ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 21)


– ಡಾ.ಎನ್.ಜಗದೀಶ್ ಕೊಪ್ಪ


ಪ್ರವಾಸಿ ಮಂದಿರದಲ್ಲಿ ತಂಗಿದ್ದ ಕಾರ್ಬೆಟ್ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ನರಭಕ್ಷಕ ಚಿರತೆ ರಾತ್ರಿ ಹಾರಿಸಿದ್ದ ಗುಂಡೇಟಿಗೆ ಬೆದರಿ ಅಲಕಾನಂದ ನದಿಯ ಸೇತುವೆ ದಾಟಿ ಹೋಗಿರಬಹುದೇ ಎಂದು ಸಂಶಯಿಸಿ, ಸೇತುವೆ ಬಳಿ ಬಂದು ಪರೀಕ್ಷಿಸಿದ. ಸೇತುವೆಯನ್ನು ಅವನ ಅಣತಿಯಂತೆ ಹಳ್ಳಿಗರು ಕಲ್ಲು ಮತ್ತು ಮುಳ್ಳಗಳಿಂದ ಮುಚ್ಚಿದ್ದ ಕಾರಣ ಅದು ಸೇತುವೆ ದಾಟಿ ಹೋಗಲು ಅಸಾಧ್ಯವಾಗಿತ್ತು. ಇನ್ನೊಂದು ಸೇತುವೆ ಸುಮಾರು 14 ಕಿಲೋಮೀಟರ್ ದೂರದ ಚಿಟ್ಪಾವಲ್ ಹಳ್ಳಿಯಲ್ಲಿ ಇದ್ದ ಕಾರಣ ಅಷ್ಟು ದೂರ ಹೋಗಿರಲಾರದು ಎಂದು ಕಾರ್ಬೆಟ್ ಊಹಿಸಿದ. ಸೇತುವೆ ಬಳಿ ಅದರ ಹೆಜ್ಜೆಯ ಗುರುತುಗಳು ಇರಲಿಲ್ಲವಾದರಿಂದ ಚಿರತೆ ಇಲ್ಲೇ ಕಾಡಿನಲ್ಲೆ ಅಡಗಿದೆ ಎಂಬ ತೀರ್ಮಾನಕ್ಕೆ ಬಂದ. ಏನೇ ಆಗಲಿ ಗುಂಡೇಟಿನಿಂದ ಗಾಬರಿಗೊಂಡಿರುವ ಚಿರತೆ ರಾತ್ರಿ ವೇಳೆ ಸೇತುವ ದಾಟುವ ಸಾಧ್ಯತೆ ಇದೆ ಎಂದುಕೊಂಡ ಕಾರ್ಬೆಟ್, ಅಲ್ಲಿ ಹಾಕಲಾಗಿದ್ದ ಕಲ್ಲು, ಮುಳ್ಳುಗಳನ್ನು ತೆಗೆಸಿ ರಾತ್ರಿ ವೇಳೆ ಕಾವಲು ಕಾಯಲು ಕುಳಿತ.

ಸೇತುವೆಯ ಒಂದು ಬದಿಯ ಗೋಪುರದಲ್ಲಿ ಸತತ 20 ದಿನಗಳ ರಾತ್ರಿ ಶೀತಗಾಳಿ, ತುಂತುರು ಮಳೆಯ ನಡುವೆ ಕಾರ್ಬೆಟ್ ಕಾದು ಕುಳಿತರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಬೆಳಗಿನ ಜಾವ ನರಿಯೊಂದು ಸೇತುವೆಯನ್ನು ದಾಟಿದ್ದನ್ನು ಅವನು ಮೂಕಪ್ರೇಕ್ಷಕನಾಗಿ ನೋಡಬೇಕಾಗಿಬಂತು. ಇದೇ ವೇಳೆಗೆ ಜಿಲ್ಲಾಧಿಕಾರಿ ಇಬ್ಸ್‌ಟನ್ ತನ್ನ ಪತ್ನಿಯೊಂದಿಗೆ ಘರ್‌ವಾಲ್‌ಗೆ ‌ಬಂದ. ನರಭಕ್ಷಕನ ಬೇಟೆಯಲ್ಲಿ ತೊಡಗಿರುವ ಕಾರ್ಬೆಟ್ ಜೊತೆ ಪಾಲ್ಗೊಳ್ಳವ ಉದ್ದೇಶದಿಂದ ಕೆಲಸದ ನಡುವೆಯೂ ವಿರಾಮ ಮಾಡಿಕೊಂಡು ಬಂದಿದ್ದ. ಕಾರ್ಬೆಟ್‌ಗೆ ಕಂಪನಿ ಕೊಟ್ಟು ಅವನ ಏಕಾಂಗಿತನ ಹೋಗಲಾಡಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿತ್ತು.

