ಸಚಿವ ಅಶೋಕ ಮತ್ತು ಜಯಕುಮಾರ್ ಹಿರೇಮಠ

– ಬಿ.ಎಸ್. ಕುಸುಮ

ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಬೇಲಿಯೇ ಎದ್ದು ಹೋಲ ಮೇಯ್ದಂತೆ ಆಗಿದೆ. ಕಾನೂನು ಮತ್ತು ಸಂವಿಧಾನದ ನೀತಿ-ನಿರೂಪಣೆಗಳಿಗೆ ಅಧಿಕಾರಸ್ಥ ರಾಜಕಾರಣಿಗಳು ಕವಡೆ ಕಾಸಿನ ಕಿಮ್ಮತ್ತೂ ನೀಡದೆ ತಮಗೆ ಪ್ರಜೆಗಳು ನೀಡಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂದು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

ಉದ್ಯಾಯನಗರಿಯ ಅಭಿವೃದ್ದಿಗಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) 1978ರಲ್ಲಿ ಲೊಟ್ಟೆಗೊಲ್ಲಹಳ್ಳಿ ಬಳಿ ಸ್ವಾಧೀನ ಪಡೆಸಿಕೊಂಡಿದ್ದ ಜಮೀನುಗಳಲ್ಲಿ ಸರ್ವೆ ನಂಬರ್ 10\1 ರಲ್ಲಿ 9 ಗುಂಟೆ ಹಾಗೂ 10\11\F ರಲ್ಲಿ 14 ಗುಂಟೆ ಜಮೀನನ್ನು ಹಾಲಿ ಮಂತ್ರಿ ಅರ್.ಅಶೋಕ ಕಾನೂನುಬಾಹಿರವಾಗಿ ಕೊಂಡುಕೊಂಡು ನಂತರ ಅದನ್ನು ಡಿ-ನೋಟಿಫೈ (ಭೂಸ್ವಾಧೀನ ಪ್ರಕ್ರಿಯೆಯಿಂದ ಬಿಡಿಸಿಕೊಂಡಿರುವುದು) ಮಾಡಿಸಿಕೊಂಡಿರುವ ಆರೋಪಕ್ಕೆ ಸಂಬಂದಿಸಿದಂತೆ ಈ ಹಿಂದೆ ವಿಜಯನಗರ ನಿವಾಸಿಯಾದ ಮಂಜುನಾಥ್ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ಆದರೆ ಅವರು ಈ ಮೊಕದ್ದಮೆ ವಿಚಾರಣೆಯ ಹಂತದಲ್ಲಿದ್ದಾಗಲೇ ದೂರನ್ನು ಹಿಂದಕ್ಕೆ ಪಡೆದಿದ್ದರು. ನಂತರ ಜಯಕುಮಾರ್ ಹಿರೇಮಠ್ ಎನ್ನುವವರು ರಾಜ್ಯಪಾಲರ ಅನುಮತಿ ಪಡೆದು 20.10.2011ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರು. ಹಿರೇಮಠರಿಗೆ ಈ ದೂರಿನಲ್ಲಿ ವಕೀಲರಾಗಿರುವವರು ರಾಜ್ಯ ಬಿ.ಜೆ.ಪಿ.ಯ ಮಾಜಿ ಅಧ್ಯಕ್ಷರೂ, ಮಾಜಿ ಶಾಸಕರೂ ಆಗಿರುವ ಎ.ಕೆ.ಸುಬ್ಬಯ್ಯನವರು, ಮತ್ತವರ ಪುತ್ರ ಪೊನ್ನಣ್ಣ.

