾಣದಲ್ಲಿ ಇವರ ’ಅರ್ಥ’ ಕಾರಣ ನಿರ್ಣಾಯಕವಾಗಲಾರದು. ವೆಬರ್ ಪರೋಕ್ಷವಾಗಿ ಬಸವೇಶ್ವರರ ಕಾಯಕದ ತತ್ವವನ್ನು ಕಟ್ಟುನಿಟ್ಟಾಗಿ ಪ್ರತಿಪಾದಿಸಿದರೂ ಆತ ಉದಾಹರಿಸುವ ಪ್ರೊಟೆಸ್ಟಂಟ್ ಪಂಥ ದಾಸೋಹದಂತಿರುವ ಮಾರ್ಗವೊಂದನ್ನು ಮಾತ್ರ ಬೆಂಬಲಿಸುವುದಿಲ್ಲ. ಬದಲಾಗಿ ದುಡಿಯಿರಿ, ಗಳಿಸಿರಿ, ಉಳಿಸಿರಿ, ಬೆಳೆಸಿರಿ ಎನ್ನುವಂಥಹ ತತ್ವಗಳನ್ನು  ಮೈಗೂಡಿಸಿಕೊಂಡ ಪ್ರೊಟೆಸ್ಟಂಟ್ ಪಂಥದಿಂದ ಮಾತ್ರ ಬಂಡವಾಳಶಾಹಿ ಸಮಾಜದ ಸ್ಥಾಪನೆ ಸಾಧ್ಯ ಎನ್ನುವ ವೆಬರನ ಅಭಿಪ್ರಾಯದಲ್ಲಿಯೂ ಒಂದು ಬಗೆಯ ತಥ್ಯ ಅಡಗಿದೆ. ಅದೇ ವೇಳೆಗೆ ಧರ್ಮ ಇಷ್ಟೊಂದು ಐಹಿಕವಾಗಿ ವ್ಯವಹರಿಸುವುದು ಸರಿಯೆ.? ಎನ್ನುವ ಪ್ರಶ್ನೆಯೂ ಹಾಗೇ ಉಳಿಯುತ್ತದೆ.

Leave a Reply

Your email address will not be published. Required fields are marked *