ಪ್ರವಾಸಿ ಮಂದಿರದಲ್ಲಿ ಕೇವಲ ಒಂದು ಕೊಠಡಿ ಇದ್ದ ಕಾರಣ ಕಾರ್ಬೆಟ್ ಅದನ್ನು ಇಬ್ಸ್‌ಟನ್ ದಂಪತಿಗಳಿಗೆ ಬಿಟ್ಟುಕೊಟ್ಟು ತನ್ನ ಸೇವಕರೊಡನೆ ಹೊರಗೆ ಟೆಂಟ್ ಹಾಕಿಕೊಂಡು ಮಲಗಲು ನಿರ್ಧರಿಸಿದ. ಅಂದು ಸಂಜೆ ತನ್ನ ಎಂಟು ಮಂದಿ ಸೇವಕರ ನೆರವಿನೊಂದಿಗೆ ಪ್ರವಾಸಿ ಮಂದಿರದ ಮುಂದೆ ಟೆಂಟ್ ಹಾಕಿಸಿ, ಸುತ್ತಲಿನ ಬೇಲಿಯನ್ನು ಭದ್ರಪಡಿಸಿದ. ಬೇಲಿಯ ನಡುವೆ ಒಂದು ಮರವಿದ್ದು ಅದರ ಕೊಂಬೆಗಳು ಒಳಕ್ಕೆ ಚಾಚಿದ್ದವು. ಅವುಗಳನ್ನು ಸಹ ಕಾರ್ಬೆಟ್ ಕಡಿಸಿಹಾಕಿದ. ಹಿಂದೊಂಮ್ಮೆ ನರಭಕ್ಷಕ ಕಾಡಿನಿಂದ ಪ್ರವಾಸಿ ಮಂದಿರದವರೆಗೂ ಕಾರ್ಬೆಟ್‌ನನ್ನು ಹಿಂಬಾಲಿಸಿ ಬಂದಿದ್ದರಿಂದ ಅವನು ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದ.

ಕಡೆಗೂ ಕಾರ್ಬೆಟ್‌ನ ನಿರೀಕ್ಷೆ ನಿಜವಾಯಿತು. ಆದಿನ ತಡ ರಾತ್ರಿ ನರಭಕ್ಷಕ ಮರಹತ್ತಿ ಬೇಲಿ ನೆಗೆಯಲು ಪ್ರಯತ್ನಿಸಿತು. ಮರದ ಸಣ್ಣ ಸಣ್ಣ ರಂಬೆಗಳು ಚಿರತೆಯ ಭಾರ ತಾಳಲಾರದೆ, ಲಟಲಟನೆ ಮುರಿಯತೊಡಗಿದಾಗ, ಟೆಂಟ್‌ನಲ್ಲಿ ಮಲಗಿದ್ದ ಕಾರ್ಬೆಟ್‌ಗೆ ಎಚ್ಚರವಾಯಿತು. ಕೂಡಲೇ ಅವನು ತನ್ನ ಮಗ್ಗುಲಲ್ಲೆ ಇರಿಸಿದ್ದ ಕೋವಿ ತೆಗೆದುಕೊಂಡು ಟಾರ್ಚ್‌ಎತ್ತಿಕೊಂಡು ಹೊರಬಂದ. ಇದಾವುದರ ಪರಿವಿಲ್ಲದೆ ಅವನ ಸೇವಕರು ಮರದಕೆಳಗಿನ ಗುಡಾರದಲ್ಲಿ ಆರಾಮವಾಗಿ ಮಲಗಿದ್ದರು, ಮಾಧೂಸಿಂಗ್ ದೊಡ್ಡಧ್ವನಿಯ ಗೊರಕೆಯಲ್ಲಿ ಮುಳುಗಿಹೋಗಿದ್ದ. ಕಾರ್ಬೆಟ್ ಹೊರಬರುವುದು ಕೆಲವೇ ಕ್ಷಣ ತಡವಾಗಿದ್ದರೆ, ಅದು ಮಾಧೂಸಿಂಗ್ ಮೇಲೆ ನೆಗೆದು ಅವನನ್ನು ಬಲಿತೆಗೆದುಕೊಳ್ಳುತ್ತಿತ್ತು. ಮರದ ತುದಿಯ ಕೊಂಬೆಯೊಂದು ಸೇವಕರಿಗೆ ಎಟುಕದ ಕಾರಣ ಕಡಿಯದೇ ಹಾಗೇ ಬಿಟ್ಟಿದ್ದರು. ಆ ಕೊಂಬೆಯ ಮೇಲಿಂದ ಚಿರತೆ ನರಬಲಿಗೆ ಹೊಂಚು ಹಾಕಿತ್ತು. ಕಾರ್ಬೆಟ್ ಬಿಟ್ಟ ಟಾರ್ಚ್ ಬೆಳಕಿಗೆ ಗಾಬರಿಗೊಂಡ ಅದು ಮರದಿಂದ ಜಿಗಿದು ಓಡಿ ಹೋಗಿ ಪಕ್ಕದ ಕಾಡು ಸೇರಿಕೊಂಡಿತ್ತು.