ಬೆಂಗಳೂರು ನಗರ ಜಿಲ್ಲೆಯ ಲೊಟ್ಟೆಗೊಲ್ಲಹಳ್ಳಿ ಬಳಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) ಸ್ವಾಧೀನ ಪಡೆಸಿಕೊಂಡಿದ್ದ ಸರ್ವೆ ನಂಬರ್ 10\1 ರಲ್ಲಿ 9 ಗುಂಟೆ ಹಾಗೂ 10\11\F ರಲ್ಲಿ 14 ಗುಂಟೆ ಜಮೀನನ್ನು ಶಾಮಣ್ಣ ಮತ್ತು ರಾಮಸ್ವಾಮಿಯವರಿಂದ ಸಚಿವ ಆರ್. ಅಶೋಕರವರು ಖರೀದಿಸಿ, 2009ರಲ್ಲಿ ತಮ್ಮ ಸಚಿವ ಪದವಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಡಿ-ನೋಟಿಫಿಕೇಷನ್ ಮಾಡಿಕೊಂಡಿರುವ ಹಿನ್ನೆಯಲ್ಲಿ ಸರ್ಕಾರಕ್ಕೆ 50 ಕೋಟಿ ನಷ್ಟವಾಗಿದೆ ಎಂದು ಈ ದೂರಿನಲ್ಲಿ ಹೇಳಲಾಗಿದೆ. ಆಗಿನ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಬಿಡಿಎ ಆಯಕ್ತರು ಸಹ ಈ ಡಿ-ನೋಟಿಫೈಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಗಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧೀನ ಅಧಿಕಾರಿಗಳ ಸಲಹೆಯನ್ನು ಧಿಕ್ಕರಿಸಿ ಡಿ-ನೋಟಿಫೈಗೆ ಅನುಮತಿ ನೀಡಿದ್ದರು. ಸಚಿವ ಅಶೋಕ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾರತೀಯ ದಂಡಸಂಹಿತೆ ಪ್ರಕಾರ ಸೆಕ್ಷನ್ 409, 420, ಹಾಗೂ 120(ಬಿ), ಭ್ರಷ್ಟಚಾರ ನಿಯಂತ್ರಣ ಕಾಯಿದೆ 13(11)(ಸಿ) ಮತ್ತು (ಬಿ) ಯ ಅಡಿಯಲ್ಲಿ ಅಪರಾಧವೆಸಗಿದ್ದಾರೆ, ಹಾಗೂ ಕರ್ನಾಟಕ ಭೂಸ್ವಾಧೀನ ನಿಯಂತ್ರಣ ಕಾಯಿದೆಯನ್ನು ಅಶೋಕ್ ಸಚಿವ ಸ್ಥಾನದಲ್ಲಿದ್ದು ಉಲ್ಲಂಘಿಸಿದ್ದಾರೆ, ಎಂದು ಹಿರೇಮಠರು ಆಪಾದಿಸಿದ್ದಾರೆ. ಈ ಹಿನ್ನೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯಲ್ಲಿ ತನಿಖೆ ನಡೆಸಬೇಕು ಎಂಬುದು ದೂರುದಾರರಾದ ಹಿರೇಮಠ್‌ರವರ ಅಹವಾಲು ಆಗಿತ್ತು.

ಜಯಕುಮಾರ್ ಹಿರೇಮಠ್‌ ಮೂಲತ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಸಂತೆಬೆನ್ನೂರಿನವರು. ಜಯಕುಮಾರ್ ಹಿರೇಮಠ್‌‌‌ರ ತಂದೆಯವರಾದ ಚನ್ನಬಸಯ್ಯ ಹಿರೇಮಠ್‌ ವೃತ್ತಿಯಲ್ಲಿ ವೈದ್ಯರಾಗಿದ್ದರು. ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಸಹ ಸಕ್ರಿಯವಾಗಿ ಭಾಗವಹಿಸಿದ್ದರು. ಇಂತಹ ಹೋರಾಟಗಾರರ ಮನೆತನದಿಂದ ಬಂದಿರುವ ಜಯಕುಮಾರ್ ಹಿರೇಮಠ್‌ ಚಿಕ್ಕವಯಸ್ಸಿನಲ್ಲೇ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿ ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಈ ಹಿಂದೆ ಬಿಜೆಪಿಯಲ್ಲಿಯೂ ಕೂಡ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹೆಲೆನ್ ಕೆಲರ್ ಅಂಗವಿಕಲರ ಸಂಘದ ಮುಖ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಜಯಕುಮಾರ್ ಹಲವು ಸಂಘಟನೆಗಳಲ್ಲಿ ಗುರುತಿಕೊಂಡಿದ್ದಾರೆ.

ಜಯಕುಮಾರ್ ಹಿರೇಮಠರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ನಂತರ ನ್ಯಾಯಾಲಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಯುಕ್ತ ಪೊಲೀಸರಿಗೆ ಆದೇಶಿಸಿತ್ತು, ಗೃಹಸಚಿವ ಆರ್.ಅಶೋಕ ವಿರುದ್ದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಹಿರೇಮಠರು ಹೇಳುವಂತೆ ಈ ಪ್ರಕರಣದಲ್ಲಿ ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ ಎಂದು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಕುಮಾರ್ ಹಿರೇಮಠ್‌ ಪರ ವಕೀಲರಾದ ಪೊನ್ನಣ್ಣ ಲೋಕಾಯುಕ್ತ ನ್ಯಾಯಾಲಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಈಗ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರರಾವ್ ಈ ವರದಿಯ ಬಗ್ಗೆ ಮೇ 22 ರಂದು ತೀರ್ಪು ನೀಡುವುದಾಗಿ ಘೋಷಿಸಿದ್ದಾರೆ. ಅವರು ಲೋಕಾಯುಕ್ತ ಪೋಲಿಸರ ವರದಿಯನ್ನು ಸ್ವೀಕಾರ ಮಾಡಿ ದೂರನ್ನು ವಜಾಗೊಳಿಸುತ್ತಾರೋ, ಅಥವ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿ ಮುಂದಿನ ಕ್ರಮ ಏನು ಎಂದು ಪ್ರಕಟಿಸುತ್ತಾರೆ ಎನ್ನುವುದು ಅಂದು ಗೊತ್ತಾಗಲಿದೆ.

Leave a Reply

Your email address will not be published. Required fields are marked *