ಮಾರನೇ ದಿನ ಬೆಳಿಗ್ಗೆ ಕಾರ್ಬೆಟ್ ಎದ್ದವನೇ ಮರದ ಕೊಂಬೆಗಳನ್ನು ಸಂಪೂರ್ಣವಾಗಿ ಕಡಿಸಿ ಹಾಕಿದ. ಬೇಲಿಯನ್ನು ಮತ್ತಷ್ಟು ಭದ್ರಪಡಿಸಿದ ನರಭಕ್ಷಕ ಇಲ್ಲೆ ಆಸು ಪಾಸಿನ ಪ್ರದೇಶದಲ್ಲಿ ಇರುವುದು ರಾತ್ರಿಯ ಘಟನೆಯಿಂದ ಖಚಿತವಾಯಿತು. ಇಬ್ಸ್‌ಟನ್ ಕೂಡ ಬಂದಿದ್ದರಿಂದ ಆದಿನ ಬೆಳಿಗ್ಗೆ ಕಾರ್ಬೆಟ್ ಅವನನ್ನು ಕರೆದುಕೊಂಡು ಹೋಗಿ ಅಲಕನಂದಾ ನದಿಯಲ್ಲಿ ತನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಮೀನು ಶಿಕಾರಿಯಲ್ಲಿ ತೊಡಗಿದ. ಸಂಜೆವೇಳೆಗೆ ಇಬ್ಬರೂ ಹಿಡಿದಿದ್ದ ಮೀನುಗಳನ್ನು ತಂದು ಸೇವಕರಿಗೆ ಕೊಟ್ಟು, ರಾತ್ರಿ ಪ್ರವಾಸಿ ಮಂದಿರದಲ್ಲಿ ವಿಸ್ಕಿ ಹೀರುತ್ತಾ ನರಭಕ್ಷಕನ ಬೇಟೆಗೆ ಯೋಜನೆ ರೂಪಿಸತೊಡಗಿದರು. ಬೆಳಗಿನ ಜಾವದ ವೇಳೆಗೆ ಪಕ್ಕದ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಸುದ್ಧಿ ಕಾರ್ಬೆಟ್‌ಗೆ ತಲುಪಿತು. ಕೂಡಲೇ ಇಬ್ಸ್‌ಟನ್ ಜೊತೆ ಕಾರ್ಬೆಟ್ ಹಳ್ಳಿಗೆ ಹೊರಟ.

ಹಳ್ಳಿ ರೈತನ ಮನೆಗೆ ನುಗ್ಗಲು ವಿಫಲಯತ್ನ ನಡೆಸಿದ ಚಿರತೆ, ಮನೆಯ ಬಾಗಿಲನ್ನು ತನ್ನ ಉಗುರಿನಿಂದ ಕೆರೆದು ಮುರಿಯಲು ಪ್ರಯತ್ನಿಸಿತ್ತು. ಅದು ಸಾಧ್ಯವಾಗದೇ, ನಂತರ ಮನೆಯ ಹಿಂಭಾಗದ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಬಲಿ ತೆಗೆದುಕೊಂಡಿತ್ತು. ಕೊಂದ ಹಸುವನ್ನು ಕಚ್ಚಿ ಎಳೆದೊಯ್ಯಲು ಅದು ಪ್ರಯತ್ನಿಸಿತ್ತು ಆದರೆ, ಬಾಗಿಲು ಚಿಕ್ಕದಾಗಿದ್ದು, ಹಸುವಿನ ಕಳೇಬರ ಬಾಗಿಲಿಗೆ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಅದನ್ನು ಅಲ್ಲೇ ಇರಿಸಿ ಅರ್ಧ ಭಾಗವನ್ನು ತಿಂದು ಹೋಗಿತ್ತು. ಸ್ಥಳವನ್ನು ಅವಲೋಕಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ರಾತ್ರಿ ಕೊಟ್ಟಿಗೆಗೆ ಬಂದು ಕಾವಲು ಕೂರಲು ನಿರ್ಧರಿಸಿದರು. ಮತ್ತೇ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಚಿರತೆ ಬರುತ್ತದೆ ಎಂಬುದು ಇಬ್ಬರ ನಿರೀಕ್ಷೆಯಾಗಿತ್ತು. ರಾತ್ರಿ ಊಟವಾದ ನಂತರ ಒಂದಿಷ್ಟು ಸ್ಯಾಂಡ್ವಿಚ್ ಮತ್ತು ಚಹಾ ಮತ್ತು ಬಂದೂಕುಗಳೊಂದಿಗೆ ರೈತನ ಮನೆಯ ಕೊಟ್ಟಿಗೆಗೆ ಬಂದು ಕಾವಲು ಕುಳಿತರು. ಆದರೆ, ನರಭಕ್ಷ ಆ ರಾತ್ರಿ ಹಸುವಿನ ಕಳೇಬರದತ್ತ ಸುಳಿಯಲೇ ಇಲ್ಲ. ಇದಾದ ಎರಡು ದಿನಗಳ ನಂತರ ಮತ್ತೊಂದು ಹಳ್ಳಿಯಲ್ಲಿ ನರಭಕ್ಷಕ ಮತ್ತೇ ಕೊಟ್ಟಿಗೆಯಲ್ಲಿ ಇದ್ದ ಹಸುವೊಂದನ್ನು ಬಲಿತೆಗೆದುಕೊಂಡಿತ್ತು.

ಈ ಬಾರಿ ಹಸುವನ್ನು ಬಾಗಿಲಿನ ಹೊರಭಾಗದವರೆಗೆ ಎಳೆದು ತಂದಿತ್ತು ಆದರೆ ಭಾರಿ ಗಾತ್ರದ ಹಸುವಿನ ಶವವನ್ನು ಕೊಂಡೊಯ್ಯಲು ಸಾಧ್ಯವಾಗದೆ, ಅಲ್ಲೆ ಕೆಲವು ಭಾಗಗಳನ್ನು ತಿಂದುಹೋಗಿತ್ತು. ಕೊಟ್ಟಿಗೆಯ ಮುಂಭಾಗದಲ್ಲಿ ಚಪ್ಪರವೊಂದನ್ನು ನಿರ್ಮಿಸಿ ಅದರ ಮೇಲೆ ಜಾನುವಾರುಗಳಿಗೆ ರೈತ ಹುಲ್ಲನ್ನು ಸಂಗ್ರಹಿಸಿ ಇಟ್ಟಿದ್ದ. ಇದನ್ನು ನೋಡಿದ ಕಾರ್ಬೆಟ್ ಹುಲ್ಲನ್ನು ತನ್ನ ಸೇವಕರಿಂದ ತೆಗೆಸಿ , ಚಪ್ಪರದ ಮೇಲೆ ಗೂಡನ್ನು ನಿರ್ಮಿಸಿದ, ಮತ್ತೇ ಕೆಲವು ಬಿದಿರಿನ ಬೊಂಬುಗಳನ್ನು ನೆಡಸಿ, ತನ್ನ ಗೂಡಿನ ಮೇಲೆ ಇನ್ನೊಂದು ಅಂತಸ್ತಿನ ಗೂಡನ್ನ ಇಬ್ಸ್‌ಟನ್‌ಗಾಗಿ ನಿರ್ಮಿಸಿದ. ರಾತ್ರಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಲು ಮರದ ಹಲಗೆಗಳನ್ನು ಚಪ್ಪರದ ಮೇಲೆ ಹಾಸಿಸಿದ್ದ. ಮತ್ತೆ ಆ ರಾತ್ರಿ ಕೂಡ ಇಬ್ಬರು ಕಾವಲು ಕುಳಿತರು. ಇಬ್ಸ್‌ಟನ್ ಕಾರ್ಬೆಟ್‌ಗಿಂತ ಕುಳ್ಳಗಿದ್ದ ಕಾರಣ ಅವನು ಮೇಲಿನ ಅಂತಸ್ತಿನ ಚಪ್ಪರದಲ್ಲಿ ಕುಳಿತರೆ, ಕಾರ್ಬೆಟ್ ನೆಲದಿಂದ ಹತ್ತು ಅಡಿ ಎತ್ತರವಿದ್ದ ಕೆಳ ಹಂತಸ್ತಿನ ಗೂಡಿನಲ್ಲಿ ಕುಳಿತ. ಇವರ ಸೂಚನೆಯಂತೆ ರಾತ್ರಿ ಎಂಟು ಗಂಟೆ ವೇಳೆಗೆ ಹಳ್ಳಿ ಗ್ರಾಮಸ್ಥರು ಊಟ ಮುಗಿಸಿ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದರು.

ರಾತ್ರಿ ಹನ್ನೋಂದರ ವೇಳೆಗೆ ನರಭಕ್ಷಕ ಪರ್ವತದಿಂದ ಇಳಿದು ಹಳ್ಳಿಯತ್ತ ಬರುತ್ತಿರುವುದನನ್ನು ಕಾಡಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾರ್ಬೆಟ್‌ಗೆ ಸೂಚನೆ ನೀಡಿದವು. ಇಬ್ಬರೂ ಮಾತು ನಿಲ್ಲಿಸಿ ತಮ್ಮ ತಮ್ಮ ಬಂದೂಕುಗಳನ್ನು ಕೈಗೆ ತೆಗೆದುಕೊಂಡು ನರಭಕ್ಷಕನಿಗಾಗಿ ಕಾಯತೊಡಗಿದರು. ಈ ಬಾರಿ ಕಾರ್ಬೆಟ್‌ನ ನಿರೀಕ್ಷೆಯನ್ನು ಹುಸಿ ಮಾಡದೇ ನರಭಕ್ಷಕ  ಹಸುವಿನ ಕಳೇಬರವಿದ್ದ ಸ್ಥಳದತ್ತ ಬರತೊಡಗಿತು ಆದರೆ, ಅದಕ್ಕೆ ಹತ್ತಿರ ಬರುತ್ತಿದ್ದಂತೆ ನರಮನುಷ್ಯನ ವಾಸನೆ ಮೂಗಿಗೆ ಬಡಿದ ಕಾರಣ ನೇರವಾಗಿ ಹಸುವಿದ್ದ ಜಾಗಕ್ಕೆ ಹೋಗದೆ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಚಪ್ಪರದಕೆಳೆಕ್ಕೆ ಬಂದು ಸುತ್ತ ಮುತ್ತ ಎಚ್ಚರಿಕೆಯಿಂದ ಗಮನಿಸತೊಡಗಿತು ಅಲ್ಲದೆ ಚಪ್ಪರಕ್ಕೆ ನೆಡಲಾಗಿದ್ದ ಬೊಂಬುಗಳಿಗೆ ತನ್ನ ಮೈಯನ್ನು ಸವರತೊಡಗಿತು. ಉಸಿರು ಬಿಗಿ ಹಿಡಿದು ಕುಳಿತ ಕಾರ್ಬೆಟ್ ನರಭಕ್ಷಕ ಚಪ್ಪರದ ಕೆಳಭಾಗದಿಂದ ಹೊರಬಂದ ಕೂಡಲೇ ಗುಂಡು ಹಾರಿಸಿ ಕೊಲ್ಲಬೇಕೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದ ಅಷ್ಟರಲ್ಲಿ ಮೇಲಂತಸ್ತಿನ ಗೂಡಿನ ಮರದ ಹಲಗೆ ಲಟಾರನೆ ಮುರಿಯಿತು ಶಬ್ಧಕ್ಕೆ ಅಂಜಿದ ಚಿರತೆ ಮುಂಭಾಗದಲ್ಲಿ ಓಡಿ ಹೋಗದೆ, ಹಿಂಭಾಗದಿಂದ ಓಡಿಹೋಯಿತು. ಗೂಡಿನ ಸುತ್ತ ಹುಲ್ಲು ಹೊದಿಸಿದ್ದ ಕಾರಣ ಅದಕ್ಕೆ ಗುರಿಯಿಡಲು ಕಾರ್ಬೆಟ್‌ಗೆ ಸಾಧ್ಯವಾಗಲಿಲ್ಲ.

ಒಂದೇ ಸ್ಥಿತಿಯಲ್ಲಿ ಕುಳಿತ್ತಿದ್ದ ಇಬ್ಸ್‌ಟನ್ ಮೇಲಿನ ಗೂಡಿನಲ್ಲಿ ಮಗ್ಗುಲು ಬದಲಿಸುವಾಗ ಹಲಗೆ ಮುರಿದು ಶಬ್ಧಮಾಡುವುದರ ಮೂಲಕ ನರಭಕ್ಷಕನ ಪ್ರಾಣ ಉಳಿಸಿತ್ತು. ಇಬ್ಬರೂ ತಮ್ಮ ದುರಾದೃಷ್ಟವನ್ನು ಅಳಿದುಕೊಳ್ಳುತ್ತಾ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದರು. ಈ ಘಟನೆ ನಡೆದ ಎರಡು ದಿನಗಳ ನಂತರ ನರಭಕ್ಷಕ ರುದ್ರಪ್ರಯಾಗದ ಪಟ್ಟಣದಲ್ಲೇ ಮನೆಯೊಂದರ ಮುಂಭಾಗದ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹೊರಭಾಗದ ಬಯಲಲ್ಲಿ ತಿಂದು ಹೋಗಿತ್ತು. ನಿರಂತರ ಘಟನೆಗಳಿಂದ ಹತಾಶರಾಗಿದ್ದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಈ ಸಾರಿ ನರಭಕ್ಷಕನ ಬೇಟೆಗೆ ಹೊಸತಂತ್ರವನ್ನು ರೂಪಿಸಿದ್ದರು. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು ಎಂಬತ್ತು ಕೆ.ಜಿ. ಗಾತ್ರದ ಅಡಕತ್ತರಿಯೊಂದನ್ನು (ಜಿನ್ ಕತ್ತರಿ) ತರಿಸಿದ್ದರು ಇದನ್ನು ಮುರದಾಬಾದ್‌ನಲ್ಲಿ ವಿಶೇಷವಾಗಿ  ತಯಾರಿಸಲಾಗಿತ್ತು. ಅದರ ಎರಡು ಅಲಗುಗಳನ್ನು ಗರಗಸದ ಹಲ್ಲಿನಂತೆ ಮಾಡಲಾಗಿತ್ತು ಅದಕ್ಕೆ ಬಲವಾದ ಸ್ಪ್ರಿಂಗ್ ಜೋಡಿಸಿದ್ದ ಕಾರಣ ಇಬ್ಬರು ಅವುಗಳನ್ನು ಎಳೆದು ಅದರ ಬಾಯಿ ಬಿಡಿಸಬೇಕಾಗಿತ್ತು ಆ ಜಿನ್ ಕತ್ತರಿಯ ನಡುಭಾಗಕ್ಕೆ ಯಾವ ಪ್ರಾಣಿ ಕಾಲಿಟ್ಟ ತಕ್ಷಣ ಕತ್ತರಿಯ ಅಲುಗುಗಳು ಮುಚ್ಚಿಕೊಳ್ಳುತ್ತಿದ್ದವು. ಎಂತಹ ಪ್ರಾಣಿಯೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಸುವಿನ ಕಳೇಬರವಿದ್ದ ನೂರು ಅಡಿ ದೂರದಲ್ಲಿ ಒಂದು ಎತ್ತರದ ಬಲಿಷ್ಟವಾದ ಮರವಿತ್ತು ಅದರ ಮೇಲೆ ಇಬ್ಬರೂ ಕೂರಲು ನಿರ್ಧರಿಸಿದರು. ನರಭಕ್ಷಕ ಯಾವ ದಿಕ್ಕಿನಿಂದ ಕಾಡಿನತ್ತ ತೆರಳಿದೆ ಎಂಬುದನ್ನು ಅದರ ಹೆಜ್ಜೆ ಗುರುತುಗಳ ಮೂಲಕ ಗುರುತಿಸಿ ಆ ಹಾದಿಯಲ್ಲಿ ಅಡಕತ್ತರಿಯನ್ನು ಇರಿಸಿ, ಅದನ್ನು ತರಗೆಲೆಗಳಿಂದ ಮುಚ್ಚಿದರು. ನರಭಕ್ಷಕ ಸಿಕ್ಕಿಕೊಂಡಾಗ ಅದನ್ನು ಎಳೆದೊಯ್ಯಬಾರದು ಎಂದು ಅದಕ್ಕೆ ಸರಪಣಿ ಜೋಡಿಸಿ ಮರಕ್ಕೆ ಬಿಗಿಯಲಾಗಿತ್ತು. ಎಂದಿನಂತೆ ಆ ರಾತ್ರಿ ಕೂಡ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರ ಜೊತೆ ಮರದ ಬಳಿ ಬಂದು ಏಣಿ ಮುಖಾಂತರ ಮೇಲಕ್ಕೆ ಹತ್ತಿ ಕುಳಿತು, ಸೇವಕರನ್ನು ಪ್ರವಾಸಿ ಮಂದಿರಕ್ಕೆ ಕಳಿಸಿದರು. ಈ ಬಾರಿ ಅವರ ಬಳಿ ಸಕಾರ ಕಳಿಸಿದ್ದ ಭಾರೀ ಗಾತ್ರದ ಟಾರ್ಚ್ ಅವರ ಬಳಿ ಇದ್ದುದರಿಂದ ರಾತ್ರಿ ಶಿಕಾರಿಗೆ ಅನುಕೂಲವಾಗಿತ್ತು.

ರಾತ್ರಿ ಕತ್ತಲಾಗುತ್ತಿದ್ದಂತೆ ಒಂಬತ್ತರ ವೇಳೆಗೆ ಚಿರತೆಯ ಆರ್ಭಟ ಕೇಳತೊಗಿತು ಅದರ ಮುಂಗಾಲುಗಳರೆಡು ಅಡಕತ್ತರಿಗೆ ಸಿಲುಕಿಕೊಂಡು ಅದರಿಂದ ಬಿಡಿಸಿಕೊಲ್ಳಲು ಹೋರಾಡುತ್ತಾ ಭೀಕರವಾಗಿ ಸದ್ದುಮಾಡುತ್ತಿತ್ತು. ಕಾರ್ಬೆಟ್ ಟಾರ್ಚ್ ಮುಖಾಂತರ ಅದರತ್ತ ಬೆಳಕು ಹಾಯಿಸಿದಾಗ ಚಿರತೆ ಅಡಕತ್ತರಿಯನ್ನು ಎಳೆಯುತ್ತಾ ರೋಷಾವೇಷದಿಂದ ಘರ್ಜಿಸುತ್ತಿತ್ತು. ಇದೇ ಸುಸಮಯ ಎಂದುಕೊಂಡ ಕಾರ್ಬೆಟ್ ಅದರತ್ತ ಗುಂಡು ಹಾರಿಸಿದ ಆದರೆ, ಗುಂಡು ಚಿರತೆಗೆ ತಾಗುವ ಬದಲು ಸರಪಣಿಗೆ ತಗುಲಿ ಅದು ತುಂಡಾಯಿತು. ಕೂಡಲೇ ಇಬ್ಸ್‌ಟನ್ ಕೂಡ ಗುಂಡು ಹಾರಿಸದ ಆದರೆ, ಕತ್ತಲಿನಲ್ಲಿ ಎಲ್ಲವೂ ಗುರಿತಪ್ಪಿದ್ದವು ಇದರಿಂದಾಗಿ ತಪ್ಪಿಸಿಕೊಂಡ ಚಿರತೆ ಕತ್ತರಿಯನ್ನು ಎಳೆದುಕೊಂಡು ಮರಗಿಡಗಳ ನಡುವೆ ಕೆಳಗಿನ ಹಳ್ಳವೊಂದರಲ್ಲಿ ಮರೆಯಾಯಿತು.

(ಮುಂದುವರಿಯುವುದು)

Leave a Reply

Your email address will not be published. Required fields are marked *